Tuesday, June 3, 2014

Funny ಹನಿಗಳು

ಗಾಂಧಿ-ಬ್ರಾಂದಿ

ಗಾಂಧಿ ಗಾಂಧಿ ಎಂದು
ಸದಾಕಾಲ ಗಾಂಧಿಯನ್ನು
ನೆನೆಯುತ್ತಿದ್ದ ಆ ಮಂತ್ರಿಗೆ, 
ಗಾಂಧಿ ಜಯಂತಿಯ ದಿನ
ನೆನಪಾಗಿದ್ದು ಮಾತ್ರ ಬ್ರಾಂದಿ ||

ಬಳುವಳಿ

ಈಗೀಗ ಮುಖ್ಯವಾಗಿ
ತಂದೆಯಿಂದ ಮಗನಿಗೆ
ಬಳುವಳಿಯಾಗಿ ಬರುವುದು
ಎರಡೇ ಎರಡು |
ಪಿತ್ರಾರ್ಜಿತ ಆಸ್ತಿ ಹಾಗೂ
ಪಿತ್ರಾರ್ಜಿತ ಸಾಲ ||

ಡಬ್ಬಲ್ಲು ಮೀನಿಂಗು

ಸ್ವಾಮಿ, ಪದಗಳ ನಡುವೆ
ಗ್ಯಾಪು ಕೊಟ್ಟರೆ ಮೀನಿಂಗೇ
ಚೇಂಜಂತೆ, ಅಲ್ವಾ! ಹೌದು
ಮುಖಕ್ಕೆ ಮಂಗಳಾರತಿ ಎತ್ತಿದರು
ಈ ಮಾತು ಸರಿ !! ಅದೇ ಹೀಗೆ
ಮುಖಕ್ಕೆ ಮಂಗಳ-ಆರತಿ
ಎತ್ತಿದರು ಎಂದರೆ ಮೀನಿಂಗು
ಡಬ್ಬಲ್ಲೇ ಅಲ್ವೇ ||

ಮಂಗಳಾರತಿ

ಮಂಗಳ-ಆರತಿಯರ ನಡುವೆ
ಬಿದ್ದ ಪುಂಡನಿಗೆ ಅವರಿಬ್ಬರು
ಚನ್ನಾಗಿ ಉಗಿದು, ಮುಖಕ್ಕೆ
ಮಂಗಳಾರತಿ ಎತ್ತಿದರು ||

ಬಾರಿ

ಅತ್ತೆಗೊಂದು ಬಾರಿ
ಸೊಸೆಗೊಂದು ಬಾರಿ
ಆದರೆ ಬಡವನ
ಪಾಲಿಗೆ ಇರುವುದೊಂದೇ
ದುಬಾರಿ ||

ಪವರ್ರು

ಪತಿ-ಪತ್ನಿಯರಲ್ಲಿ
ಹೆಂಡತಿಯೇ ಗಟ್ಟಿ |
ಪತಿಗೆ ಧಮ್ಮಿದ್ದರೆ
ಆಸ್ಪತ್ರೆಗೆ ಅಟ್ಟಿ ||

Monday, June 2, 2014

ಆಗಂತುಕ ಪ್ರೇಮಿ

(ಚಿತ್ರಕೃಪೆ : ವಿನಾಯಕ ಹೆಗಡೆ)
ದೂರದಿಂದ ಬಂದನವ
ನನ್ನೆದೆಯ ಕದ ತೆರೆದ
ಪಂಜರದ ಬದುಕಿಂದ
ಹೊರಗೆಲ್ಲೋ ಸೆಳೆದ |

ಬಂದ ಹೊಸ ಚಣದಲ್ಲಿ
ನಗುವೆರಡ ತಂದ
ತೆರೆದನಲ್ಲಾ ಇಂದು
ನೂರು ಮನಗಳ ಬಂಧ ||

ಮೊದಮೊದಲು ಆಗಂತುಕ
ನಡುನಡುವೆ ಮಿತ್ರ
ಬದುಕು ನೀಡುವ ಜೀವಿ
ಕೊನೆಗೊಮ್ಮೆ ಪ್ರೇಮಿ ||

ಆಗಂತುಕನ ರೂಪ
ಮನದಲ್ಲಿ ಕಡೆದಿದೆ ಶಿಲ್ಪ
ಆಗಲೇ ಮನ ನಿಲ್ಲದಲ್ಲ
ನಾನು ನಾನಾಗಿ ಉಳಿದಿಲ್ಲ ||

ಒಮ್ಮೆ ಒಲವಿನ ಪ್ರೇಮಿ
ಮತ್ತೊಮ್ಮೆ ಆಗಂತುಕ
ಆಗಿ ಹೋದರೆ ದ್ರೋಹಿ
ನೀನೊಬ್ಬನೇ ಘಾತುಕ ||

**
(ಈ ಕವಿತೆಯನ್ನು ಬರೆದಿದ್ದು 02-03-2006ರಂದು ದಂಟಕಲ್ಲಿನಲ್ಲಿ)
(ವಿನಾಯಕ ಹೆಗಡೆ ಚಿತ್ರ ಕೊಟ್ಟಿದ್ದು... ಥ್ಯಾಂಕ್ಸು..)

Sunday, June 1, 2014

ಬೆಂಗಾಲಿ ಸುಂದರಿ-13


                   ಬಾಗಿಲು ತೆಗೆದ ಸೂರ್ಯನ್ ಮಧುಮಿತಾಳನ್ನು ನೋಡಿ ಪೆಕರನಂತೆ ನಿಂತುಬಿಟ್ಟ. ಒಮ್ಮೆ ಹಲ್ಲುಕಿರಿದು `ವಿನಯಚಂದ್ರ ಸ್ನಾನಕ್ಕೆ ಹೋಗಿದ್ದಾನೆ.. ಬರ್ತಾನೆ ಕೂತಿರಿ..' ಎಂದ. ಆತನಿಗೆ ಮುಂದೆ ಮಾತು ಹೊರಡಲಿಲ್ಲ. ಸುಮ್ಮನೆ ಅತ್ತ-ಇತ್ತ ನೋಡುತ್ತಾ ನಿಂತ. ಮಧುಮಿತಾಳೂ ಸುಮ್ಮನುಳಿದಿದ್ದಳು.
                ಹತ್ತು ನಿಮಿಷದಲ್ಲಿ ವಿನಯಚಂದ್ರ ಸ್ನಾನ ಮುಗಿಸಿ ಬಂದ. ಮಧುಮಿತಾಳನ್ನು ಕಂಡು ಒಮ್ಮೆ ಅವಾಕ್ಕಾದರೂ ಸಾವರಿಸಿಕೊಂಡು `ಯಾವಾಗ ಬಂದಿದ್ದು..' ಎಂದ. `ಈಗಷ್ಟೇ..' ಎಂದವಳ ಕಣ್ಣಲ್ಲಿ ಕೃತಜ್ಞತೆಯ ಭಾವ ಮೂಡಿತ್ತು. `ಮತ್ತೆ ಮನೆಯವರೆಲ್ಲ ಅಪಾರ್ಟ್ ಮೆಂಟ್ ಸೇರಿಕೊಂಡರಾ..? ಈಗ ಏನೂ ತೊಂದರೆಯಿಲ್ಲ ತಾನೆ..' ವಿನಯಚಂದ್ರನೇ ಕೇಳಿದ.
               `ಇಲ್ಲ.. ಎಲ್ಲ ಅರಾಮಾಗಿದ್ದಾರೆ. ಅದನ್ನೇ ಹೇಳಿ ಹೋಗೋಣ ಎಂದು ಬಂದೆ. ಥ್ಯಾಂಕ್ಸ್.. ಸಹಾಯ ಮಾಡಿದ್ದಕ್ಕೆ.. ನಿಜಕ್ಕೂ ನೀವು ಸಹಾಯ ಮಾಡದಿದ್ದರೆ ಇಷ್ಟು ಹೊತ್ತಿಗೆ ಅದೇನು ಭಾನಗಡಿ ಆಗುತ್ತಿತ್ತೋ..'
               `ಇದಕ್ಕೆಲ್ಲ ಎಂತ ಥ್ಯಾಂಕ್ಸ್.. ಆಪ್ತರಾದವರು ಇಷ್ಟೂ ಮಾಡದಿದ್ದರೆ ಹೇಗೆ..?'
               `ಹುಂ.. ಆದರೂ...'
               `ಹಾಗೇನಿಲ್ಲ.. ಭಯ ಬೇಡ. ಏನಾದರೂ ತೊಂದರೆ ಆದರೆ ತಿಳಿಸು. ನಾನಿದ್ದೇನೆ. ಜಾಧವ್ ಸರ್ ಇದ್ದಾರೆ.. ಸಹಾಯಕ್ಕೆ ಯಾವಾಗಲೂ ನಾವು ಸಿದ್ಧ'
               `ದೊರೆ... ನಾನೂ ಇದ್ದೇನಪ್ಪಾ.. ನನ್ನನ್ನು ಮರೆತುಬಿಡಬೇಡ ಮಾರಾಯಾ..' ಸೂರ್ಯನ್ ಮಧ್ಯ ಬಾಯಿಹಾಕಿ ಹೇಳಿದ. `ನಿನ್ನನ್ನು ಮರೆಯಲಿಕ್ಕೆ ಎಲ್ಲಿ ಆಗ್ತದೋ ಮಾರಾಯಾ...' ಎಂದ ವಿನಯ ಚಂದ್ರ ಪ್ರತಿಯಾಗಿ.
                `ಮನೆಯವರೆಲ್ಲ ನಿನ್ನ ಗುಣಗಾನ ಮಾಡುತ್ತಿದ್ದಾರೆ. ಒಮ್ಮೆ ಕರೆದುಕೊಂಡು ಬಾ ಮಾತಾಡೋಣ ಅಂತಿದ್ದಾರೆ.  ನಿನಗೆ ಧನ್ಯವಾದ ಹೇಳಬೇಕಂತೆ.. ಅಮ್ಮ ಅಂತೂ ನಿನ್ನನ್ನು ಬಹಳ ಗೌರವಿಸಲು ಆರಂಭಿಸಿದ್ದಾಳೆ..' ಎಂದಳು ಮಧುಮಿತಾ.
              ವಿನಯಚಂದ್ರ ನಾಚಿದ. `ಖಂಡಿತ ಬರ್ತೀನಿ. ನಾಡಿದ್ದು ಮ್ಯಾಚಿದೆ. ಮುಗಿದ ನಂತರ ಬರ್ತೀನಿ. ಹೇಳು ಮನೆಯಲ್ಲಿ.. ಹಾಂ ಮರೆತಿದ್ದೆ ನೋಡು, ನೀನು ಹಾಗೂ ನಿನ್ನ ಕುಟುಂಬ ಇಲ್ಲಿ ಉಳಿದರೆ ಸಮಸ್ಯೆ ಹೆಚ್ಚು. ಅದಕ್ಕೆ ಭಾರತಕ್ಕೆ ಕರೆದೊಯ್ಯೋಣ ಅನ್ನುವ ಆಲೋಚನೆ ಮಾಡಿದ್ದೆವಲ್ಲ.. ಏನಂದ್ರು ಮನೆಯಲ್ಲಿ? ಪಾಸಿಟಿವ್ ಉತ್ತರ ಬಂದಿತಾ'
               `ನಾವು ಯಾವತ್ತೋ ಆಲೋಚನೆ ಮಾಡಿದ್ವಿ. ಆದರೆ ಅದು ಸಾಧ್ಯವಾಗಿರಲಿಲ್ಲ. ನಾವೀಗ ಭಾರತಕ್ಕೆ ಬರ್ತೇವೆ ಅಂದರೆ ನಮಗೆ ಅಗತ್ಯದ ದಾಖಲೆಗಳು, ಕಾಗದಪತ್ರಗಳು ಸಿಗುತ್ತಾ? ಭಾರತದ ಪೌರತ್ವ ಪಡೆದುಕೊಳ್ಳಬೇಕಲ್ಲ ನಾವು..ನಂಗಂತೂ ಅದೇ ಆಲೋಚನೆ' ಎಂದಳು ಮಧುಮಿತಾ.
                 `ಅದಕ್ಕೆ ಸೂರ್ಯನ್ ವ್ಯವಸ್ಥೆ ಮಾಡ್ತೀನಿ ಅಂದಿದ್ದಾನೆ. ಸಮಸ್ಯೆಯಿಲ್ಲ. ನೀವು ತಯಾರಾಗಿ. ಮನೆಯಲ್ಲಿ ಹೇಳಿ. ಬಾಂಗ್ಲಾದಲ್ಲಿ ನಿಮಗೆ ಜಮೀನು, ಮನೆ ಇದೆಯಲ್ಲ. ಅವನ್ನು ಮಾರಾಟ ಮಾಡೋದು ಒಳ್ಳೆಯದು. ಮತ್ತೆ ಬಾಂಗ್ಲಾದೇಶಕ್ಕೆ ಮರಳುವ ಸಾಧ್ಯತೆಗಳಿಲ್ಲ. ನಿನ್ನ ತಂದೆಯ ಬಳಿ ಹೇಳು. ಈ ಕುರಿತು ಮಾತನಾಡು. ಆದಷ್ಟು ಬೇಗ ನೀವು ಬಾಂಗ್ಲಾದಿಂದ ಭಾರತಕ್ಕೆ ಬಂದು ನೆಲೆಸಬಹುದು'
                `ನಮ್ಮದು ಜಮೀನು ಜಾಸ್ತಿಯಿಲ್ಲ. ಎಕರೆಗೂ ಕಡಿಮೆ ಜಮೀನಿದೆ. ಮನೆಯಿದೆ. ಹಳೆಯ ಮನೆ. ಅವನ್ನು ಮಾರಾಟ ಮಾಡಿದರೆ ಒಂದೋ ಎರಡೋ ಲಕ್ಷ  ಸಿಗಬಹುದು. ಹೇಳ್ತೀನಿ ಮನೆಯಲ್ಲಿ. ಏನು ಮಾಡ್ತಾರೋ ನೋಡೋಣ.' ಎಂದಳು ಮಧುಮಿತಾ.
               ಮಾತು ಸಾಗಿದಂತೆಲ್ಲ ಇವರ ನಡುವೆ ತಾನೇಕೆ ಇರಬೇಕು ಎಂದುಕೊಂಡು ಸೂರ್ಯನ್ ರೂಮಿನಿಂದ ಹೊರಕ್ಕೆ ಹೋದ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೇ ಉಳಿದರು. ವಿನಯಚಂದ್ರನ ಕೈಯನ್ನು ತನ್ನೆರಡೂ ಕೈಗಳಿಂದ ಹಿಡಿದ ಮಧುಮಿತಾ ಮತ್ತೊಮ್ಮೆ ಧನ್ಯವಾದ ಹೇಳಿದಳು. ವಿನಯಚಂದ್ರ ಮುಜುಗರದಿಂದ ಕೈ ಬಿಡಿಸಿಕೊಂಡ.
               `ವಿನೂ.. ನಿನ್ನ ಬಳಿ ಮಾತನಾಡಬೇಕು. ಆದರೆ ಇಲ್ಲಿ ಮಾತನಾಡುವುದು ಅಸಾಧ್ಯ. ಎಲ್ಲಾದರೂ ಹೊರಗೆ ಹೋಗಿ ಮಾತಾಡೋಣ. ನಾಳೆ ಆಗಬಹುದಾ? ಸಿಕ್ತೀಯಾ?'
               ಆಶ್ಚರ್ಯದಿಂದ ವಿನಯಚಂದ್ರ `ಮಾತಾಡೋದಾ..? ಖಂಡಿತ.. ನಾಳೆ ಆಗಬಹುದು. ಬಹುಶಃ ನಾಳೆ ಮದ್ಯಾಹ್ನನ ಸಮಯದಲ್ಲಿ ನಮಗೆ ಪ್ರಾಕ್ಟೀಸ್ ಕಡಿಮೆ ಇರುತ್ತದೆ. ಆಗ ಹೊರಗೆಲ್ಲಾದರೂ ಹೋಗೋಣ. ನಾನು ಜಾಧವ್ ಅವರ ಬಳಿ ಒಪ್ಪಿಗೆ ಪಡೆದುಕೊಳ್ಳುತ್ತೇನೆ. ನನಗೂ ನಿನ್ನ ಬಳಿ ಮಾತನಾಡುವುದಿದೆ.' ಎಂದ
                ಮತ್ತರ್ಧ ತಾಸು ಕಳೆದ ನಂತರ ಮಧುಮಿತಾ ಮರಳಿದಳು. ಸೂರ್ಯನ್ ಬಂದವನೇ ವಿನಯಚಂದ್ರನ ಕಾಲೆಳೆಯಲು ಆರಂಭಿಸಿದ. ಸೂರ್ಯನ್ ಬಳಿ ವಿನಯಚಂದ್ರ ಎಲ್ಲ ಸಂಗತಿಗಳನ್ನೂ ತಿಳಿಸಿದ. ಸೂರ್ಯನ್ ಕೂಡ ಒಮ್ಮೆ ಚಕಿತನಾದ. `ಹೌದು ಅವಳೇನೋ ಮಾತನಾಡೋದಿದೆ ಅಂದ್ಲು ಸರಿ. ನಿಂಗೇನು ಮಾತಾಡೋದಿದೆ ಅಂತದ್ದು..? ಏನು ಪ್ರಪೋಸ್ ಮಾಡೋವ್ನಿದ್ದೀಯಾ..?' ಥಟ್ಟನೆ ಕೇಳಿದ.
             ಒಮ್ಮೆ ವಿನಯಚಂದ್ರ ಅವಾಕ್ಕಾದ. ಆದರೆ ಮಾತಾಡಲಿಲ್ಲ. `ಹೇಳೋ ಮಾರಾಯಾ.. ಏನಾದರೂ ಸಲಹೆಗಳಿದ್ದರೆ ಕೊಡೋಣ...ನನ್ನ ಬಳಿಯೂ ಮುಚ್ಚುಮರೆ ನಾ?' ಎಂದ ಸೂರ್ಯನ್. ವಿನಯಚಂದ್ರ `ಮಾತನಾಡಬೇಕು ನಿಜ. ಮಧುಮಿತಾಳ ಬಗ್ಗೆ ಮನಸ್ಸಿನಲ್ಲಿ ಪ್ರೀತಿ ಇರೋದೂ ನಿಜ. ನಾವಿಬ್ಬರೂ ಆಪ್ತರು ನಿಜ. ಅವಳ ಮನೆಯಲ್ಲಿ ನನ್ನ ಬಗ್ಗೆ ಗೌರವ, ಪ್ರೀತಿ, ನಂಬಿಕೆ ಎಲ್ಲವೂ ಇದೆ. ಆದರೆ ನಾನು ಈ ಸಮಯದಲ್ಲಿ ಅವಳ ಬಳಿ ಪ್ರೀತಿಸ್ತಾ ಇದ್ದೀನಿ ಅಂದರೆ ಸರಿಯಾಗುತ್ತಾ? ಸಹಾಯದ ನೆಪದಲ್ಲಿ ಪ್ರೀತಿಯ ಬಲೆ ಬೀಸುತ್ತಿದ್ದಾನೆ ಅಂದುಕೊಳ್ಳುವುದಿಲ್ಲವಾ? ಏನ್ ಮಾಡಲೋ ಸೂರ್ಯ..' ಮನಸ್ಸಿನ ಭಾವನೆಗಳನ್ನು ಕೇಳಿಯೇ ಬಿಟ್ಟಿದ್ದ.
               `ಅಂತಹ ಸಮಸ್ಯೆ ಆಗಲಿಕ್ಕಿಲ್ಲ ವಿನೂ. ನನಗನ್ನಿಸುತ್ತೆ ನಿನ್ನ ಬಗ್ಗೆ ಅವಳಿಗೂ ಪ್ರೀತಿಯಿದೆ. ನೀನು ಅವಳ ಬಳಿ ಕೇಳೋದರಲ್ಲಿ ತಪ್ಪಿಲ್ಲ. ಒಪ್ಪಿಕೊಂಡರೆ ಓಕೆ. ಇಲ್ಲವೆಂದರೆ ತಪ್ಪೇನೂ ಆಗೋದಿಲ್ವಲ್ಲಾ.. ಒಂದು ವೇಳೆ ಆಕೆ ಒಪ್ಪದೇ ಇದ್ದರೆ ಗೆಳೆಯರಾಗಿಯೇ ಇದ್ದುಬಿಡಬಹುದು'
               `ನಾನು ಕೇಳಿದ್ದೇ ತಪ್ಪೆಂದು ಮುನಿದು ಕುಳಿತರೆ..?'
               `ಹಂಗೇನೂ ಆಗೋದಿಲ್ಲ.. ಕೇಳು ಮಾರಾಯಾ.. ಸಹಾಯಕ್ಕೆ ಬರಬೇಕಾ..?'
               `ಹ್ಯೆ ಹ್ಯೆ... ಬೇಡ ಬೇಡ.. ಆದರೆ ಅವಳು ಏನೋ ಮಾತಾಡಬೇಕು ಅಂದಿದ್ದಾಳಲ್ಲ.. ನೋಡೋಣ' ವಿನಯಚಂದ್ರನ ಅನುಮಾನಗಳು ಮುಗಿದಿರಲಿಲ್ಲ.
                `ಯಾರಿಗ್ಗೊತ್ತು ವಿನೂ.. ಅವಳೂ ನಿನ್ನ ಬಳಿ ಪ್ರೀತಿಯ ವಿಷಯವನ್ನೇ ಕೇಳಬಹುದಲ್ಲ.. ಯಾಕೆ ಸುಮ್ಮನೆ ನಕಾರಾತ್ಮಕವಾಗಿಯೇ ಮಾತಾಡ್ತೀಯಾ.. ಅವಳೇ ನಿನ್ನ ಬಳಿ ಬಂದು ಪ್ರೀತಿಸ್ತೀಯಾ ಅಂತ ಕೇಳಿದ್ಲು ಅಂತಿಟ್ಕೋ.. ಆಗ..?'
               `ಹುಂ.. ಹಾಗಾದರೆ ತೊಂದರೆಯಿಲ್ಲ.. ನೋಡೋಣ.. ನಾಳೆ ಏನಾಗುತ್ತೋ ಅಂತ..'
               `ಶುಭವಾಗಲಿ ಗೆಳೆಯಾ...'

**

           ಕುತೂಹಲ, ಭಯ, ಆತಂಕ, ರೋಮಾಂಚನ ಮುಂತಾದ ಭಾವನೆಗಳೊಂದಿಗೆ ಆ ದಿನ ರಾತ್ರಿ ಕಳೆದು ಬೆಳಗಾಯಿತು. ಹೇಗೋ ಏನೋ ಎನ್ನುವ ಅಂಶ ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರನ್ನೂ ಕಾಡಿತು. ಗೊಂದಲದಲ್ಲಿಯೇ ವಿನಯಚಂದ್ರ ಕಬ್ಬಡ್ಡಿ ಪ್ರಾಕ್ಟೀಸಿನಲ್ಲಿ ಪಾಲ್ಗೊಂಡ. ತರಬೇತಿಯನ್ನು ಮಾಡುತ್ತಿದ್ದರೂ ವಿನಯಚಂದ್ರನ ಮನಸ್ಸು ಇನ್ನೆಲ್ಲೋ ಇತ್ತು. ಮದ್ಯಾಹ್ನದ ವೇಳೆಗೆ ಹೊಟೆಲಿಗೆ ಆಗಮಿಸಿದ ಮಧುಮಿತಾ ಬೆಂಗಾಲಿಯ ನೀಲಿ ಅಂಚಿನ ಸೀರೆಯುಟ್ಟುಕೊಂಡಿದ್ದಳು. ಪ್ರತಿ ದಿನಕ್ಕಿಂತ ಮಾದಕವಾಗಿ ಕಾಣುತ್ತಿದ್ದಳು. ಬಿಳಿಯ ಬಣ್ಣದ್ದಾದರೂ ಸೀರೆ ಆಕರ್ಷಕವಾಗಿತ್ತು. ಸೀರೆಯುಟ್ಟ ಮಧುಮಿತಾ ಮುದ್ದಾಗಿ ಕಾಣುತ್ತಿದ್ದಳು. ಕೆಲವರು ಸೀರೆಯುಟ್ಟರೆ ಬಹಳ ಸುಂದರವಾಗಿ ಕಾಣುತ್ತಾರೆ ಎಂದುಕೊಂಡ ವಿನಯಚಂದ್ರ. ಸೀರೆಯನ್ನು ಉಡುವುದೂ ಒಂದು ಕಲೆ. ಜಗತ್ತಿನಲ್ಲಿ ಸೀರೆಯಷ್ಟು ಮಾದಕ, ಶೃಂಗಾರಮಯ ಉಡುಗೆ ಇನ್ನೊಂದಿಲ್ಲ. ಚನ್ನಾಗಿ ಉಟ್ಟರೆ ಎಂತಹ ವ್ಯಕ್ತಿಯನ್ನೂ ಮರುಳು ಮಾಡಬಲ್ಲದು ಸೀರೆ ಎಂದುಕೊಂಡ.!!

(ಮುಂದುವರಿಯುತ್ತದೆ.)

ನಿವೇದನೆ

(ರೂಪದರ್ಶಿ: ಅನುಷಾ ಹೆಗಡೆ)
ನಿನ್ನ ನೆನಪು ಮುಷ್ಟಿ ಬಿಗಿದು
ನನ್ನೆದೆಯ ಗೂಡನ್ನು ತಟ್ಟಿ
ತೆರೆದಾಗಲೆಲ್ಲಾ ನನ್ನೊಳಗೆ
ಮೂಡಿತ್ತು ಪ್ರೀತಿಯ
ಸವಿಯಾದ ವೇದನೆ |

ಆಗೆಲ್ಲಾ ಮನಸ್ಸು ನಿನಗೆ
ಕಾದು, ಪರಿತಪಿಸಿ, ಬಯಸಿ
ಭಾವನೆಗಳ ಬದಲಿಗಾಗಿ
ಬಯಸಿತ್ತೊಂದು ನಿವೇದನೆ |

ಜೊತೆಗೆ ನಿನ್ನೆಡೆಗೆ ಕನಸು ಕಂಡು
ಬಾಚಿ ತಬ್ಬಿ ಹಿಡಿಯಲು
ಪ್ರಯತ್ನಿಸಿ ಸೋತಾಗಲೆಲ್ಲಾ ಆಹ್..!!
ಅದೇನು ನೀ-ವೇದನೆ !?!


**
(ಈ ಕವಿತೆಯನ್ನು ಬರೆದಿದ್ದು 28-12-2006ರಂದು ದಂಟಕಲ್ಲಿನಲ್ಲಿ)
(ಕವಿತೆಗೆ ರೂಪದರ್ಶಿಯಾಗಿ ಪೋಟೋ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ ಅನುಷಾಂಗೆ ಧನ್ಯವಾದಗಳು)

Saturday, May 31, 2014

ಒಲವಲತೆಗೆ ನೀರನೆರೆದ... (ಕಥೆ ಭಾಗ-1)


              ಟ್ರೆಕ್ಕಿಂಗ್ ಹೋಗೋದು ಎಂದರೆ ಅಪಾರ ಹುಚ್ಚನ್ನು ಬೆಳೆಸಿಕೊಂಡಿದ್ದ ಸಿಂಧು ತಾನು ಕೊನೆಯ ಸಾರಿ ಟ್ರೆಕ್ಕಿಂಗ್ ಗೆ ಹೋಗಿ ಎಷ್ಟು ಕಾಲವಾಯಿತು ಎಂದು ಆಲೋಚಿಸತೊಡಗಿದ್ದಳು. ಐದಾರು ವರ್ಷಗಳ ಹಿಂದೆ ಬುರುಡೆ ಜಲಪಾತಕ್ಕೆ ಹೋಗಿದ್ದಲ್ವಾ? ಅಷ್ಟರ ನಂತರ ತನ್ನ ಬದುಕಿನಲ್ಲಿ ಏನೆಲ್ಲಾ ನಡೆದುಹೋಯಿತು ಎಂದುಕೊಂಡಳು ಸಿಂಧು. ಮತ್ತೆ ಎಲ್ಲಿಗಾದರೂ ಟ್ರೆಕ್ಕಿಂಗ್ ಮಾಡಲೇಬೇಕು. ಮನಸ್ಸು ಚಡಪಡಿಸಿತ್ತು. ಎಲ್ಲಿಗೆ ಹೋಗೋದು? ಜೊತೆಗೆ ಯಾರಿದ್ದಾರೆ? ಕಳೆದೈದು ವರ್ಷಗಳಲ್ಲಿ ಜೊತೆಯಲ್ಲಿ ಎಷ್ಟೆಲ್ಲ ಜನರು ಒಡನಾಡಿಯಾಗಿದ್ದಾರೆ. ಆದರೆ ಮನಸ್ಸು ಮಾತ್ರ ಒಬ್ಬಂಟಿಯಾಗಿತ್ತಲ್ಲ. ಈಗ ಮತ್ತೆ ಟ್ರೆಕ್ಕಿಂಗ್ ಹೋಗಬೇಕು ಎಂದುಕೊಂಡರೆ ಯಾರು ಬರ್ತಾರೆ ಎಂದುಕೊಳ್ಳುತ್ತಿದ್ದಂತೆ ಪೋನು ರಿಂಗಣಿಸಿತ್ತು.
`ದೇಹಕೆ ಉಸಿರೆ ಸದಾ ಭಾರ...
ಇಲ್ಲ ಆಧಾರ...' ಚೆಂದದ ರಿಂಗ್ ಟೋನ್. ಮತ್ತೆ ಕೇಳಬೇಕೆನ್ನಿಸುವಂತದ್ದು. ಅದ್ಯಾವುದೋ ಪರಿಚಯದ ನಂಬರ್ ಕಂಡಂತೆ ಕಂಡಿತು. ನೋಡಿದರೆ ದಿಗಂತ್.
`ಹಾಯ್..' ಎಂದಳು ಸಿಂಧು.
`ಹಲೋ.. ಹೇಗಿದ್ಯೆ..?' ದಿಗಂತ್
`ಫುಲ್ ಅರಾಮು.. ನೀನು?'
`ನಾನೂ ನಿನ್ನಷ್ಟೇ ಅರಾಮಿದ್ದೇನೆ.. ಏನ್ ಮಾಡ್ತಾ ಇದ್ದೀಯಾ?'
`ಬೋರು.. ಏನಾದರೂ ಮಾಡಬೇಕೆಂಬ ಆಲೋಚನೆ ಮನಸ್ಸಿನಲ್ಲಿ ಮೂಡುತ್ತಿದೆ...'
`ಹೇಯ್... ಟ್ರೆಕ್ಕಿಂಗ್ ಗೆ ಹೋಗೋಣ್ವಾ..?' ದಿಗಂತ ಕೇಳಿದ್ದ.
`ಖಂಡಿತ... ಆದ್ರೆ ಎಲ್ಲಿಗೆ ಹೋಗೋದು..?' ಸಿಂಧು ಕೇಳಿದ್ದಳು. ರೋಗಿ ಬಯಸಿದ್ದು ಹಾಲು ಅನ್ನ.. ವೈದ್ಯ ಹೇಳಿದ್ದೂ ಅದೆ ಎನ್ನುವಂತೆ ಆಯಿತವಳಿಗೆ. ಮನಸ್ಸು ಹಕ್ಕಿಯಂತೆ ಖುಷಿ ಖುಷಿ.
`ಬುರುಡೆ ಜಲಪಾತಕ್ಕೆ ಹೋಗಿಬರೋಣ.. ಬಹಳ ದಿನವಾಯ್ತಲ್ಲವಾ..?' ದಿಗಂತ ಹೇಳಿದ್ದ.
ಸಿಂಧುಗೆ ಮನಸ್ಸು ಒಮ್ಮೆ ಕನಲಿ ಹಳೆಯ ನೆನಪುಗಳೆಲ್ಲ ಕಣ್ಣೆದುರು ಬಂದಂತಾಯಿತು. ಸಾವರಿಸಿಕೊಂಡು ` ಹುಂ... ಆದ್ರೆ ಯಾವತ್ತು ಹೋಗೋದು..?'
`ಹೇಳ್ತೀನಿ.. ತಯಾರಾಗಿರು...' ಪೋನ್ ಕಟ್ ಮಾಡಿದ. ದಿಗಂತನ ಮನಸ್ಸು ಹಸಿರಾಗಿತ್ತು. ಸಿಂಧು ಮನಸ್ಸು ಹಳೆ ನೆನಪಿನ ಹೊಳೆಗೆ ಜಾರಿತ್ತು. ದಿಗಂತನೇ ಹಿಂಗೆ.. ಯಾವಾಗ್ಲೂ ಸರ್ ಪ್ರೈಸ್ ಕೊಡ್ತಾ ಇರ್ತಾನೆ ಎಂದುಕೊಂಡಳು ಸಿಂಧು. ಆವತ್ತು ತಾನು ನೋಡಿದ ದಿಗಂತನಿಗೂ ಇವತ್ತಿನ ದಿಗಂತನಿಗೂ ಸ್ವಲ್ಪವೂ ಬದಲಾವಣೆಯಾಗಿಲ್ಲ. ಅಂದಿನ ಹಾಗೇ ಇದ್ದಾನೆ ಎಂದುಕೊಂಡಳು.

**
                ದಿಗಂತ ಸಿಂಧುವನ್ನು ಮೊದಲಬಾರಿ ಕಂಡಿದ್ದು 6-8 ವರ್ಷಗಳ ಹಿಂದೆ. ಅಚಾನಕ್ಕಾಗಿ ಸಿಕ್ಕಿದ್ದ. ಕಾಲೇಜಿನಲ್ಲಿ. ಪರಮ ಓದುಗುಳಿಯಿರಬೇಕು. ಒಂದಿನ ಲೈಬ್ರರಿಯಲ್ಲಿ ಸಿಂಧುಗೆ ಅದ್ಯಾವುದೋ ಇಂಗ್ಲೀಷ್ ಕಾದಂಬರಿಯೊಂದು ಬೇಕಿತ್ತು. ಕಾಲೇಜಿನಲ್ಲಿದ್ದ ಕಾದಂಬರಿಗಳ ಲೀಸ್ಟಿನಲ್ಲಿ ಆ ಹೆಸರಿದ್ದರೂ ಹುಡುಕಾಡಿದ ಸಿಂಧುಗೆ ಅದು ಸಿಕ್ಕಿರಲಿಲ್ಲ. ಯಾರು ತೆಗೆದುಕೊಂಡು ಹೋಗಿದ್ದಾರಪ್ಪಾ ಎಂದು ನೋಡಿದಾಗ ದಿಗಂತ್ ಹೆಸರು ಬರೆದಿತ್ತು. ಅವನೆಲ್ಲಿ ಸಿಗುತ್ತಾನೆ ಎಂದುಕೊಂಡವಳಿಗೆ ಅಲ್ಲೇ ಮುಖದ ಮುಂದೆ ಪುಸ್ತಕ ಹಿಡಿದು ಓದುತ್ತಿದ್ದ ವ್ಯಕ್ತಿಯೊಬ್ಬ ಕಾಣಿಸಿದ್ದ. ಅವಳಿಗೆ ಬೇಕಾಗಿದ್ದ ಕಾದಂಬರಿಯೇ ಅದು. ಬಹುಶಃ ದಿಗಂತ ಎಂಬಾತ ಇವನೇ ಇರಬೇಕು ಎಂದುಕೊಂಡು ಹೋಗಿ ಮಾತನಾಡಿಸಿದ್ದಳು. ಅದೇನೋ ಹೇಳುತ್ತಾರಲ್ಲ ಹಾಗಾಯಿತು ಕಥೆ. ಅವನೇ ದಿಗಂತನಾಗಿದ್ದ. ಮತ್ತು ಅವಳಿಗೆ ಬೇಕಾಗಿದ್ದ ಪುಸ್ತಕವನ್ನು ಅವನೇ ಹಿಡಿದುಕೊಂಡು ಕುಳಿತಿದ್ದ. ಸಿಂಧುವಿಗೆ ಪುಸ್ತಕ ಬೇಕೇ ಬೇಕಿತ್ತು. ಕೇಳಲು ಮುಜುಗರ. ಯಾರೋ ಹೊಸಬ. ಹೇಗೆ ಕೇಳಲಿ ಎಂದುಕೊಂಡವಳು ಕೊನೆಗೊಮ್ಮೆ ದಿಗಂತನ ಬಳಿ ಕೇಳಿಯೇ ಬಿಟ್ಟಳು.
                  ಯಾರಿವಳು ಇದ್ದಕ್ಕಿದ್ದಂತೆ ತನ್ನತ್ತ ಬಂದು ತಾನು ಓದುತ್ತಿದ್ದ ಪುಸ್ತಕವನ್ನು ಕೇಳಿದಾಕೆ ಎಂದು ವಿಸ್ಮಿತಗೊಂಡಿದ್ದ ದಿಗಂತ್. ಒಮ್ಮೆ ತಬ್ಬಿಬ್ಬಾಗಿದ್ದವನು ಕೊನೆಗೆ ಆಕೆಯ ಮಾತಿನ ಮೋಡಿಗೆ ಮರುಳಾಗಿ ಪುಸ್ತಕವನ್ನು ಅವಳಿಗೆ ಕೊಟ್ಟುಬಿಟ್ಟಿದ್ದ. ಪರಿಚಿತಗೊಂಡಿದ್ದ ಆಕೆ ನಂತರ ಸ್ನೇಹಿತೆಯಾಗಿ ಆಪ್ತಳಾಗಿದ್ದಳು. ಇಬ್ಬರೂ ಓದುಗುಳಿಗಳಾಗಿದ್ದ ಕಾರಣ ಪುಸ್ತಕದ ನೆಪದಲ್ಲಿ ಪರಿಚಯ, ಸ್ನೇಹವಾಗಿ ಆತ್ಮೀಯತೆಯ ಸೇತುವೆ ಬೆಳೆದಿತ್ತು. ಕಾಲೇಜು ದಿನಗಳಲ್ಲಿ ಹತ್ತಿರಾಗಿದ್ದರು.
                ಮೊದ ಮೊದಲಿನ ಮಾತುಕತೆ ನಂತರ ಆಪ್ತತೆಯನ್ನು ಹುಟ್ಟುಹಾಕಿತ್ತು. ಓದಿನಂತೆಯೇ ಇನ್ನೊಂದು ವಿಷಯವೂ ಅವರಿಬ್ಬರಲ್ಲೂ ಸಮಾನ ಆಸಕ್ತಿಗೆ ಕಾರಣವಾಗಿದ್ದವು. ಅದೇ ಟ್ರೆಕ್ಕಿಂಗ್. ಕಾಡು, ಗುಡ್ಡ, ಬೆಟ್ಟ, ನದಿ, ಕಣಿವೆಗಳಲ್ಲೆಲ್ಲ ಅಡ್ಡಾಡುವುದು, ಏಳುತ್ತ ಬೀಳುತ್ತ ಗುಡ್ಡ ಬೆಟ್ಟಗಳ ನಡುವೆ ಕಳೆದು ಹೋದಂತೆ ಅಲೆಯುವುದು ಇಬ್ಬರಿಗೆ ಬಹು ಇಷ್ಟವಾದ ಸಂಗತಿಯಾಗಿದ್ದವು. ಬಾನೆತ್ತರದ ಕಲ್ಲುಬಂಡೆಗಳು, ಎತ್ತರದ ಪರ್ವತಗಳನ್ನು ಏರುವುದು, ತಳವೇ ಕಾಣದಂತಹ ಕಣಿವೆಯಾಳಕ್ಕೆ ಇಳಿಯುವುದೆಂದರೆ ಇಬ್ಬರಿಗೂ ಜೀವಕ್ಕಿಂತ ಹೆಚ್ಚು ಇಷ್ಟ ಎಂಬಂತಾಗಿದ್ದವು.
                ಇಬ್ಬರಿಗೂ ಟ್ರೆಕ್ಕಿಂಗ್ ಎಂದರೆ ಇಷ್ಟ ಎನ್ನುವುದು ಮೊದಲು ಗೊತ್ತಾಗಿದ್ದೇ ದಿಗಂತ ಕಾಲೇಜಿನಲ್ಲಿ ಟ್ರೆಕ್ಕಿಂಗ್ ಟ್ರಿಪ್ ಇಟ್ಟಾಗ. ಉಂಚಳ್ಳಿ ಜಲಪಾತದಿಂದ ಇಳಿದು ನದಿಗುಂಟ ಸಾಗಿ ಹಾಗೆಯೇ ಬುರುಡೆ ಜಲಪಾತದ ಕವಲಿನಲ್ಲಿ ಹಾದು ಅದೇ ಜಲಪಾತದ ಪಕ್ಕದಿಂದ ಮೇಲೇರಿ ಬರುವ ಟ್ರಿಪ್ಪನ್ನು ಇಟ್ಟಿದ್ದ. ಹೀಗೊಂದು ಟ್ರಿಪ್ಪಿನ ವಿಷಯದ ಬಗ್ಗೆ ಆಸಕ್ತರು ಪಾಲ್ಗೊಳ್ಳಬಹುದು ಎಂದು ಹೇಳಿ ನೊಟೀಸ್ ಬೋರ್ಡಿಗೆ ಹಾಕಿದ ಅರೆಘಳಿಗೆಯಲ್ಲಿ ಸಿಂಧು ತಾನು ಬರುತ್ತೇನೆಂದು ದಿಗಂತನ ಬಳಿ ಹರಪೆ ಬಿದ್ದಿದ್ದಳು. ದಿಗಂತ ಖುಷಿಯಿಂದ ಒಪ್ಪಿಕೊಂಡಿದ್ದ. 12 ಜನರು ಟ್ರಿಪ್ಪಿಗೆ ಹೆಸರನ್ನು ನೊಂದಾಯಿಸಿದ್ದರಾದರೂ ದಿಗಂತ ಅಳೆದು ತೂಗಿ 6 ಜನರನ್ನು ಆಯ್ಕೆ ಮಾಡಿದ್ದ. 6 ಜನರಲ್ಲಿ ಸಿಂಧುವನ್ನು ಸೇರಿ ಇಬ್ಬರು ಹುಡುಗಿಯರು. ನಾಲ್ವರು ಹುಡುಗರು.
                 ಒಂದು ಶುಭ ಮುಂಜಾನೆ ಆರುಗಂಟೆಗೆಲ್ಲಾ 6 ಜನರ ತಂಡ ಉಂಚಳ್ಳಿ ಜಲಪಾತವನ್ನು ತಲುಪಿತ್ತು. ಆರು ಜನರ ಪೈಕಿ ಬಹುತೇಕರು ತಿಂಡಿ, ವಗೈರೆಗಳನ್ನು ಹೊತ್ತಿದ್ದರು. ದಿಗಂತ ಟ್ರೆಕ್ಕಿಂಗಿಗೆ ಅನುಕೂಲವಾಗುವಂತಹ ಸಕಲ ಸರಂಜಾಮುಗಳನ್ನೂ ತಂದಿದ್ದ. ಉಂಚಳ್ಳಿ ಜಲಪಾತದ ಎದುರಿನಲ್ಲಿರುವ ವೀಕ್ಷಣಾ ಗೋಪುರದಲ್ಲಿ ಜಲಪಾತವನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿಯೇ ದಿಗಂತ ಎಲ್ಲರ ಬಳಿ ಹೇಳಿದ್ದ. ಉಂಚಳ್ಳಿ ಜಲಪಾತದ ಬುಡಕ್ಕೆ ಮೊದಲು ಇಳಿಯುವುದು. ಇದಕ್ಕೆ ಕನಿಷ್ಟ ಒಂದು ತಾಸು ಸಮಯ ಬೇಕೇ ಬೇಕಾಗುತ್ತದೆ. ಜಲಪಾತದ ಬಳಿ ನಾವು ಒಂದು ತಾಸು ಮಾತ್ರ ಉಳಿದುಕೊಳ್ಳುವುದು. ನಂತರ ಮುಂದಕ್ಕೆ ಸಾಗಲೇಬೇಕು. ಅಲ್ಲಿಂದ ನದಿಯಲ್ಲೇ ನಾಲ್ಕು ಕಿ.ಮಿ ಸಾಗಿ ಎಡಕ್ಕೆ ಹೊರಳಿದರೆ ಅಘನಾಶಿನಿಗೆ ಉಪನದಿಯೊಂದು ಬಂದು ಸೇರುತ್ತದೆ. ಈ ಕವಲಿನಲ್ಲಿ ಮೂರ್ನಾಲ್ಕು ಕಿ.ಮಿ ಸಾಗಿದರೆ ಬುರುಡೆ ಜಲಪಾತ ಸಿಗುತ್ತದೆ. ಇದನ್ನು ನಾವು ಏರಬೇಕು. ಮದ್ಯಾಹ್ನ ಬುರುಡೆ ಜಲಪಾತದ ಬುಡದಲ್ಲಿ ನಾವು ಊಟ ಮಾಡಬೇಕು. ಈ ಜಲಪಾತವನ್ನೇರುವುದು ಬಹಳ ಕಠಿಣವಾದ ಕೆಲಸಗಳಲ್ಲೊಂದು. ಇದುವರೆಗೂ ಕೆಲವೇ ಕೆಲವು ಜನರು ಮಾತ್ರ ಕೆಳಗಿನಿಂದ ಮೇಲಕ್ಕೆ ಹತ್ತಿದ್ದಾರೆ. ಕನಿಷ್ಟ ನಾಲ್ಕು ತಾಸುಗಳಾದರೂ ಇದಕ್ಕೆ ಬೇಕೇ ಬೇಕು. ನಂತರ ಜಲಪಾತದಿಂದ 9 ಕಿ.ಮಿ ನಡೆದು ಬಸ್ಸನ್ನು ಹತ್ತಿ ಮರಳಿ ಊರಿಗೆ ಹೋಗಬೇಕು. ಕೊನೆಯ ಸಾರಿ ಹೇಳುತ್ತಿದ್ದೇನೆ. ಯಾರಿಗಾದರೂ ಇಷ್ಟವಿಲ್ಲ. ಅಥವಾ ಭಯ ಅಂತಿದ್ದರೆ ಮರಳಿ ಹೋಗಿಬಿಡಿ ಎಂದು ಹೇಳಿದ್ದ.
                  ಕರಾರುವಾಕ್ ಕಾರ್ಯ, ಸಮಯನಿಗದಿ, ಖಡಕ್ ಮಾತಿನ ದಿಗಂತ ಹಾಗೂ ಆತನ ನಡೆನುಡಿ ಸಿಂಧುವಿಗೆ ಬಹಳ ಖುಷಿಯೆನ್ನಿಸಿದ್ದೇ ಆವಾಗ. ಯಾಕೋ ಈತ ಬಹಳ ಕುತೂಹಲವಾದ ವ್ಯಕ್ತಿತ್ವವನ್ನು ಹೊಂದಿದ್ದಾನೆ ಎಂದುಕೊಂಡಳು. ಕೆಲ ಕ್ಷಣದಲ್ಲಿಯೇ ಟ್ರೆಕ್ಕಿಂಗ್ ಆರಂಭಗೊಂಡಿತು. ಬಾನಂಚಿನಲ್ಲಿ ಇನ್ನೂ ಸೂರ್ಯ ಮೂಡಿರಲಿಲ್ಲ. ತಂಪು ತಂಗಾಳಿ ಹಿತವಾಗಿ ಬೀಸುತ್ತಿತ್ತು. ಉತ್ಸಾಹದ ಚಿಲುಮೆಯೊಂದಿಗೆ ಉಂಚಳ್ಳಿ ಜಲಪಾತದ ಬುಡಕ್ಕೆ ಹೊರಟರು. ಸವೆದ ಹಾದಿ ಕಷ್ಟಪಡಬೇಕಿರಲಿಲ್ಲ. ಇಳಿದಿಳಿದು ಹೋದಂತೆಲ್ಲ ಮನಸು ಖುಷಿಯನ್ನು ಹೊಂದುತ್ತಿತ್ತು. ಅಲ್ಲಲ್ಲಿ ದಾರಿ ಪಕ್ಕದ ಗಿಡಗಳು ದಾರಿಗೆ ಮುತ್ತಿಕೊಂಡಿದ್ದವು. ಬೆಳಗಿನ ಜಾವದಲ್ಲಿ ಸುರಿದ ಇಬ್ಬನಿ ಮೈ ಮನಸ್ಸುಗಳಿಗೆ ತಾಕಿ ಮತ್ತಷ್ಟು ಹುಚ್ಚನ್ನು ಮನದಾಳದಲ್ಲಿ ಕೆಣಕಿಬಿಟ್ಟಂತಾಯಿತು. ಇಪ್ಪತ್ತೋ ಇಪ್ಪತ್ತೈದೋ ನಿಮಿಷದಲ್ಲಿ ಯಾವುದೇ ಕಷ್ಟವನ್ನು ಅನುಭವಿಸದೇ ಸರಾಗವಾಗಿ ಅಘನಾಶಿನಿ ಕಣಿವೆಗೆ ಇಳಿದುಬಿಟ್ಟಿದ್ದರು. ಅಲ್ಲಿಂದ ಒಂದು ಕಿ.ಮಿ ದೂರವನ್ನು ಜಲಪಾತದ ಕಡೆಗೆ ಸಾಗಬೇಕಿತ್ತು. ಜಲಪಾತದ ಬುಡಕ್ಕೆ ತೆರಳಿ ಧುಮ್ಮಿಕ್ಕುವ ಉಂಚಳ್ಳಿ ಜಲಪಾತದ ನೀರಿಗೆ ತಲೆಯನ್ನೊಡ್ಡುವ ಉದ್ದೇಶ ಎಲ್ಲರ ಮನಸ್ಸಿನಲ್ಲಿಯೂ ಇತ್ತು. ನಿಧಾನವಾಗಿ ತೆರಳಿದರು.
               ಬಂಡೆಯಿಂದ ಬಂಡೆಗೆ ಹಾರುತ್ತ, ಏರುತ್ತ, ಇಳಿಯುತ್ತ, ಹತ್ತಲಾಗದ ಬಂಡೆಗಳನ್ನು ಸುತ್ತಿ ಬಳಸುತ್ತ ಚಾರಣಿಗರು ತೆರಳಿದರು. ಪದೆ ಪದೆ ಅಘನಾಶಿನಿಯ ಕಿಂಕಿಣಿ ನಿನಾದ ಕಿವಿಯನ್ನು ಮೆಲ್ಲಗೆ ತಟ್ಟುತ್ತಿತ್ತು. ಕಣ್ಣಿಗೆ ಬೀಳುತ್ತಿದ್ದರೂ ಬಹುಬೇಗನೆ ಹತ್ತಿರ ಬರುತ್ತಿಲ್ಲ ಉಂಚಳ್ಳಿಯ ಕೆಪ್ಪ ಜೋಗ ಎಂಬುದು ಎಲ್ಲರ ಮನಸ್ಸಿನಲ್ಲಿರುವ ಹುಸಿಮುನಿಸಾಗಿತ್ತು. ನದಿ ಕಣಿವೆಯಲ್ಲಿ ನಡೆಯುವುದು ಬಹಳ ಕಷ್ಟ. ಒಂದು ಕಿ.ಮಿ ನಡೆದು ಹೋಗಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ ಎನ್ನುವುದು ಎಲ್ಲರ ಅನುಭವವಾಗಿತ್ತು. ಮತ್ತೊಮ್ಮೆ ಅದು ಸಾಬೀತಾಯಿತು. ಕೆಪ್ಪಜೋಗದ ತಳವನ್ನು ತಲುಪುವ ವೇಳೆಗೆ ಜಲಪಾತದ ತುದಿಯನ್ನು ನೇಸರ ಮುಟ್ಟಿ ಮುಟ್ಟಿ ನೋಡುತ್ತಿದ್ದ. ಚಿನ್ನದ ಎಳೆ ಎಳೆಗಳು ಜಲಪಾತದ ತುತ್ತ ತುದಿಯನ್ನು ಮುತ್ತಿಕ್ಕುತ್ತಿವೆಯೇನೋ ಎಂಬಂತೆ ಕಾಣುತ್ತಿದ್ದವು. ಸೂರ್ಯನ ಕಿರಣಗಳು ಜಲಪಾತದ ಕಾಲ ಬುಡವನ್ನು ತಲುಪಲು ಏನಿಲ್ಲವೆಂದರೂ ಮೂರ್ನಾಲ್ಕು ತಾಸುಗಳೇ ಬೇಕಾಗಬಹುದು ಎಂದುಕೊಂಡರು ಎಲ್ಲರೂ.
              `ಇಲ್ಲೇ ತಿಂಡಿ ತಿಂದು ಮತ್ತೆ ವಾಪಾಸಾಗೋಣ, ಇದೇ ಕಣಿವೆಯಾಳದಲ್ಲಿ ಮೂರ್ನಾಲ್ಕು ಕಿ.ಮಿ ನಡೆಯಬೇಕಾಗುತ್ತದೆ..' ಎಂದ ದಿಗಂತ. ಎಲ್ಲರೂ ಬ್ಯಾಗನ್ನು ಇಳಿಸಿ ತಿಂಡಿಗಳನ್ನು ಹರವಿಕೊಂಡರು. ತಂಡದ ಸದಸ್ಯರು ತಂದಿದ್ದ ತಿಂಡಿಗಳಲ್ಲಿ ಕೆಲವನ್ನು ತಿಂದು ಉಳಿದವುಗಳನ್ನು ಮುಂದೆ ಬೇಕಾಗುತ್ತದೆ ಎಂದು ಇಟ್ಟುಕೊಂಡರು. `ಕೇವಲ ಅರ್ಧಗಂಟೆಯ ಸಮಯವಿದೆ. ನದಿಯಲ್ಲಿ ಈಜಾಡಬಹುದು, ಜಲಪಾತದ ಧಾರೆಗೆ ತಲೆಯನ್ನೊಡ್ಡಿ ನಿಲ್ಲಬಹುದು. ಅರ್ಧಗಂಟೆಗಿಂತ ಒಂದು ನಿಮಿಷವೂ ತಡವಾಗುವಂತಿಲ್ಲ. ಹುಷಾರಾಗಿರ್ರಪ್ಪಾ..' ಎಂದು ಮತ್ತೊ್ಮೆ ದಿಗಂತ ಹೇಳುವುದರೊಳಗೆ ಎಲ್ಲರೂ ನೀರಿಗಿಳಿದಾಗಿತ್ತು.

(ಮುಂದುವರಿಯುತ್ತದೆ..)