Thursday, April 11, 2019

ಅನುರಕ್ತ (ಕಥೆ-5)


ಅದ್ಯಾವುದೋ ಮಾಯೆಯಲ್ಲಿ ಆಶ್ನಾ ನನಗೆ ಆಪ್ತಳಾಗಿದ್ದಳು. ಅವಳ ಕಡೆಗೆ ಹೇಳಿಕೊಳ್ಳಲಾಗದಂತಹ ಭಾವವೊಂದು ಬೆಳೆದು ನಿಂತಿತ್ತು. ಜೀಪ್ ನಲ್ಲಿ ಆಕೆ ನನ್ನ ಪಕ್ಕದಲ್ಲಿಯೇ ಕುಳಿತಿದ್ದಳು. ಬಿಟ್ಟೂ ಬಿಡದಂತೆ ನನ್ನ ಬಳಿ ಮಾತನಾಡುತ್ತಿದ್ದಳು. ನಾನು ಆಕೆಯ ಧ್ವನಿಗೆ ಕಿವಿಯಾಗಿದ್ದೆ. ಆಕೆಯ ಮನೆ, ಕುಟುಂಬ, ಅಮ್ಮ, ಅವಿಭಕ್ತ ಕುಟುಂಬ ಹೀಗೆ ಹಲವು ಸಂಗತಿಗಳನ್ನು ನನ್ನೆದುರು ಸವಿಸ್ತಾರವಾಗಿ ತಿಳಿಸಿದ್ದರು. ಅಸ್ಸಾಮಿ ಸಂಸ್ಕೃತಿ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಅರುಣಾಚಲ ಪ್ರದೇಶ ಹೀಗೆ ಅಸ್ಸಾಮಿನ ಸುತ್ತಲೂ ಇರುವ ರಾಜ್ಯಗಳು ಹೇಗೆ ವಿಭಿನ್ನವಾಗಿದೆ, ಅಲ್ಲಿನ ಜನಜೀವನಗಳ ಕುರಿತೆಲ್ಲ ತಿಳಿಸಿದ್ದಳು. ನನ್ನ ಜತೆ ಜತೆಯಲ್ಲಿಯೇ ಇದ್ದ ಸಂಜಯ ಕೂಡ ಇವೆಲ್ಲವನ್ನೂ ತಿಳೀಯುತ್ತಿದ್ದ.
ನಮ್ಮನ್ನು ಕರೆದೊಯ್ಯುತ್ತಿದ್ದ ಜೀಪು ಪತ್ರ ಗಾಂವ್ ಗೂ ಸ್ವಲ್ಪ ಮೊದಲು ಬ್ರಹ್ಮಪುತ್ರಾ ನದಿಯನ್ನು ದಾಟಿತು. ಅದೆಷ್ಟೋ ಮೈಲಿಗಳಷ್ಟು ಅಗಲವಾಗಿ ಹರಿಯುತ್ತಿದ್ದ ಬ್ರಹ್ಮಪುತ್ರಾ ನದಿಗೆ ಭಾರತ ಸರ್ಕಾರ ಸದೃಢ ಸೇತುವೆಯನ್ನು ನಿರ್ಮಾಣ ಮಾಡಿತ್ತು. ನಂತರ ದಿಬ್ರುಘಡ, ಲಹೋವಾಲ್, ಚಬುವಾ ಮೂಲಕ ತಿನ್ಸುಕಿಯಾಗೆ ಆಗಮಿಸಿದೆವು. ಮುಂದೆ ಮುಂದೆ ಹೋದಂತೆಲ್ಲ ಅಸ್ಸಾಮಿ ಸಂಸ್ಕೃತಿಯ ಅನಾವರಣವಾಗತೊಡಗಿತು. ಮತ್ತೆ ಮುಂದುವರೆದ ನಮ್ಮ ಪಯಣ ಮಾಕುಮ್, ದೂಂ ದೂಮಾ, ಕಾಕೋಪತ್ಥರ್, ಚುಟ್ ಡಿರಾಕ್ ಗಾಂವ್, ನವಜ್ಯೋತಿ, ಮಹದೇವಪುರ, ನಮಸಿ, ಎಂಥೇಮ್ ಗೆ ಬರುವ ವೇಳೆಗೆ ನಮ್ಮ ಜೀಪಿನ ಡ್ರೈವರ್ ನಾವು ಇಲ್ಲಿಂದ ಕಚ್ಚಾ ಮಾರ್ಗ ಹಿಡಿದು ಸಾಗಬೇಕೆಂದೂ, ನದಿಯೊಂದರ ದಡದ ಮೇಲೆ ನಮ್ಮ ಪ್ರಯಾಣ ಸಾಗುತ್ತದೆ ಎಂದೂ ತಿಳಿಸಿದ.
ಮುಂದಿನ ಪ್ರಯಾಣ ದುರ್ಗಮವಾಗಿರುವುದರಿಂದ ಸಾಕಷ್ಟು ಆಹಾರವನ್ನು ಕಟ್ಟಿಕೊಳ್ಳುವಂತೆ ಹೇಳೀದ್ದ. ನಾವು ಸಜ್ಜಾದೆವು. ಹಲವು ವಸ್ತುಗಳನ್ನು ಕೊಂಡೆವು. ನಂತರ ಮತ್ತೆ ಹೊರಟ ನಮ್ಮ ಜೀಪ್ ಪಿಯೋಂಗ್, ಧಿಯುನ್, ಲೆವಂಗ್ ಮೂಲಕ ಕ್ಯಾಂಪ್ ನಮ್ದಾಪಾಕ್ಕೆ ಆಗಮಿಸಿತು. ಅಲ್ಲಿ ನಮ್ಮ ಡ್ರೈವರ್ ನಮ್ಮನ್ನು ಇಳಿಯುವಂತೆ ಹೇಳಿದ. ನಮ್ಮ ಜೀಪು ಇಲ್ಲಿಗೆ ಮಾತ್ರ ಸೀಮಿತ. ಮುಂದೆ ನಮ್ಮ ಜೀಪು ಹೋಗೋದಿಲ್ಲ ಎಂದ. ಆಶ್ನಾಳೂ ಅದಕ್ಕೆ ದನಿಗೂಡಿಸಿದಳು. ನಾನು ಹಾಗೂ ಸಂಜಯ ಪ್ರಶ್ನಾರ್ಥಕವಾಗಿ ನೋಡಿದೆವು.
`ಅದೋ ಅಲ್ಲಿ ಕಾಣ್ತಾ ಇದೆಯಲ್ಲ ಅದೇ ನವೋದಿಹಾಂಗ್ ನದಿ. ಈ ನದಿಗೆ ಇನ್ನೂ ಸೇತುವೆ ಕಟ್ಟಿಲ್ಲ. ನಾವು ಈನದಿಯನ್ನು ದೋಣಿಯೊಂದರ ಮೂಲಕ ಸಾಗಬೇಕು. ಅದರ ಆಚೆಗೆ ಕಚ್ಚಾ ರಸ್ತೆಯಿದೆ. ಆ ರಸ್ತೆಯಲ್ಲಿ ನಾವು ನಡೆದು ಹೋಗಬೇಕು. ನಮ್ಮ ಅದೃಷ್ಟ ಚನ್ನಾಗಿದ್ದರೆ ಆ ದಡದಲ್ಲಿ ಯಾವುದಾದರೂ ವಾಹನ ಸಿಗಬಹುದು…’ ಎಂದಳು. ನವುಬ್ಬರೂ ತಲೆಯಲ್ಲಾಡಿಸಿದೆವು.
ದೋಣಿಯೊಂದರ ಮೂಲಕ ನದಿ ದಾಟಿದವರನ್ನು ಸ್ವಾಗತಿಸಿದ್ದು ಬರ್ಮಾದ ಇರವಾಡಿ ನಡಿಯವರೆಗೂ ಸುದೀರ್ಘವಾಗಿ, ಸಮೃದ್ಧವಾಗಿ ಹಬ್ಬಿ ನಿಂತಿದ್ದ ದಟ್ಟ ಕಾಡು. ಅಲ್ಲಲ್ಲಿ ನಡು ನಡುವೆ ಚಿಕ್ಕ ಚಿಕ್ಕ ಗದ್ದೆಗಳಿದ್ದವು. ಮಧ್ಯ ಮಧ್ಯದಲ್ಲೆಲ್ಲೋ ಅರಣ್ಯ ಇಲಾಖೆಯ ಬಂಗಲೆಗಳಿದ್ದವು. ಕಚ್ಚಾ ರಸ್ತೆಯೊಂದು ನಿರ್ಜನವಾಗಿ ಹಾದು ಹೋಗಿತ್ತು. ನಾವು ಆ ರಸ್ತೆಯಲ್ಲಿ ನಡೆಯಲು ಆರಂಭಿಸಿದೆವು. ದಟ್ಟ ಕಾಡಿನ ನಡುವೆ ಸಾಗುತ್ತಿದ್ದ ನಮಗೆ ಹಕ್ಕಿಗಳ ಚಿಲಿಪಿಲಿ ಗಾನ ಕಿವಿಗೆ ಬೀಳುತ್ತಿತ್ತು. ಆಗೊಮ್ಮೆ ಈಗೊಮ್ಮೆ ಒಂದೆರಡು ದ್ವಿಚಕ್ರ ವಾಹನಗಳು ಆ ಮಾರ್ಗದಲ್ಲಿ ಸಾಗುತ್ತಿದ್ದವಾದರೂ ಕಾರು, ಜೀಪಿನಂತಹ ವಾಹನಗಳ ಸುಳಿವು ಮಾತ್ರ ಇರಲೇ ಇಲ್ಲ.
`ವಿಜೋಯ್ ನಗರದಲ್ಲಿ ದೊಡ್ಡ ವಾಹನಗಳು, ಸರ್ಕಾರಿ ಸಾರಿಗೆ ಇಲ್ಲವಾ..?’ ನಾನು ಆಶ್ನಾಳನ್ನು ಕೇಳಿದ್ದೆ.
`ರಸ್ತೆ ಸಂಪರ್ಕವೇ ಸರಿಯಾಗಿಲ್ಲದ ವಿಜೋಯ್ ನಗರದಲ್ಲಿ ವಾಹನಗಳೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಯಾವುದೋ ಹೆಲಿಕಾಪ್ಟರ್ ಮೂಲಕ ಕೆಲವೇ ಕೆಲವು ಬೆರಳೆಣಿಕೆಯಷ್ಟು ವಾಹನಗಳನ್ನು ಅಲ್ಲಿನ ಶ್ರೀಮಂತರು ಇಟ್ಟುಕೊಂಡಿದ್ದಾರೆ ಅಷ್ಟೇ. ಇನ್ನೂ ವಿಶೇಷ ಸಂಗತಿ ಹೇಳಬೇಕೆಂದರೆ ವಿಜೋಯ್ ನಗರಕ್ಕೆ ಸಂಪೂರ್ಣ ರಸ್ತೆ ಸಂಚಾರ ಇಲ್ಲವೇ ಇಲ್ಲ. ಈಗ ನಾವು ನಡೆದುಕೊಂಡು ಹೋಗುತ್ತಿರುವ ರಸ್ತೆ ಕೂಡ ಸಂಪೂರ್ಣವಾಗಿ ಅಲ್ಲಿಗೆ ತಲುಪುವುದಿಲ್ಲ..’ ಎಂದಾಗ ನಾನು ಹಾಗೂ ಸಂಜಯ ಸ್ವಲ್ಪ ಚಿಂತೆಗೆ ಈಡಾಗಿದ್ದು ಸುಳ್ಳಲ್ಲ.
`ನಾವೀಗ ಬಂದೆವಲ್ಲ ನಾಮ್ದಾಪಾ.. ಅಲ್ಲಿಂದ ವಿಜೋಯ್ ನಗರಕ್ಕೆ ನಡೆದೇ ಹೋಗುತ್ತಾರೆ ಎಲ್ಲ. ಮೂರು ದಿಕ್ಕಿನಿಂದ ಮ್ಯಾನ್ಮಾರ್ ನಿಂದು ಸುತ್ತುವರಿದಿರುವ ವಿಜೋಯ್ ನಗರಕ್ಕೆ ಹತ್ತಿರದ ನಗರ ಎಂದರೆ ಮ್ಯಾನ್ಮಾರಿನ ಪುಟಾವೋ. ಇದು 40 ಕಿಮಿ ದೂರದಲ್ಲಿದೆ. ಭಾರತದ ಹಯೂಲಿಯಾಂಗ್ ಹಾಗೂ ಮಿಯಾವೋ ಹತ್ತಿರದ ಪ್ರಮುಖ ಪಟ್ಟಣಗಳು. ಮಿಯಾವೋ ತನಕ ರೈಲು ಸಂಪರ್ಕ ಇದೆ. ಮಿಯಾವೋಗೂ ವಿಜೋಯ್ ನಗರಕ್ಕೂ ಅಜಮಾಸು 150 ಕಿಲೋಮೀಟರ್ ದೂರ. ಇನ್ನೂ ಮಜಾ ಅಂದರೆ ಅಸ್ಸಾಂಗೆ ಹತ್ತಿರವಾದರೂ ಈ ಊರು ಅರುಣಾಚಲ ಪ್ರದೇಶದಲ್ಲಿದೆ.. ವಿಜೋಯ್ ನಗರ ಎನ್ನುವುದು ಆರು ಚಿಕ್ಕ ಚಿಕ್ಕ ಊರುಗಳ ಗ್ರಾಮಗುಚ್ಛ. ಅಜಮಾಸು 4500 ಜನರು ಇಲ್ಲಿ ವಾಸವಾಗಿದ್ದಾರೆ. ದಿಬ್ರುಘಡದಿಂದ ವಿಮಾನ ಸಂಪರ್ಕ ಸೌಲಭ್ಯ ಇದೆ. ಅಂದಹಾಗೆ ಇಲ್ಲಿ ಒಂದು ಕೆಜಿ ಉಪ್ಪಿಗೆ 150 ರೂಪಾಯಿ.. ಗೊತ್ತಾ ’ ಎಂದಳು ಆಶ್ನಾ.
`ಅಷ್ಟೆಲ್ಲ ದುಬಾರಿಯಾ..?’ ಎಂದೆ.
`ರಸ್ತೆ ಸಂಪರ್ಕ ಸಮರ್ಪಕವಾಗಿ ಇಲ್ಲದೇ ಇರುವುದು, ಸೇರಿ ಹಲವು ಕಾರಣದಿಂದ ಇಷ್ಟು ದುಬಾರಿ. ಇಲ್ಲಿರುವ ಅಂಗಡಿಗಳೂ ಕೆಲವೇ ಕೆಲವು ಮಾತ್ರ. ಅಂದಹಾಗೆ ಈ ಊರಿನಲ್ಲಿ 5ರಲ್ಲೊಬ್ಬರು ಅಸ್ಸಾಂ ರೈಫಲ್ಸ್ ಗೆ ಸೇರಿದ ನಿವೃತ್ತ ಸೈನಿಕರು. ಈ ಕಾರಣದಿಂದಲೇ ನಿವೃತ್ತ ಅಧಿಕಾರಿಗಳ ಸ್ವರ್ಗ ಎನ್ನುವ ಖ್ಯಾತಿ ಈ ಊರಿಗಿದೆ. ಈ ವಿಜೋಯ್ ನಗರಕ್ಕೆ ಸ್ಥಳೀಯವಾಗಿ ದೌಡಿ ಎಂದು ಕರೆಯುತ್ತಾರೆ…’ ಸಮಗ್ರವಾಗಿ ಮಾಹಿತಿ ನೀಡಿದ್ದಳು ಆಶ್ನಾ. ಆಕೆ ನೀಡುತ್ತಿದ್ದ ಮಾಹಿತಿಯಿಂದ ನಮಗೆ ಇನ್ನಷ್ಟು ಅಚ್ಚರಿಯಾಗಿತ್ತು.
`ಸರಿ ನಾವೀಗ ಎಷ್ಟು ದಿನಗಳ ಕಾಲ ನಡೆದರೆ ವಿಜೋಯ್ ನಗರ ಸಿಗುತ್ತದೆ?’ ಸಂಜಯ ಕುತೂಹಲದಿಂದ ಕೇಳಿದ್ದ.
`ವೇಗವಾಗಿ ನಡೆದರೆ ಮೂರು ದಿನ ಸಾಕು…’ ಎಂದವಳೇ.. `ಭಯವಾಯ್ತಾ..ತುಂಬ ದೂರ ಅನ್ನಿಸುತ್ತಿದೆಯಾ?’ ಎಂದಳು.
`ಇಲ್ಲ ಇಲ್ಲ.. ಹಾಗೇನಿಲ್ಲ. ಸುಮ್ಮನೆ ಕೇಳಿದೆ..’ ಎಂದ ಸಂಜಯ.
`ಅಂದರೆ ಕನಿಷ್ಟ ಎರಡು ರಾತ್ರಿಗಳನ್ನು ಕಾಡಿನಲ್ಲೇ ಕಳೆಯಬೇಕು ಅಲ್ಲವಾ..? ನಾನು ಕೇಳಿದೆ.
`ಹಾಗೇನಿಲ್ಲ, ನಡುವೆ ನಡುವೆ ಒಂದೆರಡು ಗ್ರಾಮಗಳಿವೆ. ಅಲ್ಲಿ ಚರ್ಚ್ ಗಳೂ ಇವೆ. ಅಲ್ಲೆಲ್ಲಾದರೂ ಉಳಿದುಕೊಳ್ಳಬಹುದು.. ‘ ಎಂದಳು ಆಶ್ನಾ.
ನಡೆದು ನಡೆದು ಸಂಜೆಯಾಗುವ ವೇಳೆಗೆ ಯಾವುದೋ ಒಂದು ಊರು ಸಿಕ್ಕಿತು. ಅದು ಊರೆಂದರೆ ಊರಲ್ಲ. ಇದ್ದುದು ಒಂದೋ ಎರಡೋ ಮನೆ. ಯಾವುದೋ ಬುಡಕಟ್ಟು ಜನಾಂಗದವರಿರಬೇಕು. ಆಶ್ನಾ ಯಾವುದೋ ಭಾಷೆಯಲ್ಲಿ ಮಾತನಾಡಿದಳು. ನಮಗೆ ರಾತ್ರಿಗೆ ಉಳಿಯಲು ಅವಕಾಶ ಸಿಕ್ಕಿತ್ತು. ಅದೇನೋ ಆಹಾರವನ್ನೂ ಅವರು ತಂದುಕೊಟ್ಟರು. ನಾವು ತಿಂದು ಮುಗಿಸಿದೆವು.
ರಾತ್ರಿಯನ್ನು ಅಲ್ಲೇ ಕಳೆದು ಮರುದಿನ ಮುಂಜಾನೆ ಮತ್ತೆ ನಮ್ಮ ಪಯಣ ಮುಂದುವರಿಸಿದೆವು. ಮತ್ತೊಂದು ರಾತ್ರಿಯನ್ನು ಮಾರ್ಗ ಮಧ್ಯದಲ್ಲಿ ಕಳೆದು ಮೂರನೇ ದಿನದ ವೇಳೆಗೆಲ್ಲ ವಿಜೋಯ್ ನಗರವನ್ನು ನಾವು ತಲುಪಿದಾಗ ನಿಸರ್ಗ ಮಡಿಲಿನ ಊರು ನಮ್ಮನ್ನು ಸ್ವಾಗತಿಸಿತ್ತು. ಭಾರತದಲ್ಲೇ ಮೊಟ್ಟಮೊದಲು ಸೂರ್ಯೋದಯವಾಗುವ ಹಳ್ಳಿಗೆ ನಾವು ಕಾಲಿರಿಸಿದ್ದೆವು.

(ಮುಂದುವರಿಯುವುದು…)

1 comment:

  1. ಕಥೆ ಲಾಯ್ಕಿದ್ದು ಜೊತೆಗೆ ಪ್ರವಾಸ ಕಥನದ ಹಾಂಗೆ ವಿವರಣೆ ಕೊಟ್ಟಿದ್ರಿಂದ ಊರನ್ನೂ ನೋಡ್ದಹಾಂಗ ಆತು
    👍

    ReplyDelete