Sunday, January 11, 2015

ರಾಜು ನಾಯಿಯ ನೆನಪು

           ನನಗೀಗಲೂ ನೆನಪಿದೆ. ನಾನು ಮನೆಯಲ್ಲಿ ಮೊಟ್ಟಮೊದಲು ಸಾಕಿದ್ದು ಒಂದು ನಾಯಿ. ಚಿಕ್ಕವನಿದ್ದಾಗ. ಅಂದರೆ ಪ್ರೈಮರಿ ವಯಸ್ಸು. 1 ರಿಂದ 4 ಕ್ಲಾಸಿನ ಒಳಗೆ. ಆ ನಾಯಿಗೆ ರಾಜೂ ಅಂತ ಹೆಸರಿಟ್ಟಿದ್ದೆ. ಸಾಮಾನ್ಯವಾಗಿ ನಾಯಿಗೆ ರಾಜೂ, ರಾಮೂ, ಟಿಪ್ಪು ಇತ್ಯಾದಿ ಹೆಸರು ಇಡುವುದು ಕಾಮನ್ನು. ಆ ದಿನಗಳಲ್ಲಿ ನಾನು ಚಿಕ್ಕವನಿದ್ದ ಕಾರಣ ಹೆಸರಿಗೆ ವಿಶೇಷ ಸರ್ಕಸ್ ಮಾಡಲಿಲ್ಲ. ರಾಜೂ ಎಂಬ ಸಾಮಾನ್ಯ ಹೆಸರನ್ನಿಟ್ಟಿದ್ದೆ.
(ಥೇಟ್ ಹಿಂಗೇ ಇತ್ತು ರಾಜು... )
               ಆ ರಾಜೂ ನಾಯಿಗೆ ನಾನೆಂದರೆ ಬಹಳ ಅಚ್ಚುಮೆಚ್ಚಾಗಿಬಿಟ್ಟಿತ್ತು ನೋಡಿ. ಪ್ರೈಮರಿ ಸಮಯದಲ್ಲಿ ಅತ್ಯಂತ ಹೆಚ್ಚಿನ ಕಿಲಾಡಿಯವನಾಗಿದ್ದ ನಾನು ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಮಾರ್ಕ್ಸುಗಳು ಅಷ್ಟಕ್ಕಷ್ಟೇ ಆಗಿತ್ತು. ನಾನು ಕಡಿಮೆ ಮಾರ್ಕು ತೆಗೆದುಕೊಂಡಾಗಲೆಲ್ಲ ಅಪ್ಪ-ಅಮ್ಮ ಜೋರಾಗಿ ಬೈದು, ಬಡಿದು ಮಾರ್ಕ್ಸ್ ವಾದಿ ಎನ್ನಿಸಿಕೊಳ್ಳುತ್ತಿದ್ದರು. ನಾನು ಬೆದರಿದ ಇಲಿಮರಿಯಂತೆ  ಸುಮ್ಮನಿದ್ದಾಗ ನನ್ನ ಪರ ವಹಿಸಿ ಧ್ವನಿ ಎತ್ತುತ್ತಿದ್ದವರೆಂದರೆ ಇಬ್ಬರೇ. ಒಬ್ಬರು ನನ್ನಜ್ಜ ಇಗ್ಗಜ್ಜ. ಇನ್ನೊಬ್ಬರು ರಾಜು ನಾಯಿ.
            ಅಜ್ಜ ನನ್ನನ್ನು ವಹಿಸಿಕೊಂಡು ಬರುವುದು ಸಾಮಾನ್ಯ ಸಂಗತಿ ಬಿಡಿ. ಆದರೆ ರಾಜು ನಾಯಿ.. ಮಜಾ ಅನ್ನಿಸಿದ್ದೇ ಆವಾಗ. ಬೀದಿ ಬದಿಯಲ್ಲೆಲ್ಲೋ ಬಿದ್ದುಕೊಂಡಿದ್ದ ನಾಯಿಯನ್ನು ಮನೆಗೆ ತಂದು, ಅವಿಭಕ್ತ ಕುಟುಂಬದ ನನ್ನ ಚಿಕ್ಕಪ್ಪಂದಿರ ವಿರೋಧದ ನಡುವೆಯೂ ಸಾಕಿದ ನನ್ನ ಮೇಲೆ ರಾಜುವಿಗೆ ಅದೇನೋ ವಿಶೇಷ ಪ್ರೀತಿ ಬೆಳೆದು ಬಿಟ್ಟಿತ್ತು. ಶಾಲೆಯಿಂದ ಸಂಜೆ ಮನೆಗೆ ಬಂದವನೇ ನಾನು ದೋಸೆಯನ್ನು ತಿನ್ನುವುದು ಪ್ರತಿಧಿನ ರೂಢಿ. ದೋಸೆಯನ್ನು ನಾನು ತಿನ್ನುವ ಮುನ್ನ ರಾಜುವಿಗೂ ಹಾಕಲೇಬೇಕು. ಇಲ್ಲವಾದರೆ ರಾಜುವಿನಿಂದ `ಅಯ್ಯೋ...' ಎನ್ನುವ ಊಳಾಟ ಗ್ಯಾರಂಟಿ. ನನ್ನನ್ನು ಯಾರಾದರೂ ಬಯ್ಯಲಿ, ಹೊಡೆಯಲು ಕೈಯೆತ್ತಿಕೊಂಡು ಬರಲಿ ಅಂತವರನ್ನು ಬೆನ್ನಟ್ಟಿ ಹೋಗುತ್ತಿತ್ತು ರಾಜು. ಅನೇಕರು ಇದನ್ನು ಪರೀಕ್ಷೆ ಮಾಡುವ ಸಲುವಾಗಿಯೇ ನನ್ನನ್ನು ಬೈದು, ಹೊಡೆದಿದ್ದೂ ಇದೆ ಎನ್ನಿ.
             ಭಾನುವಾರ ಬಂತೆಂದರೆ ನನಗೂ ರಾಜು ವಿಗೂ ಅದೇನೋ ಅಡಗರ. ಇಬ್ಬರೂ ಮನೆಯಿಂದ ಒಂದೋ ಒಂದೂವರೆಯೂ ಕಿ.ಮಿ ದೂರದಲ್ಲಿದ್ದ ಕುಚಗುಂಡಿ ಗದ್ದೆಯತ್ತ ಹೊರಟುಬಿಡುತ್ತಿದ್ದೆವು. ಅಲ್ಲೇ ಇರುವ ಕಾಕಾಲ ಗದ್ದೆಯಲ್ಲಿ ವಿಶಾಲವಾಗಿ ಹರಿಯುವ ಅಘನಾಶಿನಿ ನದಿಯನ್ನು ದಾಟಿ ನಾನು ಆಚೆ ದಡದಲ್ಲಿ ನಿಂತು `ರಾಜೂ ಕುರೂಯ್...' ಎಂದು ಕರೆದರೆ ಒಂದೆರಡು ಸಾರಿ ನೀರನ್ನು ಕಂಡು ಚಡಪಡಿಸುವ ರಾಜು ಏಕಾ ಏಕಿ ನೀರಿಗೆ ಧುಮುಕಿ ಲಬಕ್ ಲಬಕ್ ಎಂದು ಮುಳುಗುತ್ತ, ಯಡ್ರಾ ಬಡ್ರಾ ಈಸುತ್ತ ನಾನಿದ್ದ ದಡಕ್ಕೆ ಬಂದಾಗ ನನ್ನಲ್ಲಿ ನಗುವಿರುತ್ತಿತ್ತು. ಇತ್ಲಾ ದಡಕ್ಕೆ ಬಂದ ನಾಯಿ ನದಿ ದಾಟಿದ್ದ ಕಾರಣಕ್ಕೆ ತನ್ನ ವದ್ದೆಯಾದ ಮೈಯನ್ನು ಪಟ್ಟಾ ಪಟ್ಟಾ ಎಂದು ನನ್ನತ್ತ ಕುಡುವುತ್ತಿತ್ತು.. `ಹಚ್ಯಾ ಹೊಲಸು ಕುನ್ನಿ..' ಎಂದು ನಾನು ಬಯ್ಯುತ್ತಿದ್ದೆನಾದರೂ ಅಕ್ಕರೆಯ ಪ್ರಿತಿಗೆ ಎನ್ನುವುದು ಸುಳ್ಳಲ್ಲ ನೋಡಿ.
          ಒಂದು ಭಾನುವಾರ ನಾನು ರಾಜು ಜೊತೆಗೆ ಗದ್ದೆಗೆ ಹೋಗಿದ್ದೆ. ಯಾವಾಗಲೂ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಚಿಕ್ಕಪ್ಪಂದಿರಾದ ನಾಗೇಂದ್ರ ಹಾಗೂ ಮಹೇಶರು ಆವತ್ತು ಯಾವ ಕಾರಣಕ್ಕೋ ಅಲ್ಲಿರಲಿಲ್ಲ. ನಾನು ಹೋದವನಿಗೆ ಹೊತ್ತು ಹೋಗಬೇಕಲ್ಲ. ಮದ್ಯಾಹ್ನದ ಹೊತ್ತು ಬೇರೆ. ಮನೆಯಲ್ಲಿದ್ದರೆ ಊಟಕ್ಕೆ ಬಾ ಎಂಬ ಬುಲಾವೂ ಬರುತ್ತಿತ್ತು. ಹೋದವನು ಗದ್ದೆಯಲ್ಲೆಲ್ಲ ಸುತ್ತಾಡಿದೆ. ಅಲ್ಲೊಂದು ಕಡೆ ಗದ್ದೆಯ ಹಾಳಿಯ ಮೇಲೆ ನಾಲ್ಕೈದು ಬಿಳಿಯ ಮೊಟ್ಟೆಗಳು ಕಾಣಿಸಿತು. ಕುತೂಹಲದಿಂದ ನೋಡುತ್ತಿದ್ದಂತೆ ರಾಜು ಒಂದು ಮೊಟ್ಟೆಯನ್ನು ಕಚ್ಚಿಯೇ ಬಿಟ್ಟಿತು. ಪಾ...ಪ  ಆ ಮೊಟ್ಟೆಯಲ್ಲಿ ಇನ್ನೊಂದು ವಾರ ಕಳೆದಿದ್ರೆ ಹಕ್ಕಿಯಾಗಿ ಹಾರಿ ಹೊರ ಹೋಗಲು ಬಯಸಿದ್ದ ಬೆಳ್ಳಕ್ಕಿ ಮರಿಯೊಂದು ಜೀವ ತಳೆಯುತ್ತಿತ್ತು. ರಾಜು ಮೊಟ್ಟೆಯೊಡೆದದ್ದೇ ಒಡೆದದ್ದು ಒಂದೆರಡು ಸಾರಿ ವಿಲಿ ವಿಲಿ ಒದ್ದಾಡಿದ ಆ ಹಕ್ಕಿಯ ಜೀವ ಚಟ್ಟನೆ ಹಾರಿ ಹೋಯಿತು. ನಾನು ಸಿಟ್ಟಿನಿಂದ ರಾಜುವಿನ ಬೆನ್ನಿಗೆ ಗನಾಕಿ ಬಡಿದೆ. ಕಂಯ್ಕ್ ಎಂದು ಓಡಿದ ನಾಯಿ ಸುಮಾರು ಹೊತ್ತಿನ ವರೆಗೂ ನನ್ನಿಂದ ಸುರಕ್ಷಿತ ಅಂತರವನ್ನೇ ಕಾಪಾಡಿಕೊಂಡಿತ್ತು.
          ಹಕ್ಕಿಯ ಮೊಟ್ಟೆ ಒಡೆಯಿತಲ್ಲ ಛೇ,. ಎಂದುಕೊಂಡು ಮುಂದಕ್ಕೆ ಬರುತ್ತಿದ್ದಂತೆ ಅಲ್ಲೊಂದು ಕಡೆ ಕುಚಗುಂಡಿಯ ಒಬ್ಬಾತ ದನಗಳನ್ನು ಮೇಯಿಸುತ್ತಿದ್ದ. ಹೆಸರು ಸರಿಯಾಗಿ ನೆನಪಾಗುತ್ತಿಲ್ಲ. ಕುಚಗುಂಡಿಯ ಮಂಜ ಎನ್ನುವವನ ಮಗ ಎಂಬುದು ಅಸ್ಪಷ್ಟವಾಗಿ ನೆನಪಿದೆ. ಅವನ ಬಳಿ ಹೋದವನೇ ಅದೂ ಇದೂ ಮಾತಿಗೆ ನಿಂತೆ. ಆತ ಸುಮಾರು ಹೊತ್ತು ಹಲುಬಿದ. ಅಷ್ಟರಲ್ಲಿ ಅಲ್ಲೆಲ್ಲೋ ಅಡ್ಡಾಡಿದ ರಾಜು ಹತ್ತಿರ ಬಂದಿತು. ದನ ಮೇಯಿಸುತ್ತಿದ್ದವನ ಕಣ್ಣಿಗೆ ರಾಜು ಬಿದ್ದಿತು. ಅಲ್ಲಿ ಹುಲ್ಲು ಮೇಯುತ್ತಿದ್ದ ದನಗಳ ಕಣ್ಣಿಗೆ ರಾಜು ಬಿದ್ದ ಪರಿಣಾಮ ಒಂದೆರಡು ದನಗಳು ಬುಸ್ಸೆನ್ನುತ್ತ ರಾಜುವನ್ನು ಬೆನ್ನಟ್ಟಿ ಬಂದವು. ಅವುಗಳ ಭಯಕ್ಕೆ ಹೆದರಿ ನನ್ನ ಕಾಲ ಬುಡದಲ್ಲಿ ಬಂದು ಮಲಗಿತು ರಾಜು. ರಾಜುವನ್ನು ಕಂಡಾತ `ನಂಗೆ ಕೊಡ್ರಾ ಈ ಕುನ್ನಿಯಾ..' ಎಂದ ದನಕಾಯುವವ. ನಾನು ಆಗೋದಿಲ್ಲ ಎಂದೆ. ಮತ್ತೊಂದೆರಡು ಸಾರಿ ಕೇಳಿದ. ನಾನು ಮತ್ತೆ ನಕಾರಾತ್ಮಕ ಉತ್ತರ ನೀಡಿದೆ. ಆತ ಸುಮ್ಮನಾದ.
            ಅಲ್ಲೇ ಒಂದು ಮಾಳ ಇತ್ತು. ನಾನು ಸೀದಾ ಮಾಳ ಹತ್ತಿದೆ. ಕೆಳಗೆ ನಿಂತಿದ್ದ ರಾಜು ಮತ್ತೆ ಚಡಪಡಿಸಲಾರಂಭಿಸಿತು. ನನ್ನ ಹಾಗೂ ರಾಜುವನ್ನು ನೋಡುತ್ತಿದ್ದ ಆ ದನಕಾಯುವ ವ್ಯಕ್ತಿ, `ಹೋಯ್.. ಆ ನಾಯಿಯನ್ನು ಹೊತ್ಕಂಡು ಹೋಗ.. ಮಾಳದ ಮೇಲೆ ಹತ್ಸಾ...' ಎಂದ. ನಾನು ತುಂಟ ಎಂದು ಆಗಲೇ ಹೇಳಿದ್ದೆನಲ್ಲಾ.. ಆತ ಹೇಳಿದಂತೆ ಮಾಡಿದೆ. ಮಾಳದ ಮೇಲೆ ಹತ್ತಿಸಿದೆ. ಮೊದ ಮೊದಲು ಹೆದರಿದಂತೆ ಇದ್ದ ರಾಜು ಕೊನೆಗೆ ಮಾಳದಲ್ಲೇ ಕುಣಿಯಲಾರಂಭಿಸಿತು. ಸುಮಾರು ಹೊತ್ತು ಕಳೆದ ಮೇಲೆ ನನಗೆ ಹಸಿವಾಗಲಾರಂಭಿಸಿತು. ನಾನು ಸೀದಾ ಮಾಳದಿಂದ ಇಳಿದೆ. ಹಾಗೆ ಇಳಿಯುವವನು ರಾಜುವನ್ನು ಹಿಡಿದು ಇಳಿಯಲಾರಂಭಿಸಿದೆ. ಕೊನೆಗೆ ಅದೇ ದನಕಾಯುವವನು `ರಾಜುವನ್ನು ಅಲ್ಲೇ ಬಿಟ್ಟು ಇಳಿಯಾ.. ಎಂತಾ ಮಾಡ್ತೈತಿ ನೋಡ್ವಾ...' ಎಂಬ ಐಡೀರಿಯಾ ಕೊಟ್ಟ.
            ನನಗೆ ಸರಿಯೆನ್ನಿಸಿ ನಾಯಿಯನ್ನು ಮಾಳದ ಮೇಲೆಯೇ ಬಿಟ್ಟು ಕೆಳಕ್ಕಿಳಿದೆ. ಇಳಿದು ಮನೆಗೆ ಹೊರಟವನಂತೆ ನಟಿಸಿದೆ. ರಾಜು ಒಂದೆರಡು ಸಾರಿ ನೋಡಿತು. ಚಡಪಡಿಸಿತು. ಮಾಳವೆಂದರೆ ಸಾಮಾನ್ಯವಾಗಿ ನೆಲದಿಂದ 6-7 ಅಡಿ ಎತ್ತರದಲ್ಲಿರುತ್ತದೆ. ಚಡಪಡಿಸಿದ ನಾಯಿ ಸೀದಾ ಜಿಗಿದೇ ಬಿಟ್ಟಿತು. ಜಿಗಿದ ನಾಯಿ ಮತ್ತೆ ಮೇಲೇಳುವಾಗ ಕಂಯೋ ಕಂಯೋ ಎಂದು ಕೂಗುತ್ತಲೇ ಇತ್ತು. ನಾನು ಏನೋ ಭಾನಗಡಿ ಆಗಿದೆ ಎಂದು ಹೆದರಿದೆ. ನಾಯಿಯನ್ನು ಹೊತ್ತುಕೊಂಡು ಓಡಿದೆ. ಗದ್ದೆಯಲ್ಲಿಯೇ ಇದ್ದ ಮನೆಯಲ್ಲಿ ನಾಯಿಯನ್ನು ಬಿಟ್ಟವನೇ ಮನೆಯ ಕಡೆಗೆ ಕಾಲ್ಕಿತ್ತೆ.
           ವಾಸ್ತವದಲ್ಲಿ ಆಗಿದ್ದೇನೆಂದರೆ ಮಾಳದಿಂದ ಕೆಳಕ್ಕೆ ನಾಯಿ ಜಿಗಿದಿದ್ದೇನೋ ಖರೆ. ಮಾಳಕ್ಕೆ ಹತ್ತಲು ಬಿದಿರಿನಿಂದ ಏಣಿಯೊಂದನ್ನು ಮಾಡಿದ್ದರು. ಆ ಏಣಿಯಿಂದ ಚಿಕ್ಕ ಚೂಪಾದ ಚೂರೊಂದು ಮುಂದಕ್ಕೆ ಚಾಚಿಕೊಂಡಿತ್ತು. ನಾಯಿ ಜಿಗಿದಿದ್ದೇ ಈ ಚೂರಿಗೆ ತಾಗಿತು. ಕಾಲೆಜ್ಜೆ ಸಿಕ್ಕಿಬಿದ್ದು ತಲೆಕೆಳಗಾಗಿ ನಾಗಿ ಬಿದ್ದಿತ್ತು. ಆ ರಭಸಕ್ಕೆ ನಾಯಿಯ ಕಾಲೊಂದು ಮುರಿದು ಬಿಟ್ಟಿತ್ತು. ನಾನು ಗದ್ದೆಯಲ್ಲಿ ಬಿಟ್ಟವನೇ ಮನೆಗೆ ಓಡಿ ಮನೆಯಲ್ಲಿಯೇ ನಿಂತಿದ್ದು.
          ನಾನು ಉಸಿರು ಬಿಡುತ್ತ ಓಡಿ ಬಂದಿದ್ದನ್ನು ನೋಡಿದ ಮನೆಯವರಿಗೆ ನಾನೇನೋ ಭಾನಗಡಿ ಮಾಡಿರುವುದು ಪಕ್ಕಾ ಆಯಿತು. ಆದರೆ ಏನು ಭಾನಗಡಿ ಮಾಡಿದ್ದೇನೆ ಎನ್ನುವುದು ತಿಳಿಯಲಿಲ್ಲ. ಪೊಲೀಸ್ ಸ್ಟೇಷನ್ನುಗಳಲ್ಲಿ ನಡೆಯುವುದಕ್ಕಿಂತ ಹೆಚ್ಚಿಗೆ ತನಿಖೆ ನಡೆಯಿತು. ನಾನು ಏನನ್ನೂ ಬಾಯಿ ಬಿಡಲಿಲ್ಲ. ಆ ಸಮಯದಲ್ಲೇ ಮನೆಯವರ್ಯಾರೋ ರಾಜು ನಾಯಿ ಇಲ್ಲದ್ದನ್ನು ಗಮನಿಸಿದರು. ಅದಕ್ಕೆ ತಕ್ಕಂತೆ ಮತ್ಯಾರೋ ರಾಜು ನಾಯಿ ನನ್ನ ಜೊತೆಗೆ ಹೋಗಿದ್ದನ್ನೂ ಕಂಡಿದ್ದರು. ಅವರು ಹೇಳಿದ್ದೇನೆಂದರೆ ನಾನು ರಾಜುವಿಗೆ ಏನೋ ಮಾಡಿಬಿಟ್ಟಿದ್ದೇನೆ. ಹಾಗಾಗಿ ರಾಜು ಕಾಣಿಸುತ್ತಿಲ್ಲ ಎನ್ನುವುದು.
           ಆಗ ಶುರುವಾಯ್ತು ನೋಡಿ ಅಪ್ಪನ ಹೊಡೆತ... ಅಬಾಬಾಬಾ... ಕೊನೆಗೆ ನಾನು ಬಾಯಿಬಿಟ್ಟಿದ್ದೆ. ಆ ಮದ್ಯಾಹ್ನ ೂಟ ಮುಗಿಸಿ ಮದ್ಯಾಹ್ನದ ಗುಕ್ಕು ನಿದ್ದೆ ಮುಗಿಸಿ ಸಂಜೆ ಆಗಬೇಕು ಎನ್ನುವಷ್ಟರಲ್ಲಿ ಗದ್ದೆಯ ಕಡೆಗಿಂದ ನಿಧಾನವಾಗಿ ಕಾಲನ್ನು ಎಳೆಯುತ್ತ ಬರುತ್ತಿತ್ತು ನೋಡಿ ರಾಜು ಕುನ್ನಿ.. ಸಧ್ಯ ಏನೂ ಆಗಿಲ್ಲವಲ್ಲ ಎನ್ನುವ ನಿಟ್ಟುಸಿರು ನನ್ನಲ್ಲಿ. ಆದರೆ ಆ ಘಟನೆಯ ನಂತರ ರಾಜು ಮಾತ್ರ ನನ್ನ ಪರವಾಗಿ ನಿಲ್ಲುವುದನ್ನು ನಿಲ್ಲಿಸಿತ್ತು. ಯಾರಾದರೂ ನನಗೆ ಬೈಯಲಿ, ಹೊಡೆಯಲಿ ಅದು ಗುರ್ರೆಂದು ಅವರನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿಬಿಟ್ಟಿತ್ತು. ಪಾ..ಪ ಅದೇನೋ ಆಘಾತವಾಗಿತ್ತು ಅದಕ್ಕೆ.
            ಇಂತಹ ರಾಜು ನನ್ನನ್ನು ಶಾಲೆಗೆ ಕಳಿಸಿಕೊಡಲು ಬರುತ್ತಿತ್ತು. ನಮ್ಮೂರಿನಿಂದ ನಾನು ಹೋಗುತ್ತಿದ್ದ ಅಡ್ಕಳ್ಳಿ-ಕೋಡ್ಸಿಂಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2.5 ಕಿ.ಮಿ ದೂರವಾಗುತ್ತದೆ. ಎಷ್ಟೇ ವೇಗವಾಗಿ ನಡೆದರೂ 30 ನಿಮಿಷ ಬೇಕೇ ಬೇಕು. ನಾನು, ನನ್ನ ಜೊತೆಗೆ ಬಾಳಗಾರ್ ಗಪ್ಪತಿ, ಹಂಚಳ್ಳಿಯ ಶ್ರೀಪಾದ, ಶ್ರೀಪಾದನ ತಂಗಿ ನಾಗರತ್ನಾ, ಸಂತೋಷಣ್ಣ, ಮೇಲಿನಮನೆಯ ರಂಜು ಇಷ್ಟು ಜನ ಶಾಲೆಗೆ ಹೋಗುವವರು. ದಾರಿಯಲ್ಲಿ ದೊಡ್ಡದೊಂದು ಗುಡ್ಡ, ಗವ್ವೆನ್ನುವ ಕಾಡು, ಹೆಣ ಸುಡುವ ಸ್ಮಷಾನ ಇಷ್ಟ ಸಿಕ್ಕೇ ಸಿಗುತ್ತಿತ್ತು. ನಮ್ಮ ಧೈರ್ಯಕ್ಕೆ ರಾಜು ಬರುತ್ತಿದ್ದ. ರಾಜುವಿನ ಧೈರ್ಯಕ್ಕೆ ನಾವಿರುತ್ತಿದ್ದೆವು.
           ಶಾಲೆಗೆ ಹೊರಟ ನಮ್ಮ ಹಿಂದೋ, ಮುಂದೋ ಬಾಲ ಅಲ್ಲಾಡಿಸುತ್ತ ಬರುತ್ತಿದ್ದ ರಾಜುವನ್ನು ದಾರಿ ಮಧ್ಯ ಅನೇಕ ಸಾರಿ `ರಾಜು.. ಮನೆಗೆ ನಡಿಯಾ...' ಎಂದು ನಾನು ಬಯ್ಯುತ್ತಿದ್ದರೂ ಆತ ಜೊತೆಗೆ ಬರುತ್ತಿದ್ದ. ಮುಂದೋ, ಹಿಂದೋ ಎಸ್ಕಾರ್ಟ್ ಮಾಡುತ್ತಿದ್ದ. ಅಂತವನ ಬೆನ್ನ ಮೇಲೆ ಒಂದೆರಡು ಸಾರಿ ನಾನು ನನ್ನ ಪಾಟಿಚೀಲವನ್ನು ಹಾಕಿ ಕಟ್ಟಿ ಕಳಿಸಿದ್ದೂ ಇದೆ. ದಾರಿ ಮಧ್ಯದಲ್ಲಿ ಅವನ್ನು ಬೀಳಿಸಿ, ಬಾಲ ಅಲ್ಲಾಡಿಸುತ್ತಾ  ನಿಂತಿದ್ದ ರಾಜು ನನ್ನ ಕಣ್ಣೆದುರಿಗೆ ಇನ್ನೂ ಸ್ಪಷ್ಟವಾಗಿದೆ. ನಮ್ಮ ಜೊತೆಗೆ ಶಾಲೆಯ ಬಳಿ ಬರುವ ರಾಜು ಶಾಲೆಯ ಆಟದ ಬಯಲಿನಲ್ಲಿ ನಿಂತು ಎದುರು ಒಮ್ಮೆ ನೋಡುತ್ತಿದ್ದ. ಬಯಲಿನಲ್ಲಿ ಯಾವುದಾದರೂ ಬೇರೆಯ ನಾಯಿಗಳಿದ್ದರೆ ಸದ್ದಿಲ್ಲದೇ ಮನೆಗೆ ವಾಪಾಸಾಗುತ್ತಿದ್ದ ರಾಜು, ಯಾರೂ ಇಲ್ಲ ಎಂದಾದರೆ ಮೈದಾನದಲ್ಲೇ ಸುತ್ತಾಡುತ್ತಿದ್ದ. ನಾನು ಕಲ್ಲು ಹೊಡೆದು ಓಡಿಸಿದ ಮೇಲೆಯೇ ಮನೆಗೆ ವಾಪಾಸಾಗುತ್ತಿದ್ದ. ಅನೇಕ ಸಾರಿ ಈ ಮೈದಾನದಲ್ಲಿಯೇ ರಾಜು ಬೇರೆಯ ನಾಯಿಗಳೊಂದಿಗೆ ಜಿದ್ದಾ ಜಿದ್ದಿನ ಕಾಳಗ ಮಾಡಿದ್ದನ್ನು ನಾನು ನೋಡಿದ್ದೇನೆ. ಗಾಯ ಮಾಡಿಕೊಂಡು ಬರುತ್ತಿದ್ದ ನಾಯಿಗೆ ಬೂದಿಯನ್ನು ಹಚ್ಚಿ ಸಮಾಧಾನ ಪಡಿಸಿದ್ದೇನೆ.
             ರಾಜು ಇದ್ದ ಸಮಯದಲ್ಲಿಯೇ ಬೆಳ್ಳ ಎನ್ನುವ ಇನ್ನೊಂದು ನಾಯಿ ನಮ್ಮ ಮನೆಯಲ್ಲಿತ್ತು. ಎಲ್ಲಿಂದಲೋ ಬಂದು ನಮ್ಮನೆಯಲ್ಲಿ ಉಳಿದಿದ್ದ ನಾಯಿ ಅದು. ಚಿಕ್ಕಪ್ಪಂದಿರು ಈ ನಾಯಿಯನ್ನು ಅಕ್ಕರೆಯಿಂದ ಸಾಕಿದ್ದರು. ಬೆಳ್ಳ ಹಾಗೂ ರಾಜು ಅಣ್ಣ ತಮ್ಮಂದಿರಂತಿದ್ದರು. ನಮ್ಮ ಮನೆಯಲ್ಲಿಯೇ ಅವರು ಜಾಗವನ್ನೂ ಪಾಲು ಮಾಡಿಕೊಂಡಿದ್ದರು. ಬೆಳ್ಳ ಹೆಬ್ಬಾಗಿಲ ಬಳಿ ತನ್ನ ಕಾರ್ಯಸ್ಥಾನ ಮಾಡಿಕೊಂಡಿದ್ದರೆ ರಾಜು ಹಿತ್ಲಾಕಡಿಗೆ ಉಳಿದಿದ್ದ. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಅಡಿಕೆ ಬೇಯಿಸಲು ಹೆಬ್ಬಾಗಿಲ ಬಳಿ ಹಾಕುತ್ತಿದ್ದ ದೊಡ್ಡ ಒಲೆ ಬೆಳ್ಳನ ವಾಸಸ್ತಾನವಾಗಿದ್ದರೆ ಹಿತ್ಲಾಕಡಿಗೆ ಬಚ್ಚಲಮನೆಯ ಒಲೆ ರಾಜುವಿನ ಅಂತಪುರವಾಗಿತ್ತು. ಇಬ್ಬರಿಗೂ ಭಯಂಕರ ದೋಸ್ತಿಯಿದ್ದರೂ ದೋಸೆ ಹಾಕುವಾಗ ಅಥವಾ ಅನ್ನ ಹಾಕುವಾಗ ಮಾತ್ರ ಪಕ್ಕಾ ಶತ್ರುಗಳ ತರ. ಪರಸ್ಪರ ಹಲ್ಲು ತೋರಿಸುವುದು, ಗುರ್ರೆನ್ನುವುದು, ಕಾಲು ಕೆರೆಯುವುದು ನಡೆದೇ ಇತ್ತು. ಹೀಗೆ ಜಗಳ ಆರಂಭವಾದ ಸಂದರ್ಭದಲ್ಲಿ ಇವೆರಡರ ಪೈಕಿ ಸ್ವಲ್ಪ ಸಣ್ಣದಾಗಿದ್ದ ರಾಜುವೇ ಸೋಲೊಪ್ಪಿಕೊಳ್ಳುತ್ತಿತ್ತು ಬಿಡಿ. ಆಮೇಲೆ ನಾನು ಬೆಳ್ಳನನ್ನು ಸರಪಳಿಯಿಂದ ಕಟ್ಟಿಹಾಕಿದ ನಂತರ ರಾಜುವಿಗೆ ಪ್ರತ್ಯೇಕವಾಗಿ ಅನ್ನ ಹಾಕುತ್ತಿದ್ದೆ. ಅನ್ನ ಹಾಕಿದವನು ಅಲ್ಲೇ ನಿಂತಿದ್ದರೆ ರಾಜು ನನಗೂ ಗುರ್ರೆನ್ನುತ್ತಿತ್ತು. ಆಗ ಮಾತ್ರ ನಾಯಿಯ ಬೆನ್ನು ಮುರಿದು ಬಿಡಬೇಕು ಎನ್ನುವಷ್ಟು ಸಿಟ್ಟು ಬರುತ್ತಿತ್ತು.
             ನಾನು ರಾಜುವನ್ನು ಸಾಕಿರುವುದು ನನ್ನ ಚಿಕ್ಕಪ್ಪಂದಿರಿಗೆ ಇಷ್ಟವಿರಲಿಲ್ಲ. ಮೊದ ಮೊದಲು ಅದನ್ನು ಸಾಕಿದ್ದು ಇಷ್ಟ ಪಟ್ಟವರಂತೆ ನಟಿಸಿದ್ದರು. ಆದರೆ ಕೊನೆ ಕೊನೆಗೆ ಅವರು ಮಾತು ಮಾತಿಗೂ ಬಯ್ಯತೊಡಗಿದ್ದರು. ನಾನು ಚಿಕ್ಕವನಾಗಿದ್ದ ಕಾರಣ ನಾನೇನೇ ಹೇಳಿದರೂ ಅದಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪಯ್ಯ ಮನೆ ಯಜಮಾನನಾಗಿದ್ದ ಕಾರಣ ತಮ್ಮಂದಿರ ಬೇಜಾರನ್ನು ಶಮನ ಮಾಡುವ ಕಾಯಕದಲ್ಲಿ ನಿರತನಾಗುತ್ತಿದ್ದ. ಈಗಿನ ರಾಜಕಾರಣಿಗಳು ಹೇಗೆ ಅಲ್ಪ ಸಂಖ್ಯಾತರನ್ನು ಓಲೈಸುತ್ತಾರೋ ಹಾಗೆ.
           ನಾನು ಅಥವಾ ನನ್ನಮನೆಯಲ್ಲಿ ಏನೇ ಒಳ್ಳೆಯದನ್ನು ಸಾಕಿದರೂ, ವಸ್ತುಗಳನ್ನು ಸಾಕಿದರೂ ಅದನ್ನು ನನಗೆ ಕೊಡಿ ಎಂದು ಕೇಳುವವರು ಆಗಲೂ ಇದ್ದರು ಈಗಲೂ ಇದ್ದಾರೆ. ಹೀಗಿದ್ದಾಗ ಚಾರೆಕೋಣೆಯ ಒಬ್ಬರು ನಮ್ಮೂರಿಗೆ ಬಂದಿದ್ದರು. ನಮ್ಮ ಮನೆಯ ಪಕ್ಕದ ಮನೆಗೆ ಚಾರೇಕೋಣೆಯ ಸಂಬಂಧವೂ ಇದೆ ಎನ್ನಿ. ಬಂದವರೇ ಅವರ ಮನೆ ಕಾಯಲು ನಾಯಿಯೊಂದು ಬೇಕು. ರಾಜುವನ್ನು ಕೊಡುತ್ತೀರಾ ಎಂದು ಕೇಳಿದರು. ನಾನು ಇಲ್ಲ ಎಂದೆ. ಆದರೆ ಅಪ್ಪ ತಮ್ಮಂದಿರನ್ನು ಓಲೈಸುವ ಸಲುವಾಗಿ ರಾಜುವನ್ನು ಕೊಟ್ಟುಬಿಡಲು ನಿರ್ಧಾರ ಮಾಡಿದ್ದರು. ನಾನು ಶಾಲೆಗೆ ಹೋಗಿದ್ದ ಸುಸಂದರ್ಭವನ್ನೇ ನೋಡಿ ರಾಜುವನ್ನು ಕೊಟ್ಟು ಹಾಕಿದ್ದರು. ಮನೆಗೆ ಬಂದವನು ನಾನು ಆ ದಿನ ಮಾಡಿದ ರಂಪಾಟ ಅಷ್ಟಿಷ್ಟಲ್ಲ ಬಿಡಿ. ಆ ದಿನ ನನಗೆ ಮನೆಯಲ್ಲಿನ ಎಲ್ಲ ಸದಸ್ಯರೂ ಯಥಾನುಶಕ್ತಿ ಹೊಡೆದು ಬಿಟ್ಟಿದ್ದರು. ನಾನು ಸುಮ್ಮನಾಗಿರಲಿಲ್ಲ.
            ಅತ್ತ ಚಾರೆಕೋಣೆಗೆ ಹೋದ ರಾಜು ಸುಮ್ಮನಿರುತ್ತದೆಯೇ? ಅಲ್ಲಿ ತಾನೂ ಪ್ರತಿಭಟನೆ ಶುರುಮಾಡತೊಡಗಿತ್ತು. ಮೊದಲೆರಡು ದಿನ ಊಟ ಮಾಡಲಿಲ್ಲ. ಏನೋ ರೋಗ ಬಂದವರಂತೆ ನಟಿಸಿತು. ಕೊನೆಗೆ ಹಸಿವು ಸಿಕ್ಕಾಪಟ್ಟೆ ಹೆಚ್ಚಿದಾಗ ಹಾಲು ಕುಡಿದು ಅನ್ನ ಊಟ ಮಾಡಿತಂತೆ. ನಾಲ್ಕು ದಿನಕ್ಕೆಲ್ಲಾ ನಾಯಿ ಅವರ ಮನೆಯವರಂತೆ ಆಯಿತು. ನಾಯಿಗೆ ಹಳೆಯದೆಲ್ಲ ಮರೆತಿದೆ. ಇನ್ನು ತೊಂದರೆಯಿಲ್ಲ ಎಂದು ಕಟ್ಟಿದ್ದ ಸರಪಳಿ ಬಿಚ್ಚಿ ಬಿಟ್ಟರು. ಆಗ ನಾಯಿಯ ಅಸಲಿ ಬಣ್ಣ ಬಯಲಾಯಿತು ನೋಡಿ. ಸೀದಾ ಅಲ್ಲಿಂದ ಓಡಿದ ರಾಜು  ನಾಲ್ಕು ಸಾರಿ ಅಘನಾಶಿನಿ ನದಿಯನ್ನು ದಾಟಿ, ಒಂದು ಒಪ್ಪತ್ತಿನೊಳಗೆಲ್ಲ ನಮ್ಮ ಮನೆಗೆ ಹಾಜರಾಗಿಬಿಟ್ಟಿತ್ತು.
            ಧರಿದ್ರ ನಾಯಿ ಮತ್ತೆ ಬಂತಾ..? ಎಂದು ಚಿಕ್ಕಪ್ಪ ಬಯ್ಯುತ್ತಿದ್ದರೆ `ತಮಾ.. ನೋಡಾ... ನಾಯಿ ಬಂತಲಾ... ಉಂಚಳ್ಳಿ ಜಲಪಾತದ ಹತ್ತಿರದಿಂದ ನಡೆದುಕೊಂಡು ಬಂತಲಾ.. ಅದಕ್ಕೊಂದು ದೋಸೆ ಹಾಕಾ...' ಎಂದು ಅಮ್ಮ ಖುಷಿಯಿಂದ ಹೇಳಿದ್ದು ಇನ್ನೂ ನೆನಪಿನಲ್ಲಿದೆ. ಆ ದಿನದಿಂದ ಮತ್ತೆ ರಾಜು ಹಾಗೂ ನಾನೂ ಒಂದೇ ದೋಣಿಯ ಕಳ್ಳರಾಗಿಬಿಟ್ಟಿದ್ದೆವು.
             ಇದಾಗಿ ಆರೆಂಟು ತಿಂಗಳಾಗಿತ್ತು. ನಮ್ಮ ಮನೆಯಲ್ಲಿ ಕೊನೆಕೊಯ್ಲಿನ ಹಂಗಾಮು. ಮನೆಯಲ್ಲಿ ಕೊನೆ ಕೊಯ್ದಿದ್ದರು. ಸಿಕ್ಕಾಪಟ್ಟೆ ಚಳಿ ಬೇರೆ. ಜನವರಿಯೇನೋ. ಅಂಗಳದಲ್ಲಿ ಅಡಿಕೆ ಬೇಯಿಸಲು ಬೆಂಕಿ ಹಾಕಿದ್ದರು. ಆ ಬೆಂಕಿಯ ಮುಂದೆ ರಾಜು ಮಲಗಿದ್ದ. ಯಾವತ್ತೂ ಆ ಒಲೆಯ ಎದುರು ಮಲಗುತ್ತಿದ್ದ ಬೆಳ್ಳ ಆವತ್ತು ಮಾತ್ರ ಸದ್ದಿರದೇ ಮನೆಯ ಒಳಗೆ ಬಂದು ರಬ್ಬಿಕೊಂಡು ಮಲಗಿದ್ದ. ರಾತ್ರಿ ಯಾವುದೋ ಜಾಗದಲ್ಲಿ  ನಾಯಿ ದೊಡ್ಡದಾಗಿ ಕೂಗಿದ ಸದ್ದು. ಆ ನಂತರ ನಾಯಿ ಕಂಯೋ.. ಎಂದು ಕೂಗಿದ್ದೂ ಕೇಳಿಸಿತು. ತಕ್ಷಣ ಚಿಕ್ಕಪ್ಪಂದಿರು ದೊಡ್ಡ ಬಡಿಗೆಯನ್ನು ಹಿಡಿದು ಮನೆಯಿಂದ ಹೊರಕ್ಕೆ ಬಂದಿದ್ದರು. ಆದರೆ ಅಷ್ಟರಲ್ಲಿ ಗುರ್ಕೆ (ಹುಲಿಯ ಜಾತಿಗೆ ಸೇರಿದ್ದು, ಮರಿ ಚಿರತೆ ಎನ್ನಬಹುದು) ರಾಜುವನ್ನು ಕಚ್ಚಿ ಹೊಡಿದುಕೊಂಡು ಹೋಗಿತ್ತು.
         ಬೆಳಗ್ಗೆ ಎದ್ದ ನಾನು ರಾಜುಗಾಗಿ ಹುಡುಕಿದರೆ ಎಲ್ಲಿದೆ ನಾಯಿ? `ತಮಾ ಇಲ್ನೋಡು.. ರಾಜುವನ್ನು ಎಳೆದೊಯ್ದ ಗುರುತು.. ನೋಡು ನೆಲ ಹೆಂಗೆ ಉಗುರಿನಲ್ಲಿ ಗಟ್ಟಿಯಾಗಿ ಗೀರಿದ್ದು.. ಗುರ್ಕೆ ಹಿಡಿದಾಗ ತಪ್ಪಿಸಕ್ಕಂಬಲೆ ಭಾರಿ ಪ್ರಯತ್ನ ಮಾಡಿತ್ತು ಕಾಣ್ತು ನೋಡು..' ಎಂದರು ಅಮ್ಮ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬಂದ ಬೆಳ್ಳ ರಾಜುವನ್ನು ಗುರ್ಕೆ ಹಿಡಿದ ಜಾಗವನ್ನು ಮೂಸಿ ನೋಡಿದ. ಹೂಕ್ಷ್.. ಎಂದು ಒಮ್ಮೆ ಸೀನಿದ. ರಾತ್ರಿ ಗುರಕೆ ಬಂದಿರುವುದನ್ನು ಅರಿತ ಬೆಳ್ಳ ಮನೆಯೊಳಕ್ಕೆ ಹೊಕ್ಕಿದ್ದನೇನೋ. ರಾಜುವಿಗೆ ಅದು ಗೊತ್ತಾಗಿರಲಿಲ್ಲ. ಚಳಿ, ಒಳ್ಳೆ ಬೆಂಕಿ ಹಾಕಿದ್ದಾರೆ. ಬೆಳ್ಳನೂ ಇಲ್ಲ. ಆರಾಮಾಗಿ ಮಲಗೋಣ ಎಂದು ನಿದ್ರೆಗೆ ಜಾರಿದ್ದ ರಾಜು ಗುರ್ಕೆ ಬಾಯಿಗೆ ಬಲಿಯಾಗಿದ್ದ. ಬೆಳ್ಳ ಸೀನಿದ್ದು ಮಾತ್ರ ನನಗೆ ನಿಟ್ಟುಸಿರಿನ ಹಾಗೇ ಅನ್ನಿಸಿತು.
             ಈ ಘಟನೆ ಜರುಗಿ ಕನಿಷ್ಟ 20 ವರ್ಷಗಳೇ ಸರಿದಿವೆ. ಅದಾದ ಮೇಲೆ ಕನಿಷ್ಟ 10ಕ್ಕೂ ಹೆಚ್ಚು ನಾಯಿಗಳನ್ನೂ, 15ಕ್ಕೂ ಹೆಚ್ಚು ಬೆಕ್ಕುಗಳನ್ನೂ ನಾನು ತಂದು ಸಾಕಿದ್ದೇನೆ. ನಾಯಿಗಳಿಗೆ ನಿಖಿತಾ, ಬಿಂಬಿ, ಭೀಮಣ್ಣ ಖಂಡ್ರೆ ಹೀಗೆ ತರಹೇವಾರಿ ಹೆಸರುಗಳನ್ನೂ, ಸೋನು, ಮೋನು, ಸಾಂಬ, ರಂಗೀಲಾ ಈ ಮುಂತಾದ ಬೆಕ್ಕಿಗೂ ಇಟ್ಟು ಖುಷಿ ಪಟ್ಟಿದ್ದೇನೆ. ಆದರೆ ಮೊದಲು ಸಾಕಿದ ನಾಯಿ ರಾಜು ಮಾತ್ರ ಇನ್ನೂ ನೆನಪಿನಲ್ಲಿದೆ. ಪ್ರತಿ ಚಳಿಗಾಲದಲ್ಲಿ ರಾಜುವಿನ ನೆನಪು ಕಾಡುತ್ತಿರುತ್ತದೆ. ಎಷ್ಟೇ ನಾಯಿಗಳನ್ನು ತಂದರೂ ಮನದ ಮೂಲೆಯಲ್ಲಿದ್ದ ರಾಜು ಮತ್ತೊಮ್ಮೆ ಕಣ್ಣೆದುರು ಬಂದಂತಾಗುತ್ತದೆ. ರಾಜೂ ಕುರೂಯ್.. ಎಂದು ಕರೆಯೋಣ ಅನ್ನಿಸುತ್ತಿದೆ. ನಾಯಿಯೊಂದು ಅಚ್ಚಳಿಯದೇ ಉಳಿದಿದ್ದು ಹೀಗೆ.

Friday, January 9, 2015

ಅಘನಾಶಿನಿ ಕಣಿವೆಯಲ್ಲಿ-7

`ಹಲೋ... ಮಂಗಳೂರು ಮೇಲ್ ಪತ್ರಿಕೆನಾ..?'
`ಹೌದು.. ನೀವ್ಯಾರು? ಹೇಳಿ ಏನು ವಿಷಯ?'
`ನಾನು ವಿನಾಯಕ ಅಂತ.. ನಿಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವ ವಿಕ್ರಂ ಅವರ ಬಳಿ ಮಾತನಾಡಬೇಕಿತ್ತು..'
`ಒಂದ್ನಿಮಿಷ ಇರಿ.. ಹೇಳ್ತೀನಿ...'
ವಿಕ್ರಂ ಪೋನೆತ್ತಿಕೊಂಡ. `ಹಲೋ..' ಎಂದ. `ಏನಪ್ಪಾ...ದೊರೆ... ನೀನು ಮಂಗಳೂರಿಗೆ ಹೋಗಿ ನಮ್ಮನ್ನೆಲ್ಲ ಮರೆತೇಬಿಟ್ಯಾ?' ಎಂದ ವಿನಾಯಕ.
ಇದನ್ನು ಕೇಳಿದ್ದೇ ತಡ ವಿಕ್ರಂ ಅತ್ಯಾಶ್ಚರ್ಯದಿಂದ `ಅರೇ ವಿನಾಯ್ಕಾ.. ಎಂತದೋ ಮಾರಾಯಾ.. ಏನ್ ಶಾಕ್ ಕೊಟ್ಟು ಬಿಟ್ಯಾ? ಮತ್ತೆ..? ಎಲ್ಲಿಂದ ಮಾತಾಡ್ತಾ ಇದ್ದೆ? ಏನ್ ವಿಶೇಷ? ಹೇಂಗಿದ್ದೆ? ಮನೆಲ್ಲಿ ಎಲ್ಲಾ ಅರಾಮಿದ್ವಾ?' ಎಂದ ವಿಕ್ರಂ.
`ಎಲ್ಲಾ ಅರಾಮಿದ್ದ ಮಾರಾಯಾ.. ನೀನು ಹೆಂಗಿದ್ದೆ ಹೇಳು.. ಆನು ಯನ್ ಮೊಬೈಲಿಂದನೇ ಪೋನ್ ಮಾಡ್ತಾ ಇದ್ನಾ.. ನಿನ್ ಹತ್ರ ಮಾತಾಡನಾ ಹೇಳಿ ಸುಮಾರ್ ಟ್ರೈ ಮಾಡಿ.. ನಿಮ್ಮನಿಗೆ ಪೋನ್ ಮಾಡಿ ನಿನ್ ನಂಬರ್ ಇಸ್ಕಂಡು ಪೋನ್ ಮಾಡ್ತಾ ಇದ್ದಿ ನೋಡಿ.. ಏನೋ ದೊಡ್ ಮನ್ಷಾ.. ಪೇಪರ್ ಕೆಲಸಕ್ಕೆ ಸೇರಿದ್ದು ಎಲ್ಲಾ ಪೋನ್ ಮಾಡಿ ಹೇಳಲೆ ಆಕ್ತಿಲ್ಯನಾ..? ನಂಗವ್ವೇ ಪೋನ್ ಮಾಡಿ ಹೇಳವನಾ ನಿಂಗೆ..?' ಹುಸಿಮುನಿಸಿನಿಂದ ದಬಾಯಿಸಿದ ವಿನಾಯಕ.
`ಥೋ.. ಅದೆಂತಾ ಹೇಳವು ಮಾರಾಯಾ... ಏನೇನೋ ಆಗ್ತು.. ಲೈಫಲ್ಲಿ ಸಿಕ್ಕಾಪಟ್ಟೆ ತಿರುವು ಸಿಕ್ಕಿ ಈಗ ಪತ್ರಿಕೋದ್ಯಮಿಯೂ ಆಗ ಪ್ರಸಂಗ ಬಂತು ನೋಡು.. ಅದೆಲ್ಲಾ ನೀ ಎದುರಿಗೆ ಸಿಕ್ಕಾಗ ಹೇಳ್ತಿ.. ದೊಡ್ ಕಥೆ ಮಾರಾಯಾ...' ಎಂದ ವಿಕ್ರಂ
`ಅಡ್ಡಿಲ್ಯಾ.. ನಾನು ಹಿಂಗೆ ಸುಮ್ನೆ ಪೋನ್ ಮಾಡಿದ್ನಾ.. ನನ್ನ ಮೊಬೈಲ್ ನಂಬರ್ ಕೊಟ್ಟಾಂಗೂ ಆತು.. ನಿನ್ ಕೈಲಿ ಮಾತಾಡದಾಂಗೂ ಆತು.. ಸುಮಾರ್ ದಿನಾ ಆಗಿತ್ತಲಾ.. ಭಾವ ನೆಂಟ ಹೇಳದ್ನೇ ಮರೆತು ಹೋಗಿದ್ವನೋ ಅನ್ನೋವಷ್ಟ್ ಟೈಮಾಗಿತ್ತಲಾ...' ಎಂದ ವಿನಾಯಕ. `ಹುಂ' ಎಂದ ವಿಕ್ರಂ.. ಪೋನ್ ಇಡಲು ಹವಣಿಸುತ್ತಿದ್ದಂತೆ ವಿನಾಯಕನ ಮೊಬೈಲ್ ನಂಬರ್ ಬರೆದಿಟ್ಟುಕೊಂಡ. `ಹೇಯ್ ವಿನೂ.. ನಾನು ನಿನ್ ಹತ್ರ ಮಾತಾಡವಾ.. ಸಂಜೆ ಮಾತಾಡ್ತಿ.. ಬಹಳ ಇಂಟರೆಸ್ಟಿಂಗ್ ಆದ ಒಂದು ವಿಷ್ಯ ಇದ್ದು.. ಅದಕ್ಕೆ ನಿನ್ನ ಸಹಕಾರ, ಸಹಾಯ ಎಲ್ಲಾ ಬೇಕು.. ಸಂಜೆ ಮಾತಾಡ್ತಿ...' ಎಂದವನೇ ಪೋನ್ ಇಟ್ಟ.
ಅಚ್ಚರಿಯಲ್ಲಿಯೇ ವಿನಾಯಕನೂ ಪೋನ್ ಇಟ್ಟಿದ್ದ.

*****

           ವಿನಾಯಕ ವಿಕ್ರಮನ ಮಾವನ ಮಗ. ಒಂದೇ ವಾರಗೆಯವರು. ವಿನಾಯಕನ ಊರು ಶಿರಸಿ-ಸಿದ್ದಾಪುರ ಮಾರ್ಗ ಮದ್ಯದ ಕಾನಸೂರು ಬಳಿಯ ದಂಟಕಲ್ ಎಂಬ ಚಿಕ್ಕ ಹಳ್ಳಿ. ವಿಕ್ರಂ ಹಾಗೂ ವಿನಾಯಕ ಇಬ್ಬರಿಗೂ ಪರಸ್ಪರ ಅಜ್ಜನಮನೆ ಸಂಬಂಧ. ಅಂದರೆ ವಿನಾಯಕನ ತಂದೆಯ ತಂಗಿ ವಿಕ್ರಮನ ತಾಯಿ. ಅದೇ ರೀತಿ ವಿಕ್ರಮನ ತಂದೆಯ ತಂಗಿ ವಿನಾಯಕನ ತಾಯಿ. ಯಾವ ಸಾಲಿನಿಂದ ನೋಡಿದರೂ ಇಬ್ಬರಿಗೂ ಪರಸ್ಪರ ಅಜ್ಜನಮನೆ ನೆಂಟಸ್ತನ. ಬಾಲ್ಯದಿಂದ ಇಬ್ಬರೂ ಆಪ್ತರು.
            ಹೇಳಿದಂತೆಯೇ ಸಂಜೆಯ ವೇಳೆಗೆ ವಿಕ್ರಮ, ವಿನಾಯಕನಿಗೆ ಪೋನ್ ಮಾಡಿದ. ವಿಕ್ರಮನಿಂದ ಪೋನ್ ಬರುತ್ತದೆ ಎನ್ನುವ ಕಾರಣಕ್ಕಾಗಿ ಸಿಗ್ನಲ್ ಸಿಗದ ತನ್ನೂರಿನಿಂದ ಮೊಬೈಲ್ ಸಿಗ್ನಲ್ ಇರುವ ಸ್ಥಳಕ್ಕೆ ಬಂದು ಕಾಯುತ್ತಿದ್ದ ವಿನಾಯಕ. ಆರಂಭದಲ್ಲಿ ಉಭಯಕುಶಲೋಪರಿಯನ್ನೆಲ್ಲ ತಿಳಿಸಿದ ಮೇಲೆ ವಿಕ್ರಂ `ಶಿರಸಿಯಲ್ಲಿ ಸಧ್ಯದಲ್ಲಿ ಯಾವುದಾದರೂ ಕೊಲೆ, ದರೋಡೆ, ಹೊಡೆದಾಟ ಇತ್ಯಾದಿ ಏನಾದರೂ ಗಲಾಟೆ ನಡೆದಿತ್ತಾ?' ಎಂದ.
           `ಸಧ್ಯ ಇಲ್ಲ.. ಈಗೊಂದು ತಿಂಗಳ ಹಿಂದೆ ಜಾತ್ರೆ  ಟೈಮ್ನಲ್ಲಿ ಏನೇನೋ ನಡೆದಿತ್ತು.. ದರೋಡೆ ಆಗಿತ್ತು.. ಗಲಾಟೆನೂ ಸುಮಾರು ಆಗಿತ್ತು.. ಆಮೇಲೆ ಈಗೊಂದು 15 ದಿನದ ಹಿಂದೆ ಸ್ಮಗ್ಲಿಂಗ್ ವಿಚಾರದಲ್ಲಿ ಇಬ್ಬರು ಕಾಲೇಜು ಹುಡುಗರನ್ನು ಪೊಲೀಸರು ಅರೆಸ್ಟ್ ಮಾಡಿದ್ರು..' ಎಂದ ವಿನಾಯಕ.
           `ಹೌದಾ..? ಎಂತಾ ಸ್ಮಗ್ಲಿಂಗ್ ಅದು?'
           `ಹುಲಿಯುಗುರು ಸ್ಮಗ್ಲಿಂಗ್ ಮಾಡ್ತಾ ಇದ್ದಿದ್ದ.. ಕಾಲೇಜು ಹುಡುಗ್ರು.. ಗಂಧದ ತುಂಡೂ ಇತ್ತು.. ಪೊಲೀಸರು ಅರೆಸ್ಟ್ ಮಾಡಿದ್ದು ಗೊತ್ತಿತ್ತು.. ಒಂದೆರಡ್ ದಿನಾ ಭಯಂಕರ ಗಲಾಟೆ ಆಗಿತ್ತು.. ಆಮೇಲ ಇದ್ದಕ್ಕಿದ್ದಾಂಗೆ ತಂಡ್ ಆಜು.. ಇದ್ ಬಿಟ್ರೆ ಮತ್ತೆಂತದ್ದೂ ಆದಾಂಗಿಲ್ಲೆ ನೋಡು..' ಎಂದ ವಿನಾಯಕ
          `ಹೌದಾ... ಆಮೇಲೆ ಎಂತಾದ್ರೂ ಆಜಾ..?' ವಿಕ್ರಂ ಕೇಳಿದ
          `ಮತ್ತೆಂತದ್ದೂ ಇಲ್ಲೆ... ಎಲ್ಲಾ ಸರಿ.. ನೀ ಎಂತಕ್ಕೆ ಇದನ್ನೆಲ್ಲಾ ಕೇಳ್ತಾ ಇದ್ದೆ? ಶಿರಸಿಯಲ್ಲಿ ನಡೆದ ದರೋಡೆ, ಸ್ಮಗ್ಲಿಂಗ್ ಬಗ್ಗೆ ನಿಂಗೆಂತಕ್ಕೋ ಅಷ್ಟೆಲ್ಲ ಆಸಕ್ತಿ?' ಎಂದು ಪ್ರಶ್ನಿಸಿದ್ದ ವಿನಾಯಕ.
           `ಎಂತಕ್ಕೂ ಅಲ್ಲಾ ಮಾರಾಯಾ.. ನಮ್ ಆಪೀಸಿಗೆ ಒಂದು ಸುದ್ದಿ ಬಂದಿತ್ತು.. ಶಿರಸಿ ರಿಪೋರ್ಟರ್ರೋ ಅಥವಾ ಮತ್ಯಾರೋ ವರದಿ ಮಾಡಿದ್ದು.. ಅದು ನಿಜಾನೋ ಸುಳ್ಳೋ.. ಹೇಳಿ ಕನ್ಫರ್ಮ್ ಮಾಡ್ಕಂಬಲೆ ಕೇಳಿದ್ನಾ..' ಎಂಬ ಸುಳ್ಳನ್ನು ಹೇಳಿ ಪೋನ್ ಇಟ್ಟ. ವಿಕ್ರಮನಿಗೆ ಎಲ್ಲೋ ಏನೋ ಹೊಳೆದಂತಾಯಿತು. ತಾನು ಮಾಡುತ್ತಿದ್ದ ತನಿಖಾ ವರದಿಗೂ ವಿನಾಯಕ ಹೇಳಿದ್ದ ಅಂಶಕ್ಕೂ ಸಾಕಷ್ಟು ಸಂಬಂಧವಿದೆಯೇನೋ ಅನ್ನಿಸಿತು.
          ಹಾಗಾದರೆ ಶಿರಸಿಯೇ ಎಸ್ ಗುಂಪಿನ ಕಾರ್ಯಸ್ಥಾನವೇ? ತಾನು ಯಾವುದಕ್ಕೂ ಒಮ್ಮೆ ಶಿರಸಿಗೆ ಹೋಗಿಬರಬೇಕು ಎಂದು ಕೊಂಡ ವಿಕ್ರಮ. ಶಿರಸಿಯಲ್ಲಿ ಯಾರನ್ನು ಬಂಧಿಸಿದ್ದರೋ ಅವರನ್ನು ಮಾತನಾಡಿಸಿದರೆ ಏನಾದರೂ ಸಿಗಬಹುದು. ಅಂದರೆ ನಾನು ಶಿರಸಿಗೆ ಸಾಧ್ಯವಾದಷ್ಟು ಬೇಗನೆ ಹೋಗಲೇಬೇಕು ಎಂದುಕೊಂಡವನು ರೂಮಿನಲ್ಲಿದ್ದ ಟಿವಿಯನ್ನು ಹಾಕಿದ. ಟಿವಿಯಲ್ಲಿ ಶಿರಸಿಯಲ್ಲೊಂದು ಕೊಲೆಯಾಗಿದೆಯೆಂದೂ, ಕೊಲೆಯಾದ ವ್ಯಕ್ತಿ ಶಿರಸಿಯಲ್ಲಿ ಕೆಲ ದಿನಗಳ ಹಿಂದೆ ಸ್ಮಗ್ಲಿಂಗ್ ವ್ಯವಹಾರದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದನೆಂದೂ, ಕೊಲೆ ಮಾಡಿದವರು ತಲೆ ತಪ್ಪಿಸಿಕೊಂಡಿದ್ದಾರೆಂದೂ ತಿಳಿಯಿತು. ಆಗಲೇ ವಿಕ್ರಮನಿಗೆ ತನ್ನ ತನಿಖೆ ಒಂದು ಹಂತಕ್ಕೆ ಬಂತು ಎಂದುಕೊಳ್ಳುತ್ತಿದ್ದಂತೆ ಮತ್ತೆಲ್ಲೋ ಹಾದಿ ತಪ್ಪುತ್ತಿದೆ ಎಂದು ಅರ್ಥವಾಯಿತು. ಆದರೂ ಶಿರಸಿಗೆ ಹೋಗಿ ಪ್ರಯತ್ನಿಸುವುದು ಒಳಿತು ಎಂದುಕೊಂಡ. ಬದುಕಿರುವ ಇನ್ನೊಬ್ಬ ಕಾಲೇಜು ವಿದ್ಯಾರ್ಥಿಯನ್ನಾದರೂ ಮಾತನಾಡಿಸೋಣ ಎಂದುಕೊಂಡ.
              ಮರುದಿನವೇ ಆತ ನವೀನಚಂದ್ರರ ಛೇಂಬರಿಗೆ ಹೋದ. ನವೀನಚಂದ್ರರು ಆಗಲೇ ಅಲ್ಲಿ ಕುಳಿತಿದ್ದರು. ಒಳಬಂದ ವಿಕ್ರಮನನ್ನು ನೋಡಿ `ವಿಕ್ರಂ... ನಂಗ್ಯಾಕೋ ನೀವು ಈ ತನಿಖೆಯನ್ನು ಕೈ ಬಿಡುವುದೇ ಒಳ್ಳೆಯದು ಎನ್ಸುತ್ತೆ. ಇದರಿಂದ ಉಪಯೋಗ ಇಲ್ಲ. ಜೊತೆಗೆ ಅಪಾಯವೇ ಹೆಚ್ಚು. ಏನಂತೀಯಾ?' ಎಂದರು.
             `ಆದ್ರೆ ಸರ್.. ಈಗ ನಾನು ಒಂದು ಹಂತದೆಡೆಗಿನ ಹುಡುಕಾಟವನ್ನು ಮುಗಿಸಿದ್ದೇನೆ. ಇಲ್ಲಿ ಮುಖ್ಯ ಪಾತ್ರ ವಹಿಸುವುದು ಎಸ್ ಲಾಕೇಟಿನ ಒಂದು ಗುಂಪು. ಆ ಗುಂಪಿನ ಕಾರ್ಯಸ್ಥಳವೋ ಅಥವಾ ಪ್ರಮುಖ ಪ್ರದೇಶವೋ ಗೊತ್ತಿಲ್ಲ. ಅದು ಶಿರಸಿ ಎನ್ನುವುದು ತಿಳಿದಿದೆ. ಇಂತಹ ಸಮಯದಲ್ಲಿ ನನ್ನ ಹುಡುಕಾಟವನ್ನು ನಿಲ್ಲಿಸಲಾರೆ ಸರ್..' ಎಂದ ವಿಕ್ರಂ.
           `ಹಾಗಲ್ಲಪ್ಪಾ... ಈ ನಿನ್ನ ತನಿಖೆ ಬಹಳ ಡೇಂಜರ್ರು. ಇಲ್ಲಿ ಹಲವು ರೀತಿಯ ತೊಂದರೆ ಬರಬಹುದು. ಅದೂ ಅಲ್ದೆ ಆ ಗುಂಪು ಕೊಲ್ಲೋದಕ್ಕೂ ಹೇಸೋದಿಲ್ಲ ಎನ್ನುವುದು ಅರಿವಾಗಿದೆ. ಮಂಗಳೂರು ಹಾಗೂ ಶಿರಸಿಗಳಲ್ಲಿ ನಡೆದಿರೋ ಕೊಲೆಗಳೇ ಇದಕ್ಕೆ ಸಾಕ್ಷಿ. ಸುಮ್ನೆ ಅಪಾಯವನ್ನು ಮೈಮೇಲೆಳೆದುಕೊಳ್ಳುವಂತದ್ದು ಏನಿದೆ? ಅಂತಹ ಕೆಲಸವನ್ನು ನಾವ್ಯಾಕೆ ಮಾಡ್ಬೇಕು ಹೇಳಿ. ' ಎಂದರು ನವೀನಚಂದ್ರ.
           `ಸರ್.. ನಾನು ಮೊದಲು ಇಲ್ಲಿ ಸೇರೋವಾಗ ನಿಮಗೆ ಹೇಳಿದ್ದೆ. ಅದರ ಜೊತೆಗೆ ನಾನು ಮಾಡ್ತಿರೋ ವೃತ್ತಿಯೇ ಅಂತದ್ದಾಗಿದೆ. ಹರಿತವಾದ ಕತ್ತಿಯ ಮೇಲೆ ನಡೆದುಕೊಂಡು ಓಡಾಡುವಂತದ್ದು. ಅದರಲ್ಲಿ ತಿರುಗಿ ಬರುವ ಪ್ರಶ್ನೆಯೇ ಇಲ್ಲ ಸಾರ್.. ನೀವ್ ಹೆದರಬೇಡಿ... ಎಂತದ್ದೇ ಸಮಸ್ಯೆ ಬಂದರೂ ನಾನು ಹಿಂದಕ್ಕೆ ತಿರುಗೋದಿಲ್ಲ..'
           `ಆದ್ರೂ... ಒಂದ್ ಸಾರಿ ಆಲೋಚನೆ ಮಾಡಿ..'
           `ಇಲ್ಲ ಸಾರ್.. ನಾನು ಈ ಹುಡುಕಾಟ ನಿಲ್ಲಿಸೋದಿಲ್ಲ. ಏನೇ ಕಷ್ಟ ಬಂದರೂ.. ಸಾವೇ ಎದುರಿಗೆ ಬಂದರೂ ಅದನ್ನು ಎದುರಿಸಿ ನಿಲ್ಲುತ್ತೇನೆ...'
(ಮಲೆನಾಡಿನಲ್ಲಿ ಮಂಜಿನ ಮುಂಜಾವು)
           `ಹಹ್ಹಹ್ಹ..! ವೆಲ್ ಡನ್..ಗುಡ್ ವಿಕ್ರಂ. ನಾನು ಮಾಡಿದ ಪರೀಕ್ಷೆಯಲ್ಲಿ ನೀನು ಗೆಲುವು ಸಾಧಿಸಿದೆ. ನಾನು ನಿನ್ನನ್ನು ಪರೀಕ್ಷೆ ಮಾಡಲಿಕ್ಕಾಗಿ ಕೇಳಿದ್ದೆ. ಆದರೆ ನೀನು ಅದಕ್ಕೆ ಹೆದರಲಲ್ಲಿಲ್ಲ ನೋಡು. ಕೇಸಿನ ಬಗ್ಗೆ ನಿನ್ನ ನಿಷ್ಟೆ ಯಾವ ರೀತಿ ಇರಬಹುದು ಎಂದುಕೊಂಡೆ. ಪರವಾಗಿಲ್ಲ.. ಒಳ್ಳೆ ಕೆಲಸ ಹಾಕ್ಕೊಂಡಿದ್ದೀಯಾ.. ಗುಡ್..' ಎಂದರು ನವೀನಚಂದ್ರ.
          `ಓಹ್... ನಾನು ಇದೇನಿದು ಅಂದ್ಕೊಂಡೆ.. ಯಾಕೆ ಹೀಗೆ ಅವರು ಹೇಳ್ತಾ ಇದ್ದಾರೆ ಎಂದೂ ಆಲೋಚನೆ ಮಾಡಿದ್ದೆ ನೋಡಿ..'
         `ನೋಡು.. ಒಂದು ಮುಖ್ಯ ಸುದ್ದಿ ಹೇಳ್ಬೇಕು. ನಿಮ್ಮೂರು ಇರೋದು ಉತ್ತರ ಕನ್ನಡದಲ್ಲಿ ಅಲ್ವಾ? ಅಲ್ಲಿಯೇ ಈ ಗುಂಪಿನ ಕಾರ್ಯಸ್ಥಾನ ಇರೋದು ಅಂತ ಹೇಳಿದ್ರಿ ನೀವು. ನೀವ್ಯಾಕೆ ಅಲ್ಲಿಗೆ ಹೋಗಿ ನಿಮ್ಮ ತನಿಖೆ ಮುಂದುವರಿಸಬಾರದು? ಈ ಕುರಿತು ಒಂದೆರಡು ದಿನ ತಡವಾದರೂ ತೊಂದರೆಯಿಲ್ಲ. ಆದರೆ ನಿಜವಾದ ಆರೋಪಿ, ಈ ಎಲ್ಲದ್ದಕ್ಕೂ ಕಾರಣವಾಗಿರುವ ತಂಡ ಸಿಕ್ಕಿಬಿಟ್ಟರೆ ಅಷ್ಟೇ ಸಾಕು. ನಿನಗೆ ಎಷ್ಟು ದಿನದ ರಜೆ ಬೇಕಾದರೂ, ಜೊತೆಗೆ ಯಾವುದೇ ರೀತಿಯ ಸಹಾಯ ಬೇಕಾದರೂ ನನ್ನಿಂದ ಹಾಗೂ ನಮ್ಮ ಆಫೀಸಿನಿಂದ  ಸಿಗುತ್ತದೆ...' ಎಂದರು ನವೀನಚಂದ್ರ.
           `ನಾನೂ ಅದನ್ನೇ ತಿಳಿಸೋಕೆ ಬಂದೆ ಸಾರ್.. ನಾನು ಇವತ್ತು ಸಂಜೆ ಊರಿಗೆ ಹೊರಡೋಣ ಎಂದುಕೊಂಡಿದ್ದೇನೆ. ನಿಮ್ಮ ಸಹಾಯಕ್ಕೆ ಥ್ಯಾಂಕ್ಸ್. ಸರ್.. ನನಗೆ ಕನಿಷ್ಟ 2 ವಾರದ ರಜೆ ಬೇಕು. ನಾನು ಅಲ್ಲಿನ ಹುಡುಕಾಟಾನ ಕಾಲಕಾಲಕ್ಕೆ ತಕ್ಕಂತೆ ನಡೆಯುವ ವಿದ್ಯಮಾನಗಳನ್ನು ವರದಿ ಮಾಡ್ತೀನಿ ಸರ್. ಆದರೆ ನನ್ನ ತನಿಖೆ ಪೂರ್ತಿ ಆಗುವ ವರೆಗೂ ಆ ವರದಿ ಪತ್ರಿಕೆಯಲ್ಲಿ ಬರಬಾರದು..' ಎಂದ ವಿಕ್ರಮ.
           ಸರಿ. ಆದ್ರೆ ಒಂದು ಮುಖ್ಯವಾದ ವಿಷಯ. ನೀನು ಅಲ್ಲಿಗೆ ಹೋದಾಗ ಪೇಪರ್ರಿನವನು ಅಂತ ಹೇಳಬೇಡ. ಯಾವುದಾದರೂ ರಿಸರ್ಚ್ ಕೆಲಸಕ್ಕೆ ಬಂದಿದ್ದೇನೆ ಎಂದು ಹೇಳಿ. ಜೊತೆಗೆ ನನ್ನ ಕಾರನ್ನೂ ತೆಗೆದುಕೊಂಡು ಹೋಗು. ಸಹಾಯಕ್ಕೆ ಬರುತ್ತೆ. ' ಎಂದು ಹೇಳಿದರು. ಇದಾದ ನಂತರವೂ ಹಲವು ವಿಷಯಗಳು ವಿನಿಮಯವಾದವು. ನಂತರ ವಿಕ್ರಂ ತನ್ನ ರೂಮಿಗೆ ಮರಳಿದ.

************7**************

              ಸರಿ. ಹೊರಡುವ ವಿಷಯವನ್ನು ವಿಜೇತಾಳಿಗೆ ತಿಳಿಸಿದ. ವಿಷಯವನ್ನು ಕೇಳಿದವಳೇ ತಾನೂ ಬರುವುದಾಗಿ ಹಟ ಹಿಡಿದಳು. ಕೊನೆಗೆ ನವೀನಚಂದ್ರನ ಒಪ್ಪಿಗೆ ಮೇರೆಗೆ  ಆಕೆಯೂ ಹೊರಟಳು. ವಿಕ್ರಂ ಹಾಗೂ ವಿಜೇತಾ ತಮ್ಮೆಲ್ಲ ಲಗೇಜುಗಳನ್ನು ಕಾರಿನಲ್ಲಿ ತುಂಬಿ ಹೊರಡಲು ಅನುವಾಗುತ್ತಿದ್ದಂತೆ ಪ್ರದೀಪ ಪ್ರತ್ಯಕ್ಷನಾದ. ಅದ್ಯಾರು ಹೇಳಿದ್ದರೋ, ಹೇಗೆ ಗೊತ್ತಾಯಿತೋ.. ಪ್ರದೀಪ ತನ್ನೆಲ್ಲಾ ಲಗೇಜುಗಳ ಸಮೇತ ತಯಾರಾಗಿ ಬಂದಿದ್ದ. ತಾನೂ ವಿಕ್ರಮನ ಜೊತೆಗೆ ಬರುತ್ತೇನೆ ಎಂದು ಹೇಳಿದವನೇ ವಿಕ್ರಮನ ಮಾತಿಗೂ ಕಾಯದೇ ಕಾರನ್ನೇರಿಬಿಟ್ಟ. ವಿಕ್ರಮ ಬೇಡ ಬೇ ಎನ್ನುತ್ತಿದ್ದರೂ ಅದನ್ನು ಪ್ರದೀಪ ಕೇಳದಂತಿದ್ದ. ವಿಧಿಯಿಲ್ಲದೇ ವಿಕ್ರಮ ಗಾಡಿ ಚಾಲೂ ಮಾಡಿದ.! ಕತೆ ಇಲ್ಲಿಂದ ಸಂಪೂರ್ಣ ಬದಲಾವಣೆಯ ಮಾರ್ಗ ಹಿಡಿದಿತ್ತು. ಮಲೆನಾಡು ಕರೆದಿತ್ತು.
             ಎಷ್ಟು ಬೇಡವೆಂದರೂ ನವೀನಚಂದ್ರರು ತಮ್ಮ ಕಾರನ್ನು ವಿಕ್ರಮನಿಗಾಗಿ ನೀಡಿದ್ದರು. ಅಂತೂ ರಾತ್ರಿಯ ಹೊತ್ತಿಗೆ ವಿಕ್ರಮ, ವಿಜೇತಾ ಹಾಗೂ ಪ್ರದೀಪ ನಿಘೂಡಗಳ ತವರು ಉತ್ತರ ಕನ್ನಡದ ಕಡೆಗೆ ಹೊರಟರು. ವಿಕ್ರಮನಿಗೆ ಮತ್ತೆ ತನ್ನ ಮನೆಗೆ ಮರಳುವ ತವಕ. ಹಿಡಿದ ಕೆಲಸವನ್ನು ಬೇಗನೇ ಮುಗಿಸುವ ತುಡಿತ ಇದ್ದರೆ ಅರಿಯದ ಸುಂದರ ಜಿಲ್ಲೆಯ ಕಡೆಗೆ ಸಾಗುತ್ತಿರುವ ಬಗ್ಗೆ ವಿಜೇತಾ ಹಾಗೂ ಪ್ರದೀಪರಲ್ಲಿ ಕುತೂಹಲವಿತ್ತು. ಇಲ್ಲಿ ವಿಕ್ರಮನ ಮನಸ್ಸು ಪ್ರದೀಪನೆಡೆಗೆ ಮಾತ್ರ ಚಿಕ್ಕದೊಂದು ಅನುಮಾನದ ಎಳೆಯನ್ನು ಹರಿಯಬಿಟ್ಟಿತ್ತು. ಆದರೂ ಪ್ರದೀಪನ ಜೊತೆಗೆ ಮೊದಲಿನಂತೆ ವರ್ತನೆ ಮಾಡುತ್ತಿದ್ದ.
              ವೇಗವಾಗಿ ಚಲಿಸುತ್ತಿದ್ದ ಕಾರಿಗಿಂತ, ಕಾರಿನಲ್ಲಿ ಕುಳಿತಿದ್ದ ಮೂವರ ಮನಸ್ಸುಗಳು ಮತ್ತಷ್ಟು ವೇಗವಾಗಿ ಎತ್ತೆತ್ತಲೋ ಓಡುತ್ತಿದ್ದವು. ವಿಕ್ರಮ ಮತ್ತೆ ಮತ್ತೆ ತನ್ನ ಹುಡುಕಾಟದ ಬಗ್ಗೆ ಆಲೋಚಿಸುತ್ತಿದ್ದರೆ, ವಿಜೇತಾ ತಾನು ಇಲ್ಲಿಗೆ ಹೊರಡಲು ಮನೆಯಲ್ಲಿ ಒಪ್ಪಿಗೆ ಕೇಳಿದಾಗ ಮನೆಯವರು ಏನೋ ಹೇಳಲು ಹೊರಟವರು ಹಾಗೇ ತಡೆದು ಒಪ್ಪಿಗೆ ನೀಡಿದ ತಂದೆ ತಾಯಿಯರ ನಡೆಯ ಬಗ್ಗೆ ಆಲೋಚಿಸುತ್ತಿದ್ದಳು.
           ಪ್ರದೀಪ ಮಾತ್ರ ಆಗಾಗ `ಭೀಗಿ ಭೀಗಿ ರಾತೋ ಮೆ....' ಅಂತಲೋ.. `ಯಾರು ಯಾರು ನೀ ಯಾರು..?' ಅಂತಲೋ ಸಂಬಂಧವೇ ಇಲ್ಲದ ಯಾವು ಯಾವುದೋ ಹಾಡುಗಳನ್ನು ಹಾಡುತ್ತಿದ್ದ. ಜೊತೆಗೆ ತನ್ನ ಕುಟುಂಬದ ಬಗ್ಗೆ ಆಲೋಚನೆ ಮಾಡುತ್ತಿದ್ದ. ಈ ಮೂವರ ನಡುವೆ ಕಾರಿನಲ್ಲಿದ್ದ ಟೇಪ್ ರೆಕಾರ್ಡರ್ ಮಾತ್ರ ಮುಖೇಶನ ಹಾಡುಗಳನ್ನು ಒಂದರ ಹಿಂದೊಂದರಂತೆ ಹಾಡುತ್ತಿದ್ದವು. ಈ ಎಲ್ಲ ಕಾರಣಗಳಿಂದ ಕಾರಿನಲ್ಲಿ ಮೌನ ಇರಲಿಲ್ಲ. ಮಂದ್ರ ದನಿಯಲ್ಲಿ ಹಾಡು ಕೇಳಿಸುತ್ತ ಮನಸ್ಸು ತಣ್ಣಗೆ ಹರಿಯತೊಡಗಿತ್ತು.
            ಅಜಮಾಸು 300 ಕಿ.ಮಿ ಸಾಗಿದ ನಂತರ ಅಂಕೋಲಾ ಸಿಕ್ಕಿತು. ಅಲ್ಲೊಂದು ಕಡೆ ಕಾರನ್ನು ನಿಲ್ಲಿಸಿದ ವಿಕ್ರಮ. ಅಲ್ಲಿ  ಚಹಾ ಕುಡಿದು ಮುಖಕ್ಕೆ ನೀರನ್ನು ರಪ್ಪನೆ ಚಿಮುಕಿಸಿ, ಆಗೀಗ ಸುಳಿದು ಬರುತ್ತಿದ್ದ ನಿದ್ದೆಗೆ ಗುಡ್ ಬೈ ಹೇಳಿದ ವಿಕ್ರಮ. ವಿಜೇತಾ ಆಗೀಗ ವಿಕ್ರಮನ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದಳು. ಅದಕ್ಕೆಲ್ಲ ದೀರ್ಘವಾಗಿ ಉತ್ತರಿಸುತ್ತಿದ್ದ. ಆಗಾಗ ಪ್ರದೀಪನ ಹಾಸ್ಯ ರಸಾಯನದ ತುಣುಕುಗಳೂ ಚೆಲ್ಲುತ್ತಿದ್ದವು. ಬಾಳೆಗುಳಿ ಕ್ರಾಸಿನಲ್ಲಿ ಬಲಕ್ಕೆ ತಿರುಗಿಸಿ ಕಾರನ್ನು ಹುಬ್ಬಳ್ಳಿ ರಸ್ತೆಯ ಕಡೆಗೆ ಚಾಲನೆ ಮಾಡಿದರು. ಮಧ್ಯರಾತ್ರಿಯ ಸಮಯ ಮೀರಿ ಬೆಳಗಿನ ಮುಂಜಾವು ದೂರದ ಭೀಮನವಾರೆ ಗುಡ್ಡದಲ್ಲಿ ಇಣುಕಲು ಪ್ರಯತ್ನಿಸುತ್ತಿತ್ತು. ಅಲ್ಲೆಲ್ಲೋ ಆಗಾಗ ಸಿಗುತ್ತಿದ್ದ ಲೈಟುಗಳು., ಎದುರಿನಿಂದ  ಬರುತ್ತಿದ್ದ ವಾಹನಗಳ ಭರ್ರೆನ್ನುವ ಸದ್ದು, ಕಾಡಿನ ನಡುವಣ ಒಂಟಿ ಪಯಣ.. ಏನೋ ಒಂಥರಾ ಎನ್ನಿಸಿತು. ಸ್ವಲ್ಪ ಸಮಯದಲ್ಲಿ ಅರಬೈಲ್ ಘಟ್ಟದ ಅಂಕುಡೊಂಕು ಸಿಕ್ಕಿತು. ವೇಗವಾಗಿ ಹತ್ತಿ ಯಲ್ಲಾಪುರವನ್ನು ತಲುಪುವ ವೇಳಗೆ ಸೂರ್ಯ ಬಾನಂಚಿನಲ್ಲಿ ಮತ್ತಷ್ಟು ಏರಿ ಬಂದಿದ್ದ.
          ಮುಂಜಾನೆಯ ಚುಮು ಚುಮು ಬೆಳಕಿನಲೆಯ ಆಗಮನದ ಜೊತೆ ಜೊತೆಯಲ್ಲಿಯೇ ಕಾರು ಒಂದೆರಡು ರಸ್ತೆಯನ್ನು ಹಾದು, ಕೊನೆಗೊಂದು ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸಾಗಿತು. ಮೊದಲ ಸೂರ್ಯನ ಕಿರಣ ಧರೆಯನ್ನು ಮುತ್ತಿಕ್ಕುವ ವೇಳೆಗೆ ಮನೆಯೊಂದರ ಅಂಗಳದಲ್ಲಿ ಕಾರು ಬಂದು ನಿಂತಿತು.  ಆಗಲೇ ವಿಜೇತಾ ಹಾಗೂ ಪ್ರದೀಪರು ನಿದ್ರೆಗೆ ಜಾರಿದ್ದರು. ಮನೆಯಂಗಳದಲ್ಲಾಗಲೇ ಸುಂದರ ರಂಗೋಲಿ ಮಿನುಗುತ್ತಿತ್ತು. ವಿಕ್ರಮ ಒಮ್ಮೆ ಕಾರಿನ ಹಾರನ್ ಮಾಡಿದ. ಮನೆಯೊಳಗಿನಿಂದ ಹೊರ ಬಂದ ಒಬ್ಬಾಕೆ ಯಾರು ಬಂದಿರಬಹುದು ಬೆಳ್ಳಂಬೆಳಿಗ್ಗೆ ಎಂದು ಕುತೂಹಲ, ಗಾಭರಿಯಿಂದ ನೋಡಲು ಆರಂಭಿಸಿದಳು.

(ಮುಂದುವರಿಯುತ್ತದೆ) 

Thursday, January 8, 2015

ಖಾಲಿಯಿದೆ ಬಾಳಪುಟ

ಖಾಲಿಯಿದೆ ಬಾಳಪುಟ
ಯಾರ ಚಿತ್ರವೂ ಇಲ್ಲ
ಪ್ರೀತಿಯನು ಬಯಸುತಿದೆ
ಜೊತೆಗೆ ಯಾರೂ ಇಲ್ಲ |

ಬೆರೆತಿದೆ ನೂರು ನೋವು
ಜೊತೆಗೆ ಕಷ್ಟದ ಸೊಲ್ಲು
ಒಂಟಿತನ ಓಡಿಸಲು
ಜೊತೆಯ ಬಯಸಿದೆಯಲ್ಲ |

ಎದೆಯ ಗುಂಡಿಗೆಯೊಳಗೆ
ಯಾರ ರೇಖೆಯೂ ಇಲ್ಲ
ಮನದ ಒಬ್ಬಂಟಿತನ
ಕಳೆಯಬಯಸಿದೆಯಲ್ಲ |

ಎದುರಲಿದೆ ಕಲ್ಪನೆಯು
ಮನದ ಬದಲಾವಣೆಯು
ನೂರು ಬಯಕೆಯ ಸುತ್ತ
ಮನವು ಸುತ್ತಿದೆಯಲ್ಲ |

ಖಾಲಿಯಿದೆ ಬಾಳಪುಟ
ಪ್ರಿತಿ ದೊರೆಯುವ ವರೆಗೆ
ಮುತ್ತಿಕೊಂಡಿದೆ ಮುಸುಕು
ತೆರೆಯ ಸರಿಯುವ ವರೆಗೆ |

***
(ಈ ಕವಿತೆಯನ್ನು ಬರೆದಿರುವುದು 16-10-2006ರಂದು ದಂಟಕಲ್ಲಿನಲ್ಲಿ)

Sunday, January 4, 2015

ಅಘನಾಶಿನಿ ಕಣಿವೆಯಲ್ಲಿ-6

           ನಂತರ ಅವರು ಇನ್ನೇನು ವಾಪಾಸು ಹೊರಡಬೇಕು ಎನ್ನುವಷ್ಟರಲ್ಲಿ ವಿಕ್ರಮನಿಗೆ ಪ್ರದೀಪ ಬರುತ್ತಿರುವುದು ಕಾಣಿಸಿತು. ಹತ್ತಿರ ಬಂದ ಕುಡಲೇ `ಹಲೋ... ಏನಪ್ಪಾ ಇಲ್ಲಿ. ಏನ್ಮಾಡ್ತಾ ಇದ್ದೀಯಾ?' ಎಂದು ಕೇಳಿ ವಿಜೇತಾಳನ್ನು ಪ್ರದೀಪನಿಗೂ ಪ್ರದೀಪನನ್ನು ವಿಜೇತಾಳಿಗೂ ಪರಿಚಯಿಸಿದ.
           ಇದು ಯಾರು ಬರೆದ ಕಥೆಯೋ... ನನಗಾಗಿ ಬಂದ ವ್ಯಥೆಯೋ...
ಎಂದು ಹಾಡುತ್ತಾ ಬರುತ್ತಿದ್ದ ಪ್ರದೀಪ ಇವರನ್ನು ನೋಡಿ ಒಮ್ಮೆಲೆ ಅವಕ್ಕಾದರೂ ಬೇಗನೆ ಸಾವರಿಸಿಕೊಂಡು `ನಮಸ್ಕಾರ, ನಮಸ್ತೆ.. ಹಲೋ.. ಹಾಯ್...' ಎಂದು ಹಲ್ಲುಕಿರಿಯತೊಡಗಿದ.
          `ವಿಜೇತಾ.. ಈತ ಭರ್ಜರಿ ಹಾಡುಗಾರ. ಒಳ್ಳೆಯ ಅಡುಗೆಯಾತ.. ಬಹಳ ಕೊರೆಯುವ ವ್ಯಕ್ತಿ.. ಮೂರ್ನಾಲ್ಕು ವರ್ಷ ನನ್ನ ರೂಮ್ ಮೇಟು.. ಈದೀಗ ಬೇರೆ ಕಡೆ ರೂಮು ಮಾಡಿದ್ದಾನೆ. ಆದರೆ ಈತನ ದುರ್ಗುಣ ಎಂದರೆ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಡುವುದು. ನಿಘೂಡ ವ್ಯಕ್ತಿ ಎಂದರೆ ತಪ್ಪಾಗಲಿಕ್ಕಿಲ್ಲ ನೋಡು.. ' ಎಂದು ತಮಾಷೆ ಮಾಡಿದ ವಿಕ್ರಮ.
         `ಹೇ ಸುಮ್ನಿರೋ.. ಸುಮ್ನಿರೋ..' ಎಂದು ತಿವಿಯುತ್ತಾ ಹೇಳಿದ ಪ್ರದೀಪ. ಒಮ್ಮೆಲೆ ಎಲ್ಲರಲ್ಲೂ ನಗು ಉಕ್ಕಿತ್ತು. ನಂತರ ಮಾತು ಮುಂದುವರಿಸುತ್ತಾ `ನಾನು ಇಲ್ಲೇ ರೂಮು ಮಾಡಿದ್ದೀನಿ. ಬನ್ನಿ.. ಎಲ್ಲ ಅಲ್ಲಿಗೆ ಹೋಗೋಣ.. ಅಲ್ಲಿ ಆರಾಮಾಗಿ ಮಾತಾಡೋಣ..' ಎಂದು ಹೇಳಿ ಅವರಿಬ್ಬರನ್ನೂ ಕರೆದೊಯ್ದ.. `ನಡಿಯಪ್ಪಾ...ನಡಿ... ನಿನ್ನ ನಳಪಾಕದ ಪರಿಚಯ ವಿಜೇತಾಗೂ ಆಗಿ ಹೋಗಲಿ...' ಎಂದು ಮತ್ತೊಮ್ಮೆ ತಮಾಷೆ ಮಾಡಿದ ವಿಕ್ರಮ. ಎಲ್ಲರೂ ನಗುತ್ತ ಪ್ರದೀಪನ ರೂಮಿನ ಕಡೆಗೆ ಪಾದ ಬೆಳೆಸಿದರು.
           ಅವನದು ಮಹಡಿ ಮೇಲಿನ ದೊಡ್ಡ ರೂಮು. ಅಲ್ಲಿ ತರಹ ತರಹದ ವಸ್ತುಗಳಿದ್ದವು.ಗೋಡೆಯ ಮೇಲಂತೂ ಭಾರತ, ವಿಶ್ವ, ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ವಿವಿಧ ನಕಾಶೆಗಳು ತೂಗಾಡುತ್ತಿದ್ದವು. ಆ ರೂಮಿನ ಒಳಕ್ಕೆ ಕಾಲಿಡುತ್ತಿದ್ದಂತೆ `ನೀವು ಒಳ್ಳೆಯ ಸಲಹೆ ನೀಡಿದ್ರಿ.. ನೀವುಕೊಟ್ಟ ಸಲಹೆಯಿಂದಲೇ ವಿಕ್ರಂ ಅವರು ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು ನೋಡಿ.. ಅದಕ್ಕೆ ನೀವು ಧನ್ಯವಾದಕ್ಕೂ, ಗೌರವಕ್ಕೂ ಅರ್ಹರು..' ಎಂದಳು ವಿಜೇತಾ.
          `ಓಹ್... ಅದರಲ್ಲಿ ನಂದೇನಿದೆ? ಅವ್ನು ನನ್ನ ಗುಡ್ ಪ್ರೆಂಡೂ.. ಬೇಜಾರ್ನಲ್ಲಿದ್ದ.. ಅದಕ್ಕೆ ಒಂದೆರಡು ಸಲಹೆ ಕೊಟ್ಟೆ ಅಷ್ಟೇ. ಆದರೆ ಪ್ರಯತ್ನ ಪಟ್ಟು ಗೆದ್ದಿದ್ದು ವಿಕ್ರಂ ಹಾಗೂ ಆತನ ಬಳಿ ಕಲಿತವರು.. ನಾನು ನಿಮಿತ್ತ ಮಾತ್ರ...' ಎಂದ ಪ್ರದೀಪ.
         `ಆದ್ರೂ ಸೋಲಲು ಆರಂಭವಾದಾಗ ನಿಮ್ಮಂಥವರ ಆಶಾವಾದದ ನುಡಿಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.  ಗೆಲುವಿನ ಕಡೆಗೆ ಮುಖ ಮಾಡಿಸುತ್ತದೆ...'
         `ಅದೂ ಹೌದೆನ್ನಿ.. ಒಂದ್ನಿಮಿಷ.. ಟೀ ಮಾಡ್ಕೊಂಡು ಬರ್ತೀನಿ...' ಎಂದು ಪ್ರದೀಪ ಹೇಳುತ್ತಿದ್ದಂತೆ.. `ಮೊದ್ಲು ಆ ಕೆಲಸ ಮಾಡಪ್ಪಾ... ಬಾಯೆಲ್ಲಾ ಉಪ್ಪುಪ್ಪಾಗಿದೆ...' ಎಂದ ವಿಕ್ರಂ. ಕೆಲವೇ ಸಮಯದಲ್ಲಿ ಟೀ ಮಾಡಿಕೊಂಡು ಬಂದ. ವಿಕ್ರಂ, ವಿಜೇತಾ ಕುಳಿತು ಮಾತನಾಡುತ್ತಿದ್ದರೆ ಪ್ರದೀಪ ಕಿಟಕಿ ಬಳಿ ಹೋಗಿ ಮಾತನಾಡುತ್ತ ನಿಂತಿದ್ದ. ಕೆಲವು ನಗು, ತಮಾಷೆ,ಗಳೆಲ್ಲ ಆ ಸಂದರ್ಭದಲ್ಲಿ ಹಾದು ಹೋದವು.
           ಹೀಗೆ ಮಾತನಾಡುತ್ತಿದ್ದಂತೆ ಪ್ರದೀಪದ ದೃಷ್ಟಿ ಕಿಟಕಿಯಿಂದ ಹೊರಕ್ಕೆ ಹಾಯಿತು. ತಕ್ಷಣ ವಿಕ್ರಮನನ್ನು ಕರೆದು `ಶ್.. ಅಲ್ಲಿನೋಡು ನಾನು ಆ ದಿನ ಹೇಳಿದ್ನಲ್ಲಾ.. ಅದೇ ಫಾಲೋ ಮಾಡುವ ವ್ಯಕ್ತಿ. ಕಾಂಪೌಂಡ್ ಹತ್ತಿರ ಇಣುಕುತ್ತಿದ್ದಾನೆ ನೋಡು.. ' ಎಂದು ಹೇಳಿ ಬಾಯಿ ಮುಚ್ಚುವುದರೊಳಗಾಗಿ `ಒಂದೈದ್ ನಿಮಿಷ ನೀವಿಬ್ರೂ ಇಲ್ಲೇ ಇರಿ..' ಎಂದು ಹೇಳುತ್ತಾ ವಿಕ್ರಂ ಹೊರಗೋಡಿದ. ವಿಕ್ರಂ ಒಳ್ಳೆಯ ರನ್ನರ್ ಎನ್ನುವುದನ್ನು ಅರಿತಿದ್ದ ಪ್ರದೀಪ ಖಂಡಿತವಾಗಿಯೂ ಆ ಇಣುಕು ವ್ಯಕ್ತಿಯನ್ನು ಹಿಡಿದೇ ತರುತ್ತಾನೆ ಎನ್ನುವುದು ಖಾತ್ರಿಯಾಗಿತ್ತು.
          ಮತ್ತೈದು ನಿಮಿಷದಲ್ಲಿ ವಿಕ್ರಂ ಏದುಸಿರು ಬಿಡುತ್ತಾ ತಿರುಗಿ ಬಂದ. ತಕ್ಷಣ ಪ್ರದೀಪ `ಸಿಕ್ಕಿದ್ನಾ ಆತ..?' ಎಂದ.
          `ಬೆನ್ನಟ್ಟಿಕೊಂಡು ಹೋದೆ.. ಸಿಟಿ ಏರಿಯಾ ನೋಡಿ.. ತಪ್ಪಿಸಿಕೊಂಡು ಬಿಟ್ಟ.. ಬಡ್ಡೀಮಗ.. ನಾನೇ ಸ್ಪೀಡು ಅಂದ್ರೆ ನನಗಿಂತ ಸ್ಪೀಡಾಗಿ ಓಡ್ತಾನೆ...' ಎಂದ ವಿಕ್ರಂ. ಕೆಲ ಸಮಯದ ವರೆಗೆ ಈ ವಿಷಯದ ಕುರಿತು ಚರ್ಚೆ ನಡೆಯಿತು. ನಂತರ ವಿಜೇತಾ ಪ್ರದೀಪನಲ್ಲಿ `ನೀವು ಏನು ಕೆಲಸ ಮಾಡ್ತಾ ಇದ್ದೀರಿ?' ಎಂದು ಕೇಳಿದಾಗ ಪ್ರದೀಪ ಅದೇನೋ ಹಾರಿಕೆಯ ಉತ್ತರ ನೀಡಿದ. ಮತ್ತರೆಘಳಿಗೆಯಲ್ಲಿ ವಿಜೇತಾ ಹಾಗೂ ವಿಕ್ರಂ ಆಫೀಸಿನ ಕಡೆಗೆ ಹೊರಟರು.
          ದಾರಿಯಲ್ಲಿ ವಿಜೇತಾ `ಅದ್ಯಾರೋ ನಿನ್ನ ಫಾಲೋ ಮಾಡ್ತಾರೆ ಅಂದನಲ್ಲಾ.. ಅದೇನು ಮಾರಾಯಾ.? ವಿಚಿತ್ರವಾಗಿದೆಯಲ್ಲ...' ಎಂದಳು.. `ನನಗೂ ಗೊತ್ತಿಲ್ಲ... ಆದರೂ ಆಶ್ಚರ್ಯವಾಗ್ತಾ ಇದೆ...' ಎಂದ ವಿಕ್ರಂ.
         `ಈ ಪ್ರದೀಪ ಬಹಳ ವಿಚಿತ್ರ ಅನ್ನಿಸ್ತಿದೆ ಕಣೋ.. ಏನೋ ನಿಗೂಢ.. ನೀ ಹೇಳಿದ್ದು ಸತ್ಯ.. ಅರ್ಥವಾಗುತ್ತಿಲ್ಲ.. ಕೇಳಿದ್ದಕ್ಕೊಂದಕ್ಕೂ ಸರಿಯುತ್ತರ ಕೊಡೋದಿಲ್ಲ.. ಎಲ್ಲದ್ದಕ್ಕೂ ಹಾರಿಕೆ ಉತ್ತರ.. ಮಾತು ತಪ್ಪಿಸುತ್ತಾನೆ.. ಕಣ್ಣಲ್ಲಿ ಅದೇನೋ ಅನುಮಾನದ ಸೆಳಕು.. ಚಂಚಲತೆ... ಆತ ಅದೇನು ಕೆಲಸ ಮಾಡ್ತಿದ್ದಾನೆ?' ಎಂದಳು ವಿಜೇತಾ.
          `ಹೌದು.. ಆತನ ಬಗ್ಗೆ ನನಗೆ ಗೊತ್ತಿದದ್ದು ಶೆ.10ರಷ್ಟು ಮಾತ್ರ. ಇನ್ನೂ ಶೆ.90ರಷ್ಟು ನನಗೆ ಅರ್ಥವೇ ಆಗಿಲ್ಲ. ಮೂರು ವರ್ಷ ನನ್ನ ರೂಂ ಮೇಟ್ ಆಗಿದ್ದ ಅಷ್ಟೇ.. ಆದರೆ ಎಲ್ಲೂ ತನ್ನ ವಿಷಯವನ್ನು ನನಗೆ ಹೇಳಿಯೇ ಇಲ್ಲ. ನಾನೂ ಕೇಳಲಿಲ್ಲ ಬಿಡು.. ನಿಜಕ್ಕೂ ಆತ ಅದೇನು ಕೆಲಸ ಮಾಡ್ತಾನೆ.. ಹೇಗೆ ಜೀವನ ನಡೆಸ್ತಿದ್ದಾನೆ ಒಂದೂ ನನಗೆ ಗೊತ್ತಿಲ್ಲ.. ನನ್ನ ಹಾಗೂ ಅವನ ಕಷ್ಟದ ದಿನಗಳಲ್ಲಿ ಇಬ್ಬರೂ ಒಟ್ಟಿದ್ದೆವು ಎನ್ನುವುದಷ್ಟೇ ಸತ್ಯ ನೋಡು..' ಎಂದ ವಿಕ್ರಂ.
          `ಹೋಗ್ಲಿ ಬಿಡು...' ಎಂದಳು ವಿಜೇತಾ.. ಅಷ್ಟರಲ್ಲಿ ಪತ್ರಿಕಾಲಯ ಬಂದಿತ್ತು. ಇಬ್ಬರೂ ಹೋಗಿ ವರದಿಯನ್ನು ತಯಾರಿಸಿದರು.
         ಸ್ವಲ್ಪ ಹೊತ್ತಿನಲ್ಲಿಯೇ ನವೀನಚಂದ್ರನಿಂದ ಚಿಕ್ರಮನಿಗೆ ಕರೆ ಬಂದಿತು. `ಯಾಕೆ ಕರೆದಿರಬಹುದು..?' ಎಂಬ ಆಲೋಚನೆಯಲ್ಲಿಯೇ ವಿಕ್ರಂ ನವೀನಚಂದ್ರರ ಕೋಣೆಯೊಳಕ್ಕೆ ಹೋದ. ಅಲ್ಲಿ ನವೀನಚಂದ್ರ ವಿಕ್ರಮನನ್ನು ಕುಳಿತುಕೊಳ್ಳಲು ಹೇಳಿದ. ಕೊಲೆಯ ವಿಷಯದ ಕುರಿತು ಮಾತನಾಡತೊಡಗಿದರು. `ನೋಡಿ ವಿಕ್ರಂ. ಈ ಕೊಲೆಯ ಬಗ್ಗೆ ನನಗ್ಯಾಕೋ ಅಪಾರ ಕುತೂಹಲ. ಈ ಮೊದಲು ನಾನು ಕ್ರೈಂ ರಿಪೋರ್ಟರ್ ಆಗಿದ್ದಕ್ಕೋ ಅಥವಾ ಬೇರಿನ್ಯಾವುದಕ್ಕೋ ಗೊತ್ತಿಲ್ಲ. ಕೊಲೆಗಳ ಬೆನ್ನತ್ತಿ ಹೋಗುವುದು ಅಂದರೆ ನನಗೆ ವಿಶೇಷ ಆಸಕ್ತಿ. ಯಾರು ಕೊಲೆ ಮಾಡಿರಬಹುದು, ಯಾಕೆ ಮಾಡಿರಬಹುದು? ಇತ್ಯಾದಿಗಳನ್ನೆಲ್ಲ ನಾನು ಅನೇಕ ಸಾರಿ ಹುಡುಕಿಕೊಂಡು ಹೋಗಿದ್ದಿದೆ. ಕೊಲೆ ಆರೋಪಿಗಳನ್ನು ಪೊಲೀಸರು ಹುಡುಕುವ ವಿಧಾನ, ಇತ್ಯಾದಿಗಳನ್ನೆಲ್ಲ ನಾನು ಅನೇಕ ಸಾರಿ ಮಾಡಿದ್ದೇನೆ. ಪೊಲೀಸರು ಎಡವುವುದು, ಒತ್ತಡಕ್ಕೆ ಮಣಿದು ಕೊಲೆಗಾರನನ್ನು ತಪ್ಪಿಸುವುದು ಇತ್ಯಾದಿಗಳೂ ನಡೆದಿದ್ದಿದೆ. ಅನೇಕ ಸಾರಿ ನಾನು ಇಂತಹ ತನಿಖಾ ವರದಿ ನಡೆಸಿದ ಕಾರಣ ನಿಜವಾದ ಆರೋಪಿ ಸಿಕ್ಕಿಬಿದ್ದಿದ್ದೂ ಇದೆ. ಆತ ತಪ್ಪಿಸಿಕೊಳ್ಳುವುದಕ್ಕೆ ಆಸ್ಪದವೇ ಇಲ್ಲದಂತೆ ಆಗಿದ್ದೂ ಇದೆ. ಬಹುಶಃ ಈ ಕಾರಣಕ್ಕೇ ನಮ್ಮ ಪತ್ರಿಕೆ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಇಂತಹ ಅನೇಕ ತನಿಖಾ ವರದಿಗಳನ್ನು ಮಾಡಿ ಸತ್ಯವನ್ನು ಬೇಧಿಸಿದೆ. ಈಗಲೂ ನಾವ್ಯಾಕೆ ಇವತ್ತು ನಡೆದಿರುವ ಕೊಲೆ ಕೇಸನ್ನು ಬೆನ್ನತ್ತಬಾರದು?' ಎಂದರು.
         ವಿಕ್ರಮನಿಗೆ ಸ್ಪಷ್ಟವಾದಗೇ ಸುಮ್ಮನೇ ಕುಳಿತಿದ್ದ.. `ನಾವು ಒಂದು ಕೆಲಸ ಮಾಡೋಣ. ಇವತ್ತು ನಡೆದ ಕೊಲೆಯ ಕೇಸಿನ ಬೆನ್ನತ್ತೋಣ. ನಾವು ಅಂದರೆ ನೀನು ಈ ಕೊಲೆಯ ಬಗ್ಗೆ ತನಿಖೆ ಮಾಡಬೇಕು. ಆದರೆ ನಾವು ಪೊಲೀಸರ ಕಾನೂನನ್ನು ಕೈಗೊಳ್ಳುವುದಿಲ್ಲ. ಬದಲಾಗಿ ಅಪರಾಧಿಗಳ ಜಾಡನ್ನು ಹುಡುಕುತ್ತ ಹೋಗೋಣ. ಪೊಲೀಸರು ಎಲ್ಲಾದರೂ ದಾರಿ ತಪ್ಪಿದರೆ ಅವರಿಗೆ ಇದರಿಂದ ಅನುಕೂಲವಾಗುತ್ತದೆ. ಸುದ್ದಿ ಮಾಡಿದ ನಮಗೂ ಹೆಸರು ಬರುತ್ತದೆ. ಸಾಕಷ್ಟು ರಿಸ್ಕ್ ಕೂಡ ಇದೆ. ಆಗುತ್ತೆ ಅಂತಾದರೆ ಹೇಳು.. ನಮ್ಮಿಂದ ನಿನಗೆ ಸಂಪೂರ್ಣ ಬೆಂಬಲ ಇರುತ್ತದೆ.  ಅದೆಷ್ಟೇ ಒತ್ತಡ ಬಂದರೂ ನಾವು ನೋಡಿಕೊಳ್ಳುತ್ತೇನೆ.. ಏನಂತೀಯಾ?' ಎಂದು ನವೀನಚಂದ್ರ.
             `ಸರ್.. ನಾನೂ ಅದನ್ನೇ ಆಲೋಚನೆ ಮಾಡ್ತಾ ಇದ್ದೆ. ಇದೂ ನನಗೆ ಹೊಸ ಅನುಭವ. ಆದರೆ ನಾನು ಇದನ್ನು ಮಾಡಲು ತಯಾರಾಗಿದ್ದೇನೆ. ಪೊಲೀಸರು ಆರೋಪಿಯನ್ನು ಪತ್ತೆ ಮಾಡುವ ಮುನ್ನ ನಾವು ಮಾಡಿದರೆ ಮಜವಾಗಿರುತ್ತದೆ. ಮೈಮನಗಳಲ್ಲಿ ನನಗೆ ಈಗ ರೋಮಾಂಚನ ಆಗ್ತಾ ಇದೆ.. ಖಂಡಿತ ನಾನು ಇದನ್ನು ಮಾಡೇ ಮಾಡ್ತೀನಿ ಸರ್..' ಎಂದ ವಿಕ್ರಂ.
            `ಗುಡ್... ನಿನಗೆ ಈ ಕುರಿತು ನಮ್ಮಿಂದ ಸಂಪೂರ್ಣ ಬೆಂಬಲ ಇದ್ದೇ ಇದೆ. ನೀನು ಎಲ್ಲಿಯೇ ಓಡಾಡು, ಎಷ್ಟು ದಿನ ಬೇಕಾದರೂ ತೆಗೆದುಕೊ.. ದುಡ್ಡು ಖರ್ಚಾಗಲಿ.. ಅದಕ್ಕೆ ಚಿಂತೆ ಬೇಡ.. ನಿನಗೆ ಕಾರ್ ಡ್ರೈವಿಂಗ್ ಬರುತ್ತೆ ಅಂತಾದರೆ ನನ್ನ ಕಾರನ್ನು ಒಯ್ಯಬಹುದು. ಆದರೆ ಹುಷಾರಾಗಿರಬೇಕು. ಈ ವಿಷಯ ಯಾರಿಗೂ ಗೊತ್ತಗಬಾರದು. ನಿನ್ನ ಎಚ್ಚರಿಕೆಯಲ್ಲಿ ನೀನಿರಬೇಕು..' ಎಂದರು ನವೀನಚಂದ್ರ.
           `ಖಂಡಿತ ಸರ್.. ಏನಾದರೂ ಅಗತ್ಯಬಿದ್ದರೆ ಹೇಳ್ತೀನಿ ಸರ್.. ' ಎಂದು ಹೇಳಿ ಹೊರಬಂದವನಿಗೆ ಆ ದಿನವಿಡೀ ಮೌಂಟ್ ಎವರೆಸ್ಟ್ ಏರಿದ ಪರ್ವತಾರೋಹಿಗಳಿಗೆ ಆದಂತಹ ಖುಷಿ ಮನೆಮಾಡಿತ್ತು. ಆತ ರಾತ್ರಿ ತನ್ನ ರೂಮಿಗೆ ಬಂದು ಆ ದಿನದ ಘಟನೆಗಳೆಲ್ಲವನ್ನೂ ಮೆಲುಕು ಹಾಕತೊಡಗಿದ. ಕೊಲೆ, ವಿಜೇತಾಳ ಸಂ ಗಡ ಹೋಗಿ ಅದನ್ನು ವರದಿ ಮಾಡಿದ್ದು. ಪ್ರದೀಪನ ಅನಿರೀಕ್ಷಿತ ಭೇಟಿ, ಅಪರಿಚಿತನ ಬೆನ್ನಟ್ಟಿದ್ದು, ನವೀನಚಂದ್ರ ಹೇಳಿದ ಮಾತುಗಳೆಲ್ಲವೂ ಪದೇ ಪದೆ ನೆನಪಾದವು. ಜೊತೆಗೆ ಎಸ್. ಮಾರ್ಕಿನ ಲಾಕೆಟ್ ಕೂಟ ನೆನಪಾಯಿತು. ಯಾಕೋ ಈ ದಿನ ನಡೆದ ಎಲ್ಲ ಘಟನೆಗಳೂ ತನ್ನ ಬದುಕಿನಲ್ಲಿ ಮುಖ್ಯವಾಗಲಿದೆ. ಪದೆ ಪದೇ ಮನಸ್ಸಿಗೆ ನಾಟಲಿದೆ ಎನ್ನಿಸತೊಡಗಿತ್ತು ವಿಕ್ರಮನಿಗೆ. ಆ ದಿನ ಮಾರ್ಚ್ 28.

***********6************

           ಹೊಸ ಲ್ಯಾಪ್ ಟಾಪ್ ಹಾಗೂ ಮೊಬೈಲನ್ನು ನವೀನಚಂದ್ರ ನಂತರದ ದಿನಗಳಲ್ಲಿ ವಿಕ್ರಮನಿಗೆ ಕೊಡುಗೆಯಾಗಿ ನೀಡಿದ್ದ. ವಿಕ್ರಮ ಅವಾಕ್ಕಾಗಿದ್ದ. ಕೊನೆಗೊಂದು ದಿನ ಈ ಕುರಿತು ವಿಜೇತಾಳಲ್ಲಿ ವಿಚಾರಿಸಿದಾಗ ನವೀನಚಂದ್ರ ಆಗರ್ಭ ಶ್ರೀಮಂತರೆಂದೂ ಪತ್ರಿಕೆ ನಡೆಸುವುದು ಅವರ ಹವ್ಯಾಸವೆಂದೂ ದೊಡ್ಡ ದೊಡ್ಡ ಬಿಸಿನೆಸ್ಸುಗಳ ಒಡೆಯನೆಂದೂ ಹೇಳಿದಳು. ಬಿಡುವಿದ್ದಾಗ ಬಿಸಿನೆಸ್ ಕೆಲಸ ಮಾಡಿ ಟೈಮಿದ್ದಾಗ ಪತ್ರಿಕಾ ಕಚೇರಿಗೆ ಬರುವುದು ಅವರ ಪ್ರಮುಖ ಕಾರ್ಯ. ತಾನು ಕಷ್ಟದಲ್ಲಿದ್ದಾಗ ಪತ್ರಿಕೆ ತನಗೆ ಅನ್ನ ನೀಡಿದೆ. ಆ ಕಾರಣಕ್ಕಾಗಿ ಪತ್ರಿಕೆಯ ಋಣ ತಿರಿಸಬೇಕು ಎನ್ನುವುದು ಅವರ ಮನಸ್ಥಿತಿ. ಹೀಗಾಗಿ ಅವರು ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ತನಗೆ ಯಾರೇ ಇಷ್ಟವಾದರೂ, ಅವರ ಕಾರ್ಯವೈಖರಿ ಮೆಚ್ಚುಗೆಯಾದರೂ ಅವರಿಗೆ ಕೊಡುಗೆ ಕೊಡುತ್ತಾರೆ. ನಿನ್ನ ಕಾರ್ಯವೈಖರಿ ನವೀನಚಂದ್ರರಿಗೆ ಇಷ್ಟವಾಗಿದೆ. ಆ ಕಾರಣಕ್ಕಾಗಿಯೇ ಲ್ಯಾಪ್ಟಾಪ್ ಹಾಗೂ ಮೊಬೈಲ್ ಕೊಡುಗೆ ಕೊಟ್ಟಿದ್ದಾರೆ. ನಿನ್ನ ಕೆಲಸಕ್ಕೆ ಅನುಕೂಲವಾಗಲಿ ಅಂತ..' ಎಂದಳು ವಿಜೇತಾ.
        ಅದಾಗಿ ಮತ್ತೆರಡು ದಿನಗಳು ಕಳೆಯುವಷ್ಟರಲ್ಲಿ ಪತ್ರಿಕಾ ಕಚೇರಿಗೆ ಹೊಸ ಹೊಸ ವರದಿಗಾರರನ್ನು, ಉಪ ಸಂಪಾದಕರನ್ನೂ ನೇಮಕ ಮಾಡಲಾಗಿತ್ತು. ಪತ್ರಿಕೆಯನ್ನು ಮಂಗಳೂರಿನಿಂದಾಚೆ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿತ್ತು. ವಿಕ್ರಮನಿಗೂ ಜವಾಬ್ದಾರಿ ಹೆಚ್ಚಿತ್ತು. ಜೊತೆ ಜೊತೆಯಲ್ಲಿ ಕೊಲೆಯ ಜಾಡನ್ನು ಹಿಡಿಯತೊಡಗಿದ್ದ. ಪತ್ರಿಕಾಲಯದಲ್ಲಿ ಸಾಕಷ್ಟು ಹೊಸಬರನ್ನು ಸೇರಿಸಿದ್ದ ಕಾರಣ ವಿಕ್ರಮ ಹಾಗೂ ವಿಜೇತಾಳ ಮೇಲಿದ್ದ ಒತ್ತಡ ಕಡಿಮೆಯಾಗಿತ್ತು. ಅಲ್ಲದೇ ಅವರು ಉತ್ತಮ ವರದಿಗಳನ್ನು ಮಾಡಲು ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿತ್ತು.

****

        ಸುಮಾರು ಒಂದು ವಾರ ಕಳೆದರೂ ಕೊಲೆಯ ಬಗ್ಗೆ ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಲಿಲ್ಲ. ಯಾವ ದಿಕ್ಕಿನಲ್ಲಿ ಸಾಗಿದರೂ ಕೊಲೆಯ ವಿವರ ತಿಳಿಯಲಿಲ್ಲ. ಕೊಲೆಗೆ ಬಳಕೆ ಮಾಡಿದ ಆಯುಧದ ಬಗ್ಗೆಯೂ ತಿಳಿಯಲಿಲ್ಲ. ಇದರಿಂದ ಜನಸಾಮಾನ್ಯರು ಬೇಸರಗೊಂಡಿದ್ದರು. ಖಾಸಗಿ ಪತ್ತೆದಾರರೂ, ಗುಪ್ತಚರರು ತಾವೂ ಒಂದು ಕೈ ನೋಡುವ ಎಂದು ಕೆಲಸ ಶುರುಮಾಡಿದ್ದರು. ವಿಕ್ರಮನಿಗೆ ಸಿಕ್ಕಿದ್ದ ಎಸ್ ಲಾಕೆಟ್ ಆರೋಪಿಯ ಲಾಕೆಟ್ ಎಂದೂ ಆತನ ಹಿಂದೆ ದೊಡ್ಡ ಗುಂಪಿನ ಕರಾಮತ್ತಿದೆಯೆಂದೂ ಅನ್ನಿಸತೊಡಗಿತ್ತು. ಆ ಗುಂಪು ದರೋಡೆ, ಕಳ್ಳ ಸಾಗಾಣಿಕೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದೆ ಎನ್ನುವುದೂ ತಿಳಿದುಬಂದಿತು. ಅದನ್ನು ನವೀನಚಂದ್ರನಿಗೆ ತಿಳಿಸಿಯೂ ಆಗಿತ್ತು.
             ಆ ದಿನ ಬಹುಶಃ ಎಪ್ರಿಲ್ 4. ವಿಕ್ರಂ ಕೊಲೆ ನಡೆದ ಸ್ಥಳಕ್ಕೆ ಹೋಗಿದ್ದವನು ಪ್ರದೀಪನನ್ನು ಮಾತನಾಡಿಸಿ ಹೋಗೋಣ ಎಂದು ಆತನ ರೂಮಿನ ಕಡೆಗೆ ಹೆಜ್ಜೆ ಹಾಕಿದ. ಪ್ರದೀಪ ಇದ್ದಾನೋ ಇಲ್ಲವೋ ಎಂಬ ಗೊಂದಲದಲ್ಲಿಯೇ ರೂಮಿನ ಬಾಗಿಲು ತಟ್ಟಿದ. ಅಚ್ಚರಿಯೆಂಬಂತೆ ರೂಮಿನಲ್ಲಿದ್ದ ಪ್ರದೀಪ ಬಾಗಿಲು ತೆಗೆದ. ವಿಕ್ರಮನನ್ನು ಕಂಡ ಪ್ರದೀಪ ಒಮ್ಮೆ ಗಲಿಬಿಲಿಪಟ್ಟುಕೊಂಡ. ಯಾವುದೋ ಒಂದು ವಸ್ತುವನ್ನು ಲಗುಬಗೆಯಿಂದ ಮುಚ್ಚಿಟ್ಟ. ವಿಕ್ರಮನ ಕಣ್ಣು ಇದನ್ನು ಗಮನಿಸಿಬಿಟ್ಟಿತ್ತು. ನಂತರ ಪ್ರದೀಪ ಟೀ ಮಾಡಲು ಹೋದಾಗ ವಿಕ್ರಂ ಆ ವಸ್ತುವನ್ನು ಎತ್ತಿಟ್ಟುಕೊಂಡ. ಅದೊಂದು ಮ್ಯಾಪ್. ಅದನ್ನು ವಿಕ್ರಂ ಎತ್ತಿಟ್ಟುಕೊಂಡಿದ್ದು ಪ್ರದೀಪನಿಗೆ ಆ ದಿನ ತಿಳಿಯಲೇ ಇಲ್ಲ. ಅದೂ ಇದೂ ಮಾತನಾಡಿದ ವಿಕ್ರಂ ಸೀದಾ ತನ್ನ ರೂಮಿಗೆ ಮರಳಿದ.
            ರೂಮಿಗೆ ಬಂದು ನಿಧಾನವಾಗಿ ಕುಳಿತು ಆ ಮ್ಯಾಪನ್ನು ಬಿಚ್ಚಿ ನೋಡಿದ. ಅದು ಸಾಮಾನ್ಯವಾಗಿ ಮಿಲಿಟರಿಯವರು ಬಳಸುವಂತಹ ಮ್ಯಾಪ್. ಅದರಲ್ಲಿ ದೇಶದ ಪ್ರತಿಯೊಂದು ಪ್ರದೇಶದ ಸಮಗ್ರ ಚಿತ್ರಣ, ಆರ್ಥಿಕ ವ್ಯವಸ್ಥೆ, ಅರಣ್ಯ, ಖನಿಜ ಸಂಪತ್ತು ಇತ್ಯಾದಿ ಎಲ್ಲ ವಿವರಗಳೂ ಇರುತ್ತವೆ. ಇದೂ ಹಾಗೆಯೇ ಇತ್ತು. ವಿಕ್ರಂ ಮುಖ್ಯವಾಗಿ ಗಮನಿಸಿದ ಅಂಶವೆಂದರೆ ಮ್ಯಾಪಿನ ಕೆಲವೊಂದು ಕಡೆಗಳಲ್ಲಿ ಎಸ್ ಮಾರ್ಕುಗಳಿದ್ದವು. ಆ ಚಿನ್ಹೆ ಕರ್ನಾಟಕದ ಕೆಲವು ಕಡೆಗಳಲ್ಲಿ ಮಾತ್ರ ಇತ್ತು. ಆತ ಎಲ್ಲ ಊರುಗಳನ್ನೂ ಬರೆದಿಟ್ಟುಕೊಂಡ. ಮಂಗಳೂರು, ಬೆಂಗಳೂರು, ಬೀದರ್, ತುಮಕೂರು, ವಿಜಯಪುರದ ಜೊತೆಗೆ ಶಿರಸಿಯ ಬಳಿ ಎಸ್. ಮಾರ್ಕನ್ನು ಪೆನ್ನಿನ ಮೂಲಕ ಬರೆಯಲಾಗಿತ್ತು. ವಿಕ್ರಮನಿಗೆ ಸಿಕ್ಕಾಪಟ್ಟೆ ತಲೆ ಹನ್ನೆರಡಾಣೆ ಆಗತೊಡಗಿತು. ಶಿರಸಿಗೂ ಎಸ್. ಮಾರ್ಕಿಗೂ ಎಂತಾ ಸಂಬಂಧ.? ಶಿರಸಿಯನ್ನು ಎಸ್. ಎಂದು ಸಂಬೋಧನೆ ಮಾಡಿದ್ದಾರಾ? ಹಾಗಾದರೆ ಮಂಗಳೂರನ್ನು ಎಂ. ಎಂದೂ ಬೀದರನ್ನು ಬಿ. ಎಂದೂ ತುಮಕೂರನ್ನು ಟಿ. ಎಂದೂ ಯಾಕೆ ಮಾರ್ಕ್ ಮಾಡಿಲ್ಲ? ಏನಿದು ಎಸ್? ಈ ಎಸ್.ಗೂ ತನ್ನ ಬಳಿ ಇರುವ ಎಸ್. ಲಾಕೆಟಿಗೂ ಏನಾದರೂ ಸಂಬಂಧ ಇದೆಯಾ? ಈ ಎಸ್. ಮ್ಯಾಪಿನಿಂದ ಏನಾದರೂ ತನಗೆ ಲಾಭವಾಗಬಹುದಾ ಎಂದರೆಲ್ಲ ಆಲೋಚನೆ ಮಾಡತೊಡಗಿದ ವಿಕ್ರಂ. ಆಲೋಚಿಸಿದಂತೆಲ್ಲ ಗೊಂದಲವೇ ಹೆಚ್ಚಾಯಿತು. ಪರಿಹಾರ ಮಾತ್ರ ಸಿಗಲಿಲ್ಲ.
           ವಿಕ್ರಮ ಹೀಗೆ ಆಲೋಚನೆ ಮಾಡಿದಂತೆಲ್ಲ ಪ್ರದೀಪನ ಬಗ್ಗೆ ಅನುಮಾನಗಳು ಹೆಚ್ಚತೊಡಗಿದವು. ಇಂತಹ ಮ್ಯಾಪ್ ಪ್ರದೀಪನಿಂದ ಸಿಗುತ್ತದೆ ಎಂದು ಆಲೋಚಿಸಿದರ ವಿಕ್ರಂ ಪ್ರದೀಪನೂ ಒಬ್ಬ ಆರೋಪಿಯಾ ಅಥವಾ ತನ್ನಂತೆ ತನಿಖೆಗೆ ಕೈ ಹಾಕಿದವನಾ? ಎಂದು ಆಲೋಚಿಸಿದನಾದರೂ ಈ ಎರಡನ್ನೂ ನಂಬಲು ಮನಸ್ಸು ನಿರಾಕರಿಸಿತು. ಆತನ ಮನಸ್ಸಿನಲ್ಲಿ ಎಸ್. ಮಾರ್ಕಿನ ಲಾಕೆಟ್ ಆರೋಪಿಯದೇ, ಅಥವಾ ಯಾವುದಾದರೂ ಒಂದು ಕಂಪನಿಯದ್ದೇ ಎಂದೂ ಆಲೋಚನೆ ಮೂಡಿತು. ಹೀಗಿದ್ದಾಗಲೇ ಅಲ್ಲಿಗೆ ಪ್ರದೀಪ ಹಾಜರಾಗಿದ್ದ.
           ರೂಮಿನೊಳಕ್ಕೆ ಬಂದವನೇ ವಿಕ್ರಮನ ಬಳಿ `ಹೇಯ್.. ನೀನು ಮೊದಲು ಆ ಮ್ಯಾಪನ್ನು ನನಗೆ ಕೊಡು.. ಅದು ನನಗೆ ಬಹಳ ಅಗತ್ಯ..' ಎಂದು ಹೇಳಿದವನೇ ತಕ್ಷಣ ಏನೋ ಹೊಳೆದಂತೆ `ನೀನು ಆರೋಪಿನ ಹುಡುಕ್ತಾ ಇದ್ದೀಯಾ ಅಲ್ವಾ.. ಹೇಗೋ ಈ ವಿಷಯ ಗೊತ್ತಾಯಿತು. ನಿನಗೆ ಅನುಕೂಲವಾಗಲಿ ಅಂತಲೇ ಈ ಮ್ಯಾಪನ್ನು ನಾನು ಸಂಪಾದನೆ ಮಾಡಿ ತಂದಿದ್ದು..' ಎಂದು ಹೇಳಿದ.
          ವಿಕ್ರಮನಿಗೆ ಇದರಲ್ಲೇನೋ ನಿಘೂಡತೆಯಿದೆ ಎನ್ನಿಸಿತು. ಮ್ಯಾಪಿನಲ್ಲಿದ್ದದ್ದನ್ನೆಲ್ಲ ತಾನು ಬರೆದಿಟ್ಟುಕೊಂಡಿದ್ದೇನೆ. ಮನಸ್ಸಿನಲ್ಲಿ ಅದು ಅಚ್ಚಾಗಿದೆ. ತನಗೆ ಇನ್ನು ಅದರ ಅಗತ್ಯವಿಲ್ಲ ಎಂದುಕೊಂಡ ವಿಕ್ರಂ ಮ್ಯಾಪನ್ನು ಪ್ರದೀಪನಿಗೆ ವಾಪಾಸ್ ನೀಡಿದ. ಮ್ಯಾಪ್ ಸಿಕ್ಕ ತಕ್ಷಣವೇ ಪ್ರದೀಪ ಅಲ್ಲಿಂದ ಜಾಗ ಖಾಲಿ ಮಾಡಿದ.
         ಈ ಘಟನೆಯಿಂದ ಪ್ರದೀಪನ ಬಗ್ಗೆ ವಿಕ್ರಮನಲ್ಲಿದ್ದ ಅನುಮಾನಗಳು ಜಾಸ್ತಿಯಾದವು. ಪ್ರದೀಪ ಯಾರು? ಕಳ್ಳನಾ? ಪೊಲೀಸನಾ? ಮಿತ್ರನಾ? ಕೊಲೆಗಾರನಾ? ಇಷ್ಟಕ್ಕೂ ಈ ಮ್ಯಾಪನ್ನು ಇಟ್ಟುಕೊಂಡು ಪ್ರದೀಪ ಮಾಡುವುದೇನಿದೆ? ಈ ಕೊಲೆಗೂ ಪ್ರದೀಪನಿಗೂ ಏನಾದರೂ ಸಂಬಂಧ ಇದೆಯಾ? ಕೊಲೆಯಲ್ಲಿ ಪ್ರದೀಪನ ಪಾತ್ರ ಏನಿದೆ? ಎಂದೆಲ್ಲ ಆಲೋಚಿಸಿದ ವಿಕ್ರಮ. ಆಲೋಚನೆ ಮಾಡಿದಂತೆಲ್ಲ ಪ್ರದೀಪ ಮತ್ತಷ್ಟು ನಿಘೂಡ ವ್ಯಕ್ತಿಯಾಗುತ್ತ ಹೋದ.

***
(ಮುಂದುವರಿಯುತ್ತದೆ..)
         

Monday, December 29, 2014

ಚಿನಕುರುಳಿ ಹನಿಗಳು

ನೆಪ

ಹುಲಿಯ ನೆಪದಲ್ಲಿ
ಶೆಟ್ಟರ್ ಚಾರ್ಜು
ಅದಕ್ಕೆ ಕಾರಣ
ರಾಣಾ ಜಾರ್ಜು !

ದುಂಡಿರಾಜ್

ಪದ ಪದಗಳನ್ನು
ಒಟ್ಟಿಗೆ ಇಟ್ಟರು
ಚುಟುಕ ಬರೆದರು
ದುಂಡೀರಾಜರು |
ಇಷ್ಟವಾದರು ||

ಕಾರಣ

ಹುಲಿ ನೆಪದಲ್ಲಿ
ಆರಂಭವಾಯಿತು
ಹಣಾ-ಹಣಿ
ಆರಂಭಿಸಿದವರು
ಮಾತ್ರ
ರಾಜಕಾರಣಿ ||

ನೆನಪು

ಐಸಿಸ್, ತಾಲಿಬಾನ್
ಮುಂತಾದ ಉಗ್ರ
ಸಂಘಟನೆಗಳು
ನೂರಾರು...|
ಈ ನಡುವೆಯೂ ನೆನಪಾದರು
ಇಷ್ಟವಾದರು
ಅಬ್ದುಲ್ ಕಲಾಮರು |