Wednesday, October 21, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ - 2

          ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದಿದ್ದರೂ ರೈಲು ವೇಗವಾಗಿ ಸಾಗುತ್ತಿರಲಿಲ್ಲ. ಲೋಂಡಾ, ಅಳ್ನಾವರ, ಖಾನಾಪುರ ಮೂಲಕ ಬೆಳಗಾವಿಗೆ ಹೋಗುತ್ತಿತ್ತು ರೈಲು. ಖಾಲಿ ಖಾಲಿ ರೈಲು. ನಾನು, ಸಂಜಯ ಹಾಗೂ ಪ್ರಶಾಂತ (ನಿರಂತರ ಚಲನೆಯಲ್ಲಿರುವ ಖ್ಯಾತಿಯ) ಸಾಕಷ್ಟು ಹಲುಬಿಕೊಳ್ಳುತ್ತ ಸಾಗಿದೆವು. ನಮ್ಮ ಪಕ್ಕದಲ್ಲಿ ಒಂಟಿ ಸೀಟಿನಲ್ಲಿ ಒಬ್ಬಾತ ಗಡವನಂತನು ಬಂದು ಕುಳೀತುಕೊಂಡಿದ್ದ. ಆತನಿಗೆ ಆಗಲೇ ನಿದ್ದೆ. ಬಾಯಿಂದಂತೂ ಸಪ್ತಸ್ವರಗಳೂ ಸಮ್ಮಿಳಿತವಾಗಿ ಗೊರ್.. ಎನ್ನುತ್ತ ಬರುತ್ತಿದ್ದವು.
           ಧಾರವಾಡ ಕಳೆದ ನಂತರ ನಿಧಾನವಾಗಿ ವಾತಾವರಣ ಬದಲಾಗತೊಡಗಿತು. ಪ್ರಶಾಂತ ಭಾವ ತನ್ನ ಮೊಬೈಲಿನಲ್ಲಿದ್ದ ಹಲವು ಆಪ್ ಗಳನ್ನು ನನ್ನ ಮೊಬೈಲಿಗೆ ರವಾನೆ ಮಾಡತೊಡಗಿದ. ಜಿಪಿಎಸ್, ಅದು, ಇದು ಎಂಬಂತೆ ಬಹಳಷ್ಟು ಆಪುಗಳು ನನ್ನ ಮೊಬೈಲಿಗೆ ಬಂದವು. ರೈಲಿಗೆ ವೇಗವಿನ್ನೂ ಸಿಕ್ಕಿರಲಿಲ್ಲ. ಬರಬರುತ್ತ ಹಸಿರು ಹೆಚ್ಚಾಯಿತು. ಅಳ್ನಾವರ ಬರುವ ಮುನ್ನ ನಾಲ್ಕೈದು ಕಿಲೋಮೀಟರ್ ದೂರ ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲು ಮಾರ್ಗ ಹಾದು ಹೋಗಿದೆ. ನಾನು ಪ್ರಶಾಂತ ಹಾಗೂ ಸಂಜಯನ ಬಳಿ ಈ ವಿಷಯವನ್ನು ಹೇಳಿ ವಾದಿಸಿದೆ. ಅವರು ಸಾಧ್ಯವೇ ಇಲ್ಲ ಎಂದು ಹೇಳಿದರೆ ನಾನು ಇದೆ ಎಂದು ಹೇಳುತ್ತಿದೆ. ನನ್ನ ಬಳಿ ಸೂಕ್ತ ಸಾಕ್ಷ್ಯ ಹಾಗೂ ದಾಖಲೆಗಳಿರದಿದ್ದ ಕಾರಣ ಸುಮ್ಮನಾದೆ.
           ಎಲ್ಲೋ ಮಳೆ ಬಿದ್ದಿರಬೇಕು. ನಾವು ಹೋರಟಿದ್ದು ಮಳೆಗಾಲವಾದರೂ ಹಾಗನ್ನಿಸುತ್ತಿರಲಿಲ್ಲ. ರಭಸದಿಂದ ಸುರಿಯಬೇಕಿದ್ದ ಮಳೆ ನಾಪತ್ತೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಮಾಲೆ ಮಾಲೆಯಾಗಿ ಇಳಿಯುತ್ತಿತ್ತು. ದಾರಿಯಲ್ಲಿ ಕಾಣುವ ನದಿ, ಹಳ್ಳ, ತೊರೆಗಳಲ್ಲೆಲ್ಲ ನೀರಿದೆಯೇ ಎಂದು ಇಣುಕುತ್ತಿದ್ದೆವು. ಯಾವುದೋ ಒಂದೆರಡು ಹೊಳೆ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಅಜಮಾಸು 5 ಅಥವಾ ಇನ್ನೂ ಜಾಸ್ತಿ ಗಂಟೆಯೇನೋ, ಅಳ್ನಾವರ ಹಾಗೂ ಲೋಂಡಾಗಳನ್ನು ದಾಟಿದ ನಮ್ಮ ಚುಕುಬುಕು ರೈಲು ಖಾನಾಪುರಕ್ಕೂ ಬಂದಿತು. 15 ನಿಮಿಷಕ್ಕೊಮ್ಮೆಯೋ ಅಥವಾ 30 ನಿಮಿಷಕ್ಕೆ ಒಮ್ಮೆ ಎಂಬಂತೆಯೋ ನಿಂತು ನಿಂತು ಸಾಗುತ್ತಿದ್ದ ರೈಲು ನಿಧಾನಕ್ಕೆ ರಶ್ಶಾಗತೊಡಗಿತು.
           ಸಂಜಯ ತನ ಡಿಎಸ್.ಎಲ್.ಆರ್ ಕ್ಯಾಮರಾಕ್ಕೆ ಆಗಲೇ ಕೆಲಸ ಕೊಟ್ಟಿದ್ದ. ನಾನು ಹಾಗೂ ಪ್ರಶಾಂತ ಭಾವ ಸಾಧ್ಯವಾದಷ್ಟು ಪೋಟೋಗಳನ್ನು ಮೊಬೈಲಿನಲ್ಲಿಯೇ ಕ್ಲಿಕ್ಕಿಸಿಕೊಂಡೆವು. ಬಾಯಲ್ಲಿ ಬಾ ಮಳೆಯೇ ಬಾ.. ಎಂಬ ಹಾಡೂ ಗುನುಗುತ್ತಿತ್ತು. ದಾರಿಯಲ್ಲಿ ಎಲ್ಲೋ ಒಂದೆರಡು ಕಡೆಗಳಲ್ಲಿ ರೈಲುಗಳು ಅಡ್ಡಾದವು. ವೇಗದ ರೈಲುಗಳು ದಡದಡನೆ ಸಾಗುತ್ತಿದ್ದರೆ ಪಕ್ಕದಲ್ಲಿಯೇ ನಿಂತ ನಾವು ಪೋಟೋ ಕ್ಲಿಕ್ಕಿಸಿ ಹಿತವಾಗಿ ಬೆಚ್ಚಿದ್ದೆವು.
            ಈ ನಡುವೆ ಇನ್ನೊಂದು ವಿಷಯ ಹೇಳಲೇಬೇಕು ನೋಡಿ. ಧಾರವಾಡ ದಾಟಿ ರೈಲು ಮುಂದೆ ಹೋಗುತ್ತಿದ್ದಂತೆ ಟಿಸಿ ಬಂದು ತಪಾಸಣೆಗೆ ಇಳಿದ. ನಾನು ಹಾಗೂ ಸಂಜಯ ಟಿಕೆಟ್ ಕೊಟ್ಟು ನಮ್ಮ ಗುರುತಿನ ಚೀಟಿಯನ್ನು ನೀಡಿದೆವು. ಪ್ರಶಾಂತ ಭಾವನ ಬಳಿ ಗುರುತಿನ ಚೀಟಿ ತೋರಿಸು ಎಂದರೆ ಚೀಟಿ ಎಲ್ಲಿದೆ? ವೋಟಿಂಗ್ ಕಾರ್ಡ್, ರೇಶನ್ ಕಾರ್ಡ್, ಆಧಾರ್ ಕಾರ್ಡುಗಳ ಝೆರಾಕ್ಸ್ ತಂದಿದ್ದ. ಟಿಸಿ ವರಾತ ಶುರುಮಾಡಿದ. ಒರಿಜಿನಲ್ ದಾಖಲೆಗಳನ್ನು ತೋರಿಸಿ, ಝೆರಾಕ್ಸ್ ಬೇಡ ಎಂದ. ಎಷ್ಟು ಹುಡುಕಿದರೂ ಒರಿಜಿನಲ್ ಸಿಗಲಿಲ್ಲ.
           ಕೊನೆಗೆ 500 ರು. ದಂಡ ಕಟ್ಟಬೇಕಾಗುತ್ತದೆ ಎನ್ನಲು ಆರಂಭಿಸಿದ. ಸಂಜಯ ಟಿಸಿ ಬಳಿ ಮಾತಿಗೆ ನಿಂತ. ರೈಲ್ವೆ ರೂಲ್ಸು, ರೆಗ್ಯುಲೇಶನ್ನುಗಳನ್ನೆಲ್ಲ ಪಟಪಟನೆ ಮಾತನಾಡಿದ. ಹೀಗಿದ್ದಾಗಲೇ ಟಿಸಿ ಪ್ರಶಾಂತ ಭಾವನ ಬಳಿ ನೀವೇನು ಕೆಲಸ ಮಾಡುತ್ತಿದ್ದೀರಿ ಎಂದ. ಭಾವ ಕೃಷಿ ಎಂದು ಉತ್ತರಿಸಿದ. ಸಂಜಯನೂ ಕೃಷಿ ಮಾಡುತ್ತಿದ್ದೇನೆ ಎಂದ. ನನ್ನ ಬಳಿಯೂ ಕೇಳಿದ. ಕೊನೆಗೆ ನಾನು ಪತ್ರಕರ್ತ ಎಂದೆ. ಎಲ್ಲಿ ನಿನ್ನ ಕಾರ್ಡ್ ತೋರಿಸು ನೋಡೋಣ ಎಂದ. ಕಾರ್ಡ್ ನೋಡಿದವನೇ ಸ್ವಲ್ಪ ಅನುಮಾನ ಮಾಡಿದ. ಮೊದಲೇ ಹೇಳಿದ್ದರೆ ಆಗುತ್ತಿರಲಿಲ್ಲವಾ ಎಂದ. ನಾನು ಮಿಕಿ ಮಿಕಿ ನೋಡಿದೆ. ಇನ್ನೊಮ್ಮೆ ಬರುವಾಗ ಝೆರಾಕ್ಸ್ ಅಲ್ಲ. ಎಲ್ಲ ಒರಿಜಿನಲ್ ದಾಖಲೆಗಳನ್ನೇ ತನ್ನಿ ಎಂದು ಹೇಳಿ ಹೊರಟುಹೋದ.
           `ಮಾರಾಯಾ.. ನೀನು ಪತ್ರಕರ್ತ ಹೇಳಕಾಗಿತ್ತಿಲ್ಲೆ. ಟಿಸಿ ಎಂತಾ ಮಾಡ್ತ ನೋಡ್ಲಾಗಿತ್ತು..' ಎಂದು ಸಂಜಯ ಹೇಳಿದ. `ಸುಮ್ನೆ ಎಂತಾ 500 ರು. ಕೊಡ್ತಿದ್ರಾ ಮಾರಾಯಾ..' ಎಂದೆ. ಹೌದೆನ್ನಿಸಿರಬೇಕು ಸುಮ್ಮನಾದರು.
              ರೈಲಿನಲ್ಲಿ ಹೋಗುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಆಲೋಚನೆಯೊಂದು ಮೂಡಿತು. ಯಾವಾಗಲೂ ನಾವು ಜೊತೆಗೂಡಿದರೆ ಎಲ್ಲಾದರೂ ಹೋಗಬೇಕು ಎನ್ನಿಸಿದರೆ ತಕ್ಷಣಕ್ಕೆ ಹೊರಟುಬಿಡುತ್ತೇವೆ. ಸಜ್ಜನಘಡಕ್ಕೂ ಹೀಗೆಯೇ. ದಿಢೀರ್ ನಿರ್ಧಾರ ಮಾಡಿ ಹೊರಟಿದ್ದೇ. ರೈಲಿನಲ್ಲಿ ಹೋಗುವಾಗ ಪ್ರಶಾಂತ ಭಾವ ಇದ್ದಕ್ಕಿದ್ದಂತೆ `ಹೋಯ್.. ಉತ್ತರ ಭಾರತಕ್ಕೆ ಹೊರಟು ಬಿಡೋಣ್ವಾ..?' ಎಂದ. ನಾನು ಹಾಗೂ ಸಂಜಯ ಇಬ್ಬರೂ ಇಂತದ್ದೇ ಮನೋಭಾವದವರು. ಹೋ.. ಹೋಗೋಣ ಎಂದು ತಯಾರಾದೆವು. `ನೋಡೋಣ. ಮೊದಲು ಸಜ್ಜನಘಡಕ್ಕೆ ಹೋಗಿ ಆ ನಂತರ ಆಲೋಚನೆ ಮಾಡೋಣ..' ಎಂದ ಪ್ರಶಾಂತ ಭಾವ. ನಾವು ತಲೆಯಲ್ಲಾಡಿಸಿದೆವು.
                   ಬೆಳಗಾವಿ ತಲುಪುವ ವೇಳೆಗೆ ಸೂರ್ಯನೂ ಬಾನಂಚಿನಲ್ಲಿ ರಥವನ್ನು ಹೋಡಿ ಹೋಗಿದ್ದ. ಬೆಳಗಾವಿ ತಲುಪುವ ವೇಳೆ ರೈಲಿನಲ್ಲಿ ಸುಮಾರು ಜನವೋ ಜನ. ಅಲ್ಲಿಂದ ಮುಂದಕ್ಕೆ ರೈಲು ಚಲಿಸಿದಂತೆಲ್ಲ ನಿಧಾನವಾಗಿ ಕತ್ತಲು ಆವರಿಸಿತು. ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ಕ್ರಾಸ್ ಈ ಮುಂತಾದ ಪ್ರದೇಶಗಳನ್ನು ದಾಟಿದ ರೈಲು ಕೊನೆಗೊಮ್ಮೆ ಮಹಾರಾಷ್ಟ್ರಕ್ಕೆ ಕಾಲಿಟ್ಟಿತು. ಮಹಾರಾಷ್ಟ್ರಕ್ಕೆ ಬಂದಿದ್ದೇವೆ ಎನ್ನುವುದರ ಕುರಹಾಗಿ ನಮ್ಮ ಮೊಬೈಲ್ ರೋಮಿಂಗ್ ಏರಿಯಾದಲ್ಲಿದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿತ್ತು.
             ಅದೇ ಸಂದರ್ಭದಲ್ಲಿ ರಾತ್ರಿಯ ಊಟ ಮಾಡಬೇಕಿತ್ತು. ಪ್ರಶಾಂತ ಭಾವ ಇಡ್ಲಿಯನ್ನು ಕಟ್ಟಿಸಿಕೊಂಡು ಬಂದ. ಗಡದ್ದಾಗಿ ತಿಂದೆವು. ಮಲಗಿ ನಿದ್ರಿಸೋಣವೇ? ಎಂದುಕೊಂಡರೆ ನಿದ್ದೆ ಬರಲೊಲ್ಲದು. ಮರುದಿನ ಮುಂಬಯಿಯಲ್ಲಿ ಎಫ್.ಡಿ.ಎ ಎಕ್ಸಾಂ ಇದ್ದ ಕಾರಣ ಒಂದಷ್ಟು ಯುವಕರು ನಾವಿದ್ದಲ್ಲಿ ಬಂದು ಕುಳಿತರು. ಬಂದವರೇ ಹರಟೆಗೆ ಕುಳಿತರು.
                 ನಿಧಾನಕ್ಕೆ ನಮ್ಮನ್ನು ನಿದ್ದೆ ಆವರಿಸುತ್ತಿತ್ತು. ಆ ಹುಡುಗರೂ ಮರಾಠಿ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರಲ್ಲೊಬ್ಬನಿಗೆ ಅಲ್ಪ ಸ್ವಲ್ಪ ಕನ್ನಡ ಬರುತ್ತಿತ್ತು. ಅವರೊಂದಿಗೆ ಸಾಕಷ್ಟು ಸಮಯ ಹರಟೆ ಹೊಡೆದೆವು. ಕೊನೆಗೊಮ್ಮೆ ಸಾಂಗ್ಲಿ ಹಾಗೂ ಮಿರಜನ್ನು ದಾಟಿದ ರೈಲು ಮುಂದಕ್ಕೆ ಸಾಗಿತು. ರಾತ್ರಿಯಾಗಿ ಬಹಳ ಹೊತ್ತು ಸಂದಿತ್ತು. ಕೊನೆಗೂ ಒಮ್ಮೆ ನಮ್ಮ ನಿಗದಿತ ಗಮ್ಯ ಸಿಕ್ಕಿತು. ಮಧ್ಯರಾತ್ರಿ 12.10ರ ವೇಳೆಗೆ ನಾವು ಇಳಿಯಬೇಕಿದ್ದ ಸತಾರಾ ಹತ್ತಿರ ಬಂದಿತು. ಲಗುಬಗೆಯಿಂದ ಇಳಿದೆವು.
            ಇಳಿದವರು ಹೋಗುವುದೆಲ್ಲಿ? ಸತಾರಾ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಅಥವಾ ಮುಖ್ಯ ಪೇಟೆಗೆ ಅಜಮಾಸು 8-10 ಕಿಮಿ ದೂರವಿದೆ. ರಾತ್ರಿ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಯಾವುದಾದರೂ ಹೊಟೆಲಿಗೋ, ಲಾಡ್ಜಿಗೋ ಹೋಗಿ ಉಳಿಯೋಣ ಎಂದರೆ ಅದು ಸಾಧ್ಯವಿಲ್ಲದ ಮಾತು ಬಿಡಿ. ಕೊನೆಗೊಮ್ಮೆ ಅಲ್ಲಿಯೇ ಬಿಸ್ಸಿ ಬಿಸಿ ಕಾಫಿ ಕುಡಿದೆವು. ರೈಲ್ವೆ ನಿಲ್ದಾಣದಲ್ಲಿಯೇ ಮಲಗಿ ನಿದ್ರಿಸೋಣ ಎಂದುಕೊಂಡೆವು. ಪ್ರಶಾಂತ ಭಾವ ನಿಲ್ದಾಣದಲ್ಲಿಯೇ ಇದ್ದ ಪೊಲೀಸರ ಬಳಿ ಮಾತನಾಡಲು ಆರಂಭಿಸಿದ. ಪೊಲೀಸರು ಹೇಳಿದ ಪ್ರಕಾರ ಸಜ್ಜನಘಡ ಸತಾರಾದಿಂದ 18 ಕಿಮಿ ದೂರದಲ್ಲಿತ್ತು. ದಿನಕ್ಕೆ 3 ಬಸ್ಸುಗಳು ಹೋಗುತ್ತಿದ್ದವು. ಯಾವುದಾದರೂ ವಾಹನ ಮಾಡಿಕೊಂಡು ಹೋಗಬೇಕಿತ್ತು. ಅಲ್ಲದೇ ಸತಾರಾ ರೈಲ್ವೆ ನಿಲ್ದಾಣದಿಂದ ಸತಾರಾ ನಗರಕ್ಕೆ ಹೋಗಲು ಬೆಳಗಿನವರೆಗೆ ಯಾವುದೇ ವಾಹನ ಸೌಲಭ್ಯ ಇಲ್ಲ ಹಾಗೂ ರಾತ್ರಿ ಜಪ್ಪಯ್ಯ ಅಂದರೂ ಯಾವುದೇ ಹೊಟೆಲಿನವರು ಉಳಿಯಲು ರೂಮು ಕೊಡುವುದಿಲ್ಲ. ಆದ್ದರಿಂದ ರೈಲ್ವೆ ನಿಲ್ದಾಣದಲ್ಲಿಯೇ ಮಲಗಿಕೊಳ್ಳಿ ಎಂದರು.
          ನಿಲ್ದಾಣದಲ್ಲಿದ್ದ ಎರಡು ಸೀಟಿನ ಮೇಲೆ ನಾನು, ಸಂಜಯ ಹಾಗೂ ಪ್ರಶಾಂತ ಭಾವ ಅಡ್ಡಾದೆವು. ಪಕ್ಕದಲ್ಲಿಯೇ ದೊಡ್ಡದೊಂದು ಮರವಿತ್ತು. ಅದರ ತುಂಬಾ ಹಕ್ಕಿಗಳಿದ್ದವು. ರಪ್ಪನೆ, ಪಿಚ್ಚನೆ ಹಿಕ್ಕೆಯನ್ನು ಹಾಕುತ್ತಿದ್ದವು. ಅದು ನಮ್ಮ ಮುಖ ಹಾಗೂ ಮೈಮೇಲೆ ಬೀಳುತ್ತಿತ್ತು. ಅದನ್ನು ತಪ್ಪಿಸಿಕೊಳ್ಳಬೇಕು ಎಂದು ಮುಖಕ್ಕೆ ಟವೆಲ್ ಹೊದ್ದುಕೊಂಡು ಮಲಗಿದೆವು. ಸ್ವಲ್ಪ ಸಮಯದಲ್ಲಿ ಅಲ್ಲಿಯೇ ಇದ್ದ ಪೊಲೀಸರು ಮತ್ತೆ ನಮ್ಮನ್ನು ಎಬ್ಬಿಸಿದರು. ಎಬ್ಬಿಸಿದವರೇ ಪಕ್ಕದಲ್ಲಿದ್ದ ಪ್ರವಾಸಿ ಬಂಗಲೆ ತೋರಿಸಿ ಅಲ್ಲಿ ಹೋಗಿ ಮಲಗಿಕೊಳ್ಳಿ, ಯಾವುದೇ ತೊಂದರೆ ಇಲ್ಲ ಎಂದರು.
            ಪ್ರವಾಸಿ ಬಂಗಲೆಯೆಂದರೆ ಮಲಗಲಿಕ್ಕೆ ಬಹಳ ಅವಕಾಶ ಇರುತ್ತದಲ್ಲ ಎಂದುಕೊಂಡು ಖುಷಿಯಿಂದ ಹೋದವರಿಗೆ ನಿರಾಸೆ ಕಾದಿತ್ತು. ಅಲ್ಲೇನಿದೆ ಮಣ್ಣು. ದೊಡ್ಡದೊಂದು ರೂಮು ಬಿಟ್ಟರೆ ಇನ್ನೇನೋ ಇಲ್ಲ. ಪಕ್ಕದಲ್ಲಿ ಎರಡು ಬಾಂಕುಗಳಿದ್ದವು. ಬಾಂಕಿನ ಮೇಲಿನ ಭಾಗದಲ್ಲಿ ಪ್ರಶಾಂತ, ಮಧ್ಯ ಭಾಗದಲ್ಲಿ ಸಂಜಯ ಹಾಗೂ ಕೆಳಭಾಗದಲ್ಲಿ ನಾನು ಮಲಗುವುದೆಂದು ತೀರ್ಮಾನವಾಯಿತು. ಆಗಲೇ 1.30 ದಾಟಿ 2 ಗಂಟೆಯತ್ತ ಗಡಿಯಾರ ಚಲಿಸುತ್ತಿತ್ತು. ಸೊಳ್ಳೆ ಕಾಟ ಬೇರೆ. ಬಾಂಕಿನ ಮೇಲೆ ಬಿದ್ದುಕೊಂಡೆವು. ಪ್ರಶಾಂತ ಭಾವ ಹಾಗೂ ಸಂಜಯನಿಗೆ ನಿದ್ದೆ ಬಂದಿತ್ತೇನೋ. ನನಗೆ ಮಾತ್ರ ಏನು ಮಾಡಿದರೂ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ಬಾಂಕಿನ ಮೇಲೆ ಹೊರಳಾಡಿದೆ. ಸೊಳ್ಳೆಗಳು ಕೂಡ ಮೈಮೇಲೆ ದಾಳಿ ಮಾಡುತ್ತಿದ್ದೆವು.ಸ್ವಲ್ಪ ನಿದ್ದೆ ಜೊಂಪು ಬಂದಂತಾಗಿತ್ತು. ಪ್ರಶಾಂತಭಾವ ಎಬ್ಬಿಸಿದ್ದ. 4.30 ಆಗುತ್ತಿತ್ತು. ಮುಖ ತೊಳೆದ ಶಾಸ್ತ್ರ ಮಾಡಿದವರೇ ಸತಾರಾ ಬಸ್ ನಿಲ್ದಾಣಕ್ಕೆ ಹೋಗಬೇಕು ಎಂದುಕೊಂಡೆವು.
          5 ಗಂಟೆಯಿಂದ ವಾಹನ ಓಡಾಡಲು ಆರಂಭವಾಗುತ್ತದೆ ಎಂದು ಪೊಲೀಸ ಹೇಳಿದ್ದ ನೆನಪು. ರೈಲ್ವೆ ನಿಲ್ದಾಣದಿಂದ ಹೊರಗೆ ಬಂದು ನೋಡಿದರೆ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದರ ಕುರಿತು ಅಂತ-ಪಾರವೇ ಹರಿಯುತ್ತಿಲ್ಲ. ಕತ್ತಲೆಯಲ್ಲಿ ಒಂದು ದಾರಿಯಲ್ಲಿ ಹೋದೆವು. ಯಾಕೋ ಆ ದಾರಿ ಸರಿಯಲ್ಲ ಎನ್ನಿಸಿತು. ಮತ್ತೊಂದು ದಾರಿಯನ್ನು ಹಿಡಿದೆವು. ಆ ದಾರಿಯೂ ತಪ್ಪು ಎಂದೆನ್ನಿಸಿ ವಾಪಾಸು ಬಂದೆವು. ಕೊನೆಗೊಮ್ಮೆ ನಾನು ಮತ್ತೆ ಜಿಪಿಎಸ್ ಹಾಕಿ ನೋಡಿ ನಾವು ಹೋಗಬೇಕಿದ್ದ ದಾರಿಯನ್ನು ಹುಡುಕಿದೆ. ಮೂರ್ನಾಲ್ಕು ದಾರಿ ಕಾಣಿಸಿತು. ಮತ್ತೆ ಗೊಂದಲ. ಕೊನೆಗೆ ಯಾವುದೋ ಒಂದು ದಾರಿ ಕಾಣಿಸಿ, ಏನಾದರಾಗಲಿ ಇದರಲ್ಲಿಯೇ ಹೋಗೋಣ ಎಂದುಕೊಂಡು ಹೊರಟೆವು.
           1 ಕಿಮಿ ನಡೆದ ನಂತರ ನಮಗೆ ಸತಾರಾ-ಫಂಡರಾಪುರ ಹೈವೆ ಸಿಕ್ಕಿತು. ಎಲ್ಲಾದರೂ ಬಸ್ ನಿಲ್ದಾಣವನ್ನು ಹುಡುಕೋಣ ಎಂದುಕೊಂಡವರಿಗೆ ಪಕ್ಕದಲ್ಲಿಯೇ ಇದ್ದ ಬಸ್ ನಿಲ್ದಾಣ ಕಾಣಿಸಿತು. ಅಲ್ಲಿಗೆ ಹೋದರೆ ಆರೆಂಟು ಜನ ಆಗಲೇ ಸೇರಿದ್ದರು. ಒಂದೆರಡು ಆಟೋಗಳು ಹಾದು ಹೋದವು. ನಿಲ್ಲಿಸಲಿಲ್ಲ. ಕೊನೆಗೊಂದು ಆಟೋ ಬಂದಿತು. ಬರುವಾಗಲೇ ಅರ್ಧ ತುಂಬಿದ್ದ ಆಟೋದ ಬಳಿ ನಾವು ಹೋದೆವು. ನಿಲ್ಲಿಸಿದ ಪುಣ್ಯಾತ್ಮ, ನಾವು ಮೂವರು ಬರುತ್ತೇವೆ ಎಂದೆವು. ಜಾಗ ಸಾಲುತ್ತಿಲ್ಲ ಎನ್ನಿಸಿತು. ಕೊನೆಗೆ ಹೇಗು ಹೇಗೋ ಗುದ್ಯಾಡಿ ಆಟೋ ಹತ್ತಿದ್ದಾಯಿತು. ಓಲಾಡುತ್ತ ಸತಾರಾ ನಗರಿಯತ್ತ ಆಟೋ ಸಾಗಿತು.

(ಮುಂದುವರಿಯುತ್ತದೆ)

No comments:

Post a Comment