Sunday, August 7, 2022

ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ (ನಾನು ನೋಡಿದ ಚಿತ್ರಗಳು -6)

 ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳನ್ನು ನಾನು ನೋಡಿದ್ದರೂ, ಕನ್ನಡ ಭಾಹೆಯ ಸಿನಿಮಾ ನೋಡಿದ್ದು ಒಂದೇ ಒಂದು. ಅದೇ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ. ಈ ಸಿನಿಮಾ ಬಿಡುಗಡೆಯಾದ ವೇಳೆ ನಾನು ಶಿರಸಿಯ ನಟರಾಜ ಟಾಕೀಸಿನಲ್ಲಿ ಇದನ್ನು ನೋಡಬೇಕು ಎಂದುಕೊಂಡಿದ್ದೆ. ಕೊನೆಗೂ ಆ ಟಾಕೀಸಿಗೆ ಈ ಸಿನಿಮಾ ಬರಲೇ ಇಲ್ಲ. ಕೊನೆಗೆ OTT ಯಲ್ಲಿ ನೋಡಿದ್ದಾಯ್ತು.

ವಿನಾಯಕ ಕೋಡ್ಸರ ಅವರ ಹಲವು ಪ್ರಯತ್ನಗಳಲ್ಲಿ ಇದೂ ಒಂದು. ಮೊದಲ ಬಾರಿಗೆ ಸಿನಿಮಾ ನಿರ್ದೇಶನದ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ. ಸಿನಿಮಾ ಹಲವು ವಿಷಯಗಳಲ್ಲಿ ಆಪ್ತ ಎನ್ನಿಸಿತು.
2300 ಈಗಿನ ದಿನಮಾನದಲ್ಲಿ ತೀರಾ ದೊಡ್ಡ ಮೊತ್ತವೇನಲ್ಲ. ಕೇವಲ 2300 ರೂಪಾಯಿಗೆ ನಾಯಕ ಅಷ್ಟೆಲ್ಲ ಒದ್ದಾಡುತ್ತಾನಾ ಎನ್ನುವ ಭಾವನೆ ನನ್ನ ಮನಸ್ಸಿನಲ್ಲಿ ಕಾದಿದ್ದು ಸುಳ್ಳಲ್ಲ. ಕೇವಲ 2300 ರೂಪಾಯಿಗಾಗಿ ನಾಯಕ ಹೋರಾಟ ನಡೆಸುವ ಕಥೆಯನ್ನು ನಿರ್ದೇಶಕರು ಮಾಡಿದ್ದಾರೆ, ಲಕ್ಷ, ಕೋಟಿಗಳಲ್ಲಿ ಹಣ ಲೆಖ್ಖ ಮಾಡುವ ದಿನಮಾನದಲ್ಲಿ ನಿರ್ದೇಶಕರು ಸಾವಿರ ರೂಪಾಯಿಗಾಗಿ ಹೋರಾಡುವ ಕಥೆ ಮಾಡಿದ್ದೂ ಸರಿಯಲ್ಲ ಎನ್ನುವ ಭಾವನೆ ಸಿನಿಮಾ ನೋಡುವಾಗ ನನಗೆ ಅನ್ನಿಸಿದ್ದು ಸುಳ್ಳಲ್ಲ. ಆದರೆ ಸಿನಿಮಾ ಮುಂದುವರಿದಂತೆಲ್ಲ ಈ ಭಾವನೆಗಳು ಬದಲಾದವು.
ನನ್ನ ಪರಿಚಯದ ಗೆಳೆಯನೊಬ್ಬ ಸೈಬರ್ ಜಾಲಕ್ಕೆ ಸಿಲುಕಿ ಅಪಾರ ಹಣ ಕಳೆದುಕೊಂಡಿದ್ದ. ಆ ವೇಳೆ ಅನೇಕರು ಸೈಬರ್ ಜಾಲದಲ್ಲಿ ಸಿಲುಕಿ ಕಳೆದುಕೊಂಡ ಹಣ ಯಾವತ್ತೂ ಮರಳಿ ಬರುವುದಿಲ್ಲ ಎಂದಿದ್ದರಂತೆ. ಆದರೆ ಆ ಗೆಳೆಯ ಪೊಲೀಸ್ ಕಂಪ್ಲೇಂಟ್ ಕೊಟ್ಟು, ನ್ಯಾಯಾಲಯದ ಮೆಟ್ಟಿಲು ಏರಿ, ಹಲವು ತಿಂಗಳುಗಳ ಕಾಲ ಪೊಲೀಸ್ ಸ್ಟೇಷನ್ ಹಾಗೂ ಬ್ಯಾಂಕ್ ಮೆಟ್ಟಿಲು ಸವೆಸಿ ಕೊನೆಗೂ ಆ ಹಣವನ್ನು ಖದೀಮರಿಂದ ವಾಪಾಸ್ ಕಕ್ಕಿಸುವಲ್ಲಿ ಯಶಸ್ವಿಯಾಗಿದ್ದ. ಈ ಸಿನಿಮಾ ನೋಡಿದ ತಕ್ಷಣ ಆ ಗೆಳೆಯನ ಬಳಿ, `ಇದು ನಿನ್ನದೇ ಕಥೆ' ಎಂದಿದ್ದೆ.
ಮಲೆನಾಡು, ಶರಾವತಿ ನದಿ, ಅಡಿಕೆ ಕೊಯ್ಲು, ಹವ್ಯಕ ಸಂಸ್ಕೃತಿ ಹೀಗೆ ಹಲವು ವಿಷಯಗಳಲ್ಲಿ ಸಿನಿಮಾ ಬಹಳ ಆಪ್ತವಾಯಿತು. ನನ್ನ ಇಷ್ಟದ ನಟರಲ್ಲಿ ಒಬ್ಬನಾದ ದಿಗಂತ್ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾನೆ. ಐಂದ್ರಿತಾ ಕೂಡ ಸೊಗಸಾಗಿ ನಟಿಸಿದ್ದಾಳೆ. ನಮ್ಮ ನಡುವೆಯೇ ಇದ್ದು, ಆಗಾಗ ಭೇಟಿಯಾಗುವ ಗೋಕರ್ಣ ಪುರಾಣದ ರೂವಾರಿ ಎಂ. ಎ. ಹೆಗ್ದೆಯವರದ್ದು ಅಚ್ಚರಿಯ ನಟನೆ. ಹಿತ್ಲಕೈ ಗಣಪತಿ ಭಟ್ಟರು, ವಿದ್ಯಾಮೂರ್ತಿ, ರಂಜಿನಿ ರಾಘವನ್, ಬಾಳೇಸರ ವಿನಾಯಕ ಹೀಗೆ ಎಲ್ಲರೂ ಲೀಲಾಜಾಲವಾಗಿ ನಟಿಸಿ ನೋಡುಗರನ್ನು ಖುಷಿ ಪಡಿಸುತ್ತಾರೆ.
ವಿನಾಯಕ ಕೋಡ್ಸರ ಅವರ ಮೊದಲ ಸಿನಿಮಾ ಇದಾಗಿರುವ ಕಾರಣ ಸಿನಿಮಾದಲ್ಲಿ ಇರುವ ಕೆಲವು ಚಿಕ್ಕಪುಟ್ಟ ಲೋಪ ದೋಷಗಳಿಗೆ ಮಾಫಿ. ಬೇರೆ ರೀತಿಯ ಮಾತು, ಸಂಸ್ಕೃತಿ, ಆಚರಣೆ, ನಡೆ ನುಡಿಯನ್ನು ಹೊಂದಿರುವ ಹವ್ಯಕರ ಬದುಕನ್ನು ಬಹಳ ಚನ್ನಾಗಿ ಚಿತ್ರಿಸಿದ್ದಾರೆ. ಮಲೆನಾಡಿಗೆ ಬಹಳಷ್ಟು ಬಣ್ಣ ತುಂಬಿದ್ದಾರೆ. ಇವರ ಮುಂದಿನ ಚಿತ್ರ ಯಾವುದಿರಬಹುದು? ಮಲೆನಾಡಿನ ಆಚೆಗಿನ ಚಿತ್ರವನ್ನು ಮಾಡಬಹುದೇ ಎನ್ನುವ ಕುತೂಹಲ ಇದೆ.
ನಮ್ಮೂರ ಮಂದಾರ ಹೂವೆ ಸಿನಿಮಾದ ನಂತರ ಮತ್ತೊಮ್ಮೆ ಈ ಚಿತ್ರ ಹವ್ಯಕರ ಸಂಸ್ಕೃತಿ ಅನಾವರಣ ಮಾಡಿದೆ ಅನ್ನುವುದನ್ನು ಹೆಮ್ಮೆಯಿಂದ ಹೇಳಬಹುದು. ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದೆ. ಇನ್ನೂ ನೋಡಿಲ್ಲ ಅಂದ್ರೆ ತಪ್ಪದೆ ನೋಡಿ.

Friday, July 16, 2021

ಇರುವುದೆಲ್ಲವ ಬಿಟ್ಟು... (ಕಥಾ ಸರಣಿ ಭಾಗ-5)

(2014 ರಲ್ಲಿ ಬರೆದಿದ್ದ, ವಾಣಿ-ವಿನಾಯಕರ ಪ್ರೇಮ ಕಥೆಯ ಮುಂದುವರಿದ ಭಾಗ.. )


 `ವಾಣಿ..ತಮ್ಮಂಗೆ ಉಪನಯನ ಮಾಡನ..' ಎಂದು ಸುಧೀಂದ್ರ ಹೇಳಿದ್ದಕ್ಕೆ ಸುಮ್ಮನೆ ತಲೆ ಅಲ್ಲಾಡಿಸಿ ಹೂಂ ಅಂದಿದ್ದಳು ವಾಣಿ.

ಅದಾಗಿ ಕೆಲವೇ ದಿನಗಳಲ್ಲಿ ಸುಧೀಂದ್ರ ಎಲ್ಲ ತಯಾರಿಗಳನ್ನೂ ಆರಂಭಿಸಿದ್ದ. ಉಪನಯನದ ದಿನಾಂಕವನ್ನೂ ತನ್ನ ಪುರೋಹಿತ ಭಟ್ಟರ ಬಳಿ ಕೇಳಿಸಿಕೊಂಡು ಬಂದಿದ್ದಲ್ಲದೇ ಉಪನಯನದ ಕಾರ್ಡನ್ನೂ ಮುದ್ರಿಸಿಯಾಗಿತ್ತು.

`ನಿನ್ನ ಬಳಗದವರನ್ನೂ ಉಪನಯನಕ್ಕೆ ಕರೆಯಲೆ ಶುರು ಮಾಡಿದ್ಯಾ..?' ಎಂದು ಸುಧೀಂದ್ರ ಕೇಳಿಯೂ ಆಗಿತ್ತು. ಆಗ ವಾಣಿಗೆ ಮೊದಲು ನೆನಪಾಗಿದ್ದೇ ವಿನಾಯಕ.

ಸುಧೀಂದ್ರನ ಜೊತೆಗೆ ಮದುವೆಯಾಗಿ ಮಗನೂ ಹುಟ್ಟಿ ಇದೀಗ ಉಪನಯನದ ಸಮಯ ಬರುವ ವೇಳೆಗೆ ಜಗತ್ತು ಅದೆಷ್ಟೋ ಬದಲಾವಣೆಯನ್ನು ಹೊಂದಿತ್ತು. ಜಗತ್ತಿನ ಓಟಕ್ಕೆ ತಕ್ಕಂತೆ ಶಿರಸಿಯೂ ಕೂಡ ಆಧುನಿಕತೆಯ ಜಾಲದೊಳಕ್ಕೆ ಸಿಲುಕಿಯಾಗಿತ್ತು. ಹಳೆಯ ಹಂಚಿನ ಮನೆಗಳೆಲ್ಲ ಸಿಮೆಂಟಿನ ಕಟ್ಟಡಗಳಾಗಿ ಬದಲಾಗಿದ್ದವು. ಎಲ್ಲ ಕಟ್ಟಡಗಳಿಗೂ ಕಪ್ಪು ಬಣ್ಣದ, ಬಿಸಿಲು ನಿರೋಧಕ ಗಾಜುಗಳ ಅಳವಡಿಕೆಯಾಗಿತ್ತು. ಎರಡು ಮಹಡಿಯ ಮನೆಗಳ ಬದಲಾಗಿ ನಾಲ್ಕು-ಐದು ಮಹಡಿಗಳ ಕಟ್ಟಡಗಳು ತಲೆ ಎತ್ತಿ, ಗಗನದ ಕಡೆಗೆ ಮುಖ ಮಾಡಿದ್ದವು.

ತಾಸಿಗೆ ಒಂದು ಬಸ್ಸು ಓಡಾಡುತ್ತಿದ್ದ ಕಡೆಗಳಲ್ಲೆಲ್ಲ ಐದು-ಆರು ಬಸ್ಸುಗಳು ಓಡಾಡತೊಡಗಿತ್ತು. ಅಷ್ಟೇ ಅಲ್ಲದೇ ಮನೆ ಮನೆಗೊಂದು ಬೈಕು-ಕಾರು ಸವರ್ೇಸಾಮಾನ್ಯ ಎನ್ನುವಂತಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಮಲೆನಾಡು ಇನ್ನೊಂದು ಬಹುದೊಡ್ಡ ಬದಲಾವಣೆಗೆ ಸಾಕ್ಷಿಯಾಗಿತ್ತು.

ಮಲೆನಾಡಿನ ಮನೆ-ಮನಗಳನ್ನು ಬೆಸೆದಿದ್ದ ಅಂಚೆ ಇದೀಗ ಬಹುಜನರ ನಿರ್ಲಕ್ಷ್ಯಕ್ಕೆ ಕಾರಣವಾಗಿತ್ತು. ಪತ್ರ ಸಂಸ್ಕೃತಿಯನ್ನು ಹುಟ್ಟಹಾಕಿದ್ದ ಅಂಚೆಯ ಮೂಲಕ ಇದೀಗ ಯಾವುದೇ ಪತ್ರಗಳ ವಿನಿಮಯ ಇಲ್ಲ ಎನ್ನುವಂತಾಗಿತ್ತು. ವಾರಕ್ಕೊಮ್ಮೆಯೋ, ಹತ್ತು ದಿನಗಳಿಗೆ ಒಮ್ಮೆಯೋ ಮನೆ ಅಂಗಳಕ್ಕೆ ಬಂದು ಪತ್ರ ಬಂದಿದೆ ಎನ್ನುವ ಅಂಚೆಯ ಅಣ್ಣ ನಾಪತ್ತೆಯಾಗಿದ್ದ. ಎಲ್ಲೋ ಅಪರೂಪಕ್ಕೊಮ್ಮೆ ಸೊಸೈಟಿಯ ಅಢಾವೆ ಪತ್ರಿಕೆಯೋ, ಇನ್ಯಾವುದೋ ನೋಟಿಸು ಸರಬರಾಜಿಗೆ ಮಾತ್ರ ಅಂಚೆಯ ಅಣ್ಣ ಸೀಮಿತವಾಗಿದ್ದ. ಪತ್ರ ವಿನಿಮಯದ ಜಾಗದಲ್ಲೀಗ ಮೊಬೈಲ್ ಎಂಬ ಮಾಯಾ ರಾಕ್ಷಸ ಫೆವಿಕಾಲ್ ಅಂಟಿಸಿಕೊಂಡು ಕುಳಿತಿದ್ದ.

ಮಾಯಾವಿ ಮೊಬೈಲ್ ಕೂಡ ಮಲೆನಾಡಿನಲ್ಲಿ ಸುಮ್ಮನೆ ಬರಲಿಲ್ಲ. ಮೊದ ಮೊದಲ ದಿನಗಳಲ್ಲಿ ಬಿಸ್ಸೆನ್ನೆಲ್ ಮೂಲಕ ಬಂದವನು ಸಿಮ್ ಕಾಡರ್ಿಗಾಗಿ ಉದ್ದುದ್ದದ ಸರತಿ ಸಾಲಿನಲ್ಲಿ ಜನರನ್ನು ನಿಲ್ಲಿಸಿದ್ದ. ಶಿರಸಿ ನಗರದಲ್ಲಿ ಒಂದೋ ಎರಡೋ ಟವರ್ ಮೂಲಕ ಜನರನ್ನು ಬೆಸೆಯಲು ಆರಂಭಿಸಿದ ಮೊಬೈಲ್ ಮಾಯಾವು ನಂತರದ ದಿನಗಳಲ್ಲಿ ಹಳ್ಳಿ ಹಳ್ಳಿಗಳ ಕಡೆಗೂ ಮುಖ ಮಾಡಿದ್ದ. ಬಿಸ್ಸೆನ್ನೆಲ್ ಜೊತೆ ಜೊತೆಯಲ್ಲಿಯೇ ಖಾಸಗಿ ಮೊಬೈಲ್ ಕಂಪನಿಗಳೂ ಬಂದವು. ಅಗ್ಗದ ದೂರವಾಣಿ ಕರೆಗಳ ಜೊತೆಗೆ ಅಗ್ಗದ ಇಂಟರ್ನೆಟ್ ಕೂಡ ನೀಡಲು ಆರಂಭಿಸಿದ್ದವು. ಮೊಬೈಲ್ ಎನ್ನುವ ಮಾಯಾವುಯನ್ನು ಅಂಗೈನಲ್ಲಿ ಹಿಡಿದಿದ್ದ ಮಲೆನಾಡಿನ ಮಂದಿ ತಮ್ಮನ್ನು ತಾವು ಬದಲಾವಣೆಗೆ ಒಗ್ಗಿಸಿಕೊಂಡಿದ್ದರು. ಸದ್ದಿಲ್ಲದೆ ಪತ್ರ ಬರೆಯುವ ಸಂಸ್ಕೃತಿ ಮಾಯವಾಗಿತ್ತು.

ಪತ್ರವನ್ನು ಬರೆದು ಪೋಸ್ಟ್ ಮಾಡುತ್ತಿದ್ದ ದಿನಗಳೇ ಚನ್ನಾಗಿತ್ತಲ್ಲವಾ ಎಂದುಕೊಂಡಳು ವಾಣಿ. ಆ ದಿನಗಳಲ್ಲಿ ಪತ್ರ ಬರೆದು ಪೋಸ್ಟ್ ಮಾಡಿ, ಅದಕ್ಕೆ ತಿಂಗಳುಗಳ ವರೆಗೆ ಉತ್ತರ ಬರುವುದನ್ನೇ ನಿರೀಕ್ಷೆ ಮಾಡುತ್ತಿದ್ದ ದಿನಗಳು ಎಷ್ಟು ಹಸುರಾಗಿದ್ದವಲ್ಲವಾ ಎಂದುಕೊಂಡಳು ಅವಳು. ಪತ್ರ ಅದೆಷ್ಟೋ ಮನಸ್ಸುಗಳನ್ನು ಬೆಸೆದಿತ್ತು ಅಲ್ಲವೇ. ಪತ್ರ ಬರೆಯುತ್ತಿದ್ದ ದಿನಗಳ ಪ್ರೀತಿಗೆ ಅದಷ್ಟು ಪಾವಿತ್ರ್ಯತೆ ಇತ್ತು ಅಲ್ಲವೇ ಎಂದುಕೊಂಡಳು ವಾಣಿ. ಈಗಿನ ಪ್ರೀತಿ ಹಾಗೆ ಅಲ್ಲವೇ ಅಲ್ಲ. ಮೊಬೈಲ್ ನಲ್ಲಿ ಹುಟ್ಟಿ, ಚಾಟಿಂಗ್ ನಲ್ಲಿ ಬೆಳೆದು ಡೇಟಿಂಗ್ ನಲ್ಲಿ ಅಂತ್ಯವಾಗಿಬಿಡುತ್ತವೆ ಎಂದು ನಿಟ್ಟುಸಿರು ಬಿಟ್ಟಳು. ಈಗೆಲ್ಲ ಪ್ರೀತಿ ಹುಟ್ಟಿದ ತಾಸು ಘಳಿಗೆಯಲ್ಲಿಯೇ ಅದನ್ನು ನಿವೇದನೆ ಮಾಡಿಕೊಂಡು ಬಿಡುತ್ತಾರೆ. ಆದರೆ ಆಗ ಹಾಗಿರಲಿಲ್ಲ. ಒನ್ ವೇ ಲವ್ ಆಗಿದ್ದರೂ ಅದನ್ನು ಹೇಳಿಕೊಳ್ಳಲು ವರ್ಷಗಟ್ಟಲೆ ಕಾದಿದ್ದು, ಪರಿತಪಿಸಿದ್ದು ಇರುತ್ತದಲ್ಲ. ಹೇಳಿಕೊಳ್ಳಲಾಗದೆಯೇ ಪ್ರೀತಿ ಸತ್ತು ಹೋಗಿರುವ ನಿದರ್ಶನ ಇದೆಯಲ್ಲ ಎಂದುಕೊಂಡಳು. ತನ್ನದೂ ಹಾಗೆಯೇ ಆಗಿತ್ತಲ್ಲವಾ ಎಂದು ನಿಟ್ಟುಸಿರು ಬಿಟ್ಟಳು.

ಗಂಡ ಸುಧೀಂದ್ರ ತನಗಾಗಿಯೇ ಒಂದು ಮೊಬೈಲ್ ತಂದುಕೊಟ್ಟಿದ್ದ. ನಂತರ ತನ್ನನ್ನು ಕಾಲೇಜು ದಿನಗಳ ಗೆಳೆಯರ ವಾಟ್ಸಾಪ್ ಬಳಗಕ್ಕೆ ಗೆಳತಿಯರು ಸೇರಿಸಿದ್ದರು. ಅಲ್ಲೆಲ್ಲ ಆಕೆ ವಿನಾಯಕನನ್ನು ಹುಡುಕಿದ್ದಳು. ಆ ಗುಂಪಿನಲ್ಲಿ ವಿನಾಯಕ ಕಂಡಿದ್ದನಾದರೂ, ಒಂದೇ ಒಂದು ಮೆಸೆಜ್ ಮಾಡಿರಲಿಲ್ಲ. ವಿನಾಯಕ ಸಂಪೂರ್ಣವಾಗಿ ಬದಲಾಗಿರಬಹುದೇನೋ ಎಂದುಕೊಂಡಿದ್ದಳು ವಾಣಿ. ಮದುವೆಯಾಗಿ ಮಕ್ಕಳ ಜೊತೆ ಖುಷಿಯಾಗಿರುವ ವಿನಾಯಕನಿಗೆ ತನ್ನ ನೆನಪೂ ಇರಲಿಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದಳು.

   ಸುದೀರ್ಘ ಬಂಧ ಬೆಳೆಯುವುದಕ್ಕೆ ಸಣ್ಣ ನೆಪ ಸಾಕಾಗುತ್ತದೆ. ವಾಣಿಗೂ ಕೂಡ ಆಗಾಗ ವಿನಾಯಕನನ್ನು ಮಾತನಾಡಿಸಬೇಕು ಎನ್ನುವ ಆಸೆ ಆಗುತ್ತಲೇ ಇತ್ತು. ಆದರೆ ತಾನಾಗಿಯೇ ಮಾತನಾಡಿಸಿದರೆ ವಿನಾಯಕ ಮಾತನಾಡಬಹುದೇ? ಗೊತ್ತಿಲ್ಲದವರಂತೆ ನಡೆದುಕೊಳ್ಳಬಹುದೇ? ತಾನಾಗಿ ಮಾತನಾಡಿಸಿ ಅವಮಾನ ಮಾಡಿಸಿಕೊಳ್ಳಬೇಕೇ? ಸುಮ್ಮನೆ ಇದ್ದು ಬಿಡಲೇ? ಹೀಗೆ ಹಲವು ತಳಮಳ ತೊಳಲಾಟಗಳಲ್ಲಿ ಒದ್ದಾಡಿದ್ದಳು. ವಿನಾಯಕನನ್ನು ಮಾತನಾಡಿಸಲು ಇದೀಗ ನೆಪ ಒಂದು ಸಿಕ್ಕಂತಾಗಿತ್ತು.

   `ಹಾಯ್ ವಿನಾಯಕ, ಹೇಂಗಿದ್ದೆ? ನಾನು ವಾಣಿ..' ವಾಟ್ಸಾಪ್ ನಲ್ಲಿ ಹೀಗೆ ಮೆಸೇಜ್ ಮಾಡಿದ್ದ ವಾಣಿ, ತನ್ನ ಮೆಸೇಜಿಗೆ ಪ್ರತ್ಯುತ್ತರ ಬರುವ ವರೆಗೂ ಪಟ್ಟ ತಳಮಳ ಅಷ್ಟಿಷ್ಟಲ್ಲ. ನಿಮಿಷ ನಿಮಿಷಕ್ಕೂ ಮೊಬೈಲ್ ನೋಡುತ್ತಾ, ವಾಟ್ಸಾಪ್ ತೆರೆಯುತ್ತಾ, ಕುಂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದೆ ಒದ್ದಾಡಿದ್ದಳು. ಚಡಪಡಿಸಿದ್ದಳು. ಕೊನೆಗೂ ಒಮ್ಮೆ ಉತ್ತರ ಬಂದಿತ್ತು. `ಹಾಯ್ ವಾಣಿ? ಎಂತ ಆಶ್ಚರ್ಯ. ನಾನು ಚನ್ನಾಗಿದ್ದಿ. ನೀ ಹೇಂಗಿದ್ದೆ?' ವಿನಾಯಕ ಉತ್ತರಿಸಿದ್ದ. ವಾಣಿಗೆ ಆಗ ಒಮ್ಮೆ ಸ್ವರ್ಗವೇ ಅಂಗೈಗೆ ಸಿಕ್ಕಿದೆಯೋ ಅನ್ನಿಸಿತ್ತು. ವಿನಾಯಕ ನನ್ನ ಮರೆತಿಲ್ಲ ಎಂದು ಖುಷಿ ಪಟ್ಟಳು ವಾಣಿ.

ಉಭಯ ಕುಶಲೋಪರಿ ಸಾಂಪ್ರತ ನಡೆದ ಬಳಿಕ ವಾಣಿ ತನ್ನ ಮಗನ ಉಪನಯನಕ್ಕಾಗಿ ವಿನಾಯಕನ್ನು ಕರೆದಳು. ಅದಕ್ಕೆ ವಿನಾಯಕ ಬರುತ್ತೇನೆ ಎಂದೂ ಹೇಳಿದ. ಈ ಎಲ್ಲ ಮಾತುಗಳ ನಂತರ ನಡೆದ ಕ್ಷಣಕಾಲದ ನಿಶ್ಯಬ್ಧ ಅದೆಷ್ಟೋ ಪ್ರಶ್ನೆಗಳನ್ನು ಕೇಳಿತು. ಅದೆಷ್ಟೋ ಉತ್ತರಗಳನ್ನೂ ಹೇಳಿತು.

      ಕಾಲೇಜು ಮುಗಿದ ನಂತರ ನಾನು ಒಮ್ಮೆ ಧೈರ್ಯ ಮಾಡಿ ವಿನಾಯಕನ ಬಳಿ ಹೇಳಿ ಬಿಡಬೇಕಿತ್ತು ಎಂದುಕೊಂಡಳು ವಾಣಿ. ಛೆ ತಾನೇ ಚೂರೇ ಚೂರು ಧೈರ್ಯ ಮಾಡಿದ್ದರೆ ವಿನಾಯಕ ನನ್ನವನಾಗುತ್ತಿದ್ದನಲ್ಲ ಎಂದುಕೊಂಡಳು. ಮರೆತ ವಿನಾಯಕನನ್ನು, ವಿನಾಯಕನ ಜೊತೆಗಿನ ಸಾಂಗತ್ಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡಿದ್ದಳು ವಾಣಿ.

ಇತ್ತ ವಿನಾಯಕನ ಮನಸ್ಸಿನಲ್ಲಿ ಕೂಡ ತರಂಗಗಳೆದ್ದಿತ್ತು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎನ್ನುವ ಹಾಗೆ ಆಗಿತ್ತು.


(ಮುಂದುವರಿಯುತ್ತದೆ)

Sunday, May 3, 2020

ಅಂ-ಕಣ - 12

ಇಲ್ಲೊಬ್ಬಳು
ರಾತ್ರಿ ನನಗೆ
ಭಯವೇ ಆಗೋಲ್ಲ
ಎನ್ನುತ್ತಿದ್ದಾಳೆ!
ಹಗಲಲ್ಲಿ
ಬೆಚ್ಚಿ ಬೀಳುತ್ತಾಳೆ!


-------------


(2013 ರಲ್ಲಿ ಬರೆದಿದ್ದು)

ನಿನ್ನೆಯಿಂದ ಮನಸ್ಸು ಕಲ್ಲವಿಲವಾಗಿದೆ...
ಏನು ಮಾಡಬೇಕು ಏನು ಮಾಡಬಾರದು ಎನ್ನುವ ವಿವೇಚನೆ...

ಎಲೆಕ್ಷನ್ ಬಿಸಿಯ ನಡುವೆಯೂ ಮನಸ್ಸು ಮರುಗುತ್ತಿದೆ....
ಪಾಕಿಸ್ತಾನದ ಜೈಲಿನಲ್ಲಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಸರಬ್ ಜಿತ್ ಸಿಂಗ್
ಸಾವನ್ನಪ್ಪಿರುವ ಕುರಿತು.. ಮನಸ್ಸು ಕುದಿಯುತ್ತಿದೆ...

ಅದೆಷ್ಟು ಜನ ಹೀಗೆ ಸಾವನ್ನಪ್ಪಿದ್ದಾರೋ ಗೊತ್ತಿಲ್ಲ...
ಇನ್ನೆಷ್ಟು ಜನ ಸಾಯಬೇಕೋ...
ಸರಬ್ ಜಿತ್ ಅಂತಿಮವಾಗಿ ಹೀಗೆ ಸಾಯಲಿಕ್ಕಾಗಿಯೇ 22 ವರ್ಷ ಜೈಲಿನಲ್ಲಿ ಕಳೆದು ಬಿಟ್ಟನಲ್ಲ..?
ನಮ್ಮ ಸರ್ಕಾರ ಆನತನ್ನು ಬಿಡುಗಡೆ ಗೊಳಿಸುವ ಬಗ್ಗೆ 22 ವರ್ಷಗಳಿಂದ ಬಾಯಿ ಮಾತಿನಲ್ಲಿಯೇ ಕಾಲ ಕಳೆಯಿತೆ..?
ಒಬ್ಬ ಸೈನಿಕ ತನ್ನ ನಾಡಿನವನು ಸತ್ತ, ಆತನನ್ನು ನೆರೆಯ ಪ್ಯಾಲಿಸ್ಟೈನ್ ದವರು ಕೊಂದರೆಂದರೆ ಸಾಕು.. ಪುಟ್ಟ ಇಸ್ರೇಲಿಗರು ಅಪ್ಪಟ ಸ್ವಾಭಿಮಾನಿಗಳು... ಅದಕ್ಕೆ ಪ್ರತಿಯಾಗಿ ಬಾಂಬು ದಾಳಿ ಮಾಡಿಯೋ., ರಾಕೆಟ್ಟು ಹಾರಿಸಿಯೋ 8-10 ಜನರನ್ನು ಕೊಂದು ಸೇಡಿ ತೀರಿಸಿಕೊಳ್ಳುತ್ತಾರೆ...
ಆದರೆ ನಾವ್ಯಾಕೆ ಹೀಗೆ..?

ಅಮಾಯಕನೋ.. ಅಲ್ಲವೋ... ಭಾರತೀಯ ಜನಸಾಮಾನ್ಯ.. ಸರಬ್ ಜೀತ್...
ನಿಜವಾಗಿಯೂ ಖೈದಿಗಳಿಂದ ಹಲ್ಲೆಗೊಳಗಾಗಿ ಸತ್ತ ಎನ್ನುವುದು ಖಂಡಿತ ಸುಳ್ಳು...
ಯಾವುದೋ ಅಧಿಕಾರಿ ಹಲ್ಲೆ ಮಾಡಿಯೇ ಕೊಂದಿರಬೇಕು... ಎಂದು ಮನಸ್ಸು ಶಂಕಿಸುತ್ತದೆ...
ಕಸಬ್, ಅಪ್ಝಲ್ ಗುರು ಹೀಗೆ ಉಗ್ರರನ್ನು ಕೊಂದಿದ್ದಕ್ಕೆ ಪ್ರತಿಯಾಗಿ ಸೇಡನ್ನು ತೀರಿಸಿಕೊಂಡಿರಲೂ ಬಹುದು..
ಆದರೆ ನಾವೇಕೆ ಸುಮ್ಮನಿದ್ದೇವೆ..?
ಪಾಕಿಸ್ತಾನದ ವಿರುದ್ಧ ಒಮ್ಮೆ ಗುಡುಗಿದರೆ ಸಾಕಿತ್ತು... ನಾಯಿ ಬುದ್ಧಿಯ ಪಾಕಿಸ್ತಾನ ಕುಂಯ್ ಗುಟ್ಟುತ್ತಿತ್ತು...
ನಮ್ಮ `ಮೌನ'ಮೋಹನ ಯಾಕೆ ಇನ್ನೂ ಮುರುಳಿ ಗಾನ ನುಡಿಸ್ತಾ ಇದ್ದಾರೆ ಅರ್ಥವಾಗುತ್ತಿಲ್ಲ...

`ಪಾಕಿಸ್ತಾನದ ಜೈಲಿನಲ್ಲಿ ಸರಬ್ ಜಿತ್ ಸಾವು.. ತಿಹಾರ್ ಜೈಲಿನಲ್ಲಿ ಪಾಕ್ ಖೈದಿಗಳಿಗೆ ಬಂದೋಬಸ್ತ್ ಎನ್ನುವ ಸುದ್ದಿಗಳು ಬರುತ್ತಿವೆ... ಮತ್ತೆ ಮನಸ್ಸು ಬೆಂಕಿಯ ಆಗರ...
ಇನ್ನೆಷ್ಟು ಹತ್ಯೆಯಾಗಬೇಕು ನಾವು ಎಚ್ಚೆತ್ತುಕೊಳ್ಳಲು..?
ಪಾಕಿಸ್ತಾನ ಕೊಲ್ಲುತ್ತಲೇ ಇರಬೇಕೇ..?
ನಾವು ಸಾಯುತ್ತಲೇ ಇರಬೇಕೆ..?

ಈ ನಡುವೆ `ನಮೋ' ಎಂದರೂ ನಾಯಕ ಬದಲಾಗುವ ಸೂಚನೆ ಸಿಗುತ್ತಿಲ್ಲ....
ಈಗಿರುವವರೆಲ್ಲ ಸತ್ತು ಮಲಗಿದ್ದಾರೆ...
ಉತ್ತರದ ಕಾಶ್ಮೀರದ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಿ ಡ್ರಾಗನ್ ಗಳು ನಮ್ಮ ನೆಲವನ್ನು ಚುನ್ ಚುನ್ ಕರ್ ಎನ್ನುವಂತೆ... ಕಿತ್ತು ಕೊಳ್ಳುತ್ತಿವೆ...
ಆದರೂ ನಾವು ಸುಮ್ಮನಿದ್ದೇವೆ...

ಇದು ಸಹನೆಯಾ..?
ಅಸಹಾಯಕತೆಯಾ..?
ಸೋಗಲಾಡಿತನವಾ..?
ಯಾರನ್ನೋ ಮೆಚ್ಚಿಸುವಂತಹ ಮಹಾನುಭಾವತನವಾ..?

ಏನನ್ನಬೇಕು..?
ಸತ್ತಮೇಲೆ ಭಾರತಕ್ಕೆ ಬಂದು ಮಣ್ಆಗುತ್ತಿರುವ ಸರ್ಬಜಿತ್ ಸಿಂಗ್ ಗೆ ಅಶ್ರುತರ್ಪಣ..
ಸೌಂಡು ಮಾಡದ ನಾಯಕರಿಗೆ ಧಿಕ್ಕಾರ...

---------------

ಎಲ್ಲ ಕೂಲಿ ಕಾರ್ಮಿಕರು ಅವರವರ ಊರುಗಳಿಗೆ ವಾಪಾಸಾಗುತ್ತಿದ್ದಾರೆ..!
ಬಾಂಗ್ಲಾದವರು....?


--------

ಸಂಭವಾಮಿ
ಯುಗೇ ಯುಗೇ...

ರಾಮಾಯಣ ಧಾರವಾಹಿಗೂ ಅನ್ವಯ ಆಗುತ್ತದೆ!

----------

ಅವಳ ಬಳಿ
ಕವಿಯಾಗು ಎಂದೇ
ಕವಿತೆಯಾಗುವ
ಕಷ್ಟ ನಂಗೆ ಬೇಡ,
ನನ್ನ ಆತ್ಮಕಥೆಯನ್ನು
ನೀನೆ ಬರೆದುಬಿಡು ಎಂದಳು!

Saturday, March 28, 2020

ಕತ್ತಲೆಕಾನು (ಕಥೆ ಭಾಗ- 3)

ನನಗೆ ಈಗ ನಿಜಕ್ಕೂ ಗಾಬರಿಯಾಯಿತು. ` ತಮಾಷೆ ಮಾಡಬೇಡಿ, ಹೇಳಿ, ಒಂದು ಲಾರಿ ಹೋಗಿರಬೇಕಲ್ಲ ಇದೆ ದಾರಿಯಾಗಿ..' ಎಂದೇ.
`ರೀ ನನಗೇನು ತಲೆ ಹಾಳಾಗಿದೆಯಾ. ಯಾವ ಲಾರಿನೂ ಇಲ್ಲ ಏನೂ ಇಲ್ಲ. ಹೋಗ್ರಿ ಸುಮ್ನೆ' ಎಂದ ಗಾರ್ಡ್. ನಾನು ನಿಧಾನವಾಗಿ ಮುಂದೆ ಹೋದೆ. ನನ್ನ ತಲೆಯಲ್ಲಿ ನೂರಾರು ಪ್ರಶ್ನೆಗಳು ತರಂಗಗಳಂತೆ ಎದ್ದು ಬಂದಿದ್ದವು.
ಮಾವಿನಗುಂಡಿಯಲ್ಲಿ ಒಂದು ಚಹಾ ಅಂಗಡಿ ಬಾಗಿಲು ಹಾಕುತ್ತಿತ್ತು. ಸೀದಾ ಅತ್ತ ಹೋಗಿ `ಒಂದು ಟಿ ಕೊಡಿ' ಎಂದೇ. ಆತ ನನ್ನನ್ನು ಒಮ್ಮೆ ದುರುಗುಟ್ಟಿಕೊಂಡು ನೋಡಿ, ಹ್ಮ್ ಎಂದು ಚಹಾ ತರಲು ಹೋದ.
ಅರೆ ನಾನು ಗೇರುಸೊಪ್ಪದಿಂದ ಆ ಲಾರಿಯ ಜೊತೆ ಬಂದಿದ್ದೇನಲ್ಲ. ಎಲ್ಲಿ ಹೋಗಲು ಸಾಧ್ಯ. ದಾರಿ ಮಧ್ಯದಲ್ಲಿ ಎಲ್ಲಾದರೂ ಕಳ್ಳ ನಟ ಹೊಡೆಯಲು ಅದು ಹೋಯಿತೇ? ಅಥವಾ ಬೇರೆ ಮಧ್ಯದಲ್ಲಿ ಯಾವುದಾದರು ಊರಿಗೆ ಹೋಯಿತೇ ಎಂಬ ಆಲೋಚನೆಗಳು ಬಂದವು. ಆದರೆ ಯಾರೇ ಆಗಿದ್ದರೂ ಕೂಡ ಅಂಕುಡೊಂಕಿನ ಹಾದಿಯಲ್ಲಿ ಅಷ್ಟೆಲ್ಲ ವೇಗವಾಗಿ ಗಡಿ ಓಡಿಸಲು ಸಾಧ್ಯವೇ ಇಲ್ಲ. ಇದರಲ್ಲಿ ಏನೋ ಇದೆ ಎಂದುಕೊಂಡೆ.
ನೋಡೋಣ ಈ ಚಹಾ ಅಂಗಡಿಯವನಿಗಾದರು ಗೊತ್ತಿರಬಹುದು, ಬರಲಿ ಅವ ಎಂದು ಸುಮ್ಮನಾದೆ. ಕೆಲ ಹೊತ್ತಿನ ನಂತರ ಹಬೆಯಾಡುತ್ತಿದ್ದ ಬಿಸಿ ಬಿಸಿ ಚಹಾ ಜೊತೆಗೆ ಬಂದ ಅವ. ಅವನ ಬಳಿ `ಹೊಯ್, ಈ ದಾರಿಯಲ್ಲಿ ಈಗಷ್ಟೇ ಯಾವುದಾದ್ರೂ ಲಾರಿ ಹೋಗಿದ್ದು ನೋಡಿದ್ರಾ' ಎಂದು ಕೇಳಿದೆ.
`ಲಾರಿಯಾ? ಯಾವ ಲಾರಿ? ಹೇಗಿದೆ ಬಣ್ಣ?' ಎಂದು ನನ್ನ ಬಳಿಯೇ ಮರು ಪ್ರಶ್ನೆ ಹಾಕಿದ. ಅದಕ್ಕೆ ನಾನು ಮೊದಲಿಂದ ನಡೆದ ಎಲ್ಲ ವಿಷಯ ಹೇಳಿದೆ.
ಅದಕ್ಕೆ ಕೊನೆಗೆ ಅವನು ಹೇಳಿದ ` ಹೊಯ್ ಮಾರಾಯ್ರೆ, ನಿಮ್ಮ ಅದೃಷ್ಟ ಚೊಲೋ ಇದೆ ಬಿಡಿ'ಎಂದ
ನಾನು ಗಾಬರಿಯಾಗಿ `ಯಾಕೆ ಎಂತ ಆಯಿತು?' ಎಂದೇ.
`ಅದು ಲಾರಿಯಲ್ಲ. ನೀವು ಬಂದಿದ್ದು ಲಾರಿಯ ಜೊತೆಗೂ ಅಲ್ಲ'
`ಮತ್ತೆ.. ಎಂತದ್ದು ಅದು?'
`ಅದು ಈ ಭಾಗದ ಭೂತ'
`ತಮಾಷೆ ಮಾಡಬೇಡಿ ಮಾರಾಯ್ರೆ.. ನಾನು ಆ ಲಾರಿಯ ಜೊತೆಗೆ ಬಂದಿದ್ದೆ, ಅದರ ಬೆಳಕು ಕಂಡಿದ್ದೇನೆ. ಆ ಲಾರಿ ಸೂಸುತ್ತಿದ್ದ ಹೊಗೆಗೆ ಮುಖ ಕೊಟ್ಟಿದ್ದೇನೆ. ಆ ಹೊಗೆಯ ಬಿಸಿ ಅನುಭವ ನನಗಾಗಿದೆ..' ಎಂದೇ.
`ಹ್ಮ್ಮ್,. ಈ ಥರ ಅನುಭವ ಹಲವರಿಗಾಗಿದೆ. ಬಹಳ ಜನರು ಇದೆ ರೀತಿ ಹೇಳಿದ್ದಾರೆ. ಆದರೆ ನಿಜಕ್ಕೂ ಅಂತಹ ಲಾರಿ ಇಲ್ಲವೇ ಇಲ್ಲ..' ಎಂದ.
ನಾನು ಬೆಪ್ಪಾಗಿ ನೋಡಲು ಆರಂಭಿಸಿದೆ.
`ಸುಮಾರು ವರ್ಷಗಳ ಹಿಂದೆ ಕತ್ತಲೆಕನು ಘಟ್ಟದಲ್ಲಿ ತಮಿಳುನಾಡಿನ ಲಾರಿಯೊಂದು ಉರುಳಿ ಶರಾವತಿ ಕಣಿಗೆಗೆ ಬಿದ್ದಿತ್ತು. ಆ ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕ್ಲೀನರ್ ಇಬ್ಬರೂ ಸಾವನ್ನಪ್ಪಿದ್ದರು. ಅವರ ಹೆಣ ಕೂಡ ಸಿಕ್ಕಿರಲಿಲ್ಲ. ಅಂದಿನಿಂದ ಈ ಲಾರಿ ಭೂತ ಹಲವರನ್ನು ಕಾಡುತ್ತಿದೆ ನೋಡಿ.' ಎಂದ.
` ಈ ಲಾರಿ ಹಲವರಿಗೆ ಸಿಕ್ಕಿದೆ. ಹಲವರನ್ನು ಹೆದರಿಸಿದೆ,. ಕಾಡಿದೆ. ಬೀಳಿಸಿದೆ. ಹಲವಾರು ಗಾಯಗೊಂಡಿದ್ದಾರೆ. ಹಲವಾರು ತೀವ್ರ ಜ್ವರದಿಂದ ಬಳಲಿದ್ದಾರೆ. ಹಲವಾರು ಮತಿಭ್ರಮಣೆಗೆ ಒಳಗಾಗಿದ್ದಾರೆ. ಅದರಲ್ಲಿ ಇಷ್ಟುಹೊತ್ತು ಸರಿಯಾಗಿ ಇದ್ದಿದ್ದು ಎಂದರೆ ನೀವೊಬ್ಬರೇ ಇರಬೇಕು ನೋಡಿ' ಎಂದ.
ತಕ್ಷಣ ನನಗೆ ಆ ಲಾರಿ, ಅದರ ಹೊಗೆಯ ಅನುಭವ, ಅದರಿಂದ ಕೇಳಿ ಬರುತ್ತಿದ್ದ ತಮಿಳು ಹಾಡು ಎಲ್ಲ ನೆನಪಾಯಿತು. ಅದು ಭೂತವಾಗಿತ್ತು ಎಂದು ಕೇಳಿದಾಗಿನಿಂದ ಬರಲು ಶುರುವಾಗಿದ್ದ ಬೆವರು ಇನ್ನಷ್ಟು ಧಾರಾಕಾರವಾಗಿತ್ತು.
ನಾನು ಚಹಾದ ಬಿಲ್ಲು ಕೊಡುವಂತೆ ನನ್ನ ಮುಂದೆ ನಿಂತಿದ್ದ ಹೋಟೆಲಿನವನ ಕಾಲಿನ ಕಡೆಗೆ ದೃಷ್ಟಿ ಹೋಯಿತು. ಏನೋ ಸರಿ ಇಲ್ಲ ಎನ್ನುವಂತೆ ಅನ್ನಿಸಿತು. ದಿಟ್ಟಿಸಿ ನೋಡಿದೆ. ಆತನ ಕಾಲು ನೋಡಿ ಒಮ್ಮೆ ಎದೆಯಲ್ಲಿ ಚಳುಕು ಶುರುವಾಯಿತು. ಆತನ ಕಾಲು ತಿರುಗಾಮುರುಗ ಇತ್ತು. ಅಂದರೆ ಈತನೂ ಭೂತನೇ? ಅಯ್ಯೋ ದೇವರೇ.. ಎಲ್ಲಿಗೆ ಬಂದೇನಪ್ಪಾ ನಾನು ಎಂದುಕೊಳ್ಳುತ್ತಿರುವಂತೆ ಮೈಯಲ್ಲಿ ನಡುಕ ಶುರುವಾಗಿತ್ತು. ಎದೆಯಲ್ಲಿ ಅದೇನೋ ನೋವು. `ಅಹ್...' ಎಂದೇ. ಅದೇ ನನ್ನ ಕೊನೆಯ ಶಬ್ಧವಾಗಿತ್ತು.

(ಮುಗಿಯಿತು)

Monday, December 30, 2019

ಕತ್ತಲೆಕಾನು (ಕಥೆ ಭಾಗ- 2)


'ಮತ್ತೆ.. ಇನ್ನೇನು..?' ನಾನು ಕುತೂಹಲದಿಂದ ಕೇಳಿದೆ.
'ಇದು ಕತ್ತಲೆಕಾನು.. ಈ ಪ್ರದೇಶದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಕತ್ತಲೆಕಾನು ಘಟ್ಟ ಹೆದರಿಸ್ತದೆ.. ಪ್ರಯಾಣಿಕರನ್ನ ಭೀತಿಗೆ ಒಡ್ಡುತ್ತವೆ. ಒಬ್ಬೊಬ್ಬರೇ ಹೋಗುವವರನ್ನ ಕತ್ತಲೆಕಾನಿನ ದೆವ್ವಗಳು ಅಡ್ಡಗಟ್ಟುತ್ತವೆ, ಕೈಹಿಡಿದು ಕಾಡಿನೊಳಕ್ಕೆ ಕರೆದೊಯ್ದುಬಿಡುತ್ತವೆ.. ಎಂಬ ಮಾತುಗಳಿವೆ..' ಎಂದರು..
'ಹ.. ಹ.. ನಾನು‌ ಇಂತದ್ದನ್ನ ನಂಬೋದಿಲ್ಲ ಬಿಡಿ..' ಎಂದೆ.
'ನಿಮಗೆ ಗೊತ್ತಿಲ್ಲ ಕತ್ತಲೆಕಾನಿನ ಕರಾಮತ್ತು. ಇಲ್ಲಿ ಬಹಳಷ್ಟು ವಿಚಿತ್ರ ಘಟನೆಗಳು ನಡೆದಿವೆ. ಯಾವುದೋ ಗಾಡಿಯವರು ಈ ಕಾರಣದಿಂದಲೇ ಬಿದ್ದು ಸತ್ತಿದ್ದೂ ಇದೆ. ಇನ್ನೂ ಹಲವರು ದೆವ್ವದ ಕಾಟದಿಂದ ಹೆದರಿ ವಾರಗಟ್ಟಲೆ ಕಾಲ ಚಳಿ ಜ್ವರದಿಂದ ಮಲಗಿದ್ದೂ ಇದೆ.. ಮತಿಭ್ರಮಣೆಗೆ ಒಳಗಾದವರೂ ಇದ್ದಾರೆ.. ಹೀಗಾಗಿ ಹೇಳ್ತಿದ್ದೇನೆ. ನಿಮ್ಮ ಒಳ್ಳೇದಕ್ಕೆ. ಸಾಧ್ಯವಾದಷ್ಟೂ ಈ ರಾತ್ರಿಯ ಪ್ರಯಾಣವನ್ನ ನಿಲ್ಲಿಸಿ.. ' ಎಂದರು.
'ನನಗೆ ಹೋಗಲೇಕು.. ಬಹಳ ಅನಿವಾರ್ಯತೆ ಇದೆ..' ಎಂದು ಅಲವತ್ತುಕೊಂಡೆ. ಕೊನೆಗೆ ಅವರೇ ಸಲಹೆ ನೀಡಿದರು, ' ಇವರೇ.., ನೀವು ಒಂದು ಕೆಲಸ ಮಾಡಿ ಈಗ ಹೋಗುವಾಗ ಒಬ್ಬರೇ ಹೋಗಬೇಡಿ. ಯಾರಾದರೂ ಸಿಗುತ್ತಾರೋ ನೋಡಿ. ಅದಿಲ್ಲವಾದರೆ ಯಾವುದಾದರೂ ಗಾಡಿ, ಬಸ್ಸು, ಲಾರಿ ಬಂದರೆ ಅದರ ಜತೆಗೇ ಹೋಗಿ. ಆವಾಗ ನೀವು ಒಬ್ಬಂಟಿಯಾಗಿ ಇರುವುದಿಲ್ಲ. ನಿಮ್ಮ ಜತೆ ಆ ವಾಹನ ಇರುವ ಕಾರಣ ಯಾವುದೇ ಆತಂಕವೂ ಇರುವುದಿಲ್ಲ.. ಸುರಳೀತವಾಗಿ ನೀವು ಸಾಗರ ತಲುಪಬಹುದು..' ಎಂದರು. ಅವರ ಸಲಹೆ ನನಗೆ ಒಪ್ಪಿಗೆಯಾಯಿತು. ಅವರಿಗೆ ಬಿಲ್ ಕೊಟ್ಟು, ರಸ್ತೆಗೆ ಬಂದು ಯಾವುದಾದರೂ ವಾಹನ ಬರಬಹುದು ಎಂದು ಕಾಯುತ್ತ ನಿಂತೆ. ಕೆಲ ಕಾಲ ಕಳೆದರೂ ಯಾವುದೇ ಗಾಡಿ ಬರಲಿಲ್ಲ.
ಕೊನೆಗೆ ಅದೆ ಹೊಟೆಲ್ ನ ಯಜಮಾನರು ಬಳಿ ಬಂದು ' ಒಂದು ಕೆಲಸ ಮಾಡಿ, ಇಲ್ಲಿಂದ ಸ್ವಲ್ಪ ದೂರ ಹೋದ ಮೇಲೆ ಗೇರುಸೊಪ್ಪಾ ಅಣೆಕಟ್ಟೆ ಕಾಣಿಸ್ತದೆ. ಅಲ್ಲಿಂದ ಸಾಗರ ಕಡೆಗೆ ವಾಹನಗಳು ಓಡಾಡುತ್ತಿರುತ್ತವೆ. ಅಲ್ಲಿಗೆ ಹೋದರೆ ನಿಮಗೆ ಅನುಕೂಲ ಆಗಬಹುದು ನೋಡಿ..' ಎಂದರು. ಅವರ ಸಲಹೆಯಂತೆ ನಾನು ಹೆದ್ದಾರಿಯಿಂದ ಗೇರುಸೊಪ್ಪಾ ಅಣೆಕಟ್ಟು ಕಾಣುವ ಸ್ಥಳದ ಕಡೆಗೆ ತೆರಳಿದೆ.
ಗೇರುಸೊಪ್ಪಾದಿಂದ ಅಣೆಕಟ್ಟೆಗೆ ಒಂದೆರಡು ಕಿಲೋಮೀಟರ್ ದೂರ. ನಾನು ಬಾಹುಬಲಿಯನ್ನೇರಿ ಅಲ್ಲಿಗೆ ತೆರಳಿದರೂ ಯಾವುದೇ ವಾಹನ ಬರಲಿಲ್ಲ. ಕೊನೆಗೆ ಗೇರುಸೊಪ್ಪೆ ಅಣೆಕಟ್ಟೆ ಎದುರು ಕೆಲ ಕಾಲ ನಿಂತೆ. ಆಗಲೂ ಯಾವುದೇ ವಾಹನ ಆ ರಸ್ತೆಗುಂಟ ಬರಲಿಲ್ಲ. ನನಗೋ ಸಮಯ ಸುಮ್ಮನೇ ಕಳೆದು ಹೋಗುತ್ತಿದೆಯಲ್ಲ ಎನ್ನಿಸಿದರೂ, ಆ ಹೊಟೆಲ್ ನ ಯಜಮಾನರು ಹೇಳಿದ ಮಾತುಗಳು ಕಿವಿಯಲ್ಲಿ ಗುಂಯೆನ್ನುತ್ತಿದ್ದವು.
ಕೊನೆಗೂ ಯಾವುದೇ ವಾಹನ ಬರಲಿಲ್ಲ. ನಾನು ಆದದ್ದಾಗಲಿ ಎಂದುಕೊಂಡು ಬಾಹುಬಲಿಯ ಕಿವಿ ಹಿಂಡಿ ನಿಧಾನವಾಗಿ ಮುಂದಕ್ಕೆ ಹೊರಟೆ.. ಕೆಲ ಹೊತ್ತಿನಲ್ಲಿಯೇ ಕತ್ತಲೆಕಾನು ಘಟ್ಟ ನನ್ನನ್ನು ಸ್ವಾಗತಿಸಿತು.
ಕಡುಗತ್ತಲೆಯ ನಡುವೆ ಏರು ಹಾದಿಯಲ್ಲಿ ನಾನು ನನ್ನ ಬಾಹುಬಲಿಯನ್ನೇರಿ ನಿಧಾನವಾಗಿ ಸಾಗುತ್ತಲೇ ಇದ್ದೆ. ರಸ್ತೆಯ ಇಕ್ಕೆಲಗಳಲ್ಲಿಯೂ ಇದ್ದ ದಟ್ಟ ಕಾಡು, ನೀರವ ಮೌನ ನನ್ನ ಮನದಾಳದಲ್ಲಿ ಭೀತಿಯ ಕಿರು ತೆರೆಯನ್ನು ಎಬ್ಬಿಸಿತು. ಆ ಮೂಲೆಯಲ್ಲಿ ಯಾವುದಾದರೂ ದೆವ್ವ ನನ್ನನ್ನ ಅಡ್ಡಗಟ್ಟಬಹುದಾ?, ಅದೋ ಆ ದೊಡ್ಡ ಮರದ ಪಕ್ಕದಿಂದ ಯಾವುದಾದರೂ ಕಾಳಿಂಗ ಸರ್ಪ ಧುತ್ತೆಂದು‌ ನನ್ನನ್ನು ತಡೆದು ನಿಲ್ಲಿಸಬಹುದಾ? ಅಗೋ ಅಲ್ಲಿ ಏನೋ ಬೆಳಕು ಕಂಡಂತಾಗುತ್ತದೆಯಲ್ಲ.. ಎಂದುಕೊಳ್ಳುತ್ತಲೇ ನಿಧಾನಕ್ಕೆ ಹೋಗುತ್ತಿದ್ದೆ. ರಸ್ತೆಯ ಪಕ್ಕದ ಮರಗಳ ಮೇಲೆ, ಬಳ್ಳಿಗಳ ಮೇಲೆ ಬಾಹುಬಲಿಯಿಂದ ಚಿಮ್ಮಿದ ಬೆಳಕು‌ ಬಿದ್ದು ತರಹೇವಾರಿ ಆಕೃತಿಯನ್ನು ಮೂಡಿಸುತ್ತಿತ್ತು. ಕಿರುಗಣ್ಣಿನಲ್ಲಿ, ವಾರೆಗಣ್ಣಿನಲ್ಲಿ ಅವನ್ನ ನೋಡುತ್ತ, ನೋಡಿಯೂ ನೋಡದಿದ್ದವನಂತೆ ನಟಿಸುತ್ತ ಮುಂದಕ್ಕೆ ಹೋದೆ.
ಕೆಲ ಹೊತ್ತಿನ ನಂತರ ನನ್ನ ಹಿಂಭಾಗದಲ್ಲಿ ದೊಡ್ಡ ಬೆಳಕು ಮೂಡಿದಂತಾಯಿತು. ಥಟ್ಟನೆ ಗಾಡಿಯ ಕನ್ನಡಿಯಲ್ಲಿ ಗಮನಿಸಿದಾಗ ಎರಡು ಬೃಹತ್ ಲೈಟುಗಳು ದೂರದಲ್ಲಿ ಬರುತ್ತಿದ್ದವು. ಯಾವುದೋ ವಾಹನ ಬಂತಿರಬೇಕು ಎಂದುಕೊಂಡು ನಾನು ಮತ್ತಷ್ಟು ನಿಧಾನವಾಗಿ ಸಾಗಿದೆ. ಭರ್ರನೆ ಬಂದ ಬೆಳಕು‌ ನನ್ನನ್ನು ದಾಟಿ ಮುಂದಕ್ಕೆ ಹೋಗುವ ವೇಳೆಗೆ ಅದೊಂದು ಮಿನಿ ಲಾರಿ ಎನ್ನುವುದು ನನ್ನ ಅರಿವಿಗೆ ಬಂದಿತು.
ಅಬ್ಬ ಅಂತೂ ನನಗೆ ಈ ಲಾರಿಯ ಜತೆಗೆ ಸಾಗುವ ಯೋಗ ಬಂತಲ್ಲ ಎಂದುಕೊಂಡೆ. ಲಾರಿಯ ಹಿಂಭಾಗದಲ್ಲಿಯೇ ಬೈಕನ್ನು ಓಡಿಸಿದೆ. ಕತ್ತಲೆಕಾನಿನ ಘಟ್ಟವನ್ನ ಏರಿದಂತೆಲ್ಲ ಚಳಿ ದಟ್ಟವಾಗತೊಡಗಿತು. ಅಲ್ಲಲ್ಲಿ ಮಂಜಿನ ತೆರೆಯೂ ಆವರಿಸತೊಡಗಿತು. ಚಳಿ ಹೆಚ್ಚಿದಂತೆಲ್ಲ ನಾನು ಲಾರಿಯ ಹತ್ತಿರ ಹತ್ತಿರಕ್ಕೆ ಹೋದೆ. ಲಾರಿಯಿಂದ ಬರುತ್ತಿದ್ದ ಹೊಗೆ ನನ್ನ‌ಮುಖಕ್ಕೆ ತಾಗುತ್ತಿತ್ತು. ತನ್ಮೂಲಕ ನನಗೆ ಚಳಿಯನ್ನು‌ ಕಡಿಮೆ ಮಾಡುತ್ತಿತ್ತು. ಲಾರಿಯ ಹಿಂಭಾಗದಲ್ಲಿಯೇ ಹೋದರೆ ಚಳಿ‌ ಕಡಿಮೆ ಎಂಬ ಸ್ವ ಅನುಭವ ಮತ್ತೊಮ್ಮೆ ದಟ್ಟವಾಯಿತು.
ಲಾರಿಯ ಹಿಂದು ಹಿಂದೆಯೇ ಹೋಗುತ್ತಿದ್ದರೂ ನನ್ನ ಕಣ್ಣು ಅಕ್ಕಪಕ್ಕದ ದಟ್ಟ ಕಾಡಿನ ಕಡೆಗೆ, ಶರಾವತಿಯ ಮೌನ ಕಣಿವೆಯ ಕಡೆಗೇ ಇತ್ತು. ಯಾವುದೋ ಕ್ಷಣದಲ್ಲಿ ರಸ್ತೆಗೆ ಅಡ್ಡ ಬರಬಹುದಾದ ದೊಡ್ಡ ಹೆಬ್ಬಾವನ್ನು ಎದುರಿಸಲು, ಎಂಟು, ಹತ್ತು ಅಡಿ ಉದ್ದದ‌ ಅಷ್ಟೇ ಎತ್ತರಕ್ಕೆ ನೆಟ್ಟಗೆ ನಿಲ್ಲಬಹುದಾದ ಕಾಳಿಂಗ ಸರ್ಪವನ್ನ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಆಲೋಚನೆಯೇ ಆವರಿಸಿತ್ತು. ಇಂತಹ ಎಷ್ಟು ಕಾಡಲ್ಲಿ ನಾನು ಓಡಾಡಿಲ್ಲ ಎಂಬ ಹುಂಭ ಧೈರ್ಯ ಮನದಲ್ಲಿ ಮೂಡಿದ ಕೆಲವೇ ಕ್ಷಣ ದಲ್ಲಿಯೇ ನನಗರಿವಿಲ್ಲದಂತೆಯೇ ಬಾಯಲ್ಲಿ ಓಂ ಭೂರ್ಭುವ ಸ್ವಃ.. ಎಂದು ಗಾಯತ್ರಿ ಮಂತ್ರದ ಪಠಣವೂ ನಡೆಯಿತು. ಗಾಯತ್ರಿ ಮಂತ್ರ ಪಠಣ ನನ್ನೊಳಗೆ ಅದೇನೋ ಶಕ್ತಿ ತುಂಬುತ್ತಿದೆ ಎಂಬ ಅರೆಘಳಿಗೆಯಲ್ಲಿಯೇ ಲಾರಿಯೊಳಗಿಂದ ಅದ್ಯಾವುದೋ ತಮಿಳು ಸಿನಿಮಾದ ಹಾಡು ಅಲೆ ಅಲೆಯಾಗಿ ಕೇಳಿ ಬಂತು. ನಾನು ದೆವ್ವ-ಭೂತ, ಕಾಳಿಂಗಗಳ ಭ್ರಮೆಯಿಂದ ಅರೆಘಳಿಗೆ ಹೊರಬಂದೆ.
ನಾನೇ ನಿಧಾನವಾಗಿ ಹೋಗುತ್ತಿದ್ದೇನೆಯೇ? ಅಥವಾ ಈ ದಾರಿಯೇ ದೀರ್ಘವಾಗುತ್ತಿದೆಯಾ ಎನ್ನುವ ಭಾವನೆ ನನ್ನಲ್ಲಿ ಮೂಡಿತು. ಕಡುಗತ್ತಲ ರಾತ್ರಿಯಲ್ಲಿ ದಟ್ಟ ಮಂಜಿನ ನಡುವೆ ದೊಡ್ಡದೊಂದು ಲಾರಿ, ಹಿಂದೊಂದು ಬೈಕ್ ಸಾಗುತ್ತಲೇ ಇತ್ತು. ಕೆಲವೇ ಕ್ಷಣದ ನಂತರ ಕತ್ತಲೆಕಾನಿನ ತಿರುವುಗಳೆಲ್ಲ ಮುಗಿದು ಮಲೆಮನೆಯ ಫಾಸಲೆ ಆರಂಭವಾಯಿತು. ಅಲ್ಲೊಂದು ಕಡೆ ಒಂದಷ್ಟು ಕಟ್ಟೆಗಳೂ, ಯಾವಾಗಲೋ ಪೂಜೆ ಮಾಡಿದ್ದರೋ ಎಂಬಂತಹ ಕುರುಹುಗಳೂ ಕಂಡವು. ಪೂಜೆ ಮಾಡಿದ್ದರೋ ಅಥವಾ ಕೋಳಿ, ಕುರಿಯನ್ನು ಬಲಿಕೊಟ್ಟಿದ್ದರೋ.. ಅದು ದೇವರೋ ಅಥವಾ ಚೌಡಿ, ಮಾಸ್ತಿಯಂತಹ ಗಣಗಳೋ ಗೊತ್ತಾಗಲಿಲ್ಲ. ನನ್ನ ದೃಷ್ಟಿ ಲಾರಿಯ ಕಡೆಗೇ ಇತ್ತು. ಒಮ್ಮೆ ಈ ಘಟ್ಟವನ್ನು ಏರಿ ಮುಗಿದರೆ ಸಾಕು ಎಂದುಕೊಂಡು ನೆಟ್ಟ ನೋಟದಿಂದ ಲಾರಿಯನ್ನು ಹಿಂಬಾಲಿಸುತ್ತಿದ್ದೆ.
ಇನ್ನೇನು ಘಟ್ಟ ಮುಗಿಯಬೇಕಷ್ಟೇ, ನೋಡ ನೋಡುತ್ತಿದ್ದಂತೆ ಲಾರಿ ವೇಗವನ್ನು ಪಡೆದುಕೊಂಡಿತು. ನನ್ನ ಬಾಹುಬಲಿಗೂ ಹಾಗೂ ಆ ಲಾರಿಗೂ ನಡುವೆ ಇದ್ದ ಅಂತರ ಹತ್ತು ಮೀಟರ್ ಆಯಿತು.. ಹತ್ತು ಇಪ್ಪತ್ತಾಯಿತು.. ಇಪ್ಪತ್ತು ಐವತ್ತಾಯಿತು.. ನಾನು ಬಾಹುಬಲಿಯ ವೇಗ ಹೆಚ್ಚಿಸಲು ಆಲೋಚಿಸುತ್ತಿದ್ದಂತೆಯೇ ಮತ್ತಷ್ಟು ವೇಗ ಪಡೆದುಕೊಂಡ ಲಾರಿ ರಸ್ತೆಯಲ್ಲಿ ಕಾಣದಂತಾಗಿ
ಮಂಜಿನ ತೆರೆಯಲ್ಲಿ ಕಳೆದು ಹೋಯಿತು. ನಾನು ತಬ್ಬಿಬ್ಬಾದೆನಾದರೂ ಸಾವರಿಸಿಕೊಂಡು ಬಾಹುಬಲಿಯ ವೇಗ ಹೆಚ್ಚಿಸಿದೆ. ನನ್ನ ಬೈಕ್ ಎಂಭತ್ತರ ಗಡಿ ದಾಟಿ ನೂರು ಕಿಲೋಮೀಟರ್ ವೇಗ ಪಡೆದುಕೊಂಡಿತು. ಆದರೂ ಆ ಲಾರಿ ನನಗೆ ಸಿಗದಂತಾಯಿತು.
ಲಾರಿಯ ಡ್ರೈವರನ್ಯಾರೋ ಪಳಗಿದವನೇ ಇರಬೇಕು. ಅಥವಾ ಈ ರಸ್ತೆಯಲ್ಲಿ ಪದೇ ಪದೆ ಓಡಾಡಿ ಗೊತ್ತಿರುವವನೇ ಇರಬೇಕು. ಇಂತಹ ಕತ್ತಲೆಯಲ್ಲಿ, ಮಂಜಿನ ಪರದೆಯ ನಡುವೆಯೂ ವೇಗವಾಗಿ, ನನಗೆ ಸಿಗದಂತೆ ಹೋಗಿರಬೇಕೆಂದರೆ ಆತನ ಡ್ರೈವಿಂಗ್ ಕೈಚಳಕ ಇನ್ನೆಷ್ಟು ಚನ್ನಾಗಿರಬೇಡ? ಎಂದುಕೊಂಡೆ.
ಐದಾರು ಕಿಲೋಮೀಟರ್ ಹಾದು ಬಂದರೂ ಲಾರಿ ಕಾಣಿಸಲಿಲ್ಲ. ಇನ್ನಷ್ಟು ಮುಂದೆ ಸಾಗಿದೆ. ಹತ್ತು-ಹದಿನೈದು ನಿಮಿಷದ ಪ್ರಯಾಣದ ನಂತರ ಇದ್ದಕ್ಕಿದ್ದಂತೆ ಒಂದು ಚೆಕ್ ಪೋಸ್ಟ್ ಕಾಣಿಸಿತು. ಬೈಕ್ ವೇಗ ತಗ್ಗಿಸಿದೆ. ನಾಕಾ ಬಂದಿ ಹಾಕಲಾಗಿತ್ತು. ಅಲ್ಲಲ್ಲಿ ಬೆಳಕುಗಳು, ಅಂಗಡಿಗಳ ದೀಪಗಳೂ ಕಾಣಿಸಿದವು. ಅಲ್ಲೇ ಇದ್ದ ಅರಣ್ಯ ಇಲಾಖೆ ಗಾರ್ಡ್ ಒಬ್ಬ ನನ್ನ ಗಾಡಿಯನ್ನು ನೋಡಿ ಅನುಮಾನ ಪಟ್ಟುಕೊಂಡನಾದರೂ ನಿಧಾನವಾಗಿ ಬಂದು ಚೆಕ್ ಪೋಸ್ಟ್ ಬಾಗಿಲು ತೆರೆಯಲು ಮುಂದಾದ.
ನಾನು ಸೀದಾ ಹೋಗಿ ಅವನ ಬಳಿ ನಿಂತು, 'ಹೋಯ್, ಈಗ ಇದೇ ದಾರಿಯಲ್ಲಿ ಒಂದು ಲಾರಿ ಹೋಯ್ತಾ?' ಎಂದು ಕೇಳಿದೆ.
ಆತ ಮತ್ತೊಮ್ಮೆ ನನ್ನನ್ನು ವಿಚಿತ್ರವಾಗಿ ನೋಡಿ, 'ಲಾರಿ? ಎಂತ ಲಾರಿ?' ಎಂದ

(ಮುಂದುವರಿಯುವುದು)