Wednesday, October 5, 2016

ಅಂ-ಕಣ - 9

ಹೌದಪ್ಪ

ನಿಮ್ಮದು
ಎಷ್ಟು ದಪ್ಪ
ಎಂದು ಕೇಳಿದರೆ
ಹೇಳಬಹುದಾದ ಉತ್ತರ
ಹೌದಪ್ಪ

ದೋಸೆ

ತೆಳ್ಳಗಿನ ಹನಿಯಲ್ಲಿ
ನೀರು ದೋಸೆ
ಮಾಡಬಹುದು...
ದಪ್ಪನೆಯ ಹನಿಯಲ್ಲಿ
ಸಾಧ್ಯವಿಲ್ಲ


ಕಾಲೆಷ್ಟು

ಮಳ್ಳಿ ಮಳ್ಳಿ..
ಮಂಚದ ಮೇಲಿನ
ಮಾವನಿಗೆಡ
ಕಾಲೆಷ್ಟು ಅಂದರೆ
ಎರಡರ ಮಧ್ಯ ಎರಡು
ಅಂದ್ಲಂತೆ


ಲಾಭ

ಕನಸುಗಳನ್ನು
ಕದ್ದು ತಂದಿದ್ದೇನೆ
ಗೆಳತಿ
ಮಾರಾಟ ಮಾಡಿ
ಲಾಭ
ಮಾಡಿಕೊಳ್ಳಬೇಕು!


ಪೋಲಿ ಗೋಲ

ಜಗತ್ತು
ಗೋಲವಾದಷ್ಟೂ
ಮನಸ್ಸು
ಪೋಲಿಯಾಗುತ್ತದೆ


ಕಣ್ಣು

ಅವಳು ಕಣ್ಣು ಮುಚ್ಚಿ
ತುಟಿಗೆ ತುಟಿಯೊತ್ತಿದಳು
ನನ್ನ ಬದುಕಿನ ಬೀದಿ
ಕಣ್ಮುಚ್ಚಿತು

ಅಷ್ಟಕ್ಕಷ್ಟೇ

ಅವಳಿಗೆ
ಒಂದು ಮುತ್ತು ಕೊಟ್ಟೆ.
ಅವಳೆಂದಳು
ಅಷ್ಟೇನಾ?
ನಾನು ಇನ್ನೊಂದು
ಮುತ್ತು ಕೊಟ್ಟು ಹೇಳಿದೆ
ಅಷ್ಟಕ್ಕಷ್ಟೇ!

ಪೋಲಿ ಶಬ್ದಗಳ ಗುರು

ಎಲ್ಲ ಪೋಲಿ ಶಬ್ದಗಳೂ
ತ.. ಅಕ್ಷರದಿಂದ ಆರಂಭ ಆಗ್ತವೆ
ಹೀಗಾಗಿ...
ತ ಅಕ್ಷರವನ್ನು ಪೋಲಿ ಶಬ್ದಗಳ
ಗುರು ಅನ್ನಬಹುದಾ?


'ಪೋಲಿ'ಟಿಕಲ್ ವ್ಯೂ

ರಾಜಕಾರಣಿಗಳ
'ಪೋಲಿ'ಟಿಕಲ್ ವ್ಯೂ
ಮೀರಿಸುವುದು
ಯಾರಿಂದಲೂ
ಸಾಧ್ಯವಿಲ್ಲ |


ಛೇ...

ಪ್ರೇಮಕವಿತೆಗಳನ್ನು
ಮದುವೆಯಾದ
ಹುಢುಗಿಯರು ಲೈಕ್
ಮಾಡಿದರೆ
ಛೇ... ಮನಸಲ್ಲಿ ಬೇಸರ
ಮಾರಾಯ್ಲೇ

Tuesday, October 4, 2016

ಅಂ-ಕಣ - 8

ಬಣ

ನಿನ್ನದು ಯಾವ ಬಣ

ಎನ್ನುವವರಿಗೆಲ್ಲ
ನನ್ನದು ಒಂದೇ ಉತ್ತರ
ದಿಬ್ಬಣ !!


ತೂ....ಕ


ತೂಕವಿಲ್ಲದ 

ಮಾತು 
ತೂಕಡಿಸುತ್ತದೆ!


ಬೆಲೆ


ಮಾತಾಡದ

ಮೌನ 
ಮಾತಾಡುವ 
ಮಾತಿಗಿಂತ 
ನೂರುಪಟ್ಟು
ಮಾತಾಡುತ್ತದೆ..

ಗುರು


ಲಘುವಾಗದ

ಗುರು...
'ಗುರು'ವಾದ |

ಮಾಯದ ಗಾಯ 



ಕೆನ್ನೆ ಕಚ್ಚಿದಳು
ನೋವಾಯಿತೆಂದೆ
ಮುನಿದು ದೂರವಾದಳು
ಕಚ್ಚಿದ ಕಲೆ
ಮಾಯವಾಯಿತು

ತುಟಿಯ ರಂಗು
ಕೆನ್ನೆ ಮೇಲಿನ ನೋವು
ಇನ್ನೂ ಇದೆ !


ರೋಮಾಂಚನ
ರೋಮದಲ್ಲಿ ಅಂಚನವಿದೆ
ರೋಮದ ಅಂಚಲ್ಲಿ
ನೋವಿದೆ ||


ಭಗ್ನ ಸತ್ಯ

ಬೆವರಿದ ಕೆನ್ನೆ
ಉಪ್ಪುಪ್ಪು
ನಾಚಿದ ಕೆನ್ನೆ
ಸಿಹಿ ಸಿಹಿ |



---------------



( ಈ ಎಲ್ಲ ಹನಿಗಳು, ಸಾಲುಗಳನ್ನು ಬರೆದಿದ್ದು ಅಕ್ಟೋಬರ್ 3 ಹಾಗೂ 4ರ ನಡುವಿನ ರಾತ್ರಿ, 2016)

Monday, September 26, 2016

ಪರಿಸರ ಮಿತ್ರರು

ಇವರೆಲ್ಲ ನಮ್ಮ ಗೆಳೆಯರು
ಕಾನನದ ಜೊತೆಗಾರರು |
ಮಿತ್ರರು, ಭ್ರಾತ್ರರು,
ಸದಸ್ಯರು ಸೋದರರು |

ತೇಗ ಚೆಲುವು ಬಿದಿರು ಕೊಳಲು
ಪ್ರಾಣಿ ನೂರು, ತುಂಟ ಅಳಿಲು |
ಬಹಳ ಗಟ್ಟಿ ಜಟ್ಟಿ ಬೀಟೆ
ಇರುವರೇನು ನಿನಗೆ ಸಾಟಿ |

ಆನೆ ಹುಲಿ ಸಿಂಹ ಕರಡಿ
ಕಾನನದ ಸಿರಿಯ ಕಣ್ಗಳು |
ಹಕ್ಕಿ ಪಕ್ಷಿ ನದ ನದಿಗಳು
ನೂರು ಇಂಪು ಸವಿಯ ನುಡಿಗಳು |

ದೇವದಾರು ಬಲು ಜೋರು
ನಯನ ಸೆಳೆವುದು |
ಜಿಂಕೆ ಕಡವೆ ಮೃಗ ಸಮೂಹ
ನಮ್ಮ ಕರೆವವು ||

ಲವಂಗವಾದಿ ವನ ಸಿರಿಗಳು
ಜೀವ ಜ್ಯೋತಿಯು
ರೋಗ ರುಜಿನ ಬಂದರೀಗ
ಜೀವ ಕೊಡುವವು |

ನವಿಲು ಹಕ್ಕಿ, ನೂರು ಪಕ್ಷಿ
ಕಾನನದ ಸಿರಿಗಳು |
ಮಿಂಚುಳ್ಳಿ ಚುಕ್ಕಿ, ಹಕ್ಕಿ
ಮನವ ಬೆಸೆವ ಖಗಗಳು |

ನದಿಯಲಾಡೋ ಮೀನು ಮರಿ
ಖುಷಿಯ ಕೊಡುವವು |
ಹಂಸ ಗಿಳಿ ಪಾರಿವಾಳ
ಮನದಿ ಮೆರೆವವು |

ಬಾನು ಕಾನು ನೆಲ ಜಲವು
ನಮ್ಮ ಜೀವವು |
ಉಸಿರ್ಗಾಳಿ ಜೀವ ಜಲವ
ಇವು ಕೊಡುವವು |

ನಮ್ಮ ಈ ಸೋದರರನು
ನೀವು ಉಳಿಸಿರಿ |
ಮುಂದಿನ ಕೆಲ ಜೀವನವ
ಹಸಿ ಹಸಿರಾಗಿಸಿರಿ ||


+++++++++++++++++++++++

( ಈ ಕವಿತೆಯನ್ನು ಬರೆದಿರುವುದು 20-12-2005ರಂದು ದಂಟಕಲ್ಲಿನಲ್ಲಿ)

(ಯಾವುದೇ ಕವಿಯ ಕಾವ್ಯಲೋಕದ ಪಯಣ ಇಂತಹ ಕವಿತೆಗಳಿಂದಲೇ ಆರಂಭವಾಗುತ್ತದೆ. ಇದೊಂದು ಮಕ್ಕಳ ಕವಿತೆ ಎನ್ನಬಹುದೇನೋ. ನನ್ನ ಬರವಣಿಗೆಯ ಪ್ರಾರಂಭದ ದಿನಗಳ ಕವಿತೆ ಇದು. 49ನೇ ಕವಿತೆ ಇದು ಎನ್ನುವುದನ್ನು ನನ್ನ ಪಟ್ಟಿ ಉಲ್ಲೇಖಿಸಿದೆ. ಕಲಿಕೆ ನಿರಂತರ. ಬದಲಾವಣೆ ಕೂಡ ನಿರಂತರ. ಅಂದಿಗೂ ಇಂದಿಗೂ ಅದೆಷ್ಟೋ ಬದಲಾವಣೆಗಳಾಗಿವೆ. ಆಗ ಹೀಗೆಲ್ಲಾ ಬರೆದಿದ್ದೆನಾ ಎಂದು ನನಗೇ ಆಶ್ಚರ್ಯವಾಗುವಂತಿದೆ. ಅಲ್ಲದೇ ಸ್ವಲ್ಪ ನಾಚಿಕೆಯೂ ಆಗುತ್ತಿದೆ. ಏನೇ ಆಗಲಿ. ನೀವೂ ಓದಿಬಿಡಿ. 11 ವರ್ಷಗಳ ಹಿಂದಿನ ಕವಿತೆ ನಿಮ್ಮ ಮುಂದೆ )

Saturday, September 17, 2016

ಅಘನಾಶಿನಿ ಕಣಿವೆಯಲ್ಲಿ-33

 
           `ನಾ ಎಂತಾ ಹೇಳೂದು..' ಎಂದು ಶುರುಮಾಡಿದ ಬಾಬು. ಪ್ರದೀಪ ಕೆಕ್ಕರಿಸಿ ನೋಡಿದ. `ನಾ ಒಬ್ನೆ ಅಲ್ಲ. ನೀವ್ ನೋಡಿದ್ರೆ ನನ್ನ ಮಾತ್ರ ಹಿಡಕಂಡ್ರಿ. ಬಹಳಷ್ಟ್ ಜನ ಇದ್ದಾರೆ. ಅವ್ರು ಮಾಡದೇ ಇರುವಂತದ್ದೇನೂ ನಾ ಮಾಡನಿಲ್ಲ.' ಎಂದು ಅಲವತ್ತುಕೊಂಡ. ಪ್ರದೀಪನ ಸಹನೆಯ ಕಟ್ಟೆ ಮೀರಿತ್ತು. ರಪ್ಪನೆ ಬಾಬುವಿನ ಮುಸಡಿಗೆ ಒಂದು ಬಡಿದ. ಹೊಡೆದ ಹೊಡೆತಕ್ಕೆ ಬಾಬುವಿನ ಮುಖದಿಂದ ಬಳ್ಳನೆ ರಕ್ತ ಬಂದಿತು. ಕೈ ಮುಗಿದ ಬಾಬು.
              `ನಾನು ಮೊದ ಮೊದಲು ಇಂತದ್ದೆಲ್ಲ ಮಾಡಿರ್ನಿಲ್ಲ. ಆದರೆ ಹೊಟೆಲ್ ಮಾಡಬೇಕು ಅಂದಕಂಡು ಮುಂಬೈಗೆ ಹೋದೆ. ಅಲ್ಲಿ ಗಂಧವನ್ನು ಕಳ್ಳತನ ಮಾಡುವ ಗ್ಯಾಂಗ್ ಪರಿಚಯವಾಯಿತು. ಒಂದೆರಡು ವರ್ಷ ಮುಂಬೈನಲ್ಲಿ ಹೊಟೆಲ್ ಕೆಲಸ ಮಾಡಿದಂತೆ ಮಾಡಿದೆ. ಆದರೆ ನಂತರ ನನಗೆ ಗಂಧದ ತುಂಡುಗಳನ್ನು ಮಾರಾಟ ಮಾಡುವ ಜಾಲದ ಉದ್ದಗಲಗಳು ನನಗೆ ಗೊತ್ತಾದವು. ಮುಂಬೈನಲ್ಲಿ ಯಾವುದನ್ನು ಹೇಗೆ ಮಾರಾಟ ಮಾಡಬೇಕು? ಯಾವುದಕ್ಕೆ ಎಷ್ಟು ರೇಟಿದೆ ಎನ್ನುವುದನ್ನೆಲ್ಲ ತಿಳಿದುಕೊಂಡೆ. ಗಂಧದ ತುಂಡುಗಳ ಮಾರಾಟದ ನೆಪದಲ್ಲಿ ನಾನು ಆ ಜಾಲದ ಭಾಗವಾಗಿದ್ದೆ. ಆದರೆ ನಂತರದ ದಿನಗಳಲ್ಲಿ ಕೇವಲ ಗಂಧದ ತುಂಡುಗಳಿಗೆ ಮಾತ್ರ ನಮ್ಮ ದಂಧೆ ಸೀಮಿತವಾಗಿಲ್ಲ ಎನ್ನುವುದು ಅರಿವಾಯಿತು. ಕ್ರಮೇಣ ಗಾಂಜಾ ಮಾರಾಟವೂ ಗೊತ್ತಾಯಿತು. ಯಾರೋ ತಂದುಕೊಡುತ್ತಿದ್ದರು. ಅದನ್ನು ಇನ್ಯಾರಿಗೋ ದಾಟಿಸುವ ಕೆಲಸ ಮಾಡುತ್ತಿದೆ. ಹೀಗೆ ಮಾಡುತ್ತಿದ್ದಾಗಲೇ ಒಂದೆರಡು ಮಧ್ಯವರ್ತಿಗಳ ಪರಿಚಯವೂ ಆಯಿತು. ಇದಲ್ಲದೇ ಮುಂಬೈನಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ ಬಂದರುಗಳಲ್ಲಿ ಲಂಗರು ಹಾಕಿರುತ್ತಿದ್ದ ಹಡಗುಗಳಿಗೆ ಮಾದಕ ವಸ್ತುಗಳನ್ನು ದಾಟಿಸುವುದನ್ನೂ ತಿಳಿದುಕೊಂಡಿದ್ದೆ. ಹೀಗಿದ್ದಾಗಲೇ ನನಗೆ ನಮ್ಮೂರ ಕಾಡುಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಗಂಧದ ತುಂಡುಗಳ ವಿಷಯ ನೆನಪಾದವು. ಅದನ್ನು ಇಲ್ಲಿ ತಂದು ಮಾರಾಟ ಮಾಡಿದರೆ ಹೇಗೆ ಎನ್ನುವುದೂ ಅರಿವಾಯಿತು. ತಲೆಯಲ್ಲಿ ಬಂದ ತಕ್ಷಣವೇ ನಾನು ಮುಂಬೈಯನ್ನು ಬಿಟ್ಟು ನಮ್ಮೂರಿಗೆ ವಾಪಾಸಾಗಿದ್ದೆ..' ಬಾಬು ಒಂದೇ ಉಸುರಿಗೆ ಹೇಳಿದ್ದ.
           `ಮುಂಬೈನಿಂದ ಬರುವಾಗ ನನ್ನಲ್ಲಿ ಅಷ್ಟೋ ಇಷ್ಟೋ ದುಡ್ಡಾಗಿತ್ತು. ಊರಿಗೆ ವಾಪಾಸು ಬಮದವನೇ ದೊಡ್ಡದೊಂದು ಕಾರನ್ನು ಕೊಂಡುಕೊಂಡೆ. ನೋಡುಗರಿಗೆ ನಾನು ಮುಂಬೈನಲ್ಲಿ ಹೊಟೆಲ್ ಬ್ಯುಸಿನೆಸ್ ನಲ್ಲಿ ಭಾರೀ ಲಾಭ ಮಾಡಿಕೊಂಡೆ ಎನ್ನುವ ಭಾವನೆ ಮೂಡುವಂತೆ ಮಾಡಿದೆ. ಆದರೆ ವಾಸ್ತವದಲ್ಲಿ ನಾನು ಕಾರು ಕೊಂಡಿದ್ದೇ ಬೇರೆ ಕಾರಣಕ್ಕಾಗಿತ್ತು. ನಮ್ಮೂರ ಭಾಗದಲ್ಲಿ ಸಿಗುವ ಗಂಧದ ಮಾಲನ್ನು ಕದ್ದು ಕಾರಿನಲ್ಲಿ ಹಾಕಿಕೊಂಡು ಮಧ್ಯವರ್ತಿಗಳಿಗೆ ಸಾಗಿಸುವ ಕೆಲಸವನ್ನು ನಾನು ಮಾಡುತ್ತಿದ್ದೆ. ಹೇರಳವಾಗಿ ದುಡ್ಡು ಬರುತ್ತಲೇ ಇತ್ತು. ಆದರೆ ಮೊದ ಮೊದಲಿಗೆ ಗಂಧದ ತುಂಡುಗಳನ್ನು ಕಳ್ಳತನ ಮಾಡುತ್ತಿದ್ದ ನಾನು ನಂತರದ ದಿನಗಳಲ್ಲಿ ಬೇರೆ ಬೇರೆ ದಂಧೆಯನ್ನೂ ಶುರು ಹಚ್ಚಿಕೊಂಡೆ. ಕಳ್ಳ ನಾಟಾ ಮಾಡುವುದು, ಅದರ ಮಾರಾಟ, ಗಾಂಜಾ ಬೆಳೆಯುವುದು, ಅದನ್ನು ಮಾರಾಟ ಮಾಡುವುದು ಹೀಗೆ ಹಲವಾರು ದಂಧೆ ಶುರು ಮಾಡಿದೆ. ಮೊದ ಮೊದಲು ಎಲ್ಲವೂ ಸರಾಗವಾಗಿಯೇ ಇತ್ತು. ಯಾವಾಗಲೂ ಅಷ್ಟೆ ಪ್ರತಿಸ್ಪರ್ಧಿಗಳಿಲ್ಲ ಅಂದರೆ ದಂಧೆ ನಿರಾತಂಕವಾಗಿ ಸಾಗುತ್ತದೆ. ನನಗೂ ಹಾಗೆಯೇ ಆಗಿತ್ತು. ಆದರೆ ಪ್ರತಿಸ್ಪರ್ಧಿ ಹುಟ್ಟಿಕೊಂಡ ನಂತರ ಮಾತ್ರ ನಮ್ಮ ದಂಧೆಯಲ್ಲಿ ಏರಿಳಿತ ಕಾಣಬಹುದು. ನನಗೂ ಹಾಗೆಯೇ ಆಯಿತು...'
             `ನಾನೇನೋ ಹಾಯಾಗಿದ್ದೆ. ತಿಂಗಳು ತಿಂಗಳೂ ಲಕ್ಷ ಲಕ್ಷ ದುಡ್ಡು ಬರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ದಂಧೆಯಲ್ಲಿ ಲುಕ್ಸಾನು ಆರಂಭವಾಯಿತು. ನಾನು ಗಂಧದ ತುಂಡುಗಳನ್ನು ಮಾರಾಟ ಮಾಡಲು ಹೋದರೆ ಅರ್ಧ ಬೆಲೆಗೆ ಕೇಳುತ್ತಿದ್ದರು. ನಾನು ಬೆಳೆಸುತ್ತಿದ್ದ ಗಾಂಜಾ ಬೆಳೆಗೆ ಬೆಲೆಯೇ ಇರಲಿಲ್ಲ. ಯಾಕೆ ಹೀಗಾಯಿತು ಅಂದುಕೊಳ್ಳುತ್ತಿದ್ದಂತೆಯೇ ನನ್ನ ದಂಧೆಗೆ ಪ್ರತಿಯಾಗಿ ಇನ್ನೊಂದು ತಂಡ ಇದೇ ದಂಧೆಯನ್ನು ಶುರು ಮಾಡಿಕೊಂಡಿರುವುದು ತಿಳಿದು ಬಂದಿತು. ಯಾರಿರಬಹುದು ಎಂದುಕೊಂಡು ತಂಡವನ್ನು ಹುಡುಕಾಡಿದೆ. ಊಹೂ ಗೊತ್ತಾಗಲಿಲ್ಲ. ಆದರೆ ನಮ್ಮ ಭಾಗದಲ್ಲಿ ಈ ತಂಡ ಸಕ್ರಿಯಾಗಿದೆ ಎಂದೂ ಗೊತ್ತಾಯಿತು. ಕೊನೆಗೊಮ್ಮೆ ನಾನು ಆ ತಂಡವನ್ನು ಹದ್ದು ಬಸ್ತಿನಲ್ಲಿ ಇಡಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದೆ. ಏನೇನೋ ಮಾರ್ಗಗಳನ್ನು ಅನುಸಿರಿಸಿದೆ. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಬದಲಾಗಿ ಆ ತಂಡದಿಂದ ಒಂದಷ್ಟು ಬೆದರಿಕೆ ಕರೆಗಳು ಬಂದವು. ನಾನು ಅವನ್ನು ನಿರ್ಲಕ್ಷಿಸಿದೆ. ಆದರೆ ಕೊನೆಗೆ ನನ್ನ ಮೂಲೆ ಎರಡು ಸಾರಿ ಹಲ್ಲೆಯೂ ಆಯಿತು. ನನಗೆ ಆಗಲೇ ಜೀವ ಭಯ ಕಾಡಿದ್ದು. ನಾನು ಪೂರ್ತಿ ಹೆದರಿ ಹೋಗಿದ್ದೆ. ಕೊನೆಗೆ ಇವರ ಸಹವಾಸ ಸಾಕು. ಬದುಕಿ ಉಳಿದರೆ ಏನಾದರೂ ಮಾಡಿಯೇನು ಎಂದುಕೊಂಡು ನಾನು ಆ ವೃತ್ತಿಯನ್ನು ಬಿಟ್ಟು ಬಿಟ್ಟೆ. ಇದೀಗ ಮನೆಯಲ್ಲಿ ಎರಡು ಜೀಪುಗಳನ್ನು ಇಟ್ಟುಕೊಂಡು ಬಾಡಿಗೆ ಹೊಡೆಯುತ್ತಿದ್ದೇನೆ..' ಎಂದ ಬಾಬು.
            `ನೀ ಹೇಳಿದ್ದನ್ನು ನಂಬ ಬಹುದಾ?..' ಪ್ರದೀಪ ಗಡುಸಾಗಿಯೇ ಕೇಳಿದ್ದ.
             `ನಂಬಬಹುದು. ಯಾಕಂದ್ರೆ ಇದೇ ನಿಜ. ನನಗೆ ಸುಳ್ಳು ಹೇಳಿ ಆಗಬೇಕಾಗಿದ್ದು ಏನೂ ಇಲ್ಲ. ಬದಲಾಗಿ ನನ್ನ ಜೀವ ುಳಿದರೆ ಸಾಕಾಗಿದೆ..' ಎಂದ ಬಾಬು.
            `ನಿನ್ನ ದಂಧೆಗೆ ಪ್ರತಿಯಾಗಿ ದಂಧೆ ಶುರು ಮಾಡಿದ್ದು ಯಾರು? ನಿನ್ನ ಮೇಲೆ ಧಾಳಿ ಮಾಡಿದವರು ಯಾರು? ಹೇಳು..'
            `ಗೊತ್ತಿಲ್ಲ. ದಂಧೆ ಶುರುವಾಗಿಗೆ ಅಂತ ಅಷ್ಟೇ ಮಾಹಿತಿ ಕಿವಿಗೆ ಬೀಳುತ್ತಿತ್ತು. ಯಾರು ಮಾಡುತ್ತಿದ್ದಾರೆ? ಈ ಜಾಲದ ಮುಖ್ಯಸ್ಥರ ಯಾರು ಎಂಬುದು ನನಗೆ ಗೊತ್ತಿಲ್ಲ. ನಾನು ಹಲವು ಸಾರಿ ತಿಳಿದುಕೊಳ್ಳಲು ನೋಡಿದೆ ಆಗಲೇ ಇಲ್ಲ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದವರೆಲ್ಲ ನನ್ನನ್ನು ಬಿಟ್ಟು ಹೋದರು. ನಾನು ಕೊಡುತ್ತಿದ್ದ ಹಣಕ್ಕಿಂತ ಎರಡು ಪಟ್ಟು ಜಾಸ್ತಿ ಅವರು ಕೊಡುತ್ತಿದ್ದರಂತೆ. ಅವರನ್ನು ನನ್ನ ಬಳಿಯೇ ಉಳಿಸಿಕೊಳ್ಳಬೇಕು ಅಂತ ಸಾಕಷ್ಟು ಪ್ರಯತ್ನ ಮಾಡಿದೆ. ಆಗಲಿಲ್ಲ. ಈಗಲೂ ಒಂದಿಬ್ಬರು ಅವರ ಬಳಿ ನಿಯತ್ತಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಸಿಕ್ಕಾಪಟ್ಟೆ ಲಾಸ್ ಆಗಿ ಇದೀಗ ಆ ದಂಧೆ ಬಿಟ್ಟು ಬಿಟ್ಟಿದ್ದೇನೆ. ನನಗೆ ಈಗಲೂ ಕುತೂಹಲ ಇದೆ. ಇದ್ದಕ್ಕಿದ್ದಂತೆ ನನ್ನ ದಂಧೆಯನ್ನೇ ಬುಡಮೇಲು ಮಾಡಿ, ನನಗಿಂತ ಹೆಚ್ಚು ಲಾಭ ಮಾಡುತ್ತಿರುವವರು ಯಾರು ಅಂತ. ಖಂಡಿತವಾಗಿಯೂ ಒಬ್ಬಿಬ್ಬರಿಂದ ಇದು ಸಾಧ್ಯವಿಲ್ಲ. ದೊಡ್ಡದೊಂದು ತಂಡವೇ ಇರಬೇಕು. ವ್ಯವಸ್ಥಿತ ಜಾಲವೇ ಇರಬೇಕು ಅನ್ನಿಸುತ್ತಿದೆ. ನಾನು ಈ ಜಾಲದ ಮುಖ್ಯಸ್ಥನನ್ನು ನೋಡುವ ಆಸೆಯನ್ನೂ ಇಟ್ಟುಕೊಂಡಿದ್ದೇನೆ..' ಎಂದು ಬಾಬು ಮನದಾಳದ ಬಯಕೆಯನ್ನು ತೋಡಿಕೊಂಡಿದ್ದ.
           `ಆಗಲಿ.. ನೀನು ಹೇಳಿದ್ದನ್ನು ನಾವು ನಂಬುತ್ತೇವೆ. ಆದರೆ ಒಂದು ಕೆಲಸ ಮಾಡಬೇಕು ನೀನು. ನಮಗೆ ನಿನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ತೋರಿಸಬೇಕು. ಅವರು ಈಗ ಆ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಅಂದೆಯಲ್ಲ. ಅವರನ್ನು ತೋರಿಸು. ನಮಗೆ ಈ ಕಾರ್ಯದಲ್ಲಿ ಸಹಾಯ ಮಾಡಿದರೆ ನಿನ್ನನ್ನು ಬಿಟ್ಟು ಬಿಡುತ್ತೇವೆ. ಇಲ್ಲವಾದಲ್ಲಿ ನಿನಗೆ ಬದುಕಿದ್ದಂತೆಯೇ ನರಕ ದರ್ಶನ ಮಾಡುತ್ತೇವೆ..' ಪ್ರದೀಪ ಗುಡುಗಿದ್ದ.
             `ನಾಳೆಯೇ ತೋರಿಸುತ್ತೇನೆ...' ಎಂದಿದ್ದ. ಬಾಬುವನ್ನು ಅವನ ಮನೆಯ ಬಳಿಯೇ ಬಿಟ್ಟು ಪ್ರದೀಪ ಹಾಗೂ ಇತರರು ಮರಳಿದ್ದರು. ಬಾಬು ಖಂಡಿತವಾಗಿಯೂ ತಪ್ಪಿಸಿಕೊಂಡು ಹೋಗಲಾರ. ಆತನಿಗೆ ಭಯವಿದೆ. ಆ ಕಾರಣದಿಂದ ಎಲ್ಲೂ ಹೋಗದೇ, ತಮಗೆ ಸಹಾಯ ಮಾಡುತ್ತಾನೆ ಎಂಬ ನಂಬಿಕೆಯ ಮೇಲೆ ಆತನನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರು. ಆದರೆ ಹೀಗೆ ಬಿಟ್ಟು ಬಂದಿದ್ದೇ ಸಾಕಷ್ಟು ತೊಂದರೆಗೂ ಕಾರಣವಾಯಿತು.
             ಇತ್ತ ಬಾಬುವಿನ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು. ಒಂದೆಡೆ ಈಗಾಗಲೇ ಎರಡು, ಮೂರು ಸಾರಿ ದಾಳಿ ಂಆಡಿ ಜೀವಭಯ ಹುಟ್ಟಿಸಿರುವ ತಂಡ, ಇನ್ನೊಂದು ಕಡೆಗೆ ಪ್ರದೀಪನ ಭಯ. ಏನು ಮಾಡಲಿ ಎಂಬುದನ್ನು ತಿಳಿಯದೇ ಚಿಂತಾಕ್ರಾಂತನಾಗಿದ್ದ. ಮರುದಿನ ಇನ್ನೇನಾಗುತ್ತದೆಯೋ ಎಂದುಕೊಂಡು ಮನೆಯೊಳಕ್ಕೆ ಹೋಗಿದ್ದ. ಆದರೆ ಮರುದಿನ ಬಾಬುವಿನ ಮನೆಯ ಬಾಗಿಲು ತೆರೆಯಲೇ ಇಲ್ಲ. ಬಾಬು ಹಾಗೂ ಆತನ ಮಡದಿ ಇಬ್ಬರೂ ಮನೆಯೊಳಕ್ಕೆ ಹೆಣವಾಗಿದ್ದರು. !!


(ಮುಂದುವರಿಯುತ್ತದೆ)

Tuesday, September 13, 2016

ಅಪ್ಪ (ಕಥೆ) - ಭಾಗ-2

              ಅಪ್ಪನೇನೋ ಸೈಕಲ್ ರಿಪೇರಿಗಾಗಿ ಹೋಗಿಬಿಟ್ಟಿದ್ದ. ನಾನು, ಅಮ್ಮ ಇಬ್ಬರೇ ಉಳಿದಿದ್ದೆವು. `ತಮಾ.. ಹೋಪನ ನೆಡಿ..' ಎಂದ ಅಮ್ಮ ನಿಧಾನವಾಗಿ ಹೆಜ್ಜೆ ಹಾಕಲು ಆರಂಭಿಸಿದ್ದಳು. ಅಮ್ಮನ ಒಂದು ಕಾಲಿಗೆ ಕಬ್ಬಿಣದ ಮೊಳೆ ಚುಚ್ಚಿತ್ತು. ಇನ್ನೊಂದು ಕಾಲು ಸೈಕಲ್ ಚಕ್ರಕ್ಕೆ ಸಿಲುಕಿ ಜಜ್ಜಿದಂತಾಗಿತ್ತು. ನೋವಿನಲ್ಲಿಯೂ ನಡೆಯಲು ಆರಂಭಿಸಿದ್ದಳು. ನಾನು ಆಕೆಯ ಸರಿಸಮಾನವಾಗಿ ಹೆಜ್ಜೆ ಹಾಕಲು ಆರಂಭಿಸಿದ್ದೆ.
                ನಿಮಿಷಗಳು ಉರುಳಿದವು. ನಾವು ಸಾಗುತ್ಲೇ ಇದ್ದೆವು. `ಅಮಾ.. ಅಪ್ಪ ಬಂದನನೆ..?' ನಾನು ಆಗಾಗ ಕೇಳುತ್ತಿದ್ದೆ. ಅದಕ್ಕೆ ಅಮ್ಮ ನಿಟ್ಟುಸಿರುವ ಬಿಟ್ಟು `ಇಲ್ಯಾ ತಮಾ.. ಸೈಕಲ್ ರಿಪೇರಿ ಆಜಿಲ್ಲೆ ಕಾಣಿಸ್ತಾ.. ನಾವು ನೆಡಕಂಡು ಹೋಗ್ತಾ ಇಪ್ಪನ. ಕಲ್ಮಟ್ಟಿ ಹಳ್ಳದ ಹತ್ರ ಹೋಪಕಿದ್ರೆ ಅಪ್ಪ ಬಂದು ಮುಟ್ಟತಾ..' ಅಮ್ಮ ನನ್ನನ್ನು ಸಾಗ ಹಾಕಿದ್ದಳು. ಅಮ್ಮನಿಗೆ ಅಪ್ಪ ಇಷ್ಟು ಬೇಗನೆ ಬರುವುದಿಲ್ಲ ಎಂಬುದು ಗೊತ್ತಿತ್ತೇನೋ. ನನ್ನನ್ನು ಏನೋ ಹೇಳಿ ಸಾಗ ಹಾಕುತ್ತಿದ್ದಳು. ಆ ದಿನ ಮಾತ್ರ ನಾವು ಎಷ್ಟು ನಡೆದರೂ ಕೂಡ ದಾರಿ ಸಾಗುತ್ತಲೇ ಇರಲಿಲ್ಲ. ಅರ್ಧ ಗಂಟೆಯ ಅಂತರದಲ್ಲಿ ನಮ್ಮನ್ನು ಕೈಬೀಸಿ ಕರೆಯಬೇಕಿದ್ದ ಕಲ್ಮಟ್ಟಿ ಹಳ್ಳ ಆ ದಿನ ತಾಸಾದರೂ ಕೂಡ ಬರಲಿಲ್ಲ. ನಾವು ಅಷ್ಟು ನಿಧಾನವಾಗಿ ನಡೆಯುತ್ತಿದ್ದೆವೆನ್ನಿ.
             ಕಲ್ಮಟ್ಟಿಹಳ್ಳ ಬರುವ ವೇಳೆಗೆ ನಾವು ಎರಡು ಸಾರಿ ಕುಳಿತಿದ್ದೆವು. ಸೈಕಲ್ ಚಕ್ರಕ್ಕೆ ಸಿಲುಕಿದ್ದ ಅಮ್ಮನ ಕಾಲು ಆಗಲೇ ಆನೇಕಾಲು ರೋಗ ಬಂದವರಂತೆ ಊದಿಕೊಂಡಿತ್ತು. ಕಾಲಿಗೆ ಹಾಕಿದ್ದ ಹವಾಯಿ ಚಪ್ಪಲ್ ಬಿಗಿಯಾಗಿತ್ತು. ಹವಾಯಿ ಚಪ್ಪಲಿನ ಬಾರು ಹಾಲಿಗೆ ಅಂಟಿಕೊಂಡಿತ್ತು. ಕಲ್ಮಟ್ಟಿ ಹಳ್ಳ ಬಂದಿತ್ತು. ಕಲ್ಮಟ್ಟಿ ಹಳ್ಳದಲ್ಲಿ ಮಂಜು ನಾಯ್ಕ ಸಿಕ್ಕಿದ್ದ. `ನಮ್ಮನೆ ಹೆಗುಡ್ರು ಹೋದ್ರನೋ..' ಅಮ್ಮ ಮಂಜುನಾಥ ನಾಯ್ಕನ ಬಳಿ ಕೇಳಿದ್ದಳು. `ಇಲ್ರಲಾ ಅಮ್ಮಾ.. ನಾನು ನೋಡನಿಲ್ಲ. ಅವರು ಈ ದಾರಿಯಲ್ಲಿ ಹೋಗಿದ್ದನ್ನ ನಾನು ಕಾಣನಿಲ್ಲ..' ಎಂದು ಉತ್ತರ ನೀಡಿದಾಗ ಅಮ್ಮ ನಿಟ್ಟುಸಿರು ಬಿಟ್ಟು ನನ್ನನ್ನು ಹೊರಡಿಸಿದ್ದಳು. ನನಗೊಂದು ನಿಂಬೂ ಚಾಕಲೇಟು ತಿನ್ನುವ ಆಸೆಯಾಗಿ ಅಮ್ಮನ ಬಳಿ ನಾಲ್ಕಾಣೆ ಪಡಕೊಂಡಿದ್ದೆ. ಅಮ್ಮ ಎಂಟಾಣೆ ಕೊಟ್ಟಾಗ ಎರಡು ನಿಂಬೂ ಚಾಕಲೇಟು ತೆಗದುಕೊಂಡು ಒಂದನ್ನು ಸಿಪ್ಪೆ ಸುಲಿದು ಬಾಯಿಗಿಟ್ಟು ಇನ್ನೊಂದು ಚಡ್ಡಿ ಕಿಶಗೆ ಗೆ ಹಾಕಿದ್ದೆ.
            ಇನ್ನೊಂದು ಕಿಲೋಮೀಟರ್ ದೂರದ ಅಡಕಳ್ಳಿ ಶಾಲೆಗೆ ಹತ್ತಿರ ನಾವು ಬರುವ ಹೊತ್ತಿಗೆ ನೇಸರನಾಗಲೇ ಬಾನಂಚಿನ ಕಡೆಗೆ ತನ್ನ ರಥವನ್ನು ಹೂಡಿಯಾಗಿತ್ತು. `ತಮಾ.. ಕತ್ಲೆ ಆಗ್ತಾ ಇದ್ದೋ...' ಎಂದ ಅಮ್ಮ ನನ್ನನ್ನು ಮುನ್ನಡೆಸಿದ್ದಳು. `ಇನ್ನೂ ಅಪ್ಪ ಬಂಜ್ನೇ ಇಲ್ಯಲೆ...' ಆಗಲೇ ಅದೆಷ್ಟನೆಯ ಸಾರಿಯೋ ಹೇಳಿದ್ದೆ. `ಬತ್ರು ಅವು..' ಮತ್ತೊಮ್ಮೆ ಅಮ್ಮ ಹೇಳಿದ್ದಳು.
           ನಾವು ನಡೆಯುತ್ತಲೇ ಇದ್ದೆವು. ನಮ್ಮೂರ ದಾರಿಯಲ್ಲಿ ಸಿಗುವಂತಹ ಹೆಣಸುಡುವ ಮುರ್ಕಿಯೂ ದಾಟಿತ್ತು. ಅದನ್ನು ಹಾದು ಮುಂದೆ ಬರುವ ವೇಳೆಗಾಗಲೇ ನನ್ನೊಳಗೆ ಅದೇನೋ ಅಳುಕು. ಏಕೆಂದರೆ ಮುಮದಿನ ದಾರಿ ಕತ್ತಲು ಕವಿದಂತಹ ಕಾಡು. ನಾನು ನಿಧಾನವಾಗಿ ಅಮ್ಮನ ಬಳಿ ಸರಿದು ನಡೆಯಲಾರಂಭಿಸಿದೆ. `ಎಂತಾ ಆತಾ ತಮಾ..' ಅಮ್ಮ ಕೇಳಿದ್ದಳು.
             `ಅಮ್ಮಾ.. ಕಾನಬೈಕಲು ಬಂತು. ಇಲ್ಲಿ ಕಾಡು ಪ್ರಾಣಿ ಎಲ್ಲಾ ಇರ್ತಡಾ..' ಎಂದೆ. `ಶೀ ಮಳ್ ಮಾಣಿ.. ಎಂತದ್ದೂ ಬರ್ತಿಲ್ಲೆ.. ಸುಮ್ನೆ ಹೋಪನ ಬಾ.. ಕತ್ಲೆ ಆಗೋದ್ರೊಳಗೆ ಮನೆ ಸೇರೋಣ..' ಎನ್ನವ ವೇಳೆಗೆ `ಆಯ್...' ಎಂದಳು. `ಎಂತಾ ಆತೆ ಅಮಾ..' ಎಂದೆ. ಅಮ್ಮನ ಕಾಲಿಗೊಂದು ಕಲ್ಲು ಚುಚ್ಚಿತ್ತು. ನೋವಿನಿಂದ ನರಳಿದ್ದಳು. `ಹಾಳಾದ್ದು.. ಕಲ್ಲು..' ಎಂದು ಬೈದು ಮುನ್ನಡೆದೆವು.
            `ಅಮ್ಮಾ... ಅಲ್ನೋಡೆ.. ಎಂತದ್ದೋ ಇದ್ದು.. ಸರಬರ ಹೇಳಿ ಶಬ್ದ ಆಗ್ತು..' ಭಯದಿಂದಲೇ ನಾನು ಕೇಳಿದ್ದೆ. ರಸ್ತೆ ಪಕ್ಕದ ಕಾಡಿನಲ್ಲಿ ಏನೋ ಶಬ್ದವಾಗಿತ್ತು. ನನಗೆ ಕಾಡೆಮ್ಮೆಯಿರಬೇಕು ಎನ್ನುವ ಅನುಮಾನ. ಅನುಮಾನದಿಂದಲೇ ಕೇಳಿದ್ದೆ. ಅಮ್ಮನಿಗೂ ಭಯವಾಗಿತ್ತಿರಬೇಕು.. `ಸುಮ್ನಿರಾ..' ಎಂದಳು. ನಾನು ಸುಮ್ಮನಾದೆ. ಮತ್ತೊಂದು ಮಾರು ದೂರ ಹೋಗಿದ್ದೆವು. ಅಮ್ಮ ಇದ್ದಕ್ಕಿದ್ದಂತೆ `ಇಡಾ ಪಿಂಗಳಾ ತ್ವ ಸುಸುಷ್ಮ್ನಾಚನಾಡಿ.. ತ್ವಮೇಕಾ ಗತಿರ್ದೇವಿ ಸದಾನಂದ ರೂಪೆ...' ಎಂದಳು.. ನಾನು ಅಮ್ಮನ ಮುಖ ನೋಡಿದೆ. ಅಮ್ಮನಿಗೂ ಭಯವಾಗಿತ್ತಿರಬೇಕು. ಭಯದಿಂದ ಅಮ್ಮ ಲಲಿತಾ ಸಹಸ್ರನಾಮವನ್ನು ಪಠಿಸಲು ಆರಂಭಿಸಿದ್ದಳು.
            ನಮ್ಮೂರ ಗುಡ್ಡದ ನೆತ್ತಿಯನ್ನು ತಲುಪುವ ವೇಳೆಗಾಗಲೇ ಸೂರ್ಯ ಬಾನಂಚಲ್ಲಿ ನಾಪತ್ತೆಯಾಗಿದ್ದ. ರಸ್ತೆ ಅಸಕು-ಮಸುಕಾಗಿ ಕಾಣುವಷ್ಟು ಕತ್ತಲಾಗಿತ್ತು. ರಸ್ತೆಯಲ್ಲಿ ನಡೆದು ಹೋದರೆ ಕನಿಷ್ಟ ಇನ್ನೊಂದು ತಾಸಾದರೂ ಬೇಕು ಎಂದುಕೊಂಡು ನಾವು ಅಡ್ಡದಾರಿಯನ್ನು ಹಿಡಿದೆವು. ಇಷ್ಟಾದರೂ ಕೂಡ ಅಪ್ಪ ಬಂದಿರಲಿಲ್ಲ.
           ಗುಡ್ಡದ ಅಂಕುಡೊಂಕಿನ ಕಾಲು ದಾರಿಯಲ್ಲಿ ನಾನು-ಅಮ್ಮ ಇಳಿಯುತ್ತಿದ್ದಾಗಲೇ ಗಡ ಗಡ ಸದ್ದಾಯಿತು. `ಅಮ್ಮಾ.. ಅಪ್ಪ ಬಂದ ಕಾಣಿಸ್ತು..' ಎಂದೆ. `ಇಲ್ಯಾ.. ತಮಾ.. ಅವ್ರು ಬಂಜಿರಿಲ್ಲೆ..' ಎಂದಳು. ನಿಧಾನವಾಗಿ ಗುಡ್ಡ ಇಳಿದೆವು. ಅಷ್ಟರಲ್ಲಿ ಸಂಪೂರ್ಣವಾಗಿ ಕತ್ತಲಾಗಿಬಿಟ್ಟಿತ್ತು. ನಮಗೆ ದಾರಿಯೇ ಕಾಣುತ್ತಿರಲಿಲ್ಲ. ಇನ್ನೇನು ಮಾಡುವುದು ದೇವರೇ.. ಎಂದುಕೊಂಡು ಹೆಜ್ಜೆ ಹಾಕಿದೆವು. ಮಾರ್ಗ ಮಧ್ಯದಲ್ಲಿ ಒಂದು ಬೆಳಕು ಕಾಣಿಸಿತು. ಅದೊಂದು ಮನೆ. ಸೀದಾ ಮನೆಯೊಳಕ್ಕೆ ಹೋದ ನಾವು ಬ್ಯಾಟರಿ ಸಿಗಬಹುದಾ ಎಂದೆವು. ಮನೆಯ ಯಜಮಾನರು ಬ್ಯಾಟರಿ ಕೊಟ್ಟರು. ಬ್ಯಾಟರಿಯ ಮಿಣುಕು ಬೆಳಕಿನಲ್ಲಿ ಮನೆಯ ಕಡೆಗೆ ಹೆಜ್ಜೆ ಹಾಕಿದೆವು. ಇಷ್ಟಾದರೂ ಕೂಡ ಅಪ್ಪ ಬಂದಿರಲಿಲ್ಲ.
           ಮನೆ ಹತ್ತಿರವಾದಂತೆಲ್ಲ ನನಗೆ ಅಪ್ಪನ ಮೇಲೆ ಕಡುಕೋಪ ಬರಲು ಆರಂಭಿಸಿತು. ಅಪ್ಪ ಬರದೇ ಇರುವ ಕಾರಣ ಭಯವೂ ಆಯಿತೆನ್ನಿ. `ಅಮ್ಮಾ.. ಅಪ್ಪನನ್ನು ಗಮಿಯ (ಕಾಡೆಮ್ಮೆ) ಅಡ್ಡ ಹಾಕಿಕ್ಕನೇ.. ಅದಕ್ಕೆ ಬಂಜನಿಲ್ಯಾ ಹೆಂಗೆ..' ಎಂದೆ. `ಥೋ ಸುಮ್ನಿರಾ.. ಹಂಗೆಲ್ಲಾ ಎಂತದ್ದೂ ಆಜಿಲ್ಲೆ..' ಎಂದಳು ಅಮ್ಮ. ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆ ದೂರದಲ್ಲಿ ಮನೆಯ ಬೆಳಕು ಕಾಣಿಸತೊಡಗಿತು.
            ಇನ್ನೇನು ಮನೆಗೆ 100 ಮೀಟರ್ ದೂರವಿದೆ ಎನ್ನುವಾಗ ಯಾರೋ ಕೆಮ್ಮಿದ ಸದ್ದಾಯಿತು. ನಾನೊಮ್ಮೆ ಬೆಚ್ಚಿದ್ದೆ. ಕೆಮ್ಮಿನ ಶಬ್ದ ಕೇಳಿದ ಜಾಗದಲ್ಲಿ ಯಾವುದೋ ಬೆಳಕು ಇತ್ತು. ಅದು ನಮ್ಮತ್ತಲೇ ಬರುತ್ತಿತ್ತು. `ತಮಾ..' ಎಂದಿತು ಶಬ್ದ. ನಾನು ಆಲಿಸಿದೆ. ಅಪ್ಪ ಕರೆದಿದ್ದ. ನನಗೆ ಒಮ್ಮೆಲೆ ಧೈರ್ಯ ಬಂದಿತ್ತು. ನಡುವೆಯೇ ಆಶ್ಚರ್ಯ. ಸೈಕಲ್ ಸರಿ ಮಾಡಿಸಿಕೊಂಡು ಬರುತ್ತೇನೆ ಎಂದು ಕಾನಸೂರು ಕಡೆಗೆ ಹೋಗಿದ್ದ ಅಪ್ಪ ಈಗ ಮನೆಯ ಕಡೆಯಿಂದ ನಮ್ಮೆಡೆಗೆ ನಡೆದುಕೊಂಡು ಬರುತ್ತಿದ್ದಾನಲ್ಲ ಇದು ಹೇಗೆ ಸಾಧ್ಯ ಎನ್ನಿಸಿತು. `ನೀ ಹೆಂಗೆ ಬಂದ್ಯೋ..' ಅಪ್ಪನ ಬಳಿ ಕೇಳಿದ್ದೆ. `ಆನು ಬಂದು ಹತ್ತು ನಿಮಿಷ ಆತಾ ತಮಾ.. ಬಂದು ಊಟ ಮುಗಿಸ್ಕಂಡು ಬಂದಿ. ನಿಂಗವ್ ಇನ್ನೂ ಬಂದು ಮುಟ್ಟಿದ್ರಿಲ್ಲೆ ಅಂತ ಮನೆಯಲ್ಲಿ ಹೇಳಿದ್ದ. ಅದಕ್ಕೆ ಕರಕಂಡು ಹೋಪನ ಅಂತ ಬಂದಿ..' ಎಂದ.
              ವಾಸ್ತವದಲ್ಲಿ ನಾವು ಅಡ್ಡದಾರಿಯಲ್ಲಿ ಗುಡ್ಡವನ್ನು ಇಳಿಯುತ್ತಿದ್ದಾಗಲೇ ಅಪ್ಪ ಸೈಕಲ್ ಮೂಲಕ ಮನೆಗೆ ಬಂದಿದ್ದ. ನನಗೆ ಗಡ ಗಡ ಸದ್ದು ಕೇಳಿಸಿದ್ದು ಸೈಕಲ್ಲಿನದ್ದೇ ಆಗಿತ್ತು.  ಕೈ ಹಿಡಿದುಕೊಂಡು ನನ್ನನ್ನು ಕರೆದುಕೊಂಡು ಬರುತ್ತಿದ್ದಳು ಅಮ್ಮ. ಅಪ್ಪ ಬಂದು ಬೆಳಕು ತೋರಿಸಿ, ಮನೆಗೆ ಬಂದು ತಲುಪಿದ್ದೇನೆ. ನನ್ನದು ಊಟವಾಯಿತು ಎಂಬ ಮಾತು ಕೇಳುತ್ತಿದ್ದಂತೆ ನನ್ನ ಕೈ ಮೇಲೇ ನೀರ ಹನಿ ಬಿದ್ದಂತಾಯಿತು. ನಾನು ಮಳೆ ಬಂತೇ ಎಂದು ನೋಡಿದೆ. ಮಳೆ ಬಂದಿರಲಿಲ್ಲ. ಅಮ್ಮ ಬಿಕ್ಕುತ್ತಿದ್ದಳು. ಅಪ್ಪ `ಬನ್ನಿ ಹೋಪನ ಮನಿಗೆ..' ಎಂದ. ಮನೆಯ ಅಂಗಳದತ್ತ ಹೆಜ್ಜೆ ಹಾಕಿದ್ದೆವು.

(ಮುಗಿಯಿತು)