Thursday, September 8, 2016

ಅಪ್ಪ (ಕಥೆ) ಭಾಗ-1

               `ತಮಾ... ಇವತ್ತು ಮೂರನೇದು... ಇವತ್ತೇ ಕೊನೇದು.. ಇನ್ನು ಇಂಜೆಕ್ಷನ್ ಇಲ್ಲೆ..' ಬೆಳ್ಳೆಕೇರಿ ಡಾಕ್ಟರ್ ಹೇಳುವವರೆಗಾಗಲೇ ನಾನು ಚೀರಾಡಿ, ರಂಪಾಟ ಮಾಡಿ ಹುಯ್ಯಲೆಬ್ಬಿಸಿದ್ದೆ.
                 ಸಾಮಾನ್ಯ ಜ್ವರ. ಜ್ವರಕ್ಕೆ ಸತತ ಮೂರು ದಿನ ಇಂಜೆಕ್ಷನ್ ತೆಗೆದುಕೊಂಡರೆ ಸರಿಯಾಗುತ್ತದೆ ಎಂದಿದ್ದರು ಬೆಳ್ಳೆಕೇರಿ ಡಾಕ್ಟರ್. ಅಪ್ಪ ಸೈಕಲ್ ಮೇಲೆ ಕೂರಿಸಿಕೊಂಡು ಮೂರು ದಿನವೂ ಕಾನಸೂರಿಗೆ ಕರೆದೊಯ್ದಿದ್ದ. ಮೊದಲ ಎರಡು ದಿನಗಳೇ ಇಂಜೆಕ್ಷನ್ನಿನಿಂದ ಹೈರಾಣಾಗಿದ್ದೆ. ಮೂರನೇ ದಿನ ಮಾತ್ರ ಮತ್ತಷ್ಟು ಬಸವಳಿದಿದ್ದೆ.
                  ನಾಲ್ಕಾಣೆಯ ಲಿಂಬೆ ಚಾಕಲೇಟಿನ ಆಮಿಷವನ್ನು ತೋರಿಸಿ ಮೊದಲ ಎರಡು ದಿನ ಅಪ್ಪ ಹೇಗೋ ನನಗೆ ಬೆಳ್ಳೆಕೇರಿ ಡಾಕ್ಟರರಿಂದ ಇಂಜೆಕ್ಷನ್ ಕೊಡಿಸಲು ಸಫಲನಾಗಿದ್ದ. ಆದರೆ ಮೂರನೇ ದಿನ ಮಾತ್ರ ನಾನು ಕಾನಸೂರಿಗೆ ಬರಲು ಬಿಲ್ ಕುಲ್ ಒಪ್ಪಿರಲಿಲ್ಲ. ಮನೆಯಲ್ಲಿ ದೊಡ್ಡದಾಗಿ ಕೂಗಿ ಕಬ್ಬರಿದಿದ್ದೆ. `ಬೆಳ್ಳೇಕೇರಿ ಡಾಕ್ಟರು ದಬ್ಬಣ ತಗಂಡು ಮುಕಳಿಗೆ ಸುಚ್ಚತ್ರು.. ಬ್ಯಾಡ.. ಆ ಬತ್ನಿಲ್ಲೆ..' ಎಂದು ಗಲಾಟೆ ಮಾಡಿದ್ದೆ. ಗಲಾಟೆ ಯಾವ ಹಂತಕ್ಕೆ ತಲುಪಿತ್ತು ಎಂದರೆ ನನ್ನ ಹಟಕ್ಕೆ ಅಪ್ಪ ಸಿಟ್ಟಿನಿಂದ ಬೆನ್ನ ಮೇಲೆ ನಾಲ್ಕು ಏಟು ಭಾರಿಸಿಯೂ ಬಿಟ್ಟಿದ್ದ. ಆದರೂ ನಾನು ಮಾತ್ರ ಸುತಾರಾಂ ಕಾನಸೂರಿಗೆ ಬರೋದಿಲ್ಲ ಎಂದು ರಚ್ಚೆ ಹಿಡಿದಿದ್ದೆ.
                ಆ ದಿನ ಅಮ್ಮನಿಗೆ ಮೊಟ್ಟ ಮೊದಲ ಬಾರಿಗೆ ಹಲ್ಲು ನೋವು ಬಂದಿತ್ತು. ಯಾವ ರೀತಿಯ ಹಲ್ಲು ನೋವು ಎಂದರೆ ನೋವಿನ ಅಬ್ಬರಕ್ಕೆ ವಸಡುಗಳು ಬಾತುಕೊಂಡಿದ್ದವು. ಸಾಮಾನ್ಯವಾಗಿ ಚಿಕ್ಕಪುಟ್ಟ ಕಾಯಿಲೆ ಕಸಾಲೆಗಳಿಗೆಲ್ಲ ಮನೆಮದ್ದಿನ ಮೊರೆಹೋಗುತ್ತಾಳೆ ಅಮ್ಮ. ಆ ದಿನವೂ ಕೂಡ ಅದೇನೋ ಮನೆಮದ್ದು ಮಾಡಿದ್ದಳು. ಹಲ್ಲಿಗೆ ಕರ್ಪೂರ ಹಾಕಿದ್ದಳು, ತಂಬಾಕಿನ ಎಸಳನ್ನು ಹಲ್ಲಿನ ಎಜ್ಜೆಯಲ್ಲಿ ಗಿಡಿದುಕೊಂಡಿದ್ದಳು. ಊಹೂಂ.. ಏನೇ ಆದರೂ ಹಲ್ಲು ನೋವು ಕಡಿಮೆಯಾಗಿರಲಿಲ್ಲ. ಬದಲಾಗಿ ಜಾಸ್ತಿಯಾಗುತ್ತಲೇ ಇತ್ತು. ಅಮ್ಮ ಬಸವಳಿದಿದ್ದಳು. ಸರಿ ಹೇಗೆಂದರೂ ನನಗೆ ಆಸ್ಪತ್ರೆಗೆ ಹೋಗಬೇಕಿತ್ತಲ್ಲ. ಅಮ್ಮನನ್ನೂ ಕರೆದುಕೊಂಡು ಹೋಗಿ ಬಿಡೋಣ ಎಂದು ಅಪ್ಪ ಅಂದುಕೊಂಡ. ಅಮ್ಮನೂ ಹೂಂ ಎಂದು ತಲೆಯಲ್ಲಾಡಿಸಿದವಳೇ ಹೊರಡಲು ಅನುವಾಗಿದ್ದಳು.
         ಬರಗಾಲಕ್ಕೆ ಅಧಿಕ ಮಾಸ ಎಂಬಂತೆ  ಆ ದಿನ ನಮ್ಮ ಮನೆಯಲ್ಲಿ ನಾಲ್ಕಾರು ಆಳುಗಳು ಇದ್ದರು. ಅವರೆಲ್ಲ ಸೇರಿ ಮನೆಯ ಜಂತಿಯ ರಿಪೇರಿಗೆ ಮುಂದಾಗಿದ್ದರು. ಅಮ್ಮನಿಗೋ ಆಸ್ಪತ್ರೆಗೆ ಹೋಗುವ ತರಾತುರಿ. ಅಪ್ಪ ಅಮ್ಮನ ಬಳಿ ಆಸ್ಪತ್ರೆಗೆ ಹೋಗೋಣ ಎನ್ನುವುದೇ ಅಪರೂಪ. ಆತ ಹಾಗೆ ಹೇಳಲು ಬೆರೆ ಕಾರಣವೇ ಇತ್ತೆನ್ನಿ. ಹೇಳಿ ಕೇಳಿ ನಮ್ಮ ಮನೆ ಆ ದಿನಗಳಲ್ಲಿ ಅವಿಭಕ್ತ ಕುಟುಂಬ. ಅಜ್ಜ, ಅಜ್ಜಿ. ಅಜ್ಜ ಸೌಮ್ಯ ಸ್ವಭಾವದವನು. ಅಜ್ಜಿ ಭದ್ರಕಾಳಿ. ಅಪ್ಪನಿಗೆ 5 ಜನ ತಮ್ಮಂದಿರು. ಅಮ್ಮ ಹಿರಿಸೊಸೆ. ಹಿರಿಸೊಸೆಯಾದ ಕಾರಣಕ್ಕೆ ಮನೆಯ ಬಹುತೇಕ ಚಾಕರಿ ಅಮ್ಮನಿಗೆ ಕಟ್ಟಿಟ್ಟಿತ್ತು. ಮನೆಯ ಕೆಲಸಕ್ಕೆ ಬಂದ ಆಳುಗಳ ಮೇಲೆ ಅಜ್ಜಿಗೆ ದರ್ಪ. ಹೊಗೆಯುಗುಳುವ ಒಲೆಯ ಮುಂದೆ ಕುಳಿತು ಕಣ್ಣೀರಿಕ್ಕುತ್ತ ಅಡುಗೆ ಮಾಡುತ್ತಿದ್ದ ಅಮ್ಮನೆಂದರೆ ಆಳುಗಳಿಗೆ ಸಹಾನುಭೂತಿ.
           ಅಮ್ಮ ಹಲ್ಲುನೋವಿನಿಂದ ಬಳಲುತ್ತಿದ್ದುದು ಮನೆಯ ಸದಸ್ಯರಿಗೆ ಯಾರಿಗೂ ಗೊತ್ತಾಗಿರಲಿಲ್ಲ. ಗೊತ್ತಾಗಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು ಹೇಳಿ. ಕೆಲಸಕ್ಕೆ ಬಂದ ಹೆಣ್ಣಾಳುಗಳಿಗೆ ಮಾತ್ರ ಅಮ್ಮನ ಬವಣೆ ಅರ್ಥವಾಗಿತ್ತು. ಮನೆಯ ಜಂತಿಯ ರೀಪಿನ ಕೆಲಸ ಮಾಡುತ್ತಿದ್ದ ಗಂಡಾಳುಗಳ ಬಳಿ ಹೋದ ಹೆಣ್ಣಾಳುಗಳು ಹಲ್ಲುನೋವಿನ ವಿಷಯ ಹೇಳಿದ್ದರು. ಒಬ್ಬ ಆಳು ಸೀದಾ ಅಪ್ಪನ ಬಳಿ ಬಂದು `ಅಮ್ಮನಿಗೆ ಹಲ್ಲುನೋವು ಬಂದದೆ. ಆಸ್ಪತ್ರೆಗಾದ್ರೂ ಕರಕೊಂಡು ಹೋಗಬಾರದೇ ಎಂದಿದ್ದರು. ಕೊನೆಗೆ ಅಪ್ಪ ಮದ್ಯಾಹ್ನ 3 ಗಂಟೆಯ ವೇಳೆಗೆಲ್ಲ ಅಮ್ಮನ ಬಳಿ ಹೊರಡೋಣ ಎಂದಿದ್ದ.
          ಅಮ್ಮ ಕೈಗೆ ಸಿಕ್ಕ ಸೀರೆ ಉಟ್ಟುಕೊಂಡು ಹೊರಟಿದ್ದಳು. ಮನೆಯ ಹೊರಗೆ ಬರುತ್ತಿದ್ದವಳು ಒಮ್ಮೆ `ಆಯ್..' ಎಂದಳು. ಹಿಂದೆ ಅಮ್ಮನ ಜೊತೆಗೆ ಬರುತ್ತಿದ್ದ ನಾನು ನಿಂತು ನೋಡಿದೆ. ಅಮ್ಮ ನಿಂತವಳೇ ಬಗ್ಗಿದಳು. ರೀಪಿನ ಕೆಲಸಕ್ಕೆ ತಂದಿಟ್ಟಿದ್ದ ಮೊಳೆಯೊಂದು ಅಮ್ಮನ ಕಾಲಿಗೆ ಕಪ್ಪಿತ್ತು. ನಾನು ನಿಂತವನೇ ಅಮ್ಮ ಮೊಳೆ ಕಪ್ಪಿಚನೆ ಎಂದೆ. ಹೌದೋ ತಮಾ ಎಂದವಳೇ ಮೊಳೆಯನ್ನು ಕಿತ್ತು ಒಗೆದಳು. ಕಾಲಿನಿಂದ ರಕ್ತ ಒಸರಲು ಆರಂಭವಾಗಿತ್ತು. ಅದಕ್ಕೆ ಹತ್ತಿಸೊಳೆಯನ್ನು ಹಾಕಿ ಕಟ್ಟಿ ಅಪ್ಪನ ಜೊತೆ ಹೊರಟಳು.
           ಒಂದು ಕಾಲು ಕುಂಟುತ್ತ ನಿಧಾನ ನಡೆಯುತ್ತಿದ್ದರೆ ಅಪ್ಪ ಸೈಕಲ್ ತೆಗೆದುಕೊಂಡಿದ್ದ. ನಮ್ಮೂರಿನಿಂದ ಘಟ್ಟದ ರಸ್ತೆಯನ್ನು ಹತ್ತಿ ಕಾನಸೂರಿಗೆ ಹೋಗಿ ಆಸ್ಪತ್ರೆ ದರ್ಶನ ಮಾಡಬೇಕು. ನಮ್ಮೂರಿಗೂ ಕಾನಸೂರಿನ ಆಸ್ಪತ್ರೆಗೂ ನಡುವೆ ಆರೂ ಮುಕ್ಕಾಲು ಕಿಲೋಮೀಟರ್ ಅಂತರ. ಅಪ್ಪ ನನ್ನನ್ನೂ ಅಮ್ಮನನ್ನೂ ಕೂರಿಸಿಕೊಂಡು ಹೋಗಬೇಕಿತ್ತು. ಅರ್ಧಗಂಟೆ ನಡಿಗೆಯ ನಂತರ ಗುಡ್ಡವನ್ನು ಏರಿದ್ದೆವು. ಅಲ್ಲಿಂದ ಅಪ್ಪ ನಮ್ಮನ್ನು ಸೈಕಲ್ ಮೇಲೆ ಕರೆದೊಯ್ಯಲು ಮುಂದಾದ. ಅಮ್ಮ ಹಿಂದಿನ ಕ್ಯಾರಿಯರ್ ಮೇಲೆ ಕುಳಿತಳು. ನಾನು ಚಿಕ್ಕವನು. ನನ್ನನ್ನು ಸೈಕಲ್ಲಿನ ಮುಂದಿನ ಬಾರಿನ ಮೇಲೆ ಕೂರಿಸಿದ. ಕೂರಿಸಿ ಎರಡು ನಿಮಿಷವಾಗಿರಲಿಲ್ಲ. ನನ್ನ ಅಂಡು ನೋಯಲು ಆರಂಭವಾಗಿತ್ತು. ನಾನು ಅಪ್ಪನ ಬಳಿ ಕೂರಲು ಸಾಧ್ಯವಿಲ್ಲ ಎಂದು ರಗಳೆ ಮಾಡಿದೆ. ಅದಕ್ಕವನು ತಕ್ಷಣ ಟವೆಲ್ ಒಂದನ್ನು ತೆಗೆದು ಸೈಕಲ್ ಬಾರಿಗೆ ಕಟ್ಟಿದ. ಅದರ ಮೇಲೆ ಕೂರುವಂತೆ ಹೇಳಿದ. ನಾನು ಕುಳಿತಿದ್ದೆ. ಮೊದಲಿನಷ್ಟು ಅಂಡು ನೋಯುತ್ತಿರಲಿಲ್ಲ. ಆದರೂ ಏಬೋ ಒಂದು ರೀತಿಯ ಕಸ್ಲೆ ಆಗುತ್ತಿತ್ತು. ಹಾಗೂ ಹೀಗೂ ಕುಳಿತೆ. ಅರ್ಧಗಂಟೆಯ ಸವಾರಿಯ ನಂತರ ಕಾನಸೂರು ಬಂದಿತ್ತು.
          ಕಾನಸೂರಿಗೆ ಬಂದವನೇ ಅಪ್ಪ ಮಾಡಿದ ಮೊದಲ ಕೆಲಸವೆಂದರೆ ಸೀದಾ ಸರಕಾರಿ ಆಸ್ಪತ್ರೆಯ ಕಡೆಗೆ ಸೈಕಲ್ ಹೊಡೆದ. ಸರಕಾರಿ ಆಸ್ಪತ್ರೆಗೆ ಹೋಗಿ ಕಬ್ಬಿಣದ ಮೊಳೆ ಕಪ್ಪಿದ್ದ ಅಮ್ಮನಿಗೆ ಟಿಟಿ ಇಂಜೆಕ್ಷನ್ ಕೊಡಿಸುವುದು ಅಪ್ಪನ ಆಲೋಚನೆಯಾಗಿತ್ತು. ಹೀಗೆ ಮಾಡಿದರೆ ಟಿಟಿ ಇಂಜೆಕ್ಷನ್ನಿನ ದುಡ್ಡು ಕೊಡುವುದು ಉಳಿಯುತ್ತದೆ ಎನ್ನುವುದು ಅಪ್ಪನ ಆಲೋಚನೆ. ಸೀದಾ ಸರಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಡಾಕ್ಟರೇ ಇಲ್ಲ. ಅಪ್ಪ ಡಾಕ್ಟರಿಗಷ್ಟು ಹಿಡಿಶಾಪ ಹಾಕಿದ. ಅಮ್ಮನಿಗೆ ಕಾಲು ನೋವು ಇನ್ನಷ್ಟು ಜಾಸ್ತಿಯಾಗಿತ್ತು. ಕಬ್ಬಿಣದ ಮೊಳೆ ಕಪ್ಪಿದ್ದ ಬಲಗಾಲು ಆಗಲೇ ಊದಿಕೊಂಡಿತ್ತು.
             ಹಳೆಯ ಗಂಡನ ಪಾದವೇ ಗತಿ ಎಂಬಂತೆ ಅಪ್ಪ ಬೆಳ್ಳೆಕೇರಿ ಡಾಕ್ಟರ ಮನೆಯ ಕಡೆಗೆ ಮುಖ ಮಾಡಿದ್ದ. ಮೊದಲಿನಿಂದಲೂ ಅಪ್ಪನಿಗೆ ಸ್ಪಲ್ಪ ಜಾಸ್ತಿ ಖರ್ಚಾಗುತ್ತದೆ ಎಂದಾದರೆ ಅತ್ತ ಮುಖ ಮಾಡುವುದಿಲ್ಲ. ಕಾನಸೂರಿನಲ್ಲಿ ಬೆಳ್ಳೇಕೇರಿ ಡಾಕ್ಟರು ದುಬಾರಿ ಎಂಬ ಮಾತುಗಳು ಆಗಾಗ ಚಾಲ್ತಿಗೆ ಬರುತ್ತಿದ್ದ ಕಾಲ. ಗುಳಿಯಲ್ಲಿ ವಾಸಿಯಾಗುವ ಖಾಯಿಲೆಗಳಿಗೂ ಇಂಜೆಕ್ಷನ್ ಕೊಡುತ್ತಾರೆ ಎನ್ನುವ ದೊಡ್ಡ ಆರೋಪ ಹೊಂದಿದ್ದ ಡಾಕ್ಟರ್ ಅವರು. ಆದರೆ ನನ್ನ ಅಜ್ಜನಿಗೆ ಮಾತ್ರ ಬೆಳ್ಳೆಕೇರಿ ಡಾಕ್ಟರರೇ ಆಗಬೇಕು. ಅವರ ಕೈಗುಣವನ್ನು ನಂಬುವ ಅಜ್ಜ ಬೆಳ್ಳೇಕೇರಿ ಡಾಕ್ಟರರನ್ನು ಫ್ಯಾಮಿಲಿ ಡಾಕ್ಟರರನ್ನಾಗಿ ದತ್ತು ತೆಗೆದುಕೊಂಡಿದ್ದ.
             ಅಜ್ಜನ ಕಣ್ಣು ತಪ್ಪಿಸಿ ಅಪ್ಪ ಬೇರೆ ಕಡೆಗೆ ಡಾಕ್ಟರರ ಮನೆಗೆ ನಮ್ಮನ್ನೆಲ್ಲ ಕರೆದೊಯ್ಯಲು ನೋಡುತ್ತಿದ್ದರೆ ಅಪ್ಪನ ಯೋಜನೆ, ಯೋಚನೆ ಅದ್ಹೇಗೋ ತಣ್ಣಗಾಗಿಬಿಡುತ್ತಿತ್ತು. ಕೊನೆಗೆ ವಿಧಿಯಿಲ್ಲದೇ ಕಂಡ ಕಂಡವರನ್ನೋ ಅಥವಾ ಜೊತೆಗೆ ಇರುತ್ತಿದ್ದ ನನ್ನನ್ನೋ ಬಯ್ಯುತ್ತ ಅಪ್ಪ ಬೆಳ್ಳೇಕೇರಿ ಡಾಕ್ಟರರ ಮನೆಗೆ ಕರೆದೊಯ್ಯುತ್ತಿದ್ದ. ಆವತ್ತು ಕೂಡ ಹಾಗೆಯೇ ಆಯಿತು. ನನಗೆ ಮೂರನೇ ಇಂಜೆಕ್ಷನ್. ಅಮ್ಮನಿಗೆ ಔಷಧಿ ನೀಡುವ ಸಲುವಾಗಿ ಬೆಳ್ಳೇಕೇರಿ ಡಾಕ್ಟರರ ಮನೆಯ ಕಡೆಗೆ ಹೋದೆವು. ಅಷ್ಟಾದ ಮೇಲೆಯೇ ಬೆಳ್ಳೇಕೇರಿ ಡಾಕ್ಟರು ನನಗೆ ಮೂರನೇ ಇಂಜೆಕ್ಷನ್ನನ್ನು ಕೊಟ್ಟು `ಇವತ್ತು ಕೊನೇದು..' ಎಂದಿದ್ದು.
            ಆಮೇಲೆ ಅಮ್ಮನಿಗೂ ಹಲ್ಲುನೋವಿಗಾಗಿ ಮಾತ್ರೆ ಕೊಟ್ಟರು. ಕಬ್ಬಿಣದ ಮೊಳೆ ಕಪ್ಪಿದ್ದಕ್ಕಾಗಿ ಟಿಟಿ ಇಂಜೆಕ್ಸನ್ನನ್ನೂ ಕೊಟ್ಟರು. ಎಲ್ಲಾ ಆದ ಮೇಲೆ `ಸುಬ್ರಾಯಾ.. 400 ರುಪಾಯಿ ಆತು...' ಎಂದಾಗ ಅಪ್ಪ ಒಮ್ಮೆ ಕುಮುಟಿ ಬಿದ್ದಿದ್ದ. ಸರಕಾರಿ ಆಸ್ಪತ್ರೆಗೆ ಹೋಗಿದ್ದರೆ ನೂರು ರೂಪಾಯಿಯಲ್ಲಿ ಮುಗಿಯುತ್ತಿತ್ತು ಎಂದು ಅಲವತ್ತುಕೊಂಡ. ಹೋದ ತಪ್ಪಿಗೆ ಡಾಕ್ಟರ್ ಬಿಲ್ಲನ್ನು ಕೊಟ್ಟು ಹೊರ ಬಂದ.
         ಆಗಲೇ ಸಂಜೆ ಐದನ್ನು ದಾಟಿ ಸೂರ್ಯ ಪಶ್ಚಿಮದಲ್ಲಿ ಕಂತಲು ಆರಂಭಿಸಿದ್ದ. ಅಮ್ಮ ಕುಂಟುತ್ತಲೇ ಇದ್ದಳು. ಅಪ್ಪ ಸೈಕಲ್ಲಿನ ಮೇಲೆ ವಾಪಾಸ್ ಮನೆಗೆ ಕರೆದೊಯ್ಯಲು ಹವಣಿಸಿದ. ನಮ್ಮೂರಿಗೂ ಕಾನಸೂರಿಗೂ ನಡುವೆ ಕಾಲುದಾರಿಯಿದೆ. ರಸ್ತೆ ಮಾರ್ಗಕ್ಕಿಂತ 2 ಕಿಲೋಮೀಟರ್ ದೂರವನ್ನು ಈ ಕಾಲುದಾರಿ ಕಡಿಮೆ ಮಾಡುತ್ತದೆ. ಕಾಲುದಾರಿಯ ನಡುವೆ ಅನೇಕ ಕೊಡ್ಲುಗಳೂ, ಕಾಲು ಸಂಕಗಳೂ ಇರುವ ಕಾರಣ ಕಾಲ್ನಡಿಗೆಯಲ್ಲಿ ಹೋಗುವವರು ಮಾತ್ರ ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಪರೂಪಕ್ಕೆ ಕೆಲವರು ಸೈಕಲ್ ಮೂಲಕ ಈ ದಾರಿಯಲ್ಲಿ ಪ್ರಯಾಣ ಮಾಡುತ್ತಾರೆ. ಅಪ್ಪ ಆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದ. ಕೊಡ್ಲು ಹಾಗೂ ಸಂಕಗಳ ಜಾಗದಲ್ಲಿ ನಮ್ಮನ್ನು ಸೈಕಲ್ಲಿನಿಂದ ಇಳಿಸಿ, ದಾಟಿಸಿ ನಂತರ ಸೈಕಲ್ ಮೇಲೆ ಕರೆದೊಯ್ಯುವುದು ಆತನ ಉದ್ದೇಶವಾಗಿತ್ತು.
           ಕಾನಸೂರಿನಿಂದ ಹೊರಟು ಅರ್ಧ ಕಿಲೋಮೀಟರ್ ಬಂದಿದ್ದೆವು. ಇಳುಕಲು ಇದ್ದ ಕಾರಣ ಅಪ್ಪ ಸಾಕಷ್ಟು ಜೋರಾಗಿಯೇ ಸೈಕಲ್ ತುಳಿಯುತ್ತ ಬರುತ್ತಿದ್ದ. ಅಮ್ಮ ಎಂದಿನಂತೆ ಒಂದು ಬದಿಯಾಗಿ ಕುಳಿತಿದ್ದರೆ ನಾನು ಸೈಕಲ್ಲಿನ ಮುಂದಿನ ಬಾರ್ ಮೇಲೆ ಅಂಡು ನೋಯಿಸಿಕೊಳ್ಳುತ್ತ ಕುಳಿತಿದ್ದೆ. ಅಲ್ಲೊಂದು ಕಡೆ ಕಾಲುದಾರಿಯ ಪಕ್ಕದಲ್ಲಿಯೇ ಮರಗಳಿವೆ. ಅಪ್ಪ ಹೋಗುತ್ತಿದ್ದ ವೇಗಕ್ಕೆ ದಡಾರ್ ಎನ್ನುವ ಶಬ್ದವಾಯಿತು. ಅಮ್ಮ ಇದ್ದಕ್ಕಿಂದ್ದಂತೆ `ಅಯ್ಯಯ್ಯೋ.. ' ಎಂದಳು. ಅಪ್ಪ ಗಾಬರಿ ಬಿದ್ದು ಸೈಕಲ್ ನಿಲ್ಲಿಸುವ ವೇಳೆಗಾಗಲೇ ಮೂರು ಸಾರಿ ಲಡ್ ಲಡ್ ಎನ್ನುವ ಸದ್ದು ಕೇಳಿಸಿತ್ತು.
           ಏನೋ ಭಾನಗಡಿ ಆಯಿತು ಎಂದುಕೊಂಡ ಅಪ್ಪ ಸೈಕಲ್ ನಿಲ್ಲಿಸಿದ. ಅಮ್ಮ ಸೈಕಲ್ಲಿನಿಂದ ಮುಕ್ಕರಿಸಿ ಬಿದ್ದಿದ್ದಳು. ಆಕೆಯ ಒಂದು ಕಾಲು ಸೈಕಲ್ ಚಕ್ರದೊಳಕ್ಕೆ ಸಿಕ್ಕಿಬಿದ್ದಿತ್ತು. ಕಾಲು ಸಿಕ್ಕಿಬಿದ್ದ ಹೊಡತಕ್ಕೆ ಸೈಕಲ್ಲಿನ ಚಕ್ರದ ಮೂರು ಕಡ್ಡಿಗಳು ಮುರಿದು ಹೋಗಿದ್ದವು. ಅಪ್ಪ ಅಸಹನೆಯಿಂದ `ತಥ್..' ಎಂದ. `ಎಂತಾ ಆತೆ..?' ಎಂದು ಅಮ್ಮನ ಬಳಿ ಕೇಳಿದ್ದ. ಅದಕ್ಕವಳು `ಅದೋ ಆ ಮರಕ್ಕೆ ಕಾಲು ತಾಗಿತು. ಮರಕ್ಕೆ ಬಡಿಯುವದನ್ನು ತಪ್ಪಿಸುವ ಸಲುವಾಗಿ ಕಾಲು ಮಡಚಿದೆ. ಆದರೆ ಅಷ್ಟರಲ್ಲಿ ಸೈಕಲ್ ಚಕ್ರದೊಳಕ್ಕೆ ಕಾಳು ಸಿಕ್ಕಿಬಿದ್ದಿತು..' ಎಂದಳು. ಅವಳ ಕಣ್ಣಲ್ಲಿ ಅಪ್ರಯತ್ನವಾಗಿ ನೀರು ಬರಲು ಆರಂಭಿಸಿತ್ತು. ಕಾಲನ್ನು ನಿಧಾನವಾಗಿ ಚಕ್ರದೊಳಗಿನಿಂದ ಬಿಡಿಸಿಕೊಂಡಳು. ಚಕ್ರದ ಕಡ್ಡಿ ತಾಗಿದ ರಭಸಕ್ಕೆ ಕಾಲು ಕೆಂಪಗಾಗಿ ಹೋಗಿತ್ತು. ಆದರೆ ರಕ್ತವೇನೂ ಬಂದಿರಲಿಲ್ಲ. ರಭಸವಾಗಿ ತೀಡಿದ್ದ ಕಾರಣ ಸೇಬು ಹಣ್ಣಿನ ಸಿಪ್ಪೆ ಸುಲಿದಂತೆ ಆಗಿತ್ತು.
              `ಥೋ... ಸೈಕಲ್ಲಿನ ಚಕ್ರದ ಕಡ್ಡಿ ಮುರಿದೋತು...' ಅಪ್ಪ ಎರಡನೇ ಸಾರಿ ನಿಡುಸುಯ್ದಿದ್ದ. ಅಮ್ಮ ನೋವಿನಲ್ಲಿಯೂ ಒಮ್ಮೆ ಅಪ್ಪನನ್ನು ದುರುಗುಟ್ಟಿ ನೋಡಿದಳು. `ನಿಂಗವ್ ಒಂದ್ ಕೆಲ್ಸ ಮಾಡಿ... ಸಾವಕಾಶವಾಗಿ ಮನೆಯ ಕಡೆ ಹೋಗ್ತಾ ಇರಿ. ಆನು ಸೈಕಲ್ ಚಕ್ರದ ಕಡ್ಡಿ ರಿಪೇರಿ ಮಾಡಿಶ್ಕ್ಯಂಡ್ ಬತ್ರಿ. ಮೂರು ಕಡ್ಡಿ ಮುರಿದು ಹೋಜು. ಹತ್, ಹದಿನೈದು ನಿಮಿಷದಲ್ಲಿ ರಿಪೇರಿ ಮಾಡ್ತಾ ಕಾನಸೂರು ಸಾಬಾ.. ಅವನ ಹತ್ರ ಮಾಡಿಶ್ಕ್ಯಂಡ್ ಬತ್ತಿ..' ಅಪ್ಪ ಹೇಳಿದ್ದ. ಅಮ್ಮನಿಗೆ ಅದೆಷ್ಟು ಬೇಜಾರಾಗಿತ್ತೋ.. `ಹೂಂ' ಎಂದಿದ್ದಳು. ಅಪ್ಪ ವಾಪಾಸು ಕಾನಸೂರು ಕಡೆ ಮುಖ ಮಾಡಿದ್ದ.

(ಮುಂದುವರಿಯುತ್ತದೆ..)
           
           

Tuesday, September 6, 2016

ಸಂಪ್ರದಾಯದ ಹಾಡುಗಳಲ್ಲಿ ಗಣೇಶ ಚತುರ್ಥಿಯ ವರ್ಣನೆ

ಮನೆ ಮನೆಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮ-ಸಡಗರ ಮೇರೆ ಮೇರಿದೆ. ಎಲ್ಲ ಕಡೆಗಳಲ್ಲಿಯೂ ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಯ ಹಬ್ಬಕ್ಕೆ ಸಂಪ್ರದಾಯದ ಹಾಡುಗಳಲ್ಲಿ ವಿಶೇಷ ಅರ್ಥವನ್ನೇ ನೀಡಲಾಗಿದೆ. ಮಂಗಳಮೂರ್ತಿ ವಿನಾಯಕನ ಚತುರ್ಥಿಗೆ ತನ್ನದೇ ಆದ ಹೊಸ ಅರ್ಥವನ್ನು ಹಳ್ಳಿಗಳ ಸಂಪ್ರದಾಯದ ಹಾಡುಗಳು ನೀಡುವ ಮೂಲಕ ವಿಶೇಷ ಮೆರಗಿಗೂ ಕಾರಣವಾಗಿವೆ.
ಸಂಪ್ರದಾಯದ ಹಾಡುಗಳನ್ನು ಹಬ್ಬಗಳು ನಡೆಯುವ ಸಂದರ್ಭದಲ್ಲಿ ವಿಶೇಷವಾಗಿ ಹಾಡಲಾಗುತ್ತದೆ. ಎಲ್ಲಾ ಜಾತಿಗಳವರೂ ವಿಶೇಷವಾಗಿ ಹಾಡುವ ಸಂಪ್ರದಾಯದ ಹಾಡುಗಳು ಲಯಬದ್ಧವಾಗಿಯೂ, ಕಿವಿಗೆ ಇಂಪಾಗುವ ರೀತಿಯಲ್ಲಿಯೂ ಇರುತ್ತವೆ. ಜೊತೆಜೊತೆಯಲ್ಲಿ ಗಾಂವಟಿ ಶಬ್ದಗಳನ್ನು ಒಳಗೊಂಡಿದ್ದು ಸರಳ ಭಾಷೆಯಲ್ಲಿ ಮಹತ್ತರ ಅರ್ಥಗಳನ್ನು ಜಗತ್ತಗೆ ಸಾರಿ ಹೇಳುತ್ತವೆ. ಗಣೇಶ ಹಬ್ಬದ ಕುರಿತಂತೆಯೂ ಸಾಕಷ್ಟು ಸಂಪ್ರದಾಯದ ಹಾಡುಗಳು ಚಾಲ್ತಿಯಲ್ಲಿವೆ. ವಿಭಿನ್ನ ಕಥೆಗಳೂ ಇವೆ. ನಿಮ್ಮ ಮುಂದೆ ನೀಡಲಾಗುತ್ತಿರುವ ಈ ಸಂಪ್ರದಾಯದ ಹಾಡಿನಲ್ಲಿ ಶಿವ ಹಾಗೂ ಪಾರ್ವತಿಯರ ನಡುವಿನ ಸಂವಾದ ಬೆರಗುಗೊಳಿಸುತ್ತದೆ. ಪೂರ್ವಾರ್ಧ ಹಾಗೂ ಉತ್ತರಾರ್ಧ ಎಂಬ ಎರಡು ಪ್ರಮುಖ ಭಾಗಗಳಿದ್ದು ಪಾರ್ವತಿ ತನ್ನ ತವರು ಮನೆಗೆ ಹೋಗುವುದು, ಆಕೆಯನ್ನು ಮರಳಿ ಮನೆಗೆ ಕರೆದುಕೊಂಡು ಬರಲು ಶಿವ ತನ್ನ ಪುತ್ರನಾದ ಗಣಪನನ್ನು ಕಳಿಸುವುದು ಹಾಗೂ ಮರಳಿ ಬಂದ ನಂತರ ಪಾರ್ವತಿಯ ತವರು ಮನೆಯಲ್ಲಿ ಏನೇನಾಯಿತು ಎನ್ನುವುದನ್ನು ಶಿವ ಕೇಳಿ ತಿಳಿದುಕೊಳ್ಳುವ ಸನ್ನಿವೇಶಗಳನ್ನು ಒಳಗೊಂಡಿದೆ.
ಕನಸ ಕಂಡೆನು ರಾತ್ರಿ ಬೆನಕ ತಾನಾಡುವುದ ವನಜಾಕ್ಷಿ ಗೌರಿ ಪಿಡಿದೆತ್ತಿ
ಪಿಡಿದು ಮುದ್ದಾಡುವುದ ನಿನ್ನಿರುಳು ಕಂಡೆ ಕನಸನ್ನ...
ಎಂದು ಆರಂಭವಾಗುವ ಈ ಹಾಡಿನಲ್ಲಿ ಪಾರ್ವತಿಯ ತಂದೆ ಪರ್ವತರಾಜನ ಬಳಿ ಪರ್ವತರಾಜನ ಮಡದಿ ಮಗಳು ಹಾಗೂ ಮೊಮ್ಮಗನ ನೋಡುವ ಬಯಕೆಯನ್ನು ವ್ಯಕ್ತ ಪಡಿಸುತ್ತಾಳೆ. ರಾತ್ರಿ ಕನಸಿನಲ್ಲಿ ಪಾರ್ವತಿ ತನ್ನ ಪುತ್ರ ಗಣಪನನ್ನು ಎತ್ತಿ ಮುದ್ದಾಡಿದಂತೆ ಕನಸು ಬಿತ್ತು ಎನ್ನುತ್ತಾಳೆ. ನಂತರ ಮಡದಿಯ ಕೋರಿಕೆಗೆ ಅನುಗುಣವಾಗಿ ಪರ್ವತರಾಜ ಕೈಲಾಸಕ್ಕೆ ತೆರಳಿ ಶಿವ, ಪಾರ್ವತಿ ಹಾಗೂ ಗಣಪನನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಯಾಗಿ ಪಾರ್ವತಿ ತಾನು ತವರಿಗೆ ತೆರಳುತ್ತೇನೆ ಎಂದು ವಿನಂತಿಸಿಕೊಳ್ಳುತ್ತಾಳೆ. ಆದರೆ ಅದಕ್ಕೆ ಪ್ರತಿಯಾಗಿ ಶಿವ ಪಾರ್ವತಿಯ ಬಳಿ `ನಿನ್ನ ತವರಿನ ಜನ ಬಡವರು. ಅಲ್ಲೇಕೆ ಹೋಗುತ್ತೀಯಾ..' ಎನ್ನುತ್ತಾನೆ.
ಚಿಕ್ಕ ಬೆನವಣ್ಣನು ಚಕ್ಕುಲಿಯ ಬೇಡಿದರೆ ನೆತ್ತಿಮೇಲೋಂದ ಸೊಣೆವರೋ..
ಶ್ರೀಗೌರಿ ನೀನಲ್ಲಿಗೆ ಹೋಗಿ ಫಲವೇನೂ..?
ಎಂದು ಹೇಳುತ್ತಾನೆ. ಅಂದರೆ ಪುಟ್ಟ ಬಾಲಕನಾದ ಗಣಪ ಚಕ್ಕುಲಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಬಯಸಿ ಕೇಳಿದರೆ ಬಡವರಾದ ನಿನ್ನ ತವರಿನ ಜನ ಅದನ್ನು ಕೊಡುವ ಬದಲು ತಲೆಯ ಮೇಲೆ ಮೊಟಕಿ ಸುಮ್ಮನಿರಿಸುತ್ತಾರೆ ಎಂದು ಶಿವ ತನ್ನ ಮಡದಿಯನ್ನು ಹಂಗಿಸುತ್ತಾನೆ.
ಇಂದು ಹೋದರೆ ನೀನು ಕಂದರನು ಬಿಟ್ಟೋಗು
ಇಂದಿಗೆ ಮೂರು ದಿನದಲ್ಲಿ, ಬರದಿದ್ದರೆ ಚಂದ್ರಶೇಖರನ ಕೊರಳಾಣೆ..
ಎಂದು ಶಿವ ಹೆಂಡಿತ ಬಳಿ ಹೇಳಿ ಮೂರೇ ದಿನದಲ್ಲಿ ಮರಳಿ ಕೈಲಾಸಕ್ಕೆ ಬಾ. ತವರಿಗೆ ಕರೆಯಲು ಬಂದಿರುವ ತಂದೆಯ ಜೊತೆ ಹೋಗಲು ಬಯಸಿದರೆ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟುಹೋಗು ಎಂದು ಆಜ್ಞಾಪಿಸುತ್ತಾನೆ. ನಂತರ ಪಾರ್ವತಿ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟು ತವರಿಗೆ ಹೋಗುತ್ತಾಳೆ. ಪಾರ್ವತಿ ತವರಿಗೆ ಹೋದ ನಂತರ ಶಿವನಿಗೆ ಕೈಲಾಸದಲ್ಲಿ ಏಕಾಅಂಗಿ ಭಾವ ಕಾಡುತ್ತದೆ. ಪಾರ್ವತಿ ತವರಿಗೆ ಹೋದ ಒಂದೇ ದಿನದಲ್ಲಿಯೇ ಒಂದು ವರ್ಷವಾದಂತೆ ಅನ್ನಿಸುತ್ತದೆ. ಬೇಸರಿಸಿದ ಶಿವ ಮರುದಿನವೇ ಗಣಪನ ಬಳಿ ಆತನ ಅಜ್ಜನಮನೆಗೆ ಹೋಗಿ ತಾಯಿಯನ್ನು ಕರೆದುಕೊಂಡು ಬಾ ಎಂದು ಆಜ್ಞಾಪಿಸುತ್ತಾನೆ.
ತಾಯಿಯನ್ನು ಕರೆದುಕೊಂಡು ಬರಲು ಭೂಲೋಕಕ್ಕೆ ಬರುತ್ತಿರುವ ಗಣಪನ ಕುರಿತು ತಿಳಿದ ಭೂಲೋಕ ವಾಸಿಗಳು ಗಣಪನ್ನು ದಾರಿ ಮಧ್ಯದಲ್ಲಿಯೇ ತಡೆದು ನಿಲ್ಲಿಸಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡುತ್ತಾರೆ. ಅವುಗಳನ್ನು ತಿಂದು ದೊಡ್ಡ ಹೊಟ್ಟೆಯನ್ನು ಮಾಡಿಕೊಂಡು ದಾರಿಯಲ್ಲಿ ಬರುತ್ತಿರುವಾಗ ಎಡವಿ ಬೀಳುವ ಗಣಪನ ಹೊಟ್ಟೆ ಒಡೆದು ಹೋಗುತ್ತದೆ. ಕೊನೆಗೆ ಆ ಹೊಟ್ಟೆಗೆ ಹಾವನ್ನು ಸುತ್ತುತ್ತಾನೆ ಎನ್ನುವುದು ಹಾಡಿನಲ್ಲಿ ಬರುವ ವಿವರಗಳು. ಆ ನಂತರದಲ್ಲಿ ಗಣಪನನ್ನು ನೋಡಿ ಚಂದ್ರ ನಗುವುದು ಹಾಗೂ ಚಂದ್ರನಿಗೆ ಶಾಪ ಕೊಡುವ ಕತೆಗಳೆಲ್ಲ ಪ್ರತಿಯೊಬ್ಬರಿಗೂ ತಿಳಿದಿದೆ. ನಂತರದಲ್ಲಿ ಪರ್ವತರಾಜನ ಅರಮನೆಗೆ ತೆರಳುವ ಗಣಪನಿಗೆ ವಿಶೇಷ ಪೂಜೆ ಮಾಡಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡಲಾಗುತ್ತದೆ. ಕೊನೆಯಲ್ಲಿ ಗಣಪ ತಾಯಿ ಪಾರ್ವತಿಯನ್ನು ಕರೆದುಕೊಂಡು ಕೈಲಾಸಕ್ಕೆ ಮರಳುತ್ತಾನೆ. ಪಾರ್ವತಿ ಕೈಲಾಸಕ್ಕೆ ಮರಳಿದ ನಂತರ ಆಕೆಯ ಬಳಿ ತವರಿನ ವಿಷಯ ಕೇಳಿ ಪರ್ವತರಾಜನ್ನು ಶಿವ ವ್ಯಂಗ್ಯವಾಗಿ ಆಡಿಕೊಳ್ಳುವ ಪರಿ ಸಂಪ್ರದಾಯದ ಹಾಡುಗಳನ್ನು ಸವಿವರವಾಗಿ ವರ್ಣನೆಯಾಗಿದೆ.
ಹೋದಾಗೇನನು ಕೊಟ್ಟುರ, ಬರುವಾಗೇನನು ಕೊಟ್ಟರು
ಮರೆಯದೇ ಹೇಳೆಂದ ಹರನು ತಾನು.. ಎಂದು ಶಿವ ಕುತೂಹಲದಿಂದ ಕೇಳುತ್ತಾನೆ. ಅಷ್ಟೇ ಅಲ್ಲದೇ ತನ್ನ ಪುತ್ರ ಗಣಪನ ಕುರಿತಂತೆ ಕೆಸವಿನೋಗವ ಬಡಕಲಾಗಿಹನೋ ಬೆನವಣ್ಣ ಎಂದೂ ಹೇಳುತ್ತಾನೆ. ಅಂದರೆ ಬಡವನಾದ ಪರ್ವತರಾಜ ಮನೆಯಲ್ಲಿ ಸರಿಯಾಗಿ ಆತಿಥ್ಯವನ್ನೇ ಮಾಡಿಲ್ಲ. ಪರಿಣಾಮವಾಗಿ ಗಣಪ ಬಡಕಲಾಗಿದ್ದಾನೆ ಎಂದು ಹಂಗಿಸುತ್ತಾನೆ. ಇದರಿಂದ ಪಾರ್ವತಿ ನೊಂದುಕೊಳ್ಳುತ್ತಾಳೆ. ತವರುಮನೆಯನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆಗ ಪಾರ್ವತಿಯ ಬಳಿ ತವರಿನಲ್ಲಿ ಯಾವ ರೀತಿ ಸತ್ಕರಿಸಿದರು ಎನ್ನುವುದನ್ನು ವಿವರಿಸುವಂತೆ ಕೇಳುತ್ತಾನೆ.
ಎಂದ ಮಾತನು ಕೇಳಿ ನೊಂದು ಹೇಳ್ದಳು ಗೌರಿ ಬಂಧು ಬಾಂಧವರೆಲ್ಲ ಸುಖದೊಳಿರಲಿ,
ತಂದೆ ಗಿರಿ ರಾಯನು ಹಿಂದಿನ ಹಿರಿಯನು ನಮ್ಮವರು ಬಡವರು ಇನ್ನೇನ ಕೊಟ್ಟಾರೆ ಎಂದು ತವರಿನ ಕುರಿತು ಹೇಳುತ್ತಾಳೆ.
ಬೆನವಣ್ಣಗೆ ಉಂಗುರ, ಬೆನವಣ್ಣಗೆ ಉಡಿದಾರ, ಬೆನವಣ್ಣಗೆ ಪಟ್ಟೆ ಪೀತಾಂಬ್ರವು,
ಕನಕದ ಕುಂಭದಲಿ ಬೆನಕನಿಗೆ ಭಕ್ಷ್ಯಗಳು ನಮ್ಮವರು ಬಡವರಿನ್ನೇನ ಕೊಟ್ಟಾರೆ..
ಆಸೇರು ಸಣ್ಣಕ್ಕಿ, ಮೂಸೇರು ದೊಡ್ಡಕ್ಕಿ, ನೂರ್ಸೇರು ಬೆಲ್ಲ-ತುಪ್ಪದ ಕೊಡಗಳು..
ಎಮ್ಮೆಯು ಕರ ಹಿಂಡು ಗೋವುಗಳು... ನಮ್ಮವರು ಬಡವರು ಇನ್ನೇನ ಕೊಟ್ಟಾರೆ.. ಎಂದು ತನ್ನ ತವರನ್ನು ಸಮರ್ಥನೆ ಮಾಡಕೊಳ್ಳುತ್ತಾಳೆ. ಕೊನೆಯಲ್ಲಿ ಶಿವ ಪಾಅರ್ವತಿಯ ಮಾತಿನಿಂದ ಸಮಾಧಾನಗೊಳ್ಳುತ್ತಾನೆ. ಅಲ್ಲದೇ ತಾನು ಹಂಗಿಸಿದ ಕಾರಣಕ್ಕಾಗಿ ಬೇಸರ ಮಾಡಿಕೊಂಡ ಪಾರ್ವತಿಯನ್ನು ಸಮಾಧಾನ ಮಾಡುತ್ತಾನೆ.
ಹೀಗೆ ಶಿವ-ಪಾರ್ವತಿಯರ ನಡುವಿನ ಸಂವಾದವನ್ನು ರಸವತ್ತಾಗಿ ಚಿತ್ರಿಸಿರುವ ಸಂಪ್ರದಾಯದ, ಆಡುಮಾತಿನ ಹಾಡುಗಳು ಹೊಸ ಹೊಸ ಶಬ್ದಗಳನ್ನು ಕಟ್ಟಿಕೊಡುತ್ತವೆ. ಹಳೆಯ ಸಂಪ್ರದಾಯಗಳು, ಭಕ್ಷ್ಯ-ಭೋಜನಗಳು, ಪುರಾಣದ ಕತೆಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತವೆ. ಜೊತೆ ಜೊತೆಯಲ್ಲಿ ದೈವಭಕ್ತಿಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತವೆ. ಇಂತಹ ಅದೆಷ್ಟೋ ಸಂಪ್ರದಾಯದ ಹಾಡುಗಳು ವಿನಾಯಕನ ಚತುರ್ಥಿಯ ವೈಶಿಷ್ಟ್ಯವನ್ನು ಸಾರುತ್ತ ಇಂದಿಗೂ ಪ್ರಚಲಿತದಲ್ಲಿವೆ. ಹಬ್ಬದ ಸಡಗರಕ್ಕೆ ಇಂತಹ ಹಾಡುಗಳು ಮೆರಗು ಕೊಡುತ್ತವೆ.

-------------

(ಈ ಲೇಖನವು ವಿಶ್ವವಾಣಿ ಪತ್ರಿಕೆಯ ಉತ್ತರ ಕನ್ನಡ ಆವೃತ್ತಿಯಲ್ಲಿ ಸೆ.5ರಂದು ಪ್ರಕಟವಾಗಿದೆ)

Friday, August 19, 2016

ಅವದೂತ ಯತಿ ಶ್ರೇಷ್ಟ ಸಹಜಾನಂದರು

ಮಾರುತಿಯ ಆರಾಧಕರು, ಶ್ರೀಧರ ಸ್ವಾಮೀಜಿಗಳ ಪ್ರಿಯ ಶಿಷ್ಯರು

ವಾಯುಪುತ್ರ ಹನುಮಂತ ಅವದೂತ ಪರಂಪರೆಯಲ್ಲಿ ಕೇಳಿ ಬರುವ ಮೊಟ್ಟಮೊದಲ ಹೆಸರು. ಶ್ರೀರಾಮನ ಸೇವೆಯಲ್ಲಿಯೇ ಸರ್ವಸ್ವವನ್ನೂ ಕಂಡವನು. ಪ್ರಪಂಚದ ಕುರಿತಾಗಿ ಪೂರ್ಣ ವಿರಕ್ತನಾದ ಭಕ್ತಶ್ರೇಷ್ಟ. ಇಂತಹ ಮಾರುತಿಯ ಆರಾಧನೆಯ ಮೂಲಕ ಅವದೂತರಾಗಿ ಲೋಕಕಲ್ಯಾಣವನ್ನು ಮಾಡಿದವರೇ ಸಹಜಾನಂದ ಅವದೂತ ಸ್ವಾಮೀಜಿಗಳು.
ಶಿವನ ಅಷ್ಟ ಮೂತರ್ಿಗಳಲ್ಲಿ ಮಾರುತನಿಗೆ ಪ್ರಮುಖ ಸ್ಥಾನವಿದೆ. ಇಂತಹ ಮಾರುತನ ಅವತಾರವೇ ಮಾರುತಿ. ಮಾರುತಿ ನೆಲೆನಿಂತ ಕ್ಷೇತ್ರ ಕೊಳಗೀಬೀಸ್. ಶಿರಸಿ ತಾಲೂಕಿನ ಕೊಳಗೀಬೀಸ್ ಸಹಜಾನಂದ ಅವದೂತರ ತಪೋಭೂಮಿ. ಕೊಳಗೀಬೀಸಿನ ಮಾರುತಿ ದೇವರನ್ನು ಆರಾಧನೆ ಮಾಡಿ ಲೋಕಕಲ್ಯಾಣ ಕಾರ್ಯವನ್ನು ನೆರವೇರಿಸಿದವರು ಸಹಜಾನಂದ ಅವದೂತ ಯತಿಗಳು. 1950ರ ದಶಕದಲ್ಲಿ ಕೊಳಗೀಬೀಸಿನ ಮಾರುತಿ ದೇವಸ್ಥಾನವನ್ನು ಜೀಣೋದ್ಧಾರ ಮಾಡಿಸಿ, ಭವ್ಯವಾಗಿ ನಿಮರ್ಿಸಲು ಕಾರಣೀಭೂತರಾದವರು ಸಹಜಾನಂದ ಯತಿಗಳು.
ಸಹಜಾನಂದ ಅವದೂತರು ಮೂಲತಃ ಶಿರಸಿ ತಾಲೂಕಿನ ಜಾಗನಳ್ಳಿಯವರು. ಊರಿನಲ್ಲಿ ಮೈಲಿಬೇನೆ ಬಂದು, ತೀರಾ ಸಂಕಟ ಉಂಟಾಗಿ, ಶರೀರ ದುರ್ಬಲವಾಗಿ ಕಣ್ಣು ಕೂಡ ಕಾಣಿಸದಿರುವಂತಾದ ಹೊತ್ತಿನಲ್ಲಿ ಸಹಜಾನಂದ ಅವದೂತರು ಕೊಲ್ಲೂರು-ಕೊಡಚಾದ್ರಿಗೆ ತೆರಳಿ ಭಗವಂತನ ಧ್ಯಾನಕ್ಕೆ ಮುಂದಾದರು. ಸಹಜಾನಂದ ಅವದೂತರು ಸನ್ಯಾಸ ದೀಕ್ಷೆ ಪಡೆದಿದ್ದು ಸಿದ್ದಾಪುರ ತಾಲೂಕಿನ ನೆಲೆಮಾಂವ್ ಮಠದಲ್ಲಿ. ನೆಲೆಮಾಂವ್ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿಗಳು ಸನ್ಯಾಸ ದೀಕ್ಷೆಯನ್ನು ನೀಡಿದರು. ಆ ಸಂದರ್ಭದಲ್ಲಿ ಶ್ರೀ ಶ್ರೀಧರ ಸ್ವಾಮಿಗಳಖ ದರ್ಶನ ಭಾಗ್ಯ ಸಹಜಾನಂದ ಅವದೂತರಿಗಾಯಿತು. ಸಹಜಾನಂದ ಅವದೂತರು ಶ್ರೀಧರ ಸ್ವಾಮೀಜಿಗಳನ್ನೇ ಗುರುವಾಗಿ ಸ್ವೀಕರಿಸಿದರು. ಶ್ರೀಧರರಿಂದ ತಪಸ್ಸಿಗೆ ಪ್ರೇರಣೆ ಪಡೆದು ಉಗ್ರ ತಪಸ್ಸನ್ನು ಗೈದರು. ಕಾಶಿಯಲ್ಲಿ 12 ವರ್ಷಗಳ ಕಾಲ ನಿರಂತರವಾಗಿ ತಪಸ್ಸನ್ನು ಮಾಡಿದರು. ಈ ಸಂದರ್ಭದಲ್ಲಿ ಸಹಜಾನಂದ ಅವದೂತರಿಗೆ ಮೈಮೇಲಿನ ಪರಿವೆಯೂ ಇಲ್ಲದಂತಾಯಿತು. ಅನ್ನ-ಆಹಾರಾದಿಗಳ ಅಪೇಕ್ಷೆ ಕೂಡ ದೂರವಾಯಿತು. ಮೈಮೇಲೆ ವಿಷ ಪ್ರಾಣಿಗಳು ಸಂಚಾರ ಮಾಡಿದರೂ ಕೂಡ ಏಕಾಗ್ರತೆಗೆ ಭಂಗ ಬರಲಿಲ್ಲ.
ನಿರಂತರ ತಪಸ್ಸಿನ ಕಾರಣ ಕೆಲವೇ ಕಾಲದ ನಂತರ ಸಹಜಾನಂದ ಅವದೂತರ ಕಣ್ಣಿನ ದೃಷ್ಟಿ ಸರಿಯಾಯಿತು. ಮೈಮೇಲಿನ ಮೈಲಿ ಕಲೆಯ ಅವಶೇಷಗಳು ಕಾಣೆಯಾದವು. ಮನಸ್ಸೂ ಪ್ರಪಂಚದಿಂದ ಪರಮಾರ್ಥವನ್ನು ನಿರೀಕ್ಷಿಸುವಂತಾಗಿತ್ತು. ಆಗಲೇ ಗೃಹಸ್ಥ ಧರ್ಮವನ್ನು ಸ್ವೀಕರಿಸಿ, ಪುತ್ರನನ್ನು ಪಡೆದಿದ್ದರೂ ಗೃಹಸ್ಥ ಧರ್ಮದ ಕಡೆಗಿನ ಆಸಕ್ತಿ ಸಂಪೂರ್ಣ ಕಳೆದುಹೋಗಿತ್ತು. ರಾಗ-ದ್ವೇಷ-ಶೋಕ-ಮೋಹವಿಲ್ಲದ ಸಿದ್ಧಾಂತಃಕರಣದ ಸಂಸ್ಕಾರ ದೊರೆತಿತ್ತು. ನಂತರ ಶ್ರೀಧರ ಸ್ವಾಮೀಜಿಗಳು ತೆರಳಿದ ಕಡೆಗೆಲ್ಲ ತೆರಳಿದರು. ಶ್ರೀಧರರು ತಪಸ್ಸು ಮಾಡಿದ ಕಡೆಗಳಲ್ಲೆಲ್ಲ ಸಹಜಾನಂದರೂ ತಪಸ್ಸು ಮಾಡಿದರು. ನಂತರ ಕೊಳಗೀಬೀಸಿಗೆ ಬಂದ ಸಹಜಾನಂದ ಅವದೂತರು ತಮ್ಮ ಕರ್ಮ ಹಾಗೂ ಜ್ಞಾನ ಯೋಗಕ್ಕೆ ಅದೇ ಸಿದ್ಧಭೂಮಿ ಎಂದು ತಿಳಿದು ಅಲ್ಲಿಯೇ ನೆಲೆನಿಂತರು. ಈ ಸಂದರ್ಭದಲ್ಲಿ ಅವರ ಮೈಮೇಲೆ ವಸ್ತ್ರಗಳಿರಲಿಲ್ಲ. ಕೇವಲ ಕೌಪೀನಧಾರಿಯಾಗಿದ್ದು. ಮೇಲೊಂದು ವ್ಯಾಘ್ರಚರ್ಮವನ್ನು ಸುತ್ತುತ್ತಿದ್ದರು. ಕೈಯಲ್ಲೊಂದು ಕಮಂಡಲವಿರುತ್ತಿತ್ತು. ತದನಂತರ ಕೊಳಗೀಬೀಸಿನ ಮಾರುತಿ ದೇವಾಲಯವನ್ನು ಜೀಣರ್ೋದ್ಧಾರಗೊಳಿಸಿದರು. ತದನಂತರದಲ್ಲಿ ಕೊಳಗೀಬೀಸು ಆಂಜನೇಯ ಸ್ವಾಮಿಯ ಪುಣ್ಯಕ್ಷೇತ್ರವಾಗಿ ಪವಿತ್ರ ಯಾತ್ರಾ ಸ್ಥಳವಾಗಿ ಬದಲಾಯಿತು.
ದಿನಕಳೆದಂತೆ ಕೊಳಗೀಬೀಸಿನಲ್ಲಿ ಧಾಮರ್ಿಕ ಪಾಠಗಳನ್ನು, ವೇದ ಶಿಬಿರಗಳನ್ನು ಆರಮಭಿಸಲಾಯಿತು. ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸುವ ತಾಣವಾಗಿ ಕೊಳಗೀಬೀಸು ಮಾಪರ್ಾಡಾಯಿತು. ಅಷ್ಟೇ ಅಲ್ಲದೇ ಯಕ್ಷಗಾನ ಕಲೆಗೆ ವಿಶೇಷ ಪ್ರೋತ್ಸಾಹ ಸಿಕ್ಕಿತು. ಯಕ್ಷಗಾನದ ಮೇರು ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಅದೆಷ್ಟೋ ಮಹಾನ್ ಕಲಾವಿದರು ಶ್ರೀಕ್ಷೇತ್ರದಲ್ಲಿ ಗೆಜ್ಜೆ ಕಟ್ಟಿ ಕುಣಿದರು. ಕ್ರಮೇಣ ಸಹಜಾನಂದ ಅವದೂತರಿಗೆ ಶಿಷ್ಯ ಪರಂಪರೆಯೂ ಬೆಳೆಯಿತು. ಶ್ರೀಧರ ಸ್ವಾಮಿಗಳನ್ನು ಕೊಳಗೀಬೀಸಿಗೆ ಪದೇ ಪದೆ ಕರೆಯಿಸಿ ಧಾಮರ್ಿಕ ಕೈಂಕರ್ಯವನ್ನು ಕೈಗೊಂಡರು.
ಯಾತ್ರಾರ್ಥವಾಗಿ ಕಾಶಿಗೆ ಹೋಗಿದ್ದ ಸಂದರ್ಭದಲ್ಲಿ ಶ್ರೀಧರ ಸ್ವಾಮೀಜಿಗಳ ದರ್ಶನ ಭಾಗ್ಯ ಲಭಿಸಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ತಮ್ಮ ಪೂವರ್ಾಶ್ರಮದ ಪುತ್ರನಿಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟು ಶ್ರೀಶ್ರೀ ರಾಮಾನಂದ ಸ್ವಾಮೀಗಳೆಂದು ಕರೆದರು. ಇನ್ನೋರ್ವ ಗೃಹಸ್ಥ ಶಿಷ್ಯನಿಗೂ ಸನ್ಯಾಸ ದೀಕ್ಷೆಯನ್ನು ನೀಡಿ ಶಿವಾನಂದ ಎನ್ನುವ ಅಭಿದಾನವನ್ನು ನೀಡಿದರು. ಸಹಜಾನಂದ ಅವದೂತರ ಪರಮ ಪ್ರಿಯ ಶಿಷ್ಟಯರಾದ ರಾಮಾನಂದ ಸ್ವಾಮೀಜಿಗಳು ಈಗ ದೀವಗಿಯ ಮಠದಲ್ಲಿ ನೆಲೆನಿಂತಿದ್ದಾರೆ. ಶಿವಾನಂದ ಸ್ವಾಮೀಜಿಗಳು ಯಲ್ಲಾಪುರ ತಾಲೂಕಿನ ನಾಯ್ಕನಕೆರೆಯಲ್ಲಿ ನೆಲೆನಿಂತು ಇದೀಗ ಮುಕ್ತರಾಗಿದ್ದಾರೆ. ಇವರಷ್ಟೇ ಅಲ್ಲದೇ ಪರಮಾನಂದರು ಹಾಗೂ ಕೇಶವಾನಂದರು ಎಂಬ ಇನ್ನಿಬ್ಬರು ಪ್ರಿಯ ಶಿಷ್ಯರಿದ್ದರು. ಇವರಿಬ್ಬರೂ ಕೂಡ ಪರಿವ್ರಾಜಕ ಸನ್ಯಾಸಿಗಳಾಗಿ ಲೋಕಸಂಚಾರ ಮಾಡಿದ್ದಾರೆ.
ಅವದೂತ ಪರಂಪರೆಯ ಪ್ರಮುಖ ಯತಿವರೇಣ್ಯರು ಎನ್ನಿಸಿಕೊಂಡಿರುವ ಸಹಜಾನಂದ ಅವದೂತರು ತಮ್ಮ ಸಾಧನೆಯ ಬಲದಿಂದಲೇ ಎಲ್ಲವನ್ನೂ ಸಾಧಿಸಿದವರು. ಮಹಾತ್ವರ ಸಾಲಿನಲ್ಲಿ ನಿಂತವರು. ತಾವೂ ಬೆಳಗಿ, ಇನ್ನೊಬ್ಬರ ಜೀವನಕ್ಕೂ ಬೆಳಕಾದವರು. ಗೃಹಸ್ಥಾಶ್ರಮದ ನಂತರ ಸನ್ಯಾಸ ದೀಕ್ಷೆ ಪಡೆದವರು. ಆಂಜನೇಯನನ್ನು ಆರಾಧ್ಯದೈವವಾಗಿ ನಂಬಿ ಆರಾಧಿಸಿದವರು. ಇಂತಹ ಸಹಜಾನಂದ ಅವದೂತರು ಕೊಳಗೀಬೀಸಿನ ಮಾರುತಿ ದೇವರ ಸನ್ನಿದಾನದಲ್ಲಿಯೇ ಆ1, 1966ರ ಪರಾಭವ ಸಂವತ್ಸರದ ಅಧಿಕ ಶ್ರಾವಣ ಶುದ್ಧ ಹುಣ್ಣಿಮೆಯ ಸೋಮವಾರದಂದು ಮಹಾಸಮಾಧಿ ಹೊಂದಿದರು. ತದನಂತರ 1978ರ ಫೆ.20ರಂದು ಸ್ವರ್ಣವಲ್ಲಿ ಮಠದ ಸರ್ವಜ್ಞೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ಸಹಜಾನಂದ ಅವದೂತ ಸ್ವಾಮೀಜಿಗಳು ಮಹಾಸಮಾಧಿ ಹೊಂದಿದ ಸ್ಥಳದಲ್ಲಿ ಗುರುಲಿಂಗ ಸ್ಥಾಪನೆ ಮಾಡಿದರು. ಕಳೆದ 5 ದಶಕಗಳಲ್ಲಿ ಕೊಳಗೀಬೀಸ್ ಧಾಮರ್ಿಕ ತಾಣವಾಗಿ ಬೆಳೆದು ಬಂದಿದೆ. ಮಾರುತಿಯ ಶಕ್ತಿ ಸ್ಥಳಗಳಲ್ಲಿ ಒಂದು ಎನ್ನಿಸಿದೆ. ಮಹಾಗುರು ಆಂಜನೇಹ, ಆಂಜನೇಯನ ಆರಾಧಕ ಶಿಷ್ಯ ಸಹಜಾನಂದ ಅವದೂತರ ವಿಶಿಷ್ಟ ಕ್ಷೇತ್ರ ಎಂದು ಜನಮಾನಸದಲ್ಲಿ ನೆಲೆನಿಂತಿದೆ. ಭಕ್ತರ ಬೇಡಿಕೆಗಳನ್ನು ಈಡೇರಿಸುವ ಇಷ್ಟಾರ್ಥಗಳನ್ನು ಕರುಣಿಸುವ, ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ತಾಣ ಎಂದು ಪ್ರಖ್ಯಾತಿ ಪಡೆದಿದೆ.


(ವಿಶ್ವವಾಣಿಯ ಆ.18ರ ಗುರು ಪುರವಣಿಯಲ್ಲಿ ಪ್ರಕಟಗೊಂಡಿದೆ) 

Tuesday, August 9, 2016

ಅಕ್ರಮ ಚಟುವಟಿಕೆಗಳ ತಾಣವಾದ ಭೀಮನವಾರೆ ಗುಡ್ಡ

ಮಾದಕ ವಸ್ತುಗಳ ಬಳಕೆ : ಅರಣ್ಯ ಇಲಾಖೆ ಅಧಿಕಾರಿಗಳ ಶಾಮೀಲಿನ ಶಂಕೆ

.....................

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು ಎನ್ನಿಸಿಕೊಂಡಿರುವ ಸಿದ್ದಾಪುರ ತಾಲೂಕಿನ ಭೀಮನವಾರೆಗುಡ್ಡ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ. ಮಾದಕ ವ್ಯಸನಿಗಳು, ಮದ್ಯವ್ಯಸನಿಗಳು ಭೀಮನವಾರೆ ಗುಡ್ದದಲ್ಲಿ ದಿನಂಪ್ರತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಈ ಕುರಿತು ಕಠಿಣ ಕ್ರಮ ಕೈಗೊಲ್ಳಬೇಕಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಭೀಮನವಾರೆ ಗುಡ್ಡ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಆಂಗುಬೆಯ ಸೂಯಾಸ್ತವನ್ನು ನೆನಪಿಗೆ ತರುವಂತಹ ಪ್ರಸಿದ್ಧ ತಾಣ ಇದಾಗಿದ್ದು ಸಿದ್ದಾಪುರದಿಂದ 35 ಕಿಲೋಮೀಟರ್ ಹಾಗೂ ಶಿರಸಿಯಿಂದ 30 ಕಿಲೋಮೀಟರ್ ದೂರದಲ್ಲಿದೆ. ಈ ಪ್ರವಾಸಿ ತಾಣದ ವೀಕ್ಷಣೆಗೆ ದಿನಂಪ್ರತಿ ಹಲವಾರು ಜನರು ದೂರದ ಊರುಗಳಿಂದ ಆಗಮಿಸುತ್ತಾರೆ. ವಾರಾಂತ್ಯದಲ್ಲಿ ನೂರಾರು ಜನರು ಭೀಮನವಾರೆ ಗುಡ್ಡದಲ್ಲಿ ಪ್ರಕೃತಿ ವೀಕ್ಷಣೆ ಮಾಡಿ ಮನದಣಿಯುತ್ತಿದ್ದಾರೆ.
ಭೀಮನವಾರೆಗುಡ್ಡದಲ್ಲಿ ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಭೀಮನವಾರೆ ಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ದಿನಂಪ್ರತಿ ಮದ್ಯಪಾನದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಲ್ಲದೇ ವಾರದ ಕೆಲವು ದಿನಗಳಲ್ಲಿ ಈ ತಾಣ ವೀಕ್ಷಣೆಗೆ ಆಗಮಿಸುವ ಸುತ್ತಮುತ್ತಲ ಪ್ರದೇಶದ (ಅಲ್ಪಸಂಖ್ಯಾತ ಕೋಮಿನ) ಯುವಕರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿಕೊಂಡಿದ್ದಾರೆ. ಭೀಮನವಾರೆ ಗುಡ್ಡದ ಪ್ರದೇಶದಲ್ಲಿ ಗಾಂಜಾ ಸೇವನೆ, ಮದ್ಯಪಾನ ಮಾಡುವುದು ಸೇರಿದಂತೆ ಹಲವು ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೇ ಭೀಮನವಾರೆ ಗುಡ್ಡಕ್ಕೆ ಬರುವ ಪ್ರೇಮಿಗಳೂ ಕುಡ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ಸ್ಥಳೀಯರ ಅಂಬೋಣವಾಗಿದೆ.
ಭೀಮನವಾರೆ ಗುಡ್ಡದಲ್ಲಿ ಅಕ್ರಮ ಚಟುವಟಿಕೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆಗೆ ಸಾಕ್ಷಿಯಾಗಿ ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿರುತ್ತವೆ. ಈ ಭಾಗದ ಯುವಕರು ನಿಗದಿತ ಸಮಯಕ್ಕೆ ಭೀಮನವಾರೆ ಗುಡ್ಡವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳುತ್ತಾರಾದರೂ ಕೆಲ ದಿನಗಳಲ್ಲಿಯೇ ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುತ್ತಾರೆ ಎಂಬುದು ಸ್ಥಳೀಯರ ಅಂಬೋಣ. ಭೀಮನವಾರೆ ಗುಡ್ಡದಲ್ಲಿಯೇ ಇರುವ ಒಂದೆರಡು ಸ್ಥಳಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಸ್ಪೀಟ್ ಕೂಡ ಆಡಲಾಗುತ್ತಿದೆ. ಇದರಿಂದಾಗಿ ಪ್ರವಾಸಿ ತಾಣದ ಪ್ರದೇಶ ಸಂಪೂರ್ಣವಾಗಿ ಹಾಳಾಗುತ್ತಿದೆ.
ಭೀಮನವಾರೆ ಗುಡ್ಡಕ್ಕೆ ತೆರಳುವ ಮಾರ್ಗದ ನಡುವೆ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಒಂದು ಇದೆ. ಆದರೆ ಇಲ್ಲಿ ಸಮರ್ಪಕವಾಗಿ ತನಿಖೆ ನಡೆಸಲಾಗುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭೀಮನವಾರೆ ಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಕಂಡೂ ಕಾಣದಂತಿದ್ದಾರೆ. ದಿನಂಪ್ರತಿ ಅನೈತಿಕ ಚಟುವಟಿಕೆಗಳು ನಡೆದರೂ ಅರಣ್ಯ ಇಲಾಖೆ ಅಧಿಕಾರಿಗಳು ತಮಗೂ, ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವತರ್ಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಡೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಅನುಮಾನಕ್ಕೂ ಕೂಡ ಕಾರಣವಾಗಿದೆ.   ನೂರಾರು ಪ್ರವಾಸಿಗರು ಆಗಮಿಸಿ ಅತ್ಯುತ್ತಮ ಪ್ರವಾಸಿ ತಾಣವಾಗಬಹುದಾಗಿದ್ದ, ತನ್ಮೂಲಕ ಸ್ಥಳೀಯರಿಗೆ ಆದಾಯದ ಮೂಲವಾಗಿ ಮಾಪರ್ಾಡಾಗಬಹುದಾಗಿದ್ದ ಬೀಮನವಾರೆಗುಡ್ಡ ಅಕ್ರಮ ಚಟುವಟಿಕೆಗಳಿಂದಾಗಿ ಕುಖ್ಯಾತಿಗೆ ಕಾರಣವಾಗುತ್ತಿದೆ.
ಮುಂದಿನ ದಿನಗಳಲ್ಲಿ ಭೀಮನವಾರೆಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಮಾದಕವಸ್ತು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರವಾಸಿ ತಾಣಕ್ಕೆ ಆಗಮಿಸುವವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಮಾದಕ ವಸ್ತು ಸೇವನೆ ಮಾಡುವವರ ವಿರುದ್ಧ ಹಾಗೂ ಅನೈತಿಕ ಚಟುವಟಿಕೆಗಳನ್ನು ಕೈಗೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

///////////////////

ಬೀಮನವಾರೆ ಗುಡ್ಡದ ವಾತಾವರಣ ಹದಗೆಟ್ಟಿದೆ. ಮದ್ಯವ್ಯಸನಿಗಳು ಹಾಗೂ ಮಾದಕ ವಸ್ತು ಸೇವನೆ ಮಾಡುವವರ ತಾಣವಾಗಿ ಬದಲಾಗಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ರಾಜೇಶ ನಾಯ್ಕ
ಪ್ರವಾಸಿ


(ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

Monday, July 18, 2016

ನಿರ್ವಹಣೆಯಿಲ್ಲದೇ ಸೊರಗಿದ ಪ್ರವಾಸಿತಾಣ... ಪ್ಲಾಸ್ಟಿಕ್ ಮಯವಾದ ಉಂಚಳ್ಳಿ ಜಲಪಾತ

ದೇಶ-ವಿದೇಶಗಳ ಪ್ರವಾಸಿಗರನ್ನು ಆಕಷರ್ಿಸುತ್ತಿರುವ ಉಂಚಳ್ಳಿ ಜಲಪಾತ ಪ್ಲಾಸ್ಟಿಕ್ ಮಯವಾಗಿ ಬದಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿ ಬಿದ್ದಿದ್ದು ಜಲಪಾತದ ಪ್ರದೇಶ ಗಬ್ಬೆದ್ದು ನಾರುತ್ತಿದೆ.
 ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿರುವ ಉಂಚಳ್ಳಿ ಜಲಪಾತ ಮೈದುಂಬಿದೆ. ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕನರ್ಾಟಕವಲ್ಲದೇ ಮಹಾರಾಷ್ಟ್ರ, ಆಂಧ್ರ, ಗೋವಾ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸಿಗರೂ ಕೂಡ ಉಂಚಳ್ಳಿ ಜಲಪಾತದ ಕಡೆಗೆ ಮುಖ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಜಲಪಾತದ ಸೌಂದರ್ಯವನ್ನು ಇಮ್ಮಡಿಸಿದೆ. ಆದರೆ ಉಂಚಳ್ಳಿ ಜಲಪಾತದ ಪರಿಸರದಲ್ಲಿ ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯ ಜಲಪಾತದ ಸೊಬಗಿಗೆ ಕಪ್ಪು ಚುಕ್ಕೆ ಎನ್ನಿಸಿದೆ.
 ಉಂಚಳ್ಳಿ ಜಲಪಾತದ ಆವರಣದಲ್ಲಿ ಎತ್ತ ನೋಡಿದರತ್ತ ಪ್ಲಾಸ್ಟಿಕ್ ತ್ಯಾಜ್ಯಗಳು ಹೇರಳವಾಗಿ ಬಿದ್ದುಕೊಂಡಿವೆ. ಪ್ರವಾಸಿಗರು ತರುವ ತಿಂಡಿಯ ಪೊಟ್ಟಣಗಳು ಖಾದ್ಯಗಳ ಪೊಟ್ಟಣಗಳು ಬಿದ್ದುಕೊಂಡಿವೆ. ಅಷ್ಟೇ ಅಲ್ಲದೇ ಜಲಪಾತದ ಪರಿಸರದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದುಕೊಂಡಿವೆ. ಜಲಪಾತವನ್ನು ವೀಕ್ಷಣೆ ಮಾಡುವ ಒಂದು ಸ್ಥಳದಲ್ಲಂತೂ ಯಾವುದೋ ಜನ್ಮದಿನವನ್ನು ಆಚರಣೆ ಮಾಡಲಾಗಿದ್ದು, ಅದಕ್ಕಾಗಿ ಬಳಕೆ ಮಾಡಲಾಗಿರುವ ತರಹೇವಾರಿ ಪ್ಲಾಸ್ಟಿಕ್ಗಳು, ತಿಂಡಿ ತಿಂದು ಎಸೆಯಲಾಗಿರುವ ಪ್ಲೇಟ್ಗಳು, ಬೇರೆ ಬೇರೆ ಕಂಪನಿಗಳ ಮದ್ಯದ ಬಾಟಲಿಗಳು ಬಿದ್ದುಕೊಂಡಿವೆ. ಪರಿಣಾಮವಾಗಿ ಪ್ರವಾಸಿಗರು ಹೇರಳವಾಗಿ ಆಗಮಿಸಿ ಎಲ್ಲರ ಆಕರ್ಷಣೆಗೆ ಕಾರಣವಾಗಬೇಕಾಗಿದ್ದ ಜಲಪಾತ ಸೌಂದರ್ಯಕ್ಕೆ ಮಸಿ ಬಳಿಸಿಕೊಳ್ಳುವಂತಾಗಿದೆ.
 ಜಲಪಾತದ ಪ್ರದೇಶದಲ್ಲಿಯೇ ಶೌಚಾಲಯವಿದ್ದು ಹಾಳು ಸುರಿಯುತ್ತಿದೆ. ನಿರ್ವಹಣೆಯಿಲ್ಲದೇ ಈ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಮರದ ಎಲೆಗಳು, ಮುರಿದ ಮರದ ಕೊಂಬೆಗಳು ಈ ಶೌಚಾಲಯದಲ್ಲಿ ಬಿದ್ದುಕೊಂಡಿವೆ. ಶೌಚಾಲಯದ ಬಾಗಿಲು ಮುರಿದು ಬಿದ್ದಿದೆ. ಅಷ್ಟೇ ಅಲ್ಲದೇ ಈ ಶೌಚಾಲಯ ಜಲಪಾತ ವೀಕ್ಷಣೆಗೆ ಆಗಮಿಸುವ ಪಡ್ಡೆ ಹುಡುಗರ ಅನೈತಿಕ ಚಟುವಟಿಕೆಗಳಿಗೂ ತಾಣವಾಗಿ ಮಾಪರ್ಾಡಾಗಿದೆ. ಆದರೆ ಉಂಚಳ್ಳಿ ಜಲಪಾತ ಹಾಗೂ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದ್ದ ಪ್ರವಾಸೋದ್ಯಮ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಪರಿಣಾಮವಾಗಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರು ಜಲಪಾತದ ಕುರಿತು ನಕಾರಾತ್ಮಕವಾಗಿ ಮಾತನಾಡುವಂತಾಗಿದೆ.
 ಜಲಪಾತಕ್ಕಿಂತಲೂ 1 ಕಿ.ಮಿ ದೂರದಲ್ಲಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಕಾವಲು ಗೋಪುರ ಮಾಡಿ, ಆಗಮಿಸುವ ಪ್ರವಾಸಿಗರ ಬಳಿ ಪ್ರವೇಶಧನವನ್ನು ಪಡೆದುಕೊಳ್ಳುತ್ತಿದೆ. ಮೊಟಾರ್ಸೈಕಲ್ ಹಾಗೂ ಕಾರುಗಳಿಗೆ ಪ್ರತ್ಯೇಕವಾಗಿ ಪ್ರವೇಶಧನವನ್ನು ವಸೂಲಿ ಮಾಡಲಾಗುತ್ತಿದೆ. ಆದರೆ ಗ್ರಾಮ ಅರಣ್ಯ ಸಮಿತಿ ಪ್ರವೇಶ ಧನವನ್ನು ವಸೂಲಿ ಮಾಡುವಲ್ಲಿ ತೋರುವ ಉತ್ಸಾಹವನ್ನು ಜಲಪಾತದ ಪ್ರದೇಶದ ನಿರ್ವಹಣೆಯ ಕಡೆಗೆ ತೋರುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ಜಲಪಾತದ ಪ್ರದೇಶದಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಡೆದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಶೌಚಾಲಯವನ್ನು ಸರಿಪಡಿಸಿ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕಾಗಿದ್ದ ಗ್ರಾಮ ಅರಣ್ಯ ಸಮಿತಿ ಪ್ರವೇಶಧನ ವಸೂಲಿಗೆ ಮಾತ್ರ ಸೀಮಿತವಾಗಿದೆ.
 ಬ್ರಿಟನ್ ಅಧಿಕಾರಿ ಜಾಜರ್್ ಲೂಷಿಂಗ್ಟನ್ ಎಂಬಾತ ಈ ಜಲಪಾತವನ್ನು ಕಂಡು ಹಿಡಿದು ಹೊರ ಜಗತ್ತಿಗೆ ಪರಿಚಯಿಸಿದ, ಜಲಪಾತದ ಸೌಂದರ್ಯವನ್ನು ಹಾಡಿ ಹೊಗಳಿದ ಎನ್ನುವ ಪ್ರತೀತಿಯಿದೆ. ತದನಂತರದಲ್ಲಿ ತನ್ನ ಸೌಂದರ್ಯದಿಂದಲೇ ಹೆಸರುವಾಸಿಯಾಗಿದ್ದ ಉಂಚಳ್ಳಿ ಜಲಪಾತ ಈಗ ಮಾತ್ರ ತ್ಯಾಜ್ಯದಿಂದಾಗಿ ಕುಖ್ಯಾತಿ ಪಡೆದುಕೊಳ್ಳುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತಿಗಳು ಜಲಪಾತದ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಹೀಗಾದಾಗ ಮಾತ್ರ ಇನ್ನಷ್ಟು ಪ್ರವಾಸಿಗರನ್ನು ಆಕಷರ್ಿಸಿ ಆದಾಯವನ್ನು ಜಲಪಾತ ಹೆಚ್ಚಿಸಬಹುದಾಗಿದೆ.

.....
 ಉಂಚಳ್ಳಿ ಜಲಪಾತದ ಎಲ್ಲ ಕಡೆಗಳಲ್ಲಿ ಮಧ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಬಿದ್ದುಕೊಂಡಿವೆ. ನಿಸರ್ಗದ ಮಡಿಲಿನಲ್ಲಿ ಸ್ವಚ್ಛವಾಗಿ ಇರಬಹುದಾಗಿದ್ದ ಪ್ರವಾಸಿ ತಾಣ ಇದರಿಂದಾಗಿ ಮಸಿ ಬಳಿದುಕೊಳ್ಳುತ್ತಿದೆ. ಈ ತಾಣದಲ್ಲಿ ತ್ಯಾಜ್ಯ ಹೆಚ್ಚಿರುವುದರಲ್ಲಿ ಪ್ರವಾಸಿಗರ ತಪ್ಪು ಸಾಕಷ್ಟಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದಿದ್ದಾರೆ. ಈ ಪ್ರದೇಶದ ನಿರ್ವಹಣೆಯನ್ನು ಕೈಗೊಳ್ಳಬೇಕಿದ್ದವರೂ ಕೂಡ ಜವಾಬ್ದಾರಿಯನ್ನು ಮರೆತಿದ್ದಾರೆ.
ಅಬ್ದುಲ್ ಸಮದ್
ಪ್ರವಾಸಿ
ಹಾಸನ