Tuesday, September 6, 2016

ಸಂಪ್ರದಾಯದ ಹಾಡುಗಳಲ್ಲಿ ಗಣೇಶ ಚತುರ್ಥಿಯ ವರ್ಣನೆ

ಮನೆ ಮನೆಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮ-ಸಡಗರ ಮೇರೆ ಮೇರಿದೆ. ಎಲ್ಲ ಕಡೆಗಳಲ್ಲಿಯೂ ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಯ ಹಬ್ಬಕ್ಕೆ ಸಂಪ್ರದಾಯದ ಹಾಡುಗಳಲ್ಲಿ ವಿಶೇಷ ಅರ್ಥವನ್ನೇ ನೀಡಲಾಗಿದೆ. ಮಂಗಳಮೂರ್ತಿ ವಿನಾಯಕನ ಚತುರ್ಥಿಗೆ ತನ್ನದೇ ಆದ ಹೊಸ ಅರ್ಥವನ್ನು ಹಳ್ಳಿಗಳ ಸಂಪ್ರದಾಯದ ಹಾಡುಗಳು ನೀಡುವ ಮೂಲಕ ವಿಶೇಷ ಮೆರಗಿಗೂ ಕಾರಣವಾಗಿವೆ.
ಸಂಪ್ರದಾಯದ ಹಾಡುಗಳನ್ನು ಹಬ್ಬಗಳು ನಡೆಯುವ ಸಂದರ್ಭದಲ್ಲಿ ವಿಶೇಷವಾಗಿ ಹಾಡಲಾಗುತ್ತದೆ. ಎಲ್ಲಾ ಜಾತಿಗಳವರೂ ವಿಶೇಷವಾಗಿ ಹಾಡುವ ಸಂಪ್ರದಾಯದ ಹಾಡುಗಳು ಲಯಬದ್ಧವಾಗಿಯೂ, ಕಿವಿಗೆ ಇಂಪಾಗುವ ರೀತಿಯಲ್ಲಿಯೂ ಇರುತ್ತವೆ. ಜೊತೆಜೊತೆಯಲ್ಲಿ ಗಾಂವಟಿ ಶಬ್ದಗಳನ್ನು ಒಳಗೊಂಡಿದ್ದು ಸರಳ ಭಾಷೆಯಲ್ಲಿ ಮಹತ್ತರ ಅರ್ಥಗಳನ್ನು ಜಗತ್ತಗೆ ಸಾರಿ ಹೇಳುತ್ತವೆ. ಗಣೇಶ ಹಬ್ಬದ ಕುರಿತಂತೆಯೂ ಸಾಕಷ್ಟು ಸಂಪ್ರದಾಯದ ಹಾಡುಗಳು ಚಾಲ್ತಿಯಲ್ಲಿವೆ. ವಿಭಿನ್ನ ಕಥೆಗಳೂ ಇವೆ. ನಿಮ್ಮ ಮುಂದೆ ನೀಡಲಾಗುತ್ತಿರುವ ಈ ಸಂಪ್ರದಾಯದ ಹಾಡಿನಲ್ಲಿ ಶಿವ ಹಾಗೂ ಪಾರ್ವತಿಯರ ನಡುವಿನ ಸಂವಾದ ಬೆರಗುಗೊಳಿಸುತ್ತದೆ. ಪೂರ್ವಾರ್ಧ ಹಾಗೂ ಉತ್ತರಾರ್ಧ ಎಂಬ ಎರಡು ಪ್ರಮುಖ ಭಾಗಗಳಿದ್ದು ಪಾರ್ವತಿ ತನ್ನ ತವರು ಮನೆಗೆ ಹೋಗುವುದು, ಆಕೆಯನ್ನು ಮರಳಿ ಮನೆಗೆ ಕರೆದುಕೊಂಡು ಬರಲು ಶಿವ ತನ್ನ ಪುತ್ರನಾದ ಗಣಪನನ್ನು ಕಳಿಸುವುದು ಹಾಗೂ ಮರಳಿ ಬಂದ ನಂತರ ಪಾರ್ವತಿಯ ತವರು ಮನೆಯಲ್ಲಿ ಏನೇನಾಯಿತು ಎನ್ನುವುದನ್ನು ಶಿವ ಕೇಳಿ ತಿಳಿದುಕೊಳ್ಳುವ ಸನ್ನಿವೇಶಗಳನ್ನು ಒಳಗೊಂಡಿದೆ.
ಕನಸ ಕಂಡೆನು ರಾತ್ರಿ ಬೆನಕ ತಾನಾಡುವುದ ವನಜಾಕ್ಷಿ ಗೌರಿ ಪಿಡಿದೆತ್ತಿ
ಪಿಡಿದು ಮುದ್ದಾಡುವುದ ನಿನ್ನಿರುಳು ಕಂಡೆ ಕನಸನ್ನ...
ಎಂದು ಆರಂಭವಾಗುವ ಈ ಹಾಡಿನಲ್ಲಿ ಪಾರ್ವತಿಯ ತಂದೆ ಪರ್ವತರಾಜನ ಬಳಿ ಪರ್ವತರಾಜನ ಮಡದಿ ಮಗಳು ಹಾಗೂ ಮೊಮ್ಮಗನ ನೋಡುವ ಬಯಕೆಯನ್ನು ವ್ಯಕ್ತ ಪಡಿಸುತ್ತಾಳೆ. ರಾತ್ರಿ ಕನಸಿನಲ್ಲಿ ಪಾರ್ವತಿ ತನ್ನ ಪುತ್ರ ಗಣಪನನ್ನು ಎತ್ತಿ ಮುದ್ದಾಡಿದಂತೆ ಕನಸು ಬಿತ್ತು ಎನ್ನುತ್ತಾಳೆ. ನಂತರ ಮಡದಿಯ ಕೋರಿಕೆಗೆ ಅನುಗುಣವಾಗಿ ಪರ್ವತರಾಜ ಕೈಲಾಸಕ್ಕೆ ತೆರಳಿ ಶಿವ, ಪಾರ್ವತಿ ಹಾಗೂ ಗಣಪನನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಯಾಗಿ ಪಾರ್ವತಿ ತಾನು ತವರಿಗೆ ತೆರಳುತ್ತೇನೆ ಎಂದು ವಿನಂತಿಸಿಕೊಳ್ಳುತ್ತಾಳೆ. ಆದರೆ ಅದಕ್ಕೆ ಪ್ರತಿಯಾಗಿ ಶಿವ ಪಾರ್ವತಿಯ ಬಳಿ `ನಿನ್ನ ತವರಿನ ಜನ ಬಡವರು. ಅಲ್ಲೇಕೆ ಹೋಗುತ್ತೀಯಾ..' ಎನ್ನುತ್ತಾನೆ.
ಚಿಕ್ಕ ಬೆನವಣ್ಣನು ಚಕ್ಕುಲಿಯ ಬೇಡಿದರೆ ನೆತ್ತಿಮೇಲೋಂದ ಸೊಣೆವರೋ..
ಶ್ರೀಗೌರಿ ನೀನಲ್ಲಿಗೆ ಹೋಗಿ ಫಲವೇನೂ..?
ಎಂದು ಹೇಳುತ್ತಾನೆ. ಅಂದರೆ ಪುಟ್ಟ ಬಾಲಕನಾದ ಗಣಪ ಚಕ್ಕುಲಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಬಯಸಿ ಕೇಳಿದರೆ ಬಡವರಾದ ನಿನ್ನ ತವರಿನ ಜನ ಅದನ್ನು ಕೊಡುವ ಬದಲು ತಲೆಯ ಮೇಲೆ ಮೊಟಕಿ ಸುಮ್ಮನಿರಿಸುತ್ತಾರೆ ಎಂದು ಶಿವ ತನ್ನ ಮಡದಿಯನ್ನು ಹಂಗಿಸುತ್ತಾನೆ.
ಇಂದು ಹೋದರೆ ನೀನು ಕಂದರನು ಬಿಟ್ಟೋಗು
ಇಂದಿಗೆ ಮೂರು ದಿನದಲ್ಲಿ, ಬರದಿದ್ದರೆ ಚಂದ್ರಶೇಖರನ ಕೊರಳಾಣೆ..
ಎಂದು ಶಿವ ಹೆಂಡಿತ ಬಳಿ ಹೇಳಿ ಮೂರೇ ದಿನದಲ್ಲಿ ಮರಳಿ ಕೈಲಾಸಕ್ಕೆ ಬಾ. ತವರಿಗೆ ಕರೆಯಲು ಬಂದಿರುವ ತಂದೆಯ ಜೊತೆ ಹೋಗಲು ಬಯಸಿದರೆ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟುಹೋಗು ಎಂದು ಆಜ್ಞಾಪಿಸುತ್ತಾನೆ. ನಂತರ ಪಾರ್ವತಿ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟು ತವರಿಗೆ ಹೋಗುತ್ತಾಳೆ. ಪಾರ್ವತಿ ತವರಿಗೆ ಹೋದ ನಂತರ ಶಿವನಿಗೆ ಕೈಲಾಸದಲ್ಲಿ ಏಕಾಅಂಗಿ ಭಾವ ಕಾಡುತ್ತದೆ. ಪಾರ್ವತಿ ತವರಿಗೆ ಹೋದ ಒಂದೇ ದಿನದಲ್ಲಿಯೇ ಒಂದು ವರ್ಷವಾದಂತೆ ಅನ್ನಿಸುತ್ತದೆ. ಬೇಸರಿಸಿದ ಶಿವ ಮರುದಿನವೇ ಗಣಪನ ಬಳಿ ಆತನ ಅಜ್ಜನಮನೆಗೆ ಹೋಗಿ ತಾಯಿಯನ್ನು ಕರೆದುಕೊಂಡು ಬಾ ಎಂದು ಆಜ್ಞಾಪಿಸುತ್ತಾನೆ.
ತಾಯಿಯನ್ನು ಕರೆದುಕೊಂಡು ಬರಲು ಭೂಲೋಕಕ್ಕೆ ಬರುತ್ತಿರುವ ಗಣಪನ ಕುರಿತು ತಿಳಿದ ಭೂಲೋಕ ವಾಸಿಗಳು ಗಣಪನ್ನು ದಾರಿ ಮಧ್ಯದಲ್ಲಿಯೇ ತಡೆದು ನಿಲ್ಲಿಸಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡುತ್ತಾರೆ. ಅವುಗಳನ್ನು ತಿಂದು ದೊಡ್ಡ ಹೊಟ್ಟೆಯನ್ನು ಮಾಡಿಕೊಂಡು ದಾರಿಯಲ್ಲಿ ಬರುತ್ತಿರುವಾಗ ಎಡವಿ ಬೀಳುವ ಗಣಪನ ಹೊಟ್ಟೆ ಒಡೆದು ಹೋಗುತ್ತದೆ. ಕೊನೆಗೆ ಆ ಹೊಟ್ಟೆಗೆ ಹಾವನ್ನು ಸುತ್ತುತ್ತಾನೆ ಎನ್ನುವುದು ಹಾಡಿನಲ್ಲಿ ಬರುವ ವಿವರಗಳು. ಆ ನಂತರದಲ್ಲಿ ಗಣಪನನ್ನು ನೋಡಿ ಚಂದ್ರ ನಗುವುದು ಹಾಗೂ ಚಂದ್ರನಿಗೆ ಶಾಪ ಕೊಡುವ ಕತೆಗಳೆಲ್ಲ ಪ್ರತಿಯೊಬ್ಬರಿಗೂ ತಿಳಿದಿದೆ. ನಂತರದಲ್ಲಿ ಪರ್ವತರಾಜನ ಅರಮನೆಗೆ ತೆರಳುವ ಗಣಪನಿಗೆ ವಿಶೇಷ ಪೂಜೆ ಮಾಡಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡಲಾಗುತ್ತದೆ. ಕೊನೆಯಲ್ಲಿ ಗಣಪ ತಾಯಿ ಪಾರ್ವತಿಯನ್ನು ಕರೆದುಕೊಂಡು ಕೈಲಾಸಕ್ಕೆ ಮರಳುತ್ತಾನೆ. ಪಾರ್ವತಿ ಕೈಲಾಸಕ್ಕೆ ಮರಳಿದ ನಂತರ ಆಕೆಯ ಬಳಿ ತವರಿನ ವಿಷಯ ಕೇಳಿ ಪರ್ವತರಾಜನ್ನು ಶಿವ ವ್ಯಂಗ್ಯವಾಗಿ ಆಡಿಕೊಳ್ಳುವ ಪರಿ ಸಂಪ್ರದಾಯದ ಹಾಡುಗಳನ್ನು ಸವಿವರವಾಗಿ ವರ್ಣನೆಯಾಗಿದೆ.
ಹೋದಾಗೇನನು ಕೊಟ್ಟುರ, ಬರುವಾಗೇನನು ಕೊಟ್ಟರು
ಮರೆಯದೇ ಹೇಳೆಂದ ಹರನು ತಾನು.. ಎಂದು ಶಿವ ಕುತೂಹಲದಿಂದ ಕೇಳುತ್ತಾನೆ. ಅಷ್ಟೇ ಅಲ್ಲದೇ ತನ್ನ ಪುತ್ರ ಗಣಪನ ಕುರಿತಂತೆ ಕೆಸವಿನೋಗವ ಬಡಕಲಾಗಿಹನೋ ಬೆನವಣ್ಣ ಎಂದೂ ಹೇಳುತ್ತಾನೆ. ಅಂದರೆ ಬಡವನಾದ ಪರ್ವತರಾಜ ಮನೆಯಲ್ಲಿ ಸರಿಯಾಗಿ ಆತಿಥ್ಯವನ್ನೇ ಮಾಡಿಲ್ಲ. ಪರಿಣಾಮವಾಗಿ ಗಣಪ ಬಡಕಲಾಗಿದ್ದಾನೆ ಎಂದು ಹಂಗಿಸುತ್ತಾನೆ. ಇದರಿಂದ ಪಾರ್ವತಿ ನೊಂದುಕೊಳ್ಳುತ್ತಾಳೆ. ತವರುಮನೆಯನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆಗ ಪಾರ್ವತಿಯ ಬಳಿ ತವರಿನಲ್ಲಿ ಯಾವ ರೀತಿ ಸತ್ಕರಿಸಿದರು ಎನ್ನುವುದನ್ನು ವಿವರಿಸುವಂತೆ ಕೇಳುತ್ತಾನೆ.
ಎಂದ ಮಾತನು ಕೇಳಿ ನೊಂದು ಹೇಳ್ದಳು ಗೌರಿ ಬಂಧು ಬಾಂಧವರೆಲ್ಲ ಸುಖದೊಳಿರಲಿ,
ತಂದೆ ಗಿರಿ ರಾಯನು ಹಿಂದಿನ ಹಿರಿಯನು ನಮ್ಮವರು ಬಡವರು ಇನ್ನೇನ ಕೊಟ್ಟಾರೆ ಎಂದು ತವರಿನ ಕುರಿತು ಹೇಳುತ್ತಾಳೆ.
ಬೆನವಣ್ಣಗೆ ಉಂಗುರ, ಬೆನವಣ್ಣಗೆ ಉಡಿದಾರ, ಬೆನವಣ್ಣಗೆ ಪಟ್ಟೆ ಪೀತಾಂಬ್ರವು,
ಕನಕದ ಕುಂಭದಲಿ ಬೆನಕನಿಗೆ ಭಕ್ಷ್ಯಗಳು ನಮ್ಮವರು ಬಡವರಿನ್ನೇನ ಕೊಟ್ಟಾರೆ..
ಆಸೇರು ಸಣ್ಣಕ್ಕಿ, ಮೂಸೇರು ದೊಡ್ಡಕ್ಕಿ, ನೂರ್ಸೇರು ಬೆಲ್ಲ-ತುಪ್ಪದ ಕೊಡಗಳು..
ಎಮ್ಮೆಯು ಕರ ಹಿಂಡು ಗೋವುಗಳು... ನಮ್ಮವರು ಬಡವರು ಇನ್ನೇನ ಕೊಟ್ಟಾರೆ.. ಎಂದು ತನ್ನ ತವರನ್ನು ಸಮರ್ಥನೆ ಮಾಡಕೊಳ್ಳುತ್ತಾಳೆ. ಕೊನೆಯಲ್ಲಿ ಶಿವ ಪಾಅರ್ವತಿಯ ಮಾತಿನಿಂದ ಸಮಾಧಾನಗೊಳ್ಳುತ್ತಾನೆ. ಅಲ್ಲದೇ ತಾನು ಹಂಗಿಸಿದ ಕಾರಣಕ್ಕಾಗಿ ಬೇಸರ ಮಾಡಿಕೊಂಡ ಪಾರ್ವತಿಯನ್ನು ಸಮಾಧಾನ ಮಾಡುತ್ತಾನೆ.
ಹೀಗೆ ಶಿವ-ಪಾರ್ವತಿಯರ ನಡುವಿನ ಸಂವಾದವನ್ನು ರಸವತ್ತಾಗಿ ಚಿತ್ರಿಸಿರುವ ಸಂಪ್ರದಾಯದ, ಆಡುಮಾತಿನ ಹಾಡುಗಳು ಹೊಸ ಹೊಸ ಶಬ್ದಗಳನ್ನು ಕಟ್ಟಿಕೊಡುತ್ತವೆ. ಹಳೆಯ ಸಂಪ್ರದಾಯಗಳು, ಭಕ್ಷ್ಯ-ಭೋಜನಗಳು, ಪುರಾಣದ ಕತೆಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತವೆ. ಜೊತೆ ಜೊತೆಯಲ್ಲಿ ದೈವಭಕ್ತಿಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತವೆ. ಇಂತಹ ಅದೆಷ್ಟೋ ಸಂಪ್ರದಾಯದ ಹಾಡುಗಳು ವಿನಾಯಕನ ಚತುರ್ಥಿಯ ವೈಶಿಷ್ಟ್ಯವನ್ನು ಸಾರುತ್ತ ಇಂದಿಗೂ ಪ್ರಚಲಿತದಲ್ಲಿವೆ. ಹಬ್ಬದ ಸಡಗರಕ್ಕೆ ಇಂತಹ ಹಾಡುಗಳು ಮೆರಗು ಕೊಡುತ್ತವೆ.

-------------

(ಈ ಲೇಖನವು ವಿಶ್ವವಾಣಿ ಪತ್ರಿಕೆಯ ಉತ್ತರ ಕನ್ನಡ ಆವೃತ್ತಿಯಲ್ಲಿ ಸೆ.5ರಂದು ಪ್ರಕಟವಾಗಿದೆ)

Friday, August 19, 2016

ಅವದೂತ ಯತಿ ಶ್ರೇಷ್ಟ ಸಹಜಾನಂದರು

ಮಾರುತಿಯ ಆರಾಧಕರು, ಶ್ರೀಧರ ಸ್ವಾಮೀಜಿಗಳ ಪ್ರಿಯ ಶಿಷ್ಯರು

ವಾಯುಪುತ್ರ ಹನುಮಂತ ಅವದೂತ ಪರಂಪರೆಯಲ್ಲಿ ಕೇಳಿ ಬರುವ ಮೊಟ್ಟಮೊದಲ ಹೆಸರು. ಶ್ರೀರಾಮನ ಸೇವೆಯಲ್ಲಿಯೇ ಸರ್ವಸ್ವವನ್ನೂ ಕಂಡವನು. ಪ್ರಪಂಚದ ಕುರಿತಾಗಿ ಪೂರ್ಣ ವಿರಕ್ತನಾದ ಭಕ್ತಶ್ರೇಷ್ಟ. ಇಂತಹ ಮಾರುತಿಯ ಆರಾಧನೆಯ ಮೂಲಕ ಅವದೂತರಾಗಿ ಲೋಕಕಲ್ಯಾಣವನ್ನು ಮಾಡಿದವರೇ ಸಹಜಾನಂದ ಅವದೂತ ಸ್ವಾಮೀಜಿಗಳು.
ಶಿವನ ಅಷ್ಟ ಮೂತರ್ಿಗಳಲ್ಲಿ ಮಾರುತನಿಗೆ ಪ್ರಮುಖ ಸ್ಥಾನವಿದೆ. ಇಂತಹ ಮಾರುತನ ಅವತಾರವೇ ಮಾರುತಿ. ಮಾರುತಿ ನೆಲೆನಿಂತ ಕ್ಷೇತ್ರ ಕೊಳಗೀಬೀಸ್. ಶಿರಸಿ ತಾಲೂಕಿನ ಕೊಳಗೀಬೀಸ್ ಸಹಜಾನಂದ ಅವದೂತರ ತಪೋಭೂಮಿ. ಕೊಳಗೀಬೀಸಿನ ಮಾರುತಿ ದೇವರನ್ನು ಆರಾಧನೆ ಮಾಡಿ ಲೋಕಕಲ್ಯಾಣ ಕಾರ್ಯವನ್ನು ನೆರವೇರಿಸಿದವರು ಸಹಜಾನಂದ ಅವದೂತ ಯತಿಗಳು. 1950ರ ದಶಕದಲ್ಲಿ ಕೊಳಗೀಬೀಸಿನ ಮಾರುತಿ ದೇವಸ್ಥಾನವನ್ನು ಜೀಣೋದ್ಧಾರ ಮಾಡಿಸಿ, ಭವ್ಯವಾಗಿ ನಿಮರ್ಿಸಲು ಕಾರಣೀಭೂತರಾದವರು ಸಹಜಾನಂದ ಯತಿಗಳು.
ಸಹಜಾನಂದ ಅವದೂತರು ಮೂಲತಃ ಶಿರಸಿ ತಾಲೂಕಿನ ಜಾಗನಳ್ಳಿಯವರು. ಊರಿನಲ್ಲಿ ಮೈಲಿಬೇನೆ ಬಂದು, ತೀರಾ ಸಂಕಟ ಉಂಟಾಗಿ, ಶರೀರ ದುರ್ಬಲವಾಗಿ ಕಣ್ಣು ಕೂಡ ಕಾಣಿಸದಿರುವಂತಾದ ಹೊತ್ತಿನಲ್ಲಿ ಸಹಜಾನಂದ ಅವದೂತರು ಕೊಲ್ಲೂರು-ಕೊಡಚಾದ್ರಿಗೆ ತೆರಳಿ ಭಗವಂತನ ಧ್ಯಾನಕ್ಕೆ ಮುಂದಾದರು. ಸಹಜಾನಂದ ಅವದೂತರು ಸನ್ಯಾಸ ದೀಕ್ಷೆ ಪಡೆದಿದ್ದು ಸಿದ್ದಾಪುರ ತಾಲೂಕಿನ ನೆಲೆಮಾಂವ್ ಮಠದಲ್ಲಿ. ನೆಲೆಮಾಂವ್ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿಗಳು ಸನ್ಯಾಸ ದೀಕ್ಷೆಯನ್ನು ನೀಡಿದರು. ಆ ಸಂದರ್ಭದಲ್ಲಿ ಶ್ರೀ ಶ್ರೀಧರ ಸ್ವಾಮಿಗಳಖ ದರ್ಶನ ಭಾಗ್ಯ ಸಹಜಾನಂದ ಅವದೂತರಿಗಾಯಿತು. ಸಹಜಾನಂದ ಅವದೂತರು ಶ್ರೀಧರ ಸ್ವಾಮೀಜಿಗಳನ್ನೇ ಗುರುವಾಗಿ ಸ್ವೀಕರಿಸಿದರು. ಶ್ರೀಧರರಿಂದ ತಪಸ್ಸಿಗೆ ಪ್ರೇರಣೆ ಪಡೆದು ಉಗ್ರ ತಪಸ್ಸನ್ನು ಗೈದರು. ಕಾಶಿಯಲ್ಲಿ 12 ವರ್ಷಗಳ ಕಾಲ ನಿರಂತರವಾಗಿ ತಪಸ್ಸನ್ನು ಮಾಡಿದರು. ಈ ಸಂದರ್ಭದಲ್ಲಿ ಸಹಜಾನಂದ ಅವದೂತರಿಗೆ ಮೈಮೇಲಿನ ಪರಿವೆಯೂ ಇಲ್ಲದಂತಾಯಿತು. ಅನ್ನ-ಆಹಾರಾದಿಗಳ ಅಪೇಕ್ಷೆ ಕೂಡ ದೂರವಾಯಿತು. ಮೈಮೇಲೆ ವಿಷ ಪ್ರಾಣಿಗಳು ಸಂಚಾರ ಮಾಡಿದರೂ ಕೂಡ ಏಕಾಗ್ರತೆಗೆ ಭಂಗ ಬರಲಿಲ್ಲ.
ನಿರಂತರ ತಪಸ್ಸಿನ ಕಾರಣ ಕೆಲವೇ ಕಾಲದ ನಂತರ ಸಹಜಾನಂದ ಅವದೂತರ ಕಣ್ಣಿನ ದೃಷ್ಟಿ ಸರಿಯಾಯಿತು. ಮೈಮೇಲಿನ ಮೈಲಿ ಕಲೆಯ ಅವಶೇಷಗಳು ಕಾಣೆಯಾದವು. ಮನಸ್ಸೂ ಪ್ರಪಂಚದಿಂದ ಪರಮಾರ್ಥವನ್ನು ನಿರೀಕ್ಷಿಸುವಂತಾಗಿತ್ತು. ಆಗಲೇ ಗೃಹಸ್ಥ ಧರ್ಮವನ್ನು ಸ್ವೀಕರಿಸಿ, ಪುತ್ರನನ್ನು ಪಡೆದಿದ್ದರೂ ಗೃಹಸ್ಥ ಧರ್ಮದ ಕಡೆಗಿನ ಆಸಕ್ತಿ ಸಂಪೂರ್ಣ ಕಳೆದುಹೋಗಿತ್ತು. ರಾಗ-ದ್ವೇಷ-ಶೋಕ-ಮೋಹವಿಲ್ಲದ ಸಿದ್ಧಾಂತಃಕರಣದ ಸಂಸ್ಕಾರ ದೊರೆತಿತ್ತು. ನಂತರ ಶ್ರೀಧರ ಸ್ವಾಮೀಜಿಗಳು ತೆರಳಿದ ಕಡೆಗೆಲ್ಲ ತೆರಳಿದರು. ಶ್ರೀಧರರು ತಪಸ್ಸು ಮಾಡಿದ ಕಡೆಗಳಲ್ಲೆಲ್ಲ ಸಹಜಾನಂದರೂ ತಪಸ್ಸು ಮಾಡಿದರು. ನಂತರ ಕೊಳಗೀಬೀಸಿಗೆ ಬಂದ ಸಹಜಾನಂದ ಅವದೂತರು ತಮ್ಮ ಕರ್ಮ ಹಾಗೂ ಜ್ಞಾನ ಯೋಗಕ್ಕೆ ಅದೇ ಸಿದ್ಧಭೂಮಿ ಎಂದು ತಿಳಿದು ಅಲ್ಲಿಯೇ ನೆಲೆನಿಂತರು. ಈ ಸಂದರ್ಭದಲ್ಲಿ ಅವರ ಮೈಮೇಲೆ ವಸ್ತ್ರಗಳಿರಲಿಲ್ಲ. ಕೇವಲ ಕೌಪೀನಧಾರಿಯಾಗಿದ್ದು. ಮೇಲೊಂದು ವ್ಯಾಘ್ರಚರ್ಮವನ್ನು ಸುತ್ತುತ್ತಿದ್ದರು. ಕೈಯಲ್ಲೊಂದು ಕಮಂಡಲವಿರುತ್ತಿತ್ತು. ತದನಂತರ ಕೊಳಗೀಬೀಸಿನ ಮಾರುತಿ ದೇವಾಲಯವನ್ನು ಜೀಣರ್ೋದ್ಧಾರಗೊಳಿಸಿದರು. ತದನಂತರದಲ್ಲಿ ಕೊಳಗೀಬೀಸು ಆಂಜನೇಯ ಸ್ವಾಮಿಯ ಪುಣ್ಯಕ್ಷೇತ್ರವಾಗಿ ಪವಿತ್ರ ಯಾತ್ರಾ ಸ್ಥಳವಾಗಿ ಬದಲಾಯಿತು.
ದಿನಕಳೆದಂತೆ ಕೊಳಗೀಬೀಸಿನಲ್ಲಿ ಧಾಮರ್ಿಕ ಪಾಠಗಳನ್ನು, ವೇದ ಶಿಬಿರಗಳನ್ನು ಆರಮಭಿಸಲಾಯಿತು. ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸುವ ತಾಣವಾಗಿ ಕೊಳಗೀಬೀಸು ಮಾಪರ್ಾಡಾಯಿತು. ಅಷ್ಟೇ ಅಲ್ಲದೇ ಯಕ್ಷಗಾನ ಕಲೆಗೆ ವಿಶೇಷ ಪ್ರೋತ್ಸಾಹ ಸಿಕ್ಕಿತು. ಯಕ್ಷಗಾನದ ಮೇರು ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಅದೆಷ್ಟೋ ಮಹಾನ್ ಕಲಾವಿದರು ಶ್ರೀಕ್ಷೇತ್ರದಲ್ಲಿ ಗೆಜ್ಜೆ ಕಟ್ಟಿ ಕುಣಿದರು. ಕ್ರಮೇಣ ಸಹಜಾನಂದ ಅವದೂತರಿಗೆ ಶಿಷ್ಯ ಪರಂಪರೆಯೂ ಬೆಳೆಯಿತು. ಶ್ರೀಧರ ಸ್ವಾಮಿಗಳನ್ನು ಕೊಳಗೀಬೀಸಿಗೆ ಪದೇ ಪದೆ ಕರೆಯಿಸಿ ಧಾಮರ್ಿಕ ಕೈಂಕರ್ಯವನ್ನು ಕೈಗೊಂಡರು.
ಯಾತ್ರಾರ್ಥವಾಗಿ ಕಾಶಿಗೆ ಹೋಗಿದ್ದ ಸಂದರ್ಭದಲ್ಲಿ ಶ್ರೀಧರ ಸ್ವಾಮೀಜಿಗಳ ದರ್ಶನ ಭಾಗ್ಯ ಲಭಿಸಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ತಮ್ಮ ಪೂವರ್ಾಶ್ರಮದ ಪುತ್ರನಿಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟು ಶ್ರೀಶ್ರೀ ರಾಮಾನಂದ ಸ್ವಾಮೀಗಳೆಂದು ಕರೆದರು. ಇನ್ನೋರ್ವ ಗೃಹಸ್ಥ ಶಿಷ್ಯನಿಗೂ ಸನ್ಯಾಸ ದೀಕ್ಷೆಯನ್ನು ನೀಡಿ ಶಿವಾನಂದ ಎನ್ನುವ ಅಭಿದಾನವನ್ನು ನೀಡಿದರು. ಸಹಜಾನಂದ ಅವದೂತರ ಪರಮ ಪ್ರಿಯ ಶಿಷ್ಟಯರಾದ ರಾಮಾನಂದ ಸ್ವಾಮೀಜಿಗಳು ಈಗ ದೀವಗಿಯ ಮಠದಲ್ಲಿ ನೆಲೆನಿಂತಿದ್ದಾರೆ. ಶಿವಾನಂದ ಸ್ವಾಮೀಜಿಗಳು ಯಲ್ಲಾಪುರ ತಾಲೂಕಿನ ನಾಯ್ಕನಕೆರೆಯಲ್ಲಿ ನೆಲೆನಿಂತು ಇದೀಗ ಮುಕ್ತರಾಗಿದ್ದಾರೆ. ಇವರಷ್ಟೇ ಅಲ್ಲದೇ ಪರಮಾನಂದರು ಹಾಗೂ ಕೇಶವಾನಂದರು ಎಂಬ ಇನ್ನಿಬ್ಬರು ಪ್ರಿಯ ಶಿಷ್ಯರಿದ್ದರು. ಇವರಿಬ್ಬರೂ ಕೂಡ ಪರಿವ್ರಾಜಕ ಸನ್ಯಾಸಿಗಳಾಗಿ ಲೋಕಸಂಚಾರ ಮಾಡಿದ್ದಾರೆ.
ಅವದೂತ ಪರಂಪರೆಯ ಪ್ರಮುಖ ಯತಿವರೇಣ್ಯರು ಎನ್ನಿಸಿಕೊಂಡಿರುವ ಸಹಜಾನಂದ ಅವದೂತರು ತಮ್ಮ ಸಾಧನೆಯ ಬಲದಿಂದಲೇ ಎಲ್ಲವನ್ನೂ ಸಾಧಿಸಿದವರು. ಮಹಾತ್ವರ ಸಾಲಿನಲ್ಲಿ ನಿಂತವರು. ತಾವೂ ಬೆಳಗಿ, ಇನ್ನೊಬ್ಬರ ಜೀವನಕ್ಕೂ ಬೆಳಕಾದವರು. ಗೃಹಸ್ಥಾಶ್ರಮದ ನಂತರ ಸನ್ಯಾಸ ದೀಕ್ಷೆ ಪಡೆದವರು. ಆಂಜನೇಯನನ್ನು ಆರಾಧ್ಯದೈವವಾಗಿ ನಂಬಿ ಆರಾಧಿಸಿದವರು. ಇಂತಹ ಸಹಜಾನಂದ ಅವದೂತರು ಕೊಳಗೀಬೀಸಿನ ಮಾರುತಿ ದೇವರ ಸನ್ನಿದಾನದಲ್ಲಿಯೇ ಆ1, 1966ರ ಪರಾಭವ ಸಂವತ್ಸರದ ಅಧಿಕ ಶ್ರಾವಣ ಶುದ್ಧ ಹುಣ್ಣಿಮೆಯ ಸೋಮವಾರದಂದು ಮಹಾಸಮಾಧಿ ಹೊಂದಿದರು. ತದನಂತರ 1978ರ ಫೆ.20ರಂದು ಸ್ವರ್ಣವಲ್ಲಿ ಮಠದ ಸರ್ವಜ್ಞೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ಸಹಜಾನಂದ ಅವದೂತ ಸ್ವಾಮೀಜಿಗಳು ಮಹಾಸಮಾಧಿ ಹೊಂದಿದ ಸ್ಥಳದಲ್ಲಿ ಗುರುಲಿಂಗ ಸ್ಥಾಪನೆ ಮಾಡಿದರು. ಕಳೆದ 5 ದಶಕಗಳಲ್ಲಿ ಕೊಳಗೀಬೀಸ್ ಧಾಮರ್ಿಕ ತಾಣವಾಗಿ ಬೆಳೆದು ಬಂದಿದೆ. ಮಾರುತಿಯ ಶಕ್ತಿ ಸ್ಥಳಗಳಲ್ಲಿ ಒಂದು ಎನ್ನಿಸಿದೆ. ಮಹಾಗುರು ಆಂಜನೇಹ, ಆಂಜನೇಯನ ಆರಾಧಕ ಶಿಷ್ಯ ಸಹಜಾನಂದ ಅವದೂತರ ವಿಶಿಷ್ಟ ಕ್ಷೇತ್ರ ಎಂದು ಜನಮಾನಸದಲ್ಲಿ ನೆಲೆನಿಂತಿದೆ. ಭಕ್ತರ ಬೇಡಿಕೆಗಳನ್ನು ಈಡೇರಿಸುವ ಇಷ್ಟಾರ್ಥಗಳನ್ನು ಕರುಣಿಸುವ, ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ತಾಣ ಎಂದು ಪ್ರಖ್ಯಾತಿ ಪಡೆದಿದೆ.


(ವಿಶ್ವವಾಣಿಯ ಆ.18ರ ಗುರು ಪುರವಣಿಯಲ್ಲಿ ಪ್ರಕಟಗೊಂಡಿದೆ) 

Tuesday, August 9, 2016

ಅಕ್ರಮ ಚಟುವಟಿಕೆಗಳ ತಾಣವಾದ ಭೀಮನವಾರೆ ಗುಡ್ಡ

ಮಾದಕ ವಸ್ತುಗಳ ಬಳಕೆ : ಅರಣ್ಯ ಇಲಾಖೆ ಅಧಿಕಾರಿಗಳ ಶಾಮೀಲಿನ ಶಂಕೆ

.....................

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು ಎನ್ನಿಸಿಕೊಂಡಿರುವ ಸಿದ್ದಾಪುರ ತಾಲೂಕಿನ ಭೀಮನವಾರೆಗುಡ್ಡ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ. ಮಾದಕ ವ್ಯಸನಿಗಳು, ಮದ್ಯವ್ಯಸನಿಗಳು ಭೀಮನವಾರೆ ಗುಡ್ದದಲ್ಲಿ ದಿನಂಪ್ರತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಈ ಕುರಿತು ಕಠಿಣ ಕ್ರಮ ಕೈಗೊಲ್ಳಬೇಕಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಭೀಮನವಾರೆ ಗುಡ್ಡ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಆಂಗುಬೆಯ ಸೂಯಾಸ್ತವನ್ನು ನೆನಪಿಗೆ ತರುವಂತಹ ಪ್ರಸಿದ್ಧ ತಾಣ ಇದಾಗಿದ್ದು ಸಿದ್ದಾಪುರದಿಂದ 35 ಕಿಲೋಮೀಟರ್ ಹಾಗೂ ಶಿರಸಿಯಿಂದ 30 ಕಿಲೋಮೀಟರ್ ದೂರದಲ್ಲಿದೆ. ಈ ಪ್ರವಾಸಿ ತಾಣದ ವೀಕ್ಷಣೆಗೆ ದಿನಂಪ್ರತಿ ಹಲವಾರು ಜನರು ದೂರದ ಊರುಗಳಿಂದ ಆಗಮಿಸುತ್ತಾರೆ. ವಾರಾಂತ್ಯದಲ್ಲಿ ನೂರಾರು ಜನರು ಭೀಮನವಾರೆ ಗುಡ್ಡದಲ್ಲಿ ಪ್ರಕೃತಿ ವೀಕ್ಷಣೆ ಮಾಡಿ ಮನದಣಿಯುತ್ತಿದ್ದಾರೆ.
ಭೀಮನವಾರೆಗುಡ್ಡದಲ್ಲಿ ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಭೀಮನವಾರೆ ಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ದಿನಂಪ್ರತಿ ಮದ್ಯಪಾನದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಲ್ಲದೇ ವಾರದ ಕೆಲವು ದಿನಗಳಲ್ಲಿ ಈ ತಾಣ ವೀಕ್ಷಣೆಗೆ ಆಗಮಿಸುವ ಸುತ್ತಮುತ್ತಲ ಪ್ರದೇಶದ (ಅಲ್ಪಸಂಖ್ಯಾತ ಕೋಮಿನ) ಯುವಕರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿಕೊಂಡಿದ್ದಾರೆ. ಭೀಮನವಾರೆ ಗುಡ್ಡದ ಪ್ರದೇಶದಲ್ಲಿ ಗಾಂಜಾ ಸೇವನೆ, ಮದ್ಯಪಾನ ಮಾಡುವುದು ಸೇರಿದಂತೆ ಹಲವು ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೇ ಭೀಮನವಾರೆ ಗುಡ್ಡಕ್ಕೆ ಬರುವ ಪ್ರೇಮಿಗಳೂ ಕುಡ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ಸ್ಥಳೀಯರ ಅಂಬೋಣವಾಗಿದೆ.
ಭೀಮನವಾರೆ ಗುಡ್ಡದಲ್ಲಿ ಅಕ್ರಮ ಚಟುವಟಿಕೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆಗೆ ಸಾಕ್ಷಿಯಾಗಿ ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿರುತ್ತವೆ. ಈ ಭಾಗದ ಯುವಕರು ನಿಗದಿತ ಸಮಯಕ್ಕೆ ಭೀಮನವಾರೆ ಗುಡ್ಡವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳುತ್ತಾರಾದರೂ ಕೆಲ ದಿನಗಳಲ್ಲಿಯೇ ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುತ್ತಾರೆ ಎಂಬುದು ಸ್ಥಳೀಯರ ಅಂಬೋಣ. ಭೀಮನವಾರೆ ಗುಡ್ಡದಲ್ಲಿಯೇ ಇರುವ ಒಂದೆರಡು ಸ್ಥಳಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಸ್ಪೀಟ್ ಕೂಡ ಆಡಲಾಗುತ್ತಿದೆ. ಇದರಿಂದಾಗಿ ಪ್ರವಾಸಿ ತಾಣದ ಪ್ರದೇಶ ಸಂಪೂರ್ಣವಾಗಿ ಹಾಳಾಗುತ್ತಿದೆ.
ಭೀಮನವಾರೆ ಗುಡ್ಡಕ್ಕೆ ತೆರಳುವ ಮಾರ್ಗದ ನಡುವೆ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಒಂದು ಇದೆ. ಆದರೆ ಇಲ್ಲಿ ಸಮರ್ಪಕವಾಗಿ ತನಿಖೆ ನಡೆಸಲಾಗುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭೀಮನವಾರೆ ಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಕಂಡೂ ಕಾಣದಂತಿದ್ದಾರೆ. ದಿನಂಪ್ರತಿ ಅನೈತಿಕ ಚಟುವಟಿಕೆಗಳು ನಡೆದರೂ ಅರಣ್ಯ ಇಲಾಖೆ ಅಧಿಕಾರಿಗಳು ತಮಗೂ, ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವತರ್ಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಡೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಅನುಮಾನಕ್ಕೂ ಕೂಡ ಕಾರಣವಾಗಿದೆ.   ನೂರಾರು ಪ್ರವಾಸಿಗರು ಆಗಮಿಸಿ ಅತ್ಯುತ್ತಮ ಪ್ರವಾಸಿ ತಾಣವಾಗಬಹುದಾಗಿದ್ದ, ತನ್ಮೂಲಕ ಸ್ಥಳೀಯರಿಗೆ ಆದಾಯದ ಮೂಲವಾಗಿ ಮಾಪರ್ಾಡಾಗಬಹುದಾಗಿದ್ದ ಬೀಮನವಾರೆಗುಡ್ಡ ಅಕ್ರಮ ಚಟುವಟಿಕೆಗಳಿಂದಾಗಿ ಕುಖ್ಯಾತಿಗೆ ಕಾರಣವಾಗುತ್ತಿದೆ.
ಮುಂದಿನ ದಿನಗಳಲ್ಲಿ ಭೀಮನವಾರೆಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಮಾದಕವಸ್ತು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರವಾಸಿ ತಾಣಕ್ಕೆ ಆಗಮಿಸುವವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಮಾದಕ ವಸ್ತು ಸೇವನೆ ಮಾಡುವವರ ವಿರುದ್ಧ ಹಾಗೂ ಅನೈತಿಕ ಚಟುವಟಿಕೆಗಳನ್ನು ಕೈಗೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

///////////////////

ಬೀಮನವಾರೆ ಗುಡ್ಡದ ವಾತಾವರಣ ಹದಗೆಟ್ಟಿದೆ. ಮದ್ಯವ್ಯಸನಿಗಳು ಹಾಗೂ ಮಾದಕ ವಸ್ತು ಸೇವನೆ ಮಾಡುವವರ ತಾಣವಾಗಿ ಬದಲಾಗಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ರಾಜೇಶ ನಾಯ್ಕ
ಪ್ರವಾಸಿ


(ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

Monday, July 18, 2016

ನಿರ್ವಹಣೆಯಿಲ್ಲದೇ ಸೊರಗಿದ ಪ್ರವಾಸಿತಾಣ... ಪ್ಲಾಸ್ಟಿಕ್ ಮಯವಾದ ಉಂಚಳ್ಳಿ ಜಲಪಾತ

ದೇಶ-ವಿದೇಶಗಳ ಪ್ರವಾಸಿಗರನ್ನು ಆಕಷರ್ಿಸುತ್ತಿರುವ ಉಂಚಳ್ಳಿ ಜಲಪಾತ ಪ್ಲಾಸ್ಟಿಕ್ ಮಯವಾಗಿ ಬದಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿ ಬಿದ್ದಿದ್ದು ಜಲಪಾತದ ಪ್ರದೇಶ ಗಬ್ಬೆದ್ದು ನಾರುತ್ತಿದೆ.
 ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿರುವ ಉಂಚಳ್ಳಿ ಜಲಪಾತ ಮೈದುಂಬಿದೆ. ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕನರ್ಾಟಕವಲ್ಲದೇ ಮಹಾರಾಷ್ಟ್ರ, ಆಂಧ್ರ, ಗೋವಾ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸಿಗರೂ ಕೂಡ ಉಂಚಳ್ಳಿ ಜಲಪಾತದ ಕಡೆಗೆ ಮುಖ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಜಲಪಾತದ ಸೌಂದರ್ಯವನ್ನು ಇಮ್ಮಡಿಸಿದೆ. ಆದರೆ ಉಂಚಳ್ಳಿ ಜಲಪಾತದ ಪರಿಸರದಲ್ಲಿ ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯ ಜಲಪಾತದ ಸೊಬಗಿಗೆ ಕಪ್ಪು ಚುಕ್ಕೆ ಎನ್ನಿಸಿದೆ.
 ಉಂಚಳ್ಳಿ ಜಲಪಾತದ ಆವರಣದಲ್ಲಿ ಎತ್ತ ನೋಡಿದರತ್ತ ಪ್ಲಾಸ್ಟಿಕ್ ತ್ಯಾಜ್ಯಗಳು ಹೇರಳವಾಗಿ ಬಿದ್ದುಕೊಂಡಿವೆ. ಪ್ರವಾಸಿಗರು ತರುವ ತಿಂಡಿಯ ಪೊಟ್ಟಣಗಳು ಖಾದ್ಯಗಳ ಪೊಟ್ಟಣಗಳು ಬಿದ್ದುಕೊಂಡಿವೆ. ಅಷ್ಟೇ ಅಲ್ಲದೇ ಜಲಪಾತದ ಪರಿಸರದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದುಕೊಂಡಿವೆ. ಜಲಪಾತವನ್ನು ವೀಕ್ಷಣೆ ಮಾಡುವ ಒಂದು ಸ್ಥಳದಲ್ಲಂತೂ ಯಾವುದೋ ಜನ್ಮದಿನವನ್ನು ಆಚರಣೆ ಮಾಡಲಾಗಿದ್ದು, ಅದಕ್ಕಾಗಿ ಬಳಕೆ ಮಾಡಲಾಗಿರುವ ತರಹೇವಾರಿ ಪ್ಲಾಸ್ಟಿಕ್ಗಳು, ತಿಂಡಿ ತಿಂದು ಎಸೆಯಲಾಗಿರುವ ಪ್ಲೇಟ್ಗಳು, ಬೇರೆ ಬೇರೆ ಕಂಪನಿಗಳ ಮದ್ಯದ ಬಾಟಲಿಗಳು ಬಿದ್ದುಕೊಂಡಿವೆ. ಪರಿಣಾಮವಾಗಿ ಪ್ರವಾಸಿಗರು ಹೇರಳವಾಗಿ ಆಗಮಿಸಿ ಎಲ್ಲರ ಆಕರ್ಷಣೆಗೆ ಕಾರಣವಾಗಬೇಕಾಗಿದ್ದ ಜಲಪಾತ ಸೌಂದರ್ಯಕ್ಕೆ ಮಸಿ ಬಳಿಸಿಕೊಳ್ಳುವಂತಾಗಿದೆ.
 ಜಲಪಾತದ ಪ್ರದೇಶದಲ್ಲಿಯೇ ಶೌಚಾಲಯವಿದ್ದು ಹಾಳು ಸುರಿಯುತ್ತಿದೆ. ನಿರ್ವಹಣೆಯಿಲ್ಲದೇ ಈ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಮರದ ಎಲೆಗಳು, ಮುರಿದ ಮರದ ಕೊಂಬೆಗಳು ಈ ಶೌಚಾಲಯದಲ್ಲಿ ಬಿದ್ದುಕೊಂಡಿವೆ. ಶೌಚಾಲಯದ ಬಾಗಿಲು ಮುರಿದು ಬಿದ್ದಿದೆ. ಅಷ್ಟೇ ಅಲ್ಲದೇ ಈ ಶೌಚಾಲಯ ಜಲಪಾತ ವೀಕ್ಷಣೆಗೆ ಆಗಮಿಸುವ ಪಡ್ಡೆ ಹುಡುಗರ ಅನೈತಿಕ ಚಟುವಟಿಕೆಗಳಿಗೂ ತಾಣವಾಗಿ ಮಾಪರ್ಾಡಾಗಿದೆ. ಆದರೆ ಉಂಚಳ್ಳಿ ಜಲಪಾತ ಹಾಗೂ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದ್ದ ಪ್ರವಾಸೋದ್ಯಮ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಪರಿಣಾಮವಾಗಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರು ಜಲಪಾತದ ಕುರಿತು ನಕಾರಾತ್ಮಕವಾಗಿ ಮಾತನಾಡುವಂತಾಗಿದೆ.
 ಜಲಪಾತಕ್ಕಿಂತಲೂ 1 ಕಿ.ಮಿ ದೂರದಲ್ಲಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಕಾವಲು ಗೋಪುರ ಮಾಡಿ, ಆಗಮಿಸುವ ಪ್ರವಾಸಿಗರ ಬಳಿ ಪ್ರವೇಶಧನವನ್ನು ಪಡೆದುಕೊಳ್ಳುತ್ತಿದೆ. ಮೊಟಾರ್ಸೈಕಲ್ ಹಾಗೂ ಕಾರುಗಳಿಗೆ ಪ್ರತ್ಯೇಕವಾಗಿ ಪ್ರವೇಶಧನವನ್ನು ವಸೂಲಿ ಮಾಡಲಾಗುತ್ತಿದೆ. ಆದರೆ ಗ್ರಾಮ ಅರಣ್ಯ ಸಮಿತಿ ಪ್ರವೇಶ ಧನವನ್ನು ವಸೂಲಿ ಮಾಡುವಲ್ಲಿ ತೋರುವ ಉತ್ಸಾಹವನ್ನು ಜಲಪಾತದ ಪ್ರದೇಶದ ನಿರ್ವಹಣೆಯ ಕಡೆಗೆ ತೋರುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ಜಲಪಾತದ ಪ್ರದೇಶದಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಡೆದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಶೌಚಾಲಯವನ್ನು ಸರಿಪಡಿಸಿ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕಾಗಿದ್ದ ಗ್ರಾಮ ಅರಣ್ಯ ಸಮಿತಿ ಪ್ರವೇಶಧನ ವಸೂಲಿಗೆ ಮಾತ್ರ ಸೀಮಿತವಾಗಿದೆ.
 ಬ್ರಿಟನ್ ಅಧಿಕಾರಿ ಜಾಜರ್್ ಲೂಷಿಂಗ್ಟನ್ ಎಂಬಾತ ಈ ಜಲಪಾತವನ್ನು ಕಂಡು ಹಿಡಿದು ಹೊರ ಜಗತ್ತಿಗೆ ಪರಿಚಯಿಸಿದ, ಜಲಪಾತದ ಸೌಂದರ್ಯವನ್ನು ಹಾಡಿ ಹೊಗಳಿದ ಎನ್ನುವ ಪ್ರತೀತಿಯಿದೆ. ತದನಂತರದಲ್ಲಿ ತನ್ನ ಸೌಂದರ್ಯದಿಂದಲೇ ಹೆಸರುವಾಸಿಯಾಗಿದ್ದ ಉಂಚಳ್ಳಿ ಜಲಪಾತ ಈಗ ಮಾತ್ರ ತ್ಯಾಜ್ಯದಿಂದಾಗಿ ಕುಖ್ಯಾತಿ ಪಡೆದುಕೊಳ್ಳುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತಿಗಳು ಜಲಪಾತದ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಹೀಗಾದಾಗ ಮಾತ್ರ ಇನ್ನಷ್ಟು ಪ್ರವಾಸಿಗರನ್ನು ಆಕಷರ್ಿಸಿ ಆದಾಯವನ್ನು ಜಲಪಾತ ಹೆಚ್ಚಿಸಬಹುದಾಗಿದೆ.

.....
 ಉಂಚಳ್ಳಿ ಜಲಪಾತದ ಎಲ್ಲ ಕಡೆಗಳಲ್ಲಿ ಮಧ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಬಿದ್ದುಕೊಂಡಿವೆ. ನಿಸರ್ಗದ ಮಡಿಲಿನಲ್ಲಿ ಸ್ವಚ್ಛವಾಗಿ ಇರಬಹುದಾಗಿದ್ದ ಪ್ರವಾಸಿ ತಾಣ ಇದರಿಂದಾಗಿ ಮಸಿ ಬಳಿದುಕೊಳ್ಳುತ್ತಿದೆ. ಈ ತಾಣದಲ್ಲಿ ತ್ಯಾಜ್ಯ ಹೆಚ್ಚಿರುವುದರಲ್ಲಿ ಪ್ರವಾಸಿಗರ ತಪ್ಪು ಸಾಕಷ್ಟಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದಿದ್ದಾರೆ. ಈ ಪ್ರದೇಶದ ನಿರ್ವಹಣೆಯನ್ನು ಕೈಗೊಳ್ಳಬೇಕಿದ್ದವರೂ ಕೂಡ ಜವಾಬ್ದಾರಿಯನ್ನು ಮರೆತಿದ್ದಾರೆ.
ಅಬ್ದುಲ್ ಸಮದ್
ಪ್ರವಾಸಿ
ಹಾಸನ

Sunday, July 17, 2016

ಅಘನಾಶಿನಿ ತೀರದ ಜನರ ನಿದ್ದೆಗೆಡಿಸಿದ ನದಿ ತಿರುವು ಹುನ್ನಾರ

ಮತ್ತೆ ಬಂದ ನದಿ ತಿರುವು ಗುಮ್ಮ

ಇನ್ನೆಲ್ಲಿ ಈ ಸೊಬಗು??
ಜಿಲ್ಲೆಯ ಮೇಲೆ ಸದಾ ಒಂದಿಲ್ಲೊಂದು ನದಿ ಯೋಜನೆಗಳ ಗುಮ್ಮ ಕಾಡುತ್ತಲೇ ಇದೆ. ಅಂತಹ ನದಿ ಯೋಜನೆಗಳ ಯಾದಿಯಲ್ಲಿ ಹೊಸದಾಗಿ ಅಘನಾಶಿನಿ ನದಿ ತಿರುವು ಕೇಳಿ ಬರಲು ಆರಂಭಿಸಿದೆ. ಹೊಸ ಯೋಜನೆ ಜನಸಾಮಾನ್ಯರ ನೆಮ್ಮದಿಯನ್ನು ಕದಡಿದೆ.
ಜಿಲ್ಲೆ ಯೋಜನೆಗಳ ಭಾರದಲ್ಲಿ ಈಗಾಗಲೇ ನಲುಗಿದೆ. ಕೈಗಾ ಅಣುವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ, ಸೀಬರ್ಡ್, ಕೊಡಸಳ್ಳಿ ಅಣೆಕಟ್ಟು, ಸೂಪಾ ಡ್ಯಾಂ ಸೇರಿದಂತೆ ಹತ್ತು ಹಲವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಜನರ ನೆಮ್ಮದಿಯನ್ನು ಕದಡಿ ಹಾಕಿದೆ. ಇಷ್ಟರ ಜೊತೆಗೆ ಆಗಾಗ ಸದ್ದು ಮಾಡುವ ಕಿರು ಜಲವಿದ್ಯುತ್ ಯೋಜನೆಗಳ ಪ್ರಸ್ತಾಪ ಕೂಡ ಜಿಲ್ಲೆಯ ಜನರನ್ನು ಹಿಂಡುತ್ತಿವೆ. ವರದಾ ಹಾಗೂ ಶಾಲ್ಮಲಾ ನದಿ ಜೋಡಣೆ ಕೂಡ ಕೆಲ ಕಾಲ ಸದ್ದು ಮಾಡಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಇನ್ನೊಂದು ಪ್ರಮುಖ ನದಿ ಎನ್ನಿಸಿಕೊಂಡಿರುವ ಅಘನಾಶಿನಿ ನದಿ ತಿರುವು ಯೋಜನೆ ಸದ್ದು ಮಾಡಲು ಆರಂಭಿಸಿದೆ.
ಅಘನಾಶಿನಿ ನದಿ ತಿರುವು ಕುರಿತಂತೆ ಸರಕಾರ ನೀರಾವರಿ ತಜ್ಞರ ಹಾಗೂ ಅಧಿಕಾರಿಗನ್ನೊಳಗೊಂಡ ಸಮಿತಿಯೊಂದನ್ನು ರಚನೆ ಮಾಡಿದೆ. ತನ್ಮೂಲಕ ಉತ್ತರ ಕನ್ನಡದ ಲಕ್ಷಕ್ಕೂ ಅಧಿಕ ಜನರ ನೆಮ್ಮದಿಯನ್ನು ಕೆಡಿಸಲು ಪೀಠಿಕೆ ಆರಂಭವಾಗಿದೆ. ಅಘನಾಶಿನಿ ನದಿಗೆ ಜೀವವೈವಿಧ್ಯ ಜಗತ್ತಿನಲ್ಲಿ ಉನ್ನತ ಸ್ಥಾನವಿದೆ. ಅಪರೂಪದ ಅಪ್ಪೆಮಿಡಿಗಳು, ಸಿಂಹ ಬಾಲದ ಲಂಗೂರ್, ಅಳಿವಿನ ಅಂಚಿನಲ್ಲಿರುವ ನೀರುನಾಯಿಗಳು, ಕರಾವಳಿ ತೀರದಲ್ಲಿ ಚಿಪ್ಪುಗಳು, ಅಪರೂಪದ ಮೀನುಗಳು ಸೇರಿದಂತೆ ಸಸ್ಯ ಹಾಗೂ ಜೀವ ಸಂಕುಲಗಳಿವೆ. ಇನ್ನೂ ಅದೆಷ್ಟೋ ಪ್ರಬೇಧಗಳು ಅಘನಾಶಿನಿ ನದಿಯನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಅಘನಾಶಿನಿ ನದಿ ತಿರುವು ಯೋಜನೆಯಿಂದ ಈ ಪ್ರಬೇಧಗಳು, ಸಸ್ಯ ಸಂಕುಲಗಳು ನಾಶವಾಗಬಹುದಾಗಿದೆ.
ಶಿರಸಿ ನಗರದ ಶಂಕರಹೊಂಡ ಹಾಗೂ ತಾಲೂಕಿನ ಮಂಜುಗುಣಿಯಲ್ಲಿ ಪ್ರಮುಖ ಕವಲುಗಳ ಮೂಲಕ ಜನ್ಮ ತಳೆಯುವ ಅಘನಾಶಿನಿ ನದಿ ನಂತರದಲ್ಲಿ ಸಿದ್ದಾಪುರ, ಕುಮಟಾ ತಾಲೂಕುಗಳಲ್ಲಿ ಹರಿದು ತದಡಿಯಲ್ಲಿ ಸಮುದ್ರವನ್ನು ಸೇರುತ್ತದೆ. ಹೀಗೆ ಸಮುದ್ರ ಸೇರುವ ಮೊದಲು 98 ಕಿ.ಮಿ ದೂರ ಹರಿಯುವ ಅಘನಾಶಿನಿ ನದಿಯ ನೀರು ಪ್ರಮುಖವಾಗಿ ಶಿರಸಿ, ಕುಮಟಾ ಹಾಗೂ ಹೊನ್ನಾವರಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಅಗತ್ಯಗಳಿಗೆ ಬಳಕೆಯಾಗುತ್ತಿದೆ. ಬೆಣ್ಣೆಹೊಳೆ, ಚಂಡಿಕಾ ಹೊಳೆ, ಬೀಳಗಿಹೊಳೆಗಳು ಅಘನಾಶಿನಿ ನದಿಯ ಪ್ರಮುಖ ಉಪನದಿಗಳಾಗಿದ್ದು, 2146 ಚಕಿಮಿ ಪ್ರದೇಶಗಳು ನದಿಯ ಜಲಾನಯನ ಪ್ರದೇಶವಾಗಿದೆ. ಈ ಅಘನಾಶಿನಿ ನದಿಯ ನೀರನ್ನು ಜೂಗ-ಕಾರ್ಗಲ್, ನಂತರದಲ್ಲಿ ಈ ನೀರನ್ನು ಹಾಸನದ ಮೂಲಕ ಬೆಂಗಳೂರಿಗೆ ಕೊಂಡೊಯ್ಯಬೇಕು ಎಂದು 2013ರ ಸಪ್ಟೆಂಬರ್ ತಿಂಗಳಿನಲ್ಲಿ ನೇಮಿಸಲಾಗಿದ್ದ ತ್ಯಾಗರಾಜ್ ಕಮಿಟಿ ವರದಿ ಮಾಡಿತ್ತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಅಣೆಕಟ್ಟಿಗೆ ಅಘನಾಶಿನಿ ನದಿಯಿಂದ 50 ಟಿಎಂಸಿ ನೀರನ್ನು ಒಯ್ಯಬೇಕು ಹಾಗೂ ತದನಂತರದಲ್ಲಿ ಪಂಪ್ ಮೂಲಕ ನೀರನ್ನು ಲಿಂಗನಮಕ್ಕಿ ಅಣೆಕಟ್ಟೆಯಿಂದ ಮೇಲೆತ್ತಿ ಹಾಸನ ಮಾರ್ಗವಾಗಿ ಬೆಂಗಳೂರು ಮಹಾನಗರಕ್ಕೆ ಕೊಂಡೊಯ್ಯಬೇಕು ಎನ್ನುವ ಯೋಜನೆಯನ್ನು ವರದಿಯಲ್ಲಿ ಹೇಳಲಾಗಿತ್ತು. ಇಷ್ಟೇ ಅಲ್ಲದೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ನೀರು ಒದಗಿಸಲು ಅಘನಾಶಿನಿ ನದಿ ಹಾಗೂ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಶರಾವತಿ ನದಿಯ ನೀರನ್ನು ಬಳಕೆ ಮಾಡಬೇಕು ಎನ್ನುವ ವಾದವನ್ನು ಮಂಡನೆ ಮಾಡಿತ್ತು. ಆದರೆ ಈ ನದಿ ತಿರುವಿಗೆ ಸಂಬಂಧಿಸಿದಂತೆ ಈಗಾಗಲೇ ವಿರೋಧ ಆರಂಭವಾಗಿದೆ.
ಕಳೆದ ಬೇಸಿಗೆಯಲ್ಲಿ ಅಘನಾಶಿನಿ ನದಿ ಬರದ ಬೇಗೆಗೆ ಮೊಟ್ಟ ಮೊದಲ ಬಾರಿಗೆ ಬತ್ತಿ ಹೋಗಿತ್ತು. ಈ ಕುರಿತಂತೆ `ವಿಶ್ವವಾಣಿ' ಸಮಗ್ರ ವರದಿ ಮಾಡಿತ್ತು. ತದ ನಂತರದಲ್ಲಿ ಬತ್ತಿದ ಅಘನಾಶಿನಿಯಲ್ಲಿ ಸಾವನ್ನಪ್ಪುತ್ತಿರುವ ನೀರುನಾಯಿಗಳ ಬಗೆಗೂ ಕೂಡ ಸರಣಿ ವರದಿ ಮಾಡಿತ್ತು. ಇಂತಹ ಹಲವಾರು ಸಮಸ್ಯೆಗಳು ನದಿಗೆ ಎದುರಾಗಿರುವ ಸಂದರ್ಭದಲ್ಲಿಯೇ ಅಘನಾಶಿನಿ ನದಿಯನ್ನು ತಿರುವು ಮಾಡುವ ಯೋಜನೆ ಪ್ರಸ್ತಾಪವಾಗುತ್ತಿದೆ. 420 ಕಿ.ಮಿ ದೂರದ ಬೆಂಗಳೂರು ನಗರವಾಸಿಗಳ ದಾಹವನ್ನು ತಣಿಸುವ ಸಲುವಾಗಿ ಮಲೆನಾಡಿನ, 1 ಲಕ್ಷ ಜನರ ಜೀವನಾಡಿಯಾಗಿರುವ ಅಘನಾಶಿನಿ ನದಿ ತಿರುವು ಮಾಡುವ ಹುನ್ನಾರ ನಡೆದಿದೆ. ಈ ಹುನ್ನಾರವನ್ನು ಆರಂಭದಲ್ಲಿಯೇ ತಡೆಯುವ ಸಲುವಾಗಿ ಈಗಾಗಲೇ ಜನಾಂದೋಲನಗಳು ರೂಪುಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅಘನಾಶಿನಿ ಕಣಿವೆಯ ಜನಸಾಮಾನ್ಯರು ನದಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೆಜ್ಜೆಹಾಕಲಿದ್ದಾರೆ.

-------

(ವಿಶ್ವವಾಣಿ ಪತ್ರಿಕೆಯಲ್ಲಿ ಜು.17, 2016ರಂದು ಪ್ರಕಟವಾಗಿದೆ)