Sunday, July 17, 2016

ತೂಗಾಡುವ ಸೇತುವೆಯಲ್ಲಿ ತೂಗಾಡುವ ಬದುಕು

ಸಮರ್ಪಕ ತೂಗುಸೇತುವೆ ಇಲ್ಲದೇ ಬದುಕು ಹೈರಾಣು

ಉಕ್ಕಿ ಹರಿಯುವ ಅಘನಾಶಿನಿ ನದಿ. ಅದರ ಮೇಲಿನ ತೂಗಾಡುವ ಸೇತುವೆಯನ್ನು ಭಯದಿಂದಲೇ ಸಾಗುವ ಮಕ್ಕಳು. ತಲೆ ಹೊರೆಯ ಮೇಲೆ ಭೀತಿಯಿಂದ ಅಗತ್ಯದ ವಸ್ತುಗಳನ್ನು ಸಾಗಿಸುವ ಜನಸಾಮಾನ್ಯರು. ಸಿದ್ದಾಪುರ ತಾಲೂಕಿನ ಹಸರಗೋಡ ಪಂಚಾಯತದ ಬಾಳೂರು ಹಾಗೂ ಹಂಚಳ್ಳಿಯನ್ನು ಸಂಪರ್ಕಿಸುವ ತೂಗುಸೇತುವೆ ಇಂತಹ ದುರಂತದ ಪರಿಸ್ಥಿತಿಗೆ ಕಾರಣವಾಗಿದೆ.
ಬಾಳೂರಿನಲ್ಲಿ ಹರಿಯುವ ಅಘನಾಶಿನಿ ನದಿಗೆ ಅಡ್ಡಲಾಗಿ ಸ್ಥಳೀಯರೇ ಮುತುವರ್ಜಿ ವಹಿಸಿ ತೂಗು ಸೇತುವೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಡಿಕೆಯ ದಬ್ಬೆ, ಕಬ್ಬಿಣದ ಕೇಬಲ್ ಸಹಾಯದಿಂದ ನಿರ್ಮಾಣ ಮಾಡಲಾಗಿರುವ ಈ ತೂಗುಸೇತುವೆ ಅಜಮಾಸು 100 ಮೀಟರ್ ಉದ್ದವಿದೆ. ಅಘನಾಶಿನಿ ನದಿಯ ಎರಡೂ ದಡಗಳಲ್ಲಿರುವ ಮರಗಳನ್ನು ಆಧರಿಸಿ ಈ ತೂಗುಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ತೂಗುಸೇತುವೆಯ ಉಕ್ಕಿನ ಕೇಬಲ್ಗಳು ಈಗಾಗಲೇ ತುಕ್ಕು ಹಿಡಿದಿದೆ. ನಡೆದಾಡಲು ಅನುಕೂಲವಾಗುವಂತೆ ಅಡಿಕೆಯ ದಬ್ಬೆ, ಬಿದಿರಿನ ಎಳೆಗಳನ್ನು ಹಾಕಲಾಗಿದ್ದು ಅವೂ ಕೂಡ ಲಡ್ಡಾಗಿದ್ದು, ದುರಂತಕ್ಕಾಗಿ ಬಾಯ್ತೆರೆದುಕೊಂಡಿದೆ.
ಈ ಸೇತುವೆಯ ಮೇಲೆ ದಿನಂಪ್ರತಿ ನೂರಾರು ಜನರು ಓಡಾಟ ನಡೆಸುತ್ತಾರೆ. ಬಾಳೂರು, ಹೊಸಗದ್ದೆ ಭಾಗವನ್ನು ಹಂಚಳ್ಳಿ, ಕೆಂದಿಗೆತೋಟ, ಬಣಗಿ ಈ ಮುಂತಾದ ಗ್ರಾಮಗಳಿಗೆ ಈ ತೂಗುಸೇತುವೆ ಸಂಪರ್ಕವನ್ನು ಕಲ್ಪಿಸುತ್ತವೆ. ಹಂಚಳ್ಳಿ, ಕೆಂದಿಗೆತೋಟ ಈ ಮುಂತಾದ ಗ್ರಾಮಸ್ಥರು ಕೂಗಳತೆಯಲ್ಲಿರುವ ಹೊಸಗದ್ದೆ ಹಾಗೂ ಬಾಳೂರನ್ನು ತಲುಪಲು ಇರುವ ಸನಿಹದ ದಾರಿ ಇದಾಗಿದೆ. ಹಸರಗೋಡ ಗ್ರಾಮ ಪಂಚಾಯತಿಯನ್ನು ತಲುಪಲು, ಹೊಸಗದ್ದೆ ಶಾಲೆಗೆ ತೆರಳಲು ಈ ಮಾರ್ಗವೇ ಹತ್ತಿರದ್ದು ಎನ್ನಿಸಿಕೊಂಡಿದೆ. ಬಾಳೂರಿನ ಮೂಲಕ ತೆರಳುವ ಬಾಳೇಸರ ಬಸ್ನ್ನು ಹತ್ತಬೇಕಾದರೆ ಈ ಗ್ರಾಮಸ್ಥರು ಇದೇ ತೂಗುಸೇತುವೆಯನ್ನೇ ಬಳಸಬೇಕಾದ ಅನಿವಾರ್ಯತೆಯಿದೆ. ಈ ಮಾರ್ಗವನ್ನು ಹೊರತುಪಡಿಸಿದರೆ ರಸ್ತೆ ಮಾರ್ಗವೊಂದಿದೆಯಾದರೂ ಹೊಸಗದ್ದೆ, ಬಾಳೂರನ್ನು ತಲುಪಬೇಕಾದರೆ ಅಜಮಾಸು 8 ಕಿ.ಮಿ ಸುತ್ತಿ ಬಳಸಿ ಬರಬೇಕಾಗುತ್ತದೆ.
ಈ ತೂಗುಸೇತುವೆಯ ಮೇಲೆ ಏಕಕಾಲಕ್ಕೆ ಮೂರು ಅಥವಾ ಅದಕ್ಕೂ ಹೆಚ್ಚಿನ ಜನರು ನಡೆದರೆ ಸಾಕು ತೂಗಾಡಲು ಆರಂಭವಾಗುತ್ತದೆ. ಅತ್ತಿಂದಿತ್ತ ಹೊಯ್ದಾಡುವ ಈ ಮಾರ್ಗದಲ್ಲಿ ನಡೆಯುವುದೆಂದರೆ ದುಸ್ತರ ಎನ್ನುವಂತಾಗಿದೆ. ಶಾಲಾ ಮಕ್ಕಳಂತೂ ಒಂದು ಕೈಯಲ್ಲಿ ಛತ್ರಿಯನ್ನು ಹಿಡಿದು ಪ್ರಯಾಸದಿಂದ ಸೇತುವೆ ದಾಟುತ್ತಾರೆ. ಈ ಸಂದರ್ಭದಲ್ಲಿ ಸ್ವಲ್ಪವೇ ಯಾಮಾರಿದರೂ ಕೂಡ ಕೆಳಗೆ ಉಕ್ಕಿ ಹರಿಯುವ ಅಘನಾಶಿನಿ ನದಿಯಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳು ತೀವ್ರವಾಗಿದೆ. ನಾಲ್ಕಾರು ವರ್ಷಗಳ ಹಿಂದೆ ಸ್ಥಳೀಯರು ನಿರ್ಮಿಸಿದ್ದ ತೂಗುಸೇತುವೆ ಅಘನಾಶಿನಿ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ನಂತರದಲ್ಲಿ ಈ ಸ್ಥಳೀಯರೇ ಮುಂದಾಳುಗಳಾಗಿ ಮತ್ತೊಮ್ಮೆ ತೂಗುಸೇತುವೆ ನಿರ್ಮಾಣ ಮಾಡಿದ್ದರು. ಇದೀಗ ಈ ಸೇತುವೆ ಕೂಡ ಶಿಥಿಲಾವಸ್ಥೆ ತಲುಪಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಮಾರ್ಗದಲ್ಲಿ ಸದೃಢವಾದ ತೂಗುಸೇತುವೆ ನಿರ್ಮಾಣ ಮಾಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ. ಸರಕಾರ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವುದೂ ಕೂಡ ಈ ಮಾರ್ಗದಲ್ಲಿ ಸಂಚಾರ ಮಾಡುವವರ ಆಗ್ರಹವಾಗಿದೆ. ಶಿಥಿಲಾವಸ್ಥೆಯನ್ನು ತಲುಪಿರುವ ತೂಗುಸೇತುವೆ ಬದಲು, ವಿಶೇಷ ಅನುದಾನವನ್ನು ಮಂಜೂರು ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಿಂಧ ಶಿವಪುರಕ್ಕೆ ಸಂಚಾರ ಕಲ್ಪಿಸುವ ಪ್ರದೇಶದಲ್ಲಿ ಅಥವಾ ಶಿರಸಿ ತಾಲೂಕಿನ ಸಹಸ್ರಲಿಂಗದ ಬಳಿ ನಿರ್ಮಾಣ ಮಾಡಿದಂತೆ ಸುಸಜ್ಜಿತ ತೂಗುಸೇತುವೆ ನಿರ್ಮಾಣ ಮಾಡಬೇಕು ಎನ್ನುವುದೂ ಕೂಡ ಸ್ಥಳೀಯರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಜಿ.ಪಂ, ತಾ.ಪಂ ಸದಸ್ಯರು ಪ್ರಯತ್ನ ನಡೆಸಬೇಕಾದ ಅನಿವಾರ್ಯತೆಯಿದೆ. ಹೀಗಾದಾಗ ಮಾತ್ರ ನಾಲ್ಕೈದು ಗ್ರಾಮಗಳ ಜನರು, ಶಾಲಾ ಮಕ್ಕಳು ನಿಟ್ಟುಸಿರು ಬಿಡಲು ಸಾಧ್ಯ.

-------

ಈ ಸೇತುವೆ ಬಹಳ ಶಿಥಿಲವಾಗಿದೆ. ಮಕ್ಕಳು ಭಯದಿಂದಲೇ ತೂಗುಸೇತುವೆ ದಾಟುತ್ತಾರೆ. ಜೋರು ಮಳೆ, ಗಾಳಿ ಬಂದ ಸಂದರ್ಭದಲ್ಲಿ ಈ ತೂಗು ಸೇತುವೆ ದಾಟುವುದು ಅಪಾಯಕಾರಿ ಕೂಡ ಹೌದು. ಇದರ ಬದಲಾಗಿ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಬೇಕಿದೆ.
ರಾಜು ನಾಯ್ಕ
ಹಾರ್ಸಿಕಟ್ಟಾ


Tuesday, July 12, 2016

ಬೆಂಗಾಲಿ ಸುಂದರಿ -42

ಮೊದಲೊಂದು ಮಾತು :
ಬ್ಲಾಗ್ ನಲ್ಲಿ ಬರೆದ ಕಾದಂಬರಿ ಬೆಂಗಾಲಿ ಸುಂದರಿ. ಈಗಾಗಲೇ 41 ಭಾಗವನ್ನು ಬರೆದು ಕಾದಂಬರಿಯನ್ನು ಮುಕ್ತಾಯ ಮಾಡಿದ್ದೆ. ಆದರೆ ಕಾದಂಬರಿಯನ್ನು ಮುಕ್ತಾಯ ಮಾಡಿದ ನಂತರ ನನಗೆ ಅನೇಕ ಜನರ ಪೋನ್ ಗಳು ಬಂದವು. ಕಾದಂಬರಿಯನ್ನು ಇನ್ನೂ ಮೂರ್ನಾಲ್ಕು ಕಂತುಗಳ ವರೆಗೆ ಮುಂದುವರೆಸಬಹುದು ಎಂದರು. ಕ್ಲೈಮ್ಯಾಕ್ಸ್ ಸರಿಯಿಲ್ಲ ಎಂದರು. ಮತ್ತೆ ಕೆಲವು ಮಿತ್ರರು ಬಾಂಗ್ಲಾ ಗಡಿಯನ್ನು ದಾಟಿ ಬಂದ ನಂತರ ಮಧುಮಿತಾ ಹಾಗೂ  ವಿನಯಚಂದ್ರ ಮರಳಿ ಉತ್ತರ ಕನ್ನಡದ ಹಳ್ಳಿಗೆ ಹೇಗೆ ಬಂದರು? ಉತ್ತರ ಕನ್ನಡದ ಹವ್ಯಕರ ಮನೆ ಪಕ್ಕದ ದೇಶದ, ಮುಸ್ಲಿಂ ಬಾಹುಳ್ಯದ ನಾಡಿನಿಂದ ಬಂದ ಹುಡುಗಿಯನ್ನು ಹೇಗೆ ಮನೆಯೊಳಕ್ಕೆ ಬಿಟ್ಟುಕೊಂಡಿತು ಎನ್ನುವುದರ ಬಗ್ಗೆ ಬರೆಯಬೇಕಿತ್ತು ಎಂದೂ ಸಲಹೆ ನೀಡಿದ್ದರು. ಕೆಲವರು ಸಾತ್ವಿಕ ಕೋಪವನ್ನೂ ತೋರ್ಪಡಿಸಿದ್ದರು. ಕಾದಂಬರಿಯ ಪುಸ್ತಕವನ್ನು ಮುದ್ರಿಸಿ ಎಂದಿದ್ದರು. ಅದಕ್ಕೆ ಸಹಾಯ ಮಾಡುವುದಾಗಿಯೂ ತಿಳಿಸಿದ್ದರು. ಎಲ್ಲರ ಪ್ರೀತಿಗೆ ಕಟ್ಟುಬಿದ್ದು ಕನಿಷ್ಟ ಮೂರು ಅಥವಾ ನಾಲ್ಕು ಕಂತುಗಳ ವರೆಗೆ ಬೆಂಗಾಲಿ ಸುಂದರಿ ಕಾದಂಬರಿಯನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿದ್ದೇನೆ. 2014ರ ನವೆಂಬರ್ ತಿಂಗಳಿನಲ್ಲಿಯೇ ಮುಕ್ತಾಯ ಎಂದು ಬರೆದಿದ್ದ ಕಾದಂಬರಿಯನ್ನು ಒಂದೂವರೆ ವರ್ಷದ ತರುವಾಯ ಮತ್ತೆ ಬರೆಯುತ್ತಿದ್ದೇನೆ. ಮುಂದುವರಿಸುತ್ತಿದ್ದೇನೆ. ಓದಿ, ಅಭಿಪ್ರಾಯಿಸಿ...

---------------

                  ವಿನಯಚಂದ್ರನ ಬಳಿ ಒಬ್ಬರಾದ ನಂತರ ಒಬ್ಬರು ಸೈನಿಕರು, ಕಮಾಂಡರುಗಳು ಬಂದು ವಿಚಾರಣೆ ನಡೆಸುತ್ತಲೇ ಇದ್ದರು. ತಕ್ಷಣ ವಿನಯಚಂದ್ರನಿಗೆ ಸೈನ್ಯದಲ್ಲೇ ಇದ್ದ ಗೆಳೆಯ ನಾಗರಾಜು ನೆನಪಾಗಿದ್ದ. ಡಿಗ್ರಿ ಓದುತ್ತಿದ್ದ ಸಮಯದಲ್ಲಿಯೇ ಸೈನ್ಯದ ಕನಸುಕಂಡು, ಸೇರಿಕೊಂಡಿದ್ದ ಗೆಳೆಯ. ಲಡಾಕ್, ಕಾಶ್ಮೀರ, ಕಛ್ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಸೇನೆಯಲ್ಲಿ ಕೆಲಸ ಮಾಡಿದ್ದ ಗೆಳೆಯ. ಸೈನ್ಯದ ಅಧಿಕಾರಿಗಳಿಗೆ ವಿನಯಚಂದ್ರ ನಾಗರಾಜುವಿನ ಹೆಸರನ್ನು ಹೇಳಿದ್ದ. ಅಧಿಕಾರಿಗಳು ನಾಗರಾಜುವಿನ ಸಂಪರ್ಕಕ್ಕೆ ಮುಂದಾಗಿದ್ದರು.
               ಸೈನ್ಯದ ಅಧಿಕಾರಿಗಳ ಕೈಗೆ ಸಿಕ್ಕು ಒಂದು ದಿನವೇ ಕಳೆದಿತ್ತು. ಆದರೂ ಮಧುಮಿತಾ ಎಲ್ಲಿದ್ದಾಳೆ ಎನ್ನುವುದು ಗೊತ್ತಾಗಿರಲ್ಲ. ಸೈನ್ಯದವರು ಕಾಲಿಗೆ ಹೊಡೆದ ಗುಂಡನ್ನು ಸೈನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಇಲಾಜು ಮಾಡಲಾಗಿತ್ತು. ಗುಂಡು ತಾಗಿದ ಜಾಗದಲ್ಲಿ ವಿಪರೀತ ನೋಯುತ್ತಿತ್ತು. ನೋವಿನ ನಡುವೆಯೂ ವಿಚಾರಣೆಗಾಗಿ ಸೈನ್ಯದ ಅಧಿಕಾರಿಗಳು ಬಂದಾಗಲೆಲ್ಲ ಅವರ ಬಳಿ ಮಧುಮಿತಾಳ ಬಗ್ಗೆ ಕೇಳುತ್ತಲೇ ಇದ್ದ. ಆದರೆ ಯಾರೊಬ್ಬರೂ ಕೂಡ ಮಧುಮಿತಾಳ ಬಗ್ಗೆ ಚಿಕ್ಕ ವಿವರವನ್ನೂ ನೀಡಿರಲಿಲ್ಲ.
             ಮಧುಮಿತಾಳನ್ನು ಕಾಣದೇ ಕಂಗಾಲಾಗಿದ್ದ ವಿನಯಚಂದ್ರ ಕೊನೆಗೊಮ್ಮೆ ಒಬ್ಬ ಅಧಿಕಾರಿಯ ಬಳಿ ಅಂಗಲಾಚಿದ್ದ. ಅದಕ್ಕೆ ಅಧಿಕಾರಿ ಮಧುಮಿತಾಳನ್ನು ಇನ್ನೊಂದು ಕಡೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆಕೆ ಬಾಂಗ್ಲಾದ ನಿವಾಸಿಯಾಗಿರುವ ಕಾರಣ ಅವಳನ್ನು ಸುಲಭವಾಗಿ ನಿನ್ನನ್ನು ಮಾತನಾಡಿಸಲು ಬಿಡುವುದಿಲ್ಲ ಎಂದು ತಿಳಿಸಿದಾಗ ವಿನಯಚಂದ್ರ ಸ್ವಲ್ಪ ನಿರಾಳನಾಗಿದ್ದ. ಎಲ್ಲಾದರೂ ಇರಲಿ, ಆಕೆ ಚನ್ನಾಗಿದ್ದಾಳಲ್ಲ, ಅಷ್ಟು ಸಾಕು ಎಂದುಕೊಂಡನಾದರೂ ಒಮ್ಮೆ ಅವಳನ್ನು ನೋಡಲೇಬೇಕು ಎಂಬ ತುಡಿತ ಹೆಚ್ಚಾಯಿತು. ನಿಂತಲ್ಲಿಯೇ ಶತಪಥ ಸುತ್ತಿದ.
             `ಸರ್ ಒಂದು ಪೋನ್ ಮಾಡಲು ಅವಕಾಶ ಸಿಗಬಹುದಾ?' ಹತ್ತಿರದಲ್ಲಿಯೇ ಇದ್ದಿದ್ದ ಮಿಲಿಟರಿ ಅಧಿಕಾರಿಗಳ ಬಳಿ ಕೇಳಿದ್ದ. `ಯಾಕೆ??' ರೇಗಿದ್ದರು ಅಧಿಕಾರಿ. `ಗೆಳೆಯನೊಬ್ಬನಿಗೆ ಪೋನ್ ಮಾಡಬೇಕಿತ್ತು.. ಬಹಳ ಅರ್ಜೆಂಟು..' ಎಂದ ವಿನಯಚಂದ್ರ.
            `ಯಾರು? ಯಾವ ದೇಶದವನು? ಯಾಕೆ ಪೋನ್ ಮಾಡುವುದು?' ಸಿಟ್ಟಿನಿಂದಲೇ ಕೇಳಿದ್ದ ಮಿಲಿಟರಿಯವನು. `ಭಾರತದವನೇ. ಸಂಜಯ ಎಂಬ ಹೆಸರು. ನನ್ನ ಪರಿಸ್ಥಿತಿಯನ್ನು ಹೇಳಿಕೊಳ್ಳಬೇಕು. ಆತ ಸಹಾಯ ಮಾಡಬಹುದು..' ಎಂದು ಅಂಗಲಾಚಿದ ವಿನಯಚಂದ್ರ. ಕೊನೆಗೆ ಮಿಲಿಟರಿ ಅಧಿಕಾರಿ ದೂರವಾಣಿಯನ್ನು ತೋರಿಸಿದ. ವಿನಯಚಂದ್ರ ಸಂಜಯನಿಗೆ ಪೋನ್ ಮಾಡಿ ವಿಷಯವನ್ನು ತಿಳಿಸಿದ.
           ವಿನಯಚಂದ್ರ ಬಾಂಗ್ಲಾದೇಶದಲ್ಲಿ ಕಾಣೆಯಾಗಿದ್ದಾನೆ ಎನ್ನುವ ವಿಷಯ ತಿಳಿದ ಕೂಡಲೇ ಸರಣಿ ಸುದ್ದಿಗಳನ್ನು ಮಾಡುವ ಮೂಲಕ ದೇಶದಾದ್ಯಂತ ಸಂಚಲನವನ್ನು ಉಂಟುಮಾಡಿದ್ದ. ಸಂಜಯ ಮಾಡಿದ್ದ ಸುದ್ದಿಗಳಿಂದಾಗಿ ಪ್ರಧಾನ ಮಂತ್ರಿಗಳು ಹಾಗೂ ಸಚಿವಾಲಯ ಕೂಡ ವಿನಯಚಂದ್ರನನ್ನು ಬಾಂಗ್ಲಾದೇಶದಿಂದ ಕರೆದುಕೊಂಡು ಬರುವ ಬಗ್ಗೆ ಕ್ರಮಗಳನ್ನು ಕೈಗೊಂಡಿದ್ದರು. ಬಾಂಗ್ಲಾದೇಶದ ಸಚಿವಾಲಯದ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುವ ಮೂಲಕ ವಿನಯಚಂದ್ರನ ರಕ್ಷಣೆಯ ಸಾಧ್ಯತೆಗಳನ್ನು ತೆರೆದಿಟ್ಟಿದ್ದರು. ಆದರೆ ಭಾರತದಲ್ಲಿ, ರಾಜಕೀಯವಾಗಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ವಿನಯಚಂದ್ರನಿಗೆ ಮಾತ್ರ ಇದಾವುದರ ಅರಿವಿರಲಿಲ್ಲ. ಬಾಂಗ್ಲಾದ ಬೀದಿಬೀದಿಗಳಲ್ಲಿ ಭಾರತವನ್ನು ತಲುಪಬೇಕೆಂಬ ಉದ್ದೇಶದಿಂದ ಮಧುಮಿತಾಳೊಂದಿಗೆ ಅಲೆಯುತ್ತಿದ್ದ. ಸಂಜಯನಿಗೆ ದೂರವಾಣಿಯ ಮೂಲಕ ಕರೆ ಮಾಡಿದ್ದು ವಿನಯಚಂದ್ರನ ಪಾಲಿಗೆ ಭಾರಿ ಉತ್ತಮ ಕೆಲಸವಾಗಿತ್ತು.
            ವಿನಯಚಂದ್ರ ಆರಾಮಾಗಿದ್ದಾನೆ ಹಾಗೂ ಆತ ಭಾರತಕ್ಕೆ ಬಂದಿದ್ದಾನೆ ಎನ್ನುವ ವಿಷಯ ಅರಿತ ಸಂಜಯ ನಿರಾಳನಾಗಿದ್ದ. ಮಿಲಿಟರಿ ಅಧಿಕಾರಿಗಳ ಕೈಲಿ ಸಿಕ್ಕಿಬಿದ್ದಿರುವ ಹಾಗೂ ಕಾಲಿಗೆ ಗುಂಡೇಟು ಬಿದ್ದಿರುವ ವಿಷಯವನ್ನು ತಿಳಿದ ತಕ್ಷಣವೇ ಸಂಜಯ ಒಮ್ಮೆ ಆಘಾತಕ್ಕೆ ಒಳಗಾಗಿದ್ದರೂ ಇನ್ನೂ ದೊಡ್ಡದಾದ ತೊಂದರೆಯೇನೂ ಆಗಿಲ್ಲ ಎಂದು ಸಮಾಧಾನಿಸಿದ. ಮಿಲಿಟರಿಯವರ ಕೈಯಲ್ಲಿರುವ ವಿನಯಚಂದ್ರನನ್ನು ಬಿಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಗಳನ್ನು ಕೈಗೊಳ್ಳಲಾರಂಭಿಸಿದ. ಪ್ರಧಾನಿ ಕಚೇರಿಯನ್ನು ಸಂಪರ್ಕಿಸಲು ಯತ್ನಿಸಿ ಯಶಸ್ವಿಯಾದ. ನಂತರದ ಬೆಳವಣಿಗೆಗಳು ತ್ವರಿತವಾಗಿ ನಡೆದಿದ್ದವು. ಮೂರ್ನಾಲ್ಕು ದಿನಗಳ ಅಂತರದಲ್ಲಿಯೇ ವಿನಯಚಂದ್ರನ ಬಿಡುಗಡೆಗೆ ಸಂಬಂಧಿಸಿದಂತೆ ಬೆಳವಣಿಗೆಗಳು ನಡೆದಿದ್ದವು. ಜೊತೆಯಲ್ಲಿಯೇ ಮಧುಮಿತಾಳನ್ನೂ ಬಿಟ್ಟುಕಳಿಸುವ ಕುರಿತಂತೆ ಕ್ರಮಗಳನ್ನು ಜರುಗಿಸಲಾಗಿತ್ತು.


(ಮುಂದುವರಿಯುತ್ತದೆ..)

              

Wednesday, July 6, 2016

ಬನವಾಸಿ ದೇವಾಲಯಕ್ಕೆ ವನವಾಸ ಯೋಗ.... ಸೋರುತಿಹುದು ಮಧುಕೇಶ್ವರನ ದೇವಾಲಯ

ಪಂಪನ ನಾಡಿನಲ್ಲಿ ಇದೇನು ದುಸ್ಥಿತಿ? ಕಣ್ಮುಚ್ಚಿ ಕುಳಿತ ಪುರಾತತ್ವ ಇಲಾಖೆ

---------------------


ಕನ್ನಡದ ಪ್ರಪ್ರಥಮ ರಾಜರು ಎನ್ನಿಸಿಕೊಂಡಿರುವ ಕದಂಬರ ಆರಾಧ್ಯದೈವ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ. ಆದಿಕವಿ ಪಂಪ ಮೆಚ್ಚಿ ಹಾಡಿಹೊಗಳಿದ ಬನವಾಸಿಯ ಮಧುಕೇಶ್ವರನ ದೇವಸ್ಥಾನಕ್ಕೆ ವನವಾಸ ಯೋಗ ಪ್ರಾಪ್ತಿಯಾಗಿದೆ.
 ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಬನವಾಸಿಯ ಮಧುಕೇಶ್ವರ ದೇವಾಲಯ ದಕ್ಷಿಣ ಭಾರತದಲ್ಲಿಯೇ ಅತೀ ಪ್ರಾಚೀನ ದೇವಾಲಯಗಳಲ್ಲಿ ಒಂದು ಎನ್ನುವ ಖ್ಯಾತಿಯನ್ನು ಹೊಂದಿದೆ. ಕದಂಬ ವಂಶಸ್ಥರು ತಮ್ಮ ರಾಜಧಾನಿಯಾದ ಬನವಾಸಿಯಲ್ಲಿ ನಿತ್ಯ ಆರಾಧನೆಗಾಗಿ ನಿಮರ್ಾಣ ಮಾಡಿರುವ ದೇವಾಲಯವೀಗ ಮಳೆ ಬಂದರೆ ಸಾಕು ಸೋರುತ್ತಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಂಡು ದೇವಸ್ಥಾನ ಅಭಿವೃದ್ಧಿ ಮಾಡಬೇಕಾಗಿದ್ದ ಪುರಾತತ್ವ ಇಲಾಖೆ ಕಣ್ಮುಚ್ಚಿ ಕುಳಿತಿದೆ.
 ಕನ್ನಡದ ಪ್ರಪ್ರಥಮ ರಾಜಧಾನಿ ಎನ್ನುವ ಖ್ಯಾತಿ ಬನವಾಸಿಗಿದೆ. ಬನವಾಸಿಯ ಹೃದಯ ಭಾಗದಲ್ಲಿಯೇ ಇರುವ ಮಧುಕೇಶ್ವರ ದೇವಾಲದ ಬಗ್ಗೆ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವಿದೆ. ಈ ಪ್ರದೇಶದಲ್ಲಿಯೇ ಆದಿಕವಿ ಪಂಪ ಬನವಾಸಿಯ ಚೆಲುವನ್ನು ವಣರ್ಿಸಿದ್ದಾನೆ ಎನ್ನುವ ಪ್ರತೀತಿಯಿದೆ. ಅಪರೂಪದ ಶಿಲಾಮಂಚ ಈ ದೇವಸ್ಥಾನದ ಆವರಣದಲ್ಲಿಯೇ ಇದೆ. ಬೃಹತ್ ನಂದಿ, ಶಿಲಾದೇಗುಲ ಭವ್ಯವಾಗಿದೆ. ಕನರ್ಾಟಕದ ಪ್ರಾಚೀನ ಶಿಲಾ ವಿನ್ಯಾಸಗಳನ್ನು ಒಳಗೊಂಡಿರುವ ಮಧುಕೇಶ್ವರ ದೇವಾಲಯ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಶಿರಸಿಯಿಂದ 24 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನವಿದ್ದು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಪುರಾತತ್ವ ಇಲಾಖೆ ವ್ಯಾಪ್ತಿಗೆ ಈ ದೇವಾಲಯ ಸೇರ್ಪಡೆಯಾದ ನಂತರದಿಂದ ಇದುವರೆಗೂ ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣದಿಂದಲೇ ದೇವಾಲಯ ಜೀರ್ಣಗೊಳ್ಳುತ್ತಿದ್ದು ಮಳೆಗಾಲದಲ್ಲಿ ಸೋರಲು ಆರಂಭಿಸಿದೆ.
 ದೇವಸ್ಥಾನ ಸೋರುತ್ತಿರುವುದರಿಂದ ಆವರಣದಲ್ಲಿರುವ ಸುಂದರ ಕೆತ್ತನೆಯ ಕಂಬಗಳು, ಕೂಡುಗಟ್ಟೆಗಳಿಂದ ಆವೃತವಾದ ಸುಖನಾಸಿನಿ, ಮುಖಮಂಟಪ, ಪ್ರದಕ್ಷಿಣಾ ಪಥ, ದೇವಾಲಯದ ಗರ್ಭಗುಡಿ, ಆವರಣದಲ್ಲಿನ ಆಸನಗಳು, 7.5 ಅಡಿ ಎತ್ತರದ ಭವ್ಯ ನಂದಿ ವಿಗ್ರಹಗಳೆಲ್ಲ ಮಳೆ ನೀರಿನಲ್ಲಿ ತೋಯುತ್ತಿದೆ. ಬಹುತೇಕ ಶಿಲಾಕೃತಿಗಳು ಒದ್ದೆಯಾಗಿ ಹಸುರು ಬಣ್ಣಕ್ಕೆ ತಿರುಗುತ್ತಿದೆ. ನಿರಂತರವಾಗಿ ಮಳೆ ನೀರು ಸೋರುವುದರಿಂದ ಶೀಲಾಮಯ ದೇವಾಲಯದ ಪದರಗಳು ಜೀರ್ಣವಾಗುತ್ತಿವೆ. ಕಳೆದೆರಡು ವರ್ಷಗಳಿಂದ ಮಳೆ ಪ್ರಾರಂಭವಾಗುತ್ತಿದ್ದಂತೆ ಇದೇ ರೀತಿ ದೇವಾಲಯ ಸಂಪೂರ್ಣ ಸೋರುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಪುರಾತತ್ವ ಇಲಾಖೆ ಮಾತ್ರ ಜಾಣ ಕುರುಡುತನ ತೋರುತ್ತಿದೆ. ಪರಿಣಾಮವಾಗಿ ಇತಿಹಾಸದ ಭವ್ಯ ಕುರುಹೊಂದು ಸದ್ದಿಲ್ಲದೇ ನಶಿಸಿಹೋಗುತ್ತಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.
 ಎರಡು ಸಾವಿರ ವರ್ಷಗಳಿಂದ ಮಳೆ ಬಿಸಿಲಿನ ಘಾಸಿಗೊಳಗಾಗಿ ನವೆದಿದ್ದ ಈ ಶಿಲಾದೇಗುಲ 1970ರ ದಶಕದಲ್ಲಿ ಮೊದಲ ಬಾರಿಗೆ ಸೋರಲು ಆರಂಭವಾಗಿತ್ತು. ಆ ಸಂದರ್ಭದಲ್ಲಿ ಪುರಾತತ್ವ ಇಲಾಖೆ ದೇವಸ್ಥಾನದ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಮಧುಕೇಶ್ವರನ ದೇವಾಲಯದ ಮೇಲ್ಚಾವಣಿಯ ಗಾರೆ ಲೇಪವನ್ನು ತೆಗೆದು ರಾಸಾಯನಿಕ ಲೇಪವನ್ನು ಬಳಿದಿತ್ತೆನ್ನಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ದೇವಾಲಯ ಸೋರುವ ಪ್ರಕರಣ ಪುನರಾವತರ್ಿತವಾಗುತ್ತಿದೆ. 2010ರ ಆಸುಪಾಸಿನಲ್ಲಿ ಮತ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಂಡು ಶಿಲೆಗಳಿಗೆ ಲೋಪವಾಗದಿರಲು ಬೆಲ್ಲ, ಮಣ್ಣು, ಸುಣ್ಣ, ದಾಲ್ಚಿನ್ನಿ ಎಣ್ಣೆ ಹಾಗೂ ರಾಸಾಯನಿಕಗಳನ್ನು ಸೇರಿಸಿ ಇಡೀ ದೇವಾಲಯದ ಮೇಲಿನ ಛಾವಣಿಯನ್ನು ಸ್ಥಳಿಕರನ್ನು ದೂರವೇ ಇಟ್ಟು ಪುರಾತತ್ವ ಇಲಾಖೆ ಗುಟ್ಟಾಗಿ ಮಾಡಿ ಮುಗಿಸಿತ್ತು. ಪುರಾತತ್ವ ಇಲಾಖೆಯ ಈ ಕಾರ್ಯದ ಬಗ್ಗೆ ಆ ಸಂದರ್ಭದಲ್ಲಿ ಅಸಮಧಾನವೂ ವ್ಯಕ್ತವಾಗಿತ್ತು. ಪಾರದರ್ಶಕತೆ ಇಲ್ಲದೆ ಈವರೆಗೆ ಮೂರ್ನಾಲ್ಕು ಬಾರಿ ದುರಸ್ಥಿ ಕಾರ್ಯ ಕೈಗೊಂಡರೂ ಸೋರುವುದು ಮಾತ್ರ ನಿಲ್ಲದಿರುವುದು ದುರಂತ ಎನ್ನುತ್ತಾರೆ ಬನವಾಸಿಗರು.
 ಇತಿಹಾಸ ಮರುಕುಳಿಸುತ್ತದೆ ಎನ್ನುವ ಗಾದೆಯ ಮಾತಿದ್ದರೂ ಬನವಾಸಿಯ ದೇವಾಲಯದ ಮಟ್ಟಿಗೆ ಸೋರುವ ಇತಿಹಾಸ ಮರುಕುಳಿಸುತ್ತಿರುವದು ಕನ್ನಡಿಗರಿಗೆ ಅಪಮಾನದ ಸಂಗತಿಯಾಗಿದೆ. ತಕ್ಷಣ ದೇವಾಲಯದ ಜೀಣೋದ್ಧಾರ ಕೈಗೊಂಡು ಕನ್ನಡದ ಹೆಮ್ಮೆಯ ದೇವಾಲಯವನ್ನು ರಕ್ಷಿಸಬೇಕು ಎನ್ನುವುದು ಕನ್ನಡಿಗರ ಒತ್ತಾಸೆಯಾಗಿದೆ. ಜಡ್ಡುಗಟ್ಟಿರುವ ಪುರಾತತ್ವ ಇಲಾಖೆಗೆ ಚುರುಕು ಮುಟ್ಟಿಸುವ ಕಾರ್ಯ ಆಗಬೇಕಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಹಲವಾರು ನಿಯಮಗಳನ್ನು ಮುಂದಿಡುವ ಪುರಾತತ್ವ ಇಲಾಖೆ, ಬನವಾಸಿ ದೇವಾಲಯದ ವಿಷಯದಲ್ಲಿ ತೋರುತ್ತಿರುವ ಅಸಡ್ಡೆ ಅಕ್ಷಮ್ಯವಾದುದು. ಈ ಕುರಿತಂತೆ ಜವಾಬ್ದಾರಿ ಮರೆತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೂಡಲೇ ದೇವಸ್ಥಾನ ಸೋರುವುದನ್ನು ತಡೆಗಟ್ಟುವ ಅಗತ್ಯವೂ ಇದೆ. ಹೀಗಾದಾಗ ಮಾತ್ರ ಸಹಸ್ರ ವರ್ಷಗಳಿಂದ, ಕವಿಗಳಿಂದ ಹಾಡಿ ಹೊಗಳಿಸಿಕೊಂಡು ಬಂದಿರುವ ಬನವಾಸಿಯ ಮಧುಕೇಶ್ವರ ದೇಗುಲ ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಉಳಿಯಬಹುದಾಗಿದೆ.

********************

 ದೇವಸ್ಥಾನದ ಆವರಣದಲ್ಲಿ ಛಾಯಾಚಿತ್ರ ತೆಗೆದರೆ ದೇಗುಲ ಹಾಳಾಗುತ್ತದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಬನವಾಸಿ ದೇಗುಲ ಸೋರುತ್ತಿದ್ದರೂ ಕೂಡ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜವಾಬ್ದಾರಿ ಮರೆತ ಪುರಾತತ್ವ ಇಲಾಖೆ ಹೀಗೆ ಹಾಳುಗೆಡವುವ ಸಲುವಾಗಿ ದೇವಸ್ಥಾನವನ್ನು ವಹಿಸಿಕೊಳ್ಳಬೇಕಾಗಿತ್ತೇ? ಹುಬ್ಬಳ್ಳಿಯಲ್ಲಿ ಕುಳಿತ ಅಧಿಕಾರಿಗಳು ಮುಂದಿನ ದಿನಗಳಲ್ಲಾದರೂ ದೇಗುಲ ಸೋರುವುದನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಕ್ರೋಶದಿಂದದ ನುಡಿಯುತ್ತಿದ್ದಾರೆ.

Wednesday, June 29, 2016

ಈ ಬೆಕ್ಕಿಗೆ ಹಾಲು, ಅನ್ನ ಬೇಡವೇ ಬೇಡ : ಹಣ್ಣೆಂದರೆ ಪಂಚಪ್ರಾಣ

ತೆನಾಲಿರಾಮನ ಬೆಕ್ಕು ನೆನಪಿಸುವ ಮಾಜರ್ಾಲ

ವಿಕಟಕವಿ ತೆನಾಲಿ ರಾಮನ ವಿಚಿತ್ರ ಸ್ವಭಾವದ ಬೆಕ್ಕು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಹಾಲನ್ನು ಇಟ್ಟರೆ ಮಾರು ದೂರ ಓಡುವ ತೆನಾಲಿ ರಾಮನ ಬೆಕ್ಕಿನ ಕಥೆಯನ್ನು ಪ್ರತಿಯೊಬ್ಬರೂ ಕೇಳಿರುತ್ತಾರೆ. ಇಂತಹುದೇ ಒಂದು ಬೆಕ್ಕು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಂಟಕಲ್ನಲ್ಲಿದೆ. ತನ್ನ ವಿಶಿಷ್ಟ ಸ್ವಭಾವದಿಂದಾಗಿ ಮನಸೆಳೆಯುತ್ತಿದೆ.
 ಕಾನಸೂರು ಬಳಿಯ ದಂಟಕಲ್ನ ಗಂಗಾ ಹೆಗಡೆ ಎನ್ನುವವರ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ವಾಸವಿರುವ ಬೆಕ್ಕು ತನ್ನ ವಿಶಿಷ್ಟ ಗುಣದಿಂದಾಗಿ ಅಚ್ಚರಿಯನ್ನು ಹುಟ್ಟುಹಾಕಿದೆ. ಇವರ ಮನೆಯಲ್ಲಿರುವ ಬೆಕ್ಕು ಅನ್ನವನ್ನು ತಿನ್ನುವುದಿಲ್ಲ. ಬೆಕ್ಕಿಗೆ ಹಾಲು ಎಂದರೆ ಪಂಚಪ್ರಾಣ. ಮನೆ ಮನೆಗಳಲ್ಲಿ ಇಡುವ ಹಾಲನ್ನು ಕದ್ದು ಕುಡಿಯುವ ಬೆಕ್ಕು ಸವರ್ೇ ಸಾಮಾನ್ಯ. ಆದರೆ ಇವರ ಮನೆಯಲ್ಲಿರುವ ಬೆಕ್ಕು ಹಾಲನ್ನೂ ಕೂಡ ಕುಡಿಯುವುದಿಲ್ಲ. ಹಾಲಿನ ಪಾತ್ರೆಯನ್ನು ಬೆಕ್ಕಿನ ಎದುರು ಇಟ್ಟರೂ ಕೂಡ ಅದರ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. ಹಾಗಾದರೆ ಬೆಕ್ಕು ಏನನ್ನು ಕುಡಿಯುತ್ತದೆ, ತಿನ್ನುತ್ತದೆ ಎನ್ನುವ ಕುತೂಹಲ ಸಹಜ. ಇದರ ಆಹಾರವೂ ಕೂಡ ಅಷ್ಟೇ ವಿಶಿಷ್ಟವಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
 ಗಂಗಾ ಹೆಗಡೆಯವರು ಸಾಕಿರುವ ಈ ಬೆಕ್ಕು ಅನ್ನದ ಬದಲಾಗಿ ವಿವಿಧ ಹಣ್ಣುಗಳನ್ನು ತಿನ್ನುತ್ತದೆ. ಹಲಸಿನ ಹಣ್ಣು, ಮಾವು, ಪೇರಲೆ ಹೀಗೆ ವಿವಿಧ ಹಣ್ಣುಗಳನ್ನು ತಿನ್ನುವ ಬೆಕ್ಕಿಗೆ ಪಪ್ಪಾಯಿ ಹಣ್ಣೆಂದರೆ ಪಂಚಪ್ರಾಣ. ದೊಡ್ಡ ಗಾತ್ರದ ಪಪ್ಪಾಯಿ ಹಣ್ಣನ್ನು ಒಂದೇ ದಿನದಲ್ಲಿ ತಿಂದು ಮುಗಿಸುವ ಈ ಬೆಕ್ಕು ಒಂದೆರಡು ಸಾರಿ ಪಪ್ಪಾಯಿ ಮರವನ್ನು ಏರಿ ಹಣ್ಣನ್ನು ತಿಂದಿರುವ ನಿದರ್ಶನಗಳೂ ಇದೆ. ಇದಲ್ಲದೇ ಅವಲಕ್ಕಿ ಕೂಡ ಬೆಕ್ಕಿನ ಇಷ್ಟದ ತಿಂಡಿಗಳಲ್ಲೊಂದು ಎಂಬುದು ಗಂಗಾ ಹೆಗಡೆಯವರ ಅಭಿಪ್ರಾಯ. ಹಲಸಿನ ಹಪ್ಪಳ, ಹಲಸಿನಕಾಯಿ ಚಿಪ್ಸ್, ಕರಿದ ಪದಾರ್ಥಗಳೆಂದರೆ ಈ ಬೆಕ್ಕಿಗೆ ಅಷ್ಟೇ ಅಚ್ಚುಮೆಚ್ಚು. ಪಪ್ಪಾಯಿ ಹಣ್ಣು ಹಾಗೂ ಕರಿದ ತಿಂಡಿಗಳಿಗಾಗಿ ಎಲ್ಲರಿದ್ದರೂ ಓಡಿ ಬರುತ್ತದೆ ಎಂದು ಅವರು ಮಾಹಿತಿ ನೀಡುತ್ತಾರೆ. ಹಾಲನ್ನೇ ಕುಡಿಯದ ಈ ಬೆಕ್ಕು ನೀರನ್ನು ಮಾತ್ರ ಕುಡಿಯುತ್ತದೆ ಎಂದೂ ಅವರು ಮಾಹಿತಿ ನೀಡುತ್ತಾರೆ.
 ಎರಡು ವರ್ಷಗಳ ಹಿಂದೆ ಕಾನಸೂರಿನ ಮುಸ್ಲೀಮರ ಮನೆಯೊಂದರಿಂದ ಎರಡು ಬೆಕ್ಕಿನ ಮರಿಗಳನ್ನು ತಂದಿದ್ದೆವು. ಎರಡೂ ಬೆಕ್ಕಿನ ಮರಿಗಳಿಗೆ ಹಾಲನ್ನು ಕೊಟ್ಟರೆ ದೂರ ಹೋಗುತ್ತಿದ್ದವು. ಅನ್ನವನ್ನು ಹಾಕಿದರೂ ತಿನ್ನುತ್ತಿರಲಿಲ್ಲ. ದಿನದಿಂದ ದಿನಕ್ಕೆ ಬೆಕ್ಕಿನಮರಿಗಳು ಸೊರಗಲು ಆರಂಭಿಸಿದ್ದವು. ಅವುಗಳನ್ನು ನೋಡಲು ಆಗದೇ ಬೇರೆ ಬೇರೆ ಆಹಾರಗಳನ್ನು ಅವುಗಳ ಮುಂದೆ ಇಟ್ಟೆವು. ಕೊನೆಗೆ ಅವಲಕ್ಕಿ, ಹಣ್ಣು ಈ ಮುಂತಾದ ಆಹಾರಗಳನ್ನು ಸೇವಿಸಲು ಆರಂಭಿಸಿದವು. ಕಳೆದ ವರ್ಷ ಒಂದು ಬೆಕ್ಕು ಸಾವನ್ನಪ್ಪಿತು. ಆದರೆ ಈಗ ಇರುವ ಇನ್ನೊಂದು ಬೆಕ್ಕು ವಿಶಿಷ್ಟ ಆಹಾರಾ ಪದ್ಧತಿಯಿಂದಲೇ ಜೀವಿಸುತ್ತಿದೆ ಎಂದು ಗಂಗಾ ಹೆಗಡೆ ತಿಳಿಸುತ್ತಾರೆ.
 ಸಾಕು ಪ್ರಾಣಿಗಳು ಹಣ್ಣುಗಳನ್ನು ತಿನ್ನುವ ಬಗ್ಗೆ ಆಗೊಮ್ಮೆ ಈಗೊಮ್ಮೆ ಕೇಳಿರುತ್ತೇವೆ. ಆದರೆ ಅನ್ನವನ್ನೇ ತಿನ್ನದೇ, ಹಾಲನ್ನು ಕುಡಿಯದೇ ಹಣ್ಣನ್ನು, ಕರಿದ ತಿಂಡಿಗಳನ್ನು ಮಾತ್ರ ಮೆಲ್ಲುವ ಇಂತಹ ಬೆಕ್ಕು ಅಪರೂಪವೇ ಸರಿ. ತನ್ನಿಷ್ಟದ ಆಹಾರದ ಬದಲಾಗಿ ಫಲಾಹಾರವನ್ನೇ ಮೈಗೂಡಿಸಿಕೊಂಡ ಈ ಬೆಕ್ಕು ವಿಭಿನ್ನವಾಗಿಯೂ, ವಿಶಿಷ್ಟವಾಗಿಯೂ ನಿಲ್ಲುತ್ತದೆ. ಇಂತಹ ವಿಶಿಷ್ಟ ಗುಣದ ಬೆಕ್ಕಿನ ಕುರಿತು ಮಾಹಿತಿ ಪಡೆದವರೂ ಕೂಡ ಬೆಕ್ಕನ್ನು ವೀಕ್ಷಿಸಿ, ಅದರ ಗುಣದ ಬಗ್ಗೆ ಅಚ್ಚರಿ ಪಡಲು ಆರಂಭಿಸಿದ್ದಾರೆ.
.......
ನಾನು ಇದುವರೆಗೂ 25ಕ್ಕೂ ಹೆಚ್ಚಿನ ಬೆಕ್ಕುಗಳನ್ನು ಸಾಕಿದ್ದೇನೆ. ಆದರೆ ಇಷ್ಟು ವಿಶಿಷ್ಟ ಆಹಾರ ಪದ್ಧತಿಯ ಬೆಕ್ಕನ್ನು ನೋಡಿದ್ದು ಇದೇ ಮೊದಲು. ಮೊದ ಮೊದಲು ಇದು ವಿಚಿತ್ರವೆನ್ನಿಸಿದ್ದರೂ ಕೂಡ ಈಗ ಈ ಗುಣಗಳೇ ವಿಶಿಷ್ಟ ಎನ್ನಿಸುತ್ತಿದೆ.
ಗಂಗಾ ಹೆಗಡೆ
ದಂಟಕಲ್
ಬೆಕ್ಕಿನ ಮಾಲಕಿ


Saturday, May 28, 2016

ಅಜ್ಜ ನೆಟ್ಟ ಆಲದ ಮರ

ಅಜ್ಜ ನೆಟ್ಟ ಆಲದ ಮರಕ್ಕೆ
ನೂರಾರು ಬೀಳಲು
ಬುಡದಲ್ಲಿ ಕುಳಿತ ಗೊಲ್ಲನ ಕೈಯಲ್ಲಿ
ಒಂದೇ ಒಂದು ಕೊಳಲು |

ಆಲದ ಮರದಲಿ ಹಕ್ಕಿಯ ಕಲರವ
ಬುಡದಲಿ ದನಗಳು ಅಂಬಾ
ಒಟ್ಟಿಗಿದ್ದೂ ಬಿಟ್ಟಿರಲಾರೆ
ಕಲಿಯಬೇಕಿದೆ ತುಂಬಾ |

ಅಜ್ಜನ ಕೋಲಿದು ನನ್ನೆಯ ಕುದುರೆ
ಬಾಯಿಪಾಟದ ಏಟು
ಅಜ್ಜಿಯ ಕವಳದ ತಬಕಲಿ ಕಲ್ಲು
ಇದೇ ರೂಪಾಯಿ ನೋಟು |

ಆಲದ ತೋಳು ಮೈಲುಗಳಾಚೆ
ಹಾಸಿದೆ ಪ್ರೀತಿಯ ಚಪ್ಪರ
ಒಡಲಲಿ ನೆರಳು ಬದುಕಿಗೆ ರಕ್ಷಣೆ
ತಡೆದಿದೆ ಗಾಳಿಯ ಅಬ್ಬರ |

ಅಪ್ಪನ ಸಾಲಕ್ಕೆ ಅಮ್ಮನೇ ಜಾಮೀನು
ಬದುಕಲಿ ಬೇರೆ ಏನು
ಹಗಲಿನ ಕೋಪಕೆ ಇರುಳಲಿ ಮದ್ದು
ಉಂಡು ಮಲಗಿದ ಮೇಲೆ ಇನ್ನೇನು |

ಆಲದ ಬಿಳಲಿಗೆ ಗೆದ್ದಲು ಕಾಟ
ನಗರದ ಕಡೆಗೆ ಓಟ
ಆಲದ ಬುಡದಲಿ ನೆರಳೇ ಇಲ್ಲ
ಕಟುಕನ ಉರುಳಿನ ಕಾಟ |

ಆಲದ ಮರದಲಿ ಎಲೆಯೇ ಇಲ್ಲ
ತಂಪಿನ ನೆಳಲು ನಾಪತ್ತೆ
ಬುಡದಲ್ಲಿ ಅಂಬಾ ಹಸುಗಳೇ ಇಲ್ಲ
ಜೀವಕೆ ಬಂದ ಆಪತ್ತೇ |

ಆಲದ ಬಿಳಲು ಮಕ್ಕಳ ಪಾಲಿಗೆ
ಜೀವನ ಜೋಕಾಲಿ
ಅಂದಿಗೆ ಮುಗಿದಿದೆ ಇಂದೇನಿಲ್ಲ
ಬಿಳಲು ಖಾಲಿ ಪೀಲಿ |

-------------

(ಈ ಕವಿತೆಯನ್ನು ಬರೆದಿರುವುದು ಮೇ.26, 2016ರಂದು)

(ಈ ಕವಿತೆಯನ್ನು ಮೇ.28ರಂದು ಶಿರಸಿ ತಾಲೂಕಿನ ಯಡಳ್ಳಿಯ ವಿದ್ಯೋದಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಥಮ ಪ್ರಾಂತ ಸಮ್ಮೇಳನದಲ್ಲಿ ವಾಚಿಸಲಾಗಿದೆ. ಕೆಲವು ದಿನಗಳಿಂದ ಥ್ರೋಟ್ ಇನ್ಫೆಕ್ಷನ್ ಆಗಿದ್ದ ಕಾರಣ ನನಗೆ ಕವಿತೆ ವಾಚಿಸಲು ಸಾಧ್ಯವೇ ಆಗಲಿಲ್ಲ. ಕೊನೆಗೆ ನನ್ನ ಬದಲಾಗಿ ಮಿತ್ರ ಗಿರಿಧರ ಕಬ್ನಳ್ಳಿ ವಾಚಿಸಿದರು. ಕೊನೆಗೆ ಸಮ್ಮೇಳನದ ಸವರ್ಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡ ಅವರ ಬಳಿ ಆಶಿವರ್ಾದ ಪಡೆದುಕೊಂಡೆ. ಆ ಸಂದರ್ಭದಲ್ಲಿ ದೊಡ್ಡರಂಗೇಗೌಡರು ನಿನ್ನಲ್ಲಿ ಒಳ್ಳೊಳ್ಳೆಯ ಕವಿತೆ ಬರಲಿ. ಧ್ವನಿಯನ್ನು ಮೊದಲು ಸರಿ ಮಾಡಿಕೊ. ನಿನ್ನ ಕವಿತೆಯನ್ನು ಚನ್ನಾಗಿ ವಾಚಿಸು ಎಂದು ಹರಸಿದರು. ಧನ್ಯನಾದೆ ಗುರುವರ್ಯ