Monday, September 21, 2015

ಮಧ್ಯರಾತ್ರಿಯ ಕನಸು

ಮಧ್ಯರಾತ್ರಿಯ ಕನಸು
ಸವಿಯಲಿಕೆ ಬಲು ಸೊಗಸು
ಸವಿದು ಸವಿದೊಡೆ ಅದುವೆ
ಜೇನಿನಂತೆ, ಸವಿಯ ಸಂತೆ ||

ಮಧ್ಯರಾತ್ರಿಯ ಕನಸು
ಒಮ್ಮೆ ಭೀತಿಯ ತಿನಿಸು
ಮನದ ದೈರ್ಯಕೆ ಅಳುಕು
ಶಬ್ದದಂತೆ, ಜೀರುಲಿಯೆ ಅಂತೆ ||

ಮಧ್ಯರಾತ್ರಿಯ ಕನಸು
ಹೇಳಲಿಕೆ ಬಲು ಸೊಗಸು
ಸುಲಿದ ಕದಳಿಯ ಫಲವ
ಮೆಲ್ಲಿದಂತೆ, ರಸವ ಹೀರಿದಂತೆ ||

ಮಧ್ಯರಾತ್ರಿಯ ಕನಸು
ಅರ್ಥವಾಗದದು ಮನಸು
ಹಲವೆಂಟು ಚಿತ್ರಣವು
ಅರಿಯದಂತೆ, ಏನೂ ತಿಳಿಯದಂತೆ ||

ಮಧ್ಯರಾತ್ರಿಯ ಕನಸು
ಹೊಂದಿಹುದು ಹಲ ಧಿರಿಸು
ಹಲವಕ್ಕೆ ಕೆಲವಕ್ಕೆ ಅರ್ಥವಿಲ್ಲ
ಇದ್ದರೂ, ಅದು ವ್ಯರ್ಥವಂತೆ ||

------

(ಈ ಕವಿತೆಯನ್ನು ಬರೆದಿರುವುದು 04-04-2006ರಂದು ದಂಟಕಲ್ಲಿನಲ್ಲಿ)

Thursday, September 3, 2015

ಓಡಿ ಹೋಗಡ

ಮನೆ ಬಿಟ್ಟು, ಸಂಗ ತೊಟ್ಟು
ಓಡಿ ಹೋಗಡ ಕೂಸೆ
ಅಪ್ಪ ಅಮ್ಮನ ಜೊತೆಗೆ ಇಪ್ಪಲೆ
ನಿಂಗೇನು ಜಡಾ?

ಹಳ್ಳಿ ಮನೆ ಒಳ್ಳೆ ಬಾಳು
ನಿಂಗೆಂತಾ ಕಷ್ಟಾ ಕೂಸೆ
ಅಪ್ಪನ ಪ್ರೀತಿ, ಅಮ್ಮನ ಅಕ್ಕರೆ
ಮರೆತು ಬಿಡಡಾ |

ಕನಸು ಕಟ್ಟಿದ ಅಪ್ಪ ಅಮ್ಮನ
ಮರೆತು ಹೋಗಡಾ ಕೂಸೆ
ಓಡಿ ಹೋಗಿ ಎಲ್ಲ ಬಿಟ್ಟು
ಕಣ್ಣೀರ್ ಹಾಕ್ಸಡಾ |

ಕೂಸುಗಳಿಗೆ ಓದ್ಸೋದ್ ತಪ್ಪು
ಅಂತ ಹೇಳ್ಸಡಾ ಕೂಸೆ
ಮನೆ ಪ್ರೀತಿ ನೀರಲ್ ಹೋಮದ
ಹಂಗೆ ಮಾಡ್ಸಡಾ |

ಓಡುವ ಮುನ್ನ ಮನೆಯ ಪ್ರೀತಿ
ನೆನಪು ಮಾಡ್ಕಳೇ ಕೂಸೆ
ಅಪ್ಪ ಅಮ್ಮನ ಹೆಸರಿಗೆ ಹೊಲಸು
ಕಳಂಕ ಹೊರ್ಸಡಾ ||

****

(ಓಡಿ ಹೋಗುವ ಕೂಸುಗಳಿಗೆ ಬುದ್ಧಿ ಹೇಳುವ ರೀತಿಯದ್ದೊಂದು ಟಪ್ಪಾಂಗುಚ್ಚಿ ಸಾಂಗ್. ಮುಂದಿನ ದಿನಗಳಲ್ಲಿ ಈ ಸಾಂಗನ್ನೇ ವಿಸ್ತರಿಸಿ 2, 3ನೇ ಭಾಗ ಮಾಡುವ ಆಲೋಚನೆಯೂ ಇದೆ. ಸುಮ್ಮನೆ ತಮಾಷೆಗೆ ಬರೆದಿದ್ದು. ತೀರಾ ಮನಸಿಗೆ ಹಚ್ಗ್ಯಳಡಿ. ಮನಸಿಗೆ ಹಚ್ಗ್ಯಂಡಿ ಅಂದ್ರೆ ಆ ಎಂತಾ ಮಾಡಲೂ ಬರ್ತಿಲ್ಲೆ..)

Sunday, August 23, 2015

ಮಗುವಿನ ನಗು

ತೊಟ್ಟಿಲಲಿ ಮಲಗಿದ್ದ
ಪುಟ್ಟ ಕಂದನ ನಗುವು
ಮನೆಯೆಲ್ಲಾ ತುಂಬಿತ್ತು
ನನ್ನೊಲವ ಸೆಳೆದಿತ್ತು ||

ತೊಟ್ಟಿಲೊಳಗೆ ಆಡುತ್ತ
ಕೇಕೆಯನು ಹಾಕುತ್ತ
ಮಗುವದು ನಲಿದಿತ್ತು
ಕವಿ ಹೃದಯವ ತಾಕಿತ್ತು ||

ಜಗವದು ಕುಣಿವಂತೆ
ಮಾಡುವ ಶಕ್ತಿಯದು
ಪುಟ್ಟ ಮಗು ಮೂಡಿಸುವ
ಮುಗ್ಧತೆಯ ನಗೆಗಿತ್ತು ||

ಮಗುವದು ನಗುತಿರಲು
ಶಶಿಯುದಿಸಿ ಬಂದಂತೆ
ದೇವರನು ಕಂಡಂತೆ
ಜೀವ ಪುಳಕಗೊಂಡಿತು ||

****

(ಈ ಕವಿತೆಯನ್ನು ಬರೆದಿರುವುದು 19-12-2005ರಂದು ದಂಟಕಲ್ಲಿನಲ್ಲಿ)

ಮಾಸ್ತರ್ ಮಂದಿ-6

ಹರೀಶ ನಾಯ್ಕ :
              ನಾನು ಐದನೇ ಕ್ಲಾಸಿನಲ್ಲಿದ್ದಾಗ ಶಾಲೆಗೆ ಶಿಕ್ಷಕರಾಗಿ ಬಂದವರು ಹರೀಶ ನಾಯ್ಕರು. ಮೊಟ್ಟಮೊದಲ ಪೋಸ್ಟಿಂಗ್ ನಮ್ಮ ಶಾಲೆ. ಬಹಳ ಯಂಗ್ ಎಂಡ್ ಎನರ್ಜೆಟಿಕ್ ಆಗಿದ್ದ ಮಾಸ್ತರ್ ಬಹಳ ಚೆಂದ ಹಾಡು ಹೇಳುತ್ತಿದ್ದರು. ಪೋಸ್ಟಿಂಗಿಗೆ ಹಾಕುವ ಮುನ್ನ ಉತ್ತರ ಕನ್ನಡ ಜಿಲ್ಲೆಯ ಮ್ಯಾಪನ್ನು ನೋಡಿದ ಹರೀಶ ಮಾಸ್ತರ್ರಿಗೆ ಅಡ್ಕಳ್ಳಿ ಶಾಲೆ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದ್ದಂತೆ ಕಾಣಿಸಿತಂತೆ. ಒಳ್ಳೆಯ ಶಾಲೆ ಶಿರಸಿಗೂ ಹತ್ತಿರ ಇರಬಹುದು ಎಂದು ಪೋಸ್ಟಿಂಗ್ ಹಾಕಿಸಿಕೊಂಡು ಬಂದೇ ಬಿಟ್ಟರು. ಬಂದ ಮೇಲೆಯೇ ಗೊತ್ತಾಗಿದ್ದು ಮುಖ್ಯ ರಸ್ತೆಯಿಂದ ಅಡ್ಕಳ್ಳಿ ಶಾಲೆ 2 ಕಿಮಿ ದೂರದಲ್ಲಿದೆ ಎನ್ನುವುದು. ಶಿರಸಿಗೇನೋ 15 ಕಿ.ಮಿ ದೂರದಲ್ಲಿ ಶಾಲೆಯಿತ್ತು. ಆದರೆ ಶಾಲೆಗೆ ಬಸ್ ಸಂಪರ್ಕ ಬೇಕಲ್ಲ. ದಿನಕ್ಕೆ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ಸುಗಳಿದ್ದವು. ಅದನ್ನು ಬಿಟ್ಟರೆ ಬೇರೆ ಬಸ್ಸುಗಳೇ ಇರಲಿಲ್ಲ. ಹೀಗಾಗಿ ಅಡ್ಕಳ್ಳಿಯ ಸುತ್ತಮುತ್ತಲ ಊರುಗಳಲ್ಲಿ ಎಲ್ಲಾದರೂ ಉಳಿದುಕೊಳ್ಳಲು ಜಾಗವಿದೆಯೇ ಎಂದು ಪ್ರಯತ್ನಿಸಿದರು. ಅವರಿಗೆ ಎಲ್ಲೂ ಜಾಗಸಿಗಲಿಲ್ಲ. ಕೊನೆಗೆ ಶಾಲೆಯ ಪಕ್ಕದಲ್ಲಿಯೇ ಇದ್ದ ಕ್ವಾಟ್ರಸ್ಸಿನಲ್ಲಿ ಉಳಿದುಕೊಂಡರು. ಮುತ್ಮುರ್ಡಿನ ಕಿರಿಯ ಪ್ರಾಥಮಿಕ ಶಾಲೆಗೆ ಆಗತಾನೆ ಮಾಸ್ತರ್ರಾಗಿ ಬಂದಿದ್ದ ರಮೇಶ ನಾಯ್ಕರೂ ಅವರ ಜೊತೆ ಉಳಿದುಕೊಳ್ಳಲು ಆರಂಭಿಸಿದರು.
             ಹರೀಶ ಮಾಸ್ತರ್ರು ಅಡ್ಕಳ್ಳಿ ಶಾಲೆಗೆ ಬಂದ ದಿನ ನಾನು ದೋಸ್ತ ವಿಜಯನ ಜೊತೆಗೆ ಅಡ್ಕಳ್ಳಿಯ ಆರ್. ಜಿ. ಹೆಗಡೇರ ಮೆನೆಗ ಹೋಗಿದ್ದೆ. ಶಾಲೆಗೆ ಹೊಸ ಮಾಸ್ತರ್ರು ಬರ್ತಾರಂತೆ. ಅರ್ಜೆಂಟು ಬರಬೇಕಂತೆ ಎಂದು ಹೇಳಲು ನಾವು ತೆರಳಿದ್ದೆವು. ನಾವು ವಾಪಾಸು ಬರುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿ ಹರೀಶ ಮಾಸ್ತರ್ರು ಗಡ್ಕರ್ ಮಾಸ್ತರ್ರ ಜೊತೆಗೆ ಆರ್. ಜಿ. ಹೆಗಡೇರ ಮನೆಗೆ ಬರುತ್ತಿರುವುದು ಕಾಣಿಸಿತ್ತು. ಗಡ್ಕರ್ ಮಾಸ್ತರ್ರು ನಮ್ಮನ್ನು ತೋರಿಸಿ `ನೋಡ್ರೀ.. ಇವ್ರೂ ನಿಮ್ಮ ಕ್ಲಾಸಿಗೆ ಬರೋ ಹುಡುಗರು. ಇಂವ ಹಾಂಗೆ.. ಅಂವ ಹೀಂಗೆ..' ಎಂದು ನನ್ನ ಹಾಗೂ ವಿಜಯನ ಗುಣಗಾನ ಮಾಡಿದರು. ನಾವು ಮಾಸ್ತರ್ರು ಹಂಗಂತೆ.. ಹಿಂಗಂತೆ ಎನ್ನುತ್ತಾ ಶಾಲೆಗೆ ಮರಳಿದ್ದೆವು.
           ಬಂದವರೇ ನಮ್ಮನ್ನೆಲ್ಲ ಪರಿಚಯ ಮಾಡಿಕೊಂಡರು. ಬಂದ ಹೊಸತರಲ್ಲಿ ನನಗೆ, ವಿಜಯನಿಗೆ ಹಾಗೂ ಹರೀಶ ಮಾಸ್ತರ್ರಿಗೆ ವಿಶೇಷ ಬಂಧ ಬೆಳೆಯಿತು. ಆದರೆ ಯಾವಾಗ ತಿಂಗಳೊಪ್ಪತ್ತಿನಲ್ಲಿ ಅವರು ಶೆಳಕೆಯಿಂದ ನಮಗೆಲ್ಲ ಹೊಡೆಯಲು ಆರಂಭಿಸಿದರೂ ಆವಾಗ ನಾವೂ ಬುದ್ಧಿವಂತಿಕೆಯಿಂದ ಸ್ವಲ್ಪ ಡಿಸ್ಟೆನ್ಸ್ ಮೆಂಟೆನ್ ಮಾಡಿದೆವು. ನಾವು ಬಿಟ್ಟರೂ ಹರೀಶ ಮಾಸ್ತರ್ರು ಬಿಡಬೇಕಲ್ಲ. ನಮ್ಮನ್ನು ಕಾಡಿದರು. ಅದೇನೇನೋ ಕೆಲಸಗಳನ್ನು ಕೊಟ್ಟರು. ವಿಜ್ಞಾನ ವಿಷಯವೆಂದರೆ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದ ನಮಗೆಲ್ಲ ವಿಜ್ಞಾನ ಪ್ರಯೋಗಗಳನ್ನು ಮಾಡುವುದು ಎಂದರೆ ಹೀಗೆ ಎನ್ನುವುದನ್ನು ತೋರಿಸಿಕೊಟ್ಟರು. ಲಿಟ್ಮಸ್ ಕಾಗದ ಬಣ್ಣ ಬದಲಾಯಿಸುವುದು ಇವೆಲ್ಲ ಅವರಿಂದಲೇ ನೋಡಿದ್ದು. ಲಿಟ್ಮಸ್ ಕಾಗದ ಹರೀಶ ಮಾಸ್ತರ್ರ ಕೈಯಲ್ಲಿ ಬಣ್ಣ ಬದಲಾಯಿಸಿದ್ದನ್ನು ನೋಡಿ ಈ ಮಾಸ್ತರ್ರು ಪಕ್ಕಾ ಮಂತ್ರವಾದಿಯೋ ಅಥವಾ ಇಂದ್ರಜಾಲಿಕನೋ ಇರಬೇಕು ಎಂದೂ ಆಲೋಚಿಸಿದ್ದೆವು ಬಿಡಿ. ಆದರೆ ಯಾವಾಗ ಶಾಸ್ತ್ರ ಸಹಿತವಾಗಿ ಯಾಕೆ ಆ ಕಾಗದ ಬಣ್ಣ ಬದಲಾಯಿಸಿತು ಎನ್ನುವನ್ನು ತಿಳಿಸಿದಾಗ ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳು ಇಟ್ಟಿದ್ದೆವು.
             ನಾನು ಹಾಗೂ ವಿಜಯ ಆ ದಿನಗಳಲ್ಲಿ ಒಂದೇ ದೋಣಿ ಕಳ್ಳರು ಬಿಡಿ. ನಮ್ಮ ಕ್ಲಾಸಿನಲ್ಲಿ ಮೂವರು ಗಂಡು ಹುಡುಗರು ಇದ್ದೆವು. ಏಳು ಜನರ ಹುಡುಗಿಯರು. ಮೂವರ ಪೈಕಿ ಮಹೇಶ ಬುದ್ಧಿವಂತನೆಂಬ ಹಣೆಪಟ್ಟಿ ಕಟ್ಟಿಕೊಂಡು ನಮ್ಮಿಂದ 1 ಪೋಟ್ ಡಿಸ್ಟೆನ್ಸಿನಲ್ಲಿ ಇರುತ್ತಿದ್ದ. ನಾನು ಹಾಗೂ ವಿಜಯ ಇಬ್ಬರೂ ಸಮಾನ ದುಃಖಿಗಳು.. ಸಮಾನ ಸುಖಿಗಳು. ಅಂಕಗಳೂ ಹೆಚ್ಚೂ ಕಡಿಮೆ ಒಂದೇ ಹದದಲ್ಲಿ ಬೀಳುತ್ತಿದ್ದವು ಬಿಡಿ. ಹುಡುಗಿಯರಲ್ಲಿ ಸಂಧ್ಯಾ ಹಾಗೂ ಸವಿತಾ ಎಂಬಿಬ್ಬರು ಇದ್ದರು. ಅವರೂ ಕೂಡ ಓದುವುದರಲ್ಲಿ ಎತ್ತಿದ ಕೈ. ಮಹೇಶನಿಗೆ ಸವಾಲು ಹಾಕಿ ಓದುತ್ತಿದ್ದ ಇವರು ಆಗೀಗ ಮಹೇಶನನ್ನು ಹಿಂದಕ್ಕೆ ಹಾಕುತ್ತಲೂ ಇರುತ್ತಿದ್ದರು. ವೀಣಾ ಎಂಬಾಕೆಯೊಬ್ಬಳಿದ್ದಳು. ಆಕೆಗೂ ನನಗೂ ಹಾಗೂ ವಿಜಯನಿಗೂ ಹೆಚ್ಚೂ ಕಡಿಮೆ ಒಂದೇ ಸಮನಾದ ಅಂಕಗಳು ಬರುತ್ತಿದ್ದವು. ವೀಣಾ, ಸಂಧ್ಯಾ, ಹಾಗೂ ಸವಿತಾರಿಗೆ ನಾನು ಹಾಗೂ ವಿಜಯ ಬಹಳ ಆಪ್ತರು. ಮಹೇಶ ಸಾಕಷ್ಟು ಸೊಕ್ಕು ಮಾಡುತ್ತಿದ್ದ ಕಾರಣ ಅವನನ್ನು ಕಂಡರೆ ಉಳಿದವರಿಗೆ ಅಷ್ಟಕ್ಕಷ್ಟೇ ಆಗಿತ್ತು. ನಾನು ಹಾಗೂ ವಿಜಯ ಸಿಕ್ಕಾಪಟ್ಟೆ ಓದುವವರಿಗೆ ಕಾಂಪಿಟೇಟರ್ ಅಲ್ಲ. ಆ ಕಾರಣದಿಂದ ನಾವು ಆಪ್ತರಾಗಿರಬಹುದು. ಅದು ಹಾಗಿರಲಿ ಬಿಡಿ. ಶಶಿಕಲಾ, ರಂಜನಾ ಹಾಗೂ ವಿಜಯಲಕ್ಷ್ಮೀ ಎಂಬ ಮತ್ತೂ ಮೂವರು ಇದ್ದರು. ಅವರೆಲ್ಲ ನಮಗಿಂತ ಸ್ವಲ್ಪ ಕಡಿಮೆ ಮಾರ್ಕ್ಸ್ ಪಡೆಯುತ್ತಿದ್ದ ಕಾರಣ ಅವರ ಪಡೆಯೇ ಬೇರೆ ಆಗಿತ್ತು.
             ಹೀಗಿದ್ದ ನಮ್ಮ ಕ್ಲಾಸಿನಲ್ಲಿ ನೀವು ನಂಬ್ತೀರೋ ಇಲ್ಲವೋ, ನಾನು ಹಾಗೂ ವಿಜಯ ಇಬ್ಬರೂ ವೀಣಾಳಿಗೆ ಲೈನ್ ಹೊಡೆಯುತ್ತಿದ್ದೆವು. ಆಕೆಯನ್ನು ಇಂಪ್ರೆಸ್ ಮಾಡಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದೆವು. ನನ್ನ ಬಳಿ ಜಾಸ್ತಿ ಮಾತನಾಡಿದರೆ ವಿಜಯ, ವಿಜಯನ ಬಳಿ ಜಾಸ್ತಿ ಮಾತನಾಡಿದರೆ ನಾನು ಇಬ್ಬರೂ ಪೈಪೋಟಿಗೆ ಬಿದ್ದಂತೆ ಆಕೆಯನ್ನು ಇಂಪ್ರೆಸ್ ಮಾಡುವ ಪ್ರಯತ್ನ ಪ್ರತಿ ದಿನ ಸಾಗುತ್ತಿತ್ತು. ಹರೀಶ ಮಾಸ್ತರ್ರಿಗೆ ನಾವೆಲ್ಲರೂ ಆಪ್ತರೇ. ನಾನು ಹಾಗೂ ವಿಜಯ ಇಬ್ಬರೂ ಆಕೇಶಿಯಾ ಗಿಡದ್ದೋ ಇಲ್ಲವೇ ಗಾಳಿ ಗಿಡದ್ದೋ ಶಳಕೆಯನ್ನು ತರುವ ಕೆಲಸ ಮಾಡಬೇಕಿತ್ತು. ತಂದ ತಪ್ಪಿಗೆ ನಮಗೇ ಮೊದಲ ಹೊಡೆತ ಬೀಳುತ್ತಿತ್ತು.
            ನಮಗೆ ಪರೀಕ್ಷೆಗಳಲ್ಲಿ ಸಿಕ್ಕಾಪಟ್ಟೆ ಮಾರ್ಕ್ಸು ಬೀಳ್ತಿತ್ತು ಅಂದ್ಕೋಬೇಡಿ. ನಾವೆಲ್ಲ ಎಪಿಎಲ್ ಕಾರ್ಡಿನ ಥರದವರು. ತೀರಾ 25ಕ್ಕೆ 20 ಬೀಳದಿದ್ದರೂ ಪಾಸ್ ಮಾರ್ಕ್ಸ್ ಆಗಿದ್ದ 9ರಿಂದ 18ರ ನಡುವೆ ಯಾವುದಾದರೂ ಒಂದು ಮಾರ್ಕ್ಸಿಗೆ ದಾಸರಾಗುತ್ತಿದ್ದೆವು. 20ರ ಮೇಲೇ ಏನಿದ್ದರೂ ಮಹೇಶನಿಗೋ, ಸಂಧ್ಯಾಳಿಗೋ, ಸವಿತಾಳಿಗೋ ಸಿಗಲಿ ಬಿಡಿ ಎಂದು ಬಿಟ್ಟಿದ್ದೆವು. ಆಗೊಮ್ಮೆ ಈಗೊಮ್ಮೆ ಗಣಿತದಲ್ಲಿ ನಾವು ನಪಾಸಾಗುವುದೂ ಇತ್ತು. ಆ ದಿನಗಳಲ್ಲಿ ನಮಗೆ ನಮ್ಮ ಮಾರ್ಕ್ಸ್ ಕಾರ್ಡುಗಳನ್ನು ಮನೆಯಲ್ಲಿ ತೋರಿಸುವುದು ಎಂದರೆ ಪರಮ ಭಯದ ಸಂಗತಿ. ನನ್ನ ಮನೆಯಲ್ಲಂತೂ ಮೊದಲ ಸ್ಥಾನವನ್ನೇ ಗಳಿಸಿಕೊಳ್ಳಬೇಕು ಎಂದು ಫರ್ಮಾನು ಹೊರಡಿಸಿಬಿಟ್ಟಿದ್ದರು. ಆದರೆ ಸಿ. ಎಂ. ಹೆಗಡೆಯವರಂತಹ ಮಾಸ್ತರ್ರು ಇದ್ದ ಕಾರಣ ನಾನು ಎಷ್ಟು ಓದಿದ್ದರೂ ಬೀಳುವ ಅಂಕಗಳು ಅಷ್ಟಕ್ಕಷ್ಟೇ ಆಗಿತ್ತು ಬಿಡಿ. ನಮಗೆಲ್ಲ ಆಗ ನಮ್ಮ ಸೀನಿಯರ್ ಆಗಿದ್ದ ಗಣಪತಿಯೇ ಆಪದ್ಭಾಂಧವ. ಮನೆಯಲ್ಲಿ ಮಾರ್ಕ್ಸ್ ಕಾರ್ಡುಗಳನ್ನು ಯಾವ ಸಂದರ್ಭದಲ್ಲಿ ತೋರಿಸಬಾರದು, ಯಾವ ಸಂದರ್ಭದಲ್ಲಿ ತೋರಿಸಬೇಕು ಎಂಬುದನ್ನು ತಿಳಿಸ ಹೇಳುತ್ತಿದ್ದ. ತೀರಾ ಪಾಸು ಮಾರ್ಕ್ಸ್ ಬೀಳದೇ ಇದ್ದರೆ ಆತನೇ ನಮ್ಮ ಮನೆಯ ಅಪ್ಪ, ಅಮ್ಮನ ಸಹಿಯನ್ನು ಫೋರ್ಜರಿ ಮಾಡಿ ಮಾರ್ಕ್ಸ್ ಕಾರ್ಡಿನ ಮೇಲೆ ಹಾಕುತ್ತಿದ್ದ. ನಾವು ಮೊದ ಮೊದಲು ಹೆದರುತ್ತಿದ್ದರೂ ನಂತರ ಮನೆಯವರ ಕಾಟ ತಪ್ಪಿಸಿಕೊಳ್ಳಲು ಗಣಪತಿಯ ಮೊರೆಯನ್ನೇ ಹೋಗಿದ್ದೆವು ಬಿಡಿ. ಕೊನೆಗೊಂದು ದಿನ ಮನೆಯಲ್ಲಿ ಈ ಸಂಗತಿ ಗೊತ್ತಾಗಿ ರಾದ್ಧಾಂತವಾಗಿದ್ದು ಬೇರೆಯ ಸಂಗತಿ. ಇದನ್ನು ಇನ್ನೊಮ್ಮೆ ಹೇಳುತ್ತೇನೆ. ಮಾರ್ಕ್ಸುಗಳ ಬೆನ್ನು ಹತ್ತದೇ ಅದರ ಬದಲಾಗಿ ಉಳಿದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗ ಕಡೆಗೆ ನಾವು ಕಣ್ಣು ಹಾಯಿಸಿದ್ದೆವು.
           ಶಾಲೆಯ ಕ್ರೀಡಾರಂಗದಲ್ಲಿ ನಾನು ಮುಂದಡಿಯಿಟ್ಟಿದ್ದೆ. ನನ್ನ ಕಾಲದಲ್ಲಿ 100 ಮೀಟರ್ ಓಟದಲ್ಲಿ ಶಾಲೆಯ ಪ್ರತಿನಿಧಿ ನಾನಾಗಿದ್ದೆ. ಕಬ್ಬಡ್ಡಿ ತಂಡದಲ್ಲಿ ನನ್ನ ಸೇರಿಸಿಕೊಂಡಿದ್ದರು. ಆದರೆ ನಾನು ರೈಡರ್ರೂ ಆಗಿರಲಿಲ್ಲ. ಡಿಫೆಂಡರ್ರೂ ಆಗಿರಲಿಲ್ಲ. ತಂಡ 7 ಜನರಲ್ಲಿ ನಾನು ಇದ್ದೆ ಅಷ್ಟೆ. ಸುಮ್ಮನೆ ನಿಲ್ಲುತ್ತಿದ್ದೆ. ಲಾಸ್ಟ್ ಮೇಂಬರ್ ಆಗಿ ಔಟಾಗುತ್ತಿದ್ದೆ. ವಾಲೀಬಾಲ್ ಆಡುತ್ತಿದ್ದೆನಾದರೂ ಸರ್ವೀಸ್ ನೆಟ್ ದಾಟುತ್ತಿರಲಿಲ್ಲ. ಕುಳ್ಳಗಿದ್ದ ಕಾರಣ ಖೋ ಖೋ ಚನ್ನಾಗಿ ಆಡುತ್ತಿದ್ದೆ. ಸಿಕ್ಕಾಪಟ್ಟೆ ಓಡುತ್ತಿದ್ದ ಕಾರಣ ಬಹಳ ಬೇಗನೆ ಸುಸ್ತಾಗುತ್ತಿತ್ತು. ಲಾಂಗ್ ಜಂಪ್ ವೀರನಾಗಿದ್ದೆ. ಬಹಳ ದಿನಗಳ ಪ್ರಾಕ್ಟೀಸ್ ಮಾಡಿದ ತಪ್ಪಿಗೆ ಕ್ರೀಡಾಕೂಟದಲ್ಲಿ 2ನೇ ಸ್ಥಾನ ಲಭ್ಯವಾಗಿತ್ತು ಎನ್ನುವುದು ಹೆಮ್ಮೆಯೇ ಹೌದು. ಕ್ರೀಡಾರಂಗದಲ್ಲಿ ವಿಜಯನೂ ಸಾಕಷ್ಟು ಸಾಧನೆ ಮಾಡಿದ್ದ ಬಿಡಿ.
             ನಾಟಕ, ಅದೂ ಇದೂ ಎಂದು ನಮ್ಮದು ಹಲವು ಆಲೋಚನೆಗಳು. ಹರೀಶ ಮಾಸ್ತರ್ರ ಕನಸಿಗೆ ನಾವು ಶಿಲೆಯಂತೆ ಸಿಕ್ಕಿದ್ದೆವು. ನಮ್ಮನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡಿದ್ದರು. ವಿಚಿತ್ರವೆಂದರೆ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಹೆಚ್ಚಿನ ಕಾರ್ಯಕ್ರಮದಲ್ಲಿ ನಾನು ಕುಡುಕನ ಪಾತ್ರವೋ, ಅಥವಾ ಅದಕ್ಕೆ ಸಂಬಂಧಿಸಿದಂತೆ ಪಾತ್ರಗಳೋ ಸಿಗುತ್ತಿದ್ದವು ಎನ್ನುವುದು ಮಾತ್ರ ವಿಚಿತ್ರವೇ ಹೌದು ನೋಡಿ. ನಮ್ಮ ಎಲ್ಲ ಕಾರ್ಯಕ್ರಮಗಳಿಗೆ ಹರೀಶ ಮಾಸ್ತರ್ರೇ ಸಿಂಗರ್ ಆಗಿದ್ದರು. ಘಟ್ಟದ ಕೆಳಗಿನ ಹೊನ್ನಾವರ ತಾಲೂಕಿನ ಯಾವುದೋ ಊರಿನವರಾಗಿದ್ದ ಹರೀಶ ಮಾಸ್ತರ್ರು ನಮ್ಮ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು ಎನ್ನಿ.
              ಆಗೊಮ್ಮೆ, ಈಗೊಮ್ಮೆ ಹರೀಶ ಮಾಸ್ತರ್ರು ನಮ್ಮ ಜೊತೆ ಕ್ರಿಕೆಟ್ ಆಡಲು ಬರುತ್ತಿದ್ದರು. ಕ್ರೀಡಾಕೂಟಕ್ಕೆ ತಯಾರು ಮಾಡಲಿಕ್ಕೂ ಮುಂದಾಗುತ್ತಿದ್ದರು. ರಮೇಶ ಗಡ್ಕರ್ ಮಾಸ್ತರ್ರ ಜೊತೆ ವಿಶ್ರಾಂತಿ ವೇಳೆಯಲ್ಲಿ ಚೆಸ್ ಆಡುವ ಮೂಲಕ ನನಗೆ ಬಹುದೊಡ್ಡ ಕಾಟವನ್ನು ತಪ್ಪಿಸಿದ ಖ್ಯಾತಿ ಹರೀಶ ಮಾಸ್ತರ್ರದ್ದಾಗಿತ್ತು. ಹರೀಶ ಮಾಸ್ತರ್ರು ಗಡ್ಕರ್ ಮಾಸ್ತರ್ರ ಜೊತೆ ಚೆಸ್ ಆಡದೇ ಇದ್ದಲ್ಲಿ ನಾನು ಅದೆಷ್ಟೋ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ ಬಿಡಿ. ಈ ಕಾರಣದಿಂದಾಗಿ ನಾನು ಹರೀಶ ಮಾಸ್ತರ್ರನ್ನು ಎಷ್ಟೋ ಪಾಲು ನೆನಪಿಸಿಕೊಳ್ಳಬೇಕು. ಹರೀಶ ಮಾಸ್ತರ್ರು ಎಂದರೆ ನೆನಪಾಗುವುದು ಇಷ್ಟೇ ನೋಡಿ. ನಾನು ಏಳನೆ ಕ್ಲಾಸಿನವರೆಗೂ ಅವರ ಕೈಯಲ್ಲೇ ಓದುತ್ತಿದ್ದೆ. ನಾನು ಶಾಲೆ ಮುಗಿಸಿ ಬೇರೆಡೆಗೆ ಹೋಗುವ ಮುನ್ನ ಅವರ ಬಳಿ ದಿನಗಟ್ಟಲೆ ಮಾತನಾಡಿದ್ದೂ ಇದೆ. ನಾನು ಹೈಸ್ಕೂಲು ಸೇರಿ ಒಂದೆರಡು ವರ್ಷಗಳಾದರೂ ಹರೀಶ ಮಾಸ್ತರ್ರು ಅದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಆದರೆ ಆ ನಂತರದ ದಿನಗಳಲ್ಲಿ ಸಿ. ಎಂ. ಹೆಗಡೆಯವರ ರಾಜಕಾರಣದಿಂದಾಗಿ ಹರೀಶ ಮಾಸ್ತರ್ರು ವರ್ಗಾವಣೆ ಮಾಡಿಸಿಕೊಂಡು ಹೋದರು ಎನ್ನುವ ಸುದ್ದಿಯೂ ಕೇಳಿಬಂದಿತು. ಗಡ್ಕರ್ ಮಾಸ್ತರ್ ಹಾಗೂ ತಾರಕ್ಕೋರು ಇಂತಹ ಕಾರಣದಿಂದಲೇ ವರ್ಗ ಮಾಡಿಸಿಕೊಂಡು ಹೋದರು ಎನ್ನುವುದನ್ನು ಕೇಳಿ ಸಿ. ಎಂ. ಹೆಗಡೆಯವರ ಬಗ್ಗೆ ಸಿಟ್ಟೂ ಬಂದಿತ್ತು.
             ಹೈಸ್ಕೂಲಿನಲ್ಲಿ 8ನೇ ಕ್ಲಾಸಿನಲ್ಲಿ ಸಿಕ್ಕಾಪಟ್ಟೆ ಓದಿ ನಾನು ಮೊದಲ ಸ್ಥಾನ ಪಡೆದುಕೊಂಡು ಬಂದಾಗ ನನ್ನ ಅಪ್ಪ ಗಡ್ಕರ್ ಮಾಸ್ತರ್ ಹಾಗೂ ಹರೀಶ ಮಾಸ್ತರ್ರ ಬಳಿ ಹೇಳಿದ್ದರಂತೆ. ಅದನ್ನು ಕೇಳಿ ಸಂತೋಷ ಪಟ್ಟಿದ್ದ ಈ ಇಬ್ಬರೂ ಮಾಸ್ತರ್ರು ನಾನು ಮೊದಲ ಸ್ಥಾನ ಪಡೆದಿದ್ದನ್ನು ಕೇಳಿ ಬಹಳ ಜನರ ಬಳಿ ಹೊಗಳಿದ್ದರಂತೆ. ನಮ್ಮ ಶಾಲೆಯಲ್ಲಿ ವಿನಯ ಬಹಳ ಕಷ್ಟಪಟ್ಟಿದ್ದ ಬಿಡಿ. ಆದರೆ ಹೈಸ್ಕೂಲಿನಲ್ಲಾದರೂ ಆತನಿಗೆ ಒಳ್ಳೆಯದಾಗುತ್ತಿದೆಯಲ್ಲ. ಅಷ್ಟು ಸಾಕು ಬಿಡಿ. ಹಿಂಗೇ ಚನ್ನಾಗಿ ಓದಲು ಹೇಳಿ ಎಂದೂ ಹೇಳಿದ್ದರಂತೆ. ಈಗಲೂ ಅವರ ಮಾತುಗಳು ನನ್ನನ್ನು ಕಾಡುತ್ತಿರುತ್ತವೆ. ನೆನಪಾಗುತ್ತಿರುತ್ತವೆ.

ಪಿ. ಜಿ. ಹಾವಗೋಡಿ :
               ಹೌದು. ಹಾವಗೋಡಿ ಮಾಸ್ತರ್ ನನಗ ಕೆಲಕಾಲ ಕಲಿಸಿದ್ದಾರೆ. ಹಾವಗೋಡಿ ಮಾಸ್ತರ್ರನ್ನು ನಾನು ಮೊದಲು ನೋಡಿದ್ದು ಮುತ್ಮೂರ್ಡು ಶಾಲೆಗೆ ಅವರು ಮಾಸ್ತರ್ರಾಗಿ ಬರುತ್ತಿದ್ದ ಸಂದರ್ಭದಲ್ಲಿ. ನಮ್ಮೂರ ಸ್ಕಿಡ್ ಆಗುವ ರಸ್ತೆಯಲ್ಲಿ ಲೂನಾ ಮೇಲೆ ಬರುತ್ತಿದ್ದರು ಅವರು. ಅದೊಮ್ಮೆ ನಾವು ನಡೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ  ನಮ್ಮೆದುರೇ ಅವರ ಲೂನಾ ಗಿರಿಗಿರಿ ತಿರುಗಿ ಲಗಾಟಿ ಹೊಡಯುವಂತಾಗಿತ್ತು. ಆಗ ನಮ್ಮನ್ನು ನೋಡಿದ ಹಾವಗೋಡಿ ಮಾಸ್ತರ್ರು `ನೋಡ್ರಾ ತಮಾ.. ಹೆಂಗ್ ಮುಕಳಿ ಕುಂಡೆ ತಿರುಗಿಸ್ತು ಈ ಗಾಡಿ..' ಎಂದಿದ್ದು ನೆನಪಿನಲ್ಲಿದೆ.
               ಮುಂದೆ ಇದೇ ಹಾವಗೋಡಿ ಮಾಸ್ತರ್ರು ಕೋಡ್ಸರ ಶಾಲೆಯಲ್ಲಿ ಕಲಿಸುತ್ತಿದ್ದ ಸಂದರ್ಭದಲ್ಲಿ ಯಾರಿಗೋ ಗೆರೆಪಟ್ಟಿಯಲ್ಲಿ ಹೊಡೆದಿದ್ದರಂತೆ. ಹೊಡೆದಿದ್ದ ಪರಿಗೆ ಗೆರೆಪಟ್ಟಿ ಮುರಿದು ಹೋಗಿದ್ದರೆ ಹೊಡೆತ ತಿಂದವನಿಗೆ ದೊಡ್ಡ ಗಾಯವಾಗಿತ್ತಂತೆ. ನಾಲ್ಕು ದಿನ ಜ್ವರ ಮಾಡಿದ್ದನಂತೆ. ಆ ಬಾಲಕನ ತಂದೆ ತಾಯಿಯರು ಬಂದು ಹಾವಗೋಡಿ ಮಾಸ್ತರ್ರನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆಯನ್ನೂ ಮಾಡಿದ್ದರಂತೆ. ಈ ಸುದ್ದಿಯನ್ನೆಲ್ಲ ಕೇಳಿದಾಗ ಹಾವಗೋಡಿ ಮಾಸ್ತರ್ರೆಂದರೆ ಯಾರೋ ಭಯೋತ್ಪಾದಕರೇ ಇರಬೇಕು ಎಂದುಕೊಂಡಿದ್ದೆವು ಬಿಡಿ. ಇಂತಹ ಮಾಸ್ತರ್ರಿಗೆ ಏಳನೇ ತರಗತಿಯಲ್ಲಿ `ಸೇತುಬಂಧ' ಪರೀಕ್ಷೆಯ ಪೇಪರ್ ಚೆಕ್ ಮಾಡುವ ಕೆಲಸ ಸಿಕ್ಕಿತ್ತು. ನನ್ನ ಪೇಪರ್ರನ್ನು ಚೆಕ್ ಮಾಡಿದ್ದರು. ನನಗೆ ಸಿಕ್ಕಾಪಟ್ಟೆ ಅಂಕಗೂ ಬಿದ್ದಿದವು ಬಿಡಿ.
             ಆಮೇಲೆ ಯಾವಾಗಲೋ ಒಮ್ಮೆ ಬಹುಶಃ ಐದನೇ ಕ್ಲಾಸಿನಲ್ಲಿ ಇರಬೇಕು. ಅವರು ನನಗೆ ಶಿಕ್ಷಕರಾಗಿ ನಮ್ಮ ಶಾಲೆಗೆ ಬಂದಿದ್ದರು. ಕನ್ನಡ ವಿಷಯವನ್ನು ಬಹಳ ಚನ್ನಾಗಿ ಕಲಿಸುತ್ತಿದ್ದರು ಅವರು. ಆದರೆ ಅವರ ಮೇಲೆ ಇದ್ದ ಒಂದೇ ಬೇಜಾರು ಎಂದರೆ ನಮಗೆ ಆಟದ ಪಿರಿಯಡ್ಡಿನಲ್ಲಿ ಆಟಕ್ಕೇ ಬಿಡುತ್ತಿರಲಿಲ್ಲ. ಆಗಲೂ ಪಾಠವನ್ನೇ ಕಲಿಸುತ್ತಿದ್ದರು. ಕೊನೆಗೊಮ್ಮೆ ನಾವು ವಿದ್ಯಾರ್ಥಿಗಳೆಲ್ಲ ಸೇರಿ ಮಾಸ್ತರ್ರ ಬಳಿ ಗಲಾಟೆ ಮಾಡಿದಾಗಲೇ ನಮ್ಮನ್ನು ಆಟಕ್ಕೆ ಬಿಡಲು ಆರಂಭ ಮಾಡಿದ್ದು. ಹಾವಗೋಡಿ ಮಾಸ್ತರ್ರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಮತ್ತಿನ್ನೇನೂ ವಿಶೇಷ ಘಟನೆಗಳು ಜರುಗಲಿಲ್ಲ ಬಿಡಿ.

          ಪ್ರೈಮರಿ ಬದುಕು ಕಳೆದು ಎಷ್ಟೋ ವರ್ಷಗಳು ಕಳೆದು ಹೋಗಿದೆ. ಆ ದಿನಗಳಲ್ಲಿ ನಮ್ಮದು ಹಸಿ ಮನಸ್ಸೇ ಸರಿ. ಏನೇ ನಡೆದಿದ್ದರೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತವೆ. ಆ ಕಾರಣದಿಂದಲೇ ಬಹಳಷ್ಟು ಸಂಗತಿಗಳನ್ನು ನಾನು ಇಲ್ಲಿ ಉಲ್ಲೇಖ ಮಾಡಿದ್ದೇನೆ. ತಾರಕ್ಕೋರನ್ನೋ, ಗಡ್ಕರ್ ಮಾಸ್ತರ್ರನ್ನೋ, ಹರೀಶ ಮಾಸ್ತರ್ರನ್ನೋ ಪ್ರೀತಿಯಿಂದ ಕಾನುತ್ತಿದ್ದೇನೆ, ನೆನೆಯುತ್ತೇನೆ ಎಂದರೆ ಆ ದಿನಗಳಲ್ಲಿ ಅವರು ತೋರಿದ ಅಕ್ಕರೆಗಳೆ ಕಾರಣವಾಗುತ್ತವೆ. ಜಿ. ಎಸ್. ಭಟ್ಟರಂತೂ ಅವರ ಸಿಟ್ಟಿನಿಂದಲೇ ನೆನಪಿನಲ್ಲಿ ಉಳಿದು ಹೋಗಿದ್ದಾರೆ. ಇನ್ನು ಸಿ. ಎಂ. ಹೆಗಡೆಯವರ ಬಗ್ಗೆ ನಾನು ಹೀಗೆ ಅಂದುಕೊಳ್ಳಲಿಕ್ಕೆ ಕಾರಣ ಅವರೇ ಬಿಡಿ. ಅಲ್ಲಿಂದ ಮುಂದಕ್ಕೆ ನನ್ನ ಹೈಸ್ಕೂಲಿನ ಬದುಕು ಆರಂಬಗೊಂಡಿತು. ಏಳನೇ ಕ್ಲಾಸಿಗೆ ಆಗ ಇದ್ದ ಪಬ್ಲಿಕ್ ಪರೀಕ್ಷೆಯಲ್ಲಿ ನಾಲ್ಕನೇ ಟಾಪರ್ ಆಗಿ ಪಾಸಾಗಿದ್ದೆ. ಸಂದ್ಯಾ, ಸವಿತಾ, ಮಹೇಶ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದರೆ ನಾನು ನಾಲ್ಕನೇ ಸ್ಥಾನ ಪಡೆದಿದ್ದೆ. ವಿಜಯ ನನಗಿಂತ ಮೂರು ಅಂಕ ಕಡಿಮೆ ಪಡೆದುಕೊಂಡು ಮುಂದಿನ ಸ್ಥಾನ ಪಡೆದುಕೊಂಡಿದ್ದ. ಶಾಲೆಗೆ ದೊಡ್ಡದಂದು ಟೇಬಲ್ಲನ್ನು ಕೊಡುಗೆಯಾಗಿ ಕೊಟ್ಟು ನಾವು ಶಾಲೆಯನ್ನು ಬಿಟ್ಟಿದ್ದೆವು. ಆಮೇಲಿಂದ ಬೇರೆಯದೇ ಬದುಕು ಆರಂಭಗೊಂಡಿತ್ತು. ಹೈಸ್ಕೂಲು ನಮ್ಮನ್ನು ಕೈಬೀಸಿ ಕರೆದಿತ್ತು.

(ಮುಂದುವರಿಯುತ್ತದೆ)
(ಮುಂದಿನ ಕಂತಿನಲ್ಲಿ ನನ್ನ ಹೈಸ್ಕೂಲು ಬದುಕಿನ ಮಾಸ್ತರ್ರ ಬಗ್ಗೆ ಬರೆಯಲಿದ್ದೇನೆ)

Friday, August 21, 2015

ಪರಿವರ್ತನೆ (ಕಥೆ)

              ನನ್ನ ಹೊಚ್ಚ ಹೊಸ ಬೈಕು ಮೊಟ್ಟ ಮೊದಲ ಬಾರಿಗೆ ಪಂಚರ್ ಆಗಿದ್ದಾಗ ನಾನು ನಮ್ಮೂರಿನ ಪಂಚರ್ ಕಟ್ಟುವ ಅಮಿರ್ ಖಾನ್ ನ ಮೊರೆ ಹೋಗಿದ್ದೆ. ಬಹುಶಃ ಈ ಪಂಚರ್ ದೆಸೆಯಿಂದಲೇ ನನಗೆ ಅಮೀರ್ ಖಾನ್ ಪರಿಚಯ ಆಗಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ನನ್ನ ಯಮಭಾರದ ಗಾಡಿಯನ್ನು ತಳ್ಳಿಕೊಂಡು ಅಮೀರ್ ಖಾನ್ ನ ಪಂಚರ್ ಅಂಗಡಿಯ ವರೆಗೆ ಏದುಸಿರು ಬಿಡುತ್ತಾ ಹೋಗುವ ವೇಳೆಗೆ ಅಂಗಡಿಯಲ್ಲಿ ಅಮೀರ್ ಖಾನ್ ಇರಲಿಲ್ಲ. ಅಂಗಡಿಗೆ ತಾಗಿಕೊಂಡಂತೆ ಇದ್ದ ಮನೆಯಲ್ಲಿ ಆತನ ಬೇಗಂ ಇದ್ದಳು. ಅವರ ಬಳಿ ಅಮೀರ್ ಖಾನ್ ಇದ್ದಾನಾ ಎಂದು ಕೇಳಿ, ಈಗ ಬರುತ್ತಾರೆ ಇರಿ ಎನ್ನುವ ಉತ್ತರ ಕೇಳಿ ಕಾಯುತ್ತ ಕುಳಿತಿದ್ದೆ. ಕೆಲ ಹೊತ್ತಿನಲ್ಲಿ ಅಮೀರ್ ಖಾನ್ ಬಂದಿದ್ದ.
            ಮೊಟ್ಟ ಮೊದಲ ಪಂಚರ್ ಅನ್ನು ಸರಿಮಾಡಿಕೊಟ್ಟಿದ್ದ ಅಮಿರ್ ಖಾನ್ ನಂತರದ ದಿನಗಳಲ್ಲಿ ನನ್ನ ತೀರಾ ಪರಿಚಯದ ವ್ಯಕ್ತಿಗಳಲ್ಲಿ ಒಬ್ಬನಾಗಿ ಬದಲಾಗಿದ್ದ. ನಮ್ಮೂರಿನ ರಸ್ತೆ ಹೇಳಿ-ಕೇಳಿ ಮಣ್ಣು ರಸ್ತೆ. ಅಭಿವೃದ್ಧಿ ಪರ ಭಾಷಣ ಮಾಡುವ ರಾಜಕಾರಣಿಗಳ ಮಾತಿಗೆ ನುಜ್ಜುಗುಜ್ಜಾಗಿ ಮತ್ತಷ್ಟು ಹಾಳಾಗಿದ್ದ ನಮ್ಮೂರ ರಸ್ತೆಯಲ್ಲಿ ಗಾಡಿ ಓಡಿಸುವುದು ಯಮಯಾತನೆಯ ಕೆಲಸವೇ ಹೌದಾಗಿತ್ತು. ಇಂತಹ ರಸ್ತೆಯಲ್ಲಿ ನನ್ನ ಗಾಡಿ ಪದೇ ಪದೆ ಪಂಚರ್ ಆಗುತ್ತಿತ್ತು. ಆಗೆಲ್ಲ ನಾನು ಅಮೀರ್ ಖಾನ್ ಮೊರೆ ಹೋಗುತ್ತಿದ್ದೆ. ಆತ ಪಂಚರ್ ಸರಿಪಡಿಸಿಕೊಡುತ್ತಿದ್ದ. ಹೀಗೆ ನಾನು ಪದೇ ಪದೆ ಅವನ ಮೊರೆ ಹೋದ ಕಾರಣ ಆತ ನನ್ನ ಪರಿಚಿತನಾದ. ಕೊನೆ ಕೊನೆಗೆ ಆತ ಅದೆಷ್ಟು ಪರಿಚಿತನಾಗಿದ್ದನೆಂದರೆ ತನ್ನ ಮನೆಯ ಸಮಸ್ಯೆಗಳನ್ನೂ ಹೇಳಿಕೊಳ್ಳುವಷ್ಟು ಆಪ್ತನಾಗಿ ಬದಲಾಗಿದ್ದ.
             ಅಮೀರ್ ಖಾನ್ ಗೆ ಬಹುಃ 45-50 ವರ್ಷ ವಯಸ್ಸಾಗಿರಬೇಕು. ಮೂವರು ಹೆಂಡತಿಯರು ಹಾಗೂ 11 ಜನ ಮಕ್ಕಳು ಅಮೀರ್ ಖಾನ್ ನ ಆಸ್ತಿ. ಆಮೀರ್ ಭಾಯ್.. ಇಷ್ಟೆಲ್ಲ ಮಕ್ಕಳನ್ನು ಹೇಗೆ ಸಾಕ್ತೀಯಾ? ಕಷ್ಟ ಆಗೋಲ್ಲವಾ ಎಂದು ನಾನು ಕೇಳಿದ್ದೆ. ಅಲ್ಲಾಹು ಕರುಣಿಸಿದ್ದಾನೆ.. 11 ಇರಲಿ ಅಥವಾ 20 ಇರಲಿ. ಅವರನ್ನು ಸಾಕುತ್ತೇನೆ. ತೊಂದರೆಯಿಲ್ಲ. ಸ್ವಲ್ಪ ದೊಡ್ಡವರಾಗುವ ವರೆಗೆ ಕಷ್ಟವಾಗುತ್ತದೆ. ಆ ಮೇಲೆ ಅವರ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದ ಅಮೀರ್ ಖಾನನ ಮೊದಲ ಮಗ ಖಾದರ್ ಆಗಲೇ ಇನ್ನೊಂದು ಮೆಕಾನಿಕ್ ಅಂಗಡಿಯನ್ನೂ ಆರಂಭಿಸಿದ್ದ. ಇಂತಹ ಅಮೀರ್ ಖಾನ್ ನ ಕಿರಿಯ ತಮ್ಮ ಸಲ್ಮಾನ್.
              ಸಲ್ಮಾನ್ ಹಾಗೂ ಆಮೀರ್ ಎಂದರೆ ಆ ಊರಿನಲ್ಲಿ ಎಲ್ಲರಿಗೂ ಪ್ರೀತಿ ಹಾಗೂ ಅಕ್ಕರೆ. ಊರಿನಲ್ಲಿ ಪಂಚರ್ ಅಂಗಡಿ ಹಾಗೂ ಮೆಕಾನಿಕ್ ಅಂದರೆ ಇವರಿಬ್ಬರೇ ಎಂಬ ಕಾರಣವೂ ಅಕ್ಕರೆ ಹಾಗೂ ಪ್ರೀತಿಗೆ ಪ್ರಮುಖ ಕಾರಣವಾಗಿತ್ತು. ಇದ್ದವರ ಪೈಕಿ ಸಲ್ಮಾನ್ ಎಲ್ಲರ ಜೊತೆ ಬೆರೆಯುವಂತಹ ವ್ಯಕ್ತತ್ವದವನಾಗಿದ್ದರೆ, ಆಮೀರ್ ಸ್ವಲ್ಪ ಗುಮ್ಮನ ಗುಸ್ಕ. ಮನೆಯಲ್ಲಿ ಮಾತ್ರ ಅವಳಿಗಳೇನೋ ಎನ್ನುವಂತೆ ಬೆಳೆದಿದ್ದವರು ಅವರು. ಸಲ್ಮಾನ್ ಗೆ ಮೂವರು ಹೆಂಡತಿಯರು. ಆರು ಮಕ್ಕಳು. ಸಲ್ಮಾನ್ ಆತ್ಮೀಯತೆಯ ಪ್ರತೀಕ. ಆದರೆ ಆಮೀರ್ ಸ್ವಲ್ಪ ಸಿಡುಕ. ಬಡತನ ಹಾಸುಹೊಕ್ಕಾಗಿದ್ದರೂ ಇವರಿಗೆ ಮಾತ್ರ ಯಾವುದೇ ಕುಂದನ್ನು ಉಂಟುಮಾಡಿರಲಿಲ್ಲ. ಆದರೆ ಧರ್ಮದ ವಿಷಯ ಬಂದರೆ ಮಾತ್ರ ಸಲ್ಮಾನ್ ಅಪ್ಪಟ ಕರ್ಮಠರು ಎಂದರೆ ತಪ್ಪಾಗಲಿಕ್ಕಿಲ್ಲ.
             ಆಮೀರ್ ಗೂ ಧರ್ಮಪ್ರೇಮ ಅಲ್ಪ-ಸ್ವಲ್ಪ ಇತ್ತು. ಆದರೆ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಳ್ಳುತ್ತಿದ್ದವನಿಗೆ ಧರ್ಮದ ಬಗ್ಗೆ ಹೆಚ್ಚಿಗೆ ಆಲೋಚನೆ ಮಾಡಲು ಸಮಯವೇ ಇರಲಿಲ್ಲ. ತಾನು ಮಾಡುವ ಕೆಲಸದಲ್ಲಿಯೇ ಧರ್ಮ, ದೇವರು ಅಡಗಿದ್ದಾನೆ ಎಂದುಕೊಂಡಿದ್ದವನು ಆಮೀರ್. ಆದರೆ ಅಪರೂಪಕ್ಕೊಮ್ಮೆ ಮಸೀದಿಗೆ ಹೋಗಿ ನಮಾಜ್ ಮಾಡಿ, ಖುರಾನ್ ಪಠಣವನ್ನೂ ಮಾಡಿ ಬರುತ್ತಾನೆ. ಆದರೆ ಸಲ್ಮಾನ್ ಹಾಗಲ್ಲ. ಎಷ್ಟಕ ಕರ್ಮಠ ಎಂದರೆ ದಿನಕ್ಕೆ ಐದು ಬಾರಿ ಸಮಯಕ್ಕೆ ಸರಿಯಾಗಿ ನಮಾಜ್ ಮಾಡುತ್ತಿದ್ದ. ಅಷ್ಟೇ ಏಕೆ ಮನೆಗೂ ಆಗಾಗ ಮೌಲ್ವಿಗಳನ್ನು ಕರೆಸಿ ಪ್ರವಚನಗಳನ್ನು ಮಾಡಿಸುತ್ತಿದ್ದ.
              ನನ್ನ ಹಾಗೂ ಸಲ್ಮಾನ್ ನ ನಡುವೆ ಆಗಾಗ ಧರ್ಮದ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದವು. ನಾನು ನನ್ನ ಧರ್ಮವನ್ನು ಸಮರ್ಥನೆ ಮಾಡಿ ಕೊಂಡರೆ ಆತ ಅವನ ಧರ್ಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ. ನಾವು ವಾದ ಮಾಡುವ ಸಂದರ್ಭದಲ್ಲಿ ಅನೇಕ ಜನರೂ ಸೇರಿ ಗಲಾಟೆ ನಡೆಯುತ್ತಿದೆಯೋ ಎನ್ನುವಂತಹ ವಾತಾವರಣವೂ ಮೂಡುತ್ತಿದ್ದವು. ಮೊದ ಮೊದಲಿಗೆಲ್ಲ ಆರೋಗ್ಯಕರ ಚರ್ಚೆಗೆ ಮುಂದಾಗುತ್ತಿದ್ದ ಸಲ್ಮಾನ್ ಕೊನೆ ಕೊನೆಗೆ ನನ್ನ ಪಟ್ಟುಗಳನ್ನು ತಾಳಲಾರದೇ ವ್ಯಗ್ರನೂ ಆಗುತ್ತಿದ್ದ. ಒಂದೆರಡು ಸಾರಿ ನಾವು ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿಟ್ಟಿಗೆದ್ದು ನನ್ನ ಮೇಲೇರಿ ಬಂದಿದ್ದೂ ಇತ್ತು. ಕೊನೆಗೆ ಯಾವಾಗಲೋ ಶಾಂತನಾದಾಗ `ಮಾಫ್ ಕರೋ ಭಾಯ್..' ಎಂದು ಆಲಿಂಗನ ಮಾಡಿಕೊಂಡು ಕ್ಷಮೆ ಕೋರುತ್ತಿದ್ದ. ನನಗಂತೂ ಕಸಿವಿಸಿಯಾಗುತ್ತಿತ್ತು. ಕ್ಷಮೆಕೋರಿ ದೂರ ಹೋದರೂ ಆತನ ಬಟ್ಟೆಗೆ ಪೂಸಿಕೊಂಡಿದ್ದ ಅತ್ತರಿನ ವಾಸನೆ ಅದೆಷ್ಟೋ ತಾಸುಗಳ ಕಾಲ ಅಲ್ಲಿಯೇ ಘಂಮ್ಮೆನ್ನುತ್ತಿತ್ತು.
               ಹೀಗಿದ್ದಾಗಲೇ ಈ ಅಣ್ಣತಮ್ಮಂದಿರಿಗೆ ಮೆಕ್ಕಾಕ್ಕೆ ಹೋಗುವ ಹುಚ್ಚು ಹತ್ತಿ ಬಿಟ್ಟಿತ್ತು. ಮೆಕ್ಕಾಕ್ಕೆ ಹೋಗುವ ಕಾರಣಕ್ಕಾಗಿಯೇ ಅಣ್ಣ-ತಮ್ಮಂದಿರಿಬ್ಬರೂ ನನ್ನ ಬೆನ್ನು ಬಿದ್ದು ಬಿಟ್ಟಿದ್ದರು. ಸರ್ಕಾರ ಕೊಡ ಮಾಡುವ ಸಬ್ಸಿಡಿಯನ್ನು ಇಬ್ಬರೂ ಪಡೆದುಕೊಳ್ಳಬೇಕೆನ್ನುವ ಸಲುವಾಗಿ ಅವರು ನನ್ನ ಮೊರೆ ಹೋಗಿದ್ದರು. ನಾನು ನನ್ನ ಪರಿಚಯದವರನ್ನು ಬಳಸಿಕೊಂಡು ಸಬ್ಸಿಡಿ ಕೊಡಿಸುವ ಜವಾಬ್ದಾರಿಯಿತ್ತು. ಜೊತೆಯಲ್ಲಿ ಮೆಕ್ಕಾಕ್ಕೆ ಹೋಗುವ ಸಲುವಾಗಿ ಪಾಸ್ ಪೋರ್ಟ್ ಮಾಡಿ ವೀಸಾ ಕ್ಕೆ ಪ್ರಯತ್ನಿಸುವುದನ್ನೂ ನಾನು ಮಾಡಿಕೊಡಬೇಕಿತ್ತು. ನನಗೆ ತಿಂಗಳಾನುಗಟ್ಟಲೆ ದುಂಬಾಲು ಬಿದ್ದಿದ್ದ ಅವರನ್ನು ನಾನು ಆ ಸಂದರ್ಭದಲ್ಲಿಯೇ ಹೆಚ್ಚು ಗಮನಿಸಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ.
              ಆಮೀರ್ ಹಾಗೂ ಸಲ್ಮಾನ್ ಇಬ್ಬರೂ ಒಂದೇ ಧರ್ಮದವರಾಗಿದ್ದರೂ ಸಾಕಷ್ಟು ಭಿನ್ನರೂ ಕೂಡ ಹೌದು. ಇಬ್ಬರೂ ಒಂದೇ ತಾಯಿಯ ಮಕ್ಕಳಾಗಿದ್ದರೂ ಅವರ ಗುಣದಲ್ಲಿ ಮಾತ್ರ ಅದ್ಯಾವ ಪತಿಯ ಭಿನ್ನತೆಯಿತ್ತೆಂದರೆ ನಾನು ಬಹಳ ಅಚ್ಚರಿ ಪಟ್ಟುಕೊಂಡಿದ್ದೆ. ಆಮೀರ್ ಸೌಮ್ಯ ವ್ಯಕ್ತಿತ್ವದವನಾಗಿದ್ದರೆ ಸಲ್ಮಾನ್ ಮಾತ್ರ ಬೇಗನೆ ರೊಚ್ಚಿಗೇಳುತ್ತಿದ್ದ. ಸಿಟ್ಟಿನ ಪ್ರವೃತ್ತಿಯ ಸಲ್ಮಾನ್ ನನ್ನು ಸಂಭಾಳಿಸುವುದು ಕಷ್ಟದ ಕೆಲಸವಾಗಿತ್ತು. ನೋಡಲಿಕ್ಕೆ ಇಬ್ಬರೂ ಅವಳಿಯೇನೋ ಅನ್ನುವಂತೆ ಕಾಣಿಸುತ್ತಿದ್ದರು. ಆದರೆ ಇಬ್ಬರ ಮನಸ್ಥಿತಿಯೂ ಬೇರೆ ಬೇರೆಯಾಗಿತ್ತು. ಮೆಕ್ಕಾಕ್ಕೆ ಹೋಗುವ ಸಲುವಾಗಿ ಅವರಿಬ್ಬರ ಪಾಸ್ ಪೋರ್ಟ್ ತಯಾರಿಸಲು ನಾನು ಪ್ರಯತ್ನಿಸಿದ್ದೇನೋ ನಿಜ. ಆದರೆ ಆ ದಾಖಲೆ ಪತ್ರಗಳು ರೂಪುಗೊಳ್ಳಲು ಕೆಲ ಸಮಯ ತಗುಲಿದ್ದವು. ಆಗೆಲ್ಲ ತಮ್ಮ ಸಲ್ಮಾನ್ ನನ್ನ ಬಳಿ ಬಂದು ಕೂಗಾಡಿ ಹೋಗಿದ್ದ. ಬೇಕಂತಲೇ ಪಾಸ್ ಪೋರ್ಟ್ ನಿಧಾನವಾಗಿ ಆಗುತ್ತಿದೆ. ನಾವು ಮೆಕ್ಕಾಕ್ಕೆ ಹೋಗಬಾರದು ಎನ್ನುವ ಉದ್ದೇಶ ಇದ್ದ ಹಾಗಿದೆ ಹಾಗೆ ಹೀಗೆ ಎನ್ನುವಂತೆಲ್ಲ ಗಲಾಟೆ ಮಾಡಿದ್ದ. ನಾನು ಆತನನ್ನು ಸಮಾಧಾನ ಪಡಿಸಲು ಹೈರಾಣಾಗಿದ್ದೆ. ಆದರೆ ಆಮೀರ್ ಬಂದು ತಮ್ಮನನ್ನು ಸಮಾಧಾನ ಮಾಡಿ ಕರೆದೊಯ್ದಿದ್ದ.
                ಕೊನೆಗೊಂದು ದಿನ ಪಾಸ್ ಪೋರ್ಟ್ ಆಗಿಯೇ ಬಿಟ್ಟಿತು. ಆ ದಿನ ಮಾತ್ರ ಸಲ್ಮಾನ್ ನನ್ನ ಬಳಿ ಬಂದು ಖುಷಿಯಿಂದ ಹೇಳಿಕೊಂಡಿದ್ದ. ಮೆಕ್ಕಾಕ್ಕೆ ಹೋಗಿ ಧರ್ಮೋಪದೇಶ ಪಡೆದುಕೊಂಡು ಬಂದು ನಮ್ಮೂರಿನಲ್ಲಿ ತಾನೊಂದು ಮೌಲ್ವಿಯಾಗುತ್ತೇನೆ ನೋಡುತ್ತಿರಿ ಎಂದು ಹೇಳಿದ್ದ ಸಲ್ಮಾನ್ ಸ್ವಲ್ಪ ವ್ಯಗ್ರನಾಗಿಯೂ ಮಾತನಾಡಿದ್ದ. ಪಾಸ್ ಪೋರ್ಟ್ ಸಿಕ್ಕಿದ್ದಾಗಿದೆ. ಇನ್ನೇಕೆ ನಿನ್ನ ಹಂಗು ಬೇಕು ಎನ್ನುವಂತಿತ್ತು ಸಲ್ಮಾನ್ ನ ವರಸೆ. ನಾನು ಹೆಚ್ಚು ಮಾತನಾಡದೇ ಸುಮ್ಮನುಳಿದಿದ್ದೆ. ಯಥಾಪ್ರಕಾರ ಆಮಿರ್ ಬಂದು ನನ್ನ ಬಳಿ ಕ್ಷಮೆ ಕೋರಿ ಹೋಗಿದ್ದ ಎನ್ನಿ.
              ಇದಾಗಿ ಹಲವು ದಿನಗಳು ಕಳೆದಿದ್ದವು. ಅಣ್ಣ-ತಮ್ಮಂದಿರ ಸುದ್ದಿ ಇರಲಿಲ್ಲ. ಬಹುಶಃ ಹಜ್ ಯಾತ್ರೆಗೆ ಹೋಗಿದ್ದಾರೇನೋ ಅಂದುಕೊಂಡಿದ್ದೆ. ತಿಂಗಳುಗಟ್ಟಲೆ ದಿನಗಳನ್ನು ಕಳೆದ ನಂತರ ಅದೊಂದು ದಿನ ಆ ಅಣ್ಣ-ತಮ್ಮಂದಿರಿ ಸಿಕ್ಕಿದ್ದರು. `ಏನ್ರಪ್ಪಾ.. ನಾಪತ್ತೆಯಾಗಿದ್ದಿರಿ..? ಯಾವ ಕಡೆ ಹೋಗಿದ್ರಿ?' ಎಂದು ಕೇಳಿದ್ದೆ. ಕೊನೆಗೆ ಅವರ ಪೈಕಿ ಸಲ್ಮಾನ್ ಖುಷಿಯಿಂದ ಮಾತನಾಡಿದ್ದ. ಆದರೆ ಆಮೀರ್ ಮಾತನಾಡಿರಲಿಲ್ಲ. ಸಲ್ಮಾನ್ ನನ್ನ ಬಳಿ ಹಜ್ ಯಾತ್ರೆಗೆ ಹೋಗಿ ಬಂದೆವೆಂದೂ ಹಾಜಿಗಳೆನ್ನಿಸಿಕೊಂಡೆವೆಂದೂ ಹೇಳಿದ್ದ. ಫಾಸಪೋರ್ಟ್ ಮಾಡಿಸಿಕೊಡಲು ನಾನು ಸಹಾಯ ಮಾಡಿದ್ದಕ್ಕಾಗಿಯೇ ಹಜ್ ಯಾತ್ರೆ ಸಾಧ್ಯವಾಯಿತು ಎಂದೂ ಹೇಳಿದ್ದ. ಯಾವಾಗಲೂ ನನ್ನ ಬಳಿ ಪ್ರೀತಿಯಿಂದ ಮಾತನಾಡಿ, ಖುಷಿಯಿಂದ ಕಳೆಯುತ್ತಿದ್ದ ಆಮೀರ್ ನನ್ನನ್ನು ಮಾತನಾಡಿಸದೇ ಸಿಟ್ಟಿನ ಮುಖಭಾವದಿಂದ ಹೋಗಿದ್ದು ನನಗೆ ವಿಚಿತ್ರವೆನ್ನಿಸಿತ್ತು. ನನ್ನ ಜೊತೆಗೆ ಸದಾಕಾಲ ಜಗಳಕ್ಕೆ ನಿಲ್ಲುತ್ತಿದ್ದ ಸಲ್ಮಾನ್ ಹಳೆಯ ಕಾಲದ ಯಾವುದೋ ಮಿತ್ರನಂತೆ ಮಾತನಾಡಿದ್ದು, ಆದರಿಸಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು.
               ನಂತರದ ದಿನಗಳಲ್ಲಿ ಮಾತ್ರ ಬಹಳ ವಿಚಿತ್ರ ಘಟನೆಗಳು ಜರುಗಿದ್ದವು. ಆಮೀರ್ ಹಾಗೂ ಸಲ್ಮಾನ್ ವಾಸವಾಗಿದ್ದ ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಮೊದಲು ಸಲ್ಮಾನ್ ಯಾವ ರೀತಿಯಲ್ಲಿ ತನ್ನ ಧರ್ಮದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದನೋ ಈಗ ಆಮೀರ್ ಅದೇ ಕೆಲಸಕ್ಕೆ ಮುಂದಾಗಿದ್ದ. ಸಲ್ಮಾನ್ ತನ್ನ ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದನಾದರೂ, ವಾದಕ್ಕೆ ಸೀಮಿತನಾಗಿದ್ದನಾದರೂ ಆಮೀರ್ ಮಾತ್ರ ಇನ್ನೂ ಹಲವಾರು ಹೆಜ್ಜೆ ಮುಂದಕ್ಕೆ ಸಾಗಿದ್ದ. ಆತ ಯಾರ ಮಾತನ್ನೂ ಕೇಳದೇ ಇರುವ ಹಂತವನ್ನು ತಲುಪಿದ್ದ. ಅದಕ್ಕೆ ಬದಲಾಗಿ ಸಲ್ಮಾನ್ ಮಾತ್ರ ಸಾಮಾಜಿಕವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಆರಂಭಿಸಿದ್ದ.
           
***

              ಅದೊಂದು ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ನನಗೆ ಸುದ್ದಿಯೊಂದು ಬಂದಿತ್ತು. ಆಮೀರ್ ಖಾನ್ ಮನೆಯ ಮೇಲೆ ಭಯೋತ್ಪಾದನಾ ನಿಗ್ರಹ ದಳದವರು ಧಾಳಿ ಮಾಡಿದ್ದಾರೆ. ಆಮೀರ್ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಬಂದೂಕುಗಳು, ಪಿಸ್ತೂಲುಗಳು ಸಿಕ್ಕಿವೆಯಂತೆ. ಮನೆಯ ಯಜಮಾನನಾದ ಆಮೀರ್ ಹಾಗೂ ಆತನ ತಮ್ಮ ಸಲ್ಮಾನ್ ಇಬ್ಬರನ್ನೂ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರಂತೆ ಎಂಬ ಸುದ್ದಿ ಕೇಳಿಬಂದಿತ್ತು. ಅದಾದ ಮರುದಿನವೇ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ನನ್ನ ಮನೆಯ ಕದವನ್ನೂ ತಟ್ಟಿದ್ದರು. ನಾನು ಈಗ ಮಾತ್ರ ಭಯಗೊಂಡಿದ್ದೆ. ಅಧಿಕಾರಿಗಳು ನನ್ನನ್ನು ಸೀದಾ ಅವರ ಕಚೇರಿಗೆ ಕರೆದೊಯ್ದಿದ್ದರು. ಸದಾ ಧರ್ಮದ ಪರವಾಗಿ ಮಾತನಾಡಿ ಗಲಾಟೆಗೆ ತಯಾರಾಗುತ್ತಿದ್ದ ಸಲ್ಮಾನ್ ಏನೋ ಭಾನಗಡಿ ಮಾಡಿರಬೇಕು ಎಂದುಕೊಂಡಿದ್ದೆ.
             ಕರೆದೊಯ್ದವರೇ ನನ್ನ ಬಳಿ ಕೇಳಿದ್ದಿಷ್ಟು. ಆಮೀರ್ ಹಾಗೂ ಸಲ್ಮಾನ್ ಇಬ್ಬರೂ ಹಜ್ ಯಾತ್ರೆ ಮಾಡಲು ಅನುಕೂಲವಾಗುವಂತೆ ಪಾಸಪೋರ್ಟ್ ಮಾಡಿಸಿಕೊಟ್ಟಿದ್ದು, ಅದಕ್ಕೆ ಸಹಾಯ ಮಾಡಿದ್ದು ನಾನಾಗಿದ್ದೆ. ಅದನ್ನು ಯಾವ ಕಾರಣಕ್ಕೆ ಮಾಡಿಸಿಕೊಟ್ಟಿದ್ದೆಂದು ಕೇಳಿದ್ದರು. ನಾನು ಎಲ್ಲ ವಿವರಗಳನ್ನೂ ಹೇಳಿದ್ದೆ. ಕೊನೆಗೆ ನನ್ನ ಮಾತನ್ನು ಅವರು ನಂಬಿದರೋ ಬಿಟ್ಟರೋ ಎನ್ನುವುದು ಗೊತ್ತಾಗಲಿಲ್ಲ. ಆದರೆ ನನ್ನನ್ನು ವಾಪಾಸು ಹೋಗುವಂತೆ ಹೇಳಿದ್ದರಿಂದ ನಾನು ನಿರಾಳನಾಗಿದ್ದೆ. ಹೋಗುವ ಮುನ್ನ ಅಧಿಕಾರಿಗಳ ಬಳಿ ಬಂಧನಕ್ಕೊಳಪಟ್ಟಿರುವ ಆಮೀರ್ ಹಾಗೂ ಸಲ್ಮಾನ್ ಅವರನ್ನು ಮಾತನಾಡಿಸಬಹುದೇ ಎಂದು ಹೇಳಿದ್ದೆ. ಅದಕ್ಕವರು ಸಾಕಷ್ಟು ಫಾರ್ಮುಗಳ ಮೇಲೆ ಸಹಿ ಹಾಕಿಸಿಕೊಂಡು ಒಪ್ಪಿಗೆ ಸೂಚಿಸಿದ್ದರು.
          ದೊಡ್ಡ ಜೈಲಿನಲ್ಲಿ ಎರಡು ಪ್ರತ್ಯೇಕ ಕೋಣೆಗಳಲ್ಲಿ ಆಮೀರ್ ಹಾಗೂ ಸಲ್ಮಾನ್ ರನ್ನು ಕೂಡಿ ಹಾಕಲಾಗಿತ್ತು. ಅವರು ಇದ್ದ ಸ್ಥಿತಿಯನ್ನು ಗಮನಿಸಿದರೆ ಸತ್ಯವನ್ನು ಬಾಯಿ ಬಿಡಿಸುವ ಸಲುವಾಗಿ ಸಾಕಷ್ಟು ಚಿತ್ರಹಿಂಸೆ ನೀಡಿರುವುದು ಗಮನಕ್ಕೆ ಬರುತ್ತಿತ್ತು. ನಾನು ಸೀದಾ ಆಮೀರ್ ಇದ್ದ ಕೋಣೆಯತ್ತ ಹೋದೆ. ಆಮೀರನಿಗೆ ನಾನು ಬರುತ್ತಿರುವುದು ಕಾಣಿಸಿತ್ತು. ಆದರೆ ನನ್ನ ಜೊತೆಗೆ ಮಾತನಾಡಲು ಸಿದ್ಧನಿರದ ಆಮೀರ್ ಮುಖ ತಿರುಗಿಸಿಕೊಂಡ. ಕೊನೆಗೆ ಸಲ್ಮಾನ್ ಬಳಿಗೆ ಹೋದೆ. ಸಲ್ಮಾನ್ ನನ್ನನ್ನು ನೋಡಿದವನೇ ಕಣ್ಣಿನಲ್ಲಿ ನೀರು ತಂದುಕೊಂಡು `ಮಾಫ್ ಕರೋ. ನಾನು ಏನೂ ಧೋಖಾ ಮಾಡಿಲ್ಲ. ನನ್ನನ್ನು ಇಲ್ಲಿ ಸುಮ್ಮನೇ ಸಿಕ್ಕಿಸಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ಬಿಡಿಸಿ ಮಾರಾಯ್ರೇ..' ಎಂದು ಹಲುಬಲು ಆರಂಭಿಸಿದ. ನನಗೆ ಮತ್ತೆ ವಿಚಿತ್ರವೆನ್ನಿಸಿತ್ತು.
            `ಏನಾಗುತ್ತದೋ ಗೊತ್ತಿಲ್ಲ. ಆದರೆ ಇದೆಲ್ಲ ಹೇಗಾಯಿತು? ಇದಕ್ಕೆಲ್ಲ ಏನು ಕಾರಣ? ನಿಮ್ಮ ಮನೆಯಲ್ಲಿ ಭಯೋತ್ಪಾದಕ ವಸ್ತುಗಳು ಸಿಗುತ್ತವೆ ಎಂದರೆ ಹೇಗೆ ಸಾಧ್ಯ? ನೋಡಿ ನಿಮಗೆ ಪಾಸ್ ಪೋರ್ಟ್ ಮಾಡಿಸಿಕೊಡಲು ಸಹಾಯ ಮಾಡಿದ ನನ್ನ ತಲೆಗೂ ಇದು ಸುತ್ತಿಕೊಳ್ಳುತ್ತಿದೆ..' ಎಂದು ಸಿಟ್ಟಿನಿಂದ ನುಡಿದೆ.
            `ಭಾಯ್.. ಇದು ನನ್ನ ಕೆಲಸವಲ್ಲ ಭಾಯ್. ಇದಕ್ಕೂ ನನಗೂ ಏನೂ ಸಂಬಂಧವಿಲ್ಲ. ಇದೆಲ್ಲ  ಆಮೀರ್ ನ ಕೆಲಸ. ನಾನು ಯಾವುದಕ್ಕೂ ಸಂಬಂಧ ಇಲ್ಲದವನು. ಆದರೆ ಆಮೀರ್ ನಿಂದಾಗಿ ನಾನೂ ಈಗ ಜೈಲುಪಾಲಾಗುವ ಪರಿಸ್ಥಿತಿ ಬಂದಿತು. ಅವನಿಂದಲೇ ನಿಮಗೂ ಕೆಟ್ಟ ಹೆಸರು ಬಂದಿತು ನೋಡಿ.. ಛೇ..' ಎಂದು ತಲೆ ಕೊಡವಿದ ಸಲ್ಮಾನ್.
            `ಆಮೀರ್..? ಆತ ಹೀಗೆ ಮಾಡಿದನಾ? ಹೇಗೆ ಸಾಧ್ಯ? ಮತ್ತೆ ಆಗ ಅಷ್ಟೆಲ್ಲ ಒಳ್ಳೆಯವನಾಗಿದ್ದನಲ್ಲ.. ಹಜ್ ಯಾತ್ರೆ ಮಾಡಿದ ನಂತರ ಏನಾಯಿತು ನಿಮಗೆ?' ಎಂದು ಅಚ್ಚರಿ, ದುಗುಡ ಹಾಗೂ ಕುತೂಹಲದಿಂದ ಕೇಳಿದ್ದೆ.
           `ಅಯ್ಯೋ ಅದೊಂದು ದೊಡ್ಡ ಕಥೆ. ಹಜ್ ಯಾತ್ರೆಗೆ ಮುನ್ನ ನಾನು ಉಗ್ರವಾದ ಆಲೋಚನೆಗಳನ್ನು ಹೊಂದಿದ್ದೇನೋ ನಿಜ. ನನ್ನಣ್ಣ ಆಮೀರ್ ಒಳ್ಳೆಯವನಾಗಿದ್ದಿದ್ದೂ ನಿಜ. ಆದರೆ ಅಲ್ಲಿಗೆ ಹೋದ ಮೇಲೆಯೇ ನಮ್ಮಲ್ಲಿ ಬದಲಾವಣೆಗಳು ಜರುಗಿದ್ದು ನೋಡಿ. ಹೇಗೋ ಇದ್ದ ಆತ ಹೇಗೋ ಆದ. ಮತ್ತೆ ಇನ್ನು ಹೇಗೋ ಇದ್ದ ನಾನು ಹೀಗೆ ಆಗಿದ್ದೇನೆ ನೋಡಿ..' ಎಂದು ಹಲುಬಿದ ಸಲ್ಮಾನ್.
           `ಅರ್ಥವಾಗುತ್ತಿಲ್ಲ.. ಬಿಡಿಸಿ ಹೇಳು ಮಾರಾಯಾ.' ಎಂದೆ ನಾನು
           `ನಿಮ್ಮ ಧರ್ಮದಲ್ಲಿ ಕಾಶೀ ಯಾತ್ರೆಯನ್ನು ಹೇಗೆ ಮಾಡುತ್ತೀರೋ ಹಾಗೆ ನಮ್ಮ ಧರ್ಮದಲ್ಲಿ ಮೆಕ್ಕಾ ಯಾತ್ರೆ ಮಾಡುತ್ತೇವೆ. ಕಾಶಿ ನಿಮಗೆ ಪವಿತ್ರ. ನಮಗೆ ಮೆಕ್ಕಾ ಹಾಗೂ ಮದೀನಾ ಯಾತ್ರೆ. ಇದನ್ನೇ ಹಜ್ ಯಾತ್ರೆ ಎಂದು ಕರೆಯಲಾಗುತ್ತದೆ. ಹಜ್ ಯಾತ್ರೆ ಮಾಡಿದವರನ್ನು ಹಾಜಿ ಎಂದೂ ಹೇಳಲಾಗುತ್ತದೆ. ಹೀಗೆ ಹಜ್ ಯಾತ್ರೆಗೆ ನಮ್ಮಂತೆ ಕೋಟ್ಯಂತರ ಜನರು ದೇಶ ವಿದೇಶಗಳಿಂದ ಬರುತ್ತಾರೆ. ನಾವು ಕೂಡ ಹೋದ್ವಿ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಅಲ್ಲಿಂದಲೇ ಎಲ್ಲ ಬದಲಾಗಿದ್ದು ನೋಡಿ.' ಎಂದ ಸಲ್ಮಾನ್. `ಅಂದರೆ? ಏನಾಯಿತು ಅಲ್ಲಿ?' ನಾನು ನಡುವೆ ಬಾಯಿ ಹಾಕಿ ಕೇಳಿದೆ.
            `ಅಲ್ಲಿ ಎಲ್ಲಾ ರಾಷ್ಟ್ರಗಳ ಜನರೂ ಬರುತ್ತಾರೆ ಎಂದೆನಲ್ಲ. ಅಣ್ಣ ಆಮೀರ್ ಗೆ ಹೇಗೋ ಗೊತ್ತಿಲ್ಲ ಪಾಕಿಸ್ತಾನದಿಂದ ಬಂದಿದ್ದ ಕೆಲವು ಭಯೋತ್ಪಾದಕರ ಪರಿಚಯವಾಗಿಬಿಟ್ಟಿತ್ತು. ಸೌಮ್ಯನಾಗಿ, ಎಲ್ಲರಿಗೂ ಬೇಕಾಗಿ ಜೀವಿಸುತ್ತಿದ್ದ ಆತನ ತಲೆಯನ್ನು ಭಯೋತ್ಪಾದಕರು ವ್ಯವಸ್ಥಿತವಾಗಿ ತಿರುಗಿಸಿಬಿಟ್ಟಿದ್ದರು. ಪರಿಣಾಮವಾಗಿ ಆತನ ತನ್ನ ಧರ್ಮವನ್ನು ಬಿಟ್ಟು ಉಳಿದೆಲ್ಲ ಧರ್ಮವನ್ನೂ ದ್ವೇಷಿಸುವ ಹಂತಕ್ಕೆ ತಲುಪಿದ್ದ. ಧರ್ಮದ ಸ್ಥಾಪನೆಗಾಗಿ ಧರ್ಮಯುದ್ಧ ಮಾಡಲೂ ಸಿದ್ಧ ಎಂದು ಹೇಳುವ ಮಟ್ಟಕ್ಕೆ ಆತ ಬಂದು ತಲುಪಿದ್ದ. ಇದೇ ಕಾರಣಕ್ಕೆ ಈಗ ಆತ ಯಾರ ಬಳಿಯೂ ಹೆಚ್ಚು ಮಾತನಾಡುವುದಿಲ್ಲ. ಎಲ್ಲರನ್ನೂ ದ್ವೇಷ ಮಾಡುತ್ತಾನೆ. ಎಲ್ಲರ ಮೇಲೂ ಕೆಂಡ ಕಾರುತ್ತಾನೆ. ಇದೀಗ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿ ಇರಿಸಿಕೊಳ್ಳುವುದಕ್ಕೂ ಇದೇ ಕಾರಣ. ಈಗ ನೋಡಿ ಇದು ಎಲ್ಲಿಗೆ ಬಂದು ತಲುಪಿದೆ ಅಂತ..' ಎಂದ ಸಲ್ಮಾನ್.
            ನನ್ನಲ್ಲಿ ಅಚ್ಚರಿಯಿತ್ತು. ಎಲ್ಲರನ್ನೂ ಸ್ನೇಹದಿಂದ ಕಾಣುತ್ತಿದ್ದ, ಎಲ್ಲಾ ಧರ್ಮದವರನ್ನೂ ಪ್ರೀತಿಯಿಂದ ಸಲಹುತ್ತಿದ್ದ ಆಮೀರ್ ನಲ್ಲಿ ಇಂತಹ ಬದಲಾವಣೆಯಾಗಿದೆ ಎಂದರೆ ಸಾಮಾನ್ಯವೇನಲ್ಲ. ಆಮೀರ್ ಉಗ್ರನಾದ ಎನ್ನುವುದನ್ನು ನನ್ನ ಮನಸ್ಸು ಹೇಗೆ ನಂಬಲು ತಯಾರಿರಲಿಲ್ಲವೋ ಅದೇ ರೀತಿ ಉಗ್ರ ಗುಣಗಳನ್ನು ಹೊಂದಿದ್ ಸಲ್ಮಾನ್ ಹೇಗೆ ಸೌಮ್ಯನಾದ ಎನ್ನುವುದನ್ನೂ ನಂಬಲು ಸಿದ್ಧವಿರಲಿಲ್ಲ. ಕುತೂಹಲ ತಡೆಯಲಾಗದೇ ಕೇಳಿಯೂಬಿಟ್ಟೆ. `ಹಾಗಾದರೆ ನೀನು ಇಷ್ಟೆಲ್ಲ ಸುಮ್ಮನಾಗಲು, ನಿನ್ನೊಳಗಿನ ಉಗ್ರ ಗುಣಗಳು ಕಾಣೆಯಾಗಲು ಕಾರಣ ಏನು? ನಿನಗೂ ಉಗ್ರರ ಗುಂಪು ಸಿಗಲಿಲ್ಲವಾ? ನಿನ್ನನ್ನು ಮನಃಪರಿವರ್ತನೆ ಮಾಡಲು ಅವರು ಪ್ರಯತ್ನಿಸಲಿಲ್ಲವಾ?' ಎಂದು ಕೇಳಿದೆ.
            ಒಮ್ಮೆ ನಕ್ಕ ಸಲ್ಮಾನ್ `ಭಾಯ್.. ನಿಮ್ಮ ಧರ್ಮದಲ್ಲಿ ನೀವು ಕಾಶಿಗೆ ಹೋಗುತ್ತೀರಾ. ಕಾಶಿಗೆ ಹೋಗಿ ಬಂದವರನ್ನು ಸರಿಯಾಗಿ ಮಾತನಾಡಿಸಿದರೆ ಅವರಲ್ಲಿ ಅದೇನೋ ಒಂದು ರೀತಿಯ ಭಾವ ಕಾಡುತ್ತಿರುತ್ತದೆ. ಬೌದ್ಧುಕವಾಗಿ ಔನ್ನತ್ಯ ಸಾಧಿಸಿರುತ್ತಾರೆ. ತಾವು ಇದುವರೆಗೂ ಮಾಡಿದ್ದು ಸಾಕು. ಇನ್ನಾದರೂ ಸಮಾಜಮುಖಿಯಾಗೋಣ, ಜನರಿಗೆ ಒಳ್ಳೆಯದನ್ನು ಮಾಡೋಣ ಎಂದುಕೊಂಡು ಜೀವನ ನಡೆಸುತ್ತಾರೆ. ನನಗೂ ಕೂಡ ಹಾಗೆಯೇ ಆಯಿತು. ನಮ್ಮ ಧರ್ಮದ ಅತ್ಯುನ್ನತ ಕ್ಷೇತ್ರಕ್ಕೆ ಹೋದ ನನಗೆ ಎಲ್ಲ ಆಸೆಗಳೂ ಸಂಪೂರ್ಣವಾಗಿ ಕರಗಿಬಿಟ್ಟವು. ಯಾಕೋ ನಾನು ಇದುವರೆಗೂ ಸುಮ್ಮನೇ ಧರ್ಮ-ಧರ್ಮ ಎಂದು ಹೊಡೆದಾಟ ಮಾಡುತ್ತಿದ್ದೆ. ಆದರೆ ಅದರಿಂದ ನನಗೆ ಸಿಕ್ಕಿದ್ದೇನು ಎನ್ನಿಸಿತು. ಸಮಾಜದಿಂದಲೂ ದೂರವಾದೆ. ನನ್ನನ್ನು ಕಂಡರೆ ಎಲ್ಲರೂ ಹೆದರಲು ಆರಂಭಿಸಿದರು. ನಾನು ನನ್ನ ಮನೆಯಲ್ಲಿರುವ ನನ್ನ ಧರ್ಮದ ಗೃಂಥವನ್ನು ಅದೆಷ್ಟು ಸಹಸ್ರ ಸಾರಿ ಓದಿದ್ದೆನೊ. ಆದರೆ ಅದರಲ್ಲಿನ ವಾಕ್ಯಗಳು ಸಂಪೂರ್ಣ ಅರ್ಥವಾಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಹೀಗಾಗಿ ಧರ್ಮ ಹಾಗೆ ಹೇಳುತ್ತಿದೆ, ಹೀಗೆ ಹೇಳುತ್ತದೆ ಎಂದೆಲ್ಲ ವಾದಿಸುತ್ತಿದೆ. ಆದರೆ ಯಾತ್ರೆಗೆ ಹೋದ ನನಗೆ ಒಬ್ಬ ಪ್ರಸಿದ್ದ ಮೌಲ್ವಿಗಳ ದರ್ಶನ ಭಾಗ್ಯ ಸಿಕ್ಕಿತು. ಅವರು ನನಗೆ ನನ್ನ ಧರ್ಮದ ಗೃಂಥದ ಎಳೆ ಎಳೆಯನ್ನೂ ಸಂಪೂರ್ಣವಾಗಿ ವಿವರಿಸಿದರು. ನನ್ನ ಧರ್ಮ ಉಗ್ರವಾದುದಲ್ಲ. ಯುದ್ಧ ಮಾಡಿ ಎಂದು ಹೇಳುವುದಿಲ್ಲ. ಬದಲಾಗಿ ಪ್ರೀತಿಯನ್ನು ಹಂಚಿ ಎಂದು ಹೇಳುತ್ತದೆ ಎಂದರು. ನಾನು ಎಷ್ಟು ತಪ್ಪು ಮಾಡುತ್ತಿದ್ದೆ ಎನ್ನುವುದು ಅರಿವಾಯಿತು. ತಕ್ಷಣವೇ ನಾನು ಬದಲಾಗಲು ನಿರ್ಧಾರ ಮಾಡಿದೆ. ನನ್ನೊಳಗಿನ ಉಗ್ರ ಹಾಗೇ ಕಾಣೆಯಾಗಿದ್ದ..' ಎಂದ ಸಲ್ಮಾನ್.
               ನನ್ನಲ್ಲಿ ಅಚ್ಚರಿಯಿತ್ತು. ಆತನೇ ಮುಂದುವರೆದ `ನನಗೂ ಅನೇಕ ಜನರು ಬಂದು ಹಾಗೆ ಮಾಡು ಹೀಗೆ ಮಾಡು ಎಂದರು. ಭಯೋತ್ಪಾದಕ ಸಂಘಟನೆಗೆ ಸೇರಲು ಆಹ್ವಾನವನ್ನೂ ನೀಡಿದ್ದರು. ಆದರೆ ಅವರ ಬಳಿ ನಾನು ಪ್ರೀತಿಯ ಪಾಠವನ್ನು ಹೇಳಿದೆ. ಇದರಿಂದಾಗಿ ಯಾತ್ರೆಯ ಮಧ್ಯದಲ್ಲಿಯೇ ನನ್ನ ಮೇಲೆ ಹಲ್ಲೆಯೂ ನಡೆಯಿತು. ಆದರೆ ಮೌಲ್ವಿಗಳ ಸಹಾಯದಿಂದ ನಾನು ಬದುಕಿದೆ. ಆದರೆ ನನ್ನಣ್ಣ ಸಂಪೂರ್ಣವಾಗಿ ಅವರ ವಶಕ್ಕೆ ಸಿಲುಕಿದ್ದ. ಆತನನ್ನು ಬದಲಾಯಿಸಲು ಪ್ರಯತ್ನಿಸಿ ಸೋತು ಹೋದೆ. ಮುಂದೊಂದು ದಿನ ಶಸ್ತ್ರಾಸ್ತ್ರಗಳನ್ನೂ ತಂದು ಇರಿಸಿದ. ಇದನ್ನು ನಾನು ಉಗ್ರವಾಗಿ ವಿರೋಧ ಮಾಡಿದ್ದೆ. ಆದರೆ ಅಣ್ಣ ನನ್ನ ಮಾತು ಕೇಳಲಿಲ್ಲ. ಕೊನೆಗೊಂದು ದಿನ ನಾನೇ ಭಯೋತ್ಪಾದನೆ ನಿಗ್ರಹ ದಳದವರಿಗೆ ಮಾಹಿತಿಯನ್ನೂ ನೀಡಿದೆ. ಈಗ ನೋಡಿ ದಳದ ಅಧಿಕಾರಿಗಳು ನನ್ನ ಮಾತನ್ನು ಕೇಳುತ್ತಿಲ್ಲ. ನಾನೇ ಮಾಹಿತಿ ನೀಡಿದವನು ಎಂದರೂ ನಂಬುತ್ತಿಲ್ಲ. ನನ್ನನ್ನೂ ಭಯೋತ್ಪಾದಕ ಎಂಬಂತೆ ಕಾಣುತ್ತಿದ್ದಾರೆ' ಎಂದ.
             ಸಲ್ಮಾನ್ ಇಂತಹದ್ದೊಂದು ಮಾಹಿತಿ ನೀಡುತ್ತಾನೆ ಎಂದು ನಾನು ಖಂಡಿತವಾಗಿಯೂ ಅಂದಾಜು ಮಾಡಿರಲಿಲ್ಲ. ದೇಶದಾದ್ಯಂತ ಇರುವ ನಮ್ಮದೇ ದೇಶದ ಗುಪ್ತಚರರು ಈ ಅಣ್ಣತಮ್ಮಂದಿರ ಮೇಲೆ ಕಣ್ಣಿರಿಸಿದ್ದರು. ಅವರ ತನಿಖೆಗೆ ಸಿಕ್ಕಿಬಿದ್ದಿದ್ದಾರೆ ಎಂದುಕೊಂಡಿದ್ದೆ. ಆದರೆ ಸಲ್ಮಾನ್ ಮಾಹಿತಿ ನೀಡಿದ್ದಾನೆ ಎನ್ನುವುದು ನನ್ನಲ್ಲಿ ಶಾಕ್ ನೀಡಿತ್ತು. ಸಲ್ಮಾನ್ ಇಂತಹ ಕೆಲಸ ಮಾಡಿದ್ದಾನೆ ಎನ್ನುವುದು ನನ್ನ ನಿರೀಕ್ಷೆಗೆ ನಿಲುಕದ ಸಂಗತಿಯಾದ್ದರಿಂದ ಒಮ್ಮೆ ಬೆಚ್ಚಿದ್ದೆ. ನಾನು ಮಾತುಕತೆಗೆ ಆಡಲು ಬಂದಾಗ ನನ್ನ ಜೊತೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬ ಬಂದಿದ್ದ. ಆತ ನಮ್ಮ ಮಾತುಕತೆಗಳನ್ನೆಲ್ಲ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಸಲ್ಮಾನನ ಮಾತನ್ನು ಕೇಳಿ ಆತನಿಗೂ ಒಮ್ಮೆ ಅಚ್ಚರಿಯಾಗಿದ್ದು ಮುಖಭಾವದಿಂದ ಕಾಣುತ್ತಿತ್ತು.
             `ಒಳ್ಳೆಯ ಕೆಲಸ ಮಾಡಿದ್ದೀಯಾ ಸಲ್ಮಾನ್ ಭಾಯ್. ನಿಜಕ್ಕೂ ನಿನ್ನ ದೇಶಪ್ರೇಮ, ಪ್ರೀತಿಯ ಪಾಠ ಮೆಚ್ಚುವಂತದ್ದು. ನಾನು ಅಧಿಕಾರಿಗಳ ಬಳಿ ಹೇಳುತ್ತೇನೆ. ನನ್ನ ಮಾತನ್ನು ಕೇಳಿದರೆ ಆಯಿತು. ಇಲ್ಲವಾದರೆ ಮುಂದೆ ಏನಾಗುತ್ತದೆಯೋ ನೋಡೋಣ. ಆದರೆ ನೀನು ಹೇಳಿದ ಮಾತುಗಳಿದೆಯಲ್ಲ. ಇದನ್ನು ಜಗತ್ತು ಅನುಸರಿಸಿದರೆ ಮಾತ್ರ ಎಷ್ಟು ಒಳ್ಳೆಯದು ಅಲ್ಲವಾ. ದ್ವೇಷದಿಂದ, ಭಯದಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ಸಾಧ್ಯವಿದೆ. ನನಗೆ ಅರ್ಥವಾಗುತ್ತದೆ. ನಿನಗೆ ಅರ್ಥವಾಗುತ್ತದೆ. ಆದರೆ ಜಗತ್ತಿಗೆ ಮಾತ್ರ ಇದು ಅರ್ಥವಾಗುತ್ತಿಲ್ಲ ನೋಡು.' ಎಂದೆ. ಮುಂದಿನ ಕೆಲ ಘಳಿಗೆಯಲ್ಲಿ ಆತನ ಜೊತೆ ಮಾತುಕತೆಯೂ ನಡೆಯಿತು. ಅಷ್ಟರಲ್ಲಿ ನನ್ನ ಜೊತೆಗೆ ಇದ್ದ ಅಧಿಕಾರಿ ಸನ್ನೆ ಮಾಡಿದ. ಮಾತು ಸಾಕು ಎನ್ನುವಂತೆ ಹೇಳಿ ನನ್ನನ್ನು ಹೊರಕ್ಕೆ ಹೋಗುವಂತೆ ತಿಳಿಸಿದ. ನಾನು ಸಲ್ಮಾನನನ್ನು ಬೀಳ್ಕೊಟ್ಟೆ. ಸಲ್ಮಾನನ ಕೋಣೆ ದಾಟಿ ಆಮೀರ್ ಇದ್ದ ಕೋಣೆಯ ಬಳಿ ಬಂದಾಗ ಇದ್ದಕ್ಕಿದ್ದಂತೆ ಆಮೀರ್ `ಧರ್ಮಯುದ್ಧ ಶಾಶ್ವತ. ಧರ್ಮಯುದ್ಧಕ್ಕೆ ಜಯವಾಗಲಿ.' ಎಂದು ದೊಡ್ಡದಾಗಿ ಕೂಗಿದ. ನಾನು ಬೆಚ್ಚಿಬಿದ್ದು ಹೊರಕ್ಕೆ ಬಂದಿದ್ದೆ.

****

            ಇದಾಗಿ ಒಂದು ವಾರ ಕಳೆಯುವಷ್ಟರಲ್ಲಿ ಅಚ್ಚರಿಯ ಸುದ್ದಿಯೊಂದು ಬಂದಿತ್ತು. ಜೈಲಿನಲ್ಲಿ ಸಲ್ಮಾನ್ ತನ್ನ ಅಣ್ಣ  ಆಮೀರನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಅಚ್ಚರಿಯಿಂದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳ ಬಳಿ ಕೇಳಿದಾಗ `ಉಗ್ರನ ಮನಸ್ಸು ಪರಿವರ್ತನೆಗೆ ಪ್ರಯತ್ನ ಮಾಡಿದ್ದ ಸಲ್ಮಾನ್. ಅದರೆ ಆಮೀರ್ ಆ ಮಾತಿಗೆ ಬೆಲೆ ಕೊಡಲಿಲ್ಲ. ಕೊನೆಗೆ ಇಂತಹ ಉಗ್ರ ಮನೋಭಾವದವನು ಇರುವುದಕ್ಕಿಂತ ಸಾಯುವುದೇ ಒಳ್ಳೆಯದು. ಆತನನ್ನು ಸಾಯಿಸಿದರೆ ಜಗತ್ತಿನಲ್ಲಿ ಅದೆಷ್ಟೋ ಅಮಾಯಕರು ನಿಶ್ಚಿಂತೆಯಿಂದ ಇರುತ್ತಾರೆ ಎಂದು ಎಂದು ಪತ್ರ ಬರೆದು ಆಮೀರನನ್ನು ಹತ್ಯೆ ಮಾಡಿದ್ದ. ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ನೋಡಿ..' ಎಂದಿದ್ದರು.
            ಒಂದು ಯಾತ್ರೆ ಇಬ್ಬರಲ್ಲೂ ಎಂತಹ ಬದಲಾವಣೆ ತಂದಿತಲ್ಲ. ಸೌಮ್ಯನಾಗಿದ್ದವನು ಉಗ್ರನಾದ. ಉಗ್ರನಾದವನು ಸೌಮ್ಯಭಾವವನ್ನು ಹೊಂದಿದ. ಒಬ್ಬ ಹಿಂಸೆಯ ಹಾದಿ ಹಿಡಿದರೆ ಇನ್ನೊಬ್ಬ ಪ್ರೀತಿಯ ಹೂವನ್ನು ಮುಡಿದ. ಎಂತಹ ಬದಲಾವಣೆಗಳಲ್ಲವಾ ಎಂದುಕೊಂಡೆ. ಸಲ್ಮಾನ್ ಹಾಗೂ ಆಮೀರ್ ಸಹೋದರರ ಈ ರೀತಿಯ ಬದಲಾವಣೆಗಳು ನನ್ನಲ್ಲೂ ತರಂಗಗಳನ್ನು ಎಬ್ಬಿಸಿದ್ದವು.