Monday, March 2, 2015

ದಾರಿ ಸಾಗುವಾಗ

ದೂರ ಸಾಗುವ ದಾರಿಯಲ್ಲಿ
ಹಿಂತಿರುಗಿ ನೋಡು ಗೆಳೆಯಾ
ಕಾಣುವವು ಕಳೆದ ಹಲವು
ಕಷ್ಟಗಳ ಪರೀಧಿ, ಛಲ, ಗೆಲುವು ||

ದೂರ ಸಾಗಿದಾಗ ಪಡೆದ ಗೆಲುವಿಗೆ
ಸಹಾಯ ಹಲವರದು
ಅವರ ಪ್ರೀತಿಯ ಕಾಣ್ಕೆ
ನಿನ್ನೀ ಗೆಲುವಿನ ಉಡುಗೊರೆ ||

ಗೆದ್ದು ಆಗಸವ ಮುಟ್ಟುವಾಗ
ಏರಿದೇಣಿಯ ಮರೆಯಬೇಡ..
ಕೊನೆಮುಟ್ಟಿ ಗೆದ್ದು ನಿಂತಾಗ
ಕಾಲಕೆಳಗಿನೇಣಿಯ ಒದೆಯಬೇಡ ||

ನೆನಪಿರಲಿ, ತಂದೆ-ತಾಯಿ ಪ್ರೀತಿ
ಬಿದ್ದಾಗಲೆತ್ತಿದವರ ನೆನಪು
ಕೈ ಹಿಡಿದು ನಡೆಸಿದವರು, ಜೊತೆ
ಸಾಕಿ ಬಾಳ ಸಲಹಿದವರು ||

ದೂರ ಸಾಗುವ ದಾರಿಯಲ್ಲಿ
ಎಲ್ಲರ ಜೊತೆ ಇರಲಿ ಗೆಳೆಯಾ.
ಜೊತೆ ಬಂದವರ ತೊರೆಯದೇ
ಅವರ ನೀ ಸಲಹು ಗೆಳೆಯಾ ||

****

(ಈ ಕವಿತೆಯನ್ನು ಬರೆದಿರುವುದು 05-10-2006ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಲಾಗಿದೆ)

Sunday, March 1, 2015

ಹೊಸದಷ್ಟು ಹನಿಗಳು

ವೆಂಕಿಯ ಬೆಂಕಿ

ಭಾರತದ ಅದ್ಭುತ ಬೌಲರ್ ವೆಂಕಿ
ಅವನೆಂದರೆ ಪಾಕಿಸ್ತಾನಕ್ಕೆ ಬೆಂಕಿ |
ವೆಂಕಿಗೆ ಬಂದರೆ ಸಿಟ್ಟು
ಬೀಳುತ್ತಿತ್ತು ಅಮೀರ್ ಸೊಹೈಲ್ ವಿಕೆಟ್ಟು ||

ನಕ್ಷತ್ರಗಳ ಸುತ್ತುವಿಕೆ

ವಿಶ್ವದೆಲ್ಲೆಡೆಯಲ್ಲಿ
ನಕ್ಷತ್ರಗಳು ಸುತ್ತುತ್ತವೆ
ಎಂದು ವಿಜ್ಞಾನಿಗೆ ತಿಳಿದಿದ್ದು ಹೇಗೆ?
ಬಹುಶಃ ಅವನ ಹೆಂಡತಿ
ಲಟ್ಟಣಿಗೆಯಿಂದ ತಲೆಗೆ ಬಡಿದಾಗ
ಸುತ್ತಲೂ ನಕ್ಷತ್ರಗಳು ಸುತ್ತಿರಬೇಕು ||

ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ
ಭಾವನೆಗಳು ಹೊರ ಹೋಗುವ
ಒಂದು way ||

ಬಸ್ಸಿನ ಪರಿಸ್ಥಿತಿ

ನಮ್ಮ ರಾಜ್ಯ ಸಾರಿಗೆಯ ಬಸ್ಸು
ಯಾವಾಗಲೂ ಹೋಗಲು ಬಯಸುತ್ತದೆ ಜೋರು |
ಆದರೆ ಏನು ಮಾಡಿದರೂ
ಸರಿಯಾಗಿ ಬೀಳುವುದೇ ಇಲ್ಲ ಇದರ ಗೇರು ||

ರೈತ

ರೈತನೆಂದರೆ ಬರೀ
ದುಡಿದು ಬೆಳೆಯುವವನಲ್ಲ |
ಕಾಲ ಬಂದಾಗ ಆತ
Riot ಕೂಡ
ಆಗಬಲ್ಲವ ಎಂದರ್ಥ ||


Saturday, February 28, 2015

ಮಲೆನಾಡಿನಲ್ಲೊಂದು ಅಪರೂಪದ ಕೆಂಡ ಹಾಯುವ ಕಾರ್ಯಕ್ರಮ

ಕೆಂಡದ ಮೇಲೆ ನಡೆಯುವುದು ಬಯಲು ಸೀಮೆಯಲ್ಲಿ ಸರ್ವೇ ಸಾಮಾನ್ಯ. ಜಾತ್ರೆಗಳಲ್ಲಿ ಕೆಂದ ಮೇಲೆ ನಡೆಯುವ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಮಲೆನಾಡಿನಲ್ಲಿ ಇದು ಅಪರೂಪ. ಇಂತಹ ಅಪರೂಪದ ಕಾರ್ಯಕ್ರಮ ಸಿದ್ದಾಪುರ ತಾಲೂಕಿನ ಸರಕುಳಿಯಲ್ಲಿ ನಡೆಯಿತು.
ಮೇಲಿನ ಸರಕುಳಿ ಗ್ರಾಮದಲ್ಲಿ ಪ್ರತಿ ವರ್ಷ ಗ್ರಾಮದೇವಿಯ ಸನ್ನಿಧಾನದಲ್ಲಿ ಪರಿವಾರ ದೇವತೆಗಳಿಗೆ ವಾರ್ಷಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಂಜಾನೆ ಪರಿವಾರ ದೇವತೆಗಳ ಪೂಜೆಯಿಂದ ನಡೆದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಇಡೀ ದಿನ ಮುಂದುವರಿದವು. ಮೇಲಿನ ಸರಕುಳಿಯಲ್ಲದೇ ತಟ್ಟೀಕೈ, ಕೆರೆಗದ್ದೆ, ಕಂಚೀಮನೆ, ತ್ಯಾರಗಲ್, ಗೋಳಿಕಟ್ಟಾ, ಮುಚುಗುಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.
                    ಕಳೆದ ಐದು ವರ್ಷಗಳಿಂದ ತಟ್ಟಿಕೈ ಬಳಿಯ ಮೇಲಿನ ಸರಕುಳಿ ಗ್ರಾಮದಲ್ಲಿ ಗ್ರಾಮದೇವಿಯ ವಾರ್ಷಿಕೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕೆಂಡ ಹಾಯುವುದು ನಿಯಮಿತವಾಗಿ ನಡೆಯುತ್ತ ಬಂದಿದೆ. ಮಲೆನಾಡಿನಲ್ಲಿ ಅಪರೂಪ ಎನ್ನಿಸುವ ಕೆಂಡ ಹಾಯುವ ಕಾರ್ಯಕ್ರಮವನ್ನು ನೋಡುವ ಸಲುವಾಗಿಯೇ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಧಗ ಧಗನೆ ಉರಿಯುವ ಕೆಂಡದ ಮೇಲೆ ಯುವಕರು ನಡೆದುಕೊಂಡು ಹೋಗುತ್ತಿದ್ದರೆ ಸೇರಿದ್ದ ಜನರೆಲ್ಲ ದೇವರನ್ನು ಪ್ರಾರ್ಥಿಸುತ್ತ ನಿಲ್ಲುತ್ತಾರೆ. ದೇವರಿಗೆ ನಮಿಸಿ ತಮ್ಮನ್ನು ಕಷ್ಟಗಳಿಂದ ಪಾರುಮಾಡುವಂತೆ ಬೇಡಿಕೊಳ್ಳುತ್ತಾರೆ.
  ಪುರೋಹಿತರ ಸಾನ್ನಿಧ್ಯದಲ್ಲಿ ಚಂಡಿಕಾ ಪಾರಾಯಣ ನಡೆದ ನಂತರ ಮೇಲಿನ ಸರಕುಳಿ ಗ್ರಾಮದಲ್ಲಿಯೇ ಇರುವ 16 ದೇವ ಗಣಗಳನ್ನು ಊರಿನ ತುಂಬೆಲ್ಲ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. ಸ್ಥಳೀಯ ಸುಬ್ರಹ್ಮಣ್ಯ ಕಟ್ಟೆಯ ಮೇಲೆ ದೇವರನ್ನು ಕೂರಿಸಿ ಹಲವಾರು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು. ನಂತರ ಕೆಂಡ ಹಾಯುವ ಸಲುವಾಗಿ ದೊಡ್ಡ ಕಟ್ಟಿಗೆಯ ರಾಶಿಗೆ ಅಗ್ನಿಸ್ಪರ್ಷ ಮಾಡಲಾಯಿತು. ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಚಾಚುತ್ತಿರುವ ಸಂದರ್ಭದಲ್ಲಿಯೇ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮಗಳೂ ನಡೆದವು.
ಅನ್ನ ಸಂತರ್ಪಣೆಯ ನಂತರ ಕೆಂಡ ಹಾಯುವ ಕಾರ್ಯಕ್ರಮ ನಡೆಯಿತು. ಮೆರವಣಿಗೆಯ ಸಂದರ್ಭದಲ್ಲಿ ದೇವರ ಗಣಗಳ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಬಂದಿದ್ದ 16 ಜನ ಯುವಕರೂ ಸೇರಿದಂತೆ 20ಕ್ಕೂ ಅಧಿಕ ಜನರು ಉರಿಯುವ ಕೆಂಡದ ಮೇಲೆ ನಡೆದರು. ಉರಿವ ಕೆಂಡದ ಮೇಲೆ ನಡೆಯುವುದನ್ನು ಅದೆಷ್ಟೋ ಭಕ್ತರು ಕಣ್ತುಂಬಿಕೊಂಡರು. ಸ್ಥಳೀಯ ಗ್ರಾಮದೇವಿಯ ಮಹಿಮೆಯನ್ನು ಕೊಂಡಾಡಿದರು. ನಂತರ ಭಕ್ತರ ಶ್ರೇಯೋಭಿವೃದ್ಧಿಗಾಗಿ ಆಶ್ಲೇಷಾ ಬಲಿ ಹಾಗೂ ನಾಗಾರಾಧನೆ ಕಾರ್ಯಕ್ರಮಗಳು ನಡೆದವು. ನಡುರಾತ್ರಿ 2 ಗಂಟೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮೇಲಿನ ಸರಕುಳಿಯಲ್ಲಿ ಕೆಂಡ ಹಾಯುವ ಕಾರ್ಯಕ್ರಮಕ್ಕೆ ಶತಮಾನಗಳ ಇತಿಹಾಸವಿದೆ. ಸ್ಥಳೀಯರ ಪ್ರಕಾರ ಹಿಂದೆ ಇದೇ ಊರಿನಲ್ಲಿ ಅದ್ಧೂರಿಯಾಗಿ ಕೆಂಡ ಹಾಯುವ ಕಾರ್ಯಕ್ರಗಳು ನಡೆಯುತ್ತಿದ್ದವಂತೆ.
                 ಗ್ರಾಮದೇವಿಗೆ ಭವ್ಯವಾದ ದೇವಸ್ಥಾನವಿದ್ದು ಮೂರ್ನಾಲ್ಕು ದಿನಗಳ ಕಾಲ ಅದ್ಧೂರಿ ಉತ್ಸವ ನಡೆಯುತ್ತಿತ್ತಂತೆ. ಆದರೆ ಕಾಲಾನಂತರದಲ್ಲಿ ದೇವಸ್ಥಾನ ಜೀರ್ಣವಾಯಿತು. ಕ್ರಮೇಣ ಗ್ರಾಮದಲ್ಲಿ ನಡೆಯುತ್ತಿದ್ದ ಉತ್ಸವಗಳೂ ನಿಂತು ಹೋದವು. ಆ ನಂತರ ಊರಿನಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಸಮಸ್ಯೆಗಳ ಪರಿಹಾರಾರ್ಥವಾಗಿ ಐದು ವರ್ಷಗಳ ಹಿಂದೆ ದೇವಸ್ಥಾನವನ್ನು ಮತ್ತೆ ಜೀರ್ಣೋದ್ಧಾರ ಮಾಡಲಾಗಿದೆ. ನಂತರ ನಿಯಮಿತವಾಗಿ ಕೆಂಡ ಹಾಯುವ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅದ್ಧೂರಿಯಾಗಿ ಉತ್ಸವ ನಡೆಸಲಾಗುತ್ತದೆ. ಎರಡು ದಿನಕ್ಕೂ ಹೆಚ್ಚಿನ ಕಾಲ ಕಾರ್ಯಕ್ರಮಗಳನ್ನು ಏರ್ಪಡಿಸುವ ಆಲೋಚನೆ ಇಟ್ಟುಕೊಳ್ಳಲಾಗಿದೆ ಎಂದು ಹೇಳುತ್ತಾರೆ.
ಕಷ್ಟಗಳ ಪರಿಹಾರಕ್ಕೆ, ಸಮಸ್ಯೆಗಳಿಂದ ಬಿಡುಗಡೆ ಪಡೆಯುವ ಸಲುವಾಗಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರ್ನಾಲ್ಕು ಕಡೆಗಳಲ್ಲಷ್ಟೇ ನಡೆಯುತ್ತದೆ. ಕೆಂಡ ಹಾಯ್ದರೆ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಈ ಆಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಂಡ ಹಾಯುವವರು ವಿಶೇಷ ಆವೆಶಕ್ಕೂ ಒಳಗಾಗುತ್ತಾರೆ. ವಿಚಿತ್ರ ಅಭಿನಯ ಮಾಡುತ್ತ, ಸ್ವರಗಳನ್ನು ಹೊರಡಿಸುತ್ತಾ ಕೆಂಡವನ್ನು ಹಾಯುತ್ತಾರೆ. ಇಂತಹ ಅನೇಕ ಸಂಗತಿಗಳಿಗೆ ಸರಕುಳಿಯಲ್ಲಿ ನಡೆದ ಕಾರ್ಯಕ್ರಮ ಸಾಕ್ಷಿಯಾಯಿತು.

***

ನಮ್ಮ ಊರಿನಲ್ಲಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಬಹು ವಿಶಿಷ್ಟವಾದುದು. ಇಲ್ಲಿ ಯುವಕರು ಮಾತ್ರ ಕೆಂಡ ಹಾಯುತ್ತಾರೆ. ಕೆಂಡ ಹಾಯುವವರಿಗೆ ವಿಶಿಷ್ಟವಾದ ನಿಯಮಗಳಿವೆ. ಯಾರು ಕೆಂಡ ಹಾಯುತ್ತಾರೋ ಅಂತಹ ವ್ಯಕ್ತಿಗಳು ಕನಿಷ್ಟ ಒಂದು ವಾರದಿಂದ ಮಾಂಸ ಹಾಗೂ ಮದ್ಯದಿಂದ ದೂರವಿರಬೇಕು. ಶುದ್ಧ ಸಸ್ಯಾಹಾರ ಸೇವನೆ ಮಾಡಬೇಕು. ತಣ್ಣೀರಿನ ಸ್ನಾನ ಕೈಗೊಳ್ಳಬೇಕು. ಧಾರ್ಮಿಕ ಪೂಜೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯಾರು ಈ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದಿಲ್ಲವೋ ಅವರಿಗೆ ಶಿಕ್ಷೆಯಾಗುತ್ತದೆ ಎನ್ನುವ ನಂಬಿಕೆ ಇದೆ. ನಿಮಯ ಪಾಲನೆ ಮಾಡದಿರುವವರಿಗೆ ಕೆಂಡ ಹಾಯಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಕೆಂಡ ಹಾಯುವ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.
ವೆಂಕಟ್ರಮಣ ಅನಂತ ಗೌಡ
ಮೇಲಿನ ಸರಕುಳಿ

Wednesday, February 25, 2015

ಅಘನಾಶಿನಿ ಕಣಿವೆಯಲ್ಲಿ-13

                 `ಚನ್ನಾಗಿದೆ ಅದರ ಟೈಟಲ್ಲು..' ಎಂದರು ಎಲ್ಲರೂ. `ಒಂದ್ ಸಾರಿ ನಮಗೆಲ್ಲ ಓದಲಿಕ್ಕೆ ಕೊಡು...' ಎಂದರು ಕೆಲವರು. ವಿಜೇತಾ ವಿನಾಯಕನಲ್ಲಿದ್ದ ಬರಹದ ಶೈಲಿ,  ಆತನ ಬಾವುಕ ಪ್ರಪಂಚ, ಪ್ರತಿಯೊಂದನ್ನೂ ತನ್ನದೇ ಆದ ಬೆರಗಿನ ದೃಷ್ಟಿಯಲ್ಲಿ ನೋಡುವ ಆತನ ವ್ಯಕ್ತಿತ್ವವನ್ನು ಕಂಡು ವಿಸ್ಮಯಪಟ್ಟಳು. ಕೊನೆಗೆ ಇವನ ಜೊತೆಗೆ ಒಮ್ಮೆ ಒಬ್ಬಂಟಿಯಾಗಿ ಮಾತನಾಡಬೇಕು. ಹಾಗೆಯೇ ಇವನ ಒಳಗಿನ ವ್ಯಕ್ತಿತ್ವವನ್ನು ಕೊಂಚ ತಿಳಿದುಕೊಳ್ಳಬೇಕು ಎಂದು ಆಲೋಚಿಸಿದಳು.
                 ಅವರ ಅರಿವಿಗೆ ಬಾರದಂತೆ ಅಘನಾಶಿನಿ ಎಲ್ಲರ ಮನಸ್ಸಿನಲ್ಲಿ ಮೆರೆದಳು.. ಬಿಡದೇ ಸೆಳೆದಳು. ಆವರಿಸಿಕೊಂಡಳು. ಪ್ರದೀಪ ಆ ನದಿಗೆ ಅಡ್ಡಲಾಗಿ ಹಾಕಲಾಗಿದ್ದ ಹಗರುದಬ್ಬೆಯ ಕಾಲುಸಂಕದ ಮೇಲೆ ಕುಳಿತು ಕನಸು ಕಾಣಲಾರಂಭಿಸಿದ್ದ. ರಾಜೀವ ಸುಮ್ಮನೆ ನೀರಿಗೆ ಕಲ್ಲೆಸೆಯಲಾರಂಭಿಸಿದ್ದ. ದಡದ ಮೇಲಿದ್ದ ಚಪ್ಪಟೆ ಕಲ್ಲುಗಳನ್ನು ತಂದು ಕಾಲು ಡೊಂಕು ಮಾಡಿಕೊಂಡು ರಪ್ಪನೆ ಎಸೆಯುತ್ತಿದ್ದ ರಾಜೀವ. ಕಲ್ಲು ಕಪ್ಪೆಯಂತೆ ಕುಪ್ಪಳಿಸಿ ಕುಪ್ಪಳಿಸಿ ಆರೆಂಟು ಸಾರಿ ಎಗರಿ ಎದುರು ದಂಡೆಗೆ ಹೋಗಿ ಹಾರಿ ಹಾರಿ ಬೀಳುತ್ತಿದ್ದರೆ ತನ್ನೊಳಗೆ ಖುಷಿ ಪಡುತ್ತಿದ್ದ. ವಿನಾಯಕ ತಾನಾಯಿತು ತನ್ನ ಕಾವ್ಯಲೋಕವಾಯಿತು ಎಂಬಂತಾದ. ವಿಜೇತಾ ತನ್ನ ಡಿಎಸ್ಎಲ್ಆರ್ ಕ್ಯಾಮರಾದಲ್ಲಿ ಸುತ್ತಮುತ್ತಲ ಪ್ರಕೃತಿಯ, ರಾಜೀವನ ಕಲ್ಲೆಸೆಯುವ ಆಟವನ್ನು ಕ್ಲಿಕ್ಕಿಸಿದ್ದಲ್ಲದೇ ಕ್ಯಾಮರಾದ ಹಸಿವೆಯನ್ನು ಕಡಿಮೆ ಮಾಡಲು ಆರಂಭಿಸಿದ್ದಳು. ರಮ್ಯಾ ವಿಕ್ರಮ ಹಾಗೂ ವಿಷ್ಣುವಿನ ಜೊತೆಗೆ ಕೀಟಲೆಗೆ ಇಳಿದಿದ್ದಳು. ಬಾನ ಭಾಸ್ಕರ ಮಾತ್ರ ಇವರೆಲ್ಲರನ್ನೂ ನೋಡಿ ಪಶ್ಚಿಮದ ಕಡೆಗೆ ಇಳಿಯುತ್ತ ಎಲ್ಲರಿಗೂ ಶುಭ ವಿದಾಯವನ್ನು ಕೋರುತ್ತಿದ್ದ. ತಾರಕೆಗಳು ಮಿಣುಕು ಮಿಣುಕಾಗಿ ಕಣ್ಣು ಹೊಡೆಯಲು ಆರಂಭಿಸಿದ್ದವು.
             
***

               `ದಿನಗಳು ಸುಮ್ಮನೆ ಓಡಿ ಹೋಗ್ತಿದೆ ವಿಜೇತಾ..ನಾವಿನ್ನೂ ನಮ್ಮ ಕಾರ್ಯವನ್ನು ಆರಂಭಿಸಿಯೇ ಇಲ್ಲ. ಹೀಗೆ ಆದ್ರೆ ಹೇಗೆ?' ಎಂದು ವಿಕ್ರಮ ಕೇಳಿದ.
               `ನಾನೂ ಈ ಬಗ್ಗೆ ಆಲೋಚನೆ ಮಾಡ್ತಿದ್ದೇನೆ ವಿಕ್ರಮ್. ನನಗೆ ನಮ್ಮ ಜೊತೆಗಿರುವ ದಂಡು ಸುಖಾ ಸುಮ್ಮನೆ ದೊಡ್ಡದಾಗ್ತಾ ಇದೆಯೇನೋ ಅನ್ನಿಸಲು ಆರಂಭಿಸಿದೆ. ನಮ್ಮ ಕೆಲಸವನ್ನು ಗಂಭೀರವಾಗಿ ಮಾಡಲಿಕ್ಕೇ ಆಗ್ತಾ ಇಲ್ಲ. ತರಲೆ ಮಾತು.. ಹರಟೆ ಇಷ್ಟರಲ್ಲೇ ನಮ್ಮ ಕೆಲಸ ಕಳೆದು ಹೋಗುತ್ತಿದೆ. ಏನೂ ಪ್ರೊಗ್ರೆಸ್ ಆಗ್ತಾ ಇಲ್ಲ ನಾವು ಬಂದ ಕೆಲಸದಲ್ಲಿ...' ಎಂದಳು ವಿಜೇತಾ.
           `ಹೌದು.. ನಿಜ... ನನಗೂ ಒಂದೆರಡು ಸಾರಿ ಹಾಗೇ ಅನ್ನಿಸಿದೆ. ಈ ಪ್ರದೀಪನ ತರ್ಲೆ, ವಿಷ್ಣುವಿನ ಸಿಟ್ಟು, ರಮ್ಯಾಳ ಕಿರಿಕಿರಿ ಸಾಕು ಅನ್ನಿಸಿಬಿಟ್ಟಿದೆ. ಇದ್ದುದರಲ್ಲಿಯೇ ವಿನಾಯಕ ಪರವಾಗಿಲ್ಲ. ತಾನಾಯಿತು, ತನ್ನ ಪಾಡಾಯಿತು ಎಂದುಕೊಂಡು ಸುಮ್ಮನಿರುತ್ತಾನೆ.'
            `ಹೌದು ವಿಕ್ರಂ. ಮರೆತಿದ್ದೆ ಕಣೋ. ನಿನ್ನೆ ರಾತ್ರಿ ಯಾಕೋ ನಂಗೆ ಇದ್ದಕ್ಕಿದ್ದಂತೆ ಎಚ್ಚರಾಯ್ತು. ಆಗ ಈ ಊರಿನ ಆಚೆಯ ಕಾಡಿನಲ್ಲಿ ಅದೇನೋ ಸದ್ದಾಗ್ತಿತ್ತು. ಬಹುಶಃ ಮರ ಕಡಿಯುತ್ತಿರಬಹುದು. ಬಹಳ ಹೊತ್ತಿನ ತನಕ ಕೇಳ್ತಾ ಇತ್ತು ಅದು. ಯಾಕೋ ಬೆಳಿಗ್ಗೆ ಹೇಳಬೇಕು ಅಂತ ಅನ್ನಿಸಿದ್ದರೂ ಹೇಳಲಿಕ್ಕಾಗಿರಲಿಲ್ಲ ನೋಡು..' ಎಂದಳು ಆಕೆ.
             `ನಿಜ.. ನಿನ್ನೆ ನನಗೂ ಕೇಳಿತ್ತು. ಅದ್ಯಾರೋ ತಮ್ಮ ಮನೆಗಾಗಿ ಮರ ಕಡಿದು ಸಾಗಿಸ್ತಾ ಇರಬೌದು..' ಎಂದು ಉತ್ತರಿಸಿದ ವಿಕ್ರಂ.
             `ಇದೇನಿದು ಇಷ್ಟು ಆರಾಮಾಗಿ ಹೇಳ್ತಾ ಇದೀಯಾ ನೀನು... ಮರ ಕಡಿಯೋದು ತಪ್ಪಂತ ಗೊತ್ತಿಲ್ವಾ ನಿಂಗೆ..'
             `ಗೊತ್ತು.. ಆದ್ರೆ ಒಂದ್ ಮಾತು ಹೇಳ್ತೀನಿ ನೋಡು.. ಈ ಭಾಗದಲ್ಲೆಲ್ಲ ಮುಖ್ಯವಾಗಿ ಎರಡು ಥರದ ಜನರಿದ್ದಾರೆ. ಒಬ್ಬರು ಅತೀ ಶ್ರೀಮಂತರು. ಮತ್ತೊಬ್ಬರು ಬಡವರು. ಶ್ರೀಮಂತರು ಹಣ-ಲಂಚದ ಸಹಾಯದಿಮದ ಕಳ್ಳನಾಟಾ ಕೊಯ್ಯಿಸಿ ಅರಾಮಾಗಿ ಇರ್ತಾರೆ. ಆದ್ರೆ ಬಡವರು ಏನ್ಮಾಡಬೇಕು? ಅದಕ್ಕೇ ಈ ಥರಾ.. ಆದರೆ ಬಡವರು ಮಾತ್ರ ತಮ್ಮ ಮನೆಗಳಿಗಾಗಿ ಮಾತ್ರ ನಾಟಾ ಕೊಯ್ಯಿಸಿಕೊಳ್ಳುತ್ತಾರೆ. ಆದರೆ ಶ್ರೀಮಂತರು ಹಾಗಲ್ಲ. ದುರಾಸೆ. ಕಳ್ಳ ನನ್ನ ಮಕ್ಕಳಿಗೆ. ಅನೇಕ ಸಾರಿ ಅರಣ್ಯ ಇಲಾಖೆಯವರನ್ನೂ ಕೈಯೊಳಗೆ ಮಾಡಿಕೊಂಡು ತಮ್ಮ ಕೆಲಸ ಪೂರೈಸಿಕೊಳ್ಳತಾರೆ ಅವರು..' ಎಂದ. ಇದನ್ನು ಕೇಳಿ ವಿಜೇತಾ ಒಮ್ಮೆ ನಿಟ್ಟುಸಿರಿಟ್ಟಳು. ಕೊನೆಗೆ ವಿಕ್ರಂ ಅಲ್ಲಿನ ಶ್ರೀಮಂತರ ಅಧಿಕಾರ ಲಾಲಸೆ, ಹಣಕ್ಕಾಗಿ ಬಾಯ್ಬಿಡುವ ಅವರ ನೀಚತನ, ಮಾಡುವ ಅಡ್ಡಕಸುಬು ಇವೆಲ್ಲವನ್ನೂ ಸವಿವರವಾಗಿ ಹೇಳಿದ. ಹಾಗೆಯೇ ಬಡವರು ಜೀವನ ನಡೆಸಲು ಕಷ್ಟ ಪಡುವ ಬಗೆ, ಹೋರಾಟ ಇವುಗಳನ್ನೂ ಸಾಧ್ಯಂತವಾಗಿ ವಿವರಿಸಿದ.
              ಕೊನೆಯಲ್ಲಿ ಮಾತು ಮತ್ತೆ ತಾವು ಮಾಡಬೇಕೆಂದುಕೊಂಡಿದ್ದ ಕೆಲಸದ ಕಡೆಗೆ ಸಾಗಿತು. ಕೊನೆಗೆ ಮರುದಿನ ಶಿರಸಿಯ ಪೊಲೀಸ್ ಠಾಣೆಗೆ ಹೋಗಿ ಬರುವುದು ಎಂದು ನಿರ್ಧಾರ ಮಾಡಿಕೊಂಡರು. ಇವರೀರ್ವರ ಮಾತು-ಕತೆ ಮುಗಿಯುವ ವೇಳೆಗೆ ಆ ಮನೆಯಲ್ಲಿ ರಾತ್ರಿಯ ಊಟಕ್ಕೆ ಬುಲಾವ್ ಬಂದಿತ್ತು.

***

             `ನೋಡಿ.. ಆ ದಂಟಕಲ್ಲಿಗೆ ಯಾರೋ ನಾಲ್ಕು ಜನ ಬೇರೆ ಊರಿನವರು ಬಂದಿದ್ದಾರಂತೆ. ಬಂದವರೇ ಕಾಡು ತಿರುಗುತ್ತಿದ್ದಾರಂತೆ. ಕಾಡನ್ನು ನೋಡುವ ಆಸೆಯಂತೆ. ಅವರ್ಯಾರು..? ಯಾಕೆ ಬಂದಿದ್ದಾರೆ ಅಂತೆಲ್ಲ ಕೂಡಲೇ ಮಾಹಿತಿ ಪಡೆಯಬೇಕು. ನಮ್ಮೂರ ಬಳಿ ಅವರ್ಯಾಕೆ ಬಂದರು ಅಂತ...' ಎಂದು ಮುಖ್ಯಸ್ಥನಂತಿದ್ದ ಒಬ್ಬಾತ ಹೇಳಿದ.
            ಅದಕ್ಕೆ ಪ್ರತಿಯಾಗಿ ಮತ್ತೊಬ್ಬ `ಬಿಡಿ.. ಇದಕ್ಕೆಲ್ಲಾ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಎಲ್ಲಿಗೋ ಯಾರೋ ಬಂದಿರ್ತಾರೆ.. ಸರ್ಕಾರ ಅದೇನೇನೋ ರಿಸರ್ಚ್.. ಮಣ್ಣು-ಮಸಿ ಅಂತೆಲ್ಲಾ ಹಾಕಿಕೊಂಡಿರುತ್ತದೆ.. ಇವರೂ ಹಾಗೇ.. ದಂಟಕಲ್ಲಿಗೆ ಅದೇ ಕಾರಣಕ್ಕೆ ಬಂದಿರ್ತಾರೆ.. ಇಷ್ಟಕ್ಕೂ ದಂಟಕಲ್ಲಿಗೆ ಅವರು ಬಂದರೆ.. ನಮಗೇನು ಸಮಸ್ಯೆ..?' ಎಂದ.
            `ಹಂಗಲ್ಲಪ್ಪಾ.. ಅವರ್ಯಾರೋ ಮಂಗಳೂರಿನ ಕಡೆಯವರಂತೆ. ಇಲ್ಲಿಗೆ ಅದೇನೋ ರಿಸರ್ಚಿಗೆ ಬಂದಿದ್ದಾರೆ ಎನ್ನುವುದು ನನಗೂ ಗೊತ್ತಿದೆ. ಅದೇನು ರಿಸರ್ಚಿರಬಹುದು ಎನ್ನುವ ಕುರೂಹಲ ನನಗೂ ಇದೆ. ಅಷ್ಟೇ. ಹಾಂಗೇ.. ಈ ರಿಸರ್ಚು ಅಂದ್ರೆ ಯಾರು ಬಂದು ಇಲ್ಲಿನ ಸರ್ವೆ ಮಾಡ್ಕೊಂಡು ಹೋಗ್ತಾರೋ ಅಂತ..' ಎಂದ ಆ ಮುಖ್ಯಸ್ಥ.
          `ಅಂದ್ರೆ ನೀನು ಏನ್ ಹೇಳ್ತಾ ಇರೋದು..?'
          `ನೋಡು.. ಬೇಡ್ತಿ-ಅಘನಾಶಿನಿ ಕಟ್ಟು ಹಾಕ್ತಾರೆ ಅನ್ನೋದು ಹಳೆಯ ಸುದ್ದಿ. ಈಗೀಗ ಅದೇನೋ ಮಿನಿ ಡ್ಯಾಂ ಆಗ್ತದಂತೆ. ಏನೇನೋ ಗಾಳಿ ಸುದ್ದಿಗಳು. ಅದರ ಬಗ್ಗೆಯೇ ಇವರೂ ಸರ್ವೆಗೆ ಬಂದಿರಬಹುದು. ಅಣೆಕಟ್ಟು ಹಾಕೋದ್ರಿಂದ ಅದೆಷ್ಟು ಭೂಮಿ-ಕಾಡು-ಜಮೀನು ಮುಳುಗಡೆ ಆಗ್ತದೆ ಅಂತ ಲೆಕ್ಖ ಹಾಕಲಿಕ್ಕೆ ಬಂದಿರಬಹುದಲ್ಲವಾ..?'
           `ಅದಕ್ಕಾಗಿ ಬಂದಿರಬಹುದು ಅಂತ ಹೇಗೆ ಹೇಳ್ತಿದ್ದೀರಿ?' ಇದು ಮತ್ತೊಬ್ಬನ ಪ್ರಶ್ನೆ.
           `ಸಾಮಾನ್ಯವಾಗಿ ರಿಸರ್ಚ್ ಮಾಡೋದು ಇಂತಹ ಕಾರಣಗಳಿಗಾಗಿಯೇ ಅಲ್ವೇ..'
           `ಬಿಡು.. ಅವ್ರು ಯಾವುದಕ್ಕೇ ಬಂದಿರಲಿ. ಮುಳುಗಡೆ ಆಗೇ ಆಗ್ತದೆ ಅನ್ನೋವಾಗ ನಾವು ಈ ಬಗ್ಗೆ ತಲೆ ಕೆಡಿಸಿಕೊಂಡರೆ ಆಯ್ತಪ್ಪಾ..' ಎನ್ನುವಲ್ಲಿಗೆ ಆ ಕಟ್ಟೆ ಪಂಚಾಯ್ತಿಯ ಮಾತು ಮುಗಿದಿತ್ತು.
             ಇದು ದಂಟಕಲ್ಲಿಗೆ ಆಗಮಿಸಿದ ವಿಕ್ರಮನ ತಂಡದ ಬಗ್ಗೆ ಪಕ್ಕದೂರು ಅರ್ಥೈಸಿದ ರೀತಿ. ಆ ಜನರ ಮಾತುಗಳು ಅಘನಾಶಿನಿಯ ಅಣೆಕಟ್ಟಿಗಾಗಿಯೇ ರಿಸರ್ಚು ನಡೆಯುತ್ತಿದೆ ಎನ್ನುವಂತೆ ಬಿಂಬಿತವಾಗಿದ್ದವು.

****

                ಮುಂಜಾನೆ ಎದ್ದು ವಿಕ್ರಮ್, ವಿಜೇತಾರು, ವಿನಾಯಕನ ಜೊತೆ ಮಾಡಿಕೊಂಡು ವಾಹನವನ್ನೇರಿ ಶಿರಸಿಗೆ ಹೊರಡಲು ಅನುವಾದರು. ಪ್ರದೀಪ ತಾನೂ ಬರುವೆನೆಂದ. ವಿಧಿಯಿಲ್ಲದೇ ಆತನನ್ನೂ ಶಿರಸಿಗೆ ಕರೆದೊಯ್ಯಬೇಕಾಯಿತು. ವಿಷ್ಣು ಮಾತ್ರ ದಂಟಕಲ್ಲಿನಲ್ಲಿಯೇ ಉಳಿದುಕೊಂಡಿದ್ದ.
                ಶಿರಸಿಗೆ ಬಂದ ಗುಂಪು ಮೊದಲು ಕೊಳ್ಳಬೇಕೆಂದುಕೊಂಡಿದ್ದ ಕೆಲ ವಸ್ತುಗಳನ್ನು ಕೊಂಡಿತು. ವಿಜೇತಾ-ವಿಕ್ರಮರಿಗೆ ಪ್ರದೀಪ ಪೊಲೀಸ್ ಠಾಣೆಗೆ ಬರುವುದು ಬೇಡವಾಗಿತ್ತು. ಹೀಗಾಗಿ ಆತನನ್ನು ವಿನಾಯಕನ ಜೊತೆ ಶಿರಸಿಯ ಶ್ರೀ ಅಧಿದೇವತೆಯಾದ ಮಾರಿಕಾಂಬೆಯನ್ನು ನೋಡಿ ಬರುವಂತೆ ಹೇಳಿ ಕಳುಹಿಸಿದರು. ಇವರೀರ್ವರೂ ಅದೇನೇನೋ ಸಬೂಬನ್ನು ಹೇಳಿ ಪೊಲೀಸ್ ಠಾಣೆಗೆ ಹೋದರು.
              ಪ್ರಾರಂಭದಲ್ಲಿ ಪೊಲೀಸ್ ಠಾಣೆಯಲ್ಲಿ ಇನ್ ಸ್ಪೆಕ್ಟರ್ ವಿಕ್ರಂ- ವಿಜೇತಾರೊಂದಿಗೆ ಸರಿಯಾಗಿ ವರ್ತಿಸಲಿಲ್ಲ. ಕೊನೆಗೆ ವಿಕ್ರಮ್ ಹಾಗೂ ವಿಜೇತಾರು ತಾವು ಖಾಸಗೀ ಪತ್ತೇದಾರರು ಎಂದು ಹೇಳಿದಾಗ ಅಧಿಕಾರಿ ಇವರ ಸಹಾಯಕ್ಕೆ ಬಂದು ಶಿರಸಿಯಲ್ಲಿ ನಡೆದ ಘಟನೆಗಳ ಮಾಹಿತಿಯನ್ನು ನೀಡಲಾರಂಭಿಸಿದರು. `ಇತ್ತೀಚೆಗೆ ಶಿರಸಿಯಲ್ಲಿ ನಿಗೂಢ ಗುಂಪೊಂದು ಕಾಣಿಸಿಕೊಂಡಿದೆಯಾದರೂ ಅದಕ್ಕೆ ಹದಿನೈದು-ಇಪ್ಪತ್ತು ವರ್ಷಗಳ ಇತಿಹಾಸವಿದೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಆ ಗುಂಪು ಮತ್ತಷ್ಟು ಪ್ರಭಲವಾಗಿದೆ. ಕೊಲೆ-ದರೋಡೆ-ಕಳ್ಳತನ-ಸ್ಮಗ್ಲಿಂಗು ಇತ್ಯಾದಿಗಳು ಆ ಗುಂಪಿನ ಮುಖ್ಯ ದಂಧೆ. ಜೊತೆಗೆ ಆ ಗುಂಪು `ಎಸ್' ಮಾರ್ಕಿನ ಮೂಲಕ ಪ್ರಸಿದ್ಧವಾಗಿದೆ. ಈ ಭಾಗದಲ್ಲೆಲ್ಲ ಆ ಗುಂಪಿಗೆ ಸೂರ್ಯನ ಕುದುರೆ ಎಂದೇ ಹೆಸರು. ಅವರು ತಮ್ಮ ಕೆಲಸಕ್ಕೆ ಸೂರ್ಯಶಿಖಾರಿ ಎಂದು ಕರೆದುಕೊಳ್ಳುತ್ತಾರೆ ಎಂದು ಪೊಲೀಸ್ ಅಧಿಕಾರಿ ದೀರ್ಘ ವಿವರಣೆಯನ್ನು ನೀಡಿದ.
              ವಿಕ್ರಂ ಹಾಗೂ ವಿಜೇತಾರಿಗೆ ಪೊಲೀಸ್ ಅಧಿಕಾರಿ ನೀಡಿದ ಈ ಮಾಹಿತಿಯೊಂದ ತಮ್ಮ ಕೆಲಸಕ್ಕೆ ಸ್ವಲ್ಪವಾದರೂ ಅನುಕೂಲವಾಗಬಹುದು ಎನ್ನಿಸಿತು. ಹಾಗೆಯೇ ಇವರು ಮೊದಲೊಮ್ಮೆ ಹಿಡಿದಿದ್ದ ಹಾಗೂ ಆತನ ನಿಘೂಡ ಹತ್ಯೆಯ ಬಗ್ಗೆ ಕೇಳಿದರು. ಅಧಿಕಾರಿ ಆ ವ್ಯಕ್ತಿ ಸೂರ್ಯಗುದುರೆ ಗುಂಪಿಗೆ ಸೇರಿದ ವ್ಯಕ್ತಿಯೆಂದೂ ಆತನನ್ನು ಬಂಧಿಸಿದ ನಂತರ ಅವನ ಕೊಲೆ ನಡೆಯಿತೆಂದೂ ಕೊಲೆಗಾರನ ಸುಳಿವು ಸಿಕ್ಕಿಲ್ಲವೆಂದೂ ತಿಳಿಸಿದರು.
              ಯಾಕೋ ವಿಕ್ರಮ ಹಾಗೂ ವಿಜೇತಾರಿಗೆ ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯತನ-ನಿಧಾನ ತನಿಖೆ ಹೇಸಿಗೆ ಹುಟ್ಟಿಸಿತು. ಕೊನೆಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡ ನಂತರ ವಿಜೇತಾ ಹಾಗೂ ವಿಕ್ರಮರು ವಾಪಾಸು ಹೊರಟರು. ಇನ್ನೇನು ಐದು ರಸ್ತೆ ಸರ್ಕಲ್ ದಾಟಿ ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆಯೇ ವಿನಾಯಕ ಎದುರಾದ. ಮುಖದಲ್ಲಿ ಗಾಭರಿ ತುಂಬಿತ್ತು. ತಕ್ಷಣ ಇವರಿಬ್ಬರೂ `ಏ... ಏನಾಯ್ತು..?' ಎಂದರು.

(ಮುಂದುವರಿಯುತ್ತದೆ..)

Tuesday, February 24, 2015

ಅಮ್ಮನೆಂದರೆ

ಅಮ್ಮನೆಂದರೆ
ಬರೀ ಎರಡಕ್ಷರವಲ್ಲ|
ಈ ಪ್ರಪಂಚವ ನೋಡೆಂದು
ಕಣ್ಣು ತೆರೆಸಿ, ಜೀವ ನೀಡಿದಾಕೆ ||

ಅಮ್ಮನೆಂದರೆ
ಬರೀ ಜೀವಿಯಲ್ಲ
ಕಣ್ಣಿಗೆ ಕಾಣುವ, ಪ್ರೀತಿಯ ನೀಡುವ
ಈ ಬಾವ ಲೋಕದ ದೇವರಾಕೆ ||

ಅಮ್ಮನೆಂದರೆ
ಬರೀ ಹೆಣ್ಣಲ್ಲ
ಬಿದ್ದಾಗಲೆತ್ತುವ, ಗೆದ್ದಾಗ ನಲಿವ
ಹೆಂಗರುಳು, ಹೆಣ್ಮನಸು ಆಕೆ ||

ಅಮ್ಮನೆಂದರೆ
ಬರೀ ಭೂಮಿಯಲ್ಲ
ಬರಡಲ್ಲೂ ಜೀವ ಸ್ಫುರಿಸಿ
ಜೀವ ನಿಡುವ ದಾತೆ ಆಕೆ ||

ಅಮ್ಮನೆಂದರೆ
ಬರೀ ಪದಗಳು ಸಾಲಲಿಲ್ಲ
ಆಕೆಯ ಗುಣ ಹೊಗಳಲು
ಅಷ್ಟು ಮೇಲಂತೆ ಆಕೆ ||

ಅಮ್ಮನೆಂದರೆ
ಬರೀ ಅಮ್ಮನಲ್ಲ
ಬಾಳಿನ ಪ್ರೇಮ, ಬದುಕಿಗೆ ಧಾಮ
ನಿಲುಕದ ಆಸೀಮ ಆಕೆ  ||

***

(ಈ ಕವಿತೆಯನ್ನು ಬರೆದಿರುವುದು 25-08-2006ರಂದು ದಂಟಕಲ್ಲಿನಲ್ಲಿ)