Saturday, October 25, 2014

ದೀಪಾವಳಿ ಆಚಾರ-ವಿಚಾರ

ದೀಪವಾಳಿ ತಯಾರಿ
(ಬಲಿವೇಂದ್ರನನ್ನು ಕೂರಿಸುತ್ತಿರುವುದು)

ದೀಪಾವಳಿ ಹಬ್ಬದ ಸಡಗರ ಮೇರೆ ಮೀರಿದೆ. ದೀಪಗಳ ಹಬ್ಬಕ್ಕೆ ಜನಸಾಮಾನ್ಯರು ಸಂಭ್ರಮದಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಲಿವೇಂದ್ರನ ಪೂಜೆಗಾಗಿ ಮನೆ ಮನೆಯಲ್ಲಿ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.
ಬೆಳಕಿನ ಹಬ್ಬವಾದ ದೀಪಾವಳಿಯನ್ನು ದೊಡ್ಡಹಬ್ಬ ಎಂದೇ ಕರೆಯುತ್ತಾರೆ. ಎಲ್ಲ ಹಬ್ಬಗಳಿಗೂ ಕಿರೀಟವಿಟ್ಟಂತಹ ಹಬ್ಬ ಇದು. ನಗರ ಹಾಗೂ ಗ್ರಾಮೀಣ ಪ್ರದೇಶದ ಜನಸಾಮಾನ್ಯರು ತಮ್ಮನ್ನು ತಾವು ಮರೆತು ಆನಂದಿಸುವಂತಹ ಹಬ್ಬ. ಇಂತಹ ದೀಪಾವಳಿಯ ಸಂಭ್ರಮ ಬುಧವಾರದಿಂದ ಆರಂಭವಾಯಿತು. ಮನೆ ಮನೆಗಳಲ್ಲಿ ಬೂರೆ ಹಬ್ಬ ಎಂದು ಕರೆಯುವ ಈ ದಿನದಂದು ಬೂರೆ ನೀರನ್ನು ಮನೆಯೊಳಕ್ಕೆ ತರುವ ಮೂಲಕ ಹಬ್ಬ ಆರಂಭವಾಗುತ್ತದೆ. ಬೂರೆ ನೀರು ತಂದ ನಂತರ ಬಲಿವೇಂದ್ರನ ಹೋಲಿಕೆಯ ಮೂರ್ತಿಯನ್ನು ಕೂರಿಸಲಾಗುತ್ತದೆ. ಮಣೆಯ ಮೇಲೆ ಮಣ್ಣಿನ ಚಿತ್ತಾರ ಬಿಡಿಸಿ ಅದರ ಮೇಲೆ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಹಾಕಿ, ಅದರ ಬಾಯಿಗೆ ಅಗಲವಾದ ಬಟ್ಟಲನ್ನು ಇಟ್ಟು ಅದರ ಮೇಲೆ ಅಕ್ಕಿಯನ್ನು ಹರವಿ, ತೆಂಗಿನ ಕಾಯಿ ಇಡಲಾಗುತ್ತದೆ. ತೆಂಗಿನಕಾಯಿಯ ಮೇಲೆ ಜೋಡು ಕೋಡನ್ನು ಹೊಂದಿರುವ ಅಡಿಕೆ ಸಿಂಗಾರದಿಂದ ಬಲೀಂದ್ರ ಮೂರ್ತಿಯನ್ನು ಕೂರಿಸಲಾಗುತ್ತದೆ. ಮೂರ್ತಿಯ ಅಕ್ಕಪಕ್ಕ ಬಲಿತ ಸೌತೆಕಾಯಿ ಹಾಗೂ ಮೊಗೆ ಕಾಯಿಗಳನ್ನು ಇಡಲಾಗುತ್ತದೆ.
(ಗೋಪೂಜೆ)
ಮೂರು ದಿನಗಳ ಕಾಲ ಬಲೀಂದ್ರ ಮೂತರ್ಿಯನ್ನು ಪೂಜೆ ಮಾಡಲಾಗುತ್ತದೆ. ಹಬ್ಬದ ಸರಣಿಯ ಎರಡನೇ ದಿನವಾದ ಗುರುವಾರ ವಾಹನ ಪೂಜೆ ಹಾಗೂ ಲಕ್ಷ್ಮೀ ಪೂಜೆ ನಡೆಯುತ್ತದೆ. ತಮ್ಮ ತಮ್ಮ ಮನೆಯ ವಾಹನಗಳು, ಆಭರಣಗಳನ್ನು ಇಂದು ಪೂಜೆ ಮಾಡಲಾಯಿತು. ವಾಹನಗಳಿಗೆ ಸಿಂಗರಿಸಿ ಸಭ್ರಮಿಸಿದರು. ಮೂರನೇ ದಿನವಾದ ಶುಕ್ರವಾರ ಗೋಪೂಜೆ ನಡೆಯಲಿದೆ. ಶುಕ್ರವಾರದಂದು ಗೋವನ್ನು ಸಿಂಗರಿಸಿ, ಗೋವಿನ ಪೂಜೆ ಮಾಡಿ ಸಂಭ್ರಮಿಸುತ್ತಾರೆ.
ಹಬ್ಬದ ತಯಾರಿಗಾಗಿ ಕಳೆದ ಮೂನರ್ಾಲ್ಕು ದಿನಗಳಿಂದ ಜನರು ಮಾರುಕಟ್ಟೆಗಳತ್ತ ಮುಖಮಾಡಿದ್ದರು. ಅಗತ್ಯದ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ತರಕಾರಿಗಳು, ಗೋವೆಕಾಯಿ, ಕಬ್ಬು, ಅಡಿಕೆ ಸಿಂಗಾರ, ಪುಂಡಿ ನಾರಿನ ಹಗ್ಗ, ಗೋವುಗಳ ಕುತ್ತಿಗೆಗೆ ಕಟ್ಟುವ ಗಂಟೆ, ಆಕಾಶಬುಟ್ಟಿ, ಹೂವುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕೊಳ್ಳಲು ಜನಸಾಮಾನ್ಯರು ಮಾರುಕಟ್ಟೆಯ ಕಡೆಗೆ ಮುಖ ಮಾಡಿದ್ದು ಸಾಮಾನ್ಯವಾಗಿತ್ತು. ಮಾರುಕಟ್ಟೆಗಳಲ್ಲಿಯೂ ಕೂಡ ದೀಪಾವಳಿಯ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ತರಕಾರಿ ದರದಲ್ಲಿ ಸಾಮಾನ್ಯ ದಿನಕ್ಕಿಂದ 10-20 ರು. ಏರಿಕೆಯಾಗಿದ್ದರೆ, ದವಸ ಧಾನ್ಯಗಳಲ್ಲಿಯೂ ಕೂಡ 5-10 ರು. ಹೆಚ್ಚಳವಾಗಿತ್ತು. ಪುಂಡಿ ನಾರಿನ ಹಗ್ಗಕ್ಕೆ ಜೋಡಿಗೆ 20, 30, 40 ರು. ದರ ನಿಗದಿಯಾಗಿದ್ದರೆ ಹೂವುಗಳ ಬೆಲೆ ಮೊಳಕ್ಕೆ 30 ರಿಂದ 50 ರು. ಮುಟ್ಟಿತ್ತು. ಇದರಿಂದ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಳ್ಳಲು ಹಿಂದೇಟು ಹಾಕಿದರು.
(ಎತ್ತ ನೋಡಿದರತ್ತ ಹಣತೆಗಳು)
ಪಟಾಕಿ ಸದ್ದು ಕೂಡ ಹಬ್ಬದ ಸಡಗರವನ್ನು ಹೆಚ್ಚಿಸಿದೆ. ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಕೂಡ ಪಟಾಕಿ ಸಿಡಿಸುವ ಸಂತಸಕ್ಕೆ ತಡೆಯುಂಟಾಗಿಲ್ಲ. ಮಕ್ಕಳಾದಿಯಾಗಿ ಪಟಾಗಿ ಸಿಡಿಸಿ ಸಂತಸಪಟ್ಟರು. ಪಟಾಕಿ ಸಿಡಿಸುವ ಸಂಭ್ರಮವನ್ನು ಹೆಚ್ಚಿಸುವ ಸಲುವಾಗಿ ತರಹೇವಾರಿ ಪಟಾಕಿಗಳು ಅಂಗಡಿಗಳಲ್ಲಿ ಗಮನ ಸೆಳೆಯುತ್ತಿದ್ದವು. ಗ್ರಾಮೀಣ ಭಾಗದಲ್ಲಿಯೂ ಪಟಾಕಿ ಅಬ್ಬರ ಜೋರಾಗಿದೆ. ದೀಪಾವಳಿಯ ಹಬ್ಬ ಧಾಮರ್ಿಕವಾಗಿ ಮಾತ್ರ ಮಹತ್ವವನ್ನು ಪಡೆದುಕೊಂಡಿಲ್ಲ. ಬದಲಾಗಿ ಪರಿಸರ ಸ್ನೇಹಿ ಹಬ್ಬವಾಗಿದೆ. ಪ್ರಕೃತಿ ಮಾತೆಯನ್ನು ಪೂಜಿಸಲಾಗುತ್ತದೆ, ಆರಾಧಿಸಲಾಗುತ್ತದೆ. ಪ್ರಾಣಿ ಪಕ್ಷಿಗಳಿಗೂ ಈ ಹಬ್ಬದಲ್ಲಿ ಊಟೋಪಚಾರ ಮಾಡಿಸಲಾಗುತ್ತದೆ. ಪ್ರಾಣಿಗಳಲ್ಲಿ ದೇವರನ್ನು ಕಾಣಲಾಗುತ್ತದೆ.
ಬೆಳಕಿನ ಹಬ್ಬವೆಂದರೆ ಜೀವನದಲ್ಲಿ ಬೆಳಕನ್ನು ಹೊತ್ತಿಸುವಂತದ್ದು ಎನ್ನುವ ಭಾವನೆ ಹಲವು ಪ್ರದೇಶದಲ್ಲಿದೆ. ಯಾವುದೇ ಮಂಗಲಕಾರ್ಯ ಮಾಡುವುದಿದ್ದರೂ ದೀಪಾವಳಿಯ ನಂತರ ಎನ್ನುವ ನಂಬಿಕೆ ಬಹುತೇಕ ಕಡೆಗಳಲ್ಲಿದೆ. ಹಬ್ಬ ಆರಂಭವಾಗುತ್ತಿದ್ದಂತೆಯೇ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುತ್ತಾರೆ. ಅದರಲ್ಲೂ ಶೇಂಗಾ ಎಣ್ಣೆ ದೀಪ ಶ್ರೇಷ್ಟವಾದದ್ದು ಎನ್ನಲಾಗುತ್ತದೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಹಣತೆಯ ದೀಪ ರಾರಾಜಿಸುತ್ತಿದ್ದರೆ ಪಟ್ಟಣಗಳಲ್ಲಿ ವಿದ್ಯುತ್ ದೀಪಗಳ ಆಕಾಶ ಬುಟ್ಟಿಗಳು ತೂಗಾಡುತ್ತವೆ. ವಿದ್ಯುತ್ ದೀಪಗಳ ಅಲಂಕಾರವನ್ನು ಪಟ್ಟಣದ ಮನೆ, ಅಂಗಡಿಗಳಲ್ಲಿ ಕಾಣಬಹುದಾಗಿದೆ.
(ಗೋವುಗಳನ್ನು ಓಡಸುತ್ತಿರುವುದು)
       ಹಬ್ಬ ಆರಂಭವಾಗುತ್ತಿದ್ದಂತೆಯೇ ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಆರಾಧನೆ ನಡೆಯುತ್ತದೆ. ಗೋವುಗಳಿಗೆ ಸಿಹಿ ಕಡುಬನ್ನು ಮಾಡಿ ತಿನ್ನಿಸಲಾಗುತ್ತದೆ. ಅದೇ ರೀತಿ ಗಂಟೆ, ವಿವಿಧ ನಮೂನೆಯ ದಂಡೆಗಳನ್ನು ಕಟ್ಟುವ ಮೂಲಕ ಗೋವುಗಳ ಶೃಂಗಾರ ಆರಂಭಗೊಳ್ಳುತ್ತದೆ. ಗೋಪೂಜೆ ದಿನವಾದ ಶುಕ್ರವಾರ ಗೋವುಗಳ ಪೂಜೆಯ ಜೊತೆ ವಿಶೇಷವಾದ ಭಕ್ಷ್ಯಗಳನ್ನು ನೀಡಲಾಗುತ್ತದೆ. ಇನ್ನಷ್ಟು ಅಲಂಕರಿಸಲಾಗುತ್ತದೆ. ಸಾಮೂಹಿಕವಾಗಿ ಗೋವುಗಳ ಶೃಂಗಾರ, ಪೂಜೆ, ಓಟ ಇತ್ಯಾದಿಗಳು ನಡೆಯುತ್ತವೆ. ಅಂದು ಸಂಜೆ ಬಲಿವೇಂದ್ರನನ್ನು ಕಳಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ತೆರೆ ಬೀಳುತ್ತದೆಯಾದರೂ ಬಿದಿಗೆಯ ದಿನ ವಸ್ತ್ರ ಉಡಿಕೆಯ ದಿನ ಅಥವಾ ವಸ್ತೊಳಿಕೆಯ ದಿನ ಎಂದು ಕರೆದು, ಹೊಸ ವಸ್ತ್ರವನ್ನು ತೊಟ್ಟು ಸಂಭ್ರಮಿಸುತ್ತಾರೆ. ಅಲ್ಲಿಗೆ ಹಬ್ಬ ಸಂಪೂರ್ಣಗೊಳ್ಳುತ್ತದೆ.

****
ಆಚರಣೆ'
(ಎತ್ತುಗಳ ಸಿಂಗಾರ)

ಬೆಳಕಿನ ಹಬ್ಬ ದೀಪಾವಳಿಯ ಮೂರನೇ ದಿನದ ಸಂಭ್ರಮ ಸಡಗರದಿಂದ ನಡೆಯಿತು. ಮನೆ ಮನೆಗಳಲ್ಲಿ ಗೋವಿನ ಪೂಜೆಯನ್ನು ಮಾಡುವ ಮೂಲಕ ಶಾಸ್ತ್ರ-ಸಂಪ್ರದಾಯ ಸಹಿತವಾಗಿ ಆಚರಿಸಲಾಯಿತು.
ಮುಂಜಾನೆ ಗೋವುಗಳನ್ನು ಸ್ನಾನ ಮಾಡಿಸುವುದರಿಂದ ಆರಂಭಗೊಳ್ಳುವ ಬಲಿಪಾಡ್ಯಮಿಯ ಸಡಗರ ನಿಧಾನವಾಗಿ ರಂಗೇರಿತು. ಅಡಿಕೆ, ಪಚೋಲಿ, ಪುಂಡಿ ನಾರು  ಸೇರಿದಂತೆ ಹಳ್ಳಿಗರೇ ತಯಾರಿಸಿದ ವಿಶಿಷ್ಟ ಬಗೆಯ ಹಾರದಿಂದ ಗೋವುಗಳನ್ನು ಅಲಂಕರಿಸುವುದು ವಾಡಿಕೆಯಾಗಿದೆ. ಶೇಡಿ ಹಾಗೂ ಕೆಮ್ಮಣ್ಣಿನಿಂದ ಗೋವುಗಳ ಮೈಮೇಲೆ ಚಿತ್ತಾರ ಬರೆಯುವ ಮೂಲಕ ಮತ್ತು ಗೋವುಗಳ ಕೋಡುಗಳಿಗೆ ಕೆಮ್ಮಣ್ಣು-ಶೇಡಿಯ ಬಣ್ಣ ಬಳಿದು ಸಿಂಗರಿಸಲಾಯಿತು. ಗೋ ಮಾತೆಯ ಪೂಜೆಯಲ್ಲಿ ಧನ್ಯತಾ ಭಾವ ಕಂಡುಕೊಂಡ ಆಸ್ತಿಕರು ಮನೆ ಮನೆಗಳಲ್ಲಿ ತಯಾರು ಮಾಡುವ ಹೋಳಿಗೆ, ಕಡುಬು ಸೇರಿದಂತೆ ವಿಶಿಷ್ಟ ತಿನಿಸುಗಳನ್ನೆಲ್ಲ ಗೋವುಗಳಿಗೆ ತಿನ್ನಿಸಿ ಸಂಭ್ರಮಿಸಿದರು. ಗೋವಿನ ರಕ್ಷಣೆಗಾಗಿ ಪಾರಂಪರಿಕವಾಗಿ ಆಚರಿಸುತ್ತ ಬಂದ ಹುಲಿಯಪ್ಪನ ಪೂಜೆಯನ್ನು ಸಾರ್ವತ್ರಿಕವಾಗಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮನೆಯ ಆಧಾರ ಸ್ಥಂಭವೆಂದೇ ಪರಿಗಣಿಸಲ್ಪಡುವ ಪ್ರಧಾನ ಕಂಬಕ್ಕೂ ಪೂಜೆ ಮಾಡುವ ಸಂಪ್ರದಾಯ ಮಲೆನಾಡಿನ ವಿಶೇಷತೆಗಳಲ್ಲೊಂದಾಗಿದೆ. ತಮ್ಮ ಜಮೀನು ಮನೆಗಳನ್ನು ರಕ್ಷಿಸುವ ಗಣಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸುವುದೂ ಸಹ ಈ ಪ್ರದೇಶದ ವೈಶಿಷ್ಟ್ಯತೆಯಾಗಿದೆ. ಈ ಎಲ್ಲ ಪೂಜೆ ಗಳು ಮುಗಿದ ನಂತರವೇ ಮನೆ ಮನೆಗಳ ಗೋವುಗಳನ್ನು ಬಯಲಿಗೆ ಬಿಡಲಾಗುತ್ತದೆ.
(ಭೂತಪ್ಪನಿಗೆ ಪೂಜೆ)
ಗೋವಿನ ಬಯಲಿನಲ್ಲಿ ಎಲ್ಲರ ಮನೆಗಳಿಂದ ಆಗಮಿಸಿದ ಹಸುಗಳು ಒಂದೆಡೆ ಸೇರುತ್ತವೆ. ಈ ಬಯಲಿನಲ್ಲಿ ಎತ್ತುಗಳನ್ನು ಸಿಂಗರಿಸಿ ಓಡಿಸಲಾಯಿತು. ಓಡುವ ಎತ್ತು, ಹೋರಿಗಳ ಜೊತೆಗೆ ಅವುಗಳ ಮಾಲೀಕರೂ ಓಡಿ ಸಂಭ್ರಮಿಸಿದರು. ನಂತರ ಊರ ಸುತ್ತಮುತ್ತಲೂ ಇರುವ ಚೌಡಿ, ಬೀರಲು, ಜಟಕ, ನಾಗರು ಸೇರಿದಂತೆ ಸಮಸ್ತ ಊರು ರಕ್ಷಣೆ ಮಾಡುವ ದೇವಗಣಗಳನ್ನು ಪೂಜಿಸಲಾಯಿತು. ಮನೆ ಮನೆಗಳಲ್ಲಿ ಆಯುಧಗಳು, ಯಂತ್ರಗಳು, ಹೊಸ್ತಿಲು, ತುಳಸಿ ಕಟ್ಟೆ, ಕೊಟ್ಟಿಗೆ ಈ ಮುಂತಾದವುಗಳಿಗೆಲ್ಲ ಪೂಜೆ ನಿಡುವ ಮೂಲಕ ದೀಪಾವಳಿ ಪ್ರಕೃತಿಯ ಆರಾಧಿಸುವ ಹಬ್ಬ ಎನ್ನುವ ವಿಶೇಷಣಕ್ಕೆ ಪುಷ್ಟಿ ಸಿಕ್ಕಂತಾಯಿತು.
ಸಂಜೆ ತುಳಸಿ ಪೂಜೆಯ ನಂತರ ಬಲಿವೇಂದ್ರನನ್ನು ಕಳಿಸುವ ಸಂಪ್ರದಾಯ ನಡೆಯಿತು. ಈ ಸಂದರ್ಭದಲ್ಲಿ ಬಹುತೇಕ ಜನರು ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಜೊಂಜನ್ನು ಹಚ್ಚಿಡುತ್ತಾರೆ. ಮನೆಯಂಗಳದ ವರೆಗೂ ಶಿಂಡ್ಲೇ ಕಾಯಿಯ ಜೊಂಜನ್ನು ಉರಿಸಲಾಗುತ್ತದೆ. ತನ್ಮೂಲಕ ಬೆಳಕಿನ ಹಬ್ಬ ತೆರೆಯೆಳೆಯುತ್ತಿದ್ದಂತೆಯೇ ಬಲಿವೇಂದ್ರನನ್ನು ಮುಂದಿನ ವರ್ಷಕ್ಕಾಗಿಯೂ ಕರೆಯಲಾಯಿತು.
(ಭಾರ ಎತ್ತುವ ಸ್ಪರ್ಧೆ)
             ಹೊಸ ಬಟ್ಟೆಗಳನ್ನು ಧರಿಸುವ ಎಲ್ಲ ವಯೋಮಾನದವರು ಈ ಹಬ್ಬವನ್ನು ಹೊಸ ವರ್ಷವೆನ್ನುವ ನಂಬುಗೆಯಿಂದಲೂ, ಶೃದ್ಧೆಯಿಂದ ಆಚರಿಸುವುದು ವಿಶೇಷವಾಗಿದೆ. ಹಬ್ಬದ ದಿನ ಸಾರ್ವಜನಿಕ ಸ್ಥಳದಲ್ಲಿ ತೆಂಗಿನ ಕಾಯಿ ಒಡೆಯುವ ಜೂಜಾಟ ಸೇರಿದಂತೆ ಹಲವಾರು ವಿಧದ ಸಾಹಸವನ್ನು ಪ್ರದರ್ಶಿಸಬಲ್ಲ ಕ್ರೀಡೆಗಳನ್ನು ಪಣಕ್ಕಿಟ್ಟು ಆಡಲಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ರಾತ್ರಿಯಿಂದ ಬೆಳಗಿನ ತನಕವೂ ಜೂಜಾಟಗಳು ನಡೆಯುತ್ತವೆ. ಇಂದಿನ ಜೂಜಾಟಕ್ಕೆ ಬಹುತೇಕ ಯಾರೂ ಅಡ್ಡಿಪಡಿಸುವುದಿಲ್ಲ. ಇಲ್ಲಿ ಮನರಂಜನೆಯು ಪ್ರಾಮುಖ್ಯತೆ ಪಡೆಯುತ್ತದೆ.
ಸಿದ್ದಾಪುರ ತಾಲೂಕಿನ ಕಾನಸೂರು ಪಂಚಾಯತ ವ್ಯಾಪ್ತಿಯ ಅಡ್ಕಳ್ಳಿಯಲ್ಲಿ ಬಾರ ಎತ್ತುವ ಸ್ಫಧರ್ೆಯಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾದಿ ದೀಪಾವಳಿಯನ್ನು ಆಚರಿಸಲಾಯಿತು. ಸುತ್ತಮುತ್ತಲ ಕಾನಸೂರು, ಕಲ್ಮಟ್ಟಿಹಳ್ಳಿ, ಮಲೆನಳ್ಳಿ, ಕಲ್ಮನೆ, ಅಡ್ಕಳ್ಳಿ, ಸೊಂಡ್ಲಬೈಲ್, ಮುತ್ತಮುರ್ಡ, ಕೋಡಸಿಂಗೆ, ಹಿತ್ಲಕೈ, ಬಾಳಗಾರ್, ದಂಟಕಲ್ ಈ ಮುಂತಾದ ಊರುಗಳ ಯುವಕರು 60 ಕೆ.ಜಿ.ಗೂ ಅಧಿಕ ಭಾರದ ಕಲ್ಲನ್ನು ಎತ್ತಲು ಪ್ರಯತ್ನಿಸಿದರು. ಹಲವು ಈ ಭಾರದ ಕಲ್ಲನ್ನು ಎತ್ತದೇ ಬಸವಳಿದರೆ ಕೆಲವು ಯುವಕರು ಅದನ್ನು ಎತ್ತಲು ಸಫಲರಾದರು. ಭಾರದ ಕಲ್ಲನ್ನು ಎತ್ತಿದ ಯುವಕರು ಕಲ್ಲನ್ನು ಹೊತ್ತುಕೊಂಡೇ ಸ್ಥಳೀಯ ಭೂತಪ್ಪನ ಕಟ್ಟೆಯನ್ನು ಮೂರು ಸಾರಿ ಪ್ರದಕ್ಷಿಣೆ ಹಾಕುವುದು ವಾಡಿಕೆ. ಹೀಗೆ ಮಾಡಿದ ಯುವಕರಿಗೆ ವಿಶೇಷ ಬಹುಮಾನಗಳನ್ನೂ ನೀಡಲಾಗುತ್ತದೆ. ಪ್ರತಿ ವರ್ಷ ನಿಗದಿತ ಸಂಖ್ಯೆಯಲ್ಲಿ ಭಾಗವಹಿಸುವ ಯುವಕರು ಕಲ್ಲನ್ನು ಎತ್ತಲು ವಿಫಲರಾದರೆ ಬಹುಮಾನವನ್ನು ಬರುವ ವರ್ಷಕ್ಕಾಗಿ ಕಾಯ್ದಿರಿಸಲಾಗುತ್ತದೆ. ಹೀಗೆ ಒಂದೊಂದು ಊರಿನಲ್ಲಿ ಒಂದೊಂದು ವೈವಿಧ್ಯತೆಯೊಂದಿಗೆ ಆಟಗಳಲ್ನಡೆದು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

**
(ಈ ಎರಡೂ ಲೇಖನಗಳು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ )

Friday, October 24, 2014

ಬೆಂಗಾಲಿ ಸುಂದರಿ-35

(ಬೋಗ್ರಾದ ಖಾಲಿ ಖಾಲಿ ಬೀದಿ)
            ಕಾಣೆಯಾಗಿರುವವನು ವಿನಯಚಂದ್ರನಾದರೂ ಆತನ ಪರಮಾಪ್ತ ಗೆಳೆಯನಾಗಿ ಬದಲಾಗಿದ್ದ ಸೂರ್ಯನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ತನ್ನದೇ ಸಾಮರ್ಥ್ಯ ಬಳಕೆ ಮಾಡಿ ವಿನಯಚಂದ್ರನನ್ನು ಹೇಗೆ ಹುಡುಕಲು ಸಾಧ್ಯ ಎನ್ನುವುದನ್ನೆಲ್ಲ ಪ್ರಯತ್ನಿಸಿದ್ದ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಒಟ್ಟಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸೂರ್ಯನ್ ಗೆ ಬಲವಾಗಿ ಅನ್ನಿಸುತ್ತಿತ್ತು. ತಾನೇ ಬಾಂಗ್ಲಾಕ್ಕೆ ಹೋಗಿ ಬಿಡಲಾ ಎಂದೂ ಆಲೋಚಿಸಿದ್ದ. ಆದರೆ ಬಾಂಗ್ಲಾ ನಾಡಿನಲ್ಲಿ ವಿಮಾನ, ರೈಲು, ರಸ್ತೆ, ದೂರವಾಣಿ ಇವೆಲ್ಲ ಹಿಂಸಾಚಾರದಿಂದ ಕಲಸುಮೇಲೋಗರವಾಗಿರುತ್ತವೆ. ಅಸ್ತವ್ಯಸ್ತವಾಗಿರುತ್ತವೆ ಎಂದುಕೊಂಡು ಸುಮ್ಮನಾಗಿದ್ದ. ತಮಿಳುನಾಡಿನ ಸರ್ಕಾರದಲ್ಲಿದ್ದ ರಾಜಕಾರಣಿಗಳು ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ವಿನಯಚಂದ್ರ ಖಂಡಿತವಾಗಿಯೂ ಭಾರತಕ್ಕೆ ಮರಳುತ್ತಾನೆ ಎನ್ನುವ ವಿಶ್ವಾಸ ಸೂರ್ಯನದ್ದಾಗಿತ್ತು.
              ವಿನಯಚಂದ್ರ ಭಾರತಕ್ಕೆ ಮರಳುವಲ್ಲಿ ಏನೋ ಸಮಸ್ಯೆಯಾಗಿದೆ. ಆದರೆ ಏನೆಂಬುದು ಗೊತ್ತಾಗುತ್ತಿಲ್ಲ ಎಂದುಕೊಂಡ. ಯಾವುದಕ್ಕೂ ಇರಲಿ ಎಂದುಕೊಂಡ ಸೂರ್ಯನ್ ಮಧುಮಿತಾ ಭಾರತದಲ್ಲಿ, ಭಾರತದ ನಿವಾಸಿಯಾಗಿ ಉಳಿಯಲು ಬೇಕಾದ ದಾಖಲೆಪತ್ರಗಳನ್ನು ತಯಾರು ಮಾಡಲು ಹೊರಟಿದ್ದ. ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾಳೆ ಎನ್ನುವುದನ್ನು ತಪ್ಪಿಸಿ, ಮಧುಮಿತಾ ಭಾರತದ ನಿವಾಸಿ ಎಂದು ತೋರಿಸಲು ಅನುವಾಗುವಂತೆ ಅಗತ್ಯ ಕ್ರಮಗಳನ್ನು ಸೂರ್ಯನ್ ಕೈಗೊಳ್ಳಲು ಆರಂಭಿಸಿದ್ದ. ಏನೇ ಸಮಸ್ಯೆ ಬಂದರೂ ಅಗತ್ಯದ ದಾಖಲಾತಿ ಪತ್ರಗಳು ಸಹಾಯ ನೀಡಬೇಕು ಎಂಬುದು ಆತನ ಉದ್ದೇಶವಾಗಿತ್ತು. ತಮಿಳುನಾಡು ಸರ್ಕಾರದ ಸಚಿವರು ಈ ನಿಟ್ಟಿನಲ್ಲಿ ಸೂರ್ಯನ್ ಸಹಾಯಕ್ಕೆ ಸಂಪೂರ್ಣವಾಗಿ ನಿಂತುಬಿಟ್ಟಿದ್ದರು. ಆದ್ದರಿಂದ ಸೂರ್ಯನ್ ಗೆ ಎಲ್ಲ ರೀತಿಯ ಅನುಕೂಲವೂ ಆಯಿತು.

***

          ರಾತ್ರಿಯಲ್ಲೆಲ್ಲೋ ಎಚ್ಚರಾಯಿತು ಮಧುಮಿತಾಳಿಗೆ. ಚಳಿಯಾಗದಂತೆ ಬೆಚ್ಚಗೆ ಹಿಡಿದಿಡಲು ವಿನಯಚಂದ್ರ ಪ್ರಯತ್ನ ನಡೆಸುತ್ತಿದ್ದ. ಕೊನೆಗೆ ಆಕೆಯನ್ನು ಬೆಚ್ಚಗೆ ತಬ್ಬಿ ಹಿಡಿದು ಕುಳಿತಿದ್ದ. ವಿನಯಚಂದ್ರನ ಮೇಲೆ ಮತ್ತಷ್ಟು ಗೌರವ ಮೂಡಿತು ಮಧುಮಿತಾಳಿಗೆ. ವಿನಯಚಂದ್ರನಿಗೆ ನಿದ್ದೆ ಮಾಡಲು ಹೇಳಿದ ಮಧುಮಿತಾ ತಾನು ಎಚ್ಚರಿರುವುದಾಗಿ ಹೇಳಿದಳು. ಅದಕ್ಕೆ ಪ್ರಾರಂಭದಲ್ಲಿ ವಿನಯಚಂದ್ರ ಒಪ್ಪಲಿಲ್ಲ. ಕೊನೆಗೊಮ್ಮೆ ಹಿತವಾಗಿ ಮುತ್ತು ನೀಡಿ ವಿನಯಚಂದ್ರನನ್ನು ಒಪ್ಪಿಸಿದಳು. ಅಲ್ಲೇ ಮಧುಮಿತಾಳ ಭುಜಕ್ಕೆ ಒರಗಿ ನಿದ್ರಿಸಲು ಆರಂಭಿಸಿದ ವಿನಯಚಂದ್ರ.
         ಮಧುಮಿತಾಳ ಮನಸ್ಸಿನ ತುಂಬ ಕಳೆದೊಂದು ತಿಂಗಳ ಅವಧಿಯಲ್ಲಿ ನಡೆದಿದ್ದ ಘಟನೆಗಳು ಸುಳಿದುಬರಲು ಆರಂಭಿಸಿದ್ದವು. ಭಾರತದ ಯಾವುದೋ ಮೂಲೆಯ ಹುಡುಗನ ಪರಿಚಯವಾಗಿ ಆತನನ್ನು ತಾನು ಪ್ರೀತಿಸುತ್ತೇನೆ ಎಂದು ಕನಸಿನಲ್ಲಿಯೂ ಮಧುಮಿತಾ ಅಂದುಕೊಂಡಿರಲಿಲ್ಲ. ವಿನಯಚಂದ್ರನ ಪರಿಚಯವಾಗಿದ್ದು, ಪರಿಚಯ ಸ್ನೇಹಕ್ಕೆ ತಿರುಗಿದ್ದು, ಬಂದ ಬೆಳೆದಿದ್ದು, ನಾಚಿಕೊಂಡು ನಾಚಿಕೊಂಡು ಆತನೇ ಪ್ರೇಮನಿವೇದನೆ ಮಾಡಿದ್ದು, ಇದಕ್ಕೇ ಕಾಯುತ್ತಿದ್ದೆನೋ ಎಂಬಂತೆ ಒಪ್ಪಿಕೊಂಡಿದ್ದು ಎಲ್ಲವೂ ಕಣ್ಣೆದುರು ಸುಳಿಯಿತು. ಅಲ್ಲಿಯವರೆಗೆ ಹಿತವಾಗಿದ್ದ ಬದುಕು ಆ ನಂತರದ ದಿನಗಳಲ್ಲಿ ಏನೆಲ್ಲ ತಿರುವುಗಳನ್ನು ಪಡೆದುಕೊಂಡು ಬಿಟ್ಟಿತಲ್ಲ ಎನ್ನುವುದು ನೆನಪಾಗಿ ಬೆದರಿದಳು ಮಧುಮಿತಾ.
          ಬಾಂಗ್ಲಾ ದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸಿದ ದಾಳಿಗಳು, ಅದಕ್ಕೆ ಬಲಿಯಾದ ತನ್ನ ಕುಟುಂಬ, ಸಲೀಂ ಚಾಚಾನ ಆತಿಥ್ಯ, ಆತನ ಮುಂದಾಳತ್ವದಲ್ಲೇ ಭಾರತ ತಲುಪಲು ಹೊರಟಿದ್ದು, ಸಲೀಂ ಚಾಚಾನ ನಿಧನ ನಂತರದ ತಮ್ಮ ಬದುಕು ಎಲ್ಲವೂ ನೆನಪಾಗಿ ಕಣ್ಣೀರಿನ ರೂಪದಲ್ಲಿ ಧರೆಗಿಳಿಯಲು ಪ್ರಯತ್ನಿಸಿತು. ತಾನು ಅಳಲಾರಂಭಿಸಿದರೆ ವಿನಯಚಂದ್ರನ ನಿದ್ದೆಗೆಲ್ಲಿ ಭಂಗ ಬರುತ್ತದೆಯೊ ಎಂದುಕೊಂಡ ಮಧುಮಿತಾ ಕಣ್ಣೀರನ್ನು ಒರೆಸಿಕೊಂಡಳು.
(ಬೋಗ್ರಾದಲ್ಲಿರುವ ಒಂದು ಬೌದ್ಧ ಧಾಮ)
          ಇಬ್ಬನಿ ನಿಧಾನವಾಗಿ ಇಳಿಯಲು ಆರಂಭಿಸಿತ್ತು. ಬೆಳಗಿನ ಜಾವವಿರಬೇಕು ಎಂದುಕೊಂಡಳು ಮಧುಮಿತಾ. ಮೂರ್ನಾಲ್ಕು ತಾಸಿನ ಚುಟುಕು ನಿದ್ದೆ ಮಾಡಿದ ವಿನಯಚಂದ್ರ ಎದ್ದ. ಕಣ್ಣು ಮುಚ್ಚಿಕೊಂಡೇ ಮೆಲು ದನಿಯಲ್ಲಿ `ಮಧು..' ಎಂದ.
         `ಹೂಂ..'ಅಂದಳು. `ಹೀಗೆ ಇದ್ದು ಬಿಡೋಣವಾ..?' ಎಂದ. ಮಾತಾಡಲಿಲ್ಲ ಮಧುಮಿತಾ. `ನಿನ್ನ ಭುಜ ಎಷ್ಟೆಲ್ಲ ಮೆತ್ತಗಿದೆ. ಸದಾ ನಿನ್ನ ಭುಜ ಹೀಗೆ ಇರುತ್ತದೆ. ನನ್ನ ತಲೆಗೆ ದಿಂಬಿನಂತೆ.. ಅಂತಾದರೆ ಎಷ್ಟು ಶತಮಾನಗಳಾದರೂ ಹೀಗೆ ಇದ್ದು ಬಿಡೋಣ..' ಎಂದು ತುಂಟತನದಿಂದ ಕೇಳಿದ್ದ. `ಥೂ.. ಹೋಗೋ..ಯಾವಾಗಲೂ ನಿನಗೆ ಇಷ್ಟೇ' ಎಂದಿದ್ದಳು ಅವಳು.
           ಮೂಡಣದಲ್ಲಿ ನೇಸರ ನಿಧಾನವಾಗಿ ಏರಿ ಬರುತ್ತಿದ್ದ. ಬಾನಿನ್ನೂ ಕಿತ್ತಳೆ ವರ್ಣದಿಂದ ರಂಗು ರಂಗಾಗಿ ಕಾಣಲು ಆರಂಭಿಸುತ್ತಿದ್ದಾಗಲೇ ರಾತ್ರಿ ಯಾವ ರೀತಿ ಕಂಪೌಂಡ್ ಗೋಡೆ ಹಾರಿದ್ದರೋ ಅದೇ ದಾರಿಯಲ್ಲಿ ಮರಳಿ ಹೊರಟರು. ರಾತ್ರಿ ಎತ್ತರ ಗೊತ್ತಾಗಿರಲಿಲ್ಲವಾದರೂ ಬೆಳಗಿನ ವೇಳೆಗೆ ಯಾಕೋ ತುಂಬ ಎತ್ತರವಿದೆ ಎನ್ನಿಸಿತು. ಕಂಪೌಂಡ್ ಏರಿದ ವಿನಯಚಂದ್ರ ಮಧುಮಿತಾಳನ್ನು ಹತ್ತಿಸಿಕೊಳ್ಳಲು ಕೈಚಾಚಿದ. ಆಕೆಯ ಭಾರ ತೀವ್ರವಾಗಿ ದಬಾರನೆ ಕೆಳಕ್ಕೆ ಬಿದ್ದ. ಕೊಂಚ ನೋವಾಯಿತು. ಎರಡನೇ ಸಾರಿ ತಾನು ಕಂಪೌಂಡ್ ಏರುವ ಬದಲು ಆಕೆಯನ್ನು ಹಿಡಿದು ಹತ್ತಿಸಿದ. ನಿಧಾನವಾಗಿ ಕಂಪೌಂಡ್ ದಾಟಿಕೊಂಡರು.
        ಬೋಗ್ರಾ ನಗರಿ ಆಗ ತಾನೇ ಮುಂಜಾವಿನ ಸುಖನಿದ್ದೆಯಿಂದ ಎಚ್ಚರವಾಗುತ್ತಿತ್ತು. ಬೀದಿ ಬೀದಿಗಳು ಖಾಲಿ ಖಾಲಿಯಾಗಿದ್ದವು. ಇವರು ಮುಂದಕ್ಕೆ ಹೊರಡಲೇ ಬೇಕಾಗಿತ್ತು. ಭಾರತದ ಗಡಿಗೆ ಹತ್ತಿರದಲ್ಲಿರುವ ರಂಗಪುರಕ್ಕೆ ಎಷ್ಟು ಸಾಧ್ಯವೋ ಅಷ್ಟು ಬೇಗ ಹೋಗಬೇಕಾಗಿತ್ತು. ಬಸ್ಸಿನ ಮೂಲಕ ಸಾಗಲು ಕನಿಷ್ಟ ಆರೆಂಟು ಗಂಟೆಗಳ ಕಾಲ ಪ್ರಯಾಣ ಮಾಡಲೇಬೇಕಾಗಿತ್ತು. ನಡೆಯಲಿಕ್ಕೆ ಹೊರಟರೆ ಮೂರು ದಿನಗಳಾದರೂ ಸಾಗಬೇಕಾಗಿತ್ತು. ವಿನಯಚಂದ್ರ ಮಧುಮಿತಾಳ ಬಳಿ ಈ ವಿಷಯದ ಕುರಿತು ಚರ್ಚೆ ಮಾಡಿದ. ಕಿಸೆಯೊಳಗಿನ ಹಣವನ್ನು ಎಣಿಸಿಕೊಂಡ. ರಂಗಪುರವನ್ನು ತಲುಪಲು ಸಾಕಾಗುವಷ್ಟು ಹಣವಿರಲಿಲ್ಲ. ಮುಂದೇನು ಮಾಡುವುದು ಎನ್ನುವ ಆಲೋಚನೆ ಇಬ್ಬರಲ್ಲೂ ಕಾಡಿತು. ಕೊನೆಗೆ ಮಧುಮಿತಾಳೇ `ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗೋಣ.. ಬಸ್ಸಿನಲ್ಲೇ ಆದರೆ ಕಂಡಕ್ಟರನ ಬಳಿ ಕಾಡಿ ಬೇಡಿ ಪ್ರಯಾಣ ಮಾಡೋಣ. ಆತ ನಮ್ಮನ್ನು ಕರೆದೊಯ್ದರೆ ಸರಿ. ಇಲ್ಲವಾದರೆ ಅಲ್ಲೆ ಎಲ್ಲಾದರೂ ಇಳಿದು ನಡೆದು ಹೊರಡೋಣ.. ಏನಂತೀಯಾ..?' ಎಂದಳು. ವಿನಯಚಂದ್ರ ಒಪ್ಪಿಕೊಂಡಿದ್ದ.
         ಬೋಗ್ರಾದ ಬಸ್ಸು ನಿಲ್ದಾಣದ ಕಡೆಗೆ ತೆರಳಿದರು. ಮುಂಜಾವಿನಲ್ಲಿ ಖಾಲಿ ಖಾಲಿಯಾಗಿದ್ದ ಬೋಗ್ರಾದಲ್ಲಿ ನಡೆಯುವುದೆಂದರೆ ವಿಚಿತ್ರ ಖುಷಿಯನ್ನು ನೀಡುತ್ತಿತ್ತು. ಎಲ್ಲಿ ನೋಡಿದರೂ ಜನರಿರಲಿಲ್ಲ. ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆಂದು ಸಾಗುತ್ತಿದ್ದವು. ಸೈಕಲ್ ರಿಕ್ಷಾಗಳ ಟ್ರಿಣ್ ಟ್ರೀಣ್ ಸದ್ದು ಕೇಳಿಸುತ್ತಿತ್ತು. ಕೆಲ ಹೊತ್ತಿನಲ್ಲಿಯೇ ಬೋಗ್ರಾ ಬಸ್ಸು ನಿಲ್ದಾಣ ಸಿಕ್ಕಿತು. ಅಲ್ಲಿಗೇ ಹೋಗಿ ಕೆಲ ಹೊತ್ತು ಕಾದರೂ ಬಸ್ಸು ಸಿಗಲಿಲ್ಲ. ಒಂದು ತಾಸಿನ ನಂತರ ಲಡಕಾಸಿ ಬಸ್ಸೊಂದು ನಿಧಾನವಾಗಿ ಬಂದಿತು. ವಿನಯಚಂದ್ರ ಬೇಗನೇ ಬಸ್ಸನ್ನೇರಲು ಹೊರಟವನು ಬಸ್ಸನ್ನು ನೋಡಿ ಕೆಲ ಕಾಲ ಹಿಂದೇಟು ಹಾಕಿದ. ಈ ಬಸ್ಸು ರಂಗಪುರವನ್ನು ತಲುಪಬಲ್ಲದೇ ಎಂದೂ ಆಲೋಚಿಸಿದ. ವಿನಯಚಂದ್ರನ ಮನದಾಳವನ್ನು ಅರಿತಂತೇ ಮಾತನಾಡಿದ ಮಧುಮಿತಾ `ಬಾಂಗ್ಲಾದಲ್ಲಿ ಇದಕ್ಕಿಂತ ಲಡಕಾಸಿ ಬಸ್ಸುಗಳಿವೆ. ದೂರ ದೂರಿಗೆ ಇವುಗಳ ಮೂಲಕವೇ ಪ್ರಯಾಣ ಕೈಗೊಳ್ಳೋದು. ಏನೂ ಚಿಂತೆ ಮಾಡಬೇಡ. ಇದರಲ್ಲೇ ಹೋಗೋಣ..' ಎಂದು ಖಂಡತುಂಡವಾಗಿ ಹೇಳಿದ್ದಳು. ವಿನಯಚಂದ್ರ ಬಸ್ಸನ್ನೇರಿದ್ದ.
       ಖಾಲಿಯಿದ್ದ ಬಸ್ಸು ಹೊರಡುವ ಮುನ್ನ ಬಸ್ಸಿನಲ್ಲಿ ಒಬ್ಬಾತ ಬಾಳೆ ಹಣ್ಣನ್ನು ಮಾರಲು ತಂದಿದ್ದ. ಹೊಟ್ಟೆಗೆ ಸಾಕಾಗುವಷ್ಟು ಹಣ್ಣನ್ನು ತಿಂದರು. ವಿನಯಚಂದ್ರ ಮತ್ತೊಮ್ಮೆ ಜೇಬಿನಲ್ಲಿದ್ದ ಹಣವನ್ನು ಎಣಿಸಿಕೊಂಡ. ಅಷ್ಟರಲ್ಲಿ ಬಸ್ಸಿನ ಕಂಡಕ್ಟರ್ ಬಂದಿದ್ದ. ಕೊನೆಗೆ ಕಂಡಕ್ಟರ್ ಬಳಿ ತನ್ನಲ್ಲಿ ಇರುವ ಹಣದ ಬಗ್ಗೆ ತಿಳಿಸಿ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯ ತನಕ ಕರೆದೊಯ್ಯಿರಿ ಎಂದ. ಹಣವನ್ನು ಎಣಿಸಿದ ಕಂಡಕ್ಟರ್ `ಪೀರ್ ಗಂಜ್ ವರೆಗೆ ಪ್ರಯಾಣ ಮಾಡಬಹುದು..' ಎಂದು ಹೇಳಿ ಟಿಕೇಟ್ ನೀಡಿದ. `ಪೀರ್ ಗಂಜಿನಿಂದ ರಂಗಪುರ ಎಷ್ಟು ದೂರ..?' ಎಂದು ಕೇಳಿದ ವಿನಯಚಂದ್ರ. `ಬಸ್ಸಿನಲ್ಲಾದರೆ ಎರಡು ತಾಸುಗಳ ಪಯಣ ತಾಸುಗಳ ಪ್ರಯಾಣ..' ಎಂದು ಕಂಡಕ್ಟರ್ ಮುಂದಕ್ಕೆ ತೆರಳಿದ್ದ.
         ಇವರಂದುಕೊಂಡದ್ದಕ್ಕಿಂತ ನಿಧಾನವಾಗಿ ಬಸ್ಸು ತೆರಳಲು ಆರಂಭಿಸಿತು. ಬೋಗ್ರಾದ ಬಸ್ ನಿಲ್ದಾಣದಿಂದ ಬಸ್ಸು ಮುಂದಕ್ಕೆ ಹೊರಡುವ ವೇಳೆಗೆ ಸೂರ್ಯ ಆಗಲೇ ಬಾನಿನ ಮೇಲಕ್ಕೆ ಬರಲು ಆರಂಭಿಸಿದ್ದ. `ಬಾಳೆಹಣ್ಣು ತಿಂದಿದ್ದು ಒಳ್ಳೇದೇ ಆಯ್ತು.. ಇಲ್ಲವಾಗಿದ್ದರೆ ಉಪವಾಸವಿರಬೇಕಿತ್ತು.. ಈ ಬಸ್ಸು ಯಾಕೋ ಬಹಳ ನಿಧಾನ ಹೋಗ್ತಾ ಇದೆ ಕಣೆ ಮಧು..' ಎಂದ ವಿನಯಚಂದ್ರ. `ಹೂಂ..' ಅಂದ ಮಧುಮಿತಾ ಸುಮ್ಮನಾದಳು. ಬಸ್ಸು ಆಮೆಗತಿಯಲ್ಲಿಯೇ ಮುಂದುವರಿಯುತ್ತಿತ್ತು. ಬೋಗ್ರಾದಲ್ಲಿ ನಿಧಾನಕ್ಕೆ ಜನಸಂದಣಿಯೂ ಹೆಚ್ಚಾಗುತ್ತಿತ್ತು. ಮೂರ್ನಾಲ್ಕು ತಿರುವುಗಳನ್ನು ದಾಟಿ ರಂಗಪುರದ ಕಡೆಗೆ ಆಗಮಿಸುವ ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಬಹಳಷ್ಟು ಹೊತ್ತು ಸರಿದಿದ್ದವು.

(ಮುಂದುವರಿಯುತ್ತದೆ)

Tuesday, October 21, 2014

ದೀಪ ಬೆಳಗೋಣ

ಬನ್ನಿ ದೀಪವ ಬೆಳಗೋಣ
ಕತ್ತಲೆಯನೋಡಿಸೋಣ |

ನೂರು ಕಾಲದ ಜಡವ
ದೂರಕೆ ತಳ್ಳೋಣ
ಹೊಸ ಚೈತನ್ಯದ ಬತ್ತಿಯ
ದೀಪ ಬೆಳಗೋಣ |

ಗಾಡಾಂಧಕಾರವನು
ತೊಡೆದು ಹಾಕೋಣ
ಹೊಸ ಮಾನವತೆಯ ತತ್ವ
ಬೆಳಗಿ ಬೆಳಗೋಣ |

ಪ್ರೀತಿಯ ಹೊಸ
ತೇರನೆಳೆಯೋಣ
ಕಾರುಣ್ಯದ ಹೊಸ
ಬೀಜ ಬಿತ್ತೋಣ |

ನಮ್ಮೊಳಗಣ ತಮವ
ದಮನ ಮಾಡೋಣ
ಹೊಸ ಸತ್ವ ನವ ಚೈತ್ರ
ಎತ್ತಿ ಹಿಡಿಯೋಣ |

ದೀಪ ಬೆಳಗೋಣ
ಬನ್ನಿ ದೀಪವಾಗೋಣ
ಕತ್ತಲೆಯ ಬದುಕಿಗೆ
ಬೆಳಕ ತುಂಬೋಣ |

Monday, October 20, 2014

ಬೆಂಗಾಲಿ ಸುಂದರಿ-34

(ಬೋಗ್ರಾದ ಕಾಲುಸಂಕ)
              ಬೋಗ್ರಾದಲ್ಲಿ ಕಾಲಿಡುವ ವೇಳೆಗೆ ಸಾಕಷ್ಟು ಕತ್ತಲಾಗಿತ್ತು. ಬೋಗ್ರಾದಿಂದ ಮುಂದಕ್ಕೆ ಸಾಗುವ ಬಗ್ಗೆ ವಿನಯಚಂದ್ರ ಹಾಗೂ ಮಧುಮಿತಾ ಯಾವುದೇ ಆಲೋಚನೆ ನಡೆಸಿರಲಿಲ್ಲ. ಬೋಗ್ರಾದಲ್ಲೇ ಉಳಿಯಬೇಕೆ, ಅಥವಾ ತಕ್ಷಣವೇ ಮುಂದಕ್ಕೆ ಸಾಗಬೇಕೆ ಎನ್ನುವುದೂ ಸ್ಪಷ್ಟವಾಗಿರಲಿಲ್ಲ. ಇಬ್ಬರಿಗೂ ಸಾಕಷ್ಟು ಆಯಾಸವಾಗಿತ್ತು. ಹೆಜ್ಜೆ ಕಿತ್ತಿಡಲೂ ಆಗದಷ್ಟು ನಿತ್ರಾಣರಾಗಿದ್ದರು. ಮುಂದಕ್ಕೆ ಪ್ರಯಾಣ ಮಾಡುವ ಮನಸ್ಸು ಇಬ್ಬರಲ್ಲೂ ಇರಲಿಲ್ಲ. ಹಾಗೆಂದು ಅಲ್ಲೇ ಉಳಿಯೋಣವೆಂದರೆ ಕೈಯಲ್ಲಿನ ದುಡ್ಡು ಕೂಡ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಬೋಗ್ರಾದಲ್ಲಿ ರೂಮು ಮಾಡಿ ಉಳಿದರೆ ಮುಂದಿನ ಪ್ರಯಾಣಕ್ಕೆ ತೊಂದರೆಯಾಗುವ ಸಾಧ್ಯತೆಗಳು ಅಧಿಕವಾಗಿದ್ದವು. ಮಧುಮಿತಾಳ ಬಳಿ ವಿನಯಚಂದ್ರ ಕೇಳುವ ಮೊದಲೆ ಆಕೆಯೇ ಇಲ್ಲಿಯೇ ಉಳಿದುಬಿಡೋಣ ಎಂದಳು. ವಿನಯಚಂದ್ರ ಹೂಂ ಅಂದಿದ್ದ.
             ಬೋಗ್ರಾ ಪಟ್ಟಣದಲ್ಲಿ ರೂಮುಗಳ ದರ ಸಾಕಷ್ಟು ಹೆಚ್ಚಾಗಿದ್ದ ಕಾರಣ ಉಳಿಯಲು ಒಂದೆರಡು ಕಡೆಗೆ ಜಾಗ ಹುಡುಕಾಟ ನಡೆಸಿದರು. ಆದರೆ ಎಲ್ಲೂ ಇವರಿಗೆ ಅಗತ್ಯವಾದ ಸ್ಥಳ ದೊರಕಲಿಲ್ಲ. ಕೊನೆಗೆ ಅನಿವಾರ್ಯವಾಗಿ ಬೋಗ್ರಾದ ಪಾರ್ಕೊಂದರಲ್ಲಿ ರಾತ್ರಿ ಕಳೆಯುವ ನಿರ್ಧಾರಕ್ಕೆ ಬಂದರು. ಸನಿಹದ ಹೊಟೆಲೊಂದರಲ್ಲಿ ಊಟದ ಶಾಸ್ತ್ರ ಮುಗಿಸಿ ಉದ್ಯಾನದ ಬಳಿ ಬಂದರೆ ಬಾಗಿಲು ಹಾಕಿತ್ತು. ಒಬ್ಬ ಕಾವಲುಗಾರ ಪಾರ್ಕನ್ನು ಕಾಯುತ್ತ ನಿಂತಿದ್ದ. ಉದ್ಯಾನದೊಳಗೆ ಬಿಡಲು ಆತ ಖಂಡಿತ ಒಪ್ಪಲಿಕ್ಕಿಲ್ಲ ಎಂದುಕೊಂಡರು. ಕೊನೆಗೆ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಆತನ ಕಣ್ಣು ತಪ್ಪಿಸಿ ಪಕ್ಕದಲ್ಲೆಲ್ಲೋ ಹಾದು ಬಂದು ಉದ್ಯಾನದ ಗೋಡೆಯನ್ನು ಹಾರಿ ಒಳಹೊಕ್ಕರು. ಅಲ್ಲೊಂದು ಕಡೆಗೆ ಮರದ ಅಡಿಯಲ್ಲಿ ಕುಳಿತರು. ಆ ರಾತ್ರಿ ಅಲ್ಲೇ ಉಳಿದು ಮರುದಿನ ಮುಂದಿನ ಪ್ರಯಾಣ ನಡೆಸಬೇಕಿತ್ತು.
             ಮರದ ಅಡಿಯಲ್ಲಿ ಕುಳಿತ ವಿನಯಚಂದ್ರನ ಕಾಲಿನ ಮೇಲೆ ಮಧುಮಿತಾ ಮಲಗಿದಳು. ತಿಳಿ ಬೆಳದಿಂಗಳು ಹಿತವಾಗಿತ್ತು. ಮರದ ಎಲೆಗಳ ನಡುವೆ ಆಗೀಗ ಇಣುಕುತ್ತಿದ್ದ ಬೆಳದಿಂಗಳ ಕಿರಣಗಳು ಇಬ್ಬರ ಮುಖದ ಮೇಲೆ ಕಣ್ಣಾಮುಚ್ಚಾಲೆ ಆಡುತ್ತಿದ್ದವು. ತುಸುವೇ ಬೀಸುತ್ತಿದ್ದ ತಂಗಾಳಿ ಮನಸ್ಸಿನಲ್ಲಿ ಉಲ್ಲಾಸವನ್ನು ಉಂಟುಮಾಡುತ್ತಿತ್ತು. ದೂರದಿಂದ ನೋಡಿದರೆ ಸ್ವರ್ಗದ ದೇವದಂಪತಿಗಳು ಬಂದು ಉದ್ಯಾನದಲ್ಲಿ ಕುಳಿತು ರಸನಿಮಿಷಗಳನ್ನು ಕಳೆಯುತ್ತಿದ್ದಾರೇನೋ ಎನ್ನಿಸುವಂತಿತ್ತು. ಮಧುಮಿತಾ ಖುಷಿಯಲ್ಲಿದ್ದಳು. ವಿನಯಚಂದ್ರ ಕೀಟಲೆಯ ಮೂಡಿನಲ್ಲಿದ್ದ.
            `ಈ ರಾತ್ರಿ ದೀರ್ಘವಾಗಲಿ ಅನ್ನಿಸುತ್ತಿದೆ ವಿನೂ..' ಎಂದಳು ಮಧುಮಿತಾ.
            `ಹೌದು.. ನನಗೂ ಹಾಗೇ ಅನ್ನಿಸುತ್ತಿದೆ.. ನೀನು ಜೊತೆಗೆ ಇದ್ದರೆ ಹಿತವೆನ್ನಿಸುತ್ತಿದೆ.. ಈ ರಾತ್ರಿ ಹೀಗೇ ಇರಲಿ ದೇವರೆ.. ಅಂದುಕೊಳ್ಳುತ್ತಿದ್ದೇನೆ ಕಣೇ..' ಅಂದ ವಿನಯಚಂದ್ರ.
            `ಮತ್ತೆ ಭಾರತ ತಲುಪೋದು ಕ್ಯಾನ್ಸಲ್ಲಾ..?' ಎಂದು ತಮಾಷೆ ಮಾಡಿದಳು ಮಧುಮಿತಾ.
            ವಿನಯಚಂದ್ರ `ಓಹೋ..  ನನಗೇ ಕಾಲೆಳೆಯೋದಾ?' ಎಂದ. ಕಾಲ ಮೇಲೆ ಮಲಗಿದ್ದ ಮಧುಮಿತಾಳನ್ನು ತನ್ನೆರಡೂ ಕೈಗಳಿಂದ ಬಾಚಿ ತಬ್ಬಿ ಹಿಡಿದು ತುಟಿಗಳ ಮೇಲೆ ತುಟಿಯನ್ನೊತ್ತಿ ಹಿತವಾಗಿ ಮುತ್ತು ಕೊಟ್ಟ. `ಥೂ... ಬಿಡು ಮಾರಾಯಾ..' ಎಂದಳಾದಳೂ ಮಧುಮಿತಾ ವಿನಯಚಂದ್ರನ ತಬ್ಬುಗೆಯನ್ನು ಹಿತವಾಗಿ ಅನುಭವಿಸಿದಳು. ಹಾಗೇ ಮತ್ತೊಮ್ಮೆ ಮುತ್ತನ್ನು ಕೊಟ್ಟ ವಿನಯಚಂದ್ರ. ಮಧುಮಿತಾ ಹಿತವಾಗಿ ನಾಚಿದಳು.
             ಹೀಗೇ ಅದೆಷ್ಟು ಹೊತ್ತು ಜೊತೆಯಲ್ಲಿದ್ದರೋ. ರಾತ್ರಿಯ ಬೀದಿ ನಾಯಿಗಳ ವಿಕಾರವಾದ ಕೂಗಿಗೆ ಬೆಚ್ಚಿ ಎಚ್ಚೆತ್ತರು. ವಿನಯಚಂದ್ರ ಒಮ್ಮೆ ಸರಿದು ಕುಳಿತ. ಕೊನೆಗೆ ವಿನಯಚಂದ್ರ ಮಧುಮಿತಾಳ ಬಳಿ `ಈಗ ನೀನು ಮಲಗಿ ನಿದ್ರಿಸು. ನಾನು ಕಾವಲು ಕಾಯುತ್ತಿರುತ್ತೇನೆ. ನಂತರ ನಾನು ಮಲಗುತ್ತೇನೆ..' ಎಂದ. ಮಧುಮಿತಾ ಮಲಗಿ ನಿದ್ರಿಸಿದಳು. ಕಣ್ಣಮುಚ್ಚಿದಾಗ ಹೊಸದೊಂದು ಕನಸಿನ ಲೋಕ ತೆರೆದುಕೊಳ್ಳತೊಡಗಿತು. ಅವಳನ್ನು ಹಾಗೆಯೇ ನೋಡುತ್ತ ಕುಳಿತುಬಿಟ್ಟ. ಅದೇಕೋ ಅವನಿಗೆ ಗೊತ್ತಿಲ್ಲದಂತೆ ಕಣ್ಣಿನಿಂದ ನೀರು ಬರಲು ಆರಂಭವಾಗಿತ್ತು. ತನಗೆ ಇಂತಹ ಬಂಗಾರದ ಹುಡುಗಿ ಸಿಕ್ಕಳು ಎನ್ನುವ ಆನಂದಕ್ಕಾ ಅಥವಾ ಇಂತಹ ಹುಡುಗಿ ಇಷ್ಟೆಲ್ಲ ಪಾಡು ಪಡಬೇಕಾಯಿತಲ್ಲ ಎನ್ನುವ ದುಃಖಕ್ಕಾ ಒಂದೂ ಗೊತ್ತಾಗಲಿಲ್ಲ.

**

        `ಅಲ್ಲಾ.. ವಿಶ್ವಕಪ್ ಮುಗಿದು ಇಷ್ಟು ವರ್ಷ ಆಗೋತು. ಇನ್ನೂ ವಿನಯಚಂದ್ರ ಮನೆಗೆ ಬಂಜ್ನಿಲ್ಲೆ. ಎತ್ಲಾಗಿ ಹೋದ. ಎಂತಾದ್ರೂ ಗೊತ್ತಾಜಾ? ಒಂಚೂರು ವಿಚಾರ ಮಾಡಕಾಗಿತ್ತು. ನೀವು ನೋಡಿದ್ರೆ ತನಗೆ ಸಂಬಂಧವೇ ಇಲ್ಲ ಅನ್ನೋ ಹಂಗೆ ಇದ್ರಲಿ ಥೋ.. ' ಎಂದು ವಿನಯಚಂದ್ರನ ಅಮ್ಮ ಸುಶೀಲಮ್ಮ ತಮ್ಮ ಯಜಮಾನರ ಬಳಿ ಸಿಡಿಮಿಡಿಗುಡಲು ಆರಂಭಿಸಿದ್ದಳು.
         ಶಿವರಾಮ ಹೆಗಡೆಯವರೂ ಹಲವು ಸಾರಿ ಮಗನ ಬಗ್ಗೆ ವಿಚಾರಿಸಿದ್ದರು. ತಮಗೆ ತಿಳಿದವರೆಂದರೆ ಚಿದಂಬರ ಮಾತ್ರ ಆಗಿದ್ದರು. ಅವರ ಬಳಿ ವಿನಯಚಂದ್ರನ ಬಗ್ಗೆ ಕೇಳಿದಾಗ `ವಿನಯಚಂದ್ರ ವಿಶ್ವಕಪ್ ಮುಗಿದ ತಕ್ಷಣ ಭಾರತಕ್ಕೆ ಹಿಂದಿರುಗಿದ ಭಾರತ ತಂಡದ ಜೊತೆಗೆ ವಾಪಾಸು ಬಂದಿಲ್ಲ. ಬಾಂಗ್ಲಾದಲ್ಲಿ ಯಾವುದೋ ಹುಡುಗಿಯನ್ನು ಪ್ರೀತಿಸಿದ್ದು, ಅವಳಿಗೆ ಏನೋ ಸಮಸ್ಯೆಯಾಗಿದ್ದು, ಅವಳನ್ನು ಭಾರತಕ್ಕೆ ಕರೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದಾನೆ..' ಎಂದು ತಿಳಿಸಿದ್ದರು.
                  `ಈ ಮಾಣಿ ಯಾವಾಗ್ಲೂ ಹಿಂಗೆಯಾ.. ಥೋ.. ಯಾವ ಹುಡುಗಿ ಹುಡುಕಿ ಲವ್ ಮಾಡಿದ್ನೋ.. ಅದು ಯಾವ ರೀತಿಯ ಹುಡುಗೀನೋ.. ಅವಳ ಹಿಂದೆ ಇಂವ ಹೋಜಾ.. ಇವನ ಬುದ್ದಿಗೆ ಎಂತಾ ಆಗಿಕ್ಕು ಹೇಳಿ..' ಎಂದು ಬೈದುಕೊಂಡಿದ್ದರು ಶಿವರಾಮ ಹೆಗಡೆಯವರು. ಪತ್ರಕರ್ತನಾಗಿದ್ದ ಸಂಜಯನ ನೆನಪಾಗಿ ಆತನ ಬಳಿ ಮಾತನಾಡೋಣ ಎಂದುಕೊಂಡರಾದರೂ ಸಂಜಯನ ಮೊಬೈಲ್ ನಂಬರ್ ಸಕಾಲಕ್ಕೆ ಸಿಗದೇ ಸುಮ್ಮನಾದರು.
         ಮಗ ವಾಪಾಸು ಬಂದಿಲ್ಲ ಎನ್ನುವುದಕ್ಕಿಂತಲೂ ಯಾವುದೋ ಹುಡುಗಿಯನ್ನು ಪ್ರೀತಿಸಿ ಅವಳಿಗಾಗಿ ಭಾರತ ತಂಡವನ್ನೂ ಬಿಟ್ಟು ಬಾಂಗ್ಲಾದಲ್ಲೇ ಉಳಿದಿದ್ದಾನಲ್ಲ ಎನ್ನುವುದು ಮನದಾಳದಲ್ಲಿ ಅಸಮಧಾನಕ್ಕೆ ಕಾರಣವಾಗಿತ್ತು, ಆದರೆ ಬಾಂಗ್ಲಾ ನಾಡಿನಲ್ಲಿ ಹಿಂಸಾಚಾರ ತೀವ್ರವಾಗಿದೆ ಎನ್ನುವುದು ಕೇಳಿದಾಗ ಮಾತ್ರ ಮನಸ್ಸಿನಲ್ಲಿ ಕಳವಳ ಉಂಟಾಗಿತ್ತು. ಯಾವುದೋ ಕೂಪಕ್ಕೆ ಬಿದ್ದನೆ ಮಗರಾಯ ಎಂದೂ ಆಲೋಚಿಸಿದರು. ಬಾಂಗ್ಲಾ ನಾಡಿನಿಂದ ಅದೊಂದು ದಿನ ಮಗ ಪೋನ್ ಮಾಡಿದಾಗ ಕೊಂಚ ನಿರಾಳರಾಗಿದ್ದರು ಹೆಗಡೆಯವರು. ಪೋನ್ ಮಾಡಿದಾಗಲೇ ಬೈದುಬಿಡಬೇಕು ಎಂದುಕೊಂಡಿದ್ದರಾದರೂ ಮಗ ಯಾವ ಸಮಸ್ಯೆಯಲ್ಲಿ ಸಿಲುಕಿದ್ದಾನೋ ಎಂದುಕೊಂಡು ಸುಮ್ಮನಾಗಿದ್ದರು. ಇದೀಗ ಮಡದಿ ಸುಶೀಲಾ ಕುಂತಲ್ಲಿ, ನಿಂತಲ್ಲಿ ಸಿಡಿಮಿಡಿ ಮಾಡಲು ಆರಂಭಿಸಿದಾಗ ಮಾತ್ರ ಮಗನ ಬಗ್ಗೆ ಮಾಹಿತಿ ಪಡೆದು ಬರಲೇ ಬೇಕು ಎಂದು ತಮ್ಮ ಜೀಪನ್ನು ಹೊರತೆಗೆದಿದ್ದರು.
         ನಗರಕ್ಕೆ ಬಂದವರೇ ಸೀದಾ ಚಿದಂಬರ ಅವರನ್ನು ಭೇಟಿಯಾದ ಹೆಗಡೆಯವರು ಮಗನ ಬಗ್ಗೆ ಮತ್ತೆ ಕೇಳಿದ್ದರು. ಅದಕ್ಕೆ ಪ್ರತಿಯಾಗಿ ಚಿದಂಬರ ಅವರು `ವಿನಯಚಂದ್ರನ ಬಗ್ಗೆ ಭಾರತ ಕಬ್ಬಡ್ಡಿ ತಂಡದ ಮುಖ್ಯ ಕೋಚ್ ಜಾಧವ್ ಅವರು ಬಹಳ ತಲೆಕೆಡಿಸಿಕೊಂಡಿದ್ದಾರೆ. ತಂಡ ಬಿಟ್ಟು ಬಾಂಗ್ಲಾದಲ್ಲೇ ಉಳಿದ ಆತನ ಬಗ್ಗೆ ಸಿಟ್ಟಾಗಿದ್ದ ಅವರು ಬಹಳ ಕೂಗಾಡಿದರು. ನನ್ನ ಬಳಿಯೂ ಆತನ ವಿರುದ್ಧ ಕೂಗಾಡಿದ್ದರು. ನಾನು ಅವರ ಬಳಿ ಏನೋ ಹೇಳಲು ಹೋಗಿದ್ದೆ. ಆದರೆ ನನ್ನ ಮಾತನ್ನು ಕೇಳಿರಲಿಲ್ಲ. ಇದೀಗ ಸ್ವಲ್ಪ ಸಮಾಧಾನಗೊಂಡಿರುವ ಅವರು ಬಾಂಗ್ಲಾ ನಾಡಿನಲ್ಲಿ ವಿನಯಚಂದ್ರನನ್ನು ಹುಡುಕಲು ಭಾರತ ಸರ್ಕಾರಕ್ಕೆ ಹೇಳಿ ಕ್ರಮ ಕೈಗೊಂಡಿದ್ದಾರೆ. ಬಾಂಗ್ಲಾ ನಾಡಿನಲ್ಲಿ ಟಿವಿ ಜಾಹಿರಾತು ನೀಡಲಾಗಿದೆ. ಅಲ್ಲಿನ ಸರ್ಕಾರಕ್ಕೂ ತಿಳಿಸಲಾಗಿದೆ.. ಆದರೆ ಇದುವರೆಗೂ ವಿನಯಚಂದ್ರ ಎಲ್ಲಿದ್ದಾನೆ ಎನ್ನುವುದು ಪತ್ತೆಯಾಗಿಲ್ಲವಂತೆ..' ಎಂದರು.
          `ಅಲ್ಲಾ.. ಅಂವ ಸಿಕ್ಕಿದ್ನಿಲ್ಲೆ ಹೇಳ್ತಾ ಇದ್ದಿರಿ ನೀವು.. ಮುಂದೆಂತದು ಕಥೆ.? ಮಗ ಕೈಬಿಟ್ಟು ಹೋಗ್ತ್ನಿಲ್ಲೆ ಅಲ್ದಾ? ಅಲ್ಲಾ ಆ ಬಾಂಗ್ಲಾದೇಶದಲ್ಲಿ ಬೇರೆ ಹಿಂಸಾಚಾರ ಸಿಕ್ಕಾಪಟ್ಟೆ ಆಗೋಜಡಾ. ಏನಾದರೂ ಭಾನಗಡಿ ಆದರೆ ಎಂತಾ ಮಾಡವು ಹೇಳಿ' ಎಂದು ಆತಂಕದಿಂದ ಕೇಳಿದ್ದರು ಶಿವರಾಮ ಹೆಗಡೆಯವರು.
          `ಹಂಗೇನೂ ಆಗೋದಿಲ್ಲ ಬಿಡಿ ಹೆಗಡೇರೆ. ಏನೂ ಆಗಿರಲಿಕ್ಕಿಲ್ಲ. ನಿಮ್ಮ ಮಗನ ಬಗ್ಗೆ ನಿಮಗೆ ನಂಬಿಕೆಯಿಲ್ಲವಾ? ನನಗಂತೂ ಆತನ ನಂಬಿಕೆಯಿದೆ. ಆತ ಏನು ಮಾಡುವುದಿದ್ದರೂ ಒಳ್ಳೆಯದಕ್ಕಾಗಿ ಅನ್ನೋದು ನಿಮಗೆ ಗೊತ್ತಿಲ್ಲವಾ? ಈಗಲೂ ಆತ ಏನೋ ಒಳ್ಳೆಯ ಕಾರಣಕ್ಕೇ ಬಾಂಗ್ಲಾದಲ್ಲಿ ಉಳಿದುಕೊಂಡಿದ್ದಾನೆ. ಅಲ್ಲಿದ್ದಾಗಲೇ ಹಿಂಸಾಚಾರ ತೀವ್ರವಾಗಿದೆ. ವಾಪಾಸು ಬರಲು ಏನೋ ಸಮಸ್ಯೆಯಾಗಿದೆ. ತೊಂದರೆ ಪಡಬೇಡಿ. ಆತನೇ ಹೇಗಾದರೂ ಮಾಡಿ ವಾಪಾಸು ಬರುತ್ತಾನೆ. ನಮ್ಮ ಸರ್ಕಾರವೂ ಪ್ರಯತ್ನ ಮಾಡುತ್ತಿದೆ.. ಅವನಿಗೆ ಏನೂ ಆಗಿರುವುದಿಲ್ಲ' ಎಂದರು ಚಿದಂಬರ.
          ಈಗ ಸ್ವಲ್ಪ ಸಮಾಧಾನ ಪಟ್ಟುಕೊಂಡ ಶಿವರಾಮ ಹೆಗಡೆಯವರು `ಹಂಗಂಬ್ರಾ.. ಹಂಗಾದ್ರೆ ಸರಿ. ಆನು ತಲೆಬಿಸಿ ಮಾಡ್ಕ್ಯತ್ನಿಲ್ಲೆ.. ಆದ್ರೂ ನೀವು ಒಂಚೂರು ಏನಾದ್ರೂ ಮಾಡಲೆ ಆಗ್ತಾ ನೋಡಿ..ನಿಮ್ಮನ್ನು ಬಿಟ್ಟರೆ ಮತ್ತೆ ಯಾರತ್ರ ಹೇಳಕಳವು ಹೇಳಿ ಗೊತ್ತಾಜಿಲ್ಲೆ ನೋಡಿ. ಯಮ್ಮನೆದು ನಾಲ್ಕೈದು ದಿನ ಆತು ಮಗನ ಬಗ್ಗೆ ವಿಚಾರ ಮಾಡಿ ವಿಚಾರ ಮಾಡಿ ಹೇಳಿ. ಬರೀ ಕೊಟಗುಡಿತಾ ಇದ್ದು. ಅದ್ಕಾಗಿ ಓಡಿ ಬಂದಿ ನೋಡಿ' ಎಂದರು. `ಖಂಡಿತ' ಎಂದ ಚಿದಂಬರ್ ಹೆಗಡೇರಿಂದ ಬೀಳ್ಕೊಟ್ಟರು. ಹೆಗಡೇರು ಅಡಿಕೆಯ ವಕಾರಿಗೆ ಬರುವಷ್ಟರಲ್ಲಿ ಪರಿಚಯಸ್ಥರೊಬ್ಬರು ಸಿಕ್ಕಿದವರೇ `ಹ್ವಾಯ್.. ಶಿವರಾಮಣ್ಣ.. ನಿಮ್ ಮಗ ಅದೆಂತದ್ದೋ ವಿಶ್ವಕಪ್ ಗೆದ್ನಡಾ.. ಅದ್ಯಾವುದೋ ದೇಶಕ್ಕೆ ಹೋಗಿದ್ನಲಿ.. ಬಂದ್ನನ್ರೋ..?' ಎಂದು ಕೇಳಿಬಿಟ್ಟರು.
         `ಕಬ್ಬಡ್ಡಿ ವಿಶ್ವಕಪ್ಪು ಅದು. ವಿಶ್ವಕಪ್ ಗೆದ್ದಿದ್ದು. ಬಾಂಗ್ಲಾ ದೇಶಕ್ಕೆ ಹೋಜಾ.. ಅಲ್ಲೆಂತದ್ದೋ ಸಮಸ್ಯೆ ಆಜು.. ಸಧ್ಯದಲ್ಲೇ ಬರ್ತಾ..ಒಂದೆರಡು ಮೂರ್ ದಿನಾ ಆಗಲಕ್ಕು ಬಪ್ಪಲೆ' ಎಂದರು ಹೆಗಡೆಯವರು.
           `ಬಾಂಗ್ಲಾ ದೇಶಕ್ಕನ್ರಾ.. ಅಲ್ಲಿಗೆ ಎಂತಕ್ಕೆ ಹೋಜಾ ಹೇಳಿ.. ಅಲ್ಲಿ ಸಿಕ್ಕಾಪಟ್ಟೆ ಗಲಾಟೆನಡಾ.. ಹಿಂಸಾಚಾರ ಭುಗಿಲೆಜ್ಜಡಾ.. ಹಿಂದೂಗಳನ್ನಂತೂ ಕಂಡಕಂಡಲ್ಲಿ ಕೊಂದು ಹಾಕ್ತಾ ಇದ್ವಡಾ.. ಥೋ ಮಾರಾಯ್ರಾ.. ಎಂತಾ ನಮನಿ ಮಾಡ್ಕಂಡು ಬಿಟ್ನರಾ ಅಂವಾ..ಮಗ ಪೋನ್ ಗೀನ್ ಮಾಡಿದಿದ್ನಾ?' ಎಂದುಬಿಟ್ಟರು ಅವರು.
                ಚಿದಂಬರ ಅವರನ್ನು ಭೇಟಿ ಮಾಡಿ ಮಾತನಾಡಿದ ನಂತರ ಹೆಗಡೆಯವರ ಮನಸ್ಸಿನಲ್ಲಿ ತಣ್ಣಗಾಗಿದ್ದ ದುಗುಡ ಮತ್ತೆ ಹೆಚ್ಚಾಯಿತು. ತಕ್ಷಣವೇ ಅವರು ವಕಾರಿಯಲ್ಲಿ ಅಗತ್ಯದ ಕೆಲಸವನ್ನು ಬಿಟ್ಟು ಅದೇ ನಗರಕ್ಕೆ ಆ ದಿನವಷ್ಟೇ ಆಗಮಿಸಿದ್ದ ಸ್ಥಳೀಯ ಶಾಸಕರು ಹಾಗೂ ಸಂಸದರನ್ನು ಭೇಟಿ ಮಾಡಲು ಹೊರಟರು.
            ಶಾಸಕರ ಭೇಟಿಯಾಗಿ ಅವರು ವಿನಯಚಂದ್ರನನ್ನು ಹುಡುಕುವ ಭರವಸೆಯನ್ನು ನೀಡಿದ್ದು ಆಯಿತು. ಸಂಸದರನ್ನು ಭೇಟಿ ಮಾಡಲು ತೆರಳಿದ ಹೆಗಡೆಯವರಿಗೆ ಒಂದು ತಾಸಿನ ಕಾಯುವಿಕೆಯ ನಂತರ ಸಂಸದರ ದರ್ಶನವಾಯಿತು. ಶಿವರಾಮ ಹೆಗಡೆಯವರು ತಮ್ಮ ಮಗನ ಪ್ರವರವನ್ನು ಹೇಳಿದ ತಕ್ಷಣ ಸಂಸದರು `ಓಹೋ.. ಅಂವ ನಿಮ್ಮ ಮಗನಾ? ಕಪ್ಪು ಗೆದ್ದ ವಿಷಯ ತಿಳಿದಿದ್ದೆ. ನಮ್ಮ ಕ್ಷೇತ್ರದವನೇ ಅಂತ ಗೊತ್ತಿತ್ತು. ಕೊನೆಗೆ ಕಾಣೆಯಾಗಿರುವ ಬಗ್ಗೆ ಮಾಹಿತಿಯೂ ಬಂದಿತ್ತು. ನೀವೇನೂ ತಲೆಬಿಸಿ ಮಾಡ್ಕೋಬೇಡ್ರಿ ಹೆಗಡೇರೆ. ನಾವು ನಿಮ್ಮ ಮಗನನ್ನು ಹುಡುಕುತ್ತೇವೆ. ನಮ್ಮ ಸರ್ಕಾರ ಅದರ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳುತ್ತಲೂ ಇದೆ. ಬಾಂಗ್ಲಾ ನಾಡಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.. ನೀವು ಆರಾಮಾಗಿರಿ. ನಿಮ್ ಜೊತಿಗೆ ನಾವ್ ಇದೆವೆ' ಎಂದರು. ಸಮಾಧಾನ ಪಟ್ಟುಕೊಂಡ ಶಿವರಾಮ ಹೆಗಡೆರು ಮನೆಯತ್ತ ಮುಖ ಮಾಡಿದರು.
          ಮನೆಗೆ ಬರುವ ವೇಳೆಗೆ ಇವರ ದಾರಿಯನ್ನೇ ಕಾಯುತ್ತಿದ್ದರೋ ಎಂಬಂತೆ ಸುಶೀಲಮ್ಮ ಎದುರು ಬಂದರು. ಯಜಮಾನರಿಗೆ ಮಜ್ಜಿಗೆಯನ್ನು ಕುಡಿಯಲು ಕೊಟ್ಟವರೇ `ಎಂತಾ ಆತಡಾ..? ವಿನಯಚಂದ್ರ ಯಾವಾಗ ಬತ್ನಡಾ?' ಎಂದು ಕೇಳಿದರು.  ಶಿವರಾಮ ಹೆಗಡೆಯವರು ತಕ್ಷಣ ರೇಗಿದವರೇ `ಮಗ ಬತ್ನೇ... ಅವಂಗೆ ಎಂತದ್ದೂ ಆಗ್ತಿಲ್ಲೆ.. ತಲೆ ತಿನ್ನಡಾ ಮಾರಾಯ್ತಿ.. ಅರಾಮ್ ಇದ್ನಡಾ. ಎಲ್ಲರೂ ಅವನ ಹುಡುಕಾಟದಲ್ಲೇ ಇದ್ವಡಾ ಮಾರಾಯ್ತಿ' ಎಂದವರೇ ಎದ್ದು ತೋಟದ ಕಡೆಗೆ ಸಾಗಿದರು. ಮಗ ಬರುತ್ತಾನೋ ಇಲ್ಲವೋ ಎನ್ನುವುದು ಸ್ಪಷ್ಟವಾಗದ ಕಾರಣ ಗೊಂದಲದಲ್ಲಿಯೇ ಮನೆಯೊಳಗೆ ತೆರಳಿದರು ಸುಶೀಲಮ್ಮ.

***

          ವಿನಯಚಂದ್ರ ರಾತ್ರಿ ಯಾರಿಗೂ ಹೇಳದಂತೆ ಹೊಟೆಲನ್ನು ಬಿಟ್ಟು ಹೋಗಿದ್ದಾನೆ ಎನ್ನುವುದನ್ನು ತಿಳಿದವರೇ ಜಾಧವ್ ಅವರು ಎಲ್ಲರ ಮೇಲೂ ಬೈದಾಡಿಬಿಟ್ಟಿದ್ದರು. ಎದುರಿಗೆ ಸಿಕ್ಕವರ ಮೇಲೆಲ್ಲ ರೇಗಾಡಿದ್ದ ಜಾಧವ್ ಅವರು ವಿನಯಚಂದ್ರನ ಪರಮಾಪ್ತನಾಗಿದ್ದ ಸೂರ್ಯನ್ ಗೆ ಏಟು ಹಾಕುವುದೊಂದು ಬಾಕಿ. ತಕ್ಷಣವೇ ಸುತ್ತಮುತ್ತಲೆಲ್ಲ ಹುಡುಕಾಡಲು ಯತ್ನಿಸಿದ್ದರಾದರೂ ವಿನಯಚಂದ್ರನ ಪತ್ರವನ್ನು ಓದಿದ ನಂತರ ಕೊಂಚ ತಣ್ಣಗಾಗಿದ್ದರು. ಮನಸ್ಸಿನಲ್ಲಿ ಸಿಟ್ಟು ಸಾಕಷ್ಟಿತ್ತು. ಆದರೆ ಅನಿವಾರ್ಯವಾಗಿದ್ದ ಕಾರಣ ಭಾರತ ತಂಡವನ್ನು ಕರೆದುಕೊಂಡು ವಾಪಾಸಾಗಿದ್ದರು. ಭಾರತಕ್ಕೆ ಬಂದಾಗಿನಿಂದಲೂ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ವಿನಯಚಂದ್ರ ಕಾಣೆಯಾಗಿರುವುದು ತಂಡದ ಹಿರಿಯರಿಗೆ, ಅಮೆಚೂರ್ ಕಬ್ಬಡ್ಡಿ ಅಧಿಕಾರಿಗಳಿಗೆ ತಿಳಿದಿತ್ತು. ಅವರೂ ಜಾಧವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿನಯಚಂದ್ರ ಕಾಣೆಯಾಗಿರುವುದು ಜಾಧವ್ ಅವರ ಹೊಣೆಗೇಡಿತನ ಎಂದು ಗೂಬೆ ಕೂರಿಸುವ ಯತ್ನವನ್ನೂ ಮಾಡಿದ್ದರು. ಕೆಲವರು ಜಾಧವ್ ಕಾಲೆಳೆಯಲು ಶುರುಮಾಡಿದ್ದರು. ಅವನ್ನೆಲ್ಲ ಸಹಿಸಿಕೊಂಡಿದ್ದ ಜಾಧವ್ ಸದ್ದಿಲ್ಲದೇ ವಿನಯಚಂದ್ರನ್ನನು ಹುಡುಕಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.
          ಭಾರತದ ಸರ್ಕಾರದ ರಾಜಕಾರಣಿಗಳನ್ನು ಭೇಟಿಯಾಗಿ ವಿನಯಚಂದ್ರನನ್ನು ಹುಡುಕಿಸುವ ಪ್ರಯತ್ನ ಕೈಗೊಂಡಿದ್ದರು. ಭಾರತದ ಪ್ರಧಾನಮಂತ್ರಿ ಸಚಿವಾಲಯವೂ ತಕ್ಷಣವೇ ಸ್ಪಂದಿಸಿ ಬಾಂಗ್ಲಾ ದೇಶದಾದ್ಯಂತ ವಿನಯಚಂದ್ರನನ್ನು ಹುಡುಕುವ ಪ್ರಯತ್ನ ಕೈಗೊಂಡಿತ್ತು. ಆದರೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ತೀವ್ರವಾಗಿರುವ ಕಾರಣ ವಿನಯಚಂದ್ರ ಪತ್ತೆಯಾಗಿರಲಿಲ್ಲ. ವಿನಯಚಂದ್ರನ ಸುದ್ದಿ ಇರದ ಕಾರಣ ಆತ ಬದುಕಿದ್ದಾನೋ ಇಲ್ಲವೋ ಎನ್ನುವ ಅನುಮಾನ ಕೂಡ ವ್ಯಕ್ತವಾಗುತ್ತಿತ್ತು. ಆದರೆ ಜಾಧವ್ ಅವರು ಮಾತ್ರ ವಿನಯಚಂದ್ರ ಬದುಕಿದ್ದಾರೆ. ಎಲ್ಲೋ ಇದ್ದಾನೆ. ಭಾರತಕ್ಕೆ ಬರುತ್ತಾನೆ ಎನ್ನುವ ನಂಬಿಕೆಯಲ್ಲಿದ್ದರು. ಆದರೆ ಆತನ ಬಗ್ಗೆ ಮಾಹಿತಿ ಸಿಗದಿದ್ದ ಕಾರಣ ಮನಸ್ಸಿನಲ್ಲಿ ಕಳವಳವನ್ನು ಹೊಂದಿದ್ದರು.
         ಕಬ್ಬಡ್ಡಿ ಪಂದ್ಯಾವಳಿಯಲ್ಲಿ ದೋಸ್ತನಾಗಿದ್ದ ಸೂರ್ಯನ್ ಪಾಡು ಜಾಧವ್ ಅವರಿಗಿಂತ ಹೊರತಾಗಿರಲಿಲ್ಲ. ಭಾರತಕ್ಕೆ ಬಂದವನೇ ತನ್ನ ತಮಿಳುನಾಡು ರಾಜ್ಯದಲ್ಲಿ ತನ್ನ ಸಂಬಂಧಿಕರೊಬ್ಬರು ರಾಜಕಾರಣಿಯಾಗಿರುವ ಕಾರಣ ಅವರ ಮೂಲಕ ವಿನಯಚಂದ್ರನನ್ನು ಹುಡುಕುವ ಪ್ರಯತ್ನ ನಡೆಸಿದ್ದ, ವಿನಯಚಂದ್ರನ ಜೊತೆಗೆ ಮಧುಮಿತಾಳೂ ಇದ್ದಾಳೆ ಎನ್ನುವುದು ಆತನಿಗೆ ಗೊತ್ತಿತ್ತಾದ್ದರಿಂದ ಅವಳ ಕುಟುಂಬವನ್ನಾದರೂ ಸಂಪರ್ಕಿಸುವ ಪ್ರಯತ್ನ ನಡೆಸಿದ್ದ. ಕೊನೆಗೊಮ್ಮೆ ಹಿಂಸಾಚಾರಕ್ಕೆ ಮಧುಮಿತಾಳ ತಂದೆ ತಾಯಿಗಳು, ಬಂದುಬಳಗ ಸಾವನ್ನಪ್ಪಿದೆ ಎಂಬುದು ತಿಳಿದಾಗ ಮಾತ್ರ ತೀವ್ರ ದುಃಖಕ್ಕೀಡಾಗಿದ್ದ. ಮಧುಮಿತಾ ಹಾಗೂ ವಿನಯಚಂದ್ರ ಏನಾದರೂ ಎನ್ನುವುದು ಸೂರ್ಯನ್ ಗೆ ತಿಳಿಯದೇ ಕಳವಳ ಹೊಂದಿದ್ದ. ಕೊನೆಗೊಮ್ಮೆ ವಿನಯಚಂದ್ರ ಪೋನ್ ಮಾಡಿದ್ದಾಗ ಮಾತ್ರ ಕೊಂಚ ನಿರಾಳನಾಗಿದ್ದ. ಆತ ಬದುಕಿದ್ದಾನಲ್ಲ ಎಂಬ ಸಮಾಧಾನವಿತ್ತು. ಆದರೆ ಭಾರತಕ್ಕೆ ಅವರನ್ನು ಕರೆತರುವುದು ಹೇಗೆ ಎನ್ನುವ ಚಿಂತೆ ಮನದಲ್ಲಿ ಮನೆಮಾಡಿತ್ತು.

(ಮುಂದುವರಿಯುತ್ತದೆ..)

ಬಾನ ಬಾಂದಳದಲ್ಲಿ

ಬಾನ ಬಾಂದಳದಲ್ಲಿ ಚುಕ್ಕಿಗಳ ನಗುವಿಲ್ಲ
ಅಕ್ಕರದ ಬದುಕಿನಲಿ ತಿಳಿಬೆಳಕೇ ಇಲ್ಲ |

ಬುಡ ಬಯಲಿನ ಕೊನೆ ತುಂಬ
ಕರಿ ಮೋಡವೇ ಉಂಟು
ಹುಡುಕಿ ಹುಡುಕಿದರೇನು
ಬೆಳಕೇ ಇಲ್ಲ. ಜೊತೆಗೆ ಬದುಕೇ ಇಲ್ಲ |

ಬಾಳ ಬದುಕಿನ ತುಂಬ
ಕನಸಿಲ್ಲ-ನನಸಿಲ್ಲ
ಹಾಲು ಹಾದಿಯ ತುಂಬ
ಅಳುವೆ ಎಲ್ಲ, ಜೊತೆಗೆ ನಗುವೆ ಇಲ್ಲ |

ಎಷ್ಟು ಹುಡುಕಿದರೇನು
ನೋವೊಂದೆ ಜೊತೆಗುಂಟು
ನಗುವ ನೀಡಲು ಚುಕ್ಕಿ ಹಿಂಡೇ ಇಲ್ಲ
ಚುಕ್ಕಿಯಿಲ್ಲ ಜೊತೆಗೆ ಶಶಿಯೂ ಇಲ್ಲ ||

***
(ಈ ಕವಿತೆಯನ್ನು ಬರೆದಿರುವುದು 09-05-2007ರಂದು ದಂಟಕಲ್)