Thursday, September 4, 2014

ತುಂಬರದ ಅಬ್ಬರ

ತುಂಬರಗೋಡ ಜಲಪಾತದ ಅಬ್ಬರ
ಕಣ್ತುಂಬಿಕೊಳ್ಳಲು ಬಾ ಹತ್ತಿರ
ಮಳೆಗಾಲದ ಅಬ್ಬರಕ್ಕೆ ಹಲವಾರು ಜಲಪಾತಗಳು ಜೀವಕಳೆಯನ್ನು ಪಡೆದುಕೊಂಡಿದೆ. ಬೇಸಿಗೆಯ ಬೇಗೆಗೆ ಜೀವಕಳೆದುಕೊಂಡಂತೆ ಕಾಣುತ್ತಿದ್ದ ಜಲಪಾತಗಳೆಲ್ಲ ಮೈದುಂಬಿಕೊಂಡು ಅಬ್ಬರಿಸುತ್ತಿವೆ. ನೋಡುಗರನ್ನು ಕೈಬೀಸಿ ಕರೆಯುತ್ತಿವೆ. ಅಂತಹ ಜಲಪಾತಗಳಲ್ಲೊಂದು ತುಂಬರಗೋಡ ಜಲಪಾತ.
ದೊಡ್ಡ ಗುಡ್ಡದಿಂದ ಮುತ್ತಿನ ಹನಿಗಳಂತೆ ಭುವಿಗಿಳಿದು ಬರುವ ತುಂಬರಗೋಡ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿದೆ. ಅಜಮಾಸು 30 ಅಡಿಗಳ ಎತ್ತರದಿಂದ ಬೀಳುವ ಈ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ಕಣ್ಣು ಸಾಲದು. ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಈ ಜಲಪಾತವನ್ನು ವೀಕ್ಷಣೆ ಮಾಡಲು ಕಷ್ಟಪಡಬೇಕಾಗಿಲ್ಲ. ರಸ್ತೆಯ ಪಕ್ಕದಲ್ಲಿಯೇ ಇರುವ ಈ ಜಲಪಾತ ಪ್ರೇಕ್ಷಕರನ್ನು ವಿಶೇಷವಾಗಿ ಸೆಳೆಯಬಲ್ಲದು. ಮಳೆಗಾಲದ ಕಾರಣ ಜಲಪಾತದಲ್ಲಿ ನೀರಿನ ಪ್ರಮಾಣ ತೀವ್ರವಾಗಿರುತ್ತದೆ. ಧೋ ಎನ್ನುವ ಸದ್ದು ಕಿವಿಗೆ ತಟ್ಟುತ್ತದೆ. ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ಕಟ್ಟಿಹಾಕುತ್ತದೆ.
ವಿಶ್ವದಾದ್ಯಂತ ಇರುವ ಜಲಪಾತಗಳೆಲ್ಲ ನೈಸರ್ಗಿಕ ಜಲಪಾತಗಳು. ಎಲ್ಲೋ ಒಂದೆರಡು ಜಲಪಾತಗಳು ಮಾನವ ನಿರ್ಮಿತವಾದವುಗಳು. ತುಂಬರಗೋಡ ಜಲಪಾತ ಸಹ ಮಾನವ ನಿರ್ಮಿತ ಜಲಪಾತ. ಅಚ್ಚರಿಯಾಗುತ್ತಿರಬಹುದು. ಆದರೆ ಇದು ಸತ್ಯ. ಕಳೆದೊಂದು ದಶಕಕ್ಕೂ ಮುನ್ನ ತುಂಬರಗೋಡ ಪ್ರದೇಶದಲ್ಲಿ ಕಲ್ಲಿನ ಗಣಿಗಳಿದ್ದವು. ದೊಡ್ಡದೊಂದು ಗುಡ್ಡವೇ ಕಲ್ಲಿನಿಂದ ಆವೃತವಾಗಿದ್ದವು. ಆದರೆ ಆ ಕಲ್ಲಿನ ಗುಡ್ಡವನ್ನು ಗಣಿಗಾರಿಕೆಗೆ ಕಡಿದ ನಂತರ ಕಡಿದಾದ ಪ್ರದೇಶ ನಿರ್ಮಾಣವಾಯಿತು. ಈ ಪ್ರದೇಶದಲ್ಲಿ ಹರಿಯುತ್ತಿದ್ದ ತುಂಬರಗೋಡ ಹಳ್ಳ ಜಲಪಾತವಾಗಿ ಧುಮ್ಮಿಕ್ಕಲಾರಂಭಿಸಿತು. ಗುಡ್ಡದಿಂದ ಕಲ್ಲುಗಣಿಯ ಆಳಕ್ಕೆ ಬೀಳುವ ಜಲಪಾತವನ್ನು ನೋಡುವುದೇ ಸುಂದರ. ಜಲಪಾತ ನೀಡುವ ಖುಷಿಯೇ ಬೇರೆ.
ಮಾನವ ನಿರ್ಮಿತ ಜಲಪಾತ ಎಂದೇ ಕರೆಸಿಕೊಳ್ಳುವ ಈ ಜಲಪಾತವನ್ನು ಜೂನ್ ತಿಂಗಳಿನಿಂದ ಡಿಸೆಂಬರ್ ವರೆಗೆ ವೀಕ್ಷಣೆ ಮಾಡಬಹುದು. ಈ ಸಮಯದಲ್ಲಿ ಜಲಪಾತದ ಅಬ್ಬರ ಜೋರಾಗಿರುತ್ತದೆ. ಉಳಿದ ಸಮಯದಲ್ಲಿ ತುಂಬರಗೋಡ ಹಳ್ಳದಲ್ಲಿ ನೀರಿನ ಹರವು ಕಡಿಮೆಯಾಗುವ ಕಾರಣ ಜಲಪಾತ ಕಳೆಗುಂದುತ್ತದೆ. ಮಳೆಗಾಲದಲ್ಲಂತೂ ಮೈದುಂಬಿಕೊಳ್ಳುವ ತುಂಬರಗೋಡ ಜಲಪಾತ ಕಣ್ತುಂಬಿಕೊಂಡರೆ ಬಹಳ ಖುಷಿ ನೀಡುತ್ತದೆ.
ರಸ್ತೆಯ ಪಕ್ಕದಲ್ಲಿಯೇ ಇರುವ ಈ ಜಲಪಾತವನ್ನು ನೋಡಲು ಉಳಿದ ಜಲಪಾತಗಳಂತೆ ಚಾರಣವನ್ನು ಮಾಡಬೇಕಾಗಿಲ್ಲ. ಗುಡ್ಡವನ್ನು ಏರಬೇಕಿಲ್ಲ. ಮುಖ್ಯ ರಸ್ತೆಯಿಂದ 500 ಮೀಟರ್ ದೂರದಲ್ಲಿಯೇ ಈ ಜಲಪಾತವಿದೆ. ಜಲಪಾತ ಕಾಣುವವರೆಗೂ ಕಚ್ಚಾ ರಸ್ತೆಯಿದೆ. ವಾಹನಗಳನ್ನು ಒಯ್ಯಬಹುದು. ಮಳೆಗಾಲದಲ್ಲಂತೂ ದೊಡ್ಡ ಜಲಪಾತದ ಜೊತೆಗೆ ಅಕ್ಕಪಕ್ಕದಲ್ಲಿ ನಾಲ್ಕೈದು ಕವಲುಗಳನ್ನು ನೋಡಬಹುದಾಗಿದೆ. ಮಳೆಗಾಲದಲ್ಲಂತೂ ಜಲಪಾತದ ಸೌಂದರ್ಯ ಇಮ್ಮಡಿಸುತ್ತದೆ. ಜಲಪಾತ ಇರುವ ಸ್ಥಳ ಒಂದಾನೊಂದು ಕಾಲದಲ್ಲಿ ಕಲ್ಲು ಗಣಿಯಾಗಿದ್ದ ಕಾರಣ ಜಲಪಾತದ ನೀರು ಬೀಳುವ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಹಳ ಆಳವಿದೆ. ಅಲ್ಲದೇ ಚೂಪಾದ ಕಲ್ಲುಗಳೂ ಇಲ್ಲಿದೆ. ಇಲ್ಲಿ ಈಜುವುದು ಅಪಾಯಕರ. ವಾರಾಂತ್ಯದಲ್ಲಿ ಪಿಕ್ ನಿಕ್ ಮಾಡಲು ಹೇಳಿ ಮಾಡಿದಂತಹ ಸ್ಥಳ ಇದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಇತರ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಈ ಜಲಪಾತವನ್ನು ಬಹು ಸುಲಭದಲ್ಲಿ ನೋಡಬಹುದಾಗಿದೆ. ಹುಬ್ಬಳ್ಳಿ ಭಾಗದಿಂದ ಆಗಮಿಸುವ ಪ್ರವಾಸಿಗರಂತೂ ಮಾರ್ಗಮದ್ಯದಲ್ಲಿ ಸಿಗುವ ಈ ಜಲಪಾತವನ್ನು ಅರೆಘಳೊಗೆಯಲ್ಲಿ ಕಣ್ತುಂಬಿಕೊಂಡು ಹೋಗಬಹುದಾಗಿದೆ.
ಜಲಪಾತವಿರುವ ಪ್ರದೇಶ ಇದುವರೆಗೂ ಸ್ವಚ್ಛತೆಯಿಂದ ಕೂಡಿದೆ. ಜಲಪಾತದ ಕೆಳಭಾಗದಲ್ಲಿ ಗದ್ದೆಗಳಿವೆ. ಈ ಜಲಪಾತದ ಪ್ರದೇಶದಲ್ಲಿ ತ್ಯಾಜ್ಯಗಳನ್ನು ಎಸೆಯುವುದು ನಿಷಿದ್ಧ. ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುವ ಎಲ್ಲ ಕೆಲಸಗಳಿಗೂ ಇಲ್ಲಿ ಕಡ್ಡಾಯ ಕಡಿವಾಣವಿದೆ. ಪ್ರವಾಸಿಗರು ಈ ಕುರಿತು ಎಚ್ಚರಿಕೆ ವಹಿಸಿ, ಜಲಪಾತ ವೀಕ್ಷಣೆ ಮಾಡಿಕೊಂಡು ಹೋಗಬೇಕಾಗಿದೆ.
ಜಲಪಾತಕ್ಕೆ ಹೋಗುವ ಬಗೆ :
ಶಿರಸಿ ಸಿದ್ದಾಪುರ ರಸ್ತೆಯಲ್ಲಿ ಶಿರಸಿಯಿಂದ 25 ಕಿ.ಮಿ ಹಾಗೂ ಸಿದ್ದಾಪುರದಿಂದ 14 ಕಿ.ಮಿ ದೂರದಲ್ಲಿ 16ನೇ ಮೈಲ್ ಎನ್ನುವ ಊರಿದೆ. ಈ ಊರಿನಿಂದ 2 ಕಿ.ಮಿ ಅಂತರದಲ್ಲಿ ತುಂಬರಗೋಡ ಎನ್ನುವ ಊರಿಗೆ ತೆರಳುವ ಮಾಹಿತಿ ಫಲಕ ಕಾಣುತ್ತಿದೆ. ಇಲ್ಲಿಯೇ ರಸ್ತೆ ಪಕ್ಕದಲ್ಲಿ ಜಲಪಾತವಿದೆ. ಸ್ಥಳೀಯರ ಬಳಿ ಜಲಪಾತದ ಬಗ್ಗೆ ಕೇಳಿದರೆ ಮಾಹಿತಿ ನೀಡುತ್ತಾರೆ. ಜಲಪಾತಕ್ಕೆ ತೆರಳುವ ರಸ್ತೆಗೆ ಹೊರಳಿದ ತಕ್ಷಣ ಜಲಪಾತ ಧುಮ್ಮಿಕ್ಕುವ ಸದ್ದು ಕೇಳುತ್ತದೆ. ಸುಲಭವಾಗಿ ಜಲಪಾತ ವೀಕ್ಷಣೆ ಮಾಡಿ ತೆರಳಬಹುದು.

***
(ಈ ಲೇಖನವು ಸಪ್ಟೆಂಬರ್ 4, 2014ರ ಕನ್ನಡಪ್ರಭದ ಬೈ2ಕಾಫಿಯ ಟೂರೂಕೇರಿಯಲ್ಲಿ ಪ್ರಕಟಗೊಂಡಿದೆ)

Wednesday, September 3, 2014

ಅನಾಥ ಪಕ್ಷಿಗಳು

ಸೂರು ಮರೆತ ಹಕ್ಕಿಗಳು ಅವರು
ತಂದೆ ಯಾರೋ,
ತಾಯಿ ಯಾರೋ
ಬದುಕಲಿ ನೋವ ಉಂಡವರು  |

ಕಣ್ಣಲಿ ಕನಸ ಕಂಡವರು ಅವರು
ಬಂಧುಗಳಿಲ್ಲ
ಬಳಗವೂ ಇಲ್ಲ
ಎಂದೋ ನಗುವನು ಮರೆತವರು |

ಹೊಟ್ಟೆಗೆ ಹಿಟ್ಟನು ಬಯಸುವರು ಇವರು
ನಗುವು ಎಲ್ಲೋ
ನಲಿವು ಎಲ್ಲೋ
ಬಾಳಲಿ ಸೂರನು ಬಯಸಿದರು |

ಯಾರದೋ ತಪ್ಪಿಗೆ ಸಿಲುಕಿದರು ಇವರು
ಆಸೆಗಳುಂಟು
ಕನಸುಗಳುಂಟು
ಬಯಕೆಗೆ ಅಣೆಯನ್ನು ಕಟ್ಟಿದರು |


**

(ಈ ಕವಿತೆಯನ್ನು ಬರೆದಿರುವುದು 7-08-2006ರಂದು ದಂಟಕಲ್ಲಿನಲ್ಲಿ)

Monday, September 1, 2014

ಚಕ್ಕುಲಿ ಡಾಕ್ಟರ್

ಗಣೇಶ ಚತುರ್ಥಿಯ ವಿಶೇಷವಾಗಿ ಎಲ್ಲರ ಮನೆಗಳಲ್ಲಿ ಚಕ್ಕುಲಿ ಮಾಡುವುದು ಸಾಮಾನ್ಯ. ಚಕ್ಕುಲಿ ಮಾಡುವ ಸಲುವಾಗಿಯೇ ಯಂತ್ರಗಳೂ ಬಂದಿವೆ. ಯಂತ್ರದ ಸಹಾಯದಿಂದ ಸರಸರನೆ ಚಕ್ಕುಲಿ ಮಾಡಲಾಗುತ್ತದೆ. ಇಂತಹ ಬದಲಾವಣೆಯ ನಡುವೆಯೇ ಕೈಯಲ್ಲಿ ಚಕ್ಕುಲಿ ಸುತ್ತುವವರು ಅಲ್ಲೊಮ್ಮೆ ಇಲ್ಲೊಮ್ಮೆ ಸಿಗುತ್ತಾರೆ. ಕೈಚಕ್ಕುಲಿಯನ್ನು ಮಾಡುವವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಾಸವಾಗಿರುವ ಕೆಶಿನ್ಮನೆಯ ಡಾ|| ಶೇಷಗಿರಿ ಹೆಗಡೆ ಮತ್ತು ಚೈತ್ರಿಕಾ ದಂಪತಿಗಳೂ ಒಬ್ಬರು.
ಮಲೆನಾಡಿನಲ್ಲಿ ಗಣೇಶ ಚತುರ್ಥಿಗೆ ಚಕ್ಕುಲಿ ಕಡ್ಡಾಯ. ಬಾಯಲ್ಲಿಟ್ಟರೆ ಕರಕನೆ ಸದ್ದು ಮಾಡುತ್ತ, ರುಚಿಯನ್ನೂ ಮೂಡಿಸುತ್ತ ಆಹಾ ಎನ್ನಿಸುವ ಚಕ್ಕುಲಿಯನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ತಯಾರಿಸಲೇ ಬೇಕು. ಮೂರ್ನಾಲ್ಕು ದಶಕಗಳ ಹಿಂದೆ ಮನೆ ಮನೆಗಳಲ್ಲಿ ಕೈಯ ಮೂಲಕವೇ ಚಕ್ಕುಲಿಗಳನ್ನು ಮಾಡಲಾಗುತ್ತಿತ್ತು. ಈಗ ಚಕ್ಕುಲಿ ತಯಾರಿಸಲು ಎಲ್ಲೆಡೆ ಯಂತ್ರಗಳನ್ನು ಕಾಣಬಹುದು. ಈ ಯಂತ್ರಗಳಿಗೆ ಚಕ್ಕುಲಿ ಮಟ್ಟು ಎಂದು ಕರೆಯಲಾಗುತ್ತದೆ. ಚಕ್ಕುಲಿ ಮಟ್ಟಿನ ಸಹಾಯದಿಂದ ಒಂದು ತಾಸಿಗೆ ನೂರಾರು ಚಕ್ಕುಲಿಗಳನ್ನು ಮಾಡಲಾಗುತ್ತದೆ. ಚಕ್ಕುಲಿ ಮಾಡುವುದನ್ನು ಚಕ್ಕುಲಿ ಕಂಬಳ ಎಂದೇ ಕರೆಯಲಾಗುತ್ತದೆ. ಆಧುನಿಕ ಕಾಲದಲ್ಲಿ ಚಕ್ಕುಲಿ ಮಾಡುವ ಶೈಲಿ ಬದಲಾಗಿರುವ ಸಂದರ್ಭದಲ್ಲಿಯೇ ಅಲ್ಲೊಬ್ಬರು ಇಲ್ಲೊಬ್ಬರು ಹಳೆ ಸಂಪ್ರದಾಯವನ್ನು ಮರೆಯದೇ ಅದೇ ವಿಧಾನದಿಂದ ಚಕ್ಕುಲಿ ಮಾಡುತ್ತಿದ್ದಾರೆ.
ಕೈಚಕ್ಕುಲಿ ಬಹಳ ರುಚಿಕಟ್ಟಾದುದು ಎಂದು ಹೇಳುತ್ತಾರೆ. ಈಗೀಗ ಮನೆಗಳಲ್ಲಿ ತಯಾರು ಮಾಡಲಾಗುವ ಚಕ್ಕುಲಿಗಿಂತ ಭಿನ್ನವಾಗಿರುವ ಈ ಕೈಚಕ್ಕುಲಿ ಸವಿದವರಿಗಷ್ಟೇ ಅದರ ವಿಶೇಷತೆ ತಿಳಿಯಬಲ್ಲದು. ಕೆಶಿನ್ಮನೆಯ ಡಾ|| ಶೇಷಗಿರಿ ಹೆಗಡೆ ಮತ್ತು ಚೈತ್ರಿಕಾ ದಂಪತಿಗಳು ಕೈಚಕ್ಕುಲಿ ತಯಾರು ಮಾಡುವ ಮೂಲಕ ಹಳೆಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೇ ಇತರರಿಗೂ ಕೈಚಕ್ಕುಲಿ ತಯಾರು ಮಾಡುವುದನ್ನು ಹೇಳಿಕೊಡುತ್ತಾರೆ. ಮನೆಯಲ್ಲಿಯೇ ಚಕ್ಕುಲಿ ಕಂಬಳವನ್ನು ಮಾಡುವ ಮೂಲಕ ನೆರೆ-ಹೊರೆಯವರಿಗೆಲ್ಲ ಕೈಚಕ್ಕುಲಿಯ ಸವಿಯನ್ನು ಉಣ್ಣಿಸುವ ಕಾರ್ಯ ಮಾಡುತ್ತಿದ್ದಾರೆ.
ಕೆಶಿನ್ಮನೆಯ ಡಾ. ಶೇಷಗಿರಿ ಹೆಗಡೆ ವೃತ್ತಿಯಿಂದ ವೈದ್ಯರು. ಆಸ್ಪತ್ರೆಯ ಕೆಲಸದ ಜಂಜಾಟದಿಂದ ಕೆಲಕಾಲ ಮುಕ್ತನಾಗಿ, ತನಗೆ ಖುಷಿ ಕೊಟ್ಟ ಕೆಲಸವನ್ನು ಮಾಡಬೇಕೆನ್ನುವುದು ಅವರ ಅಭಿಲಾಷೆ. ಆದರೆ ವೃತ್ತಿಯ ನಡುವೆ ಬಿಡುವೆನ್ನುವುದು ಅಸಾಧ್ಯವಾಗುತ್ತಿತ್ತು. ಕೊನೆಗೂ ಕೈಚಕ್ಕುಲಿ ತಯಾರಿಸುವ ನೆಪದಲ್ಲಿ ಆಸ್ಪತ್ರೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡರು ಡಾಕ್ಟರು. ಮನೆಯಲ್ಲಿ ಕೈಚಕ್ಕುಲಿ ತಯಾರಿಸುತ್ತ ತೀರಾ ಪರಿಚಿತರ ಕಾಯಿಲೆಗೆ ಔಷಧಿ ಹೇಳುತ್ತ ಅವಶ್ಯ ಬಿದ್ದರೆ ಅವರನ್ನು ಮನೆಗೇ ಕರೆಸಿಕೊಂಡು ನೋಡಿ ಪರಿಹಾರ ನೀಡುತ್ತ ಮಡದಿ ಚೈತ್ರಿಕಾ ಹದಮಾಡಿಕೊಡುವ ಹಿಟ್ಟನ್ನು ಕೈಯ್ಯಲ್ಲಿ ಮುದ್ದೆಮಾಡಿ ಚಕ್ಕುಲಿ ಎಳೆ ತೆಗೆದು ಮಣೆಯ ಮೇಲೆ ಸುರಳಿ ಸುತ್ತುವುದಕ್ಕೆ ಆರಂಭಿಸಿದರೆ ಅದನ್ನು ನೋಡುವುದೇ ಆನಂದ.
ಕಳೆದ 35 ವರ್ಷಗಳಿಂದ ಕೈಚಕ್ಕುಲಿ ಮಾಡುತ್ತ ಬಂದಿರುವ ಡಾ. ಶೇಷಗಿರಿ ಹೆಗಡೆ ತಮ್ಮ ಅಜ್ಜಿ ಈ ಕಲೆಯನ್ನು ಕಲಿತುಕೊಳ್ಳಲು ಹೇಳಿದ್ದನ್ನೇ ಪ್ರೇರಣೆಯನ್ನಾಗಿ ತೆಗೆದುಕೊಂಡು ಕಲಿತಿದ್ದಾಗಿ ಅವರು ಹೇಳುತ್ತಾರೆ. ಡಾಕ್ಟರ್ನ್ನು ಮದುವೆಯಾಗಿ ಬಂದ ಮೇಲೆ ತಾನೂ ಕೈಯ್ಯಲ್ಲಿ ಚಕ್ಕುಲಿ ಸುತ್ತುವುದನ್ನು ಕಲಿತಿದ್ದೇನೆ ಎನ್ನುವ ಚೈತ್ರಿಕಾ, ಹಿಟ್ಟು ಹದಮಾಡಿ ಕೊಟ್ಟು ತಾನೂ ಚಕ್ಕುಲಿ ಸುತ್ತಿ ಸಂಬ್ರಮಿಸುತ್ತಾರೆ.
ಕೈಯ್ಯಲ್ಲಿ ಸುತ್ತುವ ಚಕ್ಕುಲಿ ಹಿಟ್ಟನ್ನು ಹದಮಾಡಿ ಬಹಳ ಹೊತ್ತು ಇಡುವಂತಿಲ್ಲ. ಸಿದ್ಧವಾದದ್ದನ್ನು ಚಕ್ಕುಲಿ ಮಾಡಿಕೊಂಡು ಮತ್ತೆ ಹಿಟ್ಟು ಹದಗೊಳಿಸಿಕೊಳ್ಳಬೇಕು. ತಾವು ಸಣ್ಣವರಿದ್ದಾಗ ಹಿಟ್ಟು ಹದಮಾಡುವ ಕೆಲಸ ಮಾಡುತ್ತಿದ್ದೆವು. ಆಗ ಊರಿನ ಅನೇಕರು ಈ ಕಲೆಯಲ್ಲಿ ಪಳಗಿದವರು ಇರುತ್ತಿದ್ದುದರಿಂದ ತಮ್ಮಂಥ ಹುಡುಗರಿಗೆ ಹಿಟ್ಟು ನಾದುವ ಕೆಲಸವಿರುತ್ತಿತ್ತು.
ಹಿಂದೆ ಹಿಟ್ಟಿಗೆ ನೀರು ಬಳಸುತ್ತಿರಲಿಲ್ಲ. ಯಾಕೆಂದರೆ ನೀರು ಬಳಸಿದರೆ ಮೈಲಿಗೆ ಎಂಬ ಭಾವನೆಯಿತ್ತು. ಅದಕ್ಕಾಗಿ ಅತ್ತಿ ಮರದಿಂದ ತೆಗೆದ ರಸ ಬಳಸಲಾಗುತ್ತಿತ್ತು. ಒಮ್ಮೆ ಅತ್ತಿರಸ ಸಿಗಲಿಲ್ಲ, ಮನೆಯಲ್ಲಿ ಸಮೃದ್ಧ ಹಾಲು ಕೊಡುವ ಜಸರ್ಿ ಆಕಳಿನ ಹಾಲನ್ನೇ ಬಳಸಿ ಕೈಚಕ್ಕುಲಿ ಮಾಡಿದ್ದೇವೆಂಬ ನೆನಪು ಡಾ|| ಹೆಗಡೆಯವರದ್ದು. ಈಗಲೂ ಚೌತಿ ಸಂದರ್ಭದಲ್ಲಿ ಮುಂಜಾನೆಯಿಂದ ಸಂಜೆಯ ವರೆಗೂ ಚಕ್ಕುಲಿ ತಯಾರಿಸಿ ಕಂಬಳವನ್ನು ಕೈಗೊಳ್ಳುತ್ತಾರೆ. ಅಕ್ಕಪಕ್ಕದವರನ್ನೂ ಕರೆದು, ಕೈಚಕ್ಕುಲಿಯನ್ನು ನೀಡಿ ಹರ್ಷಿಸುತ್ತಾರೆ. ಇವರ ಕೈಯಲ್ಲಿ ತಯಾರಾಗುವ ಚಕ್ಕಲಿಯ ಸವಿಯೇ ಬೇರೆ. ಕೈಚಕ್ಕುಲಿ ತಯಾರಿಸುವ ಮೂಲಕ ಅಪರೂಪದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಈ ವೈದ್ಯರು ಅಚ್ಚರಿಯನ್ನು ಹುಟ್ಟುಹಾಕುತ್ತಾರೆ.


***
(ಈ ಲೇಖನವು ಸೆ.1, 2014ರ ಕನ್ನಡಪ್ರಭದ ಬೈ2ಕಾಫಿಯಲ್ಲಿ ಪ್ರಕಟಗೊಂಡಿದೆ)

Sunday, August 31, 2014

ನಮ್ಮೂರ ಹಸಿರಹೊಲ


ಹಸಿರು ಗಿರಿ ಕಾನನದ ನಡು ನಡುವೆ
ಅಗೋ ಅಲ್ಲಿ, ನೋಡಲ್ಲಿ, ಕಾಣುತ್ತಿದೆ
ನಮ್ಮುರ ಹಸಿರು ಹೊಲ |

ಅಕ್ಕಪಕ್ಕದಿ ಗುಡ್ಡ, ದೈತ್ಯಮರ
ಹಸಿರು ತೆನೆ, ಮರತೆಂಗು
ಅಲ್ಲಿ ಮೆರೆದಿತ್ತು ಹೊಲ |

ಕೆಂಪು ಕಂಪಿನ ನೆಲ
ಅಘನಾಶಿನಿಯ ಜೊತೆ ಜುಳು ಜುಳು ತಾಳ
ನಡುವೆ ನಗುತ್ತಿತ್ತು ನಮ್ಮೂರ ಹೊಲ |

ಅಡಿಕೆ ತೋಟದ ನಡುವೆ
ಜವುಗು ಬರಡಿನ ಜೊತೆಗೆ
ಬದುಕಿ ನಿಂತಿತ್ತು ನಮ್ಮೂರ ಹೊಲ |

ಭತ್ತ ಧಾನ್ಯದ ಉಳುಮೆ
ಕಬ್ಬು-ಸೇಂಗಾದ ಮೊಳಕೆ
ಬೆಳೆ ಬೆಳೆದಿತ್ತು ನಮ್ಮೂರ ಹೊಲ |

ಹಸಿದವಗೆ ಜೀವ,
ಜೀವ ಸಂಕುಲಕ್ಕೆ ಆಹಾರ ಜಾಲ
ಇದೇ ಈ ನಮ್ಮುರ ಹೊಲ |

**

(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 9-11-2007ರಂದು)

Thursday, August 28, 2014

ಮತ್ತಿನ್ನೊಂದಿಷ್ಟು ಹನಿ ಚುಟುಕಗಳು

ಹೆಸರು

ಕನ್ನಡದ ಮೇರು ನಟ
ಡಾ. ರಾಜ್ಕುಮಾರ್.
ಅವರ ಮಗ ರಾಘವೇಂದ್ರ ರಾಜ್ಕುಮಾರ್
ಅವರ ಮಗ 
ವಿನಯ ರಾಜ್ಕುಮಾರ್..
ಅವನಿಗೆ ಮಗುವಾದರೆ
............. ರಾಜ್ಕುಮಾರ್
ಅಂತ ಹೆಸರಿಡಬಹುದೇನೋ..!!

ತಲೆಮಾರು

ಹಿಂದಿಯಲ್ಲಿ
ಮುಖೇಶ್ ಕುಮಾರ್
ಅದ್ಭುತ ಹಾಡುಗಾರರು.
ಅವರ ಮಗ ನಿತಿನ್ ಮುಖೇಶ್..
ನಿತಿನ್ ಮುಖೇಶ್ ಮಗ
ನೀಲ್ ನಿತಿನ್ ಮುಖೇಶ್..
ನೀಲ್ ನಿತಿನ್ ಗೆ ಮಗುವಾದರೆ
..... ನೀಲ್ ನಿತಿನ್ ಮುಖೇಶ್..
ಅಂತಿರಬಹುದಾ?

ಸಾಧ್ಯತೆ

ಒಂದು ವೇಳೆ
ದೇವೆಗೌಡರ ಜೆಡಿಎಸ್ ಕೂಡ ಇಬ್ಭಾಗವಾದರೆ
ಒಂದು ಭಾಗಕ್ಕೆ ಕುಮಾರಸ್ವಾಮಿ ಹಾಗೂ ಇನ್ನೊಂದು ಭಾಗಕ್ಕೆ ರೇವಣ್ಣ 
ಮುಖ್ಯಸ್ಥರಾದರೆ.. ಇಬ್ಭಾಗವಾಗುವ ಪಕ್ಷದ ಹೆಸರುಗಳು
ಹೀಗಿರಬಹುದೇ?
ಜೆಡಿಎಸ್ (ಕೆ)
ಜೆಡಿಎಸ್ (ಆರ್)..

ಸೋಲು

ಕೈ ಪಕ್ಷ
ಕಮಲದ ಪಕ್ಷಗಳ
ಗಾಳಿಯಲ್ಲಿ
ಹೋರಾಡಲು
ವಿಫಲವಾಗಿ
ಕೈಚೆಲ್ಲಿದೆ
ಮುದ್ದೆ ಪಕ್ಷ..!!

ಗಣೇಶ ಚತುರ್ಥಿ

ವರ್ಷಕ್ಕೊಮ್ಮೆ ಬರುವನು
ಗೌರಿ ಮಗ ಗಣೇಶ
ತರುವನು ಹರುಷ |
ಸಡಗರ ಸಂತೋಷ,
ರಸ ನಿಮಿಷ|
ಈಶನ ಮಗ ಗಣೇಶ
ತರುವನು ಹೊಸ ಆಶಾ ||