Friday, January 9, 2015

ಅಘನಾಶಿನಿ ಕಣಿವೆಯಲ್ಲಿ-7

`ಹಲೋ... ಮಂಗಳೂರು ಮೇಲ್ ಪತ್ರಿಕೆನಾ..?'
`ಹೌದು.. ನೀವ್ಯಾರು? ಹೇಳಿ ಏನು ವಿಷಯ?'
`ನಾನು ವಿನಾಯಕ ಅಂತ.. ನಿಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವ ವಿಕ್ರಂ ಅವರ ಬಳಿ ಮಾತನಾಡಬೇಕಿತ್ತು..'
`ಒಂದ್ನಿಮಿಷ ಇರಿ.. ಹೇಳ್ತೀನಿ...'
ವಿಕ್ರಂ ಪೋನೆತ್ತಿಕೊಂಡ. `ಹಲೋ..' ಎಂದ. `ಏನಪ್ಪಾ...ದೊರೆ... ನೀನು ಮಂಗಳೂರಿಗೆ ಹೋಗಿ ನಮ್ಮನ್ನೆಲ್ಲ ಮರೆತೇಬಿಟ್ಯಾ?' ಎಂದ ವಿನಾಯಕ.
ಇದನ್ನು ಕೇಳಿದ್ದೇ ತಡ ವಿಕ್ರಂ ಅತ್ಯಾಶ್ಚರ್ಯದಿಂದ `ಅರೇ ವಿನಾಯ್ಕಾ.. ಎಂತದೋ ಮಾರಾಯಾ.. ಏನ್ ಶಾಕ್ ಕೊಟ್ಟು ಬಿಟ್ಯಾ? ಮತ್ತೆ..? ಎಲ್ಲಿಂದ ಮಾತಾಡ್ತಾ ಇದ್ದೆ? ಏನ್ ವಿಶೇಷ? ಹೇಂಗಿದ್ದೆ? ಮನೆಲ್ಲಿ ಎಲ್ಲಾ ಅರಾಮಿದ್ವಾ?' ಎಂದ ವಿಕ್ರಂ.
`ಎಲ್ಲಾ ಅರಾಮಿದ್ದ ಮಾರಾಯಾ.. ನೀನು ಹೆಂಗಿದ್ದೆ ಹೇಳು.. ಆನು ಯನ್ ಮೊಬೈಲಿಂದನೇ ಪೋನ್ ಮಾಡ್ತಾ ಇದ್ನಾ.. ನಿನ್ ಹತ್ರ ಮಾತಾಡನಾ ಹೇಳಿ ಸುಮಾರ್ ಟ್ರೈ ಮಾಡಿ.. ನಿಮ್ಮನಿಗೆ ಪೋನ್ ಮಾಡಿ ನಿನ್ ನಂಬರ್ ಇಸ್ಕಂಡು ಪೋನ್ ಮಾಡ್ತಾ ಇದ್ದಿ ನೋಡಿ.. ಏನೋ ದೊಡ್ ಮನ್ಷಾ.. ಪೇಪರ್ ಕೆಲಸಕ್ಕೆ ಸೇರಿದ್ದು ಎಲ್ಲಾ ಪೋನ್ ಮಾಡಿ ಹೇಳಲೆ ಆಕ್ತಿಲ್ಯನಾ..? ನಂಗವ್ವೇ ಪೋನ್ ಮಾಡಿ ಹೇಳವನಾ ನಿಂಗೆ..?' ಹುಸಿಮುನಿಸಿನಿಂದ ದಬಾಯಿಸಿದ ವಿನಾಯಕ.
`ಥೋ.. ಅದೆಂತಾ ಹೇಳವು ಮಾರಾಯಾ... ಏನೇನೋ ಆಗ್ತು.. ಲೈಫಲ್ಲಿ ಸಿಕ್ಕಾಪಟ್ಟೆ ತಿರುವು ಸಿಕ್ಕಿ ಈಗ ಪತ್ರಿಕೋದ್ಯಮಿಯೂ ಆಗ ಪ್ರಸಂಗ ಬಂತು ನೋಡು.. ಅದೆಲ್ಲಾ ನೀ ಎದುರಿಗೆ ಸಿಕ್ಕಾಗ ಹೇಳ್ತಿ.. ದೊಡ್ ಕಥೆ ಮಾರಾಯಾ...' ಎಂದ ವಿಕ್ರಂ
`ಅಡ್ಡಿಲ್ಯಾ.. ನಾನು ಹಿಂಗೆ ಸುಮ್ನೆ ಪೋನ್ ಮಾಡಿದ್ನಾ.. ನನ್ನ ಮೊಬೈಲ್ ನಂಬರ್ ಕೊಟ್ಟಾಂಗೂ ಆತು.. ನಿನ್ ಕೈಲಿ ಮಾತಾಡದಾಂಗೂ ಆತು.. ಸುಮಾರ್ ದಿನಾ ಆಗಿತ್ತಲಾ.. ಭಾವ ನೆಂಟ ಹೇಳದ್ನೇ ಮರೆತು ಹೋಗಿದ್ವನೋ ಅನ್ನೋವಷ್ಟ್ ಟೈಮಾಗಿತ್ತಲಾ...' ಎಂದ ವಿನಾಯಕ. `ಹುಂ' ಎಂದ ವಿಕ್ರಂ.. ಪೋನ್ ಇಡಲು ಹವಣಿಸುತ್ತಿದ್ದಂತೆ ವಿನಾಯಕನ ಮೊಬೈಲ್ ನಂಬರ್ ಬರೆದಿಟ್ಟುಕೊಂಡ. `ಹೇಯ್ ವಿನೂ.. ನಾನು ನಿನ್ ಹತ್ರ ಮಾತಾಡವಾ.. ಸಂಜೆ ಮಾತಾಡ್ತಿ.. ಬಹಳ ಇಂಟರೆಸ್ಟಿಂಗ್ ಆದ ಒಂದು ವಿಷ್ಯ ಇದ್ದು.. ಅದಕ್ಕೆ ನಿನ್ನ ಸಹಕಾರ, ಸಹಾಯ ಎಲ್ಲಾ ಬೇಕು.. ಸಂಜೆ ಮಾತಾಡ್ತಿ...' ಎಂದವನೇ ಪೋನ್ ಇಟ್ಟ.
ಅಚ್ಚರಿಯಲ್ಲಿಯೇ ವಿನಾಯಕನೂ ಪೋನ್ ಇಟ್ಟಿದ್ದ.

*****

           ವಿನಾಯಕ ವಿಕ್ರಮನ ಮಾವನ ಮಗ. ಒಂದೇ ವಾರಗೆಯವರು. ವಿನಾಯಕನ ಊರು ಶಿರಸಿ-ಸಿದ್ದಾಪುರ ಮಾರ್ಗ ಮದ್ಯದ ಕಾನಸೂರು ಬಳಿಯ ದಂಟಕಲ್ ಎಂಬ ಚಿಕ್ಕ ಹಳ್ಳಿ. ವಿಕ್ರಂ ಹಾಗೂ ವಿನಾಯಕ ಇಬ್ಬರಿಗೂ ಪರಸ್ಪರ ಅಜ್ಜನಮನೆ ಸಂಬಂಧ. ಅಂದರೆ ವಿನಾಯಕನ ತಂದೆಯ ತಂಗಿ ವಿಕ್ರಮನ ತಾಯಿ. ಅದೇ ರೀತಿ ವಿಕ್ರಮನ ತಂದೆಯ ತಂಗಿ ವಿನಾಯಕನ ತಾಯಿ. ಯಾವ ಸಾಲಿನಿಂದ ನೋಡಿದರೂ ಇಬ್ಬರಿಗೂ ಪರಸ್ಪರ ಅಜ್ಜನಮನೆ ನೆಂಟಸ್ತನ. ಬಾಲ್ಯದಿಂದ ಇಬ್ಬರೂ ಆಪ್ತರು.
            ಹೇಳಿದಂತೆಯೇ ಸಂಜೆಯ ವೇಳೆಗೆ ವಿಕ್ರಮ, ವಿನಾಯಕನಿಗೆ ಪೋನ್ ಮಾಡಿದ. ವಿಕ್ರಮನಿಂದ ಪೋನ್ ಬರುತ್ತದೆ ಎನ್ನುವ ಕಾರಣಕ್ಕಾಗಿ ಸಿಗ್ನಲ್ ಸಿಗದ ತನ್ನೂರಿನಿಂದ ಮೊಬೈಲ್ ಸಿಗ್ನಲ್ ಇರುವ ಸ್ಥಳಕ್ಕೆ ಬಂದು ಕಾಯುತ್ತಿದ್ದ ವಿನಾಯಕ. ಆರಂಭದಲ್ಲಿ ಉಭಯಕುಶಲೋಪರಿಯನ್ನೆಲ್ಲ ತಿಳಿಸಿದ ಮೇಲೆ ವಿಕ್ರಂ `ಶಿರಸಿಯಲ್ಲಿ ಸಧ್ಯದಲ್ಲಿ ಯಾವುದಾದರೂ ಕೊಲೆ, ದರೋಡೆ, ಹೊಡೆದಾಟ ಇತ್ಯಾದಿ ಏನಾದರೂ ಗಲಾಟೆ ನಡೆದಿತ್ತಾ?' ಎಂದ.
           `ಸಧ್ಯ ಇಲ್ಲ.. ಈಗೊಂದು ತಿಂಗಳ ಹಿಂದೆ ಜಾತ್ರೆ  ಟೈಮ್ನಲ್ಲಿ ಏನೇನೋ ನಡೆದಿತ್ತು.. ದರೋಡೆ ಆಗಿತ್ತು.. ಗಲಾಟೆನೂ ಸುಮಾರು ಆಗಿತ್ತು.. ಆಮೇಲೆ ಈಗೊಂದು 15 ದಿನದ ಹಿಂದೆ ಸ್ಮಗ್ಲಿಂಗ್ ವಿಚಾರದಲ್ಲಿ ಇಬ್ಬರು ಕಾಲೇಜು ಹುಡುಗರನ್ನು ಪೊಲೀಸರು ಅರೆಸ್ಟ್ ಮಾಡಿದ್ರು..' ಎಂದ ವಿನಾಯಕ.
           `ಹೌದಾ..? ಎಂತಾ ಸ್ಮಗ್ಲಿಂಗ್ ಅದು?'
           `ಹುಲಿಯುಗುರು ಸ್ಮಗ್ಲಿಂಗ್ ಮಾಡ್ತಾ ಇದ್ದಿದ್ದ.. ಕಾಲೇಜು ಹುಡುಗ್ರು.. ಗಂಧದ ತುಂಡೂ ಇತ್ತು.. ಪೊಲೀಸರು ಅರೆಸ್ಟ್ ಮಾಡಿದ್ದು ಗೊತ್ತಿತ್ತು.. ಒಂದೆರಡ್ ದಿನಾ ಭಯಂಕರ ಗಲಾಟೆ ಆಗಿತ್ತು.. ಆಮೇಲ ಇದ್ದಕ್ಕಿದ್ದಾಂಗೆ ತಂಡ್ ಆಜು.. ಇದ್ ಬಿಟ್ರೆ ಮತ್ತೆಂತದ್ದೂ ಆದಾಂಗಿಲ್ಲೆ ನೋಡು..' ಎಂದ ವಿನಾಯಕ
          `ಹೌದಾ... ಆಮೇಲೆ ಎಂತಾದ್ರೂ ಆಜಾ..?' ವಿಕ್ರಂ ಕೇಳಿದ
          `ಮತ್ತೆಂತದ್ದೂ ಇಲ್ಲೆ... ಎಲ್ಲಾ ಸರಿ.. ನೀ ಎಂತಕ್ಕೆ ಇದನ್ನೆಲ್ಲಾ ಕೇಳ್ತಾ ಇದ್ದೆ? ಶಿರಸಿಯಲ್ಲಿ ನಡೆದ ದರೋಡೆ, ಸ್ಮಗ್ಲಿಂಗ್ ಬಗ್ಗೆ ನಿಂಗೆಂತಕ್ಕೋ ಅಷ್ಟೆಲ್ಲ ಆಸಕ್ತಿ?' ಎಂದು ಪ್ರಶ್ನಿಸಿದ್ದ ವಿನಾಯಕ.
           `ಎಂತಕ್ಕೂ ಅಲ್ಲಾ ಮಾರಾಯಾ.. ನಮ್ ಆಪೀಸಿಗೆ ಒಂದು ಸುದ್ದಿ ಬಂದಿತ್ತು.. ಶಿರಸಿ ರಿಪೋರ್ಟರ್ರೋ ಅಥವಾ ಮತ್ಯಾರೋ ವರದಿ ಮಾಡಿದ್ದು.. ಅದು ನಿಜಾನೋ ಸುಳ್ಳೋ.. ಹೇಳಿ ಕನ್ಫರ್ಮ್ ಮಾಡ್ಕಂಬಲೆ ಕೇಳಿದ್ನಾ..' ಎಂಬ ಸುಳ್ಳನ್ನು ಹೇಳಿ ಪೋನ್ ಇಟ್ಟ. ವಿಕ್ರಮನಿಗೆ ಎಲ್ಲೋ ಏನೋ ಹೊಳೆದಂತಾಯಿತು. ತಾನು ಮಾಡುತ್ತಿದ್ದ ತನಿಖಾ ವರದಿಗೂ ವಿನಾಯಕ ಹೇಳಿದ್ದ ಅಂಶಕ್ಕೂ ಸಾಕಷ್ಟು ಸಂಬಂಧವಿದೆಯೇನೋ ಅನ್ನಿಸಿತು.
          ಹಾಗಾದರೆ ಶಿರಸಿಯೇ ಎಸ್ ಗುಂಪಿನ ಕಾರ್ಯಸ್ಥಾನವೇ? ತಾನು ಯಾವುದಕ್ಕೂ ಒಮ್ಮೆ ಶಿರಸಿಗೆ ಹೋಗಿಬರಬೇಕು ಎಂದು ಕೊಂಡ ವಿಕ್ರಮ. ಶಿರಸಿಯಲ್ಲಿ ಯಾರನ್ನು ಬಂಧಿಸಿದ್ದರೋ ಅವರನ್ನು ಮಾತನಾಡಿಸಿದರೆ ಏನಾದರೂ ಸಿಗಬಹುದು. ಅಂದರೆ ನಾನು ಶಿರಸಿಗೆ ಸಾಧ್ಯವಾದಷ್ಟು ಬೇಗನೆ ಹೋಗಲೇಬೇಕು ಎಂದುಕೊಂಡವನು ರೂಮಿನಲ್ಲಿದ್ದ ಟಿವಿಯನ್ನು ಹಾಕಿದ. ಟಿವಿಯಲ್ಲಿ ಶಿರಸಿಯಲ್ಲೊಂದು ಕೊಲೆಯಾಗಿದೆಯೆಂದೂ, ಕೊಲೆಯಾದ ವ್ಯಕ್ತಿ ಶಿರಸಿಯಲ್ಲಿ ಕೆಲ ದಿನಗಳ ಹಿಂದೆ ಸ್ಮಗ್ಲಿಂಗ್ ವ್ಯವಹಾರದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದನೆಂದೂ, ಕೊಲೆ ಮಾಡಿದವರು ತಲೆ ತಪ್ಪಿಸಿಕೊಂಡಿದ್ದಾರೆಂದೂ ತಿಳಿಯಿತು. ಆಗಲೇ ವಿಕ್ರಮನಿಗೆ ತನ್ನ ತನಿಖೆ ಒಂದು ಹಂತಕ್ಕೆ ಬಂತು ಎಂದುಕೊಳ್ಳುತ್ತಿದ್ದಂತೆ ಮತ್ತೆಲ್ಲೋ ಹಾದಿ ತಪ್ಪುತ್ತಿದೆ ಎಂದು ಅರ್ಥವಾಯಿತು. ಆದರೂ ಶಿರಸಿಗೆ ಹೋಗಿ ಪ್ರಯತ್ನಿಸುವುದು ಒಳಿತು ಎಂದುಕೊಂಡ. ಬದುಕಿರುವ ಇನ್ನೊಬ್ಬ ಕಾಲೇಜು ವಿದ್ಯಾರ್ಥಿಯನ್ನಾದರೂ ಮಾತನಾಡಿಸೋಣ ಎಂದುಕೊಂಡ.
              ಮರುದಿನವೇ ಆತ ನವೀನಚಂದ್ರರ ಛೇಂಬರಿಗೆ ಹೋದ. ನವೀನಚಂದ್ರರು ಆಗಲೇ ಅಲ್ಲಿ ಕುಳಿತಿದ್ದರು. ಒಳಬಂದ ವಿಕ್ರಮನನ್ನು ನೋಡಿ `ವಿಕ್ರಂ... ನಂಗ್ಯಾಕೋ ನೀವು ಈ ತನಿಖೆಯನ್ನು ಕೈ ಬಿಡುವುದೇ ಒಳ್ಳೆಯದು ಎನ್ಸುತ್ತೆ. ಇದರಿಂದ ಉಪಯೋಗ ಇಲ್ಲ. ಜೊತೆಗೆ ಅಪಾಯವೇ ಹೆಚ್ಚು. ಏನಂತೀಯಾ?' ಎಂದರು.
             `ಆದ್ರೆ ಸರ್.. ಈಗ ನಾನು ಒಂದು ಹಂತದೆಡೆಗಿನ ಹುಡುಕಾಟವನ್ನು ಮುಗಿಸಿದ್ದೇನೆ. ಇಲ್ಲಿ ಮುಖ್ಯ ಪಾತ್ರ ವಹಿಸುವುದು ಎಸ್ ಲಾಕೇಟಿನ ಒಂದು ಗುಂಪು. ಆ ಗುಂಪಿನ ಕಾರ್ಯಸ್ಥಳವೋ ಅಥವಾ ಪ್ರಮುಖ ಪ್ರದೇಶವೋ ಗೊತ್ತಿಲ್ಲ. ಅದು ಶಿರಸಿ ಎನ್ನುವುದು ತಿಳಿದಿದೆ. ಇಂತಹ ಸಮಯದಲ್ಲಿ ನನ್ನ ಹುಡುಕಾಟವನ್ನು ನಿಲ್ಲಿಸಲಾರೆ ಸರ್..' ಎಂದ ವಿಕ್ರಂ.
           `ಹಾಗಲ್ಲಪ್ಪಾ... ಈ ನಿನ್ನ ತನಿಖೆ ಬಹಳ ಡೇಂಜರ್ರು. ಇಲ್ಲಿ ಹಲವು ರೀತಿಯ ತೊಂದರೆ ಬರಬಹುದು. ಅದೂ ಅಲ್ದೆ ಆ ಗುಂಪು ಕೊಲ್ಲೋದಕ್ಕೂ ಹೇಸೋದಿಲ್ಲ ಎನ್ನುವುದು ಅರಿವಾಗಿದೆ. ಮಂಗಳೂರು ಹಾಗೂ ಶಿರಸಿಗಳಲ್ಲಿ ನಡೆದಿರೋ ಕೊಲೆಗಳೇ ಇದಕ್ಕೆ ಸಾಕ್ಷಿ. ಸುಮ್ನೆ ಅಪಾಯವನ್ನು ಮೈಮೇಲೆಳೆದುಕೊಳ್ಳುವಂತದ್ದು ಏನಿದೆ? ಅಂತಹ ಕೆಲಸವನ್ನು ನಾವ್ಯಾಕೆ ಮಾಡ್ಬೇಕು ಹೇಳಿ. ' ಎಂದರು ನವೀನಚಂದ್ರ.
           `ಸರ್.. ನಾನು ಮೊದಲು ಇಲ್ಲಿ ಸೇರೋವಾಗ ನಿಮಗೆ ಹೇಳಿದ್ದೆ. ಅದರ ಜೊತೆಗೆ ನಾನು ಮಾಡ್ತಿರೋ ವೃತ್ತಿಯೇ ಅಂತದ್ದಾಗಿದೆ. ಹರಿತವಾದ ಕತ್ತಿಯ ಮೇಲೆ ನಡೆದುಕೊಂಡು ಓಡಾಡುವಂತದ್ದು. ಅದರಲ್ಲಿ ತಿರುಗಿ ಬರುವ ಪ್ರಶ್ನೆಯೇ ಇಲ್ಲ ಸಾರ್.. ನೀವ್ ಹೆದರಬೇಡಿ... ಎಂತದ್ದೇ ಸಮಸ್ಯೆ ಬಂದರೂ ನಾನು ಹಿಂದಕ್ಕೆ ತಿರುಗೋದಿಲ್ಲ..'
           `ಆದ್ರೂ... ಒಂದ್ ಸಾರಿ ಆಲೋಚನೆ ಮಾಡಿ..'
           `ಇಲ್ಲ ಸಾರ್.. ನಾನು ಈ ಹುಡುಕಾಟ ನಿಲ್ಲಿಸೋದಿಲ್ಲ. ಏನೇ ಕಷ್ಟ ಬಂದರೂ.. ಸಾವೇ ಎದುರಿಗೆ ಬಂದರೂ ಅದನ್ನು ಎದುರಿಸಿ ನಿಲ್ಲುತ್ತೇನೆ...'
(ಮಲೆನಾಡಿನಲ್ಲಿ ಮಂಜಿನ ಮುಂಜಾವು)
           `ಹಹ್ಹಹ್ಹ..! ವೆಲ್ ಡನ್..ಗುಡ್ ವಿಕ್ರಂ. ನಾನು ಮಾಡಿದ ಪರೀಕ್ಷೆಯಲ್ಲಿ ನೀನು ಗೆಲುವು ಸಾಧಿಸಿದೆ. ನಾನು ನಿನ್ನನ್ನು ಪರೀಕ್ಷೆ ಮಾಡಲಿಕ್ಕಾಗಿ ಕೇಳಿದ್ದೆ. ಆದರೆ ನೀನು ಅದಕ್ಕೆ ಹೆದರಲಲ್ಲಿಲ್ಲ ನೋಡು. ಕೇಸಿನ ಬಗ್ಗೆ ನಿನ್ನ ನಿಷ್ಟೆ ಯಾವ ರೀತಿ ಇರಬಹುದು ಎಂದುಕೊಂಡೆ. ಪರವಾಗಿಲ್ಲ.. ಒಳ್ಳೆ ಕೆಲಸ ಹಾಕ್ಕೊಂಡಿದ್ದೀಯಾ.. ಗುಡ್..' ಎಂದರು ನವೀನಚಂದ್ರ.
          `ಓಹ್... ನಾನು ಇದೇನಿದು ಅಂದ್ಕೊಂಡೆ.. ಯಾಕೆ ಹೀಗೆ ಅವರು ಹೇಳ್ತಾ ಇದ್ದಾರೆ ಎಂದೂ ಆಲೋಚನೆ ಮಾಡಿದ್ದೆ ನೋಡಿ..'
         `ನೋಡು.. ಒಂದು ಮುಖ್ಯ ಸುದ್ದಿ ಹೇಳ್ಬೇಕು. ನಿಮ್ಮೂರು ಇರೋದು ಉತ್ತರ ಕನ್ನಡದಲ್ಲಿ ಅಲ್ವಾ? ಅಲ್ಲಿಯೇ ಈ ಗುಂಪಿನ ಕಾರ್ಯಸ್ಥಾನ ಇರೋದು ಅಂತ ಹೇಳಿದ್ರಿ ನೀವು. ನೀವ್ಯಾಕೆ ಅಲ್ಲಿಗೆ ಹೋಗಿ ನಿಮ್ಮ ತನಿಖೆ ಮುಂದುವರಿಸಬಾರದು? ಈ ಕುರಿತು ಒಂದೆರಡು ದಿನ ತಡವಾದರೂ ತೊಂದರೆಯಿಲ್ಲ. ಆದರೆ ನಿಜವಾದ ಆರೋಪಿ, ಈ ಎಲ್ಲದ್ದಕ್ಕೂ ಕಾರಣವಾಗಿರುವ ತಂಡ ಸಿಕ್ಕಿಬಿಟ್ಟರೆ ಅಷ್ಟೇ ಸಾಕು. ನಿನಗೆ ಎಷ್ಟು ದಿನದ ರಜೆ ಬೇಕಾದರೂ, ಜೊತೆಗೆ ಯಾವುದೇ ರೀತಿಯ ಸಹಾಯ ಬೇಕಾದರೂ ನನ್ನಿಂದ ಹಾಗೂ ನಮ್ಮ ಆಫೀಸಿನಿಂದ  ಸಿಗುತ್ತದೆ...' ಎಂದರು ನವೀನಚಂದ್ರ.
           `ನಾನೂ ಅದನ್ನೇ ತಿಳಿಸೋಕೆ ಬಂದೆ ಸಾರ್.. ನಾನು ಇವತ್ತು ಸಂಜೆ ಊರಿಗೆ ಹೊರಡೋಣ ಎಂದುಕೊಂಡಿದ್ದೇನೆ. ನಿಮ್ಮ ಸಹಾಯಕ್ಕೆ ಥ್ಯಾಂಕ್ಸ್. ಸರ್.. ನನಗೆ ಕನಿಷ್ಟ 2 ವಾರದ ರಜೆ ಬೇಕು. ನಾನು ಅಲ್ಲಿನ ಹುಡುಕಾಟಾನ ಕಾಲಕಾಲಕ್ಕೆ ತಕ್ಕಂತೆ ನಡೆಯುವ ವಿದ್ಯಮಾನಗಳನ್ನು ವರದಿ ಮಾಡ್ತೀನಿ ಸರ್. ಆದರೆ ನನ್ನ ತನಿಖೆ ಪೂರ್ತಿ ಆಗುವ ವರೆಗೂ ಆ ವರದಿ ಪತ್ರಿಕೆಯಲ್ಲಿ ಬರಬಾರದು..' ಎಂದ ವಿಕ್ರಮ.
           ಸರಿ. ಆದ್ರೆ ಒಂದು ಮುಖ್ಯವಾದ ವಿಷಯ. ನೀನು ಅಲ್ಲಿಗೆ ಹೋದಾಗ ಪೇಪರ್ರಿನವನು ಅಂತ ಹೇಳಬೇಡ. ಯಾವುದಾದರೂ ರಿಸರ್ಚ್ ಕೆಲಸಕ್ಕೆ ಬಂದಿದ್ದೇನೆ ಎಂದು ಹೇಳಿ. ಜೊತೆಗೆ ನನ್ನ ಕಾರನ್ನೂ ತೆಗೆದುಕೊಂಡು ಹೋಗು. ಸಹಾಯಕ್ಕೆ ಬರುತ್ತೆ. ' ಎಂದು ಹೇಳಿದರು. ಇದಾದ ನಂತರವೂ ಹಲವು ವಿಷಯಗಳು ವಿನಿಮಯವಾದವು. ನಂತರ ವಿಕ್ರಂ ತನ್ನ ರೂಮಿಗೆ ಮರಳಿದ.

************7**************

              ಸರಿ. ಹೊರಡುವ ವಿಷಯವನ್ನು ವಿಜೇತಾಳಿಗೆ ತಿಳಿಸಿದ. ವಿಷಯವನ್ನು ಕೇಳಿದವಳೇ ತಾನೂ ಬರುವುದಾಗಿ ಹಟ ಹಿಡಿದಳು. ಕೊನೆಗೆ ನವೀನಚಂದ್ರನ ಒಪ್ಪಿಗೆ ಮೇರೆಗೆ  ಆಕೆಯೂ ಹೊರಟಳು. ವಿಕ್ರಂ ಹಾಗೂ ವಿಜೇತಾ ತಮ್ಮೆಲ್ಲ ಲಗೇಜುಗಳನ್ನು ಕಾರಿನಲ್ಲಿ ತುಂಬಿ ಹೊರಡಲು ಅನುವಾಗುತ್ತಿದ್ದಂತೆ ಪ್ರದೀಪ ಪ್ರತ್ಯಕ್ಷನಾದ. ಅದ್ಯಾರು ಹೇಳಿದ್ದರೋ, ಹೇಗೆ ಗೊತ್ತಾಯಿತೋ.. ಪ್ರದೀಪ ತನ್ನೆಲ್ಲಾ ಲಗೇಜುಗಳ ಸಮೇತ ತಯಾರಾಗಿ ಬಂದಿದ್ದ. ತಾನೂ ವಿಕ್ರಮನ ಜೊತೆಗೆ ಬರುತ್ತೇನೆ ಎಂದು ಹೇಳಿದವನೇ ವಿಕ್ರಮನ ಮಾತಿಗೂ ಕಾಯದೇ ಕಾರನ್ನೇರಿಬಿಟ್ಟ. ವಿಕ್ರಮ ಬೇಡ ಬೇ ಎನ್ನುತ್ತಿದ್ದರೂ ಅದನ್ನು ಪ್ರದೀಪ ಕೇಳದಂತಿದ್ದ. ವಿಧಿಯಿಲ್ಲದೇ ವಿಕ್ರಮ ಗಾಡಿ ಚಾಲೂ ಮಾಡಿದ.! ಕತೆ ಇಲ್ಲಿಂದ ಸಂಪೂರ್ಣ ಬದಲಾವಣೆಯ ಮಾರ್ಗ ಹಿಡಿದಿತ್ತು. ಮಲೆನಾಡು ಕರೆದಿತ್ತು.
             ಎಷ್ಟು ಬೇಡವೆಂದರೂ ನವೀನಚಂದ್ರರು ತಮ್ಮ ಕಾರನ್ನು ವಿಕ್ರಮನಿಗಾಗಿ ನೀಡಿದ್ದರು. ಅಂತೂ ರಾತ್ರಿಯ ಹೊತ್ತಿಗೆ ವಿಕ್ರಮ, ವಿಜೇತಾ ಹಾಗೂ ಪ್ರದೀಪ ನಿಘೂಡಗಳ ತವರು ಉತ್ತರ ಕನ್ನಡದ ಕಡೆಗೆ ಹೊರಟರು. ವಿಕ್ರಮನಿಗೆ ಮತ್ತೆ ತನ್ನ ಮನೆಗೆ ಮರಳುವ ತವಕ. ಹಿಡಿದ ಕೆಲಸವನ್ನು ಬೇಗನೇ ಮುಗಿಸುವ ತುಡಿತ ಇದ್ದರೆ ಅರಿಯದ ಸುಂದರ ಜಿಲ್ಲೆಯ ಕಡೆಗೆ ಸಾಗುತ್ತಿರುವ ಬಗ್ಗೆ ವಿಜೇತಾ ಹಾಗೂ ಪ್ರದೀಪರಲ್ಲಿ ಕುತೂಹಲವಿತ್ತು. ಇಲ್ಲಿ ವಿಕ್ರಮನ ಮನಸ್ಸು ಪ್ರದೀಪನೆಡೆಗೆ ಮಾತ್ರ ಚಿಕ್ಕದೊಂದು ಅನುಮಾನದ ಎಳೆಯನ್ನು ಹರಿಯಬಿಟ್ಟಿತ್ತು. ಆದರೂ ಪ್ರದೀಪನ ಜೊತೆಗೆ ಮೊದಲಿನಂತೆ ವರ್ತನೆ ಮಾಡುತ್ತಿದ್ದ.
              ವೇಗವಾಗಿ ಚಲಿಸುತ್ತಿದ್ದ ಕಾರಿಗಿಂತ, ಕಾರಿನಲ್ಲಿ ಕುಳಿತಿದ್ದ ಮೂವರ ಮನಸ್ಸುಗಳು ಮತ್ತಷ್ಟು ವೇಗವಾಗಿ ಎತ್ತೆತ್ತಲೋ ಓಡುತ್ತಿದ್ದವು. ವಿಕ್ರಮ ಮತ್ತೆ ಮತ್ತೆ ತನ್ನ ಹುಡುಕಾಟದ ಬಗ್ಗೆ ಆಲೋಚಿಸುತ್ತಿದ್ದರೆ, ವಿಜೇತಾ ತಾನು ಇಲ್ಲಿಗೆ ಹೊರಡಲು ಮನೆಯಲ್ಲಿ ಒಪ್ಪಿಗೆ ಕೇಳಿದಾಗ ಮನೆಯವರು ಏನೋ ಹೇಳಲು ಹೊರಟವರು ಹಾಗೇ ತಡೆದು ಒಪ್ಪಿಗೆ ನೀಡಿದ ತಂದೆ ತಾಯಿಯರ ನಡೆಯ ಬಗ್ಗೆ ಆಲೋಚಿಸುತ್ತಿದ್ದಳು.
           ಪ್ರದೀಪ ಮಾತ್ರ ಆಗಾಗ `ಭೀಗಿ ಭೀಗಿ ರಾತೋ ಮೆ....' ಅಂತಲೋ.. `ಯಾರು ಯಾರು ನೀ ಯಾರು..?' ಅಂತಲೋ ಸಂಬಂಧವೇ ಇಲ್ಲದ ಯಾವು ಯಾವುದೋ ಹಾಡುಗಳನ್ನು ಹಾಡುತ್ತಿದ್ದ. ಜೊತೆಗೆ ತನ್ನ ಕುಟುಂಬದ ಬಗ್ಗೆ ಆಲೋಚನೆ ಮಾಡುತ್ತಿದ್ದ. ಈ ಮೂವರ ನಡುವೆ ಕಾರಿನಲ್ಲಿದ್ದ ಟೇಪ್ ರೆಕಾರ್ಡರ್ ಮಾತ್ರ ಮುಖೇಶನ ಹಾಡುಗಳನ್ನು ಒಂದರ ಹಿಂದೊಂದರಂತೆ ಹಾಡುತ್ತಿದ್ದವು. ಈ ಎಲ್ಲ ಕಾರಣಗಳಿಂದ ಕಾರಿನಲ್ಲಿ ಮೌನ ಇರಲಿಲ್ಲ. ಮಂದ್ರ ದನಿಯಲ್ಲಿ ಹಾಡು ಕೇಳಿಸುತ್ತ ಮನಸ್ಸು ತಣ್ಣಗೆ ಹರಿಯತೊಡಗಿತ್ತು.
            ಅಜಮಾಸು 300 ಕಿ.ಮಿ ಸಾಗಿದ ನಂತರ ಅಂಕೋಲಾ ಸಿಕ್ಕಿತು. ಅಲ್ಲೊಂದು ಕಡೆ ಕಾರನ್ನು ನಿಲ್ಲಿಸಿದ ವಿಕ್ರಮ. ಅಲ್ಲಿ  ಚಹಾ ಕುಡಿದು ಮುಖಕ್ಕೆ ನೀರನ್ನು ರಪ್ಪನೆ ಚಿಮುಕಿಸಿ, ಆಗೀಗ ಸುಳಿದು ಬರುತ್ತಿದ್ದ ನಿದ್ದೆಗೆ ಗುಡ್ ಬೈ ಹೇಳಿದ ವಿಕ್ರಮ. ವಿಜೇತಾ ಆಗೀಗ ವಿಕ್ರಮನ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದಳು. ಅದಕ್ಕೆಲ್ಲ ದೀರ್ಘವಾಗಿ ಉತ್ತರಿಸುತ್ತಿದ್ದ. ಆಗಾಗ ಪ್ರದೀಪನ ಹಾಸ್ಯ ರಸಾಯನದ ತುಣುಕುಗಳೂ ಚೆಲ್ಲುತ್ತಿದ್ದವು. ಬಾಳೆಗುಳಿ ಕ್ರಾಸಿನಲ್ಲಿ ಬಲಕ್ಕೆ ತಿರುಗಿಸಿ ಕಾರನ್ನು ಹುಬ್ಬಳ್ಳಿ ರಸ್ತೆಯ ಕಡೆಗೆ ಚಾಲನೆ ಮಾಡಿದರು. ಮಧ್ಯರಾತ್ರಿಯ ಸಮಯ ಮೀರಿ ಬೆಳಗಿನ ಮುಂಜಾವು ದೂರದ ಭೀಮನವಾರೆ ಗುಡ್ಡದಲ್ಲಿ ಇಣುಕಲು ಪ್ರಯತ್ನಿಸುತ್ತಿತ್ತು. ಅಲ್ಲೆಲ್ಲೋ ಆಗಾಗ ಸಿಗುತ್ತಿದ್ದ ಲೈಟುಗಳು., ಎದುರಿನಿಂದ  ಬರುತ್ತಿದ್ದ ವಾಹನಗಳ ಭರ್ರೆನ್ನುವ ಸದ್ದು, ಕಾಡಿನ ನಡುವಣ ಒಂಟಿ ಪಯಣ.. ಏನೋ ಒಂಥರಾ ಎನ್ನಿಸಿತು. ಸ್ವಲ್ಪ ಸಮಯದಲ್ಲಿ ಅರಬೈಲ್ ಘಟ್ಟದ ಅಂಕುಡೊಂಕು ಸಿಕ್ಕಿತು. ವೇಗವಾಗಿ ಹತ್ತಿ ಯಲ್ಲಾಪುರವನ್ನು ತಲುಪುವ ವೇಳಗೆ ಸೂರ್ಯ ಬಾನಂಚಿನಲ್ಲಿ ಮತ್ತಷ್ಟು ಏರಿ ಬಂದಿದ್ದ.
          ಮುಂಜಾನೆಯ ಚುಮು ಚುಮು ಬೆಳಕಿನಲೆಯ ಆಗಮನದ ಜೊತೆ ಜೊತೆಯಲ್ಲಿಯೇ ಕಾರು ಒಂದೆರಡು ರಸ್ತೆಯನ್ನು ಹಾದು, ಕೊನೆಗೊಂದು ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸಾಗಿತು. ಮೊದಲ ಸೂರ್ಯನ ಕಿರಣ ಧರೆಯನ್ನು ಮುತ್ತಿಕ್ಕುವ ವೇಳೆಗೆ ಮನೆಯೊಂದರ ಅಂಗಳದಲ್ಲಿ ಕಾರು ಬಂದು ನಿಂತಿತು.  ಆಗಲೇ ವಿಜೇತಾ ಹಾಗೂ ಪ್ರದೀಪರು ನಿದ್ರೆಗೆ ಜಾರಿದ್ದರು. ಮನೆಯಂಗಳದಲ್ಲಾಗಲೇ ಸುಂದರ ರಂಗೋಲಿ ಮಿನುಗುತ್ತಿತ್ತು. ವಿಕ್ರಮ ಒಮ್ಮೆ ಕಾರಿನ ಹಾರನ್ ಮಾಡಿದ. ಮನೆಯೊಳಗಿನಿಂದ ಹೊರ ಬಂದ ಒಬ್ಬಾಕೆ ಯಾರು ಬಂದಿರಬಹುದು ಬೆಳ್ಳಂಬೆಳಿಗ್ಗೆ ಎಂದು ಕುತೂಹಲ, ಗಾಭರಿಯಿಂದ ನೋಡಲು ಆರಂಭಿಸಿದಳು.

(ಮುಂದುವರಿಯುತ್ತದೆ) 

Thursday, January 8, 2015

ಖಾಲಿಯಿದೆ ಬಾಳಪುಟ

ಖಾಲಿಯಿದೆ ಬಾಳಪುಟ
ಯಾರ ಚಿತ್ರವೂ ಇಲ್ಲ
ಪ್ರೀತಿಯನು ಬಯಸುತಿದೆ
ಜೊತೆಗೆ ಯಾರೂ ಇಲ್ಲ |

ಬೆರೆತಿದೆ ನೂರು ನೋವು
ಜೊತೆಗೆ ಕಷ್ಟದ ಸೊಲ್ಲು
ಒಂಟಿತನ ಓಡಿಸಲು
ಜೊತೆಯ ಬಯಸಿದೆಯಲ್ಲ |

ಎದೆಯ ಗುಂಡಿಗೆಯೊಳಗೆ
ಯಾರ ರೇಖೆಯೂ ಇಲ್ಲ
ಮನದ ಒಬ್ಬಂಟಿತನ
ಕಳೆಯಬಯಸಿದೆಯಲ್ಲ |

ಎದುರಲಿದೆ ಕಲ್ಪನೆಯು
ಮನದ ಬದಲಾವಣೆಯು
ನೂರು ಬಯಕೆಯ ಸುತ್ತ
ಮನವು ಸುತ್ತಿದೆಯಲ್ಲ |

ಖಾಲಿಯಿದೆ ಬಾಳಪುಟ
ಪ್ರಿತಿ ದೊರೆಯುವ ವರೆಗೆ
ಮುತ್ತಿಕೊಂಡಿದೆ ಮುಸುಕು
ತೆರೆಯ ಸರಿಯುವ ವರೆಗೆ |

***
(ಈ ಕವಿತೆಯನ್ನು ಬರೆದಿರುವುದು 16-10-2006ರಂದು ದಂಟಕಲ್ಲಿನಲ್ಲಿ)

Sunday, January 4, 2015

ಅಘನಾಶಿನಿ ಕಣಿವೆಯಲ್ಲಿ-6

           ನಂತರ ಅವರು ಇನ್ನೇನು ವಾಪಾಸು ಹೊರಡಬೇಕು ಎನ್ನುವಷ್ಟರಲ್ಲಿ ವಿಕ್ರಮನಿಗೆ ಪ್ರದೀಪ ಬರುತ್ತಿರುವುದು ಕಾಣಿಸಿತು. ಹತ್ತಿರ ಬಂದ ಕುಡಲೇ `ಹಲೋ... ಏನಪ್ಪಾ ಇಲ್ಲಿ. ಏನ್ಮಾಡ್ತಾ ಇದ್ದೀಯಾ?' ಎಂದು ಕೇಳಿ ವಿಜೇತಾಳನ್ನು ಪ್ರದೀಪನಿಗೂ ಪ್ರದೀಪನನ್ನು ವಿಜೇತಾಳಿಗೂ ಪರಿಚಯಿಸಿದ.
           ಇದು ಯಾರು ಬರೆದ ಕಥೆಯೋ... ನನಗಾಗಿ ಬಂದ ವ್ಯಥೆಯೋ...
ಎಂದು ಹಾಡುತ್ತಾ ಬರುತ್ತಿದ್ದ ಪ್ರದೀಪ ಇವರನ್ನು ನೋಡಿ ಒಮ್ಮೆಲೆ ಅವಕ್ಕಾದರೂ ಬೇಗನೆ ಸಾವರಿಸಿಕೊಂಡು `ನಮಸ್ಕಾರ, ನಮಸ್ತೆ.. ಹಲೋ.. ಹಾಯ್...' ಎಂದು ಹಲ್ಲುಕಿರಿಯತೊಡಗಿದ.
          `ವಿಜೇತಾ.. ಈತ ಭರ್ಜರಿ ಹಾಡುಗಾರ. ಒಳ್ಳೆಯ ಅಡುಗೆಯಾತ.. ಬಹಳ ಕೊರೆಯುವ ವ್ಯಕ್ತಿ.. ಮೂರ್ನಾಲ್ಕು ವರ್ಷ ನನ್ನ ರೂಮ್ ಮೇಟು.. ಈದೀಗ ಬೇರೆ ಕಡೆ ರೂಮು ಮಾಡಿದ್ದಾನೆ. ಆದರೆ ಈತನ ದುರ್ಗುಣ ಎಂದರೆ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಡುವುದು. ನಿಘೂಡ ವ್ಯಕ್ತಿ ಎಂದರೆ ತಪ್ಪಾಗಲಿಕ್ಕಿಲ್ಲ ನೋಡು.. ' ಎಂದು ತಮಾಷೆ ಮಾಡಿದ ವಿಕ್ರಮ.
         `ಹೇ ಸುಮ್ನಿರೋ.. ಸುಮ್ನಿರೋ..' ಎಂದು ತಿವಿಯುತ್ತಾ ಹೇಳಿದ ಪ್ರದೀಪ. ಒಮ್ಮೆಲೆ ಎಲ್ಲರಲ್ಲೂ ನಗು ಉಕ್ಕಿತ್ತು. ನಂತರ ಮಾತು ಮುಂದುವರಿಸುತ್ತಾ `ನಾನು ಇಲ್ಲೇ ರೂಮು ಮಾಡಿದ್ದೀನಿ. ಬನ್ನಿ.. ಎಲ್ಲ ಅಲ್ಲಿಗೆ ಹೋಗೋಣ.. ಅಲ್ಲಿ ಆರಾಮಾಗಿ ಮಾತಾಡೋಣ..' ಎಂದು ಹೇಳಿ ಅವರಿಬ್ಬರನ್ನೂ ಕರೆದೊಯ್ದ.. `ನಡಿಯಪ್ಪಾ...ನಡಿ... ನಿನ್ನ ನಳಪಾಕದ ಪರಿಚಯ ವಿಜೇತಾಗೂ ಆಗಿ ಹೋಗಲಿ...' ಎಂದು ಮತ್ತೊಮ್ಮೆ ತಮಾಷೆ ಮಾಡಿದ ವಿಕ್ರಮ. ಎಲ್ಲರೂ ನಗುತ್ತ ಪ್ರದೀಪನ ರೂಮಿನ ಕಡೆಗೆ ಪಾದ ಬೆಳೆಸಿದರು.
           ಅವನದು ಮಹಡಿ ಮೇಲಿನ ದೊಡ್ಡ ರೂಮು. ಅಲ್ಲಿ ತರಹ ತರಹದ ವಸ್ತುಗಳಿದ್ದವು.ಗೋಡೆಯ ಮೇಲಂತೂ ಭಾರತ, ವಿಶ್ವ, ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ವಿವಿಧ ನಕಾಶೆಗಳು ತೂಗಾಡುತ್ತಿದ್ದವು. ಆ ರೂಮಿನ ಒಳಕ್ಕೆ ಕಾಲಿಡುತ್ತಿದ್ದಂತೆ `ನೀವು ಒಳ್ಳೆಯ ಸಲಹೆ ನೀಡಿದ್ರಿ.. ನೀವುಕೊಟ್ಟ ಸಲಹೆಯಿಂದಲೇ ವಿಕ್ರಂ ಅವರು ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು ನೋಡಿ.. ಅದಕ್ಕೆ ನೀವು ಧನ್ಯವಾದಕ್ಕೂ, ಗೌರವಕ್ಕೂ ಅರ್ಹರು..' ಎಂದಳು ವಿಜೇತಾ.
          `ಓಹ್... ಅದರಲ್ಲಿ ನಂದೇನಿದೆ? ಅವ್ನು ನನ್ನ ಗುಡ್ ಪ್ರೆಂಡೂ.. ಬೇಜಾರ್ನಲ್ಲಿದ್ದ.. ಅದಕ್ಕೆ ಒಂದೆರಡು ಸಲಹೆ ಕೊಟ್ಟೆ ಅಷ್ಟೇ. ಆದರೆ ಪ್ರಯತ್ನ ಪಟ್ಟು ಗೆದ್ದಿದ್ದು ವಿಕ್ರಂ ಹಾಗೂ ಆತನ ಬಳಿ ಕಲಿತವರು.. ನಾನು ನಿಮಿತ್ತ ಮಾತ್ರ...' ಎಂದ ಪ್ರದೀಪ.
         `ಆದ್ರೂ ಸೋಲಲು ಆರಂಭವಾದಾಗ ನಿಮ್ಮಂಥವರ ಆಶಾವಾದದ ನುಡಿಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.  ಗೆಲುವಿನ ಕಡೆಗೆ ಮುಖ ಮಾಡಿಸುತ್ತದೆ...'
         `ಅದೂ ಹೌದೆನ್ನಿ.. ಒಂದ್ನಿಮಿಷ.. ಟೀ ಮಾಡ್ಕೊಂಡು ಬರ್ತೀನಿ...' ಎಂದು ಪ್ರದೀಪ ಹೇಳುತ್ತಿದ್ದಂತೆ.. `ಮೊದ್ಲು ಆ ಕೆಲಸ ಮಾಡಪ್ಪಾ... ಬಾಯೆಲ್ಲಾ ಉಪ್ಪುಪ್ಪಾಗಿದೆ...' ಎಂದ ವಿಕ್ರಂ. ಕೆಲವೇ ಸಮಯದಲ್ಲಿ ಟೀ ಮಾಡಿಕೊಂಡು ಬಂದ. ವಿಕ್ರಂ, ವಿಜೇತಾ ಕುಳಿತು ಮಾತನಾಡುತ್ತಿದ್ದರೆ ಪ್ರದೀಪ ಕಿಟಕಿ ಬಳಿ ಹೋಗಿ ಮಾತನಾಡುತ್ತ ನಿಂತಿದ್ದ. ಕೆಲವು ನಗು, ತಮಾಷೆ,ಗಳೆಲ್ಲ ಆ ಸಂದರ್ಭದಲ್ಲಿ ಹಾದು ಹೋದವು.
           ಹೀಗೆ ಮಾತನಾಡುತ್ತಿದ್ದಂತೆ ಪ್ರದೀಪದ ದೃಷ್ಟಿ ಕಿಟಕಿಯಿಂದ ಹೊರಕ್ಕೆ ಹಾಯಿತು. ತಕ್ಷಣ ವಿಕ್ರಮನನ್ನು ಕರೆದು `ಶ್.. ಅಲ್ಲಿನೋಡು ನಾನು ಆ ದಿನ ಹೇಳಿದ್ನಲ್ಲಾ.. ಅದೇ ಫಾಲೋ ಮಾಡುವ ವ್ಯಕ್ತಿ. ಕಾಂಪೌಂಡ್ ಹತ್ತಿರ ಇಣುಕುತ್ತಿದ್ದಾನೆ ನೋಡು.. ' ಎಂದು ಹೇಳಿ ಬಾಯಿ ಮುಚ್ಚುವುದರೊಳಗಾಗಿ `ಒಂದೈದ್ ನಿಮಿಷ ನೀವಿಬ್ರೂ ಇಲ್ಲೇ ಇರಿ..' ಎಂದು ಹೇಳುತ್ತಾ ವಿಕ್ರಂ ಹೊರಗೋಡಿದ. ವಿಕ್ರಂ ಒಳ್ಳೆಯ ರನ್ನರ್ ಎನ್ನುವುದನ್ನು ಅರಿತಿದ್ದ ಪ್ರದೀಪ ಖಂಡಿತವಾಗಿಯೂ ಆ ಇಣುಕು ವ್ಯಕ್ತಿಯನ್ನು ಹಿಡಿದೇ ತರುತ್ತಾನೆ ಎನ್ನುವುದು ಖಾತ್ರಿಯಾಗಿತ್ತು.
          ಮತ್ತೈದು ನಿಮಿಷದಲ್ಲಿ ವಿಕ್ರಂ ಏದುಸಿರು ಬಿಡುತ್ತಾ ತಿರುಗಿ ಬಂದ. ತಕ್ಷಣ ಪ್ರದೀಪ `ಸಿಕ್ಕಿದ್ನಾ ಆತ..?' ಎಂದ.
          `ಬೆನ್ನಟ್ಟಿಕೊಂಡು ಹೋದೆ.. ಸಿಟಿ ಏರಿಯಾ ನೋಡಿ.. ತಪ್ಪಿಸಿಕೊಂಡು ಬಿಟ್ಟ.. ಬಡ್ಡೀಮಗ.. ನಾನೇ ಸ್ಪೀಡು ಅಂದ್ರೆ ನನಗಿಂತ ಸ್ಪೀಡಾಗಿ ಓಡ್ತಾನೆ...' ಎಂದ ವಿಕ್ರಂ. ಕೆಲ ಸಮಯದ ವರೆಗೆ ಈ ವಿಷಯದ ಕುರಿತು ಚರ್ಚೆ ನಡೆಯಿತು. ನಂತರ ವಿಜೇತಾ ಪ್ರದೀಪನಲ್ಲಿ `ನೀವು ಏನು ಕೆಲಸ ಮಾಡ್ತಾ ಇದ್ದೀರಿ?' ಎಂದು ಕೇಳಿದಾಗ ಪ್ರದೀಪ ಅದೇನೋ ಹಾರಿಕೆಯ ಉತ್ತರ ನೀಡಿದ. ಮತ್ತರೆಘಳಿಗೆಯಲ್ಲಿ ವಿಜೇತಾ ಹಾಗೂ ವಿಕ್ರಂ ಆಫೀಸಿನ ಕಡೆಗೆ ಹೊರಟರು.
          ದಾರಿಯಲ್ಲಿ ವಿಜೇತಾ `ಅದ್ಯಾರೋ ನಿನ್ನ ಫಾಲೋ ಮಾಡ್ತಾರೆ ಅಂದನಲ್ಲಾ.. ಅದೇನು ಮಾರಾಯಾ.? ವಿಚಿತ್ರವಾಗಿದೆಯಲ್ಲ...' ಎಂದಳು.. `ನನಗೂ ಗೊತ್ತಿಲ್ಲ... ಆದರೂ ಆಶ್ಚರ್ಯವಾಗ್ತಾ ಇದೆ...' ಎಂದ ವಿಕ್ರಂ.
         `ಈ ಪ್ರದೀಪ ಬಹಳ ವಿಚಿತ್ರ ಅನ್ನಿಸ್ತಿದೆ ಕಣೋ.. ಏನೋ ನಿಗೂಢ.. ನೀ ಹೇಳಿದ್ದು ಸತ್ಯ.. ಅರ್ಥವಾಗುತ್ತಿಲ್ಲ.. ಕೇಳಿದ್ದಕ್ಕೊಂದಕ್ಕೂ ಸರಿಯುತ್ತರ ಕೊಡೋದಿಲ್ಲ.. ಎಲ್ಲದ್ದಕ್ಕೂ ಹಾರಿಕೆ ಉತ್ತರ.. ಮಾತು ತಪ್ಪಿಸುತ್ತಾನೆ.. ಕಣ್ಣಲ್ಲಿ ಅದೇನೋ ಅನುಮಾನದ ಸೆಳಕು.. ಚಂಚಲತೆ... ಆತ ಅದೇನು ಕೆಲಸ ಮಾಡ್ತಿದ್ದಾನೆ?' ಎಂದಳು ವಿಜೇತಾ.
          `ಹೌದು.. ಆತನ ಬಗ್ಗೆ ನನಗೆ ಗೊತ್ತಿದದ್ದು ಶೆ.10ರಷ್ಟು ಮಾತ್ರ. ಇನ್ನೂ ಶೆ.90ರಷ್ಟು ನನಗೆ ಅರ್ಥವೇ ಆಗಿಲ್ಲ. ಮೂರು ವರ್ಷ ನನ್ನ ರೂಂ ಮೇಟ್ ಆಗಿದ್ದ ಅಷ್ಟೇ.. ಆದರೆ ಎಲ್ಲೂ ತನ್ನ ವಿಷಯವನ್ನು ನನಗೆ ಹೇಳಿಯೇ ಇಲ್ಲ. ನಾನೂ ಕೇಳಲಿಲ್ಲ ಬಿಡು.. ನಿಜಕ್ಕೂ ಆತ ಅದೇನು ಕೆಲಸ ಮಾಡ್ತಾನೆ.. ಹೇಗೆ ಜೀವನ ನಡೆಸ್ತಿದ್ದಾನೆ ಒಂದೂ ನನಗೆ ಗೊತ್ತಿಲ್ಲ.. ನನ್ನ ಹಾಗೂ ಅವನ ಕಷ್ಟದ ದಿನಗಳಲ್ಲಿ ಇಬ್ಬರೂ ಒಟ್ಟಿದ್ದೆವು ಎನ್ನುವುದಷ್ಟೇ ಸತ್ಯ ನೋಡು..' ಎಂದ ವಿಕ್ರಂ.
          `ಹೋಗ್ಲಿ ಬಿಡು...' ಎಂದಳು ವಿಜೇತಾ.. ಅಷ್ಟರಲ್ಲಿ ಪತ್ರಿಕಾಲಯ ಬಂದಿತ್ತು. ಇಬ್ಬರೂ ಹೋಗಿ ವರದಿಯನ್ನು ತಯಾರಿಸಿದರು.
         ಸ್ವಲ್ಪ ಹೊತ್ತಿನಲ್ಲಿಯೇ ನವೀನಚಂದ್ರನಿಂದ ಚಿಕ್ರಮನಿಗೆ ಕರೆ ಬಂದಿತು. `ಯಾಕೆ ಕರೆದಿರಬಹುದು..?' ಎಂಬ ಆಲೋಚನೆಯಲ್ಲಿಯೇ ವಿಕ್ರಂ ನವೀನಚಂದ್ರರ ಕೋಣೆಯೊಳಕ್ಕೆ ಹೋದ. ಅಲ್ಲಿ ನವೀನಚಂದ್ರ ವಿಕ್ರಮನನ್ನು ಕುಳಿತುಕೊಳ್ಳಲು ಹೇಳಿದ. ಕೊಲೆಯ ವಿಷಯದ ಕುರಿತು ಮಾತನಾಡತೊಡಗಿದರು. `ನೋಡಿ ವಿಕ್ರಂ. ಈ ಕೊಲೆಯ ಬಗ್ಗೆ ನನಗ್ಯಾಕೋ ಅಪಾರ ಕುತೂಹಲ. ಈ ಮೊದಲು ನಾನು ಕ್ರೈಂ ರಿಪೋರ್ಟರ್ ಆಗಿದ್ದಕ್ಕೋ ಅಥವಾ ಬೇರಿನ್ಯಾವುದಕ್ಕೋ ಗೊತ್ತಿಲ್ಲ. ಕೊಲೆಗಳ ಬೆನ್ನತ್ತಿ ಹೋಗುವುದು ಅಂದರೆ ನನಗೆ ವಿಶೇಷ ಆಸಕ್ತಿ. ಯಾರು ಕೊಲೆ ಮಾಡಿರಬಹುದು, ಯಾಕೆ ಮಾಡಿರಬಹುದು? ಇತ್ಯಾದಿಗಳನ್ನೆಲ್ಲ ನಾನು ಅನೇಕ ಸಾರಿ ಹುಡುಕಿಕೊಂಡು ಹೋಗಿದ್ದಿದೆ. ಕೊಲೆ ಆರೋಪಿಗಳನ್ನು ಪೊಲೀಸರು ಹುಡುಕುವ ವಿಧಾನ, ಇತ್ಯಾದಿಗಳನ್ನೆಲ್ಲ ನಾನು ಅನೇಕ ಸಾರಿ ಮಾಡಿದ್ದೇನೆ. ಪೊಲೀಸರು ಎಡವುವುದು, ಒತ್ತಡಕ್ಕೆ ಮಣಿದು ಕೊಲೆಗಾರನನ್ನು ತಪ್ಪಿಸುವುದು ಇತ್ಯಾದಿಗಳೂ ನಡೆದಿದ್ದಿದೆ. ಅನೇಕ ಸಾರಿ ನಾನು ಇಂತಹ ತನಿಖಾ ವರದಿ ನಡೆಸಿದ ಕಾರಣ ನಿಜವಾದ ಆರೋಪಿ ಸಿಕ್ಕಿಬಿದ್ದಿದ್ದೂ ಇದೆ. ಆತ ತಪ್ಪಿಸಿಕೊಳ್ಳುವುದಕ್ಕೆ ಆಸ್ಪದವೇ ಇಲ್ಲದಂತೆ ಆಗಿದ್ದೂ ಇದೆ. ಬಹುಶಃ ಈ ಕಾರಣಕ್ಕೇ ನಮ್ಮ ಪತ್ರಿಕೆ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಇಂತಹ ಅನೇಕ ತನಿಖಾ ವರದಿಗಳನ್ನು ಮಾಡಿ ಸತ್ಯವನ್ನು ಬೇಧಿಸಿದೆ. ಈಗಲೂ ನಾವ್ಯಾಕೆ ಇವತ್ತು ನಡೆದಿರುವ ಕೊಲೆ ಕೇಸನ್ನು ಬೆನ್ನತ್ತಬಾರದು?' ಎಂದರು.
         ವಿಕ್ರಮನಿಗೆ ಸ್ಪಷ್ಟವಾದಗೇ ಸುಮ್ಮನೇ ಕುಳಿತಿದ್ದ.. `ನಾವು ಒಂದು ಕೆಲಸ ಮಾಡೋಣ. ಇವತ್ತು ನಡೆದ ಕೊಲೆಯ ಕೇಸಿನ ಬೆನ್ನತ್ತೋಣ. ನಾವು ಅಂದರೆ ನೀನು ಈ ಕೊಲೆಯ ಬಗ್ಗೆ ತನಿಖೆ ಮಾಡಬೇಕು. ಆದರೆ ನಾವು ಪೊಲೀಸರ ಕಾನೂನನ್ನು ಕೈಗೊಳ್ಳುವುದಿಲ್ಲ. ಬದಲಾಗಿ ಅಪರಾಧಿಗಳ ಜಾಡನ್ನು ಹುಡುಕುತ್ತ ಹೋಗೋಣ. ಪೊಲೀಸರು ಎಲ್ಲಾದರೂ ದಾರಿ ತಪ್ಪಿದರೆ ಅವರಿಗೆ ಇದರಿಂದ ಅನುಕೂಲವಾಗುತ್ತದೆ. ಸುದ್ದಿ ಮಾಡಿದ ನಮಗೂ ಹೆಸರು ಬರುತ್ತದೆ. ಸಾಕಷ್ಟು ರಿಸ್ಕ್ ಕೂಡ ಇದೆ. ಆಗುತ್ತೆ ಅಂತಾದರೆ ಹೇಳು.. ನಮ್ಮಿಂದ ನಿನಗೆ ಸಂಪೂರ್ಣ ಬೆಂಬಲ ಇರುತ್ತದೆ.  ಅದೆಷ್ಟೇ ಒತ್ತಡ ಬಂದರೂ ನಾವು ನೋಡಿಕೊಳ್ಳುತ್ತೇನೆ.. ಏನಂತೀಯಾ?' ಎಂದು ನವೀನಚಂದ್ರ.
             `ಸರ್.. ನಾನೂ ಅದನ್ನೇ ಆಲೋಚನೆ ಮಾಡ್ತಾ ಇದ್ದೆ. ಇದೂ ನನಗೆ ಹೊಸ ಅನುಭವ. ಆದರೆ ನಾನು ಇದನ್ನು ಮಾಡಲು ತಯಾರಾಗಿದ್ದೇನೆ. ಪೊಲೀಸರು ಆರೋಪಿಯನ್ನು ಪತ್ತೆ ಮಾಡುವ ಮುನ್ನ ನಾವು ಮಾಡಿದರೆ ಮಜವಾಗಿರುತ್ತದೆ. ಮೈಮನಗಳಲ್ಲಿ ನನಗೆ ಈಗ ರೋಮಾಂಚನ ಆಗ್ತಾ ಇದೆ.. ಖಂಡಿತ ನಾನು ಇದನ್ನು ಮಾಡೇ ಮಾಡ್ತೀನಿ ಸರ್..' ಎಂದ ವಿಕ್ರಂ.
            `ಗುಡ್... ನಿನಗೆ ಈ ಕುರಿತು ನಮ್ಮಿಂದ ಸಂಪೂರ್ಣ ಬೆಂಬಲ ಇದ್ದೇ ಇದೆ. ನೀನು ಎಲ್ಲಿಯೇ ಓಡಾಡು, ಎಷ್ಟು ದಿನ ಬೇಕಾದರೂ ತೆಗೆದುಕೊ.. ದುಡ್ಡು ಖರ್ಚಾಗಲಿ.. ಅದಕ್ಕೆ ಚಿಂತೆ ಬೇಡ.. ನಿನಗೆ ಕಾರ್ ಡ್ರೈವಿಂಗ್ ಬರುತ್ತೆ ಅಂತಾದರೆ ನನ್ನ ಕಾರನ್ನು ಒಯ್ಯಬಹುದು. ಆದರೆ ಹುಷಾರಾಗಿರಬೇಕು. ಈ ವಿಷಯ ಯಾರಿಗೂ ಗೊತ್ತಗಬಾರದು. ನಿನ್ನ ಎಚ್ಚರಿಕೆಯಲ್ಲಿ ನೀನಿರಬೇಕು..' ಎಂದರು ನವೀನಚಂದ್ರ.
           `ಖಂಡಿತ ಸರ್.. ಏನಾದರೂ ಅಗತ್ಯಬಿದ್ದರೆ ಹೇಳ್ತೀನಿ ಸರ್.. ' ಎಂದು ಹೇಳಿ ಹೊರಬಂದವನಿಗೆ ಆ ದಿನವಿಡೀ ಮೌಂಟ್ ಎವರೆಸ್ಟ್ ಏರಿದ ಪರ್ವತಾರೋಹಿಗಳಿಗೆ ಆದಂತಹ ಖುಷಿ ಮನೆಮಾಡಿತ್ತು. ಆತ ರಾತ್ರಿ ತನ್ನ ರೂಮಿಗೆ ಬಂದು ಆ ದಿನದ ಘಟನೆಗಳೆಲ್ಲವನ್ನೂ ಮೆಲುಕು ಹಾಕತೊಡಗಿದ. ಕೊಲೆ, ವಿಜೇತಾಳ ಸಂ ಗಡ ಹೋಗಿ ಅದನ್ನು ವರದಿ ಮಾಡಿದ್ದು. ಪ್ರದೀಪನ ಅನಿರೀಕ್ಷಿತ ಭೇಟಿ, ಅಪರಿಚಿತನ ಬೆನ್ನಟ್ಟಿದ್ದು, ನವೀನಚಂದ್ರ ಹೇಳಿದ ಮಾತುಗಳೆಲ್ಲವೂ ಪದೇ ಪದೆ ನೆನಪಾದವು. ಜೊತೆಗೆ ಎಸ್. ಮಾರ್ಕಿನ ಲಾಕೆಟ್ ಕೂಟ ನೆನಪಾಯಿತು. ಯಾಕೋ ಈ ದಿನ ನಡೆದ ಎಲ್ಲ ಘಟನೆಗಳೂ ತನ್ನ ಬದುಕಿನಲ್ಲಿ ಮುಖ್ಯವಾಗಲಿದೆ. ಪದೆ ಪದೇ ಮನಸ್ಸಿಗೆ ನಾಟಲಿದೆ ಎನ್ನಿಸತೊಡಗಿತ್ತು ವಿಕ್ರಮನಿಗೆ. ಆ ದಿನ ಮಾರ್ಚ್ 28.

***********6************

           ಹೊಸ ಲ್ಯಾಪ್ ಟಾಪ್ ಹಾಗೂ ಮೊಬೈಲನ್ನು ನವೀನಚಂದ್ರ ನಂತರದ ದಿನಗಳಲ್ಲಿ ವಿಕ್ರಮನಿಗೆ ಕೊಡುಗೆಯಾಗಿ ನೀಡಿದ್ದ. ವಿಕ್ರಮ ಅವಾಕ್ಕಾಗಿದ್ದ. ಕೊನೆಗೊಂದು ದಿನ ಈ ಕುರಿತು ವಿಜೇತಾಳಲ್ಲಿ ವಿಚಾರಿಸಿದಾಗ ನವೀನಚಂದ್ರ ಆಗರ್ಭ ಶ್ರೀಮಂತರೆಂದೂ ಪತ್ರಿಕೆ ನಡೆಸುವುದು ಅವರ ಹವ್ಯಾಸವೆಂದೂ ದೊಡ್ಡ ದೊಡ್ಡ ಬಿಸಿನೆಸ್ಸುಗಳ ಒಡೆಯನೆಂದೂ ಹೇಳಿದಳು. ಬಿಡುವಿದ್ದಾಗ ಬಿಸಿನೆಸ್ ಕೆಲಸ ಮಾಡಿ ಟೈಮಿದ್ದಾಗ ಪತ್ರಿಕಾ ಕಚೇರಿಗೆ ಬರುವುದು ಅವರ ಪ್ರಮುಖ ಕಾರ್ಯ. ತಾನು ಕಷ್ಟದಲ್ಲಿದ್ದಾಗ ಪತ್ರಿಕೆ ತನಗೆ ಅನ್ನ ನೀಡಿದೆ. ಆ ಕಾರಣಕ್ಕಾಗಿ ಪತ್ರಿಕೆಯ ಋಣ ತಿರಿಸಬೇಕು ಎನ್ನುವುದು ಅವರ ಮನಸ್ಥಿತಿ. ಹೀಗಾಗಿ ಅವರು ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ತನಗೆ ಯಾರೇ ಇಷ್ಟವಾದರೂ, ಅವರ ಕಾರ್ಯವೈಖರಿ ಮೆಚ್ಚುಗೆಯಾದರೂ ಅವರಿಗೆ ಕೊಡುಗೆ ಕೊಡುತ್ತಾರೆ. ನಿನ್ನ ಕಾರ್ಯವೈಖರಿ ನವೀನಚಂದ್ರರಿಗೆ ಇಷ್ಟವಾಗಿದೆ. ಆ ಕಾರಣಕ್ಕಾಗಿಯೇ ಲ್ಯಾಪ್ಟಾಪ್ ಹಾಗೂ ಮೊಬೈಲ್ ಕೊಡುಗೆ ಕೊಟ್ಟಿದ್ದಾರೆ. ನಿನ್ನ ಕೆಲಸಕ್ಕೆ ಅನುಕೂಲವಾಗಲಿ ಅಂತ..' ಎಂದಳು ವಿಜೇತಾ.
        ಅದಾಗಿ ಮತ್ತೆರಡು ದಿನಗಳು ಕಳೆಯುವಷ್ಟರಲ್ಲಿ ಪತ್ರಿಕಾ ಕಚೇರಿಗೆ ಹೊಸ ಹೊಸ ವರದಿಗಾರರನ್ನು, ಉಪ ಸಂಪಾದಕರನ್ನೂ ನೇಮಕ ಮಾಡಲಾಗಿತ್ತು. ಪತ್ರಿಕೆಯನ್ನು ಮಂಗಳೂರಿನಿಂದಾಚೆ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿತ್ತು. ವಿಕ್ರಮನಿಗೂ ಜವಾಬ್ದಾರಿ ಹೆಚ್ಚಿತ್ತು. ಜೊತೆ ಜೊತೆಯಲ್ಲಿ ಕೊಲೆಯ ಜಾಡನ್ನು ಹಿಡಿಯತೊಡಗಿದ್ದ. ಪತ್ರಿಕಾಲಯದಲ್ಲಿ ಸಾಕಷ್ಟು ಹೊಸಬರನ್ನು ಸೇರಿಸಿದ್ದ ಕಾರಣ ವಿಕ್ರಮ ಹಾಗೂ ವಿಜೇತಾಳ ಮೇಲಿದ್ದ ಒತ್ತಡ ಕಡಿಮೆಯಾಗಿತ್ತು. ಅಲ್ಲದೇ ಅವರು ಉತ್ತಮ ವರದಿಗಳನ್ನು ಮಾಡಲು ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿತ್ತು.

****

        ಸುಮಾರು ಒಂದು ವಾರ ಕಳೆದರೂ ಕೊಲೆಯ ಬಗ್ಗೆ ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಲಿಲ್ಲ. ಯಾವ ದಿಕ್ಕಿನಲ್ಲಿ ಸಾಗಿದರೂ ಕೊಲೆಯ ವಿವರ ತಿಳಿಯಲಿಲ್ಲ. ಕೊಲೆಗೆ ಬಳಕೆ ಮಾಡಿದ ಆಯುಧದ ಬಗ್ಗೆಯೂ ತಿಳಿಯಲಿಲ್ಲ. ಇದರಿಂದ ಜನಸಾಮಾನ್ಯರು ಬೇಸರಗೊಂಡಿದ್ದರು. ಖಾಸಗಿ ಪತ್ತೆದಾರರೂ, ಗುಪ್ತಚರರು ತಾವೂ ಒಂದು ಕೈ ನೋಡುವ ಎಂದು ಕೆಲಸ ಶುರುಮಾಡಿದ್ದರು. ವಿಕ್ರಮನಿಗೆ ಸಿಕ್ಕಿದ್ದ ಎಸ್ ಲಾಕೆಟ್ ಆರೋಪಿಯ ಲಾಕೆಟ್ ಎಂದೂ ಆತನ ಹಿಂದೆ ದೊಡ್ಡ ಗುಂಪಿನ ಕರಾಮತ್ತಿದೆಯೆಂದೂ ಅನ್ನಿಸತೊಡಗಿತ್ತು. ಆ ಗುಂಪು ದರೋಡೆ, ಕಳ್ಳ ಸಾಗಾಣಿಕೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದೆ ಎನ್ನುವುದೂ ತಿಳಿದುಬಂದಿತು. ಅದನ್ನು ನವೀನಚಂದ್ರನಿಗೆ ತಿಳಿಸಿಯೂ ಆಗಿತ್ತು.
             ಆ ದಿನ ಬಹುಶಃ ಎಪ್ರಿಲ್ 4. ವಿಕ್ರಂ ಕೊಲೆ ನಡೆದ ಸ್ಥಳಕ್ಕೆ ಹೋಗಿದ್ದವನು ಪ್ರದೀಪನನ್ನು ಮಾತನಾಡಿಸಿ ಹೋಗೋಣ ಎಂದು ಆತನ ರೂಮಿನ ಕಡೆಗೆ ಹೆಜ್ಜೆ ಹಾಕಿದ. ಪ್ರದೀಪ ಇದ್ದಾನೋ ಇಲ್ಲವೋ ಎಂಬ ಗೊಂದಲದಲ್ಲಿಯೇ ರೂಮಿನ ಬಾಗಿಲು ತಟ್ಟಿದ. ಅಚ್ಚರಿಯೆಂಬಂತೆ ರೂಮಿನಲ್ಲಿದ್ದ ಪ್ರದೀಪ ಬಾಗಿಲು ತೆಗೆದ. ವಿಕ್ರಮನನ್ನು ಕಂಡ ಪ್ರದೀಪ ಒಮ್ಮೆ ಗಲಿಬಿಲಿಪಟ್ಟುಕೊಂಡ. ಯಾವುದೋ ಒಂದು ವಸ್ತುವನ್ನು ಲಗುಬಗೆಯಿಂದ ಮುಚ್ಚಿಟ್ಟ. ವಿಕ್ರಮನ ಕಣ್ಣು ಇದನ್ನು ಗಮನಿಸಿಬಿಟ್ಟಿತ್ತು. ನಂತರ ಪ್ರದೀಪ ಟೀ ಮಾಡಲು ಹೋದಾಗ ವಿಕ್ರಂ ಆ ವಸ್ತುವನ್ನು ಎತ್ತಿಟ್ಟುಕೊಂಡ. ಅದೊಂದು ಮ್ಯಾಪ್. ಅದನ್ನು ವಿಕ್ರಂ ಎತ್ತಿಟ್ಟುಕೊಂಡಿದ್ದು ಪ್ರದೀಪನಿಗೆ ಆ ದಿನ ತಿಳಿಯಲೇ ಇಲ್ಲ. ಅದೂ ಇದೂ ಮಾತನಾಡಿದ ವಿಕ್ರಂ ಸೀದಾ ತನ್ನ ರೂಮಿಗೆ ಮರಳಿದ.
            ರೂಮಿಗೆ ಬಂದು ನಿಧಾನವಾಗಿ ಕುಳಿತು ಆ ಮ್ಯಾಪನ್ನು ಬಿಚ್ಚಿ ನೋಡಿದ. ಅದು ಸಾಮಾನ್ಯವಾಗಿ ಮಿಲಿಟರಿಯವರು ಬಳಸುವಂತಹ ಮ್ಯಾಪ್. ಅದರಲ್ಲಿ ದೇಶದ ಪ್ರತಿಯೊಂದು ಪ್ರದೇಶದ ಸಮಗ್ರ ಚಿತ್ರಣ, ಆರ್ಥಿಕ ವ್ಯವಸ್ಥೆ, ಅರಣ್ಯ, ಖನಿಜ ಸಂಪತ್ತು ಇತ್ಯಾದಿ ಎಲ್ಲ ವಿವರಗಳೂ ಇರುತ್ತವೆ. ಇದೂ ಹಾಗೆಯೇ ಇತ್ತು. ವಿಕ್ರಂ ಮುಖ್ಯವಾಗಿ ಗಮನಿಸಿದ ಅಂಶವೆಂದರೆ ಮ್ಯಾಪಿನ ಕೆಲವೊಂದು ಕಡೆಗಳಲ್ಲಿ ಎಸ್ ಮಾರ್ಕುಗಳಿದ್ದವು. ಆ ಚಿನ್ಹೆ ಕರ್ನಾಟಕದ ಕೆಲವು ಕಡೆಗಳಲ್ಲಿ ಮಾತ್ರ ಇತ್ತು. ಆತ ಎಲ್ಲ ಊರುಗಳನ್ನೂ ಬರೆದಿಟ್ಟುಕೊಂಡ. ಮಂಗಳೂರು, ಬೆಂಗಳೂರು, ಬೀದರ್, ತುಮಕೂರು, ವಿಜಯಪುರದ ಜೊತೆಗೆ ಶಿರಸಿಯ ಬಳಿ ಎಸ್. ಮಾರ್ಕನ್ನು ಪೆನ್ನಿನ ಮೂಲಕ ಬರೆಯಲಾಗಿತ್ತು. ವಿಕ್ರಮನಿಗೆ ಸಿಕ್ಕಾಪಟ್ಟೆ ತಲೆ ಹನ್ನೆರಡಾಣೆ ಆಗತೊಡಗಿತು. ಶಿರಸಿಗೂ ಎಸ್. ಮಾರ್ಕಿಗೂ ಎಂತಾ ಸಂಬಂಧ.? ಶಿರಸಿಯನ್ನು ಎಸ್. ಎಂದು ಸಂಬೋಧನೆ ಮಾಡಿದ್ದಾರಾ? ಹಾಗಾದರೆ ಮಂಗಳೂರನ್ನು ಎಂ. ಎಂದೂ ಬೀದರನ್ನು ಬಿ. ಎಂದೂ ತುಮಕೂರನ್ನು ಟಿ. ಎಂದೂ ಯಾಕೆ ಮಾರ್ಕ್ ಮಾಡಿಲ್ಲ? ಏನಿದು ಎಸ್? ಈ ಎಸ್.ಗೂ ತನ್ನ ಬಳಿ ಇರುವ ಎಸ್. ಲಾಕೆಟಿಗೂ ಏನಾದರೂ ಸಂಬಂಧ ಇದೆಯಾ? ಈ ಎಸ್. ಮ್ಯಾಪಿನಿಂದ ಏನಾದರೂ ತನಗೆ ಲಾಭವಾಗಬಹುದಾ ಎಂದರೆಲ್ಲ ಆಲೋಚನೆ ಮಾಡತೊಡಗಿದ ವಿಕ್ರಂ. ಆಲೋಚಿಸಿದಂತೆಲ್ಲ ಗೊಂದಲವೇ ಹೆಚ್ಚಾಯಿತು. ಪರಿಹಾರ ಮಾತ್ರ ಸಿಗಲಿಲ್ಲ.
           ವಿಕ್ರಮ ಹೀಗೆ ಆಲೋಚನೆ ಮಾಡಿದಂತೆಲ್ಲ ಪ್ರದೀಪನ ಬಗ್ಗೆ ಅನುಮಾನಗಳು ಹೆಚ್ಚತೊಡಗಿದವು. ಇಂತಹ ಮ್ಯಾಪ್ ಪ್ರದೀಪನಿಂದ ಸಿಗುತ್ತದೆ ಎಂದು ಆಲೋಚಿಸಿದರ ವಿಕ್ರಂ ಪ್ರದೀಪನೂ ಒಬ್ಬ ಆರೋಪಿಯಾ ಅಥವಾ ತನ್ನಂತೆ ತನಿಖೆಗೆ ಕೈ ಹಾಕಿದವನಾ? ಎಂದು ಆಲೋಚಿಸಿದನಾದರೂ ಈ ಎರಡನ್ನೂ ನಂಬಲು ಮನಸ್ಸು ನಿರಾಕರಿಸಿತು. ಆತನ ಮನಸ್ಸಿನಲ್ಲಿ ಎಸ್. ಮಾರ್ಕಿನ ಲಾಕೆಟ್ ಆರೋಪಿಯದೇ, ಅಥವಾ ಯಾವುದಾದರೂ ಒಂದು ಕಂಪನಿಯದ್ದೇ ಎಂದೂ ಆಲೋಚನೆ ಮೂಡಿತು. ಹೀಗಿದ್ದಾಗಲೇ ಅಲ್ಲಿಗೆ ಪ್ರದೀಪ ಹಾಜರಾಗಿದ್ದ.
           ರೂಮಿನೊಳಕ್ಕೆ ಬಂದವನೇ ವಿಕ್ರಮನ ಬಳಿ `ಹೇಯ್.. ನೀನು ಮೊದಲು ಆ ಮ್ಯಾಪನ್ನು ನನಗೆ ಕೊಡು.. ಅದು ನನಗೆ ಬಹಳ ಅಗತ್ಯ..' ಎಂದು ಹೇಳಿದವನೇ ತಕ್ಷಣ ಏನೋ ಹೊಳೆದಂತೆ `ನೀನು ಆರೋಪಿನ ಹುಡುಕ್ತಾ ಇದ್ದೀಯಾ ಅಲ್ವಾ.. ಹೇಗೋ ಈ ವಿಷಯ ಗೊತ್ತಾಯಿತು. ನಿನಗೆ ಅನುಕೂಲವಾಗಲಿ ಅಂತಲೇ ಈ ಮ್ಯಾಪನ್ನು ನಾನು ಸಂಪಾದನೆ ಮಾಡಿ ತಂದಿದ್ದು..' ಎಂದು ಹೇಳಿದ.
          ವಿಕ್ರಮನಿಗೆ ಇದರಲ್ಲೇನೋ ನಿಘೂಡತೆಯಿದೆ ಎನ್ನಿಸಿತು. ಮ್ಯಾಪಿನಲ್ಲಿದ್ದದ್ದನ್ನೆಲ್ಲ ತಾನು ಬರೆದಿಟ್ಟುಕೊಂಡಿದ್ದೇನೆ. ಮನಸ್ಸಿನಲ್ಲಿ ಅದು ಅಚ್ಚಾಗಿದೆ. ತನಗೆ ಇನ್ನು ಅದರ ಅಗತ್ಯವಿಲ್ಲ ಎಂದುಕೊಂಡ ವಿಕ್ರಂ ಮ್ಯಾಪನ್ನು ಪ್ರದೀಪನಿಗೆ ವಾಪಾಸ್ ನೀಡಿದ. ಮ್ಯಾಪ್ ಸಿಕ್ಕ ತಕ್ಷಣವೇ ಪ್ರದೀಪ ಅಲ್ಲಿಂದ ಜಾಗ ಖಾಲಿ ಮಾಡಿದ.
         ಈ ಘಟನೆಯಿಂದ ಪ್ರದೀಪನ ಬಗ್ಗೆ ವಿಕ್ರಮನಲ್ಲಿದ್ದ ಅನುಮಾನಗಳು ಜಾಸ್ತಿಯಾದವು. ಪ್ರದೀಪ ಯಾರು? ಕಳ್ಳನಾ? ಪೊಲೀಸನಾ? ಮಿತ್ರನಾ? ಕೊಲೆಗಾರನಾ? ಇಷ್ಟಕ್ಕೂ ಈ ಮ್ಯಾಪನ್ನು ಇಟ್ಟುಕೊಂಡು ಪ್ರದೀಪ ಮಾಡುವುದೇನಿದೆ? ಈ ಕೊಲೆಗೂ ಪ್ರದೀಪನಿಗೂ ಏನಾದರೂ ಸಂಬಂಧ ಇದೆಯಾ? ಕೊಲೆಯಲ್ಲಿ ಪ್ರದೀಪನ ಪಾತ್ರ ಏನಿದೆ? ಎಂದೆಲ್ಲ ಆಲೋಚಿಸಿದ ವಿಕ್ರಮ. ಆಲೋಚನೆ ಮಾಡಿದಂತೆಲ್ಲ ಪ್ರದೀಪ ಮತ್ತಷ್ಟು ನಿಘೂಡ ವ್ಯಕ್ತಿಯಾಗುತ್ತ ಹೋದ.

***
(ಮುಂದುವರಿಯುತ್ತದೆ..)
         

Monday, December 29, 2014

ಚಿನಕುರುಳಿ ಹನಿಗಳು

ನೆಪ

ಹುಲಿಯ ನೆಪದಲ್ಲಿ
ಶೆಟ್ಟರ್ ಚಾರ್ಜು
ಅದಕ್ಕೆ ಕಾರಣ
ರಾಣಾ ಜಾರ್ಜು !

ದುಂಡಿರಾಜ್

ಪದ ಪದಗಳನ್ನು
ಒಟ್ಟಿಗೆ ಇಟ್ಟರು
ಚುಟುಕ ಬರೆದರು
ದುಂಡೀರಾಜರು |
ಇಷ್ಟವಾದರು ||

ಕಾರಣ

ಹುಲಿ ನೆಪದಲ್ಲಿ
ಆರಂಭವಾಯಿತು
ಹಣಾ-ಹಣಿ
ಆರಂಭಿಸಿದವರು
ಮಾತ್ರ
ರಾಜಕಾರಣಿ ||

ನೆನಪು

ಐಸಿಸ್, ತಾಲಿಬಾನ್
ಮುಂತಾದ ಉಗ್ರ
ಸಂಘಟನೆಗಳು
ನೂರಾರು...|
ಈ ನಡುವೆಯೂ ನೆನಪಾದರು
ಇಷ್ಟವಾದರು
ಅಬ್ದುಲ್ ಕಲಾಮರು |


Sunday, December 28, 2014

ಅಘನಾಶಿನಿ ಕಣಿವೆಯಲ್ಲಿ-5

        ಇದಾಗಿ ಒಂದೆರಡು ದಿನ ಕಳೆದಿರಬಹುದು. ಆ ದಿನ ಬೆಳ್ಳಂಬೆಳಿಗ್ಗೆ ಪ್ರದೀಪ ಏಕಾಏಕಿ ವಿಕ್ರಮನ ರೂಮಿಗೆ ಬಂದ. ಅವನನ್ನು ಕಂಡ ವಿಕ್ರಂ `ಏನಪ್ಪಾ ಎಲ್ಲೊ ಹೋಗಿದ್ದೆ. ಬಹಳ ದಿನ ಆಯ್ತಲ್ಲ ನಿನ್ನ ಸುಳಿವಿಲ್ಲದೇ. ಬೇಕಾದಾಗ ಸಿಗೋನಲ್ಲ ನೀನು. ನೀ ಭಲೇ ಆಸಾಮಿ. ಯಾವಾಗಾದ್ರೂ ಬರ್ತೀಯಾ.. ಯಾವಾಗಾದ್ರೂ ಸಿಕ್ತೀಯಾ.. ನಾಪತ್ತೆ ಆಗ್ತೀಯಾ.. ಏನಪ್ಪಾ ಏನ್ ಕಥೆ ನಿಂದು..?' ಎಂದು ಕೇಳಿದ.
        `ಏನಿಲ್ಲ ಮಾರಾಯಾ. ಎಂತದ್ದೋ ಇಂಪಾರ್ಟೆಂಟ್ ಕೆಲಸ ಇತ್ತು.  ಅದರಲ್ಲಿ ತಲ್ಲೀನ ಆಗಿದ್ದೆ. ಅದಕ್ಕಾಗಿ ಬಂದಿರಲಿಲ್ಲ ನೋಡು. ಅದಿರ್ಲಿ ಏನೋ ಪೇಪರ್ ನವರು ಸಂದರ್ಶನಕ್ಕೆ ಬಂದಿದ್ದರಂತೆ. ಭಾರಿ ಭಾರಿ ರಿಪೋರ್ಟೂ ಆಗಿದ್ಯಂತೆ. ಏನಪ್ಪಾ ವಿಶೇಷ?' ಎಂದು ಕೇಳಿದ ಪ್ರದೀಪ.
        `ಅದನ್ನೇ ಹೇಳಿದ್ನಪ್ಪ. ಅವರಿಗೆ ನಿನ್ನ ಪರಿಚಯ ಮಾಡ್ಕೊಡೋಣ ಅಂದುಕೊಂಡಿದ್ದರೆ ನೀನು ನಾಪತ್ತೆ...' ಎಂದ ವಿಕ್ರಂ.
         `ಅದಿರ್ಲಿ.. ಒಂದು ಮುಖ್ಯ ವಿಷ್ಯ ಹೇಳ್ಬೇಕಿತ್ತು. ಅದೇನಂದ್ರೆ ನಾವು ಬೆಂಗಳೂರಿಗೆ ಹೋಗಿದ್ವಲ್ಲಾ ಆಗೆಲ್ಲಾ ನಾನು ಬಹಳ ಜನರನ್ನು ನೋಡಿದೆ. ಒಬ್ಬತ್ತಾ ನಮ್ಮನ್ನ ಅದರಲ್ಲೂ ಮುಖ್ಯವಾಗಿ ನಿನ್ನನ್ನ ಫಾಲೋ ಮಾಡ್ತಾ ಇದ್ದ..' ಎಂದ ಪ್ರದೀಪ.
        `ಹಹ್ಹ... ತಮಾಷೆ ಮಾಡ್ತಿದ್ದೀಯಾ.. ಬೇರೆ ಕೆಲಸ ಇಲ್ಲವಾ ನಿನಗೆ.? ಹೊತ್ತಲ್ಲದ ಹೊತ್ತಲ್ಲಿ ಜೋಕ್ ಮಾಡಬೇಡ.. ನನ್ನನ್ನ ಫಾಲೋ ಮಾಡೋಕೆ ನಾನೇನು ರಜನೀಕಾಂತನಾ? ಅಥವಾ ಮತ್ತಿನ್ಯಾರಾದ್ರೂ ಸೆಲೆಬ್ರಿಟಿನಾ? ಹೋಗ್ ಹೋಗೋ.. ನಿನ್ ಮಾತಿಗೂ ಒಂದು ಮಿತಿ ಇರಲಿ ಮಾರಾಯಾ..' ಎಂದ ವಿಕ್ರಂ.
        `ಇಲ್ಲ ಮಾರಾಯಾ.. ರಿಯಲಿ. ನಾನು ನಿಜಾನೇ ಹೇಳ್ತಾ ಇದ್ದೀನಿ. ನಾನು ಅಬಸರ್ವ್ ಮಾಡ್ತಾ ಇದ್ದೆ ಮಾರಾಯಾ.. ನೀನು ನಂಬೋದಾದ್ರೆ ನಂಬು.. ಬಿಟ್ಟರೆ ಬಿಡು. ಆದರೆ ಹುಷಾರಾಗಿರು ಅಷ್ಟೇ.. ನೀನು ನಂಬಲಿಲ್ಲ ಅಂದರೆ ನನ್ನ ಗಂಟೆಂತದ್ದೂ ಖರ್ಚಾಗೋದಿಲ್ಲ ಮಾರಾಯಾ..' ಎಂದು ಹೇಳಿದವನೇ `ಸರಿ ನಾನಿನ್ನು ಬರ್ತೀನಿ..' ಎಂದವನೇ ಹೊರಟೇ ಹೋದ.
         ವಿಕ್ರಮನಿಗೆ ಒಮ್ಮೆ ದಿಗ್ಬ್ರಮೆ ಆಯಿತು. ಇದೇನಪ್ಪಾ ಇದು ಹೀಗೆ ಎಂದುಕೊಂಡ. ನನ್ನನ್ನು ಫಾಲೋ ಮಾಡೋರೂ ಇದ್ದಾರಾ? ಯಾರು ಅವರು? ಯಾಕೆ ನನ್ನನ್ನು ಫಾಲೋ ಮಾಡ್ತಾ ಇದ್ದಾರೆ? ಪ್ರದೀಪನೇ ಸುಳ್ಳು ಹೇಳಿದನೇ? ಅಥವಾ ಆತ ಹೇಳಿದ್ದರಲ್ಲಿ ನಿಜವಿರಬಹುದೇ? ಇದರಲ್ಲೇನೋ ನಿಘೂಡತೆಯಿದೆ. ಈ ಪ್ರದೀಪನನ್ನೇ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಆತನ ಮಾತನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಏನಾದ್ರೂ ಆಗ್ಲಿ. ಸಮಸ್ಯೆ ಹತ್ತಿರಕ್ಕೆ ಬಂದಾಗ ನೋಡಿಕೊಳ್ಳೋಣ ಎಂದು ಆ ವಿಷಯವನ್ನು ಅಲ್ಲಿಗೆ ಮರೆತುಬಿಟ್ಟ ವಿಕ್ರಂ. ಇದಾಗಿ ಬಹಳ ದಿನಗಳವರೆಗೆ ಅಂದರೆ ಹೆಚ್ಚೂ ಕಡಿಮೆ ತಿಂಗಳುಗಳ ಕಾಲ ಪ್ರದೀಪನ ಪತ್ತೆಯೇ ಇರಲಿಲ್ಲ. ಹಾಗೆಯೇ ಆ ಅಪರಿಚಿತ ವ್ಯಕ್ತಿಯೂ ಕೂಡ.

***5***

           ನಂತರ ವಿಕ್ರಮನಿಗೆ ಅದೇನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ವಿಕ್ರಮನಿಗೆ ತನ್ನ ಅದ್ವೈತ ಆತ್ಮರಕ್ಷಣೆ ಕೇಂದ್ರದ ಮೇಲೆಯೇ ಆಸಕ್ತಿ ಕಳೆದುಹೋಯಿತು. ಆಗೀಗ ತನ್ನ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದನಾದರೂ ಏನೋ ಒಂದು ಅನ್ಯಮನಸ್ಕ ಭಾವನೆ ಅವನಲ್ಲಿ ಬೆಳೆದು ಬಿಟ್ಟಿತ್ತು. ತಾನು ಹೋಗದಿದ್ದರೂ ಅವನು ತರಬೇತಿ ನೀಡಿದ ಹುಡುಗರು ಕೇಂದ್ರದಲ್ಲಿ ಚನ್ನಾಗಿ ಕಲಿಸುತ್ತಿದ್ದರು. ತಾನಿಲ್ಲದಿದ್ದರೂ ತರಬೇತಿ ಕೇಂದ್ರ ಬೆಳೆಯುತ್ತದೆ ಎನ್ನುವುದು ಆತನ ಅನುಭವಕ್ಕೆ ಬಂದಿತ್ತು.
            ಇದೇ ಸಂದರ್ಭದಲ್ಲಿ ವಿಕ್ರಮನ ಅದ್ವೈತ ಆತ್ಮರಕ್ಷಣೆ ಕೇಂದ್ರದ ಬಳಿಯಲ್ಲೇ ತಲೆಯೆತ್ತಿದ್ದ ಇನ್ನೊಂದು ವ್ಯಾಯಾಮ ಶಾಲೆ ಪ್ರಭಲವಾಗಿಬಿಟ್ಟಿತ್ತು. ಆ ತರಬೇತಿ ಕೇಂದ್ರದ ತರಹೇವಾರಿ ಗಿಮ್ಮಿಕ್ಕಿನ ಎದುರು ವಿಕ್ರಮನ ತರಬೇತಿ ಕೇಂದ್ರ ಸೋಲಲು ಆರಂಭಿಸಿತ್ತು. ಅದೇ ಸಂದರ್ಭದಲ್ಲಿ ಅಲ್ಲಿನ ಕೆಲವು ಕುತಂತ್ರಿಗಳ ಕುತಂತ್ರವನ್ನೂ ಮಾಡಿದರು. ಸುತ್ತಮುತ್ತಲೂ ವಿಕ್ರಮನ ತರಬೇತಿ ಕೇಂದ್ರದ ಹೆಸರನ್ನೂ ಹಲವರು ಹಾಳುಮಾಡಿಬಿಟ್ಟರು. ವಿಕ್ರಮನಲ್ಲಿ ಕಲಿಯುತ್ತಿದ್ದ ಅನೇಕರು ಎದುರಾಳಿ ತರಬೇತಿ ಕೇಂದ್ರವನ್ನು ಸೇರುವಲ್ಲಿಗೆ ವಿಕ್ರಮ ಸೋತು ಸುಣ್ಣವಾಗಿದ್ದ. ಇದ್ದಕ್ಕಿದ್ದಂತೆ ತನಗೇ ಈ ರೀತಿಯ ಮಂಕು ಕವಿಯಿತು ಎನ್ನುವುದು ವಿಕ್ರಮನಿಗೆ ತಿಳಿಯಲೇ ಇಲ್ಲ. ಕೊನೆಗೆ ಒಂದು ದಿನ ವಿಕ್ರಮ ತಾನು ಪ್ರೀತಿಯಿಂದ ಕಟ್ಟಿ ಬೆಳೆಸಿದ್ದ ಅದ್ವೈತ ಆತ್ಮರಕ್ಷಣೆ ಕೇಂದ್ರವನ್ನು ಅನಿವಾರ್ಯವಾಗಿ ಬಾಗಿಲು ಹಾಕಿದ.
       ಅದ್ವೈತ ಆತ್ಮರಕ್ಷಣೆಯನ್ನು ಬಾಗಿಲು ಹಾಕುವ ಸಂದರ್ಭದಲ್ಲಿ ವಿಕ್ರಮ ಸಾಲಕ್ಕೂ ತುತ್ತಾಗಬೇಕಾಯಿತು. ಎಲ್ಲರೂ ಬಿಟ್ಟುಹೋಗುತ್ತಿದ್ದ ಸಂದರ್ಭದಲ್ಲಿ ಕೈ ಹಿಡಿದವರು ಯಾರೂ ಇರಲಿಲ್ಲ. ಸಹಾಯ ಮಾಡಬಹುದಾಗಿದ್ದ ಪ್ರದೀಪ ಕಾಣೆಯಾಗಿದ್ದ. ಆತ್ಮರಕ್ಷಣೆ ಕೇಂದ್ರದ ಬಿಲ್ಡಿಂಗಿನ ಬಾಡಿಗೆ ತುಂಬಲೂ ಹಣವಿಲ್ಲದಂತಾದ ಪರಿಸ್ಥಿತಿ ಆತನದ್ದಾಗಿತ್ತು. ಕೊನೆಗೆ ಬಾಗಿಲು ಹಾಕಿ ಅಲ್ಲಿದ್ದ ಕೆಲವೊಂದು ಜಿಮ್ ವಸ್ತುಗಳನ್ನು ಮಾರಾಟ ಮಾಡಿದಾಗ ಸಾಲದ ಮೊತ್ತ ಕೊಂಚ ಇಳಿಕೆಯಾಗಿತ್ತಾದರೂ ಪೂರ್ತಿ ಚುಕ್ತಾ ಆಗಿರಲಿಲ್ಲ.
        ವ್ಯಾಯಾಮ ಕೇಂದ್ರದ ಬಾಗಿಲು ಹಾಕಿದ ಮರುಕ್ಷಣದಿಂದ ವಿಕ್ರಂ ನಿರುದ್ಯೋಗಿಯಾಗಿದ್ದ. ತಾನು ಓದಿದ್ದ ಡಿಗ್ರಿ ಸರ್ಟಿಫಿಕೇಟನ್ನು ಹಿಡಿದು ಹಲವು ಕಡೆಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ. ಆದರೆ ವಿಕ್ರಮನ ದುರಾದೃಷ್ಟವೋ ಏನೋ ಎಲ್ಲೂ ಉದ್ಯೋಗ ಸಿಗಲಿಲ್ಲ. ಆತ ಪ್ರಯತ್ನಿಸುವುದು ಬಿಡಲಿಲ್ಲ. ಉದ್ಯೋಗವೂ ಹದಪಟ್ಟಿಗೆ ಸಿಗಲಿಲ್ಲ.
        ಹೀಗಿದ್ದಾಗಲೇ ಅವನ ಊರಾದ ಕಣ್ಣೀರು ಮನೆಯಿಂದ ತಂಗಿ ರಮ್ಯ ಬರೆದಿದ್ದ ಪತ್ರ ಬಂದು ತಲುಪಿತು. ತಂದೆ ಮನೆಯಲ್ಲಿ ಬಹಳ ಸಿಟ್ಟಾಗಿದ್ದಾರೆಂದೂ, ಬೆಂಗಳೂರಿಗೆ ಹೋಗುವುದು ಇಷ್ಟವಿರಲಿಲ್ಲವೆಂದೂ ತಿಳಿಯಿತು. ಆದರೆ ಮನೆಯ ಉಳಿದೆಲ್ಲ ಸದಸ್ಯರೂ ಇದರಿಂದ ಸಿಟ್ಟಾಗಿದ್ದಾರೆಂದೂ, ಬೆಂಗಳೂರು ಪ್ರವಾಸ ಶುಯಭವಾಗಲಿ ಎಂದು ತಿಳಿಸಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಎಲ್ಲರೂ ಹಾಗಿರುವಾಗ ಅಪ್ಪನೇಕೆ ಹೀಗೆ ಎಂದುಕೊಂಡ ವಿಕ್ರಂ. ಮತ್ತೆ ಪುನಃ ಕೆಲಸ ಹುಡುಕುವ ಕಾರ್ಯ ಆರಂಭವಾಯಿತು. ಕೊನೆಗೊಮ್ಮೆ `ಮಂಗಳೂರು ಮೇಲ್' ಪತ್ರಿಕೆಯಲ್ಲಿ ಕೆಲಸ ಖಾಲಿಯಿದೆ ಎನ್ನುವುದು ತಿಳಿದುಬಂದಿತು. ಕೊನೆಯ ಪ್ರಯತ್ನ ಮಾಡೋಣ ಎಂದುಕೊಂಡು ಪತ್ರಿಕಾ ಕಚೇರಿಯ ಕಡೆಗೆ ಹೊರಟ.
       ಇನ್ನೇನು ಪತ್ರಿಕಾಲಯದ ಕಾಂಪೋಂಡ್ ಒಳಕ್ಕೆ ಕಾಲಿಡುವಷ್ಟರಲ್ಲಿ ಒಂದು ಸ್ಕೂಟಿ ಹೊರಗಿನಿಂದ ಬಂದಿತು. ಒಂದು ಕ್ಷಣ ಒಳಹೋಗುವವನು ನಿಂತ. ಆ ಸ್ಕೂಟಿಯ ಮೇಲೆ ಬಂದಿದ್ದಾಕೆಯೇ ಬಂದಿದ್ದಾಕೆಯೇ ವಿಜೇತಾ. ಆಕೆ ತಮ್ಮ ಪತ್ರಿಕಾಲಯದ ಎದುರು ವಿಕ್ರಮನನ್ನು ಕಂಡು ಒಂದರೆಘಳಿಗೆ ಅವಾಕ್ಕಾದಳು. ಅಚ್ಚರಿಯಿಂದ ನೋಡಿ, ಸ್ಕೂಟಿ ನಿಲ್ಲಿಸಿದರು.
       `ಏನಿಲ್ಲಿ? ಪತ್ರಿಕಾಲಯದ ಮೇಲೆ ಕರಾಟೆ, ಕುಂಗ್ ಫೂ ತೋರ್ಸೋಕೆ ಬಂದ್ರಾ?' ಎಂದು ತಮಾಷೆಯಿಂದ ಕೇಳಿದಳು.
       `ಇಲ್ಲ.. ಕೆಲಸ ಕೇಳೋಕೆ ಬಂದಿದ್ದೇನೆ..' ಎಂದು ಸೀರಿಯಸ್ಸಾಗಿಯೇ ಹೇಳಿದ.
       `ವಾಟ್... ನಿಮ್ ಕುಂಗ್-ಫೂ.. ಕರಾಟೆ ಶಾಲೆಯ ಕತೆ ಏನಾಯ್ತು?' ಎಂದು ಅಚ್ಚರಿಯಿಂದ ಕೇಳಿದಳು ವಿಜೇತಾ. ಆಕೆಗೆ ತುಸು ಹೆಚ್ಚೆನ್ನಿಸುವಂತೆ ತನ್ನ ಈಗಿನ ಸ್ಥಿತಿಗೆ ಕಾರಣ ತಿಳಿಸಿದ. ಆಗ ಆಕೆ ತಮ್ಮ ಪತ್ರಿಕೆಯಲ್ಲಿ ಕೆಲಸ ಖಾಲಿ ಇರುವುದನ್ನು ಹೇಳಿ, ಆ ಕೆಲಸಕ್ಕೆ ಸೇರಬಹುದು ತಾನು ಈ ಕುರಿತು ಮಾತನಾಡುತ್ತೇನೆ ಎಂದೂ ಹೇಳಿದಳು. ಆಫೀಸಿನೊಳಕ್ಕೆ ಕರೆದೊಯ್ದಳು.
       ಕಚೇರಿ ಒಳಗೆ ಹಲವಾರು ಜನರಿದ್ದರು. ಹಲವು ಕಂಪ್ಯೂಟರ್ ಗಳು. ಕಂಪ್ಯೂಟರ್ ಮುಂದೆ ಕುಳಿತು ಚಕ ಚಕನೆ ಕೆಲಸ ಮಾಡುತ್ತಿದ್ದ ಜನರು, ಏನೋ ಗಡಿಬಿಡಿ, ಧಾವಂತದಲ್ಲಿದ್ದಂತೆ ಕಾಣುವ ಜನರು. ಎರಡು ಮಹಡಿಯ ಕಟ್ಟಡದಲ್ಲಿ ಕೆಳ ಮಹಡಿಯಲ್ಲಿ ಪ್ರಿಂಟಿಂಗ್ ಮೆಷಿನುಗಳು ಗರ್ರೆನ್ನುತ್ತಿದ್ದರೆ ಮೇಲ್ಮಹಡಿಯಲ್ಲಿ ಕಚೇರಿ ಕೆಲಸ ನಡೆಯುತ್ತಿತ್ತು. ಆಕೆ ಸೀದಾ ವಿಕ್ರಮನನ್ನು ಸಂಪಾದಕರ ಕೊಠಡಿಯೊಳಕ್ಕೆ ಕರೆದೊಯ್ದಳು. ಸಂಪಾದಕರು ಯಾರೋ? ಹೇಗೋ? ಏನೋ ಎಂದುಕೊಳ್ಳುತ್ತಲೇ ಒಳಗೆ ಹೋದವನಿಗೆ ಒಮ್ಮೆಲೆ ಆಶ್ವರ್ಯ. ಯಾಕಂದ್ರೆ ಒಳಗೆ ಸಂಪಾದಕ ಸ್ಥಾನದಲ್ಲಿದ್ದವರು ನವೀನಚಂದ್ರ. ಇದನ್ನು ನೋಡಿ ವಿಕ್ರಂ `ಇದೇನ್ ಸಾರ್. ನೀವು ಈ ಸೀಟಲ್ಲಿ..' ಎಂದು ಅಚ್ಚರಿಯಿಂದಲೇ ಕೇಳಿದ.
       ನಸುನಗುತ್ತ ಮಾತನಾಡಿದ ನವೀನ್ ಚಂದ್ರ `ಓಹ್ ವಿಕ್ರಂ. ಬನ್ನಿ.. ಬನ್ನಿ.. ಮೊದಲಿದ್ದ ಸಂಪಾದಕರು ರಿಟೈರ್ ಆದರು ನೋಡಿ. ಇದೀಗ ನಾನೇ ಈ ಪತ್ರಿಕೆಗೆ ಸಂಪಾದಕ..' ಎಂದರು. `ಅದ್ಸರಿ.. ಇದೇನು ತಾವಿಲ್ಲಿಗೆ ಬಂದಿದ್ದು..?' ಎಂದೂ ಕೇಳಿದರು.
       `ಸರ್ ಕೆಲಸ ಖಾಲಿಯಿದೆ ಅಂತ ತಿಳಿಯಿತು. ಅದಕ್ಕೆ ಕೆಲಸ ಕೇಳೋಣ ಅಂತ ಬಂದಿದ್ದೇನೆ..' ನೇರವಾಗಿ ಹೇಳಿದ ವಿಕ್ರಂ ತನ್ನೆಲ್ಲ ವಿಷಯಗಳನ್ನೂ ತಿಳಿಸಿದ. ಒಮ್ಮೆ ದೀರ್ಘನಿಟ್ಟುಸಿರು ಬಿಟ್ಟ ನವೀನಚಂದ್ರ ಅವರು ತಲೆ ಕೊಡವಿದರು. `ಸರ್ ನಾನು ಜರ್ನಲಿಸಂ ಓದಿಲ್ಲ. ಆದರೆ ರಿಪೋಟರ್ಿಂಗು, ಪೋಟೋಗ್ರಫಿಯಲ್ಲಿ ಆಸಕ್ತಿಯಿದೆ. ತಾವು ಈ ಕೆಲಸ ಕೊಟ್ಟರೆ ಅನುಕೂಲವಾಗುತ್ತದೆ. ನನಗೆ ಈಗ ಕೆಲಸದ ಅನಿವಾರ್ಯತೆ ಬಹಳ ಅಗತ್ಯ..' ಎಂದು ಪಟಪಟನೆ ಹೇಳಿದ ವಿಕ್ರಂ.
       ನೋಡಿ ವಿಕ್ರಂ. ನಮ್ಮಲ್ಲಿ ಇರೋದು ವರದಿಗಾರರ ಕೆಲಸ. ಈ ಕೆಲಸ ಮಾಡೋಕೆ ಜರ್ನಲಿಸಂ ಆಗಿರಬೇಕು ಅನ್ನುವ ಕಡ್ಡಾಯವೇನಿಲ್ಲ. ಧೈರ್ಯ, ಬರವಣಿಗೆ, ಆಸಕ್ತಿ ಇಷ್ಟಿದ್ದರೆ ಸಾಕು. ನಿಮಗೆ ಈ ಕೆಲಸ ಕೊಡುತ್ತಿದ್ದೇನೆ. ಒಂದೆರಡು ದಿನ ನಮ್ಮ ವರದಿಗಾರರ ಜೊತೆಗೆ ಓಡಾಡಿ. ಕೆಲಸ ಅರಿವಾಗುತ್ತದೆ. ಬೇಕಾದರೆ ವಿಜೇತಾಳ ಸಹಾಯವನ್ನು ಪಡೆದುಕೊಳ್ಳಿ. ನಿಮ್ಮ ಕೆಲಸದಲ್ಲಿ ಸಹನೆ, ಶೃದ್ಧೆ ಇರಲಿ. ನಿಮ್ಮಲ್ಲಿ ಅಗಾಧ ಧೈರ್ಯ ಇದೆ. ಯಾವುದಕ್ಕೂ ಭಯ ಪಡೋದಿಲ್ಲ ಎನ್ನುವ ನಂಬಿಕೆಯಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಮಗೆ ಬಹುದೊಡ್ಡ ಜವಾಬ್ದಾರಿಗಳನ್ನು ವಹಿಸಬಹುದು. ಏಕಾಗ್ರತೆ, ನಂಬಿಕೆ, ಕೆಲಸದೆಡೆಗೆ ಪ್ರೀತಿ ಇಟ್ಟುಕೊಳ್ಳಿ..' ಎಂದು ನವೀನಚಂದ್ರ ಹೇಳುತ್ತಿದ್ದಂತೆ `ಓಕೆ ಸರ್.. ಆಗ್ಲಿ.. ನನಗೆ ಒಪ್ಗೆ ಇದೆ. ನಿಮ್ಮ ನಂಬಿಕೆ ಹಾಳು ಮಾಡೋದಿಲ್ಲ ನಾನು..' ಎಂದು ವಿಕ್ರಂ ಹೇಳಿದ.
`ನಿನ್ನ ಕೆಲಸದ ವಿವರ, ನೀತಿ-ನಿಯಮ ಇತ್ಯಾದಿಗಳ ಬಗ್ಗೆ ವಿಜೇತಾ ಹೇಳುತ್ತಾಳೆ. ಅವಳ ಹತ್ರ ತಿಳ್ಕೋ. ಆದ್ರೆ ನೆನಪಿಟ್ಕೋ ಅವಳ ಹತ್ತಿರ ಕೆಲಸ ಮಾಡೋದು ಬಹಳ ಡೇಂಜರ್ರು. ಅವಳೂ ಕೂಡ ಹುಂಭ ಧೈರ್ಯದ ಹುಡುಗಿ. ಎಂತೆಂತದ್ದೋ ಸುದ್ದಿಗಳನ್ನು ಹೆಕ್ಕಿ ತರುತ್ತಾಳೆ. ಸಾಕಷ್ಟು ಜನರು ಅವಳ ಮೇಲೆ ಅಟ್ಯಾಕ್ ಮಾಡುತ್ತಿರುತ್ತಾರೆ. ನೀನು ಜೊತೆಗಿದ್ರೆ ಅವಳಿಗೆ ಶಕ್ತಿ ಬರುತ್ತದೆ. ಧೈರ್ಯ ಇದ್ದರೆ ಮಾತ್ರ ಈ ಫೀಲ್ಡು ಗೆಲ್ಲಿಸುತ್ತದೆ..' ಎಂದು ಅರ್ಧ ಉಪದೇಶ ಮತ್ತರ್ಧ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದರು ನವೀನಚಂದ್ರ.
      ಏನನ್ನೋ ಹೇಳಲು ಬಾಯಿತೆರೆದ ವಿಕ್ರಂ `ಥ್ಯಾಂಕ್ಯೂ ಸರ್.. ನಿಮ್ಮ ಈ ಉಪಕಾರ ಎಂದಿಗೂ ಮರೆಯೋದಿಲ್ಲ..' ಎನ್ನುತ್ತಾ ವಿಜೇತಾಳ ಹಿಂದೆ ಹೊರಟ. ಆಗ ಆತನ ಮನಸ್ಸಿನಲ್ಲಿ `ನನ್ನ ಕಥೆಯನ್ನು ಹೇಳುವ ಮೊದಲೆ ನವೀನಚಂದ್ರ ಅವರು ತಮಗೆಲ್ಲಾ ಗೊತ್ತಿದೆ ಎನ್ನುವಂತೆ ವತರ್ಿಸಿದರಲ್ಲ. ನಾನು ಹೇಳುವ ಮೊದಲೇ ಅವರೇ ನನ್ನ ಕುಂಗ್ ಫೂ ಕರಾಟೆ ಶಾಲೆಯ ವ್ಯಥೆಯನ್ನೆಲ್ಲ ಅವರೇ ಮೊದಲು ಹೇಳುತ್ತಿದ್ದರಲ್ಲ.. ಇದು ಹೇಗೆ?' ಎನ್ನುವ ಅನುಮಾನ ಕಾಡಿತು. ಪತ್ರಿಕೆಯವರಲ್ವಾ.. ಗಮನಿಸಿರಬೇಕು ಎಂದುಕೊಂಡು ಸುಮ್ಮನಾದ.
       ಆಕೆ ಸೀದಾ ಕಚೇರಿಯ ಒಳಕ್ಕೆ ಹೋಗಿ ಉಪಸಂಪಾದಕರ ಕೊಠಡಿಯನ್ನು ಹೊಕ್ಕಳು. ಉಪಸಂಪಾದಕರು ಹೇಗಿತರ್ಾರೋ, ಯಾರೋ? ಅವರು ಇನ್ನೇನು ಕೇಳುತ್ತಾರೋ ಎನ್ನುವ ಆಲೋಚನೆಯಲ್ಲಿಯೇ ವಿಕ್ರಂ ಒಳಹೋದ. ನೋಡಿದರೆ ವಿಜೇತಾ ಉಪಸಂಪಾದಕರ ಸೀಟಿನಲ್ಲಿ ಕುಳಿತಿದ್ದಳು. ವಿಸ್ಮಯದಿಂದ ನೋಡುತ್ತಿದ್ದಾಗಲೇ `ನೋಡು ಹೇಳಲಿಕ್ಕೆ ಮರೆತಿದ್ದೆ. ನಾನು ಪತ್ರಿಕೆಯ ಉಪಸಂಪಾದಕು. ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ಹತ್ತಾರು ಜನ ಉಪಸಂಪಾದಕರಿರ್ತಾರೆ. ಆದರೆ ನಮ್ಮದು ಬೆಳೆಯುತ್ತಿರುವ ಪತ್ರಿಕೆ. ಇದಕ್ಕೆ ನಾನು ಉಪಸಂಪಾದಕಿ. ನವೀನಚಂದ್ರ ಸರ್ ಸಂಪಾದಕರಾದ ಮೇಲೆ ನಾನು ಉಪಸಂಪಾದಕಿಯಾದೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಹುದ್ದೆ ಖಾಲಿಯಿದೆ. ಅದಕ್ಕೆ ನಿನ್ನನ್ನು ಸೇರಿಸಿಕೊಳ್ತಾ ಇರೋದು..' ಎಂದಳು.
         `ನಿಮ್ಮನ್ನು ನಮ್ಮ ಕ್ರೈಂ ರಿಪೋರ್ಟರ್ ಆಗಿ ಸೇರಿಸಿಕೊಳ್ತಾ ಇದ್ದೀವಿ. ಅಪರಾಧ ವರದಿ ಮಾಡೋದು ನಿಮ್ಮ ಮುಖ್ಯ ಕೆಲಸ. ಸಾಕಷ್ಟು ರಿಸ್ಕಿನ ಕೆಲಸ. ಆದರೆ ನಿಮ್ಮ ಮೊದಲಿನ ಕೆಲಸ ಇಲ್ಲಿ ಸಹಾಯಕ್ಕೆ ಬರಬಹುದು. ಚಾಲೇಂಜಿಂಗ್ ಆಗಿರುತ್ತದೆ. ಆದರೆ ಅದೇ ಮಜಾ ಕೊಡುತ್ತದೆ. ಮೊದಲು 15 ದಿನ ಜೊತೆಗೆ ನಾನು ಇದ್ದು ಕೆಲಸ ಹೇಳಿಕೊಡುತ್ತೇನೆ. ನಂತರ ನಿಮಗೆ ಎಲ್ಲ ರೂಢಿಯಾಗುತ್ತದೆ. ನಿಮಗೆ ಪ್ರಾರಂಭದಲ್ಲಿ 12 ಸಾವಿರ ರು. ಸಂಬಳ ನಿಗದಿ ಮಾಡಿದ್ದಾರೆ. ಮುಂದೆ ನಿಮ್ಮ ಕೆಲಸದ ವೈಖರಿ ನೋಡಿ ಸಂಬಳ ಏರಿಕೆಯಾಗುತ್ತ ಹೋಗುತ್ತದೆ. ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುತ್ತಿದ್ದೀರಾ. ಶುಭವಾಗಲಿ. ಯಶಸ್ಸು ನಿಮಗೆ ಸಿಗಲಿ.  ನೀವು ಯಶಸ್ವಿಯಾಗುತ್ತೀರಾ. ಇದು ನನ್ನ ಹಾಗೂ ನವೀನಚಂದ್ರ ಅವರ ನಂಬಿಕೆ. ಹೇಳಿ ಯಾವಾಗಿಂದ ಕೆಲಸಕ್ಕೆ ಬರುತ್ತೀರಾ?' ಎಂದು ಕೇಳಿದಳು ವಿಜೇತಾ.
         `ಈಗಲೇ ಬರಲು ನಾನು ತಯಾರು..' ಎಂದವನ ಮುಖವನ್ನು ಒಮ್ಮೆ ನೋಡಿ ಮೆಚ್ಚುಗೆ ಸೂಚಿಸಿದಳು ವಿಜೇತಾ. `ಈಗ ಬೇಡ.. ನಾಳಿಂದ ಬನ್ನಿ.. ' ಎಂದವಳೇ `ಬನ್ನಿ ನಮ್ಮ ಆಫೀಸಿನ ಎಲ್ಲರನ್ನೂ ಪರಿಚಯ ಮಾಡಿಕೊಡ್ತೀನಿ..' ಎಂದು ಕರೆದುಕೊಂಡು ಹೋಗಿ ಎಲ್ಲರನ್ನೂ ಪರಿಚಯಿಸಿದಳು.
         ಕೆಲಸ ಸಿಕ್ಕ ಖುಷಿಯಲ್ಲಿ ಅಲ್ಲಿ ಇಲ್ಲಿ ಸುತ್ತಾಡಿ ಮರಳಿ ಮನೆಗೆ ಬರುವಾಗ ಸಂಜೆಯಾಗುತ್ತಿತ್ತು. ಮನೆಗೆ ಪೋನ್ ಮಾಡಿದರೆ ಎಂದಿನಂತೆ ಡೆಡ್ಡಾಗಿತ್ತು. ಪತ್ರ ಗೀಚಿ ಸುಮ್ಮನಾದ. `ಅಂತೂ ಕೆಲಸ ಸಿಕ್ತಲ್ಲ..' ಎಂದು ನಿಟ್ಟುಸಿರು ಬಿಟ್ಟ.
         ಮರುದಿನದಿಂದಲೇ ಕೆಲಸಕ್ಕೆ ಹೋಗಲಾರಂಭಿಸಿದ. ಮೊದ ಮೊದಲು ಸ್ವಲ್ಪ ಕಷ್ಟವಾಯಿತಾದರೂ ವಾರ ಕಳೆಯುವಷ್ಟರಲ್ಲಿ ಪತ್ರಿಕೋದ್ಯಮ ಅರ್ಥವಾಗತೊಡಗಿತ್ತು. ನಂತರ ಯಾವುದೇ ಸಮಸ್ಯೆಯಾಗಲಿಲ್ಲ. ಮೊದ ಮೊದಲು ವಿಜೇತಾ ವಿಕ್ರಂನಿಗೆ ಮಾರ್ಗದರ್ಶನ ನೀಡಿದಳು. ನಂತರ ವಿಕ್ರಂ ಸ್ವತಂತ್ರವಾಗಿ ಕೆಲಸ ಮಾಡತೊಡಗಿದ.

****

       ಕೆಲಸ ಕೊಡಿಸಿದ ಕಾರಣಕ್ಕೋ ಅಥವಾ ಕೆಲಸ ಬಗ್ಗೆ ಮಾರ್ಗದರ್ಶನ ನೀಡಿದ್ದಕ್ಕೋ ವಿಜೇತಾಳ ಬಗ್ಗೆ ವಿಕ್ರಮನಿಗೆ ಮನಸ್ಸಿನಲ್ಲಿ ಗೌರವ ಮನೆಮಾಡಿತ್ತು. ಆಕೆಯ ಜೊತೆಗಿನ ಓಡಾಡ ಸ್ನೇಹಭಾವವನ್ನೂ ತುಂಬಿತ್ತು. ಉತ್ತಮ ಸ್ನೇಹಿತರಾಗಿ ಕೆಲದಿನಗಳಲ್ಲಿಯೇ ಅವರು ಬದಲಾಗಿದ್ದರು. ಕೆಲವೊಮ್ಮೆ ಆಕೆ ತಾನು ಹೋಗುತ್ತಿದ್ದ ಕೆಲಸಕ್ಕೂ ಕರೆದೊಯ್ಯುತ್ತಿದ್ದಳು. ತೀರಾ ರಿಸ್ಕೆನ್ನಿಸುತ್ತಿದ್ದ ಕೆಲಸದಲ್ಲಿ ವಿಕ್ರಂ ಜೊತೆಗಿರುತ್ತಿದ್ದ. ಆಪ್ತವಾದಾಗ ತನ್ನ ಮನೆಗೂ ಕರೆದೊಯ್ದಿದ್ದಳು ವಿಜೇತಾ. ಮನೆಯಲ್ಲಿ ಆಕೆಯ ತಂದೆ, ತಾಯಿ ಹಾಗೂ ತಮ್ಮ ಇದ್ದರು. ಚಿಕ್ಕ ಕುಟುಂಬದಲ್ಲಿ ತಂದೆ ಏನೋ ಕೆಲಸ ಮಾಡುತ್ತಿದ್ದ. ತಮ್ಮ ಇನ್ನೂ ಓದುತ್ತಿದ್ದ.
     
****

       ಹೀಗಿದ್ದಾಗಲೇ ಒಂದು ದಿನ ಮಂಗಳೂರಿನ ಬಂದರಿನಲ್ಲಿ ಒಬ್ಬನ ಕೊಲೆಯಾಗಿತ್ತು. ಇದರ ವರದಿಗಾರಿಕೆಯ ಕೆಲಸ ವಿಕ್ರಮನದ್ದಾಗಿತ್ತು. ಮಂಗಳೂರು ಮೇಲ್ ಪತ್ರಿಕೆ ಕೊಲೆ ಅಥವಾ ಇನ್ಯಾವುದೋ ನಿಘೂಡ ಸನ್ನಿವೇಶಗಳು ನಡೆದಿದ್ದ ಸಂದರ್ಭದಲ್ಲಿ ಅದನ್ನು ಪತ್ತೆ ಹಚ್ಚುವ ಕಾರ್ಯವನ್ನೂ ಮಾಡುತ್ತಿತ್ತು. ಈ ಕಾರಣಕ್ಕಾಗಿಯೇ ಮಂಗಳೂರು ಮೇಲ್ ಓದುಗರ ಮನಸ್ಸಿನಲ್ಲಿ ವಿಭಿನ್ನ ಸ್ಥಾನವನ್ನು ಪಡೆದುಕೊಂಡಿತ್ತು. ಈ ಕೊಲೆಯ ಕುರಿತು ವರದಿಯ ಜೊತೆಗೆ ಪತ್ತೆದಾರಿ ಕೆಲಸವನ್ನೂ ಮಾಡುವ ಆಲೋಚನೆ ವಿಕ್ರಮನದ್ದಾಗಿತ್ತು. ಆತ ಅದಾಗಲೇ ಕೊಂಡಿದ್ದ ತನ್ನ ಹೊಸ ಬೈಕನ್ನೇರಿ ಹೊರಡಲು ಅನುವಾಗುತ್ತಿದ್ದಂತೆಯೇ ವಿಜೇತಾ ತಾನೂ ಬರುತ್ತೇನೆಂದಳು. ನವೀನಚಂದ್ರನ ಒಪ್ಪಿಗೆ ಪಡೆದು ಹೊರಟಳು.
        ಇವರು ಹೋಗುವ ವೇಳೆಗಾಗಲೇ ಶವದ ಮಹಜರು ನಡೆದಿತ್ತು. ಪೊಲೀಸರು ಜನರನ್ನು ಚದುರಿಸುತ್ತಿದ್ದರು. ಇವರು ಹೋಗಿ ಎಲ್ಲ ರೀತಿಯ ವರದಿ ಪಡೆದು ಸತ್ತವನ ಪೋಟೋ ತೆಗೆದುಕೊಂಡರು. ಮಾಹಿತಿ ಎಲ್ಲ ಪಡೆದ ನಂತರ ತಿಳಿದಿದ್ದೇನೆಂದರೆ ಕೊಲೆಯಾಗಿದ್ದವನೊಬ್ಬ ಪೊಲೀಸ್ ಅಧಿಕಾರಿ. ಆದರೆ ಆ ಅಧಿಕಾರಿ ತನ್ನ ಡ್ಯೂಟಿಯ ವಸ್ತ್ರದಲ್ಲಿರಲಿಲ್ಲ. ಆತನನ್ನು ಬೆಳಗಿನ ಜಾವದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಆದರೆ ಕೊಲೆಗೆ ಬಳಕೆ ಮಾಡಿದ್ದ ಚಾಕು ಅಲ್ಲಿ ಇರಲಿಲ್ಲ. ಆರೋಪಿ ಚಾಣಾಕ್ಷತನದಿಂದ ಹತ್ಯೆ ಮಾಡಿದ್ದ. ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗದೇ ಇದ್ದಿದ್ದು ಸೊಷ್ಟವಾಗಿತ್ತು. ಪೊಟೋಗ್ರಾಫರ್ ಗಳು ಒಂದಿಷ್ಟು ಜನ ಶವದ ವಿವಿಧ ಭಂಗಿಯ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಎಲ್ಲವನ್ನು ಸಂಗ್ರಹಿಸಿ ವಾಪಾಸು ಬರುತ್ತಿದ್ದ ಸಂದರ್ಭದಲ್ಲಿ ವಿಕ್ರಮನ ಕಣ್ಣಿಗೊಂದು ಲಾಕೆಟ್ ನೆಲದ ಮೇಲೆ ಬಿದ್ದಿರುವುದು ಕಾಣಿಸಿತು. ಜನಜಂಗುಳಿಯ ನಡುವೆ ಯಾರ ಗಮನಕ್ಕೂ ಬಂದಿರಲಿಲ್ಲ. ವಿಕ್ರಮ ಬಗ್ಗಿ ಅದನ್ನು ಎತ್ತಿಕೊಂಡ. ಆ ಲಾಕೆಟ್ ತೀರಾ ವಿಶೇಷವಾಗಿರದಿದ್ದರೂ ಎಸ್. ಎಂದು ಬರೆದಿದ್ದ ಕೀ ಬಂಚ್ ಅದಾಗಿತ್ತು. ಇರ್ಲಿ.. ನೋಡೋಣ ಎಂದು ಅದನ್ನು ಕಿಸೆಯಲ್ಲಿ ಹಾಕಿಕೊಂಡ.
        ಬಹುಶಃ ಈ ಕೀಬಂಚ್ ಮುಂದೆ ಹಲವು ಚಿತ್ರ ವಿಚಿತ್ರ ತಿರುವುಗಳಿಗೆ, ತೊಂದರೆಗೆ ಒಡ್ಡುತ್ತದೆ ಎನ್ನುವುದು ಗೊತ್ತಿದ್ದಿದ್ದರೆ ವಿಕ್ರಮ ಆ ಲಾಕೇಟನ್ನು ಎತ್ತಿಟ್ಟುಕೊಳ್ಳುತ್ತಲೇ ಇರಲಿಲ್ಲವೇನೋ. ಪಾ..ಪ.. ಆತನಿಗೆ ಅದು ಗೊತ್ತಾಗಲೇ ಇಲ್ಲ. ಅಷ್ಟಕ್ಕೂ ಅದೆಲ್ಲಾ ತಿಳಿಯಲು ಆತನೇನು ಜ್ಯೋತಿಷಿಯೇ..?

(ಮುಂದುವರಿಯುತ್ತದೆ)