Tuesday, February 25, 2025

ಬೆಂಕಿ

ಈಗಿನಂತೆಯೇ ಅದೂ ಕೂಡ ಬೆಟ್ಟಗಳಿಗೆ ಬೆಂಕಿ ಬೀಳುವ ಸಮಯ. ಅಲ್ಲೆಲ್ಲೋ ಬೆಟ್ಟಕ್ಕೆ ಬೆಂಕಿ ಬಿದ್ದು ಸುಟ್ಟು ಹೋಯ್ತಂತೆ, ಇಲ್ಲೆಲ್ಲೋ ಬೆಂಕಿ ಅವಘಡ ಆಯ್ತಂತೆ ಎಂಬ ಸುದ್ದಿಗಳು ಕಿವಿಗೆ ಬೀಳುತ್ತಿದ್ದ ಸಮಯವದು. ಆಗತಾನೆ ಹುಲ್ಲು ಒಣಗಿ ನಿಂತಿತ್ತು. ಬೆಟ್ಟ-ಗುಡ್ಡಗಳಲ್ಲೆಲ್ಲ ಒಣಗಿದ ಹುಲ್ಲುಗಳು ತಮ್ಮ ನೈಸರ್ಗಿಕ ಹಸಿರು ಬಣ್ಣವನ್ನು ಕಳೆದುಕೊಂಡು ಗಾಳಿಗೆ ತೂಗಾಡುತ್ತ-ತೊನೆದಾಡುತ್ತ ನಿಂತಿದ್ದವು. ಹೀಗಾಗಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದವು. ಇಂತಹ ಸುದ್ದಿಗಳನ್ನೆಲ್ಲ ಕೇಳುತ್ತಲೇ ನಾಗರಾಜ ತನ್ನ ಕಪ್ಪನೆಯ ಪಲ್ಸರ್‌ ಬೈಕ್ ತೆಗೆದುಕೊಂಡು ಶಿರಸಿಗೆ ಹೋಗಿದ್ದ. ಶಿರಸಿಯಲ್ಲಿ ಕೆಲಸ ಮುಗಿಸುವ ವೇಳೆಗಾಗಲೇ ಬಾನಂಚಿನಲ್ಲಿ ಸೂರ್ಯ ಇಳಿದು ಕತ್ತಲು ಆವರಿಸುತ್ತಿತ್ತು.

ರಾತ್ರಿಯ ಊಟಕ್ಕೆ ಸರಿಯಾಗಿ ಮನೆಯನ್ನು ತಲುಪಿಕೊಳ್ಳಬೇಕು ಎಂದುಕೊಳ್ಳುತ್ತಲೇ ಬೈಕ್‌ ಹತ್ತಿದ್ದ. ಗಿಡಮಾವಿನಕಟ್ಟೆಯನ್ನು ದಾಟಿ ಯಡಳ್ಳಿ ತಲುಪಬೇಕು ಎನ್ನುವಷ್ಟರ ವೇಳೆಗೆ ಆಗಲೇ ಎಲ್ಲಿಂದಲೋ ತೀವ್ರ ಸ್ವರೂಪದ ಗಾಳಿ ಬೀಸಿತ್ತು. ಗಾಳಿ ಬೀಸಿದಂತೆಲ್ಲ ದಟ್ಟ ಕಪ್ಪನೆಯ ಮೋಡ ಬಾನನ್ನು ತುಂಬಿಕೊಂಡಿತು. ʻಅರೆ ಮಳೆ ಬರಬಹುದಾ?ʼ ಎಂದುಕೊಂಡವನು ಮಳೆ ಬರುವ ಮೊದಲು ಮನೆ ತಲುಪಬೇಕು ಎಂದುಕೊಂಡು ಗಾಡಿಯ ಎಕ್ಸಲರೇಟರ್‌ ತಿರುಪಿದ. ಕಾನಗೋಡು ದಾಟಿ ಕಬ್ನಳ್ಳಿ ಕತ್ರಿ ಬರುತ್ತಿದ್ದಂತೆ ಜಿಟಿ ಜಿಟಿಯಾಗಿ ಶುರು ಹಚ್ಚಿಕೊಂಡ ಮಳೆ ಧೋ ಎನ್ನಲು ಶುರುವಾಯ್ತು. ಗಾಡಿ ಓಡಿಸುತ್ತಿದ್ದ ನಾಗರಾಜ ಗಾಡಿ ನಿಲ್ಲಿಸಿ ಬಸ್‌ ನಿಲ್ದಾಣದ ಒಳಕ್ಕೆ ಹೋಗಬೇಕು ಎಂದುಕೊಳ್ಳುತ್ತಿದ್ದಂತೆಯೇ ʻಓಹೋ ಇದು ಕಬ್ನಳ್ಳಿ ಕತ್ರಿ.. ಕಬ್ನಳ್ಳಿ ಕತ್ರಿಯಲ್ಲಿ ಬಸ್‌ ಸ್ಟಾಪ್‌ ಇಲ್ಲ..ʼ ಎನ್ನುವುದು ನೆನಪಾಯ್ತು.. ʻತಥ್..‌ʼ ಎಂದು ತಲೆಕೊಡವಿ, ಮಳೆಯಲ್ಲಿಯೇ ಗಾಡಿ ಓಡಿಸಿದ.
ಅಡ್ಕಳ್ಳಿ ಕತ್ರಿ ತಲುಪುವ ವೇಳೆಗೆ ಮಳೆ ತನ್ನ ಅಬ್ಬರವನ್ನು ನಿಲ್ಲಿಸಿ ಶಾಂತವಾಗುವ ಲಕ್ಷಣ ತೋರಿಸಿತ್ತು. ಕಲ್ಮಟ್ಟಿ ಹಳ್ಳ ಹತ್ತಿರಬಂದಂತೆಲ್ಲ ಮಳೆ ಸಂಪೂರ್ಣ ನಿಂತಿತ್ತು. ಮರಗಳಿಂದ ಬೀಳುವ ಹನಿಯ ಚಿಟ ಪಟ ಮಾತ್ರ ಇತ್ತು. ಅಡ್ಕಳ್ಳಿ ತಲುಪಿದಾಗಲಂತೂ ಮಳೆಯ ಸುಳಿವೇ ಇಲ್ಲ. ಮಳೆಯೇ ಬಂದಿಲ್ಲ ಎಂಬಂತೆ ನೆಲ ಒಣಗಿಕೊಂಡಿತ್ತು. ʻಹಾಳಾದ ಮಳೆ.. ನನಗೆ ತೊಂದ್ರೆ ಕೊಡುವ ಸಲುವಾಗಿಯೇ ಬಂತು..ʼ ಎಂದು ಬೈದುಕೊಂಡು ಬೈಕ್‌ ವೇಗ ಹೆಚ್ಚಿಸಿದ. ನೋಡನೋಡುತ್ತಿದ್ದಂತೆಯೇ ಮಾರಿಗದ್ದೆ ಬ್ರಿಜ್‌ ಕಾಣಿಸಿತು. ಅಘನಾಶಿನಿ ತೀರದ ಮಾರಿಗದ್ದೆ ಹೇಳಿ-ಕೇಳಿ ತಂಪಿನ ಜಾಗ. ಮಳೆಯಲ್ಲಿ ಒದ್ದೆಯಾಗಿದ್ದ ನಾಗರಾಜನಿಗೆ ಮಾರೀಗದ್ದೆ ಬ್ರಿಜ್‌ ಬಳಿ ಬಂದಂತೆಲ್ಲ ಚಳಿ ಶುರುವಾಯಿತು. ನಿಧಾನವಾಗಿ ಹಲ್ಲು ಕಟಕಟಿಸಲು ಶುರುವಾಯಿತು. ಮೊದಲು ಮನೆ ತಲುಪಿಕೊಂಡರೆ ಸಾಕು ಎಂದುಕೊಂಡ. ಹಿತ್ಲಕೈ ದಾಟಿ, ಗುಡ್ಡೇತೋಟ ಕ್ರಾಸ್‌ ದಾಟಿ ಇನ್ನೇನು ಗೋಳಿಕಟ್ಟಾ ಶಾಲೆಯ ಬಳಿ ಬರಬೇಕು, ರಸ್ತೆ ಪಕ್ಕದಲ್ಲಿ ಬೆಂಕಿ ಕಾಣಿಸಿತು. ಯಡಳ್ಳಿಯಲ್ಲಿ ಧೋ ಮಳೆ.. ಇಲ್ಲಿ ನೋಡಿದರೆ ಮಳೆಯ ಸುಳಿವೇ ಇಲ್ಲ. ಜೊತೆಗೆ ಬೆಟ್ಟಕ್ಕೆ ಬೆಂಕಿ ಬಿದ್ದಿದೆ ಎಂದುಕೊಳ್ಳುತ್ತಲೇ ಮುಂದಕ್ಕೆ ಸಾಗುತ್ತಿದ್ದವನಿಗೆ ಚಳಿ ಇನ್ನಷ್ಟು ಜಾಸ್ತಿಯಾದಂತೆನಿಸಿತು.
ಯಾವುದಕ್ಕೂ ಇಲ್ಲಿ ಬೈಕ್‌ ನಿಲ್ಲಿಸಿ ಸ್ವಲ್ಪ ಹೊತ್ತು ಬೆಂಕಿಗೆ ಮೈ ಒಡ್ಡಿ, ಒದ್ದೆ ಮೈಯನ್ನು ಒಣಗಿಸಿಕೊಂಡು ಹೋಗೋಣ ಎಂದು ಬೆಂಕಿಯ ಹತ್ತಿರಕ್ಕೆ ಹೋದ. ಅಂಗಿ, ಪ್ಯಾಂಟ್‌ ಎಲ್ಲ ಒದ್ದೆಯಾಗಿತ್ತು. ತೊಟ್ಟಿದ್ದ ಅಂಗಿಯನ್ನು ತೆಗೆದು ಸರಿಯಾಗಿ ಹಿಂಡಿದ್ದಲ್ಲದೇ ಕೊಡವಿ ಬೆಂಕಿಗೆ ಒಡ್ಡಿದ. ಒದ್ದೆ ಮೈಗೆ ಬೆಂಕಿಯ ಧಗೆ ತಾಗಿ ಹಿತವೆನ್ನಿಸಿತು. ಬೆಟ್ಟಕ್ಕೆ ಬೆಂಕಿ ಬಿದ್ದಿದ್ದು ತನ್ನ ಪಾಲಿಗೆ ಒಳ್ಳೆಯದೇ ಆಯಿತು ಎಂದು ಖುಷಿಯಾದ. ಹಾಗೆಯೇ ನೋಡುತ್ತಿದ್ದವನಿಗೆ ಅಲ್ಲಿಯೇ ಕಟ್ಟಿಗೆ ರಾಶಿ ಕಾಣಿಸಿತು.. ಪಾಪ ಯಾರೋ ಕಟ್ಟಿಗೆ ಸಂಗ್ರಹ ಮಾಡಿಟ್ಟಿದ್ದರು. ಸಂಪೂರ್ಣ ಕಟ್ಟಿಗೆಯ ರಾಶಿಗೆ ಬೆಂಕಿ ಬಿದ್ದೋಗಿದೆ, ಕಟ್ಟಿಗೆ-ಕುಂಟೆ ಎಲ್ಲ ಧಗಧಗನೆ ಉರಿಯುತ್ತಿದೆ ಎಂದುಕೊಂಡ. ಕೈಗೊಂದು ಬಡಿಗೆ ಸಿಕ್ಕಿತು, ಆ ಕಟ್ಟಿಗೆಯ ರಾಶಿಯ ಮೇಲೆ ರಪ್ಪನೆ ಬಡಿದ. ಕಿಡಿ ಹಾರಿತು. ಕಟ್ಟಿಗೆಯ ರಾಶಿಯನ್ನು ಬಡಿಗೆಯಿಂದ ಆಕಡೆಗೊಮ್ಮೆ-ಈ ಕಡೆಗೊಮ್ಮೆ ತಿರುವಿ ಹಾಕಿದೆ. ಬಿಂಕಿಯ ಜ್ವಾಲೆ ಇನ್ನಷ್ಟು ಹೆಚ್ಚಿದಂತಾಗಿ ನಾಗರಾಜನಿಗೆ ಮತ್ತಷ್ಟು ಹಿತವೆನ್ನಿಸಿತು.
ಮೈ, ಬಟ್ಟೆ ಎಲ್ಲ ಸರಿಯಾಗಿ ಒಣಗಿದೆ ಎಂಬ ತೃಪ್ತಿ ಸಿಕ್ಕಂತೆಯೇ ಮನೆಗೆ ಹೊರಟ ನಾಗರಾಜ. ಮನೆಯನ್ನು ತಲುಪುತ್ತಿದ್ದಂತೆಯೇ ನಾಗರಾಜನಿಗೆ ಅಪ್ಪಯ್ಯ ಎದುರಾದ. ʻಎಂತದ ತಮಾ, ಮಳೆಲ್ಲಿ ನೆನಕಂಡು ಬಂದಾಂಗೆ ಕಾಣಿಸ್ತಲ..ʼ ಎಂದ. ʻಹೌದಾ.. ಸಾಯ್ಲಿ.. ಶಿರಸಿಂದ ಹೊರಡಕಿದ್ರೆ ಎಲ್ಲ ಸರಿ ಇತ್ತಾ.. ಯಡಳ್ಳಿ ಹತ್ರ ಬರಕಿದ್ರೆ ಮಳೆ ಬಂತು.. ಅಡ್ಕಳ್ಳಿ ಕತ್ರಿ ತನಕ ಮಳೆಲಿ ನೆನಕಂಡು ಬಂದೆ..ʼ ಎಂದ.
ʻಓಹೋ ಹೌದನಾ...ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ʻಗೋಳಿಕಟ್ಟಾ ಶಾಲೆ ಹತ್ರ ಬ್ಯಾಣಕ್ಕೆ ಬೆಂಕಿ ಬಿದ್ದಾಂಗ್‌ ಕಾಣಸ್ತು.. ಅಲ್ಲಿ ನಿಂತಕಂಡು ಮೈ ಒಣಗಿಸಿಕೊಂಡು ಬಂದೆ..ʼ ಎಂದ ನಾಗರಾಜ..
ʻಆಂ? ಎಲ್ಲಿ? ಗೋಳಿಕಟ್ಟಾ ಶಾಲೆ ಹತ್ರ?ʼ ಅಪ್ಪಯ್ಯ ಕೇಳಿದ್ದ..
ʻಹೌದಾ.. ಯಾರದ್ದೋ ಮನೆ ಕಟ್ಟಿಗೆ ರಾಶಿಗೆ ಬೆಂಕಿ ಬಿದ್ದೋಜು..ʼ ಎಂದ
ಹೌಹಾರಿದ ಅಪ್ಪಯ್ಯ ʻಯೇ.. ಏನಂದೆ? ಮಾರಾಯ್ನೇ.. ಆ ಬೆಂಕಿಯಲ್ಲಿ ಮೈ ಕಾಯಿಸಿಕೊಂಡು ಬಂದ್ಯಾ? ಥೋ... ಮೊದಲು ಸ್ನಾನ ಮಾಡು...ʼ ಎಂದ
ʻಎಂತಕ್ಕ? ಎಂತ ಆತಾ?ʼ
ʻಮಾರಾಯ್ನೇ ಆ ಊರಲ್ಲಿ ಒಬ್ಬವ ಸತ್ತೋಜ.. ಅವ್ನ ಸುಟ್ಟಿದ್ದಾಗಿತ್ತು ಆ ಬೆಂಕಿ. ಇವತ್ತು ಮದ್ಯಾಹ್ನ ಅಷ್ಟೇ ಸುಟ್ಟಿಕ್‌ ಬಂದಿದ್ದು ಅದು. ನಾನೂ ಹೋಗಿದ್ದಿ.. ನೀನು ಆ ಚಿತೆಯ ಬೆಂಕಿನ ಕಾಯ್ಸಿಕೊಂಡು ಬಂದೆಯಾ?..ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ನಾಗರಾಜನ ಬೆನ್ನಲ್ಲಿ ಛಳಕ್‌ ಅಂದಂತಾಯ್ತು.. ಬೆನ್ನ ಹುರಿಯ ಆಳದಲ್ಲಿ ಹುಟ್ಟಿಕೊಂಡ ಚಳಿ ನಿಧಾನವಾಗಿ ಮಯ್ಯನ್ನೆಲ್ಲ ಆವರಿಸಿತು. ಚಿತೆಯ ಬೆಂಕಿಯ ಬಿಸಿಯಂತೆ ಮೈ ಕೂಡ ಕಾವೇರತೊಡಗಿತು. ಕಣ್ಣು ಕತ್ತಲಿಟ್ಟುಕೊಂಡಂತಾಯಿತು. ನಾಗರಾಜನಿಗೆ ಮುಂದೇನಾಯಿತು ಎನ್ನುವುದೇ ಗೊತ್ತಾಗಲಿಲ್ಲ..!
(ಸತ್ಯ ಘಟನೆ ಆಧಾರಿತ)

Thursday, February 6, 2025

Ghost Writer ಭಾಗ -1


Chase the hunter


-----

A ghostwriter is a professional writer hired to create content on behalf of someone else, without receiving public credit for their work. Ghostwriters are commonly used for **books, articles, speeches, blog posts, and even music lyrics**. They help clients—such as celebrities, politicians, business executives, and experts—articulate their ideas in a polished and engaging manner.

Ghostwriting involves **deep research, adapting to the client’s voice, and maintaining confidentiality**. While the original author gets the credit, the ghostwriter is compensated for their work, often through a flat fee or royalties.

This profession is crucial in publishing, journalism, and content marketing, allowing busy individuals to share their insights without dedicating time to writing.

****

ಎರಡು ದಿನಗಳ ಹಿಂದೆ ಕೊರಿಯರ್‌ ಮೂಲಕ ಬಂದಿದ್ದ ಆ ಪತ್ರವನ್ನು ತೆರೆದು ಯೋಚಿಸುತ್ತ ಕುಳಿತಿದ್ದ ಡಿಟೆಕ್ಟಿವ್‌ ವಿಕ್ರಮ್ ಕುಮಾರ್!
ಎರಡು ದಿನಗಳ ಹಿಂದೆ ಕೊರಿಯರ್‌ ಒಂದು ಆತನಿಗೆ ಬಂದಿತ್ತು. ಅದರಲ್ಲಿ ಒಂದು ಪತ್ರವಿತ್ತು, ಜೊತೆಗೆ ೫೦ ಸಾವಿರ ರೂಪಾಯಿಗಳ ಹಣ ಕೂಡ ಇತ್ತು.
ಪತ್ರದಲ್ಲಿ ಒಬ್ಬ ವ್ಯಕ್ತಿಯ ಹೆಸರಿತ್ತು. ಆತನನ್ನು ಹುಡುಕಿಕೊಂಡು ಬರುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪತ್ರದ ಕೊನೆಯಲ್ಲಿ ಹುಡುಕಿಕೊಂಡು ಬರಬೇಕಿರುವ ವ್ಯಕ್ತಿ ಒಬ್ಬ ಘೋಸ್ಟ್‌ ರೈಟರ್!‌ ಈತನನ್ನು ಬಹಳಷ್ಟು ಜನರು ಹುಡುಕುತ್ತಿದ್ದಾರೆ. ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ, ಸಿನಿಮಾ ಜಗತ್ತು ಸೇರಿದಂತೆ ಹಲವು ವಿಭಾಗಗಳ ಪ್ರಮುಖರು ಈತನ ಬೆನ್ನು ಹತ್ತಿದ್ದಾರೆ. ಯಾರ ಕೈಗೂ ಸಿಗುತ್ತಿಲ್ಲ! ಆತನ ಬರಹಗಳು ಮಾತ್ರ ವೆಬ್‌ ಜಗತ್ತಿನಲ್ಲಿ ಪಬ್ಲಿಷ್‌ ಆಗುತ್ತಿದೆ. ಪಬ್ಲಿಷ್‌ ಆದ ನಂತರ ಸಾಕಷ್ಟು ವೈರಲ್‌ ಕೂಡ ಆಗುತ್ತಿದೆ. ಹಲವು ಸಾರಿ ಸಮಾಜದಲ್ಲಿ ಅಲ್ಲೋಲ-ಕಲ್ಲೋಲವನ್ನೂ ಸೃಷ್ಟಿ ಮಾಡಿದ ನಿದರ್ಶನ ಇದೆ.
ಆತನನ್ನು ಹುಡುಕಿಕೊಂಡು ಬರುವ ಮಹತ್ತರ ಜವಾಬ್ದಾರಿ ನಿನಗೆ ವಹಿಸಲಾಗುತ್ತಿದೆ. ಆತನನ್ನು ಹುಡುಕುತ್ತಿರುವವರೆಲ್ಲರ ಕಣ್ಣುತಪ್ಪಿಸಿ, ಅತ್ಯಂತ ಗೌಪ್ಯವಾಗಿ ಕಾರ್ಯ ನಿರ್ವಹಿಸಬೇಕು! ಈ ಪತ್ರದ ಜೊತೆ ಇರುವ ೫೦ ಸಾವಿರ ರೂಪಾಯಿ ಅಡ್ವಾನ್ಸ್!‌ ಕಾಲಕಾಲಕ್ಕೆ ಕೊರಿಯರ್‌ ಬರುತ್ತಿರುತ್ತದೆ ಹಾಗೂ ಹಣ ಸಂದಾಯ ಆಗುತ್ತಿರುತ್ತದೆ! ಪೂರ್ತಿ ಕೆಲಸ ಮುಗಿದ ನಂತರ ೧ ಕೋಟಿ ರೂಪಾಯಿ ಮೊತ್ತ ನೀಡಲಾಗುತ್ತದೆ! ಆತನ ಹೆಸರಿನಲ್ಲಿ ಪಬ್ಲಿಷ್‌ ಆದ ಬರಹಗಳ ಪೋಟೋ ಕಾಪಿ ಹಾಗೂ ಪ್ರಿಂಟೆಡ್‌ ಕಾಪಿಗಳು ಇಲ್ಲಿವೆ. ಕೂಡಲೇ ಕಾರ್ಯಪ್ರವೃತ್ತ ಆಗಬೇಕು! ಈ ಕೆಲಸ ಮಾಡೋದಿಲ್ಲ ಎನ್ನುವ ಆಯ್ಕೆ ನಿಮ್ಮೆದುರು ಇಲ್ಲವೇ ಇಲ್ಲ! ಒಪ್ಪಿಕೊಳ್ಳಲೇಬೇಕು ಇಲ್ಲವಾದಲ್ಲಿ ಮುಂದಿನ ಪರಿಣಾಮಗಳಿಗೆ ನೀವೇ ಜವಾಬ್ದಾರಿ ಎಂದು ಪತ್ರದಲ್ಲಿ ಬರೆಯಲಾಗಿತ್ತು!

ಕೆಲಸವನ್ನು ನನಗೆ ವಹಿಸಿದ್ದಾರೋ ಅಥವಾ ಆರ್ಡರ್‌ ಮಾಡಿದ್ದಾರೋ? ಎಂದುಕೊಳ್ಳುತ್ತಲೇ ಘೋಸ್ಟ್‌ ರೈಟರ್‌ ಕುರಿತು ಮಾಹಿತಿ ಕಲೆ ಹಾಕುವತ್ತ ವಿಕ್ರಮ್‌ ಕುಮಾರ್‌ ಕಾರ್ಯಪ್ರವೃತ್ತನಾಗಿದ್ದ. ಘೋಸ್ಟ್‌ ರೈಟರ್‌ ಪಬ್ಲಿಷ್‌ ಮಾಡುತ್ತಿದ್ದ ವೆಬ್‌ ತಾಣಗಳನ್ನು ಸರ್ಚ್‌ ಮಾಡಲು ಮುಂದಾಗಿದ್ದ.

ಅನಾಮಧೇಯ ಕೊರಿಯರ್‌ ಬಂದು ತಲುಪಿದ ಎರಡು ದಿನಗಳ ವೇಳೆಗೆ ʻಘೋಸ್ಟ್‌ ರೈಟರ್‌ ಕುರಿತು ಹಲವು ಸಂಗತಿಗಳ ವಿಕ್ರಮ್‌ ಕುಮಾರ್‌ ಗೆ ಗೊತ್ತಾಗಿದ್ದವು. ಆತನನ್ನು ಹುಡುಕಲು ಹೊರಡುವುದೊಂದೇ ಬಾಕಿ ಇತ್ತು.

ತಲೆಯ ತುಂಬೆಲ್ಲ ಘೋಸ್ಟ್‌ ರೈಟರ್‌ನನ್ನು ತುಂಬಿಕೊಂಡು, ಯಾವ ಕಡೆಯಿಂದ ತನ್ನ ಪತ್ತೆದಾರಿಕೆ ಕಾರ್ಯ ಶುರುಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದಾಗಲೇ ತನ್ನ ಮನೆ ಕಂ ಕಚೇರಿಯ ಕಾಲಿಂಗ್‌ ಬೆಲ್‌ ಸದ್ದು ಮಾಡಿತ್ತು.

ಬಾಗಿಲು ತೆರೆದು ನೋಡಿದರೆ ಬಾಗಿಲಲ್ಲಿ ಕೊರಿಯರ್‌ ಬಾಯ್‌ ನಿಂತಿದ್ದ! ಇನ್ನೊಂದು ಕೊರಿಯರ್‌ ಬಂದಿತ್ತು!
ಕೊರಿಯರ್‌ ಪಡೆದು ಫ್ರಂ ಅಡ್ರೆಸ್‌ ನೋಡಿದರೆ ʻಬೆಂಗಳೂರುʻ ಎಂದು ಬರೆದಿತ್ತು. ಕೊರಿಯರ್‌ ಬಾಅಯ್‌ ವಾಪಾಸ್‌ ತೆರಳಿದ ನಂತರ ಮನೆಯೊಳಗೆ ಬಂದು ವಿಕ್ರಮ್‌ ಕುಮಾರ್‌ ಆ ಕೊರಿಯರ್‌ ತೆರೆದ.
ಅದರೊಳಕ್ಕೆ ಇನ್ನಷ್ಟು ದುಡ್ಡು, ಒಂದಷ್ಟು ಮಾಹಿತಿ ಹಾಗೂ ಮತ್ತೊಂದು ಪತ್ರ ಇತ್ತು!

ಯಾರೋ ದೊಡ್ಡ ವ್ಯಕ್ತಿ, ಬಹಳ ಪ್ರಭಾವಿ, ಸಾಕಷ್ಟು ಕನೆಕ್ಷನ್‌ ಇರುವಾತನೇ ಈ ಕೆಲಸವನ್ನು ತನಗೆ ವಹಿಸುತ್ತಿದ್ದಾನೆ. ಘೋಸ್ಟ್‌ ರೈಟರ್‌ ಹುಡುಕುವ ಕಾರ್ಯದಲ್ಲಿ ತಾನು ಇನ್ನಷ್ಟು ಸೀರಿಯಸ್‌ ಆಗಬೇಕು ಎಂದುಕೊಳ್ಳುತ್ತಲೇ ವಿಕ್ರಮ್‌ ಕುಮಾರ್‌ ಪತ್ರವನ್ನು ಓದತೊಡಗಿದ!

ಓದುತ್ತಿದ್ದಂತೆಯೇ ನಿಧಾನವಾಗಿ ಬೆವರತೊಡಗಿದ

(ಮುಂದುವರಿಯುತ್ತದೆ)