Wednesday, August 20, 2025

ದವಾಯಿ, ಮಜ್ಯಾರ್ (ನಿನ್ನ ನಡೆ, ಹಂಗೇರಿಯನ್, Davai Magyar )




1946ರ ಸೆಪ್ಟೆಂಬರ್‌ನ ಆ ಬೆಳಿಗ್ಗೆ, ಹಂಗೇರಿಯ ಬುಡಾಪೆಸ್ಟ್‌ನ ಜನನಿಬಿಡ ಕೆಲೆಟಿ ರೈಲು ನಿಲ್ದಾಣದಲ್ಲಿ ನಿಂತುಕೊಂಡಂತೆ, ನಾನು ನನ್ನ ಆತಂಕವನ್ನು ಬಲವಂತವಾಗಿ ಹತೋಟಿಯಲ್ಲಿ ಇರಿಸಲು ಪ್ರಯತ್ನಿಸುತ್ತಿದ್ದೆ. 
ಅವಸರ ಅಥವಾ ಗಾಬರಿಯಿಂದ ನನ್ನ ಎಲ್ಲ ನಿರೀಕ್ಷೆಗಳು ಹಾಳಾಗಬಹುದು ಎಂಬುದನ್ನು ನನಗೆ ತಿಳಿದಿತ್ತು. 

ನಾನು ಪ್ರಾರ್ಥನೆಯ ಮನಸ್ಸಿನಿಂದ ಒಂದು ಹೆಸರಿನ ಕರೆಯುವಿಕೆಗೆ ಕಾಯುತ್ತಿದ್ದೆ — ಆಸ್ಕರ್ ಝಿನ್ನರ್. 
ಆದರೆ ಅದೇ ಹೆಸರಿನ ಕರೆಯುವಿಕೆ ನನ್ನ ನಾಶವನ್ನೂ ಸೂಚಿಸಬಹುದೆಂದು ನಾನು ಅರಿತಿದ್ದೆ. 

ಹತ್ತು ದಿನಗಳ ಹಿಂದಿನವರೆಗೂ ನಾನು ಆಸ್ಕರ್ ಝಿನ್ನರ್ ಎಂಬ ಹೆಸರನ್ನೇ ಕೇಳಿರಲಿಲ್ಲ. ಆಗ ನನ್ನೊಬ್ಬ ಹಳೆಯ ಸ್ನೇಹಿತನು, ಬುಡಾಪೆಸ್ಟ್ ನಲ್ಲಿ ವಾಸಿಸುತ್ತಿದ್ದ ಆಸ್ಟ್ರಿಯನ್ ನಾಗರಿಕರ ಸ್ಥಳಾಂತರದ ಬಗ್ಗೆ ರಹಸ್ಯ ಮಾಹಿತಿಯೊಂದಿಗೆ ನನ್ನನ್ನು ಭೇಟಿಯಾದ. 
ಅವನು ಗುಟ್ಟಾಗಿ ಹೇಳಿದ: 
"ಸ್ಥಳಾಂತರ ಪಟ್ಟಿಯಲ್ಲಿ ಒಬ್ಬನ ಹೆಸರಿದೆ. ಅವನಿಗೆ ಆಸ್ಟ್ರಿಯನ್ ಶರಣಾರ್ಥಿಗಳನ್ನು ವಿಯನ್ನಾಕ್ಕೆ ತೆಗೆದುಕೊಂಡು ಹೋಗುವ ಕೊನೆಯ ರೈಲು ಬಗ್ಗೆ ಹಲವು ಪತ್ರಗಳು ಕಳುಹಿಸಲಾಗಿತ್ತು. ಆದರೆ ಅವನು ಯಾವುದೇ ಉತ್ತರ ನೀಡಿಲ್ಲ. ಅವನು ಸತ್ತುಹೋಗಿದ್ದರೂ ಇರಬಹುದು. ಆ ವ್ಯಕ್ತಿ ಒಂದು ಪೋಟ್ರೇಟ್ ಚಿತ್ರಕಾರ — ಅವನ ಹೆಸರು ಆಸ್ಕರ್ ಝಿನ್ನರ್. ಅವನ ಹೆಸರಿನಲ್ಲಿ ಸ್ವಾತಂತ್ರ್ಯದ ದಾರಿ ಹಿಡಿಯುವ ಧೈರ್ಯ ಮಾಡುತ್ತೀಯೇ?” 

ನಾನು ಮಾಡಬಹುದೇ? ನನ್ನಿಂದ ಇದು ಸಾಧ್ಯವೇ? — ಮಾಡಲೇಬೇಕಿತ್ತು. ಏಕೆಂದರೆ ನಾನು ಶೀಘ್ರದಲ್ಲೇ ನನ್ನ ದೇಶದಿಂದ ತಪ್ಪಿಸಿಕೊಳ್ಳುವುದು ಅತ್ಯಗತ್ಯವಾಗಿತ್ತು. 

ನಾಜಿಗಳ ಆಳ್ವಿಕೆಯ ಸಮಯದಲ್ಲಿ, ಹಾಗೂ ನಂತರ ಹಂಗೇರಿಯ ಕಮ್ಯುನಿಸ್ಟ್ ಆಡಳಿತದಲ್ಲಿ ಬಲವಂತವಾಗಿ ಬದುಕಬೇಕಾದ ದಿನಗಳಲ್ಲೂ, ನಾನು ಬುಡಾಪೆಸ್ಟ್ನಲ್ಲಿದ್ದ ಒಬ್ಬ ಮೈತ್ರಿಕೂಟ (Allied) ಗುಪ್ತಚರನಾಗಿದ್ದೆ. ಆದರೆ ಇತ್ತೀಚೆಗೆ, ನನ್ನ ಹತ್ತಿರದ ಸಹೋದ್ಯೋಗಿಗಳು ಸೋವಿಯೆಟ್ ಬಲೆಗೆ ಸಿಕ್ಕಿಬಿದ್ದಿದ್ದರು. ಅದರಿಂದ ನಾನು ತಲೆಮರೆಸಿಕೊಂಡಿದ್ದೆ. 

ಈಗ ನಾನು ನನ್ನ ನಿಜವಾದ ಹೆಸರು ಫರೆನ್ಸ ಲಾಸ್ಲೋ. ಅದನ್ನು ಬಿಟ್ಟು ಆಸ್ಕರ್ ಝಿನ್ನರ್ ಆಗಿ ಬದಲಾಗುತ್ತಿದ್ದೆ. ಯಾವುದೇ ಪಾಸ್ಪೋರ್ಟ್ ವಿಷಯವೇ ಇರಲಿಲ್ಲ, ಏಕೆಂದರೆ ರಷ್ಯನ್ನರು ಬುಡಾಪೆಸ್ಟ್ನ ಬಹುತೇಕ ಮನೆಯಿಂದ ಎಲ್ಲಾ ದಾಖಲೆಗಳನ್ನು ದರೋಡೆ ಮಾಡಿ ಸುಟ್ಟುಬಿಟ್ಟಿದ್ದರು. 

ನನ್ನ ಸ್ನೇಹಿತನು ಝಿನ್ನರ್ ಜೀವನದ ವಿವರಗಳನ್ನು ಟೈಪ್ ಮಾಡಿದ ಪುಟಗಳನ್ನು ನನ್ನ ಮುಂದೆ ಹರಡಿದ. 
ಅವನು ಹೇಳಿದ: 
"ಇನ್ನು ನೀನೇ ಚಿತ್ರಕಾರ ಆಸ್ಕರ್ ಝಿನ್ನರ್. ಕುಳಿತುಕೊಂಡು ಕಲಿತುಕೋ. ಪ್ರತಿಯೊಂದು ಆಲೋಚನೆ, ಪ್ರತಿಯೊಂದು ನಡೆ-ನುಡಿಗಳಲ್ಲೂ ನೀನು ಝಿನ್ನರ್ ಆಗಬೇಕು." 

ಅವನು ಆ ಕಾಗದಗಳ ಮೇಲೆ ಬೆರಳಿನಿಂದ ಟೈಪಿಸಿಕೊಂಡ. 
"ಕಮ್ಯುನಿಸ್ಟ್ ಗಡಿ ಕಾವಲುಗಾರರ ಬಳಿ ಈ ಪ್ರತಿಯೊಂದು ವಿವರವು ಇರುತ್ತದೆ. ಅವರು ಎಷ್ಟು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಾರೋ ನಾನು ಹೇಳಬೇಕಾಗಿಲ್ಲ. ಮತ್ತೊಂದು ನಕಲಿ ಪ್ರತಿಯನ್ನು ನಿನ್ನ ಗುಂಪಿನ ಮೇಲ್ವಿಚಾರಕನೂ ಹೊಂದಿರುವನು. 

ಅವನಿಗೆ ನಿಜವಾದ ಝಿನ್ನರ್ ಪರಿಚಯವಿಲ್ಲ. ಆದರೆ ನಿಲ್ದಾಣದಲ್ಲಿ ಆ ಹೆಸರನ್ನು ಕೂಗಿದಾಗ, ನೀನು ಉತ್ತರಿಸುವ ಮೊದಲು ಸ್ವಲ್ಪ ತಾಳ್ಮೆಯಿಂದ ಕಾದು ನೋಡು." 

"‘ಕಾದು ನೋಡೋದಾ?’ ನಾನು ಕೇಳಿದೆ. 
‘ಕೊನೆಯ ಕ್ಷಣದಲ್ಲಿ ಝಿನ್ನರ್ ಬಂದುಬಿಡುವ ಸಾಧ್ಯತೆಯಿದೆ,’ ಎಂದ ಸ್ನೇಹಿತ. ‘ಒಂದು ವೇಳೆ ನಿಜವಾದವನು ಅಲ್ಲಿಗೆ ಬಂದ ಸಮಯದಲ್ಲಿ ಇಬ್ಬರೂ ಉತ್ತರಿಸಿದರೆ, ನಕಲಿ ವ್ಯಕ್ತಿಗೇ ಅದು ಅಪಾಯವಾಗುತ್ತದೆ.’ 

ನಂತರದ ಕೆಲವು ದಿನಗಳು ನಾನು ಆಸ್ಕರ್ ಝಿನ್ನರ್ ಅವರ ಜೀವನದ ಕುರಿತು ಅಧ್ಯಯನ ಮಾಡಿದೆ. 
ಅವರ ಹಳ್ಳಿಯಾದ ಆಸ್ಟ್ರಿಯಾದ ಗ್ರಾಟ್ಸ್ ಎಂಬ ಊರಿನಲ್ಲಿ ಅವರು ಹುಟ್ಟಿದ ಮನೆಯನ್ನು ನಾನು ವಿವರಿಸುವಷ್ಟು ಪರಿಣಿತನಾದೆ. 
ಆತನ ವಿದ್ಯಾಭ್ಯಾಸ, ಚಟಗಳು, ಇಷ್ಟ–ಅನಿಷ್ಟಗಳು, ಚಿತ್ರಣ ಶೈಲಿ — ಇದನ್ನೆಲ್ಲಾ ನನ್ನದೇ ಇರಬಹುದೇನೋ ಎನ್ನುವಷ್ಟು ರೂಢಿಯಾದವು.
ವಿಮರ್ಶಕರು ಅವರ ಚಿತ್ರಗಳ ಬಗ್ಗೆ ಏನು ಬರೆದರು, ಅವು ಎಷ್ಟು ಬೆಲೆಗೆ ಮಾರಾಟವಾದವು, ಯಾರು ಖರೀದಿಸಿದರು — ಯಾವುದು ನನಗೆ ಮರೆಯದಿರುವಷ್ಟು ಅಚ್ಚಾಗಿ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತು.

ಮರುದಿನವೇ ಹೊರಡಬೇಕು! ನಿರ್ಗಮನದ ಹಿಂದಿನ ರಾತ್ರಿ ಮನಸ್ಸು ಚಡಪಡಿಕೆಯಿಂದ ಕೂಡಿತ್ತು. ಆದರೆ ಮನಸ್ಸು ತಡೆಯಲಾಗದೇ ನಾನು ಬುಡಾಪೆಸ್ಟ್‌ನ ಫ್ರಾಂಜ್ ಜೋಸೆಫ್ ಸೇತುವೆ ದಾಟಿ, ಅಗತ್ಯಕ್ಕೂ ಹೆಚ್ಚು ಸಾಕ್ಷ್ಯವಾಗಬಹುದಾದ ಅವನ ಪರಿಚಯ ವಿವರಗಳನ್ನು ಹಾಗೂ ಇತರ ಕಾಗದ ಪತ್ರಗಳನ್ನು ಸಣ್ಣ ತುಂಡುಗಳನ್ನಾಗಿ ಹರಿದು ಡ್ಯಾನ್ಯೂಬ್ ನದಿಗೆ ಎಸೆದೆ. 


****

ಹಠಾತ್ತನೆ ರೈಲು ನಿಲ್ದಾಣದ ಲೌಡ್‌ ಸ್ಪೀಕರ್‌ನಿಂದ ಬಂತು ಸಣ್ಣದಾದ ಕಿರಿಕ್ ಶಬ್ದ. ಹೆಸರುಗಳನ್ನು ಸಾಲು ಸಾಲಾಗಿ ಜೋರಾಗಿ ಓದುವ ಸದ್ದಿನಿಂದ ನಾನು ವಾಸ್ತವಕ್ಕೆ ಬಂದು ಎಚ್ಚರಗೊಂಡೆ. 
ನನ್ನ ಹೊಟ್ಟೆಯಲ್ಲಿ ಅದೇನೋ ತಳಮಳ. ಏಕೆಂದರೆ ನನ್ನ ಹೆಸರು ಇಂಗ್ಲೀಷ್‌ ವರ್ಣಮಾಲೆಯ ಆಲ್ಫಾಬೆಟ್‌ ಪ್ರಕಾರ ಕೊನೆಯ ಅಕ್ಷರದಿಂದ ಆರಂಭವಾಗಿತ್ತು. 

ಕೊನೆಗೂ ಆ ಕರ್ಕಶ ಧ್ವನಿಯು ಕೂಗಿತು: 
"ಝಿನ್ನರ್ — ಆಸ್ಕರ್ ಝಿನ್ನರ್!" 
ನಾನು ಸ್ವಲ್ಪ ಸಮಯ ಕಾದು ನೋಡಲು ಮುಂದಾದೆ. ಅಂದರೆ ಬೇಕಂತಲೆ ಕಾಯುತ್ತಿದ್ದೆ. ಹೃದಯ ಬಡಿತ ಹೆಚ್ಚಿತ್ತು, ಕಿವಿಗಳು ಎಚ್ಚರವಾಗಿ, "ಯಾರೂ ಉತ್ತರ ಕೊಡದೇ ಇರಲಪ್ಪಾ ದೇವರೇ."  ಎಂದು ಮನಸ್ಸು ಮೌನ ಪ್ರಾರ್ಥನೆ ಮಾಡುತ್ತಿತ್ತು.

ಮತ್ತೊಮ್ಮೆ ಹೆಸರಿನ ಕರೆ ಬಂತು, ಈ ಸಾರಿ ಸ್ಪಲ್ಪ ಕೋಪದಿಂದ ಕರ್ಕಶವಾಗಿತ್ತು ಧ್ವನಿ 
"ಝಿನ್ನರ್!" 

ನಾನು ಮುಂದೆ ಬಂದು ನಿಧಾನವಾಗಿ ಹೇಳಿದೆ: 
"ಇಲ್ಲಿ!" 

ನಿಜವಾದ ಝಿನ್ನರ್ ನಿಂದ ನನಗೆ ಸವಾಲೇ ಬರಲಿಲ್ಲ. 

ನಮ್ಮನ್ನು ಹತ್ತುಜನರ ಗುಂಪುಗಳನ್ನಾಗಿ ಮಾಡಿದರು. ನಂತರ ರೈಲು ಡಬ್ಬಿಗಳಲ್ಲಿ ತಳ್ಳಿದರು. 
ನಾನು ಮತ್ತೆ ಮತ್ತೆ ನನ್ನೊಳಗೇ ಕಥೆಯನ್ನು ಪುನರುಚ್ಚರಿಸುತ್ತಿದ್ದೆ: 
"ನಾನು ಪೋಟ್ರೇಟ್ ಚಿತ್ರಕಾರ. ನಾನು ಗ್ರಾಟ್ಸ್ ನಲ್ಲಿ ಹುಟ್ಟಿದವನು. ನನ್ನ ತಂದೆ ವಾಸ್ತುಶಿಲ್ಪಿ…" 

ರೈಲು ಫ್ಲಾಟ್‌ ಫಾರ್ಮಿನಿಂದ ಹೊರಡುವ ಮೊದಲು ಒಮ್ಮೆ ಶಿಳ್ಳೆ ಕೂಗಿತು. ರೈಲು ಹೊರಡುವ ಸೂಚನೆ ಅದು. ಅದೇ ಸಮಯದಲ್ಲಿ ಕಡೆಯ ಬೋಗಿಯಿಂದ ರಷ್ಯನ್ ಸೈನಿಕರ ಭಾರೀ ಧ್ವನಿಗಳು ಕೇಳಿಬಂದವು. 
ನಾಲ್ವರು ಸೋವಿಯತ್ ಅಧಿಕಾರಿಗಳು ನಮ್ಮ ಡಬ್ಬಿಯ ಬಾಗಿಲನ್ನು ದಾಟಿ ಮುಂದಿನ ಬೋಗಿಯೊಳಗೆ ಹೋದರು. ಒಳಗಿದ್ದವರನ್ನು ಪಕ್ಕಕ್ಕೆ ಎಳೆದು ಹಾಕಿ, ಅಲ್ಲಿನ ಸೀಟುಗಳಲ್ಲಿ ತಾವು ಕುಳಿತುಕೊಂಡರು. 
ಸ್ವಲ್ಪ ಸಮಯದ ನಂತರ ಹಾಸ್ಯ–ನಗೆಯೊಂದಿಗೆ ಗಾಜುಗಳ ಜರ್ಜರ ಸದ್ದು ಕೇಳಿತು. ಮತ್ತೊಮ್ಮೆ ಶಿಳ್ಳೆ ಕೂಗಿ, ರೈಲು ಅಲುಗಾಡಿ ಪ್ರಯಾಣ ಆರಂಭಿಸಿತು.. 

ರೈಲು ವೇಗ ಪಡೆದುಕೊಳ್ಳುತ್ತಿದ್ದಂತೆಯೇ ನಾನು ಮನಸ್ಸಲ್ಲಿ ಹಿಂತಿರುಗಿ ಯೋಚಿಸಿದೆ — ಮತ್ತೆ ನನ್ನ ದೇಶವನ್ನು ನಾನು ಯಾವಾಗ ನೋಡಬಲ್ಲೆ? 
ಆದರೆ ಆ ದುಃಖದ ಭಾವನೆಗೆ ಇಲ್ಲಿ ಅವಕಾಶವಿರಲಿಲ್ಲ. ನಾನು ಈಗ ಫರೆನ್ಸ ಲಾಸ್ಲೋ ಅಲ್ಲ. ನಾನು ಆಸ್ಕರ್ ಝಿನ್ನರ್. 

ರೈಲು ಕೆಲೆನ್ಫೋಲ್ಡ್ ನಿಲ್ದಾಣದಲ್ಲಿ ನಿಂತಿತು. ಇದು ಮೊದಲ ತಪಾಸಣೆ ನಡೆಯುವ ಜಾಗ.
ಅಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ಓರ್ವ ಸೋವಿಯತ್ ಅಧಿಕಾರಿ ಹಾಗೂ ಅವನ ಜರ್ಮನ್ ಅನುವಾದಕ ಬಂದು ಸೇರುವಾಗ, ದಾರಿಗಳಲ್ಲಿ ಶಸ್ತ್ರಾಸ್ತ್ರಧಾರಿಗಳಾದ ಸೈನಿಕರು ನಿಂತಿದ್ದರು. 

ಆ ಅಧಿಕಾರಿ, ಕಲ್ಲಿನಂತವನು. ಒರಟು ಮುಖವಿರುವ ದೃಢಕಾಯ ವ್ಯಕ್ತಿ, ಎದುರಿಗೆ ಕುಳಿತಿದ್ದ ಮಹಿಳೆಯಿಂದ ಪ್ರಶ್ನೆ ಆರಂಭಿಸಿದ. 
ಅವನ ಕೈಯಲ್ಲಿ ಬಲಹೀನ ಕಾಗದದ ಜೀವಚರಿತ್ರೆಯ ಪುಟಗಳು ಇದ್ದವು. ಅವನು ರಷ್ಯನ್ನಲ್ಲಿ ಪ್ರಶ್ನೆ ಮಾಡುತ್ತಿದ್ದ, ಅನುವಾದಕ ಅದನ್ನು ಜರ್ಮನ್ ಗೆ ಭಾಷಾಂತರಿಸುತ್ತಿದ್ದ. 

ಅವನು ನನ್ನ ಪಕ್ಕದ ಕಿಟಿಕಿ ಜೊತೆ ಕುಳಿತಿದ್ದವನ ಕಡೆಗೆ ಬಂದಾಗ, ನಾನು ಮತ್ತೆ ಮತ್ತೆ ಮನಸ್ಸಿನಲ್ಲಿ ತಯಾರಾಗುತ್ತಿದ್ದೆ: 
"ನಾನು ಚಿತ್ರಕಾರ. ನಾನು ಆಸ್ಟ್ರಿಯಾದ ಗ್ರಾಟ್ಸ್ ನಲ್ಲಿ ಹುಟ್ಟಿದ್ದೇನೆ. ನನ್ನ ಹೆಸರು … ನನ್ನ ಹೆಸರು…" 

ಅಯ್ಯಯ್ಯೋ… ಇದೇನಿದು.. ತಕ್ಷಣವೇ ಮುಖದಲ್ಲಿ ಬೆವರು ಹರಿಯಿತು. ಹೃದಯ ಗಂಟಲೊಳಗೆ ಬಿದ್ದುಕೊಂಡಂತೆ ಚಡಪಡಿಕೆ ಶುರುವಾಯಿತು. 
ಮರೆಮಾಡಿದ ಆತಂಕದಿಂದ ಉಂಟಾದ ವಿಶಿಷ್ಟವಾದ ಮಾನಸಿಕ ಅಡ್ಡಿಯೊಂದು ಬಂತು — ಹೊಸ ಹೆಸರು ಪಡೆದುಕೊಂಡು ಚಹರೆ ಬದಲಿಸಿಕೊಂಡಿದ್ದ ನಾನು  ಝಿನ್ನರ್ ಕುರಿತು ಎಲ್ಲವನ್ನೂ ನೆನಪಿಸಿಕೊಳ್ಳುತ್ತಿದ್ದೆ, ಆದರೆ ಅವನ ಹೆಸರು ಮಾತ್ರ ನನಗೆ ನೆನಪಾಗುತ್ತಿರಲಿಲ್ಲ. 

ಅಷ್ಟರಲ್ಲಿ ಅಧಿಕಾರಿ ಮುಂದಿನ ಮಹಿಳೆಯನ್ನು ಪ್ರಶ್ನಿಸುತ್ತಿದ್ದಾನೆಂಬುದನ್ನು ನಾನು ದೂರದಿಂದ ಕೇಳಿ ಬರುತ್ತಿದ್ದ ತಣ್ಣನೆಯ ಧ್ವನಿಯನ್ನು ಕೇಳಿ ಅರಿತುಕೊಳ್ಳುತ್ತಿದ್ದೆ,  
ನಾನು ಪ್ರಾರ್ಥಿಸಿದೆ: 
"ದೇವರೆ, ನನ್ನ ಹೆಸರು ಏನು? ನಾನು ಚಿತ್ರಕಾರ. ನನ್ನ ಹೆಸರು …" 
ಉಹೂ.. ಪ್ರಯೋಜನವಿಲ್ಲ. ಹೆಸರು ನೆನಪಾಗುತ್ತಲೇ ಇಲ್ಲ. 

ಆ ಕ್ಷಣದಲ್ಲೇ ಹತ್ತಿರದ ಬೋಗಿಯ ಬಾಗಿಲು ತೆಗೆದ ಶಬ್ದ 
ಸ್ವಲ್ಪ ಮಾತುಕತೆ ನಡೆದು, ಕೆಂಪು ಸೇನೆಯ ಒಬ್ಬ ಕರ್ನಲ್ ನಮ್ಮ ಡಬ್ಬಿಯೊಳಗೆ ತಲೆ‌ ಹಾಕಿ ಕೇಳಿದ: 

"ವೇರ್ ಶ್ಪಿಲ್ಟ್ ಷಾಕ್? ( ಯಾರಿಗೆ ಚೆಸ್‌ ಆಡೋಕೆ ಬರುತ್ತೆ?)" 

ನಮ್ಮ ತಪಾಸಣಾಧಿಕಾರಿ ಆ ಅಡ್ಡಿಪಡಿಸಿದ ಧ್ವನಿಯ ಕಡೆಗೆ ತಿರುಗಿ ಕಟುವಾಗಿ ನೋಡಿದ, ಆದರೆ ಅವನ ಸೈನಿಕ ಮೇಲಾಧಿಕಾರಿಯ ದೃಷ್ಟಿಯಡಿಯಲ್ಲಿ ಗೌರವದಿಂದ ಹಿಂದೆ ಸರಿದ. ಬಾಗಿಲಿಗೆ ಸಮೀಪ ಕುಳಿತಿದ್ದು ನಾನು ಆಗಿದ್ದರಿಂದ, ಕರ್ನಲ್‌ ನ ಮುಂದಿನ ಪ್ರಶ್ನೆ ನನಗೇ ಇರಬಹುದೆಂದು ತೋರ್ಪಟ್ಟಿತು.
“ಶ್ಪೀಲನ್ ಸೀ ಷಾಖ್?” (ಚೆಸ್‌ ಆಡ್ತೀರಾ) ಎಂದು ಆತ ಕೇಳಿದ.
ನಾನು ಹತ್ತು ವರ್ಷಗಳಿಂದ ಚದುರಂಗ ಆಡಿರಲಿಲ್ಲ, ಆದರೆ ಇದರಿಂದ ಯಾವತ್ತೂ ಪ್ರಯೋಜನವಾಗಿರಲಿಲ್ಲ. ಆದರೆ ಈ ಪ್ರಶ್ನೆಯೇ ನನಗೆ ಬೇಕಿದ್ದ ಉಸಿರಾಟದ ಅವಕಾಶ ನೀಡಿತ್ತು. ಬೋಗಿಯಲ್ಲಿ ಯಾರೂ ಉತ್ತರಿಸಲಿಲ್ಲ.
“ಯಾ. ಇಶ್ ಶ್ಪೀಲೆ ಷಾಖ್,” (ನಾನು ಆಡಬಲ್ಲೆ) ಎಂದು ನಾನು ಹೇಳಿದೆ.
ಕರ್ನಲ್ ಕೈ ಬೀಸಿ ನನ್ನನ್ನು ತನ್ನೊಂದಿಗೆ ಬರಲು ಸೂಚಿಸಿದ. ನಾನು ಹಿಂಬಾಲಿಸಿದೆ

ರಷ್ಯನ್ನರ ಬೋಗಿಯಲ್ಲಿ ಇನ್ನಿಬ್ಬರು ಕರ್ನಲ್ಲುಗಳು ಮತ್ತು ಮೆಡಲ್ ಗಳಿಂದ ಕಂಗೊಳಿಸುತ್ತಿದ್ದ ಒಬ್ಬ ಜನರಲ್ ಇದ್ದ — ಐವತ್ತರ ವಯಸ್ಸಿನ ಆತ ಗಾತ್ರದಲ್ಲಿ ದೈತ್ಯನಾಗಿದ್ದರೂ ಇನ್ನೂ ಬಲಿಷ್ಠನಾಗಿ ಕಾಣುತ್ತಿದ್ದ. ಚೆಸ್ ಆಡಲು ಉತ್ಸುಕನಾಗಿದ್ದವನು ಇವನೇ ಇರಬೇಕು, ಏಕೆಂದರೆ ನನಗೆ ಎದುರು ಕುಳಿತುಕೊಳ್ಳಲು ಅವನೇ ಸೂಚಿಸಿದ.
ನನ್ನ ಪಕ್ಕದಲ್ಲಿ ಡಜನ್ ಗಟ್ಟಲೆ ಸ್ಯಾಂಡ್ವಿಚ್ ಹಾಗೂ ಒಂದು ಸಿಹಿತಿಂಡಿಗಳ ಪೆಟ್ಟಿಗೆ ಇತ್ತು. ಕಿಟಕಿಯ ಕೆಳಗೆ ಇರುವ ಚಿಕ್ಕ ಟೇಬಲ್ ಮೇಲೆ ಗ್ಲಾಸ್ಗಳು, ವೋಡ್ಕಾ, ಹಂಗೇರಿಯನ್ ಬ್ರಾಂಡಿ ಮತ್ತು ವೈನ್ ಇದ್ದವು.
ಜನರಲ್ ನನ್ನನ್ನು ಕ್ಷಣಕಾಲ ಅವಲೋಕಿಸಿ ನೋಡುವುದರೊಂದಿಗೆ ಆಹಾರ ಮತ್ತು ವೋಡ್ಕಾವಿನ ಕಡೆ ತೋರಿಸಿದ.
 “ದವೈ,” (ತಗೋ, ತಿನ್ನು) ಎಂದು ಅವನು ರಷ್ಯನ್‌ ಭಾಷೆಯಲ್ಲಿ ಘರ್ಜಿಸಿದ.
ಯಾವ ಕ್ಷಣದಲ್ಲಾದರೂ ಒಬ್ಬ ರಷ್ಯನ್ ನನ್ನ ಹೆಸರನ್ನು ಕೇಳಬಹುದು ಅಥವಾ ಅದಕ್ಕಿಂತಲೂ ಭಯಾನಕವಾಗಿ — ತಪಾಸಣಾಧಿಕಾರಿ ಒಳನುಗ್ಗಬಹುದು ಎಂಬ ಭಯಂಕರ ಭಯದಲ್ಲಿ, ನಾನು ಕೂತು ತಿಂದೆ. 
ರೈಲು ಮತ್ತೆ ಚಲಿಸಲು ಆರಂಭಿಸಿದಾಗ, ಜನರಲ್ ಚೆಸ್‌ ಬೋರ್ಡ್‌ ತೆಗೆದು ಕಾಯಿಗಳನ್ನೆಲ್ಲ ಒಪ್ಪವಾಗಿ ಇಡಲು ಪ್ರಾರಂಭಿಸಿದ.
“ದೇವರೆ, ಕಾಪಾಡು,” ಎಂದು ನಾನು ಮನಸ್ಸಿನಲ್ಲಿ ಹೇಳಿಕೊಂಡೆ. “ಇದು ನನ್ನ ಜೀವನದ ಆಟ. ಇದನ್ನು ನಿಜವಾಗಿಯೂ ಉತ್ತಮವಾಗಿ ಆಡಬೇಕು. ಆದರೆ ಗೆಲ್ಲುವುದೂ ಸಹ ನನಗೆ ಸಾಧ್ಯವಿಲ್ಲ.”
ನನ್ನ ಜೀವಮಾನದಲ್ಲಿ ಯಾವುದೇ ರಷ್ಯನ್‌, ಅಥವಾ ರಷ್ಯನ್‌ ಆಟಗಾರ ಯಾವತ್ತಿಗೂ ಸೋಲುವುದನ್ನು ಇಷ್ಟಪಡದೇ ಹೋರಾಡುವುದನ್ನು ಕಂಡಿದ್ದೆ. ಚೆಸ್‌ ನಲ್ಲಂತೂ ಅದು ಸಾಧ್ಯವೇ ಇರಲಿಲ್ಲ. ಸುದೀರ್ಘವಾಗಿ ಕುಳಿತುಕೊಂಡಷ್ಟೂ ನನ್ನ ಬದುಕಿನ ಕ್ಷಣಗಳು ಕೊಂಚವಾದರೂ ದೀರ್ಘವಾಗಬಹುದು ಎಂದು ಆಲೋಚಿಸಿದೆ. ಸಾಧ್ಯವಾದಷ್ಟೂ ಪಂದ್ಯಗಳನ್ನು ದೀರ್ಘ ಅವಧಿ ತನಕ ಮುಂದುವರಿಸುವ ಆಲೋಚನೆ ಮಾಡಿದೆ.
ಆಟ ಮುಂದುವರಿದಂತೆ, ನನ್ನ ಹಳೆಯ ತಂತ್ರಗಳು ನಿಧಾನವಾಗಿ ನೆನಪಿಗೆ ಬಂದವು. ಇತರ ಅಧಿಕಾರಿಗಳು ಗಾಢ ಮೌನದಲ್ಲಿ ಆಟವನ್ನು ನೋಡುತ್ತಿದ್ದರು, ಬಹುಶಃ ಜನರಲ್ ಚದುರಂಗದ ಮಾಂತ್ರಿಕನೆಂದು ನಂಬಿಕೊಂಡಿದ್ದರು. ವಾಸ್ತವದಲ್ಲಿ ಅವನು ಒಳ್ಳೆಯ ಆಟಗಾರನಾಗಿದ್ದ, ಆದರೆ ಪ್ರತಿಯೊಂದು ಲಾಭವನ್ನು ಪಡೆಯಲು ನಾನು ಆತನಿಗೆ ಅವಕಾಶ ಕೊಡದಂತೆ ತಿಣುಕಾಡಿಸುತ್ತಿದ್ದೆ.
ಸಮಯ ಸರಿಯುತ್ತಿರುವುದರ ಅನುಭವ ನನಗಾಯಿತು. ಹಠಾತ್ ಗಮನಿಸಿದಾಗ ರೈಲು ನಿಧಾನವಾಗಿ ಗ್ಯೋರ್ (Györ) ತಲುಪುತ್ತಿತ್ತು — ಇದು ನಮ್ಮ ಎರಡನೇ‌ ಸಾರಿ ತಪಾಸಣಾ ನಡೆಸುವ ಕೇಂದ್ರ ಇತ್ತು. ನನ್ನ ಮನಸ್ಸು ವೇಗವಾಗಿ ಓಡುತ್ತಿತ್ತು.
ಇದೇ ಸಮಯದಲ್ಲಿ ಬಾಗಿಲು ಸರ್ರನೆ ತೆರೆದುಕೊಂಡಿತು. ಆಸ್ಟ್ರಿಯನ್ ಗುಂಪಿನ ಮೇಲ್ವಿಚಾರಕ ಒಳಬಂದು ಬಿಗಿಯಾಗಿ ಹೇಳಿದ:
 “ಈ ವ್ಯಕ್ತಿಯನ್ನು ಇನ್ನೂ ತಪಾಸಣೆ ಮಾಡಿಲ್ಲ.”
ಆದರೆ ನಾನು ವ್ಯರ್ಥವಾಗಿ ಚಿಂತೆ ಮಾಡಿದ್ದೆ. ಜನರಲ್ ಎದ್ದು ತನ್ನ ದೊಡ್ಡ ಕರಡಿಯಂತೆ ಕೂದಲನ್ನು ಹೊಂದಿದ್ದ ಕೈಯನ್ನು ಆ ಅಧಿಕಾರಿಯ ಎದೆಯ ಮೇಲೆ ಇಟ್ಟು ಅವನನ್ನು ಹಿಂದಕ್ಕೆ ತಳ್ಳಿಬಿಟ್ಟ. ನಂತರ ಬಾಗಿಲು ಒಡೆಯುವಂತೆ ಮುಚ್ಚಿ, ಚೆಸ್‌ ಬೋರ್ಡ್‌ ಕಡೆಗೆ ತೋರಿಸಿದ.
“ದವೈ ಮಾಗ್ಯಾರ್ ಹಂಗೇರಿಯನ್?,” (‘ನಿನ್ನ ನಡೆ‌, ನೀನು ಹಂಗೇರಿಯನ್ನಾ?ʼ’) ಎಂದು ಅವನು ಘರ್ಜಿಸಿದ.
ಹಂಗೇರಿಯನ್ನ? ನಿಜ, ನಾನು ಹಂಗೇರಿಯಿಂದ ಬರುತ್ತಿದ್ದೆ. ಆದರೆ ಅದು ಅವನ ನಾಲಿಗೆಯ ತಪ್ಪೋ ಅಥವಾ ಅರ್ಥಪೂರ್ಣ ಮಾತೋ ಎನ್ನುವುದರಿಂದ ನನ್ನ ತಲೆಯ ಕೂದಲು ನಟ್ಟಿಗೇರಿದಂತಾಯಿತು. ಅವನು ನನ್ನನ್ನು ಗುರುತಿಸಿದನಾ? ಅಥವಾ ಸಹಜವಾಗಿ ಕೇಳಿದನಾ ಎನ್ನುವುದು ನನಗೆ ಗೊತ್ತಾಗಲಿಲ್ಲ. ಆದರೆ ಮೈಯೆಲ್ಲ ಛಳುಕೆದ್ದು, ಸಣ್ಣದಾಗಿ ಬೆವರಲು ಆರಂಭಿಸಿದ್ದೆ.
ಮೊದಲ ಆಟ ಮುಗಿದಾಗ, ಜನರಲ್ ಗೆದ್ದ. ನಂತರ ಜರ್ಮನ್ ತಿಳಿದಿದ್ದ ಅಧಿಕಾರಿಗೆ ಏನೋ ಮಾತು ಹೇಳಿದರು.
 ಅವನು ಅನುವಾದಿಸಿದ:
 “ಜನರಲ್ ಗೆ ನಿನ್ನ ಆಟದ ಶೈಲಿ ಇಷ್ಟವಾಗಿದೆ. ಅವನು ನಿನ್ನೊಂದಿಗೆ ಮತ್ತೊಂದು ಆಟ ಆಡಲು ಬಯಸುತ್ತಿದ್ದಾರೆ.”
ಆದರೆ ಮತ್ತೆ ಆಟ ಪ್ರಾರಂಭಿಸುವ ಮೊದಲು, ಜನರಲ್ ಮದ್ಯಪಾನ ಮಾಡುವಂತೆ ಒತ್ತಾಯಿಸಿದ.
ವೋಡ್ಕಾದಿಂದ ಬಂದ ಧೈರ್ಯದ ಬಿಸಿ ಶಕ್ತಿಯಿಂದ ನನ್ನ ಮನಸ್ಸಿನ ಕಡಿವಾಣ ತಪ್ಪಿಹೋಯಿತು. ಅನಾಯಾಸವಾಗಿ ಈ ಸಾರಿ ನಾನು ಆಟದಲ್ಲಿ ಸಂಪೂರ್ಣ ತೊಡಗಿಕೊಂಡೆ. ಆಟ ಸಾಗಿದ ನಂತರ ಹಠಾತ್ ನಾನು ಗೆಲ್ಲುವ ಸನಿಹದಲ್ಲಿದ್ದೇನೆ ಎನ್ನುವುದರ ಅರಿವು ಬಂತು.
ನಾವು ಕೊನೆಯ ನಿರ್ಣಾಯಕ ಹೆಜ್ಜೆಗಳಲ್ಲಿ ಇರುವಾಗ ರೈಲು ನಿಧಾನವಾಗಿ ಹೆಗ್ಯೇಶಾಲೊಮ್ ತಲುಪಿತು — ಇಲ್ಲಿ ನಮ್ಮ ಕೊನೆಯ ತಪಾಸಣಾ ಕೇಂದ್ರ ಇತ್ತು.
ಇಲ್ಲಿ ನಾನು ಗೆಲ್ಲುವುದೋ ಸೋಲುವುದೋ ನಿರ್ಧಾರವಾಗುತ್ತಿತ್ತು — ಕೇವಲ ಒಂದು ಆಟವಲ್ಲ, ನನ್ನ ಸಂಪೂರ್ಣ ಜೀವನವನ್ನೂ ಕೂಡ

ಈ ಬಾರಿ ಡಜನ್ಗಟ್ಟಲೆ ಕೆಂಪು ಸೇನೆಯ ಸೈನಿಕರು — ಅವರ ಭುಜದ ಮೇಲೆ ರೈಫಲ್ಗಳು, ಸೊಂಟದ ಬೆಲ್ಟ್‌ನಲ್ಲಿ ಗ್ರನೆಡ್ಗಳು — ರಷ್ಯನ್‌, ಜರ್ಮನ್‌ ಸೇರಿದಂತೆ ಹಲವು ಭಾಷೆಗಳನ್ನು ಬಲ್ಲ ದುಬಾಷಿಗಳು ಹಾಗೂ ಭದ್ರತಾ ಅಧಿಕಾರಿಗಳ ದಂಡನ್ನು ಮುನ್ನಡೆಸುತ್ತ ಹಾದುಹೋದರು.
ಅವರು ನಮ್ಮ ಬೋಗಿಯೊಳಗೆ ಒಮ್ಮೆ ಇಣುಕಿದ ಶಾಸ್ತ್ರವನ್ನು ಮಾಡಿ ಮುಂದೆ ಹೋದರು.
ಮುಂದಿನ ಡಬ್ಬಿಯಲ್ಲಿದ್ದ ಕಿಡಿಗೇಡಿಯಾದ ಗುಂಪಿನ ಮೇಲ್ವಿಚಾರಕನು ಅಧಿಕಾರಿಗಳ ಜೊತೆಗೆ ಕುಳಿತಿದ್ದ ಆಸ್ಟ್ರಿಯನ್ನ ಬಗ್ಗೆ ಅಧಿಕಾರಿಗಳಿಗೆ ಹೇಳಿಬಿಟ್ಟದ್ದನೇನೋ. ಗಾರ್ಡುಗಳಲ್ಲಿ ಒಬ್ಬನು ಬಂದು ಪರಿಶೀಲನೆ ನಡೆಸಲು ಪ್ರಯತ್ನಿಸಿದ.
ಅವನು ಬಾಗಿಲಿನ ಬಳಿಗೆ ಬಂದು ತಕ್ಷಣ ಸಲ್ಯೂಟ್ ಹೊಡೆದು, ವೇಗವಾಗಿ ರಷ್ಯನ್ ಭಾಷೆಯಲ್ಲಿ ಮಾತನಾಡಲಾರಂಭಿಸಿದ. ಜೊತೆಗೆ ಬೆರಳು ನನ್ನತ್ತ ತೋರಿಸುತ್ತಿದ್ದ.
ಮತ್ತೆ ನನ್ನ ಮೆದುಳು-ಮನಸ್ಸು ಭೀತಿಯಿಂದ ತುಂಬಿಕೊಂಡಿತು. ಈ ಬಾರಿ ಜನರಲ್ ಖಂಡಿತವಾಗಿಯೂ ಅವರಿಗೆ ನನ್ನನ್ನು ವಿಚಾರಿಸಲು ಬಿಡುತ್ತಾನೆ ಎಂಬ ಭಯ ನನ್ನೊಳಗಿತ್ತು — ಹೀಗೆ ಮತ್ತೊಮ್ಮೆ ಅಡ್ಡಿಪಡಿಸುವುದನ್ನು ತಡೆಯಲು.
“ನಾನು ಪೋಟ್ರೇಟ್ ಚಿತ್ರಕಾರ… ನನ್ನ ಹೆಸರು…” — ನನ್ನೊಳಗೆ ಮತ್ತೊಮ್ಮೆ ಪ್ರಯತ್ನ ಪ್ರಾರಂಭವಾಯ್ತು. ಆದರೆ ಹೆಸರು ಮಾತ್ರ ಇನ್ನೂ ನೆನಪಿಗೆ ಬರಲಿಲ್ಲ.
ಗಾರ್ಡ್ ಮಾತನಾಡುತ್ತಿದ್ದಂತೆ, ಜನರಲ್ ಮುಖ ನಿಧಾನವಾಗಿ ನೇರಳೆ ಬಣ್ಣಕ್ಕೆ ತಿರುಗುತ್ತಿತ್ತು. ಅವನು ಏನು ಹೇಳುತ್ತಿದ್ದಾನೆ ಎಂಬುದು ನನಗೆ ತಿಳಿಯಲಿಲ್ಲ, ಆದರೆ ಇದು ಜನರಲ್ ಕೋಪವನ್ನು ಉಕ್ಕಿಸುವಂತೆಯೇ ಇತ್ತು. ಅವನ ಕಣ್ಣುಗಳು ಬೆಂಕಿಯಾಗಿದ್ದು ನನ್ನತ್ತ ತಿರುಗುತ್ತಿತ್ತು. ನಂತರ, ಅವನು ಎಚ್ಚರಿಕೆಯಿಂದ ಚದುರಂಗದ ಫಲಕವನ್ನು ಕಿಟಕಿಯ ಕೆಳಗಿನ ಮೇಜಿನ ಮೇಲೆ ಇಟ್ಟು, ಎದ್ದು ನಿಂತನು.
“ಇದೆ ನನ್ನ ಕೊನೆ.. ಆಯ್ತು.. ಮುಗೀತು… ಇಲ್ಲಿಯವರೆಗೆ.. ಇಷ್ಟು ಹತ್ತಿರ ಬಂದು ಇಷ್ಟೇ ದೂರ ಹೋಗುತ್ತೇನೆ…” ಎಂದು ನಾನು ನಿಶ್ಶಬ್ದವಾಗಿ ಯೋಚಿಸಿದೆ.
ಜನರಲ್ ತನ್ನ ಕೈಯನ್ನು ದೀರ್ಘವಾಗಿ ಎಳೆದು, ಗಾಳಯಲ್ಲಿ ಬೀಸಿ ಜೋರಾಗಿ ಗುದ್ದಿದ ಅದು ಗಾರ್ಡ್ನ ಬಾಯಿಗೆ ನೇರವಾಗಿ ಬಡಿದು, ಅವನು ಹಿಂಬದಿಗೆ ಜಾರಿಕೊಂಡು ಹಿಂಭಾಗದ ರೈಲ್ವೆ ಬೋಗಿಯ ಆಚೆಗಿನ ಗೋಡೆಗೆ ಅಪ್ಪಳಿಸಿದ.
ಜನರಲ್ ಬಾಗಿಲನ್ನು ಅಷ್ಟು ಬಲದಿಂದ ರಪ್ಪನೆ ಮುಚ್ಚಿದ. ಆದನ ಆರ್ಭಟಕ್ಕೆ ಒಮ್ಮೆ ನಮ್ಮ ಬೋಗಿಯ ಕಿಟಕಿಗಳೆಲ್ಲ ಕಟಕಟಿಸಿದವು.
 ನಂತರ ಅವನು ತನ್ನ ಆಸನಕ್ಕೆ ಹಿಂತಿರುಗಿ, ತನ್ನೊಳಗೇ ಏನೋ ರಷ್ಯನ್‌ ಭಾಷೆಯಲ್ಲಿ ಮಣಮಣಿಸುತ್ತ ಬೈದುಕೊಳ್ಳುವಂತೆ ಮಾತನಾಡುತ್ತ ಕುಳಿತ.
ಮತ್ತೆ ಚದುರಂಗದ ಫಲಕವನ್ನು ಎತ್ತಿಕೊಂಡು ಕಾಯಿಗಳನ್ನು ನಿಲ್ಲಿಸಿ, ಗಮನಿಸಿ, ನಡೆಗಳನ್ನೆಲ್ಲ ಆಲೋಚಿಸತೊಡಗಿದ.

ನಾನು ಒಮ್ಮೆ ನಿಟ್ಟುಸಿರುಬಿಟ್ಟೆ. ವೇಗವಾಗಿದ್ದ ನನ್ನ ಎದೆಬಡಿತ ಸಹಜ ಸ್ಥಿತಿಗೆ ಮರಳುತ್ತಿತ್ತು. ಆಯ್ತು, ಇನ್ನು ಯಾರೂ ನಮ್ಮ ಬೋಗಿಯ ಒಳಕ್ಕೆ ಬರುವುದಿಲ್ಲ, ನನ್ನನ್ನು ತಪಾಸಣೆ ಮಾಡುವುದಿಲ್ಲ. ನಾನು ಬಯಸಿದ್ದ ಸ್ವಾತಂತ್ರ್ಯ, ಬೇರೆ ದೇಶಕ್ಕೆ ಹೋಗುವ ನನ್ನ ಬಯಕೆಗೆ ಇನ್ನು ತಡೆಯೇ ಇಲ್ಲ ಎನ್ನುವ ಭಾವನೆ ಬಂದು ಹೆಮ್ಮೆಯೆನ್ನಿಸಿತು. ರೈಲು ವೇಗ ಪಡೆದಂತೆ, ಇಷ್ಟು ಹೊತ್ತಿನ ಭೀಕರ ಒತ್ತಡದಿಂದ ನನಗೆ ಮುಕ್ತಿ ದೊರೆತಿತು. ಮೊದಲ ಬಾರಿಗೆ ನಾನು ನಕ್ಕೆ..
ಜನರಲ್ ಚೆಸ್‌ ಬೋರ್ಡಿನಿಂದ ತಲೆ ಎತ್ತಿ, ನನ್ನ ನಗುವಿಗೆ ಪ್ರತಿಯಾಗಿ ನಕ್ಕ ಬಳಿಕ ಅವನು ಪಕ್ಕದಲ್ಲಿದ್ದ ಯುವ ಅಧಿಕಾರಿಗೆ ಏನೋ ಹೇಳಿದ.
ಅವನು ನನ್ನತ್ತ ತಿರುಗಿ ಹೇಳಿದ:
 “ಜನರಲ್ ಕೇಳ್ತಾ ಇದ್ದಾರೆ- ವಿಯೆನ್ನಾದಲ್ಲಿ ಯಾವಾಗಲಾದರೂ ಅವರೊಂದಿಗೆ ಮತ್ತೊಮ್ಮೆ ಆಟ ಆಡುವ ಆಸಕ್ತಿ ನಿಮಗಿದೆಯಾ? ಅವರು ನಿಮ್ಮನ್ನು ಎಲ್ಲಿ ಸಂಪರ್ಕಿಸಬಹುದು?”
ಈ ಸಾರಿ ನನಗೆ ಭಯ ಆಗಲಿಲ್ಲ. ಪ್ರಸಿದ್ಧವಾದ ವಿಯೆನ್ನಾದ ಒಂದು ಹೋಟೆಲ್ ಹೆಸರನ್ನು ನುಡಿದೆ.
“ಮತ್ತೆ… ನಿಮ್ಮ ಹೆಸರು?” ಎಂದು ಯುವ ಅಧಿಕಾರಿ ಥಟ್ಟನೆ ಕೇಳಿದ.
ಈಗ ತಿಳಿಯಾಗಿತ್ತು. ಯಾವುದೆ ಭಯ, ಭೀತಿ, ದುಗುಡ, ದುಮ್ಮಾನ ಏನೂ ಇರಲಿಲ್ಲ. ಬರೀ ಎರಡೇ ಎರಡು ಶಬ್ದ..! ಈ ಹೆಸರನ್ನು ನಾನು ಮರೆತಿದ್ದೆನಲ್ಲ, ಇಷ್ಟು ಸರಳ ಹೆಸರು.. ಎಂದುಕೊಂಡು ತಕ್ಷಣವೇ ಹೇಳಿದೆ.
“ನನ್ನ ಹೆಸರು,” “ಆಸ್ಕರ್ ಝಿನ್ನರ್.”


(ಪ್ರಸಿದ್ಧ ಕಥೆಯೊಂದರ ಕನ್ನಡ ಅನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ. ಹೇಗಿದೆ ಓದಿ ಹೇಳಿ)

Tuesday, February 25, 2025

ಬೆಂಕಿ

ಈಗಿನಂತೆಯೇ ಅದೂ ಕೂಡ ಬೆಟ್ಟಗಳಿಗೆ ಬೆಂಕಿ ಬೀಳುವ ಸಮಯ. ಅಲ್ಲೆಲ್ಲೋ ಬೆಟ್ಟಕ್ಕೆ ಬೆಂಕಿ ಬಿದ್ದು ಸುಟ್ಟು ಹೋಯ್ತಂತೆ, ಇಲ್ಲೆಲ್ಲೋ ಬೆಂಕಿ ಅವಘಡ ಆಯ್ತಂತೆ ಎಂಬ ಸುದ್ದಿಗಳು ಕಿವಿಗೆ ಬೀಳುತ್ತಿದ್ದ ಸಮಯವದು. ಆಗತಾನೆ ಹುಲ್ಲು ಒಣಗಿ ನಿಂತಿತ್ತು. ಬೆಟ್ಟ-ಗುಡ್ಡಗಳಲ್ಲೆಲ್ಲ ಒಣಗಿದ ಹುಲ್ಲುಗಳು ತಮ್ಮ ನೈಸರ್ಗಿಕ ಹಸಿರು ಬಣ್ಣವನ್ನು ಕಳೆದುಕೊಂಡು ಗಾಳಿಗೆ ತೂಗಾಡುತ್ತ-ತೊನೆದಾಡುತ್ತ ನಿಂತಿದ್ದವು. ಹೀಗಾಗಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದವು. ಇಂತಹ ಸುದ್ದಿಗಳನ್ನೆಲ್ಲ ಕೇಳುತ್ತಲೇ ನಾಗರಾಜ ತನ್ನ ಕಪ್ಪನೆಯ ಪಲ್ಸರ್‌ ಬೈಕ್ ತೆಗೆದುಕೊಂಡು ಶಿರಸಿಗೆ ಹೋಗಿದ್ದ. ಶಿರಸಿಯಲ್ಲಿ ಕೆಲಸ ಮುಗಿಸುವ ವೇಳೆಗಾಗಲೇ ಬಾನಂಚಿನಲ್ಲಿ ಸೂರ್ಯ ಇಳಿದು ಕತ್ತಲು ಆವರಿಸುತ್ತಿತ್ತು.

ರಾತ್ರಿಯ ಊಟಕ್ಕೆ ಸರಿಯಾಗಿ ಮನೆಯನ್ನು ತಲುಪಿಕೊಳ್ಳಬೇಕು ಎಂದುಕೊಳ್ಳುತ್ತಲೇ ಬೈಕ್‌ ಹತ್ತಿದ್ದ. ಗಿಡಮಾವಿನಕಟ್ಟೆಯನ್ನು ದಾಟಿ ಯಡಳ್ಳಿ ತಲುಪಬೇಕು ಎನ್ನುವಷ್ಟರ ವೇಳೆಗೆ ಆಗಲೇ ಎಲ್ಲಿಂದಲೋ ತೀವ್ರ ಸ್ವರೂಪದ ಗಾಳಿ ಬೀಸಿತ್ತು. ಗಾಳಿ ಬೀಸಿದಂತೆಲ್ಲ ದಟ್ಟ ಕಪ್ಪನೆಯ ಮೋಡ ಬಾನನ್ನು ತುಂಬಿಕೊಂಡಿತು. ʻಅರೆ ಮಳೆ ಬರಬಹುದಾ?ʼ ಎಂದುಕೊಂಡವನು ಮಳೆ ಬರುವ ಮೊದಲು ಮನೆ ತಲುಪಬೇಕು ಎಂದುಕೊಂಡು ಗಾಡಿಯ ಎಕ್ಸಲರೇಟರ್‌ ತಿರುಪಿದ. ಕಾನಗೋಡು ದಾಟಿ ಕಬ್ನಳ್ಳಿ ಕತ್ರಿ ಬರುತ್ತಿದ್ದಂತೆ ಜಿಟಿ ಜಿಟಿಯಾಗಿ ಶುರು ಹಚ್ಚಿಕೊಂಡ ಮಳೆ ಧೋ ಎನ್ನಲು ಶುರುವಾಯ್ತು. ಗಾಡಿ ಓಡಿಸುತ್ತಿದ್ದ ನಾಗರಾಜ ಗಾಡಿ ನಿಲ್ಲಿಸಿ ಬಸ್‌ ನಿಲ್ದಾಣದ ಒಳಕ್ಕೆ ಹೋಗಬೇಕು ಎಂದುಕೊಳ್ಳುತ್ತಿದ್ದಂತೆಯೇ ʻಓಹೋ ಇದು ಕಬ್ನಳ್ಳಿ ಕತ್ರಿ.. ಕಬ್ನಳ್ಳಿ ಕತ್ರಿಯಲ್ಲಿ ಬಸ್‌ ಸ್ಟಾಪ್‌ ಇಲ್ಲ..ʼ ಎನ್ನುವುದು ನೆನಪಾಯ್ತು.. ʻತಥ್..‌ʼ ಎಂದು ತಲೆಕೊಡವಿ, ಮಳೆಯಲ್ಲಿಯೇ ಗಾಡಿ ಓಡಿಸಿದ.
ಅಡ್ಕಳ್ಳಿ ಕತ್ರಿ ತಲುಪುವ ವೇಳೆಗೆ ಮಳೆ ತನ್ನ ಅಬ್ಬರವನ್ನು ನಿಲ್ಲಿಸಿ ಶಾಂತವಾಗುವ ಲಕ್ಷಣ ತೋರಿಸಿತ್ತು. ಕಲ್ಮಟ್ಟಿ ಹಳ್ಳ ಹತ್ತಿರಬಂದಂತೆಲ್ಲ ಮಳೆ ಸಂಪೂರ್ಣ ನಿಂತಿತ್ತು. ಮರಗಳಿಂದ ಬೀಳುವ ಹನಿಯ ಚಿಟ ಪಟ ಮಾತ್ರ ಇತ್ತು. ಅಡ್ಕಳ್ಳಿ ತಲುಪಿದಾಗಲಂತೂ ಮಳೆಯ ಸುಳಿವೇ ಇಲ್ಲ. ಮಳೆಯೇ ಬಂದಿಲ್ಲ ಎಂಬಂತೆ ನೆಲ ಒಣಗಿಕೊಂಡಿತ್ತು. ʻಹಾಳಾದ ಮಳೆ.. ನನಗೆ ತೊಂದ್ರೆ ಕೊಡುವ ಸಲುವಾಗಿಯೇ ಬಂತು..ʼ ಎಂದು ಬೈದುಕೊಂಡು ಬೈಕ್‌ ವೇಗ ಹೆಚ್ಚಿಸಿದ. ನೋಡನೋಡುತ್ತಿದ್ದಂತೆಯೇ ಮಾರಿಗದ್ದೆ ಬ್ರಿಜ್‌ ಕಾಣಿಸಿತು. ಅಘನಾಶಿನಿ ತೀರದ ಮಾರಿಗದ್ದೆ ಹೇಳಿ-ಕೇಳಿ ತಂಪಿನ ಜಾಗ. ಮಳೆಯಲ್ಲಿ ಒದ್ದೆಯಾಗಿದ್ದ ನಾಗರಾಜನಿಗೆ ಮಾರೀಗದ್ದೆ ಬ್ರಿಜ್‌ ಬಳಿ ಬಂದಂತೆಲ್ಲ ಚಳಿ ಶುರುವಾಯಿತು. ನಿಧಾನವಾಗಿ ಹಲ್ಲು ಕಟಕಟಿಸಲು ಶುರುವಾಯಿತು. ಮೊದಲು ಮನೆ ತಲುಪಿಕೊಂಡರೆ ಸಾಕು ಎಂದುಕೊಂಡ. ಹಿತ್ಲಕೈ ದಾಟಿ, ಗುಡ್ಡೇತೋಟ ಕ್ರಾಸ್‌ ದಾಟಿ ಇನ್ನೇನು ಗೋಳಿಕಟ್ಟಾ ಶಾಲೆಯ ಬಳಿ ಬರಬೇಕು, ರಸ್ತೆ ಪಕ್ಕದಲ್ಲಿ ಬೆಂಕಿ ಕಾಣಿಸಿತು. ಯಡಳ್ಳಿಯಲ್ಲಿ ಧೋ ಮಳೆ.. ಇಲ್ಲಿ ನೋಡಿದರೆ ಮಳೆಯ ಸುಳಿವೇ ಇಲ್ಲ. ಜೊತೆಗೆ ಬೆಟ್ಟಕ್ಕೆ ಬೆಂಕಿ ಬಿದ್ದಿದೆ ಎಂದುಕೊಳ್ಳುತ್ತಲೇ ಮುಂದಕ್ಕೆ ಸಾಗುತ್ತಿದ್ದವನಿಗೆ ಚಳಿ ಇನ್ನಷ್ಟು ಜಾಸ್ತಿಯಾದಂತೆನಿಸಿತು.
ಯಾವುದಕ್ಕೂ ಇಲ್ಲಿ ಬೈಕ್‌ ನಿಲ್ಲಿಸಿ ಸ್ವಲ್ಪ ಹೊತ್ತು ಬೆಂಕಿಗೆ ಮೈ ಒಡ್ಡಿ, ಒದ್ದೆ ಮೈಯನ್ನು ಒಣಗಿಸಿಕೊಂಡು ಹೋಗೋಣ ಎಂದು ಬೆಂಕಿಯ ಹತ್ತಿರಕ್ಕೆ ಹೋದ. ಅಂಗಿ, ಪ್ಯಾಂಟ್‌ ಎಲ್ಲ ಒದ್ದೆಯಾಗಿತ್ತು. ತೊಟ್ಟಿದ್ದ ಅಂಗಿಯನ್ನು ತೆಗೆದು ಸರಿಯಾಗಿ ಹಿಂಡಿದ್ದಲ್ಲದೇ ಕೊಡವಿ ಬೆಂಕಿಗೆ ಒಡ್ಡಿದ. ಒದ್ದೆ ಮೈಗೆ ಬೆಂಕಿಯ ಧಗೆ ತಾಗಿ ಹಿತವೆನ್ನಿಸಿತು. ಬೆಟ್ಟಕ್ಕೆ ಬೆಂಕಿ ಬಿದ್ದಿದ್ದು ತನ್ನ ಪಾಲಿಗೆ ಒಳ್ಳೆಯದೇ ಆಯಿತು ಎಂದು ಖುಷಿಯಾದ. ಹಾಗೆಯೇ ನೋಡುತ್ತಿದ್ದವನಿಗೆ ಅಲ್ಲಿಯೇ ಕಟ್ಟಿಗೆ ರಾಶಿ ಕಾಣಿಸಿತು.. ಪಾಪ ಯಾರೋ ಕಟ್ಟಿಗೆ ಸಂಗ್ರಹ ಮಾಡಿಟ್ಟಿದ್ದರು. ಸಂಪೂರ್ಣ ಕಟ್ಟಿಗೆಯ ರಾಶಿಗೆ ಬೆಂಕಿ ಬಿದ್ದೋಗಿದೆ, ಕಟ್ಟಿಗೆ-ಕುಂಟೆ ಎಲ್ಲ ಧಗಧಗನೆ ಉರಿಯುತ್ತಿದೆ ಎಂದುಕೊಂಡ. ಕೈಗೊಂದು ಬಡಿಗೆ ಸಿಕ್ಕಿತು, ಆ ಕಟ್ಟಿಗೆಯ ರಾಶಿಯ ಮೇಲೆ ರಪ್ಪನೆ ಬಡಿದ. ಕಿಡಿ ಹಾರಿತು. ಕಟ್ಟಿಗೆಯ ರಾಶಿಯನ್ನು ಬಡಿಗೆಯಿಂದ ಆಕಡೆಗೊಮ್ಮೆ-ಈ ಕಡೆಗೊಮ್ಮೆ ತಿರುವಿ ಹಾಕಿದೆ. ಬಿಂಕಿಯ ಜ್ವಾಲೆ ಇನ್ನಷ್ಟು ಹೆಚ್ಚಿದಂತಾಗಿ ನಾಗರಾಜನಿಗೆ ಮತ್ತಷ್ಟು ಹಿತವೆನ್ನಿಸಿತು.
ಮೈ, ಬಟ್ಟೆ ಎಲ್ಲ ಸರಿಯಾಗಿ ಒಣಗಿದೆ ಎಂಬ ತೃಪ್ತಿ ಸಿಕ್ಕಂತೆಯೇ ಮನೆಗೆ ಹೊರಟ ನಾಗರಾಜ. ಮನೆಯನ್ನು ತಲುಪುತ್ತಿದ್ದಂತೆಯೇ ನಾಗರಾಜನಿಗೆ ಅಪ್ಪಯ್ಯ ಎದುರಾದ. ʻಎಂತದ ತಮಾ, ಮಳೆಲ್ಲಿ ನೆನಕಂಡು ಬಂದಾಂಗೆ ಕಾಣಿಸ್ತಲ..ʼ ಎಂದ. ʻಹೌದಾ.. ಸಾಯ್ಲಿ.. ಶಿರಸಿಂದ ಹೊರಡಕಿದ್ರೆ ಎಲ್ಲ ಸರಿ ಇತ್ತಾ.. ಯಡಳ್ಳಿ ಹತ್ರ ಬರಕಿದ್ರೆ ಮಳೆ ಬಂತು.. ಅಡ್ಕಳ್ಳಿ ಕತ್ರಿ ತನಕ ಮಳೆಲಿ ನೆನಕಂಡು ಬಂದೆ..ʼ ಎಂದ.
ʻಓಹೋ ಹೌದನಾ...ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ʻಗೋಳಿಕಟ್ಟಾ ಶಾಲೆ ಹತ್ರ ಬ್ಯಾಣಕ್ಕೆ ಬೆಂಕಿ ಬಿದ್ದಾಂಗ್‌ ಕಾಣಸ್ತು.. ಅಲ್ಲಿ ನಿಂತಕಂಡು ಮೈ ಒಣಗಿಸಿಕೊಂಡು ಬಂದೆ..ʼ ಎಂದ ನಾಗರಾಜ..
ʻಆಂ? ಎಲ್ಲಿ? ಗೋಳಿಕಟ್ಟಾ ಶಾಲೆ ಹತ್ರ?ʼ ಅಪ್ಪಯ್ಯ ಕೇಳಿದ್ದ..
ʻಹೌದಾ.. ಯಾರದ್ದೋ ಮನೆ ಕಟ್ಟಿಗೆ ರಾಶಿಗೆ ಬೆಂಕಿ ಬಿದ್ದೋಜು..ʼ ಎಂದ
ಹೌಹಾರಿದ ಅಪ್ಪಯ್ಯ ʻಯೇ.. ಏನಂದೆ? ಮಾರಾಯ್ನೇ.. ಆ ಬೆಂಕಿಯಲ್ಲಿ ಮೈ ಕಾಯಿಸಿಕೊಂಡು ಬಂದ್ಯಾ? ಥೋ... ಮೊದಲು ಸ್ನಾನ ಮಾಡು...ʼ ಎಂದ
ʻಎಂತಕ್ಕ? ಎಂತ ಆತಾ?ʼ
ʻಮಾರಾಯ್ನೇ ಆ ಊರಲ್ಲಿ ಒಬ್ಬವ ಸತ್ತೋಜ.. ಅವ್ನ ಸುಟ್ಟಿದ್ದಾಗಿತ್ತು ಆ ಬೆಂಕಿ. ಇವತ್ತು ಮದ್ಯಾಹ್ನ ಅಷ್ಟೇ ಸುಟ್ಟಿಕ್‌ ಬಂದಿದ್ದು ಅದು. ನಾನೂ ಹೋಗಿದ್ದಿ.. ನೀನು ಆ ಚಿತೆಯ ಬೆಂಕಿನ ಕಾಯ್ಸಿಕೊಂಡು ಬಂದೆಯಾ?..ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ನಾಗರಾಜನ ಬೆನ್ನಲ್ಲಿ ಛಳಕ್‌ ಅಂದಂತಾಯ್ತು.. ಬೆನ್ನ ಹುರಿಯ ಆಳದಲ್ಲಿ ಹುಟ್ಟಿಕೊಂಡ ಚಳಿ ನಿಧಾನವಾಗಿ ಮಯ್ಯನ್ನೆಲ್ಲ ಆವರಿಸಿತು. ಚಿತೆಯ ಬೆಂಕಿಯ ಬಿಸಿಯಂತೆ ಮೈ ಕೂಡ ಕಾವೇರತೊಡಗಿತು. ಕಣ್ಣು ಕತ್ತಲಿಟ್ಟುಕೊಂಡಂತಾಯಿತು. ನಾಗರಾಜನಿಗೆ ಮುಂದೇನಾಯಿತು ಎನ್ನುವುದೇ ಗೊತ್ತಾಗಲಿಲ್ಲ..!
(ಸತ್ಯ ಘಟನೆ ಆಧಾರಿತ)

Thursday, February 6, 2025

Ghost Writer ಭಾಗ -1


Chase the hunter


-----

A ghostwriter is a professional writer hired to create content on behalf of someone else, without receiving public credit for their work. Ghostwriters are commonly used for **books, articles, speeches, blog posts, and even music lyrics**. They help clients—such as celebrities, politicians, business executives, and experts—articulate their ideas in a polished and engaging manner.

Ghostwriting involves **deep research, adapting to the client’s voice, and maintaining confidentiality**. While the original author gets the credit, the ghostwriter is compensated for their work, often through a flat fee or royalties.

This profession is crucial in publishing, journalism, and content marketing, allowing busy individuals to share their insights without dedicating time to writing.

****

ಎರಡು ದಿನಗಳ ಹಿಂದೆ ಕೊರಿಯರ್‌ ಮೂಲಕ ಬಂದಿದ್ದ ಆ ಪತ್ರವನ್ನು ತೆರೆದು ಯೋಚಿಸುತ್ತ ಕುಳಿತಿದ್ದ ಡಿಟೆಕ್ಟಿವ್‌ ವಿಕ್ರಮ್ ಕುಮಾರ್!
ಎರಡು ದಿನಗಳ ಹಿಂದೆ ಕೊರಿಯರ್‌ ಒಂದು ಆತನಿಗೆ ಬಂದಿತ್ತು. ಅದರಲ್ಲಿ ಒಂದು ಪತ್ರವಿತ್ತು, ಜೊತೆಗೆ ೫೦ ಸಾವಿರ ರೂಪಾಯಿಗಳ ಹಣ ಕೂಡ ಇತ್ತು.
ಪತ್ರದಲ್ಲಿ ಒಬ್ಬ ವ್ಯಕ್ತಿಯ ಹೆಸರಿತ್ತು. ಆತನನ್ನು ಹುಡುಕಿಕೊಂಡು ಬರುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪತ್ರದ ಕೊನೆಯಲ್ಲಿ ಹುಡುಕಿಕೊಂಡು ಬರಬೇಕಿರುವ ವ್ಯಕ್ತಿ ಒಬ್ಬ ಘೋಸ್ಟ್‌ ರೈಟರ್!‌ ಈತನನ್ನು ಬಹಳಷ್ಟು ಜನರು ಹುಡುಕುತ್ತಿದ್ದಾರೆ. ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ, ಸಿನಿಮಾ ಜಗತ್ತು ಸೇರಿದಂತೆ ಹಲವು ವಿಭಾಗಗಳ ಪ್ರಮುಖರು ಈತನ ಬೆನ್ನು ಹತ್ತಿದ್ದಾರೆ. ಯಾರ ಕೈಗೂ ಸಿಗುತ್ತಿಲ್ಲ! ಆತನ ಬರಹಗಳು ಮಾತ್ರ ವೆಬ್‌ ಜಗತ್ತಿನಲ್ಲಿ ಪಬ್ಲಿಷ್‌ ಆಗುತ್ತಿದೆ. ಪಬ್ಲಿಷ್‌ ಆದ ನಂತರ ಸಾಕಷ್ಟು ವೈರಲ್‌ ಕೂಡ ಆಗುತ್ತಿದೆ. ಹಲವು ಸಾರಿ ಸಮಾಜದಲ್ಲಿ ಅಲ್ಲೋಲ-ಕಲ್ಲೋಲವನ್ನೂ ಸೃಷ್ಟಿ ಮಾಡಿದ ನಿದರ್ಶನ ಇದೆ.
ಆತನನ್ನು ಹುಡುಕಿಕೊಂಡು ಬರುವ ಮಹತ್ತರ ಜವಾಬ್ದಾರಿ ನಿನಗೆ ವಹಿಸಲಾಗುತ್ತಿದೆ. ಆತನನ್ನು ಹುಡುಕುತ್ತಿರುವವರೆಲ್ಲರ ಕಣ್ಣುತಪ್ಪಿಸಿ, ಅತ್ಯಂತ ಗೌಪ್ಯವಾಗಿ ಕಾರ್ಯ ನಿರ್ವಹಿಸಬೇಕು! ಈ ಪತ್ರದ ಜೊತೆ ಇರುವ ೫೦ ಸಾವಿರ ರೂಪಾಯಿ ಅಡ್ವಾನ್ಸ್!‌ ಕಾಲಕಾಲಕ್ಕೆ ಕೊರಿಯರ್‌ ಬರುತ್ತಿರುತ್ತದೆ ಹಾಗೂ ಹಣ ಸಂದಾಯ ಆಗುತ್ತಿರುತ್ತದೆ! ಪೂರ್ತಿ ಕೆಲಸ ಮುಗಿದ ನಂತರ ೧ ಕೋಟಿ ರೂಪಾಯಿ ಮೊತ್ತ ನೀಡಲಾಗುತ್ತದೆ! ಆತನ ಹೆಸರಿನಲ್ಲಿ ಪಬ್ಲಿಷ್‌ ಆದ ಬರಹಗಳ ಪೋಟೋ ಕಾಪಿ ಹಾಗೂ ಪ್ರಿಂಟೆಡ್‌ ಕಾಪಿಗಳು ಇಲ್ಲಿವೆ. ಕೂಡಲೇ ಕಾರ್ಯಪ್ರವೃತ್ತ ಆಗಬೇಕು! ಈ ಕೆಲಸ ಮಾಡೋದಿಲ್ಲ ಎನ್ನುವ ಆಯ್ಕೆ ನಿಮ್ಮೆದುರು ಇಲ್ಲವೇ ಇಲ್ಲ! ಒಪ್ಪಿಕೊಳ್ಳಲೇಬೇಕು ಇಲ್ಲವಾದಲ್ಲಿ ಮುಂದಿನ ಪರಿಣಾಮಗಳಿಗೆ ನೀವೇ ಜವಾಬ್ದಾರಿ ಎಂದು ಪತ್ರದಲ್ಲಿ ಬರೆಯಲಾಗಿತ್ತು!

ಕೆಲಸವನ್ನು ನನಗೆ ವಹಿಸಿದ್ದಾರೋ ಅಥವಾ ಆರ್ಡರ್‌ ಮಾಡಿದ್ದಾರೋ? ಎಂದುಕೊಳ್ಳುತ್ತಲೇ ಘೋಸ್ಟ್‌ ರೈಟರ್‌ ಕುರಿತು ಮಾಹಿತಿ ಕಲೆ ಹಾಕುವತ್ತ ವಿಕ್ರಮ್‌ ಕುಮಾರ್‌ ಕಾರ್ಯಪ್ರವೃತ್ತನಾಗಿದ್ದ. ಘೋಸ್ಟ್‌ ರೈಟರ್‌ ಪಬ್ಲಿಷ್‌ ಮಾಡುತ್ತಿದ್ದ ವೆಬ್‌ ತಾಣಗಳನ್ನು ಸರ್ಚ್‌ ಮಾಡಲು ಮುಂದಾಗಿದ್ದ.

ಅನಾಮಧೇಯ ಕೊರಿಯರ್‌ ಬಂದು ತಲುಪಿದ ಎರಡು ದಿನಗಳ ವೇಳೆಗೆ ʻಘೋಸ್ಟ್‌ ರೈಟರ್‌ ಕುರಿತು ಹಲವು ಸಂಗತಿಗಳ ವಿಕ್ರಮ್‌ ಕುಮಾರ್‌ ಗೆ ಗೊತ್ತಾಗಿದ್ದವು. ಆತನನ್ನು ಹುಡುಕಲು ಹೊರಡುವುದೊಂದೇ ಬಾಕಿ ಇತ್ತು.

ತಲೆಯ ತುಂಬೆಲ್ಲ ಘೋಸ್ಟ್‌ ರೈಟರ್‌ನನ್ನು ತುಂಬಿಕೊಂಡು, ಯಾವ ಕಡೆಯಿಂದ ತನ್ನ ಪತ್ತೆದಾರಿಕೆ ಕಾರ್ಯ ಶುರುಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದಾಗಲೇ ತನ್ನ ಮನೆ ಕಂ ಕಚೇರಿಯ ಕಾಲಿಂಗ್‌ ಬೆಲ್‌ ಸದ್ದು ಮಾಡಿತ್ತು.

ಬಾಗಿಲು ತೆರೆದು ನೋಡಿದರೆ ಬಾಗಿಲಲ್ಲಿ ಕೊರಿಯರ್‌ ಬಾಯ್‌ ನಿಂತಿದ್ದ! ಇನ್ನೊಂದು ಕೊರಿಯರ್‌ ಬಂದಿತ್ತು!
ಕೊರಿಯರ್‌ ಪಡೆದು ಫ್ರಂ ಅಡ್ರೆಸ್‌ ನೋಡಿದರೆ ʻಬೆಂಗಳೂರುʻ ಎಂದು ಬರೆದಿತ್ತು. ಕೊರಿಯರ್‌ ಬಾಅಯ್‌ ವಾಪಾಸ್‌ ತೆರಳಿದ ನಂತರ ಮನೆಯೊಳಗೆ ಬಂದು ವಿಕ್ರಮ್‌ ಕುಮಾರ್‌ ಆ ಕೊರಿಯರ್‌ ತೆರೆದ.
ಅದರೊಳಕ್ಕೆ ಇನ್ನಷ್ಟು ದುಡ್ಡು, ಒಂದಷ್ಟು ಮಾಹಿತಿ ಹಾಗೂ ಮತ್ತೊಂದು ಪತ್ರ ಇತ್ತು!

ಯಾರೋ ದೊಡ್ಡ ವ್ಯಕ್ತಿ, ಬಹಳ ಪ್ರಭಾವಿ, ಸಾಕಷ್ಟು ಕನೆಕ್ಷನ್‌ ಇರುವಾತನೇ ಈ ಕೆಲಸವನ್ನು ತನಗೆ ವಹಿಸುತ್ತಿದ್ದಾನೆ. ಘೋಸ್ಟ್‌ ರೈಟರ್‌ ಹುಡುಕುವ ಕಾರ್ಯದಲ್ಲಿ ತಾನು ಇನ್ನಷ್ಟು ಸೀರಿಯಸ್‌ ಆಗಬೇಕು ಎಂದುಕೊಳ್ಳುತ್ತಲೇ ವಿಕ್ರಮ್‌ ಕುಮಾರ್‌ ಪತ್ರವನ್ನು ಓದತೊಡಗಿದ!

ಓದುತ್ತಿದ್ದಂತೆಯೇ ನಿಧಾನವಾಗಿ ಬೆವರತೊಡಗಿದ

(ಮುಂದುವರಿಯುತ್ತದೆ)

Tuesday, January 14, 2025

ಮಾಳ ಹಾಗೂ ಹುಲಿ


ಬರಬಳ್ಳಿಯ ಗುಡ್ಡೆಮನೆ ಹೆಸರಿಗೆ ತಕ್ಕಂತೆ ಗುಡ್ಡದ ಮೇಲ್ಭಾಗದಲ್ಲಿರುವ ಮನೆ. ಅಲ್ಲಿಂದ ಕೂಗಳತೆ ದೂರದಲ್ಲಿ ವಾಸಂತಿ ಕೆರೆ. ಅದರ ಸುತ್ತಮುತ್ತಲೆಲ್ಲ ದಟ್ಟ ಕಾನನ. ಗುಡ್ಡೆಮನೆಯ ಜಮೀನು ವಾಸಂತಿ ಕೆರೆಯ ಕೆಳಭಾಗದಲ್ಲೇ ಇತ್ತು.


ವಾಸಂತಿ ಕೆರೆಯಿಂದ ಇನ್ನೊಂದು ದಿಕ್ಕಿನಲ್ಲಿ ಕೊಂಚ ದೂರದಲ್ಲಿಯೇ ಕಬ್ಬಿನ ಗದ್ದೆ ಮಾಡಲು ವಿಶ್ವೇಶ್ವರ ಮಾವ ಮುಂದಾಗಿದ್ದ. ಕಬ್ಬಿನ ಗದ್ದೆಗಾಗಿ ಬೀಜ ಹಾಕಿ, ಸರಿಯಾಗಿ ಮಣ್ಣು ಹಾಕಿ ಬಹುತೇಕ ಕೆಲಸ ಮುಗಿಸಿದ್ದ.

ಕಬ್ಬಿನಗದ್ದೆಗೆ ಹಂದಿಗಳ ಕಾಟ ವಿಪರೀತ. ಹಂದಿಗಳ ಗ್ವಾಲೆ ಕಬ್ಬಿನ ಗದ್ದೆಗೆ ದಾಳಿ ಕೊಟ್ಟರೆ ಮುಗಿದೇ ಹೋಯ್ತು ಸಂಪೂರ್ಣ ತಿಂದು ಹಾಳು ಮಾಡಿಬಿಡುತ್ತವೆ. ಹಂದಿಗಳಿಂದ ಕಬ್ಬಿನಗದ್ದೆ ರಕ್ಷಣೆಯೇ ದೊಡ್ಡ ಕೆಲಸ. ಕಬ್ಬಿನಗದ್ದೆಯನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕಾಗಿಯೇ ವಿಶ್ವೇಶ್ವರ ಮಾವ ಮಾಳವೊಂದನ್ನು ಕಟ್ಟಿ ಅದರ ಮೇಲೆ ರಾತ್ರಿ ಉಳಿದು ಕಬ್ಬಿನಗದ್ದೆಯನ್ನು ಕಾಯುವ ಕೆಲಸ ಮಾಡುತ್ತಿದ್ದ. ಹಂದಿಗಳು ಬಂದರೆ ಛೂ ಹಾಕಿ ಕೂಗಿ ಅವುಗಳನ್ನು ಓಡಿಸುವ ಕಾರ್ಯ ಮಾಡುತ್ತಿದ್ದ.

ಆ ಮಳೆಗಾಲಕ್ಕೂ ಪೂರ್ವದಲ್ಲಿ ಅಮ್ಮ ತನ್ನ ಮೊದಲ ಹೆರಿಗೆಗೆ ತವರಿಗೆ ಬಂದಿದ್ದಳು. ಮಳೆಗಾಲ ಅದಾಗ ತಾನೇ ಕಳೆದಿತ್ತು. ಇನ್ನೇನು ಚಳಿಯೊಡೆಯುವ ಸಮಯ. ಅಕ್ಟೋಬರ್‌ ಮೊದಲ ವಾರವಿರಬೇಕು. ಎಂದಿನಂತೆ ಲಾಟೀನು ಹಿಡಿದು ವಿಶ್ವೇಶ್ವರ ಮಾವ ಮಾಳಕ್ಕೆ ಹೋಗಿದ್ದ. ಮನೆಯಲ್ಲಿ ಅಜ್ಜಿ ಹಾಗೂ ಅಮ್ಮ ಇಬ್ಬರೇ ಉಳಿದಿದ್ದರು. ಮಾಳಕ್ಕೆ ಹೋಗುವಾಗ ಲಾಟೀನನ್ನು ಹಿಡಿದು ಹೋಗಿದ್ದ ಮಾವ ಮಾಳದ ಕೆಳಗೆ ಸಣ್ಣದಾಗಿ ಬೆಂಕಿಯನ್ನು ಹಾಕಿ, ಮಾಳವನ್ನು ಏರಿ, ಮಾಳಕ್ಕೆ ಲಾಟೀನನ್ನು ನೇತುಹಾಕಿ ಮಲಗಿದ್ದ. ಚಳಿ ತೀವ್ರವಾಗಿಯೇ ಬೀಳತೊಡಗಿತ್ತು.

ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮಾವನಿಗೆ ಎಚ್ಚರವಾಯಿತು. ಇಡಿಯ ಮಾಳವೇ ಅಲ್ಲಾಡುತ್ತಿದ್ದ ಅನುಭವ. ಅರೇ ಭೂಮಿ ಕಂಪಿಸುತ್ತಿದೆಯೇ? ಇದೇನಾಗುತ್ತಿದೆ? ಮಾಳವೇಕೆ ಅಲ್ಲಾಡುತ್ತಿದೆ ಎಂಬ ಭಾವನೆ ಮನದಲ್ಲಿ ಮೂಡಿತ್ತು. ನಿಧಾನವಾಗಿ ಮಾಳದ ಮೇಲಿನಿಂದ ಕೆಳಕ್ಕೆ ಹಣಕಿದ. ಕೆಳಗೆ ನೋಡಿದವನೇ ಒಮ್ಮೆಲೆ ಹೌಹಾರಿದ. ಮಾಳದ ಮೇಲೆ ಕುಳಿತವನು ಒಮ್ಮೆಲೆ ಬೆವರಲಾರಂಭಿಸಿದ್ದ. ಆತನ ಜೀವ ಭಾಯಿಗೆ ಬಂದಂತಾಗಿತ್ತು. ಕೆಳಗಡೆ ಎಂಟಡಿ ಉದ್ದದ ದೈತ್ಯ ಪಟ್ಟೆಹುಲಿ ಮಾಳದ ಕಂಬಕ್ಕೆ ಶೇಡಿ ನಿಂತಿತ್ತು. ಕೆಳಗಡೆ ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಯನ್ನೇ ನೋಡುತ್ತಿತ್ತು.

ಉದ್ದದ ಪಟ್ಟೆಹುಲಿ ನೋಡಿದ ತಕ್ಷಣ ಮಾವನ ಮಾತು ಬಂದಾಗಿತ್ತು. ಕೂಗಿಕೊಳ್ಳಲು ಯತ್ನಿಸಿದರೂ ಬಾಯಿಂದ ಧ್ವನಿಯೇ ಹೊರಬರುತ್ತಿಲ್ಲ. ಎಂಟಡಿ ಎತ್ತರದ ಹುಲಿ ಜಿಗಿದರೆ ಸಾಕು ತಾನು ಅದರ ಬಾಯಿಗೆ ಆಹಾರವಾಗಬಹುದು, ಅಥವಾ ಮಾಳದ ಕಂಬಕ್ಕೆ ಸ್ವಲ್ಪವೇ ಗಟ್ಟಿಯಾಗಿ ಶೇಡಿದರೆ ಸಾಕು ಮಾಳವೇ ಉದುರಿ ಬೀಳಬಹುದು ʻಬರಬಳ್ಳಿ ಗಣಪ ಕಾಪಾಡಪ್ಪಾ..ʼ ಎಂದು ಮನಸ್ಸಿನಲ್ಲಿ ಬೇಡಿಕೊಂಡ. ಕೊರೆಯುವ ಚಳಿಯಿದ್ದರೂ ಯಾವಾಗಲೋ ಅದು ಹಾರಿಹೋದಂತಾಗಿತ್ತು. ಮೈ-ಮನಸ್ಸುಗಳಲ್ಲೆಲ್ಲ ಭಯದ ಬೆವರು ಕಿತ್ತು ಬರುತ್ತಿತ್ತು. ಒಂದು ಸಾರಿ ಜೀವ ಉಳಿದರೆ ಸಾಕು, ಮತ್ತೆ ಕಬ್ಬಿನ ಗದ್ದೆಯೂ ಬೇಡ, ಮಾಳದ ಸಹವಾಸವೂ ಬೇಡ ಎಂದುಕೊಂಡ.

ಮನೆಯ ದಿಕ್ಕಿಗೆ ಮುಖ ಮಾಡಿ ಮಾಳದಿಂದಲೇ ನೋಡಿದವನಿಗೆ ಮಿಣುಕು ಬೆಳಕು ಕಾಣಿಸಿದಂತಾಯಿತು. ಒಮ್ಮೆ ಗಟ್ಟಿಯಾಗಿ ಕೂಗಿಬಿಡಲೇ? ಕೂಗಿದರೆ ಅಬ್ಬೆಯಾದರೂ, ತಂಗಿ ಗಂಗುವಾದರೂ ಬರಬಹುದೇ? ಎಂದುಕೊಂಡ. ತಾನು ಕೂಗಿ, ಅವರ ಇರವನ್ನು ಅರಿತ ಹುಲಿ ಅತ್ತ ಕಡೆ ಧಾವಿಸಿದರೆ? ಅಬ್ಬೆಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ, ತಂಗಿ ತುಂಬಿದ ಗರ್ಭಿಣಿ. ಹುಲಿ ದಾಳಿ ಮಾಡುವುದು ಹಾಗಿರಲಿ, ಒಮ್ಮೆ ಗಟ್ಟಿಯಾಗಿ ಘರ್ಜಿಸಿ ಏನಾದರೂ ಅನಾಹುತ ಆದರೆ ಏನು ಮಾಡುವುದು ಭಗವಂತಾ? ಎಂದುಕೊಂಡ.

ಆದರೂ ಧೈರ್ಯ ಮಾಡಿ ಅಬ್ಬೆಯನ್ನೂ- ಗಂಗುವನ್ನೂ ಕರೆದ. ಮನೆಯ ಕಡೆಯಿಂದ ಮಾರುತ್ತರ ಬರಲಿಲ್ಲ. ಆದರೆ ಮಾಳದ ಕೆಳಗಿದ್ದ ಹುಲಿ ಮಾವನ ಕೂಗಿಗೆ ಗಮನ ನೀಡಿಲ್ಲದಿರುವುದು ಸಮಾಧಾನ ತಂದಿತ್ತು. ಮತ್ತೆ ಕರೆದ ಆಗಲೂ ನಿಶ್ಯಬ್ಧ. ಹುಲಿಯೂ ಆರಾಮಾಗಿ ನಿಂತಿತ್ತು. ಅದಾದ ನಂತರ ಧೈರ್ಯದಿಂದ ಕೂಗಿದ. ಆರೆಂಟು ಸಾರಿ ಕೂಗಿ ಕೂಗಿ ಕರೆದರೂ ಮನೆಯ ಕಡೆಯಿಂದ ಉತ್ತರ ಬರದೇ ಇದ್ದಾಗ ನಿಟ್ಟುಸಿರು ಬಿಟ್ಟ ವಿಶ್ವೇಶ್ವರ ಮಾವ ಹುಲಿಯಿಂದ ಪಾರಾಗುವುದು ಹೇಗೆ ಎಂದು ಆಲೋಚಿಸಲು ಶುರುಮಾಡಿದ.

ಕೈಯಲ್ಲಿ ಕುಡಗೋಲು ಇತ್ತಾದರೂ ದೈತ್ಯ ವ್ಯಾಘ್ರನ ಮೇಲೆ ದಾಳಿ ಮಾಡಿ, ಹುಲಿಯನ್ನು ಕೊಲ್ಲುವುದು ಹಾಗೂ ತಾನು ಬದುಕುವುದು ಸಾಧ್ಯವೇ? ಹುಲಿಯ ಆಯದ ಜಾಗಕ್ಕೆ ಪೆಟ್ಟು ಬೀಳಬೇಕು, ಒಂದೇ ಹೊಡೆತಕ್ಕೆ ಹುಲಿ ಸತ್ತು ಬೀಳಬೇಕು, ಅಷ್ಟಾದಾಗ ಮಾತ್ರ ತಾನು ಜೀವ ಸಹಿತ ಇರಲು ಸಾಧ್ಯ. ಹೊಡೆತ ತಪ್ಪಿದರೆ? ಹುಲಿಗೆ ಗಾಯವಾಗಿಬಿಟ್ಟರೆ? ಮುಗಿಯಿತಲ್ಲ ಕಥೆ ಎಂದುಕೊಂಡ. ಕುಡಗೋಲಿನಿಂದ ದಾಳಿ ಮಾಡುವ ಯೋಜನೆ ಕೈಬಿಟ್ಟ.

ಅಷ್ಟರಲ್ಲಿ ಆರಾಧ್ಯದೈವ ಬಲಮುರಿ ಗಣಪತಿಯೇ ದಾರಿ ತೋರಿಸಿದರೆ ಮಾಳದ ಮಾಡಿಗೆ ನೇತು ಹಾಕಿದ್ದ ಕಂದೀಲು ನೆನಪಾಯಿತು. ಮಾಳ ಅಲ್ಲಾಡಿದಂತೆಲ್ಲ ಕಂದೀಲು ಕೂಡ ಹೊಯ್ದಾಡುತ್ತಿತ್ತಾದರೂ, ಅದರಲ್ಲಿ ಸಣ್ಣದಾಗಿ ಉರಿಯುತ್ತಿದ್ದ ಬೆಳಕು ಆರಿರಲಿಲ್ಲ. ಕೂಡಲೇ ಲಾಟೀನನ್ನು ಹಿಡಿದ. ಅತ್ತ ಇತ್ತ ನೋಡಿದವನಿಗೆ ಮಾಳದ ಮಾಡಿಗೆ ಹಾಕಿದ್ದ ಮಡ್ಲು ಹೆಡ (ತೆಂಗಿನ ಟೊಂಗೆ) ಕಾಣಿಸಿತು. ಅದನ್ನು ಎಳೆದು ಬೆಂಕಿ ಕೊಟ್ಟೇ ಬಿಟ್ಟ. ಒಮ್ಮೆಲೆ ದೊಡ್ಡ ಸೂಡಿಯಷ್ಟು ದೊಡ್ಡದಾದ ಬೆಂಕಿ ಕಾಣಿಸಿಕೊಂಡಿತು. ಅದನ್ನು ಸೀದಾ ಮಾಳದ ಮೇಲೆ ಇಟ್ಟ. ಬೆಂಕಿ ಹೊತ್ತಿಕೊಂಡಂತೆಯೇ ಮತ್ತಷ್ಟು ಮಡ್ಲನ್ನು ತೆಗೆದು ಉರಿ ಜ್ವಾಲೆಯನ್ನು ದೊಡ್ಡದು ಮಾಡಿದ. ಬೆಂಕಿ ದೊಡ್ಡದಾದಂತೆಲ್ಲ ಮಾಳದ ಅಡಿಯಲ್ಲಿದ್ದ ಹುಲಿ ಬಿತ್ತು. ಎಲ್ಲೋ ಅದರ ಮೈಮೇಲೆ ಕೂಡ ಕಿಡಿ ಬಿದ್ದಿರಬೇಕು. ಸಣ್ಣದಾಗಿ ಮುಲುಕಿ ಅಲ್ಲಿಂದ ಕಾಲ್ಕಿತ್ತಿತು. ಮಾವ ನಿರಾಳನಾಗಿದ್ದ. ಆದರೆ ಬೆಂಕಿಯನ್ನು ನಂದಿಸುವ ಧೈರ್ಯ ಆತನಿಗೆ ಆಗಿರಲಿಲ್ಲ. ಮಾಳಕ್ಕೆ ಹಾಕಿದ್ದ ತೆಂಗಿನ ಗರಿ ಖಾಲಿಯಾಗುವವರೆಗೂ ಉರಿ ಒಟ್ಟುತ್ತಲೇ ಇದ್ದ.

ಮೂಡಣದಲ್ಲಿ ನೇಸರ ಮೂಡುವ ಹೊತ್ತಾಗುವ ವರೆಗೂ ಬೆಂಕಿಯನ್ನು ಹಾಕುತ್ತಲೇ ಇದ್ದ ಮಾವ. ಕಣ್ಣು ಕೆಂಪಗಾಗಿತ್ತು. ಕೂದಲು ಕೆದರಿ ಹೋಗಿತ್ತು. ಮಾಳದ ಮಾಡಿನ ತೆಂಗಿನ ಗರಿಗಳೆಲ್ಲ ಸಂಪೂರ್ಣ ಖಾಲಿಯಾಗಿತ್ತು. ಇನ್ನು ಮಾಳದ ಕಡೆಗೆ ಬರಲಾರೆ ಎಂದು ದೃಢ ನಿರ್ಧಾರ ಮಾಡಿ ಮಾಳ ಇಳಿದು ಮನೆಗೆ ಹೋಗಿ ಅಮ್ಮಕ್ಕಜ್ಜಿಗೂ ಗಂಗುವಿಗೂ ನಡೆದ ವಿಷಯವನ್ನು ಹೇಳಿದ. ಅವರಿಬ್ಬರೂ ನಡೆದಿದ್ದನ್ನು ಕೇಳಿ ನಡುಗಿ ಹೋಗಿದ್ದರು. ಸಧ್ಯ ಜೀವ ಉಳಿಯಿತಲ್ಲ ಎಂಬ ಸಮಾಧಾನ ಅವರದ್ದಾಗಿತ್ತು. ʻಮೊದ್ಲು ಮೊಠಕ್ಕೆ ಹೋಗಿ ದೇವರಿಗೆ ನಮಸ್ಕಾರ ಮಾಡಿ ಬಾ..ʼ ಅಮ್ಮಕ್ಕಜ್ಜಿ ಹೇಳಿದ್ದರು. ಮಾವ ಸ್ನಾನ ಮುಗಿಸಿ ಗಣಪನ ದೇಗುಲದ ಕಡೆಗೆ ಮುಖ ಮಾಡಿದ್ದ.