Tuesday, July 12, 2016

ಬೆಂಗಾಲಿ ಸುಂದರಿ -42

ಮೊದಲೊಂದು ಮಾತು :
ಬ್ಲಾಗ್ ನಲ್ಲಿ ಬರೆದ ಕಾದಂಬರಿ ಬೆಂಗಾಲಿ ಸುಂದರಿ. ಈಗಾಗಲೇ 41 ಭಾಗವನ್ನು ಬರೆದು ಕಾದಂಬರಿಯನ್ನು ಮುಕ್ತಾಯ ಮಾಡಿದ್ದೆ. ಆದರೆ ಕಾದಂಬರಿಯನ್ನು ಮುಕ್ತಾಯ ಮಾಡಿದ ನಂತರ ನನಗೆ ಅನೇಕ ಜನರ ಪೋನ್ ಗಳು ಬಂದವು. ಕಾದಂಬರಿಯನ್ನು ಇನ್ನೂ ಮೂರ್ನಾಲ್ಕು ಕಂತುಗಳ ವರೆಗೆ ಮುಂದುವರೆಸಬಹುದು ಎಂದರು. ಕ್ಲೈಮ್ಯಾಕ್ಸ್ ಸರಿಯಿಲ್ಲ ಎಂದರು. ಮತ್ತೆ ಕೆಲವು ಮಿತ್ರರು ಬಾಂಗ್ಲಾ ಗಡಿಯನ್ನು ದಾಟಿ ಬಂದ ನಂತರ ಮಧುಮಿತಾ ಹಾಗೂ  ವಿನಯಚಂದ್ರ ಮರಳಿ ಉತ್ತರ ಕನ್ನಡದ ಹಳ್ಳಿಗೆ ಹೇಗೆ ಬಂದರು? ಉತ್ತರ ಕನ್ನಡದ ಹವ್ಯಕರ ಮನೆ ಪಕ್ಕದ ದೇಶದ, ಮುಸ್ಲಿಂ ಬಾಹುಳ್ಯದ ನಾಡಿನಿಂದ ಬಂದ ಹುಡುಗಿಯನ್ನು ಹೇಗೆ ಮನೆಯೊಳಕ್ಕೆ ಬಿಟ್ಟುಕೊಂಡಿತು ಎನ್ನುವುದರ ಬಗ್ಗೆ ಬರೆಯಬೇಕಿತ್ತು ಎಂದೂ ಸಲಹೆ ನೀಡಿದ್ದರು. ಕೆಲವರು ಸಾತ್ವಿಕ ಕೋಪವನ್ನೂ ತೋರ್ಪಡಿಸಿದ್ದರು. ಕಾದಂಬರಿಯ ಪುಸ್ತಕವನ್ನು ಮುದ್ರಿಸಿ ಎಂದಿದ್ದರು. ಅದಕ್ಕೆ ಸಹಾಯ ಮಾಡುವುದಾಗಿಯೂ ತಿಳಿಸಿದ್ದರು. ಎಲ್ಲರ ಪ್ರೀತಿಗೆ ಕಟ್ಟುಬಿದ್ದು ಕನಿಷ್ಟ ಮೂರು ಅಥವಾ ನಾಲ್ಕು ಕಂತುಗಳ ವರೆಗೆ ಬೆಂಗಾಲಿ ಸುಂದರಿ ಕಾದಂಬರಿಯನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿದ್ದೇನೆ. 2014ರ ನವೆಂಬರ್ ತಿಂಗಳಿನಲ್ಲಿಯೇ ಮುಕ್ತಾಯ ಎಂದು ಬರೆದಿದ್ದ ಕಾದಂಬರಿಯನ್ನು ಒಂದೂವರೆ ವರ್ಷದ ತರುವಾಯ ಮತ್ತೆ ಬರೆಯುತ್ತಿದ್ದೇನೆ. ಮುಂದುವರಿಸುತ್ತಿದ್ದೇನೆ. ಓದಿ, ಅಭಿಪ್ರಾಯಿಸಿ...

---------------

                  ವಿನಯಚಂದ್ರನ ಬಳಿ ಒಬ್ಬರಾದ ನಂತರ ಒಬ್ಬರು ಸೈನಿಕರು, ಕಮಾಂಡರುಗಳು ಬಂದು ವಿಚಾರಣೆ ನಡೆಸುತ್ತಲೇ ಇದ್ದರು. ತಕ್ಷಣ ವಿನಯಚಂದ್ರನಿಗೆ ಸೈನ್ಯದಲ್ಲೇ ಇದ್ದ ಗೆಳೆಯ ನಾಗರಾಜು ನೆನಪಾಗಿದ್ದ. ಡಿಗ್ರಿ ಓದುತ್ತಿದ್ದ ಸಮಯದಲ್ಲಿಯೇ ಸೈನ್ಯದ ಕನಸುಕಂಡು, ಸೇರಿಕೊಂಡಿದ್ದ ಗೆಳೆಯ. ಲಡಾಕ್, ಕಾಶ್ಮೀರ, ಕಛ್ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಸೇನೆಯಲ್ಲಿ ಕೆಲಸ ಮಾಡಿದ್ದ ಗೆಳೆಯ. ಸೈನ್ಯದ ಅಧಿಕಾರಿಗಳಿಗೆ ವಿನಯಚಂದ್ರ ನಾಗರಾಜುವಿನ ಹೆಸರನ್ನು ಹೇಳಿದ್ದ. ಅಧಿಕಾರಿಗಳು ನಾಗರಾಜುವಿನ ಸಂಪರ್ಕಕ್ಕೆ ಮುಂದಾಗಿದ್ದರು.
               ಸೈನ್ಯದ ಅಧಿಕಾರಿಗಳ ಕೈಗೆ ಸಿಕ್ಕು ಒಂದು ದಿನವೇ ಕಳೆದಿತ್ತು. ಆದರೂ ಮಧುಮಿತಾ ಎಲ್ಲಿದ್ದಾಳೆ ಎನ್ನುವುದು ಗೊತ್ತಾಗಿರಲ್ಲ. ಸೈನ್ಯದವರು ಕಾಲಿಗೆ ಹೊಡೆದ ಗುಂಡನ್ನು ಸೈನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಇಲಾಜು ಮಾಡಲಾಗಿತ್ತು. ಗುಂಡು ತಾಗಿದ ಜಾಗದಲ್ಲಿ ವಿಪರೀತ ನೋಯುತ್ತಿತ್ತು. ನೋವಿನ ನಡುವೆಯೂ ವಿಚಾರಣೆಗಾಗಿ ಸೈನ್ಯದ ಅಧಿಕಾರಿಗಳು ಬಂದಾಗಲೆಲ್ಲ ಅವರ ಬಳಿ ಮಧುಮಿತಾಳ ಬಗ್ಗೆ ಕೇಳುತ್ತಲೇ ಇದ್ದ. ಆದರೆ ಯಾರೊಬ್ಬರೂ ಕೂಡ ಮಧುಮಿತಾಳ ಬಗ್ಗೆ ಚಿಕ್ಕ ವಿವರವನ್ನೂ ನೀಡಿರಲಿಲ್ಲ.
             ಮಧುಮಿತಾಳನ್ನು ಕಾಣದೇ ಕಂಗಾಲಾಗಿದ್ದ ವಿನಯಚಂದ್ರ ಕೊನೆಗೊಮ್ಮೆ ಒಬ್ಬ ಅಧಿಕಾರಿಯ ಬಳಿ ಅಂಗಲಾಚಿದ್ದ. ಅದಕ್ಕೆ ಅಧಿಕಾರಿ ಮಧುಮಿತಾಳನ್ನು ಇನ್ನೊಂದು ಕಡೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆಕೆ ಬಾಂಗ್ಲಾದ ನಿವಾಸಿಯಾಗಿರುವ ಕಾರಣ ಅವಳನ್ನು ಸುಲಭವಾಗಿ ನಿನ್ನನ್ನು ಮಾತನಾಡಿಸಲು ಬಿಡುವುದಿಲ್ಲ ಎಂದು ತಿಳಿಸಿದಾಗ ವಿನಯಚಂದ್ರ ಸ್ವಲ್ಪ ನಿರಾಳನಾಗಿದ್ದ. ಎಲ್ಲಾದರೂ ಇರಲಿ, ಆಕೆ ಚನ್ನಾಗಿದ್ದಾಳಲ್ಲ, ಅಷ್ಟು ಸಾಕು ಎಂದುಕೊಂಡನಾದರೂ ಒಮ್ಮೆ ಅವಳನ್ನು ನೋಡಲೇಬೇಕು ಎಂಬ ತುಡಿತ ಹೆಚ್ಚಾಯಿತು. ನಿಂತಲ್ಲಿಯೇ ಶತಪಥ ಸುತ್ತಿದ.
             `ಸರ್ ಒಂದು ಪೋನ್ ಮಾಡಲು ಅವಕಾಶ ಸಿಗಬಹುದಾ?' ಹತ್ತಿರದಲ್ಲಿಯೇ ಇದ್ದಿದ್ದ ಮಿಲಿಟರಿ ಅಧಿಕಾರಿಗಳ ಬಳಿ ಕೇಳಿದ್ದ. `ಯಾಕೆ??' ರೇಗಿದ್ದರು ಅಧಿಕಾರಿ. `ಗೆಳೆಯನೊಬ್ಬನಿಗೆ ಪೋನ್ ಮಾಡಬೇಕಿತ್ತು.. ಬಹಳ ಅರ್ಜೆಂಟು..' ಎಂದ ವಿನಯಚಂದ್ರ.
            `ಯಾರು? ಯಾವ ದೇಶದವನು? ಯಾಕೆ ಪೋನ್ ಮಾಡುವುದು?' ಸಿಟ್ಟಿನಿಂದಲೇ ಕೇಳಿದ್ದ ಮಿಲಿಟರಿಯವನು. `ಭಾರತದವನೇ. ಸಂಜಯ ಎಂಬ ಹೆಸರು. ನನ್ನ ಪರಿಸ್ಥಿತಿಯನ್ನು ಹೇಳಿಕೊಳ್ಳಬೇಕು. ಆತ ಸಹಾಯ ಮಾಡಬಹುದು..' ಎಂದು ಅಂಗಲಾಚಿದ ವಿನಯಚಂದ್ರ. ಕೊನೆಗೆ ಮಿಲಿಟರಿ ಅಧಿಕಾರಿ ದೂರವಾಣಿಯನ್ನು ತೋರಿಸಿದ. ವಿನಯಚಂದ್ರ ಸಂಜಯನಿಗೆ ಪೋನ್ ಮಾಡಿ ವಿಷಯವನ್ನು ತಿಳಿಸಿದ.
           ವಿನಯಚಂದ್ರ ಬಾಂಗ್ಲಾದೇಶದಲ್ಲಿ ಕಾಣೆಯಾಗಿದ್ದಾನೆ ಎನ್ನುವ ವಿಷಯ ತಿಳಿದ ಕೂಡಲೇ ಸರಣಿ ಸುದ್ದಿಗಳನ್ನು ಮಾಡುವ ಮೂಲಕ ದೇಶದಾದ್ಯಂತ ಸಂಚಲನವನ್ನು ಉಂಟುಮಾಡಿದ್ದ. ಸಂಜಯ ಮಾಡಿದ್ದ ಸುದ್ದಿಗಳಿಂದಾಗಿ ಪ್ರಧಾನ ಮಂತ್ರಿಗಳು ಹಾಗೂ ಸಚಿವಾಲಯ ಕೂಡ ವಿನಯಚಂದ್ರನನ್ನು ಬಾಂಗ್ಲಾದೇಶದಿಂದ ಕರೆದುಕೊಂಡು ಬರುವ ಬಗ್ಗೆ ಕ್ರಮಗಳನ್ನು ಕೈಗೊಂಡಿದ್ದರು. ಬಾಂಗ್ಲಾದೇಶದ ಸಚಿವಾಲಯದ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುವ ಮೂಲಕ ವಿನಯಚಂದ್ರನ ರಕ್ಷಣೆಯ ಸಾಧ್ಯತೆಗಳನ್ನು ತೆರೆದಿಟ್ಟಿದ್ದರು. ಆದರೆ ಭಾರತದಲ್ಲಿ, ರಾಜಕೀಯವಾಗಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ವಿನಯಚಂದ್ರನಿಗೆ ಮಾತ್ರ ಇದಾವುದರ ಅರಿವಿರಲಿಲ್ಲ. ಬಾಂಗ್ಲಾದ ಬೀದಿಬೀದಿಗಳಲ್ಲಿ ಭಾರತವನ್ನು ತಲುಪಬೇಕೆಂಬ ಉದ್ದೇಶದಿಂದ ಮಧುಮಿತಾಳೊಂದಿಗೆ ಅಲೆಯುತ್ತಿದ್ದ. ಸಂಜಯನಿಗೆ ದೂರವಾಣಿಯ ಮೂಲಕ ಕರೆ ಮಾಡಿದ್ದು ವಿನಯಚಂದ್ರನ ಪಾಲಿಗೆ ಭಾರಿ ಉತ್ತಮ ಕೆಲಸವಾಗಿತ್ತು.
            ವಿನಯಚಂದ್ರ ಆರಾಮಾಗಿದ್ದಾನೆ ಹಾಗೂ ಆತ ಭಾರತಕ್ಕೆ ಬಂದಿದ್ದಾನೆ ಎನ್ನುವ ವಿಷಯ ಅರಿತ ಸಂಜಯ ನಿರಾಳನಾಗಿದ್ದ. ಮಿಲಿಟರಿ ಅಧಿಕಾರಿಗಳ ಕೈಲಿ ಸಿಕ್ಕಿಬಿದ್ದಿರುವ ಹಾಗೂ ಕಾಲಿಗೆ ಗುಂಡೇಟು ಬಿದ್ದಿರುವ ವಿಷಯವನ್ನು ತಿಳಿದ ತಕ್ಷಣವೇ ಸಂಜಯ ಒಮ್ಮೆ ಆಘಾತಕ್ಕೆ ಒಳಗಾಗಿದ್ದರೂ ಇನ್ನೂ ದೊಡ್ಡದಾದ ತೊಂದರೆಯೇನೂ ಆಗಿಲ್ಲ ಎಂದು ಸಮಾಧಾನಿಸಿದ. ಮಿಲಿಟರಿಯವರ ಕೈಯಲ್ಲಿರುವ ವಿನಯಚಂದ್ರನನ್ನು ಬಿಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಗಳನ್ನು ಕೈಗೊಳ್ಳಲಾರಂಭಿಸಿದ. ಪ್ರಧಾನಿ ಕಚೇರಿಯನ್ನು ಸಂಪರ್ಕಿಸಲು ಯತ್ನಿಸಿ ಯಶಸ್ವಿಯಾದ. ನಂತರದ ಬೆಳವಣಿಗೆಗಳು ತ್ವರಿತವಾಗಿ ನಡೆದಿದ್ದವು. ಮೂರ್ನಾಲ್ಕು ದಿನಗಳ ಅಂತರದಲ್ಲಿಯೇ ವಿನಯಚಂದ್ರನ ಬಿಡುಗಡೆಗೆ ಸಂಬಂಧಿಸಿದಂತೆ ಬೆಳವಣಿಗೆಗಳು ನಡೆದಿದ್ದವು. ಜೊತೆಯಲ್ಲಿಯೇ ಮಧುಮಿತಾಳನ್ನೂ ಬಿಟ್ಟುಕಳಿಸುವ ಕುರಿತಂತೆ ಕ್ರಮಗಳನ್ನು ಜರುಗಿಸಲಾಗಿತ್ತು.


(ಮುಂದುವರಿಯುತ್ತದೆ..)

              

2 comments: