Friday, December 29, 2017

ವಾರ್ತಾ ವಾಹಿನಿಗಳ ಅಮರ ಚಿತ್ರಕಥಾ

ಸಮಯ : 8.00 ಮುಂಜಾನೆ
ಸಂಗಪ್ಪ : ಆಲ್ ರೈಟ್.. ಎಲ್ಲಾ ಇದ್ದೀರಾ? ಶುರು ಹಚ್ಚಿಕೊಳ್ಳೋಣವಾ?
ರಂಗಮ್ಮ : ಯೆಸ್ ಸರ್.. ಶುರು ಹಚ್ಚಿಕೊಳ್ಳೋಣ..
ಸಂಗಪ್ಪ : ನೋಡಿ.. ಇವತ್ತು ಹೆಂಗೆ ನ್ಯೂಸ್ ಬರಬೇಕು ಅಂದ್ರೆ ಕರ್ನಾಟಕ ಹೊತ್ತಿಕೊಂಡು ಉರಿಯಬೇಕು ತೀಳೀತಾ? ರೀ ಕಾಪಿ ಎಡಿಟರ್.. ಕಾಪಿ ಸರಿ ಮಾಡಿ ಅಂದ್ರೆ ಕಾಪಿ ಕುಡಿತಾ ಇದ್ದೀರಾ? ನಾನ್ ಸೆನ್ಸ್.. ಹೇಳಿದ್ ಕೆಲಸ ಮಾಡ್ರೀ.. ಓಕೆ.. ಪ್ಯಾನಲ್ ಡಿಸ್ಕಷನ್ಗೆ ಬರೋದಿಕ್ಕೆ ಯಾರ್ ಯಾರಿಗೆ ಹೇಳಿದ್ದೀರಾ?
ರಂಗಮ್ಮ : ರಮೇಶ್ ಸುಮನ್ ಕುಟ್ಟು ಅವರು ಬರ್ತೀನಿ ಅಂದಿದ್ದಾರೆ. ಅವರಿಗೆ ಪಾಟೀ ಸವಾಲು ಹಾಕೋಕೆ ಯಾರೂ ಸಿಗ್ತಾ ಇಲ್ಲ.
ಸಂಗಪ್ಪ : ನೋಡೋಣ ಬಲಕ್ಕೆ ಹೊರಳೋಣ. ಯಾರಾದ್ರೂ ಸಿಕ್ತಾರೆ. ಸ್ವೀಟಿ ರವಿ ಅವರನ್ನ ವಿಚಾರಿಸಿ. bemki  ಹತ್ತಬೇಕು. ಅಂದ ಹಾಗೇ ಖನ್ನಡ ಮಾತಾಡೋ ಸಂಘಟನೆಯವರು ಯಾರಾದ್ರೂ ಇದ್ದರೆ ಅವರನ್ನು ಬರಕ್ ಹೇಳಿ.
ರಂಗಮ್ಮ : ರಾಮಾಯಣ ಗೌಡರಿಗೆ ಹೇಳಲಾ?
ಸಂಗಪ್ಪ  : ಆ ಯಪ್ಪಂಗೆ ಸರಿಯಾಗಿ ಕನ್ನಡ ಬರೋದಿಲ್ಲ. ಆ ವಯ್ಯನ್ನ ಕಟ್ಟಿಕಂಡು ನಾವ್ ಹೆಂಗ್ ಪ್ಯಾನಲ್ ಡಿಸ್ ಕಷನ್ ಮಾಡಣ ಹೇಳಿ? ಇರ್ಲಿ ಕರಕಂಡು ಬನ್ನಿ.
ರಂಗಮ್ಮ : ಆಯ್ತು. ಹಂಗೇ ಮಾಡ್ತೀನಿ ಬಿಡಿ
ಸಂಗಪ್ಪ  : ಆ ರಿಪೋರ್ಟರ್ ಎಂಡ್ ಕ್ಯಾಮರಾಮನ್ ಸ್ಯಾಟಲೈಟ್ ಬಸ್ ಸ್ಟಾಂಡ್ ಹತ್ತಿರ ಇದ್ದಾನೇನ್ರಿ? ವಾಟ್ ? ನಾನ್ ಸೆನ್ಸ್.. ಯೂಸ್ ಲೆಸ್ ಫೆಲ್ಲೋ..ಬೇಗನೆ ಹೋಗಕ್ಕೆ ಹೇಳ್ರಿ ಆ ವಯ್ಯಂಗೆ.. ಆಲ್ ರೈಟ್ ಶುರು ಹಚ್ಚಿಕೊಳ್ಳೋಣವಾ?

------------
ಸಂಗಪ್ಪ  :
ನಮಸ್ಕಾರ ದೊಡ್ ಸುದ್ದಿಗೆ ಸ್ವಾಗತ... ನೋಡುಗರಿಗೆಲ್ಲ ದೊಡ್ ನಮಸ್ಕಾರ..
ಎಲ್ಲರ ನಿರೀಕ್ಷೆಯಂತೆ ಬೆಂಗಳೂರು ಹೊತ್ತಿ ಉರಿಯುತ್ತಿದೆ. ಎಲ್ಲೆಡೆ ಗಲಾಟೆ... ದೊಂಬಿ.. ನಡೆಯುತ್ತಿದೆ.. ಎಲ್ಲಿ ಏನ್ ಆಗ್ತಾ ಇದೆ ಅನ್ನೋದು ಯಾರಿಗೂ ಗೊತ್ತಾಗ್ತಾ ಇಲ್ಲ.. ನಮಗೂ ಗೊತ್ತಾಗ್ತಾ ಇಲ್ಲ ಅನ್ನೋದು ಇಂಟರೆಸ್ಟಿಂಗ್..
ಪೊಲೀಸರು ಅವರ ಸಮವಸ್ತ್ರದಲ್ಲಿ ಬಂದಿದ್ದಾರೆ.. ಜನರೆಲ್ಲ ಬಟ್ಟೆ ಹಾಕಿಕೊಂಡು ಬಂದಿದ್ದಾರೆ. ಗಲಾಟೆ ನಡಿತಾ ಇದೆ. ಆದರೆ ಎಲ್ಲಿ ಯಾವ ರೀತಿ ಗಲಾಟೆ ಆಗ್ತಾ ಇದೆ ಅನ್ನೋದರ ಬಗ್ಗೆ ಇನ್ನೂ ಸ್ಪಷ್ಟವಾಗ್ತಾ ಇಲ್ಲ. ಮೆಜೆಸ್ಟಿಕ್ನಿಂದ ಹಿಡಿದು ಆನೇಕಲ್ಲು, ಕೆಂಗೇರಿಯಿಂದ ಹಿಡಿದು ಹೊಸಕೋಟೆ ತನಕ ಬೆಂಗಳೂರು ವೊತ್ತಿ ವೊತ್ತಿ ಹುರಿತಾ ಇರೋದು ಇವತ್ತಿನ ಸ್ಪೆಷಲ್ ಸುದ್ದಿ.
ರಂಗಮ್ಮ :
ಹೊತ್ತಿ ಉರಿತಾ ಇದೆ ಅಂದ್ರೆ ಎಲ್ಲ ಕಡೆ ಬೆಂಕಿನಾ ಸಾರ್..
ಸಂಗಪ್ಪ  :
ಹೊತ್ತಿ ಉರಿಯೋದು ಅಂದ್ರೆ ಬೆಂಕಿ ಅಲ್ದೆ ಇನ್ನೇನ್ ನೀರೇನಮ್ಮಾ.. ಆಲ್ ರೈಟ್ ಮುಂದಕ್ ಹೋಗೋಣ.. ಬೆಂಗಳೂರು ಹೊತ್ತಿ ಉರಿಯುತ್ತಿರುವುದು ನಮ್ಮ ಕಣ್ಣಿಗೆ ಹೇಗೆ ಕಾಣ್ತಾ ಇದೆ ಅಂದ್ರೆ ಒಂದೆರಡು ಹೆಣ ಬೀಳೋದಂತೂ ಗ್ಯಾರಂಟಿ.. ಹೆಣಗಳ ಸಂಕ್ಯೆ ಹೆಚ್ಚಾಗಲೂ ಬಹುದು.. ಎಷ್ಟು ನಿಮಿಷಕ್ಕೆ ಎಷ್ಟು ಹೆಣಬಿತ್ತು ಅನ್ನೋದನ್ನ ನಾವು ನಿಮಗೆ ಲೈವ್ ಆಗಿ ಕಾಲ ಕಾಲಕ್ಕೆ ತೋರಿಸ್ತಾ ಇರ್ತೀವಿ.. ಈ ನಡುವೆ ಒಂದು ಸಣ್ಣ ವಿರಾಮ.. ಎಲ್ಲೂ ಹೋಗಬೇಡಿ.. ಇಲ್ಲೇ ಇರಿ..

--------------
ಸಂಗಪ್ಪ  : ರಿಪೋರ್ಟರ್ ಸ್ಪಾಟಲ್ ಇದಾನಂತಾ... ಓಕೆ.. ಈಗ ಪೋನ್ ಇನ್ ಮಾಡೋಣ. ಸರಿ.. ಆ ರಿಪೋರ್ಟರ್ ಗೆ ಮೊದಲೇ ಹೇಳ್ರಪ್ಪಾ.. ಹೊತ್ತಿ ಉರಿಯೋ ಥರ ರಿಪೋರ್ಟ್ ಮಾಡೊಕೆ.. ಎಲ್ಲೂ ಇದು ಬಂದಿರಬಾರದು.. ಅಂತದ್ದು ಹೇಳೋಕೆ ಹೇಳಿ.. ಎಷ್ಟು.. ನಾಲ್ಕು ಜಾಹೀರಾತು ಆಯ್ತಾ.. ಇನ್ನೆರಡು ಹಾಕಿ... ರೈಟ್

-------------

ಸಂಗಪ್ಪ  : ಮತ್ತೊಮ್ಮೆ ದೊಡ್ ಸುದ್ದಿಗೆ ಸ್ವಾಗತ... ನೀವು ನೋಡುತ್ತಿದ್ದಂತೆಯೇ ಬೆಂಗಳೂರು ಇನ್ನಷ್ಟು ಹೊತ್ತಿ ಉರಿಯುತ್ತಿರುವುದು ಗಮನಕ್ಕೆ ಬರುತ್ತಿದೆ. ಎಲ್ಲೆಲ್ಲೂ ಗಲಾಟೆ, ದೊಂಬಿ.. ಇದು ನಮ್ ಚಾನಲ್ ನಲ್ಲಿ ಮಾತ್ರ.. ಬೇರೆಲ್ಲೂ ಇಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನೀಡೋಕೆ ಸ್ಥಳದಲ್ಲಿ ಇರೋ ನಮ್ ರಿಪೋರ್ಟರ್ ಗುಂಪಲ್ ಗೋವಿಂದ ಲೈನ್ ನಲ್ ಇದ್ದಾರೆ.. ಹೇಳಿ ಗುಂಪಲ್ ಗೋವಿಂದ ಅವರೇ.. ಏನಾಗ್ತಿದೆ ಅಲ್ಲಿ.. ಪರಿಸ್ಥಿತಿ ಹೇಗಿದೆ?
ಗುಂಪಲ್ ಗೋವಿಂದ : ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದೆ. ಈ ಒಂದು ಪರಿಸ್ಥಿತಿ ಯಾವ ಕ್ಷಣದಲ್ಲಿ ಕೈಮೀರುತ್ತದೆ ಎನ್ನುವುದು ಕಷ್ಟ ಇದೆ. ಬೆಂಗಳೂರು ವೊತ್ತಿ ಹುರಿಯುತ್ತಿದೆ.
ಸಂಗಪ್ಪ  : ಗೋವಿಂದ ಹೇಳಿ ಬೆಂಗಳೂರು ಹೇಗೆ ಹೊತ್ತಿ ಉರಿಯುತ್ತಿದೆ?
ಗು.ಗೋ : ಯೇಗೆ ವೊತ್ತು ಹುರಿಯುತ್ತಿದೆ ಎನ್ನುವುದು ಇನ್ನೂ ನಮಗೆ ಸ್ಪಷ್ಟವಾಗಬೇಕಿದೆ. ಆದರೆ ಈ ವೊಂದು ಬೆಂಕಿ ಕ್ಷಣ ಕ್ಷಣಕ್ಕೂ ಕೆನ್ನಾಲಿಗೆಯಂತೆ ಚಾಚುತ್ತಿರುವುದು ಸ್ಪಷ್ಟವಾಗುತ್ತಿದೆ. ನಾವು ನೋಡ್ತಾ ಇದ್ದಂತೆ ವೊಗೆ ಸಿಕ್ಕಾಪಟ್ಟೆ ಯೆಚ್ಚಿದೆ. ಎಲ್ಲೋ ಒಂದು ಕಡೆ ಬೆಂಕಿ ಇರೋದಂತೂ ಸ್ಪಷ್ಟ..
ಸಂಗಪ್ಪ : ಗೋವಿಂದ ಅವರೇ ಬೆಂಕಿ ಎಲ್ಲಿಂದ ಹೊತ್ಕೊಂಡಿದೆ ಅನ್ನೋದು ಗೊತ್ತಾಯ್ತಾ?
ಗು. ಗೋ : ಅದಿನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬರಬೇಕಿದೆ. ಆದರೆ ಎಲ್ಲೋ ಒಂದು ಕಡೆ ಬೆಂಕಿ ತೀವ್ರವಾಗಿದ್ದು ಸ್ಪಷ್ಟ. ಬೆಂಗಳೂರಿಗರು ಬೆಂಕಿಯಲ್ಲಿ ವೊತ್ತಿ ಹುರಿದು ಬೆಂದು ವೋಗ್ತಿದ್ದಾರೆ. ಈ ವೊಂದು ಪರಿಸ್ಥಿತಿ ಯೇನಿದೆ ಇದು ಏನು ಅಂತ ಇನ್ನೂ ಸ್ಪಷ್ಟವಾಗ್ತಾ ಇಲ್ಲ...
ಸಂಗಪ್ಪ  : ಆಲ್ ರೈಟ್ ಗೋವಿಂದ ಅವ್ರೇ.. ಅಲ್ಲಿಗೆ ಏನಾದ್ರೂ ಅಗ್ನಿಶಾಮಕ ವಾಹನಗಳು ಬಂದಿದೆಯಾ ಹೇಗೆ?
ಗು. ಗೋ :  ಹಗ್ನಿಶಾಮಕ ವಾಹನ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಈ ಕುರಿತಂತೆ ಇನ್ನೂ ಯೆಚ್ಚಿನ ಮಾಹಿತಿ ಕೇಳಿ ಬರಬೇಕಿದೆ. ಈ ಒಂದು ಸಂದರ್ಭದಲ್ಲಿ ನಾನು ಯೇಳೋದು ಹೇನು ಅಂದ್ರೆ ಬೆಂಕಿ ಧಗ ಧಗನೆ ಉರಿತಾ ಇದೆ..
ಸಂಗಪ್ಪ : ಹೊತ್ತಿ ಉರಿಯುವ ಬೆಂಕಿ ಈಗಾಗಲೇ ಬೆಂಗಳೂರನ್ನು ದಾಟಿ ಮುನ್ನುಗ್ಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಈ ಕೆನ್ನಾಲಿಗೆ ಯಾರ್ಯಾರನ್ನ ಬಲಿ ತೆಗೆದುಕೊಳ್ಳುಕಾದು ನೋಡಬೇಕಿದೆ. ಯಾವುದಕ್ಕೂ ನೋಡ್ತಾ ಇರಿ.. ನಮ್ ಟಿವಿ


(ಮುಂದುವರಿಯುವುದು...)

Tuesday, December 26, 2017

ಮುಂಬಯಿಯಲ್ಲಿನ್ನು ಎಸಿ ಲೋಕಲ್ ರೈಲು

ಭಾರತೀಯ ರೈಲ್ವೆಗೆ 150ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಈ ಅವಯಲ್ಲಿ ಭಾರತೀಯ ರೈಲ್ವೆ ಅನೇಕ ಏಳು ಬೀಳುಗಳನ್ನೂ ಕಂಡಿದೆ. ಸಾಕಷ್ಟು ಬೆಳವಣಿಗೆಗಳು, ತಾಂತ್ರಿಕ ಅಭಿವೃದ್ಧಿ ಭಾರತೀಯ ರೈಲ್ವೆಯಲ್ಲಿ ಆಗಿದೆ. ಉಂಗಿಬಂಡಿಗಳು ಓಡುತ್ತಿದ್ದ ಜಾಗದಲ್ಲಿ ಡೀಸೇಲ್ ಇಂಜಿನ್ನುಗಳು, ವಿದ್ಯುತ್ ರೈಲುಗಳೂ ಬಂದಿವೆ. ಅಷ್ಟೇ ಏಕೆ ಇದೀಗ ಭಾರತದಲ್ಲಿ ಬುಲೆಟ್ ಟ್ರೇನ್ ಓಡಿಸುವ ನಿಟ್ಟಿನಲ್ಲಿಯೂ ಪ್ರಯತ್ನಗಳು ಸಾಗಿವೆ.
ಅದೇ ರೀತಿ ರೈಲ್ವೆಯ ಕಾರ್ಯಕ್ಷಮತೆ ಕೂಡ ಹೆಚ್ಚಿದೆ. ರೈಲ್ವೆ ನಿಲ್ದಾಣಗಳ ಸುಧಾರಣೆ, ಹಳಿಗಳ ಬದಲಾವಣೆ, ಮಾರ್ಗಗಳ ವಿದ್ಯುದೀಕರಣ, ಹಳಿಗಳ ಡಬ್ಲಿಂಗ್, ಬೋಗಿಗಳ ಸುಧಾರಣೆ ಹೀಗೆ ಹಲವಾರು ವಿಭಾಗಗಳಲ್ಲಿ ರೈಲ್ವೆ ಅಭಿವೃದ್ಧಿಯನ್ನು ಕಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನೂ ಒದಗಿಸಲಾಗಿದೆ. ಹಳೆಯ ಬೋಗಿಗಳ ಬದಲು ಹೊಸ, ಆಧುನಿಕ ವ್ಯವಸ್ಥೆಯನ್ನೊಳಗೊಂಡ ಬೋಗಿಗಳು ಬಂದಿವೆ. ಸುಖಾಸೀನ ಸೀಟುಗಳನ್ನೊಳಗೊಂಡ ಬೋಗಿಗಳು, ಹವಾನಿಯಂತ್ರಿತ ಬೋಗಿಗಳೂ ಬಂದಿದೆ. ಇದೀಗ ಮುಂಬಯಿಯಲ್ಲಿ ಓಡಾಡುವ ಲೋಕಲ್ ಟ್ರೇನುಗಳಲ್ಲಿಯೂ ಕೂಡ ಹವಾ ನಿಯಂತ್ರಿತ ಬೋಗಿಗಳನ್ನು ಅಳವಡಿಕೆ ಮಾಡಲಾಗಿದ್ದು, ಈ ರೈಲುಗಳು ಸೋಮವಾರದಿಂದ ಓಡಾಟ ನಡೆಸಲು ಆರಂಭಿಸಿವೆ.


ಮುಂಬಯಿ ಲೋಕಲ್ ರೈಲ್ವೆ ಇತಿಹಾಸ-ವಿಶೇಷ
ಮುಂಬಯಿಯ ಮಹಾನಗರ ರೈಲ್ವೆ ವಿಭಾಗಕ್ಕೊಳಪಟ್ಟಿರುವ ಮುಂಬಯಿಯ ಲೋಕಲ್ ರೈಲುಗಳ ಜಾಲ ಎಂತವರನ್ನೂ ನಿಬ್ಬೆರಗಾಗಿಸುತ್ತದೆ. 465 ಕಿಲೋಮೀಟರ್ (289ಮೈಲು) ವಿಸ್ತಾರವಾಗಿರುವ ಮುಂಬಯಿ ಲೋಕಲ್ ಟ್ರೇನ್ ಜಾಲವು ಪ್ರತಿದಿನ 2342 ರೈಲ್ವೆ ಸೇವೆಗಳನ್ನು ಒದಗಿಸುತ್ತದೆ. ಜೊತೆಗೆ ಸರಾಸರಿ 7.5 ಮಿಲಿಯನ್ ಪ್ರಯಾಣಿಕರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕರೆದೊಯ್ಯುತ್ತದೆ. ಜಗತ್ತಿನ ಅತ್ಯಂತ ಜನನಿಬಿಡ ಲೋಕಲ್ ರೈಲ್ವೆ ಜಾಲಗಳಲ್ಲಿ ಮುಂಬಯಿ ಸಬ್‌ಅರ್ಬನ್ ರೈಲ್ವೇಯೂ ಒಂದು ಎನ್ನಿಸಿಕೊಂಡಿದೆ. ಮುಂಜಾನೆ 4 ಗಂಟೆಯಿಂದ ಮಧ್ಯ ರಾತ್ರಿ 1 ಗಂಟೆಯವರೆಗೂ ರೈಲು ಸೇವೆ ಇರುವುದೂ ಕೂಡ ವಿಶೇಷ. 1853ರ ಎಪ್ರಿಲ್ 16ರಂದು ಮದುಆಹ್ನ 3.35ಕ್ಕೆ ಮೊಟ್ಟಮೊದಲ ಸಬ್ ಅರ್ಬನ್ ರೈಲು ಓಡಿತ್ತುಘಿ. ಸಾಮಾನ್ಯವಾಗಿ ಪ್ರತಿ ರೈಲುಗಳಲ್ಲಿಯೂ 12ರಿಂದ 15 ಬೋಗಿಗಳನ್ನು ಅಳವಡಿಸಲಾಗುತ್ತದೆ. ಮುಂಬಯಿ ಸಬ್‌ಅರ್ಬನ್ ರೈಲುಗಳ ಸರಾಸರಿ ವೇಗ 50 ಕಿಮಿ. ಪ್ರತಿ ರೈಲಿನಲ್ಲಿಯೂ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆಯ ಬೋಗಿಗಳಿವೆ. ಮಕ್ಕಳು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿಗಳನ್ನೂ ತೆರೆಯಲಾಗಿದೆ. 2002ರ ವೇಳೆಗೆ ಪ್ರಾಯೋಗಿಕವಾಗಿ ಒಂದೊಂದು ಹವಾನಿಯಂತ್ರಿತ ಬೋಗಿಗಳನ್ನು ಅಳವಡಿಸಲಾಗಿತ್ತು. 2013ರಲ್ಲಿ ಸಂಪೂರ್ಣ ಹವಾನಿಯಂತ್ರಿತ ರೈಲುಗಳನ್ನು ಓಡಿಸುವ ಯೋಜನೆ ಕೈಗೊಳ್ಳಲಾಯಿತು. 2017ರಂದು ಅದು ಕಾರ್ಯರೂಪಕ್ಕೆ ಬರುತ್ತಿದೆ.
ಮುಂಬಯಿಯಲ್ಲಿ ಲೋಕಲ್ ರೈಲಿಗೆ ಚಾಲನೆ ನೀಡಿದ್ದು ಬ್ರಿಟೀಷರು. 1853ರಲ್ಲಿ 34 ಕಿಮಿ ದೂರದ ವಿಕ್ಟೋರಿಯಾ ಟರ್ಮಿನಸ್-ಠಾಣೆ ನಡುವಿನ ಮಾರ್ಗದಲ್ಲಿ ರೈಲ್ವೆ ಸಂಚಾರ ಆರಂಭವಾಯಿತು. ಇದು ಏಷ್ಯಾದ ಮೊಟ್ಟಮೊದಲ ರೈಲ್ವೆ ಸೇವೆಯಾಗಿರುವುದೂ ಕೂಡ ವಿಶೇಷವೇ ಸರಿ. ಮುಂಬಯಿಯ ಲೋಕಲ್ ರೈಲ್ವೆ ಜಾಲವು ಪಶ್ಚಿಮ ರೈಲ್ವೆ ಹಾಗೂ ಕೇಂದ್ರೀಯ ರೈಲ್ವೆ ವಲಯಗಳ ವ್ಯಾಪ್ತಿಯಲ್ಲಿ ಬರುತ್ತದೆ. ಈ ಎರಡೂ ವಲಯಗಳ ದೀರ್ಘ ದೂರದ ರೈಲುಗಳೂ ಕೂಡ ಕೆಲವು ಕಡೆಗಳಲ್ಲಿ ಲೋಕಲ್ ರೈಲಿನ ಮಾರ್ಗದಲ್ಲಿಯೇ ಚಲಿಸುವುದು ವಿಶೇಷ.
ಮುಂಬಯಿಯ ಲೋಕಲ್ ರೈಲ್ವೆ ಜಾಲವನ್ನು ಪ್ರಮುಖವಾಗಿ ನಾಲ್ಕು ಭಾಗ ಮಾಡಲಾಗಿದೆ. ಪಶ್ಚಿಮ ಭಾಗ, ಕೇಂದ್ರ ಭಾಗ, ಹಾರ್ಬರ್ ಭಾಗ ಹಾಗೂ ಟ್ರಾನ್ಸ್ ಹಾರ್ಬರ್ ವಿಭಾಗ ಎಂಬ ನಾಲ್ಕು ಭಾಗಗಳಿವೆ. ಪಶ್ಚಿಮ ಭಾಗದಲ್ಲಿ 37 ರೈಲ್ವೆ ನಿಲ್ದಾಣಗಳಿವೆ. ಕೇಂದ್ರೀಐ ವಿಭಾಗದಲ್ಲಿ 62, ಹಾರ್ಬರ್ ವಿಭಾಗದಲ್ಲಿ 32 ಹಾಗೂ ಟ್ರಾನ್ಸ್ ಹಾರ್ಬರ್ ವಿಭಾಗದಲ್ಲಿ 10 ರೈಲ್ವೆ ನಿಲ್ದಾಣಗಳಿವೆ.

ಭಾರತೀಯ ರೈಲ್ವೆಯ ವಿಶೇಷತೆಗಳು
ಭಾರತದಲ್ಲಿ 119630 ಕಿಲೋಮೀಟರ್ ಉದ್ದದ ರೈಲ್ವೆ ಹಳಿಗಳಿವೆ. ಜಗತ್ತಿನ ನಾಲ್ಕನೇ ಅತ್ಯಂತ ದೊಡ್ಡ ರೈಲ್ವೆ ಜಾಲ ಭಾರತದ್ದು ಎನ್ನುವ ಖ್ಯಾತಿ ಗಳಿಸಿಕೊಂಡಿದೆ. ಈ ಮಾರ್ಗಗಳ ಪೈಕಿ ಶೇ.45ರಷ್ಟು ಮಾರ್ಗವನ್ನು ವಿದ್ಯುದೀಕರಣ ಗೊಳಿಸಲಾಗಿದೆ. ಭಾರತದಲ್ಲಿ ಒಂದು ರೈಲಿನಲ್ಲಿ ಪ್ರತಿ ದಿನ ಓಡಾಡುವವರ ಸರಾಸರಿ ಸಂಖ್ಯೆ 13313. ಭಾರತದಲ್ಲಿ ಸಂಚರಿಸುವ ಎಲ್ಲ ರೈಲುಗಳ ಸರಾಸರಿ ವೇಗ ತಾಸಿಗೆ 50.9 ಕಿಲೋಮೀಟರ್. 254006 ರೈಲ್ವೆ ವ್ಯಾಗನ್ನುಗಳು, 70241 ಪ್ಯಾಸೆಂಜರ್ ಬೋಗಿಗಳು, 11122 ಲೋಕೋ ಮೋಟಿವ್‌ಗಳುಗಳಿದ್ದು ಇದರಲ್ಲಿ 39 ಉಗಿ ಇಂಜಿನ್ನುಗಳು, 5869 ಡಿಸೇಲ್ ಇಂಜಿನ್ನುಗಳು ಹಾಗೂ 5214 ವಿದ್ಯುತ್ ಚಾಲಿತ ಇಂಜಿನ್ನುಗಳಾಗಿವೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ನೀಡಿದ ಸಂಸ್ಥೆಗಳಲ್ಲಿ ಭಾರತೀಯ ರೈಲ್ವೆಗೆ 8ನೇ ಸ್ಥಾನ.

ಭಾರತೀಯ ರೈಲ್ವೆಯ ಹಲವು ಮೊದಲುಗಳು
ಭಾರತದಲ್ಲಿ ಮೊಟ್ಟಮೊದಲ ರೈಲು ಓಡಿದ್ದು 1845ರ ಮೇ 8ರಂದು. ಆಗಿನ ಮದ್ರಾಸ್ ಪ್ರಾಂತ್ಯದ ರೆಡ್ ಹಿಲ್ಸ್‌ನಿಂದ ಚಿಂತಾದ್ರಿಪೇಟೆ ವರೆಗಿನ 34 ಕಿಲೋಮೀಟರ್ ಉದ್ದದ ಮಾರ್ಗಕ್ಕೆ 1837ರಲ್ಲೇ ಅಡಿಗಲ್ಲು ಹಾಕಲಾಯಿತಾದರೂ 1853ರಲ್ಲಿ ಈ ಮಾರ್ಗದಲ್ಲಿ ಮೊದಲ ರೈಲು ಓಡಾಡಿತು. ಈ ಕಾರಣದಿಂದ 1845ರಲ್ಲಿ ಮುಂಬಯಿ ಹಾಗೂ ಠಾಣೆ ಮದ್ಯ ಓಡಾಡಿದ ರೈಲನ್ನೇ ಭಾರತದ ಮೊಟ್ಟ ಮೊದಲ ರೈಲು ಎನ್ನಲಾಗುತ್ತದೆ. 1951ರಲ್ಲಿ ಭಾರತದ ಎಲ್ಲ ಪ್ರಾಂತ್ಯಗಳ ರೈಲನ್ನೂ ರೈಲ್ವೆ ಇಲಾಖೆಯ ಅಡಿಯಲ್ಲಿ ತರಲಾಯಿತು. ಜೊತೆಗೆ ಭಾರತದಲ್ಲಿ ರೈಲ್ವೆ ವಿಭಾಗಗಳನ್ನೂ ಆರಂಭಿಸಲಾಯಿತು. 1925ರಲ್ಲಿ ಮುಂಬಯಿಯ ವಿಕ್ಟೋರಿಯಾ ಟರ್ಮಿನಸ್ ಹಾಗೂ ಕುರ್ಲಾ ನಡುವೆ ಮೊಟ್ಟಮೊದಲ ವಿದ್ಯುತ್ ಚಾಲಿತ ರೈಲನ್ನು ಓಡಿಸಲಾಯಿತು. 1873ರ ಫೆಬ್ರವರಿ 24ರಂದು ಕೋಲ್ಕತ್ತಾದಲ್ಲಿ ಸಿಲ್ಡಾಹ್‌ನಿಂದ ಅರ್ಮೇನಿಯನ್ ಘಾಟ್ ಸ್ಟ್ರೀಟ್‌ವರೆಗೆ ಮೊಟ್ಟಮೊದಲ ಟ್ರಾಮ್ ರೈಲನ್ನು ಓಡಿಸಲಾಯಿತು. 1951ರಲ್ಲಿ ರೈಲುಗಳಲ್ಲಿ ಫ್ಯಾನುಗಳನ್ನು ಹಾಗೂ ಲೈಟ್‌ಗಳ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು. ಅದೇ ವರ್ಷ ಪ್ಯಾಸೆಂಜರ್ ಬೋಗಿಗಳು ಹಾಗೂ ಇತರೆ ಐಷಾರಾಮಿ ಬೋಗಿಗಳನ್ನು ಆರಂಭಿಸಲಾಯಿತು. ನಿದ್ರಿಸಿ ಪ್ರಯಾಣಿಸುವವರಿಗಾಗಿ ಸ್ಲೀಪಿಂಗ್ ಬೋಗಿಗಳನ್ನೂ ಆರಂಭಿಸಲಾಯಿತು.
ಭಾರತದ ಮೊಟ್ಟ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲು 1956ರಲ್ಲಿ ದೆಹಲಿಯಿಂದ ಕೋಲ್ಕತ್ತಾದ ಹೌರಾ ವರೆಗೆ ಪ್ರಯಾಣ ಬೆಳೆಸಿತು. 1986ರಲ್ಲಿ ಹೊಸದಿಲ್ಲಿಯಲ್ಲಿ ಕಂಪ್ಯೂಟರೀಕೃತ ಟಿಕೆಟ್ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 1988ರಲ್ಲಿ ದೆಹಲಿ ಹಾಗೂ ಝಾನ್ಸಿ ನಡುವೆ ಮೊಟ್ಟಮೊದಲ ಶತಾಬ್ದಿ ರೈಲನ್ನು ಓಡಿಸಲಾಯಿತು. 1990ರಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರವನ್ನು ಪರಿಚಯಿಸಲಾಯಿತು. 1993ರಲ್ಲಿ ಎಸಿ-3 ಟೈರ್ ಕೋಚ್ ಹಾಗೂ ಸ್ಲೀಪರ್ ಬೋಗಿಗಳನ್ನು ಪರಿಚಯಿಸಲಾಯಿತು. ಅಲ್ಲದೇ ಇದುವರೆಗೂ ಇದ್ದ ಪ್ಯಾಸೆಂಜರ್ ಮತ್ತು ಸ್ಲೀಪರ್ ಬೋಗಿಗಳನ್ನು ಪ್ರತ್ಯೇಕಿಸಲಾಯಿತು. 1996ರಲ್ಲಿ ಕಂಪ್ಯೂಟರೀಕೃತ ಮುಂಗಡ ಸೀಟು ಕಾಯ್ದಿರಿಸುವ ಸೇವೆ ಜಾರಿಗೆ ಬಂದಿತು. 2016ರಲ್ಲಿ ಭಾರತದ ಅತ್ಯಂತ ವೇಗದ ರೈಲಾದ ಗತಿಮಾನ್ ಎಕ್ಸ್‌ಪ್ರೆಸ್‌ನ್ನು ಪರಿಚಯಿಸಲಾಗಿದೆ.  2022ರ ವೇಳೆಗೆ ಭಾರತದ ಎಲ್ಲ ರೈಲ್ವೆ ಮಾರ್ಗಗಳನ್ನೂ ವಿದ್ಯುದೀಕರಣಗೊಳಿಸುವ ಗುರಿ ರೈಲ್ವೆ ಇಲಾಖೆಯ ಮುಂದಿದೆ.


ಮುಂಬೈನಲ್ಲಿ ಎಸಿ ಲೋಕಲ್ ರೈಲು
ಇದೇ ಮೊತ್ತ ಮೊದಲ ಬಾರಿಗೆ ಮುಂಬೈನಲ್ಲಿ ಹವಾನಿಯಂತ್ರಿತ ಸಬ್‌ಅರ್ಬನ್ ಲೋಕಲ್ ರೈಲು ಸಂಚರಿಸಲು ಆರಂಭಿಸಿವೆ. ಮುಂಬಯಿಗರ ಪಾಲಿಗೆ ಇದು ಹೊಸವರ್ಷದ ಕೊಡುಗೆ. ಹವಾ ನಿಯಂತ್ರಿತ ಬೋಗಿಗಳನ್ನು ಒಳಗೊಂಡಿರುವ ಮೊಟ್ಟ ಮೊದಲ ರೈಲು ಅಂಧೇರಿಯಿಂದ 2 ಗಂಟೆ 10 ನಿಮಿಷಕ್ಕೆ ಹೊರಡಲಿದೆ. ಅದೇ ರೀತಿ ಈ ಎಸಿ ಲೋಕಲ್ ರೈಲು 2 ಗಂಟೆ 44 ನಿಮಿಷಕ್ಕೆ ಚರ್ಚ್‌ಗೇಟ್ ತಲುಪಲಿದೆ.
ಒಟ್ಟು 12 ಟ್ರಿಪ್‌ಗಳು
ಮೊದಲ ಉದ್ಘಾಟನಾ ಪ್ರಯಾಣದ ಬಳಿಕ ಎಲ್ಲಾ ವಾರದ ದಿನಗಳಲ್ಲಿ 6 ರಿಟರ್ನ್ ಟ್ರಿಪ್‌ಗಳನ್ನು ಒದಗಿಸಲಿದೆ. ಶನಿವಾರ ಹಾಗೂ ಭಾನುವಾರ ನಿರ್ವಹಣೆ ಉದ್ದೇಶದಿಂದ ಸೇವೆಗಳಿಂದ ಅಲಭ್ಯ ವಾಗಿರುತ್ತದೆ ಎಂದು ಪಶ್ಚಿಮ ರೈಲ್ವೆ ಮುಖ್ಯ ವಕ್ತಾರ ರವೀಂದರ್ ಭಾಕರ್ ಮಾಹಿತಿ ನೀಡಿದ್ದಾರೆ.
ಪ್ರತಿದಿನ 12 ಟ್ರಿಪ್‌ಗಳು, ಚರ್ಚ್‌ಗೇಟ್-ವಿರಾರ್(ಪಲ್‌ಘರ್) ವಲಯದಲ್ಲಿ 8 ಟ್ರಿಪ್‌ಗಳನ್ನು ನೀಡಲಿದೆ. ಚರ್ಚ್‌ಗೇಟ್-ಬೋರಿವಾಲಿ ನಡುವೆ 3 ಟ್ರಿಪ್‌ಗಳನ್ನು ನೀಡಲಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗುತ್ತದೆ. ಮತ್ತೊಂದು ಅಂತಿಮ ಸೇವೆ ತುಂಬಾ ನಿಧಾನವಾದ ಪ್ರಯಾಣವಾಗಿರುತ್ತದೆ. ಅದು ಮಹಾಲಕ್ಷ್ಮಿ- ಬೋರಿವಿಲಿ ನಡುವೆ ಅಲ್ಲಲ್ಲಿ ನಿಲ್ದಾಣಗಳಲ್ಲಿ ನಿಲ್ಲಿಸಿಕೊಂಡು ಹೋಗುವ ಟ್ರಿಪ್ ಆಗಿರಲಿದೆ. ಜ.1ರ ನಂತರ ಈ ರೈಲಿನ ಸೇವೆಯನ್ನು ಚರ್ಚ್‌ಗೇಟ್‌ನಿಂದ ವೀರಾರ್ ವರೆಗೆ ವಿಸ್ತರಣೆ ಮಾಡಲಾಗುತ್ತಿದೆ.

ಟಿಕೆಟ್ ದರ ಹೆಚ್ಚು
ಉದ್ಘಾಟನಾ ಟಿಕೆಟ್ ದರವನ್ನು ಪಶ್ಚಿಮ ರೈಲ್ವೆ ಘೋಷಿಸಿದೆ. ಟಿಕೆಟ್ ದರ ಸಾಮಾನ್ಯ ಪ್ರಥಮ ದರ್ಜೆ ಟಿಕೆಟ್‌ಗಿಂತ 1.3 ಪಟ್ಟು ಹೆಚ್ಚಿದೆ. ವಾರಕ್ಕೊಮ್ಮೆ, 15 ದಿನಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆ ಟಿಕೆಟ್ ಲಭ್ಯವಿವೆ. ಅವುಗಳು ಸಾಮಾನ್ಯ ಪ್ರಥಮ ದರ್ಜೆ ಟಿಕೆಟ್ ದರಕ್ಕಿಂತ 5, 7.5 ಮತ್ತು 10 ಪಟ್ಟು ಹೆಚ್ಚಿವೆ. ಅಲ್ಲದೇ, ಶೇ.5ರಷ್ಟು ಜಿಎಸ್‌ಟಿ ಹಾಗು ಇತರ ಶುಲ್ಕಗಳೂ ಸೇರುತ್ತವೆ.

ಹವಾನಿಯಂತ್ರಿತ ಸಬ್‌ಅರ್ಬನ್ ರೈಲಿನ ವಿಶೇಷತೆಗಳು
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಸಂಪೂರ್ಣ ಹವಾನಿಯಂತ್ರಿತ ರೈಲು 6,000 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಸ್ವಯಂಚಾಲಿತ ಬಾಗಿಲು ತೆರೆಯುವ ಹಾಗೂ ಮುಚ್ಚುವ ವ್ಯವಸ್ಥೆಘಿ, ಎಲ್‌ಇಡಿ ದೀಪಗಳು, ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ನಡುವೆ ತುರ್ತು ಟಾಕ್ ಬ್ಯಾಕ್ ವ್ಯವಸ್ಥೆ, ಅತ್ಯಾಧುನಿಕ ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಗಂಟೆಗೆ 100 ಕಿ.ಮೀ. ತನಕದ ವೇಗ, 12 ಬೋಗಿಗಳನ್ನೂ ಪರಸ್ಪರ ಸಂಪರ್ಕಿಸುವ ಏರ್‌ಟೈಟ್ ಪ್ರವೇಶ ದ್ವಾರಗಳು, ಇನ್ನೂ ಇತರ ಆಧುನಿಕ ಸೌಲಭ್ಯಗಳು ಹಾಗೂ ಪ್ರಯಾಣಿಕರ ಸುರಕ್ಷತೆಗೂ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಈ ರೈಲು ಹೊಂದಿರುತ್ತದೆ. ಈಗಾಗಲೇ 65ಕ್ಕೂ ಹೆಚ್ಚಿನ ಸಾರಿ ಈ ರೈಲಿನ ಪ್ರಾಯೋಗಿಕ ಓಡಾಟ ಪರೀಕ್ಷೆ ಕೈಗೊಳ್ಳಲಾಗಿದೆ.

ಮೆಟ್ರೋ ನಗರಗಳಲ್ಲಿ ಎಸಿ ಲೋಕಲ್ ರೈಲು
ಮುಂಬೈ ಮೆಟ್ರೊ ನಗರವಷ್ಟೇ ಅಲ್ಲದೆ ಕೋಲ್ಕತಾ, ಚೆನ್ನೈ ಮತ್ತು ಸಿಕಂದರಾಬಾದ್ ಮೆಟ್ರೊ ನಗರಗಳ ಲೋಕಲ್ ರೈಲುಗಳಲ್ಲೂ ಹವಾನಿಯಂತ್ರಿತ ಮತ್ತು ಸ್ವಯಂಚಾಲಿತ ಬಾಗಿಲುಗಳ ಬೋಗಿಗಳಿರಲಿವೆ ಎಂಬುದು ರೈಲ್ವೆ ಇಲಾಖೆಯ ಅಕಾರಿಗಳು ನೀಡುವ ಮಾಹಿತಿ.
ಹೊಸ ಎಸಿ ರೈಲುಗಳು ಮತ್ತು ಹಳೇ ಲೋಕಲ್ ರೈಲುಗಳು ಒಟ್ಟೊಟ್ಟಿಗೆ ಓಡಾಡಲಿವೆ. ಆದರೆ ಪ್ರಯಾಣದ ದರಗಳಲ್ಲಿ ವ್ಯತ್ಯಾಸವಿದೆ. ಸ್ವಯಂಚಾಲಿತ ಬಾಗಿಲುಗಳ ಎಸಿ ಬೋಗಿಗಳಿರುವ ರೈಲುಗಳು ಚೆನ್ನೈ, ಕೋಲ್ಕತಾ, ಬೆಂಗಳೂರು ನಗರಗಳಲ್ಲೂ ಓಡಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂಬುದೂ ಅಕಾರಿಗಳು ನೀಡುವ ಮಾಹಿತಿ.

Wednesday, December 20, 2017

ಆಗುಂಬೆಯ ತಮ್ಮ ಜೇನುಕಲ್ಲುಗುಡ್ಡ


ಬಹುತೇಕರು ಆಗುಂಬೆಯನ್ನು ನೋಡಿಯೇ ಇರುತ್ತಾರೆ. ಆಗುಂಬೆಯ ಸೂರ್ಯಾಸ್ತವನ್ನು ನೋಡಿ ಮನದಣಿದವರು ಅನೇಕರಿದ್ದಾರೆ. ಆಗುಂಬೆಯಂತಹುದೇ ಒಂದು ಸ್ಥಳ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ. ಥಟ್ಟನೆ ನೋಡಿದರೆ ಆಗುಂಬೆಗಿಂತಲೂ ಚನ್ನಾಗಿ ಕಾಣುವ ಈ ತಾಣವೇ ಜೇನುಕಲ್ಲುಗುಡ್ಡ.
ಇದ್ದಕ್ಕಿದ್ದಂತೆ ಭೂಮಿಯ ಕೊನೆಯ ಭಾಗ ಬಂದೇ ಹೋಯಿತೇನೋ ಎನ್ನುವಂತೆ ಕಾಣುವ ಕಡಿದಾದ ಕಲ್ಲಿನ ಗುಡ್ಡ. ಕಣಿವೆಯಾಳದಲ್ಲಿ ಬಳುಕಿ ಹರಿಯುವ ಗಂಗಾವಳಿ ನದಿ. ಕೇಳಿಯೂ ಕೇಳದಂತಹ ನದಿ ಹರಿವಿನ ಶಬ್ದ. ಇಣುಕಿ ನೋಡಿದಲ್ಲೆಲ್ಲ ಸಹ್ಯಾದ್ರಿ ವನರಾಶಿ. ಆಹಾ ಜೇನುಕಲ್ಲು ಗುಡ್ಡದ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಆಗುಂಬೆಯಂತೆಯೇ ಇದೂ ಕೂಡ ಸೂರ್ಯಾಸ್ಥಕ್ಕೆ ಹೆಸರಾದುದು. ರೌದ್ರ ರೂಪ ತಾಳಿದ ಸೂರ್ಯ ಪಡುವಣದತ್ತ ಇಳಿದು ಅರಬ್ಬಿ ಸಮುದ್ರದಾಚೆ ಮುಳುಗಿ ಹೋಗುವ ಆ ಸಂಜೆಯ ಸಂದರ್ಭವಂತೂ ವರ್ಣಿಸಲಸದಳ. ಬಾನು ಕೆಂಪಾಗಿ, ಸೂರ್ಯ ಕೂಡ ದೊಡ್ಡದೊಂದು ಚೆಂಡಿನ ಆಕಾರ ಪಡೆದು ಅಸ್ತಮಿಸುತ್ತಿದ್ದರೆ ಜೇನುಕಲ್ಲು ಗುಡ್ಡದಿಂದ ನೋಡುಗರ ಮನಸ್ಸಂತೂ ಸ್ವರ್ಗದಲ್ಲಿ ಇದ್ದಂತೆ ಭಾಸವಾಗುತ್ತದೆ.
ಈ ಜೇನುಕಲ್ಲು ಗುಡ್ಡಕ್ಕೆ ಹೋದರೆ ನಾವು ಮೋಡಗಳ ಮೇಲೆ ನಿಂತಂತೆ ಭಾಸವಾಗುತ್ತದೆ. ಗಂಗಾವಳಿ ಕಣಿವೆಯ ಆಳದಲ್ಲಿ ಹಾದು ಬರುವ ಮೋಡ ಸಹ್ಯಾದ್ರಿ ಶೃಂಗಗಳಿಗೆ ಢಿಕ್ಕಿ ಹೊಡೆದು ನಿಂತಿರುತ್ತದೆ. ಈ ದೃಶ್ಯವಂತೂ ನಾವೇ ಮೋಡಕ್ಕಿಂತ ಮೇಲೆ ನಿಂತಿದ್ದೇವೇನೋ ಅನ್ನಿಸುತ್ತದೆ. ಅಷ್ಟೇ ಅಲ್ಲ ಪಶ್ಚಿಮ ಘಟ್ಟಗಳ ಮೇಲೆ ಮೋಡಗಳ ಚಾಪೆ ಹಾಸಲಾಗಿದೆಯೇನೋ ಅನ್ನಿಸುತ್ತದೆ. ಮಳೆಗಾಲದಲ್ಲಂತೂ ಜೇನುಕಲ್ಲು ಗುಡ್ಡದ ಸೌಂದರ್ಯ ನೂರ್ಮಡಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕಣಿವೆಯಾಳದಲ್ಲಿ ಕಾಣುವ ಅಂಕೋಲಾ ತಾಲೂಕಿನ ಪ್ರದೇಶಗಳು, ನಡು ನಡುವೆ ತಲೆಯೆತ್ತಿರುವ ಗುಡ್ಡಗಳು, ಹಸಿರ ತೋಟಗಳು, ಬಾನಿನ ಕಡೆಗೆ ಮುಖ ಮಾಡಿ ನಿಂತ ಕಾನನದ ಮರಗಳು, ನಡು ನಡುವೆ ಗದ್ದೆಗಳು ಇವೆಲ್ಲವೂ ಕೂಡ ಕಣ್ಮನ ಸೆಳೆಯುತ್ತವೆ.
ಜೇನಕಲ್ಲು ಗುಡ್ಡ ಹೆಸರೇ ಹೇಳುವ ಹಾಗೆ ಜೇನುಗಳ ಕಲ್ಲು ಕೂಡ ಹೌದು. ಕಡಿದಾದ ಕಲ್ಲು ಬಂಡೆ. ಆ ಕಲ್ಲುಬಂಡೆಯ ಪಾರ್ಶ್ವದಲ್ಲೆಲ್ಲ ಜೇನುಗಳು ಗೂಡು ಕಟ್ಟಿಕೊಂಡಿದೆ. ಈ ಜೇನುಕಲ್ಲು ಗುಡ್ಡದ ನೆತ್ತಿಯ ಮೇಲೆ ನಿಂತರೆ ಎಷ್ಟು ಆಹ್ಲಾದವೋ, ಅಷ್ಟೇ ಅಪಾಯಕಾರಿ ತಾಣವೂ ಇದಾಗಿದೆ. ಕಬ್ಬಿಣದ ಬೇಲಿ ಇಲ್ಲಿದ್ದರೂ ಕೊಂಚ ಯಾಮಾರಿದರೆ ಕೈಲಾಸವೇ ಗತಿ ಎನ್ನುವಂತಹ ಸ್ಥಳ. ನೆತ್ತಿಯ ಮೇಲೆ ಒಂದೆರಡು ವೀಕ್ಷಣಾ ಗೋಪುರಗಳೂ ಇದೆ. ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿದಂತಹ ಸ್ಥಳ. ದಟ್ಟವಾದ ಕಾಡಿನಿಂದಾವೃತವಾದ ಈ ತಾಣಕ್ಕೆ ವರ್ಷದ ಯಾವುದೇ ಕಾಲದಲ್ಲಿಯೂ ಕೂಡ ಹೋಗಿ ಬರಬಹುದು. ಈ ತಾಣದವರೆಗೂ ಬಸ್ ಸೌಕರ್ಯವಿಲ್ಲ. ಸ್ವಂತ ವಾಹನವನ್ನು ಬಳಸುವುದು ಅನಿವಾರ್ಯ. ಕಚ್ಚಾ ರಸ್ತೆ ದ್ವಿಚಕ್ರ ವಾಹನ ಸವಾರರನ್ನು ಹೈರಾಣಾಗಿಸಬಹುದು. ಆದರೆ ಜೇನುಕಲ್ಲು ಗುಡ್ಡದಲ್ಲಿ ವಿಹರಿಸಿದರೆ ಮನಸ್ಸಿನ ಕ್ಲೇಷ, ಆಯಾಸ, ಪ್ರಯಾಸಗಳೆಲ್ಲ ಕ್ಷಣಾರ್ದದಲ್ಲಿ ದೂರವಾಗುತ್ತದೆ.
ಜೇನುಕಲ್ಲು ಗುಡ್ಡ ನೋಡಲು ಬಂದರೆ ಅಕ್ಕಪಕ್ಕದಲ್ಲಿಯೇ ಮಾಗೋಡು ಜಲಪಾತ ಹಾಗೂ ಕವಡೀಕೆರೆಗಳಿದೆ. ಆರೇಳು ಕಿಲೋಮೀಟರ್ ದೂರದಲ್ಲಿಯೇ ಈ ತಾಣಗಳಿದ್ದು ಇವನ್ನೂ ಕೂಡ ಕಣ್ತುಂಬಿಕೊಳ್ಳಬಹುದು. ಇಷ್ಟೇ ಅಲ್ಲ, ಹತ್ತಿರದಲ್ಲಿಯೇ ಚಂದಗುಳಿಯ ಘಂಟೆ ಗಣಪನ ಸನ್ನಿಯೂ ಇದೆ. ಘಂಟೆಯನ್ನು ಹರಕೆಯ ರೂಪದಲ್ಲಿ ಸಮರ್ಪಿಸಿದರೆ ಇಷ್ಟಾರ್ಥ ಕರುಣಿಸುತ್ತಾನೆ ಎನ್ನುವ ಪ್ರತೀತಿ ಹೊಂದಿರುವವ ಗಣಪನ ದೇವಾಲಯ ಹತ್ತಿರದಲ್ಲೇ ಇದೆ. ಜೇನುಕಲ್ಲು ಗುಡ್ಡವನ್ನು ನೋಡಲು ಬರುವವರು ಇವುಗಳನ್ನೂ ನೋಡಬಹುದು.
ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳು ಮೋಜು ಮಸ್ತಿಗೆ ಬಳಕೆಯಾಗುತ್ತಿವೆ. ಇಂತಹ ತಾಣಕ್ಕೆ ಬರುವವರು ನಿರ್ಮಲ ಮನಸ್ಸಿನಿಂದ ಬಂದು ಹೋಗುವುದು ಬಿಟ್ಟು ಗುಂಡುಗಲಿಗಳಾಗುತ್ತಿದ್ದಾರೆ. ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ಸೇರಿದಂತೆ ತಾವು ತರುವ ವಸ್ತುಗಳನ್ನು ಇಂತಹ ತಾಣಗಳಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುವ ಕಾರ್ಯದಲ್ಲಿ ನಿರತರಾಗುತ್ತಾರೆ. ಜೇನುಕಲ್ಲು ಗುಡ್ಡಕ್ಕೆ ಹೋಗುವವರು ತ್ಯಾಜ್ಯವನ್ನು ಎಸೆಯಲು ಅವಕಾಶ ಕೊಡಬಾರದು. ಪ್ರಕೃತಿಯ ಮಧ್ಯದಲ್ಲಿರುವ ತಾಣವನ್ನು ಮಲಿನ ಮಾಡದೇ ತಾಣದ ಸಹಜತೆ ಉಳಿಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಅಷ್ಟಾದಾಗ ಮಾತ್ರ ಇಂತಹ ತಾಣಗಳ ಸೌಂದರ್ಯ ಸಹಜವಾಗಿರುತ್ತದೆ, ಇನ್ನಷ್ಟು ಹೆಚ್ಚುತ್ತದೆ.
ಹೋಗುವ ಬಗೆ :
ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬಂದು ಅಲ್ಲಿಂದ 15-18 ಕಿ.ಮಿ ದೂರದಲ್ಲಿರುವ ಜೇನುಕಲ್ಲು ಗುಡ್ಡಕ್ಕೆ ಹೋಗಬಹುದು. ಶಿವಮೊಗ್ಗ-ಶಿರಸಿಯ ಮೂಲಕ ಬರುವವರು ಯಲ್ಲಾಪುರ ರಸ್ತೆಯಲ್ಲಿ ಸಾಗಿ ಮಳಲಗಾಂವ್ ಅಥವಾ ಉಪಳೇಶ್ವರದಲ್ಲಿ ಎಡಕ್ಕೆ ತಿರುಗಿ ಚಂದಗುಳಿ, ಮಾಗೋಡ ಫಾಲ್ಸ್ ಮೂಲಕ ಜೇನುಕಲ್ಲು ಗುಡ್ಡಕ್ಕೆ ತೆರಳಬಹುದು. ಮಂಗಳೂರು ಭಾಗದಿಂದ ಬರುವವರು ಅಂಕೋಲಾಕ್ಕೆ ಬಂದು ಅಲ್ಲಿಂದ ಯಲ್ಲಾಪುರ ಮೂಲಕ ಈ ತಾಣವನ್ನು ತಲುಪಲು ಸಾಧ್ಯವಿದೆ. ಯಾವುದೇ ಹೊಟೆಲುಗಳು ಅಥವಾ ಇನ್ನಿತರ ಅಂಗಡಿಗಳು ಇಲ್ಲಿಲ್ಲದ ಕಾರಣ ದಿನವಿಡೀ ಇರಲು ಬಯಸುವವರು ಊಟ ಅಥವಾ ತಿಂಡಿ ಕಟ್ಟಿಕೊಂಡು ಬರುವುದು ಅನಿವಾರ್ಯ. ಯಲ್ಲಾಪುರದಲ್ಲಿ ಉಳಿಯಲು ವಸತಿಗೃಹಗಳಿವೆ. ಒಂದು ಅಥವಾ ಎರಡು ದಿನಗಳ ಅವಯಲ್ಲಿ ಜೇನುಕಲ್ಲು ಗುಡ್ಡ ಸೇರಿದಂತೆ ಯಲ್ಲಾಪುರ ತಾಲೂಕಿನ ಎಲ್ಲ ಪ್ರವಾಸಿ ತಾಣಗಳ ದರ್ಶನ ಮಾಡಬಹುದಾಗಿದೆ.

-----------

(ಈ ಲೇಖನ 2017ರ ಡಿಸೆಂಬರ್ 20ರಂದು ಹೊಸದಿಗಂತದ ಅಂತರಗಂಗೆ ಪುರವಣಿಯ ಯುವರಾಗ ಪುಟದಲ್ಲಿ ಪ್ರಕಟವಾಗಿದೆ)

Wednesday, December 13, 2017

ಭೂಮಿಯ ಮೇಲಿಂದ ಅಳಿದು ಹೋದ ಪ್ರಾಣಿಗಳು

(ಗ್ರೇಟ್ ಆಕ್)
ಮನುಷ್ಯನ ದುರಾಸೆ, ಬೇಟೆಯಾಡುವ ಚಪಲ, ಆಹಾರದ ಬಯಕೆ ಈ ಹಲವಾರು ಕಾರಣಗಳಿಂದಾಗಿ ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತದೆ. ವನ್ಯ ಪ್ರಾಣಿಗಳನ್ನಂತೂ ಸುಖಾ ಸುಮ್ಮನೆ ಕೊಂದು ಹಾಕಿದ ನಿದರ್ಶನಗಳೂ ಇದೆ. ಮನುಷ್ಯನ ಸ್ವಾರ್ಥಕ್ಕಾಗಿ ಜಗತ್ತಿನಲ್ಲಿ ಅದೆಷ್ಟೋ ಪ್ರಾಣಿಗಳು ಅಳಿದು ಹೋಗಿದೆ. ಪಕ್ಷಿಗಳು ವಿನಾಶ ಹೊಂದಿವೆ. ಅಷ್ಟೇ ಏಕೆ ಈಗಲೂ ಕೂಡ ಅದೆಷ್ಟೋ ಪ್ರಾಣಿ, ಪಕ್ಷಿ ಸಂಕುಲಗಳು ವಿನಾಶದ ಅಂಚಿನಲ್ಲಿವೆ. ಲಕ್ಷ ಲಕ್ಷ ಸಂಖ್ಯೆಗಳಲ್ಲಿದ್ದ ವನ್ಯ ಮೃಗಗಳು ಒಂದೇ ಒಂದೂ ಕಾಣದಂತೆ ನಾಶವಾಗಿದೆ. ಯಾಂತ್ರೀಕರಣ, ಉದ್ದಿಮೆಗಳು, ಕಾರ್ಖಾನೆಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಕಾರಣಗಳಿಂದ ಪ್ರಾಣಿ, ಪಕ್ಷಿಗಳ ನಾಶ ಹೆಚ್ಚಿವೆ. ಕಳೆದ ೩೦೦-೪೦೦ ವರ್ಷಗಳಲ್ಲಿ ಅಪರೂಪದ, ವಿಶಿಷ್ಟ ಪ್ರಾಣಿಗಳು-ಪಕ್ಷಿಗಳು ನಶಿಸಿಹೋಗಿದೆ. ಮುಂದಿನ ಜನಾಂಗಕ್ಕೆ ಇವುಗಳ ಸಣ್ಣ ಕುರುಹೂ ಕೂಡ ಉಳಿದಿಲ್ಲ.  ಕಳೆದ ಮೂರು ಶತಮಾನಗಳಲ್ಲಿ ಅಳಿದು ಹೋಗಿರುವ ೧೧ ಅಪರೂಪದ ಪ್ರಾಣಿಗಳ ಕುರಿತು ಚಿಕ್ಕ ಮಾಹಿತಿ ಇಲ್ಲಿದೆ.

ಗ್ರೇಟ್ ಆಕ್
ಪೆಂಗ್ವಿನಸ್ ಇಂಪೆನ್ನಿಸ್ ಎಂಬ ವೈಜ್ಞಾನಿಕ ನಾಮಧೇಯವನ್ನು ಹೊಂದಿರುವ ಗ್ರೇಟ್ ಆಕ್ ೧೮ನೇ ಶತಮಾನದ ಉತ್ತರಾರ್ಧದಲ್ಲಿ ಅಳಿದು ಹೋಗಿದೆ. ಕೆನಡಾ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್,  ಸ್ಕಾಂಡಿನೇವಿಯಾ, ಬ್ರಿಟೀಷ್ ದ್ವೀಪಗಳು, ಉತ್ತರ ಅಟ್ಲಾಂಟಿಕ್ ಹಾಗೂ ರಾಕಿ ಐಲ್ಯಾಂಡ್‌ಗಳಲ್ಲಿ ವಾಸ ಮಾಡುತ್ತಿದ್ದ ಈ ಪಕ್ಷಿ ಸಾಧು ಸ್ವಭಾವದಿಂದ ಎಲ್ಲರನ್ನು ಸೆಳೆಯುತ್ತಿತ್ತು.  ಕಪ್ಪು ಹಾಗೂ ಬಿಳಿ ಬಣ್ಣ ಮಿಶ್ರಣದ ೭೫ ರಿಂದ ೮೫ ಸೆಂ.ಮಿ ಎತ್ತರದ ಈ ಪಕ್ಷಿ  ೫ ಕೆಜಿವರೆಗೆ ತೂಗುತ್ತಿತ್ತು. ೧೮ನೇ ಶತಮಾನದಲ್ಲಿ ಈ ಪಕ್ಷಿಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಬೇಟೆಯಾಡಲಾಯಿತು. ೧೮೫೦ರ ದಶಕದ ವೇಳೆಗೆ ಇವುಗಳ ಸಂಖ್ಯೆ ಕಡಿಮೆಯಾದಂತೆಲ್ಲ ಈ ಪ್ರಾಣಿಗಳನ್ನು ಬೇಟೆಯಾಡಿ, ಅವನ್ನು ಸಂಗ್ರಹಿಸುವುದು ಪ್ರತಿಷ್ಠೆಯ ಪ್ರತೀಕವಾಯಿತು. ಸಿಗುರೌರ್ ಹಾಗೂ ಆತನ ಇಬ್ಬರು ಜೊತೆಗಾರರು ೧೮೪೪ರ ಜುಲೈ ೩ರಂದು ಕೊಟ್ಟಕೊನೆಯ ಗ್ರೇಟ್ ಆಕ್ ಜೋಡಿ ಹಕ್ಕಿಗಳನ್ನು ಬೇಟೆಯಾಡುವುದರೊಂದಿಗೆ ಈ ಸಂತತಿ ಭೂಮಿಯ ಮೇಲಿಂದ ನಶಿಸಿಹೋಯಿತು. ಈ ಹಕ್ಕಿಯನ್ನು ಇದೀಗ ಮ್ಯೂಸಿಯಂಗಳಲ್ಲಿ ಪಳೆಯುಳಿಕೆಗಳ ಹಾಗೂ ಪ್ರತಿಕೃತಿಗಳ ರೂಪದಲ್ಲಿ ಮಾತ್ರ ನೋಡಲು ಸಾಧ್ಯ.

(ಡೋಡೋ)
ಡೋಡೋ
ಪಾರಿವಾಳಗಳ ಕುಟುಂಬಕ್ಕೆ ಸೇರಿದ ಡೋಡೋ ಮಾರಿಷಸ್ ದ್ವೀಪಗಳಲ್ಲಿ ವಾಸಿಸುತ್ತಿತ್ತುಘಿ. ೧೫೯೮ರ ವೇಳೆಗೆ ಡಚ್ ನೌಕಾಯಾನಿಗಳು ಮಾರಿಷಸ್ಸಿನಲ್ಲಿ ಅಪರೂಪದ ಈ ಪಕ್ಷಿ ಸಂಕುಲವನ್ನು ಕಂಡರು. ಅದನ್ನು ನಂತರ ಹೊರ ಜಗತ್ತಿಗೆ ಪರಿಚಯಿಸಿದರು. ಈ ಪಕ್ಷಿಗಳು ವರ್ಷಕ್ಕೊಮ್ಮೆ ಮಾತ್ರ ಮೊಟ್ಟೆಯನ್ನಿಟ್ಟು ಮರಿ ಮಾಡುತ್ತಿದ್ದವು. ೧ ಮೀಟರ್ ಎತ್ತರದ ಈ ಪಕ್ಷಿಗಳು ಗರಿಷ್ಠ ೧೮ ಕೆಜಿ ತೂಕವನ್ನು ಹೊಂದಿದ್ದವು. ಡಚ್ಚರು ಮಾರಿಷಸ್‌ಗೆ ಭೇಟಿ ನೀಡುವುದಕ್ಕೂ ಮೊದಲು ಲಕ್ಷಾಂತರ ಸಂಖ್ಯೆಯಲ್ಲಿದ್ದ ಡೋಡೋಗಳು ನಂತರ  ಕೆಲವೇ ವರ್ಷಗಳಲ್ಲಿ ಅಳಿವಿನ ಅಂಚು ತಲುಪಿದವು. ಮಾರಿಷಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಡೊಡೋಗಳನ್ನು ಬೇಟೆಯಾಡಲಾಯಿತು. ಅಷ್ಟೇ ಅಲ್ಲದೇ ಮಾರೀಷಸ್ ದ್ವೀಪಕ್ಕೆ ಡಚ್ಚರು ನಾಯಿ, ಬೆಕ್ಕುಘಿ, ಹಂದಿ, ಇಲಿ, ಏಡಿಗಳನ್ನು ತಿನ್ನುವ ಕೋತಿಗಳನ್ನು ಅಮದು ಮಾಡಿಕೊಂಡ ನಂತರ ಡೋಡೋಗಳ ನಾಶ ಇಮ್ಮಡಿಸಿತು. ೧೮೮೭ರಲ್ಲಿ ಕೊಟ್ಟ ಕೊನೆಯ ಡೋಡೋ ಸಾವನ್ನಪ್ಪಿತು.  ಡೋಡೊಗಳು ಯಾವ ರೀತಿ ಸಾವನ್ನಪ್ಪಿದವೆಂದರೆ ಇವುಗಳ  ಸಾವಿನ ಕುರಿತಂತೆಯೇ ಇಂಗ್ಲೀಷಿನಲ್ಲಿ ಡೆಡ್ ಆಸ್ ಡೋಡೋ ಹಾಗೂ ಟು ಗೋ ದ ವೇ ಆಫ್ ದ ಡೋಡೋ ಎನ್ನುವ ಎರಡು ರೂಪಕಗಳೇ ಹುಟ್ಟಿಕೊಂಡಿವೆ.

(ಎಲಿಫೆಂಟ್ ಬರ್ಡ್ ನ ಮೊಟ್ಟೆ)
ಎಲಿಫೆಂಟ್ ಬರ್ಡ್
ಭೂಮಿಯ ಮೇಲಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಹೆಚ್ಚು ತೂಕವನ್ನು ಹೊಂದಿರುವ ಪಕ್ಷಿ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದ್ದ ಎಲಿಫೆಂಟ್ ಬರ್ಡ್ ಭೂಮಿಯ ಮೇಲಿಂದ ಅಳಿದು ಹೋಗಿದೆ. ೧೦ ಅಡಿ ಎತ್ತರ ಹಾಗೂ ೧೦೦೦ ಪೌಂಡ್ ತೂಕವನ್ನು ಹೊಂದಿದ್ದ ಈ ಬೃಹತ್ ಗಾತ್ರದ ಪಕ್ಷಿ ಮಡಗಾಸ್ಕರ್ ದ್ವೀಪದಲ್ಲಿ ವಾಸಿಸುತ್ತಿತ್ತುಘಿ. ಪ್ರಸ್ತುತ ಭೂಮಿಯ ಮೇಲಿನ ಅತ್ಯಂತ ದೊಡ್ಡ ಪಕ್ಷಿಗಳು ಎನ್ನುವ ಖ್ಯಾತಿ ಗಳಿಸಿಕೊಂಡಿರುವ ಆಸ್ಟ್ರಿಚ್ ಹಾಗೂ ಎಮುಗಳ ಜಾತಿಗೆ ಹತ್ತಿರದ ಪಕ್ಷಿ ಇದಾಗಿತ್ತು. ಇದೂ ಕೂಡ ಹಾರಲಾರದ ಪಕ್ಷಿಯಾಗಿತ್ತು. ವೇಗವಾಗಿ ಓಡಬಲ್ಲ ಈ ಪಕ್ಷಿ, ತನ್ನ ಬೃಹತ್ ಗಾತ್ರದ ಕಾರಣ ಹಾರಾಟ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಭೂಮಿಯ ಮೇಲೆ ಹಕ್ಕಿಗಳೇ ಬಹುಸಂಖ್ಯಾತವಾಗಿದ್ದ ಸಂದರ್ಭದಿಂದಲೂ  ಅಂದರೆ ಕನಿಷ್ಟ ೬೦ ಸಾವಿರ ವರ್ಷಗಳಿಂದ ಜೀವಿಸಿದ್ದ ಎಲಿಫೆಂಟ್ ಬರ್ಡ್ ಮನುಷ್ಯನ ಬೇಟೆಯ ಚಪಲಕ್ಕೆ ಭೂಮಿಯಿಂದಲೇ ನಾಪತ್ತೆಯಾಯಿತು. ೧೭ನೇ ಶತಮಾನದ ಮೊದಲಾರ್ಧ  ಭಾಗದಲ್ಲಿ ಎಲಿಫೆಂಟ್ ಬರ್ಡ್ ವಿನಾಶ ಹೊಂದಿತು.

(ಟಾಸ್ಮೇನಿಯನ್ ಟೈಗರ್)
ಥೈಲಸಿನ್ಸ್ (ಟಾಸ್ಮೇನಿಯನ್ ಟೈಗರ್)
ಟಾಸ್ಮೇನಿಯನ್ ಟೈಗರ್ ಅಥವಾ ಟಾಸ್ಮೇನಿಯನ್ ತೋಳ ಎಂದು ಕರೆಸಿಕೊಳ್ಳುತ್ತಿದ್ದ ಥೈಲಸಿನ್ಸ್  ಆಸ್ಟ್ರೇಲಿಯಾ ಖಂಡದ ಟಾಸ್ಮೇನಿಯಾ ದ್ವೀಪದ ಅಪರೂಪದ ಪ್ರಾಣಿಗಳಲ್ಲಿ ಒಂದಾಗಿತ್ತು. ನ್ಯೂ ಗಿನಿಯಾ ಮುಂತಾದ ಪ್ರದೇಶಗಳೂ ಇವುಗಳ ಆವಾಸ ಸ್ಥಾನಗಳಾಗಿದ್ದವು. ಅತ್ಯಂತ ವಿಶಿಷ್ಟವಾದ ಪ್ರಾಣಿಗಳಲ್ಲಿ ಒಂದು ಎನ್ನಿಸಿಕೊಂಡಿದ್ದ ಥೈಲಸಿನ್ಸ್ ನಾಯಿಯ ತಲೆ ಹಾಗೂ ಕಾಂಗರೂಗಳಿಗೆ ಇರುವಂತೆ ಹೊಟ್ಟೆಯಲ್ಲಿ ಚೀಲವನ್ನು ಹೊಂದಿತ್ತು. ಟಾಸ್ಮೇನಿಯಾದಲ್ಲಿ ಜನವಸತಿ ಹೆಚ್ಚಿದಂತೆಲ್ಲ  ಥೈಲಸಿನ್ಸ್‌ಗಳ ಬೇಟೆ ತೀವ್ರಗೊಂಡಿತು. ವ್ಯಾನ್ ಡೀಮನ್ಸ್ ಲ್ಯಾಂಡ್ ಕಂಪನಿ ಈ ಪ್ರಾಣಿಗಳ ತುಪ್ಪಳಕ್ಕಾಗಿ ವುಗಳನ್ನು ಬೇಟೆಯಾಡಿತು. ಬಹುಶಃ ಈ ಪ್ರಾಣೀಗಳು ಅಳಿದು ಹೋಗಲು ಈ ಕಂಪನಿಯ ಪಾತ್ರ ಪ್ರಮುಖವಾದುದು ಎಂದರೆ ತಪ್ಪಾಗಲಿಕ್ಕಿಲ್ಲ. ೧೯೩೬ರಲ್ಲಿ ಆಸ್ಟ್ರೇಲಿಯಾದ ಹೋಬರ್ಟ್ ಮೃಗಾಲಯದಲ್ಲಿದ್ದ ಬೆಂಜಮಿನ್ ಎಂಬ ಹೆಸರಿನ ಕೊಟ್ಟಕೊನೆಯ ಥೈಲಸಿನ್ಸ್ ಸಾವನ್ನಪ್ಪುವುದರೊಂದಿಗೆ ಈ ಪ್ರಾಣಿ ಸಂಕುಲ ವಿನಾಶ ಹೊಂದಿತು.

(ಮಸ್ಕಾಕ್ಸ್)
ಮಸ್‌ಕಾಕ್ಸ್
ಆರ್ಕ್‌ಟಿಕ್ ಪ್ರದೇಶದಲ್ಲಿ ಸಹಸ್ರಾರು ವರ್ಷಗಳಿಂದ ವಾಸಿಸುತ್ತಿದ್ದ ಮಸ್‌ಕಾಕ್ಸ್‌ಗಳು ೧೯೦೦ ರಿಂದ ೧೯೩೦ರ ವೇಳೆಗೆ ಭೂಮಿಯಿಂದ ವಿನಾಶಹೊಂದಿತು. ಹಿಮಾವೃತ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದ ಉದ್ದ ಕೂದಲಿನ, ನೋಡಲು ಎಮ್ಮೆ ಹಾಗೂ ಕಾಡುಕೋಣದ ಗಾತ್ರದಲ್ಲಿದ್ದ ಮಸ್‌ಕಾಕ್ಸ್‌ಗಳು ಸಾಧುಪ್ರಾಣಿಗಳು. ಇವುಗಳು ಗರಿಷ್ಠ ೧.೫ ಮೀಟರ್ ಎತ್ತರವಾಗಿದ್ದವು ಹಾಗೂ ೨೮೦ ರಿಂದ ೪೧೦ ಕೆಜಿ ತೂಕವನ್ನು ಹೊಂದಿದ್ದವು. ಇವುಗಳ ತಲೆ, ಬಹುಮಾನ ಹಾಗೂ ಕಪ್‌ಗಳಿಗಾಗಿಯೇ ಇವುಗಳನ್ನು ಕೊಲ್ಲಲಾಯಿತು. ಇವುಗಳ ಮಾಂಸಕ್ಕೆ ಆ ದಿನಗಳಲ್ಲಿ ಒಂದು ಔನ್ಸ್‌ಗೆ ೪೦ರಿಂದ ೮೦ ಅಮೆರಿಕನ್ ಡಾಲರ್ ಬೆಲೆಯಿತ್ತು.  ಈ ಪ್ರಾಣೀಗಳ ಕುಟುಂಬಕ್ಕೆ ಸೇರಿದ ಇತರ ಪ್ರಾಣಿಗಳ ಜೀವಕೋಶಗಳನ್ನು ಬಳಸಿ, ೧೯೦೦-೩೦ರ ದಶಕದಲ್ಲಿ ಹತ್ಯೆ ಮಾಡಲ್ಪಟ್ಟ ಮಸ್‌ಕಾಕ್ಸ್‌ಗಳ ಜೀವಕೋಶಗಳನ್ನು ಬಳಕೆ ಮಾಡಿ ಇವನ್ನು ಪುನರ್ ಸೃಷ್ಟಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ.

(ಮಾಂಕ್ ಸೀಲ್, ಮೆಡಟರೇನಿಯನ್)
ಮೆಡಟರೇನಿಯನ್ ಮಾಂಕ್ ಸೀಲ್
ಯಾಂತ್ರೀಕರಣ, ಕಾರ್ಖಾನೆಗಳ ಹೆಚ್ಚಳ, ಸಮುದ್ರವನ್ನು ಸೇರುತ್ತಿರುವ ತ್ಯಾಜ್ಯಗಳು ಇತ್ಯಾದಿ ಕಾರಣದಿಂದ ಮೆಡಟರೇನಿಯನ್ ಮಾಂಕ್ ಸೀಲ್‌ಗಳ ಅಂತ್ಯವಾಗಿದೆ. ಅಪರೂಪದ ಸಮುದ್ರ ಸಸ್ತನಿ ಜಾತಿಗಳಲ್ಲಿ ಒಂದು ಎನ್ನಿಸಿಕೊಂಡಿದ್ದ ಇವುಗಳು ಇತ್ತೀಚಿನ ದಿನಗಳಲ್ಲಿ ಅಳಿದಿವೆ. ಇವುಗಳು ಕನಿಷ್ಠ ೮೦ ಸೆಂ.ಮೀ. ಉದ್ದವಾಗಿ ಬೆಳೆಯುತ್ತಿದ್ದವು.  ೧೫-೧೮ ಕೆ.ಜಿ. ತೂಕವನ್ನು ಹೊಂದಿದ್ದವು. ಮೆಡಟರೇನಿಯನ್ ಸಮುದ್ರ ಪ್ರದೇಶದಲ್ಲಿ ವಾಸಿಸುತ್ತಿದ್ದ ಈ ಪ್ರಾಣಿಗಳನ್ನು ಯೂರೋಪ್ ಹಾಗೂ ಆಪ್ರಿಕಾ ದೇಶಗಳ ಜನರು ಗುಂಡಿಟ್ಟು ಬೇಟೆ ಮಾಡಿದ ಕಾರಣ ವಿನಾಶವನ್ನು ಹೊಂದಿವೆ. ಇತ್ತೀಚೆಗೆ ಇವುಗಳನ್ನು ಅಲ್ಲೊಮ್ಮೆ-ಇಲ್ಲೊಮ್ಮೆ ನೋಡಿದ್ದಾಗಿ ವರದಿಗಳು ಬಿತ್ತರಗೊಂಡಿದ್ದರೂ, ೨೦೧೫ರ ವೇಳೆಗೆ ಇವುಗಳು ೧೦೦ಕ್ಕೂ  ಕಡಿಮೆ ಸಂಖ್ಯೆಯಲ್ಲಿ ಇರಬಹುದು ಎನ್ನಲಾಗುತ್ತಿದೆ.

(ಬಾರ್ಬೇರಿಯನ್ ಸಿಂಹ)
ಬಾರ್ಬೇರಿ ಸಿಂಹಗಳು
ಅಟ್ಲಾಸ್ ಲಯನ್ಸ್ ಅಥವಾ ಬಾರ್ಬೇರಿ ಲಯನ್ಸ್ ಎಂದು ಕರೆಯಲ್ಪಡುತ್ತಿದ್ದ ಈ ಪ್ರಾಣಿಗಳು ಉತ್ತರ ಆಪ್ರಿಕಾದ ಮೊರಾಕ್ಕೋದಿಂದ ಈಜಿಪ್ಟ್ ವರೆಗಿನ ಸಹಾರಾ ಮರುಭೂಮಿಯಲ್ಲಿನ ಗುಡ್ಡ ಬೆಟ್ಟಗಳಲ್ಲಿ ವಾಸ ಮಾಡುತ್ತಿದ್ದವು. ಸಿಂಹದ ಜಾತಿಗೆ ಸೇರಿದ ಈ ಪ್ರಾಣೀಗಳು ತಮ್ಮ ದೊಡ್ಡ ಗಾತ್ರದಿಂದ ಎಲ್ಲರನ್ನೂ ಸೆಳೆಯುತ್ತಿದ್ದವು. ಇವುಗಳ ಎತ್ತರ ಗರಿಷ್ಠ ೨.೮ ಮೀಟರ್‌ಗಳಷ್ಟಿದ್ದವು. ಅನಾಮತ್ತು ೨೭೦ರಿಂದ ೩೦೦ ಕೆ.ಜಿ. ತೂಕವನ್ನು ಹೊಂದಿದ್ದವು. ಆಫ್ರಿಕಾ ಮರುಭೂಮಿಯಲ್ಲಿ ಅವ್ಯಾಹತವಾದ ಬೇಟೆಯಿಂದಾಗಿ ಇವುಗಳು ವಿನಾಶ ಹೊಂದಿದವು. ದಾಖಲೆಗಳ ಪ್ರಕಾರ ೧೯೪೨ರಲ್ಲಿ ಕೊಟ್ಟ ಕೊನೆಯ ಬಾರ್ಬೇರಿ ಸಿಂಹವನ್ನು ಹತ್ಯೆ ಮಾಡಲಾಯಿತು ಎನ್ನಲಾಗಿದೆ. ಇನ್ನೂ ಕೆಲವರ ಪ್ರಕಾರ ೧೯೬೦ರಲ್ಲಿ ಕೊಟ್ಟ ಕೊನೆಯ ಬಾರ್ಬೇರಿ ಸಿಂಹವನ್ನು ಹತ್ಯೆ ಮಾಡಲಾಗಿದೆ.

(ವಾರ್ರಾಹ್)
ವಾರ್ರಾಹ್
ಫಾಕ್‌ಲ್ಯಾಂಡ್ ಐಲ್ಯಾಂಡ್ ತೋಳ ಎನ್ನುವ ಹೆಸರಿನಿಂದಲೂ ಕರೆಸಿಕೊಳ್ಳುವ ವಾರ್ರಾಹ್‌ಗಳು ೧೭೬೦ರ ದಶಕದಲ್ಲಿ ಮನುಷ್ಯ ಫಾಕ್‌ಲ್ಯಾಂಡ್‌ಗೆ ಕಾಲಿರಿಸುವವರೆಗೂ ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಆದರೆ ಯಾವಾಗ ಮನುಷ್ಯ ಎಲ್ಲಿಗೆ ಹೋದನೋ, ಅಂದಿನಿಂದ ಇವುಗಳ ಅಳಿವು ಆರಂಭವಾಯಿತು. ದಕ್ಷಿಣ ಅಮೇರಿಕದ ತುತ್ತತುದಿಯಾದ ಚಿಲಿ ಹಾಗೂ ಅರ್ಜೆಂಟೇನಾದ ದ್ವೀಪಗಳು ಇವುಗಳ ವಾಸಸ್ಥಾನವಾಗಿದ್ದವು. ಆದರೆ ೧೮೭೬ರ ವೇಳೆಗೆ ಅಂದರೆ ಮನುಷ್ಯ ಕಾಲಿರಿಸಿದ ೧೧೬ ವರ್ಷಗಳಲ್ಲಿಯೇ ಇವುಗಳು ವಿನಾಶ ಹೊಂದಿದವು.

(ಸ್ಕೋಂಬಾರ್ಕ್ಸ್ ಜಿಂಕೆ)
ಸ್ಕೋಂಬರ್ಕ್ ಜಿಂಕೆ
ಥೈಲ್ಯಾಂಡ್‌ನಲ್ಲಿ ಜೀವಿಸುತ್ತಿದ್ದ ಸ್ಕೋಂಬರ್ಕ್ ಜಿಂಕೆಯ ಕೊಂಬುಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂಬುದು ಸ್ಥಳೀಯರ ನಂಬಿಕೆಯಾಗಿತ್ತು. ಥೈಲ್ಯಾಂಡಿನ ಮಾಂತ್ರಿಕರು ಇವುಗಳ ಕೊಂಬುಗಳನ್ನು ವಿಶೇಷವಾಗಿ ಬಳಕೆ ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಭಾರಿ ಪ್ರಮಾಣದಲ್ಲಿ ಇವುಗಳನ್ನು ಬೇಟೆಯಾಡಲಾಯಿತು. ಕೊಟ್ಟ ಕೊನೆಯ ಸ್ಕೋಂಬರ್ಕ್ ಜಿಂಕೆಯನ್ನು ೧೯೩೨ರಂದು ಬೇಟೆಯಾಡಲಾಯಿತು. ಆದರೂ ಥೈಲ್ಯಾಂಡಿನಲ್ಲಿ ಸಾಕಲಾಗಿದ್ದ ಕೊನೆಯದು ಎನ್ನಲಾಗುವ ಸ್ಕೋಂಬರ್ಕ್ ಜಿಂಕೆಯು ೧೯೩೮ರಂದು ಸಾವನ್ನಪ್ಪುವ ಮೂಲಕ ಇನ್ನೊಂದು ಪ್ರಾಣಿ ಸಂಕುಲ ವಿನಾಶ ಹೊಂದಿತು.

(ಟೆಕೋಪಾ ಪಫಿಶ್)
ಟೆಕೋಪಾ ಪಫಿಶ್
ಅಮೆರಿಕದ ಮೊಜಾವೆ ಮರುಭೂಮಿಯಲ್ಲಿದ್ದ ಓಯಸ್ಸಿಸ್‌ಗಳು ಹಾಗೂ ಇತರ ನೀರಿನ ಮೂಲಗಳಲ್ಲಿ ಬದುಕಿದ್ದ ಟೆಕೋಪಾ ಪಫೀಶ್ ಈಗಾಗಲೇ ವಿನಾಶವನ್ನು ಹೊಂದಿದೆ. ಅತ್ಯಂತ ಹೆಚ್ಚಿನ ಬಿಸಿ ನೀರನ್ನು ತಾಳಿಕೊಳ್ಳುವ ಶಕ್ತಿ ಹೊಂದಿದ್ದ ಟೆಕೋಪಾ ಪಫಿಶ್‌ಗಳ ಪೈಕಿ ಗಂಡು ಮೀನು ಗಾಢನೀಲಿ ಹಾಗೂ ಹೆಣ್ಣು ಮೀನು ತಿಳಿ ನೀಲಿ ಬಣ್ಣವನ್ನು ಹೊಂದಿದ್ದವು. ಮೊಜಾವೆ ಮರುಭೂಮಿಯ ನೀರಿನ ಮೂಲಗಳಲ್ಲಿ ೧೯೫೦ರ ದಶಕದಲ್ಲಿ ಈಜಲು ಬರುವವರ ಸಂಖ್ಯೆ ಜಾಸ್ತಿಯಾಯಿತು. ಅವರು ಈ ಮೀನುಗಳನ್ನು ಹಿಡಿದು ತಿನ್ನಲು ಆರಂಭಿಸಿದರು. ತದನಂತರ ಟೆಕೋಪಾ ಪಫಿಶ್‌ಗಳ ಅಳಿವು ಆರಂಭವಾಯಿತು. ೧೯೭೦ರ ಫೆಬ್ರವರಿ ೨ರಂದು ಕೊಟ್ಟ ಕೊನೆಯದಾಗಿ ಟೆಕೋಪಾ ಪಫಿಶ್‌ಗಳನ್ನು ನೋಡಿರುವ ಬಗ್ಗೆ ಉಲ್ಲೇಖಗಳಿವೆ.

(ಸೀ ಮಿಂಕ್)


ಸೀ ಮಿಂಕ್
ಉತ್ತರ ಅಮೆರಿಕದ ಅಟ್ಲಾಂಟಿಕ್ ಸಮುದ್ರ ವ್ಯಾಪ್ತಿಯ ಗಲ್ ಆಫ್ ಮೈನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಸೀ ಮಿಂಕ್‌ಗಳು ಇತ್ತೀಚೆಗಷ್ಟೇ ವಿನಾಶ ಹೊಂದಿದೆ.  ೧೮೬೦ರ ಸಂದ‘ರ್ದಲ್ಲಿ ಈ ಪ್ರಾಣಿಗಳನ್ನು ಬೇಟೆಯಾಡಿ ತಂದವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿತ್ತುಘಿ. ೧೮೦೦ ರಿಂದ ೧೯೦೦ರ ಅವಯಲ್ಲಿ ಇಂಗ್ಲೆಂಡ್ ಹಾಗೂ ಕೆನಡಾ ನಡುವಿನ ಅಟ್ಲಾಂಟಿಕ್ ಸಮುದ್ರದಲ್ಲಿ ಭಾರಿ ಸಂಖ್ಯೆಯಲ್ಲಿದ್ದ ಸೀ ಮಿಂಕ್‌ಗಳು ೨೦೦೦ದ ವೇಳೆಗೆ ಸಂಪೂರ್ಣವಾಗಿ ವಿನಾಶ ಹೊಂದಿವೆ.

Monday, December 4, 2017

ಅಬ್ಬಬ್ಬಾ ಹೆಸರೇ...!

ಕ್ರಿಕೆಟ್ ಆಡುವ ದೇಶಗಳು ಹಲವಾರು.. ಕ್ರಿಕೆಟ್ ಆಡುವ ಆಟಗಾರರ ಹೆಸರು ಮಾತ್ರ ಮಜವಾಗಿದೆ. ಕೆಲವು ಆಟಗಾರರ ಹೆಸರಂತೂ ಕಿಲೋಮೀಟರ್ಗಳಷ್ಟು ಉದ್ದವಿದೆ. ಶ್ರೀಲಂಕಾದ ಆಟಗಾರರ ಹೆಸರಂತೂ ಅದಷ್ಟು ಉದ್ದವಿದೆ ಅಂದರೆ.. ಆಹಾ ಬೆರಗಾಗುತ್ತೀರಿ. ಭಾರತದ ಕೆಲವು ಆಟಗಾರರ ಹೆಸರೂ ಸುದೀರ್ಘವಾಗಿದೆ. ಅಂತಹ ಕೆಲವು ವಿಶಿಷ್ಟ ಹಾಗೂ ಉದ್ದ ಹೆಸರನ್ನು ಇಲ್ಲಿ ಇಡುತ್ತಿದ್ದೇನೆ.. ಸುಮ್ನೆ ನೋಡಿ...

ಇಲ್ ಬುಲಾ
1947ರಿಂದ 1954ರ ನಡುವೆ ಫಿಜಿ ದೇಶದಲ್ಲಿ ಹಲವಾರು ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಬುಲಾ ಎಂಬ ಆಟಗಾರನ ಹೆಸರು ಎಷ್ಟು ಉದ್ದವಿದೆ ಎಂದರೆ... ಆಹಾ.. ಇಲಿಕೆನಾ ಲಸರುಸಾ ತಲೆಬುಲಾಮೈನವಾಲೆನಿವೈವಕಬುಲೈಮೈನಕುಲಲಕೆಬಲೌ- ಇದು ಆ ಪುಣ್ಯಾತ್ಮನ ಹೆಸರಂತೆ. ಈ ಹೆಸರನ್ನು ಒಂದೇ ಉಸುರಿಗೆ, ಹೇಳಿ ಅಂದರೆ ಎಂತವರೂ ತಬ್ಬಿಬ್ಬಾಗಬಹುದು. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಅಂದರೆ ಜಪ್ಪಯ್ಯಾ ಅಂದರೂ ಆಗೋದಿಲ್ಲ ಬಿಡಿ. ಅಂದಹಾಗೆ ಈತ ಹಾರ್ಡ್ ಹಿಟ್ಟರ್ ಆಗಿದ್ದನಂತೆ. ಎರಡು ಶತಕಗಳನ್ನೂ ಬಾರಿಸಿದ್ದಾನಂತೆ. ಆತನ ಹೆಸರನ್ನು ಬರೆಯಹೋದರೆ ಸ್ಕೋರ್ ಕಾರ್ಡಿನಲ್ಲಿ ಜಾಗ ಸಾಲುವುದಿಲ್ಲ ಬಿಡಿ. ಅದಕ್ಕೇ ಆತ ಇಲ್ ಬುಲಾ ಅಂತ ಚಿಕ್ಕದಾಗಿ ಮಾಡಿಕೊಂಡನಂತೆ.

ಚಮಿಂಡಾ ವಾಸ್
ಶ್ರೀಲಂಕಾದ ಎಡಗೈ ವೇಗದೂತ ಬೌಲರ್ ಚಮಿಂಡಾ ವಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುತ್ತಿದ್ದ ಈ ವಾಸ್ ನ ಪೂರ್ಣಹೆಸರು ಕೇಳಿದರೆ ಅಚ್ಚರಿಯಾಗಬಹುದು. ವರ್ಣಕುಲಸೂರಿಯಾ ಪಟಬೆಂಡಿಗೆ ಉಷಾಂತ ಜೋಸೆಫ್ ಚಮಿಂಡಾ ವಾಸ್ ಎನ್ನುವುದು ಆತನ ಪೂರ್ತಿ ಹೆಸರು. 400 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಈತ 761 ವಿಕೆಟ್ ಪಡೆದು ಸಾಧನೆ ಮಾಡಿದ್ದಾನೆ.

ಇಬಿ ಡ್ವಾಯರ್
ಸಿಡ್ನಿ ಮೂಲದ, ಇಂಗ್ಲೆಂಡ್ ಪರ ಆಡಿದ ಆಟಗಾರ ಎಡ್ ಡ್ವಾಯರ್. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಕೈಚಳಕ ತೋರಿದವರು ಇವರು. ಇವರ ಪೂರ್ಣ ಹೆಸರು ಜಾನ್ ಎಲಿಸಿಯಸ್ ಬೆನೆಡಿಕ್ಟ್ ಬೆರ್ನಾರ್ಡ್ ಪ್ಲೆಸಿಡ್ ಕ್ವಿರ್ಕ್ ಕ್ಯಾರಿಂಗ್ಟನ್ ಡ್ವಾಯರ್ ಎಂದು.

ಚನಕ ವಲಗೆದರಾ
ಶ್ರೀಲಂಕಾದ ಆಟಗಾರರ ಹೆಸರು ಸುದೀರ್ಘವಾಗಿದೆ. ಚಮಿಂಡಾ ವಾಸ್ ಹೆಸರನ್ನು ಈಗಾಗಲೇ ಓದಿದ್ದೀರಿ. ಚನಕ ವಲಗೆದರಾನ ಹೆಸರೂ ಕೂಡ ಸುದೀರ್ಘವಾಗಿದೆ. ಉಡಾ ವಲವ್ವೆ ಮಹಿಮ್ ಬಂಡಾರಲಗೆ ಚನಕ ಅಸಂಗ ವಲಗೆದರಾ ಎನ್ನುವುದನ್ನು ಸ್ಕೋರ್ ಕಾರ್ಡಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಚನಕ ವಲಗೆದರಾ ಅಂತ ಚಿಕ್ಕದು ಮಾಡಿಕೊಂಡಿರಬೇಕು ಬಿಡಿ. ಈ ಆಟಗಾರ ಈಗಾಗಲೇ 50 ವಿಕೆಟ್ ಕಬಳಿಸಿದ್ದಾರೆ.

ರಾಸ್ ಟೇಲರ್
ನ್ಯೂಝಿಲೆಂಡ್ ನ ಆಪದ್ಭಾಂಧವ, ಮಧ್ಯಮ ಕ್ರಮಾಂಕದ ಆಟಗಾರ ರಾಸ್ ಟೇಲರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಯಾವ ದೇಶದ ವಿರುದ್ಧ ಆಡದಿದ್ದರೂ ಭಾರತದ ವಿರುದ್ಧ ಅಂತೂ ಉತ್ತಮವಾಗಿಯೇ ಆಡುವ ಟೇಲರ್ ಹೆಸರೂ ಕೂಡ ಸಾಕಷ್ಟು ದೀರ್ಘವಾಗಿದೆ. ಲುಟೆರು ರಾಸ್ ಪೌಟೋವಾ ಲೊಟೆ ಟೇಲರ್ ಎನ್ನುವುದು ರಾಸ್ ಟೇಲರ್ ನ ಪೂರ್ತಿ ಹೆಸರು.

ಹೆನ್ರಿ ಗೋವರ್
ಇಂಗ್ಲೆಂಡಿನ ಸರ್ರೇ ತಂಡದ ನಾಯಕ ಹೆನ್ರಿ ಗೋವರ್ ನ ಪೂರ್ಣ ಹೆಸರು ಹೆನ್ರಿ ಡ್ಯೂಡ್ಲಿ ಗ್ರೆಶಮ್ ಲೆವೆಸನ್ ಗೋವರ್ ಎಂದು. ಇವರಿಗೆ ಇಂಗ್ಲೆಂಡ್ ಸರ್ ಪದವಿಯನ್ನು ನೀಡಿ ಗೌರವಿಸಿತ್ತು.

ಪ್ರಿನ್ಸ್ ಕ್ರಿಸ್ಟಿಯನ್ ವಿಕ್ಟರ್
ರಾಣಿ ವಿಕ್ಟೋರಿಯಾಳ ಮೊಮ್ಮಗ ಪ್ರಿನ್ಸ್ ಕ್ರಿಸ್ಟಿಯನ್ ವಿಕ್ಟರ್ 1887ರಲ್ಲಿ ಕ್ರಿಕೆಟ್ ಆಡಿದವರು. ಇವರ ಪೂರ್ತಿ ಹೆಸರು ಪ್ರಿನ್ಸ್ ವಿಕ್ಟರ್ ಆಲ್ಬರ್ಟ್ ಲುಡ್ವಿಗ್ ಅರ್ನೆಸ್ಟ್ ಆಂಟನ್ ಕ್ರಿಸ್ಟಿಯನ್ ಆಫ್ ಶ್ಲೆಸ್ವಿಗ್ ಹೋಲ್ಸ್ಟೈನ್ ಎಂದು. ಇಂಗ್ಲೆಂಡಿನಲ್ಲಿ ಪ್ರಥಮದರ್ಜೆ ಪಂದ್ಯಗಳನ್ನು ಮಾತ್ರ ಆಡಿರುವ ಇವರು, ಡಬ್ಲೂ ಜಿ. ಗ್ರೇಸ್ ಅವರ ಸಮಕಾಲೀನರು.

ಫೌಡ್ ಬುಚ್ಚಸ್

1978-79ರಲ್ಲಿ ಭಾರತದ ವಿರುದ್ಧದ ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 250ರನ್ ಭಾರಿಸಿದ ವೆಸ್ಟ್ ಇಂಡೀಸಿನ ಆಟಗಾರ ಫೌಡ್ ಬುಚ್ಚಸ್ ನ ಪೂರ್ಣ ಹೆಸರು ಶೇಕ್ ಫೌಡ್ ಅಹಮುಲ್ ಫಸಿಯೇಲ್ ಬುಚ್ಚಸ್ ಎಂದು. ವೆಸ್ಟಿಂಡೀಸಿನಲ್ಲಿ ಕೇವಲ ನಾಲ್ಕು ಜನರು ಮಾತ್ರ ನಾಲ್ಕು ಶಬ್ದಗಳ ಹೆಸರನ್ನು ಒಳಗೊಂಡಿದ್ದಾರೆ. ಅವರಲ್ಲೊಬ್ಬರು ಫೌಡ್ ಬುಚ್ಚಸ್.

ರಜಿತಾ ಅಮುನುಗಮ
ಶ್ರೀಲಂಕಾದ ಈ ಆಟಗಾರನ ಹೆಸರನ್ನು ಓದಿದರೆ ಹೌಹಾರುತ್ತೀರಿ. 1990ರ ದಶಕದಲ್ಲಿ ಶ್ರೀಲಂಕಾದ ಪರ ಆಡಿತ ಈತ ಕ್ರಿಕೆಟ್ ನಲ್ಲಿ ಹೆಸರಾಗದಿದ್ದರೂ, ತನ್ನ ಹೆಸರಿನ ಮೂಲಕ ಹೆಸರಾಗಿದ್ದಾನೆ. ಅಮುನುಗಮ ರಾಜಪಕ್ಸೆ ರಾಜಕರುಣ ಅಬೆಯೂಕೂನ್ ಪಂಡಿತಾ ವಸಲಮುಡಿಯನ್ಸೆ ರಲಹಮಿಲಗೆ ರಾಜಿತಾ ಕ್ರಿಶಂತಾ ಬಂಡಾರ ಅಮುನುಗಮ. 11 ಶಬ್ದಗಳ 51 ಅಕ್ಷರಗಳ ಹೆಸರಿನ ಈತ ಕ್ರಿಕೆಟ್ ನಲ್ಲಿ ಅಲ್ಲದಿದ್ದರೂ ಹೆಸರಿನಲ್ಲಿ ಅರ್ಧಶತಕ ಭಾರಿಸಿದ್ದಾನೆ ಬಿಡಿ

ಎಂಕೆಜಿಸಿಪಿ ಲಕ್ಷಿತಾ
ಚಮಿಲಾ ಗಮಗೆ ಎನ್ನುವ ಹೆಸರಿನಿಂದ ಖ್ಯಾತಿ ಪಡದಿರುವ ಶ್ರೀಲಂಕಾದ ವೇಗದ ಬೌಲರ್ ನ ಪೂರ್ಣ ಹೆಸರು ಮತರಂಬ ಕನತ್ತಾ ಗಮಗೆ ಚಮಿಲಾ ಪ್ರೇಮನಾಥ ಲಕ್ಷಿತಾ ಎಂದು. ಶ್ರೀಲಂಕಾದ ಪರ ಈತ 2 ಟೆಸ್ಟ್ ಹಾಗೂ 7 ಏಕದಿನ ಪಂದ್ಯಗಳನ್ನಾಡಿದ್ದಾನೆ.

ರಂಗಣ ಹೆರಾತ್
ಮುತ್ತಯ್ಯ ಮುರಳೀಧರನ್ ನಂತರ ಶ್ರೀಲಂಕಾದ ಸ್ಪಿನ್ ಸಾರಥ್ಯ ವಹಿಸಿಕೊಂಡಿರುವ 3 ವರ್ಷದ ರಂಗಣ ಹೆರಾತ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬರೀ ರಂಗಣ ಹೆರಾತ್ ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಆದರೆ ಆತನ ಪೂರ್ಣನಾಮಧೇಯ ಹೆರಾತ್ ಮುದಿಯನಸೆಲಗೆ ರಂಗಣ ಕೀರ್ತಿ ಭಂಟಾರ ಹೆರಾತ್ ಎಂದು. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ನೋಡೋಣ...!

ಲಕ್ಸನ್ ಸಂದಕನ್
ಶ್ರೀಲಂಕಾದ ಯುವ ಸ್ಪಿನ್ನರ್ ಸಂದಕನ್ ಹೆಸರು ಕೂಡ ಸುದೀರ್ಘವಾಗಿದೆ. 2016ರಲ್ಲಿ ಮೊದಲ ಟೆಸ್ಟ್ ಆಡಿದ ಸಂದಕನ್ ನ ಪೂರ್ಣ ಹೆಸರು ಪತ್ತಂಪೆರುಮಾ ಅರ್ಚಿಗೆ ಡಾನ್ ಲಕ್ಷನ್ ರಂಗಿಕು ಸಂದಕನ್ ಎಂದು.

ಗಿಹನ್ ರೂಪಸಿಂಗೆ
2009ರಲ್ಲಿ ಶ್ರೀಲಂಕಾ ಪರ ಆಡಿದ ಈ ಆಟಗಾರನ ಪೂರ್ಣ ಹೆಸರು ರೂಪಸಿಂಗೆ ಜಯವರ್ಧನೆ ಮುದಿಯನಸಲಗೆ ಗಿಹನ್ ಮಧುಶಂಕ ರೂಪಸಿಂಘೆ.

ಅಖಿಲ ಧನಂಜಯ
ಮಹಾಮರಕ್ಕಲ ಕುರುಕುಲಸೂರಿಯಾ ಪಟಬೆಂಡಿಗೆ ಅಖಿಲ ಧನಂಜಯ ಪೆರೇರಾನನ್ನು ಅಖಿಲ ಧನಂಜಯ ಎಂದೇ ಕರೆಯೋಣ. ಪೂರ್ಣ ಹೆಸರು ಹೇಳಲು ಹೋದರೆ ಸುಸ್ತಾಗಬಹುದು.

ಹೇಮಂತ ವಿಕ್ರಮರತ್ನೆ
ಶ್ರೀಲಂಕಾದ ಪರವಾಗಿ 1993ರಲ್ಲಿ ಕೆಲವು ಪಂದ್ಯಗಳನ್ನಾಡಿದ ಹೇಮಂತ ವಿಕ್ರಮಸಿಂಘೆಯ ಪೂರ್ಣ ಹೆಸರು ರಣಸಿಂಘೆ ಪಟ್ಟಿಕಿರಿಕೊರಲಲಗೆ ಅರುಣ ಹೇಮಂತ ವಿಕ್ರಮರತ್ನೆ ಎಂದು.

ಸಚಿತ್ರ ಸೇನಾನಾಯಕೆ
ಶ್ರೀಲಂಕಾದ ಸ್ಪಿನ್ನರ್ ಸಚಿತ್ರ ಸೇನಾನಾಯಕೆಯ ಪೂರ್ಣ ಹೆಸರು ಸೇನಾನಾಯಕೆ ಮುದಿಯನಿಸಲಗೆ ಸಚಿತ್ರ ಮಧುಶಂಕ ಸೇನಾನಾಯಕೆ ಎಂದು.

ಬಿಡಿ ಶ್ರೀಲಂಕಾದ ಹಲವು ಆಟಗಾರರ ಹೆಸರು ಸುದೀರ್ಘವಾಗಿಯೇ ಇದೆ. ಭಾರತದವರ ಕಡೆಗೆ ನೋಡೋಣ. ಭಾರತದ ಆಟಗಾರರ ಹೆಸರುಗಳೂ ಕೂಡ ಸುದೀರ್ಘವಾಗಿದೆ. ಸುಮ್ಮನೆ ನಿಮ್ಮ ಕುತೂಹಲಕ್ಕೆ ಅವನ್ನು ಕೊಡುತ್ತಿದ್ದೇನೆ. ನೋಡಿ,

ವೆಂಕಟ್
ಉದ್ದದ ಹೆಸರುಗಳ ಯಾದಿಯಲ್ಲಿ ಭಾರತದ ಆಟಗಾರರ ಹೆಸರೂ ಇದೆ. ಅವರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ಆಫ್ ಸ್ಪಿನ್ನರ್ ಎಸ್. ವೆಂಕಟರಾಘವನ್. ಭಾರತದ ನಾಯಕರೂ ಆಗಿದ್ದ ಇವರು 156 ವಿಕೆಟ್ ಪಡೆದಿದ್ದಾರೆ. ದೀರ್ಘಕಾಲದಿಂದ ಅಂಪಾಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಂದಹಾಗೆ ಇವರ ಪೂರ್ತಿ ಹೆಸರು ಶ್ರೀನಿವಾಸ ರಾಘವನ್ ವೆಂಕಟ ರಾಘವನ್ ಎಂದು.

ವಿವಿಎಸ್ ಲಕ್ಷ್ಮಣ್
ಭಾರತ ಕಂಡ ಸಾರ್ವಕಾಲಿಕ ಟೆಸ್ಟ್ ಆಟಗಾರರಲ್ಲಿ ಒಬ್ಬರಾದ ವಿವಿಎಸ್ ಲಕ್ಷ್ಮಣ್ ರ ಪೂರ್ಣ ಹೆಸರು ವೆಂಗಿಪುರುಪ್ಪು ವೀರವೆಂಕಟ ಸಾಯಿ ಲಕ್ಷ್ಮಣ್

ಸ್ಟುವರ್ಟ್ ಬಿನ್ನಿ
ಬಿನ್ನಿ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ.. ಅಪ್ಪ ರೋಜರ್ ಬಿನ್ನಿ, ಮಗ ಸ್ಟುವರ್ಟ್ ಬಿನ್ನಿ ಎಲ್ಲರಿಗೂ ಗೊತ್ತು. ಆದರೆ ಆತನ ಪೂರ್ಣ ಹೆಸರು ಗೊತ್ತಾ? ಗೊತ್ತಲ್ಲವಾದರೆ ಇಲ್ಲಿ ನೋಡಿ... ಸ್ಟುವರ್ಟ್ ಟೆರೆನ್ಸ್ ರೋಜರ್ ಬಿನ್ನಿ. ಇದು ಸ್ಟುವರ್ಟ್ ಬಿನ್ನಿಯ ಪೂರ್ಣ ನಾಮಧೇಯ.

ಚೇತನ್ ಚೌಹಾಣ್
ಭಾರತದ ಮಾಜಿ ಆಟಗಾರ ಚೇತನ್ ಚೌಹಾಣ್ ಒಂದು ಕಾಲದಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚಿನ ಟೆಸ್ಟ್ ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿ ಗಳಿಸಿಕೊಂಡಿದ್ದರು. ಇವರ ಪೂರ್ಣ ಹೆಸರು ಚೇತನ್ ಪ್ರತಾಪ್ ಸಿಂಗ್ ಚೌಹಾಣ್.

ಎಸ್ ಎಂ ಎಚ್ ಕಿರ್ಮಾನಿ
ಭಾರತದ ಅತ್ಯುತ್ತಮ ವಿಕೇಟ್ ಕೀಪರ್ ಗಳಲ್ಲಿ ಒಬ್ಬರಾಗಿದ್ದ ಕಿರ್ಮಾನಿ ಅವರ ಪೂರ್ಣ ಹೆಸರು ಸಯ್ಯದ್ ಮುಜ್ತಾಬ್ ಹುಸೇನ್ ಕಿರ್ಮಾನಿ ಎಂದು.

ರೋಜರ್ ಬಿನ್ನಿ
ಮಗ ಸ್ಟುವರ್ಟ್ ಬಿನ್ನಿಯ ಉದ್ದ ಹೆಸರನ್ನೇನೋ ನೋಡಿದಿರಿ. ಅಪ್ಪ ರೋಜರ್ ಬಿನ್ನಿಯದ್ದು ಹೇಳುವುದು ಬೇಡವೇ? ರೋಜರ್ ಬಿನ್ನಿಯ ಪೂರ್ತಿ ಹೆಸರು ರೋಜರ್ ಮೈಖೆಲ್ ಹಂಫ್ರಿ ಬಿನ್ನಿ.

ವೆಂಕಟೇಶ್ ಪ್ರಸಾದ್
ಕನ್ನಡಿಗ, ಶ್ರೀನಾಥ್ ರ ಸಮಕಾಲೀನ ವೇಗದ ಬೌಲರ್ ವೆಂಕಟೇಶ ಪ್ರಸಾದರು ನೆನಪಾದಾಗಲೆಲ್ಲ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಅಮೀರ್ ಸೊಹೈಲ್ ಜೊತೆಗಿನ ಕಾದಾಟ, ಜಿದ್ದು ನೆನಪಾಗುತ್ತದೆ. ಇಂತಹ ಹೆಸರಾಂತ ಬೌಲರ್ ವೆಂಕಟೇಶ ಪ್ರಸಾದ ಪೂರ್ಣ ಹೆಸರು ಬಾಪು ಕೃಷ್ಣರಾವ್ ವೆಂಕಟೇಶ್ ಪ್ರಸಾದ್ ಎಂದು.

ಇಎಎಸ್ ಪ್ರಸನ್ನ
ಭಾರತದ ಸಾರ್ವಕಾಲಿಕ ಶ್ರೇಷ್ಟ ಸ್ಪಿನ್ನರ್ ಗಳಲ್ಲಿ ಒಬ್ಬರಾದ ಇಎಎಸ್ ಪ್ರಸನ್ನರ ಪೂರ್ಣ ಹೆಸರು ಎರಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ.

ಗುಲಾಂ ಪಾರ್ಕರ್
1980ರ ದಶಕದಲ್ಲಿ ಭಾರತದ ಪರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಿದ ಗುಲಾಮ್ ಪಾರ್ಕರ್ ಎನ್ನುವ ಕ್ರಿಕೆಟ್ ಆಟಗಾರನ ಪೂರ್ಣ ಹೆಸರು ಗುಲಾಮ್ ಅಹಮದ್ ಹಸನ್ ಮೊಹಮ್ಮದ್ ಪಾರ್ಕರ್.

ಇಷ್ಟು ಸಾಕೇನೋ ಅಲ್ಲವಾ
ಇಂತಹ ಹೆಸರುಗಳು ನಿಮಗೆ ಸಿಕ್ಕರೆ ಹೇಳಿ... ಕುತೂಹಲದಿಂದ ಓದಿ ನೋಡೋಣ.. ಖುಷಿ ಪಡೋಣ...