Sunday, December 4, 2016

ಮಿಲನ

ನಿಷೆಯ ಆಳಕಿಳಿದು ನಾವು
ಒಂದಾಗಬೇಕು |
ನಮ್ಮ ನಾವು ಅರಿತುಕೊಳಲು
ಮುಂದಾಗಬೇಕು |

ಮುತ್ತುಗಳಿಗೆ ಲೆಕ್ಖವಿಲ್ಲ
ಕೂಟ್ಟು ಪಡೆಯಬೇಕು
ಓಲವಿನ ಸತ್ವ ಹೀರಿ
ಉನ್ಮತ್ತನಾಗಬೇಕು |

ಆಸೆ ಇನ್ನೂ ಹೆಚ್ಚು ಹೆಚ್ಚು
ಮನದಿ ಮರಳಬೇಕು
ಮುಚ್ಚಿಟ್ಟಷ್ಟೂ ಮತ್ತೆ ಮತ್ತೆ
ಕಾಮ ಕೆರಳಬೇಕು |

ಹುಚ್ಚು ಆಸೆ ಕುದುರೆ ಏರಿ
ರಥವ ಕಟ್ಟಬೇಕು
ಮದನ ಮೋಹ ಆಸೆಯಿಂದ
ಶರವ ಹೂಡಬೇಕು |

ನೀನು ಹೂವು ನಾನು ದುಂಬಿ
ಮಧುವ ಹೀರಬೇಕು
ಆಹಾಹಾ ಸುಖದ ಸ್ವರವು
ಮಧುರವಾಗಬೇಕು |

ಹಸಿವು ಹೆಚ್ಚಬೇಕು ಮತ್ತೆ
ಬೆವರ ಸುರಿಸಬೇಕು
ಕಾಮದ ಕಿಚ್ಚನ್ನು ಹಾಗೇ
ಉರಿಸಿಹಾಕಬೇಕು |

ಬರಬಿದ್ದ ಗದ್ದೆಗಳಲಿ
ನೀರುಕ್ಕಿಸಬೇಕು
ಹಸಿರು ಸದಾ ನಲಿಯುತಿರಲು
ಒಲವ ರಸ ಚಿಮ್ಮಬೇಕು |

ನಿರ್ನಿದ್ದೆಯ ರಾತ್ರಿಗಳಲಿ
ನಿನ್ನೊಡನೆ ಹೊರಳಬೇಕು
ಮತ್ತೆ ಮತ್ತೆ ಕನಸ ಜೊತೆಗೆ
ಸುಖದ ತೇರು ಎಳೆಯಬೇಕು |

ಮೇಲೆ ಕೆಳಗೆ ಹತ್ತಿ ಇಳಿದು
ಚರಮ ಸುಖದಿ ನರಳಬೇಕು
ನಿತ್ಯ ನಿತ್ಯ ಹೊಸದು ಹೊಸದು
ಪ್ರೀತಿ ಪುಷ್ಪ ಅರಳಬೇಕು |

ನನಗೆ ನೀನು ನಿನಗೆ ನಾನು
ಬಟ್ಟೆಯಾಗಬೇಕು
ಮಿಲನ ಸವಿಘಳಿಗೆಯಿಂದ
ಬದುಕು ಗಟ್ಟಿಯಾಗಬೇಕು |

ಇಂದಿನಲ್ಲಿ ನಾವು ಅಳಿದು
ನಾಳೆ ಮತ್ತೆ ಹುಟ್ಟಬೇಕು
ನಮ್ಮಿಬ್ಬರ ನಡುವೆ ಎಂದೂ
ಪ್ರೀತಿ ಉಳಿಯಬೇಕು |

ಮಿಲನದ ಪರಿಭಾಷೆ ಎಂದೂ
ಅರ್ಥವಾಗಬೇಕು
ಮಿಲನವೆಂದರೆ ಪ್ರೀತಿ
ಎಂದು ಅರಿತುಕೊಳ್ಳಬೇಕು |

-------------------


(ಈ ಕವಿತೆಯನ್ನು ಶಿರಸಿಯಲ್ಲಿ ಬರೆದಿದ್ದು ಡಿ.4 2016ರಂದು)

(ಕವಿತೆಯ ಕುರಿತು : 
ಖಂಡಿತವಾಗಿಯೂ ಕ್ಲಾಸ್ ಜನರು ಈ ಕವಿತೆಯನ್ನು ನೋಡಿ ಮುಖ ಕಿವುಚಬಹುದು. ಹಲವರಿಗೆ ಇದು ಇಷ್ಟವಾಗಲೂ ಬಹುದು. ಆದರೆ ಮಿಲನ ಹೇಳುವ ಪ್ರೇಮದ ಪರಿಭಾಷೆ ಖಂಡಿತವಾಗಿಯೂ ನಿಜ, ಸತ್ಯ. ಪರಸ್ಪರ ಅರ್ಥ ಮಾಡಿಕೊಳ್ಳಲು ಇದು ಸಹಕಾರಿ. ಬಹಳಷ್ಟು ಜನರಿಗೆ ಅಶ್ಲೀಲ ಎನ್ನಿಸಬಹುದೇನೋ. ಖಂಡಿತವಾಗಿಯೂ ಇದಕ್ಕೂ ಒಂದು ಗೌರವವಿದೆ. ಗೌರವದಿಂದ ಕಂಡರೆ ಅಶ್ಲೀಲ ಎನ್ನಿಸುವುದಿಲ್ಲ. ಓದುಗರ ಮನಸ್ಸಿನ ಭಾವನೆಗೆ ತಕ್ಕಂತೆ ಕವಿತೆಯ ಅರ್ಥ ಬದಲಾಗುತ್ತದೆ. ಕವಿತೆಯನ್ನು ಅರ್ಥ ಮಾಡಿಕೊಳ್ಳುವವನು ಭಾವಾರ್ಥವನ್ನು ಸವಿಯಬಲ್ಲ. ಆ ತಾಕತ್ತು ಇಲ್ಲದವನು ಅವನ ಮನಸ್ಸಿಗೆ ತೋಚಿದಂತೆ ಅಂದುಕೊಳ್ಳಬಲ್ಲ. ಸುಮ್ಮನೆ ಓದಿ ನೋಡಿ. ಖಂಡಿತವಾಗಿಯೂ ಕವಿತೆಯನ್ನು ಓದಿ ಆ ಮೂಲಕ ಕವಿಯನ್ನು ಜಡ್ಜ್ ಮಾಡಲು ಹೋಗಬೇಡಿ)

Friday, December 2, 2016

ನಯನದಾನದ ಮೂಲಕ ನೂರಾರು ಜನರ ಬಾಳಿಗೆ ಬೆಳಕಾದ ಗ್ರಾಮಸ್ಥರು

ದೇಶದ ಪ್ರಪ್ರಥಮ ಸಂಪೂರ್ಣ ನೇತ್ರದಾನಿ ಗ್ರಾಮ ಮುಂಡಿಗೆಸರ


-------------

ನೇತ್ರದಾನ ಶ್ರೇಷ್ಟ ದಾನಗಳಲ್ಲೊಂದು. ಸತ್ತ ನಂತರವೂ ತಮ್ಮ ನಯನಗಳು ಜಗತ್ತನ್ನು ನೋಡಲಿ ಎನ್ನುವ ಕಾರಣಕ್ಕಾಗಿ ನೇತ್ರಗಳನ್ನು ದಾನ ಮಾಡಿದವರು ಅನೇಕರು. ಮತ್ತೆ ಕೆಲವರು ನೇತ್ರದಾನದ ಬಗ್ಗೆ ಭಯವನ್ನೂ ಹೊಂದಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗ್ರಾಮವೊಂದರ ಸಂಪೂರ್ಣ ಗ್ರಾಮಸ್ಥರು ನೇತ್ರದಾನ ಮಾಡುವ ಮೂಲಕ ಜಗತ್ತಿಗೆ ನೇತ್ರದಾನದ ಪಾಠವನ್ನು ಹೇಳುತ್ತಿದ್ದಾರೆ.
ನಮ್ಮದು ಗ್ರಾಮಗಳ ದೇಶ. ಗ್ರಾಮವೇ ನಮ್ಮ ಜೀವಾಳ. ಇಲ್ಲಿನ ಆಚರಣೆಗಳು, ಸಂಪ್ರದಾಯಗಳು, ವಿಶೇಷತೆಗಳಿಂದ ಆಗಾಗ ಬಹಳಷ್ಟು ಗ್ರಾಮಗಳು, ಬೇರೆಬೇರೆ ಕಾರಣಗಳಿಂದ ನಗರವಾಸಿಗಳ ಗಮನ ಸೆಳೆಯುತ್ತಾ ಇರುತ್ವೆ. ಕೆಲವು ಹುಬ್ಬೇರಿಸುವಂತಿದ್ರೆ ಇನ್ನು ಕೆಲವು ಅನುಕರಣೀಯವಾಗಿರ್ತವೆ. ನೇತ್ರದಾನದ ಪಾಠವನ್ನು ಜಗತ್ತಿಗೆ ಸಾರಿದ ಈ ಗ್ರಾಮವೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೇಸರ. ಯಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಸರ ಗ್ರಾಮದಲ್ಲಿ ಬೆಳ್ಳೇಕೇರಿ, ಅಬ್ರಿಮನೆ ಹಾಗೂ ಮುಂಡಿಗೆಸರ ಎಂಬ ಮೂರು ಮಜರೆಗಳಿವೆ. ಈ ಮಜರೆಗಳಲ್ಲಿ ಒಟ್ಟೂ 70ಕ್ಕೂ ಅಧಿಕ ಮನೆಗಳಿವೆ. ಅಜಮಾಸು 300ಕ್ಕೂ ಅಧಿಕ ಜನಸಂಖ್ಯೆಯನ್ನು ಈ ಊರುಗಳು ಹೊಂದಿದ್ದು ಇವರೆಲ್ಲರೂ ಕೂಡ ನೇತ್ರದಾನ ಮಾಡಿರುವುದು ವಿಶೇಷ.
ಶತಮಾನೋತ್ಸವ ಸಮಿತಿಯ ಶ್ಲಾಘನೀಯ ಕಾರ್ಯ :
1992ರಲ್ಲಿ ಮುಂಡಿಗೆಸರ ಗ್ರಾಮದವರೇ ಆದ ಸರಸ್ವತಿ ಎಂ. ಹೆಗಡೆಯವರು ಅನಾರೋಗ್ಯದ ನಿಮಿತ್ತ ನಿಧನರಾದರು. ಅವರು ಆ ಸಂದರ್ಭದಲ್ಲಿ ತಮ್ಮ ನೇತ್ರಗಳನ್ನು ದಾನ ಮಾಡಿದರು. ಸರಸ್ವತಿಯವರು ನೇತ್ರದಾನ ಮಾಡಿರುವುದು ಆಗಿನ ಕಾಲದಲ್ಲಿ ಇಡಿಯ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ನೇತ್ರದಾನ ಎಂಬ ವಿಶೇಷತೆಗೂ ಕಾರಣವಾಗಿತ್ತು. ತದನಂತರದಲ್ಲಿ ಬೆಳ್ಳೇಕೇರಿಯ ಕಮಲಾಕ್ಷಿ ಹೆಗಡೆ ಎಂಬ ಬಡತನದಲ್ಲಿ ಬೆಳೆದ ಮಹಿಳೆಯೋರ್ವಳು ನೇತ್ರದಾನ ಮಾಡಿದರು. ಇವರೇ ಇಡಡಿಯ ಗ್ರಾಮದಲ್ಲಿ ನೇತ್ರದಾನ ನಡೆಯಲು ಸ್ಪೂತರ್ಿ. ಇಡಿಯ ಗ್ರಾಮಸ್ಥರ ನೇತ್ರದಾನಕ್ಕೆ ಬೆನ್ನೆಲುಬಾಗಿ ನಿಂತಿದ್ದು ಮುಂಡಿಗೆಸರದ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ.
1907ರಲ್ಲಿ ಮುಂಡಿಗೆಸರದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿದ್ದಯ, 2007ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಶಾಲೆಯ ಶತಮಾನೋತ್ಸವ ವಿಭಿನ್ನವಾಗಿರಬೇಕು ಎಂದುಕೊಂಡು ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ನೇತ್ರದಾನ ಅಭಿಯಾನಕ್ಕೆ ಮುಂದಾದರು. ಮೊದಲ ದಿನವೇ 200ಕ್ಕೂ ಹೆಚ್ಚಿನ ಜನರು ತಮ್ಮ ನಯನಗಳನ್ನು ದಾನ ಮಾಡಲು ಹೆಸರು ನೊಂದಾಯಿಸಿದರು. ತದನಂತರದಲ್ಲಿ ದಿನಕಳೆದಂತೆ ಕಣ್ಣುಗಳನ್ನು ದಾನ ಮಾಡಲು ನೊಂದಾಯಿಸಿದವರ ಸಂಕ್ಯೆ 300ನ್ನೂ ಮೀರಿದೆ. ಪ್ರತಿ ಮನೆಯ ಪ್ರತಿ ಸದಸ್ಯರೂ ಕೂಡ ನೇತ್ರದಾನಕ್ಕೆ ಹೆಸರು ನೊಂದಾಯಿಸಿದ್ದಾರೆ ಎಂದು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಹೆಗಡೆ.
ಮುಂಡಿಗೆಸರ ಗ್ರಾಮದಲ್ಲಿ ಪ್ರತಿಯೊಬ್ಬರೂ ನೇತ್ರದಾನ ಮಾಡಿರುವುದರಿಂದ ಸ್ಪೂತರ್ಿಯಾಗಿರುವ ಸುತ್ತಮುತ್ತಲ ಯಡಳ್ಳಿ, ಕರಸುಳ್ಳಿ, ಶಿರಸಿಮಕ್ಕಿ, ಕಲ್ಕುಣಿ ಗ್ರಾಮಗಳ ಗ್ರಾಮಸ್ಥರೂ ಕೂಡ ನೇತ್ರದಾನಕ್ಕೆ ಹೆಸರು ನೊಂದಾಯಿಸಿದ್ದಾರೆ. ಉತ್ತರ ಕನ್ನಡದ ಹಳ್ಳಿಗಳಲ್ಲಿ ನೇತ್ರದಾನ ಅಥವಾ ಅಂಗದಾನ ಮಾಡಬಾರದು. ಅಂಗ ಊನವಾಗಬಾರದು ಎಂಬ ನಂಬಿಕೆಯಿದೆ. ಆದರೆ ಈ ನಂಬಿಕೆಯನ್ನೂ ಪಕ್ಕಕ್ಕಿಟ್ಟು ಇಡಿಯ ಗ್ರಾಮವೇ ನೇತ್ರದಾನಕ್ಕೆ ಮುಂದಾಗಿದ್ದು ವಿಶೇಷ. ಹುಬ್ಬಳ್ಳಿಯ ಎಂ. ಎಂ. ಜೋಶಿಯವರ ನೇತ್ರಾಲಯ ಹೆಸರು ನೊಂದಾವಣಿ ಪ್ರಕ್ರಿಯೆಯಲ್ಲಿ ಜೊತೆಗೂಡಿದೆ. ಸಂಪೂರ್ಣ ಗ್ರಾಮದ ಜನರು ನೇತ್ರದಾನ ಮಾಡಿರುವುದು ರಾಷ್ಟ್ರದಲ್ಲಿಯೇ ಪ್ರಪ್ರಥಮ. ಇಂತಹ ಇನ್ನೊಂದು ಗ್ರಾಮವಿಲ್ಲ ಎನ್ನುವುದು ವಿಶೇಷ. ಮುಂಡಿಗೆಸರದ ನೇತ್ರದಾನದ ವಿಶೇಷತೆ ಇದೀಗ ಗೂಗಲ್ ವೀಕಿಪಿಡಿಯಾದಲ್ಲಿಯೂ ಸ್ಥಾನ ಪಡೆದಿದೆ.
ಮುಂಡಿಗೆಸರ ಹಲವು ವಿಶೇಷತೆಗಳ ಆಗರ :
ಸಂಪೂಣ್ ನೇತ್ರಗ್ರಾಮವಾದ ಮುಂಡಿಗೆಸರ ಇನ್ನೂ ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಈ ಗ್ರಾಮ ಸಂಪೂಣ್ ವಿಮಾಗ್ರಾಮವೂ ಹೌದು. ಅಲ್ಲದೇ ಸಂಪೂರ್ಣ ಸೋಲಾರ್ ಗ್ರಾಮ ಎಂಬ ಖ್ಯಾತಿಯನ್ನೂ ಪಡೆದಿದೆ. 1930ರ ಆಸುಪಾಸಿನಲ್ಲಿಯೇ ವಿಧವಾ ವಿವಾಹಕ್ಕೆ ಪ್ರೋತ್ಸಾಹ ಕೊಟ್ಟ ಗ್ರಾಮ ಇದು. ಅಲ್ಲದೇ ಈ ಗ್ರಾಮದಲ್ಲಿ ಸಾಕಷ್ಟು ಸಂಕ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರೂ ಇದ್ದರು. ಅಲ್ಲದೇ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಳೀಯ ಗಣಪತಿ ದೇವಸ್ಥಾನದಲ್ಲಿ ಹರಿಜನರೊಂದಿಗೆ ಮೇಲ್ವರ್ಗದ ಜನರು ಸಹಪಂಕ್ತಿ ಭೋಜನ ಮಾಡಿದ ಖ್ಯಾತಿಯೂ ಈ ಗ್ರಾಮಕ್ಕಿದೆ. ಇದೀಗ ಮುಂಡಿಗೆಸರ ಗ್ರಾಮದಲ್ಲಿ ಹಲವರು ದೇಹದಾನದ ಕಡೆಗೂ ಆಲೋಚನೆ ನಡೆಸುತ್ತಿದ್ದಾರೆ. ಆದರೆ ದೇಹದಾನ ಮಾಡುವುದಕ್ಕೆ ಸಂಬಂಧಪಟ್ಟಂತೆ ಅಗತ್ಯದ ಕ್ರಮ ಕೈಗೊಳ್ಳುವುದು ಹೇಗೆ ಎನ್ನುವುದು ತಿಳಿಯದೇ ಸುಮ್ಮನಿದ್ದಾರೆ. ಇದೀಗ ಸಂಪೂರ್ಣ ನೇತ್ರದಾನ ಮಾಡುವ ಮೂಲಕ ಪ್ರತಿಯೊಬ್ಬರಲ್ಲಿಯೂ ನೇತ್ರದಾನದ ಅರಿವನ್ನು ಮೂಡಿಸುತ್ತಿದೆ. ಪ್ರಚಾರಕ್ಕಾಗಿ ಈ ಕೆಲಸವನ್ನು ಮಾಡದ ಮುಂಡಿಗೆಸರ ಗ್ರಾಮಸ್ಥರು ತಮ್ಮ ಊರು ದೇಶಮಟ್ಟದಲ್ಲಿ ಹೆಸರಾಗಿರುವುದರ ಕುರಿತಂತೆ ಹುಬ್ಬೇರಿಸುತ್ತಾರೆ. ತಮ್ಮ ವಿಶಿಷ್ಟ ಕಾರ್ಯದಿಂದ ಎಲ್ಲರ ಮನಸ್ಸನ್ನು ಈ ಗ್ರಾಮಸ್ಥರು ಸೆಳೆದಿದ್ದಾರೆ.

----------------

ಮುಂಡಿಗೆಸರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ನೇತ್ರದಾನ ಮಾಡಿದ್ದಾರೆ. ತಾವು ಮಡಿದ ನಂತರವೂ ತಮ್ಮ ನಯನಗಳು ಜಗತ್ತನ್ನು ನೋಡಲಿ ಎನ್ನುವ ದೃಷ್ಟಿಯಿಂದ ತಮ್ಮ ದೃಷ್ಟಿದಾನ ಮಾಡಿದ್ದಾರೆ. ಇದುವರೆಗೂ ಅದೆಷ್ಟೋ ಜನರ ಕಣ್ಣಿಗೆ ನಮ್ಮೂರಿಗರ ನೇತ್ರಗಳು ಬೆಳಕನ್ನು ನೀಡಿವೆ. ಲಿಮ್ಕಾ ಅಥವಾ ಇನ್ಯಾವುದೇ ದಾಖಲೆ ಆಗಿರಬಹುದು. ಆದರೆ ನಾವಾಗಿಯೇ ಪ್ರಚಾರಕ್ಕೆ ಮುಂದಾಗಿಲ್ಲ. ನಮ್ಮೂರಿನ ಈ ಸಂಗತಿಯನ್ನು ದಾಖಲಿಸಲು ಮುಂದಾದರೆ ಅವರಿಗೆ ಎಲ್ಲ ಮಾಹಿತಿ ನೀಡುತ್ತೇವೆ.
ರವೀಂದ್ರ ಹೆಗಡೆ ಬಳಗಂಡಿ
ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ
ಹಾಗೂ ಮುಂಡಿಗೆಸರ ಗ್ರಾಮಸ್ಥರು

Sunday, November 20, 2016

ಕನ್ನಡ ಚಳುವಳಿಗೆ ಮೋಹನ ಭಟ್ಟರ ಪೆನ್ ಬಳುವಳಿ

ಪುಸ್ತಕಗಳನ್ನು, ಸಾಹಿತ್ಯ ಮಾಲಿಕೆಯನ್ನು, ಕಾದಂಬರಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವವರನ್ನು ನಾವು ಪದೇ ಪದೆ ಕಾಣುತ್ತೇವೆ. ಆದರೆ ಸಾಹಿತ್ಯ ಹೆಚ್ಚು ಹೆಚ್ಚು ಬರೆಯಲ್ಪಡಬೇಕು ಎನ್ನುವ ಕಾರಣಕ್ಕಾಗಿ ಪೆನ್ನುಗಳನ್ನು ಕೊಡುಗೆಯಾಗಿ ನೀಡುವವರು ವಿರಳ. ಅಂತವರಲ್ಲೊಬ್ಬರು ಶಿರಸಿಯ ಮೋಹನ ಭಟ್ಟರು.
ಶಿರಸಿ ನಗರದ ಅಂಬಿಕಾ ಕಾಲೋನಿಯ ನಿವಾಸಿಯಾಗಿರುವ ಮೋಹನ ಭಟ್ಟರು ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಪ್ರೌಢಶಾಲೆಯಲ್ಲಿಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಮೋಹನ ಭಟ್ಟರು ಕನ್ನಡ, ಸಾಹಿತ್ಯದ ಅಭಿವೃದ್ಧಿಗಾಗಿ ಮಾಡುತ್ತಿರುವ ಕಾರ್ಯ ಮಾತ್ರ ಅಮೋಘವಾದುದು. ಕಳೆದ 10 ವರ್ಷಗಳ ಅವಧಿಯಲ್ಲಿ ಮೋಹನ ಭಟ್ಟರು ಸಹಸ್ರಾರು ಪೆನ್ನುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕಾರಣದಿಂದಲೇ ಶಿರಸಿ ಭಾಗದಲ್ಲಿ ಮೋಹನ ಭಟ್ಟರನ್ನು ಪೆನ್ ಮೋಹನ ಭಟ್ ಎಂದೇ ಕರೆಯಲಾಗುತ್ತಿದೆ.
ಶಿರಸಿಯಲ್ಲಿ ಯಾವುದೇ ಸಾಹಿತ್ಯ ಕಾರ್ಯಕ್ರಮಗಳಿರಲಿ, ಆ ಕಾರ್ಯಕ್ರಮದ ನಡುವೆ ವೇದಿಕೆಗೆ ಆಗಮಿಸುವ ಮೋಹನ ಭಟ್ಟರು ವೇದಿಕೆಯ ಮೇಲೆ ಇರುವ ಪ್ರತಿಯೊಬ್ಬ ಗಣ್ಯರಿಗೂ ಕೂಡ ಪೆನ್ ಕಾಣಿಕೆಯಾಗಿ ನೀಡುತ್ತಾರೆ. ಅವರು ಕೊಡುವ ಪೆನ್ನುಗಳೂ ಕೂಡ ಸೀದಾ-ಸಾದಾ ಅಲ್ಲ. ವಿಶಿಷ್ಟ ವಿನ್ಯಾಸವನ್ನು ಹೊಂದಿರುತ್ತದೆ. ಮಾತ್ರೆಯ ಆಕಾರದ ಪೆನ್, ಕತ್ತರಿಯ ಆಕಾರದ ಪೆನ್, ಹೂವಿನ ವಿನ್ಯಾಸದ ಪೆನ್, ಕಿರು ಗಾತ್ರದ ಪೆನ್ ಹೀಗೆ ಅದೆಷ್ಟೋ ಬಗೆ ಬಗೆಯ ಪೆನ್ನುಗಳನ್ನು ಸಂಗ್ರಹಿಸಿ ಅವನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.
39 ವರ್ಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಮೋಹನ ಭಟ್ಟರು ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ನೂರಾರು ಮುಸ್ಲಿಂ ಹುಡುಗರಲ್ಲಿ ಕನ್ನಡ ಪ್ರೇಮ ಬೆಳೆಯಲೂ ಕಾರಣರಾಗಿದ್ದಾರೆ. ಇವರು ನೀಡಿದ ಪೆನ್ನಿನಿಂದ ಹಲವು ಪುಸ್ತಕಗಳನ್ನು ಬರೆದವರಿದ್ದಾರೆ. ಮೋಹನ ಭಟ್ಟರು ನೀಡಿದ ಪೆನ್ನಿನಿಂದಲೇ ಸ್ಪೂತರ್ಿ ಪಡೆದುಕೊಂಡಿದ್ದೇನೆ ಎಂದು ಪುಸ್ತಕಗಳ ಮುನ್ನುಡಿಯಲ್ಲಿ ಬರೆದುಕೊಂಡವರೂ ಇದ್ದಾರೆ. ಹದಿ ಹರೆಯದ ಬರಹಗಾರರಿಂದ ಹಿಡಿದು ಹಿರಿಯರ ವರೆಗೆ ಪೆನ್ನುಗಳನ್ನು ಕೊಡುಗೆಯಾಗಿ ನೀಡಿ ಸಾಹಿತ್ಯಕ್ಕೆ ಪೂರಕ ಚಟುವಟಿಕೆಗಳನ್ನು ಮೋಹನ್ ಭಟ್ಟರು ಮಾಡುತ್ತಿದ್ದಾರೆ.
ಮೋಹನ ಭಟ್ಟರು ಕವಿಯೂ ಕೂಡ ಹೌದು. ಅದೆಷ್ಟೋ ಕವಿತೆಗಳನ್ನು ಮೋಹನ ಭಟ್ಟರು ಬರೆದಿದ್ದಾರೆ. ಆದರೆ ಈ ಕವಿತೆಗಳಿನ್ನೂ ಪ್ರಕಟಣೆಯಾಗಿಲ್ಲ. ಪೆನ್ ಕೊಡುಗೆಯಾಗಿ ನೀಡುವ ಭಟ್ಟರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಅಲ್ಲಿ ಪುಸ್ತಕಗಳನ್ನು ಕೊಳ್ಳುತ್ತಾರೆ. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಇದ್ದರೆ ಬಿಡುಗಡೆಯಾಗುವ ಪುಸ್ತಕವನ್ನು ಹಣಕೊಟ್ಟು ಖರೀದಿಸಿ ಅದಕ್ಕೆ ಲೇಖಕ ಹಸ್ತಾಕ್ಷರವನ್ನು ಹಾಕಿಸಿಕೊಳ್ಳುತ್ತಾರೆ. ಇಂತಹ ಹಸ್ತಾಕ್ಷರಗಳನ್ನು ಒಳಗೊಂಡ ಸಹಸ್ರ ಸಹಸ್ರ ಪುಸ್ತಕಗಳು ಮೋಹನ ಭಟ್ಟರ ಮನೆಯಲ್ಲಿದೆ.
ತಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಪರಮೇಶ್ವರ ಭಟ್ಟರಿಗೆ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಅದನ್ನೇ ನಾನೂ ಮೈಗೂಡಿಸಿಕೊಂಡಿದ್ದೇನೆ. ಮನೆಯಲ್ಲಿ ಕನಿಷ್ಟ 10 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ ಎನ್ನುತ್ತಾರೆ ಮೋಹನ್ ಭಟ್. ಕಲಿಕೆಗೆ ಮೂಲ ಪೆನ್. ಸಂಸ್ಕಾರಕ್ಕೆ, ಬರವಣಿಗೆಗೆ ಎಲ್ಲವುಗಳಿಗೂ ಲೇಖನಿ ಬೇಕೆ ಬೇಕು. ನಾನು ಪೆನ್ ಕೊಡುಗೆಯಾಗಿ ನೀಡಿದ್ದು ಕೆಲವರಿಗಾದರೂ ಸ್ಪೂತರ್ಿ ತಂದು ಇನ್ನಷ್ಟು ಬರವಣಿಗೆಯಲ್ಲಿ ತೊಡಗಿಕೊಂಡರೆ ಅಷ್ಟೇ ಸಾಕು ಎನ್ನುವ ಮೋಹನ ಭಟ್ಟರು ಮುಂದಿನ ದಿನಗಳಲ್ಲಿ ಇನ್ನಷ್ಟು ಪೆನ್ ನೀಡುವುದಾಗಿಯೂ ಹೇಳುತ್ತಾರೆ.
ಸಾಹಿತ್ಯಿಕ ಕುಟುಂಬ :
ಪೆನ್ ಮೋಹನ ಭಟ್ಟರದ್ದು ಸಾಹಿತ್ಯಿಕ ಕುಟುಂಬ. ತಂದೆ ನಾರಾಯಣ ಭಟ್ಟರು ಸ್ವಾತಂತ್ರ್ಯ ಹೋರಾಟಗಾರರು. ಮಹಾತ್ಮಾಗಾಂಧೀಜಿಯವರ ಒಡನಾಡಿಗಳು. ಹಿರಿಯರಾದ ಪ. ಸು. ಭಟ್ ಇವರ ದೊಡ್ಡಪ್ಪನ ಮಗ, ಪ. ಸು. ಭಟ್ಟರ ತಮ್ಮ ಜಿ. ಎಸ್. ಭಟ್ ಹಿರಿಯ ಪತ್ರಕರ್ತರು ಹಾಗೂ ಬರಹಗಾರರು. ಅದೇ ರೀತಿ ಮೋಹನ ಭಟ್ಟರ ಪುತ್ರಿ ಲೀನಾ ಭಟ್ ಇದೀಗ ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಾತರ್ಿಯಾಗಿ ಹೆಸರು ಮಾಡುತ್ತಿದ್ದಾರೆ. ಇದರ ಜೊತೆಗೆ ಮೋಹನ ಭಟ್ಟರದು ಪತ್ನಿ, ಆಡಿಯೋ ಇಂಜಿ8ನಿಯರ್ ಆಗಿರುವ ಮಗ ವಿವವೇಕ ಅವರೊಂದಿಗಿನ ಸುಖಿ ಕುಟುಂಬ.
ಇಂಗ್ಲೀಷ್ ಮಾಧ್ಯಮಕ್ಕೆ ಜನ ಮರುಳಾಗುತ್ತಿರುವ ಈ ಸಂದರ್ಭದಲ್ಲಿ ಮೋಹನ ಭಟ್ಟರಂತಹ ಕೆಲವು ಅಪರೂಪದ ವ್ಯಕ್ತಿಗಳು ಕನ್ನಡಾಭಿಮಾನ ಬೆಳೆಸುವಲ್ಲಿ ತಮ್ಮ ಕಿರು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪೆನ್ ಕೊಡುಗೆಯಾಗಿ ನೀಡುವ ಮೂಲಕ ಲೇಖಕನಲ್ಲಿನ ಸಾಹಿತ್ಯಕ್ಕೆ ಇನ್ನಷ್ಟು ಸ್ಪೂತರ್ಿ ನೀಡುತ್ತಿದ್ದಾರೆ. ತಮ್ಮದೇ ಆದ ಮಾರ್ಗದ ಮೂಲಕ ಕನ್ನಡಾಭಿಮಾನ ಬೆಳೆಸಲು ಕಾರಣಕರ್ತರಾಗುತ್ತಿದ್ದಾರೆ.

-------------------

ತಂದೆಯವರ ಪೆನ್ ಕೊಡುಗೆ ನೀಡುವ ಹವ್ಯಾಸ ಖುಷಿಯಿದೆ. ಅವರು ಪೆನ್ ನೀಡುವುದು ನಮಗೆ ಯಾವಾಗಲೂ ತೊಂದರೆ ಎನ್ನಿಸಿಯೇ ಇಲ್ಲ. ಮನೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪುಸ್ತಕಗಳನ್ನು ಇಟ್ಟಿದ್ದಾರೆ ಎನ್ನುವುದೂ ಕೂಡ ನಮಗೆ ತೊಂದರೆ ತಂದಿಲ್ಲ. ಬದಲಾಘಿ ನಮಗೆ ಬೇಕಾದಂತಹ ಪುಸ್ತಕಗಳು ಸುಲಭವಾಗಿ ಸಿಗುತ್ತದೆ ಎನ್ನುವ ಖುಷಿ ಇದೆ.

ಲೀನಾ ಭಟ್
ಮೋಹನ ಭಟ್ಟರ ಪುತ್ರಿ


Saturday, November 19, 2016

ಅಳಿವಿನಂಚಿನಲ್ಲಿರುವ ಅಳಿಲು ತಂದ ಸಂಕಷ್ಟ / ತೆಂಗು ಬೆಳೆಗಾರರಿಗೆ ಕೆಂಪಳಿಲಿನಿಂದ ನಷ್ಟ

ವಿನಾಶದ ಅಂಚಿನಲ್ಲಿರುವ ಕೆಂಪಳಿಲುಗಳಿಂದ ತೆಂಗು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಕೆಂಪು ಅಳಿಲುಗಳ ಕಾಟವನ್ನು ತಡೆಯಲಾರದೇ ತೆಂಗು ಬೆಳೆಗಾರರು ದಿನದಿಂದ ದಿನಕ್ಕೆ ಹೈರಾಣಾಗುತ್ತಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಕೆಂಪು ಅಳಿಲುಗಳನ್ನು ಸ್ಥಳೀಯವಾಗಿ ಕೆಂಜಳಿಲು, ಕೆಂಪು ಬಾಲದ ಅಳಿಲು, ಕೇಶ ಅಳಿಲು ಎಂದೆಲ್ಲ ಕರೆಯುತ್ತಾರೆ. ಮಲಬಾರ್ ಗ್ರೇಟ್ ಸ್ಕ್ವೀರಲ್ ಎಂದು ಕರೆಸಿಕೊಳ್ಳುವ ಇವು ದಶಕಗಳ ಹಿಂದೆ ಹೇರಳವಾಗಿದ್ದವು. ಆದರೆ ಬೇಟೆಗಾರರರ ದುರಾಸೆಗೆ ಬಲಿಯಾಗಿ ಅಳಿವಿನ ಅಂಚನ್ನು ತಲುಪಿದೆ. ಇದೀಗ ಕೇಂದ್ರ ಸರಕಾರವು ಕೆಂಪು ಅಳಿಲನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಈ ಪ್ರಾಣಿ ನಡೆಸುತ್ತಿರುವ ಉಪಟಳವನ್ನು ಸಹಿಸಲಾರದೇ ತೆಂಗು ಬೆಳೆಗಾರ ಕೈಚೆಲ್ಲಿದ್ದಾನೆ.
35 ರಿಂದ 40 ಸೆಂ.ಮಿ ಉದ್ದ ಬೆಳೆಯುವ ಕೆಂಪು ಅಳಿಲುಗಳು ಕಾಡು ಹಣ್ಣುಗಳನ್ನು, ಎಲೆಗಳನ್ನು ಆಹಾರಕ್ಕಾಗಿ ಉಪಯೋಗಿಸುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಡುಗಳಲ್ಲಿ ಆಹಾರದ ಅಭಾವ ಎದುರಾಗಿರುವ ಕಾರಣ ನಾಡಿನತ್ತ ಲಗ್ಗೆ ಇಡುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ತೆಂಗಿನ ತೋಟಗಳಿಗೆ ಇವುಗಳು ಲಗ್ಗೆ ಇಡಲು ಆರಂಭಿಸಿವೆ. ಮರದಿಂದ ಮರಕ್ಕೆ ಕುಪ್ಪಳಿಸುತ್ತ, ಜಿಗಿಯುತ್ತ ಸಾಗಿವ ಇವುಗಳು ದಿನವೊಂದಕ್ಕೆ 4-5 ತೆಂಗಿನಕಾಯಿಗಳನ್ನು ಕೊರೆದು, ನೀರನ್ನು ಕುಡಿದು ತೆಂಗಿನ ಕಾಯಿಯ ತಿರುಳನ್ನು ತಿನ್ನುತ್ತಿವೆ. ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ಪಶ್ಚಿಮ ಘಟ್ಟದ ಸಾಲುಗಳ ಜಿಲ್ಲೆಗಳ ಹಲವಾರು ತೆಂಗಿನ ಬೆಳೆಗಾರರು ಕೆಂಪು ಅಳಿಲುಗಳ ಕಾಟದಿಂದ ಬೇಸತ್ತಿದ್ದಾರೆ.
ಸಾಮಾನ್ಯವಾಗಿ ಒಂದು ತೆಂಗಿನ ಮರದಲ್ಲಿ ಒಂದು ವರ್ಷಕ್ಕೆ 100 ತೆಂಗಿನಕಾಯಿಗಳು ಇಳುವರಿಯ ರೂಪದಲ್ಲಿ ಬಂದರೆ ಅದರಲ್ಲಿ ಅರ್ಧಕ್ಕರ್ಧ ಕೆಂಪಳಿಲುಗಳಿಗೆ ಆಹಾರವಾಗುತ್ತಿದೆ. ಕೆಲವು ತೆಂಗಿನ ಮರಗಳಲ್ಲಂತೂ ಕೆಂಪಳಿಲುಗಳು ಕೊರೆದು ತೂತು ಮಾಡಿ ತಿಂದ ತೆಂಗಿನಕಾಯಿಯ ಗೊಂಚಲುಗಳೇ ಕಾಣಸಿಗುತ್ತಿವೆ. ಈಗಾಗಲೇ ನುಸಿಪೀಡೆಯಂತಹ ಹಲವು ಸಮಸ್ಯೆಗಳಿಂದ ತೆಂಗಿನ ಬೆಳೆಯ ಲಾಭವನ್ನು ಬಹುತೇಕ ಕಳೆದುಕೊಂಡಿರುವ ಬೆಳೆಗಾರ ಕೆಂಪು ಅಳೀಲುಗಳ ಕಾಟದಿಂದ ಇದ್ದ ಚಿಕ್ಕ ಲಾಭಾಂಶವನ್ನೂ ಕಳೆದುಕೊಳ್ಳುವ ಹಂತ ತಲುಪಿದ್ದಾನೆ.
ಅರಣ್ಯ ಇಲಾಖೆ ಕೆಂಪು ಅಳಿಲುಗಳ ಬೇಟೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟುತ್ತಿದೆ. ಆದರೆ ನಾಡಿಗೆ ಲಗ್ಗೆ ಇಟ್ಟು ತೆಂಗಿನ ಬೆಳೆಯನ್ನು ನಾಶ ಮಾಡುವ ಅಳಿಲುಗಳ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗುತ್ತಿದೆ. ಬೆಳಗಾರರು ಇವುಗಳ ಹಾವಳಿಯನ್ನು ತಡೆಗಟ್ಟಲಾಗದೇ ಕೈಚೆಲ್ಲಿದ್ದಾರೆ. ಕೆಂಪು ಅಳಿಲುಗಳ ಹಾವಳಿ ಇನ್ನಷ್ಟು ಜಾಸ್ತಿಯಾದಲ್ಲಿ ಅವನ್ನು ಬೇಟೆಯಾಡುವುದು ಅನಿವಾರ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಕೆಂಪು ಅಳಿಲು ಮುಂತಾದ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಬೇಟೆ ಕಡ್ಡಾಯವಾಗಿ ನಿಷಿದ್ಧ. ಅಲ್ಲದೇ ಇಂತಹ ಬೇಟೆಗಳನ್ನು ಕೈಗೊಂಡವರಿಗೆ ಕಠಿಣ ಶಿಕ್ಷೆಯೂ ಇದೆ. ಹೀಗಾಗಿ ಅಳಿಲುಗಳನ್ನು ತಡೆಗಟ್ಟುವುದು ಸಾಧ್ಯವಾಗದೇ, ಬೆಳೆ ಉಳಿಸಿಕೊಳ್ಳುವಲ್ಲಿಯೂ ವಿಫಲರಾಗಿರುವ ಬೆಳೆಗಾರರು ಕಂಗಾಲಾಗಿದ್ದಾರೆ.
ಅರಣ್ಯ ಇಲಾಖೆ ಕೆಂಪು ಅಳಿಲುಗಳು ತೆಂಗಿನ ತೋಟದ ಕಡೆಗೆ ದಾಳಿ ಇಡದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇಂತಹ ಅಪರೂಪದ ಪ್ರಾಣಿಗಳಿಗೆ ಅಗತ್ಯವಾಗಿರುವ ಹಣ್ಣಿನ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ನೆಡುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ತೆಂಗಿಗೆ ದಾಳಿ ಇಡುವ ಅಳಿಲುಗಳನ್ನು ಬೆಳೆಗಾರರು ಕೊಲ್ಲುವುದರ ಮೊದಲೇ ಅಧಿಕಾರಿಗಳು ಅವುಗಳ ಸಂರಕ್ಷಣೆಯತ್ತ ಗಮನ ಹರಿಸಬೇಕಾದ ಅಗತ್ಯವಿದೆ.


----------------

ಕೆಂಪು ಅಳಿಲುಗಳ ಹಾವಳಿ ತೀವ್ರವಾಗಿದೆ. ಇದರಿಂದಾಗಿ ದಿನಂಪ್ರತಿ ಕನಿಷ್ಟ 4-5 ತೆಂಗಿನ ಕಾಯಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ವರ್ಷವೊಂದರಲ್ಲಿ ಏನಿಲ್ಲ ಎಂದರೂ 500ಕ್ಕೂ ಹೆಚ್ಚು ತೆಂಗಿನಕಾಯಿಗಳು ಅಳಿಲುಗಳ ಬಾಯಿಗೆ ಬೀಳುತ್ತಿವೆ. ಅರಣ್ಯ ಇಲಾಖೆಗೆ ಈ ಕುರಿತು ಹೇಳಿ ಹೇಳಿ ಸಾಕಾಗಿದೆ. ಕೆಂಪು ಅಳಿಲುಗಳು ತೆಂಗಿನ ಬೆಳೆಗೆ ದಾಳಿ ಇಡದಂತೆ ಕ್ರಮ ಕೈಗೊಳ್ಳುವ ಜರೂರತ್ತು ಅರಣ್ಯ ಇಲಾಖೆಯ ಮೇಲಿದೆ.
ನಂದನ ಹೆಗಡೆ
ತೆಂಗು ಬೆಳೆಗಾರ


Monday, November 14, 2016

ಅಸಲಿ ನೋಟುಗಳನ್ನೇ ನಾಚಿಸುವಂತಹ ವಿನ್ಯಾಸ : ಮಾರುಕಟ್ಟೆಗೆ ಬಂದಿದೆ ನೋಟ್ ಪರ್ಸ್

ಹೋದೆಯಾ ನೋಟು ಅಂದರೆ ಬಂದೆ ಪರ್ಸಾಗಿ ಅಂದ್ಲಂತೆ

ನರೇಂದ್ರ ಮೋದಿಯವರೇನೋ 500 ರು ಹಾಗೂ 100 ರು. ನೋಟುಗಳನ್ನು ನಿಷೇಧಿಸಿದ್ದಾರೆ. ಹಳೆಯ ನೋಟುಗಳು ಗತ ವೈಭವವನ್ನು ಸೇರುತ್ತಿವೆ. ಆದರೆ ಜನರ ಮನಸ್ಸಿನಲ್ಲಿ ಮಾತ್ರ ಆ ನೋಟುಗಳು ಇನ್ನೂ ಅಚ್ಚಳಿಯದೇ ಉಳಿದಿವೆ. ಆ ನೋಟುಗಳ ನೆನಪಿನಲ್ಲಿ ಬಗೆ ಬಗೆಯ ವಿನ್ಯಾಸವನ್ನು ರೂಪಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. 500, ರು ಹಾಗೂ 1000 ರು. ನೋಟುಗಳ ಆಕಾರದ ಪರ್ಸ್ ಗಳು ಮಾರುಕಟ್ಟೆಗೆ ಬಂದಿದ್ದು ಎಲ್ಲರ ಮನಸ್ಸನ್ನು ಸೆಳೆಯುತ್ತಿದೆ.
ಕಪ್ಪು ಹಣ ನಿಷೇಧಿಸುವ ಸಲುವಾಗಿ ನರೇಂದ್ರ ಮೋದಿಯವರು ದೇಶದಾದ್ಯಂತ ನೋಟು ನಿಷೇಧವನ್ನು ಕೈಗೊಂಡಿದ್ದಾರೆ. ಆದರೆ ಮಧ್ಯಮ ವರ್ಗದ ಜನರು ಮಾತ್ರ 500 ಹಾಗೂ 1000 ರು. ನೋಟುಗಳ ಜೊತೆಗಿನ ಅವಿನಾಭಾವ ಸಂಬಂಧವನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. ಕಿರು ಉದ್ದಿಮೆದಾರರು ಈ ನೋಟುಗಳ ನೆನಪಿನಲ್ಲಿ ಪರ್ಸ್ ವಿನ್ಯಾಸ ಮಾಡಿ ಮಾರುಕಟ್ಟೆಗೆ ತಂದಿದ್ದಾರೆ. ನೋಡಲು ಥೇಟ್ ಅಸಲಿ ನೋಟುಗಳಂತೆ ಕಾಣುವ ಈ ಪರ್ಸ್ ಗಳು ಸಾಮಾನ್ಯ ಜನರನ್ನು ಒಂದು ಕ್ಷಣ ಯಾಮಾರಿಸುವಲ್ಲಿ ಸಫಲವಾಗುತ್ತವೆ.
ಈಗಾಗಲೇ ರದ್ದು ಪಡಿಸಿರುವ 500 ರು ಹಾಗೂ 1000 ರು.ಗಳನ್ನು ಬಳಸಿಕೊಂಡು ಪರ್ಸ್ ರೂಪಿಸಲಾಗಿದೆಯೇನೋ ಎನ್ನುವಂತೆ ಕಾಣುವ ಈ ಪರ್ಸ್ ಗಳ ಮುಂಭಾಗ ಹಾಗೂ ಹಿಂಭಾಗದಲ್ಲಿ ನಿಷೇಧಿಸಿರುವ ನೋಟುಗಳಂತೆಯೇ ಇದೆ. ನೋಟುಗಳ ಮೇಲೆ ಇರುವಂತೆ 14 ಭಾಷೆಗಳು, ಮಹಾತ್ಮಾ ಗಾಂಧೀಜಿಯವರ ಪೋಟೋ, ಅಶೋಕ ಸ್ಥಂಭದ ಲಾಂಛನ ಹೀಗೆ ಎಲ್ಲವನ್ನೂ ಹೊಂದಿದೆ. ಆರ್ಬಿಐ ಗವರ್ನರ್ ಅವರ ಸಹಿ, ಜೊತೆಯಲ್ಲಿ ನೋಟಿನ ಮೇಲೆ ಆರ್ಬಿಐ ಮುದ್ರಿಸುವ ರೀತಿಯಲ್ಲಿ ಸಂಖ್ಯೆಗಳೂ ಇದೆ. ಮೇಲ್ನೋಟಕ್ಕೆ ಅಸಲಿಯೆಂಬಂತೆ ಕಾಣುತ್ತದೆಯಾದರೂ ಸೂಕ್ಷ್ಮವಾಗಿ ಗಮನಿಸಿದಾಗ ಈ ನೋಟ್ ಪರ್ಸನ್ನು ತೆಳುವಾದ ಬಟ್ಟೆಯ ಪದರದಿಂದ ಮಾಡಿರುವುದು ಗಮನಕ್ಕೆ ಬರುತ್ತದೆ.
ಶಿರಸಿ ಹಾಗೂ ಹುಬ್ಬಳ್ಳಿಯೆ ಕೆಲವು ಮಳಿಗೆಗಳಲ್ಲಿ ಇಂತಹ ವಿಶಿಷ್ಟ ವಿನ್ಯಾಸದ ನೋಟ್ ಪರ್ಸ್ ಗಳು ಮಾರಾಟಕ್ಕೆ ಲಭ್ಯವಿದೆ. ಈಗಾಗಲೇ ನಿಷೇಧವಾಗಿರುವ ನೋಟುಗಳ ಬಗೆಗೆ ಅವಿನಾಭಾವ ಸಂಬಂಧ ಹೊಂದಿರುವವರು, ಚಿಕ್ಕಮಕ್ಕಳು ಈ ಪರ್ಸ್ ಗಳನ್ನು ವಿಶೇಷ ಆಸಕ್ತಿಯಿಂದ ಗಮನಿಸುತ್ತಿದ್ದು, ಅವನ್ನು ಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ 30 ರುಪಾಯಿಗೆ ಒಂದು ನೋಟ್ ಪರ್ಸ್ ಮಾರಾಟವಾಗುತ್ತಿದೆ. ಕಪ್ಪು ಹಣವನ್ನು ಉತ್ತರ ಭಾರತದಲ್ಲಿ ಸುಟ್ಟ ವಿಷಯಗಳು ಬೆಳಕಿಗೆ ಬರುತ್ತಿದೆ. ಅಲ್ಲದೇ ಗಂಗಾನದಿಯಲ್ಲಿ 500 ರು. ಹಾಗೂ 1000 ರು. ನೋಟುಗಳನ್ನು ತೇಲಿ ಬಿಟ್ಟಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಹೀಗಿದ್ದಾಗಲೇ ಈ ರೀತಿಯ ನೋಟ್ ಪರ್ಸ್ ಮಾರುಕಟ್ಟೆಗೆ ಬಂದಿರುವುದು ಜನಸಾಮಾನ್ಯರಲ್ಲಿ ಒಮ್ಮೆ ಅನುಮಾನವನ್ನೂ ಹುಟ್ಟಿಸಿದೆ. ಆದರೆ ಅಂಗಡಿ ಮಾಲೀಕರುಗಳು ನೋಟ್ ಪರ್ಸ್ ನ ಅಸಲಿ ವಿಷಯವನ್ನು ತಿಳಿಸಿದಾಗಲೇ ಸಮಾಧಾನವನ್ನು ಹೊಂದಿದ್ದಾರೆ.
ಒಟ್ಟಿನಲ್ಲಿ ನೋಟುಗಳು ಹೋದೆಯಾ ಎಂದರೆ ಪರ್ಸ್ ನ ರೂಪದಲ್ಲಿ ಮರಳಿ ಬಂದೆ ಎಂಬಂತಾಗಿದೆ. ವಿಶಿಷ್ಟ ವಿನ್ಯಾಸದ ನೋಟ್  ಪರ್ಸ್ ಕೊಳ್ಳಲು ಕೆಲವರು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ 500 ರು. ಹಾಗೂ 1000 ರು. ನೋಟುಗಳು ಹೀಗಿದ್ದವು ಎಂಬುದನ್ನು ನೆನಪಿಸಿಕೊಳ್ಳಲು ಸಾಧ್ಯವಾಗಲಿ ಎಂದು ನೋಟ್ ಪರ್ಸ್ ಕೊಳ್ಳುವವರು ಅಭಿಪ್ರಾಯಿಸುತ್ತಿದ್ದಾರೆ. ಅಲ್ಲದೇ ಈ ನೋಟು ಪರ್ಸನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ ಎಂದೂ ಹೇಳುತ್ತಾರೆ.
ವಿಶಿಷ್ಟ ನೋಟ್ ಪರ್ಸ್ ಆಕರ್ಷಣೆಗೆ ಕಾರಣವಾಗಿದೆ. ನಿಷೇಧದ ನಡುವೆಯೂ ಹೊಸ ವಿನ್ಯಾಸದ ಮೂಲಕ ಜನರ ಮನಸ್ಸನ್ನು ಇವು ತಲುಪುತ್ತಿವೆ. ತನ್ಮೂಲಕ ನೋಟು ನಿಷೇಧವಾದರೂ ಮಾರುಕಟ್ಟೆಯಲ್ಲಿ ಜೀವಂತವಾಗಿ ಉಳಿದಿದೆ. ಅಚ್ಚರಿಗೆ ಕಾರಣವಾಗಿದೆ.

---------------

ನಾನು ಮಳಿಗೆಯೊಂದರಲ್ಲಿ ಈ ಪರ್ಸನ್ನು ಕಂಡಾಗ ಅಚ್ಚರಿ ಪಟ್ಟಿದ್ದೆ. ಅಸಲಿ ನೋಟಿನಂತೆ ಭಾಸವಾಗಿತ್ತು. ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯಿತು. ಕೂಡಲೇ ನಾನು ಇವನ್ನು ಕೊಂಡಿದ್ದೇನೆ. ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ.
ಮೋಹನ್ ಭಟ್
ಶಿರಸಿ

==============

(ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

500, 1000 ರು. ನೋಟು ನಿಷೇಧ : ಗುತ್ತಿಗೆದಾರರಿಗೆ ಸಂಕಷ್ಟ, ಗುತ್ತಿಗೆ ಕೆಲಸಕ್ಕೆ ಬಾರದ ಕೆಲಸಗಾರರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 500 ರು ಹಾಗೂ 1000 ರು. ನೋಟುಗಳನ್ನು ರದ್ದು ಮಾಡಿ ನಾಲ್ಕು ದಿನಗಳು ಕಳೆದಿದೆ. ಕಳೆದ ನಾಲ್ಕು ದಿನಗಳಿಂದ ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಡೆಸುವ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ನೋಟು ನಿಷೇಧದ ಪರಿಣಾಮ ಗುತ್ತಿಗೆದಾರರು ಹಾಗೂ ಕೆಲಸಗಾರರ ಮೇಲೆ ಪರಿಣಾಮವನ್ನು ಉಂಟುಮಾಡಿದೆ.
ರಾಜ್ಯ ಸರಕಾರ ವಿವಿಧ ಇಲಾಖೆಗಳ ಅಡಿಯಲ್ಲಿ ಕಾಮಗಾರಿ ಕೈಗೊಳ್ಳಲು ಇತ್ತೀಚೆಗೆ ಹಣ ಬಿಡುಗಡೆ ಮಾಡಿದೆ. ಇದರಿಂದಾಗಿ ಕಳೆದ 15 ದಿನಗಳ ಅವಧಿಯಲ್ಲಿ ರಸ್ತೆ ಕಾಮಗಾರಿ, ಹೊಂಡ ತುಂಬುವಿಕೆ, ಕಾಲು ಸಂಕ ನಿಮರ್ಾಣ ಸೇರಿದಂತೆ ಸರಕಾರದ ವಿವಿಧ ಇಲಾಖೆಯ ಅಡಿಯ ಕಾಮಗಾರಿಗಳು ಪ್ರಗತಿಯನ್ನು ಕಂಡಿದ್ದವು. ಟೆಂಡರ್ ಮೂಲಕ ಕಾಮಗಾರಿಗಳ ಗುತ್ತಿಗೆ ಹಿಡಿದ ಗುತ್ತಿಗೆದಾರರು ಕೆಲಸವನ್ನು ಆರಂಭಿಸಿದ್ದರು. ಆದರೆ ನರೇಂದ್ರ ಮೋದಿಯವರು 500 ಹಾಗೂ 1000 ರು. ನೋಟು ನಿಷೇಧಿಸಿದ ಕೂಡಲೇ ಈ ಕಾಮಗಾರಿಗಳೆಲ್ಲ ಅರ್ಧಕ್ಕೆ ನಿಂತುಬಿಟ್ಟಿವೆ.
ಕಾಮಗಾರಿ ನಿಲುಗಡೆಗೆ ಗುತ್ತಿಗೆದಾರರು ಕೊಡುತ್ತಿರುವ ಕಾರಣ ಮಾತ್ರ ಸ್ಪಷ್ಟ. ಗುತ್ತಗೆದಾರರು ಯಾವುದೇ ಕಾಮಗಾರಿಗಳಿದ್ದರೂ ದಿನಗೂಲಿಯ ಲೆಕ್ಕದಲ್ಲಿ ಕೆಲಸಗಾರರನ್ನು ಕರೆಸಿ ಕಾಮಗಾರಿ ಕೈಗೊಳ್ಳುತ್ತಾರೆ. ಮರು ಡಾಂಬರೀಕರಣ ಅಥವಾ ಇನ್ಯಾವುದೇ ಸರಕಾರಿ ಕಾಮಗಾರಿಗಳನ್ನು ಕೈಗೊಳ್ಳುವುದಾದಲ್ಲಿ ಕೃಷಿ ಕೂಲಿಗಿಂತ ಜಾಸ್ತಿ ದಿನಗೂಲಿಯನ್ನು ಈ ಕೆಲಸಗಾರರು ಬಯಸುತ್ತಾರೆ. ಬಹುತೇಕ ಕೆಲಸಗಾರರಿಗೆ 400 ರಿಂದ 500 ರು. ಕೊಡಲೇಬೇಕು. ಇದೀಗ ಕೇಮದ್ರ ಸರಕಾರ 500 ರು. ನೋಟನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ತಿಳಿದ ದಿನಗೂಲಿ ನೌಕರರು ಗುತ್ತಿಗೆದಾರರು ನೀಡುವ 500 ರು. ನೋಟನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ದಿನಗೂಲಿ ಕೆಲಸಗಾರರಿಗೆ 100 ರುಪಾಯಿಯ ನೋಟುಗಳ ಮೂಲಕ ದಿನಗಲೂಯನ್ನು ನೀಡೋಣವೆಂದರೆ ಗುತ್ತಿಗೆದಾರರ ಬಳಿ ನಿಗದಿತ ಮೊತ್ತದ ಚಿಲ್ಲರೆ ಹಣವಿಲ್ಲ. ಇರುವ ನೋಟನ್ನು ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ಹೈರಾಣಾಗುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.
ಗುತ್ತಿಗೆದಾರರು ಬ್ಯಾಂಕ್ಗಳಿಗೆ ತೆರಳಿ 500 ರು. ನೋಟಿಗೆ ಬದಲಾಗಿ 100 ರು. ನೋಟನ್ನು ಪಡೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಬ್ಯಾಂಕುಗಳಲ್ಲಿ ಹೆಚ್ಚಿದ ಜನಜಂಗುಳಿಯಿಂದಾಗಿ ನಿಗದಿತ ಹಣ ಪಡೆಯುವುದೂ ಕೂಡ ಸಾಧ್ಯವಾಗುತ್ತಿಲ್ಲ. ಅಲ್ಲದೇ ಪ್ರತಿಯೊಂದು ಕಾಮಗಾರಿ ಕೈಗೊಳ್ಳು ಕನಿಷ್ಟ 25 ದಿನಗೂಲಿ ನೌಕರರ ಅಗತ್ಯವಿದ್ದು ಅವರೆಲ್ಲರಿಗೂ 500 ರು. ನಂತೆ ಕೊಡಬೇಕು. ಈ ಮೊತ್ತವನ್ನು ಬ್ಯಾಂಕಿನಿಂದ ಪಡೆದರೆ, ಬ್ಯಾಂಕಿಗೆ ನಿಗದಿತ ದಾಖಲೆ ಹಾಗೂ ಆದಾಯದ ಮೂಲವನ್ನು ತಿಳಿಸಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮೊತ್ತದ ಹಣದ ಕುರಿತು ಅಧಿಕಾರಿಗಳು ಪ್ರಶ್ನಿಸಿದರೆ ಅವರಿಗೆ ಮಾಹಿತಿಯನ್ನು ಒದಗಿಸುವುದು ಕಷ್ಟವಾಗಬಹುದು. ಹೀಗಾಗಿ ನೋಟಿನ ಸಮಸ್ಯೆ ಮುಗಿಯುವ ವರೆಗೂ ಕಾಮಗಾರಿಗಳನ್ನು ನಿಲ್ಲಿಸಲಾಗುತ್ತದೆ ಎಂಬುದು ಗುತ್ತಿಗೆದಾರರ ಅಭಿಪ್ರಾಯವಾಗಿದೆ.
ಇದಕ್ಕೆ ಪ್ರತಿಯಾಗಿ ದಿನಗೂಲಿ ನೌಕರರು ಹೇಳುವುದೇ ಬೇರೆ. ದಿನಂಪ್ರತಿ 400-500 ರು. ದಿನಗೂಲಿ ನೀಡುತ್ತಿದ್ದರು. ಆದರೆ ನೋಟು ರದ್ದು ಮಾಡಲಾಗಿದೆ. ನಾವು ನೋಟನ್ನು ಪಡೆದರೂ ಅದನ್ನು ಚಲಾವಣೆ ಮಾಡುವುದು ಕಷ್ಟ. ಅಲ್ಲದೇ ದಿನಗೂಲಯ ಮೂಲಕ ಜೀವನ ನಡೆಸುವವರಿಗೆ ಪ್ರತಿದಿನ ಬ್ಯಾಂಕಿಗೆ ಹೋಗಿ ಹಣ ಬದಲಾವಣೆ ಮಾಡುವುದು ಅಸಾಧ್ಯದ ಮಾತು. ಹೀಗಾಗಿ ಗುತ್ತಿಗೆದಾರರ ಬಳಿ 500ರ ನೋಟಿನ ಬದಲಾಗಿ 100ರ ನೋಟುಗಳನ್ನೇ ನೀಡಬೇಕು ಎಂದು ಹೇಳಲಾಗುತ್ತಿದೆ. ಆದರೆ ಗುತ್ತಗೆದಾರರ ಬಳಿಯೂ 100 ನೋಟುಗಳಿಲ್ಲ. ಕಾಮಗಾರಿಗಳು ನಿಲುಗಡೆಯಾಗುವ ಹಂತಕ್ಕೆ ಬಂದಿದೆ. ದಿನಗೂಲಿ ನೌಕರರಿಗೂ ಹಾಗೂ ಗುತ್ತಗೆದಾರರಿಗೂ ಸಮಸ್ಯೆಯಾಗುತ್ತಿದೆ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ವಿವಿಧ ಇಲಾಖೆಗಳ ಇಂಜಿನಿಯರುಗಳು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಯ ನಿಗದಿ ಪಡಿಸಿದ್ದಾರೆ. ಆದರೆ ನೋಟುಗಳ ಅಭಾವದಿಂದ ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಕೈಗೊಳ್ಳಲಾಗದೇ ಗುತ್ತಿಗೆದಾರರು ಹೈರಾಣಾಗುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಕಾಮಗಾರಿಗಳು ಅರ್ಧಕ್ಕೆ ನಿಂತರೆ ಅವುಗಳ ಗುಣಮಟ್ಟ ಕಾಪಾಡುವುದೂ ಕೂಡ ಸಮಸ್ಯೆಯಾಗುತ್ತದೆ. ನೋಟು ನಿಷೇಧವನ್ನು ಗಮನದಲ್ಲಿ ಇರಿಸಿಕೊಂಡು ಈಗಾಗಲೇ ನಿಗದಿ ಮಾಡಿಸುವ ಸಮಯದಲ್ಲಿ ಸಡಿಲ ನೀತಿಯನ್ನು ಅನುಸರಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಕಪ್ಪು ಹಣದ ವಿರುದ್ಧ ಸಮರ ಸಾರುವ ನಿಟ್ಟಿನಲ್ಲಿ ಮೋದಿಯವರು ತೆಗೆದುಕೊಂಡಿರುವ ನಿಧರ್ಾರ ಕೆಲವು ಕಡೆಗಳಲ್ಲಿ ಸಮಸ್ಯೆಗಳನ್ನೂ ಉಂಟುಮಾಡುತ್ತಿದೆ. ಈ ಸಮಸ್ಯೆಗಳು ಬೇಗನೆ ಪರಿಹಾರವಾಗಲಿ ಎನ್ನುವ ಆಶಯವೂ ಗುತ್ತಿಗೆದಾರರು ಹಾಗೂ ದಿನಗೂಲಿ ನೌಕರರದ್ದಾಗಿದೆ.

-----------------

500 ರು. ನೋಟು ನಿಷೇಧ ಸಾಕಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿದೆ. ದಿನಗೂಲಿ ನೌಕರರಿಗೆ 500 ರು. ನೀಡಿ ಕೆಲಸ ಮಾಡಿಸಿಕೊಲ್ಳಬೇಕಿತ್ತು. ಆದರೆ ಈ ನೌಕರರು 500 ರು. ನೋಟನ್ನು ತೆಗೆದುಕೊಳ್ಳುತ್ತಲೇ ಇಲ್ಲ. ನಮ್ಮ ಬಳಿ ಚಿಲ್ಲರೆ ಇಲ್ಲ. ಹೀಗಾಗಿ ಕೆಲಸಗಾರರಿಗೆ ಹಣ ನೀಡುವುದು ಕಷ್ಟವಾಗುತ್ತಿದೆ. ಕಾಮಗಾರಿಗಳೆಲ್ಲ ನಿಲುಗಡೆಯ ಹಂತ ಬಂದು ತಲುಪಿದೆ. ನರೇಂದ್ರ ಮೋದಿಯವರ ಕೆಲಸದ ಬಗ್ಗೆ ಮೆಚ್ಚುಗೆಯಿದೆ. ಆದರೆ ನಮ್ಮ ಮಟ್ಟಿಗೆ ಸಮಸ್ಯೆಗಳಾಗುತ್ತಿವೆ. ಈ ಸಮಸ್ಯೆ ಶೀಘ್ರ ಪರಿಹಾರವಾಗುವ ನಿರೀಕ್ಷೆಯಲ್ಲಿದ್ದೇವೆ.
ನವೀನಕುಮಾರ
ಗುತ್ತಿಗೆದಾರ

--------------------

(ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

Saturday, November 12, 2016

ಸಿಕ್ಕಿತು ಸ್ವಾತಂತ್ರ್ಯ

ಸಿಕ್ಕಿತು ಸ್ವಾತಂತ್ರ್ಯ
ಕೊನೆಗೂ ಸಿಕ್ಕಿತು ಸ್ವಾತಂತ್ರ್ಯ |

ಬಸಿದ ಬೆವರು
ಹರಿದ ನೆತ್ತು
ಕಳೆದ ಜೀವಗಳು, ಸಿಕ್ಕಿತು ಸ್ವಾತಂತ್ರ್ಯ|

ಭಾರತೀಯರ ಛಲ
ಹೋರಾಟದ ಫಲ
ಆಂಗ್ಲನಾಡು ದುರ್ಬಲ, ಸಿಕ್ಕಿತು ಸ್ವಾತಂತ್ರ್ಯ |

ಕಳೆದ ದಾಸ್ಯ
ಸ್ವಾಭಿಮಾನಿಯ ಭಾಷ್ಯ
ರಾಷ್ಟ್ರೀಯತೆಯ ದೃಶ್ಯ, ಸಿಕ್ಕಿತು ಸ್ವಾತಂತ್ರ್ಯ |

ಮೆರೆದ ದೇಶಭಕ್ತಿ
ಮುರಿದ ಕುಟಿಲಯುಕ್ತಿ
ಗೆದ್ದ ಜನರ ಪ್ರೀತಿ, ಸಿಕ್ಕಿತು ಸ್ವಾತಂತ್ರ್ಯ |

ಗಾಂಧೀಜಿಯ ಶಾಂತಿ
ಸುಭಾಷರ ಕ್ರಾಂತಿ
ಸಿಕ್ಕಿತು ಹೊಸ ನೀತಿ, ಸಿಕ್ಕಿತು ಸ್ವಾತಂತ್ರ್ಯ ||

----------------

(ಈ ಕವಿತೆಯನ್ನು ಬರೆದಿರುವುದು 9-08-2006ರಂದು, ದಂಟಕಲ್ಲಿನಲ್ಲಿ, ಅಜಮಾಸು 10 ವರ್ಷಗಳ ಹಿಂದಿನ ಕವಿತೆ ಇದು. ಸ್ವಾತಂತ್ರ್ಯ ಹೋರಾಟದ ಕುರಿತಂತೆ ಆ ದಿನಗಳಲ್ಲಿ ಸುಮ್ಮನೆ ಬರೆದಿದ್ದು. ಓದಿ ಹೇಳಿ )