Monday, December 29, 2014

ಚಿನಕುರುಳಿ ಹನಿಗಳು

ನೆಪ

ಹುಲಿಯ ನೆಪದಲ್ಲಿ
ಶೆಟ್ಟರ್ ಚಾರ್ಜು
ಅದಕ್ಕೆ ಕಾರಣ
ರಾಣಾ ಜಾರ್ಜು !

ದುಂಡಿರಾಜ್

ಪದ ಪದಗಳನ್ನು
ಒಟ್ಟಿಗೆ ಇಟ್ಟರು
ಚುಟುಕ ಬರೆದರು
ದುಂಡೀರಾಜರು |
ಇಷ್ಟವಾದರು ||

ಕಾರಣ

ಹುಲಿ ನೆಪದಲ್ಲಿ
ಆರಂಭವಾಯಿತು
ಹಣಾ-ಹಣಿ
ಆರಂಭಿಸಿದವರು
ಮಾತ್ರ
ರಾಜಕಾರಣಿ ||

ನೆನಪು

ಐಸಿಸ್, ತಾಲಿಬಾನ್
ಮುಂತಾದ ಉಗ್ರ
ಸಂಘಟನೆಗಳು
ನೂರಾರು...|
ಈ ನಡುವೆಯೂ ನೆನಪಾದರು
ಇಷ್ಟವಾದರು
ಅಬ್ದುಲ್ ಕಲಾಮರು |


Sunday, December 28, 2014

ಅಘನಾಶಿನಿ ಕಣಿವೆಯಲ್ಲಿ-5

        ಇದಾಗಿ ಒಂದೆರಡು ದಿನ ಕಳೆದಿರಬಹುದು. ಆ ದಿನ ಬೆಳ್ಳಂಬೆಳಿಗ್ಗೆ ಪ್ರದೀಪ ಏಕಾಏಕಿ ವಿಕ್ರಮನ ರೂಮಿಗೆ ಬಂದ. ಅವನನ್ನು ಕಂಡ ವಿಕ್ರಂ `ಏನಪ್ಪಾ ಎಲ್ಲೊ ಹೋಗಿದ್ದೆ. ಬಹಳ ದಿನ ಆಯ್ತಲ್ಲ ನಿನ್ನ ಸುಳಿವಿಲ್ಲದೇ. ಬೇಕಾದಾಗ ಸಿಗೋನಲ್ಲ ನೀನು. ನೀ ಭಲೇ ಆಸಾಮಿ. ಯಾವಾಗಾದ್ರೂ ಬರ್ತೀಯಾ.. ಯಾವಾಗಾದ್ರೂ ಸಿಕ್ತೀಯಾ.. ನಾಪತ್ತೆ ಆಗ್ತೀಯಾ.. ಏನಪ್ಪಾ ಏನ್ ಕಥೆ ನಿಂದು..?' ಎಂದು ಕೇಳಿದ.
        `ಏನಿಲ್ಲ ಮಾರಾಯಾ. ಎಂತದ್ದೋ ಇಂಪಾರ್ಟೆಂಟ್ ಕೆಲಸ ಇತ್ತು.  ಅದರಲ್ಲಿ ತಲ್ಲೀನ ಆಗಿದ್ದೆ. ಅದಕ್ಕಾಗಿ ಬಂದಿರಲಿಲ್ಲ ನೋಡು. ಅದಿರ್ಲಿ ಏನೋ ಪೇಪರ್ ನವರು ಸಂದರ್ಶನಕ್ಕೆ ಬಂದಿದ್ದರಂತೆ. ಭಾರಿ ಭಾರಿ ರಿಪೋರ್ಟೂ ಆಗಿದ್ಯಂತೆ. ಏನಪ್ಪಾ ವಿಶೇಷ?' ಎಂದು ಕೇಳಿದ ಪ್ರದೀಪ.
        `ಅದನ್ನೇ ಹೇಳಿದ್ನಪ್ಪ. ಅವರಿಗೆ ನಿನ್ನ ಪರಿಚಯ ಮಾಡ್ಕೊಡೋಣ ಅಂದುಕೊಂಡಿದ್ದರೆ ನೀನು ನಾಪತ್ತೆ...' ಎಂದ ವಿಕ್ರಂ.
         `ಅದಿರ್ಲಿ.. ಒಂದು ಮುಖ್ಯ ವಿಷ್ಯ ಹೇಳ್ಬೇಕಿತ್ತು. ಅದೇನಂದ್ರೆ ನಾವು ಬೆಂಗಳೂರಿಗೆ ಹೋಗಿದ್ವಲ್ಲಾ ಆಗೆಲ್ಲಾ ನಾನು ಬಹಳ ಜನರನ್ನು ನೋಡಿದೆ. ಒಬ್ಬತ್ತಾ ನಮ್ಮನ್ನ ಅದರಲ್ಲೂ ಮುಖ್ಯವಾಗಿ ನಿನ್ನನ್ನ ಫಾಲೋ ಮಾಡ್ತಾ ಇದ್ದ..' ಎಂದ ಪ್ರದೀಪ.
        `ಹಹ್ಹ... ತಮಾಷೆ ಮಾಡ್ತಿದ್ದೀಯಾ.. ಬೇರೆ ಕೆಲಸ ಇಲ್ಲವಾ ನಿನಗೆ.? ಹೊತ್ತಲ್ಲದ ಹೊತ್ತಲ್ಲಿ ಜೋಕ್ ಮಾಡಬೇಡ.. ನನ್ನನ್ನ ಫಾಲೋ ಮಾಡೋಕೆ ನಾನೇನು ರಜನೀಕಾಂತನಾ? ಅಥವಾ ಮತ್ತಿನ್ಯಾರಾದ್ರೂ ಸೆಲೆಬ್ರಿಟಿನಾ? ಹೋಗ್ ಹೋಗೋ.. ನಿನ್ ಮಾತಿಗೂ ಒಂದು ಮಿತಿ ಇರಲಿ ಮಾರಾಯಾ..' ಎಂದ ವಿಕ್ರಂ.
        `ಇಲ್ಲ ಮಾರಾಯಾ.. ರಿಯಲಿ. ನಾನು ನಿಜಾನೇ ಹೇಳ್ತಾ ಇದ್ದೀನಿ. ನಾನು ಅಬಸರ್ವ್ ಮಾಡ್ತಾ ಇದ್ದೆ ಮಾರಾಯಾ.. ನೀನು ನಂಬೋದಾದ್ರೆ ನಂಬು.. ಬಿಟ್ಟರೆ ಬಿಡು. ಆದರೆ ಹುಷಾರಾಗಿರು ಅಷ್ಟೇ.. ನೀನು ನಂಬಲಿಲ್ಲ ಅಂದರೆ ನನ್ನ ಗಂಟೆಂತದ್ದೂ ಖರ್ಚಾಗೋದಿಲ್ಲ ಮಾರಾಯಾ..' ಎಂದು ಹೇಳಿದವನೇ `ಸರಿ ನಾನಿನ್ನು ಬರ್ತೀನಿ..' ಎಂದವನೇ ಹೊರಟೇ ಹೋದ.
         ವಿಕ್ರಮನಿಗೆ ಒಮ್ಮೆ ದಿಗ್ಬ್ರಮೆ ಆಯಿತು. ಇದೇನಪ್ಪಾ ಇದು ಹೀಗೆ ಎಂದುಕೊಂಡ. ನನ್ನನ್ನು ಫಾಲೋ ಮಾಡೋರೂ ಇದ್ದಾರಾ? ಯಾರು ಅವರು? ಯಾಕೆ ನನ್ನನ್ನು ಫಾಲೋ ಮಾಡ್ತಾ ಇದ್ದಾರೆ? ಪ್ರದೀಪನೇ ಸುಳ್ಳು ಹೇಳಿದನೇ? ಅಥವಾ ಆತ ಹೇಳಿದ್ದರಲ್ಲಿ ನಿಜವಿರಬಹುದೇ? ಇದರಲ್ಲೇನೋ ನಿಘೂಡತೆಯಿದೆ. ಈ ಪ್ರದೀಪನನ್ನೇ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಆತನ ಮಾತನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಏನಾದ್ರೂ ಆಗ್ಲಿ. ಸಮಸ್ಯೆ ಹತ್ತಿರಕ್ಕೆ ಬಂದಾಗ ನೋಡಿಕೊಳ್ಳೋಣ ಎಂದು ಆ ವಿಷಯವನ್ನು ಅಲ್ಲಿಗೆ ಮರೆತುಬಿಟ್ಟ ವಿಕ್ರಂ. ಇದಾಗಿ ಬಹಳ ದಿನಗಳವರೆಗೆ ಅಂದರೆ ಹೆಚ್ಚೂ ಕಡಿಮೆ ತಿಂಗಳುಗಳ ಕಾಲ ಪ್ರದೀಪನ ಪತ್ತೆಯೇ ಇರಲಿಲ್ಲ. ಹಾಗೆಯೇ ಆ ಅಪರಿಚಿತ ವ್ಯಕ್ತಿಯೂ ಕೂಡ.

***5***

           ನಂತರ ವಿಕ್ರಮನಿಗೆ ಅದೇನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ವಿಕ್ರಮನಿಗೆ ತನ್ನ ಅದ್ವೈತ ಆತ್ಮರಕ್ಷಣೆ ಕೇಂದ್ರದ ಮೇಲೆಯೇ ಆಸಕ್ತಿ ಕಳೆದುಹೋಯಿತು. ಆಗೀಗ ತನ್ನ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದನಾದರೂ ಏನೋ ಒಂದು ಅನ್ಯಮನಸ್ಕ ಭಾವನೆ ಅವನಲ್ಲಿ ಬೆಳೆದು ಬಿಟ್ಟಿತ್ತು. ತಾನು ಹೋಗದಿದ್ದರೂ ಅವನು ತರಬೇತಿ ನೀಡಿದ ಹುಡುಗರು ಕೇಂದ್ರದಲ್ಲಿ ಚನ್ನಾಗಿ ಕಲಿಸುತ್ತಿದ್ದರು. ತಾನಿಲ್ಲದಿದ್ದರೂ ತರಬೇತಿ ಕೇಂದ್ರ ಬೆಳೆಯುತ್ತದೆ ಎನ್ನುವುದು ಆತನ ಅನುಭವಕ್ಕೆ ಬಂದಿತ್ತು.
            ಇದೇ ಸಂದರ್ಭದಲ್ಲಿ ವಿಕ್ರಮನ ಅದ್ವೈತ ಆತ್ಮರಕ್ಷಣೆ ಕೇಂದ್ರದ ಬಳಿಯಲ್ಲೇ ತಲೆಯೆತ್ತಿದ್ದ ಇನ್ನೊಂದು ವ್ಯಾಯಾಮ ಶಾಲೆ ಪ್ರಭಲವಾಗಿಬಿಟ್ಟಿತ್ತು. ಆ ತರಬೇತಿ ಕೇಂದ್ರದ ತರಹೇವಾರಿ ಗಿಮ್ಮಿಕ್ಕಿನ ಎದುರು ವಿಕ್ರಮನ ತರಬೇತಿ ಕೇಂದ್ರ ಸೋಲಲು ಆರಂಭಿಸಿತ್ತು. ಅದೇ ಸಂದರ್ಭದಲ್ಲಿ ಅಲ್ಲಿನ ಕೆಲವು ಕುತಂತ್ರಿಗಳ ಕುತಂತ್ರವನ್ನೂ ಮಾಡಿದರು. ಸುತ್ತಮುತ್ತಲೂ ವಿಕ್ರಮನ ತರಬೇತಿ ಕೇಂದ್ರದ ಹೆಸರನ್ನೂ ಹಲವರು ಹಾಳುಮಾಡಿಬಿಟ್ಟರು. ವಿಕ್ರಮನಲ್ಲಿ ಕಲಿಯುತ್ತಿದ್ದ ಅನೇಕರು ಎದುರಾಳಿ ತರಬೇತಿ ಕೇಂದ್ರವನ್ನು ಸೇರುವಲ್ಲಿಗೆ ವಿಕ್ರಮ ಸೋತು ಸುಣ್ಣವಾಗಿದ್ದ. ಇದ್ದಕ್ಕಿದ್ದಂತೆ ತನಗೇ ಈ ರೀತಿಯ ಮಂಕು ಕವಿಯಿತು ಎನ್ನುವುದು ವಿಕ್ರಮನಿಗೆ ತಿಳಿಯಲೇ ಇಲ್ಲ. ಕೊನೆಗೆ ಒಂದು ದಿನ ವಿಕ್ರಮ ತಾನು ಪ್ರೀತಿಯಿಂದ ಕಟ್ಟಿ ಬೆಳೆಸಿದ್ದ ಅದ್ವೈತ ಆತ್ಮರಕ್ಷಣೆ ಕೇಂದ್ರವನ್ನು ಅನಿವಾರ್ಯವಾಗಿ ಬಾಗಿಲು ಹಾಕಿದ.
       ಅದ್ವೈತ ಆತ್ಮರಕ್ಷಣೆಯನ್ನು ಬಾಗಿಲು ಹಾಕುವ ಸಂದರ್ಭದಲ್ಲಿ ವಿಕ್ರಮ ಸಾಲಕ್ಕೂ ತುತ್ತಾಗಬೇಕಾಯಿತು. ಎಲ್ಲರೂ ಬಿಟ್ಟುಹೋಗುತ್ತಿದ್ದ ಸಂದರ್ಭದಲ್ಲಿ ಕೈ ಹಿಡಿದವರು ಯಾರೂ ಇರಲಿಲ್ಲ. ಸಹಾಯ ಮಾಡಬಹುದಾಗಿದ್ದ ಪ್ರದೀಪ ಕಾಣೆಯಾಗಿದ್ದ. ಆತ್ಮರಕ್ಷಣೆ ಕೇಂದ್ರದ ಬಿಲ್ಡಿಂಗಿನ ಬಾಡಿಗೆ ತುಂಬಲೂ ಹಣವಿಲ್ಲದಂತಾದ ಪರಿಸ್ಥಿತಿ ಆತನದ್ದಾಗಿತ್ತು. ಕೊನೆಗೆ ಬಾಗಿಲು ಹಾಕಿ ಅಲ್ಲಿದ್ದ ಕೆಲವೊಂದು ಜಿಮ್ ವಸ್ತುಗಳನ್ನು ಮಾರಾಟ ಮಾಡಿದಾಗ ಸಾಲದ ಮೊತ್ತ ಕೊಂಚ ಇಳಿಕೆಯಾಗಿತ್ತಾದರೂ ಪೂರ್ತಿ ಚುಕ್ತಾ ಆಗಿರಲಿಲ್ಲ.
        ವ್ಯಾಯಾಮ ಕೇಂದ್ರದ ಬಾಗಿಲು ಹಾಕಿದ ಮರುಕ್ಷಣದಿಂದ ವಿಕ್ರಂ ನಿರುದ್ಯೋಗಿಯಾಗಿದ್ದ. ತಾನು ಓದಿದ್ದ ಡಿಗ್ರಿ ಸರ್ಟಿಫಿಕೇಟನ್ನು ಹಿಡಿದು ಹಲವು ಕಡೆಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ. ಆದರೆ ವಿಕ್ರಮನ ದುರಾದೃಷ್ಟವೋ ಏನೋ ಎಲ್ಲೂ ಉದ್ಯೋಗ ಸಿಗಲಿಲ್ಲ. ಆತ ಪ್ರಯತ್ನಿಸುವುದು ಬಿಡಲಿಲ್ಲ. ಉದ್ಯೋಗವೂ ಹದಪಟ್ಟಿಗೆ ಸಿಗಲಿಲ್ಲ.
        ಹೀಗಿದ್ದಾಗಲೇ ಅವನ ಊರಾದ ಕಣ್ಣೀರು ಮನೆಯಿಂದ ತಂಗಿ ರಮ್ಯ ಬರೆದಿದ್ದ ಪತ್ರ ಬಂದು ತಲುಪಿತು. ತಂದೆ ಮನೆಯಲ್ಲಿ ಬಹಳ ಸಿಟ್ಟಾಗಿದ್ದಾರೆಂದೂ, ಬೆಂಗಳೂರಿಗೆ ಹೋಗುವುದು ಇಷ್ಟವಿರಲಿಲ್ಲವೆಂದೂ ತಿಳಿಯಿತು. ಆದರೆ ಮನೆಯ ಉಳಿದೆಲ್ಲ ಸದಸ್ಯರೂ ಇದರಿಂದ ಸಿಟ್ಟಾಗಿದ್ದಾರೆಂದೂ, ಬೆಂಗಳೂರು ಪ್ರವಾಸ ಶುಯಭವಾಗಲಿ ಎಂದು ತಿಳಿಸಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಎಲ್ಲರೂ ಹಾಗಿರುವಾಗ ಅಪ್ಪನೇಕೆ ಹೀಗೆ ಎಂದುಕೊಂಡ ವಿಕ್ರಂ. ಮತ್ತೆ ಪುನಃ ಕೆಲಸ ಹುಡುಕುವ ಕಾರ್ಯ ಆರಂಭವಾಯಿತು. ಕೊನೆಗೊಮ್ಮೆ `ಮಂಗಳೂರು ಮೇಲ್' ಪತ್ರಿಕೆಯಲ್ಲಿ ಕೆಲಸ ಖಾಲಿಯಿದೆ ಎನ್ನುವುದು ತಿಳಿದುಬಂದಿತು. ಕೊನೆಯ ಪ್ರಯತ್ನ ಮಾಡೋಣ ಎಂದುಕೊಂಡು ಪತ್ರಿಕಾ ಕಚೇರಿಯ ಕಡೆಗೆ ಹೊರಟ.
       ಇನ್ನೇನು ಪತ್ರಿಕಾಲಯದ ಕಾಂಪೋಂಡ್ ಒಳಕ್ಕೆ ಕಾಲಿಡುವಷ್ಟರಲ್ಲಿ ಒಂದು ಸ್ಕೂಟಿ ಹೊರಗಿನಿಂದ ಬಂದಿತು. ಒಂದು ಕ್ಷಣ ಒಳಹೋಗುವವನು ನಿಂತ. ಆ ಸ್ಕೂಟಿಯ ಮೇಲೆ ಬಂದಿದ್ದಾಕೆಯೇ ಬಂದಿದ್ದಾಕೆಯೇ ವಿಜೇತಾ. ಆಕೆ ತಮ್ಮ ಪತ್ರಿಕಾಲಯದ ಎದುರು ವಿಕ್ರಮನನ್ನು ಕಂಡು ಒಂದರೆಘಳಿಗೆ ಅವಾಕ್ಕಾದಳು. ಅಚ್ಚರಿಯಿಂದ ನೋಡಿ, ಸ್ಕೂಟಿ ನಿಲ್ಲಿಸಿದರು.
       `ಏನಿಲ್ಲಿ? ಪತ್ರಿಕಾಲಯದ ಮೇಲೆ ಕರಾಟೆ, ಕುಂಗ್ ಫೂ ತೋರ್ಸೋಕೆ ಬಂದ್ರಾ?' ಎಂದು ತಮಾಷೆಯಿಂದ ಕೇಳಿದಳು.
       `ಇಲ್ಲ.. ಕೆಲಸ ಕೇಳೋಕೆ ಬಂದಿದ್ದೇನೆ..' ಎಂದು ಸೀರಿಯಸ್ಸಾಗಿಯೇ ಹೇಳಿದ.
       `ವಾಟ್... ನಿಮ್ ಕುಂಗ್-ಫೂ.. ಕರಾಟೆ ಶಾಲೆಯ ಕತೆ ಏನಾಯ್ತು?' ಎಂದು ಅಚ್ಚರಿಯಿಂದ ಕೇಳಿದಳು ವಿಜೇತಾ. ಆಕೆಗೆ ತುಸು ಹೆಚ್ಚೆನ್ನಿಸುವಂತೆ ತನ್ನ ಈಗಿನ ಸ್ಥಿತಿಗೆ ಕಾರಣ ತಿಳಿಸಿದ. ಆಗ ಆಕೆ ತಮ್ಮ ಪತ್ರಿಕೆಯಲ್ಲಿ ಕೆಲಸ ಖಾಲಿ ಇರುವುದನ್ನು ಹೇಳಿ, ಆ ಕೆಲಸಕ್ಕೆ ಸೇರಬಹುದು ತಾನು ಈ ಕುರಿತು ಮಾತನಾಡುತ್ತೇನೆ ಎಂದೂ ಹೇಳಿದಳು. ಆಫೀಸಿನೊಳಕ್ಕೆ ಕರೆದೊಯ್ದಳು.
       ಕಚೇರಿ ಒಳಗೆ ಹಲವಾರು ಜನರಿದ್ದರು. ಹಲವು ಕಂಪ್ಯೂಟರ್ ಗಳು. ಕಂಪ್ಯೂಟರ್ ಮುಂದೆ ಕುಳಿತು ಚಕ ಚಕನೆ ಕೆಲಸ ಮಾಡುತ್ತಿದ್ದ ಜನರು, ಏನೋ ಗಡಿಬಿಡಿ, ಧಾವಂತದಲ್ಲಿದ್ದಂತೆ ಕಾಣುವ ಜನರು. ಎರಡು ಮಹಡಿಯ ಕಟ್ಟಡದಲ್ಲಿ ಕೆಳ ಮಹಡಿಯಲ್ಲಿ ಪ್ರಿಂಟಿಂಗ್ ಮೆಷಿನುಗಳು ಗರ್ರೆನ್ನುತ್ತಿದ್ದರೆ ಮೇಲ್ಮಹಡಿಯಲ್ಲಿ ಕಚೇರಿ ಕೆಲಸ ನಡೆಯುತ್ತಿತ್ತು. ಆಕೆ ಸೀದಾ ವಿಕ್ರಮನನ್ನು ಸಂಪಾದಕರ ಕೊಠಡಿಯೊಳಕ್ಕೆ ಕರೆದೊಯ್ದಳು. ಸಂಪಾದಕರು ಯಾರೋ? ಹೇಗೋ? ಏನೋ ಎಂದುಕೊಳ್ಳುತ್ತಲೇ ಒಳಗೆ ಹೋದವನಿಗೆ ಒಮ್ಮೆಲೆ ಆಶ್ವರ್ಯ. ಯಾಕಂದ್ರೆ ಒಳಗೆ ಸಂಪಾದಕ ಸ್ಥಾನದಲ್ಲಿದ್ದವರು ನವೀನಚಂದ್ರ. ಇದನ್ನು ನೋಡಿ ವಿಕ್ರಂ `ಇದೇನ್ ಸಾರ್. ನೀವು ಈ ಸೀಟಲ್ಲಿ..' ಎಂದು ಅಚ್ಚರಿಯಿಂದಲೇ ಕೇಳಿದ.
       ನಸುನಗುತ್ತ ಮಾತನಾಡಿದ ನವೀನ್ ಚಂದ್ರ `ಓಹ್ ವಿಕ್ರಂ. ಬನ್ನಿ.. ಬನ್ನಿ.. ಮೊದಲಿದ್ದ ಸಂಪಾದಕರು ರಿಟೈರ್ ಆದರು ನೋಡಿ. ಇದೀಗ ನಾನೇ ಈ ಪತ್ರಿಕೆಗೆ ಸಂಪಾದಕ..' ಎಂದರು. `ಅದ್ಸರಿ.. ಇದೇನು ತಾವಿಲ್ಲಿಗೆ ಬಂದಿದ್ದು..?' ಎಂದೂ ಕೇಳಿದರು.
       `ಸರ್ ಕೆಲಸ ಖಾಲಿಯಿದೆ ಅಂತ ತಿಳಿಯಿತು. ಅದಕ್ಕೆ ಕೆಲಸ ಕೇಳೋಣ ಅಂತ ಬಂದಿದ್ದೇನೆ..' ನೇರವಾಗಿ ಹೇಳಿದ ವಿಕ್ರಂ ತನ್ನೆಲ್ಲ ವಿಷಯಗಳನ್ನೂ ತಿಳಿಸಿದ. ಒಮ್ಮೆ ದೀರ್ಘನಿಟ್ಟುಸಿರು ಬಿಟ್ಟ ನವೀನಚಂದ್ರ ಅವರು ತಲೆ ಕೊಡವಿದರು. `ಸರ್ ನಾನು ಜರ್ನಲಿಸಂ ಓದಿಲ್ಲ. ಆದರೆ ರಿಪೋಟರ್ಿಂಗು, ಪೋಟೋಗ್ರಫಿಯಲ್ಲಿ ಆಸಕ್ತಿಯಿದೆ. ತಾವು ಈ ಕೆಲಸ ಕೊಟ್ಟರೆ ಅನುಕೂಲವಾಗುತ್ತದೆ. ನನಗೆ ಈಗ ಕೆಲಸದ ಅನಿವಾರ್ಯತೆ ಬಹಳ ಅಗತ್ಯ..' ಎಂದು ಪಟಪಟನೆ ಹೇಳಿದ ವಿಕ್ರಂ.
       ನೋಡಿ ವಿಕ್ರಂ. ನಮ್ಮಲ್ಲಿ ಇರೋದು ವರದಿಗಾರರ ಕೆಲಸ. ಈ ಕೆಲಸ ಮಾಡೋಕೆ ಜರ್ನಲಿಸಂ ಆಗಿರಬೇಕು ಅನ್ನುವ ಕಡ್ಡಾಯವೇನಿಲ್ಲ. ಧೈರ್ಯ, ಬರವಣಿಗೆ, ಆಸಕ್ತಿ ಇಷ್ಟಿದ್ದರೆ ಸಾಕು. ನಿಮಗೆ ಈ ಕೆಲಸ ಕೊಡುತ್ತಿದ್ದೇನೆ. ಒಂದೆರಡು ದಿನ ನಮ್ಮ ವರದಿಗಾರರ ಜೊತೆಗೆ ಓಡಾಡಿ. ಕೆಲಸ ಅರಿವಾಗುತ್ತದೆ. ಬೇಕಾದರೆ ವಿಜೇತಾಳ ಸಹಾಯವನ್ನು ಪಡೆದುಕೊಳ್ಳಿ. ನಿಮ್ಮ ಕೆಲಸದಲ್ಲಿ ಸಹನೆ, ಶೃದ್ಧೆ ಇರಲಿ. ನಿಮ್ಮಲ್ಲಿ ಅಗಾಧ ಧೈರ್ಯ ಇದೆ. ಯಾವುದಕ್ಕೂ ಭಯ ಪಡೋದಿಲ್ಲ ಎನ್ನುವ ನಂಬಿಕೆಯಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಮಗೆ ಬಹುದೊಡ್ಡ ಜವಾಬ್ದಾರಿಗಳನ್ನು ವಹಿಸಬಹುದು. ಏಕಾಗ್ರತೆ, ನಂಬಿಕೆ, ಕೆಲಸದೆಡೆಗೆ ಪ್ರೀತಿ ಇಟ್ಟುಕೊಳ್ಳಿ..' ಎಂದು ನವೀನಚಂದ್ರ ಹೇಳುತ್ತಿದ್ದಂತೆ `ಓಕೆ ಸರ್.. ಆಗ್ಲಿ.. ನನಗೆ ಒಪ್ಗೆ ಇದೆ. ನಿಮ್ಮ ನಂಬಿಕೆ ಹಾಳು ಮಾಡೋದಿಲ್ಲ ನಾನು..' ಎಂದು ವಿಕ್ರಂ ಹೇಳಿದ.
`ನಿನ್ನ ಕೆಲಸದ ವಿವರ, ನೀತಿ-ನಿಯಮ ಇತ್ಯಾದಿಗಳ ಬಗ್ಗೆ ವಿಜೇತಾ ಹೇಳುತ್ತಾಳೆ. ಅವಳ ಹತ್ರ ತಿಳ್ಕೋ. ಆದ್ರೆ ನೆನಪಿಟ್ಕೋ ಅವಳ ಹತ್ತಿರ ಕೆಲಸ ಮಾಡೋದು ಬಹಳ ಡೇಂಜರ್ರು. ಅವಳೂ ಕೂಡ ಹುಂಭ ಧೈರ್ಯದ ಹುಡುಗಿ. ಎಂತೆಂತದ್ದೋ ಸುದ್ದಿಗಳನ್ನು ಹೆಕ್ಕಿ ತರುತ್ತಾಳೆ. ಸಾಕಷ್ಟು ಜನರು ಅವಳ ಮೇಲೆ ಅಟ್ಯಾಕ್ ಮಾಡುತ್ತಿರುತ್ತಾರೆ. ನೀನು ಜೊತೆಗಿದ್ರೆ ಅವಳಿಗೆ ಶಕ್ತಿ ಬರುತ್ತದೆ. ಧೈರ್ಯ ಇದ್ದರೆ ಮಾತ್ರ ಈ ಫೀಲ್ಡು ಗೆಲ್ಲಿಸುತ್ತದೆ..' ಎಂದು ಅರ್ಧ ಉಪದೇಶ ಮತ್ತರ್ಧ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದರು ನವೀನಚಂದ್ರ.
      ಏನನ್ನೋ ಹೇಳಲು ಬಾಯಿತೆರೆದ ವಿಕ್ರಂ `ಥ್ಯಾಂಕ್ಯೂ ಸರ್.. ನಿಮ್ಮ ಈ ಉಪಕಾರ ಎಂದಿಗೂ ಮರೆಯೋದಿಲ್ಲ..' ಎನ್ನುತ್ತಾ ವಿಜೇತಾಳ ಹಿಂದೆ ಹೊರಟ. ಆಗ ಆತನ ಮನಸ್ಸಿನಲ್ಲಿ `ನನ್ನ ಕಥೆಯನ್ನು ಹೇಳುವ ಮೊದಲೆ ನವೀನಚಂದ್ರ ಅವರು ತಮಗೆಲ್ಲಾ ಗೊತ್ತಿದೆ ಎನ್ನುವಂತೆ ವತರ್ಿಸಿದರಲ್ಲ. ನಾನು ಹೇಳುವ ಮೊದಲೇ ಅವರೇ ನನ್ನ ಕುಂಗ್ ಫೂ ಕರಾಟೆ ಶಾಲೆಯ ವ್ಯಥೆಯನ್ನೆಲ್ಲ ಅವರೇ ಮೊದಲು ಹೇಳುತ್ತಿದ್ದರಲ್ಲ.. ಇದು ಹೇಗೆ?' ಎನ್ನುವ ಅನುಮಾನ ಕಾಡಿತು. ಪತ್ರಿಕೆಯವರಲ್ವಾ.. ಗಮನಿಸಿರಬೇಕು ಎಂದುಕೊಂಡು ಸುಮ್ಮನಾದ.
       ಆಕೆ ಸೀದಾ ಕಚೇರಿಯ ಒಳಕ್ಕೆ ಹೋಗಿ ಉಪಸಂಪಾದಕರ ಕೊಠಡಿಯನ್ನು ಹೊಕ್ಕಳು. ಉಪಸಂಪಾದಕರು ಹೇಗಿತರ್ಾರೋ, ಯಾರೋ? ಅವರು ಇನ್ನೇನು ಕೇಳುತ್ತಾರೋ ಎನ್ನುವ ಆಲೋಚನೆಯಲ್ಲಿಯೇ ವಿಕ್ರಂ ಒಳಹೋದ. ನೋಡಿದರೆ ವಿಜೇತಾ ಉಪಸಂಪಾದಕರ ಸೀಟಿನಲ್ಲಿ ಕುಳಿತಿದ್ದಳು. ವಿಸ್ಮಯದಿಂದ ನೋಡುತ್ತಿದ್ದಾಗಲೇ `ನೋಡು ಹೇಳಲಿಕ್ಕೆ ಮರೆತಿದ್ದೆ. ನಾನು ಪತ್ರಿಕೆಯ ಉಪಸಂಪಾದಕು. ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ಹತ್ತಾರು ಜನ ಉಪಸಂಪಾದಕರಿರ್ತಾರೆ. ಆದರೆ ನಮ್ಮದು ಬೆಳೆಯುತ್ತಿರುವ ಪತ್ರಿಕೆ. ಇದಕ್ಕೆ ನಾನು ಉಪಸಂಪಾದಕಿ. ನವೀನಚಂದ್ರ ಸರ್ ಸಂಪಾದಕರಾದ ಮೇಲೆ ನಾನು ಉಪಸಂಪಾದಕಿಯಾದೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಹುದ್ದೆ ಖಾಲಿಯಿದೆ. ಅದಕ್ಕೆ ನಿನ್ನನ್ನು ಸೇರಿಸಿಕೊಳ್ತಾ ಇರೋದು..' ಎಂದಳು.
         `ನಿಮ್ಮನ್ನು ನಮ್ಮ ಕ್ರೈಂ ರಿಪೋರ್ಟರ್ ಆಗಿ ಸೇರಿಸಿಕೊಳ್ತಾ ಇದ್ದೀವಿ. ಅಪರಾಧ ವರದಿ ಮಾಡೋದು ನಿಮ್ಮ ಮುಖ್ಯ ಕೆಲಸ. ಸಾಕಷ್ಟು ರಿಸ್ಕಿನ ಕೆಲಸ. ಆದರೆ ನಿಮ್ಮ ಮೊದಲಿನ ಕೆಲಸ ಇಲ್ಲಿ ಸಹಾಯಕ್ಕೆ ಬರಬಹುದು. ಚಾಲೇಂಜಿಂಗ್ ಆಗಿರುತ್ತದೆ. ಆದರೆ ಅದೇ ಮಜಾ ಕೊಡುತ್ತದೆ. ಮೊದಲು 15 ದಿನ ಜೊತೆಗೆ ನಾನು ಇದ್ದು ಕೆಲಸ ಹೇಳಿಕೊಡುತ್ತೇನೆ. ನಂತರ ನಿಮಗೆ ಎಲ್ಲ ರೂಢಿಯಾಗುತ್ತದೆ. ನಿಮಗೆ ಪ್ರಾರಂಭದಲ್ಲಿ 12 ಸಾವಿರ ರು. ಸಂಬಳ ನಿಗದಿ ಮಾಡಿದ್ದಾರೆ. ಮುಂದೆ ನಿಮ್ಮ ಕೆಲಸದ ವೈಖರಿ ನೋಡಿ ಸಂಬಳ ಏರಿಕೆಯಾಗುತ್ತ ಹೋಗುತ್ತದೆ. ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುತ್ತಿದ್ದೀರಾ. ಶುಭವಾಗಲಿ. ಯಶಸ್ಸು ನಿಮಗೆ ಸಿಗಲಿ.  ನೀವು ಯಶಸ್ವಿಯಾಗುತ್ತೀರಾ. ಇದು ನನ್ನ ಹಾಗೂ ನವೀನಚಂದ್ರ ಅವರ ನಂಬಿಕೆ. ಹೇಳಿ ಯಾವಾಗಿಂದ ಕೆಲಸಕ್ಕೆ ಬರುತ್ತೀರಾ?' ಎಂದು ಕೇಳಿದಳು ವಿಜೇತಾ.
         `ಈಗಲೇ ಬರಲು ನಾನು ತಯಾರು..' ಎಂದವನ ಮುಖವನ್ನು ಒಮ್ಮೆ ನೋಡಿ ಮೆಚ್ಚುಗೆ ಸೂಚಿಸಿದಳು ವಿಜೇತಾ. `ಈಗ ಬೇಡ.. ನಾಳಿಂದ ಬನ್ನಿ.. ' ಎಂದವಳೇ `ಬನ್ನಿ ನಮ್ಮ ಆಫೀಸಿನ ಎಲ್ಲರನ್ನೂ ಪರಿಚಯ ಮಾಡಿಕೊಡ್ತೀನಿ..' ಎಂದು ಕರೆದುಕೊಂಡು ಹೋಗಿ ಎಲ್ಲರನ್ನೂ ಪರಿಚಯಿಸಿದಳು.
         ಕೆಲಸ ಸಿಕ್ಕ ಖುಷಿಯಲ್ಲಿ ಅಲ್ಲಿ ಇಲ್ಲಿ ಸುತ್ತಾಡಿ ಮರಳಿ ಮನೆಗೆ ಬರುವಾಗ ಸಂಜೆಯಾಗುತ್ತಿತ್ತು. ಮನೆಗೆ ಪೋನ್ ಮಾಡಿದರೆ ಎಂದಿನಂತೆ ಡೆಡ್ಡಾಗಿತ್ತು. ಪತ್ರ ಗೀಚಿ ಸುಮ್ಮನಾದ. `ಅಂತೂ ಕೆಲಸ ಸಿಕ್ತಲ್ಲ..' ಎಂದು ನಿಟ್ಟುಸಿರು ಬಿಟ್ಟ.
         ಮರುದಿನದಿಂದಲೇ ಕೆಲಸಕ್ಕೆ ಹೋಗಲಾರಂಭಿಸಿದ. ಮೊದ ಮೊದಲು ಸ್ವಲ್ಪ ಕಷ್ಟವಾಯಿತಾದರೂ ವಾರ ಕಳೆಯುವಷ್ಟರಲ್ಲಿ ಪತ್ರಿಕೋದ್ಯಮ ಅರ್ಥವಾಗತೊಡಗಿತ್ತು. ನಂತರ ಯಾವುದೇ ಸಮಸ್ಯೆಯಾಗಲಿಲ್ಲ. ಮೊದ ಮೊದಲು ವಿಜೇತಾ ವಿಕ್ರಂನಿಗೆ ಮಾರ್ಗದರ್ಶನ ನೀಡಿದಳು. ನಂತರ ವಿಕ್ರಂ ಸ್ವತಂತ್ರವಾಗಿ ಕೆಲಸ ಮಾಡತೊಡಗಿದ.

****

       ಕೆಲಸ ಕೊಡಿಸಿದ ಕಾರಣಕ್ಕೋ ಅಥವಾ ಕೆಲಸ ಬಗ್ಗೆ ಮಾರ್ಗದರ್ಶನ ನೀಡಿದ್ದಕ್ಕೋ ವಿಜೇತಾಳ ಬಗ್ಗೆ ವಿಕ್ರಮನಿಗೆ ಮನಸ್ಸಿನಲ್ಲಿ ಗೌರವ ಮನೆಮಾಡಿತ್ತು. ಆಕೆಯ ಜೊತೆಗಿನ ಓಡಾಡ ಸ್ನೇಹಭಾವವನ್ನೂ ತುಂಬಿತ್ತು. ಉತ್ತಮ ಸ್ನೇಹಿತರಾಗಿ ಕೆಲದಿನಗಳಲ್ಲಿಯೇ ಅವರು ಬದಲಾಗಿದ್ದರು. ಕೆಲವೊಮ್ಮೆ ಆಕೆ ತಾನು ಹೋಗುತ್ತಿದ್ದ ಕೆಲಸಕ್ಕೂ ಕರೆದೊಯ್ಯುತ್ತಿದ್ದಳು. ತೀರಾ ರಿಸ್ಕೆನ್ನಿಸುತ್ತಿದ್ದ ಕೆಲಸದಲ್ಲಿ ವಿಕ್ರಂ ಜೊತೆಗಿರುತ್ತಿದ್ದ. ಆಪ್ತವಾದಾಗ ತನ್ನ ಮನೆಗೂ ಕರೆದೊಯ್ದಿದ್ದಳು ವಿಜೇತಾ. ಮನೆಯಲ್ಲಿ ಆಕೆಯ ತಂದೆ, ತಾಯಿ ಹಾಗೂ ತಮ್ಮ ಇದ್ದರು. ಚಿಕ್ಕ ಕುಟುಂಬದಲ್ಲಿ ತಂದೆ ಏನೋ ಕೆಲಸ ಮಾಡುತ್ತಿದ್ದ. ತಮ್ಮ ಇನ್ನೂ ಓದುತ್ತಿದ್ದ.
     
****

       ಹೀಗಿದ್ದಾಗಲೇ ಒಂದು ದಿನ ಮಂಗಳೂರಿನ ಬಂದರಿನಲ್ಲಿ ಒಬ್ಬನ ಕೊಲೆಯಾಗಿತ್ತು. ಇದರ ವರದಿಗಾರಿಕೆಯ ಕೆಲಸ ವಿಕ್ರಮನದ್ದಾಗಿತ್ತು. ಮಂಗಳೂರು ಮೇಲ್ ಪತ್ರಿಕೆ ಕೊಲೆ ಅಥವಾ ಇನ್ಯಾವುದೋ ನಿಘೂಡ ಸನ್ನಿವೇಶಗಳು ನಡೆದಿದ್ದ ಸಂದರ್ಭದಲ್ಲಿ ಅದನ್ನು ಪತ್ತೆ ಹಚ್ಚುವ ಕಾರ್ಯವನ್ನೂ ಮಾಡುತ್ತಿತ್ತು. ಈ ಕಾರಣಕ್ಕಾಗಿಯೇ ಮಂಗಳೂರು ಮೇಲ್ ಓದುಗರ ಮನಸ್ಸಿನಲ್ಲಿ ವಿಭಿನ್ನ ಸ್ಥಾನವನ್ನು ಪಡೆದುಕೊಂಡಿತ್ತು. ಈ ಕೊಲೆಯ ಕುರಿತು ವರದಿಯ ಜೊತೆಗೆ ಪತ್ತೆದಾರಿ ಕೆಲಸವನ್ನೂ ಮಾಡುವ ಆಲೋಚನೆ ವಿಕ್ರಮನದ್ದಾಗಿತ್ತು. ಆತ ಅದಾಗಲೇ ಕೊಂಡಿದ್ದ ತನ್ನ ಹೊಸ ಬೈಕನ್ನೇರಿ ಹೊರಡಲು ಅನುವಾಗುತ್ತಿದ್ದಂತೆಯೇ ವಿಜೇತಾ ತಾನೂ ಬರುತ್ತೇನೆಂದಳು. ನವೀನಚಂದ್ರನ ಒಪ್ಪಿಗೆ ಪಡೆದು ಹೊರಟಳು.
        ಇವರು ಹೋಗುವ ವೇಳೆಗಾಗಲೇ ಶವದ ಮಹಜರು ನಡೆದಿತ್ತು. ಪೊಲೀಸರು ಜನರನ್ನು ಚದುರಿಸುತ್ತಿದ್ದರು. ಇವರು ಹೋಗಿ ಎಲ್ಲ ರೀತಿಯ ವರದಿ ಪಡೆದು ಸತ್ತವನ ಪೋಟೋ ತೆಗೆದುಕೊಂಡರು. ಮಾಹಿತಿ ಎಲ್ಲ ಪಡೆದ ನಂತರ ತಿಳಿದಿದ್ದೇನೆಂದರೆ ಕೊಲೆಯಾಗಿದ್ದವನೊಬ್ಬ ಪೊಲೀಸ್ ಅಧಿಕಾರಿ. ಆದರೆ ಆ ಅಧಿಕಾರಿ ತನ್ನ ಡ್ಯೂಟಿಯ ವಸ್ತ್ರದಲ್ಲಿರಲಿಲ್ಲ. ಆತನನ್ನು ಬೆಳಗಿನ ಜಾವದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಆದರೆ ಕೊಲೆಗೆ ಬಳಕೆ ಮಾಡಿದ್ದ ಚಾಕು ಅಲ್ಲಿ ಇರಲಿಲ್ಲ. ಆರೋಪಿ ಚಾಣಾಕ್ಷತನದಿಂದ ಹತ್ಯೆ ಮಾಡಿದ್ದ. ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗದೇ ಇದ್ದಿದ್ದು ಸೊಷ್ಟವಾಗಿತ್ತು. ಪೊಟೋಗ್ರಾಫರ್ ಗಳು ಒಂದಿಷ್ಟು ಜನ ಶವದ ವಿವಿಧ ಭಂಗಿಯ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಎಲ್ಲವನ್ನು ಸಂಗ್ರಹಿಸಿ ವಾಪಾಸು ಬರುತ್ತಿದ್ದ ಸಂದರ್ಭದಲ್ಲಿ ವಿಕ್ರಮನ ಕಣ್ಣಿಗೊಂದು ಲಾಕೆಟ್ ನೆಲದ ಮೇಲೆ ಬಿದ್ದಿರುವುದು ಕಾಣಿಸಿತು. ಜನಜಂಗುಳಿಯ ನಡುವೆ ಯಾರ ಗಮನಕ್ಕೂ ಬಂದಿರಲಿಲ್ಲ. ವಿಕ್ರಮ ಬಗ್ಗಿ ಅದನ್ನು ಎತ್ತಿಕೊಂಡ. ಆ ಲಾಕೆಟ್ ತೀರಾ ವಿಶೇಷವಾಗಿರದಿದ್ದರೂ ಎಸ್. ಎಂದು ಬರೆದಿದ್ದ ಕೀ ಬಂಚ್ ಅದಾಗಿತ್ತು. ಇರ್ಲಿ.. ನೋಡೋಣ ಎಂದು ಅದನ್ನು ಕಿಸೆಯಲ್ಲಿ ಹಾಕಿಕೊಂಡ.
        ಬಹುಶಃ ಈ ಕೀಬಂಚ್ ಮುಂದೆ ಹಲವು ಚಿತ್ರ ವಿಚಿತ್ರ ತಿರುವುಗಳಿಗೆ, ತೊಂದರೆಗೆ ಒಡ್ಡುತ್ತದೆ ಎನ್ನುವುದು ಗೊತ್ತಿದ್ದಿದ್ದರೆ ವಿಕ್ರಮ ಆ ಲಾಕೇಟನ್ನು ಎತ್ತಿಟ್ಟುಕೊಳ್ಳುತ್ತಲೇ ಇರಲಿಲ್ಲವೇನೋ. ಪಾ..ಪ.. ಆತನಿಗೆ ಅದು ಗೊತ್ತಾಗಲೇ ಇಲ್ಲ. ಅಷ್ಟಕ್ಕೂ ಅದೆಲ್ಲಾ ತಿಳಿಯಲು ಆತನೇನು ಜ್ಯೋತಿಷಿಯೇ..?

(ಮುಂದುವರಿಯುತ್ತದೆ)     

Saturday, December 27, 2014

ಒಲವು

(ರೂಪದರ್ಶಿ: ಅನುಷಾ ಹೆಗಡೆ)
ಕವಿತೆಯಾಗು ಗೆಳತಿ ನೀನು
ನನ್ನ ಬಾಳಿಗೆ
ತುಂಬಿ ಬಿಡಲಿ ಒಂದೇ ಕ್ಷಣ ದಿ
ಮನದ ಜೋಳಿಗೆ!

ನೀನೆಂದರೆ ನನ್ನ ಒಳಗೆ
ಸದಾ ಅಕ್ಷರ
ನಿನ್ನ ಕಾಣದಿರೆ ಅಂದು
ಮನವು ತತ್ತರ !

ನೀನೆಂಬುದು ನನ್ನ ಪಾ
ಲಿಗೊಂದು ಅದ್ಭುತ
ನಿನ್ನ ಕಡೆಗೆ ನನ್ನ ಒಲವು
ಮೇರು ಪರ್ವತ !

ಸದಾ ನಿನ್ನ ನಗುವೊಂದೇ
ನನ್ನ ಬದುಕ ಶಕ್ತಿ
ನಿನ್ನ ಒಲವು ನನಗೆ ಸಿಗಲು
ಬದದುಕಿಗಂದೇ ತೃಪ್ತಿ.



Thursday, December 25, 2014

ತಮಾಷೆಯ ಹನಿಗಳು

ಕಂಸ

ಕಂಸ ಎಂದರೆ ಕೃಷ್ಣನ
ಮಾವ ಎನ್ನುವುದೊಂದೇ ಅಲ್ಲ|
ಇನ್ನೊಂದಿದೆ.
ಆಗಾಗ ಬರಹದ, ಮದ್ಯ ಹಾಗೂ
ವ್ಯಾಕರಣದ ನಡುವೆ
ಬಂದು ಕಾಡುತ್ತಿರುತ್ತದೆ ||

ಶನಿ

ಇಂದಿನ ಸಾಲಿಗರಂತೆ
ಎಲ್ಲೆಂದರಲ್ಲಿ ತಡೆದು
ಕಾಟ ಕೊಡುವಾತ |
ಕೈಯ, ಮೈಯ
ತ್ರಾಣ ಹೀರಿ ಬಿಡುವಾತ |

ಗಾಢ-ಪ್ರೀತಿ

ನನ್ನ ಕಣ್ಣಿಗೆ ನೀನು
ಸುಂದರ ಹೂವಿನಂತೆ ಕಾಣುವೆ |
ಆದ್ದರಿಂದ ನಾನು ದುಂಬಿಯಂತೆ
ನಿನ್ನ ಹೀರುತ್ತಿರುವೆ ||

ಅರ್ಜುನ

ಇವನೇ ಆಧುನಿಕ ರಾಜಕೀಯ
ವ್ಯಕ್ತಿಗಳಿಗೆ ಆದರ್ಶ ವ್ಯಕ್ತಿ |
ಏಕೆಂದರೆ ಇವನೇ ಕೃಷ್ಣ
ಮಾಡಿದ ಅಷ್ಟೂ ಕೆಲಸಗಳನ್ನು
ತಾನೇ ಮಾಡಿದ್ದೆಂದಾತ ||

ನಾಂಡ್ರೋಲಿನ್

ಆಗೊಮ್ಮೆ ಆಗಿದ್ದ ಅಕ್ತರ್
ಪಾಕಿಸ್ತಾನಕ್ಕೆ ಮಹಾನ್ |
ಆದರೆ ಆ ಪುಣ್ಯಾತ್ಮನನ್ನು
ಹಾಳು ಮಾಡಿದ್ದು ಮಾತ್ರ ನಾಂಡ್ರೋಲಿನ್ ||

Wednesday, December 24, 2014

ಅಘನಾಶಿನಿ ಕಣಿವೆಯಲ್ಲಿ-4


          ಮೂರ್ತಿಗಳ ಮನೆಯನ್ನು ಸೇರುವ ವೇಳೆಗೆ ಆಗಲೇ ಮದ್ಯಾಹ್ನ ಕಳೆದು ಸಂಜೆ ಧಾವಿಸುತ್ತಿತ್ತು. ಬಂದವರು ವಿಶ್ರಾಂತಿಗಾಗಿ ನಿಲ್ಲಲೇ ಇಲ್ಲ. ಬೆಂಗಳೂರಿನ ಬೀದಿಗಳಲ್ಲಿ ತಿರುಗಾಡುವ ಹುಚ್ಚು ಎಲ್ಲರಿಗೂ. ತಿರುಗಿದರು. ಮೂರ್ತಿಯವರ ಮನೆಯಿದ್ದ ಮಲ್ಲೇಶ್ವರಂ, ಬ್ರಿಗೇಡ್ ರೋಡ್, ಎಂ. ಜಿ. ರೋಡ್ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಓಡಾಡಿ ಬಂದರು. ಮರಳಿ ಮೂರ್ತಿಯವರ ಮನೆ ಸೇರುವ ವೇಳೆಗೆ ಸಂಜೆ 9ನ್ನೂ ದಾಟಿತ್ತು.
           ಬರುವ ವೇಳೆಗೆ ಅಲ್ಲಿಯೇ ಇದ್ದ ಮೂರ್ತಿಯವರು `ಏನ್ರಪ್ಪಾ ಬೆಂಗಳೂರು ತಿರುಗಾಡಿ ಬಂದಿರಾ? ಯಾವ್ ಯಾವ್ ಕಡೆಗೆ ಹೋಗಿದ್ರಿ?' ಎಂದು ಕೇಳಿದರು.
          `ಇಲ್ಲ.. ಇಲ್ಲ.. ಎಲ್ಲ ಕಡೆ ಹೋಗಿಲ್ಲ.. ಮಲ್ಲೇಶ್ವರಂ ಅಷ್ಟೇ ಓಡಾಡಿದ್ವಿ ನೋಡಿ..' ಎಂದು ತಮಾಷೆ ಮಾಡಿದ ವಿಕ್ರಂ. `ಹಿಡಿಸ್ತಾ ಬೆಂಗಳೂರು?' ಕೇಳಿದರು ಮೂರ್ತಿಗಳು.
           `ಹುಂ.. ಬೆಂಗಳೂರು ಹಿಡಿಸದರೇ ಇದ್ದರೆ ಹೇಗೆ ಹೇಳಿ? ಮಂಗಳೂರಿನಂತೆ ಸೆಖೆ, ಉಪ್ಪುನೀರು ಯಾವುದೂ ಇಲ್ಲಿಲ್ಲ. ತಂಪು ಹವೆ, ಆಹ್ಲಾದಕರ ವಾತಾವರಣ.. ಬಹಳ ಖುಷಿಯಾಗುತ್ತದೆ..' ಎಂದ ವಿಕ್ರಂ. ಆ ಸಮಯದಲ್ಲಿ ಮೂರ್ತಿಯವರ ಮನೆಯವರೆಲ್ಲ  ಆಗಮಿಸಿದ್ದರು. ಹೀಗಾಗಿ ಎಲ್ಲರನ್ನೂ ಮತ್ತೊಮ್ಮೆ ಪರಿಚಯಿಸಿದರು.

*****4*****

           `ನೋಡಿ.. ನಾಳೆ ಜವರಿ 26. ಎಲ್ಲರೂ ಗಣರಾಜ್ಯೋತ್ಸವದ ತಲೆಬಿಸಿಯಲ್ಲಿ ಇರ್ತಾರೆ. ಇಂಥ ಟೈಮನ್ನು ನಾವು ಹಾಳುಮಾಡ್ಕೋಬಾರ್ದು. ಇಂಥ ಹೊತ್ತಲ್ಲಿ ಪೊಲೀಸರು ಬೇರೆ ಕಡೆ ಯೋಚನೆ ಮಾಡ್ತಿರ್ತಾರೆ. ನಾವು ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಈ ವಸ್ತುಗಳನ್ನ ಅಂದ್ರೆ ಗಾಂಜಾ, ಕೋಕೋ ಎಲೆಗಳು, ಆಯುರ್ವೇದ ಔಷಧಿಗಳು, ಆಫೀಮು ಇವನ್ನೆಲ್ಲ ಸಾಗಿಸಬೇಕು. ಕಾರವಾರ, ತದಡಿ, ಭಟ್ಕಳ, ಅಂಕೋಲಾ, ಧಾರೇಶ್ವರ  ಈ ಭಾಗಗಳಲ್ಲಿ ಬೀಚಿನ ಮೂಲಕ ವಿದೇಶಗಳಿಗೆ ಈ ವಸ್ತುಗಳನ್ನು ಸಾಗಿಸುವುದು ಸುಲಭ. ನೆನಪಿರ್ಲಿ ಎಲ್ಲ ಕಡೆ ಹುಷಾರಾಗಿರಬೇಕು. ವಿದೇಶದಿಂದ ಬರುವ ಮಾಲುಗಳನ್ನು ಸರಿಯಾಗಿ ಸಂಗ್ರಹ ಮಾಡಿಕೊಳ್ಳಿ. ಬಂದ ಮಾದಕ ವಸ್ತುಗಳನ್ನು ಸರಿಯಾಗಿ ಹಂಚಿಕೆ ಮಾಡಬೇಕು. ಶಿರಸಿಯಲ್ಲೂ ಈ ಕಾರ್ಯ ಸಮರ್ಪಕವಾಗಿ ಆಗಬೇಕು. ನೆನಪಿರ್ಲಿ. ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮೆಲ್ಲರ ತಲೆ ಎಗರುತ್ತದೆ ನೆನಪಿಟ್ಕೊಂಡಿರಿ..' ಎಂದು ಒಬ್ಬಾತ ಅದೊಂದು ನಿಘೂಡ ಸ್ಥಳದಲ್ಲಿ ತನ್ನವರಿಗೆ ಹೇಳುತ್ತಿದ್ದ. ಉಳಿದವರು ಅದಕ್ಕೆ ತಲೆಯಲ್ಲಾಡಿಸುತ್ತಿದ್ದರು.
           ಜನರನ್ನು ಒಳ್ಳೆಯತನದಿಂದ ಕೆಟ್ಟತನಕ್ಕೆಳೆಯುವ, ಅವರಿಗೆ ಬೇರೆ ಯಾವುದರೆಡೆಗೂ ಯೋಚನೆಯೇ ಇರದಂತೆ, ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ಜಾಲವೊಂದು ಅಲ್ಲಿತ್ತು. ಅಲ್ಲದೇ ಮಲೆನಾಡಿನ ಮಡಿಲಲ್ಲಿ ಬೆಳೆಯುವ ಅತ್ಯಮೂಲ್ಯ ಗಿಡಮೂಲಿಕೆಗಳನ್ನು ಕದ್ದು ಸಾಗಿಸಿ ಬಹು ರಾಷ್ಟ್ರೀಯ, ಔಷಧಿ ತಯಾರಿಕಾ ಸಂಸ್ಥೆಗಳಿಗೆ ಮಾರಾಟವನ್ನು ಮಾಡಲಾಗುತ್ತಿತ್ತು. ಈ ಜಾಲಕ್ಕೆ ಜನರ ಒಳಿತು, ಕೆಡುಕುಗಳು ಇಷ್ಟವಿರಲಿಲ್ಲ. ಹಣಗಳಿಕೆಯೊಂದೇ ಮೂಲೋದ್ಧೇಶವಾಗಿತ್ತು. ಪೊಲೀಸ್ ಇಲಾಖೆ ಇವರ ಬೆನ್ನು ಬಿದ್ದು ದಶಕಗಳೇ ಕಳೆದಿದ್ದವು. ಆದರೆ ಇಲಾಖೆ ಚಿಕ್ಕ ಜಾಡನ್ನು ಹಿಡಿಯಲೂ ವಿಫಲವಾಗಿತ್ತು. ಗೂಢಚರ ಇಲಾಖೆ ತಮ್ಮ ಅಧಿಕಾರಿಗಳನ್ನು ಈ ಜಾಲದ ಹಿಂದೆ ಬಿಟ್ಟಿತ್ತು. ಜೊತೆ ಜೊತೆಯಲ್ಲಿ ಖಾಸಗಿ ಗೂಢಚಾರರೂ ಕೂಡ ತಮ್ಮದೇ ಕೆಲಸವನ್ನು ಮಾಡಲು ಆರಂಭಿಸಿದ್ದರು. ಈ ಜಾಲವನ್ನು ಬೇಧಿಸಿದರೆ ತಮಗೆ ಹೆಮ್ಮೆ ಎಂದುಕೊಂಡಿದ್ದರು. ಆದರೆ ಒಂದು ಸಣ್ಣ ಎಳೆ ಸಿಕ್ಕಿತು ಎಂದು ಹುಡುಕಲು ಆರಂಭಿಸಿದರೆ ಗೊಂದಲ ಉಂಟಾಗಿ ಎತ್ತೆತ್ತಲೋ ಸಾಗುತ್ತಿತ್ತು.

****

         ಜನವರಿ 26. ಗಣರಾಜ್ಯದ ದಿನ. ಮೊದಲೇ ನಿರ್ಧರಿಸಿದಂತೆ ವಿಕ್ರಂ ಹಾಗೂ ಜೊತೆಗಾರರು ವಿಧಾನ ಸೌಧದ ಎದುರು ಬಂದು ಸೇರಿದರು. ಅಲ್ಲಿಂದ ಪರೇಡ್ ಗ್ರೌಂಡಿಗೆ ಹೋದರು. ಏನೋ ವಿಶೇಷ ನಡೆಯುತ್ತದೆ ಎಂದುಕೊಂಡು ಹೋದವರಿಗೆ ರಾಜಕಾರಣಿಗಳ ಭಾಷಣ ಬೇಸರವನ್ನು ತರಿಸಿತು. ನಿರಾಸೆಯಿಂದ ಸುತ್ತಮುತ್ತಲೂ ಓಡಾಡಲು ಆರಂಭಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣವನ್ನು ವೀಕ್ಷಿಸಿ, ಹತ್ತಿರದಲ್ಲೇ ಇದ್ದ ಕಬ್ಬನ್ ಪಾರ್ಕನ್ನು ವೀಕ್ಷಣೆಗೆ ಹೊರಟರು. ಕಬ್ಬನ್ ಪಾರ್ಕಿನಲ್ಲಿದ್ದ ಪ್ರೇಮಿಗಳ ಜೋಡಿಗಳನ್ನು ನೋಡಿ ಬೆರಗಾದರು. ಕೆಲವೆಡೆ ಅಸಹ್ಯವನ್ನೂ ಪಟ್ಟುಕೊಂಡರು. ಜೊತೆಗಿದ್ದ ಪ್ರದೀಪನ ಕಣ್ಣಿಗೆ ವಿಶೇಷ ಸಂಗತಿಯೊಂದು ಬಿದ್ದಿತು. ವಿಕ್ರಂ ಹಾಗೂ ಅವನ ಜೊತೆಗಾರರು ಎಲ್ಲ ಕಡೆಗೆ ಓಡಾಡುತ್ತಿದ್ದರೂ ವ್ಯಕ್ತಿಯೊಬ್ಬ ಇವರನ್ನು ಹಿಂಬಾಲಿಸುತ್ತಿದ್ದ. ಬಹಳ ಸಮಯದಿಂದ ವಿಕ್ರಂ-ಜೊತೆಗಾರರು ಹೋದ ಕಡೆಯಲ್ಲೆಲ್ಲ ಬರುತ್ತಿದ್ದ. ಚಲನವಲನ ವೀಕ್ಷಿಸುತ್ತಿದ್ದ. ಪ್ರದೀಪ ಮೊದ ಮೊದಲು ಇದನ್ನು ಅಲಕ್ಷಿಸಿದನಾದರೂ ನಂತರ ಆ ವ್ಯಕ್ತಿ ಹಿಂಬಾಲಿಸುತ್ತಿದ್ದುದು ಖಚಿತವಾದ ನಂತರ ತಾನು ಸ್ವಲ್ಪ ಎಚ್ಚರಿಕಿಯಿಂದ ಇರತೊಡಗಿದೆ. ಈ ವಿಷಯವನ್ನು ಮೊದಲು ವಿಕ್ರಂನಿಗೆ ತಿಳಿಸೋಣ ಎಂದುಕೊಂಡನಾದರೂ ಕೊನೆಗೆ ಬೇಡ ಎಂದುಕೊಂಡು ಸುಮ್ಮನಾದ. ಹಾಗಾದರೆ ಹೀಗೆ ಹಿಂಬಾಲಿಸುತ್ತಿದ್ದ ವ್ಯಕ್ತಿ ಯಾರು? ಪ್ರದೀಪನೇನಾದರೂ ವಿಕ್ರಂನಿಗೆ ಈ ವಿಷಯ ತಿಳಿಸಿದ್ದರೆ ಮುಂದೇನಾದರೂ ತಿರುವು ಘಟಿಸುತ್ತಿತ್ತೇ? ಇದೇನಿದು ಇಂತಹ ಗೂಢತೆ?

*****

             ಒಂದೆರಡು ದಿನಗಳನ್ನು ಬೆಂಗಳೂರಿನಲ್ಲಿ ಕಳೆದ ಮೇಲೆ ನಿರ್ಣಾಯಕ ಎನ್ನಿಸಿದಂತಹ ದಿನಗಳು ಬಂದವು. ಜನವರಿ 28. ಆ ದಿನದ ಸೂರ್ಯ ಟೆನ್ಶನ್ ನೊಂದಿಗೆ ಹುಟ್ಟಿದನೇನೋ ಎನ್ನುವಂತೆ ಎಲ್ಲರಿಗೂ ಅನ್ನಿಸತೊಡಗಿತ್ತು. ಎಲ್ಲರೂ ಸಮಗ್ರ ತಯಾರಿಯೊಂದಿಗೆ ನಿಗದಿತ ಸ್ಥಳಕ್ಕೆ ಹೋದರು. ಅಲ್ಲಾಗಲೇ ಜನರೆಲ್ಲರೂ ಸೇರಿದ್ದರು.
             ಅದೊಂದು ದೊಡ್ಡ ಬಯಲಿನಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದವು. ಅಲ್ಲಿ ಹೋಗಿ ಕುಳಿತುಕೊಳ್ಳುವ ವೇಳೆಗಾಗಲೇ ಸ್ಪರ್ಧಾ ಘೋಷಣೆಯೂ ಆಯುತು. ಪ್ರಾರಂಭದ ಒಂದೆರಡು ಸ್ಪರ್ಧೆಗಳಲ್ಲಿ ಗೆಲುವುಗಳನ್ನೇ ಕಾಣಲಿಲ್ಲ. ನಂತರ ಜೂಡೋದಲ್ಲಿ ಒಬ್ಬಾತ ಬಹುಮಾನ ಗಳಿಸಿದ. ನಂತರ ಗೆಲುವೆಂಬುದು ಎಲ್ಲ ಕಡೆಗಳಿಂದಲೋ ಎದ್ದೋಡಿ ಬಂದಿತು. ಕುಂಗ್-ಫೂ, ಕತ್ತಿ-ವರಸೆ, ಕರಾಟೆ, ವಾಲ್ ಕ್ಲೈಂಬಿಂಗ್ ಗಳಲ್ಲೆಲ್ಲಾ ಭರ್ಜರಿ ಗೆಲುವುದು ವಿಕ್ರಮನ ಅದ್ವೈತ ಆತ್ಮರಕ್ಷಣೆ ಕೇಂದ್ರದ ತಂಡಗಳಿಗಾಯಿತು.
            ತಮಾಷೆಗೆ ಎಂಬಂತೆ 3 ಸ್ಪರ್ಧೆಗಳಲ್ಲಿ ವಿಕ್ರಂ ಪಾಲ್ಗೊಂಡಿದ್ದ. ಆದರೆ ಆ ಮೂರೂ ಸ್ಪರ್ಧೆಯ ಪ್ರಥಮ ಸ್ಥಾನ ವಿಕ್ರಂನಿಗೆ ಮೀಸಲಾಯಿತು. ಇದರಿಂದ ಖುಷಿಯೋ ಖುಷಿ ಹೊಂದಿದ ಆತ.
            ಒಟ್ಟಿನಲ್ಲಿ ಬೆಂಗಳೂರಿನ ಪ್ರವಾಸ ಗೆಲುವನ್ನೇ ತಂದಿತು ಅವರಿಗೆ. ಮರುದಿನ ಕನ್ನಡದ ಬಹುತೇಕ ಎಲ್ಲಾ ಕ್ರೀಡಾ ಪುಟಗಳಲ್ಲಿ ಇವರ ಸಾಧನೆಯನ್ನು ಪ್ರಶಂಶಿಸಿ ಬರೆದಿದ್ದರು. ಮಂಗಳೂರ ಸಾಹಸಿಗರು, ವಿಕ್ರಂನ ತಂಡದ ವಿಕ್ರಮ ಮುಂತಾದ ತಲೆಬರಹದೊಂದಿಗೆ ವರದಿಗಳು ಬಂದಿದ್ದವು. ಹೀಗೆ ಒಮ್ಮಿಂದೊಮ್ಮೆಲೆ ವಿಕ್ರಮ ಕರ್ನಾಟಕದಾದ್ಯಂತ ಮನೆ ಮಾತಾದ. ಇದರಿಂದ ಮೂರ್ತಿಯವರ ಮನೆಯಲ್ಲಂತೂ ಬಹಳ ಸಂತಸ ಪಟ್ಟರು. ತಾವೇ ಗೆದ್ದಂತೆ ಕುಣಿದಾಡತೊಡಗಿದರು.
            ವಿಕ್ರಂ ತಂಡದವರು ಜನವರಿ 29ರಂದು ಬೆಂಗಳೂರಿನಲ್ಲೇ ಉಳಿದು ಜನವರಿ 30ರಂದು ಮಂಗಳೂರಿಗೆ ವಾಪಾಸಾದರು. ರೂಮಿನಲ್ಲಿ ಬಂದು ಕುಳಿತುಕೊಳ್ಳುವಷ್ಟರಲ್ಲೇ ವಿಕ್ರಮನ ಮೊಬೈಲ್ ಬಿಡುವಿಲ್ಲದಂತೆ ರಿಂಗಣಿಸತೊಡಗಿತ್ತು. ಪೋನಿನ ಮೇಲೆ ಫೋನ್. ಅಭಿನಂದನೆಗಳ ಸುರಿಮಳೆ. ಎಲ್ಲ ಕರೆಗಳನ್ನು ಸ್ವೀಕರಿಸಿ, ಅವರ ಅಭಿನಂದನೆಯನ್ನು ಸ್ವೀಕರಿಸುವಷ್ಟರಲ್ಲಿ ವಿಕ್ರಂ ಸುಸ್ತೋ ಸುಸ್ತು.
           ಆ ದಿನ ವಿಕ್ರಂ ಬಹಳ ಸಂತಸದಿಂದ ಸ್ವರ್ಗಕ್ಕೇ  ಮೂರು ಗೇಣು ಎಂಬಂತೆ ಆಡತೊಡಗಿದ್ದ. ಅದರ ನೆನಪಲ್ಲೇ ಆತ ಮಲಗಿ ಸವಿ ಕನಸನ್ನೂ ಕಾಣಲಾರಂಭಿಸಿದ.

****
     
          ಮರುದಿನ, ವಿಕ್ರಂ ಬಹಳ ಲೇಟಾಗಿ ಎದ್ದ. ತಿಂಡಿ ಇತ್ಯಾದಿಯನ್ನು ಮುಗಿಸುವ ವೇಳೆಗಾಗಲೇ ಆತನ ರೂಮಿನ ಕಾಲಿಂಗ್ ಬೆಲ್ ಸದ್ದಾಗತೊಡಗಿತು. ಹೋಗಿ ಬಾಗಿಲು ತೆಗೆದ. ಬಾಗಿಲಲ್ಲಿ ಒಬ್ಬಾಕೆ ನಿಂತಿದ್ದಳು. ಹಿಂದೆ ಒಬ್ಬಾತ ಗಡ್ಡದವನು ನಿಂತಿದ್ದ. ವಿಕ್ರಮನಿಗೆ ಒಮ್ಮೆಲೆ ಅಚ್ಚರಿಯಾದರೂ ಸಾವರಿಸಿಕೊಂಡು ಅವರನ್ನು ಒಳಕ್ಕೆ ಸ್ವಾಗತಿಸಿದ. ಬ್ಯಾಚುಲರ್ ರೂಮ್. ಒಳಗಿದ್ದ ವಸ್ತುಗಳು ಸಾಕಷ್ಟು ಅಸ್ತವ್ಯಸ್ತವಾಗಿದ್ದವು. ಮುಜುಗರದಿಂದ ಅವನ್ನೆಲ್ಲ ಮುಚ್ಚಿಡುವ ಪ್ರಯತ್ನ ಮಾಡಿದ. ಬಂದ ಆಗಂತುಕರು ನಕ್ಕರು.
          ಅವರೀರ್ವರೂ ಒಳಕ್ಕೆ ಬಂದವರೇ ತಮ್ಮ ಪರಿಚಯವನ್ನು ತಿಳಿಸಿದರು. ಅವರೀರ್ವರಲ್ಲಿ ಒಬ್ಬಾಕೆ ವಿಜೇತಾ ಎಂದೂ, ಇನ್ನೊಬ್ಬ ಗಡ್ಡಧಾರಿ ವ್ಯಕ್ತಿ ನವೀನಚಂದ್ರ ಎಂದೂ ತಿಳಿಯಿತು. ನವೀನಚಂದ್ರ ಮಂಗಳೂರು ಮೇಲ್ ಪತ್ರಿಕೆಯ ಉಪಸಂಪಾದಕರೆಂದೂ, ವಿಜೇಜಾ ಅದರ ವರದಿಗಾರ್ತಿಯೆಂದೂ ತಿಳಿಯಿತು. ನವೀನಚಂದ್ರ ಸುಮಾರು 50ರ ಆಸುಪಾಸಿನವನು. ವಿಜೇತಾಳಿಗೆ ಬಹುಶಃ 22-23 ಇರಬಹುದು. ಆಗ ತಾನೇ ಕಾಲೇಜನ್ನು ಮುಗಿಸಿ ಬಂದಿದ್ದಳೇನೋ ಎಂದುಕೊಂಡ. ಚಂದನೆಯ ದುಂಡು ಮುಖ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನಿಸುವಂತಿದ್ದಳು ಅವಳು.
         `ನಿಮ್ಮ ಬಗ್ಗೆ ಪೇಪರಿನಲ್ಲಿ ನೋಡಿದೆ. ನಿಮ್ಮಂಥವರು ಮಂಗಳೂರಿನವರು ಎಂದರೆ ಹೆಮ್ಮೆಯ ಸಂಗತಿ. ಹಾಳು ಬಿದ್ದು ಹೋಗುತ್ತಿರುವ ಇಂದಿನ ಯುವ ಜನತೆಗೆ ತಿಳಿ ಹೇಳಲು ನಿಮ್ಮನ್ನು ಬಳಸಿ, ನಿಮ್ಮ ಸಂದರ್ಶನ ಮಾಡಲು ಬಂದಿದ್ದೇವೆ.' ಎಂದು ನವೀನಚಂದ್ರ ಹೇಳಿದರು.
          `ಅಯ್ಯೋ ಅಂತಹ ದೊಡ್ಡ ಸಾಧನೆ ನಾವೇನೂ ಮಾಡಿಲ್ಲ.. ಥೋ... ಬಿಡಿ..' ಎಂದ ವಿಕ್ರಂ.
          `ಇಲ್ಲ.. ಇಲ್ಲ.. ನೀವು ಈಗ ಮಾಡಿರುವ ಸಾಧನೆ ಬಹು ದೊಡ್ಡದು ನೋಡಿ..' ಎಂದಳು ವಿಜೇತಾ. ಆಕೆಯ ಧ್ವನಿ ಮಧುರವಾಗಿತ್ತು.
          `ಏನೋ, ಎಂಥೋ.. ನಾನು ಕಲಿಸಿದೆ, ನನ್ನ ಪ್ರೆಂಡ್ಸ್ ಪ್ರದೀಪ್ ಜೊತೆಗಿದ್ದು ಸಹಾಯ ಮಾಡಿದ. ಗೆದ್ವಿ. ಅದಿರ್ಲಿ ಬಿಡಿ.. ನಿಮ್ಮನ್ನ ನನ್ನ ಸಾಹಸಿ ತಂಡದ ಬಳಿಗೆ ಕರೆದೊಯ್ಯುತ್ತೇನೆ. ಬನ್ನಿ ಎಂದು ಅವರನ್ನು ಕರೆದೊಯ್ದ.
           ಹೀಗೆ ಕರೆದೊಯ್ದಿದ್ದನ್ನೂ ಕೂಡ ಆ ಅಪರಿಚಿತ ವ್ಯಕ್ತಿ ವೀಕ್ಷಿಸಿ, ಫಾಲೋ ಮಾಡುತ್ತಿದ್ದ. ಆತ ತಾನು ಕಂಡಿದ್ದನ್ನು ಇನ್ನೊಬ್ಬರಿಗೆ ತಿಳಿಸುತ್ತಿದ್ದ. ಆದರೆ ಯಾಕೆ ಹೀಗೆ ಮಾಡುತ್ತಿದ್ದಾನೆ ಎನ್ನುವುದು ಮಾತ್ರ ನಿಘೂಡವಾಗಿತ್ತು.
          ವಿಕ್ರಂ ಅವರಿಬ್ಬರನ್ನೂ ಅದ್ವೈತ ಆತ್ಮರಕ್ಷಣೆ ಕೇಂದ್ರಕ್ಕೆ ಕರೆದೊಯ್ದ. ಎಲ್ಲರನ್ನೂ ಪರಿಚಯಿಸಿದ. ಅವರು ಏನೇನೋ ಪ್ರಶ್ನೆ ಕೇಳಿದರು. ಇವರು ಉತ್ತರಿಸಿದರು. ಆದರೆ ಆ ದಿನ ಮಾತ್ರ ಪ್ರದೀಪನ ಸುಳಿವೇ ಇರಲಿಲ್ಲ. ಆತನ ಪರಿಚಯಿಸಲು ಆದಿನ ಸಾಧ್ಯವಾಗಲೇ ಇಲ್ಲ. ನವೀನ ಚಂದ್ರ ಹಾಗೂ ವಿಜೇತಾ ಇಬ್ಬರೂ ತಮ್ಮನ್ನು ಮತ್ತೆ ಭೇಟಿಯಾಗಬೇಕೆಂದು ಹೇಳಿ ಹೊರಟುಹೋದರು.
          ಮರುದಿನ ಮಂಗಳೂರು ಮೇಲ್ ನಲ್ಲಿ ಇವರ ಸಂದರ್ಶನವೇ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿತ್ತು. ಇದರಿಂದ ಖುಷಿಯಾದ ವಿಕ್ರಂ ಅದಕ್ಕೆ ಕಾರಣರಾದವರಿಗೆ ಮನದಲ್ಲಿಯೇ ಥ್ಯಾಂಕ್ಸ್ ಎಂದುಕೊಂಡ. ಮುಂದೊಂದು ದಿನ ಇದೇ ಹೊಸ ತಿರುವನ್ನು ನೀಡಲಿತ್ತು.

*****

(ಮುಂದುವರಿಯುತ್ತದೆ)

Monday, December 22, 2014

ಜೊತೆ (ಕಥೆ)

      ಅವಳು ಮಕ್ಕಳು ಹುಟ್ಟಿದ ಒಂದೂ ವರೆ ವರ್ಷದ ತರುವಾಯ ಅನಿತಾ ಮತ್ತೆ ಕೆಲಸಕ್ಕೆ ಸೇರಬೇಕು ಎಂದು ಬಯಸಿದಳು. ಅದಕ್ಕಾಗಿ ಹಲವಾರು ಕಡೆಗಳಲ್ಲಿ ಅಪ್ಲಿಕೇಶನ್ನುಗಳನ್ನೂ ಹಾಕಿ ಬಂದಿದ್ದಳು. ಕೊನೆಗೊಂದು ಕಂಪನಿ ಆಕೆಯನ್ನು ಇಂಟರ್ವ್ಯೂಗೆ ಕರೆದಿತ್ತು. ಶುಭದಿನದಂದು ಆಕೆ ಇಂಟರ್ವ್ಯೂಗೆ ಹೋದ ಅನಿತಾ ಸರದಿಯ ಪ್ರಕಾರ ಕಾದು ತನ್ನ ಸಮಯ ಬಂದಾಗ ಕಂಪನಿ ಮಾಲೀಕರ ಚೇಂಬರ್ ಒಳ ಹೊಕ್ಕಳು. ಒಳ ಹೋಗಿ ನೋಡಿದವಳಿಗೆ ಒಮ್ಮೆ ದಿಘ್ಬ್ರಾಂತಿ. ಮಾಲೀಕನ ಸೀಟಿನಲ್ಲಿ ಕುಳಿತವನು ವಿನಾಯಕನೇ. ಅವನನ್ನೇ ಕಂಡ ಹಾಗೆ ಆಗುತ್ತದೆಯಲ್ಲ. ಅವನೇ ಹೌದಾ? ಅಥವಾ ಬೇರೆ ಯಾರಾದರೂ? ಜಗತ್ತಿನಲ್ಲಿ ಒಂದೇ ಥರದ ಜನ 7 ಮಂದಿ ಇರುತ್ತಾರಂತೆ. ವಿನಾಯಕನ ರೀತಿ ಇರುವ ವ್ಯಕ್ತಿಯಾ ಇವನು? ಎಂದುಕೊಂಡಳು ಅನಿತಾ.
                 ಒಮ್ಮೆ ಕಣ್ಣುಜ್ಜಿಕೊಂಡು ನೋಡಿದರೂ ರೂಪ ಬದಲಾಗಲಿಲ್ಲ. ವಿನಾಯಕನೇ ಹೌದು ಕಾಲೇಜು ದಿನಗಳಲ್ಲಿ ನೋಡಿದ್ದಕ್ಕಿಂತ ಬಹಳ ದಪ್ಪಗಾಗಿದ್ದಾನೆ. ರೂಪು ಕೊಂಚ ಚೇಂಜಾಗಿದೆ. ಆದರೆ ಈತ ಮಾಲೀಕನಾಗಲು ಹೇಗೆ ಸಾಧ್ಯ? ಏನಾಯ್ತು.. ಎಂದು ಕೊಂಡವಳಿಗೆ ಒಮ್ಮೆ ಭೂಮಿ ನಿಂತಂತಹ ಅನುಭವ. ಕಣ್ಣಲ್ಲಿ ಧಳ ಧಳನೆ ನೀರು ಇಳಿಯುತ್ತಲಿತ್ತು.

*****

            `ನಮಗೆ ಕೂಸು ಹುಟ್ಟಿದ್ರೆ ಅವನಿ ಹೇಳಿ ಹೆಸರು ಇಡೊಣ.. ಮಾಣಿ ಹುಟ್ಟಿದರೆ ಅತ್ರಿ ಅಂತ ಹೆಸರಿಡೋಣ.. ಏನಂತೀಯಾ..?' ವಿನಾಯಕ ಕೇಳಿಬಿಟ್ಟಿದ್ದ.
             `ಮಾರಾಯಾ.. ಅದೆಲ್ಲ ಕೊನೆಗಾಯ್ತು.. ಮೊದಲು ನಮಗೆ ಮದುವೆಯಾಗಲಿ.. ಆಮೇಲೆ ಮಕ್ಕಳು ಮರಿ ಎಲ್ಲ.. ಆಮೇಲೆ ಮಕ್ಕಳ ಹೆಸರನ್ನು ಯೋಚಿಸಿದರಾಯ್ತು.. ಬಿಡು..' ಎಂದಿದ್ದಳು ಅನಿತಾ.
             `ನಮಗೆ ಮದುವೆ ಆಗೇ ಆಗ್ತದೆ ಮಾರಾಯ್ತಿ.. ಯಾಕೆ ನೀನು ಹಂಗೆ ಆಲೋಚನೆ ಮಾಡೋದು? ನಮ್ಮನ್ನು ದೂರ ಮಾಡುವವರು ಯಾರಿದ್ದಾರೆ ಹೇಳು? ಅದು ಬಿಟ್ಹಾಕು.. ಈ ಹೆಸರುಗಳು ಹೇಗಿದೆ ಹೇಳು..?' ಎಂದು ಕೇಳಿದ್ದ ವಿನಾಯಕ.
             `ಹೆಸರು ಬಹಳ ಚಂದಿದ್ದು... ಆದರೆ ಈ ಹೆಸರೇ ಯಾಕೆ?'
             `ಈ ಎರಡೂ ಹೆಸರು ಯಾಕೋ ಬಹಳ ಇಷ್ಟವಾಗಿದೆ.. ನಿಂಗೂ ಇಷ್ಟವಾದರೆ ಮುಂದೆ ನಮಗೆ ಹುಟ್ಟುವ ಮಕ್ಕಳಿಗೆ ಇಡೋಣ...' ಎಂದ ವಿನಾಯಕ.
             `ನಮ್ಮ ಮದುವೆ ಇನ್ನೂ ಬಹಳ ಸಮಯ ಹಿಡಿಯುತ್ತದೆ ಮಾರಾಯಾ.. ಇನ್ನೂ ನಮ್ಮ ಓದು ಮುಗೀಬೇಕು.. ಆಮೇಲೆ ನಮ್ಮ ಮನೆಯಲ್ಲಿ ಮದುವೆ ಪ್ರಸ್ತಾಪ ಇಡಬೇಕು.. ಮದುವೆಗೆ ಮನೆಯಲ್ಲಿ ಒಪ್ಪಿಕೊಳ್ಳಬೇಕು.. ಉಫ್.. ಇಷ್ಟೆಲ್ಲ ಆಗಲಿಕ್ಕಿ ಇನ್ನೂ ಮೂರ್ನಾಲ್ಕು ವರ್ಷಗಳೇ ಬೇಕು.. ಆದರೂ ನೀನು ಈಗಲೇ ನಮ್ಮ ಮಕ್ಕಳಿಗೆ ಹೆಸರು ಇಡುವ ಹಂತಕ್ಕೆ ಬಂದೆಯಲ್ಲ ಮಾರಾಯಾ.. ಎಂತಾ ಕನಸೋ ನಿನ್ನದು...' ಎಂದಳು.
             ಹುಂ ಎಂದು ನಸುನಕ್ಕಿದ್ದ ವಿನಾಯಕ. ಹಿತವಾಗಿ ಆತನ ಕೈಯನ್ನು ಹಿಡಿದು ನಡೆಯತೊಡಗಿದಳು ಅನಿತಾ. ಮಾತು ಮುಂದಕ್ಕೆ ಸಾಗಿತ್ತು.
            ವಿನಾಯಕ ಹಾಗೂ ಅನಿತಾ ಪ್ರೀತಿಸಲಿಕ್ಕೆ ಹಿಡಿದು ಆರು ತಿಂಗಳಾಯಿತು. ವಿನಾಯಕನಿಗೆ ಕಾಲೇಜಿನಲ್ಲಿ ಸುಮ್ಮನೆ ಪರಿಚಯವಾದವಳು ಅನಿತಾ. ಪರಿಚಯ ಸ್ನೇಹವಾಗಿ, ಬಿಡಿಸದ ಬಂಧವಾಗಿ ಅದ್ಯಾವುದೋ ಘಳಿಗೆಯಲ್ಲಿ ಮಾರ್ಪಟ್ಟಿತ್ತು. ಓದುತ್ತಿದ್ದ ಕಾಲೇಜಿನಲ್ಲಿ ಸುದ್ದಿಯಾಗುವಷ್ಟು ಬಂಧ ಬೆಳೆದಿತ್ತು. ಇಬ್ಬರೂ ಒಬ್ಬರಿಗೊಬ್ಬರು ಜೀವಕ್ಕೆ ಜೀವ ಎನ್ನುವಷ್ಟು ಒಂದಾಗಿದ್ದು. ಹೀಗಿದ್ದಾಗಲೇ ವಿನಾಯಕ ಅನಿತಾಳ ಬಳಿ ತನ್ನ ಮನಸ್ಸಿನಲ್ಲಿ ಮೂಡಿದ ಭಾವನೆಯನ್ನು ಬಿಚ್ಚಿಟ್ಟಿದ್ದ. ಆಕೆಯೂ ಅದಕ್ಕೆ ಹಿತವಾಗಿ ಮಾತನಾಡಿದ್ದಳು.
            `ಅಲ್ಲಾ.. ಅವನಿ ಹಾಗೂ ಅತ್ರಿ ಎನ್ನುವ ಹೆಸರೇ ಯಾಕೆ ನಿನ್ನ ಮನಸ್ಸಿನಲ್ಲಿ ಮೂಡಿದ್ದು?' ಎಂದೂ ಕೇಳಿದ್ದಳು ಅನಿತಾ. `ಅವನಿ ಎನ್ನುವ ಹೆಸರಿನಲ್ಲಿ ಅ ಅಕ್ಷರ ಇದೆ. ವ ಇದೆ. ನಿ ಇದೆ. ಅ ಅಂದರೆ ನಿನ್ನ ಹೆಸರಿನ ಮೊದಲ ಅಕ್ಷರ ಅನಿತಾ. ವ ಹಾಗೂ ನಿ ಯಲ್ಲಿ ನನ್ನ ಹೆಸರಿನಲ್ಲಿರುವ ಅಕ್ಷರಗಳಿವೆ. ಅದಕ್ಕೆ ಅವನಿ ಹೆಸರು ಆಯ್ಕೆ ಮಾಡಿಕೊಂಡಿದ್ದು. ಅತ್ರಿ ಹೆಸರು.. ಸುಮ್ಮನೆ ಆಯ್ಕೆಮಾಡಿಕೊಂಡಿದ್ದು. ಆದರೂ ಅದಲ್ಲಿ ನಿನ್ನ ಹೆಸರಿನಲ್ಲಿರುವ ಅಕ್ಷರಗಳಿವೆ..' ಎಂದು ಹೇಳಿ ಪೆಚ್ಚು ನಗು ನಕ್ಕಿದ್ದ ವಿನಾಯಕ.  `ನಿಂಗೆ ಪಕ್ಕಾ ಹುಚ್ಚೇಯಾ...' ಎಂದು ನಕ್ಕಿದ್ದಳು ಅನಿತಾ.
             ಇಬ್ಬರೂ ಈ ಹೆಸರುಗಳ ಬಗ್ಗೆ ತಮಾಷೆ ಮಾಡಿಕೊಂಡಿದ್ದರೂ ಮನಸ್ಸಿನಲ್ಲಿ ಮಾತ್ರ ನೆನಪಿಟ್ಟುಕೊಂಡಿದ್ದರು. ಇದೇ ಹೆಸರನ್ನು ಇಡಬೇಕು ಎಂದುಕೊಂಡೂ ಆಗೀಗ ಅಂದುಕೊಳ್ಳುತ್ತಿದ್ದರು. ಹೀಗೆ ಹೆಸರನ್ನು ಇಟ್ಟುಕೊಳ್ಳುವುದರಲ್ಲೂ ಒಂಥರಾ ಮಜವಿದೆ ಎಂದು ಇಬ್ಬರಿಗೂ ಅನ್ನಿಸಿತ್ತು. ಭೂಮಿಯೆಂಬ ಅರ್ಥ ಕೊಡುವ ಅವನಿ, ಮಹಾಮುನಿ ಅತ್ರಿಯ ಹೆಸರುಗಳು ವಿನಾಯಕನಿಗೆ ಯಾವ ಕ್ಷಣದಲ್ಲಿ ಹೊಳೆದವೋ ಎಂದುಕೊಂಡಿದ್ದಳು ಅನಿತಾ.
             `ಚೆಂದದ ಹೆಸರು ಕಣೋ ವಿನು.. ಇಂತಹ ವಿಶಿಷ್ಟ ಕಾರಣಗಳಿಗೆ ನೀನು ನಂಗಿಷ್ಟವಾಗ್ತೀಯಾ.. ಐ ಲವ್ ಯೂ..' ಎಂದು ಹೇಳಿದ್ದಳು ಅನಿತಾ. ಖುಷಿಯಿಂದ ಅವಳನ್ನು ತಬ್ಬಿ ನೇವರಿಸಿದ್ದ ವಿನಾಯಕ.
             ಅವರ ಪ್ರೇಮಯಾನದ ಬದುಕು ಕಾಲೇಜು ದಿನಗಳಲ್ಲಿ ಸರಳವಾಗಿ, ಸುಂದರವಾಗಿ ಯಾವುದೇ ತೊಂದರೆಯಿಲ್ಲದೇ ನಿರಾತಂಕವಾಗಿ ಮುಂದಕ್ಕೆ ಸಾಗಿತ್ತು. ಕಾಲೇಜು ಜೀವನ ಮುಕ್ತಾಯ ಎನ್ನುವುದು ಅವರ ಬಾಳ ನೌಕೆಗೆ ತಡೆಯನ್ನೊಡ್ಡಿತ್ತು. ಕಾಲೇಜು ಮುಗಿದ ತಕ್ಷಣ ವಿನಾಯಕನ ಮುಂದೆ ಬದುಕಿನ ಕಲ್ಲು ಮುಳ್ಳಿನ ದಾರಿ ಎದುರು ನಿಂತು ಅಣಕಿಸುತ್ತಿತ್ತು. ಆದರೆ ಅನಿತಾಳಿಗೆ ಈ ಸಮಸ್ಯೆ ಇರಲಿಲ್ಲ. ಮನೆಯಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದರು. ಅನಿತಾಳೇ ತಂದೆಯ ಬಳಿ ಹರಪೆ ಬಿದ್ದು ಬೆಂಗಳೂರಿಗೆ ಜಾಬ್ ಮಾಡಲು ಹೋಗುತ್ತೇನೆ ಎಂದಿದ್ದಳು. ಆಕೆಯ ಅಪ್ಪಯ್ಯ ಅದಕ್ಕೆ ಒಪ್ಪಿಗೆಯನ್ನೂ ಕೊಟ್ಟುಬಿಟ್ಟಿದ್ದ. ಇತ್ತ ವಿನಾಯಕನ ಬದುಕು ಮಾತ್ರ ಎತ್ತೆತ್ತಲೋ ಸಾಗುತ್ತಿತ್ತು.
***
           ಕೆಳ ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ವಿನಾಯಕನ ಮನೆಯಲ್ಲಿ ಕಾಲೇಜು ಮುಗಿಸಿದವನು ಕೆಲಸ ಮಾಡಲೇಬೇಕಾದ ಜರೂರತ್ತಿತ್ತು. ಸೊಸೈಟಿಯ ಸಾಲದ ನೊಟೀಸು ಪದೇ ಪದೆ ಬಂದು ಪೋಸ್ಟ್ ಮನ್ ಮೂಲಕ ಕದ ತಟ್ಟುತ್ತಿತ್ತು. ವಿನಾಯಕನ ಅಪ್ಪಯ್ಯ ಮಗನ ಬಳಿ ಏನಾದರೂ ಕೆಲಸವನ್ನು ಹಿಡಿ ಎನ್ನುವ ಒತ್ತಡವನ್ನೂ ಹಾಕತೊಡಗಿದ್ದ. ಹುಡುಗಿಯರಿಗೆ ಬಹುಬೇಗನೆ ಕೆಲಸ ಸಿಕ್ಕಿಬಿಡುತ್ತದೆ.. ಆದರೆ ಹುಡುಗರಿಗೆ ಹಾಗಲ್ಲ. ವಿನಾಯಕನ ಪರಿಸ್ಥಿತಿಯೂ ಇದೇ ಆಗಿತ್ತು. ವರ್ಷಗಳು ಉರುಳಿದರೂ ವಿನಾಯಕನಿಗೆ ಗಟ್ಟಿ ಕೆಲಸ ಸಿಗಲೇ ಇಲ್ಲ. ಅತ್ತ ಅನಿತಾ ವಿನಾಯಕನ ಮೇಲೆ ಒತ್ತಡ ಹಾಕತೊಡಗಿದ್ದಳು.
          `ಮನೆಲಿ ಅಪ್ಪಯ್ಯ ಗಮಡು ನೋಡಲೆ ಹಿಡದ್ದಾ.. ಬೇಗ ನೀ ಒಂದ್ ಜಾಬ್ ಹಿಡಿ ಮಾರಾಯಾ.. ಆಮೇಲೆ ಅಪ್ಪಯ್ಯನ ಕೈಲಿ ಹೇಳು.. ಯನ್ನ ಮದುವೆ ಆಗುವ ಬಗ್ಗೆ ಮಾತನಾಡು...' ಎಂದು ಅನಿತಾ ಹೇಳಿದಾಗಲೆಲ್ಲ ವಿನಾಯಕ ಸಬೂಬು ಹೇಳುತ್ತಿದ್ದ. ವಿನಾಯಕನ ಕೆಲಸದ ಅನ್ವೇಷಣೆ ಸಾಗಿಯೇ ಇತ್ತು. ಅದ್ಯಾವುದೋ ಸಾಡೆ ಸಾತಿನ ಶನಿ ವಿನಾಯಕನ ಹೆಗಲ ಮೇಲೆ ಏರಿ ಕುಳಿತಿದ್ದ. ಯಾವುದೇ ಕೆಲಸ ವಿನಾಯಕನ ಕೈಯನ್ನು ಭದ್ರವಾಗಿ ಹಿಡಿದಿರಲಿಲ್ಲ.
           ಇತ್ತ ಅನಿತಾ ಕೂಡ ನೋಡುವಷ್ಟು ನೋಡಿದಳು. ವಿನಾಯಕನಿಗೆ ಯಾವುದೇ ಕೆಲಸ ಸಿಗುವ ಭರವಸೆ ಉಳಿದಿರಲಿಲ್ಲ. ಅಪ್ಪಯ್ಯ ಒಂದಿನ ಬೆಂಗಳೂರಿನಲ್ಲಿ ಸಿಎ ಪಾಸು ಮಾಡಿ ಒಳ್ಳೆ ಕೆಲಸದಲ್ಲಿದ್ದ ಹುಡುಗನೊಬ್ಬ ಪೋಟೋ ತೋರಿಸಿ ಮದುವೆ ಪ್ರಸ್ತಾಪ ಇಟ್ಟೇಬಿಟ್ಟದಿದ್ದರು. ಕೊಟ್ಟ ಕೊನೆಯ ಬಾರಿಗೆ ವಿನಾಯಕನ ಬಳಿ ಕೆಲಸದ ವಿಷಯ ಹೇಳಿದ ಅನಿತಾ ಕೊನೆಗೊಮ್ಮೆ ಅಪ್ಪಯ್ಯ ತೋರಿಸಿದ ಹುಡುಗನನ್ನು ಮದುವೆಯಾಗಲು ಹೂಂ ಅಂದುಬಿಟ್ಟಿದ್ದಳು. ಧಾಂ.. ಧೂಂ.. ಆಗಿ ಮದುವೆಯೂ ನಡೆಯಿತು. ಸಿ.ಎ. ಮಾಡಿ ಕೆಲಸದಲ್ಲಿದ್ದ ಹುಡುಗನ ಹೆಂಡತಿಯಾಗಿ ಅನಿತಾ ಬೆಂಗಳೂರಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರೆ ವಿನಾಯಕ ಒಳಗೊಳಗೆ ಮರುಗಿ, ಕೊರಗಿ, ಖಿನ್ನತೆಯಿಂದ ಬಳಲಿ ಹೋಗಿದ್ದ. ಬದುಕಿನ ಎಲ್ಲ ದಾರಿಗಳು ಮುಚ್ಚಿ ಹೋದಂತಾಗಿ ಮಂಕಾಗಿ ಕುಳಿತಿದ್ದ. ಬದುಕಿನ ದಾರಿಯಲ್ಲಿ ದೊಡ್ಡದೊಂದು ಗುಡ್ಡ ಕುಸಿದು ಬಿದ್ದಂತೆ ದಿಕ್ಕು ಕಾಣದಂತೆ ಉಳಿದುಬಿಟ್ಟಿದ್ದ.
            ಅನಿತಾಳ  ಮದುವೆ ಯಾರೊಬ್ಬನ ಜೊತೆಗೋ ಆದಾಗಲೇ ವಿನಾಯಕನ ಹೆಗಲಿನ ಮೇಲೆ ಕುಳಿತಿದ್ದ ಶನಿ ನಿಧಾನವಾಗಿ ಇಳಿದುಬಿಟ್ಟಿದ್ದ. ಅದ್ಯಾವುದೋ ಕ್ಷಣದಲ್ಲಿ ಮಾಡಿಕೊಂಡಿದ್ದ ಪುಣ್ಯದ ಫಲವಾಗಿ ವಿನಾಯಕನಿಗೆ ಹೆಸರಾಂತ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ಪರಿಣಾಮವಾಗಿ ವಿನಾಯಕ ಕೂಡ ಬೆಂಗಳೂರು ವಾಸಿಯಾಗಿದ್ದ.
           ಬೆಂಗಳೂರಿನ ಬದುಕು ವಿನಾಯಕನಿಗೆ ದುಡ್ಡು ಮಾಡುವ ದಾರಿಯನ್ನು ಕಲಿಸಿಬಿಟ್ಟಿತ್ತು. ಬೆಂಗಳೂರಿಗೆ ಹೋದ ಎರಡೇ ವರ್ಷದಲ್ಲಿ ಒಂದೆರಡು ಸೈಟುಗಳನ್ನು ಕೊಳ್ಳುವಷ್ಟು ಹಣವೂ ಸಂಗ್ರಹವಾಗಿತ್ತು. ಹೀಗಿದ್ದಾಗಲೇ ವಿನಾಯಕನ ಮನೆಯಲ್ಲೂ ಆತನಿಗೆ ಹುಡುಗಿಯನ್ನು ಹುಡುಕಿ ಮದುವೆ ಮಾಡಲು ಮುಂದಾಗಿದ್ದರು. ವಿನಾಯಕ ಕೂಡ ಸಾಕಷ್ಟು ಹುಡುಗಿಯರನ್ನು ನೋಡಿದನಾದರೂ ಯಾರೊಬ್ಬರೂ ಇಷ್ಟವಾಗಲಿಲ್ಲ. ಅನಿತಾಳ ನೆನಪಿನ್ನೂ ಆತನ ಮನಸ್ಸಿನಲ್ಲಿ ಕೂತಿತ್ತು. ಪದೇ ಪದೆ ಕೊರೆಯುತ್ತಲೇ ಇತ್ತು.
**********

        ಮದುವೆಯಾಗಿ ಮೂರು ವರ್ಷ ಕಳೆದ ನಂತರವೂ ಅನಿತಾಳಿಗೆ ವಿನಾಯಕ ನೆನಪಾಗುತ್ತಲೇ ಇದ್ದ. ಕೆಲಸ ಮಾಡುವ ಗಂಡ, ಕೈತುಂಬ ಸಂಬಳ ತರುತ್ತಾನೆ. ಕಾರಿದೆ, ದೊಡ್ಡದೊಂದು ಫ್ಲಾಟ್ ಇದೆ. ವೀಕೆಂಡಲ್ಲಿ ಹೊಗೆನಕಲ್ ಜಲಪಾತಕ್ಕೋ, ಮುತ್ತತ್ತಿಗೋ, ಬನ್ನೇರುಘಟ್ಟಕ್ಕೋ, ಅಪರೂಪಕ್ಕೊಮ್ಮೆ ಕೊಡಗಿಗೋ, ಮೈಸೂರಿಗೋ ಕರೆದುಕೊಂಡು ಹೋಗಿ ಬರುತ್ತಾನೆ. ಆದರೂ ಏನೋ ಕೊರತೆಯಿದೆ ಎನ್ನುವುದು ಆಕೆಗೆ ಅನ್ನಿಸಲು ಆರಂಭಿಸಿತ್ತು. ತಾನೂ ಕೆಲಸಕ್ಕೆ ಹೂಗುವವಳಾದರೂ ಆಗೀಗ ವಿನಾಯಕನ ನೆನಪು ಥಟ್ಟನೆ ನೆನಪಾಗುತ್ತಿತ್ತು. ಹೀಗಿದ್ದಾಗಲೇ ಅನಿತಾಳಿಗೆ ಅವಳಿ ಜವಳಿ ಮಕ್ಕಳು ಜನಿಸಿದ್ದರು.

************

            ವಿನಾಯಕ ಕೊನೆಗೂ ಹುಡುಗಿಯೊಬ್ಬಳನ್ನು ಮದುವೆಯಾಗಲು ಒಪ್ಪಿದ. ಹೀಗಾಗುವ ವೇಳೆಗೆ ಕೈಗೆ ಸಿಕ್ಕಿದ್ದ ಕೆಲಸವನ್ನು ಬಿಟ್ಟು ಬಿಟ್ಟಿದ್ದ ವಿನಾಯಕ ತನ್ನದೇ ಸ್ವಂತ ಕಂಪನಿಯೊಂದನ್ನು ಹುಟ್ಟು ಹಾಕಿದ್ದ. ಮದುವೆಯಾದ ನಂತರವಂತೂ ಆ ಕಂಪನಿ ಲಾಭದ ಗುಡ್ಡವನ್ನು ಏರಲಾರಂಭಿಸಿತ್ತು. ಇದಕ್ಕೆ ಕೈ ಹಿಡಿದವಳ ದೆಸೆ ಎನ್ನಬಹುದು. ಬಹುತೇಕರು ಹೀಗೆಯೇ ಹೇಳುತ್ತಾರೆ. ಕಂಪನಿ ಆರಂಭಿಸಿ ವರ್ಷ ಕಳೆಯುವಷ್ಟರಲ್ಲಿ ನಾಲ್ಕಾರು ಕಡೆಗಳಲ್ಲಿ ಶಾಖೆಗಳನ್ನೂ ತೆರೆದು ವಿಸ್ತಾರವಾಗುತ್ತಲಿತ್ತು. ಹೀಗಿದ್ದಾಗಲೇ ಒಂದು ದಿನ ವಿನಾಯಕ ಕಂಪನಿಯ ಹೊಸದೊಂದು ಶಾಖೆಗೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಜಾಹೀರಾತು ನೀಡಿದ್ದ. ಸಾಕಷ್ಟು ಅರ್ಜಿಗಳೂ ಬಂದಿದ್ದವು. ಇಂಟರ್ವ್ಯೂಗೆ  ಬಂದವರಲ್ಲಿ ಅನಿತಾಳೂ ಇರುತ್ತಾಳೆ ಎಂದು ಕನಸಿನಲ್ಲೂ ಅಂದಕೊಂಡಿರಲಿಲ್ಲ.
          ಎದುರಿಗೆ ಅನಿತಾ ಬಂದು ನಿಂತಿದ್ದಾಗ ಏನು ಹೇಳಬೇಕು ಎನ್ನುವುದು ವಿನಾಯಕನಿಗೆ ಒಮ್ಮೆಗೆ ತೋಚಲೇ ಇಲ್ಲ. ಸುಮ್ಮನೆ ಗರಬಡಿದವನಂತೆ ಕುಳಿತಿದ್ದ. ಅನಿತಾಳೂ ತಬ್ಬಿಬ್ಬಾಗಿ ನಿಂತಿರುವುದು ಸ್ಪಷ್ಟವಾಗಿತ್ತು. `ಬನ್ನಿ ಕುಳಿತುಕೊಳ್ಳಿ..' ಎಂದವನೇ `ಚನ್ನಾಗಿದ್ದೀಯಾ?..' ಎಂದು ಕೇಳಿದ್ದ. ಕಣ್ಣಲ್ಲಿ ಹನಿಗೂಡಿಸಿಕೊಂಡಿದ್ದ ಅನಿತಾ ಹೂಂ ಅಂದಿದ್ದು ವಿನಾಯಕನ ಕಿವಿಗೆ ಕೇಳಿಸಲಿಲ್ಲ. ಅಷ್ಟು ಅಸ್ಪಷ್ಟವಾಗಿತ್ತು. ಉಳಿದಂತೆ ವಿನಾಯಕ ಸಂದರ್ಶನದಲ್ಲಿ ಬೇರೇನನ್ನೂ ಕೇಳಲಿಲ್ಲ. ಮೌನವಾಗಿಯೇ ಕುಳಿತಿದ್ದ ಅನಿತಾ ಕೆಲ ಘಳಿಗೆಯ ನಂತರ ವಾಪಾಸು ಬಂದಿದ್ದಳು.
         ಇದಾದ ಮರುದಿನವೇ ಕೆಲಸ ಅನಿತಾಳಿಗೆ ಸಿಕ್ಕಿರುವುದು ಖಾತ್ರಿಯಾಗಿತ್ತು.

********
           ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ವಿನಾಯಕ ಅನಿತಾಳನ್ನು ಎಂದೂ ಮಾತನಾಡಿಸಲು ಮುಂದಾಗಲಿಲ್ಲ. ಅನಿತಾ ಮಾತ್ರ ಒಂದೆರಡು ಸಾರಿ ಮಾತನಾಡಲು ಪ್ರಯತ್ನಿಸಿದ್ದಳಾದರೂ ವಿನಾಯಕ ಕಂಪನಿಗೆ ಬಾಸ್ ಆಗಿದ್ದ ಕಾರಣ ತೀರಾ ಹುಡಾಯಲು ಹೋಗಿರಲಿಲ್ಲ.
           ವರ್ಷವೊಂದು ಕಳೆದಿತ್ತು. ವಿಚಿತ್ರವೆಂದರೆ ವಿನಾಯಕನಿಗೂ ಅವಳಿಜವಳಿ ಮಕ್ಕಳು ಹುಟ್ಟಿದ್ದರು. ಮಕ್ಕಳು ಹುಟ್ಟಿದ್ದ ಖುಷಿಯಲ್ಲಿ ಕಂಪನಿಯ ಕೆಲಸಗಾರರಿಗೆಲ್ಲ ಪಾರ್ಟಿಕೊಡಲು ಮುಂದಾದ ವಿನಾಯಕ. ಮಕ್ಕಳ ಹೆಸರಿಡುವ ಕಾರ್ಯ ಮುಗಿದ ನಂತರ ಬಂದು ಎಲ್ಲರಿಗೂ ಪಾರ್ಟಿಗೆ ಏರ್ಪಾಟು ಮಾಡಿದ್ದ. ಪ್ರತಿಯೊಬ್ಬರೂ ಕುಟುಂಬದ ಸದಸ್ಯರ ಜೊತೆಗೆ ಬರಬೇಕೆಂಬ ತಾಕೀತನ್ನೂ ಮಾಡಿದ್ದ. ಆತನ ತಾಕೀತಿಗೆ ಪ್ರತಿಯಾಗಿ ಅನಿತಾಳೂ ತನ್ನ ಗಂಡನನ್ನು ಕರೆದುಕೊಂಡು ಬಂದಿದ್ದಳು.
           ವಿನಾಯಕ ಪಾರ್ಟಿಯಲ್ಲಿ ಅನಿತಾಳಿಗೆ ಸಿಕ್ಕಿದ್ದ. ತನ್ನ ಹೆಂಡತಿಗೆ ಪರಿಚಯ ಮಾಡಿದ್ದ. ಅನಿತಾಳ ಗಂಡ ವಿನಾಯಕನಿಗೆ ಹಾಗೂ ವಿನಾಯಕನ ಹೆಂಡತಿ ಅನಿತಾಳಿಗೆ ಆಪ್ತರಾಗಿದ್ದರು. ಯಾವುದೋ ಕಾಲದ ಗೆಳೆಯರೇನೋ ಎಂಬಂತೆ ಮಾತಿಗೆ ಕುಳಿತಿದ್ದರು. ಮಾತಿನ ಮಧ್ಯದಲ್ಲಿಯೇ ವಿನಾಯಕ ಅನಿತಾಳ ಗಂಡನ ಬಳಿ ಮಕ್ಕಳ ಬಗ್ಗೆ ಕೇಳಿದ್ದ. ಅದಕ್ಕೆ ಪ್ರತಿಯಾಗಿ ಇಬ್ಬರು ಮಕ್ಕಳ ವಿಷಯವನ್ನು ತಿಳಿಸಿದ್ದ ಅನಿತಾಳ ಗಂಡ ಅವಳಿ-ಜವಳಿ ಮಕ್ಕಳಲ್ಲಿ ಒಬ್ಬ ಹುಡುಗ ಇನ್ನೊಬ್ಬಳು ಹುಡುಗಿ ಎನ್ನುವುದನ್ನು ತಿಳಿಸಿದ್ದ. ಹುಡುಗನಿಗೆ ಅತ್ರಿಯೆಂದೂ ಹುಡುಗಿಗೆ ಅವನಿಯೆಂದೂ ಹೆಸರಡಲಾಗಿದೆ. ಅನಿತಾಳ ಒತ್ತಾಯದಿಂದಲೇ ಈ ಹೆಸರನ್ನು ಇಟ್ಟಿದ್ದಾಗಿ ತಿಳಿಸಿದರು. ವಿನಾಯಕ ಮಾತನಾಡುತ್ತಿದ್ದವನು ಇದ್ದಕ್ಕಿದ್ದಂತೆ ಮೌನಿಯಾಗಿದ್ದ. ಮನಸ್ಸಿನಲ್ಲಿ ಒನಕೆಯಿಂದ ಕುಟ್ಟಿದ ಅನುಭವವಾಗಿತ್ತು. ಕಣ್ಣಂಚು ಹನಿಗೂಡಿದ್ದರೂ ಮಾತು ಮರೆಸಿ ಸುಮ್ಮನಾಗಿದ್ದ.
******
       ವಿನಾಯಕನ ಹೆಂಡತಿಯ ಬಳಿ ಮಾತಿಗೆ ಕುಳಿತಿದ್ದ ಅನಿತಾಳಿಗೆ ಗಮನವೆಲ್ಲ ವಿನಾಯಕ ಹಾಗೂ ತನ್ನ ಗಂಡ ಮಾತನಾಡುತ್ತಿರುವುದರ ಮೇಲೆಯೇ ನಿಂತಿತ್ತು. ಮಾತಿನ ಭರದಲ್ಲಿ ವಿನಾಯಕ ಎಲ್ಲಾದರೂ ತನ್ನ ಗಂಡನ ಬಳಿ ತಾವಿಬ್ಬರೂ ಪ್ರೀತಿಸಿದ ವಿಷಯ ಹೇಳಿಬಿಡುತ್ತಾನಾ ಎಂದೂ ಕ್ಷಣಕಾಲ ಅನುಮಾನಿಸಿದ್ದಳು ಅನಿತಾ. ವಿನಾಯಕನಿಗೆ ಕೆಲಸ ಇಲ್ಲ ಎನ್ನುವ ಕಾರಣಕ್ಕಾಗಿ ಆತನನ್ನು ಧಿಕ್ಕರಸಿ ಹೋಗಿದ್ದಕ್ಕೆ ಪ್ರತಿಯಾಗಿ ವಿನಾಯಕ ಎಲ್ಲಾದರೂ ತನ್ನ ಹಾಗೂ ಅವನ ಪ್ರೇಮದ ಕುರಿತು ಹೇಳಿ ಸಂಸಾರದಲ್ಲಿ ಹುಳಿ ಹಿಂಡಿಬಿಟ್ಟರೆ ಎಂದೂ ಆಲೋಚಿಸತೊಡಗಿದ್ದಳು. ಆದರೆ ನಗು ನಗುತ್ತ ಮಾತನಾಡುತ್ತಿದ್ದ ಅವರು ಯಾವ ಹೊತ್ತಿನಲ್ಲೂ ಸಿಟ್ಟಾಗಿದ್ದು ಕಾಣಿಸಲಿಲ್ಲ. ಬದಲಾಗಿ ಯಾವುದೋ ಮಾತಿಗೆ ಇದ್ದಕ್ಕಿದ್ದಂತೆ ವಿನಾಯಕ ಮೌನಿಯಾಗಿದ್ದು ಮಾತ್ರ ಕಾಣಿಸಿತು. ಯಾರಿಗೂ ಕಾಣದಂತೆ ಕಣ್ಣೊರೆಸಿಕೊಂಡಿದ್ದು ಮಾತ್ರ ಅನಿತಾಳಿಗೆ ಸ್ಪಷ್ಟವಾಗಿತ್ತು. ಅನಿತಾ ದೀರ್ಘ ನಿಟ್ಟುಸಿರು ಬಿಟ್ಟದ್ದಳು.
****
           `ಅವಳಿ ಜವಳಿ ಮಕ್ಕಳು ನೋಡಿ ನಮಗೆ.. ಒಂದು ಗಂಡು ಒಂದು ಹೆಣ್ಣು...' ಎಂದು ವಿನಾಯಕನ ಹೆಂಡತಿ ಹೇಳುತ್ತಿದ್ದಂತೆ ಅನಿತಾ ತನಗೂ ಅವಳಿ ಜವಳಿ ಮಕ್ಕಳು ಹುಟ್ಟಿದ್ದು ನೆನಪಾಯಿತು. ಒಂದು ಕ್ಷಣ ಎಲ್ಲೋ ಏನೋ ನೆನಪಾದಂತಾಯಿತು. `ಹೆಸರೆಂತಾ ಇಟ್ಟಿದ್ದಿ?' ಕೇಳಿದ್ದಳು  ಅನಿತಾ.. `ಕೂಸಿಗೆ ಅವನಿ.. ಮಾಣಿಗೆ ಅತ್ರಿ... ನಮ್ಮನೆಯವರೇ ಈ ಹೆಸರು ಇಟ್ಟಿದ್ದು.. ಎಂತಾ ಚಂದ ಹೆಸರು ಅಲ್ದಾ...' ಎಂದು ವಿನಾಯಕನ ಹೆಂಡತಿ ಹೇಳುತ್ತಿದ್ದಂತೆ ಅನಿತಾ ಮೌನಿಯಾಗಿದ್ದಳು. ಮಾತು ಮರೆತಂತಾಗಿದ್ದಳು.


(ಮುಗತ್ತು)
   
       

ನನ್ನ ಕವನದಲ್ಲಿ

ಕವನವೆನ್ನ ಬಾಳ ಉಸಿರು
ಕವನವೆನ್ನ ಜೀವನ
ಇದುವೆ ನನ್ನ ಸ್ಪೂರ್ತಿ, ನಿತ್ಯ
ಮನಕೆ ನಲಿವು ಅನುದಿನ ||

ನನ್ನ ಕವನ ನನ್ನ ಬಾಳ
ಪ್ರೀತಿಗೊಂದು ಸೇತುವೆ
ದುಃಖ, ನೋವು, ಕಷ್ಟಗಳೆ
ಕವನದಲ್ಲಿ ತುಂಬಿವೆ ||

ಭಾವನೆಗಳ ಭದ್ರ ಗೋಡೆ
ಕವನದಲ್ಲಿ ಮೆರೆದಿದೆ
ನೂರು, ಚಿಂತೆ ಗೊಡವೆಗಳೊಡನೆ
ಕವನ ಎಂದೂ ಬೆರೆತಿದೆ ||

ನನ್ನ ಕವನ ಚಿಕ್ಕ ಚೊಕ್ಕ
ಬಾಳಿನಂತೆ, ಪದಗಳೂ
ಒಮ್ಮೆ ನಲಿವು, ಜೊತೆಗೆ ಅಳುವು
ಜೊತೆಗೆ ಹಲವು ಸುಳಿಗಳು ||

ನಾನು, ನನ್ನ ಜೀವ, ಕವನ
ಬಾಳಿನುದ್ದ ಬೆರೆತಿದೆ
ಕವನದೊಡಲ ಭಾವದಿಂದ
ಲೋಕವನ್ನೂ ಮರೆತಿಹೆ ||

****
(ಈ ಕವಿತೆಯನ್ನು ಬರೆದಿರುವುದು 21-09-2006ರಂದು ದಂಟ್ಕಲ್ಲಿನಲ್ಲಿ)

Saturday, December 20, 2014

ಅಘನಾಶಿನಿ ಕಣಿವೆಯಲ್ಲಿ-3

(ಮಲೆನಾಡ ಸೌಂದರ್ಯ)
              ಆ ದಿನ ವಿಕ್ರಮ ಪ್ರದೀಪನನ್ನು ಕಂಡೊಡನೆ `ಅರೇ.. ಇದೇನಿದು ಆಶ್ಚರ್ಯ.. ಬಹಳ ದಿನವಾಗಿತ್ತಲ್ಲಾ.. ನಿನ್ನನ್ನು ನೋಡಿ. ಏನು? ಯಾವ ಕಡೆಗೆ ಹೋಗಿತ್ತೋ ಸವಾರಿ? ಮತ್ತೆ ಏನಪ್ಪಾ ಸಮಾಚಾರ?..' ಎಂದು ಕೇಳಿದ.
               `ಹುಂ.. ಸಮಾಚಾರ ಏನು ಬಂತು? ಎಲ್ಲಾ ಒಳ್ಳೇದೆ. ಅಂದ ಹಾಗೆ ನಿನ್ನನ್ನು ಸ್ವಲ್ಪ ಅರ್ಜೆಂಟಾಗಿ ನೋಡ್ಬೇಕಿತ್ತು ಅದಕ್ಕೆ ಬಂದೆ..' ಎಂದ ಪ್ರದೀಪ.
               `ಏನಪ್ಪಾ ಅಂತ ಅರ್ಜೆಂಟು? ಏನು ವಿಷ್ಯ?' ಎಂದ ವಿಕ್ರಂ.
               `ಏನಿಲ್ಲಾ ನಾನು ಮೊನ್ನೆ ಒಂದು ವಾರ ಬೆಂಗಳೂರಿಗೆ ಹೋಗಿದ್ದೆ. ಬಹಳ ತುರ್ತು ವಿಷಯ ಆಗಿದ್ದರಿಂದ ನಿನಗೂ ಹೇಳಿರಲಿಲ್ಲ. ಅಲ್ಲಿಗೆ ಹೋಗಿದ್ದಾಗ ಒಬ್ರು ಸಿಕ್ಕಿದ್ರು ಅವ್ರ ಹೆಸರು ಜಯಂತರಾಮ್ ಅಂತ. ಅವರೊಂದು ಕಂಪ್ನಿಯಿಂದ ದೊಡ್ಡದೊಂದು ಸ್ಪರ್ಧೆ ಇಟ್ಟಿದ್ದಾರೆ. ಬಾಡಿ ಬಿಲ್ಡಿಂಗು, ಕರಾಟೆ, ಟ್ರೆಕ್ಕಿಂಗು, ಕುಂಗ್ ಫೂ, ವಾಲ್ ಕ್ಲೈಂಬಿಂಗ್ ಇತ್ಯಾದಿಗಳ ಬಗ್ಗೆ ಸ್ಪರ್ಧೆ ನಡೆಸಲಾಗುತ್ತಿದೆ. ಅದನ್ನ ನಿಂಗೆ ತಿಳಿಸೋಣ ಅಂತಲೇ ಬಂದೆ. ಅದು ಇರೋದು ಜನವರಿ 28ಕ್ಕೆ. ಬೆಂಗಳೂರ್ನಲ್ಲೇ..' ಎಂದು ಹೇಳಿದ ಪ್ರದೀಪ.
                 `ಅಂದ್ರೆ ಇವತ್ತು ಜನವರಿ 17. ಇನ್ನು ಬರೀ 11 ದಿನಗಳು ಇದೆಯಲ್ಲೋ. ಅಷ್ಟು ಟೈಮ್ನಲ್ಲಿ ಹೇಗೆ ತಯಾರಿ ಮಾಡಲಿ? ಯಾವಾಗ ಹೋಗ್ಲಿ? ಎಷ್ಟು ಜನರನ್ನು ಕರೆದುಕೊಂಡು ಹೋಗ್ಲಿ? ಜೊತೆಗೆ ಇಲ್ಲಿ ಪೈಪೋಟಿ ಬೇರೆ ಇದೆ. ಹತ್ತಿರದಲ್ಲೇ ಇನ್ನೊಂದು ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರ ಬೇರೆ ಶುರುವಾಗಿದೆ. ಯಾಕೋ ಇದೆಲ್ಲಾ ಬೇಡ ಅನ್ನಿಸ್ತಿದೆ ದೀಪು. ಸುಮ್ನೆ ಎಲ್ಲಾ ಬಿಟ್ಟು ಮತ್ತೆ ಊರಿಗೆ ವಾಪಾಸು ಹೋಗ್ಲಾ ಅನ್ನಿಸ್ತಾ ಇದೆ..' ಎಂದು ಅರ್ಧ ನಿರಾಶೆಯೂ, ಅರ್ಧ ದುಃಖವೂ, ಖಿನ್ನತೆಯಿಂದಲೂ ಹೇಳಿದ ವಿಕ್ರಂ.
                `ಅದಕ್ಕೆಲ್ಲಾ ಯಾಕಪ್ಪಾ ಹಾಗೆ ಬೇಜಾರು ಮಾಡ್ಕೋತಿಯಾ? ನಾನಿದ್ದೀನಲ್ಲಾ ಮಾರಾಯಾ. ಎಲ್ಲಾ ವ್ಯವಸ್ಥೆ ಆಗಿದೆ. ನಿನ್ಜೊತೆ ನಾನೂ ಬರ್ತಿದ್ದೀನಿ. ಜನವರಿ 25ಕ್ಕೆ ಹೊರಡೋದು. ಜನವರಿ 30ಕ್ಕೆ ವಾಪಾಸು ಹೊರಡೋದು. ಮತ್ತೆ ಅದು, ಇದು ಅನ್ನೋದೆಲ್ಲಾ ಬಿಟ್ಟು ಸುಮ್ಮನೆ ಒಪ್ಕೋ. ತೀರಾ ಮತ್ತೆ ಕ್ಯಾತೆ ತೆಗೀಬೇಡ...ನಿನ್ ಸಮಸ್ಯೆಗಳೆಲ್ಲ ಏನೇ ಇರಲಿ. ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ನಿನಗೆ ನಿನ್ನ ತರಬೇತಿ ಕೇಂದ್ರಕ್ಕೆ ಲಾಭವಾಗುವುದೇ ಜಾಸ್ತಿ. ಗೆದ್ದರಂತೂ ಸಾಕಷ್ಟು ಹೆಸರು ಬರುತ್ತದೆ ಮಾರಾಯಾ.. ರಿಜೆಕ್ಟ್ ಮಾಡಬೇಡ.. ' ಎಂದ ಪ್ರದೀಪ.
              `ಅದೇನೋ ಸರಿ.. ಆ ವಿಷ್ಯ ಹಾಗಿರಲಿ. ನೀನ್ಯಾಕೆ ಬೆಂಗಳೂರಿಗೆ ಹೋಗಿದ್ದೆ? ' ಎಂದು ಕೇಳಿದ ವಿಕ್ರಂ.
              `ಅದನ್ನೆಲ್ಲಾ ಇನ್ನೊಮ್ಮೆ ಹೇಳ್ತೀನಿ. ಅಂದ ಹಾಗೆ ನಾನು ಸಧ್ಯ ನಿನ್ನ ಜೊತೆ ಇರೋಕಾಗೋದಿಲ್ಲ. ರೂಮು ಚೇಂಜ್ ಮಾಡ್ತಾ ಇದ್ದೀನಿ.' ಎಂದು ಹೇಳಿದ ಪ್ರದೀಪ್.
              `ಏನೋ ಇದು? ಎಲ್ಲಿಗೆ ಹೋಗ್ತಾ ಇದ್ದೀಯೋ? ಯಾಕೋ.. ಏನಾಯ್ತೋ? ಎಲ್ಲಿಗೆ ಹೋಗ್ತಾ ಇದ್ದೀಯೋ?'
              `ಥೋ ಮಾರಾಯಾ ಅದರದ್ದೊಂದು ದೊಡ್ಡ ಕಥೆ. ಯಾಕೂ ಇಲ್ಲ. ಇವತ್ತು ಬೇಡ. ಇನ್ನೊಮ್ಮೆ ಹೇಳ್ತೀನಿ. ನೀನು ನಿನ್ನ ಕನಿಷ್ಟ 10 ಜನರ ಟೀಂ ಸಜ್ಜು ಮಾಡಿ ಇಟ್ಕೋ. 25ಕ್ಕೆ ಹೊರಡೋದು ನೆನಪಿರ್ಲಿ. ಇನ್ನೊಂದ್ಸಾರಿ ಸಿಕ್ತೀನಿ.' ಎಂದು ಹೇಳುತ್ತಾ ಹೊರಟೇಹೋದ ಪ್ರದೀಪ. ಅವನ ಬಾಯಲ್ಲಿ `ಕಾಲವನ್ನು ತಡೆಯೋರು ಯಾರೂ ಇಲ್ಲ.. ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ..' ಎಂಬ ಹಾಡು ಕೇಳಿಬರುತ್ತಿತ್ತು.
              ಈ ಘಟನೆಗಳನ್ನೆಲ್ಲಾ ಅನಾಮಿಕ ಜೋಡಿಕಂಗಳು ವೀಕ್ಷಿಸುತ್ತಿದ್ದವು. ಮಾತು ಕತೆಗಳನ್ನೆಲ್ಲ ಆಲಿಸಲು ಪ್ರಯತ್ನಿಸುತ್ತಿದ್ದವು. ವಿಕ್ರಮನಿಗಾಗಲೀ, ಪ್ರದೀಪನಿಗಾಗಲೀ ಇದು ಗೊತ್ತಾಗಲೇ ಇಲ್ಲ.

*********2**********

               ನೋಡ ನೋಡ್ತಾ ಇದ್ದಂತೆ ಜನವರಿ 25 ಬಂದೇ ಬಿಟ್ಟಿತು. ತೀರಾ ಹೊರಡುವ ಮುನ್ನ ಕಣ್ಣೀರು ಮನೆಗೆ ಪೋನ್ ಮಾಡಿದ. ಕಣ್ಣೀರು ಮನೆಯ ಲ್ಯಾಂಡ್ಲೈನ್ ಅದೇನಾಗಿತ್ತೋ. ಎಷ್ಟು ಸಾರಿ ಪ್ರಯತ್ನಿಸಿದರೂ ಸದ್ದು ಮಾಡಲಿಲ್ಲ. ಮೊಬೈಲ್ ಸಿಗ್ನಲ್ ಸಿಗದ ಪ್ರದೇಶವಾದ ಕಾರಣ ಮನೆಗೆ ಸುದ್ದಿ ತಿಳಿಸುವುದು ಹೇಗೆ ಎನ್ನುವ ಗೊಂದಲಕ್ಕೆ ಬಿದ್ದ. ಹಳೆಯ ಗಂಡನ ಪಾದವೇ ಗತಿ ಎನ್ನುವಂತೆ ಕೊನೆಯ ಕ್ಷಣದಲ್ಲಿ ಮನೆಗೆ ಪತ್ರವನ್ನು ಬರೆದು ಪೋಸ್ಟ್ ಮಾಡಿ ಬಂದ.
(ಅಘನಾಶಿನಿ ನದಿ)
             ಆ ದಿನ ಹೊರಡುವ ಮುನ್ನ ತನ್ನ ಜೊತೆಗಾರರೆಲ್ಲರೂ ಬಂದಿದ್ದಾರೋ ಇಲ್ಲವೋ ಎಂದು ನೋಡಿಕೊಂಡು ಬಸ್ಸನ್ನೇರಿದ. ಆಗಲೇ ಪ್ರದೇಪ ಬಂದು ತನ್ನ ಎಂದಿನ ಶೈಲಿಯ ವಾಗ್ಝರಿ ಹಾಗೂ ಗಾನಲಹರಿ ಪ್ರಾರಂಭಿಸಿದ್ದ. ಅವರು ಮಂಗಳೂರನ್ನು ಬಿಟ್ಟಿದ್ದು 7.30ಕ್ಕೆ.
            ಪ್ರದೀಪನ ಹರಟೆಗೋ ಅಥವಾ ಬೇರೇನೋ ಕಾರಣಕ್ಕೆ ಅವರಿಗೆಲ್ಲ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಅವರು ಬೆಂಗಳೂರನ್ನು ತಲುಪುವ ವೇಳೆಗೆ ಸಂಜೆ ಆರಾಗಿತ್ತು. ಅಲ್ಲಿ ಬಸ್ಸನ್ನು ಇಳಿಯುವ ಹೊತ್ತಿಗಾಗಲೇ ಒಬ್ಬ ಇಳಿ ವಯಸ್ಸಿನ ವ್ಯಕ್ತಿ ಎದುರಾದ. ಪ್ರದೀಪ ಅವರನ್ನು ವಿಕ್ರಮ ಹಾಗೂ ಅವನ ಜೊತೆಗಾರರಿಗೆ ಪರಿಚಯಿಸಿದ. ಅವರು ಕೃಷ್ಣಮೂರ್ತಿ ಎಂದೂ ಬಹಳ ಕಾಲದಿಂದ ಪರಿಚಯವೆಂದೂ ಕಷ್ಟಕಾಲದಲ್ಲಿ ತನಗೆ ಸಹಾಯ ಮಾಡಿದವರೆಂದೂ ತಿಳಿಸಿದ ಪ್ರದೀಪ. ಜೊತೆಗೆ ಆ ಮಹಾನುಭಾವರ ಮನೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಆಗಿದೆಯೆಂದೂ ತಿಳಿಸಿದ. ಕೊನೆಗೆ ಎಲ್ಲರೂ ಸೇರಿ ಮೂರ್ತಿಗಳ ಮನೆಗೆ ಹೊರಟರು.

*************

             ಅದೊಂದು ತೀರಾ ದೊಡ್ಡದಲ್ಲದಿದ್ದರೂ ತಕ್ಕಮಟ್ಟಿಗೆ ದೊಡ್ಡದಾಗಿ ಕಾಣುತ್ತಿದ್ದ, ಬಂಗಲೆಯಂತಹ ಮನೆ. ಆ ಮನೆಯ ಮುಂದೆ ಬಹುತೇಕ ಆ ಊರಿನ ಎಲ್ಲ ಜನರೂ ಸೇರಿದ್ದರು. ಅವರ ಮುಖಭಾವ ಅಲ್ಲಿಗೆ ಯಾರೋ ಒಬ್ಬ ಪ್ರಮುಖ ವ್ಯಕ್ತಿ ಬರುತ್ತಾನೆ ಎಂಬುದನ್ನು ತೋರಿಸುತ್ತಿತ್ತು,
             ಆ ಮನೆಯ ಯಜಮಾನನೇ ಬೇಣದಗದ್ದೆಯ ಶಿವರಾಮ. ಆ ಶಿವರಾಮ ಅವರೂ ಮನೆಯೆದುರು ನಿಂತು ಕಾಯುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ  ಮನೆಯ ಕಂಪೌಂಡಿನ ಎದುರಿಗೆ ಒಂದು ಕಾರು ಬಂದು ನಿಂತಿತು. ಆ ಕಾರಿನಿಂದ ಓರ್ವ ಆಜಾನುಬಾಹು ವ್ಯಕ್ತಿ ಕೆಳಗಿಳಿದ. ನೋಡಲು ಎಣ್ಣೆಗೆಂಪು ಬಣ್ಣ. ಸಾಕಷ್ಟು ದಿನದಿಂದ ಕತ್ತರಿ ಪ್ರಯೋಗ ಮಾಡದಿದ್ದ ಮೀಸೆ. ಉದ್ದಾಗಿ ತುಟಿಯನ್ನು ಮುಚ್ಚಿತ್ತು. ಇನ್ ಷರ್ಟ್ ಮಾಡಿದ ಕಾರಣ ಶಿಸ್ತಿನಂತೆ ಕಾಣುತ್ತಿದ್ದ ವ್ಯಕ್ತಿತ್ವ. ಸಿಗರೇಟು ಸೇದುತ್ತಿದ್ದ ಎನ್ನುವುದರ ಕುರುಹಾಗಿ ಕಪ್ಪಾಗಿದ್ದ ಕೆಳತುಟಿ. ಇವಿಷ್ಟು ಆತನ ಮೇಲ್ಚಹರೆಯಾಗಿತ್ತು. ಕಾರಿನಿಂದ ಇಳಿದವನೇ ಸುಬ್ರಹ್ಮಣ್ಯ. ಬೇಣದಗದ್ದೆಯ ಶಿವರಾಮನ ತಮ್ಮ. ಕಾರಿನಿಂದಿಳಿದವನನ್ನು ಮನೆಯ ಕೆಲಸಗಾರರೆಲ್ಲ ಸ್ವಾಗತಿಸಿದರು. ಸಿಂಗಾಪುರದಲ್ಲಿ ಕೆಲಸದ ನಿಮಿತ್ತ ಉಳಿದಿದ್ದ ಸುಬ್ರಹ್ಮಣ್ಯ 8-10 ವರ್ಷಗಳ ಹಿಂದೆ ಊರಿಗೆ ಬಂದಿದ್ದ. ಆ ನಂತರ ಈಗಲೇ ಊರಿಗೆ ಬರುತ್ತಿದ್ದುದು.
            `ಬಂದ್ಯಾ ಸುಬ್ಬು.. ಬಾ.. ಒಳಗೆ... ಪ್ರಯಾಣ ಚಂದ ಆತಾ?' ಎಂದು ಕೇಳಿದ ಶಿವರಾಮ್. ಅದಕ್ಕೆ ಚುಟುಕಾಗಿ ಉತ್ತರಿಸಿದ ಸುಬ್ರಹ್ಮಣ್ಯ. ಸೀದಾ ಸರಸರನೆ ಮನೆಯೊಳಕ್ಕೆ ಹೋದ. ಉಳಿದವರು ಹಿಂಬಾಲಿಸಿದರು.
             ಬೇಣದಗದ್ದೆ ಅಪ್ಪಟ ಮಲೆನಾಡಿನ ಹಳ್ಳಿ. ಕೇವಲ ಮೂರೋ ನಾಲ್ಕೋ ಮನೆಗಳಿರುವ ಊರು ಇದು. ಮಲೆನಾಡಿನ ದಟ್ಟ ಕಾನನದೊಳಗೆ ಇರುವ ಈ ಹಳ್ಳಿಯ ಒಂದು ಪಕ್ಕದಲ್ಲಿ ದಡ್ಡ ಕಾಡು ಹಾಗೂ ಕಡಿದಾದ ದೈತ್ಯ ಬೆಟ್ಟ. ಇನ್ನುಳಿದ ಕಡೆಗಳಲ್ಲಿ ಬಳಸಿ ಹರಿಯುವ ಪಾಪನಾಶಿನಿಯಾದ ಅಘನಾಶಿನಿ ನದಿ. ಇದೇ ನದಿ ಜೀವದಾಯಿ. ಈ ನದಿಯ ಸುತ್ತಲೂ ಕತ್ತಲೆಯಂತಹ ಕಾನು. ಬೇಣದಗದ್ದೆಯೂ ಹೊಂದಿ ಕೋಂಡೇ ಇರುವ ಕಾರಣ ಇಲ್ಲೂ ದಟ್ಟ ಕಾನನವೇ ಇತ್ತು. ಇರುವ ಮನೆಗಳಲ್ಲಿ ಶಿವರಾಮ ಅವರ ಮನೆಯೇ ದೊಡ್ಡದು. ಇದಕ್ಕೆ ಕಾರಣಗಳಂತೂ ಸಾಕಷ್ಟಿದೆ. ಶಿವರಾಮ ಅವರ ತಂದೆ ತಲೆ ತಲಾಂತರದಿಂದ ಆಸ್ತಿವಂತರು. ದೊಡ್ಡ ಭಾಗಾಯ್ತದ ಜಮೀನು. ಊರಿನಲ್ಲಿ ಇರುವ ಉಳಿದ ಕುಟುಂಬಗಳು ಬೇರೆ ಕಡೆಯಿಂದ ಬಂದು ನೆಲೆಸಿದಂತವರು. ಶಿವರಾಮ್ ಅವರ ತಮ್ಮ ಸುಬ್ರಹ್ಮಣ್ಯ ಮನೆ ಕಟ್ಟಿಸಲು ಸಾಕಷ್ಟು ಖರ್ಚನ್ನು ಮಾಡಿದ್ದಾರೆ. ದೊಡ್ಡ ಮನೆ ಎಷ್ಟು ಭವ್ಯವೋ ಅಷ್ಟೇ ನಿಘೂಡವೂ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
             ಶಿವರಾಮ್ ಅವರ ಮನೆಯಲ್ಲಿ 8-10 ಎಕರೆಗೂ ಹೆಚ್ಚಿನ ಅಡಿಕೆ ತೋಟವಿದೆ. ಅಡಿಕೆ ತೋಟದಲ್ಲಿ ಯಾಲಕ್ಕಿ, ಕಾಳುಮೆಣಸು, ಕೊಕ್ಕೋ, ವೆನ್ನಿಲಾಗಳು ಬೆಳೆಯುತ್ತಿವೆ. ನಾಲ್ಕೆಕರೆ ಗದ್ದೆಯೂ ಇದೆ. ಗದ್ದೆಯಲ್ಲಿ ಭತ್ತದ ಜೊತೆಗೆ ಕಬ್ಬು, ಕೆಲವೊಂದು ಋತುವಿನಲ್ಲಿ ಉದ್ದು, ವಟಾಣಿ, ಕಡಲೆ, ಶೇಂಗಾಗಳನ್ನು ಬೆಳೆಯಲಾಗುತ್ತದೆ. ಶಿವರಾಮ್ ಅವರು ಚಿಕ್ಕಂದಿನಿಂದ ಕೃಷಿಯತ್ತ ಒಲವು ಬೆಳೆಸಿಕೊಂಡು ಮನೆಯಲ್ಲಿಯೇ ಉಳಿದರೆ ಸುಬ್ರಹ್ಮಣ್ಯ ಮಾತ್ರ ಕೃಷಿಯತ್ತ ಅನಾಸಕ್ತಿ ಬೆಳಸಿಕೊಂಡು ಮನೆಯಿಂದ ಹೊರಕ್ಕೆ ಹೋಗಿ ಮಾರ್ಕೇಟಿಂಗ್ ವೃತ್ತಿಯನ್ನು ಕೈಗೊಂಡು ಅದರಲ್ಲಿ ಹಂತ ಹಂತವಾಗಿ ಯಶಸ್ಸನ್ನು ಗಳಿಸಿ ಸಿಂಗಾಪುರಕ್ಕೆ ಹೋಗಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದರು.
         ಊರಿನಲ್ಲಿ ಸುಬ್ರಹ್ಮಣ್ಯನನ್ನು ಸುಬ್ಬು, ಸುಬ್ಬಣ್ಣ ಎಂದು ಎಲ್ಲರೂ ಕರೆಯುತ್ತಾರಾದರೂ ಆತನ ಶ್ರೀಮಂತಿಕೆ, ಸಿಂಗಾಪುರದಲ್ಲಿ ನೆಲೆಸಿರುವ ಬಗೆಗೆ ಊರಿನವರು ಮಾತನಾಡುವುದೇ ಬೇರೆಯ ರೀತಿ. ಸುಬ್ರಹ್ಮಣ್ಯನದ್ದು ಮಾರ್ಕೇಟಿಂಗ್ ಕೆಲಸ ಅಲ್ಲವೇ ಅಲ್ಲ. ಬದಲಾಗಿ ಸ್ಮಗ್ಲಿಂಗು, ಅದೂ ಇದೂ ಕೆಲಸವಿದೆ. ಪಶ್ಚಿಮ ಘಟ್ಟದ ಕಾಡಿನಿಂದ ಆಯುರ್ವೇದ ಔಷಧಿಗಳನ್ನು ಕದ್ದು ವಿದೇಶಕ್ಕೆ ಸಾಗಿಸುವ ದೊಡ್ಡದೊಂದು ಜಾಲ ಸುಬ್ರಹ್ಮಣ್ಯನ ಜೊತೆಯಿದೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಎಂತಾ  ಒಳ್ಳೆಯ ಅಣ್ಣನಿಗೆ ಎಂತಾ ತಮ್ಮ ಎಂದೂ ಮಾತನಾಡಿಕೊಳ್ಳುತ್ತಿದ್ದರು. ಇಂತಹ ಮಾತುಗಳು ಅಣ್ಣ ಶಿವರಾಮನ ಕಿವಿಗೂ ಬಿದ್ದಿತ್ತಾದರೂ ಆ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದೇ ಸುಮ್ಮನುಳಿದಿದ್ದ.

****
(ಮುಂದುವರಿಯುತ್ತದೆ)

Friday, December 19, 2014

ನಾನಾಗಬೇಕು..

ನಾನಾಗಬೇಕು
ಇಳಿವ ಇಬ್ಬನಿಯು
ನಗುವ ಹೂವಿನಂತರಾಳದಲ್ಲಿ
ಇಳಿದು ಮೂಡುವ ಹನಿ ||

ನಾನಾಗಬೇಕು
ನವ ವಸಂತಾಗಮನದ
ಹೊಸ ಹರ್ಷೋಲ್ಲಾಸದಲ್ಲಿ ಮಾಮರದ,
ಒಡಲ ಆಳದಲ್ಲೆಲ್ಲೋ ಕುಳಿತು
ಉಲಿದು ಹಾಡುವ ಕೋಗಿಲೆ ||

ನಾನಾಗಬೇಕು
ಇರುಳಲ್ಲಿ ಮಿಣುಕುವ
ಬಳುಕಿ ಕರೆವ ಮಿಂಚುಹುಳ |
ಎದೆಬಡಿತದಾವೇಗಕ್ಕಿಂತಲೂ
ಜೋರಾಗಿ ತಬ್ಬಿ ಹಿಡಿದ ಮರನ
ಕುಟ್ಟಿ ಹಸಿವೋಡಿಸುವ ಮರಕುಟಿಗ ||

ನಾನಾಗಬೇಕು
ಸುಳಿ ಸುಳಿವ ಪ್ರೀತಿ,
ನಲಿದು ನಗುವೊಂದು ನಿಸರ್ಗ |
ಹಸಿರ ಸಂಕುಲ ಜೀವಿ ಜಗತ್ತು,
ಜೊತೆಗೆ ನಿರ್ಮಲ ಜೀವನ ||

ನಾನಾಗಬಲ್ಲೆ
ಮುಂದೊಂದು ದಿನ
ಚಿಕ್ಕ ಜೀವಿ, ಹಸಿರು ಭತ್ತ |
ಆದಾರಾ ಆಸೆ ಜೀರದ ಬಯಕೆ
ಹಸನಾಗುವುದು ಮುಂದಣ ಜನುಮದಲ್ಲೇ ||

****
(ಈ ಕವಿತೆಯನ್ನು ಬರೆದಿರುವುದು 19-11-2006ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯನ್ನು 23-01-2008ರಂದು ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಲಾಗಿದೆ)

Tuesday, December 16, 2014

ಅಘನಾಶಿನಿ ಕಣಿವೆಯಲ್ಲಿ-2

(ಮಳೆಗಾಲದಲ್ಲಿ ಕಣ್ಣೀರುಮನೆಗೆ ಹೋಗುವ ರಸ್ತೆ ಪರಿಸ್ಥಿತಿ)
           ವಿಕ್ರಮ ಮೂಲತಃ ಒಬ್ಬ ಮಲೆನಾಡಿನ ಯುವಕ. ಇವನ ಊರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹತ್ತಿರದ `ಕಣ್ಣೀರು ಮನೆ' ಎಂಬ ಒಂದು ಚಿಕ್ಕ ಹಳ್ಳಿ. ಇವನ ಮನೆಯವರು ಭಾರಿ ಶ್ರೀಮಂತರು. 8-10 ಎಕರೆಯಷ್ಟು ಜಮೀನಿರುವ ಮನೆ ಇವರದ್ದು. ಊರಿನಲ್ಲಿದ್ದುದು ಆರೇಳು ಮನೆಗಳಾದರೂ ದೊಡ್ಡ ಹಾಗೂ ಊರಿನ ಕೊಟ್ಟಕೊನೆಯಲ್ಲಿದ್ದ ಮನೆ ವಿಕ್ರಮನದ್ದಾಗಿತ್ತು. ವಿಕ್ರಮ ಪಿಯುಸಿ ವರೆಗೆ ಕಾಲೇಜು ಕಲಿತಿದ್ದ. ನಂತರ ಬಿಎಯನ್ನು ಹೊರಗಿನಿಂದಲೇ ಕಲಿತು ಪಾಸು ಮಾಡಿದ್ದ. ಪಿಯುಸಿಗೆ ಹೋಗುವಾಗಲೇ ಯಲ್ಲಾಪುರದಲ್ಲಿ ಮಾರ್ಷಲ್ ಆರ್ಟ್ ಕಲಿತ ಗುರುಗಳೊಬ್ಬರು ಸಿಕ್ಕಿದ್ದರಿಂ ಶ್ರದ್ಧೆಯಿಂದ ಕಲಿತಿದ್ದ. ಕುಂಗ್ ಫೂ, ಕರಾಟೆಯನ್ನು ಭಕ್ತಿಯಿಂದ ಕಲಿತಿದ್ದ. ನಂತರದ ದಿನಗಳಲ್ಲಿ ಈ ಕರಾಟೆ, ಕುಂಗ್ ಫೂ ಗಳೇ ಆತನ ಕೈ ಹಿಡಿದಿದ್ದವು.
            ವಿಕ್ರಮನ ತಂದೆ ರಾಜಾರಾಮ ಭಟ್ಟರಿಗೆ ಮಗ ಪಿಯುಸಿಯ ನಂತರ ಓದಲು ಇಷ್ಟವಿರಲಿಲ್ಲ. ಮನೆಯಲ್ಲಿ ಸಾಕಷ್ಟು ಜಮೀನಿದ್ದರೂ ಪಾರಂಪರಿಕವಾಗಿ ಬಂದ ವೈದಿಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಿದ್ದರು. ರಾಜಾರಾಮ ಭಟ್ಟರ ಪೌರೋಹಿತ್ಯಕ್ಕೆ ನೂರಾರು ಜನ ಶಿಷ್ಯರೂ ಇದ್ದರು. ತನ್ನಂತೆ ಮಗನೂ ವೈದಿಕ ವೃತ್ತಿಯಲ್ಲಿ ಮುಂದುವರಿಯಲಿ, ಮಂತ್ರವನ್ನು ಕಲಿಯಲಿ, ಭಟ್ಟತನಿಕೆ ಮುಂದುವರಿಸಲಿ ಎನ್ನುವ ಆಸೆ ರಾಜಾರಾಮ ಭಟ್ಟರದ್ದಾಗಿತ್ತು.
          ಅದಕ್ಕೆ ಇಂಬು ಎಂಬಂತೆ ಕಣ್ಣೀರು ಮನೆ ಎಂಬ ಯಾರೂ ಕೇಳಿರದ ಹೆಸರಿನ ಕುಗ್ರಾಮಕ್ಕೆ ಹೋಗಿ-ಬಂದು ಮಾಡಬೇಕೆಂದರೆ ಹರಸಾಹಸ ಪಡಬೇಕಿತ್ತು. ವಿನಾಯಕ ಓದುತ್ತೇನೆ ಎಂದರೂ ಅದಕ್ಕೆ ಎದುರಾಗಿ ನೂರಾರು ಸವಾಲುಗಳಿದ್ದವು. ದಟ್ಟ ಕಾಡು, ಮಳೆಗಾಲದಲ್ಲಿ ದಿನದ 24 ತಾಸುಗಳೂ ಜೊರಗುಡುವ ಮಳೆ, ಉಕ್ಕೇರಿ ಹರಿಯುವ ಹಳ್ಳ-ಕೊಳ್ಳಗಳು, ಸೇತುವೆಯೇ ಇಲ್ಲದ ರಸ್ತೆಗಳು ಈ ಎಲ್ಲ ಕಾರಣಗಳು ವಿಕ್ರಮನ ಓದಿನ ಶತ್ರುಗಳಾಗಿದ್ದವು. ಮಳೆಗಾಲದಲ್ಲಿ ದ್ವೀಪದಂತಾಗುತ್ತಿದ್ದ ಈ ಊರು ಒಮ್ಮೊಮ್ಮೆ ತಿಂಗಳಾನುಗಟ್ಟಲೆ ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಂಡುಬಿಡುತ್ತಿತ್ತು. ಪಿಯುಸಿ ಓದಲು ವಿಕ್ರಮ ಯಲ್ಲಾಪುರಕ್ಕೆ ಬರಲು ಅದೆಷ್ಟು ಕಷ್ಟಪಟ್ಟಿದ್ದ ಎನ್ನುವುದು ಅವನಿಗಷ್ಟೇ ಗೊತ್ತು. ರಾಜಾರಾಮ ಭಟ್ಟರೂ ಮಗನನ್ನು ಮುಂದಕ್ಕೆ ಓದಿಸಲು ತಯಾರಿರಲಿಲ್ಲ. `ಓದಿ ಕಡಿದು ಗುಡ್ಡೇ ಹಾಕುವುದೆಂತದ್ದಿದ್ದು.. ಮಂತ್ರ ಕಲ್ತಕಂಡು ಭಟ್ಟತನಿಕೆ ಮಾಡು. ಮಠಕ್ಕೆ ಕಳಿಸ್ತೆ. ಆರ್ ತಿಂಗ್ಳು ಇದ್ಕಂಡು ಬಾ..' ಎಂದು ಖಂಡತುಂಡವಾಗಿ ಹೇಳಿಬಿಟ್ಟಿದ್ದರು. ತಂದೆಯೊಡನೆ ಜಗಳವಾಡಿಕೊಂಡು ವಿಕ್ರಂ ಮನೆ ಬಿಟ್ಟು ಬಂದಿದ್ದ. ಮಂಗಳೂರನ್ನು ತಲುಪಿದ್ದ.
            ಮಂಗಳೂರಿಗೆ ಬಂದ ಹೊಸತರಲ್ಲಿ ವಿಕ್ರಮನಿಗೆ ಯಲ್ಲಾಪುರದಲ್ಲಿ ಕುಂಗ್ ಫೂ-ಕರಾಟೆಯನ್ನು ಕಲಿಸಿದ್ದ ಗುರುಗಳು ಬೆನ್ನಿಗೆ ನಿಂತಿದ್ದರು. ಅವರ ಸಹಾಯದಿಂದಲೇ ಕುಂಗ್ ಫೂ-ಕರಾಟೆಯ ಶಾಲೆಯೊಂದನ್ನು ತೆರೆದಿದ್ದ. ಆ ಶಾಲೆಯ ಮೂಲಕವೇ ಅನ್ನವನ್ನು ಸಂಪಾದಿಸಲಾರಂಭಿಸಿದ್ದ. ಇನ್ನು ಅವನ ವಯಸ್ಸಿನ ವಿಚಾರಕ್ಕೆ ಬಂದರೆ ಅವನಿನ್ನೂ ಇಪ್ಪತ್ತೈದರ ತರುಣ. ಉತ್ಸಾಹಿ ಯುವಕ.  ಸ್ಫುರದ್ರೂಪಿ. ಗುಡ್ಡ-ಬೆಟ್ಟಗಳಲ್ಲಿ, ಕಾಡು-ಕಣಿವೆಗಳಲ್ಲಿ ಓಡಾಡಿದ ಆತ ಸಹಜವಾಗಿಯೇ ಕಟ್ಟುಮಸ್ತಾಗಿದ್ದ.  ಮಾರ್ಷಲ್ ಆರ್ಟ್ ಕಲಿಯುವ ಸಂದರ್ಭದಲ್ಲಿ ಕಟ್ಟುಮಸ್ತಿನ ದೇಹಕ್ಕೆ ಇನ್ನಷ್ಟು ಸಾಣೆ ಹಿಡಿದ ಕಾರಣ ಮತ್ತಷ್ಟು ಆಕರ್ಷಕವಾಗಿದ್ದ. ನಾಲ್ಕು ಜನ ಒಟ್ಟಾಗಿ ಅವನ ಮೇಲೆ ಬಿದ್ದರೂ ಅವರನ್ನು ಮಣಿಸಬಲ್ಲ ತಾಕತ್ತನ್ನು ಹೊಂದಿದ್ದ ವಿಕ್ರಂ. ಜೊತೆಗೆ ಚಾಕಚಕ್ಯತೆ ಕೂಡ ಇತ್ತು.  ವಿಕ್ರಮನ ತಾಯಿ ಮನೆಯಲ್ಲಿ ವಿಕ್ರಮಾರ್ಜುನ ವಿಜಯವನ್ನು ಓದುವಾಗ ಹೆಸರು ಇಷ್ಟವಾಗಿ ವಿಕ್ರಮ ಎಂದು ಹೆಸರಿಟ್ಟಿದ್ದರಂತೆ. ಇಂತಹ ವಿಕ್ರಮನ ರೂಪಕ್ಕೆ, ಆಕರ್ಷಕ ವ್ಯಕ್ತಿತ್ವಕ್ಕೆ ಮರುಳಾಗದ ಜನರೇ ಇಲ್ಲ ಎಂದರೆ ಅತಿಶಯೋಕ್ತಿ ಖಂಡಿತ ಅಲ್ಲ.
(ಕಣ್ಣೀರು ಮನೆ ತಲುಪಲು ಇಷ್ಟು ಕಷ್ಟ ಪಡಲೇಬೇಕು)
             ವಿಕ್ರಮನ ತಾಯಿ ಲಕ್ಷ್ಮಿ. ಊರಿನವರ ಪಾಲಿಗೆ ಲಕ್ಷ್ಮಿಬಾಯಿ. ವಿಕ್ರಮನ ಪಾಲಿಗೆ `ಲಕ್ ಬಾಯಿ..' ತಮಾಷೆಯಿಂದ ತಾಯಿಯನ್ನು ಕರೆಯುತ್ತಿದ್ದಿದ್ದೇ ಹೀಗೆ. ಸಾತ್ವಿಕ ಗುಣದ ಲಕ್ಷ್ಮೀಬಾಯಿ ಎಂದೂ ಸಿಟ್ಟಾಗಿದ್ದನ್ನು ಯಾರೂ ಕಂಡಿಲ್ಲ.ಸದ್ಗುಣಿ, ಕರುಣಾಮಯಿ, ಸಹನಾಶೀಲೆ ಇತ್ಯಾದಿಗುಣಗಳನ್ನೂ ಪೋಣಿಸಿ ಬಿಡಬಹುದು. ಮಗ ಮಂಗಳೂರಿಗೆ ಹೊರಟಾಗ ಗಂಡ ರಾಜಾರಾಮ ಭಟ್ಟರಿಗೆ ಗೊತ್ತಾಗದಂತೆ ಸಹಾಯ ಮಾಡಿದ ಖ್ಯಾತಿ, ಪ್ರೀತಿ ಇವರದ್ದು.
             ಮನೆಯಲ್ಲಿದ್ದ ಇನ್ನೊಬ್ಬರು ಸದಸ್ಯರೆಂದರೆ ವಿಕ್ರಮನ ಅಜ್ಜಿ ಮಹಾಲಕ್ಷ್ಮಿ. ಅವರ ವಯಸ್ಸಿನ ಬಗ್ಗೆ ಸ್ಪಷ್ಟವಾಗಿ ಕೇಳಿದರೆ ಹೇಳುವುದು ಕಷ್ಟ. ಕೆವರು 80 ಎಂದರೆ ಮತ್ತೆ ಕೆಲವರು 85 ಎನ್ನುತ್ತಾರೆ. 90-95 ಎಂದು ಹೇಳುವವರೂ ಇದ್ದಾರೆ. ಅಜ್ಜಿಯನ್ನೇ ಕೆಳಿದರೆ ಶತಮಾನಗಳ ಕಥೆ ಹೇಳಿಬಿಟ್ಟಾರು. ಮುಪ್ಪಾದರೂ ಅಜ್ಜಿ ಗಟ್ಟಾಗಿದ್ದಳು. ಇವರನ್ನು ನೋಡಿ ವಿಕ್ರಮ ಯಾವಾಗಲೂ ಓಲ್ಡ್ ಈಸ್ ಗೋಲ್ಡ್ ಎನ್ನುತ್ತಿದ್ದ. ವಿಕ್ರಮನಿಗೆ ಅಜ್ಜಿಯೆಷ್ಟು ಪ್ರೀತಿ ಪಾತ್ರಳೋ ಅಜ್ಜಿಗೂ ವಿಕ್ರಮನೆಂದರೆ ಪ್ರಾಣ. ಪಂಚ ಪ್ರಾಣ. ಈಕೆಯ ಗುಣವರ್ಣನೆ ಮಾಡುವಾಗ ಹಲವಾರು ವಿಶೇಷಣಗಳನ್ನು ಸೇರಿಸಬಹುದು. ಇದು ವಯಸ್ಸಾದವರ ವಿಷಯವಾದ್ದರಿಂದ ಜಾಸ್ತಿ ಹೇಳದೆ ಮುಂದಕ್ಕೆ ಸಾಗುವುದು ಒಳಿತು. ಮಹಾಲಕ್ಷ್ಮಿ, ಮಹಾಲಕ್ಷ್ಮಮ್ಮ ಅವರು ತಮ್ಮ ಮೊಮ್ಮಗ ವಿಕ್ರಮನನ್ನು ಪ್ರೀತಿಯಿಂದ ಕರೆಯುವುದು `ವೀಕೂ...' ಎಂದು. ಇದಕ್ಕೆ ಪ್ರತಿಯಾಗಿ ವಿಕ್ರಮ ಅಜ್ಜಿಯ ಬಳಿ `ಯಾವ ದಿಕ್ಕಿನಿಂದ ನೋಡಿರೂ ನಾನು ವೀಕಾಗಿ ಕಾಣಿಸ್ತ್ನಿಲ್ಲೆ.. ಅದೆಂತಕ್ಕೆ ವೀಕೂ ಹೇಳ್ತೆ...' ಎಂದು ಕೇಳಿದರೆ ಅಜ್ಜಿ `ಚಿಕ್ಕಂದಿನಲ್ಲಿ ನೀನು ಬಹಳ ಸಣ್ಣ ಇದ್ದೆ.. ಅದ್ಕೆ ಹಂಗೆ ಕರೆಯೋದು..' ಎನ್ನುತ್ತಿದ್ದರು.
            ವಿಕ್ರಮನ ಕುಟುಂಬದ ಸದಸ್ಯರು ಇಷ್ಟೇ ಅಲ್ಲ. ಇನ್ನೂ ಒಬ್ಬರಿದ್ದಾರೆ. ಕುಟುಂಬದ ಕೊಟ್ಟ ಕೊನೆಯ ಸದಸ್ಯೆ. ವಿಕ್ರಮನ ತಂಗಿ ರಮ್ಯ. ವಿಕ್ರಮನಿಗಿಂತ ನಾಲ್ಕೈದು ವಸಂತಗಳಷ್ಟು ಚಿಕ್ಕವಳು. ಅವಳು ಯಲ್ಲಾಪುರದಲ್ಲಿ ಬಿ.ಎ ಮೊದಲ ವರ್ಷದಲ್ಲಿ ಓದುತ್ತಿದ್ದಳು. ವಿಕ್ರಮನ ಒತ್ತಾಯದಿಂದಲೇ ರಾಜಾರಾಮ ಭಟ್ಟರು ಮಗಳನ್ನು ಯಲ್ಲಾಪುರದಲ್ಲಿ ಕಾಲೇಜು ಕಲಿಕೆಗೆ ಹಾಕಿದ್ದರು. ವಾಚಾಳಿ ಗುಣದ ರಮ್ಯ ಸುಮ್ಮನಿದ್ದಳೆಂದರೆ ಏನೋ ಆಗಿದೆ ಎನ್ನುವ ತೀರ್ಮಾನಕ್ಕೆ ಬರಬಹುದಿತ್ತು.
**********
           ವಿಕ್ರಮ ಸ್ಥಾಪಿಸಿದ್ದ `ಅದ್ವೈತ ಆತ್ಮರಕ್ಷಣೆ ..' ಕೇಂದ್ರಕ್ಕೆ ಮಂಗಳೂರಷ್ಟೇ ಅಲ್ಲ ಅಕ್ಕಪಕ್ಕದ ಬಜಪೆ, ಉಲ್ಲಾಳ, ಕಾಸರಕೋಡ, ಸುರತ್ಕಲ್ ಈ ಮುಂತಾದ ಕಡೆಗಳಿಂದಲೂ ಯುವಕರು ಕಲಿಯಲು ಬರುತ್ತಿದ್ದರು. ಇವನ ಗರಡಿಯಲ್ಲಿ ಪಳಗಿದವರು ಸಾಕಷ್ಟು ಹೆಸರನ್ನೂ ಗಳಿಸುತ್ತಿದ್ದರು.
           ಹೀಗಿದ್ದಾಗ ಒಂದು ದಿನ ವಿಕ್ರಮ ಸ್ಥಾಪಿಸಿದ್ದ ಮಾರ್ಷಲ್ ಆರ್ಟ್ ಕಲಿಕಾ ಕೇಂದ್ರದ ಬಳಿಯಲ್ಲೇ ಇನ್ನೊಂದು ಮಾರ್ಷಲ್ ಆರ್ಟ್ ಕೇಂದ್ರ ಪ್ರಾರಂಭವಾಗಿತ್ತು. ಆರಂಭದಲ್ಲೇ ಸಾಕಷ್ಟು ಗಿಮಿಕ್ಕುಗಳನ್ನು ಮಾಡಿದ್ದ ಆ ಕೇಂದ್ರ `ಹೊಸ ನೀರು ಬಂದು ಹಳೇ ನೀರನ್ನು ಕೊಚ್ಚಿಕೊಂಡು ಹೋಯಿತು' ಎಂಬಂತೆ ತನ್ನತ್ತ ಎಲ್ಲರನ್ನೂ ಸೆಳೆಯಲಾರಂಭಿಸಿತ್ತು. ಸಾಕಷ್ಟು ಹಣವನ್ನು ಹೊಂದಿದ್ದ ಅದರ ಮಾಲೀಕರು ತರಹೇವಾರಿ ಜಾಹೀರಾತಿನ ಮೂಲಕ ಯಶಸ್ವಿಯಾಗಿದ್ದರು. 50ಕ್ಕೂ ಅಧಿಕ ಜನರಿದ್ದ ವಿಕ್ರಮನ ಕಲಿಕಾ ಕೇಂದ್ರದ ಪರಿಸ್ಥಿತಿ ಇದರಿಂದ ಯಾವ ಪರಿಣಾಮ ಎದುರಿಸಿತೆಂದರೆ ಕೊನೆ ಕೊನೆಗೆ ಕೇವಲ 15-20 ಜನರಷ್ಟೇ ಉಳಿಯುವಂತಾಯಿತು. ವಿಕ್ರಮನ ವೃತ್ತಿಗೆ ಬಲವಾದ ಹೊಡೆತ ಬೀಳಲಾರಂಭವಾಗಿತ್ತು, ಇದರಿಂದ ಚಿಂತಾಕ್ರಾಂತನಾದ ವಿಕ್ರಮ ಖಿನ್ನತೆಗೆ ಒಳಗಾಗಿ ಸದಾಕಾಲ ಇದರ ಬಗ್ಗೆಯೇ ಆಲೋಚನೆ ಮಾಡಲು ಆರಂಭಿಸಿದ್ದ.
(ಕಣ್ಣೀರು ಮನೆ ರಸ್ತೆಯ ಕಣ್ಣೀರು ತರಿಸುವ ದಾರಿ)
            ಅದೊಂದು ದಿನ ಇದೇ ಆಲೋಚನೆಯಲ್ಲಿ ಮುಂಜಾನೆ ಬೇಗನೇ ಎದ್ದು ತನ್ನ ಕಲಿಕಾ ಕೇಂದ್ರಕ್ಕೆ ಬಂದ ವಿಕ್ರಮ. ಅಷ್ಟರಲ್ಲಾಗಲೇ ಅಲ್ಲಿಗೆ ಬಂದು ನಿಂತಿದ್ದ ವಿಕ್ರಮನ ಆಪ್ತರಲ್ಲಿ ಆಪ್ತನಾದ ಗೆಳೆಯ ಪ್ರದೀಪ. ತಾನೂ ನಗುವುದು, ಇತರರನ್ನೂ ನಗಿಸುವುದು ಪ್ರದೀಪನ ಕಾರ್ಯ. ಧ್ವನಿ ಅಷ್ಟೇನೂ ಚನ್ನಾಗಿರಲಿಲ್ಲ. ಆದರೆ ಹಾಡುವ ಹುಚ್ಚು ಮಾತ್ರ ವಿಪರೀತವಿತ್ತು. ಹಾಡನ್ನು ಆತ ಹಾಡುತ್ತಾನೆ ಎನ್ನುವುದಕ್ಕಿಂತ ಅರಚುತ್ತಾನೆ ಎಂದರೆ ಸರಿಯಾಗುತ್ತಿತ್ತು. ಆದರೆ ಆತ ಜೀವನದಲ್ಲಿ ಅದೆಷ್ಟೋ ದೊಡ್ಡ ದೊಡ್ಡ ನೋವುಗಳನ್ನು ಎದುರಿಸಿದ್ದಾನೆ ಎನ್ನುವುದನ್ನು ಆತನ ಕಣ್ಣನ್ನು ನೋಡಿದರೆ ಅರ್ಥವಾಗಿ ಬಿಡುತ್ತಿತ್ತು.
             ಆತ ಚಿಕ್ಕವಯಸ್ಸಿನವನಾಗಿದ್ದರೂ ಬಹಳಷ್ಟು ಜೀವನಾನುಭವವನ್ನು ಕಂಡಿದ್ದ. ಪದೇ ಪದೆ ಅನುಭವಿಸುತ್ತಲೂ ಇದ್ದ. ಈತ ಮೂಲತಃ ಸಾಗರ ಕಡೆಯ ಹಳ್ಳಿಯೊಂದರ ಹುಡುಗ. ಪ್ರದೀಪ ಹುಟ್ಟಿದ ಕೆಲವೇ ವರ್ಷಗಳಲ್ಲಿ  ಕುಡುಕ ತಂದೆ ಪ್ರದೀಪನನ್ನೂ ಆತನ ತಾಯಿಯನ್ನೂ ಬಿಟ್ಟು ಮತ್ತೊಬ್ಬಳ ಜೊತೆಗೆ ಓಡಿಹೋದ. ತಾಯಿ ಕಷ್ಟಪಟ್ಟು ಸಾಕಿದ್ದಳು. ಹಾಗೂ ಹೀಗೂ ಪಿಯುಸಿ ಓದಿದ. ಪಿಯುಸಿ ಓದುತ್ತಿದ್ದಾಗ ಒಂದು ಹುಡುಗಿಯನ್ನು ಪ್ರೀತಿಸಿದ. ಆಕೆ ಆತನನ್ನು ತಿರಸ್ಕಾರ ಮಾಡಿದಳು. ಆಗ ಛಲಕ್ಕೆ ಬಿದ್ದ ಪ್ರದೀಪ ಅವಳ ಬಳಿ `ನೋಡು.. ಇನ್ನು ಆರೇಳು ವರ್ಷಗಳಲ್ಲಿ ಕರ್ನಾಟಕವೇ ನನ್ನನ್ನು ಹೊಗಳುವಂತೆ ಆಗುತ್ತೇನೆ...' ಎಂದು ಹೇಳಿ ಅವಳ ಕಡೆಗೆ ಸಿಟ್ಟಿನಿಂದ ಬಂದಿದ್ದ. ಅಲ್ಲಿಂದ ಊರು ಬಿಟ್ಟು ಬಂದವನಿಗೆ ಜೊತೆಯಾಗಿದ್ದು ಪ್ರದೀಪನಂತೆ ಮನೆಯಿಂದ ಬಂದಿದ್ದ ವಿಕ್ರಂ. ಇಬ್ಬರ ಭೆಟಿಯೂ ಮಂಗಳೂರಿನಲ್ಲೇ ಆಗಿತ್ತು. ಅಲ್ಲಿ, ಇಲ್ಲಿ ಏನೇನೋ ಕೆಲಸ ಮಾಡಿ ಕಾಲೇಜು ಮುಗಿಸಿದ ಆತನಿಗೆ ಇತ್ತೀಚೆಗೆ ದೊಡ್ಡದೊಂದು ಕೆಲಸವೂ ಸಿಕ್ಕಿತ್ತು. ಆದರೆ ಆತನಿಗೆ ಸಿಕ್ಕ ಕೆಲಸ ಏನು ಎನ್ನುವುದನ್ನು ಮಾತ್ರ ಯಾರಿಗೂ ಹೇಳಿರಲಿಲ್ಲ. ಗೆಳೆಯ ವಿಕ್ರಮನ ಬಳಿಯೂ ಹೇಳದೇ ಉಳಿದಿದ್ದ. ವಿಚಿತ್ರವೆಂದರೆ ಇಂತಹ ಪ್ರದೀಪ ಪದೇ ಪದೆ ಕಾಣೆಯಾಘಿಬಿಡುತ್ತಿದ್ದ. ಹೇಳದೇ ಕೇಳದೇ ಎಲ್ಲೋ ಹೋಗಿಬಿಡುತ್ತಿದ್ದ. ವಿಕ್ರಮ ಸಾಕಷ್ಟು ಬಾರಿ ಈ ಕುರಿತು ವಿಚಾಸಿದಿದ್ದನಾದರೂ ಉತ್ತರ ಬರದಿದ್ದಾಗ ಕೇಳುವುದನ್ನೇ ಬಿಟ್ಟಿದ್ದ. ಇಂತಹ ನಿಘೂಡತೆಯೇ ಮುಂದೊಂದು ದಿನ ಪ್ರದೀಪ ಹಾಗೂ ವಿಕ್ರಮನ ಬಾಳಲ್ಲಿ ಬಹುದೊಡ್ಡ ತಿರುವನ್ನು ನೀಡಲಿತ್ತು.

(ಮುಂದುವರಿಯುತ್ತದೆ)             

ಕರೆದಿದೆ ಬಾರಾ ದೇವಕಾರ

(ದೇವಕಾರದ ಸೊಬಗು)
ಉತ್ತರ ಕನ್ನಡ ಜಿಲ್ಲೆಯ ನಿಸರ್ಗದಲ್ಲಿ ಹೊರ ಜಗತ್ತಿಗೆ ಅಷ್ಟಾಗಿ ಪರಿಚಿತವಾಗದ ಅನೇಕ ಜಲಪಾತಗಳಿವೆ. ಸೌಂದರ್ಯ, ಅಬ್ಬರ, ದೈತ್ಯ ನಿಲುವು ಹೊಂದಿರುವ ಜಲಪಾತವೊಂದಿದೆ. ಹೊರ ಜಗತ್ತಿಗೆ ಅಷ್ಟಾಗಿ ಪರಿಚಿತವಾಗದ ಈ ಜಲಪಾತವೇ ದೇವಕಾರ ಜಲಪಾತ.
ದೇವಕಾರ ಹೆಸರಿಗೆ ತಕ್ಕಂತೆ ದೇವರದ್ದೇ ಕಾರುಬಾರಿನ ಜಾಗ ಎಂದರೂ ತಪ್ಪಾಗಲಿಕ್ಕಿಲ್ಲ. ದಟ್ಟ ಕಾಡು, ಎತ್ತ ನೋಡಿದರತ್ತ ಹಸಿರಿನ ಚೆಲುವು ತುಂಬಿರುವ ದೇವಕಾರ ಗ್ರಾಮದ ಹತ್ತಿರವೇ ಇದೆ ಜಲಪಾತ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಕಾರವಾರ ತಾಲೂಕುಗಳ ಗಡಿ ಪ್ರದೇಶದಲ್ಲಿರುವ ಈ ಜಲಪಾತ ತನ್ನ ಚೆಲುವಿನಿಂದ ಎಲ್ಲರನ್ನು ಸೆಳೆಯುತ್ತದೆ. ಪಶ್ಚಿಮ ಘಟ್ಟದ ತುದಿಯಿಂದ ಕಣಿವೆಯಾಳಕ್ಕೆ ಧುಮ್ಮಿಕ್ಕುವ ನೀರಿನ ಸೊಬಗನ್ನು ವೀಕ್ಷಿಸುವುದೇ ಖುಷಿಯ ಸಂಗತಿ. ಕಾಳಿ ನದಿಯನ್ನು ಸೇರುವ ಹಳ್ಳವೊಂದರ ಸೃಷ್ಟಿ ದೇವಕಾರ ಜಲಪಾತ. 15-200 ಅಡಿ ಎತ್ತರದ ಈ ಜಲಪಾತವನ್ನು ಮಳೆಗಾಲ ಹೊರತು ಪಡಿಸಿ ಉಳಿದೆಲ್ಲ ಕಾಲದಲ್ಲಿಯೂ ನೋಡಬಹುದಾಗಿದೆ.
ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತಹ ಕಾಡಿನ ನಡುವೆ ಇರುವ ಈ ಜಲಪಾತ ವೀಕ್ಷಣೆ ಮಾಡಬೇಕೆಂದರೆ ಸಾಹಸವನ್ನೇ ಮಾಡಬೇಕು. ಕೊಡಸಳ್ಳಿ ಹಾಗೂ ಕದ್ರಾ ಅಣೆಕಟ್ಟುಗಳ ನಡುವಿನ ಪ್ರದೇಶದಲ್ಲಿ ಇರುವ ದೇವಕಾರ ಗ್ರಾಮವನ್ನು ತಲುಪುವುದು ಸುಲಭವಲ್ಲ. ವರ್ಷದ ಆರು ತಿಂಗಳು ಈ ಊರು ದ್ವೀಪವೇ ಸರಿ. ಮೂರು ಕಡೆಯಲ್ಲಿ ಸುತ್ತುವರಿದಿರುವ ಕಾಳಿ ನದಿಯ ನೀರು. ಇನ್ನೊಂದು ಕಡೆ ಎದೆಮಟ್ಟಕ್ಕೆ ಏರಬೇಕಾದಂತಹ ಕಡಿದಾದ ಪಶ್ಚಿಮ ಘಟ್ಟ. ಇಂತಹ ಪ್ರದೇಶದಲ್ಲಿ ದೇವಕಾರ ಗ್ರಾಮವಿದೆ. ದೇವಕಾರ ಗ್ರಾಮದಿಂದ 1-2 ಕಿ.ಮಿ ಅಂತರದಲ್ಲಿ ಜಲಪಾತವಿದೆ. ಜಲಪಾತ ವರ್ಷದ ಎಲ್ಲ ಕಾಲದಲ್ಲಿಯೂ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ತನ್ನ ಸೊಬಗನ್ನು ನೂರ್ಮಡಿಸಿಕೊಳ್ಳುತ್ತದೆ. ಇಂತಹ ಜಲಪಾತವನ್ನು ಕಣ್ತುಂಬಿಕೊಳ್ಳಬೇಕೆಂದರೆ ಕನಿಷ್ಟ 10 ಕಿ.ಮಿ ನಡೆಯುವುದು ಕಡ್ಡಾಯ.
(ದೇವಕಾರದಲ್ಲಿರುವ ದೇವಸ್ಥಾನ)
ಈ ಜಲಪಾತವನ್ನು ತಲುಪಲು ಪ್ರಮುಖವಾಗಿ ಮೂರು ದಾರಿಗಳಿವೆ. ಯಲ್ಲಾಪುರದಿಂದ ಇಡಗುಂದಿ ಮಾರ್ಗವಾಗಿ ಕಳಚೆ ಗ್ರಾಮ ತಲುಪುವುದು. ಕಳಚೆ ಗ್ರಾಮದಿಂದ 12 ಕಿ.ಮಿ ಕಡಿದಾದ ಗುಡ್ಡ ಬೆಟ್ಟವನ್ನು ಹತ್ತಿಳಿದು ನಡೆದು ದೇವಕಾರ ಗ್ರಾಮವನ್ನು ತಲುಪುವುದು ಒಂದು ಮಾರ್ಗ. ಯಲ್ಲಾಪುರದಿಂದ ಇಡಗುಂದಿ ಮಾರ್ಗವಾಗಿ ಬಾರೆ ಎಂಬ ಊರಿನ ದಾರಿಯಲ್ಲಿ ಸಾಗುವುದು. ಅಲ್ಲಿಂದ ಕಾನುರು ಎಂಬ ಗ್ರಾಮದ ಬಳಿ ಬಂದು 3 ಕಿ.ಮಿ ನಡೆದರೆ ಜಲಪಾತದ ನೆತ್ತಿಯನ್ನು ತಲುಪಬಹುದು. ಆದರೆ ಜಲಪಾತದ ತಲೆಭಾಗದಿಂದ ಕೆಳಕ್ಕೆ ಇಳಿಯುವುದು ಅಸಾಧ್ಯ. ಅತ್ಯಂತ ಕಡಿದಾದ, ಇಳಿಜಾರು ಕಲ್ಲುಬಂಡೆಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ನುರಿತ ಚಾರಣಿಗರು ಮಾತ್ರ ಕೆಳಕ್ಕೆ ಇಳಿಯಬಹುದಾಗಿದೆ. ಮೇಲ್ಭಾಗದಿಂದ ಜಲಪಾತವನ್ನು ವೀಕ್ಷಿಸುವವರು ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಮೂರನೇ ಮಾರ್ಗ ಕಾರವಾರದಿಂದ ಆಗಮಿಸುವುದು. ಕಾರವಾರದಿಂದ ಕೈಗಾ ಮೂಲಕ ಕೊಡಸಳ್ಳಿಗೆ ಆಗಮಿಸಿ ಕೊಡಸಳ್ಳಿ ಅಣೆಕಟ್ಟೆ ಅಧಿಕಾರಿಗಳ ಅನುಮತಿ ಪಡೆದು ಅಣೆಕಟ್ಟು ದಾಟಿದರೆ ದೇವಕಾರಿಗೆ ತೆರಳುವ ಕಚ್ಚಾ ರಸ್ತೆ ಮಾರ್ಗ ಸಿಗುತ್ತದೆ. ಈ ರಸ್ತೆ ಮಾರ್ಗದಲ್ಲಿ 11 ಕಿ.ಮಿ ಸಂಚರಿಸಿದರೆ ದೇವಕಾರ ಗ್ರಾಮ ಸಿಗುತ್ತದೆ. ಸ್ಥಳೀಯರ ಬಳಿ ಜಲಪಾತದ ಬಗ್ಗೆ ಕೇಳಿದರೆ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಮಳೆಗಾಲದಲ್ಲಿ ಈ ರಸ್ತೆ ಮಾತ್ರ ನದಿ ನೀರಿನಲ್ಲಿ ಮುಳುಗಿರುತ್ತದೆ. ಬೇಸಿಗೆಯಲ್ಲಿ ಮಾತ್ರ ಈ ಮಾರ್ಗದಲ್ಲಿ ಸಂಚಾರ ಮಾಡಬಹುದು.
ದೇವಕಾರ ಗ್ರಾಮದಲ್ಲಿ ಕೆಲವೇ ಕೆಲವು ಮನೆಗಳಿವೆ. ಬಡ, ಮಧ್ಯಮ ವರ್ಗದ ಕುಟುಂಬಗಳು ಇಲ್ಲಿ ವಾಸ ಮಾಡುತ್ತಿವೆ. ಇಲ್ಲಿಗೆ ಪ್ರವಾಸಿಗರು ಬರುವುದು ಕಡಿಮೆ. ಆಗಮಿಸುವ ಪ್ರವಾಸಿಗರಿಗೆ ಕೇವಲ ಜಲಪಾತವನ್ನು ತೋರಿಸುವ ಕಾರ್ಯವನ್ನು ಮಾತ್ರ ಸ್ಥಳೀಯರು ಮಾಡುತ್ತಾರೆ. ಪ್ರವಾಸಿಗರಿಗೆ ಅಗತ್ಯವಾದ ಊಟ, ತಿಂಡಿಗಳನ್ನು ಇಲ್ಲಿಗೆ ಬರುವಾಗ ಪ್ರವಾಸಿಗರೇ ತರತಕ್ಕದ್ದು. ಆಧುನಿಕ ಜಗತ್ತಿನ ಸೌಲಭ್ಯಗಳು ಈ ಊರಿಗೆ ಇನ್ನೂ ತಲುಪಿಲ್ಲದ ಕಾರಣ ಈ ಊರಿನ ಪರಿಸರವನ್ನು ಮಲಿನ ಮಾಡುವುದು ನಿಷಿದ್ಧ. ಇಲ್ಲಿ ಮೊಬೈಲ್ ರಿಂಗಣಿಸುವುದಿಲ್ಲ. ಬಸ್ಸುಗಳು, ವಾಹನಗಳ ಸುಳಿವಿಲ್ಲ. ವಿದ್ಯುತ್ ಸಂಪರ್ಕ ಕೆಲವೇ ಮನೆಗಳಿಗಿದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಬೆಳಿಗ್ಗೆ ಮುಂಜಾನೆ ಜಲಪಾತ ವೀಕ್ಷಣೆಗೆ ಬಂದರೆ ಸಂಜೆ ಮರಳಲೇ ಬೇಕು. ದಟ್ಟ ಕಾಡು ಇದಾದ್ದರಿಂದ ಕಾಡು ಪ್ರಾಣಿಗಳ ಹಾವಳಿ ಸದಾ ಇರುತ್ತದೆ. ಸ್ಥಳೀಯರ ಮಾರ್ಗದರ್ಶನವಿಲ್ಲದೇ ಇಲ್ಲಿಗೆ ಆಗಮಿಸುವುದು ಅಪಾಯಕರ.
(ಕೊಡಸಳ್ಳಿ ಅಣೆಕಟ್ಟು)
ದೇವಕಾರ ಗ್ರಾಮದಲ್ಲೊಂದು ದೇವಾಲಯವಿದೆ. ಜಲಪಾತಕ್ಕೆ ಆಗಮಿಸುವವರು ಈ ದೇವಾಲಯದ ಬಳಿ ವಿರಮಿಸಬಹುದು. ದೇವರಿಗೆ ಪೂಜೆ ಮಾಡಿ ಧನ್ಯತೆಯನ್ನು ಪಡೆಯಬಹುದು. ಆಗಮಿಸುವ ಮಾರ್ಗ ಮಧ್ಯದಲ್ಲಿ ಕಾಳಿ ನದಿಯ ವಿಹಂಗಮ ನೋಡವನ್ನೂ ನೋಡಬಹುದು. ಕೊಡಸಳ್ಳಿ ಅಣೆಕಟ್ಟು ಹಾಗೂ ಕದ್ರಾ ಅಣೆಕಟ್ಟಿನ ಹಿನ್ನೀರಿನ ಸೊಬಗನ್ನು ವೀಕ್ಷಿಸಬಹುದು.
ಕಷ್ಟಪಟ್ಟು ಆಗಮಿಸಿದರೆ ಜಲಪಾತ ಇಷ್ಟವಾಗುತ್ತದೆ. 10-12 ಕಿ.ಮಿ ದೂರದ ಟ್ರೆಕ್ಕಿಂಗಿನ ಸುಸ್ತು, ಕಷ್ಟವನ್ನೆಲ್ಲ ಜಲಪಾತದ ಸೊಬಗು ಒಂದೇ ಏಟಿಗೆ ಓಡಿಸಿಬಿಡುತ್ತದೆ. ತಣ್ಣನೆಯ ಜಲಪಾತದ ನೀರಂತೂ ಮನಸ್ಸಿನ ಎಲ್ಲ ದುಃಖ, ಕಷ್ಟಗಳಿಗೆ ಪೂರ್ಣವಿರಾಮ ಹಾಕಿಬಿಡುತ್ತದೆ. ಹೊಟ್ಟೆಗೆ ಅಮೃತದಂತಹ ಸವಿಯನ್ನು ನೀಡುತ್ತದೆ. ದೈತ್ಯ ಬಂಡೆಗಳ ಸಾಲಿನಿಂದ ಧುಮ್ಮಿಕ್ಕುವ ಜಲಪಾತ ನೋಡಿದಷ್ಟೂ ನೋಡಬೇಕೆನ್ನಿಸುತ್ತದೆ. ಹಾಲ್ನೊರೆಯ ಸೊಬಗಂತೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಮಳೆಗಾಲದ ನಂತರ ನೀರು ಹೆಚ್ಚಾಗಿರುವ ಸಂದರ್ಭದಲ್ಲಿ ಈ ಜಲಪಾತ ಭೋರೆನ್ನುವ ಸದ್ದು ಮೂರ್ನಾಲ್ಕು ಕಿ.ಮಿ ವರೆಗೂ ಕೇಳಿಸುತ್ತದೆ. ಗವ್ವೆನ್ನುವ ಕಾಡಿನಲ್ಲಿ ಜಲಪಾತದ ಭೋರೆನ್ನುವ ಸದ್ದು ಒಳ್ಳೆಯ ಅನುಭೂತಿಯನ್ನು ನೀಡುತ್ತದೆ. ನೀವೂ ಈ ಅನುಭವವನ್ನು ಸವಿಯಬೇಕಿದ್ದರೆ ಜಲಪಾತಕ್ಕೆ ತೆರಳಲೇ ಬೇಕು. ಹಾಗಿದ್ರೆ ಯಾಕೆ ತಡ? ಈಗಲೇ ರೆಡಿ ಮಾಡಿಕೊಳ್ಳಿ ನಿಮ್ಮೆಲ್ಲ ವಸ್ತುಗಳನ್ನು. ಹೊರಡಲು ತಯಾರಾಗಿ.
ಜಲಪಾತಕ್ಕೆ ತಲುಪುವ ಬಗೆ
ಬೆಂಗಳೂರಿನಿಂದ ಆಗಮಿಸುವವರು ಹುಬ್ಬಳ್ಳಿ ಅಥವಾ ಶಿವಮೊಗ್ಗ-ಶಿರಸಿ ಮೂಲಕ ಯಲ್ಲಾಪುರ ತಲುಪಿ ಅಲ್ಲಿಂದ ಬಸ್ ಅಥವಾ ವಾಹನ ಮೂಲಕ ಕಳಚೆ ತಲುಪಿ ಅಲ್ಲಿಂದ ಟ್ರೆಕ್ಕಿಂಗ್ ಮೂಲಕ ಜಲಪಾತ ತಲುಬಹುದು. ಮಂಗಳೂರಿನ ಕಡೆಯವರು ಕಾರವಾರ ತಲುಪಿ ಕೈಗಾ-ಕೊಡಸಳ್ಳಿ ಮೂಲಕ ಕಾಳಿ ನದಿ ದಾಟಿ ಟ್ರೆಕ್ಕಿಂಗ್ ಮಾಡಿ ಜಲಪಾತದ ಒಡಲು ತಲುಪಬಹುದು. ಹುಬ್ಬಳ್ಳಿಯಲ್ಲಿ ಹತ್ತಿರದ ವಿಮಾನ ನಿಲ್ದಾಣವಿದೆ. ಅಂಕೋಲಾ, ಕಾರವಾರದಲ್ಲಿ ರೈಲು ನಿಲ್ದಾಣಗಳಿವೆ. ಕಾರವಾರದಿಂದ ಕೊಡಸಳ್ಳಿ, ಯಲ್ಲಾಪುರದಿಂದ ಕಳಚೆಯ ವರೆಗೆ ಸರ್ಕಾರಿ ಬಸ್ ಓಡಾಡುತ್ತದೆ. ಅಲ್ಲಿಂದ ಟ್ರೆಕ್ಕಿಂಗ್ ಅನಿವಾರ್ಯ.

Monday, December 15, 2014

ಅಘನಾಶಿನಿ ಕಣಿವೆಯಲ್ಲಿ-1

ಆತ್ಮೀಯರೇ...
(ಮಂಗಳೂರು ರೈಲ್ವೆ ನಿಲ್ದಾಣ)
                   ನಾನು ಪಿಯುಸಿಯಲ್ಲಿದ್ದಾಗ ಬರೆಯುವ ಹುಕಿ ಹುಟ್ಟಿದ ಕಾರಣ ಅಘನಾಶಿನಿ ಕಣಿವೆಯಲ್ಲಿ.. ಎನ್ನುವ ಕಾದಂಬರಿಯೊಂದನ್ನು ಬರೆಯಲು ಆರಂಭಿಸಿದೆ. ಪ್ರಾರಂಭದ ದಿನಗಳಲ್ಲಿ ಸರಾಗವಾಗಿ ಬರೆದ ಕಾದಂಬರಿ ನಂತರದ ದಿನಗಳಲ್ಲಿ ನಿಧಾನವಾಯಿತು. ಕೊನೆ ಕೊನೆಗೆ ಎಷ್ಟು ಕುಂಟುತ್ತ ಸಾಗಿತೆಂದರೆ ಇದುವರೆಗೂ ಅದನ್ನು ಮುಗಿಸಲು ಸಾಧ್ಯವಾಗಿಲ್ಲ.
                 ಆ ದಿನಗಳಲ್ಲಿ ನಾನು ಕಾದಂಬರಿ ಬರೆಯುತ್ತಿರುವುದನ್ನು ತಿಳಿದಿದ್ದ ಪರಿಚಯದವರು, ದೋಸ್ತರೆಲ್ಲ ಎಂದಿಗೂ ತಮಾಷೆ ಮಾಡುವಷ್ಟು ಆಗಿಬಿಟ್ಟಿದೆ. ಈ ಕಾದಂಬರಿ ಬರೆಯಲು ಆರಂಭಿಸಿದ ನಂತರ ಅದೆಷ್ಟೋ ಕಥೆಗಳನ್ನು, ಕವಿತೆಗಳನ್ನು ನಾನು ಬರೆದಿದ್ದೇನೆ. ಆ ನಂತರವೇ ಬೆಂಗಾಲಿ ಸುಂದರಿ ಎನ್ನುವ ಕಾದಂಬರಿಯನ್ನೂ ಬರೆದು ಮುಗಿಸಿದೆ. ಆದರೆ ಅಘನಾಶಿನಿ ಕಣಿವೆಯಲ್ಲಿ ಕಾದಂಬರಿ ಬರವಣಿಗೆ ಕೆಲಸ ಮಾತ್ರ ಮುಂದುವರಿದಿರಲಿಲ್ಲ ನೋಡಿ. ಈಗೆಲ್ಲೋ ಏನನ್ನೋ ಹುಡುಕುತ್ತಿದ್ದಾಗ ಮತ್ತೆ ಅಘನಾಶಿನಿ ಕಣಿವೆಯಲ್ಲಿ ಕಾದಂಬರಿಯ ಅಪೂರ್ಣ  ಹಸ್ತಪ್ರತಿ ಸಿಕ್ಕಿತು. ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ.. ಆನಂದಿಸಿ..
               ಮಲೆನಾಡು, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಂಟಕಲ್ಲು ಈ ಸುತ್ತಮುತ್ತವೇ ಕಾದಂಬರಿ ಓಡಾಡುತ್ತದೆ. ನಡು ನಡುವೆ ಸಿನಿಮಾದವರು ಫಾರಿನ್ ಗೆ ಹೋಗಿ ಶೂಟಿಂಗ್ ಮಾಡುತ್ತಾರಲ್ಲ ಹಾಗೆ ಬೆಂಗಳೂರು ಹಾಗೂ ಮಂಗಳೂರು ಮುಂತಾದ ನಗರದಗಳ ದರ್ಶನವೂ ಇದೆ. ಕುತೂಹಲ ಹುಟ್ಟಿಸುವಂತಹ, ಪತ್ತೆದಾರಿ ಕಾದಂಬರಿ ಇದು ಎನ್ನುವುದನ್ನು ಮೊದಲೇ ಹೇಳಿಬಿಡುತ್ತೇನೆ. ಆ ದಿನಗಳ ನನ್ನ ಮೊದಲ ಕಾದಂಬರಿ ಪ್ರಯತ್ನವಾಗಿರುವುದರಿಂದ ಸ್ವಲ್ಪ ಕಷ್ಟಪಟ್ಟಾದರೂ ಓದಿ. ಸಲಹೆ ನೀಡಿ.
               ಇಲ್ಲಿ ಬರೆಯುತ್ತಲೇ ಕಾದಂಬರಿಯನ್ನು ಪೂರ್ಣಗೊಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಪಿಯುಸಿ ದಿನಗಳ ಕಾದಂಬರಿಯ ಆರಂಭವಾಗಿರುವ ಕಾರಣ ಅಲ್ಪ-ಸ್ವಲ್ಪ ಬಾಲಿಷವೂ ಆಗಿರಬಹುದು. ಸ್ವಲ್ಪ ಸುಧಾರಿಸಿಕೊಂಡು ಓದಿ.. ಅಭಿಪ್ರಾಯಗಳನ್ನು ತಿಳಿಸಿ. ನಾನು ಕುತೂಹಲಿಗನಾಗಿದ್ದೇನೆ. ಇನ್ನು ಮುಂದೆ ನೀವುಂಟು, ಕಾದಂಬರಿಯುಂಟು.

***
**1**
          ಉದ್ದನೆಯ, ಸುಂದರ ಕಡಲತೀರ. ಮನಮೋಹಕ ಸೂರ್ಯಾಸ್ತದ ಚಿತ್ರ ಕಾಣುವ ಪ್ರದೇಶ. ಕ್ಷಣ ಕ್ಷಣಕ್ಕೂ ಬಂದು ಭೂಮಿಯನ್ನು ಚುಂಬಿಸುವ ಮೋಹಕ ಸಾಗರ ಅಲೆಗಳು. ಕಣ್ಣೆವೆಯಿಕ್ಕುವ ವರೆಗೂ ಕಾಣುವ ಜಲಧಿ. ಆ ಜಲಧಿಯನ್ನೇ ಬಾಚಿ ತಬ್ಬಲು ಯತ್ನಿಸುತ್ತಿರುವ ನೀಲಾಕಾಶ. ಸಮುದ್ರ ಚುಂಬನದ ಕರೆಗೆ ನಾಚಿ ನೀರಾಗಿ, ಬಳುಕಿ, ಬಾಗಿ ನಿಂತಿರುವ ನಾರಿಕೇಳ ವೃಕ್ಷ ಸಮೂಹ. ಸನಿಹದಲ್ಲೇ ಬೆಳೆದ, ಬೆಳೆಯುತ್ತಿರುವ ನಗರ ಹಾಗೂ ಅದರ ವಿಶಾಲ ಬಂದರು. ಬಂದರಿಗೆ ಬರುತ್ತಿರುವ ಹಡಗುಗಳು. ಹತ್ತಿರ ಬಂದಂತೆಲ್ಲ ಅವುಗಳ ಸದ್ದು ನೀಡುವ ಅನಿರ್ವಚನೀಯ ಭಯ. ಅವುಗಳ ಆಗಮನ, ನಿರ್ಗಮನದ ದೃಶ್ಯ ನೋಡುಗರಿಗೆ ಹೊಸದೊಂದು ಅನುಭೂತಿಯನ್ನು ತರುತ್ತಿತ್ತು. ಎಷ್ಟು ನೋಡಿದರೂ ಬೇಸರ ತರದ ಆ ಪ್ರದೇಶವೇ ಮಂಗಳೂರು. ಅಲ್ಲಿನ ಪ್ರಕೃತಿ ಸೊಬಗು, ರಮ್ಯತೆ ನೋಡುಗರನ್ನು ಮೈಮರೆಸುವಂತಿತ್ತು.
             ಮಂಗಳೂರು ಎಂಬ ಹೆಸರೇ ಮನಮೋಹಕ. ಅಲ್ಲಿನ ಕಡಲ ಕಿನಾರೆಗಳು ಇನ್ನಷ್ಟು ಸುಂದರ. ಆ ಅರಬ್ಬೀ ಸಮುದ್ರ, ಆ ಹೊನ್ನಿನ ವರ್ಣದ ರಾಶಿ ರಾಶಿ ಉಸುಕು, ರಾಷ್ಟ್ರೀಯ ಹೆದ್ದಾರಿಗುಂಟ ಭರ್ರೆಂದು ಸಾಗುವ ವಾಹನಗಳ ಸದ್ದು, ಸಮರೋಪಾದಿಯಲ್ಲಿ ಬೆಳೆಯುತ್ತಿರುವ ಮಂಗಳೂರು ಅಪರೂಪದ ತಾಣಗಳಲ್ಲಿ ಒಂದೆಂದರೆ ತಪ್ಪಲ್ಲ.
(ಮಂಗಳೂರಿನ ಕಡಲ ಕಿನಾರೆ)
             ಅದು ಮಂಗಳೂರಿನ ರೈಲ್ವೆ ನಿಲ್ದಾಣ. ಒಂದೆರಡು ರೈಲುಗಳಾಗಲೇ ಪಯಣದ ನಡುವೆ ಮಂಗಳೂರಿನಲ್ಲಿ ವಿಶ್ರಮಿಸುತ್ತಿದ್ದವು. ಮತ್ತೊಂದೆರಡು ರೈಲುಗಳು ಕೂ ಹೊಡೆದು ಮುಂದಕ್ಕೆ ಸಾಗುತ್ತಿದ್ದವು. ಪ್ರಯಾಣಿಕರೋ ತಮ್ಮ ತಮ್ಮ ರೈಲಿನಲ್ಲಿ ಏರಾಟ, ಇಳಿದಾಟ ನಡೆಸಿದ್ದರು. ತಮ್ಮ ಪಾಡಿಗೆ ತಾವಿದ್ದರು. ಕೆಲವರು ಪ್ಲಾಟ್ ಫಾರ್ಮಿನಲ್ಲಿ ನಡೆಯುತ್ತಲೋ, ಕುಳಿತೋ ಕಾಲ ತಳ್ಳುತ್ತಿದ್ದರು. ಚಾಯ್ ಮಾರುವವರು ರೈಲಿಂದ ರೈಲಿಗೆ ಹೈಜಂಪ್, ಲಾಂಗ್ ಜಂಪ್ ಮಾಡುತ್ತಿದ್ದರು. ಭಿಕ್ಷುಕರಂತೂ ಮತ್ತಿನ್ಯಾವ ಸ್ಥಳದಲ್ಲಿ ಭಿಕ್ಷೇ ಬೇಡಬೇಕು ಎಂದು ಆಲೋಚಿಸುತ್ತಿದ್ದರು. ಒಟ್ಟಿನಲ್ಲಿ ರೈಲ್ವೆ ನಿಲ್ದಾಣ ಸಾಕಷ್ಟು ಕ್ರಿಯಾಶೀಲವಾಗಿತ್ತು ಎನ್ನಬಹುದು.
             ಹೀಗಿದ್ದಾಗ ಅಲ್ಲಿಗೆ ರೈಲೊಂದು ಬಂದಿತು. ಕೇರಳದ ತಿರುವನಂತಪುರಂನಿಂದ ಮುಂಬಯಿಗೆ ಹೊರಟಿದ್ದ ರೈಲದು. ರೈಲು ಬಂದಿದ್ದೇ ತಡ ನಿಲ್ದಾಣದಲ್ಲಿ ಒಮ್ಮೆಲೆ ವಿದ್ಯುತ್ ಸಂಚಾರ. ಚಹಾ ಮಾಡುವವರು ತಮ್ಮ ವಿಶಿಷ್ಟ ದನಿಯಿಂದ ಚೋಯ್ ಚೋಯ್ ಎನ್ನಲು ಆರಂಭಿಸಿದರೆ ಮತ್ತೆ ಕೆಲವರು ಶೇಂಗಾ, ಕಳ್ಳೇಕಾಯ್.. ಎಂದು ಕೂಗಲಾರಂಭಿಸಿದರು.
            ಆ ರೈಲಿನ ಪ್ರಥಮದರ್ಜೆ ಬೋಗಿಯೊಂದರಿಂದ ಇಳಿದ ವಿಕ್ರಂ. ತನ್ನ ಲಗೇಜುಗಳನ್ನೆಲ್ಲ ಇಳಿಸಿಕೊಂಡು ಫ್ಲಾಟ್ ಫಾರ್ಮಿನ ಮೇಲೆ ನಡೆಯಲಾರಂಭಿಸಿದ. ಆ ತಕ್ಷಣ ಅದೆಲ್ಲಿದ್ದರೋ ಏನೋ, ಇಬ್ಬರು ವ್ಯಕ್ತಿಗಳು ಓಡಿ ಬಂದು ಲಗೇಜನ್ನು ತನಗೆ ಕೊಡಿ, ತನಗೇ ಕೊಡಿ ಎಂಬಂತೆ ದುಂಬಾಲು ಬಿದ್ದರು. ತಮ್ಮ ತಮ್ಮಲ್ಲೇ ಜಗಳದ `ನಾಟಕ' ಪ್ರಾರಂಭಿಸಿದರು. ಇದರಿಂದ ವಿಕ್ರಮನಿಗೆ ಒಮ್ಮೆಲೇ ರೇಗಿ ಹೋಯಿತು. ಮೊದಲೇ ರೈಲಿನ ಪ್ರಯಾಣದಿಂದ ಸುಸ್ತಾಗಿದ್ದ ಈತ ಅವರತ್ತ ತಿರುಗಿ `ನೋಡಿ ನನ್ನ ವಸ್ತುಗಳು ನನಗೇನೂ ಭಾರವಲ್ಲ. ನೀವ್ಯಾರೂ ಈ ಲಗೇಜನ್ನು ಹೊರುವುದು ಬೇಡ. ನನ್ನಲ್ಲಿ ಬಹಳ ತಾಕ್ಕತ್ತುಂಟು.. ಸುಮ್ಮನೆ ಪಿರಿ ಪಿರಿ ಮಾಡಬೇಡಿ..' ಎಂದು ಹೇಳಿದವನೇ ಜೋರಾಗಿ ನಡೆದು ಹೊರಟು ಹೋದ.
            ಜಗಳ ಮಾಡಿಕೊಂಡ ಇಬ್ಬರೂ `ಬಂದ ದಾರಿಗೆ ಸುಂಕವಿಲ್ಲ..' ಎಂದುಕೊಳ್ಳುತ್ತಾ ಇನ್ನೊಬ್ಬನಿಗೆ ದುಂಬಾಲು ಬೀಳಲು ಹೊರಟರು.
           ಇತ್ತ ವಿಕ್ರಂ ರೈಲು ನಿಲ್ದಾಣದಿಂದ ಹೊರಬಂದು ಟ್ಯಾಕ್ಸಿಯೊಂದನ್ನು ಹಿಡಿದು ಸುಭಾಷಚಂದ್ರ ಭೋಸ್ ನಗರದಲ್ಲಿನ ತನ್ನ ಬಾಡಿಗೆ ಮನೆಯಲ್ಲಿಗೆ ಬಂದು ಸ್ನಾನ ಮಾಡಿ ಮನಸ್ಸನ್ನು ಹಗುರಾಗಿಸಿಕೊಂಡ. ತಾನು ಹೋಗಿ ಬಂದ ಕೆಲಸದ ಬಗ್ಗೆ ಯೋಚಿಸತೊಡಗಿದ.
              ವಿಕ್ರಂ ಒಬ್ಬ ಸಾಹಸಿ. ಅವನೊಬ್ಬ ಕುಂಗ್ ಫೂ ಮಾರ್ಷಲ್ ಆರ್ಟಿಸ್ಟ್. ಇದರೊಂದಿಗೆ ಕರಾಟೆಯನ್ನೂ ಕಲಿತಿದ್ದ. ಜೊತೆಗೆ ಪ್ರಖ್ಯಾತ ಜಿಮ್ನಾಸ್ಟಿಯನ್ ಕೂಡ ಆಗಿದ್ದ. ಜಿಮ್ನಾಸ್ಟಿಕ್ ನಲ್ಲಿ ಹಲವಾರು ಪದಕಗಳನ್ನೂ ಗಳಿಸಿದ್ದ. ಏನೇ ತೊಂದರೆ ಬಂದರೂ ಎದೆಗುಂದದಂತೆ ಬದುಕುವುದನ್ನು ಆತ ರೂಢಿಸಿಕೊಂಡಿದ್ದ. ಕೈ ಹಾಕಿದ ಕೆಲಸವನ್ನು ಎಂದಿಗೂ ಅರ್ಧಕ್ಕೆ ಬಿಡುವವನಲ್ಲ. ಮಂಗಳೂರಿನಲ್ಲಿ ಆತ ಒಂದು ಕುಂಗ್ ಫೂ ಹಾಗೂ ಕರಾಟೆಯ ತರಬೇತಿ ಕೇಂದ್ರವೊಂದನ್ನು ಪ್ರಾರಂಭಿಸಿದ್ದ. ಅದ್ವೈತ ಆತ್ಮರಕ್ಷಣೆ ಎಂಬ ಸುಂದರವಾದ ಹೆಸರನ್ನೂ ಅದಕ್ಕೆ ಇಟ್ಟಿದ್ದ. ಎಲ್ಲೇ ಕುಂಗ್ ಫೂ, ಕರಾಟೆಯ ಬಗ್ಗೆ ಸ್ಪರ್ಧೆಗಳಿದ್ದರೂ ಅಲ್ಲೆಲ್ಲ ಇವನ ತರಬೇತಿ ಕೇಂದ್ರಕ್ಕೆ ಪ್ರಶಸ್ತಿಗಳು ಬಂದೇ ಬರುತ್ತಿದ್ದವು. ಇವನಿಂದ ಕಲಿತ ಹಲವಾರು ಜನ ರಾಷ್ಟ್ರವ್ಯಾಪಿ ಹೆಸರಾಗಿದ್ದರು. ಎಲ್ಲೆಡೆ ತಮ್ಮ ಪ್ರತಿಭೆ ಮೆರೆದಿದ್ದರು. ಇದೇ ಕಾರಣಕ್ಕಾಗಿ ವಿಕ್ರಂ ಕೊಚ್ಚಿಗೆ ಹೋಗಿ ವಾಪಾಸ್ ಬಂದಿದ್ದ. ಅಲ್ಲಿನ ಒಂದೆರಡು ಕರಾಟೆ ಕೇಂದ್ರಗಳೂ ವಿಕ್ರಂನ ಸಲಹೆ ಪಡೆದಿದ್ದವು. ಈ ಬಗ್ಗೆಯೇ ವಿಕ್ರಂ ಆಲೋಚನೆ ಮಾಡತೊಡಗಿದ್ದ.
***
             ಇದೇ ಸಂದರ್ಭದಲ್ಲಿ ಆತನ ರೂಮಿನ  ಕಂಪೌಂಡಿನ ಹೊರಗಿನಿಂದ ಒಬ್ಬ ವ್ಯಕ್ತಿ ನಿಂತು ವಿಕ್ರಂ ಮಾಡುವ ಕೆಸವನ್ನೆಲ್ಲಾ ವೀಕ್ಷಿಸುತ್ತಿದ್ದ. ವಿಕ್ರಮನಿಗೆ ಈ ಬಗ್ಗೆ ತಿಳಿದೇ ಇರಲಿಲ್ಲ. ವಿಕ್ರಮ್ ಎಲ್ಲೇ ಹೋಗಲಿ, ಏನೇ ಮಾಡಲಿ ಆತನನ್ನೇ ಹಿಂಬಾಲಿಸಿ ವಿಕ್ರಂ ಮಾಡುವ ಕೆಲಸವನ್ನೆಲ್ಲ ವೀಕ್ಷಿಸುತ್ತಿದ್ದ. ಅಪರಿಚಿತ ವ್ಯಕ್ತಿ ತನ್ನ ಬಗ್ಗೆ ಚಿಕ್ಕ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.

(ಮುಂದುವರಿಯುತ್ತದೆ..)

Friday, December 12, 2014

ಹನಿ-ಮಿನಿ ಚುಟುಕುಗಳು

ಫೂಲನ್ ದೇವಿ

ಹಿಂದೊಮ್ಮೆ ಆಕೆಯಿದ್ದಳು
ಫೂಲನ್ ದೇವಿ |
ಗುಂಡು ಹೊಡೆದರು ಜನ
ಆಕೆಯಾದಳು Fallen ದೇವಿ ||

ಸತ್ಯಾಗ್ರಹ

ಸತ್ಯಾಗ್ರಹವೆಂದರೆ ಸತ್ಯದ
ಆಗ್ರಹ ಎಂದವರಾರು?
ಹಾಗೆಂದರೆ ಸತಿ ಮಾಡಿದ
ಆಗ್ರಹ ಎಂದರ್ಥವಂತೆ ||

ಮದುವೆ

ಪ್ರೀತಿಸಿ ಪ್ರೀತಿಸಿ
ಸುಸ್ತಾಗುವವರಿಗೆ ಸಿಗುವ
ಒಂದು ಸ್ಟಾಪು |
ಫಾರ್ ಎ ಛೇಂಜ್ ರೂಟು ||

ಆಸ್ಟ್ರೇಲಿಯಾದ ಗೆಲುವು

ಚಿಂತಿಸಬೇಡಿ ಈ ಮ್ಯಾಚಿನಲ್ಲೂ
ಗೆಲ್ತಾರೆ ಆಸ್ಟ್ರೇಲಿಯಾದವರು |
ಯಾಕಂದ್ರೆ ಅವರ
ಜೊತೆಗಿದ್ದಾನೆ ಅಂಪಾಯರ್ರು ||


Thursday, December 4, 2014

ಮುಪ್ಪಿನಲ್ಲೂ ಮುಕ್ಕಾಗದ ಕ್ರಿಯಾಶೀಲತೆ

ದೇಹಕ್ಕೆ ಮುಪ್ಪಾಗಿದ್ದರೂ ಕಲೆಗೆ, ಕ್ರಿಯಾಶೀಲತೆಗೆ ಮುಪ್ಪಿಲ್ಲ ಎನ್ನುವುದಕ್ಕೆ ನಗರದ ವೀರಭದ್ರಗಲ್ಲಿಯ ನಿವಾಸಿ ಮೀನಾಕ್ಷಿ ಶಿವಪ್ಪ ಬೆಂಡೀಗೇರಿ ಇವರೇ ಸಾಕ್ಷಿ. ವಯಸ್ಸು ಎಂಭತ್ತಾಗಿದ್ದರೂ ಚಟುವಟಿಕೆಯಿಂದ ಕೆಲಸ ಮಾಡುವ ಇವರ ಉತ್ಸಾಹ ಕುಂದಿಲ್ಲ.
ಮೀನಾಕ್ಷಿ ಬೆಂಡೀಗೇರಿಯವರ ಮನೆಯ ಒಳಹೊಕ್ಕರೆ ಸಾಕು. ನೋಡಗರನ್ನು ಹಲವಾರು ವಿಶಿಷ್ಟ ವಸ್ತುಗಳು ಸೆಳೆಯುತ್ತವೆ. ವಿಶಿಷ್ಟ ವಿನ್ಯಾಸದ ಬಾಗಿಲು ತೋರಣ, ಗ್ಲಾಸ್ ಪೇಂಟಿಂಗ್ಸ್, ಬಳೆ ಡಿಸೈನ್ಸ್, ಮೇಟಿ, ಉಲ್ಲನ್ನಿನ ಹಾರ ಹೀಗೆ ನೂರಾರು ಬಗೆಯ ವಸ್ತುಗಳನ್ನು ಮಾಡಿದ್ದಾರೆ. ಯವ್ವನದ ಹುರುಪಿನಲ್ಲಿಯೇ ಈಗಲೂ ಕೆಲಸ ಮಾಡುವ ಮೀನಾಕ್ಷಿ ಬೆಂಡೀಗೇರಿಯವರು ಸದಾ ಒಂದಿಲ್ಲೊಂದು ವಿಶಿಷ್ಟ ವಸ್ತುಗಳನ್ನು ತಯಾರಿಸುತ್ತಲೇ ಇರುತ್ತಾರೆ.
ಟಿಕಲಿ ಕುಶಲತೆ, ಸೀರೆ ಡಿಸೈನ್, ವಿಧ ವಿಧದ ಗೊಂಬೆಗಳು, ಉಲ್ಲನ್ನಿನ ರಚನೆಗಳು, ಮಫ್ಲರ್ಗಳು, ಬಟ್ಟೆಯ ಮೇಲಿನ ಅಲಂಕಾರಗಳು, ತೂಗಾಡುವ ವಿವಿಧ ಅಲಂಕಾರಿಕ ವಸ್ತುಗಳು ಹೀಗೆ ನೂರಾರು ಬಗೆಯ ವಸ್ತುಗಳು ಮೀನಾಕ್ಷಿ ಬೆಂಡೀಗೇರಿಯವರ ಕೈಯಲ್ಲಿ ಅರಳಿವೆ. ಟಿಕಲಿ ಸೇರಿದಂತೆ ಹಲವಾರು ವಸ್ತುಗಳಿಂದ ಮಾಡಿದ ಬಗೆ ಬಗೆಯ ಚಿತ್ರಗಳಿಗೆ ಗ್ಲಾಸು, ಮರದ ಚೌಕಟ್ಟನ್ನು ಹಾಕಿ ಇಡಲಾಗಿದೆ. ಮೀನಾಕ್ಷಿ ಅವರು ತಯಾರಿಸಿದ ಹಲವು ವಸ್ತುಗಳು ನಗರದ, ತಾಲೂಕಿನ, ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿರುವ ಪರಿಚಯದವರ ಮನೆಯ ಕಪಾಟುಗಳನ್ನು ಅಲಂಕರಿಸಿವೆ. ಮನೆ ಮನೆಯ ಶೋಕೇಸ್ ಗಳಲ್ಲಿ ನಗುತ್ತ ನಿಂತಿವೆ.
(ಮೀನಾಕ್ಷಿ ಬೆಂಡೀಗೇರಿ)
80 ವರ್ಷ ವಯಸ್ಸಾಗಿರುವ ಮೀನಾಕ್ಷಿ ಶಿವಪ್ಪ ಬೆಂಡೀಗೇರಿ ಅವರು ಕಳೆದ 50 ವರ್ಷಗಳಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಪರಿಚಯಸ್ತರು ಕೇಳಿದರೆ ಬಗೆ ಬಗೆಯ ವಸ್ತುಗಳನ್ನು ತಯಾರು ಮಾಡುವ ಮೀನಾಕ್ಷಿ ಬೆಂಡೀಗೇರಿಯವರು ದುಡ್ಡಿಗಾಗಿ ಎಂದೂ ಮಾರಾಟ ಮಾಡಿಲ್ಲ. ಬಗೆ ಬಗೆಯ ವಸ್ತುಗಳನ್ನು ತಯಾರು ಮಾಡಲು ಅಗತ್ಯವಿರುವ ಸಾಮಗ್ರಿಗಳನ್ನು ಅವರಿಗೆ ತಂದುಕೊಟ್ಟರೆ ಬಗು ಬೇಗನೆ ಬಯಸಿದ ಆಲಂಕಾರಿಕ ವಸ್ತುಗಳನ್ನು ತಯಾರಿಸಿಕೊಡುತ್ತಾರೆ. 50 ವರ್ಷದ ಅವಧಿಯಲ್ಲಿ ಅದೆಷ್ಟೋ ಸಹಸ್ರ ವಸ್ತುಗಳನ್ನು ತಯಾರು ಮಾಡಿರುವ ಮೀನಾಕ್ಷಿ ಬೆಂಡೀಗೇರಿಯವರು ಓದಿರುವುದು ಕೇವಲ 6ನೇ ತರಗತಿ. ಇವರಿಗೆ ಈಗಾಗಲೇ 2 ಸಾರಿ ಹೃದಯದ ಶಸ್ತ್ರಚಿಕಿತ್ಸೆಯೂ ಆಗಿದೆ. ಹೃದಯದ ಶಸ್ತ್ರಚಿಕಿತ್ಸೆ ಮೀನಾಕ್ಷಿ ಬೆಂಡೀಗೇರಿಯವರ ಉತ್ಸಾಹವನ್ನು ಕುಗ್ಗಿಸಿಲ್ಲ.
ಒಂದು ದಿನದಲ್ಲಿ ಕನಿಷ್ಟ 10 ತಾಸುಗಳ ಕಾಲ ಈ ರೀತಿಯ ವಿವಿಧ ವಸ್ತುಗಳನ್ನು ತಯಾರು ಮಾಡುತ್ತಾರೆ. ಹವ್ಯಾಸವಾಗಿ ಬೆಳೆದು ಬಂದಿರುವ ವಿಶಿಷ್ಟ ಕಲೆ ಮುಪ್ಪಿನಲ್ಲಿ ಬೇಸರವನ್ನು ಓಡಿಸುವ ಕಾರ್ಯವಾಗಿ ಬೆಳೆದು ನಿಂತಿದೆ. ಯುವಕರು, ಯುವತಿಯರು ನಾಚುವಂತೆ ಕೆಲಸ ಮಾಡುವ ಮೀನಾಕ್ಷಿ ಬೆಂಡೀಗೇರಿಯವರಿಗೆ 80 ವರ್ಷಗಳಾದರೂ ಕಣ್ಣು ಸೂಕ್ಷ್ಮವಾಗಿದೆ. 20 ವರ್ಷದ ಯುವಕರಿಗೆ ಕಣ್ಣಿನ ಸಮಸ್ಯೆ ಬಂದು ಕನ್ನಡಕ ಹಾಕಿಕೊಳ್ಳುತ್ತಿರುವ ಈ ಕಾಲದಲ್ಲಿ 80 ವರ್ಷದ ಮೀನಾಕ್ಷಿಯವರು ಯಾರ ಸಹಾಯವೂ ಇಲ್ಲದೇ ಸೂಜಿಗೆ ದಾರವನ್ನು ಪೋಣಿಸುವುದನ್ನು ನೋಡಿದಾಗ ಅಚ್ಚರಿಯೆನ್ನಿಸುತ್ತದೆ. ಅವರ ಕೈಗೆ ಯಾವುದೇ ವಸ್ತುಗಳು ಸಿಕ್ಕರೆ ಸಾಕು ಚಕಚಕನೆ ವಿಶಿಷ್ಟವಾದ ಆಕೃತಿ ಪಡೆದುಕೊಳ್ಳುತ್ತವೆ. ಗಣಪ, ಗೊಂಬೆ, ನವಿಲು, ಬಾತುಕೋಳಿ, ತಾಜಮಹಲ್, ತೂಗಾಡುವ ಬೆಳಕಿನ ದೀಪಗಳು, ಆಕಾಶ ಬುಟ್ಟಿಗಳು ಹೀಗೆ ಮೀನಾಕ್ಷಿಯವರ ಕೈಯಿಂದ ಜೀವತಳೆದ ವಸ್ತುಗಳು ಒಂದಕ್ಕಿಂತ ಒಂದು ಸುಂದರವಾಗಿದೆ. ನೋಡುಗರನ್ನು ಸೆಳೆಯುತ್ತವೆ.
ಮೀನಾಕ್ಷಿ ಬೆಂಡೀಗೇರಿಯವರಿಗೆ 12 ಜನ ಮಕ್ಕಳು. ಅವರಲ್ಲಿ 6 ಮಕ್ಕಳು ಬದುಕಿದ್ದಾರೆ. ಶಿರಸಿ ಮೂಲದವರೇ ಆಗಿರುವ ಮೀನಾಕ್ಷಿಯವರ ಕೈಚಳಕ ವೀಕ್ಷಿಸುವವರು ಮೀನಾಕ್ಷಿಯವರ ಮೊಮ್ಮಗ ನಿರಂಜನ ಅವರ ಮೊಬೈಲ್ ಸಂಖ್ಯೆ 8123297802ಗೆ ಕರೆ ಮಾಡಬಹುದಾಗಿದೆ.
****
ಕಳೆದ 50 ವರ್ಷಗಳಿಂದ ನಾನು ವಿವಿಧ ಬಗೆಯ ವಸ್ತುಗಳನ್ನು ತಯಾರಿಸುತ್ತಿದ್ದೇನೆ. ಈಗ ಈ ವಸ್ತುಗಳೇ ನನಗೆ ಬೇಸರ ಕಳೆಯುತ್ತವೆ. ಒಂದು ದಿನಕ್ಕೆ 4-5 ವಿವಿಧ ವಸ್ತುಗಳನ್ನು ತಯಾರು ಮಾಡಬಲ್ಲೆ. ಯಾರಿಗೂ ಮಾರಾಟ ಮಾಡುವುದಿಲ್ಲ. ಬದಲಾಗಿ ಖುಷಿಯಿಂದ ಮಾಡಿಕೊಡುತ್ತೇನೆ. ಹಲವರು ನನ್ನಿಂದ ವಿವಿಧ ವಸ್ತುಗಳನ್ನು ತಯಾರು ಮಾಡುವುದನ್ನು ಕಲಿತುಕೊಂಡವರಿದ್ದಾರೆ. ನನಗಿಂತ ಜಾಸ್ತಿ ಸಾಧನೆ ಮಾಡಿವರನ್ನು ಕಂಡು ಸಂತಸವಾಗುತ್ತದೆ.
~ಮೀನಾಕ್ಷಿ ಬೆಂಡೀಗೇರಿ
ವೀರಭದ್ರಗಲ್ಲಿ
***
ನನ್ನ ಅಜ್ಜಿ ಪ್ರತಿದಿನ ಹಲವಾರು ಆಲಂಕಾರಿಕ ವಸ್ತುಗಳನ್ನು ತಯಾರು ಮಾಡುತ್ತಾರೆ. ಅವರಿಗೆ ಅಗತ್ಯವಾದ ವಸ್ತುಗಳನ್ನು ನಾವು ಮಾರುಕಟ್ಟೆಗೆ ಹೋಗಿ ತಂದುಕೊಡುತ್ತೇವೆ. ಸದಾ ಒಂದಿಲ್ಲೊಂದು ವಸ್ತುವನ್ನು ಮಾಡುತ್ತಲೇ ಇರುತ್ತಾರೆ. ಅವರ ಕಣ್ಣು ಇನ್ನೂ ಸೂಕ್ಷ್ಮವಾಗಿದೆ. ಯಾರ ಮೇಲೂ ಅವಲಂಬಿತರಾಗಿಲ್ಲ. ಕೆಲವೊಮ್ಮೆ ಅವರ ಉತ್ಸಾಹ ಕಂಡು ನಾವು ದಂಗಾಗಿದ್ದಿದ್ದೆ. ಅವರ ಕಾರ್ಯ ವೈಖರಿ ನಮಗೆ ಸಂತೋಷವನ್ನು ನಿಡುತ್ತದೆ.
~ನಿರಂಜನ
ಮೀನಾಕ್ಷಿಯವರ ಮೊಮ್ಮಗ

Tuesday, December 2, 2014

ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ

ಅಂಗವೈಕಲ್ಯದಲ್ಲೂ ಸಾಧನೆ ಮಾಡುತ್ತಿರುವ ವಿನಾಯಕ ಹೆಗಡೆ
***
(\ವಿನಾಯಕ ಹೆಗಡೆ/)
ಸಾಧಿಸುವ ಛಲ ಎಂತವರಲ್ಲೂ ಕಿಚ್ಚನ್ನು ಹಚ್ಚಿಸುತ್ತದೆ. ಸಾಧಿಸಬೇಕೆಂಬ ಮನಸ್ಸಿದ್ದರೆ ಅಂಗವೈಕಲ್ಯವೂ ತಡೆಯಾಗುವುದಿಲ್ಲ. ಅಂಗವೈಕಲ್ಯವಿದ್ದರೂ ಸಾಧನೆ ಮಾಡುತ್ತಿರುವ ವ್ಯಕ್ತಿಯೊಬ್ಬರು ಶಿರಸಿಯಲ್ಲಿದ್ದಾರೆ ಅವರೇ ವಿನಾಯಕ ಹೆಗಡೆ.
ನಗರದಲ್ಲಿ ಊದಬತ್ತಿ ವಿನಾಯಕ ಎಂದೇ ಖ್ಯಾತಿಯನ್ನು ಗಳಿಸಿರುವ ವಿನಾಯಕ ಹೆಗಡೆ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ವಿನಾಯಕ ಹೆಗಡೆಯವರನ್ನು ಸಮಾಜ ಬುದ್ಧಿಮಾಂದ್ಯ ಎಂದು ಕಡೆಗಣಿಸಿಬಿಟ್ಟಿದೆ. ನಗರದ ಕೆ.ಎಚ್.ಬಿ. ಕಾಲೋನಿಯ ನಿವಾಸಿಯಾಗಿರುವ ವಿನಾಯಕ ಹೆಗಡೆ ಊದಬತ್ತಿ, ಧೂಪ, ಕಪರ್ೂರ, ಲೋಬಾನ ಈ ಮುಂತಾದ ಗೃಂಧಿಗೆ  ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನವನ್ನು ನಡೆಸುತ್ತಿದ್ದಾರೆ.
ವಿನಾಯಕನ ಶೃದ್ಧೆ, ಛಲ, ಹೋರಾಟ ಮನೋಭಾವ, ಗುರಿ ಇತ್ಯಾದಿಗಳ ಬಗ್ಗೆ ಎರಡು ಮಾತಿಲ್ಲ. ಕೇವಲ 24 ವರ್ಷ ವಯಸ್ಸಿನ ವಿನಾಯಕ ಹೆಗಡೆ ಹತ್ತನೇ ತರಗತಿಯ ವರೆಗೆ ಓದಿದ್ದಾನೆ. ಜೀವನದಲ್ಲಿ ಕಠಿಣ ಶ್ರಮ ವಹಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ವಿನಾಯಕನೇ ಸಾಕ್ಷಿ. ಪ್ರಾರಂಭದ ದಿನಗಳಲ್ಲಿ ವಿನಾಯಕ ಹೆಗಡೆ ನಗರದಲ್ಲಿ ಊದಬತ್ತಿ ತಂದು ಮಾರಾಟ ಮಾಡಲು ಆರಂಭಿಸಿದರೆ ಕೊಳ್ಳುವವರೇ ಇರಲಿಲ್ಲ. ಬೇಡವೇ ಬೇಡ ಎಂದು ಹೀಗಳೆದವರು ಅನೇಕಮಂದಿ. ಹೀಗಿದ್ದಾಗಲೇ ಸ್ಥಳೀಯರ ನೆರವಿನಿಂದಲೇ ಊದಬತ್ತಿ ಮಾರಾಟದ ಪಟ್ಟುಗಳನ್ನು ಕಲಿತವನು ವಿನಾಯಕ ಹೆಗಡೆ. ಕೆಲವೇ ವರ್ಷಗಳ ಹಿಂದೆ ಸಮಾಜ ಈತನನ್ನು ಬುದ್ಧಿಮಾಂದ್ಯ, ಮಾನಸಿಕ ಅಸ್ವಸ್ಥ ಎಂದೆಲ್ಲ ಕರೆದಿತ್ತು. ಇಂತಹ ವ್ಯಕ್ತಿ ಈಗ ಸಂಪೂರ್ಣ ಸ್ವಾವಲಂಬಿ. ಮಾನಸಿಕವಾಗಿ ಸ್ವಸ್ಥಡೀಗ ಒಬ್ಬನೇ ಹುಬ್ಬಳ್ಳಿಗೆ ಹೋಗಿ, ಹುಬ್ಬಳ್ಳಿ ನಗರವನ್ನು ಸುತ್ತಾಡಿ ಊದಬತ್ತಿ, ಲೋಬಾನ, ಕಪರ್ೂರ ಸೇರಿದಂತೆ ಅಗತ್ಯವಸ್ತುಗಳನ್ನು ಯಾರ ಸಹಾಯವಿಲ್ಲದೇ ತರಬಲ್ಲ. ಅದನ್ನು ಶಿರಸಿಗೆ ತಂದು ಮಾರಾಟ ಮಾಡಬಲ್ಲವನಾಗಿದ್ದಾನೆ.
ಊದಬತ್ತಿ ಮಾರಾಟದ ಆರಂಭದ ದಿನಗಳಲ್ಲಿ ಅಪಾರ ಕಷ್ಟವನ್ನು ಅನುಭವಿಸಿದ ವಿನಾಯಕನನ್ನು ಹೀಗಳೆದವರೇ ಅನೇಕ. ಆದರೆ ಆತನ ಶೃದ್ಧೆ, ಛಲ, ವಿಶ್ವಾಸ, ಸಾಧಿಸಬೇಕೆಂಬ ಬಯಕೆ ಎಲ್ಲರನ್ನೂ ಮರುಳು ಮಾಡಿಬಿಟ್ಟಿದೆ. ಹೀಗಳೆದವರೇ ಈಗ ಆತನ ಬೆನ್ನಿಗೆ ನಿಂತಿದ್ದಾರೆ. ಆರಂಭದ ದಿನಗಳಲ್ಲಿ ವಿನಾಯಕನಿಂದ ಊದಬತ್ತಿಯನ್ನು ಕೊಂಡವರು ದುಡ್ಡನ್ನು ಕೊಡದೇ ಸತಾಯಿಸಿದ್ದಾರೆ. ಆದರೆ ವಿನಾಯಕನ ಶ್ರಮ ಅವರ ಮನಸ್ಸನ್ನು ಬದಲಿಸಿಬಿಟ್ಟಿದೆ. ಊದಬತ್ತಿ ಕೊಳ್ಳಲು ಯಾರು ಹಿಂದೇಟು ಹಾಕಿದ್ದರೋ ಅವರೇ ತಮ್ಮ ಪರಿಚಯದವರಿಗೆ ಹೇಳಿ ವಿನಾಯಕನ ಬಳಿ ಊದಬತ್ತಿಯನ್ನು ಕೊಳ್ಳುವಂತೆ ಮಾಡುತ್ತಿದ್ದಾರೆ. ನಗರದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ವಿನಾಯಕನ ಊದಬತ್ತಿಯ ಖಾಯಂ ಗಿರಾಕಿಗಳು. ಬ್ಯಾಂಕ್ ನೌಕರರು, ಲಾಯರ್ಗಳೂ ಈತನ ಊದಬತ್ತಿಯನ್ನು ಕೊಳ್ಳುವವರೇ. ದೈಹಿಕ ವೈಕಲ್ಯದ ಕಾರಣದಿಂದಾಗಿ ಮಾತನಾಡಲು ಕಷ್ಟಪಡುವ ವಿನಾಯಕನ ಸ್ನೇಹಮಯ ಮನೋಭಾವ ಎಲ್ಲರನ್ನು ಸೇಳೆದುಬಿಟ್ಟಿದೆ. ಇದೀಗ ವಿನಾಯಕ ಹೆಗಡೆ ಊದಬತ್ತಿಯನ್ನು ಮಾರಾಟ ಮಾಡಲು ಹಿಡಿದು ಐದು ವರ್ಷಗಳಾಗಿವೆ.
ವಿನಾಯಕನ ಮನೆಯಲ್ಲಿ ತಾಯಿ, ಮಗ ಇಬ್ಬರೇ. ತಾಯಿಗೆ ಅನಾರೋಗ್ಯ. ಊದಬತ್ತಿಯನ್ನು ಮಾರಾಟ ಮಾಡುವ ಮಗ ತಾಯಿಯನ್ನು ಸಾಕುತ್ತಿದ್ದಾನೆ. ಬದುಕಿನಲ್ಲಿ ಅದಿಲ್ಲ, ಇದಿಲ್ಲ, ಉದ್ಯೋಗವಿಲ್ಲ, ಸೌಲಭ್ಯವಿಲ್ಲ ಎಂದು ಕೊರಗುವವರಿಗೆ ವಿನಾಯಕ ಒಂದು ಮಾದರಿಯಾಗುತ್ತಾನೆ. ಜೀವನದಲ್ಲಿ ಮುಂದೆ ಊದಬತ್ತಿ ಮಾರಾಟವನ್ನು ದೊಡ್ಡ ಉದ್ಯಮವನ್ನಾಗಿ ಮಾಡಿ ನಾಲ್ಕಾರು ಜನರಿಗೆ ಕೆಲಸವನ್ನು ನೀಡಬೇಕು ಎನ್ನುವ ಕನಸನ್ನು ಹೊಂದಿರುವ ವಿನಾಯಕ ಹೆಗಡೆಯ ಶ್ರಮಕ್ಕೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಇಂತಹ ವಿನಾಯಕನಿಗೆ ಶಿರಸಿ ನಗರದಾದ್ಯಂತ ಮಿತ್ರರೇ. ಕೆಲವು ಮೊಬೈಲ್ ಶಾಪಿನವರು ಈತನಿಗೆ ವ್ಯಾಪಾರ ಮಾಡಿಸಿಕೊಟ್ಟರೆ ನಗರದ ಅನೇಕ ಆಟೋಗಳವರು ವಿನಾಯಕನಿಂದ ದುಡ್ಡನ್ನು ತೆಗೆದುಕೊಳ್ಳದೇ ಬೇಕಾದಲ್ಲಿಗೆ ಆತನನ್ನು ಕರೆದೊಯ್ದು ಬಿಡುತ್ತಾರೆ. ನಗರದ ಬಹುತೇಕ ಬ್ಯಾಂಕುಗಳ ನೌಕರರು ಈತನ ಬಳಿ ವ್ಯಾಪಾರ ಮಾಡುತ್ತಾರೆ. ಈತನ ಶ್ರಮವನ್ನು ಕಂಡ ನಗರವಾಸಿಗಳು ನಗರದ ಬ್ಯಾಂಕಿನಲ್ಲಿ ಸಾಲವನ್ನೂ ಕೊಡಿಸಿದ್ದಾರೆ.
ಯಾರೂ ತನ್ನನ್ನು ಕರುಣೆಯಿಂದ ಕಾಣುವುದು ಬೇಡ. ಹೀಗಳೆಯುವುದು ಬೇಡ. ಕಷ್ಟಪಟ್ಟು ವ್ಯಾಪಾರ ಮಾಡುತ್ತೇನೆ. ಅದಕ್ಕೆ ಬೆಲೆ ನೀಡಿದರೆ ಸಾಕು ಎನ್ನುವ ವಿನಾಯಕ ಹೆಗಡೆ ಊದಬತ್ತಿ ವ್ಯಾಪಾರದಲ್ಲಿ ಮಹತ್ ಸಾಧನೆಯನ್ನು ಮಾಡುವ ಗುರಿ ಇಟ್ಟುಕೊಂಡಿದ್ದಾನೆ. ಸಾಧನೆಯ ಮಾರ್ಗದಲ್ಲಿ ಅಂಗವೈಕಲ್ಯತೆ ಸಮಸ್ಯೆಯೇ ಅಲ್ಲ ಎನ್ನುವುದು ಈತನ ಮನದಾಳದ ಮಾತು. ನೂರಾರು ಜನ ನಿರುದ್ಯೋಗಿಗಳಿಗೆ, ವಿಕಲಚೇತನರಿಗೆ ವಿನಾಯಕ ಹೆಗಡೆ ಮಾದರಿಯಾಗಿದ್ದಾನೆ. ತಮ್ಮ ಕಾಲಿನ ಮೇಲೆ ತಾವೇ ನಿಂತುಕೊಳ್ಳಲು ಸ್ಪೂರ್ತಿಯಾಗಿದ್ದಾನೆ. ಊದಬತ್ತಿ ವಿನಾಯಕ ಹೆಗಡೆಯವರನ್ನು ಸಂಪರ್ಕಿಸಬೇಕಾದರೆ 9483068087 ಈ ದೂರವಾಣಿಗೆ ಕರೆ ಮಾಡಬಹುದಾಗಿದೆ.

Monday, November 24, 2014

ಬಯಕೆ

ಮುಗಿಲು ಮುಟ್ಟಿದೆ  ನೂರು ಚಿಂತೆ
ಕೇಳುವವರು ಇಲ್ಲವೇ |
ಒಡಲು ತುಂಬಿದೆ ನೋವ ಸಂತೆ
ಅರಿಯುವವರು ಇಲ್ಲವೆ ||

ತುಂಬಿ ತುಳುಕಿದೆ ನೋವು ದುಗುಡ
ಹಂಚಿಕೊಳ್ಳಲೆ ನಾನು?
ಹಲವು ಪ್ರೀತಿ, ಸವಿ ನುಡಿಯ
ತುಂಬಿ ಕೊಡುವಿರೆ ನೀವು?|

ನನ್ನ ದುಗುಡಕೆ ನೀವು ನೀಡಿ
ಪುಟ್ಟ ನಲಿವು-ಪ್ರೀತಿ |
ನನ್ನ ಭಯವ ಅರಿತು ನೀವು
ಮಾತಿನಿಂದಲೇ ಓಡಿಸಿ ||

**

(ಈ ಕವಿತೆಯನ್ನು ಬರೆದಿರುವುದು 10-12-2006ರಂದು ದಂಟಕಲ್ಲಿನಲ್ಲಿ)

Saturday, November 22, 2014

ಬೆಂಗಾಲಿ ಸುಂದರಿ-41

(ಖೈದಿಗಳ ಕೋಣೆ)
         ಗುಂಡಿಯ ಒಳಗೆ ಕತ್ತಲಿದ್ದ ಕಾರಣ ಏನೊಂದೂ ಗೊತ್ತಾಗಲಿಲ್ಲ. ಆದರೆ  ಮುಂಚಾಚಿಕೊಂಡಿದ್ದ ಆ ಹೊಂಡದಲ್ಲಿ ತಡವರಿಸುತ್ತಾ, ಎಡವುತ್ತಾ, ಏಳುತ್ತ ಬೀಳುತ್ತ ಮುಂದಕ್ಕೆ ಸಾಗಿದ ವಿನಯಚಂದ್ರ. ದೂರದಲ್ಲಿ ಮಬ್ಬು ಬೆಳಕು ಕಂಡಂತಾಯಿತು. ಸೀದಾ ಬಂದು ಆ ಬೆಳಕಿನ ಕಿಂಡಿಯಲ್ಲಿ ಇಣುಕಿದವನಿಗೆ ಭಾರತದ ಗಡಿಯಲ್ಲಿ ಬಂದಿರುವುದು ಖಾತ್ರಿಯಾಯಿತು. ಒಮ್ಮೆ ಮೈಮನಸ್ಸುಗಳಿಗೆ ರೆಕ್ಕೆ ಬಂದಂತಾಯಿತು. ಮಧುಮಿತಾಳನ್ನು ಕರೆದುಕೊಂಡು ಬರಬೇಕು ಎಂದುಕೊಂಡು ಅದೇ ಗುಂಡಿಯಲ್ಲಿ ಮತ್ತೆ ವಾಪಾಸಾದ. ವಿನಯಚಂದ್ರ ವಾಪಾಸು ಬರುವ ವೇಳೆಗೆ ಸರ್ಚ್ ಲೈಟ್ ಮತ್ತೆ ನಾಲ್ಕು ಸುತ್ತು ಸುತ್ತಿ ಬಂದಿತ್ತು. ಸಮಯವನ್ನು ನೋಡಿ ಮಧುಮಿತಾ ಅಡಗಿ ಕುಳಿತಿದ್ದ ಪೊದೆಯ ಬಳಿ ಹೋದರೆ ಅಲ್ಲಿ ಮಧುಮಿತಾಳಿಗಿಂತ ಮೊದಲು ಅಮ್ಜದ್ ಕಾಣಿಸಿದ. ವಿನಯಚಂದ್ರನಿಗೆ ಮತ್ತೆ ರೇಗಿಹೋಯಿತು. ಆವಾಗಲೇ ಹಿಂಬಾಲಿಸಬೇಡ ಎಂದರೂ ಮತ್ತೆ ಜೊತೆಗೆ ಬಂದಿದ್ದೀಯಾ ಎಂದು ಬೈದುಕೊಂಡು ಹೊಡೆತ ಹಾಕಲು ಮುನ್ನುಗ್ಗಿದವನನ್ನು ಮಧುಮಿತಾಳೇ ತಡೆದಳು.
          ತಾನು ಹೋಗಿಬಂದ ಸಂಗತಿಯನ್ನು ವಿವರಿಸಿದ ವಿನಯಚಂದ್ರ ಆಕೆಯನ್ನು ಆ ಗುಂಡಿಯ ಮೂಲಕ ಭಾರತಕ್ಕೆ ಕರೆದೊಯ್ಯಲು ಹವಣಿಸಿದ. ಮತ್ತೆರಡು ಸಾರಿ ಸರ್ಚ್ ಲೈಟ್ ಸುತ್ತು ಹೊಡೆಯಿತು. ಮಧ್ಯರಾತ್ರಿಯಾಗಿರುವುದು ಖಾತ್ರಿಯಾಗಿತ್ತು. ನಿಧಾನವಾಗಿ ಕೂರುತ್ತ, ಏಳುತ್ತ, ನಡೆಯುತ್ತ ಮುಂದಕ್ಕೆ ಸಾಗಿ ತಾನು ಹೊಂಡದಲ್ಲಿ ಇಳಿದ ವಿನಯಚಂದ್ರ ಮಧುಮಿತಾಳನ್ನು ಇಳಿಸಿದ. ಮುಂದಕ್ಕೆ ಸಾಗುತ್ತಿರುವ ವೇಳೆ ಧಬಾರ್ ಎನ್ನುವ ಸದ್ದಾಯಿತು. ಏನೋ ಯಡವಟ್ಟಾಗಿದೆ ಎಂದು ಆಲೋಚನೆ ಮಾಡುತ್ತಿದ್ದಂತೆ ತಮ್ಮನ್ನು ಹಿಂಬಾಲಿಸುತ್ತ ಬಂದ ಅಮ್ಜದ್ ನೆನಪಾದ. `ತಥ್.. ಹಾಳಾದವನು.. ನಮ್ಮ ಯೋಜನೆ ಹಾಳುಮಾಡುತ್ತಿದ್ದಾನೆ..' ಎಂದು ಬೈದುಕೊಂಡ. ವಿನಯಚಂದ್ರ ಹಾಗೂ ಮಧುಮಿತಾರನ್ನುಹಿಂಬಾಲಿಸಿ ಬಂದಿದ್ದ ಅಮ್ಜದ್ ಆ ಗುಂಡಿಯ ಆಳವನ್ನು ಅರಿಯದೇ ಉರುಳಿಬಿದ್ದಿದ್ದ. ಉರುಳಿದ್ದ ರಭಸಕ್ಕೆ ಆತನ ಕಾಲು ತಿರುಚಿಕೊಂಡಿತ್ತು. ಒಮ್ಮೆ ನರಳಿದ. ದೊಡ್ಡದಾಗಿ ಕೂಗಿದರೆ ಎಲ್ಲಿ ಭಾರತಕ್ಕೆ ನುಸುಳುವಲ್ಲಿ ತೊಂದರೆಯಾಗುತ್ತದೆಯೋ ಎಂದು ಬಾಯಿ ಕಚ್ಚಿ ನೋವನ್ನು ಸಹಿಸಿಕೊಂಡ. ವಿನಯಚಂದ್ರ ಮುಂದಕ್ಕೆ ಕತ್ತಲೆಯಲ್ಲಿ ಸಾಗುತ್ತಿದ್ದರೆ ಆತನ ಕೈ ಹಿಡಿದು ಮಧುಮಿತಾ ಹಿಂದಕ್ಕೆ ಅನುಸರಿಸಿಕೊಂಡು ಬರುತ್ತಿದ್ದಳು.
            20-25 ಮೀಟರ್ ದೂರವಿದ್ದ ಆ ಸುರಂಗ ಒಬ್ಬರು  ಕುಕ್ಕರು ಗಾಲಿನಲ್ಲಿ ಸಾಗುವಷ್ಟು ದೊಡ್ಡದಾಗಿತ್ತು. ಸಾಕಷ್ಟು ಇಕ್ಕಟ್ಟಾಗಿಯೂ ಇತ್ತು. ವಿನಯಚಂದ್ರ ಮುಂದೆ ಹೋಗುತ್ತಿದ್ದವನು ಭಾರತದ ಗಡಿಯೊಳಗಿನ ಗುಂಡಿಯಲ್ಲಿ ಇಣುಕಿದ. ಇಣುಕಿದವನು ಹಾಗೇ ಕೆಲ ಸಮಯ ಕಾಯುತ್ತ ನಿಂತ. ಹಿಂದೆ ಬರುತ್ತಿದ್ದ ಮಧುಮಿತಾ `ಏನಾಯ್ತು..?' ಎಂದು ಪಿಸುದನಿಯಲ್ಲಿ ಕೇಳಿದಳು. `ಶ್..' ಎಂದು ಸನ್ನೆ ಮಾಡಿದವನೇ ಮತ್ತೆ ಕಾಯುತ್ತ ಕುಳಿತ.
         ಸಮಯ ಸರಿಯುತ್ತಲೇ ಇತ್ತು. ಆದರೆ ವಿನಯಚಂದ್ರ ಆ ಸುರಂಗದಿಂದ ಹೊರ ಹೋಗುತ್ತಲೇ ಇಲ್ಲ. ಸುರಂಗದ ಒಳಗೆ ಕುಳಿತ ಮಧುಮಿತಾಳಿಗಂತೂ ಉಸಿರುಕಟ್ಟಿದ ಅನುಭವವಾಗತೊಡಗಿತ್ತು. ಭಾರತದ ಗಡಿಯೊಳಗೆ ಸೈನಿಕರು ಓಡಾಡಲು ಆರಂಭಿಸಿದ್ದರು. ಈ ಕಾರಣಕ್ಕಾಗಿ ವಿನಯಚಂದ್ರ ಮುಂದಕ್ಕೆ ಹೋಗದೆ ಕುಳಿತಿದ್ದ. ಭಾರತದ ಸೈನಿಕರ ಕಣ್ಣಿಗೆ ಬೀಳದಂತೆ ಇರಬೇಕಿತ್ತು. ಚಿಕ್ಕ ಸದ್ದಾದರೂ ಭಾರತದ ಸೈನಿಕರ ಮಿಷಿನ್ ಗನ್ನುಗಳು ದೇಹದಲ್ಲಿ ಗುಂಡುಗಳನ್ನು ಇಳಿಸುತ್ತಿದ್ದವು. ಆದ್ದರಿಂದ ವಿಳಂಬವಾದರೂ ಕಾಯುವುದು ಅನಿವಾರ್ಯವಾಗಿತ್ತು.
          ಮುಂಬದಿಯಲ್ಲಿ ವಿನಯಚಂದ್ರ, ಹಿಂಬದಿಯಲ್ಲಿ ಅಮ್ಜದ್ ಇದ್ದ ಕಾರಣ ನಡುವೆ ಸಿಕ್ಕಿಬಿದ್ದಂತಾಗಿದ್ದ ಮುಧುಮಿತಾಳಿಗೆ ಉಸಿರಾಡಲು ಅವಕಾಶವೇ ಇಲ್ಲ ಎನ್ನುವಂತಾಗಿತ್ತು. ಬೆವರು ಧಾರಾಕಾರವಾಗಿ ಇಳಿಯುತ್ತಿತ್ತು. ಸಮಯ ಕಳೆದಂತೆಲ್ಲ ಕಿರಿಕಿರಿಯುಮಟಾಗಲು ಆರಂಭವಾಯಿತು. ವಿನಯಚಂದ್ರನ ಬಳಿ ಬೇಗ ಹೋಗಲು ಸಾಧ್ಯವೇ ಎಂದು ಮತ್ತೊಮ್ಮೆ ಕೇಳಿದ್ದಳು. ಆದರೆ ಹೊರ ಭಾಗದಲ್ಲಿ ಸೈನಿಕರ ಸಂಚಾರ ಇನ್ನೂ ನಿಂತಂತಿರದ ಕಾರಣ ವಿನಯಚಂದ್ರನಿಗೆ ಏನು ಹೇಳಬೇಕೋ ಅರ್ಥವಾಗದೇ ಸುಮ್ಮನುಳಿದಿದ್ದ.
           ಮತ್ತೊಂದು ಅರ್ಧ ಗಂಟೆಯ ನಂತರ ಭಾರತೀಯ ಸೈನಿಕರು ದೂರಕ್ಕೆ ಹೋದಂತಾಯಿತು. ಅಷ್ಟರಲ್ಲಿ ಮಧುಮಿತಾ ಬಸವಳಿದಿದ್ದಳು. ಸರ್ಚ್ ಲೈಟ್ ಹಾದು ಹೋಗಿದ್ದನ್ನು ಗಮನಿಸಿ ನಿಧಾನಕ್ಕೆ ಹೊರಬಂದ. ಅವನ ಹಿಂದೆ ಮಧುಮಿತಾಳೂ ಬೇಗನೆ ಹೊರಕ್ಕೆ ಮುಖ ಹಾಕಿ ದೀರ್ಘವಾಗಿ ಉಸಿರೆಳೆದುಕೊಂಡಳು. ನಾಲ್ಕೈದು ಸಾರಿ ಉಸಿರೆಳೆದುಕೊಂಡ ನಂತರ ಆಕೆಗೆ ಸಮಾಧಾನವಾದಂತಾಯಿತು. ವಿನಯಚಂದ್ರ ಆ ಸುರಂಗವಿದ್ದ ಪ್ರದೇಶದಿಂದ ಸುತ್ತಮುತ್ತ ಎಲ್ಲಾದರೂ ಪೊದೆಗಳಿದೆಯೇ ಎನ್ನುವುದನ್ನು ವೀಕ್ಷಿಸಿದ. ಅಲ್ಲೆಲ್ಲೋ ಒಂದು ಕಡೆ ಚಿಕ್ಕದೊಂದು ಗಿಡವಿತ್ತು. ಮಧುಮಿತಾಳ ಕೈ ಹಿಡಿದವನೇ ಓಡಿದಂತೆ ಆ ಗಿಡದ ಬುಡಕ್ಕೆ ಹೋದ. ವಿಚಿತ್ರವೆಂದರೆ ಈ ಗಿಡದ ಹತ್ತಿರಕ್ಕೆ ಅಮ್ಜದ್ ಮಾತ್ರ ಬಂದಿರಲಿಲ್ಲ. ಎಲ್ಲಿ ಹೋಗಿಬಿಟ್ಟನೋ ಎಂದುಕೊಂಡ ವಿನಯಚಂದ್ರ. ಸುರಂಗದಲ್ಲಿ ಉಸಿರು ಕಟ್ಟಿ ಸಿಕ್ಕಿಬಿದ್ದನೇ ಎಂದುಕೊಂಡಳು ಮಧುಮಿತಾ. ಪಿಸುದನಿಯಲ್ಲಿ ವಿನಯಚಂದ್ರನ ಬಳಿ `ಅಮ್ಜದ್ ನನ್ನು ನೋಡಿ ಬರೋಣವೇ..?' ಎಂದು ಕೇಳಿದಳು. ವಿನಯಚಂದ್ರ ಸಿಟ್ಟಿನಿಂದ `ನಿನಗೆ ತಲೆಕೆಟ್ಟಿದೆಯಾ? ಈಗಲೇ ಕಷ್ಟಪಟ್ಟು ಇಲ್ಲಿಗೆ ಬಂದಾಗಿದೆ. ಇನ್ನು ಮತ್ತೆ ವಾಪಾಸು ಹೋಗಿ ಆತನನ್ನು ಹುಡುಕಿ ಬರೋದು ಅಂದ್ರೆ ಸುಮ್ಮನೆ ಆಗುವ ಕೆಲಸವಲ್ಲ. ಯಾರಿಗ್ಗೊತ್ತು ಮತ್ತೆ ಸೈನಿಕರು ವಾಪಾಸು ಬಂದರೆ..? ಸುಮ್ಮನೆ ಆ ಬಗ್ಗೆ ಮಾತನಾಡಬೇಡ..' ಎಂದ. 
            ದೂರದಲ್ಲೆಲ್ಲೋ ಯಾರದ್ದೋ ಹೆಜ್ಜೆಯ ಸಪ್ಪಳ ಕೇಳುತ್ತಿತ್ತು. ನಿಶ್ಶಬ್ಧವಾಗಿದ್ದ ಆ ಸ್ಥಳದಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರು ತೆವಳುತ್ತ ತೆವಳುತ್ತ ಮುಂದಕ್ಕೆ ಸಾಗಿದ್ದರು. ಅರ್ಚಕರು ಭಾರತ ಗಡಿಯಲ್ಲೊಂದು ರಸ್ತೆಯಿದೆ ಎಂದು ಹೇಳಿದ್ದರಲ್ಲ ಅದರ ಕಡೆಗೆ ಸಾಗಬೇಕಿತ್ತು.  ನಡು ನಡುವೆ ಸರ್ಚ್ ಲೈಟಿನ ಕಣ್ಣು ತಪ್ಪಿಸಲೇ ಬೇಕಿತ್ತು. ಮುಂದೆ ಮುಂದೆ ಸಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಆ ಸಮಯದಲ್ಲೇ ಯಾರೋ ಓಡಿದಂತಹ ಅನುಭವವಾಯಿತು. ಹೆಜ್ಜೆಯ ಸಪ್ಪಳ ತೀವ್ರವಾಗಿತ್ತು. ಅದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಗುಂಡಿನ ಮೊರೆತವೂ ಕೇಳಿತು. ಒಬ್ಬ ವಿಕಾರವಾಗಿ ಅರಚಿಕೊಂಡಿದ್ದೂ ಕೇಳಿಸಿತು. ಬೆಚ್ಚಿಬಿದ್ದ ವಿನಯಚಂದ್ರ ಹಾಗೂ ಮಧುಮಿತಾ ಒಮ್ಮೆಲೆ ಬೆವೆತುಬಿಟ್ಟರು.
           ಇಬ್ಬರಿಗೂ ಗುಂಡು ತಗುಲಿರಲಿಲ್ಲ. ಹಾಗಾದರೆ ಯಾರಿಗೆ ಗುಂಡು ತಾಗಿದೆ ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಮಧುಮಿತಾ ಮೆಲ್ಲಗೆ `ಅಮ್ಜದ್..' ಎಂದಳು. `ಇರಬಹುದು.. ಹಿಂಬಾಲಿಸಬೇಡ ಎಂದಿದ್ದೆ.. ಕೇಳಲಿಲ್ಲ.. ಗುಂಡಿಗೆ ಸಿಕ್ಕು ಸತ್ತನೇನೋ..' ಎಂದು ಪಿಸುಗುಟ್ಟಿದ ವಿನಯಚಂದ್ರ. `ಛೇ..' ಎಂದು ತಲೆಕೊಡವಿದಳು ಮಧುಮಿತಾ.. ಆದರೆ ಏನೂ ಸ್ಪಷ್ಟವಾಗಲಿಲ್ಲ. ಅಮ್ಜದ್ ಬದುಕಿದ್ದರೆ ಸಾಕಿತ್ತು ಎಂದುಕೊಂಡಳು.
           ಭಾರತದ ಫಾಸಲೆಯಲ್ಲಿ ಪೊದೆಯಂತಹ ರಚನೆಗಳು ಜಾಸ್ತಿಯಿದ್ದವು. ಗಡಿಯಿಂದ ಸಾಕಷ್ಟು ದೂರ ಬಂದಿದ್ದೇವೆ ಎನ್ನುವುದು ಅರಿವಾದಾಗ ಇಬ್ಬರೂ ನಿಂತುಕೊಂಡರು. ತೆವಳಿದ ಪರಿಣಾಮವಾಗಿ ಇಬ್ಬರ ಬಟ್ಟೆಗಳೂ ಅಲ್ಲಲ್ಲಿ ಸಾಕಷ್ಟು ಹರಿದಿತ್ತು. ತನ್ನನ್ನು ನಂಬಿ ಬಂದ ಮಧುಮಿತಾಳಿಗೆ ಏನೆಲ್ಲ ಕಷ್ಟಗಳನ್ನು ನೀಡಬೇಕಾಗಿ ಬಂತಲ್ಲ ಎಂದುಕೊಂಡ ವಿನಯಚಂದ್ರ. ಆಕೆಯ ಕಿವಿಯಲ್ಲಿ ಪಿಸುಗುಟ್ಟಿದ. ಆಕೆ ಆತನ ಬಾಯನ್ನು ಮುಚ್ಚಿ ಸುಮ್ಮನಿರುವಂತೆ ಹೇಳಿದಳು. `ಹಾಗೇಕೆ ಅಂದ್ಕೊಳ್ತೀಯಾ ವಿನು.. ಈಗ ಇಷ್ಟೆಲ್ಲ ಕಷ್ಟಗಳು ಬಂದಿದೆ ನಿಜ. ಆದರೆ ಮುಂದಿನ ದಿನಗಳು ಚನ್ನಾಗಿಯೇ ಇರುತ್ತವೆ. ಉಜ್ವಲವಾಗಿಯೂ ಇರುತ್ತವೆ.. ಇದಕ್ಕೆ ಬೇಜಾರು ಮಾಡ್ಕೋಬೇಡ್ವೋ..' ಎಂದಳು.
          ಅಷ್ಟರಲ್ಲಿ `ಕೌನ್ ಹೇ..' ಎಂಬ ಗಡುಸಾದ ಮಾತೊಂದು ಕೇಳಿಸಿತು. ಮಾತು ಕೇಳಿದ ತಕ್ಷಣವೇ ಇಬ್ಬರೂ ತಮ್ಮೆರಡೂ ಕೈಗಳನ್ನು ಮೇಲೆತ್ತಿ ದಬಾರನೆ ನೆಲದ ಮೇಲೆ ಬಿದ್ದುಕೊಂಡರು. ಒಬ್ಬ ಸೈನಿಕ ಬಂದೂಕನ್ನು ಹಿಡಿದು ಬಂದಿದ್ದ. ಬಂದವನೇ ವಿನಯಚಂದ್ರನ ಕಾಲಿಗೆ ಒಂದು ಗುಂಡನ್ನು ಹೊಡೆದೇಬಿಟ್ಟಿದ್ದ. ವಿನಯಚಂದ್ರ ಗುಂಡನ್ನು ತಿಂದ ಪರಿಣಾಮ ನರಳಲು ಆರಂಭಿಸಿದ. ಕಣ್ಣು ಮಂಜಾದಂತೆ ಆಗುತ್ತಿತ್ತು.  ಸೈನಿಕ ನಂತರ ಇಬ್ಬರನ್ನೂ ಕಟ್ಟಿಹಾಕಿದ್ದ. ಮಧುಮಿತಾಳ ತಲೆಗೊಂದು ಏಟನ್ನು ಹಾಕಿದ್ದ. ಇಬ್ಬರೂ ಎಚ್ಚರ ತಪ್ಪಿದ್ದರು.
          ವಿನಚಯಚಂದ್ರ ಕಣ್ಣುಬಿಡುವ ವೇಳೆಗೆ ಕೋಣೆಯೊಂದರಲ್ಲಿ ಬಂಧಿಯಾಗಿದ್ದ. ಎದುರು ಇದ್ದ ಸೈನಿಕ ಅಧಿಕಾರಿಗಳು ವಿನಯಚಂದ್ರನ ಮುಖಕ್ಕೆ ನೀರನ್ನು ಸೋಕುತ್ತಿದ್ದರು. ವಿನಯಚಂದ್ರನಿಗೆ ಎಚ್ಚರ ಬಂದಿದ್ದೇ ತಡ ಕಮಾಂಡರ್ ಒಬ್ಬ ಬಂದು ಮುಖಕ್ಕೆ ಏಟು ಕೊಟ್ಟು ಯಾರು ನೀನು, ಎಂಬಂತೆಲ್ಲ ವಿಚಾರಿಸತೊಡಗಿದ. ವಿನಯಚಂದ್ರ ಮಾತನಾಡಲು ಆರಂಭಿಸಿದ. ತನ್ನ ಕಥೆಯನ್ನು ಸಂಪೂರ್ಣ ಹೇಳಿದ. ಸೈನಿಕರು ಅದೆಷ್ಟು ನಂಬಿದರೋ ತಿಳಿಯಲಿಲ್ಲ. ಏಟುಗಳು ಬೀಳುತ್ತಲೇ ಇದ್ದವು.
          ಬಂಧಿಯಾಗಿದ್ದ ಒಂದು ದಿನದ ನಂತರ ಕಮಾಂಡರ್ ಒಬ್ಬ ಬಂದು ವಿನಯಚಂದ್ರನ ಬಳಿ ಆತನ ಕಥೆಯನ್ನು ಮತ್ತೊಮ್ಮೆ ಕೇಳಿದ. ವಿನಯಚಂದ್ರ ಹೇಳಿದ ನಂತರ `ನೀವು ಹೇಳಿದ್ದನ್ನು ಪರಿಶೀಲನೆ ಮಾಡುತ್ತೇವೆ. ಹೇಳಿದ್ದು ಸತ್ಯವಾಗಿದ್ದರೆ ತೊಂದರೆಯಿಲ್ಲ. ಆದರೆ ಸುಳ್ಳಾಗಿದ್ದರೆ ಇಬ್ಬರನ್ನೂ ಗುಂಡು ಹೊಡೆದು ಸಾಯಿಸಲಾಗುತ್ತದೆ.. ಎಚ್ಚರಿಕೆ..' ಎಂದರು.
          `ಆದರೂ ಭಾರತದ ಗಡಿಯೊಳಕ್ಕೆ ನುಸುಳು ಬರಬಾರದಿತ್ತು. ನೀವು ನುಸುಳಿ ಬಂದಿದ್ದಕ್ಕಾದರೂ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ..' ಎಂದು ಹೇಳಿ ಕಮಾಂಡರ್ ಕೋಣೆಯಿಂದ ಹೊರಕ್ಕೆ ಹೋದರು. ಮಧುಮಿತಾ ಅಲ್ಲೇ ಇದ್ದಾಳಾ ಎನ್ನುವುದು ವಿನಯಚಂದ್ರನಿಗೆ ಗೊತ್ತಾಗಲಿಲ್ಲ. ಸೈನಿಕರು ಆಕೆಯನ್ನೂ ಹಿಂಸಿಸುತ್ತಾರಾ ಎಂದುಕೊಂಡು ಭೀತಿಗೊಳಗಾದ. ಭಾರತದ ಸೈನಿಕರು ಹಾಗೆಲ್ಲ ಮಾಡೋದಿಲ್ಲ ಎಂದುಕೊಂಡು ಸಮಾಧಾನವನ್ನೂ ಪಟ್ಟುಕೊಂಡ. ದುರದ ಕರ್ನಾಟಕ ಕೈಬೀಸಿ ಕರೆಯುತ್ತಿತ್ತು. ಆಗಸದ ಅಂಚಿನಲ್ಲಿ  ಹೊಸ ಕನಸಿನ ಸೂರ್ಯೋದಯವಾಗುತ್ತಿತ್ತು.

(ಮುಗಿಯಿತು)

ಕಾದಂಬರಿ ಬರೆಯುವ ಸಂದರ್ಭದಲ್ಲಿ ಮಾಹಿತಿಗಾಗಿ ನಾನು ಮೊರೆ ಹೋದದ್ದು :

* ಬಾಂಗ್ಲಾದೇಶದ ಹಿಂದೂಗಳ ಮಾರಣಹೋಮದ ಕುರಿತು ಗೂಗಲ್ ವೀಕಿಪಿಡಿಯಾ ಮಾಹಿತಿಗಳು
* ಬಾಂಗ್ಲಾ ಹಿಸ್ಟರಿ (ಇಂಗ್ಲೀಷ್ ಪುಸ್ತಕ)
* ಕಬ್ಬಡ್ಡಿ ವೀಡಿಯೋಗಳು
* ಕಬ್ಬಡ್ಡಿ ಕುರಿತು ಯುಟ್ಯೂಬ್ ವೀಡಿಯೋಗಳು, ವೀಕಿಪಿಡಿಯಾ ಮಾಹಿತಿಗಳು
* ರವೀಂದ್ರನಾತ್ ಠ್ಯಾಗೂರ್ ರ ಪುಸ್ತಕಗಳು (ಕನ್ನಡ ಅನುವಾದ)
* ಅಮ್ಜದ್ ಹುಸೇನ್ (ಫೇಸ್ ಬುಕ್ಕಿನ ಬೆಂಗಾಲಿ ಗೆಳೆಯ) ಕೊಟ್ಟ ಕೆಲವು ಮಾಹಿತಿಗಳು
* 1971 (ಬಾಂಗ್ಲಾದೇಶದ ಕಾದಂಬರಿ)
* Bangladesh at war- biplob roy
* ಅಸ್ಲಂ ಶಫೀಕ್ ಅವರು ಬರೆದ ಹಿಂದೂ ಟೆಂಪಲ್ಸ್, ಹೋಮ್ಸ್ ಅಟ್ಯಾಕ್ಡ್ ಅಕ್ರಾಸ್ ಬಾಂಗ್ಲಾದೇಶ (ಲೇಖನ ಮಾಲಿಕೆ ಕೃಪೆ : ಇಂಟರ್ನೆಟ್)

ಇತ್ಯಾದಿ..

ಕೊನೆಯ ಮಾತು :
         ಈ ಕಾದಂಬರಿಯನ್ನು ಬರೆಯಲು ಆರಂಭಿಸಿ ಬಹುತೇಕ 10 ತಿಂಗಳುಗಳೇ ಕಳೆದುಹೋದವು. ಆಗೊಮ್ಮೆ ಈಗೊಮ್ಮೆ ಸಮಯ ಸಿಕ್ಕಾಗ ಬರೆಯುತ್ತಿದ್ದೆ. ಆದರೆ ಕಳೆದ ಜೂನ್ ನಿಂದ ಈಚೆಗೆ ಸೀರಿಯಸ್ ಆಗಿ ಬರೆಯಲು ಆರಂಭಿಸಿದ್ದೆ. ಬರವಣಿಗೆ ನಿಧಾನವಾದಾಗ ಎಚ್ಚರಿಸಿ ಬೇಗ ಬರೆಯಲು ಹೇಳಿದ್ದು, ಲೈಟಾಗಿ ಎಚ್ಚರಿಕೆ ನೀಡಿದ್ದು ನೀವು. ಬರೆದಿದ್ದನ್ನು ಯಾರು ಓದ್ತಾರೆ.. ಸುಮ್ಮನೆ ವೇಸ್ಟು ಎಂದುಕೊಂಡಾಗಲೆಲ್ಲಾ ಅಭಿಪ್ರಾಯ ತಿಳಿಸಿ, ನನ್ನ ಮನೋಭಾವವನ್ನು ಬದಲು ಮಾಡಿದ ನಿಮಗೆಲ್ಲರಿಗೆ ಮತ್ತೊಮ್ಮೆ ನಾನು ಧನ್ಯವಾದ ಹೇಳಲೇಬೇಕು. ಮೊದಲಿಗೆ 35 ಭಾಗಗಳಿಗೆ ಮುಗಿಸಬೇಕು ಎಂದುಕೊಂಡವನು ಕೊನೆಗೆ 41ಕ್ಕೆ ಮುಗಿಸಿದ್ದೇನೆ. ಇಷ್ಟವಾಗಿದೆ ಎನ್ನುವುದು ನನ್ನ ಮನದ ಭಾವನೆ. ನಿಜಕ್ಕೂ ನಾನು ಪೂರ್ಣವಾಗಿ ಬರೆದ ಮೊದಲ ಕಾದಂಬರಿ ಇದು. ಈ ಮೊದಲು `ಅಘನಾಶಿನಿ ಕಣಿವೆಯಲ್ಲಿ..' ಎಂಬ ಕಾದಂಬರಿಯೊಂದನ್ನು ಅರ್ಧ ಬರೆದು ಇಟ್ಟಿದ್ದೇನೆ. ಅದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸುತ್ತೇನೆ. ಮುಂದೆ ಬೆಂಗಾಲಿ ಕಾದಂಬರಿ ಪುಸ್ತಕ ರೂಪದಲ್ಲಿ ಹೊರಬಂದರೆ ಬ್ಲಾಗಿನಲ್ಲಿ ಬರೆದಾಗ ನೀಡಿದ ಸಹಾಯ, ಸಹಕಾರ, ಪ್ರೀತಿ, ಆದರಗಳನ್ನು ನೀಡುತ್ತೀರಿ ಎಂಬ ನಂಬಿಕೆ ನನ್ನದು. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು

ಬೆಂಗಾಲಿ ಸುಂದರಿ -40

(ವಿನಯಚಂದ್ರ-ಮಧುಮಿತಾ ದಾಟಿದ ಗಡಿ ಭಾಗದ ಹಳ್ಳ)
             ಆಗಾಗ ಬೀಳುತ್ತಿದ್ದ ಸರ್ಚ್ ಲೈಟಿನ ಬೆಳಕಿನಿಂದಾಗಿ ದೂರದಲ್ಲಿ ಮಬ್ಬು ಮಬ್ಬಾಗಿ ಬಾಂಗ್ಲಾ ಹಾಗೂ ಭಾರತದ ನಡುವೆ ಇರುವ ತಡೆಗೋಡೆ ಅಸ್ಪಷ್ಟವಾಗಿ ಕಾಣುತ್ತಿತ್ತು. ರಿಕ್ಷಾವಾಲ ತಾನಿನ್ನು ಮುಂದಕ್ಕೆ ಹೋಗುವುದು ಅಪಾಯವೆಂದೂ ಹೇಳಿದ. ಇಲ್ಲೇ ನಿಲ್ಲುತ್ತೇನೆ ಎಂದು ಹೇಳಿದವನು ದೂರದಲ್ಲಿ ಹರಿಯುತ್ತಿದ್ದ ನದಿಯೊಂದನ್ನು ತೋರಿಸಿದ. ಆ ನದಿಯ ಬಳಿ ಹೋದರೆ ಭಾರತದೊಳಕ್ಕೆ ನುಸುಳಲು ಸುಲಭವಾಗುತ್ತದೆ ಎಂದು ಹೇಳಿದ. ಪುಟ್ಟ ನದಿಯೊಂದು ದೈತ್ಯನದಿಯಾದ ಜಮುನೆಯನ್ನು ಸೇರುವ ಸ್ಥಳ ಅದಾಗಿತ್ತು. ಆ ನದಿಯ ಹತ್ತಿರ ಗಡಿ ಅಸ್ಪಷ್ಟವಾಗಿತ್ತು.
             ಅರ್ಚಕರು ಗಡಿಬಿಡಿ ಬೇಡ ಎಂದು ಸನ್ನೆ ಮಾಡಿದರು. ಗಡಿ ಬೇಲಿಯಿದ್ದ ಸ್ಥಳದಲ್ಲಿ ಸೇನಾಪಡೆಯ ಜವಾನರು ಇದ್ದಂತೆ ಕಾಣಲಿಲ್ಲ. ಅರ್ಚಕರು ಇಳಿದನಿಯಲ್ಲಿ ನದಿಯ ಬಳಿ ಸೈನಿಕರಿರುತ್ತಾರೆ. ಆದರೆ ಇಲ್ಲಿ ಅವರ ಸಮಸ್ಯೆಯಿಲ್ಲ. ಬೇಲಿಯಿರುವ ಕಾರಣ ಸೈನಿಕರ ಸಂಖ್ಯೆ ಕಡಿಮೆಯಿದೆ. ಆದರೆ ಬೇಲಿ ಕಡಿಮೆಯಿರುವಲ್ಲಿ ಸೈನಿಕರು ಜಾಸ್ತಿ ಇರುತ್ತಾರೆ ಎಂದು ಹೇಳಿದರು.
           ಗಡಿಯ ಪರಿಸ್ಥಿತಿಯನ್ನು ಎಷ್ಟು ಸೂಕ್ಷ್ಮವಾಗಿ ಅರ್ಚಕರು ಅರಿತುಕೊಂಡಿದ್ದಾರಲ್ಲ ಎಂದುಕೊಂಡ ವಿನಯಚಂದ್ರ. ದೂರದಿಂದ ನೋಡಿದರೆ ಆರಾಮಾಗಿ ದಾಟಬಹುದು ಎನ್ನಿಸುವಂತಿದ್ದ ಗಡಿ ಪ್ರದೇಶವನ್ನು ದಾಟುವುದು ಅಂದುಕೊಂಡಂತಿರಲಿಲ್ಲ. ಮುಂದಿನ ಹಾದಿಯಂತೂ ಕತ್ತಿಯ ಮೇಲಿನ ನಡುಗೆಯೇ ಆಗಿತ್ತು. ಇಲ್ಲಿಯವರೆಗೆ ಹಾದು ಬಂದಿದ್ದು ಒಂದು ಹೆಜ್ಜೆಯಾದರೆ ಇನ್ನುಮುಂದೆ ಹೋಗಬೇಕಿರುವುದೇ ಮತ್ತೊಂದು ಹೆಜ್ಜೆಯಾಗಿತ್ತು.
            ಮತ್ತಷ್ಟು ಕತ್ತಲಾಯಿತು. ಅರ್ಚಕರು ನಿಧಾನವಾಗಿ ಸನ್ನೆ ಮಾಡಿದರು. ತಮ್ಮನ್ನು ಹಿಂಬಾಲಿಸುವಂತೆ ಹೇಳಿದ ಅರ್ಚಕರು ಮುನ್ನಡೆಯಲು ಆರಂಭಿಸಿದರು. ಅವರ ಹಿಂದೆ ವಿನಯಚಂದ್ರ ಹಾಗೂ ಕೊನೆಯಲ್ಲಿ ಮಧುಮಿತಾ ಇದ್ದರು. 100 ಮೀಟರ್ ಸಾಗುವ ವೇಳೆಗೆ ಅರ್ಚಕರು ವಿನಯಚಂದ್ರನ ಬಳಿ ಗಡಿ ಪ್ರದೇಶದ ಕಡೆಗೆ ಕೈ ತೋರಿಸುತ್ತಾ `ಅದೋ ಅಲ್ಲಿ ನೋಡಿ.. ಆ ಕಡೆ ಚಿಕ್ಕದೊಂದು ದಿಬ್ಬ ಕಾಣುತ್ತದಲ್ಲ. ಅಲ್ಲೊಂದು ಸುರಂಗವಿದೆ. ಸಮಯ ನೋಡಿಕೊಂಡು ಆ ಸುರಂಗ ದಾಟಬೇಕು. ಜಾಗೃತೆಯಾಗಿರು. ಆ ಸುರಂಗದ ಆಚೆಗೆ ಭಾರತೀಯ ಸೈನಿಕರು ಇದ್ದರೂ ಇರಬಹುದು. ಐದು ನಿಮಿಷಕ್ಕೊಮ್ಮೆ ಅಥವಾ ಆ ಸಮಯದೊಳಗೆ ಸರ್ಚ್ ಲೈಟ್ ಸುತ್ತು ಹಾಕುತ್ತದೆ. ಎಚ್ಚರವಿರಲಿ. ನಾನು ಇನ್ನು ಮುಂದಕ್ಕೆ ಬರುವುದು ಸರಿಯಲ್ಲ. ನಾನು ಮಾಡಬೇಕಿರುವ ಕಾರ್ಯ ಸಾಕಷ್ಟಿದೆ. ಹೇಳಲಿಕ್ಕೆ ಮರೆತಿದ್ದೆ ನೋಡಿ. ಇಲ್ಲಿ ಚಿಕ್ಕದೊಂದು ಹಳ್ಳವಿದೆ. ಮೊಳಕಾಲು ಮುಳುಗುವಷ್ಟು ನೀರಿರುತ್ತದೆ. ನಿಧಾನವಾಗಿ, ಸದ್ದಾಗದಂತೆ ದಾಟಿ. 15-20 ಮೀಟರ್ ಅಗಲವಿರಬಹುದು. ಆದರೆ ಆಳವಿಲ್ಲ. ಎಚ್ಚರಿಕೆಯಿಂದ ಹೋಗಿ. ನಿಮಗೆ ಶುಭವಾಗಲಿ..' ಎಂದರು.
          `ಗಡಿಯ ಆಚೆ ಪ್ರದೇಶದಲ್ಲಿ ಅಸ್ಸಾಮ್ ರಾಜ್ಯವಿರುತ್ತದೆ. ಅಲ್ಲಿ ಹೋದವರೇ ಯಾವುದಾದರೂ ಸೈನಿಕರ ಕ್ಯಾಂಪಿಗೆ ತೆರಳು ನಿಮ್ಮ ಸಂಪೂರ್ಣ ವಿವರಗಳನ್ನು ತಿಳಿಸಿ. ಅವರು ನಿಮಗೆ ಸಹಾಯ ಮಾಡಬಹುದು. ಬಹುಶಃ ಗಡಿಯಾಚೆಗೆ ಭಾರತೀಯರು ಉತ್ತಮ ರಸ್ತೆಗಳನ್ನೂ ಮಾಡಿರಬಹುದು. ಸಾಕಷ್ಟು ವಾಹನ ಸಂಚಾರವೂ ಇರಬಹುದು. ಯಾವುದಾದರೊಂದು ವಾಹನ ಹತ್ತಿ ಹತ್ತಿರದ ಗೋಲಕಗಂಜಿಗೋ ಗೌರಿಪಾರಕ್ಕೋ ಹೋಗಿಬಿಡಿ. ಅಲ್ಲಿಂದ ಮುಂದಕ್ಕೆ ನೀವು ನಿಮ್ಮ ಗುರಿಯನ್ನು ತಲುಪಲು ಅನುಕೂಲವಾಗುತ್ತದೆ..' ಎಂದರು.
          ವಿನಯಚಂದ್ರ ಅರ್ಚಕರ ಕೈ ಹಿಡಿದುಕೊಂಡ. ಕಣ್ತುಂಬಿ ಬಂದಂತಾಯಿತು. ಢಾಕಾದಿಂದ ಬಂದವರಿಗೆ ರಂಗಪುರದ ಬಳಿ ಸಂಪೂರ್ಣ ದುಡ್ಡು ಖಾಲಿಯಾಗಿ ಹಸಿವಿನಿಂದ ಕಂಗೆಡಬೇಕಾದ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದರೂ ಅಲ್ಲದೇ ಬಾಂಗ್ಲಾದ ಗಡಿಯ ವರೆಗೆ ಕರೆತಂದು ಬಿಟ್ಟರಲ್ಲ. ಅಷ್ಟರ ಜೊತೆಗೆ ಗಡಿ ದಾಟುವ ಬಗ್ಗೆ ಸಹಾಯ ಮಾಡುತ್ತಲೂ ಇದ್ದಾರೆ ಎಂದುಕೊಂಡ. ಮಧುಮಿತಾಳೂ ಧನ್ಯವಾದಗಳನ್ನು ಹೇಳಿದಳು. ಸರ್ಚ್ ಲೈಟ್ ಸುತ್ತುತ್ತಲೇ ಇತ್ತು. `ಬೇಗ ಹೊರಡಿ..' ಎಂದರು ಅರ್ಚಕರು. ಬೀಳ್ಕೊಟ್ಟು ಮುಂದಕ್ಕೆ ಹೆಜ್ಜೆ ಹಾಕಿದರು ವಿನಯಚಂದ್ರ ಹಾಗೂ ಮಧುಮಿತಾ.
          ಮಧುಮಿತಾಳಿಗಂತೂ ತವರು ಮನೆಯಿಂದ ಬಹುದೂರ ಹೊರಟಂತಾಗಿತ್ತು. ಮತ್ತಿನ್ನು ಬಾಂಗ್ಲಾ ದೇಶಕ್ಕೆ ಬರುವುದು ಅಸಾಧ್ಯ ಎನ್ನುವಂತೆ ಅವಳಿಗೆ ಅನ್ನಿಸುತ್ತಿತ್ತು. ಭಾರತದ ಗಡಿಯತ್ತ ಒಂದೊಂದೇ ಹೆಜ್ಜೆ ಇಟ್ಟಂತೆಲ್ಲ ಬಾಂಗ್ಲಾದೇಶ ಎನ್ನುವ ತಾಯಿನಾಡು ತನ್ನನ್ನು ಶಾಶ್ವತವಾಗಿ ಕಳೆದುಕೊಳ್ಳಲಿದೆಯಾ ಎನ್ನಿಸುತ್ತಿತ್ತು. ಮುನ್ನಡೆದಂತೆಲ್ಲ ಕತ್ತಲು ಮತ್ತಷ್ಟು ಆವರಿಸಿದಂತೆ ಭಾಸವಾಯಿತು. ಕೈಬೀಸಿ ಶುಭಕೋರುತ್ತಿದ್ದ ಅರ್ಚಕರೂ ಕಾಣದಾದರು. ಕುರುಚಲು ಪೊದೆಗಳು, ಹಾಳುಬಿದ್ದ ಗದ್ದೆ ಬಯಲುಗಳು ಕಾಣಿಸತೊಡಗಿದ್ದವು. ಕೆಲ ಕ್ಷಣಗಳಲ್ಲಿ ಚಿಕ್ಕದೊಂದು ಹಳ್ಳ ಎದುರಾಯಿತು. ಅರ್ಚಕರು ಹೇಳಿದಂತೆ ಆ ಹಳ್ಳದಲ್ಲಿ ಮೊಣಕಾಲೆತ್ತರದ ನೀರಿತ್ತು. ನೀರಿನ ಅಡಿಯಲ್ಲಿ ರಾಡಿ ರಾಡಿ ಮರಳಿದ್ದುದು ಸ್ಪಷ್ಟವಾಗುತ್ತಿತ್ತು. ತಣ್ಣಗೆ ಕೊರೆಯುವಂತೆ ಹರಿಯುತ್ತಿದ್ದ ಆ ಹಳ್ಳವನ್ನು ಅರೆಘಳಿಗೆಯಲ್ಲಿ ದಾಟಿದವರೇ ಹಳ್ಳದ ಏರಿ ಹತ್ತುವಷ್ಟರಲ್ಲಿ ಎದುರಿಗೆ ಯಾರೋ ಮಿಸುಕಾಡಿದಂತಾಯಿತು. ಅಯ್ಯೋ ದೇವರೇ ಇದೇನಾಯ್ತು.. ಬಾಂಗ್ಲಾ ಸೈನಿಕನೋ, ಅಥವಾ ಮತ್ತಿನ್ಯಾರೋ ಸಿಕ್ಕಿಬಿಟ್ಟರೆ ಇನ್ನೇನು ಗತಿ.? ಇಷ್ಟೆಲ್ಲ ಮಾಡಿ ಕೊಟ್ಟ ಕೊನೆಯ ಘಳಿಗೆಯಲ್ಲಿ ನಮ್ಮ ಪ್ರಯತ್ನ ವಿಫಲವಾಗಿಬಿಟ್ಟರೆ..? ಎನ್ನುವ ಭಾವಗಳು ಕಾಡಿದವು.
         ಮಿಸುಕಾಡುತ್ತಿದ್ದ ಆ ಆಕೃತಿಗೆ ಕಾಣದಂತೆ ಅಡಗಿಕುಳಿತುಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. ಬಯಲೇ ಇದ್ದಂತೆ ಕಾಣುತ್ತಿತ್ತಾದ್ದರಿಂ ಎಲ್ಲಿ ಅಡಗಿ ಕೂರುವುದು ಎನ್ನುವುದೂ ಸ್ಪಷ್ಟವಾಗಲಿಲ್ಲ. ಎದುರಿನಲ್ಲಿ ಮಿಸುಕಾಡುತ್ತಿದ್ದ ಆ ಆಕೃತಿ ಕೆಲಕಾಲ ದೂರಾದಂತೆ ಮತ್ತೆ ಕೆಲಕಾಲ ಮಧುಮಿತಾ-ವಿನಯಚಂದ್ರ ರಬ್ಬಿಕೊಂಡು ಕುಳಿತ ಸನಿಹದಲ್ಲೇ ಹಾದು ಹೋದಂತೆ ಮಾಡುತ್ತಿತ್ತು. ಹತ್ತಿರಕ್ಕೆ ಹೋದ ಸಂದರ್ಭದಲ್ಲಿ ಮಾತ್ರ ಆ ಆಕೃತಿಯೊಂದು 14-16 ವರ್ಷದ ಪುಟ್ಟ ಹುಡುಗನಂತೆ ಕಾಣಿಸಿತು. ಆತ ಅದೇನು ಮಾಡುತ್ತಿದ್ದನೋ? ಎಲ್ಲಿಗೆ ಹೊರಟಿದ್ದನೋ? ಹೋಗಿದ್ದನೋ ? ಈ ಗಡಿಯಲ್ಲಿ ಅವನಿಗೇನು ಕೆಲಸವೋ ಎಂದುಕೊಂಡ ವಿನಯಚಂದ್ರ. ಎರಡೂ ಕಡೆಯ ಸೈನಿಕರ ಕಣ್ಣಿಗೆ ಬಿದ್ದರೆ ಕ್ಷಣಾರ್ಧದಲ್ಲಿ ಆತನ ದೇಹ ಗುಂಡಿನಿಂದ ಛಿದ್ರ ಛಿದ್ರವಾಗುವುದು ನಿಶ್ಚಿತ ಎನ್ನಿಸಿತು. ಕೆಲ ಸಮಯದ ನಂತರ ಆತ ದೂರಕ್ಕೆ ಸರಿದುಹೋದ.ಇವರು ಮುಂದಕ್ಕೆ ಹೆಜ್ಜೆ ಹಾಕಿದರು.
         ಸರ್ಚ್ ಲೈಟ್ ಪ್ರತಿ ಐದು ನಿಮಿಷಕ್ಕೊಮ್ಮೆ ಬೆಳಕನ್ನು ಬೀರುತ್ತದೆ ಎನ್ನುವುದು ಅರ್ಚಕರು ಹೇಳಿದ ಮಾತು. ಗಮನವಿಟ್ಟು ನೋಡಿದ ವಿನಯಚಂದ್ರನಿಗೆ ಯಾವ ಕ್ಷಣದಲ್ಲಿ ಸರ್ಚ್ಲೈಟಿನ ಬೆಳಕು ಯಾವ ಜಾಗದಲ್ಲಿ ಬೀಳುತ್ತದೆ ಎನ್ನುವುದು ಮನದಟ್ಟಾಯಿತು. ಆ ಬೆಳಕಿನ ಕಣ್ಣಿಗೆ ಬೀಳದಂತೆ ಸಾಗುವುದು ಮುಖ್ಯವಾಗಿತ್ತು. ಅರ್ಚಕರ ಮುಂಜಾಗರೂಕತೆಯಿಂದಾಗಿ ಸರ್ಚ್ಲೈಟಿನ ಪ್ರಭೆಗೆ ಅಷ್ಟಾಗಿ ಸಿಗದಂಹ ಮಣ್ಣಿನ ಬಣ್ಣದ ಬಟ್ಟೆಯನ್ನು ಇಬ್ಬರೂ ತೊಟ್ಟಿದ್ದರು. ಸರ್ಚ್ ಲೈಟ್ ಇಬ್ಬರ ಮೇಲೆ ಬಿದ್ದರೂ ಅಷ್ಟು ತೊಂದರೆಯಾಗಬಾದರು, ಅಥವಾ ಸರ್ಚ್ ಲೈಟ್ ಸಹಾಯದಿಂದ ಸೈನಿಕರು ನೋಡಿದರೂ ತಕ್ಷಣಕ್ಕೆ ಅವರಿಗೆ ಏನೋ ಗೊತ್ತಾಗಬಾದರು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿತ್ತು.
         ಹಳ್ಳವನ್ನು ದಾಟಿದ ತಕ್ಷಣ ಸಿಕ್ಕ ಚಿಕ್ಕ ಬಯಲಂತೂ ಮರಳುಮಯವಾಗಿತ್ತು. ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಳ್ಳ ತಂದು ಶೇಖರಿಸಿದ ಮರಳು ಅದಾಗಿರಬೇಕು. ಮರಳಿನಾಳದಿಂದ ಧಗೆ ಹೊರಬರುತ್ತಿತ್ತು. ಅದನ್ನು ದಾಟಿ ಮುಂದಕ್ಕೆ ಬಂದ ತಕ್ಷಣ ಮಧುಮಿತಾ ಇದ್ದಕ್ಕಿದ್ದಂತೆ ಬೆಚ್ಚಿದಳು. ಅದನ್ನು ಗಮನಿಸಿದ ವಿನಯಚಂದ್ರ ಸೀದಾ ಹೋಗಿ ಅವಳ ಬಾಯನ್ನು ಮುಚ್ಚಿದ. ಅವಳ ಬಾಯನ್ನು ಹಾಗೆ ಮುಚ್ಚದಿದ್ದರೆ ಅವಳು ಖಂಡಿತ ಕೂಗಿಕೊಳ್ಳುತ್ತಿದ್ದಳು. ಬೆಚ್ಚಿದ ವಿನಯಚಂದ್ರ ಸುತ್ತೆಲ್ಲ ಪರೀಕ್ಷಾ ದೃಷ್ಟಿ ಬೀರಿದ. ಕೆಲ ಘಳಿಗೆಯಲ್ಲೇ ಆತನ ಕಣ್ಣಿಗೆ ಬಾಲಕ ಕಾಣಿಸಿದ. ಹಳ್ಳದ ದಿಬ್ಬವನ್ನು ಏರುವಾಗ ಕಾಣಿಸಿದ್ದ ಬಾಲಕ ಇಲ್ಲಿ ಮತ್ತೆ ಕಾಣಿಸಿದ್ದ. ಅಷ್ಟೇ ಅಲ್ಲದೇ ಆ ಬಾಲಕನ ಕಣ್ಣಿಗೆ ಇಬ್ಬರೂ ಕಾಣಿಸಿಕೊಂಡು ಬಿಟ್ಟಿದ್ದರು. ಇಬ್ಬರಿಗೂ ಒಮ್ಮೆ ದಿಘಿಲಾಯಿತು. ಬಾಲಕನಲ್ಲೂ ಭಯ ಮೂಡಿರುವುದು ಸ್ವಷ್ಟವಾಗಿತ್ತು. ` ಈತ ಸೈನಿಕರಿಗೆ ಮಾಹಿತಿ ವಿನಿಮಯ ಮಾಡುವವನಾಗಿದ್ದರೆ ಏನು ಮಾಡುವುದು..?' ಎನ್ನುವ ಆತಂಕ ಒಮ್ಮೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದೆ ಬೆನ್ನಿನ ಆಳದಲ್ಲಿ ಬೆವರೊಡೆಯಿತು. ಆ ಬಾಲಕನಿಗೆ ಹೊಡೆದು ಎಚ್ಚರತಪ್ಪಿಸಿಬಿಡಲೇ ಎಂದುಕೊಮಡು ಸೀದಾ ಆತನ ಮೇಲೆ ದಾಳಿ ಮಾಡಲು ಮುಂದಾದ.
         ಅಷ್ಟರಲ್ಲಿ ಆ ಬಾಲಕನೇ ಇವರ ಕಾಲಿಗೆ ಬಿದ್ದುಬಿಟ್ಟಿದ್ದ. ಅರ್ಧ ಬೆಂಗಾಲಿಯಲ್ಲಿ ಅರ್ಧ ಉರ್ದುವಿನಲ್ಲಿ ಏನೇನೋ ಹಲುಬುತ್ತಿದ್ದ. ಆತ ಹೇಳಿದ್ದೇನೆಂಬುದು ಸ್ಪಷ್ಟವಾಗಲಿಲ್ಲ. ಆದರೆ ಆ ಬಾಲಕ ಹಾಗೇ ಹಲುಬುತ್ತ ಬಿಡುವುದೂ ಸಾಧ್ಯವಿರಲಿಲ್ಲ. ವಿನಯಚಂದ್ರ ಬಗ್ಗಿ ಆತನ ಬಾಯನ್ನು ಒತ್ತಿ ಹಿಡಿದು `ಶ್..' ಎಂದ. ಕೆಲ ಕ್ಷಣಗಳ ನಂತರ ಆ ಬಾಲಕನಿಗೆ ಅದೇನೆನ್ನಿಸಿತೋ ಅಥವಾ ಆತನಲ್ಲಿದ್ದ ಭಯ ದೂರವಾಯಿತೋ.. ಬಾಯಿಗೆ ಅಡ್ಡಲಾಗಿ ಹಿಡಿದಿದ್ದ ಕೈಯನ್ನು ಬಿಡಿಸಿಕೊಂಡು ಇಳಿದನಿಯಲ್ಲಿ ಮಾತನಾಡತೊಡಗಿದ. ಆತ ಮಾತನಾಡಿದ್ದು ವಿನಯಚಂದ್ರನಿಗೆ ಸಂಪೂರ್ಣ ಅರ್ಥವಾಗಲಿಲ್ಲ. ಆದರೆ ಮಧುಮಿತಾಳಿಗೆ ಅರ್ಥವಾಗಿತ್ತು.
(ಗಡಿ ಭಾಗದ ಗದ್ದೆಗಳು)
         ತಮ್ಮಂತೆ ಅವನೂ ಕೂಡ ಭಾರತದ ಗಡಿಯೊಳಕ್ಕೆ ನುಸುಳು ಬಂದವನಾಗಿದ್ದ. ಮನೆಯಲ್ಲಿ 12 ಜನ ಅಣ್ಣತಮ್ಮಂದಿರು. ಢಾಕಾದಿಂದ ಭಾರತಕ್ಕೆ ಸಾಗಬೇಕು ಎನ್ನುವ ಕಾರಣಕ್ಕಾಗಿಯೇ ಹೇಗೋ ಪಡಿಪಾಟಲು ಪಟ್ಟು ಬಂದಿದ್ದ. ಬಡತನದಿಂದ ಕೂಡಿದ್ದ ಕುಟುಂಬದಲ್ಲಿ ಮಾತು ಮಾತಿಗೆ ಬೈಗುಳಗಳು, ಹೊಡೆತಗಳು ಸಿಗುತ್ತಿದ್ದವು. ಹೊಟ್ಟೆತುಂಬ ಊಟ ಸಿಗುತ್ತಿರಲಿಲ್ಲ. ಮಾತು ಮಾತಿಗೆ ಏಟು ಸಿಗುತ್ತಿದ್ದವು. ಚಿಕ್ಕಂದಿನಲ್ಲೇ ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನಾದರೂ ಮನೆಯಲ್ಲಿ ಸದಾಕಾಲ ಬೈಗುಳ ಅಥವಾ ಹೊಡೆತ ತಪ್ಪುತ್ತಿರಲಿಲ್ಲ. ಅಪ್ಪ, ನಾಲ್ಕು ಜನ ಅಮ್ಮಂದಿರು, ಅಣ್ಣಂದಿರು ಇಷ್ಟು ಸಾಲದೆಂಬಂತೆ ಸಂಬಂಧಿಕರೆಲ್ಲ ಬಂದು ಯಥಾನುಶಕ್ತಿ ಹೊಡೆಯುತ್ತಿದ್ದರು. ಹೀಗಿದ್ದಾಗಲೇ ಯಾರೋ ಒಬ್ಬರು ಆತನಿಗೆ ಭಾರತದ ಬಗ್ಗೆ ಹೇಳಿದ್ದರು. ಅಲ್ಲಿಗೆ ಓಡಿಹೋಗಲು ತಿಳಿಸಿದ್ದರು. ಅಷ್ಟಲ್ಲದೇ ಅಲ್ಲಿ ಬದುಕು ಹಸನಾಗುತ್ತದೆ ಎಂಬ ಕನಸನ್ನೂ ಬಿತ್ತಿದ್ದರು. ಆ ಕಾರಣಕ್ಕಾಗಿಯೇ ಮನೆಯಲ್ಲಿ ತಂದೆಯ ದುಡ್ಡನ್ನು ಕದ್ದು ಭಾರತಕ್ಕೆ ಸಾಗಲು ಗಡಿಯ ಬಳಿ ಬಂದಿದ್ದ. ಗಡಿಯ ಬಳಿ ಬಂದವನು ಹೇಗೆ ಹೋಗಬೇಕು ತಿಳಿಯದೇ ಒದ್ದಾಡಲು ಆರಂಭಿಸಿದ್ದ. ಭಾರತದ ಗಡಿಯಲ್ಲಿ ನುಸುಳಲು ಸೂಕ್ತ ಜಾಗವನ್ನು ಹುಡುಕುತ್ತ ಇತ್ತಿಂದತ್ತ, ಅತ್ತಿಂದಿತ್ತ ಅಲೆದಾಡುತ್ತಿದ್ದ. ವಿನಯಚಂದ್ರ-ಮುಧುಮಿತಾರ ಕೈಗೆ ಸಿಕ್ಕುಬಿದ್ದಿದ್ದ.
           ಆತನೇ ಮಧುಮಿತಾಳ ಬಳಿ ಹೇಳಿದಂತೆ ಮೊದಲಿಗೆ ವಿನಯಚಂದ್ರ-ಮಧುಮಿತಾರು ಬಾಂಗ್ಲಾದೇಶದ ಸೈನಿಕರಿರಬೇಕು ಎಂದುಕೊಂಡಿದ್ದನಂತೆ. ಅದೇ ಕಾರಣಕ್ಕೆ ಕೈಕಾಲಿಗೆ ಬಿದ್ದು ಬೇಡಿಕೊಳ್ಳಲು ಆರಂಭಿಸಿದ್ದು. ಕೊನೆಗೆ ಯಾವಾಗ ವಿನಯಚಂದ್ರ ಬಾಯನ್ನು ಗಟ್ಟಿಯಾಗಿ ಮುಚ್ಚಿದನೋ ಆಗಲೇ ಇವರೂ ಗಡಿಯಲ್ಲಿ ನುಸುಳಲು ಆಗಮಿಸಿದ್ದು ಎನ್ನುವುದು ಅರಿವಾಗಿ ಸುಮ್ಮನಾಗಿದ್ದ,
           `ನಾನೂ ಭಾರತದೊಳಕ್ಕೆ ಹೋಗಬೇಕು. ನೀವು ಹೋಗುತ್ತಿದ್ದೀರಲ್ಲಾ.. ದಯವಿಟ್ಟು ನನ್ನನ್ನೂ ನಿಮ್ಮ ಜೊತೆಗೆ ಕರೆದುಕೊಂಡು ಹೋಗಿ.. ಈ ನರಕದಲ್ಲಿ ಇದ್ದು ಸಾಕಾಗಿದೆ. ಭಾರತದಲ್ಲಿ ನೀವು ಹೇಳಿದ ಕೆಲಸ ಮಾಡಿಕೊಂಡಿರುತ್ತೇನೆ.. ನನ್ನನ್ನು ಕರೆದೊಯ್ಯಿರಿ..' ಎಂದು ಅಂಗಲಾಚಲು ಆರಂಭಿಸಿದ್ದ. ಮಧುಮಿತಾಳ ಮನಸ್ಸು ಕರಗಲು ಆರಂಭಿಸಿತ್ತು. ಆತನ ಹೆಸರನ್ನು ಕೇಳಿದ್ದಕ್ಕೆ ಪ್ರತಿಯಾಗಿ ಆತ `ಅಮ್ಜದ್..' ಎಂದಿದ್ದ.
          ಆತನ ಬೇಡಿಕೆಯನ್ನು ಮಧುಮಿತಾ ವಿನಯಚಂದ್ರನ ಬಳಿ ತಿಳಿಸಿದಾಗ ಆತ ಕಡ್ಡಿ ತುಂಡುಮಾಡಿದಂತೆ ಬೇಡ ಎಂದಬಿಟ್ಟ. ತಾವಿಬ್ಬರು ಗಡಿಯನ್ನು ಸುರಕ್ಷಿತವಾಗಿ ದಾಟುವುದು ಬಹುಮುಖ್ಯ. ಅಷ್ಟು ಮಾಡಿದ್ದರೆ ಸಾಕಿತ್ತು. ಈ ಬಾಲಕನನ್ನು ಕರೆದೊಯ್ದು ಮತ್ತೊಂದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಕಾಗಿರಲಿಲ್ಲ. ನೇರವಾಗಿ ಮಧುಮಿತಾಳ ಬಳಿ ಬೇಡವೇ ಬೇಡ ಎಂದುಬಿಟ್ಟಿದ್ದ. ಆಕೆಯೂ ವಿನಯಚಂದ್ರನ ಬಳಿ ಹಲವಾರು ರೀತಿಯಿಂದ ಹೇಳಿ ನೋಡಿದಳು. ಯಾವುದಕ್ಕೂ ವಿನಯಚಂದ್ರ ಜಗ್ಗದಿದ್ದಾಗ ಮಧುಮಿತಾ ಅಮ್ಜದ್ ಬಳಿ ತಿರುಗಿ ವಿನಯಚಂದ್ರ ಹೇಳಿದಂತೆ ಬೇಡವೇ ಬೇಡ ಎಂದಳು. ಮತ್ತೆ ಬೇಡಿಕೊಳ್ಳಲು ಮುಂದಾದ ಆತನಿಗೆ `ತಮ್ಮನ್ನು ಹಿಂಬಾಲಿಸಬೇಡ..' ಎಂದು ತಾಕೀತು ಮಾಡಿ ಮುನ್ನಡೆದರು. ಆತ ಅಂಗಲಾಚುತ್ತಲೇ ಇದ್ದ.
        ಮುಂದಕ್ಕೆ ಸಾಗುವುದು ಸುಲಭವಾಗಿರಲಿಲ್ಲ. ಸರ್ಚ್ ಲೈಟಿನ ಕಣ್ತಪ್ಪಿಸಿ, ನಿಂತು ನಿಂತು ಸಾಗಬೇಕಿತ್ತು. ಹೀಗಾಗಿ ಅವಿತು ಅವಿತು ಮುಂದಕ್ಕೆ ಸಾಗಿದರು. ಮುಂದೆ ಮುಂದೆ ಹೋದಂತೆಲ್ಲ ಭಾರತ-ಬಾಂಗ್ಲಾ ನಡುವಿನ ಗಡಿಬೇಲಿ ಕಾಣಿಸಲಾರಂಭಿಸಿತು. ದೊಡ್ಡದೊಂದು ದಿಬ್ಬ. ದಿಬ್ಬದ ಮೇಲೆ ಮುಳ್ಳಿನ ಬೇಲಿ ಇರುವುದು ಕಾಣಸುತ್ತಿತ್ತು. ಆಗಾಗ ಬೀಳುತ್ತಿದ್ದ ಸರ್ಚ್ ಲೈಟಿನ ಬೆಳಕಿನಲ್ಲಿ ಮೂರು ಹಂತದ ಬೇಲಿ ಇರುವುದು ಸ್ಪಷ್ಟವಾಗುತ್ತಿತ್ತು. ಅರ್ಚಕರು ಹೇಳಿದ್ದ ದಿಕ್ಕಿನ ಜಾಡು ಹಿಡಿದವರಿಗೆ ಗಡಿ ಹತ್ತಿರಕ್ಕೆ ಬಂದರೂ ಸುರಂಗವಿರುವುದು ಕಾಣಿಸಲಿಲ್ಲ. ಹಾದಿ ತಪ್ಪಿದ್ದೇವಾ ಎಂದುಕೊಂಡರಾದರೂ ಎರಡು ದೇಶಗಳ ನಡುವಿನ ಬೇಲಿಯಲ್ಲಿ ಕದ್ದು ನುಸುಳಲು ಮಾಡಿದ ಸುರಂಗ ಸುಲಭಕ್ಕೆ ಕಾಣುವುದಿಲ್ಲ ಎನ್ನುವುದು ಅರಿವಾಯಿತು. ಗಡಿಗೆ ಕೆಲವೇ ಮೀಟರು ದೂರವಿದೆ ಎನ್ನುವಾಗ ಸರ್ಚ್ ಲೈಟಿನ ಆಗಮನದ ಅರಿವಾಯಿತು. ಅದರ ಕಣ್ಣಿಗೆ ಬೀಳದೇ ತಪ್ಪಿಸಿಕೊಳ್ಳಬೇಕಾಗಿತ್ತು. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಸರ್ಚ್ ಲೈಟ್ ಹತ್ತಿರದಲ್ಲಿದೆ ಎನ್ನುವಾಗ ಪೊದೆಯಂತಹ ಸ್ಥಳವನ್ನು ನೋಡಿ ಅಲ್ಲಿ ಅಡಗಿದರು. ಆ ಪೊದೆಯ ಮೇಲೆ ಹಾದು ಹೋದ ಸರ್ಚ್ ಲೈಟ್ ಬೆಳಕು ಇಬ್ಬರ ಮುಖದ ಮೇಲೂ ಬಿದ್ದಿತು. ಬೆಳಕು ತಮ್ಮಿಂದ ದೂರ ಹೋಗಿದ್ದು ಗೊತ್ತಾದ ತಕ್ಷಣ ವಿನಯಚಂದ್ರ ಜಾಗೃತನಾದ. ಭಾರತದೊಳಕ್ಕೆ ನುಸುಳಲು ಇದ್ದ ಸುರಂಗದ ಬಾಯನ್ನು ಹುಡುಕಲು ನಿಂತ. ಆತನ ಹಿಂದೆ ಮತ್ತೆ ಸದ್ದಾಂತಾಯಿತು. ತಿರುಗಿ ನೋಡಿದರೆ ಮತ್ತದೇ ಬಾಲಕ ನಿಂತಿದ್ದ. ಹಿಂಬಾಲಿಸಬೇಡ ಎಂದು ಹೇಳಿದ್ದರೂ ಹಿಂದೆಯೇ ಬಂದಿದ್ದವನ ಮೇಲೆ ವಿನಯಚಂದ್ರನಿಗೆ ಎಲ್ಲಿಲ್ಲದ ಕೋಪ ಬಂದಿತು. ನಾಲ್ಕು ಏಟು ಇಕ್ಕಿಬಿಡಲೇ ಎಂದುಕೊಂಡನಾದರೂ ಗಡಿಯಲ್ಲಿ ಇಂತದ್ದೊಂದು ಗಲಾಟೆ ಬೇಡ ಎಂದುಕೊಂಡು ಕಷ್ಟಪಟ್ಟು ನಿಯಂತ್ರಿಸಿಕೊಂಡ.
          ಕೆಲಕಾಲದ ಹುಡುಕಾಟದ ನಂತರ ದೊಡ್ಡದೊಂದು ಹೊಂಡ ಕಾಣಿಸಿತು. ಆದರೆ ಈ ಹೊಂಡವೇ ಸುರಂಗವೇ ಎನ್ನುವುದು ಮಾತ್ರ ಸ್ಪಷ್ಟವಾಗಲಿಲ್ಲ. ಕೊನೆಗೆ ಈ ಹೊಂಡದಲ್ಲಿ ಇಳಿದು ತಾನು ಪರೀಕ್ಷೆ ಮಾಡುತ್ತೇನೆ. ಇದು ಸುರಂಗವೇ ಹೌದಾದರೆ ನಿನ್ನನ್ನು ಕರೆಯುತ್ತೇನೆ. ಅಲ್ಲಿಯ ವರೆಗೆ ಮರೆಯಲ್ಲಿ ಅಡಗಿರು ಎಂದು ಮಧುಮಿತಾಳಿಗೆ ಹೇಳಿದ ವಿನಯಚಂದ್ರ. ಅಷ್ಟರಲ್ಲಿ ಸರ್ಚ್ ಲೈಟ್ ಇನ್ನೊಂದು ಸುತ್ತು ಹಾಕಿ ಬರುತ್ತಿತ್ತು. ವಿನಯಚಂದ್ರ ಹೊಂಡದೊಳಗೆ ಅಡಗಿ ಕುಳಿತ. ಮಧುಮಿತಾ ವಾಪಾಸು ಬಂದು ಮರೆಯಲ್ಲಿ ಕುಳಿತಳು. ಅಮ್ಜದ್ ಅವಳನ್ನು ಹಿಂಬಾಲಿಸಿದ್ದ.!

(ಮುಂದುವರಿಯುತ್ತದೆ.)