Monday, November 14, 2016

500, 1000 ರು. ನೋಟು ನಿಷೇಧ : ಗುತ್ತಿಗೆದಾರರಿಗೆ ಸಂಕಷ್ಟ, ಗುತ್ತಿಗೆ ಕೆಲಸಕ್ಕೆ ಬಾರದ ಕೆಲಸಗಾರರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 500 ರು ಹಾಗೂ 1000 ರು. ನೋಟುಗಳನ್ನು ರದ್ದು ಮಾಡಿ ನಾಲ್ಕು ದಿನಗಳು ಕಳೆದಿದೆ. ಕಳೆದ ನಾಲ್ಕು ದಿನಗಳಿಂದ ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಡೆಸುವ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ನೋಟು ನಿಷೇಧದ ಪರಿಣಾಮ ಗುತ್ತಿಗೆದಾರರು ಹಾಗೂ ಕೆಲಸಗಾರರ ಮೇಲೆ ಪರಿಣಾಮವನ್ನು ಉಂಟುಮಾಡಿದೆ.
ರಾಜ್ಯ ಸರಕಾರ ವಿವಿಧ ಇಲಾಖೆಗಳ ಅಡಿಯಲ್ಲಿ ಕಾಮಗಾರಿ ಕೈಗೊಳ್ಳಲು ಇತ್ತೀಚೆಗೆ ಹಣ ಬಿಡುಗಡೆ ಮಾಡಿದೆ. ಇದರಿಂದಾಗಿ ಕಳೆದ 15 ದಿನಗಳ ಅವಧಿಯಲ್ಲಿ ರಸ್ತೆ ಕಾಮಗಾರಿ, ಹೊಂಡ ತುಂಬುವಿಕೆ, ಕಾಲು ಸಂಕ ನಿಮರ್ಾಣ ಸೇರಿದಂತೆ ಸರಕಾರದ ವಿವಿಧ ಇಲಾಖೆಯ ಅಡಿಯ ಕಾಮಗಾರಿಗಳು ಪ್ರಗತಿಯನ್ನು ಕಂಡಿದ್ದವು. ಟೆಂಡರ್ ಮೂಲಕ ಕಾಮಗಾರಿಗಳ ಗುತ್ತಿಗೆ ಹಿಡಿದ ಗುತ್ತಿಗೆದಾರರು ಕೆಲಸವನ್ನು ಆರಂಭಿಸಿದ್ದರು. ಆದರೆ ನರೇಂದ್ರ ಮೋದಿಯವರು 500 ಹಾಗೂ 1000 ರು. ನೋಟು ನಿಷೇಧಿಸಿದ ಕೂಡಲೇ ಈ ಕಾಮಗಾರಿಗಳೆಲ್ಲ ಅರ್ಧಕ್ಕೆ ನಿಂತುಬಿಟ್ಟಿವೆ.
ಕಾಮಗಾರಿ ನಿಲುಗಡೆಗೆ ಗುತ್ತಿಗೆದಾರರು ಕೊಡುತ್ತಿರುವ ಕಾರಣ ಮಾತ್ರ ಸ್ಪಷ್ಟ. ಗುತ್ತಗೆದಾರರು ಯಾವುದೇ ಕಾಮಗಾರಿಗಳಿದ್ದರೂ ದಿನಗೂಲಿಯ ಲೆಕ್ಕದಲ್ಲಿ ಕೆಲಸಗಾರರನ್ನು ಕರೆಸಿ ಕಾಮಗಾರಿ ಕೈಗೊಳ್ಳುತ್ತಾರೆ. ಮರು ಡಾಂಬರೀಕರಣ ಅಥವಾ ಇನ್ಯಾವುದೇ ಸರಕಾರಿ ಕಾಮಗಾರಿಗಳನ್ನು ಕೈಗೊಳ್ಳುವುದಾದಲ್ಲಿ ಕೃಷಿ ಕೂಲಿಗಿಂತ ಜಾಸ್ತಿ ದಿನಗೂಲಿಯನ್ನು ಈ ಕೆಲಸಗಾರರು ಬಯಸುತ್ತಾರೆ. ಬಹುತೇಕ ಕೆಲಸಗಾರರಿಗೆ 400 ರಿಂದ 500 ರು. ಕೊಡಲೇಬೇಕು. ಇದೀಗ ಕೇಮದ್ರ ಸರಕಾರ 500 ರು. ನೋಟನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ತಿಳಿದ ದಿನಗೂಲಿ ನೌಕರರು ಗುತ್ತಿಗೆದಾರರು ನೀಡುವ 500 ರು. ನೋಟನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ದಿನಗೂಲಿ ಕೆಲಸಗಾರರಿಗೆ 100 ರುಪಾಯಿಯ ನೋಟುಗಳ ಮೂಲಕ ದಿನಗಲೂಯನ್ನು ನೀಡೋಣವೆಂದರೆ ಗುತ್ತಿಗೆದಾರರ ಬಳಿ ನಿಗದಿತ ಮೊತ್ತದ ಚಿಲ್ಲರೆ ಹಣವಿಲ್ಲ. ಇರುವ ನೋಟನ್ನು ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ಹೈರಾಣಾಗುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.
ಗುತ್ತಿಗೆದಾರರು ಬ್ಯಾಂಕ್ಗಳಿಗೆ ತೆರಳಿ 500 ರು. ನೋಟಿಗೆ ಬದಲಾಗಿ 100 ರು. ನೋಟನ್ನು ಪಡೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಬ್ಯಾಂಕುಗಳಲ್ಲಿ ಹೆಚ್ಚಿದ ಜನಜಂಗುಳಿಯಿಂದಾಗಿ ನಿಗದಿತ ಹಣ ಪಡೆಯುವುದೂ ಕೂಡ ಸಾಧ್ಯವಾಗುತ್ತಿಲ್ಲ. ಅಲ್ಲದೇ ಪ್ರತಿಯೊಂದು ಕಾಮಗಾರಿ ಕೈಗೊಳ್ಳು ಕನಿಷ್ಟ 25 ದಿನಗೂಲಿ ನೌಕರರ ಅಗತ್ಯವಿದ್ದು ಅವರೆಲ್ಲರಿಗೂ 500 ರು. ನಂತೆ ಕೊಡಬೇಕು. ಈ ಮೊತ್ತವನ್ನು ಬ್ಯಾಂಕಿನಿಂದ ಪಡೆದರೆ, ಬ್ಯಾಂಕಿಗೆ ನಿಗದಿತ ದಾಖಲೆ ಹಾಗೂ ಆದಾಯದ ಮೂಲವನ್ನು ತಿಳಿಸಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮೊತ್ತದ ಹಣದ ಕುರಿತು ಅಧಿಕಾರಿಗಳು ಪ್ರಶ್ನಿಸಿದರೆ ಅವರಿಗೆ ಮಾಹಿತಿಯನ್ನು ಒದಗಿಸುವುದು ಕಷ್ಟವಾಗಬಹುದು. ಹೀಗಾಗಿ ನೋಟಿನ ಸಮಸ್ಯೆ ಮುಗಿಯುವ ವರೆಗೂ ಕಾಮಗಾರಿಗಳನ್ನು ನಿಲ್ಲಿಸಲಾಗುತ್ತದೆ ಎಂಬುದು ಗುತ್ತಿಗೆದಾರರ ಅಭಿಪ್ರಾಯವಾಗಿದೆ.
ಇದಕ್ಕೆ ಪ್ರತಿಯಾಗಿ ದಿನಗೂಲಿ ನೌಕರರು ಹೇಳುವುದೇ ಬೇರೆ. ದಿನಂಪ್ರತಿ 400-500 ರು. ದಿನಗೂಲಿ ನೀಡುತ್ತಿದ್ದರು. ಆದರೆ ನೋಟು ರದ್ದು ಮಾಡಲಾಗಿದೆ. ನಾವು ನೋಟನ್ನು ಪಡೆದರೂ ಅದನ್ನು ಚಲಾವಣೆ ಮಾಡುವುದು ಕಷ್ಟ. ಅಲ್ಲದೇ ದಿನಗೂಲಯ ಮೂಲಕ ಜೀವನ ನಡೆಸುವವರಿಗೆ ಪ್ರತಿದಿನ ಬ್ಯಾಂಕಿಗೆ ಹೋಗಿ ಹಣ ಬದಲಾವಣೆ ಮಾಡುವುದು ಅಸಾಧ್ಯದ ಮಾತು. ಹೀಗಾಗಿ ಗುತ್ತಿಗೆದಾರರ ಬಳಿ 500ರ ನೋಟಿನ ಬದಲಾಗಿ 100ರ ನೋಟುಗಳನ್ನೇ ನೀಡಬೇಕು ಎಂದು ಹೇಳಲಾಗುತ್ತಿದೆ. ಆದರೆ ಗುತ್ತಗೆದಾರರ ಬಳಿಯೂ 100 ನೋಟುಗಳಿಲ್ಲ. ಕಾಮಗಾರಿಗಳು ನಿಲುಗಡೆಯಾಗುವ ಹಂತಕ್ಕೆ ಬಂದಿದೆ. ದಿನಗೂಲಿ ನೌಕರರಿಗೂ ಹಾಗೂ ಗುತ್ತಗೆದಾರರಿಗೂ ಸಮಸ್ಯೆಯಾಗುತ್ತಿದೆ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ವಿವಿಧ ಇಲಾಖೆಗಳ ಇಂಜಿನಿಯರುಗಳು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಯ ನಿಗದಿ ಪಡಿಸಿದ್ದಾರೆ. ಆದರೆ ನೋಟುಗಳ ಅಭಾವದಿಂದ ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಕೈಗೊಳ್ಳಲಾಗದೇ ಗುತ್ತಿಗೆದಾರರು ಹೈರಾಣಾಗುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಕಾಮಗಾರಿಗಳು ಅರ್ಧಕ್ಕೆ ನಿಂತರೆ ಅವುಗಳ ಗುಣಮಟ್ಟ ಕಾಪಾಡುವುದೂ ಕೂಡ ಸಮಸ್ಯೆಯಾಗುತ್ತದೆ. ನೋಟು ನಿಷೇಧವನ್ನು ಗಮನದಲ್ಲಿ ಇರಿಸಿಕೊಂಡು ಈಗಾಗಲೇ ನಿಗದಿ ಮಾಡಿಸುವ ಸಮಯದಲ್ಲಿ ಸಡಿಲ ನೀತಿಯನ್ನು ಅನುಸರಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಕಪ್ಪು ಹಣದ ವಿರುದ್ಧ ಸಮರ ಸಾರುವ ನಿಟ್ಟಿನಲ್ಲಿ ಮೋದಿಯವರು ತೆಗೆದುಕೊಂಡಿರುವ ನಿಧರ್ಾರ ಕೆಲವು ಕಡೆಗಳಲ್ಲಿ ಸಮಸ್ಯೆಗಳನ್ನೂ ಉಂಟುಮಾಡುತ್ತಿದೆ. ಈ ಸಮಸ್ಯೆಗಳು ಬೇಗನೆ ಪರಿಹಾರವಾಗಲಿ ಎನ್ನುವ ಆಶಯವೂ ಗುತ್ತಿಗೆದಾರರು ಹಾಗೂ ದಿನಗೂಲಿ ನೌಕರರದ್ದಾಗಿದೆ.

-----------------

500 ರು. ನೋಟು ನಿಷೇಧ ಸಾಕಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿದೆ. ದಿನಗೂಲಿ ನೌಕರರಿಗೆ 500 ರು. ನೀಡಿ ಕೆಲಸ ಮಾಡಿಸಿಕೊಲ್ಳಬೇಕಿತ್ತು. ಆದರೆ ಈ ನೌಕರರು 500 ರು. ನೋಟನ್ನು ತೆಗೆದುಕೊಳ್ಳುತ್ತಲೇ ಇಲ್ಲ. ನಮ್ಮ ಬಳಿ ಚಿಲ್ಲರೆ ಇಲ್ಲ. ಹೀಗಾಗಿ ಕೆಲಸಗಾರರಿಗೆ ಹಣ ನೀಡುವುದು ಕಷ್ಟವಾಗುತ್ತಿದೆ. ಕಾಮಗಾರಿಗಳೆಲ್ಲ ನಿಲುಗಡೆಯ ಹಂತ ಬಂದು ತಲುಪಿದೆ. ನರೇಂದ್ರ ಮೋದಿಯವರ ಕೆಲಸದ ಬಗ್ಗೆ ಮೆಚ್ಚುಗೆಯಿದೆ. ಆದರೆ ನಮ್ಮ ಮಟ್ಟಿಗೆ ಸಮಸ್ಯೆಗಳಾಗುತ್ತಿವೆ. ಈ ಸಮಸ್ಯೆ ಶೀಘ್ರ ಪರಿಹಾರವಾಗುವ ನಿರೀಕ್ಷೆಯಲ್ಲಿದ್ದೇವೆ.
ನವೀನಕುಮಾರ
ಗುತ್ತಿಗೆದಾರ

--------------------

(ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

Saturday, November 12, 2016

ಸಿಕ್ಕಿತು ಸ್ವಾತಂತ್ರ್ಯ

ಸಿಕ್ಕಿತು ಸ್ವಾತಂತ್ರ್ಯ
ಕೊನೆಗೂ ಸಿಕ್ಕಿತು ಸ್ವಾತಂತ್ರ್ಯ |

ಬಸಿದ ಬೆವರು
ಹರಿದ ನೆತ್ತು
ಕಳೆದ ಜೀವಗಳು, ಸಿಕ್ಕಿತು ಸ್ವಾತಂತ್ರ್ಯ|

ಭಾರತೀಯರ ಛಲ
ಹೋರಾಟದ ಫಲ
ಆಂಗ್ಲನಾಡು ದುರ್ಬಲ, ಸಿಕ್ಕಿತು ಸ್ವಾತಂತ್ರ್ಯ |

ಕಳೆದ ದಾಸ್ಯ
ಸ್ವಾಭಿಮಾನಿಯ ಭಾಷ್ಯ
ರಾಷ್ಟ್ರೀಯತೆಯ ದೃಶ್ಯ, ಸಿಕ್ಕಿತು ಸ್ವಾತಂತ್ರ್ಯ |

ಮೆರೆದ ದೇಶಭಕ್ತಿ
ಮುರಿದ ಕುಟಿಲಯುಕ್ತಿ
ಗೆದ್ದ ಜನರ ಪ್ರೀತಿ, ಸಿಕ್ಕಿತು ಸ್ವಾತಂತ್ರ್ಯ |

ಗಾಂಧೀಜಿಯ ಶಾಂತಿ
ಸುಭಾಷರ ಕ್ರಾಂತಿ
ಸಿಕ್ಕಿತು ಹೊಸ ನೀತಿ, ಸಿಕ್ಕಿತು ಸ್ವಾತಂತ್ರ್ಯ ||

----------------

(ಈ ಕವಿತೆಯನ್ನು ಬರೆದಿರುವುದು 9-08-2006ರಂದು, ದಂಟಕಲ್ಲಿನಲ್ಲಿ, ಅಜಮಾಸು 10 ವರ್ಷಗಳ ಹಿಂದಿನ ಕವಿತೆ ಇದು. ಸ್ವಾತಂತ್ರ್ಯ ಹೋರಾಟದ ಕುರಿತಂತೆ ಆ ದಿನಗಳಲ್ಲಿ ಸುಮ್ಮನೆ ಬರೆದಿದ್ದು. ಓದಿ ಹೇಳಿ )

Thursday, November 10, 2016

500, 1000 ರು. ನೋಟು ನಿಷೇಧ : ದೇವಸ್ಥಾನಗಳ ಹುಂಡಿ ಒಡೆಯಲು ನಿರ್ಧಾರ

ಅರ್ಚಕರು ದೇವಸ್ಥಾನಗಳ ಹುಂಡಿ ಒಡೆಯಲು ಮುಂದಾಗಿದ್ದಾರೆಯೇ? ಹೌದು. ಅಚ್ಚರಿ ಪಡಬೇಡಿ. ಇದು ಮಂಗಳವಾರ ಪ್ರಧಾನಿ ನರೇಂದ್ರ ಮೋಡಿಯವರು ದೇಶದಾದ್ಯಂತ 500 ಹಾಗೂ 100 ರು. ನೋಟು ನಿಷೇಧಿಸಿದ ಪರಿಣಾಮ.
ಎಲ್ಲ ದೇವಸ್ಥಾನಗಳಲ್ಲಿಯೂ ಕಾಣಿಕೆ ಹುಂಡಿಗಳಿರುತ್ತವೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಕಾಣಿಕೆ ಹುಂಡಿಯಲ್ಲಿ ಹಣವನ್ನು ಹಾಕುತ್ತಾರೆ. ದಿನವಹಿ ಸಾವಿರಾರು ರು.ಗಳವರೆಗೆ ಇಂತಹ ಕಾಣಿಕೆ ಹುಂಡಿಗಳಲ್ಲಿ ಹಣ ಸಂಗ್ರಹವಾಗುತ್ತದೆ. ಇದೀಗ ದೇಶದಾದ್ಯಂತ 500 ರು. ಹಾಗೂ 1000 ರು. ನೋಟುಗಳನ್ನು ರದ್ದುಪಡಿಸಿರುವುದರಿಂದ ಈ ಕಾಣಿಕೆ ಹುಂಡಿಗಳನ್ನು ತೆರೆಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ದೇವಸ್ಥಾನಗಳ ಆಡಳಿತವನ್ನು ನೋಡಿಕೊಳ್ಳುತ್ತಿರುವವರು ಇಂತಹ ಹುಂಡಿಗಳನ್ನು ತೆರೆಯಲು ಮುಂದಾಗಿದ್ದಾರೆ.
ಪ್ರತಿ ಕಾಣಿಕೆ ಹುಂಡಿಗಳಲ್ಲಿಯೂ ಬಹುಪಾಲು ಚಿಲ್ಲರೆ ಮೊತ್ತ ಸಂಗ್ರಹವಾಗುತ್ತದೆ. ಆಗೊಮ್ಮೆ ಈಗೊಮ್ಮೆ 10, 50 ಹಾಗೂ 100 ರು. ನೋಟುಗಳನ್ನೂ ಕಾಣಿಕೆಯ ಮೊತ್ತದಲ್ಲಿ ಹಾಕಲಾಗುತ್ತದೆ. ಸ್ವಲ್ಪ ಹೆಸರು ಮಾತಿನ ದೇವಸ್ಥಾನಗಳಾದರೆ ಅಂತಹ ದೇವಸ್ಥಾನಗಳ ಕಾಣಿಕೆ ಹುಂಡಿಗೆ ಹಾಕುವ ಮೊತ್ತವೂ ಜಾಸ್ತಿಯಾಗುತ್ತದೆ. ಪ್ರಸಿದ್ಧ ಸ್ಥಳಗಳಲ್ಲಿ 100ಕ್ಕಿಂತ ಹೆಚ್ಚಿನ ಅಂದರೆ 500 ಹಾಗೂ 1000 ರು. ನೋಟುಗಳನ್ನೂ ಕಾಣಿಕೆ ಹಾಕುವುದುಂಟು. ಇದೀಗ 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿರುವುದರಿಂದ ಕಾಣಿಕೆ ಹುಂಡಿಗಳಲ್ಲಿ ಸಂಗ್ರಹವಾಗಿರುವ ಇಂತಹ ನೋಟುಗಳನ್ನು ಬ್ಯಾಂಕಿಗೆ ಮರಳಿಸುವ ಅನಿವಾರ್ಯತೆ ಉಂಟಾಗಿದೆ
           ಡಿಸೆಂಬರ್ 31ರ ಒಳಗೆ ಈ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿಸದೇ ಇದ್ದಲ್ಲಿ ಈ ನೋಟುಗಳು ಬೆಲೆ ಕಳೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ಈಗಾಗಲೇ ಕಾಣಿಕೆ ಹುಂಡಿಯನ್ನು ತೆರೆದು ಅದರಲ್ಲಿ ಸಂಗ್ರಹವಾಗಿರುವ 500 ಹಾಗೂ 1000 ರು. ನೋಟುಗಳನ್ನು ವಿಂಗಡಿಸಲು ಮುಂದಾಗಿದೆ. ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿ ಕಾಣಿಕೆ ಹುಂಡಿಗಳನ್ನು ಒಡೆದು, ನೋಟುಗಳ ವಿಂಗಡಣೆ ಮಾಡಲು ಮುಂದಾಗಿದ್ದಾರೆ.
ಕಾಣಿಕೆ ಹುಂಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ 500 ಹಾಗೂ 100 ನೋಟುಗಳು ಸಿಗುವುದಿಲ್ಲ. ಚಿಲ್ಲರೆಗಳು ಹಾಗೂ 10, 20ರು ನೋಟುಗಳೇ ಅಧಿಕವಾಗಿರುತ್ತವೆ. ಹುಂಡಿಯನ್ನು ತೆರೆದು ಹುಡುಕಿದರೆ ಒಂದೊಂದು ಹುಂಡಿಗಳಲ್ಲಿ 5-10ರಷ್ಟು ಮಾತ್ರ ದೊಡ್ಡ ಮೊತ್ತದ ನೋಟುಗಳು ಸಿಗಬಹುದು. ಯಾರಾದರೂ ಹರಕೆಯನ್ನು ಹೊತ್ತುಕೊಂಡಿದ್ದರೆ ಅಂತವರು ಮಾತ್ರ ದೊಡ್ಡ ಮೊತ್ತವನ್ನು ಕಾಣಿಕೆ ಹಾಕುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಾತ್ರ ಕಾಣಿಕೆ ಹುಂಡಿಗಳಲ್ಲಿ 500 ರಿಂದ 1000 ರು. ನೋಟುಗಳು ಸಿಗಬಹುದಾಗಿದೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿ ಆದೇಶ ಹೊರಡಿಸಿರುವುದು ದೇವಸ್ಥಾನಗಳ ಕಾಣಿಕೆ ಹುಂಡಿಗಳ ಮೇಲೂ ಪರಿಣಾಮವನ್ನು ಬೀರಿದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಭರ್ತಿಯಾದಾಗ ಮಾತ್ರ ತೆರೆಯಲಾಗುತ್ತದೆ. ಆದರೆ ಮೋದಿಯವರ ಅದೇಶದಿಂದ ಕಾಣಿಕೆ ಹುಂಡಿ ಭರ್ತಿಯಾಗುವ ಮೊದಲೇ ತೆರೆದು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಂಡಿ ತೆರೆಯುವ ಆಡಳಿತ ಮಂಡಳಿ ನಿರ್ಧಾರ ಜನಸಾಮಾನ್ಯರಲ್ಲಿ ವಿಸ್ಮಯಕ್ಕೂ ಕಾರಣವಾಗಿದೆ.

-------------

ಚಿಕ್ಕ ದೇವಸ್ಥಾನದ ಹುಂಡಿಗಳನ್ನು ಸಾಮಾನ್ಯವಾಗಿ ವರ್ಷಕ್ಕೆ ಒಂದು ಸಾರಿಯೋ ಅಥವಾ ಎರಡು ಸಾರಿಯೋ ತೆರೆಯಲಾಗುತ್ತದೆ. ಅಥವಾ ಹುಂಡಿಗಳು ಭರ್ತಿಯಾದಾಗ ತೆರೆಯಲಾಗುತ್ತದೆ. ಆದರೆ ಈಗ 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿರುವ ಕಾರಣ ಹುಂಡಿಗಳನ್ನು ತೆರೆಯಲೇಬೇಖಾದ ಅನಿವಾರ್ಯತೆ ಉಂಟಾಗಿದೆ. ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ಸೇರಿಕೊಂಡಿದ್ದರೆ ಅವುಗಳನ್ನು ಬ್ಯಾಂಕಿಗೆ ನೀಡುವ ಕಾರಣಕ್ಕಾಗಿ ತಪಾಸಣೆ ಅಗತ್ಯವಾಗಿದೆ. ಇಲ್ಲವಾದಲ್ಲಿ ಹುಂಡಿಗಳಲ್ಲಿನ ನೋಟುಗಳು ಯಾರ ಗಮನಕ್ಕೂ ಬಾರದಂತೇ ಬೆಲೆ ಕಳೆದುಕೊಳ್ಳುವ ಸಂದರ್ಭ ಬರಬಹುದಾಗಿದೆ. ಈ ನಿಟ್ಟಿನಲ್ಲಿ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳವರು ಕಾಣಿಕೆ ಹುಂಡಿ ತೆರೆಯುವ ನಿರ್ಕೈಧಾರಗೊಂಡಿದ್ದಾರೆ.
ಶ್ರೀಹರಿ ಭಟ್
ಅರ್ಚಕರು
ಬಾಣಸವಾಡಿ
ಬೆಂಗಳೂರು


(ನ.10ರ ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

Thursday, November 3, 2016

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -6

(ಸಮರ್ಥ ರಾಮದಾಸರ ಸಮಾಧಿಯಿರುವ ಮಂದಿರ)
            ಸಂಜಯ ಧ್ಯಾನಸ್ಥನಾದಂತಿದ್ದ. ನಾನು ಅವನ ವೀಡಿಯೋ ಮಾಡುತ್ತಲೇ ಇದ್ದೆ. ಈ ನಡುವೆ ಮೊಬೈಲ್ ಮೆಮೋರಿ ಸಾಕಷ್ಟು ಭರ್ತಿಯಾಗಿ ಮೊಬೈಲ್ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಲು ಆರಂಭಿಸಿತ್ತು. ನಾನು ಸಂಜಯನನ್ನು ಕೂಗಿ ಕರೆದೆ. ಕೆಲ ಕಾಲದ ನಂತರ ಆತ ಹತ್ತಿ ಬಂದ. ನನ್ನ ಮೂಬೈಲನ್ನು ಅವನ ಬಳಿ ಕೊಟ್ಟು ನಾನು ಸಜ್ಜನ ಘಡ ಒಂದು ಮೂಲೆಯ ತುತ್ತ ತುದಿಯಲದಲಿ ಹೋಗಿ ನಿಂತೆ. ಸಾಕಷ್ಟು ಪೋಟೋಗಳನ್ನು ಕ್ಲಿಕ್ಕಿಸಿಯಾಯಿತು. ಅಷ್ಟರಲ್ಲಿ ಮೂರ್ನಾಲ್ಕು ಸಾರಿ ತುಂತುರು ಮಳೆ ನಮ್ಮನ್ನು ಸಾಕಷ್ಟು ಒದ್ದೆಯನ್ನು ಮಾಡಿತ್ತು. ಭೋರ್ರೆನ್ನುವ ಗಾಳಿ ಕಿವಿಯ ಮೂಲಕ ನಮ್ಮ ಬೆನ್ನುಮೂಳೆಯ ಆಳವನ್ನು ತಲುಪಿ ನಡುಕ ಹುಟ್ಟಿಸಿತ್ತು.
          ವಾಪಾಸಾದೆವು. ವಾಪಾಸಾದರೆ ಪ್ರಶಾಂತ ಭಾವ ಕಾಣಲೊಲ್ಲ. ಎಲ್ಲೋ ಹೋಗಿರಬೇಕು ಎಂದುಕೊಂಡು ಹುಡುಕಾಡಿದೆವು. ಕಾಣಲಿಲ್ಲ. ಸುತ್ತಮುತ್ತ ಹುಡುಕಿದೆವು. ಊಹೂ ಆತನ ಸುಳಿವಿರಲಿಲ್ಲ. `ಇಂವ ಎತ್ಲಾಗ್ ನಾಪತ್ತೆಯಾದ್ನೋ ಮಾರಾಯಾ..' ಎಂದುಕೊಂಡು ಹುಡಕಾಡುತ್ತಿದ್ದಾಗಲೇ ನನ್ನ ಪೋನ್ ರಿಂಗಣಿಸುತ್ತಿತ್ತು. ನಾನು ಅದನ್ನೆತ್ತಿ ಮಾತನಾಡಿದಾಗ ಪ್ರಶಾಂತ ಭಾವ ತಾನು ರೂಮ್ ತಲುಪಿದ್ದೇನೆಂದೂ, ಅಲ್ಲಿಗೆ ಬರಬೇಕೆಂದೂ ಹೇಳಿದ್ದ.
           ರೂಮಿಗೆ ತೆರಳಿ ಮಧ್ಯಾಹ್ನ ಎಷ್ಟು ಹೊತ್ತಿಗೆ ಹೊರಡುವುದು ಎಂಬುದನ್ನೆಲ್ಲ ಲೆಕ್ಕ ಹಾಕಲು ಆರಂಭಿಸಿದ್ದೆವು. ಸಜ್ಜನಗಡದಲ್ಲಿ ಮದ್ಯಾಹ್ನ ಊಟ ಹಾಕುತ್ತಾರೆ. ಪ್ರಸಾದ ಸ್ವೀಕರಿಸಿದ ಹಾಗೂ ಆಗುತ್ತದೆ. ಅದನ್ನು ಮಾಡಿಯೇ ಸಾಗೋಣ ಎಂದುಕೊಂಡೆವು. ಮದ್ಯಾಹ್ನವಾಗಿತ್ತು. ಯಾರೋ ಒಬ್ಬರು ಊಟಕ್ಕೆ ಕರೆದರು. ನಾವು ಅತ್ತ ತೆರಳಿದೆವು. ನಮ್ಮ ಮನಸ್ಸಿನಲ್ಲಿ ವರದಳ್ಳಿಯಿತ್ತು. ಅಲ್ಲಿಯಂತೆ ಇಲ್ಲಿಯೂ ಊಟ ನೀಡಬಹುದೇನೋ ಎಂದುಕೊಂಡೆವು. ಊಟಕ್ಕೆ ತಟ್ಟೆಯ ಮುಂದೆ ಕುಳಿತಿದ್ದರು. ಯಾರೋ ಒಬ್ಬರು ರಾಮನಾಮವನ್ನು ದೊಡ್ಡದಾಗಿ ಹೇಳಲು ಆರಂಭಿಸಿದರು. ನಾವೂ ದನಿಗೂಡಿಸಿದೆವು.
            ಅನ್ನ ಬಡಿಸುತ್ತಿದ್ದಾರೆಂದುಕೊಂಡು ನಾವು ಕಾದೆವು. ಆದರೆ ಬಡಿಸುತ್ತಿದ್ದವರು ಅನ್ನವನ್ನು ಹಾಕುತ್ತಿರಲಿಲ್ಲ. ಬದಲಾಗಿ ಬೇರೆ ಇನ್ನೇನೋ ಹಾಕಿದಂತೆ ಕಾಣಿಸಿತು. ಅದೇನಿರಬಹುದು ಎನ್ನುವ ಕುತೂಹಲ ನಮ್ಮದಾಗಿತ್ತು. ಹತ್ತಿರ ಬಂದಂತೆಲ್ಲ ಅವರು ಬಡಿಸುತ್ತಿದ್ದುದು ಅನ್ನವಲ್ಲ ಎನ್ನುವುದು ಸ್ಪಷ್ಟವಾಯಿತು. ರವೆ ರವೆಯಾಗಿತ್ತು. ರವೆಯಿಂದ ಮಾಡಿದ ಗಂಜಿಯಿರಬೇಕು ಎಂದುಕೊಂಡೆವು. ನಮಗೂ ಹಾಕಿದರು. ಅದನ್ನು ಕೈಗೆತ್ತಿಕೊಂಡು ಬಾಯಿಗಿಟ್ಟಾಗಲೇ ನಮಗೆ ಸ್ಪಷ್ಟವಾಗಿತ್ತು. ಅದು ರವೆಯಿಂದಲೇ ಮಾಡಿದ್ದರು. ಅನ್ನದಂತೆ ಬೇಯಿಸಿ, ಉಪ್ಪನ್ನು ಹಾಕಿ ನೀಡಿದ್ದರು. ಗಂಜಿಯಷ್ಟು ತೆಳ್ಳಗಿರಲಿಲ್ಲ. ಮೊಟ್ಟಮೊದಲ ಬಾರಿಗೆ ತಿನ್ನುತ್ತಿದ್ದೆವು. ಅದಕ್ಕೆ ಶೇಂಗಾ ಬೆರೆಸಿದ ಮಜ್ಜಿಗೆಯನ್ನು ಸುರುವಿದರು. ನಾವು ಮೆಲ್ಲಿದೆವು. ಮಹಾರಾಷ್ಟ್ರದ ಆಹಾರವಿರಬೇಕು ಎಂದುಕೊಂಡೆವು.
          ಪ್ರಶಾಂತ ಭಾವ ನನ್ನ ಬಳಿ `ವಿನಯಾ.. ನೋಡಾ.. ಮಹಾರಾಷ್ಟ್ರದವರು ಅವರ ಸಂಸ್ಕೃತಿಯನ್ನು ಬಿಟ್ಟುಕೊಡ್ತ್ವಿಲ್ಲೆ. ಆದರೆ ನಾವೇಯಾ ನಮ್ಮ ಸಂಸ್ಕೃತಿ ಬಿಡ್ತಾ ಇದ್ದಿದ್ದು. ವದ್ದಳ್ಳಿಯಲ್ಲಿಯೂ ನಮ್ಮ ಸಂಸ್ಕೃತಿಯ ಆಹಾರ ಮಾಡಿ ಬಡಿಸವು. ಆವಾಗ ಬೆಲೆ ಬರ್ತು ನೋಡು..' ಎಂದು ಉದ್ದನೆಯ ಉಪನ್ಯಾಸವನ್ನು ನೀಡಿದ್ದ. ಸಂಜಯ ಅದಕ್ಕೆ ಅಹುದಹುದೆನ್ನುತ್ತ ತಲೆಯನ್ನಾಡಿಸಿದ್ದ. ಬಾಯಿಗಿಡುವ ಮೊದಲು ಈ ಆಹಾರವ್ಯಾಕೋ ನಮ್ಮ ಹೊಟ್ಟೆಯೊಳಗೆ ಇಳಿಯುವುದಿಲ್ಲ ಎಂದುಕೊಂಡಿದ್ದೆವು. ಆದರೆ ನಂತರ ಅದನ್ನು ಮೆಲ್ಲಿದೆವು. ಸರಾಗವಾಗಿ ಇಳಿಯಿತು. ಇಷ್ಟವಾಯಿತು. ಬೆಲ್ಲದಿಂದ ಮಾಡಿದ ಕಡ್ಲೆಬೇಳೆ ಪಾಯಸವನ್ನೂ ಬಡಿಸಲಾಗಿ ಅದನ್ನೂ ತಿಂದೆವು.
            ಊಟದ ನಂತರ ನಮ್ಮ ನಮ್ಮ ರೂಮಿಗೆ ವಾಪಸಾದೆವು. ಸಜ್ಜನಗಡವನ್ನು ನೋಡಿ ಧನ್ಯರಾಗಿದ್ದೆವು. ಊರಿಗೆ ಮರಳಬೇಕಲ್ಲ ಎಂದುಕೊಂಡೆವು. ನನಗೋ ಹತ್ತಿರದಲ್ಲಿಯೇ ಇದ್ದ ಮಹಾಭಲೇಶ್ವರವನ್ನೋ ಅಥವಾ ಸತಾರಾ ಬಳಿ ಇರುವ ಅಜಿಂಕ್ಯತಾರಾ ಕೋಟೆಯನ್ನೋ ನೋಡುವ ಆಸೆಯಿತ್ತು. ಪ್ರಶಾಂತ ಭಾವ ಪ್ರಯತ್ನಿಸೋಣ ಎಂದಿದ್ದ. ಸಜ್ಜನಗಡದಲ್ಲಿ ನಮಗೆ ಬೇಕಾಗಿದ್ದನ್ನೆಲ್ಲ ಕೊಂಡೆವು. ನಂತರ ಮರಳುವ ಮನಸ್ಸಾಯಿತು. ವಾಪಾಸು ಎಲ್ಲಿಗೆ ಬಂದರೆ ವಾಹನ ಸಿಗುತ್ತದೆ ಎಂದುಕೊಂಡೆವು.
         ಸಜ್ಜನಗಡ ಕ್ರಾಸಿಗೆ ಮದ್ಯಾಹ್ನ ಬಸ್ ಬರುತ್ತದೆ ಎಂದು ಯಾರೋ ಹೇಳಿದ ನೆನಪಿತ್ತು. ಸಜ್ಜನಗಡದಿಂದ ಸೀದಾ ಇಳಿಯಲಾರಂಭಿಸಿದೆವು. ಒಂದು, ಎರಡು ಕಿಲೋಮೀಟರ್ ಇಳಿದ ನಂತರ ಸಜ್ಜನಗಡ ಕ್ರಾಸ್ ಸಿಕ್ಕಿತು. ಅಲ್ಲಿ ಎಷ್ಟೋ ಹೊತ್ತು ಕಾದೆವು. ಊಹೂ ಬಸ್ಸಿನ ಸುಳಿವಿರಲಿಲ್ಲ. ಮಾರ್ಗದಲ್ಲಿ ಬರುತ್ತಿದ್ದ ಕಾರು, ಆಟೋ ರಿಕ್ಷಾಗಳಿಗೆಲ್ಲ ಕೈ ಮಾಡಿದೆವು. ಯಾರೊಬ್ಬರೂ ನಿಲ್ಲಿಸಲಿಲ್ಲ. ಬಹುತೇಕ ಗಾಡಿಗಳು ಭರ್ತಿಯಾಗಿ ಬರುತ್ತಿದ್ದವೆನ್ನಿ. ಬಸ್ ಬರದೇ ಇದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿಯೂ ಮೂಡಿತ್ತು. `ವಿನಯಾ... ನಡ್ಕೊಂಡು ಹೋಗೋಣ್ವಾ? ' ಎಂದು ಪ್ರಶಾಂತ ಭಾವ ಮೂರ್ನಾಲ್ಕು ಸಾರಿ ಕೇಳಿದ್ದ. ಸಂಜಯ ಓಕೆ ಅಂದಿದ್ದ. ನಾನೂ ಹೂಂ ಅಂದಿದ್ದೆನಾದರೂ 17 ಕಿ.ಮಿ ನಡೆಯಬೇಕಲ್ಲ ಎಂದು ಹಿಂದೇಟು ಹಾಕಿದ್ದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಕಳೆದ ರಾತ್ರಿ ನಿದ್ದೆಗೆಟ್ಟಿದ್ದೆವಲ್ಲ ಹಾಗಾಗಿ ನನಗಂತೂ ಕಣ್ಣು ಕವಿದು ಕವಿದು ಬರಲು ಆರಂಭವಾಗಿತ್ತು. ಅಲ್ಲೊಂದು ಕಡೆ ಕಲ್ಲಿನ ಮೇಲೆ ಕುಳಿತು ತೂಕಡಿಸಹತ್ತಿದ್ದೆ. ಸಂಜಯ ಹಾಗೂ ಪ್ರಶಾಂತ ಭಾವನ ಪಾಡೂ ಇದಕ್ಕಿಂತ ಹೊರತಾಗಿರಲಿಲ್ಲ. ಪ್ರಶಾಂತ ಭಾವ ನಡ್ಕೊಂಡು ಹೋಗೋಣ ಎಂದು ಬಾಯಲ್ಲಿ ಹೇಳುತ್ತಿದ್ದನಾದರೂ ಒಂದೇ ಒಂದು ಹೆಜ್ಜೆ ಹಾಕದೇ ಇರಲು ಇದೇ ಪ್ರಮುಖ ಕಾರಣವಾಗಿತ್ತೆನ್ನಿ.
          ಅರ್ಧ ಗಂಟೆಗೂ ಅಧಿಕ ಕಾಲ ಕಾಯ್ದ ನಂತರ ಬಸ್ ಬಂದಿತ್ತು. ನಮ್ಮ ಕೆಎಸ್ಆರ್ಟಿಸಿಯು 20-25 ವರ್ಷಗಳ ಹಿಂದೆ ಓಡಿಸುತ್ತಿತ್ತಲ್ಲ ಅಂತಹದೇ ಲಟೂರಿ ಬಸ್. 30-35 ಸೀಟಿನ ಬಸ್ಸುಗಳು. ನಾವು 50ಕ್ಕೂ ಹೆಚ್ಚಿನ ಜನ ಕಾಯುತ್ತಿದ್ದೆವು. ಬಸ್ ಖಂಡಿತವಾಗಿಯೂ ಸತಾರಾ ಮುಟ್ಟುವುದಿಲ್ಲ ಎನ್ನುವುದು ಮೇಲ್ನೋಟಕ್ಕೆ ನಮ್ಮ ಭಾವನೆ. ಪ್ರಶಾಂತ ಹಾಗೂ ಸಂಜಯರು ನನ್ನನ್ನು ಮುಂದು ಮಾಡಿ ಬಿಟ್ಟಿದ್ದರು. ಸೀಟು ಹಿಡ್ಕೋ ಎಂದಿದ್ದರು. ನಾನು ಜನಜಂಗುಳಿಯ ಮಧ್ಯ ತಳ್ಳಾಡಿ, ದೂಡ್ಯಾಡಿ ಬಸ್ ಹತ್ತಿ ಮೂರು ಸೀಟು ಹಿಡಿದಿದ್ದೆ. ಕುಳಿತು ನಿದ್ರಿಸಿದ್ದೆ. ಬಸ್ ಹೊರಟ ನೆನಪು/ ಎಚ್ಚರಾಗುವ ವೇಳೆಗೆ ಬಸ್ ಸತಾರಾ ನಗರಿಯನ್ನು ತಲುಪಿತ್ತು. ಬಸ್ ನಿಲ್ದಾಣದ ಕಡೆಗೆ ಮುಖ ಮಾಡಿತ್ತು. ಅಲ್ಲೊಂದು ಕಡೆ ದಢಾರ್ ಎನ್ನುವ ಶಬ್ದ. ಬಾಂಬ್ ಸ್ಪೋಟವಾಯಿತೆ ಎಂದುಕೊಂಡು ನೋಡಿದೆ ನಾನು. ಬಸ್ ಸೀದಾ ರಸ್ತೆ ಪಕ್ಕದ ಕಬ್ಬಿಣದ ಕರೆಂಟ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಹೊಡೆದ ರಬಸಕ್ಕೆ ಕಂಬ ಡೊಂಕಾಗಿ ಚಾಚಿಕೊಂಡಿತ್ತು. ವಿದ್ಯುತ್ ತಂತಿ ಒಂದಕ್ಕೊಂದು ತಾಗಿ ಬೆಂಕಿ ಹೊತ್ತಿಕೊಂಡಿತ್ತು. ನನ್ನ ಆಲೋಚನೆ ಏನೆಂದರೆ ಈಗ ಬಸ್ಸಿಗೆ ಬೆಂಕಿ ಬೀಳುತ್ತದೆ. ಬಸ್ಸಿನಲ್ಲಿ ಕುಳಿತಂತೆಯೇ ನಾವೆಲ್ಲ ಭಸ್ಮವಾಗುತ್ತೇವೆ ಎಂಬುದಾಗಿತ್ತು. ಆದರೆ ಅದ್ಯಾವ ಪವಾಡವೋ. ಹಾಗಾಗಲಿಲ್ಲ. ಬಸ್ಸು ಸುರಳೀತ ಸತಾರಾ ಬಸ್ ನಿಲ್ದಾಣ ತಲುಪಿತು. ಅಲ್ಲಿ ಬಸ್ ಇಳಿದ ತಕ್ಷಣ ಪ್ರಶಾಂತ ಭಾವ ಹಾಗೂ ಸಂಜಯನ ಬಳಿ ನಡೆದ ಘಟನೆಯನ್ನು ಹೇಳಿದೆ. ಆದರೆ ಅವರ್ಯಾರಿಗೂ ನಡೆದಿದ್ದು ಗೊತ್ತೇ ಇರಲಿಲ್ಲ. ಅಷ್ಟು ಗಾಢವಾಗಿ ನಿದ್ದೆ ಹೋಗಿದ್ದರು. ವಿಷಯ ಕೇಳಿ ಅಚ್ಚರಿಪಟ್ಟರು.
          ಸತಾರಾದಿಂದ ಸೀದಾ ಕೊಲ್ಲಾಪುರ ಬಸ್ ಹತ್ತಿದೆವು. ಬಸ್ಸಿನಲ್ಲಿ ಯಥಾ ಪ್ರಕಾರ ನಿದ್ದೆ. ಕೊಲ್ಲಾಪುರದಲ್ಲಿ ವಡಾ ಪಾವ್ ತಿಂದು ಮತ್ತೆ ಬಸ್ ಹತ್ತಿದ ನಮಗೆ ಯಥಾ ಪ್ರಕಾರ ನಿದ್ರಾರಾಣಿ ತಬ್ಬಿಕೊಂಡಿದ್ದಳು. ಬೆಳಗಾವಿಗೆ ಬರುವ ವೇಳೆಗೆ ರಾತ್ರಿಯ 9 ಗಂಟೆ. ಅಲ್ಲೊಂದು ಕಡೆ ಮೂವರೂ ಊಟ ಮುಗಿಸಿದೆವು. ಶಿರಸಿಗೆ ಬರಲು ನಮಗೆ ಡೈರೆಕ್ಟ್ ಬಸ್ ಇದೆಯಾ ಎಂಬ ಕುತೂಹಲ. ಬಸ್ ಇರಲಿಲ್ಲ. ಹುಬ್ಬಳ್ಳಿಯ ಕಡೆಗೆ ಮುಖ ಮಾಡಿದೆವು. ಮತ್ತೆ ನಿದ್ದೆ ಮಾಡಿ ಹುಬ್ಬಳ್ಳಿ ತಲುಪುವ ವೇಳೆಗೆ ರಾತ್ರಿ 1 ಗಂಟೆಯಾಗಿತ್ತು. ಅಲ್ಲಿಂದ ನಾನು ಹಾಗೂ ಸಂಜಯ ಶಿರಸಿಗೂ, ಪ್ರಶಾಂತ ಭಾವ ಗುಳ್ಳಾಪುರಕ್ಕೂ ತೆರಳಬೇಕಿತ್ತು. ನಮಗೆ ಬಸ್ ಇದ್ದರೂ ಪ್ರಶಾಂತ ಭಾವನಿಗೆ ಬಸ್ ಕಾಣಿಸಲಿಲ್ಲ. ಕೊನೆಗೆ ಕಾರವಾರಕ್ಕೆ ತೆರಳುವ ಯಾವುದೋ ಪೇಪರ್ ಗಾಡಿ ಕಾಣಿಸಿತು. ಪ್ರಶಾಂತ ಭಾವ ಅದರಲ್ಲಿ ಹೊರಟ. ಅವನನ್ನು ಕಳಿಸಿದ ನಾವು ಯಾವುದೋ ಬಸ್ ಹತ್ತಿದೆವು. ಕಣ್ಣಿನಲ್ಲಿ ಸಜ್ಜನಗಡದ ನೆನಪು. ಸುಳಿದು ಬರುತ್ತಿದ್ದ ನಿದ್ದೆ. ಕನಸೊಂದು ಮನದಲ್ಲಿ ಅರಳುತ್ತಿತ್ತು.
           ಶಿರಸಿಗೆ ಬಂದು ರೂಮಿಗೆ ಹೋಗಿ ಮಲಗುವ ವೇಳೆಗೆ ಬೆಳಗಿನ ಜಾವ 4 ಗಂಟೆ. ಮುಂದಿನ ವರ್ಷ, ಅಷ್ಟೇ ಏಕೆ ಪ್ರತಿ ವರ್ಷ ಸಜ್ಜನಗಡಕ್ಕೆ ಸಾಧ್ಯವಾದರೆ ಬರುತ್ತೇವೆ ಎಂದುಕೊಂಡು ನಾವು ನಿಶ್ಚಯಿಸಿದೆವು. ಈ ಪ್ರಯಾಣದ ನಂತರ ಇನ್ನೊಮ್ಮೆ ನಾವು ಸಜ್ಜನಗಡಕ್ಕೆ ಹೋಗಿ ಬಂದೆವು. ಆ ಸಾರಿ ನಾನು ಪ್ರಶಾಂತ, ಗುರುಪ್ರಸಾದ (ಭಾಮಿಷಿ ಷಟ್ಪದಿಯಲ್ಲಿ ಶ್ರೀಧರ ಸ್ವಾಮಿಗಳ ಚರಿತ್ರೆ ಬರೆಯುತ್ತಿರುವ ಕಲ್ಲಾರೆ ಗುರು) ಹಾಗೂ ನಮ್ಮೂರಿನ ನಾಗರಾಜ ಹೋಗಿ ಬಂದೆವು. ಸಂಜಯ ತಪ್ಪಿಸಿಕೊಂಡಿದ್ದ. ಒಟ್ಟಿನಲ್ಲಿ ಮೊಟ್ಟ ಮೊದಲ ಸಾರಿ ಹೋಗಿದ್ದ ಸಜ್ಜನ ಗಡ ಪ್ರವಾಸದ ನೆನಪು ಮನಸ್ಸಿನಲ್ಲಿ ಹಸಿಯಾಗಿಯೇ ಉಳಿದಿದೆ.

(ಮುಗಿಯಿತು)      

Friday, October 7, 2016

ಮಾಸ್ತರ ಮಂದಿ -11

ಪಿಬಿಎನ್ :

          ಪರಶುರಾಮಪ್ಪ  ಎಂಬ ಹೆಸರಿನ ಪಿಬಿಎನ್ ನಮ್ಮ ಹೈಸ್ಕೂಲು ದಿನಗಳಲ್ಲಿ ಭಯಾನಂಕ ಮಾಸ್ತರ್ ಎಂದೇ ಖ್ಯಾತಿಯಾಗಿದ್ದರು. ಪರಶುರಾಮಪ್ಪ ಅವರ ನೆನಪಾದರೆ ಸಾಕು ಅವರ ಬೆತ್ತದ ಏಟು ನೆನಪಾಗುತ್ತಿತ್ತು. ನನಗಂತೂ ಅವರ ಬಗ್ಗೆ ಮತ್ತಷ್ಟು ಭಯವೇ ಬಿಡಿ.
           ನಾನು ಕಾನಲೆಯ ಸರಕಾರಿ ಪ್ರೌಢಶಾಲೆಗೆ ಸೇರುತ್ತೇನೆ ಎಂದು ನಿಶ್ಚಯಸಿದ ಸಂದರ್ಭದಲ್ಲಿ ದೊಡ್ಡಪ್ಪ ಕಲ್ಲಾರೆ ಕೃಷ್ಣಪ್ಪ, ಗುರಣ್ಣ ಹಾಗೂ ಗಿರೀಶಣ್ಣರು ಪಿಬಿಎನ್ ಅವರ ಬಗ್ಗೆ ಹಾಗೂ ಅವರ ಸಿಟ್ಟಿನ ಬಗ್ಗೆ, ಅವರು ಹೊಡೆಯುವ ಹೊಡೆತಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಭೀತಿಯನ್ನು ಹುಟ್ಟಿಸಿದ್ದರು. ಪಿಬಿಎನ್ ಅವರು ವಿಜ್ಞಾನ ವಿಷಯದ ಶಿಕ್ಷಕರೆಂದೂ ಸರಿಯಾಗಿ ಕಲಿಯದೇ ಇದ್ದರೆ ಮೊದ ಮೊದಲು ಬೆನ್ನಮೇಲೆ ಗುದ್ದುವರೆಂದೂ ನಂತರ ಶೆಳಕೆಯನ್ನು ಹುಡಿಗರೆಯುವರೆಂದೂ ಹೇಳಿದ್ದರು. ತಾನೂ ಸಾಕಷ್ಟು ಹೊಡೆತ ತಿಂದು ಕೈ ಕೆಂಪಗೆ ಮಾಡಿಕೊಂಡಿದ್ದೇನೆ ಎಂದು ಗಿರೀಶಣ್ಣ ಹೇಳಿದ್ದ. ಕಾಲ ಮೇಲೆಲ್ಲೆ ಬಾಸುಂಡೆ ಬರುವಂತೆ ಹೊಡೆಯುತ್ತಾರೆ ಎಂದೂ ಹೇಳಿದ್ದ. ನಾನು ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ನನಗೆ ಅವರಿಂದ ಸಾಕಷ್ಟು ಹೊಡೆತಗಳು ಬೀಳಲಿಲ್ಲ ಬಿಡಿ. ಆದರೆ ನನ್ನ ಜೊತೆಯ ಹುಡುಗರಿಗೆಲ್ಲ ಸಿಕ್ಕಾಪಟ್ಟೆ ಹೊಡೆತಗಳು ಬಿದ್ದಿದ್ದವು. ಆಗಲೇ ನನಗೆ ಅವರ ಬಗ್ಗೆ ಭಯವಿತ್ತು.
          ಪರಶುರಾಮಪ್ಪ ಮಾಸ್ತರ್ ಅವರಿಂದ ನಾನು ಮೊಟ್ಟ ಮೊದಲ ಸಾರಿ ಹೊಡೆತ ತಿಂದಿದ್ದು ಸದಾ ಕಾಲ ಜ್ಞಾಪಕದಲ್ಲಿ ಇರುತ್ತದೆ. ನನ್ನ ಕ್ಲಾಸಿನಲ್ಲಿ ಒಬ್ಬ ಹುಡುಗ  ಇದ್ದ. ಅವನ ಹೆಸರೂ ಪರಶುರಾಮ ಎಂದೇ. ಹತ್ತಿರದ ಪಡವಗೋಡು ಎಂಬ ಊರಿನವನು. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ ಅವನ ಅಪ್ಪನ ಹೆಸರು ಹೇಳಿದರೆ ಅವನಿಗೆ ಅಸಾಧ್ಯ ಸಿಟ್ಟು ಬರುತ್ತಿತ್ತು. ಗಾಮ ಎಂಬುದು ಆತನ ತಂದೆಯ ಹೆಸರಾಗಿತ್ತು. ನನ್ನದೇ ಕ್ಲಾಸಿನಲ್ಲಿ ಅನೇಕ ಗೆಳೆಯರು ಆತನಿಗೆ ಗಾಮ ಎಂದು ಕರೆದು ಛೇಡಿಸುತ್ತಿದ್ದರು. ಆತ ಸಿಟ್ಟು ಮಾಡಿಕೊಳ್ಳುತ್ತಿದ್ದ. ಅದೇ ಸಂದರ್ಭದಲ್ಲಿ ಚಿತ್ರನಟ ಉಪೇಂದ್ರ ನಟನೆಯ ಉಪೇಂದ್ರ ಸಿನೆಮಾ ಸಿಕ್ಕಾಫಟ್ಟೆ ಹಿಟ್ ಆಗಿತ್ತು. ಅದರಲ್ಲೂ ಆ ಸಿನೆಮಾದ ಗಾಮ ಗಾಮ ಗಾ.. ಎಂಬ ಹಾಡೂ ಕೂಡ ಅಷ್ಟೇ ಹಿಟ್ ಆಗಿತ್ತು. ಆದಿನ ನಾನು ಹೈಸ್ಕೂಲಿನ ವಿಶ್ರಾಂತಿ ಸಮಯದಲ್ಲಿ ದೊಡ್ಡದಾಗಿ ಗಾಮ ಗಾಮ ಗಾ ಎಂದು ಹಾಡುತ್ತ ಬರುತ್ತಿದ್ದೆ. ನಿಜಕ್ಕೂ ನನಗೆ ಪರಶುರಾಮನನ್ನು ಕಾಲೆಳೆಯುವ ಉದ್ದೇಶವಿರಲಿಲ್ಲ. ಆದರೆ ನಾನು ಹಾಡುತ್ತಿದ್ದ ಹಾಡು ಆತನಿಗೆ ಕೇಳಿಸಿರಬೇಕು. `ತಡೀ ಲೇ.. ನಿನ್ನಾ..'ಎಂದವನೇ ನನ್ನನ್ನು ಬೆನ್ನಟ್ಟಿಕೊಂಡು ಬಂದ. ನಾನು ಓಡುವುದರಲ್ಲಿ ಶೂರ. ಅವನು ಬೆನ್ನಟ್ಟಿದಂತೆಲ್ಲ  ಇಡಿಯ ಮೈದಾನವನ್ನು ಸುತ್ತಾಡಿಸಿದೆ. ಆತನೂ ಬೆನ್ನತ್ತಿದ್ದ. ಕೊನೆಗೆ ನಾನು ಸೀದಾ ಹೈಸ್ಕೂಲ್ ಆವರಣದ ಒಳ ಹೊಕ್ಕಿದ್ದೆ. ದುರದೃಷ್ಟವಶಾತ್ ಸ್ಟಾಪ್ ರೂಮನ್ನು ದಾಟಿ ಮುಂದಕ್ಕೆ ಓಡಬೇಕು ಎನ್ನುವಷ್ಟರಲ್ಲಿ ಸ್ಟಾಪ್ ರೂಮಿನ ಬಾಗಿಲಿನ ಅಂಚಿಗೆ ನನ್ನ ಕಾಲು ಬಡಿದಿತ್ತು. ದಬಾರನೆ ಬಿದ್ದೆ. ಪರಶುರಾಮ ನಾನು ಬಿದ್ದಿದ್ದನ್ನು ನೋಡಿ ಹೆದರಿ ಓಡಿ ಹೋದ. ನಾನು ಎದ್ದು ನೋಡುತ್ತೇನೆ ಅಲ್ಲೆಲ್ಲ ರಕ್ತಮಯ. ಕಾಲು ಒಂದೆಡೆ ದೊಡ್ಡದಾಗಿ ಗಾಯವಾಗಿತ್ತು. ರಕ್ತ ಸುರಿಯುತ್ತಿತ್ತು. ನಾನು ಬಿದ್ದಿದ್ದನ್ನು ನೋಡಿ ಒಂದಿಬ್ಬರು ಶಿಕ್ಷಕರು ಬಂದು ನನ್ನನ್ನು ಎತ್ತಿದರು. ನಂತರ ನನಗಾಗಿದ್ದ ಗಾಯಕ್ಕೆ ಔಷಧಿಯನ್ನು ಸವರಿದರು. ನಂತರ ವಿಚಾರಿಸಲಾಗಿ ನಾನು ನಡೆದಿದ್ದನ್ನು ಹೇಳಿದ್ದೆ.
           ಅದಾಗಿ ಒಂದು ತಾಸಿನ ನಂತರ ನಮಗೆ ಪರಶುರಾಮಪ್ಪ ಮಾಸ್ತರರ ತರಗತಿಯಿತ್ತು. ಕ್ಲಾಸಿಗೆ ಬಂದವರೇ ಪರಶುರಾಮನನ್ನು ನಿಲ್ಲಿಸದರು. `ವಿನಯ ಹೆಗಡೆ ಯಾರಲೇ..' ಎಂದರು. ನಾನು ಎದ್ದು ನಿಂತೆ. ದೋಸ್ತ ಪ್ರದೀಪನನ್ನು ಕರೆದು `ಲೇ ಬಟಾ.. ಎರಡು ದೊಡ್ಡ ಕೋಲನ್ನ ತಗಂಡು ಬಾರಲೇ..' ಎಂದರು. ನನಗೆ ಎದೆ ಹೊಡೆದುಕೊಳ್ಳಲು ಆರಂಭವಾಗಿತ್ತು. ಪ್ರದೀಪ ಕೋಲನ್ನು ತಂದ. `ಲೇ ಬಟಾ ಕೈ ಉದ್ದ ಮಾಡಲೇ..' ಎಂದರು. ಪ್ರದೀಪ ಕೈ ಉದ್ದ ಮಾಡಿದ್ದ. ರಪ್ಪೆಂದು ಬಡಿದಿದ್ದರು. `ಅಯ್ಯಮ್ಮಾ..' ಎಂದು ಪ್ರದೀಪ ಹೊಯ್ಕಂಡಿದ್ದ. ಕೋಲು ಮುರಿದಿತ್ತು. ಏನೂ ತಪ್ಪು ಮಾಡದಿದ್ದ ಹುಡುಗರಿಗೆ ಹೊಡೆಯುವ ಗುಣವೂ ಅವರಲ್ಲಿ ಇತ್ತು. ನಂತರ ಪರಶುರಾಮನ ಕರೆದು ಕೈ ಉದ್ದ ಮಾಡೆಂದು ಹೇಳಿ ಸಮಾ ನಾಲ್ಕೈದು ಏಟು ಹೊಡೆದರು. ನಂತರ ನನ್ನ ಬಳಿ ಬಂದರು. `ಏನಲೇ ಗಾಂಡ್ ಮಸ್ತಿ ಮಾಡ್ತೀಯೇನಲೇ..' ಎಂದರು. ರಪ್ಪಂತ ಕೈ ಮೇಲೆ ಹೊಡೆದರು. ನನಗೂ ಒಂದು ಸಾರಿ ಏನಾಗುತ್ತಿದೆ ಎಂಬುದು ಅರಿವಾಗಲೇ ಇಲ್ಲ. ಕಣ್ಣಲ್ಲಿ ನೀರು ಬಂದಿತ್ತು. `ಇನ್ನೊಂದು ಸಾರಿ ಈ ಥರ ಆದರೆ ನೋಡಿ..' ಎಂದರು. ನಂತರ ಯಥಾ ಪ್ರಕಾರ ಅವರ ತರಗತಿ ಶುರು ಹಚ್ಚಿಕೊಂಡಿದ್ದರು. ನನಗೆ ಗಾಯದ ಉರಿ ಬೇರೆ. ಅವರು ಹೊಡೆದ ನೋವು ಬೇರೆ.
             ಇದಾದ ನಂತರ ಬೆಳಿಗ್ಗೆ ಮುಂಜಾನೆ ಹೈಸ್ಕೂಲಿನಲ್ಲಿ ಪ್ರಾರ್ಥನೆಗೆ ನಿಂತ ಸಮಯದಲ್ಲೆಲ್ಲ ನಾನು `ದೇವರೆ ಇವತ್ತು ಏನಾದರೂ ಮಾಡಿ ಪಿಬಿಎನ್ ಹೈಸ್ಕೂಲಿಗೆ ಬರದೇ ಇರುವ ಹಾಗೆ ಮಾಡಪ್ಪಾ.. ಅವರ ಬೈಕ್ ಪಂಚರ್ ಆದರೂ ಆಗಲಿ..' ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡಿದ್ದೂ ಉಂಟು. ಇದರ ನಡುವೆಯೇ ಮತ್ತೊಂದು ಸಮಸ್ಯೆಯೂ ನಮಗೆ ಕಾಡುತ್ತಿತ್ತು. ಆವರ ಬಹುತೇಕ ತರಗತಿಗಳೂ ಮಧ್ಯಾಹ್ನ 2 ಗಂಟೆಗೆ ಇರುತ್ತಿದ್ದವು. ನಾವು ಊಟ ಮಾಡಿ ಹೈಸ್ಕೂಲಿಗೆ ಬಂದ ತಕ್ಷಣ ಶುರುವಾಗುತ್ತಿದ್ದುದೇ ಅವರ ಕ್ಲಾಸ್. ತರಗತಿಯ ನಡುವೆ ನಮಗೆಲ್ಲ ವಿಪರೀತ ತೂಕಡಿಕೆ ಕಾಡುತ್ತಿತ್ತು. ಒಂದಿಬ್ಬರು ಕುಳಿತಲ್ಲಿಯೇ ನಿದ್ರೆಯನ್ನೂ ಮಾಡಿದ್ದುಂಟು. ಆದರೆ ಇದು ಕಣ್ಣಿಗೆ ಬಿದ್ದರೆ ಸಾಕು ಪರಶುರಾಮಪ್ಪ ಮಾಸ್ತರ್ ನಮ್ಮ ಕೈಯನ್ನು ಉರಿ ಉರಿಗೊಳಿಸುತ್ತಿದ್ದರು.
           ನಂತರದ ದಿನಗಳಲ್ಲಿ ನಾವು ಸಾಕಷ್ಟು ಹೊಡೆತಗಳನ್ನು ತಿಂದದ್ದು ಉಂಟು ಬಿಡಿ. ವಿಜ್ಞಾನವನ್ನು ಅಷ್ಟೇ ಚನ್ನಾಗಿ ಅವರು ಬೋಧಿಸುತ್ತಿದ್ದರು. ಇದಕ್ಕಿಂತ ಹೊರತಾಗಿ ಇನ್ನೂ ಹಲವು ವಿಶೇಷ ಗುಣಗಳಿದ್ದವು. ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುವುದರಲ್ಲಿ ಅವರದ್ದು ಎತ್ತಿದ ಕೈ ಆಗಿತ್ತು. ಶಾರದಾ ಪೂಜೆ ಮಾಡಿಸುವುದು, ಗಣೇಶೋತ್ಸವ ಮಾಡಿಸುವುದು, ಪ್ರವಾಸ ಹೊರಡಿಸುವುದು ಇತ್ಯಾದಿಗಳು.
            `ಲ್ಯೇ.. ಹೆಗಡೆ..' ಎಂದೇ ನನ್ನನ್ನು ಕರೆಯುತ್ತಿದ್ದ ಪರಶುರಾಮಪ್ಪರಿಗೆ ಒಂಭತ್ತು ಹಾಗೂ ಹತ್ತನೆ ತರಗತಿಯ ವೇಳೆಗೆಲ್ಲ ನಾನು ಆಪ್ತನೇ ಆಗಿದ್ದೆ. ವಿಜ್ಞಾನದ ಚಿತ್ರಗಳನ್ನು ಬಹಳ ಸುಂದರವಾಗಿ ಬಿಡಿಸಿ ಬಣ್ಣ ತುಂಬುತ್ತಿದ್ದ ಕಾರಣ ನಾನು ಅವರ ಆಪ್ತನಾಗಿದ್ದೆ ಎಂದರೆ ತಪ್ಪಿಲ್ಲ ಬಿಡಿ. ಒಂಭತ್ತನೇ ತರಗತಿಯಲ್ಲಿ ಇದ್ದಾಗಲೇನೋ ಒಮ್ಮೆ ಹೈಸ್ಕೂಲಿಗೆ ಇನ್ಸ್ಫೆಕ್ಷನ್ನಿಗೆ ಮೇಲಧಿಕಾರಿಗಳು ಬಂದಿದ್ದರು. ಅದೇ ಸಂದರ್ಭದಲ್ಲಿ ಪರಶುರಾಮಪ್ಪನವರು ಮೊದಲೇ ನನಗೆ ಕರೆದು ಕೆಲವು ಪ್ರಶ್ನೆ ಕೇಳುತ್ತೇನೆ. ಸರಿ ಉತ್ತರ ಕೊಡಬೇಕು. ಇಲ್ಲವಾದರೆ ಐತಲೇ ನಿನಗೆ ಎಂದು ಬೆದರಿಸಿದ್ದರು. ನಾನು ಬೆವೆತು ಹೋಗಿದ್ದೆ. ಮೇಲಧಿಕಾರಿಗಳು ಬಂದರು. ಪಿಬಿಎನ್ ತರಗತಿ ಶುರುಮಾಡಿದರು. `ಮೂತ್ರಪಿಂಡ' ವಿಷಯದ ಕುರಿತು ತರಗತಿ. ಚಿತ್ರ ಬಿಡಿಸಿ ಪಾಠ ಮಾಡಿದರು. ಪಿಬಿಎನ್ ಅವರೇ ಆಯ್ದ ವಿದ್ಯಾರ್ಥಿಗಳ ಬಳಿ ಪ್ರಶ್ನೆಗಳನ್ನೂ ಕೇಳಿದರು. ಹಲವರು ಉತ್ತರ ಹೇಳಿದರು. ನಂತರ ಮೇಲಧಿಕಾರಿ ಯಾರಾದರೂ ಒಬ್ಬರು ಬೋರ್ಡಿನ ಮೇಲೆ ಮೂತ್ರಪಿಂಡದ ಚಿತ್ರ ಬಿಡಿಸಿ ಎಂದರು. ಎಲ್ಲರೂ ಸುಮ್ಮನೆ ಕುಳಿತರು. ಕೊನೆಗೆ ಪಿಬಿಎನ್ ನನ್ನನ್ನು `ಲೇ ಹೆಗಡೆ. ಬಾರಲೇ.. ಚಿತ್ರ ಬಿಡಿಸು..' ಎಂದರು. ನಾನು ಅಳುಕುತ್ತಲೇ ಹೋಗಿ ಚಿತ್ರ ಬಿಡಿಸಿದೆ. ಚನ್ನಾಗಿ ಬಂದಿತ್ತು. ನನಗೂ ಖುಷಿಯಾಗಿತ್ತು. ಪಿಬಿಎನ್ ಅವರೂ ಖುಷಿಯಾಗಿದ್ದರು. ಮೇಲಧಿಕಾರಿ ಗುಡ್ ಎಂದೂ ಹೇಳಿ ಹೋದರು. ಅವರು ಅತ್ತ ಹೋದ ನಂತರ `ಮಗನೆ ಉಳಕಂಡೀಯಲೆ ಇವತ್ತು..' ಎಂದರು. ನಾನು ನಿರಾಳನಾಗಿದ್ದೆ.
             ಇಂತಹ ಪಿಬಿಎನ್ ಅವರ ಇನ್ನೊಂದು ಗುಣವೆಂದರೆ ಪರೀಕ್ಷೆಗಳಲ್ಲಿ ಮೊದಲಿನದ್ದಕ್ಕಿಂತ ಕಡಿಮೆ ಅಂಕಗಳು ಬಿದ್ದರೆ ಹೊಡೆಯುತ್ತಿದ್ದರು. ಪ್ರತೀ ಪರೀಕ್ಷೆಗಳಲ್ಲಿ ಹಿಂದಿನದ್ದಕ್ಕಿಂತ ಕಡಿಮೆ ಅಂಕ ಬಿದ್ದರೆ ಹೊಡೆತ ಬೀಳುತ್ತಿತ್ತು. ಬಹುಶಃ ಅವರ ಕೈಯಿಂದ ಅಂಕಗಳ ವಿಷಯದಲ್ಲಿ ಕಡಿಮೆ ಹೊಡೆತಗಳನ್ನು ತಿಂದವರ ಪೈಕಿ ನಾನು, ಆಶಾ, ರವಿ, ರಾಘವೇಂದ್ರ, ಕಿರಣ ಹಾಗೂ ಇನ್ನೊಂದೆರಡು ಮೂರು ಮಂದಿ ಇರಬೇಕು ಅಷ್ಟೇ.
             ಕೆಲವು ವಿಷಯಗಳ ಬಗ್ಗೆ ಪಿಬಿಎನ್ ಅವರ ಮೇಲೆ ನನಗೆ ಬೇಜಾರೂ ಇದೆ ಬಿಡಿ. ಎಸ್ಎಸ್ಎಲ್ಸಿಯಲ್ಲಿ ನಾನು ಒಂದು ಟೀಮ್ ಗೆ ಲೀಡರ್ ಆಗುವವನಿದ್ದೆ. ಬಹುತೇಕ ಆಯ್ಕೆಯಾಗಿ ನನ್ನ ಹೆಸರನ್ನು ಕೂಗಿಯೂ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ಹೆಸರನ್ನು ತೆಗೆದು ಹಾಕಿದ್ದರು. ಇದಲ್ಲದೇ ಹೈಸ್ಕೂಲ್ ಕೊನೆಯ ದಿನಗಳಲ್ಲಿ ಆದರ್ಶ ವಿದ್ಯಾರ್ಥಿ ಆಯ್ಕೆಗೂ ನನ್ನ ಹೆಸರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲವಂತೆ. ಇನ್ನೊಬ್ಬ ಸರ್ ಹೇಳಿದ ನಂತರವೇ ನನ್ನ ಗಮನಕ್ಕೆ ಇದು ಬಂದಿದ್ದು. ಯಾಕೆ ಹೀಗೆ ಮಾಡಿದರು ಎನ್ನುವುದು ನನಗೆ ಈಗಲೂ ಅರಿವಿನಲ್ಲಿ ಇಲ್ಲ ಬಿಡಿ.
            ಎಸ್ಎಸ್ಎಲ್ಸಿಯಲ್ಲಿ ಇದ್ದಾಗ ನಾನು ಲಕ್ಷಪ್ಪ ಸರ್ ನೆರವಿನಿಂದ ಆನಂದಪುರದಲ್ಲಿರುವ ಮುರುಘಾ ಮಠಕ್ಕೆ ಹೋಗಿ ಅಲ್ಲಿ ನಡೆದಿದ್ದ ಕ್ವಿಜ್ ಕಾಂಪಿಟೇಶನ್ನಿನಲ್ಲಿ ತೃತೀಯ ಬಹುಮಾನ ಗಳಿಸಿಕೊಂಡು ಬಂದಿದ್ದೆ. ಇದರಿಂದ ಖುಷಿಯಾಗಿದ್ದ ಪಿಬಿಎನ್ ಕಾನಲೆಯ ಪ್ರೌಢಶಾಲೆಯಲ್ಲಿಯೂ ಕೂಡ ಸಾಗರ ತಾಲೂಕಾ ಮಟ್ಟದ ಕ್ವಿಜ್ ಕಾಂಪಿಟೇಶನ್ ನಡೆಸಿದ್ದರು. ಈ ಕಾಂಪಿಟೇಶನ್ ಸಂದರ್ಭದಲ್ಲಿ ನನ್ನ ನೇತೃತ್ವದ ಕಾನ್ಲೆ ತಂಡವು ವಿಜ್ಞಾನದ ಫಿಸಿಕ್ಟ್ ವಿಭಾಗದ ಸ್ಪರ್ಧೆ ಬರುವ ವೇಳೆಗೆ 5ನೇ ಸ್ಥಾನದಲ್ಲಿತ್ತು. ಆದರೆ ಪಿಬಿಎನ್ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದರು. ರಾಪಿಡ್ ರೌಂಡ್ ಪ್ರಶ್ನೆಗೆ ಅಷ್ಟೇ ವೇಗದಲ್ಲಿ ನಾವು ಉತ್ತರ ಹೇಳಿದ್ದೆವು. ಪರಿಣಾಮವಾಗಿ ಈ ವಿಭಾಗದ ಸ್ಪರ್ಧೆ ಮುಗಿಯುವ ವೇಳೆಗೆ ನಮ್ಮ ತಂದ ಎರಡನೇ ಸ್ಥಾನ ತಲುಪಿಬಿಟ್ಟಿತ್ತು. ಸ್ಪರ್ಧೆ ಮುಗಿದ ನಂತರದ ದಿನಗಳಲ್ಲಿ ಪಿಬಿಎನ್ ಹೇಳೀಕೊಂಡಿದ್ದರಂತೆ `ಬಡ್ಡೀಮಗ ಹೆಗಡೆ.. ಫಿಸಿಕ್ಸಿನಲ್ಲಿ ಭಯಂಕರ ಚುರುಕು.. ಮುಂದೆ ಸೈನ್ಸೇ ಮಾಡ್ತಾನೆ..' ಆದರೆ ನಾನು ಸೈನ್ಸ್ ಮಾಡಲಿಲ್ಲ ಬಿಡಿ.
          ಇವರ ಬಗ್ಗೆ ಇನ್ನೊಂದು ವಿಷಯ ಹೇಳಲೇಬೇಕು. ಸ್ವಲ್ಪ ಪೋಲಿಯೆನ್ನಿಸಬಹುದು. ಆದರೂ ಪ್ರಮುಖ ವಿಷಯವಾದ್ದರಿಂದ ಹೇಳಲೇಬೇಕು ಬಿಡಿ. ಪಿಬಿಎನ್ ಕ್ಲಾಸ್ ಮಾಡುತ್ತಿದ್ದಾಗ ಯಾರೂ ಕೂಡ ನಗಬಾರದಿತ್ತು. ಅಪ್ಪಿ ತಪ್ಪಿ ನಕ್ಕರೂ ಅವರ ಕೆಲಸ ಕೆಟ್ಟಿತು ಎಂದೇ ಅರ್ಥ. ಅದರಲ್ಲೂ ಜೀವಶಾಸ್ತ್ರ ಕಲಿಸುವಾಗಲಂತೂ ನಗಲೇ ಬಾರದಿತ್ತು. ಇದಕ್ಕೂ ಒಂದು ಪ್ರಮುಖ ಕಾರಣವಿದೆ. ಎಸ್ಎಸ್ಎಲ್ಸಿಯಲ್ಲಿ ನಮಗೆ ಮನುಷ್ಯನ ಭಾಗಗಳ ಕುರಿತು ಪಾಠಗಳಿವೆ. ಅದರಲ್ಲೂ ಸಂತಾನ, ಲೈಂಗಿಕ ಕ್ರಿಯೆಗಳ ಕುರಿತು ಪಾಠಗಳಿವೆ. ಯುವ ಮನಸ್ಸುಗಳು ಇವುಗಳನ್ನು ಅರಿತುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಈ ಪಾಠಗಳನ್ನು ಇಟ್ಟಿದ್ದರು. ಈ ಸಂದರ್ಭದಲ್ಲಿ ಶಿಶ್ನ, ಯೋನಿ, ಸಂಭೋಗ ಮುಂತಾದ ವಿಷಯಗಳ ಬಗ್ಗೆ ತುಸು ಹೆಚ್ಚಿಗೆ ಗಂಭೀರವಾಗಿ ಪಠ ಮಾಡುತ್ತಿದ್ದರು ಪಿಬಿಎನ್. ಸ್ವಲ್ಪವೂ ಶಬ್ದ ತಪ್ಪದಂತೆ ಕಲಿಸುತ್ತಿದ್ದರು. ಈ ಸಂದರ್ಭದಲ್ಲಿ ಯಾರಾದರೂ ನಕ್ಕರೆ ಮುಗಿದೇ ಹೋಗುತ್ತಿತ್ತು ಅವರ ಕಥೆ. ನಮ್ಮ ಕ್ಲಾಸಿನಲ್ಲಿ ಕೆಲವು ಹುಡುಗಿಯರು ಈ ವಿಷಯ ಬಂದಾಗ ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದರು. ಒಮ್ಮೆಯಂತೂ ಒಬ್ಬಾಕೆ ಕಿಸಕ್ಕನೆ ನಕ್ಕಿದ್ದಳು. ತಕ್ಷಣವೇ ಆಕೆಯನ್ನು ಎದ್ದು ನಿಲ್ಲಿಸಿದ ಪಿಬಿಎನ್ `ಶಿಶ್ನ ಎಂದರೇನೋ..' ವಿವರಿಸುವ ಎಂದರು. ಆ ಹುಡುಗಿಗಿಂತ ಹೆಚ್ಚಾಗಿ ನಾವೆಲ್ಲರೂ ಕಕ್ಕಾಬಿಕ್ಕಿಯಾಗಿದ್ದೆವು. ಹುಡುಗರ ಬಳಿಯೂ ಕೂಡ ಇಂತದ್ದೇ ತಪ್ಪು ನಡೆದರೆ ಅವರನ್ನೂ ಇದೇ ರೀತಿ ಪ್ರಶ್ನೆಗಳನ್ನು ಕೇಳಿ ಅವರಲ್ಲಿನ ಹುಡುಗಾಟಿಕೆ ಬುದ್ಧಿಯನ್ನು ದೂರ ಮಾಡುತ್ತಿದ್ದರು. ಮೊದ ಮೊದಲಿಗೆ ನಾವು ಇದನ್ನು ತಪ್ಪು ಎಂದುಕೊಂಡಿದ್ದೆವು. ಆದರೆ ನಂತರದ ದಿನಗಳಲ್ಲಿ ನಮಗೆ ಅರಿವಾಯಿತು ಬಿಡಿ. ಆಗ ತಾನೆ ಯುವ ಭಾವನೆಗಳು ಮೂಡುತ್ತಿದ್ದ ನಮ್ಮಲ್ಲಿ ಪ್ರೌಢರಾದ ಶಿಕ್ಷಕರೊಬ್ಬರು ಅಪಸವ್ಯವಾಗದಂತೆ ವಿವರಗಳನ್ನು ಹೇಳುವುದು ಸುಲಭದ ಕೆಲಸವಲ್ಲ. ಗಂಭೀರವಾಗಿ ಇಂತಹ ವಿಷಯಗಳನ್ನು ಮಾತಾಡುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾರ್ಥವಾಗುತ್ತದೆ. ಇಂತಹ ಸಮಯದಲ್ಲಿ ಯಾರಾದರೂ ನಕ್ಕರೆ ಕಲಿಸುತ್ತಿದ್ದವರ ಪಾಡು ಏನಾಗಬೇಡ ಹೇಳಿ. ಪಿಬಿಎನ್ ಅವರೂ ಅದಕ್ಕೆ ನಮಗೆಲ್ಲ ಗಂಭೀರವಾಗಿ ಕ್ರಮಕೈಗೊಂಡಿದ್ದರು. ಪರಿಣಾಮವಾಗಿ ಅವರ ತರಗತಿಗಳಲ್ಲಿ ನಗುವುದು ಕಡಿಮೆಯಾಗಿತ್ತು. ಗಂಭೀರತೆ ಬಂದಿತ್ತು.
          ಇಂತಿಪ್ಪ ಪಿಬಿಎನ್ ಈಗಲೂ ಕಾನಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಹೆಡ್ ಮಾಸ್ತರರಾಗಿದ್ದಾರೆ ಎನ್ನುವ ಸುದ್ದಿಯಿದೆ. ಮುಂದಿನ ಸಾರಿಯಾದರೂ ಕಾನ್ಲೆಗೆ ಹೋದಾಗ ಅವರನ್ನು ಮಾತನಾಡಿಸಿಕೊಂಡು ಬರಬೇಕೆಂದುಕೊಂಡಿದ್ದೇನೆ.



(ಮುಂದಿನ ಭಾಗದಲ್ಲಿ ಭಾರತಿ ಹೆಗಡೆ ಹಾಗೂ ಕೆಬಿಎನ್ ಅವರ ಬಗ್ಗೆ ಬರೆಯಲಿದ್ದೇನೆ )