Monday, July 6, 2015

ಅಘನಾಶಿನಿ ಕಣಿವೆಯಲ್ಲಿ-21

            ದಂಟಕಲ್ಲಿನಲ್ಲಿ ಪ್ರತಿಯೊಬ್ಬರೂ ಪೊಲೀಸರು ಬಂಧಿಸಿದ ಕಾರಣವನ್ನು ಕೇಳುವವರೇ ಆಗಿದ್ದರು. ಅವರೆಲ್ಲರಿಗೂ ಕಾರಣವನ್ನು ಹೇಳುವಷ್ಟರಲ್ಲಿ ಸುಸ್ತೋ ಸುಸ್ತು. ಪೊಲೀಸರ ದರ್ಪ, ಪ್ರದೀಪನ ಸಮಯಪ್ರಜ್ಞೆ, ಗಪ್ಪಜ್ಜನ ಪ್ರೀತಿ ಇತ್ಯಾದಿಗಳೆಲ್ಲ ಬಾಯಿಂದ ಬಾಯಿಗೆ ರಸವತ್ತಾಗಿ, ರೋಚಕವಾಗಿ ಹರಿದು ಬಂದಿದ್ದು ಮಾತ್ರ ವಿಶೇಷವಾಗಿತ್ತು. ಮಲೆನಾಡಿನ ಹಳ್ಳಿಗೆ ಬಂದಿದ್ದ ಯುವ ಪಡೆ ಮಲೆನಾಡಿನ ತುಂಬೆಲ್ಲ, ಅಷ್ಟೇ ಏಕೆ ರಾಜ್ಯದಾದ್ಯಂತ ಒಂದೇ ಕ್ಷಣದಲ್ಲಿ ಹೆಸರು ಮಾಡಿದ್ದು ಮಾತ್ರ ಸುಳ್ಳಲ್ಲ. ಪೊಲೀಸರಿಗೆ ಅದ್ಯಾರು ಮಾಹಿತಿ ನೀಡಿದ್ದರೋ ಏನೋ, ತಮ್ಮನ್ನು ನಕ್ಸಲರು ಎಂದುಕೊಂಡು ಬಂಧಿಸಿದ್ದು ಮಾತ್ರ ವಿಚಿತ್ರವಾಗಿತ್ತು. ಆದರೂ ಈ ಬಂಧನದ ಹಿಂದೆ ಇನ್ಯಾವುದೋ ಸಂಚಿದೆ ಎಂದು ವಿಕ್ರಮನಿಗೆ ಒಮ್ಮೆ ಅನ್ನಿಸಿತ್ತಾದರೂ ತನ್ನೆದುರು ಇರುವ ಅಗೋಚರ ಶತ್ರು ಇಷ್ಟೆಲ್ಲ ಮುಂದಕ್ಕೆ ಯೋಚಿಸಿರಲಾರ ಎಂದುಕೊಂಡ.
               ಅದ್ಯಾವುದೋ ದೊಡ್ಡ ಕಂಟಕ ಇಷ್ಟು ಚಿಕ್ಕದರಲ್ಲೇ ಹೋಯಿತು ಎಂದುಕೊಂಡರು ಎಲ್ಲರೂ. ಖಂಡಿತವಾಗಿಯೂ ಗುಡ್ಡೇತೋಟದ ಕೋಟೆ ವಿನಾಯಕನ ಶ್ರೀರಕ್ಷಯಿಂದ ದೊಡ್ಡ ಆಪತ್ತು ಚಿಕ್ಕದರಲ್ಲಿಯೇ ಪರಿಹಾರವಾಗಿದೆ ಎಂದುಕೊಂಡರು ಎಲ್ಲರೂ. ಮರುದಿನ ಗುಡ್ಡೇತೋಟಕ್ಕೆ ಹೋಗಿ ದೇವರಿಗೆ ಪೂಜೆ ಮಾಡಿ ಬರಬೇಕು ಎಂದು ನಿಶ್ಚಯಿಸಿಕೊಂಡರು.

000000

              `ಗುಡ್.. ಒಳ್ಳೆಯಕ ಕೆಲಸ ಮಾಡಿದ್ದಿರಿ. ಆದರೆ ಇಷ್ಟು ಸುಲಭದಲ್ಲಿ ಅವರು ತಪ್ಪಿಸಿಕೊಂಡು ಬರುತ್ತಾರೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ ನೋಡಿ..' ಎಂದ ಒಬ್ಬಾತ.
             `ನಾವೇನೋ ಸರಿಯಾದ ಮಾಹಿತಿಯನ್ನೇ ಕೊಟ್ಟಿದ್ದೆವು. ಪೊಲೀಸರ ಬಳಿ ದಂಟಕಲ್ಲಿಗೆ ಬಂದಿದ್ದವರು ನಕ್ಸಲರು ಎಂದೇ ಹೇಳಿದ್ದೆವು. ಅಷ್ಟೇ ಅಲ್ಲದೇ ಮೀಡಿಯಾಕ್ಕೂ ತಿಳಿಸಿ ಆಗಿತ್ತು. ಆದರೆ ಬಂಧಿಸಿದವರಲ್ಲಿ ಒಬ್ಬಾತ ಮಾತ್ರ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಹೊಂದಿದ್ದಾನೆ. ಅವನೇ ಇಷ್ಟು ಬೇಗ ಎಲ್ಲರೂ ವಾಪಾಸು ಬರಲು ಪ್ರಮುಖ ಕಾರಣ ನೋಡಿ..' ಎಂದ ಇನ್ನೊಬ್ಬಾತ.
           `ಓಹ್ ಹೌದಾ. ಯಾವುದಕ್ಕೂ ಹುಷಾರಾಗಿರಿ. ಯಾವುದೇ ಅವಕಾಶಕ್ಕಾಗಿ ಕಾಯುತ್ತಿರಿ. ಅನುಕೂಲಕರ ಅವಕಾಶ ಸಿಕ್ಕ ತಕ್ಷಣ ಬಂದಿದ್ದವರನ್ನು ಹಣಿದು ಹಾಕಿ. ಯಾಕೋ ಅವರು ಸುಮ್ಮನೆ ಬಂದಿಲ್ಲ ಎಂಬ ಅನುಮಾನ ಬರುತ್ತಿದೆ. ಪಾತರಗಿತ್ತಿ ಸರ್ವೆ ಮಾಡುವುದು, ಕಾಡು ಸುತ್ತುವುದು ಕೇವಲ ನೆಪ ಇರಬೇಕು. ನಾವು ಎಲ್ಲದಕ್ಕೂ ಸಜ್ಜಾಗಿ ಇರೋಣ. ಸದವಕಾಶ ಸಿಕ್ಕ ತಕ್ಷಣ ಅವರನ್ನು ವಾಪಾಸು ಕಳಿಸುವ ಕೆಲಸ ಮಾಡೋಣ..'ಎಂದು ಮೊದಲನೆಯವನು ಹೇಳಿದ್ದಕ್ಕೆ ಎರಡನೆಯವರು ಒಪ್ಪಿಗೆ ಸೂಚಿಸಿದ. ತಲೆಯಲ್ಲಾಡಿಸಿದ.
            ವಿಕ್ರಮ ಹಾಗೂ ಆತನ ಜೊತೆಗಾರರು ದಂಟಕಲ್ ಹಾಗೂ ಸುತ್ತಮುತ್ತಲ ಹಳ್ಳಿಗೆ ಬಂದಿರುವುದನ್ನು ಗಮನಿಸುವವರೂ ಇದ್ದಾರೆ ಎನ್ನುವುದು ಮಾತ್ರ ಸಾಬೀತಾಗಿತ್ತು. ಅವಕಾಶ ಸಿಕ್ಕರೆ ವಿಕ್ರಮನ ತಂಡವನ್ನು ಹಣಿದು ಹಾಕಲೂ ಸನ್ನದ್ದರಾಗಿದ್ದರು. ಆದರೆ ವಿಕ್ರಮನ ಗುಂಪಿಗೆ ಇದರ ಅರಿವಿದೆಯಾ? ಬಲ್ಲವರ್ಯಾರು?

++++++

          ಮುಂಜಾನೆದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಎಲ್ಲರೂ ಗುಡ್ಡೇತೋಟಕ್ಕೆ ತೆರಳಲು ಸಜ್ಜಾದರು. ಮನೆಯಿಂದ ಹೊರಟು ಅಘನಾಶಿನಿ ನದಿಗುಂಟ ಹಾದು ಬಂದು ಗದ್ದೆಯ ಮನೆ ಬಳಿ ತೆರಳಿದರು. ಅಲ್ಲಿಯೇ ಇರುವ ಕಾಕಾಲಗದ್ದೆ ಎಂಬಲ್ಲಿ ಅಘನಾಶಿನಿ ನದಿ ವಿಶಾಲವಾಗಿ ಹರಿಯುತ್ತಾಳೆ. ಉಳಿದ ಕಡೆಗಳಲ್ಲಿ ಎದೆ ಮಟ್ಟವೋ, ಕುತ್ತಿಗೆ ಮಟ್ಟವೋ ಆಳವಾಗಿ ಹರಿಯುವ ಅಘನಾಶಿನಿ ನದಿ ಕಾಕಾಲ ಗದ್ದೆ ಎಂಬಲ್ಲಿ ಮಾತ್ರ ಪಾದ ಮುಳುಗುವಷ್ಟು ಮಾತ್ರ ಆಳವಾಗಿದ್ದಾಳೆ. ವಿಶಾಲವಾಗಿ ಹರಿಯುವ ಕಾರಣ ಕಾಕಾಲ ಗದ್ದೆಯಲ್ಲಿ ನದಿ ಆಳವಾಗಿಲ್ಲ. ಚಿಕ್ಕ ಮಕ್ಕಳೂ ಕೂಡ ಸಲೀಸಾಗಿ ನದಿಯನ್ನು ನಡೆದುಕೊಂಡು ದಾಟಬಹುದು. ಅಷ್ಟೇ ಏಕೆ ಕೆಲವು ಉತ್ಸಾಹಿ ಹೈದರು ಈ ಕಾಕಾಲ ಗದ್ದೆಯಲ್ಲಿಯೇ ತಮ್ಮ ಬೈಕನ್ನೂ ದಾಟಿಸುವ ಸಾಹಸ ಮಾಡುತ್ತಾರೆ. ಈ ಪ್ರದೇಶಕ್ಕೆ ಕರೆದುಕೊಂಡು ಬಂದ ವಿನಾಯಕ ಹೊಳೆಯನ್ನು ದಾಟಬೇಕು ಎಂದ. ಅಘನಾಶಿನಿಯನ್ನು ದಾಟಲೋಸುಗ ಎಲ್ಲರೂ ನದಿಯಲ್ಲಿ ಕಾಲಿಟ್ಟು. ನದಿ ನೀರು ಅದೆಷ್ಟು ತಣ್ಣಗಿತ್ತು ಎಂದರೆ ಪಾದದ ಮೂಲಕ ನೆತ್ತಿಯೂ ತಂಪಾದಂತೆ ಅನ್ನಿಸಿತು.
            ವಿಜೇತಾ ಹಾಗೂ ಮಹಿಳಾ ಮಣಿಯರು ತಂಪಾದ ನೀರಿನಲ್ಲಿ ಆಡಲು ಮುಂದಾಗಿದ್ದರು. ಆದರೆ ಮೊದಲು ದೇಗುಲ ದರ್ಶನ ಮಾಡಿ ನಂತರ ಮುಂದಿನ ಕೆಲಸ ಎಂದುಕೊಂಡು ನದಿಯನ್ನು ಬೇಗನೇ ದಾಟಲು ಮುಂದಾದರು. ನದಿಯನ್ನು ದಾಟಿದಂತೆಯೇ ದೊಡ್ಡದೊಂದು ಗದ್ದೆ ಬಯಲು ಸಿಗುತ್ತದೆ. ಹಿತ್ತಲಕೈ ಗ್ರಾಮಕ್ಕೆ ಸೇರಿದ ಈ ಗದ್ದೆ ಬಯಲಿನ ಪಕ್ಕದಲ್ಲಿಯೇ ಒಂದೆರಡು ಮನೆಗಳಿರುವ ಕಾಕಾಲಗದ್ದೆ ಎನ್ನುವ ಹಳ್ಳಿ ಇದೆ. ಇಲ್ಲಿ ಹಾದು ಮುಂದಕ್ಕೆ ಅಡಿ ಇಟ್ಟಂತೆಲ್ಲ ನಿಧಾನವಾಗಿ ಕಾಡು ಆವರಿಸತೊಡಗಿತು. ಸರಿಸುಮಾರು 1 ಕಿ.ಮಿ ದೂರದವರೆಗೆ ಕಾಡಿನ ದಾರಿಯಲ್ಲಿ ನದಿಗೆ ಸಮಾನಾಂತರವಾಗಿ ಸಾಗಿದ ನಂತರ ದೊಡ್ಡದೊಂದು ಗುಡ್ಡ ಎದುರಾಯಿತು.
            `ಈ ಗುಡ್ಡದ ಮೇಲೆಯೇ ಗುಡ್ಡೇತೋಟ ಊರಿದೆ. ಇಲ್ಲಿಯೇ ಕೋಟೆ ವಿನಾಯಕನ ದೇವಸ್ಥಾನ ಇದೆ..' ಎಂದ ವಿನಾಯಕ. ಎಲ್ಲರೂ ಗುಡ್ಡವನ್ನು ಏರಲು ಉತ್ಸುಕರಾದರು. ಎದೆಯ ಮಟ್ಟಕ್ಕಿದ್ದ ಗುಡ್ಡವನ್ನು ಏರುವುದು ಸುಲಭವಲ್ಲ ನೋಡಿ. ಪ್ರತಿಯೊಬ್ಬರಿಗೂ ಏದುಸಿರುವ ಬರುತ್ತಿತ್ತು. ಆದರೂ ಗುಡ್ಡವನ್ನೇರುವ ಛಲ ಯಾರಲ್ಲೂ ಕಡಿಮೆಯಾಗಿರಲಿಲ್ಲ. ದೇಹಕ್ಕೆ ಸುಸ್ತಾಗುತ್ತಿತ್ತದ್ದರೂ ಅದನ್ನು ತೋರಿಸಿಕೊಳ್ಳದೇ ಮುಂದಕ್ಕೆ ಹೋಗುತ್ತಿದ್ದರು.
           ಇದ್ದಕ್ಕಿದ್ದಂತೆ `ಅರೇ.. ಅಲ್ಲಿ ನೋಡಿ.. ಅದು ಕಾಡುಕೋಣ ಅಲ್ಲವಾ..' ಎಂದ ಪ್ರದೀಪ.
           ಪ್ರದೀಪ ತೋರಿಸಿದತ್ತ ಎಲ್ಲರೂ ದೃಷ್ಟಿ ಹಾಯಿಸಿದರು. ` ಹೌದು.. ಕಾಡುಕೋಣದ ಹಿಂಡು ಅಲ್ಲಿ ಹುಲ್ಲು ತಿನ್ನುತ್ತಿದೆ ನೋಡಿ.. ಆರು ಇದೆ. ಅಲ್ಲಲ್ಲ.. ಎಂಟು ಇರಬೇಕು ನೋಡಿ..' ಎಂದ ವಿನಾಯಕ.
            ಸನಿಹದಲ್ಲೇ ಇದ್ದ ನೀರಿನ ಒರತೆಯಲ್ಲಿ ಕಾಡೆಮ್ಮೆಗಳ ಹಿಂಡೊಂದು ಹುಲ್ಲು ತಿನ್ನುತ್ತ ಆರಾಮಾಗಿ ನಿಂತಿತ್ತು. ದೇವಸ್ಥಾನ ನೋಡಲು ಹೊರಟಿದ್ದವರನ್ನು ಕಾಡೆಮ್ಮೆಗಳು ಒಮ್ಮೆ ತಲೆಯೆತ್ತಿ ನೋಡಿದವು. ಯುವ ಪಡೆಯ ಮಾತು, ಕತೆಗಳು ಕಾಡೆಮ್ಮೆಗಳಲ್ಲಿಯೂ ವಿಸ್ಮಯ ಮೂಡಿಸಿರಬೇಕು. ಹಾಗೆಯೇ ಕೆಲಕಾಲ ತಲೆ ಎತ್ತಿ ನೋಡುತ್ತಿದ್ ಅವುಗಳು ಯುವ ಪಡೆಯಿಂದ ತಮಗೆ ಯಾವುದೇ ಅಪಾಯ ಆಗುವುದಿಲ್ಲ ಎಂದುಕೊಂಡಿರಬೇಕು. ನಿಧಾನವಾಗಿ ತಮ್ಮ ಕೆಲಸದಲ್ಲಿ ತಾವು ನಿರತವಾದವು. ಯುವ ಪಡೆ ಕೂಡ ಕೆಲ ಕಾಲ ಕಾಡೆಮ್ಮೆಗಳನ್ನು ನೋಡಿ, ಅವುಗಳ ಗಾತ್ರ, ನಿಲುವುಗಳನ್ನೆಲ್ಲ ಲೆಕ್ಖಹಾಕಿ, ಅವುಗಳ ಬಗ್ಗೆ ಮಾತನಾಡುತ್ತ ಮುಂದಕ್ಕೆ ಹೆಜ್ಜೆ ಇಟ್ಟಿತು.
           ಗುಡ್ಡೇತೋಟದ ದೇವಸ್ಥಾನವನ್ನು ದರ್ಶನ ಮಾಡಬೇಕೆಂದರೆ ಎದೆಯ ಎತ್ತರದ ಗುಡ್ಡವನ್ನು ಏರುವುದು ಅನಿವಾರ್ಯ. ಗುಡ್ಡವನ್ನು ಏರಿದ ನಂತರ ಸ್ವಲ್ಪ ವಿಶಾಲ ಎನ್ನಬಹುದಾದ ಸ್ಥಳ ಸಿಕ್ಕಿತು. ಬಯಲಿನಲ್ಲಿ ಒಂದು ಕಡೆ ಗದ್ದೆಯನ್ನು ಬೆಳೆಯಲಾಗಿದದ್ದರೆ ಇನ್ನೊಂದು ಕಡೆಯಲ್ಲಿ ಹಳೆಯದು ಎನ್ನುವಂತಹ ದೇವಾಲಯ ಭವ್ಯವಾಗಿ ನಿಂತಿತ್ತು. ದೇಗುಲದ ಎದುರು ಒಂದು  ದೇವಕಣಗಿಲೆ ಮರವಿತ್ತು. ಅದರಲ್ಲಿ ಬಿಳಿಯ ಬಣ್ಣದ ಹೂವುಗಳು ಸುವಾಸನೆಯನ್ನು ಬೀರುತ್ತ ಅರಳಿ ನಿಂತಿದ್ದವು. ದೇಗುಲದ ಹಿಂಭಾಗದಲ್ಲಿ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಉದ್ಘಾಟನೆಯಾದ ಭೋಜನ ಶಾಲೆಯಿತ್ತು.
            ಗುಡ್ಡೇತೋಟದ ಕೋಟೆ ವಿನಾಯಕನ ಸನ್ನಿಧಾನದ ಒಳಗೆ ಎಲ್ಲರೂ ಕೈ ಕಾಲುಗಳನ್ನು ತೊಳೆದುಕೊಂಡು ಕಣ್ಣಿಗೆ ನೀರನ್ನು ಹಚ್ಚಿಕೊಂಡು ಮುನ್ನಡೆದರು. ದೇಗುಲದ ಅರ್ಚಕರು ಆಗಲೇ ಪೂಜೆಯಲ್ಲಿ ನಿರತರಾಗಿದ್ದರು. ದೇಗುಲದ ಒಳಕ್ಕೆ ಕಾಲಿರಿಸಿದವರೇ ದೇವಾಲಯವನ್ನು ನಾಲ್ಕೈದು ಸಾರಿ ಸುತ್ತು ಹೊಡೆದು ಗಂಟೆಯನ್ನು ಭಾರಿಸಿ ದೇವರಿಗೆ ಉದ್ದಾಂಡ ನಮಸ್ಕಾರವನ್ನೂ ಮಾಡಿದರು. ಇವರಿಗಾಗಿಯೇ ಕಾಯುತ್ತಿದ್ದರೋ ಎನ್ನುವಂತೆ ದೇವಾಲಯದಲ್ಲಿ ಅರ್ಚಕರು ಮಂಗಳಾರತಿಯನ್ನು ಕೈಗೊಂಡರು. ಪ್ರತಿಯೊಬ್ಬರೂ ಹಣ್ಣು-ಕಾಯಿ ಮಾಡಿಸಿಕೊಂಡು ದೇವರಿಂದ ಪ್ರಸಾದ ಪಡೆದು ಒಳ್ಳೆಯದನ್ನು ಮಾಡಪ್ಪ ಭಗವಂತಾ ಎಂದರು.
             ವಿಕ್ರಮ, ವಿಜೇತಾರು ತಾವು ಬಂದಿದ್ದ ಕಾರ್ಯ ಕೈಗೂಡಲಿ ಎಂದು ಬೇಡಿಕೊಂಡರು. ಅಷ್ಟರಲ್ಲಿಯೇ ಗರ್ಭಗುಡಿಯಲ್ಲಿ ಪೂಜಾ ಕೈಂಕರ್ಯವನ್ನು ಮುಗಿಸಿ ಹೊರಬಂದರು. `ಅರೇ ವಿನಾಯಕ.. ಯಾರಪ್ಪಾ ಬಂದವರು ಎಂದುಕೊಂಡೆ.. ಇವರೆಲ್ಲ ಯಾರು...?' ಎಂದರು.
          `ಇವರೆಲ್ಲ ನನ್ನ ಗೆಳೆಯರು ಬೆಂಗಳೂರು ಕಡೆಯಿಂದ ಬಂದಿದ್ದಾರೆ. ನಮ್ಮೂರ ಭಾಗದಲ್ಲಿ ಪಾತರಗಿತ್ತಿ ಹಾಗೂ ವಿವಿಧ ಪ್ರಾಣಿಗಳ ದಾಖಲೆ ಮಾಡಲು ಬಂದಿದ್ದಾರೆ..' ಎಂದ.
            `ಹೌದಾ.. ಯಾರೋ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಇವರೇಯೋ ಹೇಗೆ..' ಎಂದರು. ಎಲ್ಲರೂ ತಲೆಯಾಡಿಸಿದರು.
            ವಿನಾಯಕ ಭಟ್ಟರ ಬಳಿ ದೇವಸ್ಥಾನದ ವಿಶೇಷತೆಗಳನ್ನು ಎಲ್ಲರಿಗೂ ಹೇಳಿ ಎಂದ. ದೇವಸ್ಥಾನದ ವಿಶೇಷತೆಗಳನ್ನು ಹೇಳಲು ಮುಂದಾದ ಭಟ್ಟರು ಎಲ್ಲರನ್ನೂ ಒಂದು ಕಡೆ ಕುಳ್ಳಿರಿಸಿದರು.
          `ನೋಡಿ ಈ ದೇವಸ್ಥಾನಕ್ಕೆ ಕನಿಷ್ಟವೆಂದರೂ 500 ರಿಂದ 600 ವರ್ಷ ಇತಿಹಾಸವಿದೆ. ಬಹಳಾ ಘಟಾಘಟಿ ಜಾಗ. ಈ ಮೊದಲು ಈ ದೇವಸ್ಥಾನ ನಮ್ಮೂರಿಗೆ ಹತ್ತಿರದ ಹೂವಿನಮನೆಯ ಕೋಟೆಗುಡ್ಡ ಎಂಬಲ್ಲಿ ಇತ್ತು. ಆ ನಂತರ ಅದ್ಯಾರಿಗೂ ಕನಸಿನಲ್ಲಿ ಬಂದ ಕಾರಣ ಇಲ್ಲಿಗೆ ದೇವಸ್ಥಾನವನ್ನು ಬದಲಿಸಲಾಯಿತು. ಬಾಳೂರಿನ ಅರಸರ ಆಳ್ವಿಕೆಯ ಕಾಲದಲ್ಲಿ ಈ ದೇವಸ್ಥಾನಕ್ಕೆ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಬಾಳೂರು ಅರಸರು ದೇವಸ್ಥಾನ ನಿರ್ಮಾಣ ಮಾಡಿದ ಕಾರಣದಿಂದಾಗಿ ದೇಗುಲದ ಮುಂದೆ ಒಂದು ನಂದಿ ಆಕೃತಿಯನ್ನು ಸ್ಥಾಪಿಸಲಾಗಿದೆ. ಈ ನಂದಿ ಬಾಳೂರ ಅಸನ ಪ್ರತೀಕ. ಗಣಪನ ದೇವಾಲಯದ ಮುಂದೆ ನಂದಿ ಇರುವ ಕೆಲವೇ ಕೆಲವು ವಿಶಿಷ್ಟ ನಿದರ್ಶನಗಳಲ್ಲಿ ಇದು ಒಂದು ನೋಡಿ..' ಎಂದರು ಭಟ್ಟರು. ಎಲ್ಲರೂ ಅತ್ತ ಕಡೆ ಕಣ್ಣು ಹಾಯಿಸಿದರು.
              `ಈ ದೇವಸ್ಥಾನಕ್ಕೆ ಇನ್ನೂ ಒಂದು ವಿಶೇಷತೆಯಿದೆ ನೋಡಿ. ಈ ಗಣಪನನ್ನು ಎಲೆಕ್ಷನ್ ಗಣಪ ಎಂದೂ ಕರೆಯಲಾಗುತ್ತದೆ. ಅಂದರೆ ಎಲೆಕ್ಷನ್ ಸಮಯದಲ್ಲಿ ನಮ್ಮ ಗಣಪನಿಗೆ ಎಲ್ಲಿಲ್ಲದ ಬೇಡಿಕೆ. ಚುನಾವಣೆಯಲ್ಲಿ ಟಿಕೆಟ್ ಬೇಕಾದವರು ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡರೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಟಿಕೆಟ್ ಸಿಕ್ಕವರಲ್ಲಿ ಕೆಲವರು ಗೆಲುವಿಗಾಗಿ ಪೂಜೆಯನ್ನು ಮಾಡಿಸುವುದೂ ಇದೆ. ಗೆದ್ದವರೂ ಬಂದು ಪೂಜೆ ಮಾಡಿಸುತ್ತಾರೆ ನೋಡಿ. ಈ ಕಾರಣದಿಂದ ನಮ್ಮ ಗಣಪ ಎಲೆಕ್ಷನ್ ಗಣಪ ಆಗಿದ್ದಾನೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಕೂಡ ಹಲವರು ಬಂದು ಪೂಜೆ ಮಾಡಿಸಿದ್ದರು ನೋಡಿ..' ಎಂದರು ಭಟ್ಟರು.
             `ದೇವರಿಗೆ ಪೂಜೆ ಸಲ್ಲಿಸಿ, ಗಂಟೆಯನ್ನು ಹರಕೆಯ ರೂಪದಲ್ಲಿ ಒಪ್ಪಿಸುವುದು ಇಲ್ಲಿನ ವಾಡಿಕೆ. ಕಾಡಿನ ಮಧ್ಯದಲ್ಲಿ ಇರುವ ಈ ದೇವರನ್ನು ನೋಡಲು ರಾಜ್ಯದ ಹಲವು ಕಡೆಗಳಿಂದ ಬರುತ್ತಾರೆ ನೋಡಿ. ಇಂತಹ ಈ ದೇವಾಲಯದ ಪ್ರದೇಶ ಗುಡ್ಡದ ಮೇಲಿದ್ದರೂ ಇಲ್ಲಿ ನೀರಿನ ಸೆಲೆ ಚನ್ನಾಗಿದೆ. ಎಲ್ಲ ಭಗವಂತನ ಆಶೀರ್ವಾದ ನೋಡಿ..' ಎಂದರು ಭಟ್ಟರು.
            ಪ್ರತಿಯೊಬ್ಬರೂ ದೇವರ ಮಹಿಮೆಯ ಬಗ್ಗೆ ಅಚ್ಚರಿ ತೋರಿಸುತ್ತಾ ವಾಪಾಸಾಗಲು ಮುಂದಾದರು. ಆಗ ಇದ್ದಕ್ಕಿದ್ದಂತೆ ಅಚಾತುರ್ಯವೊಂದು ಘಟಿಸಿಬಿಟ್ಟಿತು. ಯಾರೂ ಅಂದುಕೊಂಡಿರದ ಘಟನೆಯೊಂದು ಜರುಗಿತು. ಅಚಾನಕ್ ಆಗಿ ನಡೆದ ಘಟನೆ ಎಲ್ಲರ ಮನಸ್ಸಿನಲ್ಲಿ ಭಯದ ಛಾಯೆ ಆವರಿಸಿತು.

(ಮುಂದುವರಿಯುತ್ತದೆ.)

Tuesday, June 30, 2015

ಅಘನಾಶಿನಿ ಕಣಿವೆಯಲ್ಲಿ-20

              ಮುಂಜಾನೆಯ ಮಂಜಿನ ಪರದೆ ದಂಟಕಲ್ಲನ್ನು ಆವರಿಸಿಕೊಂಡಿತ್ತು. ಬೆಳ್ಂಬೆಳಿಗ್ಗೆ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಿರುವ ಹೊತ್ತಿನಲ್ಲಿಯೇ ಅದೇನೋ ವಾಹನ ಬಂದ ಸದ್ದಾಯಿತು. ಬೆಳ್ಳಂಬೆಳಿಗ್ಗೆ ಯಾರಿರಬಹುದು ಎನ್ನುವ ಕುತೂಹಲ ಎಲ್ಲರ ಮನಸ್ಸಿನಲ್ಲಿಯೂ ಮೂಡಿತು.
             ಮಂಜಿನ ಪರದೆಯನ್ನು ಹರಿದುಕೊಂಡು ಜೀಪೊಂದು ಬಂದು ಮನೆಯಂಗಳದಲ್ಲಿ ನಿಂತಿತು. ಮನೆಯಂಗಳದಲ್ಲಿ ಹಾಕಿದ್ದ ದೊಡ್ಡ ದೊಡ್ಡ ಕಂಬದ ಮೇಲೆ ಅಟ್ಟ ರಾರಾಜಿಸುತ್ತಿದ್ದರೆ ಗುರುಗುಡುತ್ತ ಬಂದ ಜೀಪು ಅಟ್ಟದ ಕೆಳಗೆ ನಿಂತುಕೊಂಡಿತು. ಧಡ ಧಢ್ ಎಂದು ಇಬ್ಬರು ಇಳಿದರು. ಇಳಿದ ತಕ್ಷಣವೇ ಗೊತ್ತಾಗಿದ್ದು. ಬಂದವರು ಪೊಲೀಸರು ಎಂಬುದು. ಎಲ್ಲರಲ್ಲೂ ಅಚ್ಚರಿ. ಬೆಳ್ಳಂಬೆಳಿಗ್ಗೆ ಪೊಲೀಸರು ಬಂದಿದ್ದಾರೆ ಎನ್ನುವುದು ಎಲ್ಲರ ಮನಸ್ಸಿನಲ್ಲಿಯೂ ಮೂಡಿತು. ಊರಿನ ಒಂದೆರಡು ಹೈದರಂತೂ ತಮ್ಮೂರಿ ಫಾಸಲೆಯಲ್ಲಿ ಯಾವುದಾದರೂ ಗಲಾಟೆ, ಕಳ್ಳತನಗಳು ನಡೆದಿದೆಯೇ ಎಂದು ಜ್ಞಾಪಿಸಿಕೊಳ್ಳುತ್ತಿದ್ದಾಗಲೇ ಪೊಲೀಸ್ ಅಧಿಕಾರಿಯೊಬ್ಬ `ಈ ಊರಿಗೆ ಯಾರೋ ಒಂದಿಷ್ಟು ಜನ ಬಂದಿದ್ದಾರಂತಲ್ಲ. ಯಾರವರು? ಈಗೆಲ್ಲಿದ್ದಾರೆ? ತೋರಿಸಿ' ಎಂದು ದರ್ಪದಿಂದಲೇ ಹೇಳಿದ.
             ಊರಿನ ನಾಗರಿಕರು ಒಮ್ಮೆ ಬೆಚ್ಚಿಬಿದ್ದು ವಿನಾಯಕನ ಮನೆಯನ್ನು ತೋರಿಸಿದರು. ಬೆಳಗಿನ ಸವಿನಿದ್ದೆಯಲ್ಲಿ ಎಲ್ಲರೂ ಇದ್ದರು. ಬೆಳ್ಳಬೆಳಿಗ್ಗೆ ಬಂದ ಪೊಲೀಸ್ ಜೀಪಿನ ಸದ್ದು ಎಲ್ಲರ ನಿದ್ದೆಯನ್ನು ಹೊಡೆದೋಡಿಸಿತ್ತಾದರೂ ಯಾರೂ ಇನ್ನೂ ಹಾಸಿಗೆಯನ್ನು ಬಿಟ್ಟು ಎದ್ದಿರಲಿಲ್ಲ. ಮನೆಯೊಳಕ್ಕೆ ನುಗ್ಗಿದವರೇ ಪೊಲೀಸರು ವಿಕ್ರಂ, ಪ್ರದೀಪ, ವಿಷ್ಣು ಸೇರಿದಂತೆ ಊರಿಗೆ ಹೊಸದಾಗಿ ಬಂದಿದ್ದವರನ್ನೆಲ್ಲ ಹಿಡಿದುಕೊಂಡರು. ಕಕ್ಕಾಬಿಕ್ಕಿಯಾಗಿ ಎಲ್ಲರೂ ಏನಾಗುತ್ತಿದೆ ಎಂದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ದರದರನೆ ಎಳೆದು ಜೀಪಿನೊಳಕ್ಕೆ ತುಂಬಿದ ಪೊಲೀಸರು ಭರ್ರೆಂದು ಹೊರಟೇಬಿಟ್ಟಿದ್ದರು. ಯಾರಿಗೂ ಏನಾಗಿದೆ, ಏನಾಗುತ್ತಿದೆ ಎನ್ನುವುದರ ಅರಿವು ಮಾತ್ರ ಇರಲಿಲ್ಲ. ವಿಜೇತಾ ಹಾಗೂ ವಿಕ್ರಂ ಮಾತ್ರ ತಮ್ಮನ್ನು ಯಾಕೆ ಹೀಗೆ ಪೊಲೀಸರು ಎಳೆದುಕೊಂಡು ಹೋಗುತ್ತಿದ್ದಾರೆ ಎಂಬುದು ಗೊತ್ತಾಗದ ಕಾರಣ ಸಾಕಷ್ಟು ಪ್ರತಿಭಟನೆಯನ್ನೂ ಮಾಡಿದರು.
            `ನಮ್ಮನ್ನು ಯಾಕೆ ಹೀಗೆ ಎಳೆದುಕೊಂಡು ಹೋಗುತ್ತಿದ್ದೀರಿ..' ಅಸಹನೆಯಿಂದ ಕೇಳಿದ್ದಳು ವಿಜೇತಾ.
            `ಬಾಯಿಮುಚ್ಚಿಕೊಂಡು ಜೀಪ್ ಹತ್ತಿ. ಪೊಲೀಸ್ ಸ್ಟೇಷನ್ ಗೆ ಹೋದ ಮೇಲೆ ಗೊತ್ತಾಗುತ್ತದೆ..' ಎಂದು ಪೊಲೀಸರು ಗದರಿದ್ದರು.
             `ನೋಡಿ ನಾವು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಅರೆಷ್ಟ್ ವಾರಂಟ್ ಇಲ್ಲದೇ ನಮ್ಮನ್ನು ಯಾಕೆ ಹೀಗೆ ಕರೆದೊಯ್ಯುತ್ತಿದ್ದೀರಿ..' ಸಿಟ್ಟಿನಿಂದಲೇ ಕೇಳಿದ್ದ ವಿಕ್ರಂ. ಪ್ರದೀಪ ಮಾತ್ರ ಏನೂ ಮಾತನಾಡದೇ ಸುಮ್ಮನೇ ಇದ್ದ. ಯಾರು ಎಷ್ಟು ಕೇಳಿದರೂ ಪೊಲೀಸರು ಯಾಕೆ ಕರೆದೊಯ್ಯುತ್ತಿದ್ದಾರೆ ಎನ್ನುವುದು ಮಾತ್ರ ಗೊತ್ತಾಗಲಿಲ್ಲ. ವಿಕ್ರಮ ಹಾಗೂ ವಿಜೇತಾ ಇಬ್ಬರಿಗೂ ತಾವು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಬಿಡೋಣ ಎಂದುಕೊಂಡರು. ನಾಲಿಗೆಯ ತುದಿಯವರೆಗೂ ಬಂದಿದ್ದನ್ನು ಹಾಗೇ ಸುಮ್ಮನೇ ಉಳಿದುಬಿಟ್ಟರು. ಪತ್ರಿಕೆಯವರು ತಾವು ಎಂದು ಹೇಳಲೇ ಇಲ್ಲ.
           ಅರ್ಧಗಂಟೆ ಪಯಣದ ನಂತರ ಜೀಪು ಪೊಲೀಸ್ ಸ್ಟೇಶನ್ ಎದುರು ಬಂದು ನಿಂತಿತು. ಶಿರಸಿ ಪೊಲೀಸ್ ಠಾಣೆಗೆ ಕರೆತರಲಾಗುತ್ತದೆ ಎಂದುಕೊಂಡಿದ್ದವರಿಗೆ ಅಚ್ಚರಿಯಾಗಿತ್ತು. ಸಿದ್ದಾಪುರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ಕುರಿತು ವಿಸ್ಮಯದಿಂದ ನೋಡುತ್ತಿದ್ದಾಗಲೇ ದಂಟಕಲ್ ಸಿದ್ದಾಪುರ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಸಿದ್ದಾಪುರ ಠಾಣೆಗೆ ಕರೆತರಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಆದರೆ ಯಾವ ಕಾರಣಕ್ಕೆ ಹೀಗೆ ಕರೆತರಲಾಗಿದೆ ಎಂಬುದು ಮಾತ್ರ ಗೊತ್ತಾಗಲಿಲ್ಲ.

***

              ಬೆಳ್ಳಂಬೆಳಿಗ್ಗೆ ಪೊಲೀಸರು ದಂಟಕಲ್ಲಿಗೆ ಏಕಾಏಕಿ ಬಂದು ಊರಿಗೆ ಬಂದಿದ್ದವರನ್ನು ಬಂಧಿಸಿ ಕರೆದೊಯ್ದಿದ್ದು ಊರಿನಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಕಾಡನ್ನು ಸುತ್ತಲು ಬಂದಿದ್ದವರು ಭಯೋತ್ಪಾದಕರೇ ಇರಬೇಕು ಎಂದುಕೊಂಡರು ಹಲವರು. ಅಘನಾಶಿನಿ ಅಣೆಕಟ್ಟೆಗೆ ಸರ್ವೆ ಮಾಡಲು ಬಂದಿದ್ದಾರೆ ಎಂದುಕೊಂಡಿದ್ದವರು ಕೆಲವರು. ನಕ್ಸಲರಿರಬೇಕು ಎಂದು ಒಂದಿಬ್ಬರು ಮಾತನಾಡಿಕೊಂಡರು. ಯಾವುದೋ ಊರಿನಲ್ಲಿ ಕೊಲೆ ಮಾಡಿ ತಲೆ ತಪ್ಪಿಸಿಕೊಂಡು ಬಂದವರು ಇವರು ಎಂದುಕೊಂಡಿದ್ದವರು ಮತ್ತಷ್ಟು ಜನ. ಯಾರಿಗೂ ಕೂಡ ಯಾವ ಕಾರಣಕ್ಕಾಗಿ ಪೊಲೀಸರು ಇವರನ್ನು ಬಂಧಿಸಿದ್ದಾರೆ ಎನ್ನುವುದು ತಿಳಿದಿರಲಿಲ್ಲ. ಈ ಕಾರಣದಿಂದಾಗಿ ತಲೆಗೊಂದರಂತೆ ಮಾತನಾಡಲು ಆರಂಭಿಸಿದ್ದರು.
            ಪೊಲೀಸರು ಹೀಗೆ ಬಂದು ವಿಜೇತಾ, ವಿಕ್ರಂ, ವಿನಾಯಕ ಹಾಗೂ ವಿಷ್ಣುವನ್ನು ಬಂಧಿಸಿ ಕರೆದೊಯ್ದಿದ್ದರಿಂದ ವಿನಾಯಕ ಹಾಗೂ ಹುಲಿ ಕೊಂದ ಗಣಪಜ್ಜ ಮಾತ್ರ ನಂಬಲು ತಯಾರಿರಲಿಲ್ಲ. ಯಾವುದೇ ತಪ್ಪು ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಪೊಲೀಸರು ಇವರನ್ನು ಬಂಧಿಸಿ 10 ನಿಮಿಷ ಕಳೆಯುವುದರೊಳಗಾಗಿ ಗಣಪಜ್ಜ ಬಂದು ವಿನಾಯಕನನ್ನು ಭೇಟಿ ಮಾಡಿದ್ದ. ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂದು ವಿಚಾರಿಸಿದ್ದನಾದರೂ ವಿನಾಯಕನಿಗೆ ಮಾಹಿತಿ ಇಲ್ಲದ ಕಾರಣ ಸುಮ್ಮನೇ ಉಳಿದಿದ್ದ. ತಾನು ಸಿದ್ದಾಪುರ ಪೊಲೀಸ್ ಸ್ಟೇಷನ್ನಿಗೆ ಹೋಗಿ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ ಎಂದು ವಿನಾಯಕ ಹೊರಟು ನಿಂತಿದ್ದ. ಅದೇ ಸಂದರ್ಭದಲ್ಲಿ ಗಣಪಜ್ಜನೂ ಕೂಡ ತಾನೂ ಬರುತ್ತೇನೆ ಎಂದು ತಯಾರಾಗಿ ಬಿಟ್ಟಿದ್ದ. ಅಜ್ಜನ ಹುಮ್ಮಸ್ಸು ವಿನಾಯಕನಿಗೆ ಅಚ್ಚರಿಯನ್ನು ತಂದಿತ್ತು.
           ಗಣಪಜ್ಜ ಹೊರಡುವ ಮುನ್ನ ಸುಮ್ಮನೆ ಉಳಿಯಲಿಲ್ಲ. ತನ್ನ ಪರಿಚಯದ ಹಿರಿಯರಿಗೆ, ಹಳೆಯ ತಲೆಮಾರಿನ ರಾಜಕಾರಣಿಗಳಿಗೆಲ್ಲ ಒಮ್ಮೆ ಪೋನಾಯಿಸಿ ಅವರಿಗೆಲ್ಲ ವಿಷಯವನ್ನು ತಿಳಿಸಿದ. ಪೊಲೀಸ್ ಠಾಣೆಗೆ ಬಂದು ಸಹಾಯ ಮಾಡುವಂತೆಯೂ ತಿಳಿಸಿದ. ನಂತರ ವಿನಾಯಕನ ಜೊತೆಗೂಡಿ ಸಿದ್ದಾಪುರದ ಕಡೆಗೆ ತೆರಳಿದ.

****

       ಸಿದ್ದಾಪುರ ಪೊಲೀಸ್ ಠಾಣೆಯ ಬಳಿ ಜೀಪಿನಿಂದ ವಿಕ್ರಂ, ವಿಜೇತಾ, ವಿಷ್ಣು ಹಾಗೂ ಪ್ರದೀಪರು ಇಳಿಯುತ್ತಿದ್ದಂತೆ ಒಂದಿಷ್ಟು ಪೇಪರಿನವರು, ಟಿವಿ ಚಾನಲ್ಲಿನವರು ಮುತ್ತಿಕೊಂಡರು. ಆಗಲೇ ಒಂದೆರಡು ಜನ ಇವರ ಪೋಟೋಗಳನ್ನೂ ಕ್ಲಿಕ್ಕಿಸಿಕೊಂಡು ಬಿಟ್ಟಿದ್ದರು. ಆದರೆ ಯಾರೊಬ್ಬರೂ ಕೂಡ ಸುಖಾಸುಮ್ಮನೆ ಬಂಧಿಸಲ್ಪಟ್ಟವರ ಬಳಿ ಮಾತನಾಡಲು ತಯಾರಿರಲಿಲ್ಲ. ಎಲ್ಲರನ್ನೂ ಪೊಲೀಸ್ ಠಾಣೆಯೊಳಕ್ಕೆ ಕರೆದೊಯ್ಯಲಾಯಿತು. ಇತ್ತ ವಿವಿಧ ಟಿವಿ ಚಾನಲ್ಲುಗಳಲ್ಲಿ ಉತ್ತರ ಕನ್ನಡದಲ್ಲಿ ನಕ್ಸಲೀಯರ ಸೆರೆ, ಸಿದ್ದಾಪುರದ ಕಾನಸೂರಿನ ಹಳ್ಳಿಯಲ್ಲಿ ಅಡಗಿದ್ದ ನಕ್ಷಲರು ಎನ್ನುವ ಸುದ್ದಿ ಬಿತ್ತರವಾಗತೊಡಗಿತ್ತು.
            ಪೊಲೀಸ್ ಠಾಣೆಯೊಳಕ್ಕೆ ಕರೆದೊಯ್ದಿದ್ದೇ ತಡ ಯಾರನ್ನೂ ಒಂದೂ ಮಾತು ಕೇಳದೇ ಕಂಬಿಯ ಕೋಣೆಯೊಳಕ್ಕೆ ಹಾಕಲಾಯಿತು. ವಿಕ್ರಂ ಹಾಗೂ ವಿಷ್ಣುವಿಗೆ ನಾಲ್ಕೇಟನ್ನು ಹಾಕಿಯೂ ಬಿಟ್ಟದ್ದರು. ನೀವು ಯಾವ ಕಡೆಯಿಂದ ಬಂದವರು. ಎಷ್ಟು ಸಮಯದಿಂದ ಇಲ್ಲಿ ಇದ್ದಿರೀ. ನಿಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ಹೇಳಿ. ಏನೇನು ಭಾನಗಡಿ ಮಾಡಲು ಆರಂಭಿಸಿದ್ದೀರಿ ಎಂದೆಲ್ಲ ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದರು. ತಾವು ಕಾಡನ್ನು ಸುತ್ತಲು ಬಂದವರು, ಪಾತರಗಿತ್ತಿಗಳ ಅಧ್ಯಯನಕ್ಕಾಗಿ ಬಂದಿದ್ದೇವೆ ಎಂದು ಎಲ್ಲರೂ ಹೇಳುತ್ತಿದ್ದರೂ ಪೊಲೀಸರು ಮಾತ್ರ ಅದನ್ನು ಕೇಳುತ್ತಿರಲಿಲ್ಲ.
               ಪ್ರದೀಪ ಮಾತ್ರ ಬಹಳ ಸೀರಿಯಸ್ಸಾಗಿದ್ದ. ಮನಸ್ಸಿನಲ್ಲಿ ಅದೇನೋ ಆಲೋಚನೆ. ಪೊಲೀಸರು ಆತನಿಗೂ ಹೊಡೆಯಲು ಬಂದರು. ವಿಚಾರಣೆ ನಡೆಸಲು ಮುಂದಾದರು. ತಕ್ಷಣ ಆತ ಇದ್ದಕ್ಕಿದ್ದಂತೆ ಅರ್ಧ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಅದೇನೋ ಕೋಡ್ ಹೇಳಿದ. ಹೊಡೆಯುತ್ತಿದ್ದ ಪೊಲೀಸರು ಇದ್ದಕ್ಕಿದ್ದಂತೆ ಸುಮ್ಮನಾದರು. ತಕ್ಷಣವೇ ಅವರು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು. ಇದ್ದಕ್ಕಿದ್ದಂತೆ ಎಲ್ಲರನ್ನೂ ಇರಿಸಲಾಗಿದ್ದ ಕೋಣೆಗೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರದೀಪನನ್ನು ಒಂದೆಡೆಗೆ ಕರೆದೊಯ್ದರು. ಕೋಣೆಯಿಂದ ಹೊರಕ್ಕೆ ಎಲ್ಲೋ ಕರೆದುಕೊಂಡು ಹೋದರು. ಎಲ್ಲರಿಗೂ ಒಮ್ಮೆಲೆ ಅಚ್ಚರಿಯಾಗಿದ್ದು ಸುಳ್ಳಲ್ಲ.
           ಪ್ರದೀಪನನ್ನು ಹೊರಕ್ಕೆ ಕರೆದುಕೊಂಡು ಹೋದ ಹತ್ತೋ ಹದಿನೈದೋ ನಿಮಿಷದ ನಂತರ ಎಲ್ಲರನ್ನೂ ಇದ್ದಕ್ಕಿದ್ದಂತೆ ಬಿಡುಗಡೆ ಮಾಡಲಾಯಿತು. ಎಲ್ಲರೂ ಹೊರಕ್ಕೆ ಬಂದರು. ಹೊರಭಾಗದಲ್ಲಿ ಪ್ರದೀಪ ಪೊಲೀಸ್ ಅಧಿಕಾರಿಗಳ ಜೊತೆಗೆ ನಗುತ್ತಾ ಮಾತನಾಡುತ್ತಿದ್ದವನು ಇದ್ದಕ್ಕಿದ್ದಂತೆ ಗಂಭೀರನಾದ.
            `ಏನಿದು ಪ್ರದೀಪ..ಯಾಕೆ ಹೀಗಾಯ್ತು? ' ವಿಕ್ರಮ ಕೇಳಿದ್ದ.
            `ಇಲ್ಲಿ ಬೇಡ ಮುಂದೆ ಹೇಳುತ್ತೇನೆ..' ಎಂದ ಪ್ರದೀಪ
            `ಏನೋ ತಪ್ಪು ಮಾಹಿತಿಯಿಂದ ನಿಮ್ಮನ್ನು ಬಂಧಿಸಿದ್ದೆವು. ನಮ್ಮನ್ನು ಕ್ಷಮಿಸಿ.. ಮುಂದೆ ಇಂತಹ ತಪ್ಪಾಗುವುದಿಲ್ಲ..' ಎಂದು ಪೊಲೀಸ್ ಅಧಿಕಾರಿ ಇವರ ಬಳಿ ಕೇಳಿಕೊಂಡಾಗಲಂತೂ ಮತ್ತಷ್ಟು ಅಚ್ಚರಿ.
            `ಅಲ್ರೀ.. ನಾವ್ ಅಸ್ಟ್ ಹೇಳ್ತಾ ಇದ್ವಿ ನಾವ್ ನಕ್ಸಲರಲ್ಲ ಅಂತ, ನಮ್ಮ ಮಾತನ್ನು ಯಾಕೆ ಕೇಳಲಿಲ್ಲ ಅಂತ. ನೋಡಿ ಈಗ ..' ಎಂದು ರೇಗಿದ ವಿಕ್ರಮ.
           `ಅಯ್ಯೋ ಗೊತ್ತಾಗಲಿಲ್ಲ ನೋಡಿ. ಇನ್ನು ಮುಂದೆ ಈ ಥರ ಆಗೋದಿಲ್ಲ ಬಿಡಿ..' ಎಂದರು ಪೊಲೀಸ್ ಅಧಿಕಾರಿ. ನಂತರ ಎಲ್ಲರೂ ಪೊಲೀಸ್ ಠಾಣೆಯ ಹೊರಗೆ ಬರುತ್ತಿದ್ದಂತೆಯೇ ಗಣಪಜ್ಜನನ್ನು ಕೂರಿಸಿಕೊಂಡು ಬಂದ ಜೀಪು ಗಕ್ಕನೆ ನಿಂತಿತು. ವಿನಾಯಕ ಜೀಪಿನಿಂದ ಓಡಿದಂತೆ ಇಳಿದ. ಠಾಣೆಯಿಂದ ಹೊರ ಬರುತ್ತಿದ್ದವರ ಬಳಿ ಏನಾಯಿತು ಎಂದು ಕೇಳಿದ. ಅವರು ನಡೆದ ವಿಷಯವನ್ನು ತಿಳಿಸಿದರು.
           ಅಷ್ಟರಲ್ಲಿ ವಿಕ್ರಮನ ಪೋನ್ ರಿಂಗಣಿಸಲು ಆರಂಭವಾಯಿತು. ನೋಡಿದರೆ ಮಂಗಳೂರಿನಿಂದ ನವೀನಚಂದ್ರ ಅವರು ಪೋನ್ ಮಾಡಿದ್ದರು. ವಿಕ್ರಂ `ಹಲೋ..' ಎಂದ.
          `ನೋಡ್ರಿ ವಿಕ್ರಂ ಸಿದ್ದಾಪುರದ ಬಳಿ ನಕ್ಸಲರ ಬಂಧನ ಆಗಿದೆಯಂತೆ. ನೀವು ಅಲ್ಲೇ ಇದ್ದೀರಿ. ಸ್ವಲ್ಪ ಮಾಹಿತಿ ಕಳಿಸಿ ನೋಡೋಣ..' ಎಂದರು. ತಕ್ಷಣ ವಿಕ್ರಮ ನಡೆದಿದ್ದೆಲ್ಲವನ್ನೂ ಹೇಳಿದ. ಆಗ ಸಿಟ್ಟಾದ ನವೀನಚಂದ್ರರು `ಒಂದ್ ಕೆಲಸ ಮಾಡಿ.. ಪೊಲೀಸರು ಹೀಗೆ ಮಾಡಿದರು ಅಂತ ಅದನ್ನೇ ಒಂದು ಸುದ್ದಿ ಮಾಡಿಬಿಡಿ. ಅವರಿಗೆ ಬುದ್ದಿ ಕಲಿಸೋಣ..' ಎಂದರು. ವಿಕ್ರಮ ಒಪ್ಪಿಕೊಂಡ. ಸಿದ್ದಾಪುರದ ಇಂಟರ್ನೆಟ್ ಸೆಂಟರಿನಲ್ಲಿ ಕುಳಿತು ನಡೆದಿದ್ದೆಲ್ಲವನ್ನೂ ವರದಿ ಮಾಡಿ ಮತ್ತೆ ಜೀಪ್ ಹತ್ತಿದ
           ದಾರಿ ಮಧ್ಯದಲ್ಲಿ ಪ್ರದೀಪನ ಬಳಿ ಮಾತಿಗೆ ನಿಂತರು ಎಲ್ಲರೂ. `ಅಲ್ಲ ಪೊಲೀಸರ ಬಳಿ ಅದೇನೋ ಕೋಡ್ ಹೇಳಿದೆಯಲ್ಲ.. ಅದೇನು ಮಾರಾಯಾ? ಆಮೇಲೆ ನಿನ್ನನ್ನು ಅವರು ಇದ್ದಕ್ಕಿದ್ದಂತೆ ದೂರಕ್ಕೆ ಕರೆದುಕೊಂಡು ಹೋದರು. ಅವರ ಬಳಿ ನೀನೇನು ಹೇಳಿದ್ಯೋ. ಹಾಗೇ ನಿನ್ನನ್ನು ಸೇರಿದಂತೆ ಎಲ್ಲರನ್ನೂ ಇದ್ದಕ್ಕಿದ್ದಂತೆ ಬಿಟ್ಟುಬಿಟ್ಟರು. ಅದೆಂತ ಮೋಡಿ ಮಾಡಿದೆ ನೀನು..?' ಎಂದು ಕೇಳಿದ ವಿಕ್ರಮ.
         ಒಮ್ಮೆ ಕಕ್ಕಾಬಿಕ್ಕಿಯಾದರೂ ಸಾವರಿಸಿಕೊಂಡ ಪ್ರದೀಪ `ಅಯ್ಯೋ ಅದು ಪೊಲೀಸ್ ಕೋಡ್ ವರ್ಡ್. ಹಿಂದೆ ನಾನು ಪೊಲೀಸರಿಗೆ ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದೆ. ಆ ಕೋಡ್ ವರ್ಡ್ ಹೇಳಿದ ಕೂಡಲೇ ಏನೋ ಮಹತ್ವದ ವಿಷಯ ಇರಬೇಕು ಎಂದುಕೊಂಡು ನನ್ನನ್ನು ದೂರಕ್ಕೆ ಕರೆದೊಯ್ದರು. ಅದೇ ಅವಕಾಶ ಬಳಸಿಕೊಂಡು ನಮ್ಮ ಪರಿಚಯದ ಮಂತ್ರಿಗಳೊಬ್ಬರಿಗೆ ಪೋನ್ ಮಾಡಿದೆ. ಅವರು ಪೊಲೀಸರಿಗೆ ಎಲ್ಲವನ್ನೂ ತಿಳಿಸಿ ಹೇಳಿದರು. ನಮ್ಮನ್ನು ಬಿಡುಗಡೆಯೂ ಮಾಡಿದರು' ಎಂದ.
            `ಅಲ್ಲ ಮಾರಾಯಾ.. ನಿಂಗೆ ಮಂತ್ರಿಗಳೂ ಗೊತ್ತಾ..?' ಎಂದು ಆಶ್ಚರ್ಯದಿಂದ ಕೇಳಿದ ವಿಕ್ರಮ.
            `ಹು. ಅವರ ಕಾರ್ ಡ್ರೈವರ್ ಆಗಿದ್ದೆ. ಹಾಗಾಗಿ ಗೊತ್ತು. ನಮಗೆ ಸಹಾಯ ಮಾಡಿದರು ನೋಡಿ..' ಎಂದ ಪ್ರದೀಪ.
             ಪ್ರದೀಪ ಸಾಮಾನ್ಯ ಮನುಷ್ಯನೇನಲ್ಲ. ಬಹಳಷ್ಟು ಕೆಲಸಗಳನ್ನು ಮಾಡಿ ಪರಿಚಯವಿದೆ ಎಂದುಕೊಂಡರು ಎಲ್ಲರೂ. ವಿಕ್ರಮನಿಗೆ ಪ್ರದೀಪನ ಮೇಲೆ ಮೊದಲೇ ಇದ್ದ ಅನುಮಾನ ಮತ್ತಷ್ಟು ಹೆಚ್ಚಿತು.  ಪ್ರದೀಪ ಖಂಡಿತ ಏನನ್ನೋ ಮುಚ್ಚಿಡುತ್ತಿದ್ದಾನೆ ಎಂದುಕೊಂಡ.
            ಜೀಪಿನಲ್ಲಿಯೇ ಇದ್ದ ಗಣಪಜ್ಜ ಮಾತ್ರ `ನಂಗೆ ಗೊತ್ತಿತ್ರಾ ತಮಾ.. ನಿಂಗಳದ್ದು ಎಂತದೂ ತಪ್ಪಿಲ್ಲೆ ಹೇಳಿ. ಅದಕ್ಕೆ ಆನು ಬಂದಿದ್ದು. ಬಪ್ಪಕ್ಕಿದ್ರೆ ಎಲ್ಲರಿಗೂ ಪೋನ್ ಮಾಡಿ ರಾಜಕೀಯ ಒತ್ತಡನೂ ತಂದಿದ್ದಿ ನೋಡಿ. ಅಂತೂ ಬಿಡುಗಡೆ ಆತ ಇಲ್ಯ. ದೇವರು ದೊಡ್ಡವ್ವ ನೋಡಿ. ಮನೆಗೆ ಹೋದವ್ವು ಮೊದಲು ಗುಡ್ಡೇತೋಟದ ಗಣಪತಿಗೆ ಹಣ್ಣು ಕಾಯಿ ಮಾಡಿಶಿಕೊಂಡು ಬನ್ನಿ. ಎಂತಾದ್ರೂ ಗ್ರಹಚಾರ ಇದ್ರೆ ತಕ್ಷಣವೇ ಪರಿಹಾರ ಮಾಡ್ತ ಅಂವ. ಬಹಳ ಘಟಾಘಟಿ ದೇವರು. ಒಳ್ಳೆ ಜಾಗನೂ ಹೌದು. ವಿನಾಯ್ಕ ಮೊದ್ಲು ಎಲ್ರನ್ನೂ ಕರ್ಕೊಂಡು ಹೋಗಿ ಬಾರಾ..' ಎಂದ. ಎಲ್ಲರೂ ತಲೆಯಾಡಿಸಿದರು.
             ಎಲ್ಲರನ್ನೂ ಹೊತ್ತ ಜೀಪು ಮರಳಿ ದಂಟಕಲ್ಲನ್ನು ತಲುಪುವ ವೇಳೆಗೆ ಆಗಲೇ ಮಧ್ಯಾನದ ಸುಡುಬಿಸಿಲು ರಾಚುತ್ತಿತ್ತು. ನೆತ್ತಿಯನ್ನು ಸುಡಲು ಆರಂಭಿಸಿತ್ತು. ಊರಿನ ಕುತೂಹಲದ ಕಣ್ಣುಗಳು ಪೊಲೀಸ್ ಸ್ಟೇಶನ್ನಿಗೆ ಹೋದಷ್ಟೇ ವೇಗವಾಗಿ ಇವರು ವಾಪಾಸು ಬಂದರು ಎನ್ನುವ ಅಚ್ಚರಿಯೊಂದಿಗೆ ಕಾಯಿತ್ತಿತ್ತು.

Thursday, June 11, 2015

ಮೋಸ

ನಾನಿನ್ನ ಕಂಡೆ, ಅಲ್ಲಿ-ಇಲ್ಲಿ
ಎಲ್ಲೆಲ್ಲೂ ನಿನ್ನ ಕಂಡೆ |
ಆಟದಲಿ ಕಂಡೆ, ಬೇಟದಲ್ಲಿ ಕಂಡೆ
ಮೈಮಾಟದಲಿ ನಿನ ಕಂಡೆ ||

ಗಂಡಿನ ಅಳುವಲ್ಲಿ, ಹೆಣ್ಣಿನ ನಗುವಲ್ಲಿ
ನಿನ್ನಿರವ ಕಂಡೆ |
ಗೋಸುಂಬೆ ರಂಗಿನಲಿ, ಚಿಟ್ಟೆಯಾ ಕಣ್ಣಿನಲಿ
ನಿನ ಮೊಗವ ಕಂಡೆ ||

ಕುರುಕ್ಷೇತ್ರ ಯುದ್ಧದಲಿ, ಕೃಷ್ಣನ ಕೈಯಲ್ಲಿ
ನಿನ್ನನ್ನೇ ಕಂಡೆ |
ಚತು, ಚತುರ್ಯುಗಗಳಲಿ, ಬದುಕಿನಾ ಬೀದಿಯಲಿ
ನಿನ್ನ ನೆರಳು ಕಂಡೆ ||

ವ್ಯಾಪಾರದ ಮಡಿಲಿನಲಿ, ಪ್ರೀತಿಯ ಉಸಿರಿನಲಿ
ನಿನ ಹೆಸರ ಕಂಡೆ |
ದೇಶಗಳ ನಡುವಿನಲಿ, ಧರ್ಮಗಳ ಬಿಡುವಿನಲಿ
ನಿನ ಬದುಕ ಕಂಡೆ ||

ಶೃಂಗದ ತುದಿಯಲ್ಲಿ, ಭೃಂಗದ ನಗುವಲ್ಲಿ
ನಿನ್ನ ಒಲವ ಕಂಡೆ |
ಮಾನವನೆದೆಯಲ್ಲಿ, ದ್ವೇಷಾಸೂಯೆ ಜೊತೆಯಲ್ಲಿ
ನಿನ ಮನೆಯ ಕಂಡೆ ||

***

(ಈ ಕವಿತೆಯನ್ನು ಬರೆದಿರುವುದು 03-11-2005ರಂದು ದಂಟಕಲ್ಲಿನಲ್ಲಿ)



Wednesday, June 10, 2015

ನನ್ನಾಕೆ

ಹಳ್ಳಿಗಾಡಿನ ಹೊಲದ
ಬದುಕುವ ತೆನೆಗಳ
ಆರಿಸಿ ರಾಗಿಯ ತಂದೆ |

ಜೂಳ್ಳು ಹಾರಿಸಿ ಕಾಳು ಕುಟ್ಟಿ
ಪುಡಿಮಾಡಿ ಹಿಟ್ಟು ಮಾಡಿದೆ
ನೀರು ಬೆರೆಸಿ ಹದವಾಗಿ ತಟ್ಟಿದೆ|

ಕಾರುವ ಬೆಂಕಿ ಬಾಣಲೆಯಲ್ಲಿ
ಹಾಕಿ ಸುಟ್ಟೆ. ಬೇಯಿಸಿದೆ
ಗಟ್ಟಿ ಕಡಕ್ ರೊಟ್ಟಿ ಮಾಡಿದೆ|

ನೆಗ್ಗಿದ ಆಲ್ಯೂಮೀನಿಯಂ
ಬಟ್ಟಲಿನಲ್ಲಿ ಹಾಕಿದೆ
ಖಾರದ ಚಟ್ನಿ ಬೆರೆಸಿದೆ|

ಹದವಾಗಿ ಮುರಿದು ಬಾಯಿಗೆ ಇಡುವ
ಮುನ್ನ ನನ್ನಾಕೆ ಎಂದಳು ರೊಟ್ಟಿ
ಬೇಡ ನಾಳೆ ನನ್ನನ್ನು ಅಂಬಲಿ ಮಾಡಿ|


***

(ಈ ಕವಿತೆಯನ್ನು ಬರೆದಿರುವುದು ಶಿರಸಿ ಮಾರಿಕಾಂಬಾ ನಗರದಲ್ಲಿ ಜೂ.10, 2015ರಂದು)

ಪ್ರೀತಿ-ಶಾಂತಿ

ಪ್ರೀತಿ ನನ್ನ ಜೀವನ
ಶಾಂತಿ ನನ್ನ ಸಾಧನ
ಮನದಿ ಹಲವು ಭಾವನ
ಪ್ರೀತಿ-ಶಾಂತಿ ಕ್ಷಣ ಕ್ಷಣ ||

ಪ್ರೀತಿ-ಪ್ರೀತಿ ಭಾವನ
ಮನಸಿಗೊಂದು ಸಿಂಚನ
ಇಂದು ನನ್ನ ಚೇತನ
ಆಯಿತಲ್ಲ ಸ್ಪಂದನ ||

ಬಾಯಲೇನೋ ಹೊಸತನ
ಶಾಂತಿ ಮಂತ್ರ ಮಣ ಮಣ
ಯುದ್ಧ ಭೀತಿ ಬಂಧನ
ಮಾಡು ನೀ ವಿಮೋಚನ ||

ಪ್ರೀತಿ-ಶಾಂತಿ ತನನನ
ಸೇರಿದೆಡೆ ಚಿಂತನ
ಹರಡಲೊಂದು ಗಾಯನ
ಮುರಲಿ ಮುರಲಿ ಮೋಹನ ||

ಪ್ರೀತಿಯೊಂದು ಕೇತನ
ಶಾಂತಿಯೊಂದು ನರ್ತನ
ಪ್ರೀತಿ-ಶಾಂತಿ ಕೀರ್ತನ
ಮಾಡಲಿ ಅನಿಕೇತನ ||

****

(ಈ ಕವಿತೆಯನ್ನು ಬರೆದಿರುವುದು 19-10-2005ರಂದು ಶಿರಸಿಯ ಎಂ.ಇ.ಎಸ್ ಕಾಲೇಜಿನಲ್ಲಿ)
(ಕವಿತೆ ಬರೆಯಲು ಯಾರು, ಯಾವುದು ಸ್ಪೂರ್ತಿ ಎಂದು ಹೇಳುವುದು ಕಷ್ಟ. ಈ ಕವಿತೆಗೂ ಹಾಗೆಯೇ. ಕಾಲೇಜಿನಲ್ಲಿ ಡೆಸ್ಕಿನ ಮೇಲೆ ಹಲವರು ಹಲವು ರೀತಿಯಲ್ಲಿ ಬರೆಯುತ್ತಾರೆ. ಕುತೂಹಲದಿಂದ ನಾನು ಕಾಲೇಜು ದಿನಗಳಲ್ಲಿ ಅವನ್ನು ಓದುತ್ತಿದ್ದೆ. ಹೆಚ್ಚಿನವು ಡಬ್ಬಲ್ ಮೀನಿಂಗು ಆಗಿದ್ದರೆ ಇನ್ನೂ ಬಹಳಷ್ಟು ಸೆನ್ಸಾರ್ ಪ್ರಾಬ್ಲಮ್ಮಿನವುಗಳಾಗಿದ್ದವು. ಕುತೂಹಲದಿಂದ ಓದುತ್ತಿದ್ದ ನನಗೆ ಡೆಸ್ಕಿನ ಮೇಲಿನ ಅನಾಮಧೇಯ ಬರಹಗಳಲ್ಲಿ ಹೇಳಿಕೊಳ್ಳಲಾಗದ ಪ್ರೀತಿ, ಭಗ್ನ ಪ್ರೇಮ, ಕಾಮ ಇತ್ಯಾದಿ ಕಾಣಿಸುತ್ತಿದ್ದವು. ಇದೂ ಕೂಡ ಅಂತದ್ದೇ ಒಂದು ವಾಕ್ಯದಿಂದ ಸ್ಪೂರ್ತಿಯಾಗಿ ಬರೆದ ಕವಿತೆ. ಯಾರೋ ಅನಾಮಧೇಯ ವ್ಯಕ್ತಿ ಡೆಸ್ಕಿನ ಮೇಲೆ ಪ್ರೀತಿ ನನ್ನ ಜೀವನ, ಶಾಂತಿ ನನ್ನ ಸಾಧನ ಎಂದು ಬರೆದಿದ್ದ. ಅದೇ ಎಳೆ ಇಟ್ಟುಕೊಂಡು ಬರೆದಿದ್ದೇನೆ ಅಷ್ಟೆ. ನೋಡಿ)