Saturday, December 8, 2012

ಉ.ಕ ರೋಧನ : ಭಾಗ-3

ಉ.ಕ ರೋಧನ ಭಾಗ-3

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಗೂಡಿನ ವ್ಯಥೆ

ನನ್ನ ಉ,ಕವೊಂದು ಬೆಚ್ಚನೆಯ ಗೂಡು
ಈಗೀಗ ಆಗುತ್ತಿದೆ ಕಸದ ಬೀಡು|
ಒಡಲೊಳಗೆ ಕುದಿಯುತ್ತಿದೆ ಕೈಗಾ
ನಾಶಮಾಡಲು ಸಿದ್ಧವಾಗುತ್ತಿದೆ ಬೇಗ||

ಗುಬ್ಬಿಯ ಮೇಲೆ

ನನ್ನ ಉ.ಕವೊಂದು ಹಕ್ಕಿಮರಿ ಗುಬ್ಬಿ
ಯಾರೂ ಆದರಿಸಿಲ್ಲ ಬಾಚಿ ಹಿಡಿದು ತಬ್ಬಿ|
ತ್ಯಾಗಿಯಿದು, ಎಂದೆಂದೂ ಹಿಡಿದಿಲ್ಲ ಶಸ್ತ್ರ
ತೂಗುತಿದೆ ಇದರ ಮೇಲೆ ಯೋಜನೆಗಳ ಬ್ರಹ್ಮಾಸ್ತ್ರ||

ಪ್ರಾಣ-ಹರಣ

ನನ್ನ ಉ.ಕವೊಂದು ಯುಗಪುರುಷರ ನಾಡು
ಜೊತೆಗೆ ಉಂಟಲ್ಲ ಗಮ್ಯತೆಯ ಕಾಡು|
ಹಲವು ಮೃಗಜಂತುಗಳೇ ಇದರ ಮಾನ
ಎಲ್ಲವೂ ಕಳೆದುಕೊಳ್ಳುತ್ತಿವೆ ಈಗ ಪ್ರಾಣ||

ಪುಸ್ತಕದ ಕಥೆ

ನನ್ನ ಉ.ಕವೊಂದು ಹಳೇ ಪುಸ್ತಕ
ಓದಿದರೆ ಜ್ಞಾನ ತುಂಬುವುದು ಮಸ್ತಕ|
ತಿಂದುಬಿಟ್ಟಿದೆ ಅಲ್ಲಲ್ಲಿ ಹುಳವಿದರ ಪೇಜು
ಕಣ್ಣೆತ್ತಿ ನೋಡುವವರಿಲ್ಲ ಇದರ ಗೋಜು||

ಮೂರ್ತಿಯ ಕಥೆ

ಉತ್ತರಕನ್ನಡವೊಂದು ಸುಂದರ ಮೂರ್ತಿ
ಇದುವೇ ನನ್ನ ಕವನಕ್ಕೆ ಸ್ಫೂರ್ತಿ|
ಸುತ್ತೆಲ್ಲ ಹಬ್ಬಿಹುಸು ಭವ್ಯ ಮಲೆನಾಡು
ಇಂಚಿಂಚೂ ಸೂರೆಹೋಗುತ್ತಿದೆ ಇಲ್ಲಿಯ ಕಾಡು||

ಸಂಗೀತ-ರೋಗ

ನನ್ನ ಉ.ಕವೊಂದು ಸಂಗೀತದ ರಾಗ
ಆದರೆ ಅದಕ್ಕೆ ಹಿಡಿದಿದೆ ಹೊಸದೊಂದು ರೋಗ|
ಆಲಾಪನೆ ಮಾಡಿದರೆ ಬಾಯಲ್ಲಿ ಕೆಮ್ಮು
ಎದೆಯೊಳಗೆ ಕಟ್ಟಿದೆ ನೋವೆಂಬ ದಮ್ಮು||

 (ಉತ್ತರಕನ್ನಡದ ಬಗ್ಗೆ ಎಷ್ಟು ಬರೆದರೂ ಕಡಿಮೆ ನೋಡಿ... ಅದೊಂಥರಾ ಗಣಿ.. ಬಗೆದಷ್ಟೂ ಕಾಲಿಯಾಗುವುದಿಲ್ಲ.. ಆದರೆ ಯೋಜನೆಗಳ ಬಲಾತ್ಕಾರಕ್ಕೆ ಬಲಿಯಾಗುತ್ತಿರುವ ನನ್ನ ಜಿಲ್ಲೆಯ ಕುರಿತು ಇನ್ನೊಂದಷ್ಟು ಹನಿಗಳು...)

Wednesday, December 5, 2012

ಕತ್ತೆ ಹೇಳಿದ ಭವಿಷ್ಯ

ಕತ್ತೆ ಹೇಳಿದ ಭವಿಷ್ಯ

    ಬಹುತೇಕ ಎಲ್ಲರ ಬದುಕಿನಲ್ಲೂ ಇಂತಹ ಫನ್ನಿ ಅನ್ನಿಸೋ ಸಂದರ್ಭಗಳು ಬಂದೇ ಬಂದಿರ್ತವೆ. ಮಸ್ತ್ ತಮಾಶೆಯ, ಮುಜುಗರ ಉಂಟುಮಾಡಿದ, ವಿಲಕ್ಷಣವಾದ, ವಿಚಿತ್ರ ಅನ್ನಿಸುವ ಇಂತಹ ಘಟನೆಗಳು ಬಾಳ ಗೋಡೆಯಲ್ಲಿ ಹಾಗೇ ಸುಮ್ಮನೆ ಬಂದು ಸಂತಸ ನೀಡಿ ಹೋಗಿರುತ್ತದೆ. ಇಂತವುಗಳಿದ್ದರೇ ಬಾಳು ಸಮರಸ ಎನ್ನಬಹುದು.
    ನನ್ನ ಬಾಳಿನಲ್ಲಿ ನಡೆದ ಒಂದು ವಿಲಕ್ಷಣ ಘಟನೆಯನ್ನು ಹೇಳಬೇಕು. ಇದು ವಿಲಕ್ಷಣವೋ, ತಮಾಶೇಯೋ.. ಏನೋ ಒಂದು. ನಾನು 3 ನೇ ಕ್ಲಾಸೋ ಅಥವಾ ನಾಲ್ಕೋ ಏನೋ ಇರಬೇಕು. ಆಗ ನಡೆದಿದ್ದು. ಅದನ್ನು ನಿಮ್ಮೆದುರು ಹೇಳಲೇ ಬೇಕು... ಬಿಕಾಸ್ ಇಟ್ ಈಸ್ ಸೋ ಫನ್ನಿ ಯು ನೋ..(ಇಲ್ಲಿ ನೀವು.. ಮ್ಯಾಚ್ ಮುಗಿದ ನಂತರ ಪ್ರೆಸೆಂಟೇಶನ್ ಸೆರೆಮನಿಯಲ್ಲಿ ಮಾತನಾಡುವ ಧೋನಿ ಸ್ಟೈಲ್ ನೆನಪು ಮಾಡ್ಕೊಳ್ಳಿ..)
    ಸುಮಾರು 15-18 ವರ್ಷಗಳ ಹಿಂದಿನ ಕಥೆ. ಶಿರಸಿಯಲ್ಲಿ ಆ ವರ್ಷ ಜಾತ್ರೆಯ ಸಡಗರ. ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಬಂತೆಂದರೆ ಆಗ ನಮಗೆಲ್ಲ ಹೊಸದೊಂದು ಲೋಕ ಅನಾವರಣವಾಗುತ್ತಿತ್ತು. ಪ್ರತಿ ಸಾರಿಯೂ ಜಾತ್ರೆ ಅಂದರೆ ನನಗೆ ನಿಂತಲ್ಲಿ ನಿಲ್ಲೋಕಾಗೋಲ್ಲ.. ಕುಂತಲ್ಲಿ ಕೂರೋಕಾಗೋಲ್ಲ.. ತುಂಡುಗುಪ್ಪಳದವನಾದ ನನಗೆ ಜಾತ್ರೆಗೆ ಹೋಗಿ, ಪೀಪಿಳಿ ತಂದು ಪುಂಯ್ ಅಂತ ಊದಿ, ಒತ್ತಿದರೆ ಪೆಕ್ ಪೆಕ್ ಅನ್ನೀ ಕುನ್ನಿ ಗೊಂಬೆಯನ್ನು ತಂದು ಎರಡೇ ದಿನಕ್ಕೆ ಅದನ್ನು ಹಾಳುತೆಗೆಯದಿದ್ದರೆ ನನಗೆ ಸಮಾಧಾನವೇ ಇರುತ್ತಿರಲಿಲ್ಲ. ಅಷ್ಟರ ಜೊತೆಗೆ ಜಾತ್ರೆ ತಿರುಗಬೇಕು, ಸರ್ಕಸ್ ನೋಡಬೇಕು, ತೊಟ್ಟಿಲು(ಜಾಯಿಂಟ್ ವೀಲ್) ಹತ್ತಬೇಕು, ಟೊರ ಟೊರದ ಮೇಲೆ ತಲೆ ತಿರುಗುವಂತೆ ಕುಣಿಯಬೇಕು ಎಂಬೆಲ್ಲ ನೂರೆಂಟು ಕನಸುಗಳ ಗುಚ್ಛ.
    ಜಾತ್ರೆಗೆ 15 ದಿನ ಇದೆ ಎನ್ನುವಾಗಲೇ ಮನೆಯಲ್ಲಿ ಹರಪೆ ಪ್ರಾರಂಭವಾಗುತ್ತಿತ್ತು. ಶಾಲೆಯಲ್ಲಿ ಜಾತ್ರೆಗೆಂತಲೇ ಒಂದೆರಡು ದಿನ ಕಳ್ಳ ಬೀಳುವುದು ಖಾಯಂ ಆಗಿತ್ತು. ಬಿಡಿ ನಮ್ಮ ತಾರಾ ಮೇಡಮ್ಮು (ಪ್ರೀತಿಯಿಂದ ತಾರಕ್ಕೋರು) ಅಂತಹ ನಮ್ಮ ತಪ್ಪನ್ನು ಮಾಫಿ ಮಾಡ್ತಿದ್ದರು. ಜಾತ್ರೆ ಬಂತೆಂದರೆ ಅಪ್ಪನಿಗೆ ನನ್ನ ಹಾಗೂ ತಂಗಿಯ ರಗಳೆಯನ್ನು ತಡೆಯಲು ಆಗುತ್ತಲೇ ಇರಲಿಲ್ಲ. ಓದಿನ ಸಂದರ್ಭಗಳಲ್ಲಿ ಅಮ್ಮ ನಮ್ಮನ್ನು ಹಿಡಿದು ಬಡಿದು, ಬಯ್ಯುತ್ತಿದ್ದರೂ ಇಂತಹ ವಿಷಯಗಳಲ್ಲೆಲ್ಲ ಪಕ್ಷಾಂತರ ಮಾಡುವ ಅಮ್ಮ ನಮ್ಮನ್ನು ಸಪೋರ್ಟ್ ಮಾಡಿ `ಒಂಚೂರು ಅವ್ರನ್ನ ಜಾತ್ರಿಗೆ ಕರ್ಕಂಡು ಹೋಗಿಬಂದ್ರೆ ಬತ್ತಿಲ್ಯನು..? ' ಎಂದು ಕೇಳುತ್ತಿದ್ದಳು. ಆಗ ಅಪ್ಪನಿಗೆ ಅನಿವಾರ್ಯವಾಗಿಬಿಡುತ್ತಿತ್ತು.
    ಸರಿ ಆ ವರ್ಷ ಅಪ್ಪ ಜಾತ್ರೆಗೆ ಕರೆದುಕೊಂಡು ಹೋದ. ಅದೇನು ಕಾರಣವೋ ತಂಗಿ ನನ್ನ ಜೊತೆಗೆ ಬಂದಿರಲಿಲ್ಲ. ಗತ್ತಾಗಿ ಜಾತ್ರೆ ತಿರುಗಿದೆ. ಸಂಜೆ ಟೈಮಿನ ರಶ್ಶಲ್ಲಿ ಮಾರಿಕಾಂಬಾ ಗದ್ದುಗೆಗೆ ಬಂದು ದೇವರಿಗಡ್ಡ ಬಿದ್ದಿದ್ದು ಆಗಿತ್ತು. ಹಣ್ಣು ಕಾಯಿ ಮಾಡಿಸುವಾಗ ಅಲ್ಲಿನ ಗಬ್ಬು ವಾಸನೆ ತಾಳಲಾರದೇ ಹೊಟ್ಟೆ ತೊಳೆಸಿ ಬಂದಂತಾಗಿ ಅಪ್ಪನ ಬಳಿ `ಇದೆಂತಕ್ ಹಿಂಗೆ ಗಬ್ಬು ವಾಸನೆ..? ' ಅಂತ ಕೇಳಿದ್ದಕ್ಕೆ `ಅದೆ ಅಲ್ಲಿ ಕಾಯಿ ವಡಿತ್ವಲಾ.. ಅದು ಅಷ್ಟು ವಾಸನೆ ಬರ್ತಾ ಇದ್ದು' ಎಂದು ಅಪ್ಪ ಹೇಳಿದ್ದಿನ್ನೂ ನೆನಪಿದೆ.
    ಸರಿ ಮುಂದೆ ಜಾತ್ರೆ ಪೇಟೆ ಎಂದು ಕರೆಸಿಕೊಳ್ಳುವ ಬೀಡಕಿ ಬಯಲು ಸುತ್ತಾಡಿ, ಬಳೆ ಪೇಟೆಯಲ್ಲಿ ತಿರುಗಿ, ನಟರಾಜ ರೋಡಿನಲ್ಲಿ ಉದ್ದಾನುದ್ದಕ್ಕೆ ಎರಡೆರಡು ಬಾರಿ ಓಡಾಡಿ, ತೊಟ್ಟಿಲು ಹತ್ತಿ, ಸರ್ಕಸ್ ನಡೆಯುವ ಕೋಟೆಕೆರೆಯ ಗದ್ದೆ ಬಯಲಿಗೆ ಹೋಗಿ ಬಂದದ್ದಾಯ್ತು. ಅಷ್ಟರ ವೇಳಗೆ ಅಪ್ಪನ ಜೇಬೂ ಸುಮಾರು ಬರಿದಾಗಿರಬೇಕು, ಸಿಡಿಮಿಡಿ ಪ್ರಾರಂಭವಾಗಿತ್ತಲ್ಲದೆ `ನೀ ಹಿಂಗೆ ರಗಳೆ ಮಾಡ್ತಾ ಇದ್ರೆ ಜಾತ್ರೆ ಪೇಟೆಲಿ ಬಿಟ್ಟಿಕ್ಕೆ ಹೋಗ್ತಿ ಹಾ..' ಎಂಬ ತಾಕೀತುಗಳೂ ಶುರುವಾಗಿದ್ದವು. ಎಲ್ಲ ಆಯಿತು. ಕೊನೆಯದಾಗಿ `ಭವಿಷ್ಯ ಹೇಳುವ ಕತ್ತೆಯನ್ನು ನೋಡುವ ಅಂತ ಅಪ್ಪನಿಗೆ ಹರಪೆ ಬಿದ್ದೆ. ಅಪ್ಪನಿಗೆ ಸಿಟ್ಟು ಬಂದರೂ, ಬಯ್ಯುತ್ತಲೆ ಕರೆದೊಯ್ದ.
    ಒಳಗಡೆ ದೊಡ್ಡ ವರ್ತುಲಾಕಾರದಲ್ಲಿ ಒಂದು ನಾಯಿ ಹಾಗೂ ಒಂದು ಕತ್ತೆ ಇದ್ದವು. ಅವುಗಳ ಮಾಲಿಕನೋ ಅಥವಾ ಗಾರ್ಡಿಯನ್ನೋ.. ಯಾರೋ ಒಬ್ಬಾತ ಕನ್ನಡ ಹಾಗೂ ಹಿಮದಿ ಭಾಷೆಯಲ್ಲಿ ಏನೇನೋ ಹೇಳುತ್ತಿದ್ದ, ಪ್ರಶ್ನೆಗಳನ್ನು ಕೇಳುತ್ತಿದ್ದ. ಆತನ ಮಾತನ್ನು ಕೇಳುತ್ತಿದ್ದ ಅವುಗಳು ಪ್ರಶ್ನೆಗೆ ಉತ್ತರ ಎಂಬಂತೆ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿದ್ದವು. `ಅತ್ಯಂತ ಉದ್ದದ ವ್ಯಕ್ತಿ ಯಾರು ತೋರಿಸು..?' ಯಾರ ತಲೆಯಲ್ಲಿ ಅತ್ಯಂತ ಕಡಿಮೆ ಕೂದಲಿವೆ..? ಯಾರಿಗೆ ಅತ್ಯಂತ ಹೆಚ್ಚು ವಯಸ್ಸಾಗಿದೆ..? ಯಾರು ಅತ್ಯಂತ ಕುಳ್ಳರು..? ಹೀಗೆ ನೂರಾರು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಕತ್ತೆ ಅಂತಹ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿತ್ತು. ಅಂತಹ ಭವಿಷ್ಯ ಸುಮಾರು ಸತ್ಯವೂ ಆಗಿರುತ್ತಿದ್ದು ನನ್ನ ವಿಸ್ಮಯಕ್ಕೆ ಕಾರಣವಾಗಿತ್ತು.
    ಕೊನೆಗೊಮ್ಮೆ ಆ ಹಿಂದಿವಾಲಿ `ಈ ಗುಂಪಿನಲ್ಲಿರುವ ಅತ್ಯಂತ ಬುದ್ಧಿವಂತ ಹಾಗೂ ಚೂಟಿ ಹುಡುಗ ಯಾರು..?' ಎಂದು ಕೇಳಿದಳು. ಕತ್ತೆಗೆ ಬಹುಶಃ ತಲೆಕೆಟ್ಟಿತ್ತೇನೋ.. ಸೀದಾ ನನ್ನ ಎದುರು ಬಂದು ನಿಂತೇಬಿಟ್ಟಿತು. ನಾನೊಮ್ಮೆ ಕಕ್ಕಾಬಿಕ್ಕಿ. ಅಕ್ಕ-ಪಕ್ಕ, ಹಿಂದೆ ಮುಂದೆ ಎಲ್ಲ ನೋಡಿದೆ. ಕತ್ತೆ ನಿಂತಿದ್ದು ನನ್ನ ಬಳಿಯೇ. ನನಗೆ ಖುಷಿಯಾಗಬೇಕಿತ್ತು. ಊಹುಂ.. ಆಗಲಿಲ್ಲ. ಅವರ ಎದುರು ಮರ್ಯಾದೆಯೇ ಹೋದಂತಾಯಿತು. ಈ ಕತ್ತೆಯ ಬದಲು ಆ ನಾಯಿ ಆದ್ರೂ ನನ್ನೆದುರು ಬಂದು ನಿಲ್ಲಬಾರದಿತ್ತಾ.. ಅಂದುಕೊಂಡಿದ್ದಿದೆ.. ಕತ್ತೆ ಭವಿಷ್ಯ ನಿಜವೇ ಎಂದೆಲ್ಲಾ ಆಲೋಚನೆಗಿಟ್ಟುಕೊಂಡೆ ನಾನು. ಕತ್ತೆ ಭವಿಷ್ಯ ನುಡಿಯುವಷ್ಟು ಬುದ್ಧಿವಂತನೆ ನಾನು.. ಎಂಬ ಕ್ವಶ್ಚನ್ ಮಾರ್ಕ್ ಎದೆಯೊಳಗೆ..
    ಆ ಸಂದರ್ಭದಲ್ಲಿ ನಾನು ಹಾಗೆ ಚಿಂತಿಸಿದ್ದಕ್ಕೂ ಕಾರಣ ಇದೆ ನೋಡಿ... ಶಾಲೆಯಲ್ಲಿ ನಾನೆಂದರೆ ಬಹಳ ತಂಟೆಕೋರ, ಕಿಲಾಡಿ ಹುಡುಗ ಎಂಬ ಕುಖ್ಯಾತಿ ಇತ್ತು. `ಇಂವ ಓದಿದ್ರೆ ಜೋರಿದ್ದಿದ್ದ..' ಎಂಬ ಮಾತುಗಳು ನಮ್ಮ ಮಾಸ್ತರರಾದ ಸಿ. ಎಂ. ಹೆಗಡೆ ಅವರಿಂದ ನಾಲ್ಕಾರು ಬಾರಿ ಕೇಳಿದ್ದವು. ವಿಚಿತ್ರವೆಂದರೆ ನಾನು ಚನ್ನಾಗಿ ಓದುತ್ತಿದ್ದೆ. ಚನ್ನಾಗಿ ಬರೆಯುತ್ತಿದೆ. ಪಬ್ಲಿಕ್ ಪರೀಕ್ಷೆಯಲ್ಲಿ ಒಳ್ಳೆಯ ಮಾಕ್ಸರ್ುಗಳು ಬಿದ್ದು ಪಾಸಾಗಿದ್ದೇನೆ. ಆದರೆ ಶಾಲೆಯ ಟೆಸ್ಟುಗಳಲ್ಲಿ ಮಾತ್ರ ಪಾಸಿಗಿಂತ ಒಂದಂಕಿ ಮೇಲೆ ಇರುತ್ತಿದ್ದೆ.. ಅಂದರೆ ಸಕರ್ಾರದ ಲೆಕ್ಕದಲ್ಲಿ ಬಡತನ ರೇಖೆ ಅಂತಾರಲ್ಲ.. ಅಂತಹ ಮಾರ್ಜಿನ್ ಲೈನು. (ಇದಕ್ಕೆ ಕಾರಣ ಕೊನೆಗೆ ಗೊತ್ತಾಗಿದ್ದೆಂದರೆ ಮಾಸ್ತರ್ರು ಮಾಡುತ್ತಿದ್ದ ಹಕ್ಕಿಕತ್ತು ಅಂತ ಕೊನೆಗೆ ಗಿತ್ತಾಯಿತು.. ಅದನ್ನು ಇನ್ನೊಮ್ಮೆ ಹೇಳುವಾ.. ಆ ಸಂಗತಿ ಮಜವಾಗಿದೆ.,.)
    ಸರಿ ಕತ್ತೆ ಭವಿಷ್ಯ ಹೇಳಿತಲ್ಲ. ಇನ್ಯಾರಿದ್ದಾರ್ರೀ ನನ್ನ ಸಾಟಿ.. ಅದೆಂತದ್ದೂ ಹಮ್ಮು-ಬಿಮ್ಮು.. ತಲೆಯ ಮೇಲೆ. ಅಂದಿನಿಂದ ಪುಸ್ತಕ ಹಿಡಿಯುವುದು ಅರ್ಧಕ್ಕರ್ಧ ಬಂದಾಗಿತ್ತು. ಅಪ್ಪ-ಅಮ್ಮ ಬಯ್ದಾಗಲೆಲ್ಲ ಕತ್ತೆ ಭವಿಷ್ಯ ಹೇಳಿದ್ದನ್ನೇ ನೆನಪು ಮಾಡುತ್ತಿದ್ದೆ. ನನ್ನ ಬೆಲೆ ನಿಮಗೆ ಗೊತ್ತಾಗಲಿಲ್ಲ.. ಕತ್ತೆಗೆ ಗೊತ್ತಾಯಿತು ಎಂದು ಹೇಳುತ್ತಿದ್ದೆ. ಅಪ್ಪ-ಅಮ್ಮ ಅದೆಷ್ಟು ನಕ್ಕಿದ್ದರೋ. ಅವರ ನಗುವಿನ ಕಾರಣ ನನಗೆ ಆಗ ತಿಳಿದೇ ಇರಲಿಲ್ಲ.
    ಮುಂದಿನ ಪರಿಣಾಮ ಕೇಳಿ ಇನ್ನೂ ಮಜಬೂತಾಗಿದೆ. ಸರಿ ಆ ವರ್ಷ ಕತ್ತೆಯ ಭವಿಷ್ಯದ ನಶೆ ಯಾವ ರೀತಿ ಕೆಲಸ ಮಾಡ್ತಪ್ಪಾ ಅಂದ್ರೆ ಪಾಸಾಗಿದ್ದೇ ಪುಣ್ಯ ಎಂಬಂತಾಗಿತ್ತು. ಓದಿಗೆ ತಿಲಾಂಜಲಿ ಕೊಟ್ಟಿದ್ದೆ. ಕತ್ತೆ ಭವಿಷ್ಯ ನನ್ನನ್ನು ಮಳ್ಳು ಮಾಡಿತ್ತು. ಬಿಡಿ.. ಈ ಸಂಗತಿ ನನಗೆ ಈಗಲೂ ನೆನಪಾಗ್ತಾ ಇರ್ತದೆ. ಕತ್ತೆಯ ಭವಿಷ್ಯ ನನ್ನ ಪಾಲಿಗೆ ಗ್ರೇಡೋ..? ಡಿ.ಗ್ರೇಡೋ... ಊಹೂಂ.. ಒಂದೂ ತಿಳಿದಿಲ್ಲ. ಕತ್ತೆ ಭವಿಷ್ಯ ಹೇಳಿತ್ತು. ಹಿಂಗಾಗಿತ್ತು. ಅನ್ನೋ ಸುಂದರ ಸಂದರ್ಭ ನೆನಪಿದೆ. ಇದಕ್ಕಾಗಿ ಹೆಮ್ಮೆ ಪಡಲೋ, ಕತ್ತೆ ಭವಿಷ್ಯ ಹೇಳ್ ಬಿಡ್ತು.. ತಥ್ ನನ್ಮಗಂದು... ಅಂತ ವ್ಯಥೆ ಪಡಬೇಕೋ... ಊಹೂಂ ಏನೋಂದು ಗೊತ್ತಾಗಲಿಲ್ಲ.
    ಇಂತಹ ಮಜಬೂತು ಸಂಗತಿಗಳು ನಿಮ್ಮಲ್ಲೂ ಅನೇಕ ಇರುತ್ತವೆ. ಅವೆಲ್ಲ ಏಕಾಕಿತನದಲ್ಲಿ ನೆನಪಾದಾಗ ಕೊಡುವ ಅನುಭೂತಿ ಇದೆಯಲ್ಲ.. ಆಹ್.. ಅದೆಷ್ಟು ಮಜಬೂತು ಅಂತೀರಿ... ಹೋಗ್ಲಿ ಬಿಟ್ಹಾಕಿ.. ಇದು ಹ್ಯಾಂಗಿದೆ ಅನ್ನೋದನ್ನು ಹೇಳಿ ..

ಉ.ಕ ರೋಧನ : ಭಾಗ-2

ಉ.ಕ ರೋಧನ ಭಾಗ-2

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಒಡಲ ವ್ಯಥೆ

ನನ್ನ ಉ.ಕದೆಡೆಗೆ ಬರೆದಷ್ಟೂ ಮುಗಿಯವು.,
ಬಂದ ಯೋಜನೆಗಳು ಬಂದಷ್ಟೂ ನಿಲ್ಲವು..|
ವನ, ಅರಣ್ಯ, ಭೂ ಸಂಪತ್ತುಗಳೇ ಇದರ ಒಡಲು
ಕತ್ತರಿಸಿ ಕೊಲ್ಲಲಾಗುತ್ತಿದೆ ಪ್ರತಿದಿನವೂ ಇದರ ಕೊರಳು||

ಕುತ್ತು-ಯೋಗ
ನನ್ನ ಉ.ಕಕ್ಕೆ ಬಂತೊಂದು ಹೊಸ ಕುತ್ತು
ಅಂತೆ ಕಾರವಾರ ಮರಾಠಿಗರ ಸ್ವತ್ತು|
ಎಲ್ಲದರ ಜೊತೆಗೆ ಇದು ಹೊಸದೊಂದು ರೋಗ
ಒಟ್ಟಿನಲ್ಲಿ ಉ.ಕ ಸಿಕ್ಕವನಿಗೆ ರಾಜಯೋಗ||

ಒಡಲು-ಗುಂಡಿ
ನನ್ನ ಉ.ಕವೆ ಒಂದು ಪ್ರೀತಿಯ ಒಡಲು
ಭೋರ್ಗರೆಯುತ್ತಿರುತ್ತದೆ ಕಾರವಾರದ ಕಡಲು
ನೋಡಲು ಸುಂದರ ಕಣೆ ಆ ಊರು ತದಡಿ
ಉಷ್ಣ ಸ್ಥಾವರಕ್ಕಾಗಿ ನಡೆದಿದೆ ಗಂಡಾಗುಂಡಿ||

ನದಿ-ಬೇರು
ನನ್ನ ಉ.ಕವೆ ಒಂದು ಗಮ್ಯ ನದಿ
ಕಟ್ಟಿದರು ಅಣೆಕಟ್ಟು ಹಲವು ಬದಿ
ಕುಡಿ ಕುಡಿದು ಬತ್ತಿದರೂ ಶುಭ್ರ ನೀರು
ಕಡಿಯುವುದ ಬಿಡಲಿಲ್ಲ ಇದರ ಬೇರು||

ಗೋವಾದ ಆಸೆ
ನನ್ನ ಉಕದ ಮೇಲೆ ಎಲ್ಲರಿಗೆ ಕಣ್ಣು
ಗೋವಾವೂ ಬಯಸುತಿದೆ ಇದರ ಮಣ್ಣು|
ಏನಿರಲಿ ಇದರ ಸಂಪತ್ತು ಮಾತ್ರ ಇಷ್ಟ
ಕೇಳುವವರು ಮಾತ್ರ ಇಲ್ಲ ನನ್ನೊಡಲ ಕಷ್ಟ||

ಸಂಪತ್ತಿಗಾಗಿ
ನನ್ನ ಉಕವು ಎಂದೂ ಕನ್ನಡದ ಸ್ವತ್ತು
ಗೋವಾ, ರಾಷ್ಟ್ರದಿಂದ ಬರುತ್ತಿದೆ ಇದಕೆ ಕುತ್ತು|
ಈ ನಾಡೇ ಒಂದು ಸುಂದರ ವನಸಿರಿ
ಸಂಪತ್ತುಗಳೇ ಇದರೊಡಲಿಗೆ ಮಾರಿ||

ನಿಸರ್ಗ ಗಮ್ಯ ಉತ್ತರಕನ್ನಡದ ಕುರಿತು ಬರೆದಷ್ಟೂ ಕಡಿಮೆ ಕಣ್ರೀ.. ಬರೆ ಬರೆದಂತೆಲ್ಲ ಭಾರವಾದ ನಿಟ್ಟುಸಿರು ಮನದಲ್ಲಿ ಮೂಡಿತ್ತದೆ. ಯೋಜನೆಗಳು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದೆ. ಆದರೆ ಇರುವ ಯೋಜನೆಗಳೆಲ್ಲ ಮಾರಕ.. ಹಾನಿಕಾರಕ.. ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಕೈಗಾ, ಮೀನುಗಾರರನ್ನು ಒಕ್ಕಲೆಬ್ಬಿಸಿದ ಸೀಬರ್ಡ್, ಅಡಿಕೆ ಬೆಳೆಗಾರರ ಒಡಲಿಗೆ ಕೊಳ್ಳಿ ಇಡಲು ತವಕಿಸುತ್ತಿರುವ ಅಣೇಕಟ್ಟುಗಳೆಂಬ ಗುಮ್ಮ... ಒಂದೇ ಎರಡೇ... ಬರೆದಷ್ಟೂ ಮುಗಿಯೋದಿಲ್ಲ... ಇಂತಹ ಹತಾಶೆಯ ಸಂದರ್ಭದಲ್ಲಿ ಹುಟ್ಟಿದ ಕೆಲವು ಸಾಲಿಗಳಿಲ್ಲಿವೆ.. ಓದಿ ನೋಡಿ..

Monday, December 3, 2012

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಇವನಿಗೆ ನೀವು ಸಹಾಯ ಮಾಡ್ತೀರಾ...??

ಆತನಿಗಿನ್ನೂ ಹದಿನಾಲ್ಕು ವರ್ಷ. ಶಾಲೆಗೆ ಹೋಗುತ್ತಾ, ಆಟವಾಡುತ್ತ ಬದುಕಬೇಕಿದ್ದ ವಯಸ್ಸು. ಆದರೆ ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್ ಭೂತ ಆತನ ಜೀವನವನ್ನೆ ತಿಂದು ಹಾಕುತ್ತಿದೆ.
    ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಧನಗನಹಳ್ಳಿಯ ನಿವಾಸಿಯಾದ ಹಜರತ್ ಅಲಿಯ ಪುತ್ರ ನೌಶಾದ್ ಅಲಿ ಎಂಬ ಬಾಲಕನಿಗೆ ಕ್ಯಾನ್ಸರ್ ಕಾಯಿಲೆ ಬಂದಿದ್ದು, ಜೀವನವನ್ನೇ ಮಂಕಾಗಿಸಿದೆ. ಕಾಯಿಲೆಯಿಂದಾಗಿ ಶಾಲೆಗೆ ಹೋಗಲಾಗದೇ, ಇತರ ಮಕ್ಕಳ ಜೊತೆ ಆಡಲಾಗದೇ ದಿನಗಳನ್ನು ಕಳೆಯುವಂತಹ ಪರಿಉಸ್ಥಿತಿ ಎದುರಾಗಿದೆ.
    ಕ್ಯಾನ್ಸರ್ ಪೀಡಿತ ಬಾಲಕ ಶಾಲೆಗೆ ಹೋಗುತ್ತಿದ್ದರೆ ಇಷ್ಟರ ವೇಳೆಗೆ 9ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ವಿಧಿಯಾಟದ ಪರಿಣಾಮ ಆತ ಶಾಲೆಗೆ ಹೋಗುವುದನ್ನು ಮೊಟಕುಗೊಳಿಸಿದೆ. ಮನೆಯಲ್ಲಿ ಕಡುಬಡತನದ ಕಾರಣ ತಂದೆ ಹಜರತ್ ಅಲಿ ಮಗನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಹಣ ಹೊಂದಿಕೆ ಮಾಡಲಾಗದೇ ಕಷ್ಟಪಡುತ್ತಿದ್ದಾರೆ.
    ಕಳೆದ ಒಂದು ವರ್ಷದ ಹಿಂದೆ ಆಟವಾಡುತ್ತಿದ್ದ ನೌಶಾದ್ ಇದ್ದಕ್ಕಿದ್ದಂತೆ ಜಾರಿಬಿದ್ದ. ಬಿದ್ದ ಪರಿಣಾಮ ಆತನ ಎದೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದು ಅಲ್ಲೊಂದು ದೊಡ್ಡ ಗಡ್ಡೆಯಾಯಿತು. ಅದಕ್ಕೆ ಪ್ರಾಥಮಿಕ ಚಿಕಿತ್ಸೆಯನ್ನೂ ಕೊಡಿಸಲಾಯಿತು. ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಗಡ್ಡೆ ಒಂದೆರಡು ದಿನಗಳಲ್ಲಿಯೇ ದೊಡ್ಡದಾಗಲು ಪ್ರಾರಂಭಿಸಿತು. ಜೊತೆಗೆ ಜ್ವರವೂ ಬಂದ ಪರಿಣಾಮ ನೌಶಾದ್ ಅಲಿಯನ್ನು ತಂದೆ ತಾಯಿಯರು ಶಿರಸಿಯ ಒಂದೆರಡು ಆಸ್ಪತ್ರೆಗೆ ಕರೆದುಕೊಂಡು ಹೋದರು.
    ಶಿರಸಿ ಪಟವರ್ಧನ್ ಆಸ್ಪತ್ರೆಯಲ್ಲಿ ಮೊದಲು ಪರೀಕ್ಷೆ ಮಾಡಲಾಯಿತು. ನಂತರ ಬಳಗಂಡಿ ವೈದ್ಯರನ್ನು ಸಂಪಕರ್ಿಸಿದರೂ ಪರಿಣಾಮ ಕಾಣಲಿಲ್ಲ. ಕೊನೆಗೆ ಡಾ. ದಿನೇಶ್ ಶೆಟ್ಟಿ ಅವರ ಬಳಿಯೂ ಚಿಕಿತ್ಸೆ ಕೊಡಿಸಲಾಯಿತು. ಈ ಆಸ್ಪತ್ರೆಗಳಲ್ಲಿ ಗಡ್ಡೆಯ ನೀರನ್ನು ತೆಗೆದು ಕಳಿಸಿದರಾದರೂ ಮತ್ತೆ ಕೆಲವು ದಿನಗಳಲ್ಲಿ ಗಡ್ಡೆ ಊದಿಕೊಂಡಿತು. ಇದರಿಂದ ಪರೀಕ್ಷೆ ಮಾಡಿದ ವೈದ್ಯರು ನೌಶಾದ್ನನ್ನು ಉನ್ನತ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಗೆ ಕರೆದೊಯ್ಯುವಂತೆ ತಿಳಿಸಿದರು. ಅಲ್ಲಿ ಪರೀಕ್ಷೆ ಮಾಡಿಸಿದಾಗ ಆಡುವ ಹುಡುಗ ನೌಶಾದ್ಗೆ ಕ್ಯಾನ್ಸರ್ ಮಾರಿ ಇರುವುದು ತಪಾಸಣೆಯಲ್ಲಿ ಪತ್ತೆಯಾಯಿತು.
   ಇಲ್ಲಿಯವರೆಗೂ ಎಲ್ಲ ಮಕ್ಕಳಂತೆ ಆಟವಾಡಿ, ಓದಿಕೊಂಡು ನಲಿಯುತ್ತಿದ್ದ ನೌಶಾದ್ ಬಾಳಿನಲ್ಲಿ ಕತ್ತಲೆಯ ಪುಟಗಳು ಆರಂಭವಾದವು. ಹುಬ್ಬಳ್ಳಿಯಲ್ಲಿ ನೂರಾರು ತರಹೇವಾರಿ ಪರೀಕ್ಷೆಗಳು, ಚಿಕಿತ್ಸೆಗಳನ್ನು ಮಾಡಲಾಯಿತು. ಅದೆಷ್ಟೋ ಬಗೆಯ ಇಂಜೆಕ್ಷನ್ಗಳನ್ನು ಕೊಡಲಾಯಿತು. ಕೊನೆಗೊಮ್ಮೆ ಹುಬ್ಬಳ್ಳಿಯ ವೈದ್ಯರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು. ಬಾಲಕ ನೌಶಾದ್ ಅಲಿ ಈಗ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
    ಇದುವರೆಗೂ ನೌಶಾದ್ನನ್ನು ಕನಿಷ್ಟ ಏಳು ಬಾರಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕರೆದಿಕೊಂಡು ಹೋಗಿ ಬರಲಾಗಿದೆ. ಏಳು ಸಾರಿಯೂ ಭಾರಿ ಬೆಲೆಯ ಇಂಜೆಕ್ಷನ್ಗಳನ್ನು ನೀಡಲಾಗಿದೆ. ಒಂದೊಂದು ಚುಚ್ಚುಮದ್ದಿಗೂ 3 ರಿಂದ 5 ಸಾವಿರ ರು. ಖಚರ್ಾಗುತ್ತದೆ. ಒಮ್ಮೆ ಬೆಂಗಳೂರಿಗೆ ಹೋಗಿಬಂದರೆ ಕನಿಷ್ಟ 15 ಸಾವಿರ ರು. ಖಚರ್ಾಗಿರುತ್ತದೆ. ಮಗನ ಚಿಕಿತ್ಸೆಯ ಸಲುವಾಗಿಯೇ ಮನೆಯಲ್ಲಿದ್ದ ಕುರಿಮಂದೆಯನ್ನು ಮಾರಾಟ ಮಾಡಲಾಗಿದೆ. ಜೊತೆಗೆ ಕುಟುಂಬವನ್ನು ಸಾಕಬೇಕಾಗಿದ್ದ ಬಾಡಿಗೆ ಆಟೋವನ್ನೂ ಇದೀಗ ಮಾರಾಟ ಮಾಡಿ ನೌಶಾದ್ಗೆ ಅವರ ತಂದೆ ಹಜರತ್ ಅಲಿ ಚಿಕಿತ್ಸೆ ಕೊಡಿಸಿದ್ದಾರೆ.

    ನೌಶಾದ್ಗೆ ಈಗಾಗಲೇ ಕಿಮೋಥೆರಪಿಯನ್ನು ಮಾಡಲಾಗಿದೆ. ಅಲ್ಲದೇ 5 ಸಾವಿರ ರು.ಗಳ 5 ಚುಚ್ಚುಮದ್ದನ್ನು ನೀಡಲಾಗಿದೆ. ನೌಶಾದ್ಗೆ ಈಗ ಆಪರೇಶನ್ ಮಾಡುವ ಅಗತ್ಯವಿದೆ. ಅದಕ್ಕೆ 1.5 ಲಕ್ಷ ರು. ಮೊತ್ತದ ಅವಶ್ಯಕತೆಯಿದೆ. ಅದನ್ನು ಕಟ್ಟಿದರೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಕಿದ್ವಾಯಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ನೌಶಾದ್ನ ತಂದೆ ಹಜರತ್ ಅಲಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
    ಹಜರತ್ ಅಲಿ ಮಗನ ಶಸ್ತ್ರ ಚಿಕಿತ್ಸೆಗಾಗಿ ಅಗತ್ಯವಿರುವ ಹಣಕ್ಕಾಗಿ ಹಲವು ಜನರ ಬಳಿ ಅಂಗಲಾಚಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳ ಮನೆಯ ಬಾಗಿಲನ್ನೂ ತಟ್ಟಿ ಬಂದಿದ್ದಾರೆ. ಆದರೆ ಯಾರಿಂದಲೂ ಸಹಾಯವಾಗಿಲ್ಲ. ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು 25 ಸಾವಿರ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಕೊಡಿಸಿದ್ದಾರೆ (ಈ ಹಣವನ್ನು ಕೊಡಿಸಲು ಮೂರು-ನಾಲ್ಕು ತಿಂಗಳು ಸತಾಯಿಸಲಾಗಿದೆ ಎಂಬುದು ಹಜರತ್ ಅಲಿಯ ಹೇಳಿಕೆ..!!). ಇನ್ನೂ ಕೆಲವು ಸಂಸ್ಥೆಗಳು ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದಾರಾದರೂ ಹಣವನ್ನು ನೀಡಲು ಮುಂದಾಗಿಲ್ಲ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಹಜರತ್ ಅಲಿ ಕುಟುಂಬ ನೌಶಾದ್ ಅಲಿಗೆ ಚಿಕಿತ್ಸೆ ನೀಡುವುದು ಹೇಗೆ ಎನ್ನುವ ಚಿಂತೆಯಲ್ಲಿ ತೊಡಗಿದೆ.
    ಕುಟುಂಬದ ಪಾಲಿಗೆ ರೇಷನ್ ಕಾರ್ಡಿದ್ದರೂ ನಾಟ್ ವ್ಯಾಲಿಡ್ ಎಂದು ತೋರಿಸುತ್ತಿರುವುದರಿಂದ ಬೇಳಗಾವಿಯಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಅಡಿಯಲ್ಲಿ ನಡೆಸಬೇಕಿದ್ದ ಚಿಕಿತ್ಸೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಶಿರಸಿಯ ತಹಶೀಲ್ದಾರರು ಈ ಕುರಿತು ರೇಶನ್ಕಾರ್ಡ್ ವ್ಯಾಲಿಡ್ ಆಗಿದೆ ಎಂದು ಬರವಣಿಗೆಯ ಮೂಲಕ ಬರೆದುಕೊಟ್ಟಿದ್ದರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹಣವಿಲ್ಲದೇ ಚಿಕಿತ್ಸೆ ಹೇಗೆ ಕೊಡಿಸುವುದೋ ತಿಳಿಯದಾಗಿದ್ದು, ಬಾಲಕನ ಬದುಕು ಬರ್ಭರವಾಗಿದೆ.
    ಸಮಾಜಮುಖಿ ವ್ಯಕ್ತಿಗಳು, ಸಹೃದಯಿಗಳು ನೌಶಾದ್ ಅಲಿಯ ಚಿಕಿತ್ಸೆಗಾಗಿ ಧನಸಹಾಯ ಮಾಡಬೇಕೆಂದು ತಂದೆ ಹಜರತ್ ಅಲಿ ಕೇಳಿಕೊಂಡಿದ್ದಾರೆ. ಬಾಲಕನಿಗೆ ಸಹಾಯ ಮಾಡಲು ಇಚ್ಛಿಸುವವರು ಇಂಡಿಯನ್ ಓವರ್ಸಿಸ್ ಬ್ಯಾಂಕ್ನ ದಾಸನಕೊಪ್ಪ ಶಾಖೆಯಲ್ಲಿ ತೆರೆಯಲಾಗಿರುವ ನೌಶಾದ್ ಅಲಿಯ ಸೇವಿಂಗ್ಸ್ ಖಾತೆ ನಂ. 029501000008062 ಈ ನಂಬರಿಗೆ ಹಣವನ್ನು ನೀಡಬಹುದಾಗಿದೆ. ಈ ಕುರಿತು ನೌಶಾದ್ ಅಲಿಯ ತಂದೆ ಹಜರತ್ ಅಲಿಯನ್ನು 9741579371 ಈ ದೂರವಾಣಿ ಸಂಖ್ಯೆಯ ಮೂಲಕ ಸಂಪಕರ್ಿಸಬಹುದಾಗಿದೆ.
ನೌಶಾದ್ ನ ಸ್ವಗತ...

(ನೌಶಾದ್ ಅಲಿಯನ್ನು ಮಾತನಾಡಿಸುವ ಸಲುವಾಗಿ ಅವನ ಮನೆಗೆ ಹೋದಾಗ ಆತ ಹೇಳಿದ್ದು..)



    ಒಂದು ವರ್ಷದ ಹಿಂದೆ ಶಾಲೆಗೆ ರಜಾ ಇದ್ದಾಗ ಕುರಿ ಕಾಯಲು ಹೋಗಿದ್ದೆ. ಆಗ ಜಾರಿ ಬಿದ್ದೆ. ಆಮೇಲೆ ಪರೀಕ್ಷೆ ಮಾಡಿದಾಗ ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯ್ತು. ಈಗ ಪ್ರತಿ ತಿಂಗಳು ಕಿಮೋಥೆರಪಿಗಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದೇನೆ. ಪ್ರತಿ ಸಾರಿ ಹೋದಾಗಲೂ 15 ದಿನ ಆಸ್ಪತ್ರೆಯಲ್ಲಿರಬೇಕು. ಚುಚ್ಚುಮದ್ದುಗಳನ್ನು ಕೊಡುತ್ತಾರೆ. ಅದನ್ನು ಕೊಟ್ಟಾಗ ಆಗುವ ಯಾತನೆಯನ್ನು ಹೇಳಲು ಆಗುವುದಿಲ್ಲ. ಆ ಚುಚ್ಚುಮದ್ದು ಕೊಟ್ಟ ನಂತರ 1 ತಿಂಗಳವರೆಗೆ ತೊಂದರೆಯಿಲ್ಲ. ಆಮೇಲೆ ಮತ್ತೆ ದೇಹದಲ್ಲಿ ತೊಂದರೆಗಳು ಕಾಣಿಸಲು ಶುರುವಾಗುತ್ತವೆ. ಮತ್ತೆ ಚಿಕಿತ್ಸೆಗೆ ಓಡಬೇಕು. ಒಂದು ಸಾರಿ ಆಸ್ಪತ್ರೆಗೆ ಹೋದಾಗಲೂ 10 ಸಾವಿರಕ್ಕಿಂತ ಹೆಚ್ಚು ಖಚರ್ಾಗುತ್ತದೆ ಎಂದು ನಮ್ಮ ಅಬ್ಬಾ ಹೇಳುತ್ತಾರೆ. ನನಗಾಗಿ ನನ್ನ ಅಬ್ಬಾ ಕುರಿಮಂದೆಯನ್ನು ಮಾರಿದರು. ನಮಗೆಲ್ಲ ಜೀವನಾಧಾರವಾಗಿದ್ದ ಬಾಡಿಗೆ ರಿಕ್ಷಾವನ್ನೂ ಮಾರಿದ್ದಾರೆ. ಆದರೆ ನನ್ನ ಚಿಕಿತ್ಸೆಗೆ ಇನ್ನೂ ಬಹಳ ಹಣಬೇಕಾಗುತ್ತದಂತೆ. ಯಾರಾದ್ರೂ ಸಹಾಯ ಮಾಡಬಹುದಲ್ವಾ? ಆಪರೇಶನ್ ಆಗಿ ಮತ್ತೆ ಎಲ್ಲ ಮಕ್ಕಳ ಜೊತೆ ಓಡಿ, ಆಡಿ ಖುಷಿಯಿಂದ ಇರಬಹುದಲ್ವಾ. ಯಾರಾದ್ರೂ ನನಗೆ ಸಹಾಯ ಮಾಡ್ತಾರಲ್ವಾ? 
--
ಈ ಬರಹದಲ್ಲಿ  ನೌಶಾದ್ ಅಲಿಯ ಅಕೌಂಟ್  ನಂಬರ್ ನೀಡಿದ್ದೇನೆ.. ಯಾರಾದ್ರೂ ಸಹಾಯ ಮಾಡುವ ಮನಸ್ಸು ಉಳ್ಳವರು ಮಾಡಬಹುದು... ಹಜರತ್ ಅಲಿಯ ದೂರವಾಣಿ ಸಂಖ್ಯೆಯೂ ಇದೆ ಸಂಪರ್ಕ ಮಾಡಬಹುದು...

Sunday, December 2, 2012

ಉಕರೋಧನ

ಉಕರೋಧನ


ಉತ್ತರಕನ್ನಡದ ಕುರಿತು ಬರೆದ ಒಂದಷ್ಟು ಚೌಪದಿಗಳು
ಯೋಜನೆಗಳ ಭಾರದಲ್ಲಿ ನಲುಗುತ್ತಿರುವ ಉತ್ತರಕನ್ನಡದ ಕುರಿತು ನಾಲ್ಕು ಸಾಲುಗಳ ಸಾಂತ್ವನ... ಚೌಪದಿಗಳ ಬ್ರಹ್ಮ ದಿನಕರ ದೇಸಾಯಿ ನನ್ನ ಈ ಚುಟುಕುಗಳಿಗೆ ಸ್ಫೂರ್ತಿಯ ಸೆಲೆ. ಅವರಿಗೆ ಧನ್ಯವಾದ.

ಅಳಲು

ಏರುತಿದೆ ತದಡಿಯ ಬಿಸಿ
ಜೀವ ಜನತೆ ಕಸಿಬಿಸಿ|
ಉತ್ತರಕನ್ನಡ ಹೋಗುತಿದೆ ಸೂರೆ
ಉಳಿಸುವವರಿಲ್ಲವಲ್ಲೇ ನೀರೆ..||

ಶಿಶುವಿನ ಗೋಳು

ನನ್ನ ಉತ್ತರಕನ್ನಡ ಪ್ರೀತಿಯ ಶಿಶು
ಹಲವು ಯೋಜನೆಗಳಿಗದೇ ಬಲಿಪಶು|
ಎಲ್ಲ ಜನರಿಗೆ ಇದು ನೀಡಿದರೂ ಕೂಳು
ಕೇಳುವವರಿಲ್ಲವಾಯ್ತಲ್ಲೇ ಇದರ ಗೋಳು..||

ಕವನದ ವ್ಯಥೆ

ನನ್ನ ಉ.ಕ ಒಂದು ಸುಂದರ ಕವನ
ಬಹು ಯೋಜನೆಗಳೇ ಇದರ ಚರಣ|
ದುಃಖ ಕಥೆ ಹೇಳುತಿದೆ ಪ್ರತಿಯೊಂದೂ ಪ್ಯಾರಾ
ಮುಗಿದುಹೋಗುತ್ತಿದೆ ಇದರ ಸಂಪತ್ತು ಪೂರಾ..|||

ಸೀರೆಯಂತೆ ಬದುಕು

ನನ್ನ ಉ.ಕವೆ ಒಂದು ರೇಶಿಮೆಯ ಸೀರೆ
ನಾಜೂಕು, ಜೋಪಾನ. ಇರಬೇಕು ನೀರೆ.|
ಛಂದವಿದ್ದರೆ ಅದು ಉಳಿಸುವುದು ಮಾನ
ಹರಿದು ಹೋದರೆ ನಿನ್ನ ಬದುಕೇ ಊನ||

ಮುತ್ತು ಕಾಶ್ಮೀರ

ನನ್ನ ಉಕವೆ ಒಂದು ಕಡಲ ಮುತ್ತು
ಬೆಸ್ತನ ತೀಟೆಯ ಬೇಟೆಗೆ ಬಲಿಯಾಗಿ ಬಿತ್ತು.|
ಈ ನಾಡೇ ಒಂದು ಮಿನಿ ಕಾಶ್ಮೀರ
ಪ್ರತಿಯೊಂದು ಭಾಗ ಎಂದೆಂದೂ ಅಸ್ಥಿರ|||

ಕಣ್ಣು-ಬೇನೆ

ನನ್ನ ಉ.ಕವೆ ಒಂದು ತೀಕ್ಷ್ಣ ಕಣ್ಣು
ನೂರೆಂಟು ಯೋಜನೆಗಳೇ ಅದರ ಹುಣ್ಣು|
ಜೊತೆಗೆ ಕಾಡುತಿವೆ ಹಲವೆಂಟು ಬೇನೆ
ಏನು ಮಾಡುವುದು ಇದಕೆ ಇಲ್ಲವಲ್ಲ ಕೊನೆ||


ಕಾಲೇಜು ಓದುತ್ತಿದ್ದ ದಿನಗಳಲ್ಲಿ ಬರೆದಿದ್ದ ಈ ಚುಟುಕಗಳನ್ನು ಶಿರಸಿಯ ಪತ್ರಕರ್ತ, ಕದಂಬವಾಣಿ, ನಾಗರೀಕ, ಕರ್ಮವೀರ, ಉತ್ತರಕನ್ನಡ ಜಿಲ್ಲಾ ವಾರ್ತಾ ಸಂಚಯ ಈ ಮುಂತಾದ ಅನೇಕ ಪತ್ರಿಕೆಗಳು ಪ್ರಕಟಿಸಿದ್ದವು. ಅದಕ್ಕೆ ಕಾರಣೀಭೂತರಾದವರಿಗೆ ಧನ್ಯವಾದಗಳು-ವಿನಯ್ ದಂಟಕಲ್