Tuesday, March 7, 2017

ಹುಲಿರಾಯ ಬಂದು ಹಾಯ್ ಅಂದಿದ್ದ...! ಜೊತೆಯಲ್ಲಿ ಮರಿಯನ್ನೂ ಕರೆತಂದಿದ್ದ!!


            ಇದು ನಿನ್ನೆ ಬೆಳಗನ ಜಾವ ನಡೆದ ಘಟನೆ. ಇನ್ನೂ ನನ್ನ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ.
 ನಿನ್ನೆ ರಾತ್ರಿ ನಾನು ಮಲಗಲು ನಡುರಾತ್ರಿ 2 ಗಂಟೆ ಆಗಿತ್ತು. ಮಲಗಿ ಅರೆಘಳಿಗೆ ಆಗಿರಲಿಲ್ಲ. ಅಪ್ಪ `ತಮಾ ಹುಲಿ ಕೂಗ್ತಾ ಇದ್ದು ಕೇಳು..' ಎಂದ.. ನಾನು ಏಳಲಿಲ್ಲ. ನಮ್ಮೂರಿನಲ್ಲಿ ಆಗೊಮ್ಮೆ ಈಗೊಮ್ಮೆ ಹುಲಿ ಕೂಗುವುದು ಕೇಳಿದ್ದ ನನಗೆ ಇದು ಸಹಜ ಅನ್ನಿಸಿ ಕಡ್ಡ ಹರಿದು ಮಲಗಿದ್ದೆ. ಅಮ್ಮ ಎದ್ದಿದ್ದಳಿರಬೇಕು. `ಮೇಲಿನ ಮನೆ ಹತ್ರ ಕಾನಿನಲ್ಲಿ ಎಲ್ಲೋ ಹುಲಿ ಕೂಗ್ತಾ ಇದ್ದು..' ಎಂದು ಹೇಳಿದ ಅಪ್ಪ ಸುಮ್ಮನಾಗಿದ್ದ. ಅದಾಗಿ ಮತ್ತೊಂದು ಹತ್ತು ಹದಿನೈದು ನಿಮಿಷವಾಗಿರಲಿಲ್ಲ. ಮನೆಯ ಪಕ್ಕದಲ್ಲೇ ಒಮ್ಮೆ ಗಂವ್... ಎಂದಿತು ಸದ್ದು. ನಮ್ಮ ಮನೆಯೇ ಅದುರಿತೇನೋ ಎಂಬಂತೆ ಸದ್ದು. ಅಜಮಾಸು 10 5ರಿಂದ 10 ಸೆಕೆಂಡುಗಳ ಕಾಲ. ಮನೆಯೊಳಕ್ಕೆ ಮಲಗಿದ್ದ ನಾವು ಒಮ್ಮೆ ಬೆಚ್ಚಿ ಬಿದ್ದಿದ್ದೆವು. ಗಂವ್.. ಎನ್ನುವ ಸದ್ದು ಅಘನಾಶಿನಿ ಕಣಿವೆಯಲ್ಲಿ ಮತ್ತೆ ಮಾರ್ದನಿಸಿದಂತಾಯಿತು.
              `ತಮಾ... ಹುಲಿ ಬಂಜೋ... ಇಲ್ಲೇ ಎಲ್ಲೋ ಇದ್ದು..' ಅಮ್ಮ ಎದ್ದು ಲೈಟ್ ಹಾಕಿ ಕೂಗಿದಳು. ಅಪ್ಪ `ಯೇಹೇ.. ಅದು ಹುಲಿಯಲ್ಲ.. ಹಂದಿ..' ಎಂದ. `ಇಲ್ಯಪಾ ಇಲ್ಲೆ.. ಇದು ಹುಲಿನೇಯಾ..' ಎಂದ ಅಮ್ಮ ಸೀದಾ ಅಡುಗೆ ಮನೆಗೆ ಹೋಗಿ ಲೈಟ್ ಹಾಕಿದಳು. ಅಲ್ಲಿಂದ ಸೀದಾ ಅಪ್ಪನನ್ನು ಕರೆದು `ಬನ್ನಿ... ನಂಗೆ ಒಬ್ಬನೇ ಹೋಪಲೆ ಹೆದರ್ಕೆ ಆಗ್ತಾ ಇದ್ದು.. ಕೊಟ್ಟಿಗೆಗೆ ಹೋಗೋಣ..' ಎಂದಿದ್ದು ಕೇಳಿಸಿತು. ಅಪ್ಪ ಎದ್ದು ಬಂದ. ಅಮ್ಮ ಕೊಟ್ಟಿಗೆ ಲೈಟ್ ಹಾಕಿದಳು.
              ಕೊಟ್ಟಿಗೆಯಲ್ಲಿದ್ದ ಒಂದೆ ಒಂದು ಹಸು. ಪ್ರೀತಿಯ ಶ್ರೀದೇವಿ ಆಗಲೇ ಬೆಚ್ಚಿ ಬೆದರಿ ಮೈ ರೋಮಗಳನ್ನೆಲ್ಲ ನೆಟ್ಟಗೆ ಮಾಡಿಕೊಂಡು ಕಿವಿಚಟ್ಟೆಯನ್ನು ಸುತ್ತಲೂ ತಿರುಗಿಸುತ್ತ, ಮನೆಯ ಪಕ್ಕದಲ್ಲಿನ ಕಾಡನ್ನೂ, ಮನೆಯ ಕೆಳಭಾಗದಲ್ಲಿದ್ದ ರಸ್ತೆಯನ್ನೂ ನೋಡುತ್ತ ನಿಂತಿದ್ದಳು. ಹುಲಿ ಬಂದಿದ್ದು ಖರೆಯಾಗಿತ್ತು. ಆದರೆ ಎಲ್ಲಿ ಬಂದಿದೆ ಎಂಬುದು ಗೊತ್ತಾಗಲಿಲ್ಲ. ಮನೆಯ ಅಂಗಳದಲ್ಲೆಲ್ಲೋ ಇದೆ ಎನ್ನಿಸಿತ್ತು. ಅಪ್ಪ ಹುಡುಕಲು ಹೋಗುತ್ತಿದ್ದನೇನೋ, ಅಮ್ಮ ಬೇಡವೇ ಬೇಡ ಎಂದು ಗದರಿಸಿ ಸುಮ್ಮನಾಗಿಸಿದ್ದಳು.
               ಸೀದಾ ದೇವರ ಒಳಕ್ಕೆ ಬಂದಿದ್ದ ಅಮ್ಮ ಜಂವಟೆಯನ್ನು ತೆಗೆದುಕೊಂಡು ಬಡಿಯಲು ಹೊರಟಿದ್ದಳು. ನಾನು ಸುಮ್ಮನಿರು ಮಾರಾಯ್ತಿ.. ಜಂವಟೆ ಎಲ್ಲ ಬಡಿಯೋದು ಬೇಡ ಎಂದೆ. ಆಕೆ ಸುಮ್ಮನಾಗಿದ್ದಳು. ದೊಡ್ಡದಾಗಿ ಗದ್ದಲ ಮಾಡಿ ಹುಲಿಯನ್ನು ಓಡಿಸುವುದು ಅಮ್ಮನ ಉದ್ದೇಶವಾಗಿತ್ತು. ಕೊಟ್ಟಿಗೆಯಲ್ಲಿ ಒಂದೇ ಒಂದು ದನ ಇದೆ. ಅದಕ್ಕೆ ಏನಾದರೂ ತೊಂದರೆ ಮಾಡಿದರೆ ಎನ್ನುವ ಭಯ ಅಮ್ಮನನ್ನು ಕಾಡುತ್ತಿತ್ತು. ಅಲ್ಲಿಂದ ಶುರುವಾಯಿತು ನೋಡಿ ಅಮ್ಮನಿಗೆ ಸಂಕಟ. ಮೂನರ್ಾಲ್ಕು ಸಾರಿ ಮನೆಯನ್ನೆಲ್ಲ ಓಡಾಡಿದಳು. ಹುಲಿ ಬಂದಿದೆ ಎನ್ನುವುದು ಖಚಿತವಾಗಿತ್ತು. ಆದರೆ ಹುಲಿ ಹುಂಚುತ್ತ ಕುಳಿತರೆ ಕಷ್ಟ ಎನ್ನುವುದು ಅಮ್ಮನ ಭಾವನೆ.
ಅಮ್ಮನಿಗೆ ದನವನ್ನು ಉಳಿಸಿಕೊಳ್ಳಬೇಕು ಎನ್ನುವ ಆಲೋಚನೆ ತಲೆಯಲ್ಲಿ. ಸೀದಾ ಹೋದವಳೇ ಕೊಟ್ಟಿಗೆಯಲ್ಲಿ ಕಾಯಿಸಿಪ್ಪೆ, ಅದೂ ಇದೂ ತಂದು ದೊಡ್ಡಾಗಿ ಬೆಂಕಿಯನ್ನು ಹಾಕಿದಳು. ಅಪ್ಪನ ಬಳಿ ಇಲ್ಲೇ ಇರಿ ಎಂದು ಹೇಳಿ ಬೆಳಕು ಮೂಡುವವರೆಗೂ ಕೊಟ್ಟಿಗೆಯಲ್ಲಿ ಕಾಯುತ್ತಲೇ ಇದ್ದರು. ಅಷ್ಟರ ನಡುವೆ ತಿಂಡಿಯನ್ನು ಮಾಡುವ ಸಲುವಾಗಿ ಅಮ್ಮ ಮಿಕ್ಸರ್ ಸದ್ದು ಮಾಡಿದ್ದಳು. ಆಗ ಇನ್ನೊಮ್ಮೆ ಕೂಗಿತ್ತು ನೋಡಿ ಹುಲಿ. ಆದರೆ ಮೊದಲಿನಷ್ಟು ದೊಡ್ಡದಾಗಿರಲಿಲ್ಲ. ಸಣ್ಣ ಸ್ವರ ಇತ್ತು. ಹುಲಿ ಎಲ್ಲೋ ದೂರ ಹೋಯಿತು ಎಂದುಕೊಂಡೆವು. ಬೆಳಕಾದ ಮೇಲೆಯೇ ಮನೆಯವರಿಗೆಲ್ಲ ಸಮಾಧಾನ.
                 ದೂರದಲ್ಲೆಲ್ಲೋ ಮಂಗನ ಗ್ವಾಲೆ ದೊಡ್ಡದಾಗಿ ಕಿರುಚಾಡಿದ್ದು ಕೇಳಿಸಿತು. ನಾನು, ಅಮ್ಮ, ಅಪ್ಪ ಎಲ್ಲ ಕಿವಿಗೊಟ್ಟು ಆಲಿಸಿದೆವು. ನನ್ನ ಮನೆಯ ಜಮೀನಿನ ಪಕ್ಕದಲ್ಲಿಯೇ ಹಾದು ಹೋಗಿದ್ದ ಅಘನಾಶಿನಿ ನದಿಯ ಇನ್ನೊಂದು ದಡಡದಲ್ಲಿ ಮಂಗನ ಗ್ವಾಲೆ ದೊಡ್ಡದಾಗಿ ಕೂಗಿದ ಸದ್ದು ಕೇಳಿಸಿತ್ತು. `ಹುಲಿ ಹೊಳೆ ದಾಟಿ ಹೋಗಿದೆ..' ಎಂದ ಅಪ್ಪ. ಹುಲಿಯನ್ನು ಕಂಡರೆ ಮಂಗಗಳು ವಿಚಿತ್ರ ಸ್ವರದಲ್ಲಿ ಕೂಗುತ್ತವಂತೆ. ಹಾಗೆಯೇ ಕೂಗಿದ್ದವು ಮಂಗಗಳು. ಅರ್ಧಗಂಟೆಯ ನಂತರ ಮಂಗಗಳ ಕಮಾಂಡರ್ ಇರಬೇಕು. ಅದು ದೊಡ್ಡದಾಗಿ ಸಿಗ್ನಲ್ ಕೊಟ್ಟಿತು. ಅಷ್ಟಾದ ಮೇಲೆ ಮಂಗಗಳು ಕೂಗುವುದು ಬಂದಾಯಿತು. ಬಹುಶಃ ಹುಲಿ ಅವರ ಕಣ್ಣಂಚಿನಿಂದ ದೂರ ಹೋಗಿರಬೇಕು. ಎಲ್ಲರೂ ಸೇಫ್.. ಎಂದು ಮಂಗನ ಗ್ವಾಲೆಯ ನಾಯಕ ಹೇಳಿರಬೇಕು. ಎಲ್ಲ ಚುಪ್ ಚಾಪ್..
                ಆ ಸಮಯದಲ್ಲಿಯೇ ದೂರದಲ್ಲೆಲ್ಲೋ ನಾಯಿ ಬೊಗಳಿದ್ದೂ ಕೂಡ ನಮ್ಮ ಕಿವಿಗೆ ಬಿದ್ದಿತ್ತು. ಒಂದೋ ಎರಡೋ ನಾಯಿಗಳು ತಾರಕ ಸ್ವರದಲ್ಲಿ ಅರಚುತ್ತಿದ್ದವು. ಹುಲಿ ಅಲ್ಲಿಗೆ ಹೋಗಿರುವುದು ಪಕ್ಕಾ ಆಗಿದ್ದು. ಅಷ್ಟರಲ್ಲಿ ಬೆಳಕು ಮೂಡಿತ್ತಲ್ಲ..., ಅಮ್ಮ ಹುಲಿಯ ಜಾಡನ್ನು ಹುಡುಕಲು ಆರಂಬಿಸಿಬಿಟ್ಟಿದ್ದಳು. ಅಂಗಳದಲ್ಲೆಲ್ಲೋ ಹುಡುಕಿದ್ದವಳಿಗೆ ಹುಲಿಯ ಜಾಡು ಸಿಕ್ಕಿರಲಿಲ್ಲ. ಕೊನೆಗೆ ನನ್ನ ಮನೆಗೆ ಬರುವ ರಸ್ತೆಯಲ್ಲಿ ಹುಲಿಯ ಹೆಜ್ಜೆಗಳು ಕಾಣಿಸಿದವು. ಅಮ್ಮ ನನ್ನನ್ನು ಕರೆದು ತೋರಿಸಿದಳು. ನಾನು ಕೂಡಲೇ ಒಂದಷ್ಟು ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆ. ಹುಲಿ ಯಾವ ದಿಕ್ಕಿನಲ್ಲಿ ಹೋಗಿರಬೇಕು ಎಂದುಕೊಂಡೆವು. `ತಮಾ.. ನೋಡ್ಕ್ಯಂಡು ಬಪ್ಪನ ನೆಡಿ..' ಎಂದಳು. ನಾನು ಹೊರಟೆ. ಮೊದ ಮೊದಲಿಗೆ ನಾಲ್ಕು ಹೆಜ್ಜೆಗಳು ಕಾಣಿಸಿದವು. ನಂತರ ಎಂಟು ಹೆಜ್ಜೆಗಳು ಕಣ್ಣಿಗೆ ಬಿದ್ದವು. ಎರಡು ಜೊತೆ ಹೆಜ್ಜೆಗಳು ಅಜಜಮಾಸು ನಾಲ್ಕಿಂಚಿಗಿಂತ ದೊಡ್ಡದು. ಮತ್ತೆರಡು ಜೊತೆ ಹೆಜ್ಜೆಗಳು 2-3 ಇಂಚು ದೊಡ್ಡದಾಗಿತ್ತು. ಎರಡು ಹುಲಿಗಳಿದ್ದು ಸಾಬೀತಾಗಿತ್ತು. ಒಂದು ದೊಡ್ಡದು. ಇನ್ನೊಂದು ಮರಿ. ದೊಡ್ಡ ಹೆಜ್ಜೆಯ ಗಾತ್ರ ನೋಡಿದರೆ ದೊಡ್ಡ ಹುಲಿ ಏನಿಲ್ಲ ಎಂದರೂ ಆರು ಅಡಿ ಇರಲೇ ಬೇಕು ಎಂದು ತಕರ್ಿಸಿದೆ. ಧೂಳಿನ ರಸ್ತೆಯಲ್ಲಿ ಆಳವಾದ ಅಚ್ಚಾಗಿತ್ತು. ಹೀಗಾಗಿ ತೂಕವೂ ಸಾಕಷ್ಟಿರಬೇಕು ಎಂದುಕೊಂಡೆ.


               ನನ್ನ ಮನೆಯಿಂದ 100 ಮೀಟರ್ ದೂರ ಹೋಗುವ ವೇಳೆಗೆ ಇದ್ದಕ್ಕಿದ್ದಂತೆ ಹಂದಿಯ ಹೆಜ್ಜೆಗಳು ಕಾಣಲು ಸಿಕ್ಕಿತು. ಹುಲಿಯ ಹೆಜ್ಜೆಗಳ ನಡುವೆ ಹಂದಿಯ ಹೆಜ್ಜೆಗಳು. ಓಹೋ ಹಂದಿ ಗ್ವಾಲೆಗೂ-ಹುಲಿಗೂ ಮುಖಾಮುಖಿಯಾಗಿದೆ ಎಂದುಕೊಂಡೆ. ಅಮ್ಮ `ಹಂದಿ ಗ್ವಾಲೆಯನ್ನು ಹುಲಿ ಬೆನ್ನಟ್ಟಿರಬೇಕು..' ಎಂದಳು. ನನಗೆ ಇದು ಹೌದೆನ್ನಿಸಿತು. ಸುಮಾರು ಅರ್ಧ ಕಿಲೋಮೀಟರ್ ವರೆಗೂ ಈ ಹೆಜ್ಜೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ನಂತರ ತೋಟದ ಕಡೆಗೆ ಹೊರಳಿದ್ದವು. ಅಲ್ಲಿಯ ವರೆಗೆ ಹೆಜ್ಜೆ ಜಾಡು ಹಿಡಿದು ಹೊರಟಿದ್ದ ನಾವು ಹುಲಿ ಇಲ್ಲೆ ಎಲ್ಲೋ ಹೊರಳಿ ನದಿ ದಾಟಿದೆ ಎಂದುಕೊಂಡು ವಾಪಾಸಾದೆವು. ಮನೆಗೆ ಬಂದು ಅಪ್ಪನ ಬಳಿ ವಿಷಯ ಹೇಳಿದೆ. `ಹಂದಿ ಗ್ವಾಲೆ ಇದ್ದರೆ ಹುಲಿ ಯಾವತ್ತಿಗೂ ಅದನ್ನು ಬೆನ್ನಟ್ಟುವುದಿಲ್ಲ. ಒಂಟಿ ಹಂದಿ ಇದ್ದರೆ ಮಾತ್ರ ಅದನ್ನು ಬೆನ್ನಟ್ಟುತ್ತದೆ..' ಎಂದ. ನನಗೂ ಹಂದಿಯ ಹೆಜ್ಜೆಗಳು ಎರಡು ಜೊತೆ ಮಾತ್ರ ಇದ್ದಂತೆ ಕಾಣಿಸಿ ಒಂಟೀ ಹಂದಿಯನ್ನು ಹುಲಿ ಬೆನ್ನಟ್ಟಿದೆ ಎಂಬ ನಿರ್ಧಾರಕ್ಕೆ ಬಂದೆ.
               ಮನೆಯಲ್ಲಿ ನಂತರ ಹುಲಿಯದ್ದೇ ಮಾತು. ನಮ್ಮೂರಿನವರಿಗೆಲ್ಲ ಹುಲಿ ಕೂಗಿದ ಸದ್ದು ಕೇಳಿಸಿತ್ತಂತೆ. ದಂಟಕಲ್ ಸುಬ್ಬಣ್ಣನ ಮನೆಯ ಹತ್ತಿರ ಹುಲಿ ಬಂದಿದೆ. ಬಹುಶಃ ಕೊಟ್ಟಿಗೆಗೆ ಬಂದು ದನಕ್ಕೆ ತೊಂದರೆ ಕೊಟ್ಟಿರಬೇಕು ಎಂದು ನಮ್ಮೂರಿನವರು ಮಾತಾಡಿಕೊಂಡಿದ್ದರಂತೆ. ಆದರೆ ಮನೆಯ ಹತ್ತಿರ ಬಂದಿದ್ದ ಹುಲಿ ಕೂಗಿದ್ದು ಬಿಟ್ಟರೆ ಬೇರೆ ಯಾವುದೇ ಭಾನಗಡಿ ಮಾಡಿರಲಿಲ್ಲ. ನಮ್ಮ ಮನೆಯಲ್ಲಿ ಎಲ್ಲ ನಿಟ್ಟುಸಿರಾಗಿದ್ದರು. ಸಂಜೆ ಅಘನಾಶೀನಿಯನ್ನು ದಾಟಿ ಪಕ್ಕದ ಊರಿಗೆ ಕಾರ್ಯ ನಿಮಿತ್ತ ಹೋಗಿದ್ದೆ. ಅಲ್ಲೂ ಕೂಡ ಹುಲಿ ಬಂದಿರುವ ವಿಷಯ ಮಾತಾಡುತ್ತಿದ್ದರು.
               ಪ್ರತಿ ವರ್ಷ ನಮ್ಮೂರಿನಲ್ಲಿ ಒಮ್ಮೆ ಅಥವಾ ಎರಡು ಮೂರು ಸಾರಿ ಹುಲಿ ಕಾಣಿಸಿಕೊಳ್ಳುತ್ತದೆ. ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ಒಂದೆರಡು ಸಾರಿ ಹುಲಿರಾಯನ ದರ್ಶನ ಮಾಡಿದ್ದೆ. ಆದರೆ ಹುಲಿರಾಯ ಇಷ್ಟು ಹತ್ತಿರದಲ್ಲಿ ಗರ್ಜನೆ ಮಾಡಿದ್ದು ಕೇಳಿರಲಿಲ್ಲ. ನಮ್ಮೂರ ಫಾಸಲೆಯಲ್ಲಿ ಚಿಟ್ಟು ಚಿರತೆ, ಕಪ್ಪು ಚಿರತೆಗಳೆಲ್ಲ ಆಗೀಗ ಬಂದು ಹಾಯ್ ಎನ್ನುತ್ತವೆ. ಗಮಿಯಗಳಂತೂ ನಮ್ಮೂರಿನ ಗದ್ದೆಯನ್ನು ತಮ್ಮ ಮೈದಾನ ಮಾಡಿಕೊಂಡಿವೆ. ಹಂದಿಗಳಿಗಂತೂ ನಮ್ಮೂರಿನ ಬಾಳೆಯ ಗಡ್ಡೆಗಳು ಸಿಕ್ಕಿಲ್ಲ ಎಂದರೆ ಅದೇನನ್ನೋ ಕಳೆದುಕೊಂಡೆವು ಎಂಬಂತೆ ವರ್ತಿಸುತ್ತವೆ.
ಇಂತಹ ವನ್ಯ ಪ್ರಾಣಿಗಳಿರುವಲ್ಲಿ ಬೇಟೆಗಾರರೂ ಇದ್ದಾರೆ. ಕಳೆದ ವರ್ಷ ಹೇರೂರಿನ ಕೆಲವರು ಕಾಡೆಮ್ಮೆ ಬೇಟೆ ಮಾಡಿದ್ದರು. ಅದು ಸಾಕಷ್ಟು ಸುದ್ದಿಯೂ ಆಗಿತ್ತು. ಈ ವರ್ಷದ ಚಳಿಗಾಲದಲ್ಲಿ ಹುಲಿರಾಯ ಬಂದಿರಲಿಲ್ಲ. ಹುಲಿರಾಯನ ಹಾಯಿಸಾಲಿನಲ್ಲಿ ನಮ್ಮೂರು ಬಿಟ್ಟಿತೇನೋ ಎಂದುಕೊಂಡಿದ್ದೆ. ಆದರೆ ಹುಲಿರಾಯ ನಮ್ಮ ಮನೆಯ ಅಂಗಳಕ್ಕೆ ಬಂದು ಹಾಯ್ ಹೇಳಿದ್ದ. ಅಷ್ಟೇ ಅಲ್ಲ ತನ್ನ ಮುಂದಿನ ಪೀಳಿಗೆಯನ್ನೂ ಕರೆತಂದು ನನ್ನ ಮನೆಯನ್ನು ತೋರಿಸಿದ್ದ.
                 ಹಿಂದೆ ನಮ್ಮೂರಿನಲ್ಲಿ ಸಿಕ್ಕಾಪಟ್ಟೆ ಹುಲಿಗಳಿದ್ದವಂತೆ. ನಮ್ಮೂರಿನ ಹಿರಿಯರಾಗಿದ್ದ ದಿ. ಗಣಪತಿ ಗಣೇಶ ಹೆಗಡೆಯವರು ತಮ್ಮ ಯವ್ವನದ ದಿನಗಳಲ್ಲಿ ಮೂರು ಹುಲಿಗಳನ್ನು ಗುಂಡಿಕ್ಕಿ ಕೊಂದಿದ್ದರಂತೆ. ನಂತರದ ದಿನಗಳಲ್ಲಿ ಹುಲಿ ಸಂತತಿಯೂ ಕಡಿಮೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ಹುಲಿಗಳು ಬಂದಿದ್ದರೂ ದಾಂಡೇಲಿಯ ಕಾಡಿನಿಂದ ಬಂದಿರಬೇಕು ಎಂದಕೊಂಡಿದ್ದೇವೆ. ಈ ವರ್ಷ ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಒಂದೆರಡು ಕಡೆಗಳಲಿ ಬೆಂಕಿ ಬಿದ್ದಿದೆ. ನೀರು ಬತ್ತಿದೆ. ಆಹಾರವೂ ಕಡಿಮೆಯಾಗಿರಬೇಕು. ಹೀಗಾಗಿ ಹುಲಿ ತನ್ನ ಮರಿಯ ಜತೆಗೂಡಿ ಆಹಾರ ಹುಡುಕಿ ಬಂದಿರಬೇಕು. ಹೀಗೆ ಬಂದ ಹುಲಿ ನಮ್ಮೂರ ಕಡೆಗೆ ಹೆಜ್ಜೆ ಹಾಕಿರಬೇಕು. ಹುಲಿ ಬಂದಿದ್ದರಿಂದ ನಮ್ಮ ಮನೆಯಲ್ಲಿ ಭಯವಾಗಿದ್ದರೂ, ನನಗೆ ಖುಷಿಯಾಗಿದೆ. ನಶಸುತ್ತಿರುವ ಹುಲಿ ನನ್ನ ಮನೆಯಂಗಳಕ್ಕೆ ಬಂದು ಗರ್ಜನೆ ಮಾಡಿದ್ದು, ನಾನಿದ್ದಿನಿ ಕಣೋ.. ಎಂದಂತೆ ಭಾಸವಾಗಿದ್ದು ನನಗೆ ಖುಷಿಯನ್ನು ಕೊಟ್ಟಿದೆ. ಮುಂದೆ ಹುಲಿ ಬಂದರೆ ಹೆಂಗಾದರೂ ಮಾಡಿ ಪೋಟೋ ಹೊಡ್ಕಳ್ಳಬೇಕು ಎಂಬ ಭಾವನೆ ಬಲವಾಗುತ್ತಿದೆ.




ಈ ಚಿತ್ರದಲ್ಲಿ ಕಾಡುಹಂದಿಯ ಹಾಗೂ ಹುಲಿಯ ಹೆಜ್ಜೆಗಳಿವೆ.
ಇದರಲ್ಲಿ ಹುಲಿಯ ಹೆಜ್ಜೆಯ ಚಿತ್ರಗಳನ್ನು ನನ್ನ ಮನೆಯ ಅಂಗಳದಲ್ಲಿ ತೆಗೆದಿದ್ದು.
ಕಾಡುಹಂದಿಯ ಹೆಜ್ಜೆಗಳ ಚಿತ್ರಗಳನ್ನು ಮನೆಯಿಂದ 200 ಮೀಟರ್ ದೂರದಲ್ಲಿ ತೆಗೆದಿದ್ದು.
 

No comments:

Post a Comment