Friday, March 10, 2017

ಯಲ್ಲಾಪುರದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಅಮ್ಮಕ್ಕ

98ರ ಹರೆಯದ ಅಮ್ಮಕ್ಕಜ್ಜಿ ಬಿಚ್ಚಿಟ್ಟ ಸ್ವಾತಂತ್ರ್ಯ ಹೋರಾಟದ ವಿವರಗಳು

*****
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಕೋಟ್ಯಂತರ ಜನರು ಹೋರಾಡಿದ್ದಾರೆ. ಹಲವರು ಹೋರಾಟ, ಹರತಾಳ, ಪ್ರತಿಭಟನೆಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರೆ ಇನ್ನೂ ಹಲವರು ತೆರೆಮರೆಯಲ್ಲಿ ಉಳಿದು ಸಕ್ರಿಯ ಹೋರಾಟದಲ್ಲಿ ತೊಡಗಿಕೊಂಡವರಿಗೆ ಸಹಾಯ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಂತವರಲ್ಲೊಬ್ಬರು ಬರಬಳ್ಳಿಯ ಗುಡ್ಡೇಮನೆಯ ಅಮ್ಮಕ್ಕ ಗಣಪತಿ ಭಟ್.
ಅಮ್ಮಕ್ಕ ಗಣಪತಿ ಭಟ್ಟರು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುವ ಮೂಲಕ ಜನಮಾನಸದಲ್ಲಿ ನೆಲೆನಿಂತಿದ್ದಾರೆ. ಪತಿ ಗಣಪತಿ ಭಟ್ಟರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದ ಸಂದರ್ಭದಲ್ಲಿ ಅಮ್ಮಕ್ಕ ಗಣಪತಿ ಭಟ್ಟರು ಕೈಗೊಂಡ ಕಾರ್ಯ ಅನುಪಮವಾದುದು. ತೆರೆಮರೆಯಲ್ಲಿ ಅಮ್ಮಕ್ಕ ಗಣಪತಿ ಭಟ್ಟರು ಕೈಗೊಂಡ ಕಾರ್ಯ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರನ್ನು ಕಾಪಾಡಿದೆ.
ಅಮ್ಮಕ್ಕ ಗಣಪತಿ ಭಟ್ಟರು ಪತಿ ಗಣಪತಿ ಭಟ್ಟರನ್ನು ಮದುವೆಯಾಗುವ ವರೆಗೂ ಆಗೊಮ್ಮೆ ಈಗೊಮ್ಮೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತುಗಳನ್ನು ಕೇಳುತ್ತಿದ್ದರಷ್ಟೇ. ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರವಾಸ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಗೊಮ್ಮೆ ಈಗೊಮ್ಮೆ ಮಾಹಿತಿಗಳನ್ನು ಕೇಳುತ್ತಿದ್ದರು. ನಂತರದಲ್ಲಿ ಬರಬಳ್ಳಿಯ ಗುಡ್ಡೆಮನೆ ಗಣಪತಿ ಭಟ್ಟರ ಜೊತೆ ಅಮ್ಮಕ್ಕ ಭಟ್ಟರ ವಿವಾಹ ನಡೆಯಿತು. ಪತಿ ಗಣಪತಿ ಭಟ್ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಪತಿಯ ಜೊತೆಗೆ ಆಗೀಗ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಗುಡ್ಡೇಮನೆಗೆ ಬರುತ್ತಿದ್ದರು. ಹೀಗೆ ಬರುವವರಲ್ಲಿ ಅನೇಕ ಕ್ರಾಂತಿಕಾರಿಗಳೂ ಇದ್ದರು. ಅಂತವರಿಗೆಲ್ಲ ಮನೆಯಲ್ಲಿ ಆಶ್ರಯ ನೀಡಿ ಅಡುಗೆ ಮಾಡಿ ಹಾಕುವ ಕಾರ್ಯ ಅಮ್ಮಕ್ಕ ಗಣಪತಿ ಭಟ್ಟರದ್ದಾಗಿತ್ತು.
1940ರ ದಶಕದಲ್ಲಿ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಮನೆಗೆ ಬರುತ್ತಿದ್ದರು. ಪತಿ ಗಣಪತಿ ಭಟ್ಟರ ನೇತೃತ್ವದಲ್ಲಿ ಸಾಕಷ್ಟು ಸಭೆಯೂ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅಮ್ಮಕ್ಕ ಗಣಪತಿ ಬಟ್ಟರು ಪಾಲ್ಗೊಳ್ಳುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ನಿಮಿತ್ತ ಗಣಪತಿ ಭಟ್ಟರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿಯೂ ಕೂಡ ಸ್ವಾತಂತ್ರ್ಯ ಹೋರಾಟಗಾರರನ್ನು ಮನೆಯಲ್ಲಿ ಇರಲು ಅವಕಾಶ ಕಲ್ಪಿಸಿ, ಅವರಿಗೆ ಅಡುಗೆ ಮಾಡಿ ಹಾಕುವ ಕಾರ್ಯವನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿ ಬರುತ್ತಿದ್ದ ಪೊಲೀಸರ ಕಣ್ಣನ್ನು ತಪ್ಪಿಸಿ ಅವರನ್ನು ಬೇರೆಡೆಗೆ ಕಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹೀಗೆ ತಾವು ಅದೆಷ್ಟೋ ನೂರು ಸ್ವಾತಂತ್ರ್ಯ ಹೋರಾಟಗಾರರಿಗೆ ಊಟ ಹಾಕಿದ್ದೇನೆ ಎಂದು ಅಮ್ಮಕ್ಕ ಹೇಳುತ್ತಾರೆ.
ನಾನು ಅಕ್ಷರ ಕಲಿತಿಲ್ಲ. ಮದುವೆಯಾಗುವ ವರೆಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಹೋರಾಟದ ಮಾಹಿತಿಗಳು ಕಿವಿಗೆ ಬೀಳುತ್ತಿದ್ದವು. ನಾನು ಮದುವೆಯಾಗಿ ಬಂದ ಮೇಲೆ ಮನೆಯಲ್ಲಿ ಅದೆಷ್ಟೋ ಸಾರಿ ಸ್ವಾತಂತ್ರ್ಯ ಹೋರಾಟದ ಕರಪತ್ರಗಳನ್ನು ಅಡಗಿಸಿ ಇಟ್ಟಿದ್ದೇನೆ. ತಲೆ ತಪ್ಪಿಸಿಕೊಂಡು ಬರುತ್ತಿದ್ದ ಚಳುವಳಿಗಾರರನ್ನು ಉಳಿಸಿ, ಊಟ ಹಾಕಿದ್ದೇನೆ. ಇವರನ್ನು ಹುಡುಕಿ ಬರುವ ಪೊಲೀಸರ ಬಳಿ ಏನೇನೋ ಸಬೂಬುಗಳನ್ನು ಹೇಳಿ ಸಾಗಹಾಕಿದ್ದೇನೆ. ಅದೆಷ್ಟೋ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆ ವಾಸ ಮಾಡಿದ್ದಾರೆ. ನಾನು ನನಗೆ ತಿಳಿದ ರೀತಿಯಲ್ಲಿ ಕಾರ್ಯ ಮಾಡಿದ್ದೇನೆ. ನಿಜಕ್ಕೂ ಇದೊಂದು ಅಲ್ಪ ಮಟ್ಟದ ದೇಶಸೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರಂತೆ ನಾನು ಸೆರೆಮನೆ ವಾಸ ಮಾಡಿಲ್ಲ ಎನ್ನುವ ಬೆಜಾರೂ ನನಗಿದೆ ಎಂದು ಅಮ್ಮಕ್ಕ ಗಣಪತಿ ಭಟ್ ಹೇಳುತ್ತಾರೆ.
ಈಗ ಅಮ್ಮಕ್ಕ ಗಣಪತಿ ಭಟ್ಟರಿಗೆ 95 ವರ್ಷಗಳಾಗಿದೆ. ಕಿವಿ ಕೇಳುವುದಿಲ್ಲ. ಕಣ್ಣು ಅಸ್ಪಷ್ಟವಾಗಿ ಕಾಣಿಸುತ್ತದೆ. ಸಕ್ರಿಯರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಳ್ಳುವವರಿಗೆ ಸಹಾಯ ಮಾಡಿದ ಅಮ್ಮಕ್ಕರಂತಹ ಅದೆಷ್ಟೋ ಸಾಧ್ವಿಯರು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತಾರೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇಂತಹ ಮಹಿಳಾ ಸಾಧಕಿಯರ ಸಾಧನೆ ಎಲ್ಲರಿಗೂ ಪ್ರೇರಣಾದಾಯವಾಗುತ್ತದೆ. ಆಧುನಿಕ ತಂತ್ರಜ್ಞಾನ ಬೆಳೆದು ನಿಂತಿರುವ ಇಂದಿನ ದಿನಮಾನದಲ್ಲಿ, ಏನೂ ಇಲ್ಲದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ಅಮ್ಮಕ್ಕ ಗಣಪತಿ ಭಟ್ ಸ್ಪೂತರ್ಿಯ ಸೆಲೆಯಾಗಿ ನಿಲ್ಲುತ್ತಾರೆ.


No comments:

Post a Comment