Sunday, December 4, 2016

ಮಿಲನ

ನಿಷೆಯ ಆಳಕಿಳಿದು ನಾವು
ಒಂದಾಗಬೇಕು |
ನಮ್ಮ ನಾವು ಅರಿತುಕೊಳಲು
ಮುಂದಾಗಬೇಕು |

ಮುತ್ತುಗಳಿಗೆ ಲೆಕ್ಖವಿಲ್ಲ
ಕೂಟ್ಟು ಪಡೆಯಬೇಕು
ಓಲವಿನ ಸತ್ವ ಹೀರಿ
ಉನ್ಮತ್ತನಾಗಬೇಕು |

ಆಸೆ ಇನ್ನೂ ಹೆಚ್ಚು ಹೆಚ್ಚು
ಮನದಿ ಮರಳಬೇಕು
ಮುಚ್ಚಿಟ್ಟಷ್ಟೂ ಮತ್ತೆ ಮತ್ತೆ
ಕಾಮ ಕೆರಳಬೇಕು |

ಹುಚ್ಚು ಆಸೆ ಕುದುರೆ ಏರಿ
ರಥವ ಕಟ್ಟಬೇಕು
ಮದನ ಮೋಹ ಆಸೆಯಿಂದ
ಶರವ ಹೂಡಬೇಕು |

ನೀನು ಹೂವು ನಾನು ದುಂಬಿ
ಮಧುವ ಹೀರಬೇಕು
ಆಹಾಹಾ ಸುಖದ ಸ್ವರವು
ಮಧುರವಾಗಬೇಕು |

ಹಸಿವು ಹೆಚ್ಚಬೇಕು ಮತ್ತೆ
ಬೆವರ ಸುರಿಸಬೇಕು
ಕಾಮದ ಕಿಚ್ಚನ್ನು ಹಾಗೇ
ಉರಿಸಿಹಾಕಬೇಕು |

ಬರಬಿದ್ದ ಗದ್ದೆಗಳಲಿ
ನೀರುಕ್ಕಿಸಬೇಕು
ಹಸಿರು ಸದಾ ನಲಿಯುತಿರಲು
ಒಲವ ರಸ ಚಿಮ್ಮಬೇಕು |

ನಿರ್ನಿದ್ದೆಯ ರಾತ್ರಿಗಳಲಿ
ನಿನ್ನೊಡನೆ ಹೊರಳಬೇಕು
ಮತ್ತೆ ಮತ್ತೆ ಕನಸ ಜೊತೆಗೆ
ಸುಖದ ತೇರು ಎಳೆಯಬೇಕು |

ಮೇಲೆ ಕೆಳಗೆ ಹತ್ತಿ ಇಳಿದು
ಚರಮ ಸುಖದಿ ನರಳಬೇಕು
ನಿತ್ಯ ನಿತ್ಯ ಹೊಸದು ಹೊಸದು
ಪ್ರೀತಿ ಪುಷ್ಪ ಅರಳಬೇಕು |

ನನಗೆ ನೀನು ನಿನಗೆ ನಾನು
ಬಟ್ಟೆಯಾಗಬೇಕು
ಮಿಲನ ಸವಿಘಳಿಗೆಯಿಂದ
ಬದುಕು ಗಟ್ಟಿಯಾಗಬೇಕು |

ಇಂದಿನಲ್ಲಿ ನಾವು ಅಳಿದು
ನಾಳೆ ಮತ್ತೆ ಹುಟ್ಟಬೇಕು
ನಮ್ಮಿಬ್ಬರ ನಡುವೆ ಎಂದೂ
ಪ್ರೀತಿ ಉಳಿಯಬೇಕು |

ಮಿಲನದ ಪರಿಭಾಷೆ ಎಂದೂ
ಅರ್ಥವಾಗಬೇಕು
ಮಿಲನವೆಂದರೆ ಪ್ರೀತಿ
ಎಂದು ಅರಿತುಕೊಳ್ಳಬೇಕು |

-------------------


(ಈ ಕವಿತೆಯನ್ನು ಶಿರಸಿಯಲ್ಲಿ ಬರೆದಿದ್ದು ಡಿ.4 2016ರಂದು)

(ಕವಿತೆಯ ಕುರಿತು : 
ಖಂಡಿತವಾಗಿಯೂ ಕ್ಲಾಸ್ ಜನರು ಈ ಕವಿತೆಯನ್ನು ನೋಡಿ ಮುಖ ಕಿವುಚಬಹುದು. ಹಲವರಿಗೆ ಇದು ಇಷ್ಟವಾಗಲೂ ಬಹುದು. ಆದರೆ ಮಿಲನ ಹೇಳುವ ಪ್ರೇಮದ ಪರಿಭಾಷೆ ಖಂಡಿತವಾಗಿಯೂ ನಿಜ, ಸತ್ಯ. ಪರಸ್ಪರ ಅರ್ಥ ಮಾಡಿಕೊಳ್ಳಲು ಇದು ಸಹಕಾರಿ. ಬಹಳಷ್ಟು ಜನರಿಗೆ ಅಶ್ಲೀಲ ಎನ್ನಿಸಬಹುದೇನೋ. ಖಂಡಿತವಾಗಿಯೂ ಇದಕ್ಕೂ ಒಂದು ಗೌರವವಿದೆ. ಗೌರವದಿಂದ ಕಂಡರೆ ಅಶ್ಲೀಲ ಎನ್ನಿಸುವುದಿಲ್ಲ. ಓದುಗರ ಮನಸ್ಸಿನ ಭಾವನೆಗೆ ತಕ್ಕಂತೆ ಕವಿತೆಯ ಅರ್ಥ ಬದಲಾಗುತ್ತದೆ. ಕವಿತೆಯನ್ನು ಅರ್ಥ ಮಾಡಿಕೊಳ್ಳುವವನು ಭಾವಾರ್ಥವನ್ನು ಸವಿಯಬಲ್ಲ. ಆ ತಾಕತ್ತು ಇಲ್ಲದವನು ಅವನ ಮನಸ್ಸಿಗೆ ತೋಚಿದಂತೆ ಅಂದುಕೊಳ್ಳಬಲ್ಲ. ಸುಮ್ಮನೆ ಓದಿ ನೋಡಿ. ಖಂಡಿತವಾಗಿಯೂ ಕವಿತೆಯನ್ನು ಓದಿ ಆ ಮೂಲಕ ಕವಿಯನ್ನು ಜಡ್ಜ್ ಮಾಡಲು ಹೋಗಬೇಡಿ)

Friday, December 2, 2016

ನಯನದಾನದ ಮೂಲಕ ನೂರಾರು ಜನರ ಬಾಳಿಗೆ ಬೆಳಕಾದ ಗ್ರಾಮಸ್ಥರು

ದೇಶದ ಪ್ರಪ್ರಥಮ ಸಂಪೂರ್ಣ ನೇತ್ರದಾನಿ ಗ್ರಾಮ ಮುಂಡಿಗೆಸರ


-------------

ನೇತ್ರದಾನ ಶ್ರೇಷ್ಟ ದಾನಗಳಲ್ಲೊಂದು. ಸತ್ತ ನಂತರವೂ ತಮ್ಮ ನಯನಗಳು ಜಗತ್ತನ್ನು ನೋಡಲಿ ಎನ್ನುವ ಕಾರಣಕ್ಕಾಗಿ ನೇತ್ರಗಳನ್ನು ದಾನ ಮಾಡಿದವರು ಅನೇಕರು. ಮತ್ತೆ ಕೆಲವರು ನೇತ್ರದಾನದ ಬಗ್ಗೆ ಭಯವನ್ನೂ ಹೊಂದಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗ್ರಾಮವೊಂದರ ಸಂಪೂರ್ಣ ಗ್ರಾಮಸ್ಥರು ನೇತ್ರದಾನ ಮಾಡುವ ಮೂಲಕ ಜಗತ್ತಿಗೆ ನೇತ್ರದಾನದ ಪಾಠವನ್ನು ಹೇಳುತ್ತಿದ್ದಾರೆ.
ನಮ್ಮದು ಗ್ರಾಮಗಳ ದೇಶ. ಗ್ರಾಮವೇ ನಮ್ಮ ಜೀವಾಳ. ಇಲ್ಲಿನ ಆಚರಣೆಗಳು, ಸಂಪ್ರದಾಯಗಳು, ವಿಶೇಷತೆಗಳಿಂದ ಆಗಾಗ ಬಹಳಷ್ಟು ಗ್ರಾಮಗಳು, ಬೇರೆಬೇರೆ ಕಾರಣಗಳಿಂದ ನಗರವಾಸಿಗಳ ಗಮನ ಸೆಳೆಯುತ್ತಾ ಇರುತ್ವೆ. ಕೆಲವು ಹುಬ್ಬೇರಿಸುವಂತಿದ್ರೆ ಇನ್ನು ಕೆಲವು ಅನುಕರಣೀಯವಾಗಿರ್ತವೆ. ನೇತ್ರದಾನದ ಪಾಠವನ್ನು ಜಗತ್ತಿಗೆ ಸಾರಿದ ಈ ಗ್ರಾಮವೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೇಸರ. ಯಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಸರ ಗ್ರಾಮದಲ್ಲಿ ಬೆಳ್ಳೇಕೇರಿ, ಅಬ್ರಿಮನೆ ಹಾಗೂ ಮುಂಡಿಗೆಸರ ಎಂಬ ಮೂರು ಮಜರೆಗಳಿವೆ. ಈ ಮಜರೆಗಳಲ್ಲಿ ಒಟ್ಟೂ 70ಕ್ಕೂ ಅಧಿಕ ಮನೆಗಳಿವೆ. ಅಜಮಾಸು 300ಕ್ಕೂ ಅಧಿಕ ಜನಸಂಖ್ಯೆಯನ್ನು ಈ ಊರುಗಳು ಹೊಂದಿದ್ದು ಇವರೆಲ್ಲರೂ ಕೂಡ ನೇತ್ರದಾನ ಮಾಡಿರುವುದು ವಿಶೇಷ.
ಶತಮಾನೋತ್ಸವ ಸಮಿತಿಯ ಶ್ಲಾಘನೀಯ ಕಾರ್ಯ :
1992ರಲ್ಲಿ ಮುಂಡಿಗೆಸರ ಗ್ರಾಮದವರೇ ಆದ ಸರಸ್ವತಿ ಎಂ. ಹೆಗಡೆಯವರು ಅನಾರೋಗ್ಯದ ನಿಮಿತ್ತ ನಿಧನರಾದರು. ಅವರು ಆ ಸಂದರ್ಭದಲ್ಲಿ ತಮ್ಮ ನೇತ್ರಗಳನ್ನು ದಾನ ಮಾಡಿದರು. ಸರಸ್ವತಿಯವರು ನೇತ್ರದಾನ ಮಾಡಿರುವುದು ಆಗಿನ ಕಾಲದಲ್ಲಿ ಇಡಿಯ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ನೇತ್ರದಾನ ಎಂಬ ವಿಶೇಷತೆಗೂ ಕಾರಣವಾಗಿತ್ತು. ತದನಂತರದಲ್ಲಿ ಬೆಳ್ಳೇಕೇರಿಯ ಕಮಲಾಕ್ಷಿ ಹೆಗಡೆ ಎಂಬ ಬಡತನದಲ್ಲಿ ಬೆಳೆದ ಮಹಿಳೆಯೋರ್ವಳು ನೇತ್ರದಾನ ಮಾಡಿದರು. ಇವರೇ ಇಡಡಿಯ ಗ್ರಾಮದಲ್ಲಿ ನೇತ್ರದಾನ ನಡೆಯಲು ಸ್ಪೂತರ್ಿ. ಇಡಿಯ ಗ್ರಾಮಸ್ಥರ ನೇತ್ರದಾನಕ್ಕೆ ಬೆನ್ನೆಲುಬಾಗಿ ನಿಂತಿದ್ದು ಮುಂಡಿಗೆಸರದ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ.
1907ರಲ್ಲಿ ಮುಂಡಿಗೆಸರದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿದ್ದಯ, 2007ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಶಾಲೆಯ ಶತಮಾನೋತ್ಸವ ವಿಭಿನ್ನವಾಗಿರಬೇಕು ಎಂದುಕೊಂಡು ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ನೇತ್ರದಾನ ಅಭಿಯಾನಕ್ಕೆ ಮುಂದಾದರು. ಮೊದಲ ದಿನವೇ 200ಕ್ಕೂ ಹೆಚ್ಚಿನ ಜನರು ತಮ್ಮ ನಯನಗಳನ್ನು ದಾನ ಮಾಡಲು ಹೆಸರು ನೊಂದಾಯಿಸಿದರು. ತದನಂತರದಲ್ಲಿ ದಿನಕಳೆದಂತೆ ಕಣ್ಣುಗಳನ್ನು ದಾನ ಮಾಡಲು ನೊಂದಾಯಿಸಿದವರ ಸಂಕ್ಯೆ 300ನ್ನೂ ಮೀರಿದೆ. ಪ್ರತಿ ಮನೆಯ ಪ್ರತಿ ಸದಸ್ಯರೂ ಕೂಡ ನೇತ್ರದಾನಕ್ಕೆ ಹೆಸರು ನೊಂದಾಯಿಸಿದ್ದಾರೆ ಎಂದು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಹೆಗಡೆ.
ಮುಂಡಿಗೆಸರ ಗ್ರಾಮದಲ್ಲಿ ಪ್ರತಿಯೊಬ್ಬರೂ ನೇತ್ರದಾನ ಮಾಡಿರುವುದರಿಂದ ಸ್ಪೂತರ್ಿಯಾಗಿರುವ ಸುತ್ತಮುತ್ತಲ ಯಡಳ್ಳಿ, ಕರಸುಳ್ಳಿ, ಶಿರಸಿಮಕ್ಕಿ, ಕಲ್ಕುಣಿ ಗ್ರಾಮಗಳ ಗ್ರಾಮಸ್ಥರೂ ಕೂಡ ನೇತ್ರದಾನಕ್ಕೆ ಹೆಸರು ನೊಂದಾಯಿಸಿದ್ದಾರೆ. ಉತ್ತರ ಕನ್ನಡದ ಹಳ್ಳಿಗಳಲ್ಲಿ ನೇತ್ರದಾನ ಅಥವಾ ಅಂಗದಾನ ಮಾಡಬಾರದು. ಅಂಗ ಊನವಾಗಬಾರದು ಎಂಬ ನಂಬಿಕೆಯಿದೆ. ಆದರೆ ಈ ನಂಬಿಕೆಯನ್ನೂ ಪಕ್ಕಕ್ಕಿಟ್ಟು ಇಡಿಯ ಗ್ರಾಮವೇ ನೇತ್ರದಾನಕ್ಕೆ ಮುಂದಾಗಿದ್ದು ವಿಶೇಷ. ಹುಬ್ಬಳ್ಳಿಯ ಎಂ. ಎಂ. ಜೋಶಿಯವರ ನೇತ್ರಾಲಯ ಹೆಸರು ನೊಂದಾವಣಿ ಪ್ರಕ್ರಿಯೆಯಲ್ಲಿ ಜೊತೆಗೂಡಿದೆ. ಸಂಪೂರ್ಣ ಗ್ರಾಮದ ಜನರು ನೇತ್ರದಾನ ಮಾಡಿರುವುದು ರಾಷ್ಟ್ರದಲ್ಲಿಯೇ ಪ್ರಪ್ರಥಮ. ಇಂತಹ ಇನ್ನೊಂದು ಗ್ರಾಮವಿಲ್ಲ ಎನ್ನುವುದು ವಿಶೇಷ. ಮುಂಡಿಗೆಸರದ ನೇತ್ರದಾನದ ವಿಶೇಷತೆ ಇದೀಗ ಗೂಗಲ್ ವೀಕಿಪಿಡಿಯಾದಲ್ಲಿಯೂ ಸ್ಥಾನ ಪಡೆದಿದೆ.
ಮುಂಡಿಗೆಸರ ಹಲವು ವಿಶೇಷತೆಗಳ ಆಗರ :
ಸಂಪೂಣ್ ನೇತ್ರಗ್ರಾಮವಾದ ಮುಂಡಿಗೆಸರ ಇನ್ನೂ ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಈ ಗ್ರಾಮ ಸಂಪೂಣ್ ವಿಮಾಗ್ರಾಮವೂ ಹೌದು. ಅಲ್ಲದೇ ಸಂಪೂರ್ಣ ಸೋಲಾರ್ ಗ್ರಾಮ ಎಂಬ ಖ್ಯಾತಿಯನ್ನೂ ಪಡೆದಿದೆ. 1930ರ ಆಸುಪಾಸಿನಲ್ಲಿಯೇ ವಿಧವಾ ವಿವಾಹಕ್ಕೆ ಪ್ರೋತ್ಸಾಹ ಕೊಟ್ಟ ಗ್ರಾಮ ಇದು. ಅಲ್ಲದೇ ಈ ಗ್ರಾಮದಲ್ಲಿ ಸಾಕಷ್ಟು ಸಂಕ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರೂ ಇದ್ದರು. ಅಲ್ಲದೇ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಳೀಯ ಗಣಪತಿ ದೇವಸ್ಥಾನದಲ್ಲಿ ಹರಿಜನರೊಂದಿಗೆ ಮೇಲ್ವರ್ಗದ ಜನರು ಸಹಪಂಕ್ತಿ ಭೋಜನ ಮಾಡಿದ ಖ್ಯಾತಿಯೂ ಈ ಗ್ರಾಮಕ್ಕಿದೆ. ಇದೀಗ ಮುಂಡಿಗೆಸರ ಗ್ರಾಮದಲ್ಲಿ ಹಲವರು ದೇಹದಾನದ ಕಡೆಗೂ ಆಲೋಚನೆ ನಡೆಸುತ್ತಿದ್ದಾರೆ. ಆದರೆ ದೇಹದಾನ ಮಾಡುವುದಕ್ಕೆ ಸಂಬಂಧಪಟ್ಟಂತೆ ಅಗತ್ಯದ ಕ್ರಮ ಕೈಗೊಳ್ಳುವುದು ಹೇಗೆ ಎನ್ನುವುದು ತಿಳಿಯದೇ ಸುಮ್ಮನಿದ್ದಾರೆ. ಇದೀಗ ಸಂಪೂರ್ಣ ನೇತ್ರದಾನ ಮಾಡುವ ಮೂಲಕ ಪ್ರತಿಯೊಬ್ಬರಲ್ಲಿಯೂ ನೇತ್ರದಾನದ ಅರಿವನ್ನು ಮೂಡಿಸುತ್ತಿದೆ. ಪ್ರಚಾರಕ್ಕಾಗಿ ಈ ಕೆಲಸವನ್ನು ಮಾಡದ ಮುಂಡಿಗೆಸರ ಗ್ರಾಮಸ್ಥರು ತಮ್ಮ ಊರು ದೇಶಮಟ್ಟದಲ್ಲಿ ಹೆಸರಾಗಿರುವುದರ ಕುರಿತಂತೆ ಹುಬ್ಬೇರಿಸುತ್ತಾರೆ. ತಮ್ಮ ವಿಶಿಷ್ಟ ಕಾರ್ಯದಿಂದ ಎಲ್ಲರ ಮನಸ್ಸನ್ನು ಈ ಗ್ರಾಮಸ್ಥರು ಸೆಳೆದಿದ್ದಾರೆ.

----------------

ಮುಂಡಿಗೆಸರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ನೇತ್ರದಾನ ಮಾಡಿದ್ದಾರೆ. ತಾವು ಮಡಿದ ನಂತರವೂ ತಮ್ಮ ನಯನಗಳು ಜಗತ್ತನ್ನು ನೋಡಲಿ ಎನ್ನುವ ದೃಷ್ಟಿಯಿಂದ ತಮ್ಮ ದೃಷ್ಟಿದಾನ ಮಾಡಿದ್ದಾರೆ. ಇದುವರೆಗೂ ಅದೆಷ್ಟೋ ಜನರ ಕಣ್ಣಿಗೆ ನಮ್ಮೂರಿಗರ ನೇತ್ರಗಳು ಬೆಳಕನ್ನು ನೀಡಿವೆ. ಲಿಮ್ಕಾ ಅಥವಾ ಇನ್ಯಾವುದೇ ದಾಖಲೆ ಆಗಿರಬಹುದು. ಆದರೆ ನಾವಾಗಿಯೇ ಪ್ರಚಾರಕ್ಕೆ ಮುಂದಾಗಿಲ್ಲ. ನಮ್ಮೂರಿನ ಈ ಸಂಗತಿಯನ್ನು ದಾಖಲಿಸಲು ಮುಂದಾದರೆ ಅವರಿಗೆ ಎಲ್ಲ ಮಾಹಿತಿ ನೀಡುತ್ತೇವೆ.
ರವೀಂದ್ರ ಹೆಗಡೆ ಬಳಗಂಡಿ
ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ
ಹಾಗೂ ಮುಂಡಿಗೆಸರ ಗ್ರಾಮಸ್ಥರು