Saturday, November 19, 2016

ಅಳಿವಿನಂಚಿನಲ್ಲಿರುವ ಅಳಿಲು ತಂದ ಸಂಕಷ್ಟ / ತೆಂಗು ಬೆಳೆಗಾರರಿಗೆ ಕೆಂಪಳಿಲಿನಿಂದ ನಷ್ಟ

ವಿನಾಶದ ಅಂಚಿನಲ್ಲಿರುವ ಕೆಂಪಳಿಲುಗಳಿಂದ ತೆಂಗು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಕೆಂಪು ಅಳಿಲುಗಳ ಕಾಟವನ್ನು ತಡೆಯಲಾರದೇ ತೆಂಗು ಬೆಳೆಗಾರರು ದಿನದಿಂದ ದಿನಕ್ಕೆ ಹೈರಾಣಾಗುತ್ತಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಕೆಂಪು ಅಳಿಲುಗಳನ್ನು ಸ್ಥಳೀಯವಾಗಿ ಕೆಂಜಳಿಲು, ಕೆಂಪು ಬಾಲದ ಅಳಿಲು, ಕೇಶ ಅಳಿಲು ಎಂದೆಲ್ಲ ಕರೆಯುತ್ತಾರೆ. ಮಲಬಾರ್ ಗ್ರೇಟ್ ಸ್ಕ್ವೀರಲ್ ಎಂದು ಕರೆಸಿಕೊಳ್ಳುವ ಇವು ದಶಕಗಳ ಹಿಂದೆ ಹೇರಳವಾಗಿದ್ದವು. ಆದರೆ ಬೇಟೆಗಾರರರ ದುರಾಸೆಗೆ ಬಲಿಯಾಗಿ ಅಳಿವಿನ ಅಂಚನ್ನು ತಲುಪಿದೆ. ಇದೀಗ ಕೇಂದ್ರ ಸರಕಾರವು ಕೆಂಪು ಅಳಿಲನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಈ ಪ್ರಾಣಿ ನಡೆಸುತ್ತಿರುವ ಉಪಟಳವನ್ನು ಸಹಿಸಲಾರದೇ ತೆಂಗು ಬೆಳೆಗಾರ ಕೈಚೆಲ್ಲಿದ್ದಾನೆ.
35 ರಿಂದ 40 ಸೆಂ.ಮಿ ಉದ್ದ ಬೆಳೆಯುವ ಕೆಂಪು ಅಳಿಲುಗಳು ಕಾಡು ಹಣ್ಣುಗಳನ್ನು, ಎಲೆಗಳನ್ನು ಆಹಾರಕ್ಕಾಗಿ ಉಪಯೋಗಿಸುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಡುಗಳಲ್ಲಿ ಆಹಾರದ ಅಭಾವ ಎದುರಾಗಿರುವ ಕಾರಣ ನಾಡಿನತ್ತ ಲಗ್ಗೆ ಇಡುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ತೆಂಗಿನ ತೋಟಗಳಿಗೆ ಇವುಗಳು ಲಗ್ಗೆ ಇಡಲು ಆರಂಭಿಸಿವೆ. ಮರದಿಂದ ಮರಕ್ಕೆ ಕುಪ್ಪಳಿಸುತ್ತ, ಜಿಗಿಯುತ್ತ ಸಾಗಿವ ಇವುಗಳು ದಿನವೊಂದಕ್ಕೆ 4-5 ತೆಂಗಿನಕಾಯಿಗಳನ್ನು ಕೊರೆದು, ನೀರನ್ನು ಕುಡಿದು ತೆಂಗಿನ ಕಾಯಿಯ ತಿರುಳನ್ನು ತಿನ್ನುತ್ತಿವೆ. ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ಪಶ್ಚಿಮ ಘಟ್ಟದ ಸಾಲುಗಳ ಜಿಲ್ಲೆಗಳ ಹಲವಾರು ತೆಂಗಿನ ಬೆಳೆಗಾರರು ಕೆಂಪು ಅಳಿಲುಗಳ ಕಾಟದಿಂದ ಬೇಸತ್ತಿದ್ದಾರೆ.
ಸಾಮಾನ್ಯವಾಗಿ ಒಂದು ತೆಂಗಿನ ಮರದಲ್ಲಿ ಒಂದು ವರ್ಷಕ್ಕೆ 100 ತೆಂಗಿನಕಾಯಿಗಳು ಇಳುವರಿಯ ರೂಪದಲ್ಲಿ ಬಂದರೆ ಅದರಲ್ಲಿ ಅರ್ಧಕ್ಕರ್ಧ ಕೆಂಪಳಿಲುಗಳಿಗೆ ಆಹಾರವಾಗುತ್ತಿದೆ. ಕೆಲವು ತೆಂಗಿನ ಮರಗಳಲ್ಲಂತೂ ಕೆಂಪಳಿಲುಗಳು ಕೊರೆದು ತೂತು ಮಾಡಿ ತಿಂದ ತೆಂಗಿನಕಾಯಿಯ ಗೊಂಚಲುಗಳೇ ಕಾಣಸಿಗುತ್ತಿವೆ. ಈಗಾಗಲೇ ನುಸಿಪೀಡೆಯಂತಹ ಹಲವು ಸಮಸ್ಯೆಗಳಿಂದ ತೆಂಗಿನ ಬೆಳೆಯ ಲಾಭವನ್ನು ಬಹುತೇಕ ಕಳೆದುಕೊಂಡಿರುವ ಬೆಳೆಗಾರ ಕೆಂಪು ಅಳೀಲುಗಳ ಕಾಟದಿಂದ ಇದ್ದ ಚಿಕ್ಕ ಲಾಭಾಂಶವನ್ನೂ ಕಳೆದುಕೊಳ್ಳುವ ಹಂತ ತಲುಪಿದ್ದಾನೆ.
ಅರಣ್ಯ ಇಲಾಖೆ ಕೆಂಪು ಅಳಿಲುಗಳ ಬೇಟೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟುತ್ತಿದೆ. ಆದರೆ ನಾಡಿಗೆ ಲಗ್ಗೆ ಇಟ್ಟು ತೆಂಗಿನ ಬೆಳೆಯನ್ನು ನಾಶ ಮಾಡುವ ಅಳಿಲುಗಳ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗುತ್ತಿದೆ. ಬೆಳಗಾರರು ಇವುಗಳ ಹಾವಳಿಯನ್ನು ತಡೆಗಟ್ಟಲಾಗದೇ ಕೈಚೆಲ್ಲಿದ್ದಾರೆ. ಕೆಂಪು ಅಳಿಲುಗಳ ಹಾವಳಿ ಇನ್ನಷ್ಟು ಜಾಸ್ತಿಯಾದಲ್ಲಿ ಅವನ್ನು ಬೇಟೆಯಾಡುವುದು ಅನಿವಾರ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಕೆಂಪು ಅಳಿಲು ಮುಂತಾದ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಬೇಟೆ ಕಡ್ಡಾಯವಾಗಿ ನಿಷಿದ್ಧ. ಅಲ್ಲದೇ ಇಂತಹ ಬೇಟೆಗಳನ್ನು ಕೈಗೊಂಡವರಿಗೆ ಕಠಿಣ ಶಿಕ್ಷೆಯೂ ಇದೆ. ಹೀಗಾಗಿ ಅಳಿಲುಗಳನ್ನು ತಡೆಗಟ್ಟುವುದು ಸಾಧ್ಯವಾಗದೇ, ಬೆಳೆ ಉಳಿಸಿಕೊಳ್ಳುವಲ್ಲಿಯೂ ವಿಫಲರಾಗಿರುವ ಬೆಳೆಗಾರರು ಕಂಗಾಲಾಗಿದ್ದಾರೆ.
ಅರಣ್ಯ ಇಲಾಖೆ ಕೆಂಪು ಅಳಿಲುಗಳು ತೆಂಗಿನ ತೋಟದ ಕಡೆಗೆ ದಾಳಿ ಇಡದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇಂತಹ ಅಪರೂಪದ ಪ್ರಾಣಿಗಳಿಗೆ ಅಗತ್ಯವಾಗಿರುವ ಹಣ್ಣಿನ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ನೆಡುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ತೆಂಗಿಗೆ ದಾಳಿ ಇಡುವ ಅಳಿಲುಗಳನ್ನು ಬೆಳೆಗಾರರು ಕೊಲ್ಲುವುದರ ಮೊದಲೇ ಅಧಿಕಾರಿಗಳು ಅವುಗಳ ಸಂರಕ್ಷಣೆಯತ್ತ ಗಮನ ಹರಿಸಬೇಕಾದ ಅಗತ್ಯವಿದೆ.


----------------

ಕೆಂಪು ಅಳಿಲುಗಳ ಹಾವಳಿ ತೀವ್ರವಾಗಿದೆ. ಇದರಿಂದಾಗಿ ದಿನಂಪ್ರತಿ ಕನಿಷ್ಟ 4-5 ತೆಂಗಿನ ಕಾಯಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ವರ್ಷವೊಂದರಲ್ಲಿ ಏನಿಲ್ಲ ಎಂದರೂ 500ಕ್ಕೂ ಹೆಚ್ಚು ತೆಂಗಿನಕಾಯಿಗಳು ಅಳಿಲುಗಳ ಬಾಯಿಗೆ ಬೀಳುತ್ತಿವೆ. ಅರಣ್ಯ ಇಲಾಖೆಗೆ ಈ ಕುರಿತು ಹೇಳಿ ಹೇಳಿ ಸಾಕಾಗಿದೆ. ಕೆಂಪು ಅಳಿಲುಗಳು ತೆಂಗಿನ ಬೆಳೆಗೆ ದಾಳಿ ಇಡದಂತೆ ಕ್ರಮ ಕೈಗೊಳ್ಳುವ ಜರೂರತ್ತು ಅರಣ್ಯ ಇಲಾಖೆಯ ಮೇಲಿದೆ.
ನಂದನ ಹೆಗಡೆ
ತೆಂಗು ಬೆಳೆಗಾರ


No comments:

Post a Comment