Sunday, November 20, 2016

ಕನ್ನಡ ಚಳುವಳಿಗೆ ಮೋಹನ ಭಟ್ಟರ ಪೆನ್ ಬಳುವಳಿ

ಪುಸ್ತಕಗಳನ್ನು, ಸಾಹಿತ್ಯ ಮಾಲಿಕೆಯನ್ನು, ಕಾದಂಬರಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವವರನ್ನು ನಾವು ಪದೇ ಪದೆ ಕಾಣುತ್ತೇವೆ. ಆದರೆ ಸಾಹಿತ್ಯ ಹೆಚ್ಚು ಹೆಚ್ಚು ಬರೆಯಲ್ಪಡಬೇಕು ಎನ್ನುವ ಕಾರಣಕ್ಕಾಗಿ ಪೆನ್ನುಗಳನ್ನು ಕೊಡುಗೆಯಾಗಿ ನೀಡುವವರು ವಿರಳ. ಅಂತವರಲ್ಲೊಬ್ಬರು ಶಿರಸಿಯ ಮೋಹನ ಭಟ್ಟರು.
ಶಿರಸಿ ನಗರದ ಅಂಬಿಕಾ ಕಾಲೋನಿಯ ನಿವಾಸಿಯಾಗಿರುವ ಮೋಹನ ಭಟ್ಟರು ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಪ್ರೌಢಶಾಲೆಯಲ್ಲಿಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಮೋಹನ ಭಟ್ಟರು ಕನ್ನಡ, ಸಾಹಿತ್ಯದ ಅಭಿವೃದ್ಧಿಗಾಗಿ ಮಾಡುತ್ತಿರುವ ಕಾರ್ಯ ಮಾತ್ರ ಅಮೋಘವಾದುದು. ಕಳೆದ 10 ವರ್ಷಗಳ ಅವಧಿಯಲ್ಲಿ ಮೋಹನ ಭಟ್ಟರು ಸಹಸ್ರಾರು ಪೆನ್ನುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕಾರಣದಿಂದಲೇ ಶಿರಸಿ ಭಾಗದಲ್ಲಿ ಮೋಹನ ಭಟ್ಟರನ್ನು ಪೆನ್ ಮೋಹನ ಭಟ್ ಎಂದೇ ಕರೆಯಲಾಗುತ್ತಿದೆ.
ಶಿರಸಿಯಲ್ಲಿ ಯಾವುದೇ ಸಾಹಿತ್ಯ ಕಾರ್ಯಕ್ರಮಗಳಿರಲಿ, ಆ ಕಾರ್ಯಕ್ರಮದ ನಡುವೆ ವೇದಿಕೆಗೆ ಆಗಮಿಸುವ ಮೋಹನ ಭಟ್ಟರು ವೇದಿಕೆಯ ಮೇಲೆ ಇರುವ ಪ್ರತಿಯೊಬ್ಬ ಗಣ್ಯರಿಗೂ ಕೂಡ ಪೆನ್ ಕಾಣಿಕೆಯಾಗಿ ನೀಡುತ್ತಾರೆ. ಅವರು ಕೊಡುವ ಪೆನ್ನುಗಳೂ ಕೂಡ ಸೀದಾ-ಸಾದಾ ಅಲ್ಲ. ವಿಶಿಷ್ಟ ವಿನ್ಯಾಸವನ್ನು ಹೊಂದಿರುತ್ತದೆ. ಮಾತ್ರೆಯ ಆಕಾರದ ಪೆನ್, ಕತ್ತರಿಯ ಆಕಾರದ ಪೆನ್, ಹೂವಿನ ವಿನ್ಯಾಸದ ಪೆನ್, ಕಿರು ಗಾತ್ರದ ಪೆನ್ ಹೀಗೆ ಅದೆಷ್ಟೋ ಬಗೆ ಬಗೆಯ ಪೆನ್ನುಗಳನ್ನು ಸಂಗ್ರಹಿಸಿ ಅವನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.
39 ವರ್ಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಮೋಹನ ಭಟ್ಟರು ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ನೂರಾರು ಮುಸ್ಲಿಂ ಹುಡುಗರಲ್ಲಿ ಕನ್ನಡ ಪ್ರೇಮ ಬೆಳೆಯಲೂ ಕಾರಣರಾಗಿದ್ದಾರೆ. ಇವರು ನೀಡಿದ ಪೆನ್ನಿನಿಂದ ಹಲವು ಪುಸ್ತಕಗಳನ್ನು ಬರೆದವರಿದ್ದಾರೆ. ಮೋಹನ ಭಟ್ಟರು ನೀಡಿದ ಪೆನ್ನಿನಿಂದಲೇ ಸ್ಪೂತರ್ಿ ಪಡೆದುಕೊಂಡಿದ್ದೇನೆ ಎಂದು ಪುಸ್ತಕಗಳ ಮುನ್ನುಡಿಯಲ್ಲಿ ಬರೆದುಕೊಂಡವರೂ ಇದ್ದಾರೆ. ಹದಿ ಹರೆಯದ ಬರಹಗಾರರಿಂದ ಹಿಡಿದು ಹಿರಿಯರ ವರೆಗೆ ಪೆನ್ನುಗಳನ್ನು ಕೊಡುಗೆಯಾಗಿ ನೀಡಿ ಸಾಹಿತ್ಯಕ್ಕೆ ಪೂರಕ ಚಟುವಟಿಕೆಗಳನ್ನು ಮೋಹನ್ ಭಟ್ಟರು ಮಾಡುತ್ತಿದ್ದಾರೆ.
ಮೋಹನ ಭಟ್ಟರು ಕವಿಯೂ ಕೂಡ ಹೌದು. ಅದೆಷ್ಟೋ ಕವಿತೆಗಳನ್ನು ಮೋಹನ ಭಟ್ಟರು ಬರೆದಿದ್ದಾರೆ. ಆದರೆ ಈ ಕವಿತೆಗಳಿನ್ನೂ ಪ್ರಕಟಣೆಯಾಗಿಲ್ಲ. ಪೆನ್ ಕೊಡುಗೆಯಾಗಿ ನೀಡುವ ಭಟ್ಟರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಅಲ್ಲಿ ಪುಸ್ತಕಗಳನ್ನು ಕೊಳ್ಳುತ್ತಾರೆ. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಇದ್ದರೆ ಬಿಡುಗಡೆಯಾಗುವ ಪುಸ್ತಕವನ್ನು ಹಣಕೊಟ್ಟು ಖರೀದಿಸಿ ಅದಕ್ಕೆ ಲೇಖಕ ಹಸ್ತಾಕ್ಷರವನ್ನು ಹಾಕಿಸಿಕೊಳ್ಳುತ್ತಾರೆ. ಇಂತಹ ಹಸ್ತಾಕ್ಷರಗಳನ್ನು ಒಳಗೊಂಡ ಸಹಸ್ರ ಸಹಸ್ರ ಪುಸ್ತಕಗಳು ಮೋಹನ ಭಟ್ಟರ ಮನೆಯಲ್ಲಿದೆ.
ತಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಪರಮೇಶ್ವರ ಭಟ್ಟರಿಗೆ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಅದನ್ನೇ ನಾನೂ ಮೈಗೂಡಿಸಿಕೊಂಡಿದ್ದೇನೆ. ಮನೆಯಲ್ಲಿ ಕನಿಷ್ಟ 10 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ ಎನ್ನುತ್ತಾರೆ ಮೋಹನ್ ಭಟ್. ಕಲಿಕೆಗೆ ಮೂಲ ಪೆನ್. ಸಂಸ್ಕಾರಕ್ಕೆ, ಬರವಣಿಗೆಗೆ ಎಲ್ಲವುಗಳಿಗೂ ಲೇಖನಿ ಬೇಕೆ ಬೇಕು. ನಾನು ಪೆನ್ ಕೊಡುಗೆಯಾಗಿ ನೀಡಿದ್ದು ಕೆಲವರಿಗಾದರೂ ಸ್ಪೂತರ್ಿ ತಂದು ಇನ್ನಷ್ಟು ಬರವಣಿಗೆಯಲ್ಲಿ ತೊಡಗಿಕೊಂಡರೆ ಅಷ್ಟೇ ಸಾಕು ಎನ್ನುವ ಮೋಹನ ಭಟ್ಟರು ಮುಂದಿನ ದಿನಗಳಲ್ಲಿ ಇನ್ನಷ್ಟು ಪೆನ್ ನೀಡುವುದಾಗಿಯೂ ಹೇಳುತ್ತಾರೆ.
ಸಾಹಿತ್ಯಿಕ ಕುಟುಂಬ :
ಪೆನ್ ಮೋಹನ ಭಟ್ಟರದ್ದು ಸಾಹಿತ್ಯಿಕ ಕುಟುಂಬ. ತಂದೆ ನಾರಾಯಣ ಭಟ್ಟರು ಸ್ವಾತಂತ್ರ್ಯ ಹೋರಾಟಗಾರರು. ಮಹಾತ್ಮಾಗಾಂಧೀಜಿಯವರ ಒಡನಾಡಿಗಳು. ಹಿರಿಯರಾದ ಪ. ಸು. ಭಟ್ ಇವರ ದೊಡ್ಡಪ್ಪನ ಮಗ, ಪ. ಸು. ಭಟ್ಟರ ತಮ್ಮ ಜಿ. ಎಸ್. ಭಟ್ ಹಿರಿಯ ಪತ್ರಕರ್ತರು ಹಾಗೂ ಬರಹಗಾರರು. ಅದೇ ರೀತಿ ಮೋಹನ ಭಟ್ಟರ ಪುತ್ರಿ ಲೀನಾ ಭಟ್ ಇದೀಗ ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಾತರ್ಿಯಾಗಿ ಹೆಸರು ಮಾಡುತ್ತಿದ್ದಾರೆ. ಇದರ ಜೊತೆಗೆ ಮೋಹನ ಭಟ್ಟರದು ಪತ್ನಿ, ಆಡಿಯೋ ಇಂಜಿ8ನಿಯರ್ ಆಗಿರುವ ಮಗ ವಿವವೇಕ ಅವರೊಂದಿಗಿನ ಸುಖಿ ಕುಟುಂಬ.
ಇಂಗ್ಲೀಷ್ ಮಾಧ್ಯಮಕ್ಕೆ ಜನ ಮರುಳಾಗುತ್ತಿರುವ ಈ ಸಂದರ್ಭದಲ್ಲಿ ಮೋಹನ ಭಟ್ಟರಂತಹ ಕೆಲವು ಅಪರೂಪದ ವ್ಯಕ್ತಿಗಳು ಕನ್ನಡಾಭಿಮಾನ ಬೆಳೆಸುವಲ್ಲಿ ತಮ್ಮ ಕಿರು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪೆನ್ ಕೊಡುಗೆಯಾಗಿ ನೀಡುವ ಮೂಲಕ ಲೇಖಕನಲ್ಲಿನ ಸಾಹಿತ್ಯಕ್ಕೆ ಇನ್ನಷ್ಟು ಸ್ಪೂತರ್ಿ ನೀಡುತ್ತಿದ್ದಾರೆ. ತಮ್ಮದೇ ಆದ ಮಾರ್ಗದ ಮೂಲಕ ಕನ್ನಡಾಭಿಮಾನ ಬೆಳೆಸಲು ಕಾರಣಕರ್ತರಾಗುತ್ತಿದ್ದಾರೆ.

-------------------

ತಂದೆಯವರ ಪೆನ್ ಕೊಡುಗೆ ನೀಡುವ ಹವ್ಯಾಸ ಖುಷಿಯಿದೆ. ಅವರು ಪೆನ್ ನೀಡುವುದು ನಮಗೆ ಯಾವಾಗಲೂ ತೊಂದರೆ ಎನ್ನಿಸಿಯೇ ಇಲ್ಲ. ಮನೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪುಸ್ತಕಗಳನ್ನು ಇಟ್ಟಿದ್ದಾರೆ ಎನ್ನುವುದೂ ಕೂಡ ನಮಗೆ ತೊಂದರೆ ತಂದಿಲ್ಲ. ಬದಲಾಘಿ ನಮಗೆ ಬೇಕಾದಂತಹ ಪುಸ್ತಕಗಳು ಸುಲಭವಾಗಿ ಸಿಗುತ್ತದೆ ಎನ್ನುವ ಖುಷಿ ಇದೆ.

ಲೀನಾ ಭಟ್
ಮೋಹನ ಭಟ್ಟರ ಪುತ್ರಿ


Saturday, November 19, 2016

ಅಳಿವಿನಂಚಿನಲ್ಲಿರುವ ಅಳಿಲು ತಂದ ಸಂಕಷ್ಟ / ತೆಂಗು ಬೆಳೆಗಾರರಿಗೆ ಕೆಂಪಳಿಲಿನಿಂದ ನಷ್ಟ

ವಿನಾಶದ ಅಂಚಿನಲ್ಲಿರುವ ಕೆಂಪಳಿಲುಗಳಿಂದ ತೆಂಗು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಕೆಂಪು ಅಳಿಲುಗಳ ಕಾಟವನ್ನು ತಡೆಯಲಾರದೇ ತೆಂಗು ಬೆಳೆಗಾರರು ದಿನದಿಂದ ದಿನಕ್ಕೆ ಹೈರಾಣಾಗುತ್ತಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಕೆಂಪು ಅಳಿಲುಗಳನ್ನು ಸ್ಥಳೀಯವಾಗಿ ಕೆಂಜಳಿಲು, ಕೆಂಪು ಬಾಲದ ಅಳಿಲು, ಕೇಶ ಅಳಿಲು ಎಂದೆಲ್ಲ ಕರೆಯುತ್ತಾರೆ. ಮಲಬಾರ್ ಗ್ರೇಟ್ ಸ್ಕ್ವೀರಲ್ ಎಂದು ಕರೆಸಿಕೊಳ್ಳುವ ಇವು ದಶಕಗಳ ಹಿಂದೆ ಹೇರಳವಾಗಿದ್ದವು. ಆದರೆ ಬೇಟೆಗಾರರರ ದುರಾಸೆಗೆ ಬಲಿಯಾಗಿ ಅಳಿವಿನ ಅಂಚನ್ನು ತಲುಪಿದೆ. ಇದೀಗ ಕೇಂದ್ರ ಸರಕಾರವು ಕೆಂಪು ಅಳಿಲನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಈ ಪ್ರಾಣಿ ನಡೆಸುತ್ತಿರುವ ಉಪಟಳವನ್ನು ಸಹಿಸಲಾರದೇ ತೆಂಗು ಬೆಳೆಗಾರ ಕೈಚೆಲ್ಲಿದ್ದಾನೆ.
35 ರಿಂದ 40 ಸೆಂ.ಮಿ ಉದ್ದ ಬೆಳೆಯುವ ಕೆಂಪು ಅಳಿಲುಗಳು ಕಾಡು ಹಣ್ಣುಗಳನ್ನು, ಎಲೆಗಳನ್ನು ಆಹಾರಕ್ಕಾಗಿ ಉಪಯೋಗಿಸುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಡುಗಳಲ್ಲಿ ಆಹಾರದ ಅಭಾವ ಎದುರಾಗಿರುವ ಕಾರಣ ನಾಡಿನತ್ತ ಲಗ್ಗೆ ಇಡುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ತೆಂಗಿನ ತೋಟಗಳಿಗೆ ಇವುಗಳು ಲಗ್ಗೆ ಇಡಲು ಆರಂಭಿಸಿವೆ. ಮರದಿಂದ ಮರಕ್ಕೆ ಕುಪ್ಪಳಿಸುತ್ತ, ಜಿಗಿಯುತ್ತ ಸಾಗಿವ ಇವುಗಳು ದಿನವೊಂದಕ್ಕೆ 4-5 ತೆಂಗಿನಕಾಯಿಗಳನ್ನು ಕೊರೆದು, ನೀರನ್ನು ಕುಡಿದು ತೆಂಗಿನ ಕಾಯಿಯ ತಿರುಳನ್ನು ತಿನ್ನುತ್ತಿವೆ. ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ಪಶ್ಚಿಮ ಘಟ್ಟದ ಸಾಲುಗಳ ಜಿಲ್ಲೆಗಳ ಹಲವಾರು ತೆಂಗಿನ ಬೆಳೆಗಾರರು ಕೆಂಪು ಅಳಿಲುಗಳ ಕಾಟದಿಂದ ಬೇಸತ್ತಿದ್ದಾರೆ.
ಸಾಮಾನ್ಯವಾಗಿ ಒಂದು ತೆಂಗಿನ ಮರದಲ್ಲಿ ಒಂದು ವರ್ಷಕ್ಕೆ 100 ತೆಂಗಿನಕಾಯಿಗಳು ಇಳುವರಿಯ ರೂಪದಲ್ಲಿ ಬಂದರೆ ಅದರಲ್ಲಿ ಅರ್ಧಕ್ಕರ್ಧ ಕೆಂಪಳಿಲುಗಳಿಗೆ ಆಹಾರವಾಗುತ್ತಿದೆ. ಕೆಲವು ತೆಂಗಿನ ಮರಗಳಲ್ಲಂತೂ ಕೆಂಪಳಿಲುಗಳು ಕೊರೆದು ತೂತು ಮಾಡಿ ತಿಂದ ತೆಂಗಿನಕಾಯಿಯ ಗೊಂಚಲುಗಳೇ ಕಾಣಸಿಗುತ್ತಿವೆ. ಈಗಾಗಲೇ ನುಸಿಪೀಡೆಯಂತಹ ಹಲವು ಸಮಸ್ಯೆಗಳಿಂದ ತೆಂಗಿನ ಬೆಳೆಯ ಲಾಭವನ್ನು ಬಹುತೇಕ ಕಳೆದುಕೊಂಡಿರುವ ಬೆಳೆಗಾರ ಕೆಂಪು ಅಳೀಲುಗಳ ಕಾಟದಿಂದ ಇದ್ದ ಚಿಕ್ಕ ಲಾಭಾಂಶವನ್ನೂ ಕಳೆದುಕೊಳ್ಳುವ ಹಂತ ತಲುಪಿದ್ದಾನೆ.
ಅರಣ್ಯ ಇಲಾಖೆ ಕೆಂಪು ಅಳಿಲುಗಳ ಬೇಟೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟುತ್ತಿದೆ. ಆದರೆ ನಾಡಿಗೆ ಲಗ್ಗೆ ಇಟ್ಟು ತೆಂಗಿನ ಬೆಳೆಯನ್ನು ನಾಶ ಮಾಡುವ ಅಳಿಲುಗಳ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗುತ್ತಿದೆ. ಬೆಳಗಾರರು ಇವುಗಳ ಹಾವಳಿಯನ್ನು ತಡೆಗಟ್ಟಲಾಗದೇ ಕೈಚೆಲ್ಲಿದ್ದಾರೆ. ಕೆಂಪು ಅಳಿಲುಗಳ ಹಾವಳಿ ಇನ್ನಷ್ಟು ಜಾಸ್ತಿಯಾದಲ್ಲಿ ಅವನ್ನು ಬೇಟೆಯಾಡುವುದು ಅನಿವಾರ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಕೆಂಪು ಅಳಿಲು ಮುಂತಾದ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಬೇಟೆ ಕಡ್ಡಾಯವಾಗಿ ನಿಷಿದ್ಧ. ಅಲ್ಲದೇ ಇಂತಹ ಬೇಟೆಗಳನ್ನು ಕೈಗೊಂಡವರಿಗೆ ಕಠಿಣ ಶಿಕ್ಷೆಯೂ ಇದೆ. ಹೀಗಾಗಿ ಅಳಿಲುಗಳನ್ನು ತಡೆಗಟ್ಟುವುದು ಸಾಧ್ಯವಾಗದೇ, ಬೆಳೆ ಉಳಿಸಿಕೊಳ್ಳುವಲ್ಲಿಯೂ ವಿಫಲರಾಗಿರುವ ಬೆಳೆಗಾರರು ಕಂಗಾಲಾಗಿದ್ದಾರೆ.
ಅರಣ್ಯ ಇಲಾಖೆ ಕೆಂಪು ಅಳಿಲುಗಳು ತೆಂಗಿನ ತೋಟದ ಕಡೆಗೆ ದಾಳಿ ಇಡದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇಂತಹ ಅಪರೂಪದ ಪ್ರಾಣಿಗಳಿಗೆ ಅಗತ್ಯವಾಗಿರುವ ಹಣ್ಣಿನ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ನೆಡುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ತೆಂಗಿಗೆ ದಾಳಿ ಇಡುವ ಅಳಿಲುಗಳನ್ನು ಬೆಳೆಗಾರರು ಕೊಲ್ಲುವುದರ ಮೊದಲೇ ಅಧಿಕಾರಿಗಳು ಅವುಗಳ ಸಂರಕ್ಷಣೆಯತ್ತ ಗಮನ ಹರಿಸಬೇಕಾದ ಅಗತ್ಯವಿದೆ.


----------------

ಕೆಂಪು ಅಳಿಲುಗಳ ಹಾವಳಿ ತೀವ್ರವಾಗಿದೆ. ಇದರಿಂದಾಗಿ ದಿನಂಪ್ರತಿ ಕನಿಷ್ಟ 4-5 ತೆಂಗಿನ ಕಾಯಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ವರ್ಷವೊಂದರಲ್ಲಿ ಏನಿಲ್ಲ ಎಂದರೂ 500ಕ್ಕೂ ಹೆಚ್ಚು ತೆಂಗಿನಕಾಯಿಗಳು ಅಳಿಲುಗಳ ಬಾಯಿಗೆ ಬೀಳುತ್ತಿವೆ. ಅರಣ್ಯ ಇಲಾಖೆಗೆ ಈ ಕುರಿತು ಹೇಳಿ ಹೇಳಿ ಸಾಕಾಗಿದೆ. ಕೆಂಪು ಅಳಿಲುಗಳು ತೆಂಗಿನ ಬೆಳೆಗೆ ದಾಳಿ ಇಡದಂತೆ ಕ್ರಮ ಕೈಗೊಳ್ಳುವ ಜರೂರತ್ತು ಅರಣ್ಯ ಇಲಾಖೆಯ ಮೇಲಿದೆ.
ನಂದನ ಹೆಗಡೆ
ತೆಂಗು ಬೆಳೆಗಾರ


Monday, November 14, 2016

ಅಸಲಿ ನೋಟುಗಳನ್ನೇ ನಾಚಿಸುವಂತಹ ವಿನ್ಯಾಸ : ಮಾರುಕಟ್ಟೆಗೆ ಬಂದಿದೆ ನೋಟ್ ಪರ್ಸ್

ಹೋದೆಯಾ ನೋಟು ಅಂದರೆ ಬಂದೆ ಪರ್ಸಾಗಿ ಅಂದ್ಲಂತೆ

ನರೇಂದ್ರ ಮೋದಿಯವರೇನೋ 500 ರು ಹಾಗೂ 100 ರು. ನೋಟುಗಳನ್ನು ನಿಷೇಧಿಸಿದ್ದಾರೆ. ಹಳೆಯ ನೋಟುಗಳು ಗತ ವೈಭವವನ್ನು ಸೇರುತ್ತಿವೆ. ಆದರೆ ಜನರ ಮನಸ್ಸಿನಲ್ಲಿ ಮಾತ್ರ ಆ ನೋಟುಗಳು ಇನ್ನೂ ಅಚ್ಚಳಿಯದೇ ಉಳಿದಿವೆ. ಆ ನೋಟುಗಳ ನೆನಪಿನಲ್ಲಿ ಬಗೆ ಬಗೆಯ ವಿನ್ಯಾಸವನ್ನು ರೂಪಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. 500, ರು ಹಾಗೂ 1000 ರು. ನೋಟುಗಳ ಆಕಾರದ ಪರ್ಸ್ ಗಳು ಮಾರುಕಟ್ಟೆಗೆ ಬಂದಿದ್ದು ಎಲ್ಲರ ಮನಸ್ಸನ್ನು ಸೆಳೆಯುತ್ತಿದೆ.
ಕಪ್ಪು ಹಣ ನಿಷೇಧಿಸುವ ಸಲುವಾಗಿ ನರೇಂದ್ರ ಮೋದಿಯವರು ದೇಶದಾದ್ಯಂತ ನೋಟು ನಿಷೇಧವನ್ನು ಕೈಗೊಂಡಿದ್ದಾರೆ. ಆದರೆ ಮಧ್ಯಮ ವರ್ಗದ ಜನರು ಮಾತ್ರ 500 ಹಾಗೂ 1000 ರು. ನೋಟುಗಳ ಜೊತೆಗಿನ ಅವಿನಾಭಾವ ಸಂಬಂಧವನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. ಕಿರು ಉದ್ದಿಮೆದಾರರು ಈ ನೋಟುಗಳ ನೆನಪಿನಲ್ಲಿ ಪರ್ಸ್ ವಿನ್ಯಾಸ ಮಾಡಿ ಮಾರುಕಟ್ಟೆಗೆ ತಂದಿದ್ದಾರೆ. ನೋಡಲು ಥೇಟ್ ಅಸಲಿ ನೋಟುಗಳಂತೆ ಕಾಣುವ ಈ ಪರ್ಸ್ ಗಳು ಸಾಮಾನ್ಯ ಜನರನ್ನು ಒಂದು ಕ್ಷಣ ಯಾಮಾರಿಸುವಲ್ಲಿ ಸಫಲವಾಗುತ್ತವೆ.
ಈಗಾಗಲೇ ರದ್ದು ಪಡಿಸಿರುವ 500 ರು ಹಾಗೂ 1000 ರು.ಗಳನ್ನು ಬಳಸಿಕೊಂಡು ಪರ್ಸ್ ರೂಪಿಸಲಾಗಿದೆಯೇನೋ ಎನ್ನುವಂತೆ ಕಾಣುವ ಈ ಪರ್ಸ್ ಗಳ ಮುಂಭಾಗ ಹಾಗೂ ಹಿಂಭಾಗದಲ್ಲಿ ನಿಷೇಧಿಸಿರುವ ನೋಟುಗಳಂತೆಯೇ ಇದೆ. ನೋಟುಗಳ ಮೇಲೆ ಇರುವಂತೆ 14 ಭಾಷೆಗಳು, ಮಹಾತ್ಮಾ ಗಾಂಧೀಜಿಯವರ ಪೋಟೋ, ಅಶೋಕ ಸ್ಥಂಭದ ಲಾಂಛನ ಹೀಗೆ ಎಲ್ಲವನ್ನೂ ಹೊಂದಿದೆ. ಆರ್ಬಿಐ ಗವರ್ನರ್ ಅವರ ಸಹಿ, ಜೊತೆಯಲ್ಲಿ ನೋಟಿನ ಮೇಲೆ ಆರ್ಬಿಐ ಮುದ್ರಿಸುವ ರೀತಿಯಲ್ಲಿ ಸಂಖ್ಯೆಗಳೂ ಇದೆ. ಮೇಲ್ನೋಟಕ್ಕೆ ಅಸಲಿಯೆಂಬಂತೆ ಕಾಣುತ್ತದೆಯಾದರೂ ಸೂಕ್ಷ್ಮವಾಗಿ ಗಮನಿಸಿದಾಗ ಈ ನೋಟ್ ಪರ್ಸನ್ನು ತೆಳುವಾದ ಬಟ್ಟೆಯ ಪದರದಿಂದ ಮಾಡಿರುವುದು ಗಮನಕ್ಕೆ ಬರುತ್ತದೆ.
ಶಿರಸಿ ಹಾಗೂ ಹುಬ್ಬಳ್ಳಿಯೆ ಕೆಲವು ಮಳಿಗೆಗಳಲ್ಲಿ ಇಂತಹ ವಿಶಿಷ್ಟ ವಿನ್ಯಾಸದ ನೋಟ್ ಪರ್ಸ್ ಗಳು ಮಾರಾಟಕ್ಕೆ ಲಭ್ಯವಿದೆ. ಈಗಾಗಲೇ ನಿಷೇಧವಾಗಿರುವ ನೋಟುಗಳ ಬಗೆಗೆ ಅವಿನಾಭಾವ ಸಂಬಂಧ ಹೊಂದಿರುವವರು, ಚಿಕ್ಕಮಕ್ಕಳು ಈ ಪರ್ಸ್ ಗಳನ್ನು ವಿಶೇಷ ಆಸಕ್ತಿಯಿಂದ ಗಮನಿಸುತ್ತಿದ್ದು, ಅವನ್ನು ಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ 30 ರುಪಾಯಿಗೆ ಒಂದು ನೋಟ್ ಪರ್ಸ್ ಮಾರಾಟವಾಗುತ್ತಿದೆ. ಕಪ್ಪು ಹಣವನ್ನು ಉತ್ತರ ಭಾರತದಲ್ಲಿ ಸುಟ್ಟ ವಿಷಯಗಳು ಬೆಳಕಿಗೆ ಬರುತ್ತಿದೆ. ಅಲ್ಲದೇ ಗಂಗಾನದಿಯಲ್ಲಿ 500 ರು. ಹಾಗೂ 1000 ರು. ನೋಟುಗಳನ್ನು ತೇಲಿ ಬಿಟ್ಟಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಹೀಗಿದ್ದಾಗಲೇ ಈ ರೀತಿಯ ನೋಟ್ ಪರ್ಸ್ ಮಾರುಕಟ್ಟೆಗೆ ಬಂದಿರುವುದು ಜನಸಾಮಾನ್ಯರಲ್ಲಿ ಒಮ್ಮೆ ಅನುಮಾನವನ್ನೂ ಹುಟ್ಟಿಸಿದೆ. ಆದರೆ ಅಂಗಡಿ ಮಾಲೀಕರುಗಳು ನೋಟ್ ಪರ್ಸ್ ನ ಅಸಲಿ ವಿಷಯವನ್ನು ತಿಳಿಸಿದಾಗಲೇ ಸಮಾಧಾನವನ್ನು ಹೊಂದಿದ್ದಾರೆ.
ಒಟ್ಟಿನಲ್ಲಿ ನೋಟುಗಳು ಹೋದೆಯಾ ಎಂದರೆ ಪರ್ಸ್ ನ ರೂಪದಲ್ಲಿ ಮರಳಿ ಬಂದೆ ಎಂಬಂತಾಗಿದೆ. ವಿಶಿಷ್ಟ ವಿನ್ಯಾಸದ ನೋಟ್  ಪರ್ಸ್ ಕೊಳ್ಳಲು ಕೆಲವರು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ 500 ರು. ಹಾಗೂ 1000 ರು. ನೋಟುಗಳು ಹೀಗಿದ್ದವು ಎಂಬುದನ್ನು ನೆನಪಿಸಿಕೊಳ್ಳಲು ಸಾಧ್ಯವಾಗಲಿ ಎಂದು ನೋಟ್ ಪರ್ಸ್ ಕೊಳ್ಳುವವರು ಅಭಿಪ್ರಾಯಿಸುತ್ತಿದ್ದಾರೆ. ಅಲ್ಲದೇ ಈ ನೋಟು ಪರ್ಸನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ ಎಂದೂ ಹೇಳುತ್ತಾರೆ.
ವಿಶಿಷ್ಟ ನೋಟ್ ಪರ್ಸ್ ಆಕರ್ಷಣೆಗೆ ಕಾರಣವಾಗಿದೆ. ನಿಷೇಧದ ನಡುವೆಯೂ ಹೊಸ ವಿನ್ಯಾಸದ ಮೂಲಕ ಜನರ ಮನಸ್ಸನ್ನು ಇವು ತಲುಪುತ್ತಿವೆ. ತನ್ಮೂಲಕ ನೋಟು ನಿಷೇಧವಾದರೂ ಮಾರುಕಟ್ಟೆಯಲ್ಲಿ ಜೀವಂತವಾಗಿ ಉಳಿದಿದೆ. ಅಚ್ಚರಿಗೆ ಕಾರಣವಾಗಿದೆ.

---------------

ನಾನು ಮಳಿಗೆಯೊಂದರಲ್ಲಿ ಈ ಪರ್ಸನ್ನು ಕಂಡಾಗ ಅಚ್ಚರಿ ಪಟ್ಟಿದ್ದೆ. ಅಸಲಿ ನೋಟಿನಂತೆ ಭಾಸವಾಗಿತ್ತು. ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯಿತು. ಕೂಡಲೇ ನಾನು ಇವನ್ನು ಕೊಂಡಿದ್ದೇನೆ. ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ.
ಮೋಹನ್ ಭಟ್
ಶಿರಸಿ

==============

(ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

500, 1000 ರು. ನೋಟು ನಿಷೇಧ : ಗುತ್ತಿಗೆದಾರರಿಗೆ ಸಂಕಷ್ಟ, ಗುತ್ತಿಗೆ ಕೆಲಸಕ್ಕೆ ಬಾರದ ಕೆಲಸಗಾರರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 500 ರು ಹಾಗೂ 1000 ರು. ನೋಟುಗಳನ್ನು ರದ್ದು ಮಾಡಿ ನಾಲ್ಕು ದಿನಗಳು ಕಳೆದಿದೆ. ಕಳೆದ ನಾಲ್ಕು ದಿನಗಳಿಂದ ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಡೆಸುವ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ನೋಟು ನಿಷೇಧದ ಪರಿಣಾಮ ಗುತ್ತಿಗೆದಾರರು ಹಾಗೂ ಕೆಲಸಗಾರರ ಮೇಲೆ ಪರಿಣಾಮವನ್ನು ಉಂಟುಮಾಡಿದೆ.
ರಾಜ್ಯ ಸರಕಾರ ವಿವಿಧ ಇಲಾಖೆಗಳ ಅಡಿಯಲ್ಲಿ ಕಾಮಗಾರಿ ಕೈಗೊಳ್ಳಲು ಇತ್ತೀಚೆಗೆ ಹಣ ಬಿಡುಗಡೆ ಮಾಡಿದೆ. ಇದರಿಂದಾಗಿ ಕಳೆದ 15 ದಿನಗಳ ಅವಧಿಯಲ್ಲಿ ರಸ್ತೆ ಕಾಮಗಾರಿ, ಹೊಂಡ ತುಂಬುವಿಕೆ, ಕಾಲು ಸಂಕ ನಿಮರ್ಾಣ ಸೇರಿದಂತೆ ಸರಕಾರದ ವಿವಿಧ ಇಲಾಖೆಯ ಅಡಿಯ ಕಾಮಗಾರಿಗಳು ಪ್ರಗತಿಯನ್ನು ಕಂಡಿದ್ದವು. ಟೆಂಡರ್ ಮೂಲಕ ಕಾಮಗಾರಿಗಳ ಗುತ್ತಿಗೆ ಹಿಡಿದ ಗುತ್ತಿಗೆದಾರರು ಕೆಲಸವನ್ನು ಆರಂಭಿಸಿದ್ದರು. ಆದರೆ ನರೇಂದ್ರ ಮೋದಿಯವರು 500 ಹಾಗೂ 1000 ರು. ನೋಟು ನಿಷೇಧಿಸಿದ ಕೂಡಲೇ ಈ ಕಾಮಗಾರಿಗಳೆಲ್ಲ ಅರ್ಧಕ್ಕೆ ನಿಂತುಬಿಟ್ಟಿವೆ.
ಕಾಮಗಾರಿ ನಿಲುಗಡೆಗೆ ಗುತ್ತಿಗೆದಾರರು ಕೊಡುತ್ತಿರುವ ಕಾರಣ ಮಾತ್ರ ಸ್ಪಷ್ಟ. ಗುತ್ತಗೆದಾರರು ಯಾವುದೇ ಕಾಮಗಾರಿಗಳಿದ್ದರೂ ದಿನಗೂಲಿಯ ಲೆಕ್ಕದಲ್ಲಿ ಕೆಲಸಗಾರರನ್ನು ಕರೆಸಿ ಕಾಮಗಾರಿ ಕೈಗೊಳ್ಳುತ್ತಾರೆ. ಮರು ಡಾಂಬರೀಕರಣ ಅಥವಾ ಇನ್ಯಾವುದೇ ಸರಕಾರಿ ಕಾಮಗಾರಿಗಳನ್ನು ಕೈಗೊಳ್ಳುವುದಾದಲ್ಲಿ ಕೃಷಿ ಕೂಲಿಗಿಂತ ಜಾಸ್ತಿ ದಿನಗೂಲಿಯನ್ನು ಈ ಕೆಲಸಗಾರರು ಬಯಸುತ್ತಾರೆ. ಬಹುತೇಕ ಕೆಲಸಗಾರರಿಗೆ 400 ರಿಂದ 500 ರು. ಕೊಡಲೇಬೇಕು. ಇದೀಗ ಕೇಮದ್ರ ಸರಕಾರ 500 ರು. ನೋಟನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ತಿಳಿದ ದಿನಗೂಲಿ ನೌಕರರು ಗುತ್ತಿಗೆದಾರರು ನೀಡುವ 500 ರು. ನೋಟನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ದಿನಗೂಲಿ ಕೆಲಸಗಾರರಿಗೆ 100 ರುಪಾಯಿಯ ನೋಟುಗಳ ಮೂಲಕ ದಿನಗಲೂಯನ್ನು ನೀಡೋಣವೆಂದರೆ ಗುತ್ತಿಗೆದಾರರ ಬಳಿ ನಿಗದಿತ ಮೊತ್ತದ ಚಿಲ್ಲರೆ ಹಣವಿಲ್ಲ. ಇರುವ ನೋಟನ್ನು ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ಹೈರಾಣಾಗುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.
ಗುತ್ತಿಗೆದಾರರು ಬ್ಯಾಂಕ್ಗಳಿಗೆ ತೆರಳಿ 500 ರು. ನೋಟಿಗೆ ಬದಲಾಗಿ 100 ರು. ನೋಟನ್ನು ಪಡೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಬ್ಯಾಂಕುಗಳಲ್ಲಿ ಹೆಚ್ಚಿದ ಜನಜಂಗುಳಿಯಿಂದಾಗಿ ನಿಗದಿತ ಹಣ ಪಡೆಯುವುದೂ ಕೂಡ ಸಾಧ್ಯವಾಗುತ್ತಿಲ್ಲ. ಅಲ್ಲದೇ ಪ್ರತಿಯೊಂದು ಕಾಮಗಾರಿ ಕೈಗೊಳ್ಳು ಕನಿಷ್ಟ 25 ದಿನಗೂಲಿ ನೌಕರರ ಅಗತ್ಯವಿದ್ದು ಅವರೆಲ್ಲರಿಗೂ 500 ರು. ನಂತೆ ಕೊಡಬೇಕು. ಈ ಮೊತ್ತವನ್ನು ಬ್ಯಾಂಕಿನಿಂದ ಪಡೆದರೆ, ಬ್ಯಾಂಕಿಗೆ ನಿಗದಿತ ದಾಖಲೆ ಹಾಗೂ ಆದಾಯದ ಮೂಲವನ್ನು ತಿಳಿಸಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮೊತ್ತದ ಹಣದ ಕುರಿತು ಅಧಿಕಾರಿಗಳು ಪ್ರಶ್ನಿಸಿದರೆ ಅವರಿಗೆ ಮಾಹಿತಿಯನ್ನು ಒದಗಿಸುವುದು ಕಷ್ಟವಾಗಬಹುದು. ಹೀಗಾಗಿ ನೋಟಿನ ಸಮಸ್ಯೆ ಮುಗಿಯುವ ವರೆಗೂ ಕಾಮಗಾರಿಗಳನ್ನು ನಿಲ್ಲಿಸಲಾಗುತ್ತದೆ ಎಂಬುದು ಗುತ್ತಿಗೆದಾರರ ಅಭಿಪ್ರಾಯವಾಗಿದೆ.
ಇದಕ್ಕೆ ಪ್ರತಿಯಾಗಿ ದಿನಗೂಲಿ ನೌಕರರು ಹೇಳುವುದೇ ಬೇರೆ. ದಿನಂಪ್ರತಿ 400-500 ರು. ದಿನಗೂಲಿ ನೀಡುತ್ತಿದ್ದರು. ಆದರೆ ನೋಟು ರದ್ದು ಮಾಡಲಾಗಿದೆ. ನಾವು ನೋಟನ್ನು ಪಡೆದರೂ ಅದನ್ನು ಚಲಾವಣೆ ಮಾಡುವುದು ಕಷ್ಟ. ಅಲ್ಲದೇ ದಿನಗೂಲಯ ಮೂಲಕ ಜೀವನ ನಡೆಸುವವರಿಗೆ ಪ್ರತಿದಿನ ಬ್ಯಾಂಕಿಗೆ ಹೋಗಿ ಹಣ ಬದಲಾವಣೆ ಮಾಡುವುದು ಅಸಾಧ್ಯದ ಮಾತು. ಹೀಗಾಗಿ ಗುತ್ತಿಗೆದಾರರ ಬಳಿ 500ರ ನೋಟಿನ ಬದಲಾಗಿ 100ರ ನೋಟುಗಳನ್ನೇ ನೀಡಬೇಕು ಎಂದು ಹೇಳಲಾಗುತ್ತಿದೆ. ಆದರೆ ಗುತ್ತಗೆದಾರರ ಬಳಿಯೂ 100 ನೋಟುಗಳಿಲ್ಲ. ಕಾಮಗಾರಿಗಳು ನಿಲುಗಡೆಯಾಗುವ ಹಂತಕ್ಕೆ ಬಂದಿದೆ. ದಿನಗೂಲಿ ನೌಕರರಿಗೂ ಹಾಗೂ ಗುತ್ತಗೆದಾರರಿಗೂ ಸಮಸ್ಯೆಯಾಗುತ್ತಿದೆ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ವಿವಿಧ ಇಲಾಖೆಗಳ ಇಂಜಿನಿಯರುಗಳು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಯ ನಿಗದಿ ಪಡಿಸಿದ್ದಾರೆ. ಆದರೆ ನೋಟುಗಳ ಅಭಾವದಿಂದ ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಕೈಗೊಳ್ಳಲಾಗದೇ ಗುತ್ತಿಗೆದಾರರು ಹೈರಾಣಾಗುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಕಾಮಗಾರಿಗಳು ಅರ್ಧಕ್ಕೆ ನಿಂತರೆ ಅವುಗಳ ಗುಣಮಟ್ಟ ಕಾಪಾಡುವುದೂ ಕೂಡ ಸಮಸ್ಯೆಯಾಗುತ್ತದೆ. ನೋಟು ನಿಷೇಧವನ್ನು ಗಮನದಲ್ಲಿ ಇರಿಸಿಕೊಂಡು ಈಗಾಗಲೇ ನಿಗದಿ ಮಾಡಿಸುವ ಸಮಯದಲ್ಲಿ ಸಡಿಲ ನೀತಿಯನ್ನು ಅನುಸರಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಕಪ್ಪು ಹಣದ ವಿರುದ್ಧ ಸಮರ ಸಾರುವ ನಿಟ್ಟಿನಲ್ಲಿ ಮೋದಿಯವರು ತೆಗೆದುಕೊಂಡಿರುವ ನಿಧರ್ಾರ ಕೆಲವು ಕಡೆಗಳಲ್ಲಿ ಸಮಸ್ಯೆಗಳನ್ನೂ ಉಂಟುಮಾಡುತ್ತಿದೆ. ಈ ಸಮಸ್ಯೆಗಳು ಬೇಗನೆ ಪರಿಹಾರವಾಗಲಿ ಎನ್ನುವ ಆಶಯವೂ ಗುತ್ತಿಗೆದಾರರು ಹಾಗೂ ದಿನಗೂಲಿ ನೌಕರರದ್ದಾಗಿದೆ.

-----------------

500 ರು. ನೋಟು ನಿಷೇಧ ಸಾಕಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿದೆ. ದಿನಗೂಲಿ ನೌಕರರಿಗೆ 500 ರು. ನೀಡಿ ಕೆಲಸ ಮಾಡಿಸಿಕೊಲ್ಳಬೇಕಿತ್ತು. ಆದರೆ ಈ ನೌಕರರು 500 ರು. ನೋಟನ್ನು ತೆಗೆದುಕೊಳ್ಳುತ್ತಲೇ ಇಲ್ಲ. ನಮ್ಮ ಬಳಿ ಚಿಲ್ಲರೆ ಇಲ್ಲ. ಹೀಗಾಗಿ ಕೆಲಸಗಾರರಿಗೆ ಹಣ ನೀಡುವುದು ಕಷ್ಟವಾಗುತ್ತಿದೆ. ಕಾಮಗಾರಿಗಳೆಲ್ಲ ನಿಲುಗಡೆಯ ಹಂತ ಬಂದು ತಲುಪಿದೆ. ನರೇಂದ್ರ ಮೋದಿಯವರ ಕೆಲಸದ ಬಗ್ಗೆ ಮೆಚ್ಚುಗೆಯಿದೆ. ಆದರೆ ನಮ್ಮ ಮಟ್ಟಿಗೆ ಸಮಸ್ಯೆಗಳಾಗುತ್ತಿವೆ. ಈ ಸಮಸ್ಯೆ ಶೀಘ್ರ ಪರಿಹಾರವಾಗುವ ನಿರೀಕ್ಷೆಯಲ್ಲಿದ್ದೇವೆ.
ನವೀನಕುಮಾರ
ಗುತ್ತಿಗೆದಾರ

--------------------

(ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

Saturday, November 12, 2016

ಸಿಕ್ಕಿತು ಸ್ವಾತಂತ್ರ್ಯ

ಸಿಕ್ಕಿತು ಸ್ವಾತಂತ್ರ್ಯ
ಕೊನೆಗೂ ಸಿಕ್ಕಿತು ಸ್ವಾತಂತ್ರ್ಯ |

ಬಸಿದ ಬೆವರು
ಹರಿದ ನೆತ್ತು
ಕಳೆದ ಜೀವಗಳು, ಸಿಕ್ಕಿತು ಸ್ವಾತಂತ್ರ್ಯ|

ಭಾರತೀಯರ ಛಲ
ಹೋರಾಟದ ಫಲ
ಆಂಗ್ಲನಾಡು ದುರ್ಬಲ, ಸಿಕ್ಕಿತು ಸ್ವಾತಂತ್ರ್ಯ |

ಕಳೆದ ದಾಸ್ಯ
ಸ್ವಾಭಿಮಾನಿಯ ಭಾಷ್ಯ
ರಾಷ್ಟ್ರೀಯತೆಯ ದೃಶ್ಯ, ಸಿಕ್ಕಿತು ಸ್ವಾತಂತ್ರ್ಯ |

ಮೆರೆದ ದೇಶಭಕ್ತಿ
ಮುರಿದ ಕುಟಿಲಯುಕ್ತಿ
ಗೆದ್ದ ಜನರ ಪ್ರೀತಿ, ಸಿಕ್ಕಿತು ಸ್ವಾತಂತ್ರ್ಯ |

ಗಾಂಧೀಜಿಯ ಶಾಂತಿ
ಸುಭಾಷರ ಕ್ರಾಂತಿ
ಸಿಕ್ಕಿತು ಹೊಸ ನೀತಿ, ಸಿಕ್ಕಿತು ಸ್ವಾತಂತ್ರ್ಯ ||

----------------

(ಈ ಕವಿತೆಯನ್ನು ಬರೆದಿರುವುದು 9-08-2006ರಂದು, ದಂಟಕಲ್ಲಿನಲ್ಲಿ, ಅಜಮಾಸು 10 ವರ್ಷಗಳ ಹಿಂದಿನ ಕವಿತೆ ಇದು. ಸ್ವಾತಂತ್ರ್ಯ ಹೋರಾಟದ ಕುರಿತಂತೆ ಆ ದಿನಗಳಲ್ಲಿ ಸುಮ್ಮನೆ ಬರೆದಿದ್ದು. ಓದಿ ಹೇಳಿ )

Thursday, November 10, 2016

500, 1000 ರು. ನೋಟು ನಿಷೇಧ : ದೇವಸ್ಥಾನಗಳ ಹುಂಡಿ ಒಡೆಯಲು ನಿರ್ಧಾರ

ಅರ್ಚಕರು ದೇವಸ್ಥಾನಗಳ ಹುಂಡಿ ಒಡೆಯಲು ಮುಂದಾಗಿದ್ದಾರೆಯೇ? ಹೌದು. ಅಚ್ಚರಿ ಪಡಬೇಡಿ. ಇದು ಮಂಗಳವಾರ ಪ್ರಧಾನಿ ನರೇಂದ್ರ ಮೋಡಿಯವರು ದೇಶದಾದ್ಯಂತ 500 ಹಾಗೂ 100 ರು. ನೋಟು ನಿಷೇಧಿಸಿದ ಪರಿಣಾಮ.
ಎಲ್ಲ ದೇವಸ್ಥಾನಗಳಲ್ಲಿಯೂ ಕಾಣಿಕೆ ಹುಂಡಿಗಳಿರುತ್ತವೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಕಾಣಿಕೆ ಹುಂಡಿಯಲ್ಲಿ ಹಣವನ್ನು ಹಾಕುತ್ತಾರೆ. ದಿನವಹಿ ಸಾವಿರಾರು ರು.ಗಳವರೆಗೆ ಇಂತಹ ಕಾಣಿಕೆ ಹುಂಡಿಗಳಲ್ಲಿ ಹಣ ಸಂಗ್ರಹವಾಗುತ್ತದೆ. ಇದೀಗ ದೇಶದಾದ್ಯಂತ 500 ರು. ಹಾಗೂ 1000 ರು. ನೋಟುಗಳನ್ನು ರದ್ದುಪಡಿಸಿರುವುದರಿಂದ ಈ ಕಾಣಿಕೆ ಹುಂಡಿಗಳನ್ನು ತೆರೆಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ದೇವಸ್ಥಾನಗಳ ಆಡಳಿತವನ್ನು ನೋಡಿಕೊಳ್ಳುತ್ತಿರುವವರು ಇಂತಹ ಹುಂಡಿಗಳನ್ನು ತೆರೆಯಲು ಮುಂದಾಗಿದ್ದಾರೆ.
ಪ್ರತಿ ಕಾಣಿಕೆ ಹುಂಡಿಗಳಲ್ಲಿಯೂ ಬಹುಪಾಲು ಚಿಲ್ಲರೆ ಮೊತ್ತ ಸಂಗ್ರಹವಾಗುತ್ತದೆ. ಆಗೊಮ್ಮೆ ಈಗೊಮ್ಮೆ 10, 50 ಹಾಗೂ 100 ರು. ನೋಟುಗಳನ್ನೂ ಕಾಣಿಕೆಯ ಮೊತ್ತದಲ್ಲಿ ಹಾಕಲಾಗುತ್ತದೆ. ಸ್ವಲ್ಪ ಹೆಸರು ಮಾತಿನ ದೇವಸ್ಥಾನಗಳಾದರೆ ಅಂತಹ ದೇವಸ್ಥಾನಗಳ ಕಾಣಿಕೆ ಹುಂಡಿಗೆ ಹಾಕುವ ಮೊತ್ತವೂ ಜಾಸ್ತಿಯಾಗುತ್ತದೆ. ಪ್ರಸಿದ್ಧ ಸ್ಥಳಗಳಲ್ಲಿ 100ಕ್ಕಿಂತ ಹೆಚ್ಚಿನ ಅಂದರೆ 500 ಹಾಗೂ 1000 ರು. ನೋಟುಗಳನ್ನೂ ಕಾಣಿಕೆ ಹಾಕುವುದುಂಟು. ಇದೀಗ 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿರುವುದರಿಂದ ಕಾಣಿಕೆ ಹುಂಡಿಗಳಲ್ಲಿ ಸಂಗ್ರಹವಾಗಿರುವ ಇಂತಹ ನೋಟುಗಳನ್ನು ಬ್ಯಾಂಕಿಗೆ ಮರಳಿಸುವ ಅನಿವಾರ್ಯತೆ ಉಂಟಾಗಿದೆ
           ಡಿಸೆಂಬರ್ 31ರ ಒಳಗೆ ಈ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿಸದೇ ಇದ್ದಲ್ಲಿ ಈ ನೋಟುಗಳು ಬೆಲೆ ಕಳೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ಈಗಾಗಲೇ ಕಾಣಿಕೆ ಹುಂಡಿಯನ್ನು ತೆರೆದು ಅದರಲ್ಲಿ ಸಂಗ್ರಹವಾಗಿರುವ 500 ಹಾಗೂ 1000 ರು. ನೋಟುಗಳನ್ನು ವಿಂಗಡಿಸಲು ಮುಂದಾಗಿದೆ. ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿ ಕಾಣಿಕೆ ಹುಂಡಿಗಳನ್ನು ಒಡೆದು, ನೋಟುಗಳ ವಿಂಗಡಣೆ ಮಾಡಲು ಮುಂದಾಗಿದ್ದಾರೆ.
ಕಾಣಿಕೆ ಹುಂಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ 500 ಹಾಗೂ 100 ನೋಟುಗಳು ಸಿಗುವುದಿಲ್ಲ. ಚಿಲ್ಲರೆಗಳು ಹಾಗೂ 10, 20ರು ನೋಟುಗಳೇ ಅಧಿಕವಾಗಿರುತ್ತವೆ. ಹುಂಡಿಯನ್ನು ತೆರೆದು ಹುಡುಕಿದರೆ ಒಂದೊಂದು ಹುಂಡಿಗಳಲ್ಲಿ 5-10ರಷ್ಟು ಮಾತ್ರ ದೊಡ್ಡ ಮೊತ್ತದ ನೋಟುಗಳು ಸಿಗಬಹುದು. ಯಾರಾದರೂ ಹರಕೆಯನ್ನು ಹೊತ್ತುಕೊಂಡಿದ್ದರೆ ಅಂತವರು ಮಾತ್ರ ದೊಡ್ಡ ಮೊತ್ತವನ್ನು ಕಾಣಿಕೆ ಹಾಕುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಾತ್ರ ಕಾಣಿಕೆ ಹುಂಡಿಗಳಲ್ಲಿ 500 ರಿಂದ 1000 ರು. ನೋಟುಗಳು ಸಿಗಬಹುದಾಗಿದೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿ ಆದೇಶ ಹೊರಡಿಸಿರುವುದು ದೇವಸ್ಥಾನಗಳ ಕಾಣಿಕೆ ಹುಂಡಿಗಳ ಮೇಲೂ ಪರಿಣಾಮವನ್ನು ಬೀರಿದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಭರ್ತಿಯಾದಾಗ ಮಾತ್ರ ತೆರೆಯಲಾಗುತ್ತದೆ. ಆದರೆ ಮೋದಿಯವರ ಅದೇಶದಿಂದ ಕಾಣಿಕೆ ಹುಂಡಿ ಭರ್ತಿಯಾಗುವ ಮೊದಲೇ ತೆರೆದು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಂಡಿ ತೆರೆಯುವ ಆಡಳಿತ ಮಂಡಳಿ ನಿರ್ಧಾರ ಜನಸಾಮಾನ್ಯರಲ್ಲಿ ವಿಸ್ಮಯಕ್ಕೂ ಕಾರಣವಾಗಿದೆ.

-------------

ಚಿಕ್ಕ ದೇವಸ್ಥಾನದ ಹುಂಡಿಗಳನ್ನು ಸಾಮಾನ್ಯವಾಗಿ ವರ್ಷಕ್ಕೆ ಒಂದು ಸಾರಿಯೋ ಅಥವಾ ಎರಡು ಸಾರಿಯೋ ತೆರೆಯಲಾಗುತ್ತದೆ. ಅಥವಾ ಹುಂಡಿಗಳು ಭರ್ತಿಯಾದಾಗ ತೆರೆಯಲಾಗುತ್ತದೆ. ಆದರೆ ಈಗ 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿರುವ ಕಾರಣ ಹುಂಡಿಗಳನ್ನು ತೆರೆಯಲೇಬೇಖಾದ ಅನಿವಾರ್ಯತೆ ಉಂಟಾಗಿದೆ. ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ಸೇರಿಕೊಂಡಿದ್ದರೆ ಅವುಗಳನ್ನು ಬ್ಯಾಂಕಿಗೆ ನೀಡುವ ಕಾರಣಕ್ಕಾಗಿ ತಪಾಸಣೆ ಅಗತ್ಯವಾಗಿದೆ. ಇಲ್ಲವಾದಲ್ಲಿ ಹುಂಡಿಗಳಲ್ಲಿನ ನೋಟುಗಳು ಯಾರ ಗಮನಕ್ಕೂ ಬಾರದಂತೇ ಬೆಲೆ ಕಳೆದುಕೊಳ್ಳುವ ಸಂದರ್ಭ ಬರಬಹುದಾಗಿದೆ. ಈ ನಿಟ್ಟಿನಲ್ಲಿ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳವರು ಕಾಣಿಕೆ ಹುಂಡಿ ತೆರೆಯುವ ನಿರ್ಕೈಧಾರಗೊಂಡಿದ್ದಾರೆ.
ಶ್ರೀಹರಿ ಭಟ್
ಅರ್ಚಕರು
ಬಾಣಸವಾಡಿ
ಬೆಂಗಳೂರು


(ನ.10ರ ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

Thursday, November 3, 2016

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -6

(ಸಮರ್ಥ ರಾಮದಾಸರ ಸಮಾಧಿಯಿರುವ ಮಂದಿರ)
            ಸಂಜಯ ಧ್ಯಾನಸ್ಥನಾದಂತಿದ್ದ. ನಾನು ಅವನ ವೀಡಿಯೋ ಮಾಡುತ್ತಲೇ ಇದ್ದೆ. ಈ ನಡುವೆ ಮೊಬೈಲ್ ಮೆಮೋರಿ ಸಾಕಷ್ಟು ಭರ್ತಿಯಾಗಿ ಮೊಬೈಲ್ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಲು ಆರಂಭಿಸಿತ್ತು. ನಾನು ಸಂಜಯನನ್ನು ಕೂಗಿ ಕರೆದೆ. ಕೆಲ ಕಾಲದ ನಂತರ ಆತ ಹತ್ತಿ ಬಂದ. ನನ್ನ ಮೂಬೈಲನ್ನು ಅವನ ಬಳಿ ಕೊಟ್ಟು ನಾನು ಸಜ್ಜನ ಘಡ ಒಂದು ಮೂಲೆಯ ತುತ್ತ ತುದಿಯಲದಲಿ ಹೋಗಿ ನಿಂತೆ. ಸಾಕಷ್ಟು ಪೋಟೋಗಳನ್ನು ಕ್ಲಿಕ್ಕಿಸಿಯಾಯಿತು. ಅಷ್ಟರಲ್ಲಿ ಮೂರ್ನಾಲ್ಕು ಸಾರಿ ತುಂತುರು ಮಳೆ ನಮ್ಮನ್ನು ಸಾಕಷ್ಟು ಒದ್ದೆಯನ್ನು ಮಾಡಿತ್ತು. ಭೋರ್ರೆನ್ನುವ ಗಾಳಿ ಕಿವಿಯ ಮೂಲಕ ನಮ್ಮ ಬೆನ್ನುಮೂಳೆಯ ಆಳವನ್ನು ತಲುಪಿ ನಡುಕ ಹುಟ್ಟಿಸಿತ್ತು.
          ವಾಪಾಸಾದೆವು. ವಾಪಾಸಾದರೆ ಪ್ರಶಾಂತ ಭಾವ ಕಾಣಲೊಲ್ಲ. ಎಲ್ಲೋ ಹೋಗಿರಬೇಕು ಎಂದುಕೊಂಡು ಹುಡುಕಾಡಿದೆವು. ಕಾಣಲಿಲ್ಲ. ಸುತ್ತಮುತ್ತ ಹುಡುಕಿದೆವು. ಊಹೂ ಆತನ ಸುಳಿವಿರಲಿಲ್ಲ. `ಇಂವ ಎತ್ಲಾಗ್ ನಾಪತ್ತೆಯಾದ್ನೋ ಮಾರಾಯಾ..' ಎಂದುಕೊಂಡು ಹುಡಕಾಡುತ್ತಿದ್ದಾಗಲೇ ನನ್ನ ಪೋನ್ ರಿಂಗಣಿಸುತ್ತಿತ್ತು. ನಾನು ಅದನ್ನೆತ್ತಿ ಮಾತನಾಡಿದಾಗ ಪ್ರಶಾಂತ ಭಾವ ತಾನು ರೂಮ್ ತಲುಪಿದ್ದೇನೆಂದೂ, ಅಲ್ಲಿಗೆ ಬರಬೇಕೆಂದೂ ಹೇಳಿದ್ದ.
           ರೂಮಿಗೆ ತೆರಳಿ ಮಧ್ಯಾಹ್ನ ಎಷ್ಟು ಹೊತ್ತಿಗೆ ಹೊರಡುವುದು ಎಂಬುದನ್ನೆಲ್ಲ ಲೆಕ್ಕ ಹಾಕಲು ಆರಂಭಿಸಿದ್ದೆವು. ಸಜ್ಜನಗಡದಲ್ಲಿ ಮದ್ಯಾಹ್ನ ಊಟ ಹಾಕುತ್ತಾರೆ. ಪ್ರಸಾದ ಸ್ವೀಕರಿಸಿದ ಹಾಗೂ ಆಗುತ್ತದೆ. ಅದನ್ನು ಮಾಡಿಯೇ ಸಾಗೋಣ ಎಂದುಕೊಂಡೆವು. ಮದ್ಯಾಹ್ನವಾಗಿತ್ತು. ಯಾರೋ ಒಬ್ಬರು ಊಟಕ್ಕೆ ಕರೆದರು. ನಾವು ಅತ್ತ ತೆರಳಿದೆವು. ನಮ್ಮ ಮನಸ್ಸಿನಲ್ಲಿ ವರದಳ್ಳಿಯಿತ್ತು. ಅಲ್ಲಿಯಂತೆ ಇಲ್ಲಿಯೂ ಊಟ ನೀಡಬಹುದೇನೋ ಎಂದುಕೊಂಡೆವು. ಊಟಕ್ಕೆ ತಟ್ಟೆಯ ಮುಂದೆ ಕುಳಿತಿದ್ದರು. ಯಾರೋ ಒಬ್ಬರು ರಾಮನಾಮವನ್ನು ದೊಡ್ಡದಾಗಿ ಹೇಳಲು ಆರಂಭಿಸಿದರು. ನಾವೂ ದನಿಗೂಡಿಸಿದೆವು.
            ಅನ್ನ ಬಡಿಸುತ್ತಿದ್ದಾರೆಂದುಕೊಂಡು ನಾವು ಕಾದೆವು. ಆದರೆ ಬಡಿಸುತ್ತಿದ್ದವರು ಅನ್ನವನ್ನು ಹಾಕುತ್ತಿರಲಿಲ್ಲ. ಬದಲಾಗಿ ಬೇರೆ ಇನ್ನೇನೋ ಹಾಕಿದಂತೆ ಕಾಣಿಸಿತು. ಅದೇನಿರಬಹುದು ಎನ್ನುವ ಕುತೂಹಲ ನಮ್ಮದಾಗಿತ್ತು. ಹತ್ತಿರ ಬಂದಂತೆಲ್ಲ ಅವರು ಬಡಿಸುತ್ತಿದ್ದುದು ಅನ್ನವಲ್ಲ ಎನ್ನುವುದು ಸ್ಪಷ್ಟವಾಯಿತು. ರವೆ ರವೆಯಾಗಿತ್ತು. ರವೆಯಿಂದ ಮಾಡಿದ ಗಂಜಿಯಿರಬೇಕು ಎಂದುಕೊಂಡೆವು. ನಮಗೂ ಹಾಕಿದರು. ಅದನ್ನು ಕೈಗೆತ್ತಿಕೊಂಡು ಬಾಯಿಗಿಟ್ಟಾಗಲೇ ನಮಗೆ ಸ್ಪಷ್ಟವಾಗಿತ್ತು. ಅದು ರವೆಯಿಂದಲೇ ಮಾಡಿದ್ದರು. ಅನ್ನದಂತೆ ಬೇಯಿಸಿ, ಉಪ್ಪನ್ನು ಹಾಕಿ ನೀಡಿದ್ದರು. ಗಂಜಿಯಷ್ಟು ತೆಳ್ಳಗಿರಲಿಲ್ಲ. ಮೊಟ್ಟಮೊದಲ ಬಾರಿಗೆ ತಿನ್ನುತ್ತಿದ್ದೆವು. ಅದಕ್ಕೆ ಶೇಂಗಾ ಬೆರೆಸಿದ ಮಜ್ಜಿಗೆಯನ್ನು ಸುರುವಿದರು. ನಾವು ಮೆಲ್ಲಿದೆವು. ಮಹಾರಾಷ್ಟ್ರದ ಆಹಾರವಿರಬೇಕು ಎಂದುಕೊಂಡೆವು.
          ಪ್ರಶಾಂತ ಭಾವ ನನ್ನ ಬಳಿ `ವಿನಯಾ.. ನೋಡಾ.. ಮಹಾರಾಷ್ಟ್ರದವರು ಅವರ ಸಂಸ್ಕೃತಿಯನ್ನು ಬಿಟ್ಟುಕೊಡ್ತ್ವಿಲ್ಲೆ. ಆದರೆ ನಾವೇಯಾ ನಮ್ಮ ಸಂಸ್ಕೃತಿ ಬಿಡ್ತಾ ಇದ್ದಿದ್ದು. ವದ್ದಳ್ಳಿಯಲ್ಲಿಯೂ ನಮ್ಮ ಸಂಸ್ಕೃತಿಯ ಆಹಾರ ಮಾಡಿ ಬಡಿಸವು. ಆವಾಗ ಬೆಲೆ ಬರ್ತು ನೋಡು..' ಎಂದು ಉದ್ದನೆಯ ಉಪನ್ಯಾಸವನ್ನು ನೀಡಿದ್ದ. ಸಂಜಯ ಅದಕ್ಕೆ ಅಹುದಹುದೆನ್ನುತ್ತ ತಲೆಯನ್ನಾಡಿಸಿದ್ದ. ಬಾಯಿಗಿಡುವ ಮೊದಲು ಈ ಆಹಾರವ್ಯಾಕೋ ನಮ್ಮ ಹೊಟ್ಟೆಯೊಳಗೆ ಇಳಿಯುವುದಿಲ್ಲ ಎಂದುಕೊಂಡಿದ್ದೆವು. ಆದರೆ ನಂತರ ಅದನ್ನು ಮೆಲ್ಲಿದೆವು. ಸರಾಗವಾಗಿ ಇಳಿಯಿತು. ಇಷ್ಟವಾಯಿತು. ಬೆಲ್ಲದಿಂದ ಮಾಡಿದ ಕಡ್ಲೆಬೇಳೆ ಪಾಯಸವನ್ನೂ ಬಡಿಸಲಾಗಿ ಅದನ್ನೂ ತಿಂದೆವು.
            ಊಟದ ನಂತರ ನಮ್ಮ ನಮ್ಮ ರೂಮಿಗೆ ವಾಪಸಾದೆವು. ಸಜ್ಜನಗಡವನ್ನು ನೋಡಿ ಧನ್ಯರಾಗಿದ್ದೆವು. ಊರಿಗೆ ಮರಳಬೇಕಲ್ಲ ಎಂದುಕೊಂಡೆವು. ನನಗೋ ಹತ್ತಿರದಲ್ಲಿಯೇ ಇದ್ದ ಮಹಾಭಲೇಶ್ವರವನ್ನೋ ಅಥವಾ ಸತಾರಾ ಬಳಿ ಇರುವ ಅಜಿಂಕ್ಯತಾರಾ ಕೋಟೆಯನ್ನೋ ನೋಡುವ ಆಸೆಯಿತ್ತು. ಪ್ರಶಾಂತ ಭಾವ ಪ್ರಯತ್ನಿಸೋಣ ಎಂದಿದ್ದ. ಸಜ್ಜನಗಡದಲ್ಲಿ ನಮಗೆ ಬೇಕಾಗಿದ್ದನ್ನೆಲ್ಲ ಕೊಂಡೆವು. ನಂತರ ಮರಳುವ ಮನಸ್ಸಾಯಿತು. ವಾಪಾಸು ಎಲ್ಲಿಗೆ ಬಂದರೆ ವಾಹನ ಸಿಗುತ್ತದೆ ಎಂದುಕೊಂಡೆವು.
         ಸಜ್ಜನಗಡ ಕ್ರಾಸಿಗೆ ಮದ್ಯಾಹ್ನ ಬಸ್ ಬರುತ್ತದೆ ಎಂದು ಯಾರೋ ಹೇಳಿದ ನೆನಪಿತ್ತು. ಸಜ್ಜನಗಡದಿಂದ ಸೀದಾ ಇಳಿಯಲಾರಂಭಿಸಿದೆವು. ಒಂದು, ಎರಡು ಕಿಲೋಮೀಟರ್ ಇಳಿದ ನಂತರ ಸಜ್ಜನಗಡ ಕ್ರಾಸ್ ಸಿಕ್ಕಿತು. ಅಲ್ಲಿ ಎಷ್ಟೋ ಹೊತ್ತು ಕಾದೆವು. ಊಹೂ ಬಸ್ಸಿನ ಸುಳಿವಿರಲಿಲ್ಲ. ಮಾರ್ಗದಲ್ಲಿ ಬರುತ್ತಿದ್ದ ಕಾರು, ಆಟೋ ರಿಕ್ಷಾಗಳಿಗೆಲ್ಲ ಕೈ ಮಾಡಿದೆವು. ಯಾರೊಬ್ಬರೂ ನಿಲ್ಲಿಸಲಿಲ್ಲ. ಬಹುತೇಕ ಗಾಡಿಗಳು ಭರ್ತಿಯಾಗಿ ಬರುತ್ತಿದ್ದವೆನ್ನಿ. ಬಸ್ ಬರದೇ ಇದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿಯೂ ಮೂಡಿತ್ತು. `ವಿನಯಾ... ನಡ್ಕೊಂಡು ಹೋಗೋಣ್ವಾ? ' ಎಂದು ಪ್ರಶಾಂತ ಭಾವ ಮೂರ್ನಾಲ್ಕು ಸಾರಿ ಕೇಳಿದ್ದ. ಸಂಜಯ ಓಕೆ ಅಂದಿದ್ದ. ನಾನೂ ಹೂಂ ಅಂದಿದ್ದೆನಾದರೂ 17 ಕಿ.ಮಿ ನಡೆಯಬೇಕಲ್ಲ ಎಂದು ಹಿಂದೇಟು ಹಾಕಿದ್ದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಕಳೆದ ರಾತ್ರಿ ನಿದ್ದೆಗೆಟ್ಟಿದ್ದೆವಲ್ಲ ಹಾಗಾಗಿ ನನಗಂತೂ ಕಣ್ಣು ಕವಿದು ಕವಿದು ಬರಲು ಆರಂಭವಾಗಿತ್ತು. ಅಲ್ಲೊಂದು ಕಡೆ ಕಲ್ಲಿನ ಮೇಲೆ ಕುಳಿತು ತೂಕಡಿಸಹತ್ತಿದ್ದೆ. ಸಂಜಯ ಹಾಗೂ ಪ್ರಶಾಂತ ಭಾವನ ಪಾಡೂ ಇದಕ್ಕಿಂತ ಹೊರತಾಗಿರಲಿಲ್ಲ. ಪ್ರಶಾಂತ ಭಾವ ನಡ್ಕೊಂಡು ಹೋಗೋಣ ಎಂದು ಬಾಯಲ್ಲಿ ಹೇಳುತ್ತಿದ್ದನಾದರೂ ಒಂದೇ ಒಂದು ಹೆಜ್ಜೆ ಹಾಕದೇ ಇರಲು ಇದೇ ಪ್ರಮುಖ ಕಾರಣವಾಗಿತ್ತೆನ್ನಿ.
          ಅರ್ಧ ಗಂಟೆಗೂ ಅಧಿಕ ಕಾಲ ಕಾಯ್ದ ನಂತರ ಬಸ್ ಬಂದಿತ್ತು. ನಮ್ಮ ಕೆಎಸ್ಆರ್ಟಿಸಿಯು 20-25 ವರ್ಷಗಳ ಹಿಂದೆ ಓಡಿಸುತ್ತಿತ್ತಲ್ಲ ಅಂತಹದೇ ಲಟೂರಿ ಬಸ್. 30-35 ಸೀಟಿನ ಬಸ್ಸುಗಳು. ನಾವು 50ಕ್ಕೂ ಹೆಚ್ಚಿನ ಜನ ಕಾಯುತ್ತಿದ್ದೆವು. ಬಸ್ ಖಂಡಿತವಾಗಿಯೂ ಸತಾರಾ ಮುಟ್ಟುವುದಿಲ್ಲ ಎನ್ನುವುದು ಮೇಲ್ನೋಟಕ್ಕೆ ನಮ್ಮ ಭಾವನೆ. ಪ್ರಶಾಂತ ಹಾಗೂ ಸಂಜಯರು ನನ್ನನ್ನು ಮುಂದು ಮಾಡಿ ಬಿಟ್ಟಿದ್ದರು. ಸೀಟು ಹಿಡ್ಕೋ ಎಂದಿದ್ದರು. ನಾನು ಜನಜಂಗುಳಿಯ ಮಧ್ಯ ತಳ್ಳಾಡಿ, ದೂಡ್ಯಾಡಿ ಬಸ್ ಹತ್ತಿ ಮೂರು ಸೀಟು ಹಿಡಿದಿದ್ದೆ. ಕುಳಿತು ನಿದ್ರಿಸಿದ್ದೆ. ಬಸ್ ಹೊರಟ ನೆನಪು/ ಎಚ್ಚರಾಗುವ ವೇಳೆಗೆ ಬಸ್ ಸತಾರಾ ನಗರಿಯನ್ನು ತಲುಪಿತ್ತು. ಬಸ್ ನಿಲ್ದಾಣದ ಕಡೆಗೆ ಮುಖ ಮಾಡಿತ್ತು. ಅಲ್ಲೊಂದು ಕಡೆ ದಢಾರ್ ಎನ್ನುವ ಶಬ್ದ. ಬಾಂಬ್ ಸ್ಪೋಟವಾಯಿತೆ ಎಂದುಕೊಂಡು ನೋಡಿದೆ ನಾನು. ಬಸ್ ಸೀದಾ ರಸ್ತೆ ಪಕ್ಕದ ಕಬ್ಬಿಣದ ಕರೆಂಟ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಹೊಡೆದ ರಬಸಕ್ಕೆ ಕಂಬ ಡೊಂಕಾಗಿ ಚಾಚಿಕೊಂಡಿತ್ತು. ವಿದ್ಯುತ್ ತಂತಿ ಒಂದಕ್ಕೊಂದು ತಾಗಿ ಬೆಂಕಿ ಹೊತ್ತಿಕೊಂಡಿತ್ತು. ನನ್ನ ಆಲೋಚನೆ ಏನೆಂದರೆ ಈಗ ಬಸ್ಸಿಗೆ ಬೆಂಕಿ ಬೀಳುತ್ತದೆ. ಬಸ್ಸಿನಲ್ಲಿ ಕುಳಿತಂತೆಯೇ ನಾವೆಲ್ಲ ಭಸ್ಮವಾಗುತ್ತೇವೆ ಎಂಬುದಾಗಿತ್ತು. ಆದರೆ ಅದ್ಯಾವ ಪವಾಡವೋ. ಹಾಗಾಗಲಿಲ್ಲ. ಬಸ್ಸು ಸುರಳೀತ ಸತಾರಾ ಬಸ್ ನಿಲ್ದಾಣ ತಲುಪಿತು. ಅಲ್ಲಿ ಬಸ್ ಇಳಿದ ತಕ್ಷಣ ಪ್ರಶಾಂತ ಭಾವ ಹಾಗೂ ಸಂಜಯನ ಬಳಿ ನಡೆದ ಘಟನೆಯನ್ನು ಹೇಳಿದೆ. ಆದರೆ ಅವರ್ಯಾರಿಗೂ ನಡೆದಿದ್ದು ಗೊತ್ತೇ ಇರಲಿಲ್ಲ. ಅಷ್ಟು ಗಾಢವಾಗಿ ನಿದ್ದೆ ಹೋಗಿದ್ದರು. ವಿಷಯ ಕೇಳಿ ಅಚ್ಚರಿಪಟ್ಟರು.
          ಸತಾರಾದಿಂದ ಸೀದಾ ಕೊಲ್ಲಾಪುರ ಬಸ್ ಹತ್ತಿದೆವು. ಬಸ್ಸಿನಲ್ಲಿ ಯಥಾ ಪ್ರಕಾರ ನಿದ್ದೆ. ಕೊಲ್ಲಾಪುರದಲ್ಲಿ ವಡಾ ಪಾವ್ ತಿಂದು ಮತ್ತೆ ಬಸ್ ಹತ್ತಿದ ನಮಗೆ ಯಥಾ ಪ್ರಕಾರ ನಿದ್ರಾರಾಣಿ ತಬ್ಬಿಕೊಂಡಿದ್ದಳು. ಬೆಳಗಾವಿಗೆ ಬರುವ ವೇಳೆಗೆ ರಾತ್ರಿಯ 9 ಗಂಟೆ. ಅಲ್ಲೊಂದು ಕಡೆ ಮೂವರೂ ಊಟ ಮುಗಿಸಿದೆವು. ಶಿರಸಿಗೆ ಬರಲು ನಮಗೆ ಡೈರೆಕ್ಟ್ ಬಸ್ ಇದೆಯಾ ಎಂಬ ಕುತೂಹಲ. ಬಸ್ ಇರಲಿಲ್ಲ. ಹುಬ್ಬಳ್ಳಿಯ ಕಡೆಗೆ ಮುಖ ಮಾಡಿದೆವು. ಮತ್ತೆ ನಿದ್ದೆ ಮಾಡಿ ಹುಬ್ಬಳ್ಳಿ ತಲುಪುವ ವೇಳೆಗೆ ರಾತ್ರಿ 1 ಗಂಟೆಯಾಗಿತ್ತು. ಅಲ್ಲಿಂದ ನಾನು ಹಾಗೂ ಸಂಜಯ ಶಿರಸಿಗೂ, ಪ್ರಶಾಂತ ಭಾವ ಗುಳ್ಳಾಪುರಕ್ಕೂ ತೆರಳಬೇಕಿತ್ತು. ನಮಗೆ ಬಸ್ ಇದ್ದರೂ ಪ್ರಶಾಂತ ಭಾವನಿಗೆ ಬಸ್ ಕಾಣಿಸಲಿಲ್ಲ. ಕೊನೆಗೆ ಕಾರವಾರಕ್ಕೆ ತೆರಳುವ ಯಾವುದೋ ಪೇಪರ್ ಗಾಡಿ ಕಾಣಿಸಿತು. ಪ್ರಶಾಂತ ಭಾವ ಅದರಲ್ಲಿ ಹೊರಟ. ಅವನನ್ನು ಕಳಿಸಿದ ನಾವು ಯಾವುದೋ ಬಸ್ ಹತ್ತಿದೆವು. ಕಣ್ಣಿನಲ್ಲಿ ಸಜ್ಜನಗಡದ ನೆನಪು. ಸುಳಿದು ಬರುತ್ತಿದ್ದ ನಿದ್ದೆ. ಕನಸೊಂದು ಮನದಲ್ಲಿ ಅರಳುತ್ತಿತ್ತು.
           ಶಿರಸಿಗೆ ಬಂದು ರೂಮಿಗೆ ಹೋಗಿ ಮಲಗುವ ವೇಳೆಗೆ ಬೆಳಗಿನ ಜಾವ 4 ಗಂಟೆ. ಮುಂದಿನ ವರ್ಷ, ಅಷ್ಟೇ ಏಕೆ ಪ್ರತಿ ವರ್ಷ ಸಜ್ಜನಗಡಕ್ಕೆ ಸಾಧ್ಯವಾದರೆ ಬರುತ್ತೇವೆ ಎಂದುಕೊಂಡು ನಾವು ನಿಶ್ಚಯಿಸಿದೆವು. ಈ ಪ್ರಯಾಣದ ನಂತರ ಇನ್ನೊಮ್ಮೆ ನಾವು ಸಜ್ಜನಗಡಕ್ಕೆ ಹೋಗಿ ಬಂದೆವು. ಆ ಸಾರಿ ನಾನು ಪ್ರಶಾಂತ, ಗುರುಪ್ರಸಾದ (ಭಾಮಿಷಿ ಷಟ್ಪದಿಯಲ್ಲಿ ಶ್ರೀಧರ ಸ್ವಾಮಿಗಳ ಚರಿತ್ರೆ ಬರೆಯುತ್ತಿರುವ ಕಲ್ಲಾರೆ ಗುರು) ಹಾಗೂ ನಮ್ಮೂರಿನ ನಾಗರಾಜ ಹೋಗಿ ಬಂದೆವು. ಸಂಜಯ ತಪ್ಪಿಸಿಕೊಂಡಿದ್ದ. ಒಟ್ಟಿನಲ್ಲಿ ಮೊಟ್ಟ ಮೊದಲ ಸಾರಿ ಹೋಗಿದ್ದ ಸಜ್ಜನ ಗಡ ಪ್ರವಾಸದ ನೆನಪು ಮನಸ್ಸಿನಲ್ಲಿ ಹಸಿಯಾಗಿಯೇ ಉಳಿದಿದೆ.

(ಮುಗಿಯಿತು)