Saturday, September 17, 2016

ಅಘನಾಶಿನಿ ಕಣಿವೆಯಲ್ಲಿ-33

 
           `ನಾ ಎಂತಾ ಹೇಳೂದು..' ಎಂದು ಶುರುಮಾಡಿದ ಬಾಬು. ಪ್ರದೀಪ ಕೆಕ್ಕರಿಸಿ ನೋಡಿದ. `ನಾ ಒಬ್ನೆ ಅಲ್ಲ. ನೀವ್ ನೋಡಿದ್ರೆ ನನ್ನ ಮಾತ್ರ ಹಿಡಕಂಡ್ರಿ. ಬಹಳಷ್ಟ್ ಜನ ಇದ್ದಾರೆ. ಅವ್ರು ಮಾಡದೇ ಇರುವಂತದ್ದೇನೂ ನಾ ಮಾಡನಿಲ್ಲ.' ಎಂದು ಅಲವತ್ತುಕೊಂಡ. ಪ್ರದೀಪನ ಸಹನೆಯ ಕಟ್ಟೆ ಮೀರಿತ್ತು. ರಪ್ಪನೆ ಬಾಬುವಿನ ಮುಸಡಿಗೆ ಒಂದು ಬಡಿದ. ಹೊಡೆದ ಹೊಡೆತಕ್ಕೆ ಬಾಬುವಿನ ಮುಖದಿಂದ ಬಳ್ಳನೆ ರಕ್ತ ಬಂದಿತು. ಕೈ ಮುಗಿದ ಬಾಬು.
              `ನಾನು ಮೊದ ಮೊದಲು ಇಂತದ್ದೆಲ್ಲ ಮಾಡಿರ್ನಿಲ್ಲ. ಆದರೆ ಹೊಟೆಲ್ ಮಾಡಬೇಕು ಅಂದಕಂಡು ಮುಂಬೈಗೆ ಹೋದೆ. ಅಲ್ಲಿ ಗಂಧವನ್ನು ಕಳ್ಳತನ ಮಾಡುವ ಗ್ಯಾಂಗ್ ಪರಿಚಯವಾಯಿತು. ಒಂದೆರಡು ವರ್ಷ ಮುಂಬೈನಲ್ಲಿ ಹೊಟೆಲ್ ಕೆಲಸ ಮಾಡಿದಂತೆ ಮಾಡಿದೆ. ಆದರೆ ನಂತರ ನನಗೆ ಗಂಧದ ತುಂಡುಗಳನ್ನು ಮಾರಾಟ ಮಾಡುವ ಜಾಲದ ಉದ್ದಗಲಗಳು ನನಗೆ ಗೊತ್ತಾದವು. ಮುಂಬೈನಲ್ಲಿ ಯಾವುದನ್ನು ಹೇಗೆ ಮಾರಾಟ ಮಾಡಬೇಕು? ಯಾವುದಕ್ಕೆ ಎಷ್ಟು ರೇಟಿದೆ ಎನ್ನುವುದನ್ನೆಲ್ಲ ತಿಳಿದುಕೊಂಡೆ. ಗಂಧದ ತುಂಡುಗಳ ಮಾರಾಟದ ನೆಪದಲ್ಲಿ ನಾನು ಆ ಜಾಲದ ಭಾಗವಾಗಿದ್ದೆ. ಆದರೆ ನಂತರದ ದಿನಗಳಲ್ಲಿ ಕೇವಲ ಗಂಧದ ತುಂಡುಗಳಿಗೆ ಮಾತ್ರ ನಮ್ಮ ದಂಧೆ ಸೀಮಿತವಾಗಿಲ್ಲ ಎನ್ನುವುದು ಅರಿವಾಯಿತು. ಕ್ರಮೇಣ ಗಾಂಜಾ ಮಾರಾಟವೂ ಗೊತ್ತಾಯಿತು. ಯಾರೋ ತಂದುಕೊಡುತ್ತಿದ್ದರು. ಅದನ್ನು ಇನ್ಯಾರಿಗೋ ದಾಟಿಸುವ ಕೆಲಸ ಮಾಡುತ್ತಿದೆ. ಹೀಗೆ ಮಾಡುತ್ತಿದ್ದಾಗಲೇ ಒಂದೆರಡು ಮಧ್ಯವರ್ತಿಗಳ ಪರಿಚಯವೂ ಆಯಿತು. ಇದಲ್ಲದೇ ಮುಂಬೈನಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ ಬಂದರುಗಳಲ್ಲಿ ಲಂಗರು ಹಾಕಿರುತ್ತಿದ್ದ ಹಡಗುಗಳಿಗೆ ಮಾದಕ ವಸ್ತುಗಳನ್ನು ದಾಟಿಸುವುದನ್ನೂ ತಿಳಿದುಕೊಂಡಿದ್ದೆ. ಹೀಗಿದ್ದಾಗಲೇ ನನಗೆ ನಮ್ಮೂರ ಕಾಡುಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಗಂಧದ ತುಂಡುಗಳ ವಿಷಯ ನೆನಪಾದವು. ಅದನ್ನು ಇಲ್ಲಿ ತಂದು ಮಾರಾಟ ಮಾಡಿದರೆ ಹೇಗೆ ಎನ್ನುವುದೂ ಅರಿವಾಯಿತು. ತಲೆಯಲ್ಲಿ ಬಂದ ತಕ್ಷಣವೇ ನಾನು ಮುಂಬೈಯನ್ನು ಬಿಟ್ಟು ನಮ್ಮೂರಿಗೆ ವಾಪಾಸಾಗಿದ್ದೆ..' ಬಾಬು ಒಂದೇ ಉಸುರಿಗೆ ಹೇಳಿದ್ದ.
           `ಮುಂಬೈನಿಂದ ಬರುವಾಗ ನನ್ನಲ್ಲಿ ಅಷ್ಟೋ ಇಷ್ಟೋ ದುಡ್ಡಾಗಿತ್ತು. ಊರಿಗೆ ವಾಪಾಸು ಬಮದವನೇ ದೊಡ್ಡದೊಂದು ಕಾರನ್ನು ಕೊಂಡುಕೊಂಡೆ. ನೋಡುಗರಿಗೆ ನಾನು ಮುಂಬೈನಲ್ಲಿ ಹೊಟೆಲ್ ಬ್ಯುಸಿನೆಸ್ ನಲ್ಲಿ ಭಾರೀ ಲಾಭ ಮಾಡಿಕೊಂಡೆ ಎನ್ನುವ ಭಾವನೆ ಮೂಡುವಂತೆ ಮಾಡಿದೆ. ಆದರೆ ವಾಸ್ತವದಲ್ಲಿ ನಾನು ಕಾರು ಕೊಂಡಿದ್ದೇ ಬೇರೆ ಕಾರಣಕ್ಕಾಗಿತ್ತು. ನಮ್ಮೂರ ಭಾಗದಲ್ಲಿ ಸಿಗುವ ಗಂಧದ ಮಾಲನ್ನು ಕದ್ದು ಕಾರಿನಲ್ಲಿ ಹಾಕಿಕೊಂಡು ಮಧ್ಯವರ್ತಿಗಳಿಗೆ ಸಾಗಿಸುವ ಕೆಲಸವನ್ನು ನಾನು ಮಾಡುತ್ತಿದ್ದೆ. ಹೇರಳವಾಗಿ ದುಡ್ಡು ಬರುತ್ತಲೇ ಇತ್ತು. ಆದರೆ ಮೊದ ಮೊದಲಿಗೆ ಗಂಧದ ತುಂಡುಗಳನ್ನು ಕಳ್ಳತನ ಮಾಡುತ್ತಿದ್ದ ನಾನು ನಂತರದ ದಿನಗಳಲ್ಲಿ ಬೇರೆ ಬೇರೆ ದಂಧೆಯನ್ನೂ ಶುರು ಹಚ್ಚಿಕೊಂಡೆ. ಕಳ್ಳ ನಾಟಾ ಮಾಡುವುದು, ಅದರ ಮಾರಾಟ, ಗಾಂಜಾ ಬೆಳೆಯುವುದು, ಅದನ್ನು ಮಾರಾಟ ಮಾಡುವುದು ಹೀಗೆ ಹಲವಾರು ದಂಧೆ ಶುರು ಮಾಡಿದೆ. ಮೊದ ಮೊದಲು ಎಲ್ಲವೂ ಸರಾಗವಾಗಿಯೇ ಇತ್ತು. ಯಾವಾಗಲೂ ಅಷ್ಟೆ ಪ್ರತಿಸ್ಪರ್ಧಿಗಳಿಲ್ಲ ಅಂದರೆ ದಂಧೆ ನಿರಾತಂಕವಾಗಿ ಸಾಗುತ್ತದೆ. ನನಗೂ ಹಾಗೆಯೇ ಆಗಿತ್ತು. ಆದರೆ ಪ್ರತಿಸ್ಪರ್ಧಿ ಹುಟ್ಟಿಕೊಂಡ ನಂತರ ಮಾತ್ರ ನಮ್ಮ ದಂಧೆಯಲ್ಲಿ ಏರಿಳಿತ ಕಾಣಬಹುದು. ನನಗೂ ಹಾಗೆಯೇ ಆಯಿತು...'
             `ನಾನೇನೋ ಹಾಯಾಗಿದ್ದೆ. ತಿಂಗಳು ತಿಂಗಳೂ ಲಕ್ಷ ಲಕ್ಷ ದುಡ್ಡು ಬರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ದಂಧೆಯಲ್ಲಿ ಲುಕ್ಸಾನು ಆರಂಭವಾಯಿತು. ನಾನು ಗಂಧದ ತುಂಡುಗಳನ್ನು ಮಾರಾಟ ಮಾಡಲು ಹೋದರೆ ಅರ್ಧ ಬೆಲೆಗೆ ಕೇಳುತ್ತಿದ್ದರು. ನಾನು ಬೆಳೆಸುತ್ತಿದ್ದ ಗಾಂಜಾ ಬೆಳೆಗೆ ಬೆಲೆಯೇ ಇರಲಿಲ್ಲ. ಯಾಕೆ ಹೀಗಾಯಿತು ಅಂದುಕೊಳ್ಳುತ್ತಿದ್ದಂತೆಯೇ ನನ್ನ ದಂಧೆಗೆ ಪ್ರತಿಯಾಗಿ ಇನ್ನೊಂದು ತಂಡ ಇದೇ ದಂಧೆಯನ್ನು ಶುರು ಮಾಡಿಕೊಂಡಿರುವುದು ತಿಳಿದು ಬಂದಿತು. ಯಾರಿರಬಹುದು ಎಂದುಕೊಂಡು ತಂಡವನ್ನು ಹುಡುಕಾಡಿದೆ. ಊಹೂ ಗೊತ್ತಾಗಲಿಲ್ಲ. ಆದರೆ ನಮ್ಮ ಭಾಗದಲ್ಲಿ ಈ ತಂಡ ಸಕ್ರಿಯಾಗಿದೆ ಎಂದೂ ಗೊತ್ತಾಯಿತು. ಕೊನೆಗೊಮ್ಮೆ ನಾನು ಆ ತಂಡವನ್ನು ಹದ್ದು ಬಸ್ತಿನಲ್ಲಿ ಇಡಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದೆ. ಏನೇನೋ ಮಾರ್ಗಗಳನ್ನು ಅನುಸಿರಿಸಿದೆ. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಬದಲಾಗಿ ಆ ತಂಡದಿಂದ ಒಂದಷ್ಟು ಬೆದರಿಕೆ ಕರೆಗಳು ಬಂದವು. ನಾನು ಅವನ್ನು ನಿರ್ಲಕ್ಷಿಸಿದೆ. ಆದರೆ ಕೊನೆಗೆ ನನ್ನ ಮೂಲೆ ಎರಡು ಸಾರಿ ಹಲ್ಲೆಯೂ ಆಯಿತು. ನನಗೆ ಆಗಲೇ ಜೀವ ಭಯ ಕಾಡಿದ್ದು. ನಾನು ಪೂರ್ತಿ ಹೆದರಿ ಹೋಗಿದ್ದೆ. ಕೊನೆಗೆ ಇವರ ಸಹವಾಸ ಸಾಕು. ಬದುಕಿ ಉಳಿದರೆ ಏನಾದರೂ ಮಾಡಿಯೇನು ಎಂದುಕೊಂಡು ನಾನು ಆ ವೃತ್ತಿಯನ್ನು ಬಿಟ್ಟು ಬಿಟ್ಟೆ. ಇದೀಗ ಮನೆಯಲ್ಲಿ ಎರಡು ಜೀಪುಗಳನ್ನು ಇಟ್ಟುಕೊಂಡು ಬಾಡಿಗೆ ಹೊಡೆಯುತ್ತಿದ್ದೇನೆ..' ಎಂದ ಬಾಬು.
            `ನೀ ಹೇಳಿದ್ದನ್ನು ನಂಬ ಬಹುದಾ?..' ಪ್ರದೀಪ ಗಡುಸಾಗಿಯೇ ಕೇಳಿದ್ದ.
             `ನಂಬಬಹುದು. ಯಾಕಂದ್ರೆ ಇದೇ ನಿಜ. ನನಗೆ ಸುಳ್ಳು ಹೇಳಿ ಆಗಬೇಕಾಗಿದ್ದು ಏನೂ ಇಲ್ಲ. ಬದಲಾಗಿ ನನ್ನ ಜೀವ ುಳಿದರೆ ಸಾಕಾಗಿದೆ..' ಎಂದ ಬಾಬು.
            `ನಿನ್ನ ದಂಧೆಗೆ ಪ್ರತಿಯಾಗಿ ದಂಧೆ ಶುರು ಮಾಡಿದ್ದು ಯಾರು? ನಿನ್ನ ಮೇಲೆ ಧಾಳಿ ಮಾಡಿದವರು ಯಾರು? ಹೇಳು..'
            `ಗೊತ್ತಿಲ್ಲ. ದಂಧೆ ಶುರುವಾಗಿಗೆ ಅಂತ ಅಷ್ಟೇ ಮಾಹಿತಿ ಕಿವಿಗೆ ಬೀಳುತ್ತಿತ್ತು. ಯಾರು ಮಾಡುತ್ತಿದ್ದಾರೆ? ಈ ಜಾಲದ ಮುಖ್ಯಸ್ಥರ ಯಾರು ಎಂಬುದು ನನಗೆ ಗೊತ್ತಿಲ್ಲ. ನಾನು ಹಲವು ಸಾರಿ ತಿಳಿದುಕೊಳ್ಳಲು ನೋಡಿದೆ ಆಗಲೇ ಇಲ್ಲ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದವರೆಲ್ಲ ನನ್ನನ್ನು ಬಿಟ್ಟು ಹೋದರು. ನಾನು ಕೊಡುತ್ತಿದ್ದ ಹಣಕ್ಕಿಂತ ಎರಡು ಪಟ್ಟು ಜಾಸ್ತಿ ಅವರು ಕೊಡುತ್ತಿದ್ದರಂತೆ. ಅವರನ್ನು ನನ್ನ ಬಳಿಯೇ ಉಳಿಸಿಕೊಳ್ಳಬೇಕು ಅಂತ ಸಾಕಷ್ಟು ಪ್ರಯತ್ನ ಮಾಡಿದೆ. ಆಗಲಿಲ್ಲ. ಈಗಲೂ ಒಂದಿಬ್ಬರು ಅವರ ಬಳಿ ನಿಯತ್ತಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಸಿಕ್ಕಾಪಟ್ಟೆ ಲಾಸ್ ಆಗಿ ಇದೀಗ ಆ ದಂಧೆ ಬಿಟ್ಟು ಬಿಟ್ಟಿದ್ದೇನೆ. ನನಗೆ ಈಗಲೂ ಕುತೂಹಲ ಇದೆ. ಇದ್ದಕ್ಕಿದ್ದಂತೆ ನನ್ನ ದಂಧೆಯನ್ನೇ ಬುಡಮೇಲು ಮಾಡಿ, ನನಗಿಂತ ಹೆಚ್ಚು ಲಾಭ ಮಾಡುತ್ತಿರುವವರು ಯಾರು ಅಂತ. ಖಂಡಿತವಾಗಿಯೂ ಒಬ್ಬಿಬ್ಬರಿಂದ ಇದು ಸಾಧ್ಯವಿಲ್ಲ. ದೊಡ್ಡದೊಂದು ತಂಡವೇ ಇರಬೇಕು. ವ್ಯವಸ್ಥಿತ ಜಾಲವೇ ಇರಬೇಕು ಅನ್ನಿಸುತ್ತಿದೆ. ನಾನು ಈ ಜಾಲದ ಮುಖ್ಯಸ್ಥನನ್ನು ನೋಡುವ ಆಸೆಯನ್ನೂ ಇಟ್ಟುಕೊಂಡಿದ್ದೇನೆ..' ಎಂದು ಬಾಬು ಮನದಾಳದ ಬಯಕೆಯನ್ನು ತೋಡಿಕೊಂಡಿದ್ದ.
           `ಆಗಲಿ.. ನೀನು ಹೇಳಿದ್ದನ್ನು ನಾವು ನಂಬುತ್ತೇವೆ. ಆದರೆ ಒಂದು ಕೆಲಸ ಮಾಡಬೇಕು ನೀನು. ನಮಗೆ ನಿನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ತೋರಿಸಬೇಕು. ಅವರು ಈಗ ಆ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಅಂದೆಯಲ್ಲ. ಅವರನ್ನು ತೋರಿಸು. ನಮಗೆ ಈ ಕಾರ್ಯದಲ್ಲಿ ಸಹಾಯ ಮಾಡಿದರೆ ನಿನ್ನನ್ನು ಬಿಟ್ಟು ಬಿಡುತ್ತೇವೆ. ಇಲ್ಲವಾದಲ್ಲಿ ನಿನಗೆ ಬದುಕಿದ್ದಂತೆಯೇ ನರಕ ದರ್ಶನ ಮಾಡುತ್ತೇವೆ..' ಪ್ರದೀಪ ಗುಡುಗಿದ್ದ.
             `ನಾಳೆಯೇ ತೋರಿಸುತ್ತೇನೆ...' ಎಂದಿದ್ದ. ಬಾಬುವನ್ನು ಅವನ ಮನೆಯ ಬಳಿಯೇ ಬಿಟ್ಟು ಪ್ರದೀಪ ಹಾಗೂ ಇತರರು ಮರಳಿದ್ದರು. ಬಾಬು ಖಂಡಿತವಾಗಿಯೂ ತಪ್ಪಿಸಿಕೊಂಡು ಹೋಗಲಾರ. ಆತನಿಗೆ ಭಯವಿದೆ. ಆ ಕಾರಣದಿಂದ ಎಲ್ಲೂ ಹೋಗದೇ, ತಮಗೆ ಸಹಾಯ ಮಾಡುತ್ತಾನೆ ಎಂಬ ನಂಬಿಕೆಯ ಮೇಲೆ ಆತನನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರು. ಆದರೆ ಹೀಗೆ ಬಿಟ್ಟು ಬಂದಿದ್ದೇ ಸಾಕಷ್ಟು ತೊಂದರೆಗೂ ಕಾರಣವಾಯಿತು.
             ಇತ್ತ ಬಾಬುವಿನ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು. ಒಂದೆಡೆ ಈಗಾಗಲೇ ಎರಡು, ಮೂರು ಸಾರಿ ದಾಳಿ ಂಆಡಿ ಜೀವಭಯ ಹುಟ್ಟಿಸಿರುವ ತಂಡ, ಇನ್ನೊಂದು ಕಡೆಗೆ ಪ್ರದೀಪನ ಭಯ. ಏನು ಮಾಡಲಿ ಎಂಬುದನ್ನು ತಿಳಿಯದೇ ಚಿಂತಾಕ್ರಾಂತನಾಗಿದ್ದ. ಮರುದಿನ ಇನ್ನೇನಾಗುತ್ತದೆಯೋ ಎಂದುಕೊಂಡು ಮನೆಯೊಳಕ್ಕೆ ಹೋಗಿದ್ದ. ಆದರೆ ಮರುದಿನ ಬಾಬುವಿನ ಮನೆಯ ಬಾಗಿಲು ತೆರೆಯಲೇ ಇಲ್ಲ. ಬಾಬು ಹಾಗೂ ಆತನ ಮಡದಿ ಇಬ್ಬರೂ ಮನೆಯೊಳಕ್ಕೆ ಹೆಣವಾಗಿದ್ದರು. !!


(ಮುಂದುವರಿಯುತ್ತದೆ)

1 comment:

  1. ಅಣ್ಣಯ್ಯ ನೆಕ್ಸ್ಟ್ ಎಪಿಸೋಡ್ ಯಾವಾಗಲೋ? ಬಾಳಾ ಕುತೂಹಲಕಾರಿ ಇದ್ದು

    ReplyDelete