Tuesday, September 13, 2016

ಅಪ್ಪ (ಕಥೆ) - ಭಾಗ-2

              ಅಪ್ಪನೇನೋ ಸೈಕಲ್ ರಿಪೇರಿಗಾಗಿ ಹೋಗಿಬಿಟ್ಟಿದ್ದ. ನಾನು, ಅಮ್ಮ ಇಬ್ಬರೇ ಉಳಿದಿದ್ದೆವು. `ತಮಾ.. ಹೋಪನ ನೆಡಿ..' ಎಂದ ಅಮ್ಮ ನಿಧಾನವಾಗಿ ಹೆಜ್ಜೆ ಹಾಕಲು ಆರಂಭಿಸಿದ್ದಳು. ಅಮ್ಮನ ಒಂದು ಕಾಲಿಗೆ ಕಬ್ಬಿಣದ ಮೊಳೆ ಚುಚ್ಚಿತ್ತು. ಇನ್ನೊಂದು ಕಾಲು ಸೈಕಲ್ ಚಕ್ರಕ್ಕೆ ಸಿಲುಕಿ ಜಜ್ಜಿದಂತಾಗಿತ್ತು. ನೋವಿನಲ್ಲಿಯೂ ನಡೆಯಲು ಆರಂಭಿಸಿದ್ದಳು. ನಾನು ಆಕೆಯ ಸರಿಸಮಾನವಾಗಿ ಹೆಜ್ಜೆ ಹಾಕಲು ಆರಂಭಿಸಿದ್ದೆ.
                ನಿಮಿಷಗಳು ಉರುಳಿದವು. ನಾವು ಸಾಗುತ್ಲೇ ಇದ್ದೆವು. `ಅಮಾ.. ಅಪ್ಪ ಬಂದನನೆ..?' ನಾನು ಆಗಾಗ ಕೇಳುತ್ತಿದ್ದೆ. ಅದಕ್ಕೆ ಅಮ್ಮ ನಿಟ್ಟುಸಿರುವ ಬಿಟ್ಟು `ಇಲ್ಯಾ ತಮಾ.. ಸೈಕಲ್ ರಿಪೇರಿ ಆಜಿಲ್ಲೆ ಕಾಣಿಸ್ತಾ.. ನಾವು ನೆಡಕಂಡು ಹೋಗ್ತಾ ಇಪ್ಪನ. ಕಲ್ಮಟ್ಟಿ ಹಳ್ಳದ ಹತ್ರ ಹೋಪಕಿದ್ರೆ ಅಪ್ಪ ಬಂದು ಮುಟ್ಟತಾ..' ಅಮ್ಮ ನನ್ನನ್ನು ಸಾಗ ಹಾಕಿದ್ದಳು. ಅಮ್ಮನಿಗೆ ಅಪ್ಪ ಇಷ್ಟು ಬೇಗನೆ ಬರುವುದಿಲ್ಲ ಎಂಬುದು ಗೊತ್ತಿತ್ತೇನೋ. ನನ್ನನ್ನು ಏನೋ ಹೇಳಿ ಸಾಗ ಹಾಕುತ್ತಿದ್ದಳು. ಆ ದಿನ ಮಾತ್ರ ನಾವು ಎಷ್ಟು ನಡೆದರೂ ಕೂಡ ದಾರಿ ಸಾಗುತ್ತಲೇ ಇರಲಿಲ್ಲ. ಅರ್ಧ ಗಂಟೆಯ ಅಂತರದಲ್ಲಿ ನಮ್ಮನ್ನು ಕೈಬೀಸಿ ಕರೆಯಬೇಕಿದ್ದ ಕಲ್ಮಟ್ಟಿ ಹಳ್ಳ ಆ ದಿನ ತಾಸಾದರೂ ಕೂಡ ಬರಲಿಲ್ಲ. ನಾವು ಅಷ್ಟು ನಿಧಾನವಾಗಿ ನಡೆಯುತ್ತಿದ್ದೆವೆನ್ನಿ.
             ಕಲ್ಮಟ್ಟಿಹಳ್ಳ ಬರುವ ವೇಳೆಗೆ ನಾವು ಎರಡು ಸಾರಿ ಕುಳಿತಿದ್ದೆವು. ಸೈಕಲ್ ಚಕ್ರಕ್ಕೆ ಸಿಲುಕಿದ್ದ ಅಮ್ಮನ ಕಾಲು ಆಗಲೇ ಆನೇಕಾಲು ರೋಗ ಬಂದವರಂತೆ ಊದಿಕೊಂಡಿತ್ತು. ಕಾಲಿಗೆ ಹಾಕಿದ್ದ ಹವಾಯಿ ಚಪ್ಪಲ್ ಬಿಗಿಯಾಗಿತ್ತು. ಹವಾಯಿ ಚಪ್ಪಲಿನ ಬಾರು ಹಾಲಿಗೆ ಅಂಟಿಕೊಂಡಿತ್ತು. ಕಲ್ಮಟ್ಟಿ ಹಳ್ಳ ಬಂದಿತ್ತು. ಕಲ್ಮಟ್ಟಿ ಹಳ್ಳದಲ್ಲಿ ಮಂಜು ನಾಯ್ಕ ಸಿಕ್ಕಿದ್ದ. `ನಮ್ಮನೆ ಹೆಗುಡ್ರು ಹೋದ್ರನೋ..' ಅಮ್ಮ ಮಂಜುನಾಥ ನಾಯ್ಕನ ಬಳಿ ಕೇಳಿದ್ದಳು. `ಇಲ್ರಲಾ ಅಮ್ಮಾ.. ನಾನು ನೋಡನಿಲ್ಲ. ಅವರು ಈ ದಾರಿಯಲ್ಲಿ ಹೋಗಿದ್ದನ್ನ ನಾನು ಕಾಣನಿಲ್ಲ..' ಎಂದು ಉತ್ತರ ನೀಡಿದಾಗ ಅಮ್ಮ ನಿಟ್ಟುಸಿರು ಬಿಟ್ಟು ನನ್ನನ್ನು ಹೊರಡಿಸಿದ್ದಳು. ನನಗೊಂದು ನಿಂಬೂ ಚಾಕಲೇಟು ತಿನ್ನುವ ಆಸೆಯಾಗಿ ಅಮ್ಮನ ಬಳಿ ನಾಲ್ಕಾಣೆ ಪಡಕೊಂಡಿದ್ದೆ. ಅಮ್ಮ ಎಂಟಾಣೆ ಕೊಟ್ಟಾಗ ಎರಡು ನಿಂಬೂ ಚಾಕಲೇಟು ತೆಗದುಕೊಂಡು ಒಂದನ್ನು ಸಿಪ್ಪೆ ಸುಲಿದು ಬಾಯಿಗಿಟ್ಟು ಇನ್ನೊಂದು ಚಡ್ಡಿ ಕಿಶಗೆ ಗೆ ಹಾಕಿದ್ದೆ.
            ಇನ್ನೊಂದು ಕಿಲೋಮೀಟರ್ ದೂರದ ಅಡಕಳ್ಳಿ ಶಾಲೆಗೆ ಹತ್ತಿರ ನಾವು ಬರುವ ಹೊತ್ತಿಗೆ ನೇಸರನಾಗಲೇ ಬಾನಂಚಿನ ಕಡೆಗೆ ತನ್ನ ರಥವನ್ನು ಹೂಡಿಯಾಗಿತ್ತು. `ತಮಾ.. ಕತ್ಲೆ ಆಗ್ತಾ ಇದ್ದೋ...' ಎಂದ ಅಮ್ಮ ನನ್ನನ್ನು ಮುನ್ನಡೆಸಿದ್ದಳು. `ಇನ್ನೂ ಅಪ್ಪ ಬಂಜ್ನೇ ಇಲ್ಯಲೆ...' ಆಗಲೇ ಅದೆಷ್ಟನೆಯ ಸಾರಿಯೋ ಹೇಳಿದ್ದೆ. `ಬತ್ರು ಅವು..' ಮತ್ತೊಮ್ಮೆ ಅಮ್ಮ ಹೇಳಿದ್ದಳು.
           ನಾವು ನಡೆಯುತ್ತಲೇ ಇದ್ದೆವು. ನಮ್ಮೂರ ದಾರಿಯಲ್ಲಿ ಸಿಗುವಂತಹ ಹೆಣಸುಡುವ ಮುರ್ಕಿಯೂ ದಾಟಿತ್ತು. ಅದನ್ನು ಹಾದು ಮುಂದೆ ಬರುವ ವೇಳೆಗಾಗಲೇ ನನ್ನೊಳಗೆ ಅದೇನೋ ಅಳುಕು. ಏಕೆಂದರೆ ಮುಮದಿನ ದಾರಿ ಕತ್ತಲು ಕವಿದಂತಹ ಕಾಡು. ನಾನು ನಿಧಾನವಾಗಿ ಅಮ್ಮನ ಬಳಿ ಸರಿದು ನಡೆಯಲಾರಂಭಿಸಿದೆ. `ಎಂತಾ ಆತಾ ತಮಾ..' ಅಮ್ಮ ಕೇಳಿದ್ದಳು.
             `ಅಮ್ಮಾ.. ಕಾನಬೈಕಲು ಬಂತು. ಇಲ್ಲಿ ಕಾಡು ಪ್ರಾಣಿ ಎಲ್ಲಾ ಇರ್ತಡಾ..' ಎಂದೆ. `ಶೀ ಮಳ್ ಮಾಣಿ.. ಎಂತದ್ದೂ ಬರ್ತಿಲ್ಲೆ.. ಸುಮ್ನೆ ಹೋಪನ ಬಾ.. ಕತ್ಲೆ ಆಗೋದ್ರೊಳಗೆ ಮನೆ ಸೇರೋಣ..' ಎನ್ನವ ವೇಳೆಗೆ `ಆಯ್...' ಎಂದಳು. `ಎಂತಾ ಆತೆ ಅಮಾ..' ಎಂದೆ. ಅಮ್ಮನ ಕಾಲಿಗೊಂದು ಕಲ್ಲು ಚುಚ್ಚಿತ್ತು. ನೋವಿನಿಂದ ನರಳಿದ್ದಳು. `ಹಾಳಾದ್ದು.. ಕಲ್ಲು..' ಎಂದು ಬೈದು ಮುನ್ನಡೆದೆವು.
            `ಅಮ್ಮಾ... ಅಲ್ನೋಡೆ.. ಎಂತದ್ದೋ ಇದ್ದು.. ಸರಬರ ಹೇಳಿ ಶಬ್ದ ಆಗ್ತು..' ಭಯದಿಂದಲೇ ನಾನು ಕೇಳಿದ್ದೆ. ರಸ್ತೆ ಪಕ್ಕದ ಕಾಡಿನಲ್ಲಿ ಏನೋ ಶಬ್ದವಾಗಿತ್ತು. ನನಗೆ ಕಾಡೆಮ್ಮೆಯಿರಬೇಕು ಎನ್ನುವ ಅನುಮಾನ. ಅನುಮಾನದಿಂದಲೇ ಕೇಳಿದ್ದೆ. ಅಮ್ಮನಿಗೂ ಭಯವಾಗಿತ್ತಿರಬೇಕು.. `ಸುಮ್ನಿರಾ..' ಎಂದಳು. ನಾನು ಸುಮ್ಮನಾದೆ. ಮತ್ತೊಂದು ಮಾರು ದೂರ ಹೋಗಿದ್ದೆವು. ಅಮ್ಮ ಇದ್ದಕ್ಕಿದ್ದಂತೆ `ಇಡಾ ಪಿಂಗಳಾ ತ್ವ ಸುಸುಷ್ಮ್ನಾಚನಾಡಿ.. ತ್ವಮೇಕಾ ಗತಿರ್ದೇವಿ ಸದಾನಂದ ರೂಪೆ...' ಎಂದಳು.. ನಾನು ಅಮ್ಮನ ಮುಖ ನೋಡಿದೆ. ಅಮ್ಮನಿಗೂ ಭಯವಾಗಿತ್ತಿರಬೇಕು. ಭಯದಿಂದ ಅಮ್ಮ ಲಲಿತಾ ಸಹಸ್ರನಾಮವನ್ನು ಪಠಿಸಲು ಆರಂಭಿಸಿದ್ದಳು.
            ನಮ್ಮೂರ ಗುಡ್ಡದ ನೆತ್ತಿಯನ್ನು ತಲುಪುವ ವೇಳೆಗಾಗಲೇ ಸೂರ್ಯ ಬಾನಂಚಲ್ಲಿ ನಾಪತ್ತೆಯಾಗಿದ್ದ. ರಸ್ತೆ ಅಸಕು-ಮಸುಕಾಗಿ ಕಾಣುವಷ್ಟು ಕತ್ತಲಾಗಿತ್ತು. ರಸ್ತೆಯಲ್ಲಿ ನಡೆದು ಹೋದರೆ ಕನಿಷ್ಟ ಇನ್ನೊಂದು ತಾಸಾದರೂ ಬೇಕು ಎಂದುಕೊಂಡು ನಾವು ಅಡ್ಡದಾರಿಯನ್ನು ಹಿಡಿದೆವು. ಇಷ್ಟಾದರೂ ಕೂಡ ಅಪ್ಪ ಬಂದಿರಲಿಲ್ಲ.
           ಗುಡ್ಡದ ಅಂಕುಡೊಂಕಿನ ಕಾಲು ದಾರಿಯಲ್ಲಿ ನಾನು-ಅಮ್ಮ ಇಳಿಯುತ್ತಿದ್ದಾಗಲೇ ಗಡ ಗಡ ಸದ್ದಾಯಿತು. `ಅಮ್ಮಾ.. ಅಪ್ಪ ಬಂದ ಕಾಣಿಸ್ತು..' ಎಂದೆ. `ಇಲ್ಯಾ.. ತಮಾ.. ಅವ್ರು ಬಂಜಿರಿಲ್ಲೆ..' ಎಂದಳು. ನಿಧಾನವಾಗಿ ಗುಡ್ಡ ಇಳಿದೆವು. ಅಷ್ಟರಲ್ಲಿ ಸಂಪೂರ್ಣವಾಗಿ ಕತ್ತಲಾಗಿಬಿಟ್ಟಿತ್ತು. ನಮಗೆ ದಾರಿಯೇ ಕಾಣುತ್ತಿರಲಿಲ್ಲ. ಇನ್ನೇನು ಮಾಡುವುದು ದೇವರೇ.. ಎಂದುಕೊಂಡು ಹೆಜ್ಜೆ ಹಾಕಿದೆವು. ಮಾರ್ಗ ಮಧ್ಯದಲ್ಲಿ ಒಂದು ಬೆಳಕು ಕಾಣಿಸಿತು. ಅದೊಂದು ಮನೆ. ಸೀದಾ ಮನೆಯೊಳಕ್ಕೆ ಹೋದ ನಾವು ಬ್ಯಾಟರಿ ಸಿಗಬಹುದಾ ಎಂದೆವು. ಮನೆಯ ಯಜಮಾನರು ಬ್ಯಾಟರಿ ಕೊಟ್ಟರು. ಬ್ಯಾಟರಿಯ ಮಿಣುಕು ಬೆಳಕಿನಲ್ಲಿ ಮನೆಯ ಕಡೆಗೆ ಹೆಜ್ಜೆ ಹಾಕಿದೆವು. ಇಷ್ಟಾದರೂ ಕೂಡ ಅಪ್ಪ ಬಂದಿರಲಿಲ್ಲ.
           ಮನೆ ಹತ್ತಿರವಾದಂತೆಲ್ಲ ನನಗೆ ಅಪ್ಪನ ಮೇಲೆ ಕಡುಕೋಪ ಬರಲು ಆರಂಭಿಸಿತು. ಅಪ್ಪ ಬರದೇ ಇರುವ ಕಾರಣ ಭಯವೂ ಆಯಿತೆನ್ನಿ. `ಅಮ್ಮಾ.. ಅಪ್ಪನನ್ನು ಗಮಿಯ (ಕಾಡೆಮ್ಮೆ) ಅಡ್ಡ ಹಾಕಿಕ್ಕನೇ.. ಅದಕ್ಕೆ ಬಂಜನಿಲ್ಯಾ ಹೆಂಗೆ..' ಎಂದೆ. `ಥೋ ಸುಮ್ನಿರಾ.. ಹಂಗೆಲ್ಲಾ ಎಂತದ್ದೂ ಆಜಿಲ್ಲೆ..' ಎಂದಳು ಅಮ್ಮ. ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆ ದೂರದಲ್ಲಿ ಮನೆಯ ಬೆಳಕು ಕಾಣಿಸತೊಡಗಿತು.
            ಇನ್ನೇನು ಮನೆಗೆ 100 ಮೀಟರ್ ದೂರವಿದೆ ಎನ್ನುವಾಗ ಯಾರೋ ಕೆಮ್ಮಿದ ಸದ್ದಾಯಿತು. ನಾನೊಮ್ಮೆ ಬೆಚ್ಚಿದ್ದೆ. ಕೆಮ್ಮಿನ ಶಬ್ದ ಕೇಳಿದ ಜಾಗದಲ್ಲಿ ಯಾವುದೋ ಬೆಳಕು ಇತ್ತು. ಅದು ನಮ್ಮತ್ತಲೇ ಬರುತ್ತಿತ್ತು. `ತಮಾ..' ಎಂದಿತು ಶಬ್ದ. ನಾನು ಆಲಿಸಿದೆ. ಅಪ್ಪ ಕರೆದಿದ್ದ. ನನಗೆ ಒಮ್ಮೆಲೆ ಧೈರ್ಯ ಬಂದಿತ್ತು. ನಡುವೆಯೇ ಆಶ್ಚರ್ಯ. ಸೈಕಲ್ ಸರಿ ಮಾಡಿಸಿಕೊಂಡು ಬರುತ್ತೇನೆ ಎಂದು ಕಾನಸೂರು ಕಡೆಗೆ ಹೋಗಿದ್ದ ಅಪ್ಪ ಈಗ ಮನೆಯ ಕಡೆಯಿಂದ ನಮ್ಮೆಡೆಗೆ ನಡೆದುಕೊಂಡು ಬರುತ್ತಿದ್ದಾನಲ್ಲ ಇದು ಹೇಗೆ ಸಾಧ್ಯ ಎನ್ನಿಸಿತು. `ನೀ ಹೆಂಗೆ ಬಂದ್ಯೋ..' ಅಪ್ಪನ ಬಳಿ ಕೇಳಿದ್ದೆ. `ಆನು ಬಂದು ಹತ್ತು ನಿಮಿಷ ಆತಾ ತಮಾ.. ಬಂದು ಊಟ ಮುಗಿಸ್ಕಂಡು ಬಂದಿ. ನಿಂಗವ್ ಇನ್ನೂ ಬಂದು ಮುಟ್ಟಿದ್ರಿಲ್ಲೆ ಅಂತ ಮನೆಯಲ್ಲಿ ಹೇಳಿದ್ದ. ಅದಕ್ಕೆ ಕರಕಂಡು ಹೋಪನ ಅಂತ ಬಂದಿ..' ಎಂದ.
              ವಾಸ್ತವದಲ್ಲಿ ನಾವು ಅಡ್ಡದಾರಿಯಲ್ಲಿ ಗುಡ್ಡವನ್ನು ಇಳಿಯುತ್ತಿದ್ದಾಗಲೇ ಅಪ್ಪ ಸೈಕಲ್ ಮೂಲಕ ಮನೆಗೆ ಬಂದಿದ್ದ. ನನಗೆ ಗಡ ಗಡ ಸದ್ದು ಕೇಳಿಸಿದ್ದು ಸೈಕಲ್ಲಿನದ್ದೇ ಆಗಿತ್ತು.  ಕೈ ಹಿಡಿದುಕೊಂಡು ನನ್ನನ್ನು ಕರೆದುಕೊಂಡು ಬರುತ್ತಿದ್ದಳು ಅಮ್ಮ. ಅಪ್ಪ ಬಂದು ಬೆಳಕು ತೋರಿಸಿ, ಮನೆಗೆ ಬಂದು ತಲುಪಿದ್ದೇನೆ. ನನ್ನದು ಊಟವಾಯಿತು ಎಂಬ ಮಾತು ಕೇಳುತ್ತಿದ್ದಂತೆ ನನ್ನ ಕೈ ಮೇಲೇ ನೀರ ಹನಿ ಬಿದ್ದಂತಾಯಿತು. ನಾನು ಮಳೆ ಬಂತೇ ಎಂದು ನೋಡಿದೆ. ಮಳೆ ಬಂದಿರಲಿಲ್ಲ. ಅಮ್ಮ ಬಿಕ್ಕುತ್ತಿದ್ದಳು. ಅಪ್ಪ `ಬನ್ನಿ ಹೋಪನ ಮನಿಗೆ..' ಎಂದ. ಮನೆಯ ಅಂಗಳದತ್ತ ಹೆಜ್ಜೆ ಹಾಕಿದ್ದೆವು.

(ಮುಗಿಯಿತು)

No comments:

Post a Comment