Thursday, September 8, 2016

ಮಾರ್ಗಸೂಚಿ-2

         ಈ ಹಿಂದೊಮ್ಮೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವು ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಬಹುದು ಎನ್ನುವ ಬಗ್ಗೆ ಬರೆದಿದ್ದೆ. ಅದೇ ವರದಿಯನ್ನು ಮುಂದುವರೆಸಿ ಇನ್ನಷ್ಟು ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವ ಕುರಿತು ಈ ಲೇಖನ. ಇನ್ನಷ್ಟು ಹೊಸ ಮಾರ್ಗಗಳಲ್ಲಿ ಬಸ್ ಬಿಡುವ ಕುರಿತು ಇಲಾಖೆಗೊಂದು ಸಲಹೆ.


* ಶಿರಸಿ-ಜೋಯಿಡಾ-ಉಳವಿ
             ಶಿರಸಿಯಿಂದ ಉಳುವಿಗೆ ಬಸ್ ಸಂಚಾರವಿದೆ. ಆದರೆ ಅದು ಜೋಯಿಡಾಕ್ಕೆ ಹೋಗುವುದಿಲ್ಲ. ಬದಲಾಗಿ ದಾಂಡೇಲಿ-ಬಾಪೇಲಿ ಕ್ರಾಸ್ ಮೂಲಕ ಉಳುವಿಯನ್ನು ತಲುಪುತ್ತದೆ. ಗುಂದದ ಮೂಲಕ ತೆರಳುವ ಈ ಬಸ್ ಈ ಭಾಗದ ಜನಸಾಮಾನ್ಯರಿಗೆ ಅನುಕೂಲಕರ. ದಿನಕ್ಕೆ ಎರಡು ಬಾರಿ ಸಂಚಾರ ಮಾಡುವ ಈ ಬಸ್ಸಿನಿಂದ ಸಾಕಷ್ಟು ಅನುಕೂಲತೆಯಿದೆ. ಈ ಬಸ್ಸಿನ ಜೊತೆಗೆ ಶಿರಸಿ-ಭಾಗವತಿ-ಅಂಬಿಕಾನಗರ-ಬಾಪೇಲಿಕ್ರಾಸ್-ಜೋಯಿಡಾ ಕ್ಕೆ ನೇರ ಬಸ್ ಸೌಕರ್ಯ ಕಲ್ಪಿಸಿದರೆ ಸಾಕಷ್ಟು ಜನರಿಗೆ ಅನುಕೂಲವಾಗಬಹುದಾಗಿದೆ. ಅದೆಷ್ಟೋ ಜನರು ಶಿರಸಿಗೂ ಜೋಯಿಡಾಕ್ಕೂ ನೆರವಾಗಿ ಹೋಗಲು ಬಯಸುತ್ತಾರೆ. ಅಂತವರಿಗೆ ದಾಂಡೇಲಿಯನ್ನು ಸುತ್ತುಬಳಸಿ ಹೋಗುವುದು ತಪ್ಪುತ್ತದೆ. ಜೊತೆಯಲ್ಲಿ ಕುಳಗಿ ಮಾರ್ಗದಲ್ಲಿ ಸಿಗುವ ಅದೆಷ್ಟೋ ಹಳ್ಳಿಗರಿಗೆ ಬಸ್ ಸೌಕರ್ಯ ಸಿಕ್ಕಂತಾಗುತ್ತದೆ.

* ಶಿರಸಿ-ಜೋಯಿಡಾ-ಕಾರವಾರ
           ಶಿರಸಿಯಿಂದ ಜೋಯಿಡಾ ಮೂಲಕ ದಿನಕ್ಕೆ ಕನಿಷ್ಟ ಎರಡು ಬಸ್ ಸೌಕರ್ಯ ಒದಗಿಸುವುದು ಜೋಯಿಡಾ ಭಾಗದವರಿಗೆ ಸಾಕಷ್ಟು ಅನುಕೂಲ ಕಲ್ಪಿಸುತ್ತದೆ. ಬೆಳಿಗ್ಗೆ ಒಂದು ಹಾಗೂ ಮದ್ಯಾಹ್ನ ಒಂದು ಬಸ್ ಓಡಿಸುವುದರಿಂದ ಜೋಯಿಡಾ ಭಾಗದ ಜನರು ಕಾರವಾರಕ್ಕೆ ಹಾಗೂ ದಾಂಡೇಲಿಗೆ ತಲುಪಲು ಅನುಕೂಲಕರ. ನೇರವಾಗಿ ಶಿರಸಿ ಹಾಗೂ ಕಾರವಾರ ನಡುವೆ 120 ಕಿಮಿ ಅಂತರವಾದರೆ ಜೋಯಿಡಾ ಮೂಲಕ ತೆರಳಿದರೆ 220 ಕಿ.ಮಿ ದೂರವಾಗುತ್ತದೆ. ಶಿರಸಿಯಿಂದ ದಿನಕ್ಕೆ 2 ಬಸ್ ಹಾಗೂ ಕಾರವಾರದಿಂದ 2 ಬಸ್ ಓಡಿಸುವುದು ಸಾಕಷ್ಟು ಅನುಕೂಲಕರ. ಜೋಯಿಡಾದಿಂದ ಕಾರವಾರಕ್ಕೆ ಬಸ್ ಸೌಕರ್ಯ ಕಡಿಮೆಯಿದೆ. ಈ ಕಾರಣದಿಂದಾಗಿ ಈ ಮಾರ್ಗದಲ್ಲಿ ಬಸ್ ಓಡಿಸುವುದು ಇಲಾಖೆಗೂ ಆದಾಯ ತರುವುದರ ಜೊತೆಗೆ ಜನಸಾಮಾನ್ಯರಿಗೆ ಸಹಕಾರಿಯಾಗಬಲ್ಲದು.

* ಯಲ್ಲಾಪುರ-ಕೈಗಾ-ಕಾರವಾರ
          ಯಲ್ಲಾಪುರದಿಂದ ಕೈಗಾ ಮಾರ್ಗದ ಮೂಲಕ ಕಾರವಾರಕ್ಕೆ ಬಸ್ ಓಡಿಸುವುದು ಸಾಕಷ್ಟು ಉತ್ತಮ. ಈ ಮಾರ್ಗದಲ್ಲಿ ಅನೇಕ ಊರುಗಳು ಸಿಗುತ್ತವೆ. ಈ ಊರುಗಳಿಗೆ ಈ ಬಸ್ ಸೌಕರ್ಯ ಸಹಕಾರಿಯಾಗಬಲ್ಲದು. ವಿಶೇಷವಾಗಿ ವಜ್ರಳ್ಳಿ, ಬಾರೆ, ಬಾಸಲ, ಕಳಚೆ, ಮಲವಳ್ಳಿ ಈ ಮುಂತಾದ ಗ್ರಾಮಗಳ ಜನರು ಕಾರವಾರವನ್ನು ತಲುಪುವುದಕ್ಕಾಗಿ ಈ ಮಾರ್ಗದಲ್ಲಿ ಬಸ್ ಸೌಕರ್ಯ ಒದಗಿಸುವುದು ಅನುಕೂಲಕರವಾಗಿದೆ. ಕೈಗಾ-ಬಾರೆ ನಡುವೆ ಇರುವ ರಸ್ತೆಯನ್ನು ಇನ್ನಷ್ಟು ಸುಧಾರಣೆ ಮಾಡಿದರೆ ಸರ್ವಋತು ಬಸ್ ಸಂಪರ್ಕ ಕಲ್ಪಿಸಬಹುದು. 100 ಕಿಲೋಮೀಟರ್ ಅಂತರದಲ್ಲಿ ಯಲ್ಲಾಪುರ ಹಾಗೂ ಕಾರವಾರ ನಡುವೆ ಸಂ[ರ್ಕ ಸಾಧ್ಯವಾಗಬಹುದಾಗಿದೆ. ಈ ಕುರಿತಂತೆ ಇಲಾಖೆ ಆಲೋಚಿಸುವುದು ಉತ್ತಮ.

*ಮುಂಡಗೋಡ-ಕಲಘಟಗಿ-ಹಳಿಯಾಳ
           ಇಲಾಖೆಗೆ ಹೆಚ್ಚಿನ ಆದಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಮಾರ್ಗ ಅನುಕೂಲಕರ. ಮುಂಡಗೋಡ-ಕಲಘಟಗಿ ಹಾಗೂ ಕಲಘಟಗಿ-ಹಳಿಯಾಳ ಮಾರ್ಗ ಮಧ್ಯದಲ್ಲಿನ ಗ್ರಾಮೀಣ ಪ್ರದೇಶದ ಜನರಿಗೆ ಇದರಿಂದ ಸಾಕಷ್ಟು ಅನುಕೂಲ ದೊರಕಬಹುದಾಗಿದೆ. ಮುಂಡಗೋಡ ಹಾಗೂ ಕಲಘಟಿಗಿ ನಡುವೆ ಮತ್ತು ಹಳಿಯಾಳ-ಕಲಘಟಗಿ ನಡುವೆ ಬಸ್ ಸಂಚರಿಸುತ್ತಿದೆ. ಆದರೆ ಮುಂಡಗೋಡದಿಂದ ಕಲಘಟಗಿ ಮೂಲಕ ಹಳಿಯಾಳ ತಲುಪಲು ನೇರವಾದ ಬಸ್ ಇಲ್ಲ. ಈ ಊರುಗಳ ನಡುವೆ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ ಓಡಿಸುವುದು ಉತ್ತಮ. ಬೆಳಿಗ್ಗೆ ಹಾಗೂ ಸಂಜೆ ಹಳಿಯಾಳದಿಂದ ಅದೇ ರೀತಿ ಬೆಳಿಗ್ಗೆ ಹಾಗೂ ಸಂಜೆ ಮುಂಡಗೋಡದಿಂದ ತಲಾ ಒಂದೊಂದು ಬಸ್ ಓಡಿಸುವುದು ಜನಸಾಮಾನ್ಯರಿಗೆ ಹಾಗೂ ಇಲಾಖೆಗೆ ಉಪಕಾರಿ.

No comments:

Post a Comment