Sunday, July 17, 2016

ತೂಗಾಡುವ ಸೇತುವೆಯಲ್ಲಿ ತೂಗಾಡುವ ಬದುಕು

ಸಮರ್ಪಕ ತೂಗುಸೇತುವೆ ಇಲ್ಲದೇ ಬದುಕು ಹೈರಾಣು

ಉಕ್ಕಿ ಹರಿಯುವ ಅಘನಾಶಿನಿ ನದಿ. ಅದರ ಮೇಲಿನ ತೂಗಾಡುವ ಸೇತುವೆಯನ್ನು ಭಯದಿಂದಲೇ ಸಾಗುವ ಮಕ್ಕಳು. ತಲೆ ಹೊರೆಯ ಮೇಲೆ ಭೀತಿಯಿಂದ ಅಗತ್ಯದ ವಸ್ತುಗಳನ್ನು ಸಾಗಿಸುವ ಜನಸಾಮಾನ್ಯರು. ಸಿದ್ದಾಪುರ ತಾಲೂಕಿನ ಹಸರಗೋಡ ಪಂಚಾಯತದ ಬಾಳೂರು ಹಾಗೂ ಹಂಚಳ್ಳಿಯನ್ನು ಸಂಪರ್ಕಿಸುವ ತೂಗುಸೇತುವೆ ಇಂತಹ ದುರಂತದ ಪರಿಸ್ಥಿತಿಗೆ ಕಾರಣವಾಗಿದೆ.
ಬಾಳೂರಿನಲ್ಲಿ ಹರಿಯುವ ಅಘನಾಶಿನಿ ನದಿಗೆ ಅಡ್ಡಲಾಗಿ ಸ್ಥಳೀಯರೇ ಮುತುವರ್ಜಿ ವಹಿಸಿ ತೂಗು ಸೇತುವೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಡಿಕೆಯ ದಬ್ಬೆ, ಕಬ್ಬಿಣದ ಕೇಬಲ್ ಸಹಾಯದಿಂದ ನಿರ್ಮಾಣ ಮಾಡಲಾಗಿರುವ ಈ ತೂಗುಸೇತುವೆ ಅಜಮಾಸು 100 ಮೀಟರ್ ಉದ್ದವಿದೆ. ಅಘನಾಶಿನಿ ನದಿಯ ಎರಡೂ ದಡಗಳಲ್ಲಿರುವ ಮರಗಳನ್ನು ಆಧರಿಸಿ ಈ ತೂಗುಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ತೂಗುಸೇತುವೆಯ ಉಕ್ಕಿನ ಕೇಬಲ್ಗಳು ಈಗಾಗಲೇ ತುಕ್ಕು ಹಿಡಿದಿದೆ. ನಡೆದಾಡಲು ಅನುಕೂಲವಾಗುವಂತೆ ಅಡಿಕೆಯ ದಬ್ಬೆ, ಬಿದಿರಿನ ಎಳೆಗಳನ್ನು ಹಾಕಲಾಗಿದ್ದು ಅವೂ ಕೂಡ ಲಡ್ಡಾಗಿದ್ದು, ದುರಂತಕ್ಕಾಗಿ ಬಾಯ್ತೆರೆದುಕೊಂಡಿದೆ.
ಈ ಸೇತುವೆಯ ಮೇಲೆ ದಿನಂಪ್ರತಿ ನೂರಾರು ಜನರು ಓಡಾಟ ನಡೆಸುತ್ತಾರೆ. ಬಾಳೂರು, ಹೊಸಗದ್ದೆ ಭಾಗವನ್ನು ಹಂಚಳ್ಳಿ, ಕೆಂದಿಗೆತೋಟ, ಬಣಗಿ ಈ ಮುಂತಾದ ಗ್ರಾಮಗಳಿಗೆ ಈ ತೂಗುಸೇತುವೆ ಸಂಪರ್ಕವನ್ನು ಕಲ್ಪಿಸುತ್ತವೆ. ಹಂಚಳ್ಳಿ, ಕೆಂದಿಗೆತೋಟ ಈ ಮುಂತಾದ ಗ್ರಾಮಸ್ಥರು ಕೂಗಳತೆಯಲ್ಲಿರುವ ಹೊಸಗದ್ದೆ ಹಾಗೂ ಬಾಳೂರನ್ನು ತಲುಪಲು ಇರುವ ಸನಿಹದ ದಾರಿ ಇದಾಗಿದೆ. ಹಸರಗೋಡ ಗ್ರಾಮ ಪಂಚಾಯತಿಯನ್ನು ತಲುಪಲು, ಹೊಸಗದ್ದೆ ಶಾಲೆಗೆ ತೆರಳಲು ಈ ಮಾರ್ಗವೇ ಹತ್ತಿರದ್ದು ಎನ್ನಿಸಿಕೊಂಡಿದೆ. ಬಾಳೂರಿನ ಮೂಲಕ ತೆರಳುವ ಬಾಳೇಸರ ಬಸ್ನ್ನು ಹತ್ತಬೇಕಾದರೆ ಈ ಗ್ರಾಮಸ್ಥರು ಇದೇ ತೂಗುಸೇತುವೆಯನ್ನೇ ಬಳಸಬೇಕಾದ ಅನಿವಾರ್ಯತೆಯಿದೆ. ಈ ಮಾರ್ಗವನ್ನು ಹೊರತುಪಡಿಸಿದರೆ ರಸ್ತೆ ಮಾರ್ಗವೊಂದಿದೆಯಾದರೂ ಹೊಸಗದ್ದೆ, ಬಾಳೂರನ್ನು ತಲುಪಬೇಕಾದರೆ ಅಜಮಾಸು 8 ಕಿ.ಮಿ ಸುತ್ತಿ ಬಳಸಿ ಬರಬೇಕಾಗುತ್ತದೆ.
ಈ ತೂಗುಸೇತುವೆಯ ಮೇಲೆ ಏಕಕಾಲಕ್ಕೆ ಮೂರು ಅಥವಾ ಅದಕ್ಕೂ ಹೆಚ್ಚಿನ ಜನರು ನಡೆದರೆ ಸಾಕು ತೂಗಾಡಲು ಆರಂಭವಾಗುತ್ತದೆ. ಅತ್ತಿಂದಿತ್ತ ಹೊಯ್ದಾಡುವ ಈ ಮಾರ್ಗದಲ್ಲಿ ನಡೆಯುವುದೆಂದರೆ ದುಸ್ತರ ಎನ್ನುವಂತಾಗಿದೆ. ಶಾಲಾ ಮಕ್ಕಳಂತೂ ಒಂದು ಕೈಯಲ್ಲಿ ಛತ್ರಿಯನ್ನು ಹಿಡಿದು ಪ್ರಯಾಸದಿಂದ ಸೇತುವೆ ದಾಟುತ್ತಾರೆ. ಈ ಸಂದರ್ಭದಲ್ಲಿ ಸ್ವಲ್ಪವೇ ಯಾಮಾರಿದರೂ ಕೂಡ ಕೆಳಗೆ ಉಕ್ಕಿ ಹರಿಯುವ ಅಘನಾಶಿನಿ ನದಿಯಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳು ತೀವ್ರವಾಗಿದೆ. ನಾಲ್ಕಾರು ವರ್ಷಗಳ ಹಿಂದೆ ಸ್ಥಳೀಯರು ನಿರ್ಮಿಸಿದ್ದ ತೂಗುಸೇತುವೆ ಅಘನಾಶಿನಿ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ನಂತರದಲ್ಲಿ ಈ ಸ್ಥಳೀಯರೇ ಮುಂದಾಳುಗಳಾಗಿ ಮತ್ತೊಮ್ಮೆ ತೂಗುಸೇತುವೆ ನಿರ್ಮಾಣ ಮಾಡಿದ್ದರು. ಇದೀಗ ಈ ಸೇತುವೆ ಕೂಡ ಶಿಥಿಲಾವಸ್ಥೆ ತಲುಪಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಮಾರ್ಗದಲ್ಲಿ ಸದೃಢವಾದ ತೂಗುಸೇತುವೆ ನಿರ್ಮಾಣ ಮಾಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ. ಸರಕಾರ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವುದೂ ಕೂಡ ಈ ಮಾರ್ಗದಲ್ಲಿ ಸಂಚಾರ ಮಾಡುವವರ ಆಗ್ರಹವಾಗಿದೆ. ಶಿಥಿಲಾವಸ್ಥೆಯನ್ನು ತಲುಪಿರುವ ತೂಗುಸೇತುವೆ ಬದಲು, ವಿಶೇಷ ಅನುದಾನವನ್ನು ಮಂಜೂರು ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಿಂಧ ಶಿವಪುರಕ್ಕೆ ಸಂಚಾರ ಕಲ್ಪಿಸುವ ಪ್ರದೇಶದಲ್ಲಿ ಅಥವಾ ಶಿರಸಿ ತಾಲೂಕಿನ ಸಹಸ್ರಲಿಂಗದ ಬಳಿ ನಿರ್ಮಾಣ ಮಾಡಿದಂತೆ ಸುಸಜ್ಜಿತ ತೂಗುಸೇತುವೆ ನಿರ್ಮಾಣ ಮಾಡಬೇಕು ಎನ್ನುವುದೂ ಕೂಡ ಸ್ಥಳೀಯರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಜಿ.ಪಂ, ತಾ.ಪಂ ಸದಸ್ಯರು ಪ್ರಯತ್ನ ನಡೆಸಬೇಕಾದ ಅನಿವಾರ್ಯತೆಯಿದೆ. ಹೀಗಾದಾಗ ಮಾತ್ರ ನಾಲ್ಕೈದು ಗ್ರಾಮಗಳ ಜನರು, ಶಾಲಾ ಮಕ್ಕಳು ನಿಟ್ಟುಸಿರು ಬಿಡಲು ಸಾಧ್ಯ.

-------

ಈ ಸೇತುವೆ ಬಹಳ ಶಿಥಿಲವಾಗಿದೆ. ಮಕ್ಕಳು ಭಯದಿಂದಲೇ ತೂಗುಸೇತುವೆ ದಾಟುತ್ತಾರೆ. ಜೋರು ಮಳೆ, ಗಾಳಿ ಬಂದ ಸಂದರ್ಭದಲ್ಲಿ ಈ ತೂಗು ಸೇತುವೆ ದಾಟುವುದು ಅಪಾಯಕಾರಿ ಕೂಡ ಹೌದು. ಇದರ ಬದಲಾಗಿ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಬೇಕಿದೆ.
ರಾಜು ನಾಯ್ಕ
ಹಾರ್ಸಿಕಟ್ಟಾ


No comments:

Post a Comment