Wednesday, July 6, 2016

ಬನವಾಸಿ ದೇವಾಲಯಕ್ಕೆ ವನವಾಸ ಯೋಗ.... ಸೋರುತಿಹುದು ಮಧುಕೇಶ್ವರನ ದೇವಾಲಯ

ಪಂಪನ ನಾಡಿನಲ್ಲಿ ಇದೇನು ದುಸ್ಥಿತಿ? ಕಣ್ಮುಚ್ಚಿ ಕುಳಿತ ಪುರಾತತ್ವ ಇಲಾಖೆ

---------------------


ಕನ್ನಡದ ಪ್ರಪ್ರಥಮ ರಾಜರು ಎನ್ನಿಸಿಕೊಂಡಿರುವ ಕದಂಬರ ಆರಾಧ್ಯದೈವ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ. ಆದಿಕವಿ ಪಂಪ ಮೆಚ್ಚಿ ಹಾಡಿಹೊಗಳಿದ ಬನವಾಸಿಯ ಮಧುಕೇಶ್ವರನ ದೇವಸ್ಥಾನಕ್ಕೆ ವನವಾಸ ಯೋಗ ಪ್ರಾಪ್ತಿಯಾಗಿದೆ.
 ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಬನವಾಸಿಯ ಮಧುಕೇಶ್ವರ ದೇವಾಲಯ ದಕ್ಷಿಣ ಭಾರತದಲ್ಲಿಯೇ ಅತೀ ಪ್ರಾಚೀನ ದೇವಾಲಯಗಳಲ್ಲಿ ಒಂದು ಎನ್ನುವ ಖ್ಯಾತಿಯನ್ನು ಹೊಂದಿದೆ. ಕದಂಬ ವಂಶಸ್ಥರು ತಮ್ಮ ರಾಜಧಾನಿಯಾದ ಬನವಾಸಿಯಲ್ಲಿ ನಿತ್ಯ ಆರಾಧನೆಗಾಗಿ ನಿಮರ್ಾಣ ಮಾಡಿರುವ ದೇವಾಲಯವೀಗ ಮಳೆ ಬಂದರೆ ಸಾಕು ಸೋರುತ್ತಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಂಡು ದೇವಸ್ಥಾನ ಅಭಿವೃದ್ಧಿ ಮಾಡಬೇಕಾಗಿದ್ದ ಪುರಾತತ್ವ ಇಲಾಖೆ ಕಣ್ಮುಚ್ಚಿ ಕುಳಿತಿದೆ.
 ಕನ್ನಡದ ಪ್ರಪ್ರಥಮ ರಾಜಧಾನಿ ಎನ್ನುವ ಖ್ಯಾತಿ ಬನವಾಸಿಗಿದೆ. ಬನವಾಸಿಯ ಹೃದಯ ಭಾಗದಲ್ಲಿಯೇ ಇರುವ ಮಧುಕೇಶ್ವರ ದೇವಾಲದ ಬಗ್ಗೆ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವಿದೆ. ಈ ಪ್ರದೇಶದಲ್ಲಿಯೇ ಆದಿಕವಿ ಪಂಪ ಬನವಾಸಿಯ ಚೆಲುವನ್ನು ವಣರ್ಿಸಿದ್ದಾನೆ ಎನ್ನುವ ಪ್ರತೀತಿಯಿದೆ. ಅಪರೂಪದ ಶಿಲಾಮಂಚ ಈ ದೇವಸ್ಥಾನದ ಆವರಣದಲ್ಲಿಯೇ ಇದೆ. ಬೃಹತ್ ನಂದಿ, ಶಿಲಾದೇಗುಲ ಭವ್ಯವಾಗಿದೆ. ಕನರ್ಾಟಕದ ಪ್ರಾಚೀನ ಶಿಲಾ ವಿನ್ಯಾಸಗಳನ್ನು ಒಳಗೊಂಡಿರುವ ಮಧುಕೇಶ್ವರ ದೇವಾಲಯ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಶಿರಸಿಯಿಂದ 24 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನವಿದ್ದು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಪುರಾತತ್ವ ಇಲಾಖೆ ವ್ಯಾಪ್ತಿಗೆ ಈ ದೇವಾಲಯ ಸೇರ್ಪಡೆಯಾದ ನಂತರದಿಂದ ಇದುವರೆಗೂ ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣದಿಂದಲೇ ದೇವಾಲಯ ಜೀರ್ಣಗೊಳ್ಳುತ್ತಿದ್ದು ಮಳೆಗಾಲದಲ್ಲಿ ಸೋರಲು ಆರಂಭಿಸಿದೆ.
 ದೇವಸ್ಥಾನ ಸೋರುತ್ತಿರುವುದರಿಂದ ಆವರಣದಲ್ಲಿರುವ ಸುಂದರ ಕೆತ್ತನೆಯ ಕಂಬಗಳು, ಕೂಡುಗಟ್ಟೆಗಳಿಂದ ಆವೃತವಾದ ಸುಖನಾಸಿನಿ, ಮುಖಮಂಟಪ, ಪ್ರದಕ್ಷಿಣಾ ಪಥ, ದೇವಾಲಯದ ಗರ್ಭಗುಡಿ, ಆವರಣದಲ್ಲಿನ ಆಸನಗಳು, 7.5 ಅಡಿ ಎತ್ತರದ ಭವ್ಯ ನಂದಿ ವಿಗ್ರಹಗಳೆಲ್ಲ ಮಳೆ ನೀರಿನಲ್ಲಿ ತೋಯುತ್ತಿದೆ. ಬಹುತೇಕ ಶಿಲಾಕೃತಿಗಳು ಒದ್ದೆಯಾಗಿ ಹಸುರು ಬಣ್ಣಕ್ಕೆ ತಿರುಗುತ್ತಿದೆ. ನಿರಂತರವಾಗಿ ಮಳೆ ನೀರು ಸೋರುವುದರಿಂದ ಶೀಲಾಮಯ ದೇವಾಲಯದ ಪದರಗಳು ಜೀರ್ಣವಾಗುತ್ತಿವೆ. ಕಳೆದೆರಡು ವರ್ಷಗಳಿಂದ ಮಳೆ ಪ್ರಾರಂಭವಾಗುತ್ತಿದ್ದಂತೆ ಇದೇ ರೀತಿ ದೇವಾಲಯ ಸಂಪೂರ್ಣ ಸೋರುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಪುರಾತತ್ವ ಇಲಾಖೆ ಮಾತ್ರ ಜಾಣ ಕುರುಡುತನ ತೋರುತ್ತಿದೆ. ಪರಿಣಾಮವಾಗಿ ಇತಿಹಾಸದ ಭವ್ಯ ಕುರುಹೊಂದು ಸದ್ದಿಲ್ಲದೇ ನಶಿಸಿಹೋಗುತ್ತಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.
 ಎರಡು ಸಾವಿರ ವರ್ಷಗಳಿಂದ ಮಳೆ ಬಿಸಿಲಿನ ಘಾಸಿಗೊಳಗಾಗಿ ನವೆದಿದ್ದ ಈ ಶಿಲಾದೇಗುಲ 1970ರ ದಶಕದಲ್ಲಿ ಮೊದಲ ಬಾರಿಗೆ ಸೋರಲು ಆರಂಭವಾಗಿತ್ತು. ಆ ಸಂದರ್ಭದಲ್ಲಿ ಪುರಾತತ್ವ ಇಲಾಖೆ ದೇವಸ್ಥಾನದ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಮಧುಕೇಶ್ವರನ ದೇವಾಲಯದ ಮೇಲ್ಚಾವಣಿಯ ಗಾರೆ ಲೇಪವನ್ನು ತೆಗೆದು ರಾಸಾಯನಿಕ ಲೇಪವನ್ನು ಬಳಿದಿತ್ತೆನ್ನಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ದೇವಾಲಯ ಸೋರುವ ಪ್ರಕರಣ ಪುನರಾವತರ್ಿತವಾಗುತ್ತಿದೆ. 2010ರ ಆಸುಪಾಸಿನಲ್ಲಿ ಮತ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಂಡು ಶಿಲೆಗಳಿಗೆ ಲೋಪವಾಗದಿರಲು ಬೆಲ್ಲ, ಮಣ್ಣು, ಸುಣ್ಣ, ದಾಲ್ಚಿನ್ನಿ ಎಣ್ಣೆ ಹಾಗೂ ರಾಸಾಯನಿಕಗಳನ್ನು ಸೇರಿಸಿ ಇಡೀ ದೇವಾಲಯದ ಮೇಲಿನ ಛಾವಣಿಯನ್ನು ಸ್ಥಳಿಕರನ್ನು ದೂರವೇ ಇಟ್ಟು ಪುರಾತತ್ವ ಇಲಾಖೆ ಗುಟ್ಟಾಗಿ ಮಾಡಿ ಮುಗಿಸಿತ್ತು. ಪುರಾತತ್ವ ಇಲಾಖೆಯ ಈ ಕಾರ್ಯದ ಬಗ್ಗೆ ಆ ಸಂದರ್ಭದಲ್ಲಿ ಅಸಮಧಾನವೂ ವ್ಯಕ್ತವಾಗಿತ್ತು. ಪಾರದರ್ಶಕತೆ ಇಲ್ಲದೆ ಈವರೆಗೆ ಮೂರ್ನಾಲ್ಕು ಬಾರಿ ದುರಸ್ಥಿ ಕಾರ್ಯ ಕೈಗೊಂಡರೂ ಸೋರುವುದು ಮಾತ್ರ ನಿಲ್ಲದಿರುವುದು ದುರಂತ ಎನ್ನುತ್ತಾರೆ ಬನವಾಸಿಗರು.
 ಇತಿಹಾಸ ಮರುಕುಳಿಸುತ್ತದೆ ಎನ್ನುವ ಗಾದೆಯ ಮಾತಿದ್ದರೂ ಬನವಾಸಿಯ ದೇವಾಲಯದ ಮಟ್ಟಿಗೆ ಸೋರುವ ಇತಿಹಾಸ ಮರುಕುಳಿಸುತ್ತಿರುವದು ಕನ್ನಡಿಗರಿಗೆ ಅಪಮಾನದ ಸಂಗತಿಯಾಗಿದೆ. ತಕ್ಷಣ ದೇವಾಲಯದ ಜೀಣೋದ್ಧಾರ ಕೈಗೊಂಡು ಕನ್ನಡದ ಹೆಮ್ಮೆಯ ದೇವಾಲಯವನ್ನು ರಕ್ಷಿಸಬೇಕು ಎನ್ನುವುದು ಕನ್ನಡಿಗರ ಒತ್ತಾಸೆಯಾಗಿದೆ. ಜಡ್ಡುಗಟ್ಟಿರುವ ಪುರಾತತ್ವ ಇಲಾಖೆಗೆ ಚುರುಕು ಮುಟ್ಟಿಸುವ ಕಾರ್ಯ ಆಗಬೇಕಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಹಲವಾರು ನಿಯಮಗಳನ್ನು ಮುಂದಿಡುವ ಪುರಾತತ್ವ ಇಲಾಖೆ, ಬನವಾಸಿ ದೇವಾಲಯದ ವಿಷಯದಲ್ಲಿ ತೋರುತ್ತಿರುವ ಅಸಡ್ಡೆ ಅಕ್ಷಮ್ಯವಾದುದು. ಈ ಕುರಿತಂತೆ ಜವಾಬ್ದಾರಿ ಮರೆತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೂಡಲೇ ದೇವಸ್ಥಾನ ಸೋರುವುದನ್ನು ತಡೆಗಟ್ಟುವ ಅಗತ್ಯವೂ ಇದೆ. ಹೀಗಾದಾಗ ಮಾತ್ರ ಸಹಸ್ರ ವರ್ಷಗಳಿಂದ, ಕವಿಗಳಿಂದ ಹಾಡಿ ಹೊಗಳಿಸಿಕೊಂಡು ಬಂದಿರುವ ಬನವಾಸಿಯ ಮಧುಕೇಶ್ವರ ದೇಗುಲ ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಉಳಿಯಬಹುದಾಗಿದೆ.

********************

 ದೇವಸ್ಥಾನದ ಆವರಣದಲ್ಲಿ ಛಾಯಾಚಿತ್ರ ತೆಗೆದರೆ ದೇಗುಲ ಹಾಳಾಗುತ್ತದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಬನವಾಸಿ ದೇಗುಲ ಸೋರುತ್ತಿದ್ದರೂ ಕೂಡ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜವಾಬ್ದಾರಿ ಮರೆತ ಪುರಾತತ್ವ ಇಲಾಖೆ ಹೀಗೆ ಹಾಳುಗೆಡವುವ ಸಲುವಾಗಿ ದೇವಸ್ಥಾನವನ್ನು ವಹಿಸಿಕೊಳ್ಳಬೇಕಾಗಿತ್ತೇ? ಹುಬ್ಬಳ್ಳಿಯಲ್ಲಿ ಕುಳಿತ ಅಧಿಕಾರಿಗಳು ಮುಂದಿನ ದಿನಗಳಲ್ಲಾದರೂ ದೇಗುಲ ಸೋರುವುದನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಕ್ರೋಶದಿಂದದ ನುಡಿಯುತ್ತಿದ್ದಾರೆ.

No comments:

Post a Comment