Monday, July 18, 2016

ನಿರ್ವಹಣೆಯಿಲ್ಲದೇ ಸೊರಗಿದ ಪ್ರವಾಸಿತಾಣ... ಪ್ಲಾಸ್ಟಿಕ್ ಮಯವಾದ ಉಂಚಳ್ಳಿ ಜಲಪಾತ

ದೇಶ-ವಿದೇಶಗಳ ಪ್ರವಾಸಿಗರನ್ನು ಆಕಷರ್ಿಸುತ್ತಿರುವ ಉಂಚಳ್ಳಿ ಜಲಪಾತ ಪ್ಲಾಸ್ಟಿಕ್ ಮಯವಾಗಿ ಬದಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿ ಬಿದ್ದಿದ್ದು ಜಲಪಾತದ ಪ್ರದೇಶ ಗಬ್ಬೆದ್ದು ನಾರುತ್ತಿದೆ.
 ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿರುವ ಉಂಚಳ್ಳಿ ಜಲಪಾತ ಮೈದುಂಬಿದೆ. ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕನರ್ಾಟಕವಲ್ಲದೇ ಮಹಾರಾಷ್ಟ್ರ, ಆಂಧ್ರ, ಗೋವಾ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸಿಗರೂ ಕೂಡ ಉಂಚಳ್ಳಿ ಜಲಪಾತದ ಕಡೆಗೆ ಮುಖ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಜಲಪಾತದ ಸೌಂದರ್ಯವನ್ನು ಇಮ್ಮಡಿಸಿದೆ. ಆದರೆ ಉಂಚಳ್ಳಿ ಜಲಪಾತದ ಪರಿಸರದಲ್ಲಿ ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯ ಜಲಪಾತದ ಸೊಬಗಿಗೆ ಕಪ್ಪು ಚುಕ್ಕೆ ಎನ್ನಿಸಿದೆ.
 ಉಂಚಳ್ಳಿ ಜಲಪಾತದ ಆವರಣದಲ್ಲಿ ಎತ್ತ ನೋಡಿದರತ್ತ ಪ್ಲಾಸ್ಟಿಕ್ ತ್ಯಾಜ್ಯಗಳು ಹೇರಳವಾಗಿ ಬಿದ್ದುಕೊಂಡಿವೆ. ಪ್ರವಾಸಿಗರು ತರುವ ತಿಂಡಿಯ ಪೊಟ್ಟಣಗಳು ಖಾದ್ಯಗಳ ಪೊಟ್ಟಣಗಳು ಬಿದ್ದುಕೊಂಡಿವೆ. ಅಷ್ಟೇ ಅಲ್ಲದೇ ಜಲಪಾತದ ಪರಿಸರದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದುಕೊಂಡಿವೆ. ಜಲಪಾತವನ್ನು ವೀಕ್ಷಣೆ ಮಾಡುವ ಒಂದು ಸ್ಥಳದಲ್ಲಂತೂ ಯಾವುದೋ ಜನ್ಮದಿನವನ್ನು ಆಚರಣೆ ಮಾಡಲಾಗಿದ್ದು, ಅದಕ್ಕಾಗಿ ಬಳಕೆ ಮಾಡಲಾಗಿರುವ ತರಹೇವಾರಿ ಪ್ಲಾಸ್ಟಿಕ್ಗಳು, ತಿಂಡಿ ತಿಂದು ಎಸೆಯಲಾಗಿರುವ ಪ್ಲೇಟ್ಗಳು, ಬೇರೆ ಬೇರೆ ಕಂಪನಿಗಳ ಮದ್ಯದ ಬಾಟಲಿಗಳು ಬಿದ್ದುಕೊಂಡಿವೆ. ಪರಿಣಾಮವಾಗಿ ಪ್ರವಾಸಿಗರು ಹೇರಳವಾಗಿ ಆಗಮಿಸಿ ಎಲ್ಲರ ಆಕರ್ಷಣೆಗೆ ಕಾರಣವಾಗಬೇಕಾಗಿದ್ದ ಜಲಪಾತ ಸೌಂದರ್ಯಕ್ಕೆ ಮಸಿ ಬಳಿಸಿಕೊಳ್ಳುವಂತಾಗಿದೆ.
 ಜಲಪಾತದ ಪ್ರದೇಶದಲ್ಲಿಯೇ ಶೌಚಾಲಯವಿದ್ದು ಹಾಳು ಸುರಿಯುತ್ತಿದೆ. ನಿರ್ವಹಣೆಯಿಲ್ಲದೇ ಈ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಮರದ ಎಲೆಗಳು, ಮುರಿದ ಮರದ ಕೊಂಬೆಗಳು ಈ ಶೌಚಾಲಯದಲ್ಲಿ ಬಿದ್ದುಕೊಂಡಿವೆ. ಶೌಚಾಲಯದ ಬಾಗಿಲು ಮುರಿದು ಬಿದ್ದಿದೆ. ಅಷ್ಟೇ ಅಲ್ಲದೇ ಈ ಶೌಚಾಲಯ ಜಲಪಾತ ವೀಕ್ಷಣೆಗೆ ಆಗಮಿಸುವ ಪಡ್ಡೆ ಹುಡುಗರ ಅನೈತಿಕ ಚಟುವಟಿಕೆಗಳಿಗೂ ತಾಣವಾಗಿ ಮಾಪರ್ಾಡಾಗಿದೆ. ಆದರೆ ಉಂಚಳ್ಳಿ ಜಲಪಾತ ಹಾಗೂ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದ್ದ ಪ್ರವಾಸೋದ್ಯಮ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಪರಿಣಾಮವಾಗಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರು ಜಲಪಾತದ ಕುರಿತು ನಕಾರಾತ್ಮಕವಾಗಿ ಮಾತನಾಡುವಂತಾಗಿದೆ.
 ಜಲಪಾತಕ್ಕಿಂತಲೂ 1 ಕಿ.ಮಿ ದೂರದಲ್ಲಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಕಾವಲು ಗೋಪುರ ಮಾಡಿ, ಆಗಮಿಸುವ ಪ್ರವಾಸಿಗರ ಬಳಿ ಪ್ರವೇಶಧನವನ್ನು ಪಡೆದುಕೊಳ್ಳುತ್ತಿದೆ. ಮೊಟಾರ್ಸೈಕಲ್ ಹಾಗೂ ಕಾರುಗಳಿಗೆ ಪ್ರತ್ಯೇಕವಾಗಿ ಪ್ರವೇಶಧನವನ್ನು ವಸೂಲಿ ಮಾಡಲಾಗುತ್ತಿದೆ. ಆದರೆ ಗ್ರಾಮ ಅರಣ್ಯ ಸಮಿತಿ ಪ್ರವೇಶ ಧನವನ್ನು ವಸೂಲಿ ಮಾಡುವಲ್ಲಿ ತೋರುವ ಉತ್ಸಾಹವನ್ನು ಜಲಪಾತದ ಪ್ರದೇಶದ ನಿರ್ವಹಣೆಯ ಕಡೆಗೆ ತೋರುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ಜಲಪಾತದ ಪ್ರದೇಶದಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಡೆದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಶೌಚಾಲಯವನ್ನು ಸರಿಪಡಿಸಿ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕಾಗಿದ್ದ ಗ್ರಾಮ ಅರಣ್ಯ ಸಮಿತಿ ಪ್ರವೇಶಧನ ವಸೂಲಿಗೆ ಮಾತ್ರ ಸೀಮಿತವಾಗಿದೆ.
 ಬ್ರಿಟನ್ ಅಧಿಕಾರಿ ಜಾಜರ್್ ಲೂಷಿಂಗ್ಟನ್ ಎಂಬಾತ ಈ ಜಲಪಾತವನ್ನು ಕಂಡು ಹಿಡಿದು ಹೊರ ಜಗತ್ತಿಗೆ ಪರಿಚಯಿಸಿದ, ಜಲಪಾತದ ಸೌಂದರ್ಯವನ್ನು ಹಾಡಿ ಹೊಗಳಿದ ಎನ್ನುವ ಪ್ರತೀತಿಯಿದೆ. ತದನಂತರದಲ್ಲಿ ತನ್ನ ಸೌಂದರ್ಯದಿಂದಲೇ ಹೆಸರುವಾಸಿಯಾಗಿದ್ದ ಉಂಚಳ್ಳಿ ಜಲಪಾತ ಈಗ ಮಾತ್ರ ತ್ಯಾಜ್ಯದಿಂದಾಗಿ ಕುಖ್ಯಾತಿ ಪಡೆದುಕೊಳ್ಳುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತಿಗಳು ಜಲಪಾತದ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಹೀಗಾದಾಗ ಮಾತ್ರ ಇನ್ನಷ್ಟು ಪ್ರವಾಸಿಗರನ್ನು ಆಕಷರ್ಿಸಿ ಆದಾಯವನ್ನು ಜಲಪಾತ ಹೆಚ್ಚಿಸಬಹುದಾಗಿದೆ.

.....
 ಉಂಚಳ್ಳಿ ಜಲಪಾತದ ಎಲ್ಲ ಕಡೆಗಳಲ್ಲಿ ಮಧ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಬಿದ್ದುಕೊಂಡಿವೆ. ನಿಸರ್ಗದ ಮಡಿಲಿನಲ್ಲಿ ಸ್ವಚ್ಛವಾಗಿ ಇರಬಹುದಾಗಿದ್ದ ಪ್ರವಾಸಿ ತಾಣ ಇದರಿಂದಾಗಿ ಮಸಿ ಬಳಿದುಕೊಳ್ಳುತ್ತಿದೆ. ಈ ತಾಣದಲ್ಲಿ ತ್ಯಾಜ್ಯ ಹೆಚ್ಚಿರುವುದರಲ್ಲಿ ಪ್ರವಾಸಿಗರ ತಪ್ಪು ಸಾಕಷ್ಟಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದಿದ್ದಾರೆ. ಈ ಪ್ರದೇಶದ ನಿರ್ವಹಣೆಯನ್ನು ಕೈಗೊಳ್ಳಬೇಕಿದ್ದವರೂ ಕೂಡ ಜವಾಬ್ದಾರಿಯನ್ನು ಮರೆತಿದ್ದಾರೆ.
ಅಬ್ದುಲ್ ಸಮದ್
ಪ್ರವಾಸಿ
ಹಾಸನ

Sunday, July 17, 2016

ಅಘನಾಶಿನಿ ತೀರದ ಜನರ ನಿದ್ದೆಗೆಡಿಸಿದ ನದಿ ತಿರುವು ಹುನ್ನಾರ

ಮತ್ತೆ ಬಂದ ನದಿ ತಿರುವು ಗುಮ್ಮ

ಇನ್ನೆಲ್ಲಿ ಈ ಸೊಬಗು??
ಜಿಲ್ಲೆಯ ಮೇಲೆ ಸದಾ ಒಂದಿಲ್ಲೊಂದು ನದಿ ಯೋಜನೆಗಳ ಗುಮ್ಮ ಕಾಡುತ್ತಲೇ ಇದೆ. ಅಂತಹ ನದಿ ಯೋಜನೆಗಳ ಯಾದಿಯಲ್ಲಿ ಹೊಸದಾಗಿ ಅಘನಾಶಿನಿ ನದಿ ತಿರುವು ಕೇಳಿ ಬರಲು ಆರಂಭಿಸಿದೆ. ಹೊಸ ಯೋಜನೆ ಜನಸಾಮಾನ್ಯರ ನೆಮ್ಮದಿಯನ್ನು ಕದಡಿದೆ.
ಜಿಲ್ಲೆ ಯೋಜನೆಗಳ ಭಾರದಲ್ಲಿ ಈಗಾಗಲೇ ನಲುಗಿದೆ. ಕೈಗಾ ಅಣುವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ, ಸೀಬರ್ಡ್, ಕೊಡಸಳ್ಳಿ ಅಣೆಕಟ್ಟು, ಸೂಪಾ ಡ್ಯಾಂ ಸೇರಿದಂತೆ ಹತ್ತು ಹಲವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಜನರ ನೆಮ್ಮದಿಯನ್ನು ಕದಡಿ ಹಾಕಿದೆ. ಇಷ್ಟರ ಜೊತೆಗೆ ಆಗಾಗ ಸದ್ದು ಮಾಡುವ ಕಿರು ಜಲವಿದ್ಯುತ್ ಯೋಜನೆಗಳ ಪ್ರಸ್ತಾಪ ಕೂಡ ಜಿಲ್ಲೆಯ ಜನರನ್ನು ಹಿಂಡುತ್ತಿವೆ. ವರದಾ ಹಾಗೂ ಶಾಲ್ಮಲಾ ನದಿ ಜೋಡಣೆ ಕೂಡ ಕೆಲ ಕಾಲ ಸದ್ದು ಮಾಡಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಇನ್ನೊಂದು ಪ್ರಮುಖ ನದಿ ಎನ್ನಿಸಿಕೊಂಡಿರುವ ಅಘನಾಶಿನಿ ನದಿ ತಿರುವು ಯೋಜನೆ ಸದ್ದು ಮಾಡಲು ಆರಂಭಿಸಿದೆ.
ಅಘನಾಶಿನಿ ನದಿ ತಿರುವು ಕುರಿತಂತೆ ಸರಕಾರ ನೀರಾವರಿ ತಜ್ಞರ ಹಾಗೂ ಅಧಿಕಾರಿಗನ್ನೊಳಗೊಂಡ ಸಮಿತಿಯೊಂದನ್ನು ರಚನೆ ಮಾಡಿದೆ. ತನ್ಮೂಲಕ ಉತ್ತರ ಕನ್ನಡದ ಲಕ್ಷಕ್ಕೂ ಅಧಿಕ ಜನರ ನೆಮ್ಮದಿಯನ್ನು ಕೆಡಿಸಲು ಪೀಠಿಕೆ ಆರಂಭವಾಗಿದೆ. ಅಘನಾಶಿನಿ ನದಿಗೆ ಜೀವವೈವಿಧ್ಯ ಜಗತ್ತಿನಲ್ಲಿ ಉನ್ನತ ಸ್ಥಾನವಿದೆ. ಅಪರೂಪದ ಅಪ್ಪೆಮಿಡಿಗಳು, ಸಿಂಹ ಬಾಲದ ಲಂಗೂರ್, ಅಳಿವಿನ ಅಂಚಿನಲ್ಲಿರುವ ನೀರುನಾಯಿಗಳು, ಕರಾವಳಿ ತೀರದಲ್ಲಿ ಚಿಪ್ಪುಗಳು, ಅಪರೂಪದ ಮೀನುಗಳು ಸೇರಿದಂತೆ ಸಸ್ಯ ಹಾಗೂ ಜೀವ ಸಂಕುಲಗಳಿವೆ. ಇನ್ನೂ ಅದೆಷ್ಟೋ ಪ್ರಬೇಧಗಳು ಅಘನಾಶಿನಿ ನದಿಯನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಅಘನಾಶಿನಿ ನದಿ ತಿರುವು ಯೋಜನೆಯಿಂದ ಈ ಪ್ರಬೇಧಗಳು, ಸಸ್ಯ ಸಂಕುಲಗಳು ನಾಶವಾಗಬಹುದಾಗಿದೆ.
ಶಿರಸಿ ನಗರದ ಶಂಕರಹೊಂಡ ಹಾಗೂ ತಾಲೂಕಿನ ಮಂಜುಗುಣಿಯಲ್ಲಿ ಪ್ರಮುಖ ಕವಲುಗಳ ಮೂಲಕ ಜನ್ಮ ತಳೆಯುವ ಅಘನಾಶಿನಿ ನದಿ ನಂತರದಲ್ಲಿ ಸಿದ್ದಾಪುರ, ಕುಮಟಾ ತಾಲೂಕುಗಳಲ್ಲಿ ಹರಿದು ತದಡಿಯಲ್ಲಿ ಸಮುದ್ರವನ್ನು ಸೇರುತ್ತದೆ. ಹೀಗೆ ಸಮುದ್ರ ಸೇರುವ ಮೊದಲು 98 ಕಿ.ಮಿ ದೂರ ಹರಿಯುವ ಅಘನಾಶಿನಿ ನದಿಯ ನೀರು ಪ್ರಮುಖವಾಗಿ ಶಿರಸಿ, ಕುಮಟಾ ಹಾಗೂ ಹೊನ್ನಾವರಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಅಗತ್ಯಗಳಿಗೆ ಬಳಕೆಯಾಗುತ್ತಿದೆ. ಬೆಣ್ಣೆಹೊಳೆ, ಚಂಡಿಕಾ ಹೊಳೆ, ಬೀಳಗಿಹೊಳೆಗಳು ಅಘನಾಶಿನಿ ನದಿಯ ಪ್ರಮುಖ ಉಪನದಿಗಳಾಗಿದ್ದು, 2146 ಚಕಿಮಿ ಪ್ರದೇಶಗಳು ನದಿಯ ಜಲಾನಯನ ಪ್ರದೇಶವಾಗಿದೆ. ಈ ಅಘನಾಶಿನಿ ನದಿಯ ನೀರನ್ನು ಜೂಗ-ಕಾರ್ಗಲ್, ನಂತರದಲ್ಲಿ ಈ ನೀರನ್ನು ಹಾಸನದ ಮೂಲಕ ಬೆಂಗಳೂರಿಗೆ ಕೊಂಡೊಯ್ಯಬೇಕು ಎಂದು 2013ರ ಸಪ್ಟೆಂಬರ್ ತಿಂಗಳಿನಲ್ಲಿ ನೇಮಿಸಲಾಗಿದ್ದ ತ್ಯಾಗರಾಜ್ ಕಮಿಟಿ ವರದಿ ಮಾಡಿತ್ತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಅಣೆಕಟ್ಟಿಗೆ ಅಘನಾಶಿನಿ ನದಿಯಿಂದ 50 ಟಿಎಂಸಿ ನೀರನ್ನು ಒಯ್ಯಬೇಕು ಹಾಗೂ ತದನಂತರದಲ್ಲಿ ಪಂಪ್ ಮೂಲಕ ನೀರನ್ನು ಲಿಂಗನಮಕ್ಕಿ ಅಣೆಕಟ್ಟೆಯಿಂದ ಮೇಲೆತ್ತಿ ಹಾಸನ ಮಾರ್ಗವಾಗಿ ಬೆಂಗಳೂರು ಮಹಾನಗರಕ್ಕೆ ಕೊಂಡೊಯ್ಯಬೇಕು ಎನ್ನುವ ಯೋಜನೆಯನ್ನು ವರದಿಯಲ್ಲಿ ಹೇಳಲಾಗಿತ್ತು. ಇಷ್ಟೇ ಅಲ್ಲದೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ನೀರು ಒದಗಿಸಲು ಅಘನಾಶಿನಿ ನದಿ ಹಾಗೂ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಶರಾವತಿ ನದಿಯ ನೀರನ್ನು ಬಳಕೆ ಮಾಡಬೇಕು ಎನ್ನುವ ವಾದವನ್ನು ಮಂಡನೆ ಮಾಡಿತ್ತು. ಆದರೆ ಈ ನದಿ ತಿರುವಿಗೆ ಸಂಬಂಧಿಸಿದಂತೆ ಈಗಾಗಲೇ ವಿರೋಧ ಆರಂಭವಾಗಿದೆ.
ಕಳೆದ ಬೇಸಿಗೆಯಲ್ಲಿ ಅಘನಾಶಿನಿ ನದಿ ಬರದ ಬೇಗೆಗೆ ಮೊಟ್ಟ ಮೊದಲ ಬಾರಿಗೆ ಬತ್ತಿ ಹೋಗಿತ್ತು. ಈ ಕುರಿತಂತೆ `ವಿಶ್ವವಾಣಿ' ಸಮಗ್ರ ವರದಿ ಮಾಡಿತ್ತು. ತದ ನಂತರದಲ್ಲಿ ಬತ್ತಿದ ಅಘನಾಶಿನಿಯಲ್ಲಿ ಸಾವನ್ನಪ್ಪುತ್ತಿರುವ ನೀರುನಾಯಿಗಳ ಬಗೆಗೂ ಕೂಡ ಸರಣಿ ವರದಿ ಮಾಡಿತ್ತು. ಇಂತಹ ಹಲವಾರು ಸಮಸ್ಯೆಗಳು ನದಿಗೆ ಎದುರಾಗಿರುವ ಸಂದರ್ಭದಲ್ಲಿಯೇ ಅಘನಾಶಿನಿ ನದಿಯನ್ನು ತಿರುವು ಮಾಡುವ ಯೋಜನೆ ಪ್ರಸ್ತಾಪವಾಗುತ್ತಿದೆ. 420 ಕಿ.ಮಿ ದೂರದ ಬೆಂಗಳೂರು ನಗರವಾಸಿಗಳ ದಾಹವನ್ನು ತಣಿಸುವ ಸಲುವಾಗಿ ಮಲೆನಾಡಿನ, 1 ಲಕ್ಷ ಜನರ ಜೀವನಾಡಿಯಾಗಿರುವ ಅಘನಾಶಿನಿ ನದಿ ತಿರುವು ಮಾಡುವ ಹುನ್ನಾರ ನಡೆದಿದೆ. ಈ ಹುನ್ನಾರವನ್ನು ಆರಂಭದಲ್ಲಿಯೇ ತಡೆಯುವ ಸಲುವಾಗಿ ಈಗಾಗಲೇ ಜನಾಂದೋಲನಗಳು ರೂಪುಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅಘನಾಶಿನಿ ಕಣಿವೆಯ ಜನಸಾಮಾನ್ಯರು ನದಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೆಜ್ಜೆಹಾಕಲಿದ್ದಾರೆ.

-------

(ವಿಶ್ವವಾಣಿ ಪತ್ರಿಕೆಯಲ್ಲಿ ಜು.17, 2016ರಂದು ಪ್ರಕಟವಾಗಿದೆ)

ತೂಗಾಡುವ ಸೇತುವೆಯಲ್ಲಿ ತೂಗಾಡುವ ಬದುಕು

ಸಮರ್ಪಕ ತೂಗುಸೇತುವೆ ಇಲ್ಲದೇ ಬದುಕು ಹೈರಾಣು

ಉಕ್ಕಿ ಹರಿಯುವ ಅಘನಾಶಿನಿ ನದಿ. ಅದರ ಮೇಲಿನ ತೂಗಾಡುವ ಸೇತುವೆಯನ್ನು ಭಯದಿಂದಲೇ ಸಾಗುವ ಮಕ್ಕಳು. ತಲೆ ಹೊರೆಯ ಮೇಲೆ ಭೀತಿಯಿಂದ ಅಗತ್ಯದ ವಸ್ತುಗಳನ್ನು ಸಾಗಿಸುವ ಜನಸಾಮಾನ್ಯರು. ಸಿದ್ದಾಪುರ ತಾಲೂಕಿನ ಹಸರಗೋಡ ಪಂಚಾಯತದ ಬಾಳೂರು ಹಾಗೂ ಹಂಚಳ್ಳಿಯನ್ನು ಸಂಪರ್ಕಿಸುವ ತೂಗುಸೇತುವೆ ಇಂತಹ ದುರಂತದ ಪರಿಸ್ಥಿತಿಗೆ ಕಾರಣವಾಗಿದೆ.
ಬಾಳೂರಿನಲ್ಲಿ ಹರಿಯುವ ಅಘನಾಶಿನಿ ನದಿಗೆ ಅಡ್ಡಲಾಗಿ ಸ್ಥಳೀಯರೇ ಮುತುವರ್ಜಿ ವಹಿಸಿ ತೂಗು ಸೇತುವೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಡಿಕೆಯ ದಬ್ಬೆ, ಕಬ್ಬಿಣದ ಕೇಬಲ್ ಸಹಾಯದಿಂದ ನಿರ್ಮಾಣ ಮಾಡಲಾಗಿರುವ ಈ ತೂಗುಸೇತುವೆ ಅಜಮಾಸು 100 ಮೀಟರ್ ಉದ್ದವಿದೆ. ಅಘನಾಶಿನಿ ನದಿಯ ಎರಡೂ ದಡಗಳಲ್ಲಿರುವ ಮರಗಳನ್ನು ಆಧರಿಸಿ ಈ ತೂಗುಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ತೂಗುಸೇತುವೆಯ ಉಕ್ಕಿನ ಕೇಬಲ್ಗಳು ಈಗಾಗಲೇ ತುಕ್ಕು ಹಿಡಿದಿದೆ. ನಡೆದಾಡಲು ಅನುಕೂಲವಾಗುವಂತೆ ಅಡಿಕೆಯ ದಬ್ಬೆ, ಬಿದಿರಿನ ಎಳೆಗಳನ್ನು ಹಾಕಲಾಗಿದ್ದು ಅವೂ ಕೂಡ ಲಡ್ಡಾಗಿದ್ದು, ದುರಂತಕ್ಕಾಗಿ ಬಾಯ್ತೆರೆದುಕೊಂಡಿದೆ.
ಈ ಸೇತುವೆಯ ಮೇಲೆ ದಿನಂಪ್ರತಿ ನೂರಾರು ಜನರು ಓಡಾಟ ನಡೆಸುತ್ತಾರೆ. ಬಾಳೂರು, ಹೊಸಗದ್ದೆ ಭಾಗವನ್ನು ಹಂಚಳ್ಳಿ, ಕೆಂದಿಗೆತೋಟ, ಬಣಗಿ ಈ ಮುಂತಾದ ಗ್ರಾಮಗಳಿಗೆ ಈ ತೂಗುಸೇತುವೆ ಸಂಪರ್ಕವನ್ನು ಕಲ್ಪಿಸುತ್ತವೆ. ಹಂಚಳ್ಳಿ, ಕೆಂದಿಗೆತೋಟ ಈ ಮುಂತಾದ ಗ್ರಾಮಸ್ಥರು ಕೂಗಳತೆಯಲ್ಲಿರುವ ಹೊಸಗದ್ದೆ ಹಾಗೂ ಬಾಳೂರನ್ನು ತಲುಪಲು ಇರುವ ಸನಿಹದ ದಾರಿ ಇದಾಗಿದೆ. ಹಸರಗೋಡ ಗ್ರಾಮ ಪಂಚಾಯತಿಯನ್ನು ತಲುಪಲು, ಹೊಸಗದ್ದೆ ಶಾಲೆಗೆ ತೆರಳಲು ಈ ಮಾರ್ಗವೇ ಹತ್ತಿರದ್ದು ಎನ್ನಿಸಿಕೊಂಡಿದೆ. ಬಾಳೂರಿನ ಮೂಲಕ ತೆರಳುವ ಬಾಳೇಸರ ಬಸ್ನ್ನು ಹತ್ತಬೇಕಾದರೆ ಈ ಗ್ರಾಮಸ್ಥರು ಇದೇ ತೂಗುಸೇತುವೆಯನ್ನೇ ಬಳಸಬೇಕಾದ ಅನಿವಾರ್ಯತೆಯಿದೆ. ಈ ಮಾರ್ಗವನ್ನು ಹೊರತುಪಡಿಸಿದರೆ ರಸ್ತೆ ಮಾರ್ಗವೊಂದಿದೆಯಾದರೂ ಹೊಸಗದ್ದೆ, ಬಾಳೂರನ್ನು ತಲುಪಬೇಕಾದರೆ ಅಜಮಾಸು 8 ಕಿ.ಮಿ ಸುತ್ತಿ ಬಳಸಿ ಬರಬೇಕಾಗುತ್ತದೆ.
ಈ ತೂಗುಸೇತುವೆಯ ಮೇಲೆ ಏಕಕಾಲಕ್ಕೆ ಮೂರು ಅಥವಾ ಅದಕ್ಕೂ ಹೆಚ್ಚಿನ ಜನರು ನಡೆದರೆ ಸಾಕು ತೂಗಾಡಲು ಆರಂಭವಾಗುತ್ತದೆ. ಅತ್ತಿಂದಿತ್ತ ಹೊಯ್ದಾಡುವ ಈ ಮಾರ್ಗದಲ್ಲಿ ನಡೆಯುವುದೆಂದರೆ ದುಸ್ತರ ಎನ್ನುವಂತಾಗಿದೆ. ಶಾಲಾ ಮಕ್ಕಳಂತೂ ಒಂದು ಕೈಯಲ್ಲಿ ಛತ್ರಿಯನ್ನು ಹಿಡಿದು ಪ್ರಯಾಸದಿಂದ ಸೇತುವೆ ದಾಟುತ್ತಾರೆ. ಈ ಸಂದರ್ಭದಲ್ಲಿ ಸ್ವಲ್ಪವೇ ಯಾಮಾರಿದರೂ ಕೂಡ ಕೆಳಗೆ ಉಕ್ಕಿ ಹರಿಯುವ ಅಘನಾಶಿನಿ ನದಿಯಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳು ತೀವ್ರವಾಗಿದೆ. ನಾಲ್ಕಾರು ವರ್ಷಗಳ ಹಿಂದೆ ಸ್ಥಳೀಯರು ನಿರ್ಮಿಸಿದ್ದ ತೂಗುಸೇತುವೆ ಅಘನಾಶಿನಿ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ನಂತರದಲ್ಲಿ ಈ ಸ್ಥಳೀಯರೇ ಮುಂದಾಳುಗಳಾಗಿ ಮತ್ತೊಮ್ಮೆ ತೂಗುಸೇತುವೆ ನಿರ್ಮಾಣ ಮಾಡಿದ್ದರು. ಇದೀಗ ಈ ಸೇತುವೆ ಕೂಡ ಶಿಥಿಲಾವಸ್ಥೆ ತಲುಪಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಮಾರ್ಗದಲ್ಲಿ ಸದೃಢವಾದ ತೂಗುಸೇತುವೆ ನಿರ್ಮಾಣ ಮಾಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ. ಸರಕಾರ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವುದೂ ಕೂಡ ಈ ಮಾರ್ಗದಲ್ಲಿ ಸಂಚಾರ ಮಾಡುವವರ ಆಗ್ರಹವಾಗಿದೆ. ಶಿಥಿಲಾವಸ್ಥೆಯನ್ನು ತಲುಪಿರುವ ತೂಗುಸೇತುವೆ ಬದಲು, ವಿಶೇಷ ಅನುದಾನವನ್ನು ಮಂಜೂರು ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಿಂಧ ಶಿವಪುರಕ್ಕೆ ಸಂಚಾರ ಕಲ್ಪಿಸುವ ಪ್ರದೇಶದಲ್ಲಿ ಅಥವಾ ಶಿರಸಿ ತಾಲೂಕಿನ ಸಹಸ್ರಲಿಂಗದ ಬಳಿ ನಿರ್ಮಾಣ ಮಾಡಿದಂತೆ ಸುಸಜ್ಜಿತ ತೂಗುಸೇತುವೆ ನಿರ್ಮಾಣ ಮಾಡಬೇಕು ಎನ್ನುವುದೂ ಕೂಡ ಸ್ಥಳೀಯರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಜಿ.ಪಂ, ತಾ.ಪಂ ಸದಸ್ಯರು ಪ್ರಯತ್ನ ನಡೆಸಬೇಕಾದ ಅನಿವಾರ್ಯತೆಯಿದೆ. ಹೀಗಾದಾಗ ಮಾತ್ರ ನಾಲ್ಕೈದು ಗ್ರಾಮಗಳ ಜನರು, ಶಾಲಾ ಮಕ್ಕಳು ನಿಟ್ಟುಸಿರು ಬಿಡಲು ಸಾಧ್ಯ.

-------

ಈ ಸೇತುವೆ ಬಹಳ ಶಿಥಿಲವಾಗಿದೆ. ಮಕ್ಕಳು ಭಯದಿಂದಲೇ ತೂಗುಸೇತುವೆ ದಾಟುತ್ತಾರೆ. ಜೋರು ಮಳೆ, ಗಾಳಿ ಬಂದ ಸಂದರ್ಭದಲ್ಲಿ ಈ ತೂಗು ಸೇತುವೆ ದಾಟುವುದು ಅಪಾಯಕಾರಿ ಕೂಡ ಹೌದು. ಇದರ ಬದಲಾಗಿ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಬೇಕಿದೆ.
ರಾಜು ನಾಯ್ಕ
ಹಾರ್ಸಿಕಟ್ಟಾ


Tuesday, July 12, 2016

ಬೆಂಗಾಲಿ ಸುಂದರಿ -42

ಮೊದಲೊಂದು ಮಾತು :
ಬ್ಲಾಗ್ ನಲ್ಲಿ ಬರೆದ ಕಾದಂಬರಿ ಬೆಂಗಾಲಿ ಸುಂದರಿ. ಈಗಾಗಲೇ 41 ಭಾಗವನ್ನು ಬರೆದು ಕಾದಂಬರಿಯನ್ನು ಮುಕ್ತಾಯ ಮಾಡಿದ್ದೆ. ಆದರೆ ಕಾದಂಬರಿಯನ್ನು ಮುಕ್ತಾಯ ಮಾಡಿದ ನಂತರ ನನಗೆ ಅನೇಕ ಜನರ ಪೋನ್ ಗಳು ಬಂದವು. ಕಾದಂಬರಿಯನ್ನು ಇನ್ನೂ ಮೂರ್ನಾಲ್ಕು ಕಂತುಗಳ ವರೆಗೆ ಮುಂದುವರೆಸಬಹುದು ಎಂದರು. ಕ್ಲೈಮ್ಯಾಕ್ಸ್ ಸರಿಯಿಲ್ಲ ಎಂದರು. ಮತ್ತೆ ಕೆಲವು ಮಿತ್ರರು ಬಾಂಗ್ಲಾ ಗಡಿಯನ್ನು ದಾಟಿ ಬಂದ ನಂತರ ಮಧುಮಿತಾ ಹಾಗೂ  ವಿನಯಚಂದ್ರ ಮರಳಿ ಉತ್ತರ ಕನ್ನಡದ ಹಳ್ಳಿಗೆ ಹೇಗೆ ಬಂದರು? ಉತ್ತರ ಕನ್ನಡದ ಹವ್ಯಕರ ಮನೆ ಪಕ್ಕದ ದೇಶದ, ಮುಸ್ಲಿಂ ಬಾಹುಳ್ಯದ ನಾಡಿನಿಂದ ಬಂದ ಹುಡುಗಿಯನ್ನು ಹೇಗೆ ಮನೆಯೊಳಕ್ಕೆ ಬಿಟ್ಟುಕೊಂಡಿತು ಎನ್ನುವುದರ ಬಗ್ಗೆ ಬರೆಯಬೇಕಿತ್ತು ಎಂದೂ ಸಲಹೆ ನೀಡಿದ್ದರು. ಕೆಲವರು ಸಾತ್ವಿಕ ಕೋಪವನ್ನೂ ತೋರ್ಪಡಿಸಿದ್ದರು. ಕಾದಂಬರಿಯ ಪುಸ್ತಕವನ್ನು ಮುದ್ರಿಸಿ ಎಂದಿದ್ದರು. ಅದಕ್ಕೆ ಸಹಾಯ ಮಾಡುವುದಾಗಿಯೂ ತಿಳಿಸಿದ್ದರು. ಎಲ್ಲರ ಪ್ರೀತಿಗೆ ಕಟ್ಟುಬಿದ್ದು ಕನಿಷ್ಟ ಮೂರು ಅಥವಾ ನಾಲ್ಕು ಕಂತುಗಳ ವರೆಗೆ ಬೆಂಗಾಲಿ ಸುಂದರಿ ಕಾದಂಬರಿಯನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿದ್ದೇನೆ. 2014ರ ನವೆಂಬರ್ ತಿಂಗಳಿನಲ್ಲಿಯೇ ಮುಕ್ತಾಯ ಎಂದು ಬರೆದಿದ್ದ ಕಾದಂಬರಿಯನ್ನು ಒಂದೂವರೆ ವರ್ಷದ ತರುವಾಯ ಮತ್ತೆ ಬರೆಯುತ್ತಿದ್ದೇನೆ. ಮುಂದುವರಿಸುತ್ತಿದ್ದೇನೆ. ಓದಿ, ಅಭಿಪ್ರಾಯಿಸಿ...

---------------

                  ವಿನಯಚಂದ್ರನ ಬಳಿ ಒಬ್ಬರಾದ ನಂತರ ಒಬ್ಬರು ಸೈನಿಕರು, ಕಮಾಂಡರುಗಳು ಬಂದು ವಿಚಾರಣೆ ನಡೆಸುತ್ತಲೇ ಇದ್ದರು. ತಕ್ಷಣ ವಿನಯಚಂದ್ರನಿಗೆ ಸೈನ್ಯದಲ್ಲೇ ಇದ್ದ ಗೆಳೆಯ ನಾಗರಾಜು ನೆನಪಾಗಿದ್ದ. ಡಿಗ್ರಿ ಓದುತ್ತಿದ್ದ ಸಮಯದಲ್ಲಿಯೇ ಸೈನ್ಯದ ಕನಸುಕಂಡು, ಸೇರಿಕೊಂಡಿದ್ದ ಗೆಳೆಯ. ಲಡಾಕ್, ಕಾಶ್ಮೀರ, ಕಛ್ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಸೇನೆಯಲ್ಲಿ ಕೆಲಸ ಮಾಡಿದ್ದ ಗೆಳೆಯ. ಸೈನ್ಯದ ಅಧಿಕಾರಿಗಳಿಗೆ ವಿನಯಚಂದ್ರ ನಾಗರಾಜುವಿನ ಹೆಸರನ್ನು ಹೇಳಿದ್ದ. ಅಧಿಕಾರಿಗಳು ನಾಗರಾಜುವಿನ ಸಂಪರ್ಕಕ್ಕೆ ಮುಂದಾಗಿದ್ದರು.
               ಸೈನ್ಯದ ಅಧಿಕಾರಿಗಳ ಕೈಗೆ ಸಿಕ್ಕು ಒಂದು ದಿನವೇ ಕಳೆದಿತ್ತು. ಆದರೂ ಮಧುಮಿತಾ ಎಲ್ಲಿದ್ದಾಳೆ ಎನ್ನುವುದು ಗೊತ್ತಾಗಿರಲ್ಲ. ಸೈನ್ಯದವರು ಕಾಲಿಗೆ ಹೊಡೆದ ಗುಂಡನ್ನು ಸೈನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಇಲಾಜು ಮಾಡಲಾಗಿತ್ತು. ಗುಂಡು ತಾಗಿದ ಜಾಗದಲ್ಲಿ ವಿಪರೀತ ನೋಯುತ್ತಿತ್ತು. ನೋವಿನ ನಡುವೆಯೂ ವಿಚಾರಣೆಗಾಗಿ ಸೈನ್ಯದ ಅಧಿಕಾರಿಗಳು ಬಂದಾಗಲೆಲ್ಲ ಅವರ ಬಳಿ ಮಧುಮಿತಾಳ ಬಗ್ಗೆ ಕೇಳುತ್ತಲೇ ಇದ್ದ. ಆದರೆ ಯಾರೊಬ್ಬರೂ ಕೂಡ ಮಧುಮಿತಾಳ ಬಗ್ಗೆ ಚಿಕ್ಕ ವಿವರವನ್ನೂ ನೀಡಿರಲಿಲ್ಲ.
             ಮಧುಮಿತಾಳನ್ನು ಕಾಣದೇ ಕಂಗಾಲಾಗಿದ್ದ ವಿನಯಚಂದ್ರ ಕೊನೆಗೊಮ್ಮೆ ಒಬ್ಬ ಅಧಿಕಾರಿಯ ಬಳಿ ಅಂಗಲಾಚಿದ್ದ. ಅದಕ್ಕೆ ಅಧಿಕಾರಿ ಮಧುಮಿತಾಳನ್ನು ಇನ್ನೊಂದು ಕಡೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆಕೆ ಬಾಂಗ್ಲಾದ ನಿವಾಸಿಯಾಗಿರುವ ಕಾರಣ ಅವಳನ್ನು ಸುಲಭವಾಗಿ ನಿನ್ನನ್ನು ಮಾತನಾಡಿಸಲು ಬಿಡುವುದಿಲ್ಲ ಎಂದು ತಿಳಿಸಿದಾಗ ವಿನಯಚಂದ್ರ ಸ್ವಲ್ಪ ನಿರಾಳನಾಗಿದ್ದ. ಎಲ್ಲಾದರೂ ಇರಲಿ, ಆಕೆ ಚನ್ನಾಗಿದ್ದಾಳಲ್ಲ, ಅಷ್ಟು ಸಾಕು ಎಂದುಕೊಂಡನಾದರೂ ಒಮ್ಮೆ ಅವಳನ್ನು ನೋಡಲೇಬೇಕು ಎಂಬ ತುಡಿತ ಹೆಚ್ಚಾಯಿತು. ನಿಂತಲ್ಲಿಯೇ ಶತಪಥ ಸುತ್ತಿದ.
             `ಸರ್ ಒಂದು ಪೋನ್ ಮಾಡಲು ಅವಕಾಶ ಸಿಗಬಹುದಾ?' ಹತ್ತಿರದಲ್ಲಿಯೇ ಇದ್ದಿದ್ದ ಮಿಲಿಟರಿ ಅಧಿಕಾರಿಗಳ ಬಳಿ ಕೇಳಿದ್ದ. `ಯಾಕೆ??' ರೇಗಿದ್ದರು ಅಧಿಕಾರಿ. `ಗೆಳೆಯನೊಬ್ಬನಿಗೆ ಪೋನ್ ಮಾಡಬೇಕಿತ್ತು.. ಬಹಳ ಅರ್ಜೆಂಟು..' ಎಂದ ವಿನಯಚಂದ್ರ.
            `ಯಾರು? ಯಾವ ದೇಶದವನು? ಯಾಕೆ ಪೋನ್ ಮಾಡುವುದು?' ಸಿಟ್ಟಿನಿಂದಲೇ ಕೇಳಿದ್ದ ಮಿಲಿಟರಿಯವನು. `ಭಾರತದವನೇ. ಸಂಜಯ ಎಂಬ ಹೆಸರು. ನನ್ನ ಪರಿಸ್ಥಿತಿಯನ್ನು ಹೇಳಿಕೊಳ್ಳಬೇಕು. ಆತ ಸಹಾಯ ಮಾಡಬಹುದು..' ಎಂದು ಅಂಗಲಾಚಿದ ವಿನಯಚಂದ್ರ. ಕೊನೆಗೆ ಮಿಲಿಟರಿ ಅಧಿಕಾರಿ ದೂರವಾಣಿಯನ್ನು ತೋರಿಸಿದ. ವಿನಯಚಂದ್ರ ಸಂಜಯನಿಗೆ ಪೋನ್ ಮಾಡಿ ವಿಷಯವನ್ನು ತಿಳಿಸಿದ.
           ವಿನಯಚಂದ್ರ ಬಾಂಗ್ಲಾದೇಶದಲ್ಲಿ ಕಾಣೆಯಾಗಿದ್ದಾನೆ ಎನ್ನುವ ವಿಷಯ ತಿಳಿದ ಕೂಡಲೇ ಸರಣಿ ಸುದ್ದಿಗಳನ್ನು ಮಾಡುವ ಮೂಲಕ ದೇಶದಾದ್ಯಂತ ಸಂಚಲನವನ್ನು ಉಂಟುಮಾಡಿದ್ದ. ಸಂಜಯ ಮಾಡಿದ್ದ ಸುದ್ದಿಗಳಿಂದಾಗಿ ಪ್ರಧಾನ ಮಂತ್ರಿಗಳು ಹಾಗೂ ಸಚಿವಾಲಯ ಕೂಡ ವಿನಯಚಂದ್ರನನ್ನು ಬಾಂಗ್ಲಾದೇಶದಿಂದ ಕರೆದುಕೊಂಡು ಬರುವ ಬಗ್ಗೆ ಕ್ರಮಗಳನ್ನು ಕೈಗೊಂಡಿದ್ದರು. ಬಾಂಗ್ಲಾದೇಶದ ಸಚಿವಾಲಯದ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುವ ಮೂಲಕ ವಿನಯಚಂದ್ರನ ರಕ್ಷಣೆಯ ಸಾಧ್ಯತೆಗಳನ್ನು ತೆರೆದಿಟ್ಟಿದ್ದರು. ಆದರೆ ಭಾರತದಲ್ಲಿ, ರಾಜಕೀಯವಾಗಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ವಿನಯಚಂದ್ರನಿಗೆ ಮಾತ್ರ ಇದಾವುದರ ಅರಿವಿರಲಿಲ್ಲ. ಬಾಂಗ್ಲಾದ ಬೀದಿಬೀದಿಗಳಲ್ಲಿ ಭಾರತವನ್ನು ತಲುಪಬೇಕೆಂಬ ಉದ್ದೇಶದಿಂದ ಮಧುಮಿತಾಳೊಂದಿಗೆ ಅಲೆಯುತ್ತಿದ್ದ. ಸಂಜಯನಿಗೆ ದೂರವಾಣಿಯ ಮೂಲಕ ಕರೆ ಮಾಡಿದ್ದು ವಿನಯಚಂದ್ರನ ಪಾಲಿಗೆ ಭಾರಿ ಉತ್ತಮ ಕೆಲಸವಾಗಿತ್ತು.
            ವಿನಯಚಂದ್ರ ಆರಾಮಾಗಿದ್ದಾನೆ ಹಾಗೂ ಆತ ಭಾರತಕ್ಕೆ ಬಂದಿದ್ದಾನೆ ಎನ್ನುವ ವಿಷಯ ಅರಿತ ಸಂಜಯ ನಿರಾಳನಾಗಿದ್ದ. ಮಿಲಿಟರಿ ಅಧಿಕಾರಿಗಳ ಕೈಲಿ ಸಿಕ್ಕಿಬಿದ್ದಿರುವ ಹಾಗೂ ಕಾಲಿಗೆ ಗುಂಡೇಟು ಬಿದ್ದಿರುವ ವಿಷಯವನ್ನು ತಿಳಿದ ತಕ್ಷಣವೇ ಸಂಜಯ ಒಮ್ಮೆ ಆಘಾತಕ್ಕೆ ಒಳಗಾಗಿದ್ದರೂ ಇನ್ನೂ ದೊಡ್ಡದಾದ ತೊಂದರೆಯೇನೂ ಆಗಿಲ್ಲ ಎಂದು ಸಮಾಧಾನಿಸಿದ. ಮಿಲಿಟರಿಯವರ ಕೈಯಲ್ಲಿರುವ ವಿನಯಚಂದ್ರನನ್ನು ಬಿಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಗಳನ್ನು ಕೈಗೊಳ್ಳಲಾರಂಭಿಸಿದ. ಪ್ರಧಾನಿ ಕಚೇರಿಯನ್ನು ಸಂಪರ್ಕಿಸಲು ಯತ್ನಿಸಿ ಯಶಸ್ವಿಯಾದ. ನಂತರದ ಬೆಳವಣಿಗೆಗಳು ತ್ವರಿತವಾಗಿ ನಡೆದಿದ್ದವು. ಮೂರ್ನಾಲ್ಕು ದಿನಗಳ ಅಂತರದಲ್ಲಿಯೇ ವಿನಯಚಂದ್ರನ ಬಿಡುಗಡೆಗೆ ಸಂಬಂಧಿಸಿದಂತೆ ಬೆಳವಣಿಗೆಗಳು ನಡೆದಿದ್ದವು. ಜೊತೆಯಲ್ಲಿಯೇ ಮಧುಮಿತಾಳನ್ನೂ ಬಿಟ್ಟುಕಳಿಸುವ ಕುರಿತಂತೆ ಕ್ರಮಗಳನ್ನು ಜರುಗಿಸಲಾಗಿತ್ತು.


(ಮುಂದುವರಿಯುತ್ತದೆ..)

              

Wednesday, July 6, 2016

ಬನವಾಸಿ ದೇವಾಲಯಕ್ಕೆ ವನವಾಸ ಯೋಗ.... ಸೋರುತಿಹುದು ಮಧುಕೇಶ್ವರನ ದೇವಾಲಯ

ಪಂಪನ ನಾಡಿನಲ್ಲಿ ಇದೇನು ದುಸ್ಥಿತಿ? ಕಣ್ಮುಚ್ಚಿ ಕುಳಿತ ಪುರಾತತ್ವ ಇಲಾಖೆ

---------------------


ಕನ್ನಡದ ಪ್ರಪ್ರಥಮ ರಾಜರು ಎನ್ನಿಸಿಕೊಂಡಿರುವ ಕದಂಬರ ಆರಾಧ್ಯದೈವ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ. ಆದಿಕವಿ ಪಂಪ ಮೆಚ್ಚಿ ಹಾಡಿಹೊಗಳಿದ ಬನವಾಸಿಯ ಮಧುಕೇಶ್ವರನ ದೇವಸ್ಥಾನಕ್ಕೆ ವನವಾಸ ಯೋಗ ಪ್ರಾಪ್ತಿಯಾಗಿದೆ.
 ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಬನವಾಸಿಯ ಮಧುಕೇಶ್ವರ ದೇವಾಲಯ ದಕ್ಷಿಣ ಭಾರತದಲ್ಲಿಯೇ ಅತೀ ಪ್ರಾಚೀನ ದೇವಾಲಯಗಳಲ್ಲಿ ಒಂದು ಎನ್ನುವ ಖ್ಯಾತಿಯನ್ನು ಹೊಂದಿದೆ. ಕದಂಬ ವಂಶಸ್ಥರು ತಮ್ಮ ರಾಜಧಾನಿಯಾದ ಬನವಾಸಿಯಲ್ಲಿ ನಿತ್ಯ ಆರಾಧನೆಗಾಗಿ ನಿಮರ್ಾಣ ಮಾಡಿರುವ ದೇವಾಲಯವೀಗ ಮಳೆ ಬಂದರೆ ಸಾಕು ಸೋರುತ್ತಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಂಡು ದೇವಸ್ಥಾನ ಅಭಿವೃದ್ಧಿ ಮಾಡಬೇಕಾಗಿದ್ದ ಪುರಾತತ್ವ ಇಲಾಖೆ ಕಣ್ಮುಚ್ಚಿ ಕುಳಿತಿದೆ.
 ಕನ್ನಡದ ಪ್ರಪ್ರಥಮ ರಾಜಧಾನಿ ಎನ್ನುವ ಖ್ಯಾತಿ ಬನವಾಸಿಗಿದೆ. ಬನವಾಸಿಯ ಹೃದಯ ಭಾಗದಲ್ಲಿಯೇ ಇರುವ ಮಧುಕೇಶ್ವರ ದೇವಾಲದ ಬಗ್ಗೆ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವಿದೆ. ಈ ಪ್ರದೇಶದಲ್ಲಿಯೇ ಆದಿಕವಿ ಪಂಪ ಬನವಾಸಿಯ ಚೆಲುವನ್ನು ವಣರ್ಿಸಿದ್ದಾನೆ ಎನ್ನುವ ಪ್ರತೀತಿಯಿದೆ. ಅಪರೂಪದ ಶಿಲಾಮಂಚ ಈ ದೇವಸ್ಥಾನದ ಆವರಣದಲ್ಲಿಯೇ ಇದೆ. ಬೃಹತ್ ನಂದಿ, ಶಿಲಾದೇಗುಲ ಭವ್ಯವಾಗಿದೆ. ಕನರ್ಾಟಕದ ಪ್ರಾಚೀನ ಶಿಲಾ ವಿನ್ಯಾಸಗಳನ್ನು ಒಳಗೊಂಡಿರುವ ಮಧುಕೇಶ್ವರ ದೇವಾಲಯ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಶಿರಸಿಯಿಂದ 24 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನವಿದ್ದು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಪುರಾತತ್ವ ಇಲಾಖೆ ವ್ಯಾಪ್ತಿಗೆ ಈ ದೇವಾಲಯ ಸೇರ್ಪಡೆಯಾದ ನಂತರದಿಂದ ಇದುವರೆಗೂ ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣದಿಂದಲೇ ದೇವಾಲಯ ಜೀರ್ಣಗೊಳ್ಳುತ್ತಿದ್ದು ಮಳೆಗಾಲದಲ್ಲಿ ಸೋರಲು ಆರಂಭಿಸಿದೆ.
 ದೇವಸ್ಥಾನ ಸೋರುತ್ತಿರುವುದರಿಂದ ಆವರಣದಲ್ಲಿರುವ ಸುಂದರ ಕೆತ್ತನೆಯ ಕಂಬಗಳು, ಕೂಡುಗಟ್ಟೆಗಳಿಂದ ಆವೃತವಾದ ಸುಖನಾಸಿನಿ, ಮುಖಮಂಟಪ, ಪ್ರದಕ್ಷಿಣಾ ಪಥ, ದೇವಾಲಯದ ಗರ್ಭಗುಡಿ, ಆವರಣದಲ್ಲಿನ ಆಸನಗಳು, 7.5 ಅಡಿ ಎತ್ತರದ ಭವ್ಯ ನಂದಿ ವಿಗ್ರಹಗಳೆಲ್ಲ ಮಳೆ ನೀರಿನಲ್ಲಿ ತೋಯುತ್ತಿದೆ. ಬಹುತೇಕ ಶಿಲಾಕೃತಿಗಳು ಒದ್ದೆಯಾಗಿ ಹಸುರು ಬಣ್ಣಕ್ಕೆ ತಿರುಗುತ್ತಿದೆ. ನಿರಂತರವಾಗಿ ಮಳೆ ನೀರು ಸೋರುವುದರಿಂದ ಶೀಲಾಮಯ ದೇವಾಲಯದ ಪದರಗಳು ಜೀರ್ಣವಾಗುತ್ತಿವೆ. ಕಳೆದೆರಡು ವರ್ಷಗಳಿಂದ ಮಳೆ ಪ್ರಾರಂಭವಾಗುತ್ತಿದ್ದಂತೆ ಇದೇ ರೀತಿ ದೇವಾಲಯ ಸಂಪೂರ್ಣ ಸೋರುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಪುರಾತತ್ವ ಇಲಾಖೆ ಮಾತ್ರ ಜಾಣ ಕುರುಡುತನ ತೋರುತ್ತಿದೆ. ಪರಿಣಾಮವಾಗಿ ಇತಿಹಾಸದ ಭವ್ಯ ಕುರುಹೊಂದು ಸದ್ದಿಲ್ಲದೇ ನಶಿಸಿಹೋಗುತ್ತಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.
 ಎರಡು ಸಾವಿರ ವರ್ಷಗಳಿಂದ ಮಳೆ ಬಿಸಿಲಿನ ಘಾಸಿಗೊಳಗಾಗಿ ನವೆದಿದ್ದ ಈ ಶಿಲಾದೇಗುಲ 1970ರ ದಶಕದಲ್ಲಿ ಮೊದಲ ಬಾರಿಗೆ ಸೋರಲು ಆರಂಭವಾಗಿತ್ತು. ಆ ಸಂದರ್ಭದಲ್ಲಿ ಪುರಾತತ್ವ ಇಲಾಖೆ ದೇವಸ್ಥಾನದ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಮಧುಕೇಶ್ವರನ ದೇವಾಲಯದ ಮೇಲ್ಚಾವಣಿಯ ಗಾರೆ ಲೇಪವನ್ನು ತೆಗೆದು ರಾಸಾಯನಿಕ ಲೇಪವನ್ನು ಬಳಿದಿತ್ತೆನ್ನಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ದೇವಾಲಯ ಸೋರುವ ಪ್ರಕರಣ ಪುನರಾವತರ್ಿತವಾಗುತ್ತಿದೆ. 2010ರ ಆಸುಪಾಸಿನಲ್ಲಿ ಮತ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಂಡು ಶಿಲೆಗಳಿಗೆ ಲೋಪವಾಗದಿರಲು ಬೆಲ್ಲ, ಮಣ್ಣು, ಸುಣ್ಣ, ದಾಲ್ಚಿನ್ನಿ ಎಣ್ಣೆ ಹಾಗೂ ರಾಸಾಯನಿಕಗಳನ್ನು ಸೇರಿಸಿ ಇಡೀ ದೇವಾಲಯದ ಮೇಲಿನ ಛಾವಣಿಯನ್ನು ಸ್ಥಳಿಕರನ್ನು ದೂರವೇ ಇಟ್ಟು ಪುರಾತತ್ವ ಇಲಾಖೆ ಗುಟ್ಟಾಗಿ ಮಾಡಿ ಮುಗಿಸಿತ್ತು. ಪುರಾತತ್ವ ಇಲಾಖೆಯ ಈ ಕಾರ್ಯದ ಬಗ್ಗೆ ಆ ಸಂದರ್ಭದಲ್ಲಿ ಅಸಮಧಾನವೂ ವ್ಯಕ್ತವಾಗಿತ್ತು. ಪಾರದರ್ಶಕತೆ ಇಲ್ಲದೆ ಈವರೆಗೆ ಮೂರ್ನಾಲ್ಕು ಬಾರಿ ದುರಸ್ಥಿ ಕಾರ್ಯ ಕೈಗೊಂಡರೂ ಸೋರುವುದು ಮಾತ್ರ ನಿಲ್ಲದಿರುವುದು ದುರಂತ ಎನ್ನುತ್ತಾರೆ ಬನವಾಸಿಗರು.
 ಇತಿಹಾಸ ಮರುಕುಳಿಸುತ್ತದೆ ಎನ್ನುವ ಗಾದೆಯ ಮಾತಿದ್ದರೂ ಬನವಾಸಿಯ ದೇವಾಲಯದ ಮಟ್ಟಿಗೆ ಸೋರುವ ಇತಿಹಾಸ ಮರುಕುಳಿಸುತ್ತಿರುವದು ಕನ್ನಡಿಗರಿಗೆ ಅಪಮಾನದ ಸಂಗತಿಯಾಗಿದೆ. ತಕ್ಷಣ ದೇವಾಲಯದ ಜೀಣೋದ್ಧಾರ ಕೈಗೊಂಡು ಕನ್ನಡದ ಹೆಮ್ಮೆಯ ದೇವಾಲಯವನ್ನು ರಕ್ಷಿಸಬೇಕು ಎನ್ನುವುದು ಕನ್ನಡಿಗರ ಒತ್ತಾಸೆಯಾಗಿದೆ. ಜಡ್ಡುಗಟ್ಟಿರುವ ಪುರಾತತ್ವ ಇಲಾಖೆಗೆ ಚುರುಕು ಮುಟ್ಟಿಸುವ ಕಾರ್ಯ ಆಗಬೇಕಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಹಲವಾರು ನಿಯಮಗಳನ್ನು ಮುಂದಿಡುವ ಪುರಾತತ್ವ ಇಲಾಖೆ, ಬನವಾಸಿ ದೇವಾಲಯದ ವಿಷಯದಲ್ಲಿ ತೋರುತ್ತಿರುವ ಅಸಡ್ಡೆ ಅಕ್ಷಮ್ಯವಾದುದು. ಈ ಕುರಿತಂತೆ ಜವಾಬ್ದಾರಿ ಮರೆತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೂಡಲೇ ದೇವಸ್ಥಾನ ಸೋರುವುದನ್ನು ತಡೆಗಟ್ಟುವ ಅಗತ್ಯವೂ ಇದೆ. ಹೀಗಾದಾಗ ಮಾತ್ರ ಸಹಸ್ರ ವರ್ಷಗಳಿಂದ, ಕವಿಗಳಿಂದ ಹಾಡಿ ಹೊಗಳಿಸಿಕೊಂಡು ಬಂದಿರುವ ಬನವಾಸಿಯ ಮಧುಕೇಶ್ವರ ದೇಗುಲ ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಉಳಿಯಬಹುದಾಗಿದೆ.

********************

 ದೇವಸ್ಥಾನದ ಆವರಣದಲ್ಲಿ ಛಾಯಾಚಿತ್ರ ತೆಗೆದರೆ ದೇಗುಲ ಹಾಳಾಗುತ್ತದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಬನವಾಸಿ ದೇಗುಲ ಸೋರುತ್ತಿದ್ದರೂ ಕೂಡ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜವಾಬ್ದಾರಿ ಮರೆತ ಪುರಾತತ್ವ ಇಲಾಖೆ ಹೀಗೆ ಹಾಳುಗೆಡವುವ ಸಲುವಾಗಿ ದೇವಸ್ಥಾನವನ್ನು ವಹಿಸಿಕೊಳ್ಳಬೇಕಾಗಿತ್ತೇ? ಹುಬ್ಬಳ್ಳಿಯಲ್ಲಿ ಕುಳಿತ ಅಧಿಕಾರಿಗಳು ಮುಂದಿನ ದಿನಗಳಲ್ಲಾದರೂ ದೇಗುಲ ಸೋರುವುದನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಕ್ರೋಶದಿಂದದ ನುಡಿಯುತ್ತಿದ್ದಾರೆ.