Saturday, May 28, 2016

ಅಜ್ಜ ನೆಟ್ಟ ಆಲದ ಮರ

ಅಜ್ಜ ನೆಟ್ಟ ಆಲದ ಮರಕ್ಕೆ
ನೂರಾರು ಬೀಳಲು
ಬುಡದಲ್ಲಿ ಕುಳಿತ ಗೊಲ್ಲನ ಕೈಯಲ್ಲಿ
ಒಂದೇ ಒಂದು ಕೊಳಲು |

ಆಲದ ಮರದಲಿ ಹಕ್ಕಿಯ ಕಲರವ
ಬುಡದಲಿ ದನಗಳು ಅಂಬಾ
ಒಟ್ಟಿಗಿದ್ದೂ ಬಿಟ್ಟಿರಲಾರೆ
ಕಲಿಯಬೇಕಿದೆ ತುಂಬಾ |

ಅಜ್ಜನ ಕೋಲಿದು ನನ್ನೆಯ ಕುದುರೆ
ಬಾಯಿಪಾಟದ ಏಟು
ಅಜ್ಜಿಯ ಕವಳದ ತಬಕಲಿ ಕಲ್ಲು
ಇದೇ ರೂಪಾಯಿ ನೋಟು |

ಆಲದ ತೋಳು ಮೈಲುಗಳಾಚೆ
ಹಾಸಿದೆ ಪ್ರೀತಿಯ ಚಪ್ಪರ
ಒಡಲಲಿ ನೆರಳು ಬದುಕಿಗೆ ರಕ್ಷಣೆ
ತಡೆದಿದೆ ಗಾಳಿಯ ಅಬ್ಬರ |

ಅಪ್ಪನ ಸಾಲಕ್ಕೆ ಅಮ್ಮನೇ ಜಾಮೀನು
ಬದುಕಲಿ ಬೇರೆ ಏನು
ಹಗಲಿನ ಕೋಪಕೆ ಇರುಳಲಿ ಮದ್ದು
ಉಂಡು ಮಲಗಿದ ಮೇಲೆ ಇನ್ನೇನು |

ಆಲದ ಬಿಳಲಿಗೆ ಗೆದ್ದಲು ಕಾಟ
ನಗರದ ಕಡೆಗೆ ಓಟ
ಆಲದ ಬುಡದಲಿ ನೆರಳೇ ಇಲ್ಲ
ಕಟುಕನ ಉರುಳಿನ ಕಾಟ |

ಆಲದ ಮರದಲಿ ಎಲೆಯೇ ಇಲ್ಲ
ತಂಪಿನ ನೆಳಲು ನಾಪತ್ತೆ
ಬುಡದಲ್ಲಿ ಅಂಬಾ ಹಸುಗಳೇ ಇಲ್ಲ
ಜೀವಕೆ ಬಂದ ಆಪತ್ತೇ |

ಆಲದ ಬಿಳಲು ಮಕ್ಕಳ ಪಾಲಿಗೆ
ಜೀವನ ಜೋಕಾಲಿ
ಅಂದಿಗೆ ಮುಗಿದಿದೆ ಇಂದೇನಿಲ್ಲ
ಬಿಳಲು ಖಾಲಿ ಪೀಲಿ |

-------------

(ಈ ಕವಿತೆಯನ್ನು ಬರೆದಿರುವುದು ಮೇ.26, 2016ರಂದು)

(ಈ ಕವಿತೆಯನ್ನು ಮೇ.28ರಂದು ಶಿರಸಿ ತಾಲೂಕಿನ ಯಡಳ್ಳಿಯ ವಿದ್ಯೋದಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಥಮ ಪ್ರಾಂತ ಸಮ್ಮೇಳನದಲ್ಲಿ ವಾಚಿಸಲಾಗಿದೆ. ಕೆಲವು ದಿನಗಳಿಂದ ಥ್ರೋಟ್ ಇನ್ಫೆಕ್ಷನ್ ಆಗಿದ್ದ ಕಾರಣ ನನಗೆ ಕವಿತೆ ವಾಚಿಸಲು ಸಾಧ್ಯವೇ ಆಗಲಿಲ್ಲ. ಕೊನೆಗೆ ನನ್ನ ಬದಲಾಗಿ ಮಿತ್ರ ಗಿರಿಧರ ಕಬ್ನಳ್ಳಿ ವಾಚಿಸಿದರು. ಕೊನೆಗೆ ಸಮ್ಮೇಳನದ ಸವರ್ಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡ ಅವರ ಬಳಿ ಆಶಿವರ್ಾದ ಪಡೆದುಕೊಂಡೆ. ಆ ಸಂದರ್ಭದಲ್ಲಿ ದೊಡ್ಡರಂಗೇಗೌಡರು ನಿನ್ನಲ್ಲಿ ಒಳ್ಳೊಳ್ಳೆಯ ಕವಿತೆ ಬರಲಿ. ಧ್ವನಿಯನ್ನು ಮೊದಲು ಸರಿ ಮಾಡಿಕೊ. ನಿನ್ನ ಕವಿತೆಯನ್ನು ಚನ್ನಾಗಿ ವಾಚಿಸು ಎಂದು ಹರಸಿದರು. ಧನ್ಯನಾದೆ ಗುರುವರ್ಯ

No comments:

Post a Comment