Wednesday, April 20, 2016

ಬೇಸರ ಮರೆತು ಒಂದಾದ ಯಕ್ಷ ದಿಗ್ಗಜರು

ದಿಗ್ಗಜರ ಒಗ್ಗೂಡುವಕೆಗೆ ಸಾಕ್ಷಿಯಾದ ಸಂಪಖಂಡ


           ಐದು ದಶಕಗಳ ಬೇಸರವನ್ನು ಮರೆತು ಒಂದಾದರು ದಿಗ್ಗಜರು. ಒಬ್ಬ ಯಕ್ಷ ದಿಗ್ಗಜರ ಹಾಡಿಗೆ ಇನ್ನೊಬ್ಬ ಯಕ್ಷ ದಿಗ್ಗಜರು ಯಕ್ಷನರ್ತನ ಮಾಡಿದರು. ಅಭಿಮಾನಿಗಳು ಪುಳಕಗೊಂಡರು. ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಶಿರಸಿ ತಾಲೂಕಿನ ಸಂಪಖಂಡದ ಗಜಾನನ ಪ್ರೌಢಶಾಲೆಯ ಆವರಣ.
           ನೆಬ್ಬೂರು ನಾರಾಯಣ ಭಾಗವತರು ಯಕ್ಷಗಾನದಲ್ಲಿ ದಿಗ್ಗಜ ಭಾಗವತರು. ಅದೇ ರೀತಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೂ ಕೂಡ ಯಕ್ಷಗಾನದ ಮೇರು ನಟ. ಇಬ್ಬರಿಗೂ ಅವರದೇ ಆದ ಅಭಿಮಾನಿಗಳಿದ್ದಾರೆ. ನೆಬ್ಬೂರರ ಹಾಡಿಗೆ, ಚಿಟ್ಟಾಣಿಯವರ ನರ್ತನಕ್ಕೆ ಮೆಚ್ಚಿ ತಲೆದೂಗಿದವರು ಸಹಸ್ರ ಸಹಸ್ರ ಸಂಖ್ಯೆಯ ಅಭಿಮಾನಿಗಳು. ಆದರೆ ಅನೇಕ ಅಭಿಮಾನಿಗಳಲ್ಲಿದ್ದ ಒಂದೇ ಒಂದು ಆಸೆಯೆಂದರೆ ಅದು ನೆಬ್ಬೂರು ನಾರಾಯಣ ಭಾಗವತರ ಹಾಡಿಗೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಪಾತ್ರ ಮಾಡಬೇಕು ಎನ್ನುವುದು. ಆದರೆ ಈ ಇಬ್ಬರು ಮಹಾನ್ ಯಕ್ಷಪಟುಗಳ ನಡುವಿನ ಬೇಜಾರಿನಿಂದಾಗಿ ಅದು ಸಾಧ್ಯವೇ ಆಗಿರಲಿಲ್ಲ. ಸರಿ ಸುಮಾರು ಐದು ದಶಕಗಳಿಂದ ಯಕ್ಷಪ್ರೇಮಿಗಳು ಇಂತದ್ದೊಂದು ಸವಿಘಳಿಗೆಗೆ ಕಾಯುತ್ತಲೇ ಇದ್ದರು. ಸಂಪಖಂಡದಲ್ಲಿ ನಡೆದ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಟಾನದ ವಾಷರ್ಿಕೋತ್ಸವ ಸಮಾರಂಭದಲ್ಲಿ ಈ ಇಬ್ಬರು ಯಕ್ಷ ದಿಗ್ಗಜರು ಬೇಸರ ಮರೆತು ಒಂದಾದರು.
                        ಕಾರ್ಯಕ್ರಮ ಉದ್ಘಾಟನೆ ಮಾಡಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಮಾತನಾಡುತ್ತಾ ಐದು ದಶಕಗಳ ಹಿಂದೆ ನೆಬ್ಬೂರು ನಾರಾಯಣ ಭಾಗವತರು ಹಾಗೂ ತಾವು ಅಮೃತೇಶ್ವರಿ ಮೇಳದಲ್ಲಿ ಒಡನಾಡಿಗಳಾಗಿದ್ದವರು. ನಂತರದ ದಿನಗಳಲ್ಲಿ ಜನರಿಂದಾಗಿ ನಮಗೆ ಬೇಸರ ಉಂಟಾಯಿತು.ಆ ಸಂದರ್ಭದಲ್ಲಿಯೇ ನಾನು ಮೇಳವನ್ನು ಬದಲಾಯಿಸಿದೆ. ಐದು ದಶಕಗಳ ವರೆಗೂ ಆ ಬೇಸರ ಮುಂದುವರಿಯಿತು. ಆದರೆ ನನಗೆ ಒಂದು ಆಸೆಯಿದೆ. ನೆಬ್ಬೂರು ನಾರಾಯಣ ಭಾಗವತರ ಹಾಡುಗಾರಿಕೆಯಲ್ಲಿ ಪಾತ್ರ ಮಾಡಬೇಕು ಎನ್ನುವುದು ನನ್ನ ದೊಡ್ಡ ಆಸೆ. ಆದರೆ ಅನಾರೋಗ್ಯದ ಕಾರಣದಿಂದಾಗಿ ನೆಬ್ಬೂರರಿಗೆ ಹಾಡಲು ಸಾಧ್ಯವಾಗುತ್ತಿಲ್ಲ. ದೇವರ ಕೃಪೆಯಿದ್ದರೆ ನನ್ನ ಆಸೆ ಪೂರೈಸುತ್ತದೆ. ದೇವರ ದಯೆಯಿಮದ ನೆಬ್ಬೂರರು ಕೂಡಲೇ ಗುಣಮುಖರಾಗಿ ಮತ್ತೆ ರಂಗದಲ್ಲಿ ಹಾಡುತ್ತಾರೆ. ಆಗ ನಾನು ಪಾತ್ರ ಮಾಡುತ್ತೇನೆ ಎಂದರು. ಅಷ್ಟೇ ಅಲ್ಲದೇ ನೆಬ್ಬೂರು ನಾರಾಯಣ ಭಾಗವತರಿಗೆ ಅನಾರೋಗ್ಯವಾಗಿ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ನಮ್ಮಲ್ಲಿನ ಬೇಜಾರು ದೂರವಾಯಿತು. ನೆಬ್ಬೂರರ ಹಾಸ್ಯಪ್ರಜ್ಞೆಯಿಂದ ನನ್ನ ಮನಸ್ಸು ನಿರಾಳವಾಯಿತು ಎಂದರು.
                    ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಮಾತನಾಡಿದ ನಂತರ ನೆಬ್ಬೂರರು ಮಾತನಾಡಲು ಆಗಮಿಸಿದರು. ನೆಬ್ಬೂರು ನಾರಾಯಣ ಭಾಗವತರು ಮಾತನಾಡಿ ಅಮೃತೇಶ್ವರಿ ಮೇಳದಲ್ಲಿ 5 ದಶಕಗಳ ಹಿಂದೆ ನಾವು ಒಡನಾಡಿದವರು. ಕಾರಣಾಂತರಗಳಿಂದ ದೂರವಾಗಿದ್ದವರು ನಾವು. ಈಗ ಒಂದಾಗಬೇಕೆಂಬ ಮನಸ್ಸಿದೆ. ವಯೋಮಾನ ಹೆಚ್ಚಾದ ಕಾರಣ ರಂಗದಲ್ಲಿ ನಾವು ಒಂದಾಗಲು ಸಾಧ್ಯವಿಲ್ಲ. ಆದರೆ ಮಾನಸಿಕವಾಗಿ ನಾವಿಬ್ಬರೂ ಒಂದೇ. ಚಿಟ್ಟಾಣಿಯವರು ಈಗಲೂ ರಂಗದಲ್ಲಿ ಪಾತ್ರವಹಿಸುತ್ತಿದ್ದಾರೆ. ಆದರೆ ನನಗೆ ವಯೋಸಹಜ, ಅನಾರೋಗ್ಯದ ಕಾರಣ ರಂಗದ ಮೇಲೆ ಬರಲಾಗುತ್ತಿಲ್ಲ. ಚಿಟ್ಟಾಣಿಯವರಿಗೆ ಚಂಡೆ, ಮದ್ದಲೆಗಳೇ ಔಷಧವಾಗಿ ಪರಿಣಮಿಸಿದೆ. ಹಿರಿಯರು ಆಗಾಗ ಪ್ರತಿಷ್ಟಾನಕ್ಕೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕು. ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದರು.
                      ನೆಬ್ಬೂರರು ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ವೇದಿಕೆಯ ಮೇಲೆ ಕುಳಿತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಎದ್ದು ಬಂದರು. ನೆಬ್ಬೂರರ ಬಳಿ ಬಂದು `ಒಂದು ಹಾಡು ಹಾಡಾ..' ಎಂದರು. ಅದಕ್ಕೆ ಹಸನ್ಮುಖದಿಂದಲೇ ನೆಬ್ಬೂರರು ಬೇಡ ಎಂದರು. ಚಿಟ್ಟಾಣಿಯವರು ಪಟ್ಟು ಬಿಡಲಿಲ್ಲ. ಕೊನೆಗೆ ನೆಬ್ಬೂರು ನಾರಾಯಣ ಭಾಗವತರು ಹಾಡಿಯೇ ಬಿಟ್ಟರು. ನೆಬ್ಬೂರರ ಸಿರಿಕಂಠದಲ್ಲಿ `ಕಂಡನು ಭಸ್ಮಾಸುರನು ಮೋಹಿನಿಯ ರೂಪವ' ಎಂಬ ಹಾಡು ಹೊರಹೊಮ್ಮಿದಂತೆಯೇ ಚಿಟ್ಟಾಣಿಯವರು ಅಭಿನಯವನ್ನು ಆರಂಭಿಸಿದರು. ವೇದಿಕೆಯ ಮೇಲೆ ಕುಣಿದ ಚಿಟ್ಟಾಣಿ ಬಹುಕಾಲದ ತಮ್ಮ ಮನಸ್ಸಿನ ಬಯಕೆಯನ್ನು ಪೂರೈಸಿಕೊಂಡರು. ಈ ಘಟನೆಗೆ ಸಾಕ್ಷಿಯಾದ ನೂರಾರು ಜನರು ಪುಳಕಗೊಂಡರು. ಸಂಘಟಕರ ಕಣ್ಣಾಲಿಗಳು ತುಂಬಿಬಂದವು.
                 ಕಲಾವಿದರುಗಳಲ್ಲಿ ಬೆಸರಗಳು ಸಹಜ. ಆದರೆ ಇಂತಹ ಅಪರೂಪದ ಕಾರ್ಯಕ್ರಮಗಳಲ್ಲಿ, ಸಂದರ್ಭಗಳಲ್ಲಿ ದಿಗ್ಗಜರು ಒಂದಾಗುತ್ತಾರೆ. ಯಕ್ಷಗಾನದ ಇಬ್ಬರು ದಿಗ್ಗಜರು ಒಂದಾಗುವಲ್ಲಿ ಸಂಪಖಂಡದ ಗಜಾನನ ಪ್ರೌಢಶಾಲೆಯ ಆವರಣ ಸಾಕ್ಷಿಯಾಯಿತು. ತನ್ಮೂಲಕ ಸಂಪಖಂಡ ಹಾಗೂ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಟಾನದ ವಾಷರ್ಿಕೋತ್ಸವ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಯಿಗಿ ಉಳಿದುಕೊಂಡಿತು.
 

Saturday, April 16, 2016

ಮಾಸ್ತರ್ ಮಂದಿ -10

                ಹೈಸ್ಕೂಲಿನಲ್ಲಿ ಇನ್ನೂ ಹಲವು ಶಿಕ್ಷಕರಿದ್ದರು. ಮೆಚ್ಚಿನ ಶಿಕ್ಷಕರಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ಅವರ ಪೈಕಿ ಥಟ್ಟನೆ ನೆನಪಾಗುವವರು ಎಂದರೆ ಲಕ್ಷಪ್ಪ ಮಾಸ್ತರ್ . ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಲಕ್ಷಪ್ಪ :
      ಕೆ. ಲಕ್ಷಪ್ಪ ೆಎನ್ನುವ ಕಿರು ನಾಮಧೇಯ  ಇವರದ್ದು. 9ನೇ ಕ್ಲಾಸಿನಲ್ಲಿ ಇರುವಾಗ ಕಾನ್ಲೆ ಹೈಸ್ಕೂಲಿಗೆ ಬಂದವರು ಲಕ್ಷಪ್ಪ ಸರ್. ನನ್ನ ಹೈಸ್ಕೂಲ್ ಜೀವನದ ಅತ್ಯಂತ ಪ್ರಿಯ ಮಾಸ್ತರುಗಳಲ್ಲಿ ಒಬ್ಬರು. ಸಮಾಜ ವಿಜ್ಞಾನವನ್ನು ಇವರು ಕಲಿಸುತ್ತಿದ್ದರು. ಲಕ್ಷಪ್ಪ ಅವರಿಗೆ ನೆತ್ತಿಯ ಮೇಲೆ ಕೂದಲು ತೆಳ್ಳಗಾಗಿತ್ತು. ಅದನ್ನು ನೋಡಿ ಹೈಸ್ಕೂಲಿನ ಹುಡುಗರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರು. ಸದಾ ಹಸನ್ಮುಖಿಯಾಗಿದ್ದ ಲಕ್ಷಪ್ಪ ಸರ್ ಆಗೊಮ್ಮೆ ಈಗೊಮ್ಮೆ ಸಿಟ್ಟಾಗುತ್ತಿದ್ದುದೂ ಇದೆ. ನಾನು ಅವರ ವಿಷಯದಲ್ಲಿ ಚನ್ನಾಗಿ ಬರೆಯುತ್ತಿದೆ. ಅಕ್ಷರಗಳೆಲ್ಲ ಚನ್ನಾಗಿ ಬರೆದು ನೀಟಾಗು ತೋರಿಸುತ್ತಿದೆ. ಶಾಲೆಗೆ ಬಂದ ಕೆಲವು ದಿನಗಳಲ್ಲಿಯೇ ಲಕ್ಷಪ್ಪ ಅವರ ಪ್ರಿಯ ಶಿಷ್ಯಂದಿರಲ್ಲಿ ನಾನೂ ಒಬ್ಬನಾಗಿಬಿಟ್ಟಿದ್ದೆ.
          ಲಕ್ಷಪ್ಪ ಸರ್ ಿತಿಹಾಸದ ಪುಟಗಳನ್ನೆಲ್ಲ ಬಹಳ ಸುಂದರವಾಗಿ ಕಲಿಸುತ್ತಿದ್ದರು. ಅದರಲ್ಲೂ ಐತಿಹಾಸಿಕ ಘಟನೆಗಳು, ಯುದ್ಧಗಳನ್ನೆಲ್ಲ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುತ್ತಿದ್ದರು. ಲಕ್ಷಪ್ಪ ಸರ್ ಅವರು ರಕ್ಕಸತಂಗಡಿ ಯುದ್ಧವನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಿನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
           ಓದಿನಲ್ಲಿ ಮುಂದಿದ್ದ ನನಗೆ ಹೈಸ್ಕೂಲಿನಲ್ಲಿ ಅಂಕಗಳು ಸಾಕಷ್ಟು ಸಿಗುತ್ತಿದ್ದವು. ನಾನು ಎಂದರೆ ಓದುಗುಳಿ ಎಂದುಕೊಂಡಿರಬೇಕು ಅವರು. ಹೈಸ್ಕೂಲು ವಾರ್ಷಿಕೋತ್ಸವದ ಸಂದರ್ಭದಲ್ಲಿ 9 ನೇ ಕ್ಲಾಸಿನಲ್ಲಿದ್ದಾಗ ನಾನು ನಾಟಕವೊಂದರಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಅದನ್ನು ಲಕ್ಷಪ್ಪ ಸರ್ ಬಹಳ ಮೆಚ್ಚಿಕೊಂಡಿದ್ದರು. ಎಸ್ಸೆಲ್ಸಿಯಲ್ಲಿದ್ದಾಗ ಸಿನೆಮಾ ಹಾಡುಗಳಿಗೆ ನಮ್ಮ ದೋಸ್ತರ ತಂಡ ಸ್ಟೆಪ್ ಹಾಕಿತ್ತು. ಅದನ್ನು ನೋಡಿ ಫುಲ್ ಫಿದಾ ಆಗಿದ್ದ ಲಕ್ಷಪ್ಪ ಸರ್ `ಏನೋ.. ನೀನು ಡ್ಯಾನ್ಸ್ ಕೂಡ ಮಾಡ್ತೀಯೇನೋ..' ಎಂದು ನಕ್ಕಿದ್ದರು. ಅವರು ಖುಷಿಯಾಗಿ ಹೇಳಿದ್ದ ಮಾತು ನನಗೆ ಮಾತ್ರ ತಮಾಷೆಯೆನ್ನಿಸಿತ್ತು.
         ಎಸ್ಸೆಲ್ಸಿಯಲ್ಲಿದ್ದಾಗ ವಿದ್ಯಾರ್ಥಿಗಳದ್ದೇ ಒಂದು ತಂಡ ಮಾಡಿ ಓದಲು ಬಿಡುತ್ತಿದ್ದರು. ನಾನು ಇದ್ದ ತಂಡವನ್ನು ಲಕ್ಷಪ್ಪ ಸರ್ ಹಾಗೂ ಭಾರತಿ ಮೇಡಮ್ ಮುಂದಾಳತ್ವ ವಹಿಸಿಕೊಂಡಿದ್ದರು. ನಮ್ಮ ತಂಡ  ಉಳಿದೆಲ್ಲರ ತಂಡಕ್ಕಿಂತ ಜಾಸ್ತಿ ಅಂಕ ಗಳಿಸಬೇಕು ಎನ್ನುವುದು ಇವರ  ಆಶಯವಾಗಿತ್ತು. ನಾನು ಹುಡುಗರ ಪಾಲಿಗೆ ಮುಂದಾಳುವಾಗಿದ್ದೆ ಎನ್ನಿ.
         ಹೈಸ್ಕೂಲು 100ಕ್ಕೆ 100 ರಷ್ಟು ಫಲಿತಾಂಶ ಸಾಧಿಸಬೇಕು ಎನ್ನುವ ಮಹತ್ವಾಕಾಂಕ್ಷೆ ನಮ್ಮೆಲ್ಲರದ್ದಾಗಿತ್ತು. ಶಿಕ್ಷಕವೃಂದ ಕೂಡ  ಈ ಕುರಿತಂತೆ ಬಹಳ ಕ್ರಮ ಕೈಗೊಂಡಿದ್ದರು. ಎಸ್ಸೆಲ್ಸಿಯ  ಆರಂಭದ 3 ತಿಂಗಳಿನಲ್ಲಿಯೇ ಎಲ್ಲ ಶಿಕ್ಷಕರೂ ತಮ್ಮ ತಮ್ಮ ವಿಷಯಗಳನ್ನು ಕಲಿಸಿ ಮುಗಿದಿತ್ತು. ನಂತರ ಶುರುವಾಯಿತು ನೋಡಿ ನಮಗೆ ನಿಜವಾದ ಶಿಕ್ಷಣ. ಅಬ್ಬಾ. ಲಕ್ಷಪ್ಪ ಅವರ ಕನಸುಗಳೆಲ್ಲ ೆಷ್ಟು ಚನ್ನಾಗಿದ್ದವು ಅಂದರೆ... ಆಹ್.. ಅವರನ್ನು ಶಿಕ್ಷಣ ಇಲಾಖೆಯಲ್ಲಿ ಹೊಸ ರೀತಿಯ ಕನಸುಗಳನ್ನು ನೇಯಲು ಕಲಿಸಬೇಕು. ಹಾಗಿದ್ದವು. ವಿದ್ಯಾರ್ಥಿಗಳಲ್ಲಿ ತಂಡವನ್ನು ಮಾಡಿದರು. ತಂಡ ತಂಡಗಳ ನಡುವೆ ವಿವಿಧ ವಿಷಯಗಳಲ್ಲಿ ಸ್ಪರ್ಧೆ. ಹೆಚ್ಚು ಅಂಕ ಪಡೆದವರಿಗೆ ತಮ್ಮ ಕೈಯಿಂದಲೇ ಬಹುಮಾನ ವಿತರಣೆ ಮಾಡುತ್ತಿದ್ದರು. ಪ್ರತಿ ದಿನ ಪ್ರತಿ ವಿಷಯಗಳ ಬಗ್ಗೆ ಚರ್ಚಾ ಸ್ಪರ್ಧೆ. ವಿಶೇಷ  ಉಪನ್ಯಾಸ ಬೇರೆ. ಕೊನೆಯ ಎರಡು ತಿಂಗಳಂತೂ.. ಅಬ್ಬಬ್ಬಾ.. ಪ್ರತಿದಿನ ಪರೀಕ್ಷೆ ಮಾಡುತ್ತಿದ್ದರು. ಎಲ್ಲ ವಿಷಯಗಳ ಪರೀಕ್ಷೆ. ಇಷ್ಟೆಲ್ಲ ಮುತುವರ್ಜಿ ವಹಿಸಿದರೂ ಕೂಡ ನಮ್ಮ ಹೈಸ್ಕೂಲು 100% ಫಲಿತಾಂಶ ದಾಖಲಿಸಲೇ ಇಲ್ಲ. ಒಬ್ಬ ಹುಡುಗಿ ನಪಾಸಾಗಿದ್ದಳು. ಫಲಿತಾಂಶ ಶೆ.99ರಷ್ಟಾಗಿತ್ತು. ಇದಕ್ಕೆ ಲಕ್ಷಪ್ಪ ಅವರು ಬಹಳ ಬೇಜಾರು ಮಾಡಿಕೊಂಡಿದ್ದರು.
          ಎಸ್ಸಲ್ಸಿಯಲ್ಲಿದ್ದಾಗ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಇಡೀ ಹೈಸ್ಕೂಲಿನಿಂದ ನಾಲ್ಕು ತಂಡಗಳನ್ನು ಮಾಡಲಾಗುತ್ತದೆ. 8, 9 ಹಾಗೂ 10 ನೇ ಕ್ಲಾಸಿನ ಹುಡುಗರದ್ದು ನಾಲ್ಕು ಹಾಗೂ ಹುಡುಗಿಯರದ್ದು ನಾಲ್ಕು ತಂಡಗಳು. ಈ ತಂಡಗಳಿಗೆ ಒಬ್ಬ ನಾಯಕ. ತಂಡಕ್ಕೊಬ್ಬರು ಶಿಕ್ಷಕರು ಮೇಲ್ವಿಚಾರಕರು. ನಾನೊಂದು ತಂಡದಲ್ಲಿದ್ದೆ. ಉಪನಾಯಕನಾಗಿದ್ದೆ. ನಮ್ಮ ತಂಡದ ಮೇಲ್ವಿಚಾರಣೆಯನ್ನು ಲಕ್ಷಪ್ಪ ಮಾಸ್ತರ್ ನೋಡಿಕೊಳ್ಳುತ್ತಿದ್ದರು. ಹೈಸ್ಕೂಲಿನಲ್ಲಿದ್ದಾಗ ನಮ್ಮ ತಂಡದಲ್ಲಿ ನಾನು ಸಾಂಸ್ಕೃತಿಕ ವಿಭಾಗ ಹಾಗೂ ಕ್ರೀಡೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದೆ. ಹಾಡು ಹೇಳುತ್ತಿದ್ದೆನಾದರೂ ಒಂದೇ ಒಂದು ಬಹುಮಾನ ಪಡೆಯಲಿಲ್ಲ ಬಿಡಿ.
            ಪ್ರತಿ ವಾರ  ಒಂದೊಂದು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿದ್ದವು. ನಾನು ಪ್ರತಿವಾರ ವೂ ಹಾಡುತ್ತಿದ್ದೆ. ಬಹುಮಾನ ಸಿಗಲಿಲ್ಲ ಬಿಡಿ. ಆದರೆ ನನ್ನದೇ ಆದ ಕೆಲವು ವಿಭಾಗಗಳಿದ್ದವು. ಅದರಲ್ಲಿ ನನ್ನನ್ನು ಮೀರಿಸುವವರೇ ಇರುತ್ತಿರಲಿಲ್ಲ. ಕಂಠಪಾಠ ಸ್ಪರ್ಧೆ. ಕನ್ನಡ, ಹಿಂದಿ ಹಾಗೂ ಇಂಗ್ಲೀಷಿನ ಕವಿತೆಗಳನ್ನು ಉರು ಹೊಡೆದು ರಾಗವಾಗಿ ವಾಚನ ಮಾಡುವ ಸ್ಪರ್ಧೆ. ಇದರಲ್ಲಿ ನನ್ನದೇ ಎತ್ತಿದ ಕೈ ಆಗಿತ್ತು. ಅದೇ ರೀತಿ ರಸಪ್ರಶ್ನೆಯಲ್ಲಿ ನನ್ನನ್ನು ಮೀರಿಸುವವರೇ ಇರಲಿಲ್ಲ. ಇವುಗಳಲ್ಲಿ ಸಾಕಷ್ಟು ಬಹುಮಾನಗಳು ಬಂದಿವೆ ಬಿಡಿ.
           ಕ್ರೀಡಾ ಸ್ಪರ್ಧೆಗಳಲ್ಲಿ ನಾನು ಪಾಲ್ಗೊಳ್ಳುತ್ತಿದ್ದೆ. ಸಿಕ್ಕಾಪಟ್ಟೆ ಓಡುತ್ತಿದ್ದೆ. ಆದರೆ ಮೊದಲ ಸ್ಥಾನ ಯಾವತ್ತೂ ಸಿಕ್ಕಿಲ್ಲ. ಎರಡು ಅಥವಾ ಮೂರನೇ ಸ್ಥಾನ ಸಿಕ್ಕಿದೆ. ತಂಡ ವಿಭಾಗದಲ್ಲಿ ರಿಲೇಯಲ್ಲಿ ಪಾಲ್ಗೊಂಡಿದ್ದೆ. ಬಹುಮಾನಗಳು ಬಂದಿರಲಿಲ್ಲ. ಕಬ್ಬಡ್ಡಿಯಲ್ಲಿ ತಂಡದ ಭಾಗವಾಗಿದ್ದೆ. ಕೋಕೋ ಚನ್ನಾಗಿ ಆಡುತ್ತಿದ್ದೆ. ಅದರಲ್ಲೂ ತಂಡದ ಭಾಗವಾಗಿದ್ದೆ. ಲಾಂಗ್ ಜಂಪ್ ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಖಾಯಂ ದ್ವಿತೀಯ ಸ್ಥಾನ ನನಗೆ ಕಟ್ಟಿಟ್ಟ ಬುತ್ತಿಯಾಗಿತ್ತು. ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದೆ. ಇಲ್ಲೊಂದು ಇಂಟರೆಸ್ಟಿಂಗ್ ವಿಷಯವಿದೆ. ಅದನ್ನು ಹೇಳಲೇಬೇಕು. ಫೈನಲ್ ಮ್ಯಾಚ್. ಹಾಗೂ ಹೀಗೂ ಫೈನಲ್ ತಲುಪಿದ್ದೆವು. ನಮಗೆ ಮೊದಲ ಬ್ಯಾಟಿಂಗ್ ಸಿಕ್ಕಿತ್ತು. ನಾನು ಕ್ಯಾಪ್ಟನ್ ಲೀಗ್ ಪಂದ್ಯಗಳಲ್ಲಿ ಚನ್ನಾಗಿ ಆಡಿರಲಿಲ್ಲ. ಫೈನಲ್ ಪಂದ್ಯ ಚನ್ನಾಗಿ ಆಡಬೇಕೆಂಬ ನಿರ್ಧಾರದೊಂದಿಗೆ ಕ್ರೀಸಿಗೆ ಹೋಗಿದ್ದೆ. ಬಿಡಿ ಆವಾಗ ಅಂತಹ ಹೆಸರಾಂತ ಆಟಗಾರನೇನಲ್ಲ ನಾನು. ಕುಲ್ಡಂಬಲ್ಡಿ ಶಾಟ್ ನನ್ನದು. ತಾಗಿದರೆ ಬೌಂಡರಿ. ಇಲ್ಲದಂರೆ ಜೋರಾಗಿ ಬೀಸುವ ಗಾಳಿ ಅಷ್ಟೇ. ಮೊದಲ ಎರಡು ಬಾಲುಗಳು ಎಳೆದು ಬಾರಿಸಿದೆ. ಬೌಂಡರಿಯಾಗಿತ್ತು.
              ನಮ್ಮ ಕ್ರಿಕೆಟ್ ಗ್ರೌಂಡಿನಲ್ಲಿ ವಿಶಿಷ್ಟ ನಿಯಮ ಒಂದಿತ್ತು. ಗ್ರೌಂಡ್ ದೊಡ್ಡದಿದ್ದರೂ ಕೀಪರ್ ಹಿಂಭಾಗ  ಮಾತ್ರ ದೊಡ್ಡದಾಗಿರಲಿಲ್ಲ. ಅಲ್ಲೊಂದು ದೊಡ್ಡ ಕೊಡ್ಲು ಇತ್ತು. ಆ ಕೊಡ್ಲಿಗೆ ಬಾಲ್ ತಾಗಿದರೆ 2 ರನ್ ಡಿಕ್ಲೇರ್ ಆಗುತ್ತಿತ್ತು. ನಾನು ಕೂಡ ಮೂರನೇ ಬಾಲ್ ಗೆ ಬ್ಯಾಟ್ ಬೀಸಿದೆ. ಎಡ್ಜ್ ಆಗಿ ಕೀಪರ್ ಹಿಂದೆ ಓಡಿತು. ನಾನು ಹೆಂಗಂದರೂ 2 ರನ್ ಡಿಕ್ಲೇರ ಬಿಡು ಎಂದುಕೊಂಡು ಅರ್ಧ ಪಿಚ್ಚಿಗೆ ಓಡಿದೆ. ಬಾಲ್ ಹೋಗಲೇ ಇಲ್ಲ. ಯಾರೋ ಕೂಗಿದರು. ಓಡು ಓಡು ಅಂತ. ನಾನು ಓಡಿದೆ. 2ನೇ ರನ್ ಗೆ ಮರಳುವಾಗ ರನ್ ಔಟ್ ಆದೆ. ಆಗ ಲಕ್ಷಪ್ಪ ಅವರ ಮುಖ ನೋಡಬೇಕಿತ್ತು ಕಣ್ರೀ. ಗಲಾಟೆಗೆ ಇಳಿದಿದ್ದರು. 2 ರನ್ ಡಿಕ್ಲೇರ್ ಇದ್ದಿದ್ದಕ್ಕೆ ವಿನಯ ರನ್ ಓಡಲಿಲ್ಲ. ನೀವು ಹೇಗೆ ರನೌಟ್ ಮಾಡಿದಿರಿ. ಇದು ಸರಿಯಲ್ಲ. ನಾಟೌಟ್.. ನಾಟೌಟ್ ಎಂದು ಉಳಿದ ಶಿಕ್ಷಕರ ಜೊತೆಗೆ ಗಲಾಟೆಗೆ ನಿಂತಿದ್ದರು. ಕೊನೆಗೆ ಅವರ ಗಲಾಟೆಗೆ ಉಳಿದವರು ಸೊಪ್ಪು ಹಾಕಲಿಲ್ಲ. ಕೊನೆಗೆ ಅಲವತ್ತುಕೊಂಡ ಅವರು ನಮ್ ಮ್ಯಾಚ್ ತೆಗೆದ್ರಿ ನೀವೆಲ್ಲ ಸೇರ್ಕೊಂಡು ಎಂದರು. ನಾನು ಸುಮ್ಮನಾಗಿದ್ದೆ. ನಮ್ಮ ತಂಡ ಗೌರವಾರ್ಹ ಮೊತ್ತವನ್ನೇನೋ ಸಂಪಾದಿಸಿತ್ತು. ನಂತರ  ಎದುರಾಳಿ ತಂಡ ಬ್ಯಾಟ್ ಮಾಡಲು ಬಂದಾಗ ನಾನು ಬೌಲಿಂಗನ್ನೂ ಮಾಡಿದ್ದೆ. ಎದುರಾಳಿ ತಂಡ ಜಯಭೇರಿ ಭಾರಿಸಿತ್ತು ಬಿಡಿ.
           ರಸಪ್ರಶ್ನೆಯಲ್ಲಿ ನನ್ನದು ಎತ್ತಿದ ಕೈ ಎಂದು ಹೇಳಿದ್ದೆನಲ್ಲ. ಹೌದು ಆ ದಿನಗಳಲ್ಲಿ ರಸಪ್ರಶ್ನೆ ಕುರಿತಂತೆ ನಾನು ಮುಟ್ಟಿದ್ದೆಲ್ಲ ಚಿನ್ನದಂತೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೀಗೆ ಒಂದು ರಸಪ್ರಶ್ನೆ ಕಾರ್ಯಕ್ರಮ. ಸಾಗರ-ಶಿವಮೊಗ್ಗ ರಸ್ತೆಯ ಆನಂದಪುರದ ಬೆಕ್ಕಿನ ಕಲ್ಮಠದಲ್ಲಿ ನಡೆದಿತ್ತು. ನನ್ನನ್ನು ಹಾಗೂ ಜೊತೆಗಾರ ಕಿರಣ ನನ್ನು ಕರೆದುಕೊಂಡು ಲಕ್ಷಪ್ಪ ಸರ್ ಬೈಕಿನಲ್ಲಿ ತ್ರಿಬ್ಬಲ್ ರೈಡ್ ಮಾಡಿಕೊಂಡು ಹೋಗಿದ್ದರು. ರಸಪ್ರಶ್ನೆ ನಡೆಯಿತು. ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ತೀವ್ರ ಪೈಪೋಟಿ ಒಡ್ಡಿದ ನಾನು ಅಂತಿಮವಾಗಿ ಮೂರನೇ ಬಹುಮಾನ ಪಡೆದುಕೊಂಡೆ. ಆಗ ಲಕ್ಷಪ್ಪ ಮಾಸ್ತರ್ ಓಡಿಬಂದು ನನ್ನನ್ನು ತಬ್ಬಿಕೊಂಡು ಎತ್ತಿಬಿಟ್ಟಿದ್ದರು.
         ಪ್ರತಿಭಾ ಕಾರಂಜಿ ಎನ್ನುವುದು ನಾನು ಎಸ್ಸೆಲ್ಸಿಯಲ್ಲಿದ್ದಾಗ ಆರಂಭವಾಯಿತು. ನಮ್ಮ ಹೈಸ್ಕೂಲಿನ ತಂಡವನ್ನು ತಾಳಗುಪ್ಪಾದ ಕೇಂದ್ರ ಶಾಲೆಗೆ ಕರೆದೊಯ್ಯಲಾಯಿತು. ಚಿತ್ರಕಲೆ, ರಸಪ್ರಶ್ನೆಗಳಲ್ಲಿ ನಾನು ಭಾಗವಹಿಸಿದ್ದೆ. ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಬಂದಿತ್ತು. ಚಿತ್ರಕಲೆಯಲ್ಲಿ ನಾನು ತಾಜಮಹಲ್ ಚಿತ್ರ ಬಿಡಿಸಿದ್ದೆ. ಪ್ರಥಮ ಸ್ಥಾನ ಗಳಿಸಿದ್ದೆ. ಇದ್ದಕ್ಕಿದ್ದಂತೆ ಚರ್ಚಾ ಸ್ಪರ್ಧೆಗೆ ಸಂಬಂಧಿಸಿದಂತೆ ನನ್ನ ಹೆಸರನ್ನು ಕೂಗಿದರು. ನನಗೊಮ್ಮೆ ಅಚ್ಚರಿ. ನೋಡಿದರೆ ಲಕ್ಷಪ್ಪ ಸರ್ ನನ್ನ ಹೆಸರನ್ನು ಕೊಟ್ಟಿದ್ದರು. ಮೂರು ಜನ ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ  ನಾನು ಎರಡನೇ ಸ್ಥಾನ ಪಡೆದೆ ಬಿಡಿ.
         ಇಂತಹ ಲಕ್ಷಪ್ಪ ಸರ್ ಗೆ ಇತ್ತೀಚೆಗೆ ಒಮ್ಮೆ ಪೋನ್ ಮಾಡಿದ್ದೆ. ಸಾಗರ ತಾಲೂಕಿನಲ್ಲಿಯೇ ಯಾವುದೋ ಒಂದು ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾರೆ. ನಾನು ಪರಿಚಯ ಮಾಡಿಕೊಂಡೆ. ನೆನಪಿತ್ತು ಅವರಿಗೆ. ಖುಷಿ ಪಟ್ಟರು. ನನ್ನ ಬಗ್ಗೆ ಕೇಳಿದರು. ಆ ಸಂದರ್ಬದಲ್ಲಿ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಪ್ರತಿಭಟನೆ ನಡೆಯುತ್ತಿತ್ತು. ಅದರ ಬಗ್ಗೆ ವರದಿ ಮಾಡಬೇಕಿತ್ತು ಎಂದವರೆ ಮಾಹಿತಿ ನೀಡಿದರು. ನಾನು ಮಾಡಿದ್ದೆ. ಅದಕ್ಕೆ ವ್ಯಾಪಕ ಪ್ರತಿಕ್ರಿಯೆ ಕೂಡ ಬಂದಿತ್ತು. ಇಂತಹ ಶಿಕ್ಷಕರು ಯಾವಾಗಲೂ ಚನ್ನಾಗಿರಲಿ.

(ಮುಂದುವರಿಯುತ್ತದೆ)
(ಮುಂದಿನ ಕಂತಿನಲ್ಲಿ ಪಿಬಿಎನ್ ಭಾರತಿ ಮೇಡಂ ಬಗ್ಗೆ ಬರೆಯುತ್ತೇನೆ)