Wednesday, January 27, 2016

ಗೋಳಿ ನಾಟಕದ ಗಾರುಡಿಗ ರಾಮಚಂದ್ರ ಹೆಗಡೆ

              ಗೋಳಿ ನಾಟಕದ ಬಗ್ಗೆ ಕೇಳದವರೇ ಇಲ್ಲ. ಪೌರಾಣಿಕ ನಾಟಕವನ್ನು ಮೆಚ್ಚುವವರಿಗೆಲ್ಲ ಗೋಳಿ ನಾಟಕವೇ ಮೊಟ್ಟ ಮೊದಲು ನೆನಪಾಗುತ್ತದೆ. ಗೋಳಿ ನಾಟಕ ಎಂದಕೂಡಲೇ ನೆನಪಿಗೆ ಬರುವುದು ಮಾತ್ರ ಹಾರೂಗಾರ ರಾಮಚಂದ್ರ ಹೆಗಡೆ. ತಾಲೂಕಿನ ಹಾರೂಗಾರ ಗ್ರಾಮದ ರಾಮಚಂದ್ರ ಹೆಗಡೆ ಇಹಲೋಕ ತ್ಯಜಿಸಿದರು.
 ತಾಲೂಕಿನ ಗೋಳಿಯ ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ನಡೆಯುವ ನಾಟಕವೆಂದರೆ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯದಲ್ಲೂ ಹೆಸರುವಾಸಿ. ಕಳೆದ ಐದು ದಶಕಗಳಿಂದ ಹೊಸ ಹೊಸ ರೀತಿಯ ರಂಗ ಪ್ರಯೋಗ, ಅದ್ಧೂರಿ ಪರದೆ, ಉತ್ತಮ ಕಥಾಹಂದರ ಇತ್ಯಾದಿ ಕಾರಣಗಳಿಂದ ನಾಡಿನ ಜನಮಾನಸದಲ್ಲಿ ನೆಲೆನಿಂತಿದ್ದ ಗೋಳಿ ನಾಟಕದ ಹಿಂದಿದ್ದ ಕತೃತ್ವ ಶಕ್ತಿ ರಾಮಚಂದ್ರ ಹೆಗಡೆಯವರು. ಗೋಳಿ ನಾಟ್ಯಕಲಾ ಸಂಘದ ಬೀಷ್ಮ ಎಂದೇ ಕರೆಸಿಕೊಂಡಿದ್ದರು. ನಿರಂತರ 54 ವರ್ಷಗಳ ಕಾಲ ರಂಗಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ರಾಮಚಂದ್ರ ಹೆಗಡೆ ಜ.11ರಂದು ಅಲ್ಪ ಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.
 1935ರ ಎಪ್ರಿಲ್ ತಿಂಗಳಿನಲ್ಲಿ ಜನಿಸಿದ ರಾಮಚಂದ್ರ ಹೆಗಡೆಯವರು ಓದಿದ್ದು ಮೂಲ್ಕಿ (ಏಳನೇ ತರಗತಿ)ಯ ವರೆಗೆ. ತಮ್ಮದೇ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡ ರಾಮಚಂದ್ರ ಹೆಗಡೆಯವರು ತಮ್ಮ ಯುವ ವಯಸ್ಸಿನಲ್ಲಿ ಗೋಳಿ ಶ್ರೀ ಸಿದ್ಧಿವಿನಾಯಕ ದೇಗುಲದ ಆವಾರದಲ್ಲಿ ನಾಟಕ ಮಾಡಲು ಮುಂದಾದರು. 1958ರಿಂದ ಗೋಳಿಯಲ್ಲಿ ನಾಟಕ ಪ್ರಾರಂಭವಾಯಿತು. ಸುತ್ತಮುತ್ತಲ ಊರುಗಳ ಸಮಾನ ಮನಸ್ಕರಾದ ಹೊಸಳ್ಳಿಯ ಗಣಪತಿ ಮತ್ತು ದತ್ತಾತ್ರೇಯ ಹೆಗಡೆ, ಹೊಸ್ಮನೆಯ ಸುಬ್ರಾಯ ಭಟ್, ಹೊಸ್ಮನೆಯ ಶ್ರೀಪತಿ ಭಟ್, ಹಾಳದಕೈ ಮಂಜುನಾಥ ಹೆಗಡೆ ಮತ್ತಿತರರ ಜೊತೆಗೂಡುವಿಕೆಯಲ್ಲಿ ಚಂದ್ರಕಾಂತ ಬಿ. ಎ. ಎನ್ನುವ ಸಾಮಾಜಿಕ ನಾಆಟಕವನ್ನು ಆಡಿ ತೋರಿಸಿ ಎಲ್ಲರಿಂದ ಸೈ ಎನ್ನಿಸಿಕೊಂಡರು. ಆ ನಂತರ ಗೋಳಿಯಲ್ಲಿ ಪ್ರತಿವರ್ಷ ರಥೋತ್ಸವದ ದಿನದಂದು ನಾಟಕ ಆಡುವ ಪರಂಪರೆಗೆ ಓಂಕಾರ ಹಾಕಿದರು. ಗೋಳಿ ನಾಟಕದ ಪ್ರಾರಂಭಿಕ ದಿನಗಳಲ್ಲಿ ಮಾಧವರಾವ್ ಅವರು ನಿದರ್ೇಶನ ಮಾಡಿದರೆ ರಾಮಚಂದ್ರ ಹೆಗಡೆ ಅವರು ಅಭಿನಯದ ಜೊತೆ ಜೊತೆಯಲ್ಲಿ ಪರದೆ ರಚನೆ, ಹಿನ್ನೆಲೆ ಸಂಗೀತ ಈ ಮುಂತಾದವುಗಳನ್ನು ನೀಡುವ ಮೂಲಕ ತಮ್ಮದೇ ಆದ ವಿಶಿಷ್ಟ ಪಾತ್ರ ವಹಿಸುತ್ತಿದ್ದರು.
 ಗೋಳಿಯಲ್ಲಿ ಪ್ರಾರಂಭದ ಕೆಲವು ವರ್ಷಗಳಲ್ಲಿ ರಥೋತ್ಸವದ ಸಂದರ್ಭದಲ್ಲಿ ವರ್ಷಕ್ಕೊಂದು ನಾಟಕ ನಡೆಯುತ್ತಿತ್ತು. ಸಾಮಾಜಿಕ ನಾಟಕಗಳಿಂದ ಆರಂಭಗೊಂಡ ನಾಟಕಪರ್ವ ನಂತರದ ದಿನಗಳಲ್ಲಿ ಪೌರಾಣಿಕ ನಾಟಕಗಳ ಕಡೆಗೆ ಹೊರಳಿತು. ನಂತರದ ದಿನಗಳಲ್ಲಿ ವೀರ ಅಭಿಮನ್ಯು, ಉತ್ತರ ಭೂಪ ನಾಟಕಗಳನ್ನು ಆಡಿ ತೋರಿಸಲಾಯಿತು. ಈ ಎರಡೂ ನಾಟಕಗಳು 1960 ಹಾಗೂ 70ರ ದಶಕದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾದವು. ಇದೇ ನಾಟಕಗಳನ್ನು ನಂತರದ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಲ್ಲಿಯೂ ಪ್ರದಶರ್ಿಸಲಾಯಿತು. ಈ ನಾಟಕ ಪ್ರದರ್ಶನಗೊಂಡ ಪ್ರತಿಯೊಂದು ಕಡೆಯಲ್ಲಿಯೂ ಅಪಾರ ಜನಮೆಚ್ಚುಗೆ ಪಡೆದುಕೊಂಡಿತು.
 ಶಿರಸಿ ತಾಲೂಕಿನ ಗೋಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮೊಟ್ಟಮೊದಲು ನಾಟಕ ಪರಂಪರೆ ಹುಟ್ಟು ಹಾಕಿದವರು ರಾಮಚಂದ್ರ ಹೆಗಡೆಯವರು ಎಂದರೆ ತಪ್ಪಾಗಲಿಕ್ಕಿಲ್ಲ. ಗೋಳಿಯಿಂದ ಸ್ಪೂತರ್ಿ ಪಡೆದು ನಂತರದ ದಿನಗಳಲ್ಲಿ ಸಂಪಖಂಡ ಮುಂತಾದ ಕಡೆಗಳಲ್ಲಿಯೂ ನಾಟಕ ನಡೆದಿದ್ದು ವಿಶೇಷ. ಸ್ಥಳೀಯರ ಬಾಯಲ್ಲಿ ರಾಮಚಂದ್ರ ಭಾವ ಎಂದೇ ಕರೆಸಿಕೊಳ್ಳುತ್ತಿದ್ದ ಇವರು ಅಭಿನಯ, ಚಿತ್ರಕಲೆ, ಸಂಗೀತ ಹೀಗೆ ಬಹುರಂಗದಲ್ಲಿ ಹೆಸರುವಾಸಿಯಾದವರು. ಶಿರಸಿಯ ಕಟ್ಟಿಗೆ ಭಟ್ಟರು ಎನ್ನುವವರಲ್ಲಿ ಸಂಗೀತಾಭ್ಯಾಸವನ್ನು ಮಾಡಿದವರು. ನಾಟಕದ ಹಿನ್ನೆಲೆ ಪರದೆ, ವೇಷಭೂಷಣ ಇತ್ಯಾದಿಗಳಿಗೆ ಗೋಳಿ ಹೆಸರುವಾಸಿ. ಆಕರ್ಷಕ ಪರದೆ ಹಾಗೂ ವೇಷಭೂಷಣಗಳಿಗೆ ಕಾರಣೀಭೂತರಾದವರು ರಾಮಚಂದ್ರ ಹೆಗಡೆಯವರು. ಇವರು ಚಿತ್ರಿಸಿದ ಅದೆಷ್ಟೋ ಪರದೆಗಳು ಹಾಗೂ ನಿಮರ್ಿಸಿದ ವೇಷಭೂಷಣಗಳು ನಾಟಕಪ್ರಿಯರ ಕಣ್ಮನ ಸೆಳೆದವು. ಅಷ್ಟೇ ಅಲ್ಲ ಗೋಳಿ ನಾಟಕವೆಂದರೆ ವಿಶೇಷ ಪರದೆಗಳು ಹಾಗೂ ವೇಷಭೂಷಣಗಳಿಗೆ ಸಾಕ್ಷಿ ಎಂಬುದನ್ನು ಬಿಂಬಿಸಿದರು.
 1982ರ ನಂತರದ ದಿನಗಳಲ್ಲಿ ರಾಮಚಮದ್ರ ಹೆಗೆಯವರೇ ನಿದರ್ೇಶನಕ್ಕೂ ಇಳಿದರು. ಉಷಾ ಸ್ವಯಂವರ ಎನ್ನುವ ವಿಶೇಷ ನಾಟಕವನ್ನು ನಿದರ್ೇಶಿಸಿದ ಅವರು 2 ವರ್ಷಗಳ ಕಾಲ ಜನಮನಸೂರೆಗೊಂಡಿತ್ತು. ಪ್ರತಿವರ್ಷ ಕನಿಷ್ಟ 6 ಪ್ರಯೋಗಗಳಾದವು. ಪ್ರತಿಯೊಂದು ಪ್ರಯೋಗಕ್ಕೂ ಪ್ರೇಕ್ಷಕರು ಮುಗಿಬಿದ್ದಿದ್ದರು. ಉಷಾ ಸ್ವಯಂವರಕ್ಕೂ ಮೊದಲು ಬಾಡಿಗೆ ಪರದೆಯನ್ನು ಗೋಳಿ ನಾಟಕಕ್ಕೆ ಬಳಕೆ ಮಾಡಲಾಗುತ್ತಿತ್ತು. 1982ರಿಂದಲೇ ವಿಶೇಷ ಸೆಟ್ಟಿಂಗ್ ನಿಮರ್ಾಣ ಆರಂಭಗೊಂಡಿತು. ರಾಮಚಂದ್ರ ಹೆಗಡೆಯವರು ತಮ್ಮ ಸಹೋದರ ಶಂಕರನಾರಾಯಣ ಹೆಗಡೆಯವರ ಸಹಯೋಗದೊಂದಿಗೆ ಪರದೆ ರಚನೆಗೆ ಮುಂದಾದರು. 1984ರಲ್ಲಿ 6 ಪ್ರಯೋಗ ಕಂಡ ಕುರುಕ್ಷೇತ್ರ, ನಂತರದ ದಿನಗಳಲ್ಲಿ ಶ್ರೀಕೃಷ್ಣ ಗಾರುಡಿ, ಚೌತಿ ಚಂದ್ರ ಜನಾಕರ್ಷಣೆ ಪಡೆದುಕೊಂಡಿತು. 1990ರ ವರೆಗೆ ಪ್ರತಿ 2 ವರ್ಷಕ್ಕೊಮ್ಮೆ ನಾಟಕ ಪ್ರಯೋಗಗಳು ನಡೆದವು. 1990ರ ದಶಕದಲ್ಲಿ ಕೆಲವು ವರ್ಷಗಳ ವರೆಗೆ ನಾಟಕದ ಹೆಚ್ಚುವರಿ ಪ್ರಯೋಗಗಳು ನಿಲುಗಡೆಯಾದವು. 2002ರ ವರೆಗೂ ವರ್ಷಕ್ಕೊಂದು ನಾಟಕ ನಡೆಯುತ್ತಿತ್ತು. 2004ರಲ್ಲಿ ಗೋಳಿ ನಾಟಕದ ವೈಭವ ಮತ್ತೊಮ್ಮೆ ಮರುಕಳಿಸಿತು.
 ಮುತ್ಮುಡರ್ು ಎಂ. ಎಸ್. ಹೆಗಡೆ ಅವರು ಬರೆದ ಕರ್ಣ ನಾಟಕ 2004ರಲ್ಲಿ ಹಾಗೂ 2006ರಲ್ಲಿ ಪಾಂಡವಾಶ್ವಮೇಧ ನಾಟಕಗಳು ಪ್ರದರ್ಶನಗೊಂಡವು. ಪೂರ್ವನಿಧರ್ಾರಿತ 6 ಪ್ರಯೋಗಗಳು ಜನಾಕರ್ಷಣೆಗೊಮಡು ನಂತರ 4 ರಿಂದ 5 ಪ್ರಯೋಗಗಳನ್ನು ಹೆಚ್ಚುವರಿಯಾಗಿ ಮಾಡಲಾಯಿತು. 2010ರಲ್ಲಿ ಸಿಂಧೂರ ವಧೆ (ಗಣೇಶ ಮಹಿಮೆ) ನಾಟಕ ಪ್ರದರ್ಶನಗೊಂಡಿತು. ಈ ನಾಟಕವನ್ನು ಬರದವರು ಹಾರೂಗಾರ ರಾಮಚಂದ್ರ ಹೆಗಡೆಯವರು ಎನ್ನುವುದು ವಿಶೇಷ. 2014ರಲ್ಲಿ ರಾಮಚಂದ್ರ ಹೆಗಡೆಯವರ ಸಹೋದರ ಶಂಕರನಾರಾಯಣ ಹೆಗಡೆಯವರ ನಿದರ್ೇಶನದಲ್ಲಿ ಭೂಕೈಲಾಸ ನಾಟಕ ರಂಗಪ್ರದರ್ಶನಗೊಂಡಿತು. ಈ ಎಲ್ಲ ನಾಟಕಗಳ ಯಶಸ್ಸಿನ ಹಿಂದಿದ್ದವರು ಹಾರೂಗಾರ ರಾಮಚಂದ್ರ ಹೆಗಡೆಯವರು.
 ರಾಮಚಂದ್ರ ಹೆಗಡೆಯವರ ಸಾಧನೆಯನ್ನು ಗಮನಿಸಿ 2011ರಲ್ಲಿ ನಾಟಕ ಅಕಾಡೆಮಿ ರಂಗ ಪ್ರಶಸ್ತಿ ಅವರನ್ನರಸಿ ಬಂದಿತು. ತಮ್ಮ 54 ವರ್ಷಗಳ ರಂಗವೃತ್ತಿಯಲ್ಲಿ ಕನಿಷ್ಟ 150 ಜನರನ್ನು ರಂಗಕ್ಕೆಳೆದು ತಂದರು. ನಾಟಕ ರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಹಿನ್ನೆಲೆ ಸಂಗೀತದ ಸಂದರ್ಭದಲ್ಲಿ ಸಿತಾರ್ ಬಳಕೆ ಮಾಡಿಸಿದ ಖ್ಯಾತಿ ರಾಮಚಂದ್ರ ಹೆಗಡೆಯವರದ್ದು. ರುದ್ರವೀಣೆಯಲ್ಲಿ ರಾಷ್ಟ್ರದಾದ್ಯಂತ ಹೆಸರು ಮಾಡಿದ ಆರ್. ವಿ. ಹೆಗಡೆಯವರ ಸಿತಾರ್ ವಾದನವನ್ನು ನಾಟಕ ರಂಗಕ್ಕೆ ತಂದರು. ಎಂ. ಪಿ. ಹೆಗಡೆ ಪಡಿಗೆರೆ, ಎಂ. ವಿ. ಹೆಗಡೆ ಬೆಕ್ಮನೆ, ಅಶೋಕ ಹುಗ್ಗಣ್ಣವರ್ ಈ ಮುಂತಾದವರಿಂದ ಹಿನ್ನೆಲೆ ಸಂಗೀತ ನೀಡಿಸಿದರು. ಗೋಳಿ ಪ್ರೌಡಶಾಲೆಗೆ ದೇಣಿಗೆ ನೀಡಿದವರ ಭಾವಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ ಖ್ಯಾತಿ ರಾಮಚಂದ್ರ ಹೆಗಡೆಯವರದ್ದು. ಇಂತಹ ಸರಳ, ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡ ನಾಟಕ ರಂಗ ಬಡವಾಗಿದೆ. ಗೋಳಿ ನಾಟ್ಯಕಲಾ ಸಂಘದ ಬೆನ್ನೆಲುಬು ಎನ್ನಿಸಿಕೊಂಡಿದ್ದ ರಾಮಚಂದ್ರ ಹೆಗಡೆಯವರು ಇನ್ನಿಲ್ಲವಾಗಿದ್ದಾರೆ. ರಂಗಭೂಮಿಗೆ ಶೂನ್ಯ ಆವರಿಸಿದೆ.

*****

ನನ್ನ ಅಣ್ಣ ರಾಮಚಂದ್ರ ಹೆಗಡೆಯವರು ಸರಳ ವ್ಯಕ್ತಿತ್ವದವರು. ಮನೆಯಲ್ಲಿಯೂ ಅವರು ತೀರಾ ಕಟ್ಟುನಿಟ್ಟನ್ನು ಹೇರುತ್ತಿರಲಿಲ್ಲ. ನಮ್ಮೆಲ್ಲರ ಪ್ರೀತಿ ಪಾತ್ರರಾಗಿ, ಕುಟುಂಬದ ಹಿರಿಯಣ್ಣರಾಗಿ ನಮ್ಮೆಲ್ಲರನ್ನು ಸಲಹಿದರು. ಅಣ್ಣ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೋಳಿ ನಾಟಕವೆಂದರೆ ರಾಮಚಂದ್ರ ಹೆಗಡೆಯವರು ಎಂದು ಹೇಳಲಾಗುತ್ತಿತ್ತು. ಆದರೆ ಅವರಿಲ್ಲದೇ ಮುಮದೆ ಯಾವ ರೀತಿ ನಾಟಕವನ್ನು ಆಡುವುದು ಎನ್ನುವುದೇ ತಿಳಿಯುತ್ತಿಲ್ಲ. ನಮ್ಮ ಮನಸ್ಸಿನಲ್ಲಿ ಶೂನ್ಯ ಆವರಿಸಿದೆ.
ಶಂಕರನಾರಾಯಣ ಸೀತಾರಾಮ ಹೆಗಡೆ
ರಾಮಚಂದ್ರ ಹೆಗಡೆಯವರ ಸಹೋದರ
ಹಾರೂಗಾರ

No comments:

Post a Comment