Monday, January 4, 2016

ಅಘನಾಶಿನಿ ಕಣಿವೆಯಲ್ಲಿ-32

         ತಪ್ಪಿಸಿಕೊಂಡು ಹೋಗುತ್ತಿದ್ದ ಬಾಬುವನ್ನು ಹಿಡಿದಾಗಿತ್ತು. ಆದರೆ ಅವನ ಬಾಯಿ ಬಿಡಿಸಬೇಕಲ್ಲ. ಪ್ರದೀಪ ಬಾಬುವನ್ನು ಹಿಡಿದು ಎಳೆದುಕೊಂಡು ಕಾರಿಗೆ ತುಂಬಿಕೊಂಡ. ಬಾಬು ಮಾತ್ರ ಕಕ್ಕಾಬಿಕ್ಕಿಯಾಗಿದ್ದ. ನನ್ನನ್ನು ಬಿಟ್ಟು ಬಿಡಿ ಎಂದು ಕೂಗಿಕೊಳ್ಳುತ್ತಿದ್ದ. ಆಗಾಗ ತನ್ನನ್ನು ಹಿಡಿದುಕೊಂಡು ಬಂದ ಬಗ್ಗೆ ಪ್ರತಿಭಟನೆಯನ್ನೂ ಮಾಡುತ್ತಿದ್ದ. ಆದರೆ ಪ್ರದೀಪ ಮಾತ್ರ ಬಾಬು ತಪ್ಪಿಸಿಕೊಂಡು ಹೋಗದಂತೆ ಪಟ್ಟಾಗಿ ಹಿಡಿದುಬಿಟ್ಟಿದ್ದ.
          ಗಾಡಿಯಲ್ಲಿ ಬಾಬುನನ್ನು ಬಹುದೂರ ಹಾಕಿಕೊಂಡು ಹೋದವರು ಅಲ್ಲೊಂದು ಕಡೆ ನಿರ್ಜನ ಪ್ರದೇಶದಲ್ಲಿ ಗಾಡಿ ನಿಲ್ಲಿಸಿದರು. ನಿಲ್ಲಿಸಿದವರೇ ಬಾಬುವನ್ನು ಗಾಡಿಯಿಂದ ಹೊರಕ್ಕೆ ಎಳೆದು ನಾಲ್ಕೇಟು ಬಿಡಿದರು. ಆದರೆ ಬಾಬು ಇದನ್ನು ತಡೆದುಕೊಂಡ. ಮತ್ತಷ್ಟು ಹೊಡೆದು ಬಾಬುವಿನ ಕೆಲಸದ ಬಗ್ಗೆ ಕೇಳಲು ಆರಂಭಿಸಿದರು. ಆದರೆ ಬಾಬು ಬಾಯಿ ಬಿಡಲು ಸುತಾರಾಂ ತಯಾರಿರಲಿಲ್ಲ. ಪ್ರದೀಪ ಮಾತ್ರ ಕ್ಷಣಕ್ಷಣಕ್ಕೂ ಸಿಟ್ಟಾಗುತ್ತಿದ್ದ. ಬಾಬುವಿನ ಕೈಕಾಲು ಮುರಿದು ಬಿಡೋಣ ಎಂದುಕೊಂಡ. ಹೇಗಾದರೂ ಬಾಯಿಬಿಡಿಸೋಣ ಎಂದುಕೊಂಡ.
          ತಕ್ಷಣವೇ ವಿಜೇತಾ ವಿಕ್ರಮನ ಬಳಿ ಏನೋ ಹೇಳಿದಳು. ವಿಕ್ರಮ ಕೂಡಲೇ ಕಾರ್ಯಪ್ರವೃತ್ತನಾದ. ಗಾಡಿಯೊಳಗಿದ್ದ ಸಕ್ಕರ ಪ್ಯಾಕನ್ನು ತಂದ. ತಂದವನೇ ಬಾಬುವಿನ ಮೇಮೇಲೆ ಚೆಲ್ಲಿಬಿಟ್ಟ. ನಂತರ ಬಾಬುವನ್ನು ಹಿಡಿದುಕೊಂಡು ಹೋಗಿ ಪಕ್ಕದ ಮರವೊಂದಕ್ಕೆ ಕಟ್ಟಿ ಹಾಕಿದ. ಅಷ್ಟಕ್ಕೆ ಸುಮ್ಮನಿರದ ವಿಕ್ರಮ ಸಕ್ಕರೆಯ ನೀರನ್ನು ಮಾಡಿ ಚೆಲ್ಲಿಬಿಟ್ಟ. ಪ್ರತಿಯೊಬ್ಬರಿಗೂ ಕೂಡ ಇವನೇಕೆ ಹೀಗೆ ಮಾಡುತ್ತಿದ್ದಾನೆ ಎನ್ನುವ ಕುತೂಹಲ ಕಾಡದೇ ಇರಲಿಲ್ಲ. ಬಾಬು ಮಾತ್ರ ಮನಸ್ಸಿನೊಳಗೆ ನಗಲು ಆರಂಭಿಸಿದ್ದ. ತನ್ನನ್ನು ಬಾಯಿ ಬಿಡಿಸಲು ಸಾಧ್ಯವೇ ಇಲ್ಲ. ತಾನು ಗೆದ್ದಿದ್ದೇನೆ ಎಂದುಕೊಂಡ. ಆದರೆ ವಿಕ್ರಮ ತನ್ನ ಮೈಮೇಲೆ ಸಕ್ಕರೆ ಹಾಗೂ ಸಕ್ಕರೆ ನೀರನ್ನು ಯಾಕೆ ಚೆಲ್ಲಿದ ಎನ್ನುವುದು ಗೊತ್ತಾಗಲಿಲ್ಲ.
        ಅರೆಘಳಿಗೆ ಕಳೆದಿರಬಹುದು. ಬಾಬುವಿನ ಕಾಲಿನ ಬಳಿಯಲ್ಲಿ ಯಾಕೋ ಗುಳುಗುಳು ಆಗಲಾರಂಭಿಸಿತು. ನಂತರ ಸೂಜಿಯಿಂದ ಚುಚ್ಚಿದಂತಹ ಅನುಭವವಾಯಿತು. ಕಾಲನ್ನು ನೋಡಿಕೊಂಡ ಬಾಬು. ದೊಡ್ಡ ಗಾತ್ರದ ಕಪ್ಪಿರುವೆಯೊಂದು ಬಂದು ಕಾಲನ್ನು ಕಚ್ಚಲು ಆರಂಭಿಸಿತ್ತು. `ಹಾಳಾದ ಇರುವೆ.. ತಥ್.. ಹಾಳ್ ಬೀಳಲಿ..' ಎಂದು ಬೈದುಕೊಂಡು ತನ್ನ ಇನ್ನೊಂದು ಕಾಲಿನಿಂದ ಠಪ್ಪನೆ ಹೊಡೆದು ಇರುವೆಯನ್ನು ಕೊಂದು ಹಾಕಿದ.
         ಇಷ್ಟಾಗಿ ಕೆಲವೇ ಕ್ಷಣಗಳು ಕಳೆದಿರಬಹುದು ಕಾಲಿಗೆ ಮತ್ತೆ ಹಲವಾರು ಸೂಜಿಗಳಿಂದ ಚುಚ್ಚಿದಂತಹ ಅನುಭವ ಆಗತೊಡಗಿತ್ತು. ಒಮ್ಮೆ ನೋಡಿಕೊಂಡವನಿಗೆ ಮನಸ್ಸಿನ ಆಳದಲ್ಲಿ ಭಯದ ಛಾಯೆ ಮೂಡಿತು. ಸಾವಿರ ಸಾವಿರ ಸಂಖ್ಯೆಯ ಇರುವೆಗಳು ಬಾಬುವಿನ ಕಾಲನ್ನು ಮುತ್ತಲು ಆರಂಭಿಸಿದ್ದವು. ಕಾಲಿಗೆ ಸೀಮಿತವಾಗದೇ ಮತ್ತೂ ಮೇಲ ಮೇಲಕ್ಕೆ ಏರಲು ಆರಂಭಿಸಿದ್ದವು. ನೋಡ ನೋಡುತ್ತಿದ್ದಂತೆ ದೇಹದ ತುಂಬೆಲ್ಲ ಇರುವೆಗಳು ಮುತ್ತಿಕೊಂಡು ಕಚ್ಚಲು ಆರಂಭಿಸಿದ್ದವು. ವಿಜೇತಾ ಹೇಳಿದ ಸಲಹೆಯನ್ನು ಕೇಳಿ ಯಥಾವತ್ತಾಗಿ ಕಾರ್ಯರೂಪಕ್ಕಿಳಿಸಿದ್ದ ವಿಕ್ರಮ. ಆತ ಬಾಬುವಿನ ಮೈಮೇಲೆ ಸಕ್ಕರೆ ಹಾಗೂ ಸಕ್ಕರೆ ನೀರನ್ನು ಚಲ್ಲಿದ್ದು ಫಲ ನೀಡಲಾರಂಭಿಸಿತ್ತು. ಸಕ್ಕರೆಯ ವಾಸನೆಗೆ ಇರುವೆಗಳು ಮುತ್ತಿಕೊಂಡು ಬಂದಿದ್ದವು. ಬಾಬುವಿನ ಮೈಯನ್ನು ಏರಿ ಕಚ್ಚಲು ಆರಂಭಿಸಿದ್ದವು. ಬಾಬು ಮೊದ ಮೊದಲಿಗೆ ಇವರೇನೋ ತಮಾಷೆ ಮಾಡಲು ಆರಂಭಿಸಿದ್ದಾರೆ ಎಂದುಕೊಂಡಿದ್ದ. ಆದರೆ ಈಗ ಮಾತ್ರ ಅವರು ಮಾಡಿದ ಕೆಲಸದ ಪರಿಣಾಮ ಗೋಚರವಾಗತೊಡಗಿತ್ತು.
           ಇರುವೆಗಳು ಕಚ್ಚುವುದು ಜಾಸ್ತಿಯಾದಂತೆ ಬಾಬು ಅರಚಿಕೊಳ್ಳಲು ಆರಂಭಿಸಿದ. ಈ ನಡು ನಡುವೆ ಪ್ರದೀಪ ಬಾಬುವಿನ ದಂಧೆಯ ಬಗ್ಗೆ ಬಾಯಿ ಬಿಡುವಂತೆ ಹೇಳುತ್ತಲೇ ಇದ್ದ. ಅಷ್ಟರಲ್ಲಿ ವಿನಾಯಕ ಓಡಿ ಹೋಗಿ ಅದ್ಯಾವುದೋ ಸಳ್ಳೆ ಮರಕ್ಕೆ ಗೂಡು ಕಟ್ಟಿಕೊಂಡಿದ್ದ ಚೌಳಿ ಕೊಟ್ಟೆಯನ್ನು ತಂದು ಬಾಬುವಿನ ಮೈಮೇಲೆ ಎರಚಿಬಿಟ್ಟಿದ್ದ. ಬಾಬುವಿಗೆ ಕಪ್ಪಿರುವೆಗಳ ದಾಳಿಗೆ ಹೈರಾಣಾಗಿದ್ದವನು ಇದೀಗ ಸೌಳಿಗಳು ಕಚ್ಚುವುದನ್ನು ತಾಳಲಾರದೇ ಹುಯ್ಯಲಿಡಲು ಆರಂಭಿಸಿದ್ದ. ಕೊನೆಗೊಮ್ಮೆ ಹತಾಶನಾದ ಬಾಬು ತನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಳ್ಳಲು ಆರಂಭಿಸಿದ. ಇಷ್ಟೆಲ್ಲ ಆದರೂ ಪ್ರದೀಪನ ಪ್ರಶ್ನೆಗಳಿಗೆ ಮಾತ್ರ ಬಾಬು ಬಾಯಿ ಬಿಡಲು ಮುಂದಾಗಲಿಲ್ಲ.
          ಪ್ರದೀಪ ತನ್ನ ಕೆಲಸವನ್ನು ಬಿಡಲಿಲ್ಲ. ಹರಿತವಾದ ಚಾಕುವೊಂದನ್ನು ತಂದು ಬಾಬುವಿನ ಕಾಲನ್ನು ಚಕ್ಕನ್ನೆ ಗೀರಿದ. ಇರುವೆಗಳ ದಾಳಿಗೆ ಬಸವಳಿದಿದ್ದ ಬಾಬು ಈಗ ಮಾತ್ರ ಬೆಚ್ಚಿ ಬಿದ್ದಿದ್ದ. ಇರುವೆಗಳು ಪ್ರದೀಪ ಚಾಕಿವಿನಿಂದ ಗೀರಿದ್ದ ಜಾಗಕ್ಕೆ ದಾಳಿ ಮಾಡಿ ರಕ್ತ ಹೀರಲು ಆರಂಭಿಸಿದ್ದವು. ಪ್ರದೀಪ ಚಾಕಿವಿನಿಂದ ಇನ್ನೊಂದೆರಡು ಗೀರುಗಳನ್ನು ಮಾಡಿದ. ಗಾಯಕ್ಕೆ ಇರುವೆಗಳು ದಾಳಿ ಮಾಡುವುದೂ ಜಾಸ್ತಿಯಾದವು. ಕೊನೆಗೊಮ್ಮೆ ಬಾಬು `ಸಾಕು ನನ್ನುನ್ನು ಬಿಟ್ಟು ಬಿಡಿ.. ನಿಜ ಹೇಳ್ತೇನೆ..' ಎಂದು ಕೂಗಿಕೊಂಡ. ವಿಕ್ರಮ ಮರದ ಹಿಂದೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ್ದ. ಬಾಬು ಒಮ್ಮೆ ಥಕಥೈ ಎಂದು ಕುಣಿದು ಕುಪ್ಪಳಿಸಿ ಮೈಮೇಲೆ ಮುತ್ತಿಕೊಂಡಿದ್ದ ಇರುವೆಗಳನ್ನು ಕೊಡವಿಕೊಳ್ಳಲು ಆರಂಭಿಸಿದ್ದ.
            `ಈಗ್ಲಾದರೂ ಹೇಳು. ಇಲ್ಲವಾದರೆ ಮತ್ತೆ ಈ ಶಿಕ್ಷೆಯನ್ನು ಪುನರಾವರ್ತನೆ ಮಾಡಲಾಗುತ್ತದೆ..' ಕಂಚಿನ ಕಂಠದಲ್ಲಿ ಪ್ರದೀಪ ಹೇಳಿದ್ದ. ಬಾಬುವಿಗೆ ಮತ್ತೆ ನರಕ ದರ್ಶನ ಮಾಡುವುದು ಬೇಕಿರಲಿಲ್ಲ. ಹೇಳ್ತೇನೆ ಎಂದವನೇ ಪ್ರವರವನ್ನು ಹೇಳಿಕೊಳ್ಳಲು ಮುಂದಾಗಿದ್ದ. ಬಾಬು ಹೇಳುತ್ತಿದ್ದ ವಿವರಗಳನ್ನು ಕೇಳುತ್ತಿದ್ದಂತೆ ಮಲೆನಾಡಿನಲ್ಲಿ ಹಬ್ಬಿದ್ದ ಕತ್ತಲ ಲೋಕದ ಬೇರುಗಳು ನಿಧಾನವಾಗಿ ಬಿಚ್ಚಿಕೊಳ್ಳಲು ಆರಂಭವಾಗಿದ್ದವು. ಕಾಡಿನ ಉತ್ಪನ್ನಗಳನ್ನು ಕದ್ದು ಮಾರಾಟ ಮಾಡುವ ದಂಧೆ, ಮರಗಳ್ಳತನ, ಸ್ಮಗ್ಲಿಂಗ್, ಕಾಡಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಯುವುದು ಇತ್ಯಾದಿ ಕರಾಳ ಕಥೆಗಳೆಲ್ಲ ಹೊರಬೇಳಲು ಆರಂಭವಾಗಿದ್ದವು. ಕೇಳುತ್ತಿದ್ದ ಪ್ರದೀಪ, ವಿಕ್ರಮ, ವಿಜೇತಾ, ವಿನಾಯಕ ಹಾಗೂ ಉಳಿದವರ ಮೈಮನಗಳೆಲ್ಲ ರೋಮಾಂಚನಗೊಳ್ಳು ಆರಂಭಗೊಂಡಿದ್ದವು.

(ಮುಂದುವರಿಯುತ್ತದೆ)

No comments:

Post a Comment