Thursday, December 17, 2015

ಮಾಸ್ತರ್ ಮಂದಿ-9

                 ಹೈಸ್ಕೂಲಿನಲ್ಲಿ ಇನ್ನೂ ಕೆಲವು ಶಿಕ್ಷಕರು ಕಲಿಸಿದ್ದಾರೆ. ಅವರ ಪೈಕಿ ಪ್ರಮುಖ ಎನ್ನಿಸುವ ಗ್ರೇಸ್ ಪ್ರೇಮಕುಮಾರಿ ಹಾಗೂ ದೈಹಿಕ ಶಿಕ್ಷಕರಾದ ಸಿ. ಆರ್. ಲಿಂಗರಾಜು ಅವರ ಬಗ್ಗೆ ಬರೆಯದಿದ್ದರೆ ಏನೋ ಕಳೆದುಕೊಂಡಂತೆ ಬಿಡಿ. ಜಿಪಿಕೆ ಎನ್ನುವ ಶಾರ್ಟ್ ಫಾರ್ಮಿನ ಪ್ರೇಮಕುಮಾರಿ ಮೇಡಂ ಕಾನಲೆ ಹೈಸ್ಕೂಲಿನ ಹೆಡ್ ಮಿಸ್ ಆಗಿದ್ದರು. ಲಿಂಗರಾಜು ಅವರು ಸಿ.ಆರ್.ಎಲ್. ಎಂಬ ಶಾರ್ಟ್ ಫಾರ್ಮನ್ನು ಪಡೆದುಕೊಂಡಿದ್ದರು. ಇವರ ಬಗ್ಗೆ ಹೇಳದೇ ಇದ್ದರೆ ಹೈಸ್ಕೂಲು ಬದುಕು ಅಪೂರ್ಣ ಎನ್ನಿಸಿಬಿಡುತ್ತದೆ.

ಗ್ರೇಸ್ ಪ್ರೇಮ್ ಕುಮಾರಿ :
ನಾನು ಎಂಟನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ಇಂಗ್ಲೀಷ್ ಶಿಕ್ಷಕರಾದ ಬಿ. ಆರ್. ಎಲ್. ಅವರು ನಮ್ಮ ಹೈಸ್ಕೂಲಿನ ಹೆಡ್ ಮಾಸ್ತರ್ ಯಾರು ಎಂದು ಕೇಳಿದ್ದರು. ನಾವೆಲ್ಲ ಆಗ ಇನ್ ಛಾರ್ಜ್ ಕೆಲಸ ಮಾಡುತ್ತಿದ್ದ ಪರಶುರಾಮಪ್ಪ ಅವರ ಹೆಸರನ್ನು ಹೇಳಿದ್ದೆವು. ಕೂಡಲೇ ಹೇಳಿದ್ದ ಬಿಆರ್.ಎಲ್ ಪರಶುರಾಮಪ್ಪ ಖಾಯಂ ಹೆಡ್ ಮಾಸ್ತರ್ ಅಲ್ಲ. ನಮ್ಮ ಶಾಲೆಯ ಹೆಡ್ ಮಾಸ್ತರ್ ಹೆಸರು ಗ್ರೇಸ್ ಪ್ರೇಮ್ ಕುಮಾರಿ. ಅವರು ಬೇರೊಂದು ಶಾಲೆಗೆ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನಾರು ತಿಂಗಳಿನಲ್ಲಿ ಬರುತ್ತಾರೆ ಎಂದಿದ್ದರು. ಆದರೆ ಆರು ತಿಂಗಳು ಹೋಗಲಿ, ಗ್ರೇಸ್ ಪ್ರೇಮಕುಮಾರಿ ಮೇಡಂ ಶಾಲೆಗೆ ಬಂದಿದ್ದು ನಾನು ಒಂಭತ್ತನೇ ಕ್ಲಾಸಿನದ್ದಾಗ. ಗ್ರೇಸ್ ಪ್ರೇಮಕುಮಾರಿ ಮೇಡಮ್ ಕ್ರಿಶ್ಚಿಯನ್ನರಾಗಿದ್ದರು ಎನ್ನುವುದೇ ನಮಗೆಲ್ಲ ವಿಶೇಷ ಸಂಗತಿ. ಆದರೆ ಅವರು ಅದೆಷ್ಟು ಸುಂದರವಾಗಿ ಕನ್ನಡ ಅಕ್ಷರಗಳನ್ನು ಬರೆಯುತ್ತಿದ್ದರು ಎಂದರೆ ಆಹಾ. ಅವರು ಬೋರ್ಡಿನ ಮೇಲೆ ಬರೆಯುವುದೇ ಬಹಳ ಚೆಂದ. ಅಷ್ಟೇ ಚನ್ನಾಗಿ ಕನ್ನಡ ಮಾತನಾಡುತ್ತಿದ್ದರು. ಜಿಪಿಕೆ ಎಂಬ ಕಿರುನಾಮದಿಂದ ನಾವು ಅವರನ್ನು ಕರೆಯಬೇಕಿತ್ತು. ನಮಗೆ ಭಾರತಿ ಮೇಡಂ ಕನ್ನಡ ಕಲಿಸುವ ಅಧಿಕೃತ ಶಿಕ್ಷಕಿಯಾಗಿದ್ದರೂ ಗ್ರೇಸ್ ಪ್ರೇಮಕುಮಾರಿ ಮೇಡಂ ಕೂಡ ಕಲಿಸಲು ಬರುತ್ತಿದ್ದರು ಎನ್ನುವುದು ವಿಶೇಷವಾಗಿತ್ತು.
ಹೈಸ್ಕೂಲಿನಲ್ಲಿ ನಾನು ಕನ್ನಡ ಅಕ್ಷರವನ್ನು ಬಹಳ ಚನ್ನಾಗಿ ಬರೆಯುತ್ತಿದೆ. ಆ ಕಾರಣದಿಂದಲೇ ಪ್ರೇಮಕುಮಾರಿ ಮೇಡಮ್ ರಿಗೆ ನಾನು ಅಂದರೆ ವಿಶೇಷ ಅಕ್ಕರೆ. ಎಲ್ಲಾ ವಿಷಯಗಳಲ್ಲಿಯೂ ಕಾಲು-ಬಾಲ ಸೇರಿಸಿ ಉದ್ದಕ್ಕೆ ಬರೆಯುತ್ತಿದ್ದ ನಾನು ಕನ್ನಡದಲ್ಲಿ ಮಾತ್ರ ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಬಹಳ ಸುಂದರವಾಗಿ ಬರೆಯುತ್ತಿದ್ದೆ. ಪರಿಣಾಮವಾಗಿ ಒಳ್ಳೆಯ ಅಂಕಗಳು ಬೀಳುತ್ತಿದ್ದವು. ಬರೆದರೆ ವಿನಯನ ಹಾಗೆ ಬರೆಯಬೇಕು ಎಂದು ಕ್ಲಾಸಿನಲ್ಲಿ ಹೇಳುತ್ತಿದ್ದುದು ಕೆಲವರ ಹೊಟ್ಟೆಯ ಕಿಚ್ಚಿಗೂ ಕಾರಣವಾಗಿತ್ತು. ಎಸ್.ಎಸ್.ಎಲ್.ಸಿಯಲ್ಲಿ ಇದ್ದಾಗ ನಾನು ಅನೇಕ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೆ. ಆ ಸಂದರ್ಭದಲ್ಲಂತೂ ನನ್ನನ್ನು ವಿಶೇಷವಾಗಿ ಕೊಂಡಾಡಿದ್ದರು.
ಒಂದು ದಿನ ಶಾಲೆಗೆ ಬಂದ ಗ್ರೇಸ್ ಪ್ರೇಮಕುಮಾರಿ ಮೇಡಂ ತಮ್ಮ ಕೊಠಡಿಗೆ ನನ್ನನ್ನು ಕರೆಸಿಕೊಂಡರು. ಕರೆಸಿದವರೇ `ನೋಡು ವಿನಯ್ ನಿನ್ನ ತಂದೆಯವರು ನನಗೆ ಸಿಕ್ಕಿದ್ದರು..' ಎಂದರು. ನನಗೆ ಒಮ್ಮೆ ಆಶ್ಚರ್ಯವಾಗಿತ್ತು. ನನ್ನ ಅಪ್ಪ ಅದ್ಯಾವ ಮಾಯೆಯಲ್ಲಿ ಇವರನ್ನು ಬೇಟಿಯಾಗಿ ಹೋಗಿದ್ದಾರೋ ಎಂಬ ಕುತೂಹಲ ಕಾಡಿತ್ತು.
`ನೋಡು ನೀನು ನಾಟಕ ಸೇರಿದಂತೆ ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಂತೆ. ತಿಳೀತಾ?' ಎಂದರು. ನಾನು `ಭಾಗವಹಿಸ್ತಾ ಇದ್ದೇನೆ ಮೇಡಂ..' ಅಂದೆ. `ನೋಡು ನಿನ್ನ ತಂದೆಯವರು ಇನ್ನೊಂದು ಮಾತನ್ನು ಹೇಳಿದ್ದಾರೆ. ನನ್ನ ಮಗನಿಗೆ ಎಷ್ಟ್ ಬೇಕಾದರೂ ಹೊಡೆಯಿರಿ. ತೊಂದರೆಯಿಲ್ಲ. ಆತನಿಗೆ ಹೊಡೆತಕ್ಕೆ ಏನೂ ಕಡಿಮೆ ಮಾಡಬೇಡಿ. ಆದರೆ ಚನ್ನಾಗಿ ಕಲಿಸಿ.. ಎಂದಿದ್ದಾರೆ. ಯಾಕ್ ಹಿಂಗಂದ್ರು? ನೀನಂತೂ ಚನ್ನಾಗಿ ಓದ್ತಾ ಇದ್ದೀಯಲ್ಲ..' ಎಂದರು ಪ್ರೇಮಕುಮಾರಿ ಮೇಡಂ.
ನನಗೆ ಅಪ್ಪನ ಗುಣ ಗೊತ್ತಿತ್ತಾದ್ದರಿಂದ ಸ್ವಲ್ಪ ಪೆಚ್ಚಾಗಿದ್ದರೂ ಏನೂ ಆಗಿಲ್ಲ ಎಂಬಂತೆ ಸುಮ್ಮನೇ ಇದ್ದೆ. ಮಗನಿಗೆ ಸಿಕ್ಕಾಪಟ್ಟೆ ಹೊಡೆದರೆ ಮಗ ಬುದ್ಧಿವಂತನಾಗುತ್ತಾನೆ ಎಂದುಕೊಂಡಿದ್ದ ಅಪ್ಪ ಪ್ರಾಥಮಿಕ ಶಾಲಾ ಶಿಕ್ಷಕರ ಬಳಿಯಲ್ಲೂ ಹೀಗೆಯೇ ಹೇಳಿದ್ದ. ಈಗಲೂ ಅದೇ ರೀತಿ ಹೇಳಿದ್ದ. ಆದರೆ ಒಬ್ಬ ತಂದೆ ತನ್ನ ಮಗನಿಗೆ ಹೊಡೆಯಿರಿ ಎಂದು ಹೇಳಿದ್ದು ಪ್ರೇಮಕುಮಾರಿ ಮೇಡಂ ಅವರಿಗೆ ಬಹಳ ಅಚ್ಚರಿಯನ್ನು ಹುಟ್ಟುಹಾಕಿತ್ತು. ಅವರಿಗೆ ಇದರಿಂದ ಬೇಜಾರೂ ಆಗಿತ್ತಂತೆ. ಕಾನಲೆ ಹೈಸ್ಕೂಲಿನಿಂದ ಬೀಳ್ಕೊಟ್ಟು ಹೋಗುವಾಗ ಮಾತಿನ ಮದ್ಯದಲ್ಲಿ ಹೇಳಿದ್ದರು. ನಂತರದ ದಿನಗಳಲ್ಲಿ ಅವರು ಯಾವ ಶಾಲೆಗೆ ಹೋದರೋ ಗೊತ್ತಿಲ್ಲ.
ಕನ್ನಡ ವಿಷಯದಲ್ಲಿ ಒಂದು ಶಬ್ದವನ್ನು ಕೊಟ್ಟು ನಿಮ್ಮ ವಾಕ್ಯದಲ್ಲಿ ಬರೆಯಿರಿ ಎಂದು ಹೇಳುತ್ತಾರೆ. ನಾನು ಆ ವಾಕ್ಯಗಳಿಗೆಲ್ಲ ನನ್ನದೇ ಶೈಲಿಯಲ್ಲಿ ಪಂಚ್ ವಾಕ್ಯಗಳನ್ನು ಬರೆದುಬಿಡುತ್ತಿದ್ದೆ. ಇದರಿಂದ ಪ್ರೇಮಕುಮಾರಿ ಮೇಡಂ ಬಹಳ ಸಂತೋಷಗೊಂಡು ವಿಶೇಷವಾಗಿ ಹೊಗಳಿದ್ದೂ ಇದೆ. ಹೀಗಿದ್ದಾಗ ಮೇಡಂ ಶಾಲೆಯಿಮದ ಬೀಳ್ಕೊಡುವ ದಿನ ಬಂದಿತ್ತು. ಉಳಿದ ಶಿಕ್ಷಕರು ಬಂದು ನನ್ನ ಬಳಿ ಮೇಡಂ ಬೀಳ್ಕೊಡುತ್ತಿದ್ದಾರೆ ಅವರ ಬಗ್ಗೆ ಮಾತನಾಡು ಎಂದರು. ನಾನು ಆಗೋದಿಲ್ಲ ಎಂದೆ. ಯಾಕೆ ಎಂದು ಬಹಳ ಸಾರಿ ಕೇಳಿದ್ದರೂ ಆಗೋದಿಲ್ಲ ಅಂದಿದ್ದೆ. ಉಳಿದವರು ಭಾವನಾತ್ಮಕವಾಗಿ ಮಾತನಾಡುವುದಿಲ್ಲ ಎಂದುಕೊಂಡರೋ ಏನೋ. ಆದರೆ ನಾನು ಮಾತ್ರ ಸ್ಟೇಜ್ ಫೀಯರ್ ಇದ್ದ ಕಾರಣ ಮಾತನಾಡಲೇ ಇಲ್ಲ ಬಿಡಿ. ಬೀಳ್ಕೊಡುಗೆ ಸಂದರ್ಭದಲ್ಲಿ ನನ್ನನ್ನೂ ಮಾತಿನ ಮಧ್ಯದಲ್ಲಿ ಉಲ್ಲೇಖ ಮಾಡಿದರು ಎನ್ನುವುದು ಇಂದಿಗೂ ನೆನಪಾಗುತ್ತಲೇ ಇದೆ.

ಸಿ. ಆರ್. ಲಿಂಗರಾಜು :
ಬುಲೆಟ್ ಬಸ್ಯಾ ಎಂಬ ಅಡ್ಡ ಹೆಸರನ್ನು ನಾವೇ ಲಿಂಗರಾಜ ಮಾಸ್ತರ್ರಿಗೆ ಇಟ್ಟಿದ್ದೆವು. ಸಿಆರ್.ಎಲ್ ಎಂಬ ಕಿರು ನಾಮಧೇಯದ ಲಿಂಗರಾಜ ಮಾಸ್ತರ್ರು ಭರ್ಜರಿ 6 ಅಡಿಯ ದೈತ್ಯಜೀವಿ. ಪ್ರತಿದಿನ ಶಾಲೆಗೆ ಬುಲೆಟ್ ತರುತ್ತಿದ್ದ ಅವರನ್ನು ನಾವು ಈ ಕಾರಣಕ್ಕಾಗಿಯೇ ಬುಲೆಟ್ ಬಸ್ಯಾ ಎಂದು ಕರೆಯುತ್ತಿದ್ದೆವು. ಶೀಘ್ರ ಕೋಪಿ ಹಾಗೂ ಉಗ್ರಕೋಪಿ ಮಾಸ್ತರ್ರು ಅವರು. ಮಾತೆತ್ತಿದರೆ `ಏನೋ ಬಡ್ಡೀ ಮಗನೇ..' ಎಂದೇ ಬಯ್ಯಲು ಶುರು ಮಡುತ್ತಿದ್ದ ಅವರ ಬಳಿ ಹೊಡೆತ ತಿನ್ನದೇ ಉಳಿದವರು ಕಡಿಮೆಯೇ. ನಾನು ಸುಮಾರು ಹೊಡೆತ ತಿಂದಿದ್ದೇನೆ. ಆದರೆ ಉಳಿದ ಹುಡುಗರಿಗಿಂತ ಸ್ವಲ್ಪ ಕಡಿಮೆಯೇ ಬಿಡಿ.
ನನ್ನ ದೋಸ್ತ ಪ್ರದೀಪನ ಬಗ್ಗೆ ಈಗಾಗಲೇ ಹೇಳಿದ್ದೇನೆ. ಸಿ.ಆರ್.ಎಲ್. ಅವರಿಂದ ಪ್ರದೀಪ ಹೊಡೆತ ತಿಂದಿದ್ದು ಜಾಸ್ತಿ. ಪ್ರತಿ ದಿನ ಪ್ರದೀಪನ ಬಳಿ ಲಿಂಗರಾಜಪ್ಪ ಮಾಸ್ತರ್ `ಲೇ ಭಟಾ.. ಗಾಳಿ ಶೆಳಕೆ ತಗಂಡ್ ಬಾರಲೇ..' ಅನ್ನುತ್ತಿದ್ದರು. ಪ್ರದೀಪ ಮೂರ್ನಾಲ್ಕು ಗಾಳಿ ಕೋಲುಗಳನ್ನು ತರುತ್ತಿದ್ದ. ತಂದ ತಪ್ಪಿಗೆ ಮೊದಲ ಹೊಡೆತ ಪ್ರದೀಪನಿಗೇ ಬೀಳುತ್ತಿತ್ತು. ಇನ್ನೊಬ್ಬ  ಗೆಳೆಯ ಪ್ರಶಾಂತನೂ ಇದಕ್ಕಿಂತ ಹೊರತಾಗಿರಲಿಲ್ಲ ಬಿಡಿ.
ಲಿಂಗರಾಜ ಮಾಸ್ತರ್ರು ನಮಗೆ ಕ್ರೀಡೆಗಳ ಬಗ್ಗೆ ಕಲಿಸಿದ್ದು ಕಡಿಮೆಯೇ ಬಿಡಿ. ಆದರೆ ಸಾಕಷ್ಟು ಮಣ್ಣು ಹೊರಿಸಿದ್ದು ಮಾತ್ರ ನಿಜ. ಡೆಂಬಲ್ಸ್ ಹಾಗೂ ಬೇರೆ ಬೇರೆ ದೈಹಿಕ ವ್ಯಾಯಾಮಗಳನ್ನು ನಾವು ಮಾಡಿದ್ದು ಕಡಿಮಯೇ ಬಿಡಿ. ಆದರೆ ನಾನು ಹೈಸ್ಕೂಲಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹೈಸ್ಕೂಲಿಗೆ ಸಮರ್ಪಕ ರಸ್ತೆ ಇರಲಿಲ್ಲ. ನಮ್ಮ ಕೈಯಲ್ಲಿ ಮಣ್ಣು ಹೊರೆಸಿ ರಸ್ತೆಯನ್ನು ಮಾಡಿಸಿದರು ಲಿಂಗರಾಜ ಮಾಸ್ತರ್ರು.
ಅದ್ಯಾವಾಗ ಪಾಠ ಮಾಡುತ್ತಿದ್ದರೋ ನಮಗಂತೂ ನೆನಪಿಲ್ಲ ಬಿಡಿ. ಆದರೆ ದೈಹಿಕ ಶಿಕ್ಷಣ ವಿಷಯದ ಪರೀಕ್ಷೆಯಲ್ಲಿ ಮಾತ್ರ ವಿವಿಧ ಕ್ರೀಡೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಕಬ್ಬಡ್ಡಿ ಅಂಕಣದ ಅಳತೆ ಎಷ್ಟಿರಬೇಕು? ಕೋಕೋ ಅಂಕಣದ ಅಳತೆ ತಿಳಿಸಿ ಇತ್ಯಾದಿ. ನಿಜಕ್ಕೂ ಇವು ನಮಗೆ ಕಠಿಣ ಪ್ರಶ್ನೆಗಳೇ ಹೌದು. ಮೊದಲ ಪರೀಕ್ಷೆಯಲ್ಲಿ ನಾನು ಸುಳ್ಳೇ ಪಿಳ್ಳೆ ಉತ್ತರ ಬರೆದಿದ್ದೆ. ಆದರೆ ಅದರಲ್ಲಿ ಕೆಲವು ಸರಿಯಾಗಿದ್ದವು. 25ಕ್ಕೆ 9 ಅಂಕಗಳನ್ನು ಪಡೆದ ನಾನು ಪರೀಕ್ಷೆಯಲ್ಲಿ ಟಾಪರ್ ಆಗಿದ್ದೆ. ಆದರೆ ಆ ನಂತರ ಎಲ್ಲ ಕ್ರೀಡೆಗಳ ಅಂಕಣಗಳ ಅಳತೆಯನ್ನು ಸಮರ್ಪಕವಾಗಿ ತಿಳಿದುಕೊಂಡಿದ್ದೆ. ನಂತರದ ದಿನಗಳಲ್ಲಿ ತೀರಾ 9ರಷ್ಟು ಕಡಿಮೆ ಅಂಕಗಳು ಬೀಳಲಿಲ್ಲ ಬಿಡಿ. 16ಕ್ಕಿಂತ ಜಾಸ್ತಿಯಾಗಿದ್ದವು ಎನ್ನುವುದು ಸಮಾಧಾನ. ಇನ್ನೊಂದು ಮಜಾ ಸಂಗತಿ ಹೇಳಲೇಬೇಕು. ನನ್ನ ಪಕ್ಕದಲ್ಲಿ ದೋಸ್ತ ಪ್ರದೀಪ (ಭಟ್ಟ) ಹಾಗೂ ಇನ್ನೊಬ್ಬ ದೋಸ್ತ ಸುರೇಂದ್ರರು ಎಕ್ಸಾಂಗಳಲ್ಲಿ ಕೂರುತ್ತಿದ್ದರು. ಅಲ್ಪ ಸ್ವಲ್ಪ ಹೇಳಿಕೊಡುತ್ತಿದ್ದೆ. ನನಗಿಂತ ಒಂದೆರಡು ಅಂಕ ಕಡಿಮೆ ಬಿದ್ದು ಅವರು ಪರೀಕ್ಷೆಯಲ್ಲಿ ಪಾಸಾಗುತ್ತಿದ್ದರು. ಮೊದ ಮೊದಲು ನನ್ನ ಜೊತೆಗೆ ಲಿಂಗರಾಜ ಮಾಸ್ತರ್ರು ಅವರಿಬ್ಬರನ್ನೂ ಹೊಗಳುತ್ತಿದ್ದರು. ಆದರೆ ಕೊನೆ ಕೊನೆಗೆ ಮಾತ್ರ ಲಿಂಗರಾಜ ಮಾಸ್ತರ್ರಿಗೆ ನಮ್ಮ ಹಕೀಕತ್ತಿನ ವಾಸನೆ ಬಂದು ಪರೀಕ್ಷೆ ಮಾಡಿದ್ದರು. ದೋಸ್ತರಿಬ್ಬರೂ ಸಿಕ್ಕಿಬಿದ್ದು ಹೊಡೆತ ತಿಂದಿದ್ದರು. ನನಗೂ ಒಂದೆರಡು ಹೊಡೆತ ಬಿದ್ದಿತ್ತೆನ್ನಿ.
ಲಿಂಗರಾಜ ಮಾಸ್ತರ್ರೆಂದ ಕೂಡಲೇ ಮುಖ್ಯವಾಗಿ ನೆನಪಾಗುವುದು ಅವರು ಇತರ ಶಿಕ್ಷಕರೊಂದಿಗೆ ಮಾಡುತ್ತಿದ್ದ ಜಗಳ. ವನಮಾಲಾ ಮೇಡಂ, ವಿನೋದಾ ಮೇಡಂ, ಭಾರತಿ ಮೇಡಂ ಹೀಗೆ ಬೇರೆ ಬೇರೆ ಶಿಕ್ಷಕಿಯರ ಜೊತೆಗೆ ಸೊಕಾ ಸುಮ್ಮನೆ ಜಗಳ ಮಾಡುತ್ತಿದ್ದರು. ಆ ಮೇಡಮ್ಮುಗಳ ಕ್ಲಾಸಿನಲ್ಲಿ ಇವರು ಮಣ್ಣು ಹೊರಿಸುವ ಕೆಲಸ ಮಾಡಿದರೆ, ದೈಹಿಕ ಶಿಕ್ಷಣದ ಸಮಯದಲ್ಲಿ ಆ ಮೇಡಮ್ಮುಗಳು ತಮ್ಮ ತಮ್ಮ ಕ್ಲಾಸುಗಳನ್ನು ತೆಗೆದುಕೊಂಡು ಮುಯ್ಯಿ ತೀರಿಸಿಕೊಳ್ಳುತ್ತಿದ್ದ ನಿದರ್ಶನಗಳು ಅಚ್ಚಳಿಯದೇ ಮನಸ್ಸಿನಲ್ಲಿ ಉಳಿದಿವೆ.
ಆರು ಅಡಿಯ ಲಿಂಗರಾಜ ಮಾಸ್ತರ್ರರ ಗತ್ತು ಬಹಳ ಚನ್ನಾಗಿತ್ತು. ಎದೆಯುಬ್ಬಿಸಿ ನಡೆದು ಬರುತ್ತಿದ್ದ ಅವರು ತಮ್ಮ ನಿಲುವಿನಿಂದಲೇ ಎಲ್ಲರನ್ನೂ ಹೆದರಿಸುತ್ತಿದ್ದರು. ಬುಲೆಟ್ ಸದ್ದಂತೂ ನಮ್ಮ ಎದೆಯಲ್ಲಿ ನಡುಕವನ್ನು ತರುತ್ತಿತ್ತು. ಕ್ರೀಡಾಕೂಟಗಳು, ಪ್ರತಿಭಾ ಕಾರಂಜಿ ಇಂತಹ ಸಂದರ್ಭಗಳಲ್ಲೆಲ್ಲ ನಮ್ಮನ್ನು ಮುನ್ನಡೆಸಿ ಕರೆದೊಯ್ಯುತ್ತಿದ್ದ ಲಿಂಗರಾಜ ಮಾಸ್ತರ್ ನಮ್ಮನ್ನು ಎಷ್ಟು ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿದ್ದರೆಂದರೆ ಬಹಳ ಗೌರವವನ್ನು ಮೂಡಿಸುತ್ತಿದ್ದರು.
ನಾನು SSLC ಯಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ ಪ್ರತಿಭಾ ಕಾರಂಜಿ ನಡೆಯಿತು. ತಾಳಗುಪ್ಪದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಹೈಸ್ಕೂಲು ಸಮಗ್ರ ವೀರಾಗ್ರಣಿ ಗಳಿಸಿಕೊಂಡಿತು. ಕ್ವಿಜ್ ಹಾಗೂ ಚಿತ್ರಕಲೆಯಲ್ಲಿ ಮೊದಲ ಬಹುಮಾನ ಪಡೆದಿದ್ದ ನಾನು ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದೆ. ಸಿಕ್ಕಾಪಟ್ಟೆ ಖುಷಿಯಾಗಿದ್ದ ನಾನು ವಾಪಾಸು ಹೈಸ್ಕೂಲಿಗೆ ಬಂದರೆ ಲಿಂಗರಾಜ ಮಾಸ್ತರ್ರು ಸೀದಾ ಸ್ಟಾಫ್ ರೂಮಿಗೆ ಕಡೆದು ಚನ್ನಾಗಿ ನಾಲ್ಕೇಟು ಬಾರಿಸಿದರು. ಅರೇ ನಾನೇನು ಮಾಡಿದೆ ಎಂದು ಆಲೋಚಿಸುತ್ತಿದ್ದಾಗ ರಸಪ್ರಶ್ನೆಯ ವಿಷಯವನ್ನು ತೆಗೆದುಕೊಂಡರು. ನಾನು ಏನೇನು ತಪ್ಪು ಹೇಳಿದ್ದೇನೆ ಎನ್ನುವುದನ್ನೆಲ್ಲ ಎತ್ತಿ ಎತ್ತಿ ಹೇಳಿದರು. ಒಂದೊಂದು ತಪ್ಪು ಉತ್ತರಕ್ಕೂ ಒಂದೊಂದು ಹೊಡೆತ ಕೊಟ್ಟು ಇನ್ನು ಮುಂದೆ ಹೀಗೆ ತಪ್ಪು ಉತ್ತರ ಕೊಟ್ಟರೆ ನೋಡು ಸಿಗಿದು ಹಾಕಿ ಬಿಡ್ತೀನಿ ಹುಷಾರ್ ಎಂದು ಅಬ್ಬರಿಸಿದ್ದರು.
SSLCಯ ಕೊನೆಯ ದಿನಗಳಲ್ಲಿ ಲಿಂಗರಾಜ ಮಾಸ್ತರ್ರು ಬೇರೆ ಶಾಲೆಗೆ ವರ್ಗವಾಗಿದ್ದರು. ವಾರಕ್ಕೆ ಮೂರು ದಿನ ಕಾನಲೆ ಹೈಸ್ಕೂಲಿಗೆ ಬರುತ್ತಿದ್ದರು. ವಾರಕ್ಕೆ ಮೂರು ದಿನ ಬೇರೆ ಯಾವುದೋ ಹೈಸ್ಕೂಲಿಗೆ ಹೋಗಿ ಬರುತ್ತಿದ್ದರು. ಆ ಸಂದರ್ಭದಲ್ಲಿಯೇ ಇರಬೇಕು ನಾವು ಅವರನ್ನು ಮಿಸ್ ಮಾಡಿಕೊಳ್ಳಲು ಆರಂಭಿಸಿದ್ದು. ಪ್ರತಿದಿನ ಹೈಸ್ಕೂಲು ಆರಂಭದ ಸಂದರ್ಭದಲ್ಲಿ ಬುಲೆಟ್ ಸದ್ದಾಗದಿದ್ದರೆ ನಮಗೆ ಏನನ್ನೋ ಕಳೆದುಕೊಂಡ ಅನುಭವ ಆಗುತ್ತಿತ್ತು. ಇಂತಹ ನಿಲುವಿನ ಲಿಂಗರಾಜ ಮಾಸ್ತರ್ ಈಗ ಯಾವ ಶಾಲೆಯಲ್ಲಿದ್ದಾರೋ ಗೊತ್ತಿಲ್ಲ ಬಿಡಿ.

(ಮುಂದುವರಿಯುತ್ತದೆ..)              

Tuesday, December 15, 2015

ಬೇಗನೆ ಬಾರೋ ಕೊನೆಗೌಡಾ

ಬೇಗನೆ ಬಾರೋ ಕೊನೆಗೌಡಾ
ಆಳ್ ಹಿಡ್ಕಂಡ್ ಬಾರೋ ನಿಂನ್ ಸಂಗಡಾ ||

ಕೊನೆಯೆಲ್ಲ ಬೆಳೆದೋತು
ಹಣ್ಣಡಿಕೆ ಆಗೋತು
ಗೋಟಾಗಿ ಉದುರಿ ಹೋತು
ಬೇಗನೆ ಬಾರೋ ಕೊನೆಗೌಡಾ ||

ಯಂದಂತೂ ತುಂಡ್ ತ್ವಾಟ
ಜೊತೆಗಿದ್ದು ಮಂಗನ ಕಾಟ
ದಿನವಿಡಿ ತ್ವಾಟಕ್ಕೆ ಓಡಾಟ
ಬೇಗನೆ ಬಾರೋ ಕೊನೆಗೌಡಾ ||

ಕೇಳಿದಷ್ಟು ದುಡ್ ಕೊಡ್ತಿ
ಮಜ್ಜಿಗೆ ತಂಬ್ಳಿ ಮಾಡ್ಕೊಡ್ತಿ
ಕೈಖರ್ಚು ಹಾಕ್ಕೊಡ್ತಿ
ಬೇಗನೆ ಬಾರೋ ಕೊನೆಗೌಡ ||

ತೆರಿಯಡಿಕೆ ಮಾಡಡಾ
ಕೊನೆ ಉಗಿದು ಹಾಕಡಾ
ಅರ್ಧಕ್ಕೆ ಹೋಗಡಾ
ಬೇಗನೆ ಬಾರೋ ಕೊನೆಗೌಡಾ ||

ಮುರಿಯಾಳೂ ಬತ್ವಿಲ್ಲೆ
ಕೆಲಸಕ್ಕೆ ಸಿಕ್ತ್ವಿಲ್ಲೆ
ಆಳ್ ಲೆಕ್ಕದವ್ ಕಾಣ್ತ್ವಿಲ್ಲೆ
ಬೇಗನೆ ಬಾರೋ ಕೊನೆಗೌಡಾ ||

ಕೊನೆ ಕೊಯ್ದು ಮುಗಿದೋದ್ರೆ
ದೊಡ್ ತೊಂದ್ರೆ ತಪ್ಪಿ ಹೋಗ್ತು
ತಲೆ ಭಾರ ಇಳಿದೋಗ್ತು
ಬೇಗನೆ ಬಾರೋ ಕೊನೆಗೌಡಾ ||

ಅಡಿಕೆಗೆ ರೇಟ್ ಬಂಜಡಾ
ರೇಟ್ ಇದ್ದಾಗಲೇ ಕೊಟ್ಕಳವಡಾ
ಚಾಲಿ ಸುಲಿಯಲ್ ಆಳ್ ಬಂಜ್ವಡಾ
ಬೇಗನೆ ಬಾರೋ ಕೊನೆಗೌಡ ||

ಆಳನ್ನೂ ಕರ್ಕಂಡ್ ಬಾ
ಸರಿ ಸಮಯ ನೋಡ್ಕ್ಯಂಡ್ ಬಾ
ಬೇಗನೆ ಬಾರೋ ಕೊನೆಗೌಡಾ
ಆಳ್ ಹಿಡ್ಕಂಡ್ ಬಾರೋ ನಿನ್ ಸಂಗಡಾ ||

-ವಿನಯ ದಂಟಕಲ್

****
(ಇದು ಕೊನೆ ಕೊಯ್ಲಿನ ಸೀಸನ್ನು. ತೋಟದಲ್ಲಿ ಕೊನೆ ಹಣ್ಣಾಗಿದೆ. ಹಣ್ಣಡಿಕೆ ಉದುರಿ ಹೋಗ್ತಾ ಇದೆ. ಜೊತೆಗೆ ಮಂಗನ ಕಾಟ ಬೇರೆ. ಕೊನೆಗೌಡನನ್ನು ಹುಡುಕಿ ಹುಡುಕಿ ಅಡಿಕೆ ಬೆಳೆಗಾರರು ಸೋಲುತ್ತಿದ್ದಾರೆ. ಕೊನೆಗೌಡರ ದಿನದ ಪಗಾರು 800 ರು. ದಾಟಿದೆ. ಅಡಿಕೆಗೆ ರೇಟು ಬಂದಿದೆ ಎನ್ನುವ ಸುದ್ದಿ ಬೇರೆ ಕಿವಿಗೆ ಬಿದ್ದಿದೆ. ಹೀಗಿರುವಾಗ ಅಡಿಕೆ ಬೆಳೆಗಾರರು ಕೊನೆಗೌಡನ ಬಳಿ ಬೇಗ ಬಾ ಎಂದು ಪರಿ ಪರಿಯಾಗಿ ಕೇಳಿಕೊಳ್ಳುವ ಬಗೆಯೇ ಈ ಟಪ್ಪಾಂಗುಚ್ಚಿ ಕವಿತೆ. ನಿಮಗಿಷ್ಟವಾದರೆ ಅಭಿಪ್ರಾಯ ತಿಳಿಸಿ)

(ಈ ಕವಿತೆ ಬರೆದಿದ್ದು 15-12-2012ರಂದು ಶಿರಸಿಯಲ್ಲಿ)

ನನ್ನ ಪ್ರೀತಿಯ ಹಾಡು

ನನ್ನ ಪ್ರೀತಿಯ ಹಾಡು
ಕೇಳಲು ಬಲು ಸುಲಭ
ತಿಳಿದು ಪಡೆಯಲು ಅದುವೆ
ನಷ್ಟ ನೋಡು..||

ನನ್ನ ಪ್ರೀತಿಯ ಹಾಡು
ಇಂಪು ವಾದ್ಯದ ಬೀಡು
ಅರಿತು ನುಡಿಸಲು ಅದುವೆ
ಕಷ್ಟ ನೋಡು ||

ನನ್ನ ಪ್ರೀತಿಯ ಹಾಡು
ಬಹು ಅರ್ಥ, ಹಲ ಸೊಗಡು
ಬಲಿಯುವ ಮೊದಲೇ
ಬಿತ್ತು ನೋಡು ||

ನನ್ನ ಪ್ರೀತಿಯ ಹಾಡು
ಬಹಳ ಪ್ರೀತಿಯ ಗೂಡು
ಕಳೆದು ಹೋದೀತು ಅದುವೆ
ನಿತ್ಯ ನೋಡು ||

ನನ್ನ ಪ್ರೀತಿಯ ಹಾಡು
ಹಲವು ನೆನಪಿನ ಮಾಡು
ಮಾಡು ಮುರಿದೊಡೆ ಅದುವೆ
ಮಣ್ಣು ನೋಡು ||

****

(ಈ ಕವಿತೆಯನ್ನು ಬರೆದಿರುವುದು 05-04-2006ರಂದು ದಂಟಕಲ್ಲಿನಲ್ಲಿ)

Monday, December 14, 2015

ಅಘನಾಶಿನಿ ಕಣಿವೆಯಲ್ಲಿ-31

ಪ್ರದೀಪ ತಕ್ಷಣ ಸಾವರಿಸಿಕೊಂಡಿದ್ದ. `ಯಾಕೆ ಸುಮ್ಮ ಸುಮ್ಮನೇ ನನ್ನ ಮೇಲೆ ಅನುಮಾನ ಪಡುತ್ತೀರಿ? ನಾನು ಈ ಮೊದಲೇ ಹೇಳಿದ್ದೇನಲ್ಲ. ನಾನು ಪ್ರೈವೆಟ್ ಡಿಟೆಕ್ಟಿವ್ ಅಂತ. ಹೌದು. ಸುಮ್ಮನೇ ಇಂತಹ ಕೆಲಸಗಳನ್ನೆಲ್ಲ ಮಾಡುತ್ತಿರುತ್ತೇನೆ. ಈಗ ನಾನು ಪೋನ್ ಮಾಡಿದ್ದೂ ಕೂಡ ಪೊಲೀಸ್ ಸ್ಟೇಷನ್ನಿಗೆ. ಇಲ್ಲಿ ಮಾತನಾಡಿದರಲ್ಲ ಕಳ್ಳರು ಬಂದಿದ್ದಾರೆ ಅಂತ. ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾತನಾಡಿ ಚರ್ಚೆ ಮಾಡಿದ್ದಷ್ಟೇ..' ಎಂದ.
`ಹೌದಾ? ಹಾಗಾದರೆ ಅದನ್ನು ಮುಚ್ಚಿಡುವುದೇಕೆ? ಏನಂದರು ಪೊಲೀಸರು? ಯಾಕೆ ನಮ್ಮ ಬಳಿ ಈ ವಿಷಯವನ್ನು ಮುಚ್ಚಿಡಬೇಕು ಅಂತ ಮಾಡ್ತೀಯಾ?' ವಿಕ್ರಮ ಕೇಳಿದ್ದ.
`ಯಾರು ಮುಚ್ಚಿಡಲು ನೋಡಿದ್ದು ಮಾರಾಯಾ? ನಾನು ಹೇಳುವ ಮೊದಲೇ ನೀನೇ ಕೇಳ್ತಾ ಇದ್ದೆ. ನೋಡು ಕಳ್ಳರು ಬಂದಿರುವುದು ಸುಳ್ಳು ಸುದ್ದಿ ಅಂತೆ. ನೇಪಾಳಿಗಳು ಬಂದಿದ್ದಾರೆ ಎನ್ನುವುದೂ ಸುಳ್ಳು ಸುದ್ದಿ. ವೈಜಯಂತಿಪುರದಲ್ಲಿ ನೇಪಾಳಿಗಳನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ ಎನ್ನುವ ಸುದ್ದಿ ನಿಜ. ಆದರೆ ಕೂಲಿ ಕೆಲಸಕ್ಕೆ ಬಂದಿದ್ದ ನೇಪಾಳಿ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಹೆಡೆಮುರಿಕಟ್ಟಿ ಪೊಲೀಸರಿಗೆ ಕೊಟ್ಟಿದ್ದಾರೆ. ಪಾಪ ಆ ನೇಪಾಳಿಗೆ ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲವಂತೆ. ಉಳಿದಂತೆ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಭಾಗದಲ್ಲಿ ಕಳ್ಳರು ಬಂದಿದ್ದಾರೆ ಎನ್ನುವುದು ಮಾತ್ರ ಸುಳ್ಳು ಸುದ್ದಿಯೇ ಹೌದು. ಮರಗಳ್ಳರು ಈ ರೀತಿ ಹಬ್ಬಿಸಿರಬಹುದು ಎಂಬುದು ಪೊಲೀಸರ ಗುಮಾನಿ..' ಎಂದ ಪ್ರದೀಪ.
ಸ್ವಲ್ಪ ನಿರಾಳನಾದ ವಿಕ್ರಮ. ಆದರೂ ಪ್ರದೀಪನ ಮೇಲಿದ್ದ ಸಂದೇಹ ಮಾತ್ರ ಕಡಿಮೆಯಾಗಿರಲಿಲ್ಲ. `ನಿನ್ನ ಮಾತನ್ನು ನಂಬಬಹುದಾ?' ತೀಕ್ಷ್ಣವಾಗಿ ಕೇಳಿದ್ದ.
`ನಂಬಿದರೆ ನಂಬಿ, ಬಿಟ್ಟರೆ ಬಿಡಿ. ನಾನು ಹೇಳಿದ್ದು ನಿಜ. ನಾನು ಹೇಳಿದ ಮಾತ್ರಕ್ಕೆ ನೀವು ನಂಬಲೇಬೇಕು ಎನ್ನುವುದೇನೂ ಇಲ್ಲ. ನಂಬುವುದು ಅಥವಾ ಬಿಡುವುದು ನಿಮಗೆ ಬಿಟ್ಟಿದ್ದು. ನಾನು ಜಾಸ್ತಿ ಏನೂ ಹೇಳಲಾರೆ..' ಪ್ರದೀಪ ಅಷ್ಟೇ ಒರಟಾಗಿ ಉತ್ತರ ನೀಡಿದ್ದ.
ಅಷ್ಟರಲ್ಲಿ ನಡುವೆ ಬಾಯಿ ಹಾಕಿದ ವಿನಾಯಕ `ಸುಮ್ಮನೆ ಯಾಕೆ ಅನುಮಾನ ಎಲ್ಲ. ನಾವು ವಾದ ಮಾಡಿ ಪ್ರಯೋಜನ ಇಲ್ಲ. ಸುಮ್ಮನೇ ಕಾಲಕ್ಷೇಪ ಮಾಡೋದಷ್ಟೇ ಆಗ್ತು. ಮುಂದೇನು ಮಾಡೋದು ಅನ್ನೊದನ್ನ ಮೊದಲು ಹೇಳಿ..' ಎಂದ.
`ಸುಮ್ಮನೇ ಇರಲಿಕ್ಕಂತೂ ಬರುವುದಿಲ್ಲ. ಈಗಾಗಲೇ ಇಷ್ಟು ದೂರ ಬಂದಾಗಿದೆ. ಮುಂದೆ ಏನಾದರೂ ಮಾಡಲೇಬೇಕು..' ವಿಕ್ರಮ ಕೂಡ ಹೇಳಿದ್ದ.
`ಮೊದಲು ಬಾಬುವನ್ನು ಹುಡುಕೋಣ. ಆತನನ್ನು ಮಾತನಾಡಿಸೋಣ. ನಿಧಾನವಾಗಿ ಕೇಳೋಣ. ಇಲ್ಲವಾದಲ್ಲಿ ನಮ್ಮ ವರಸೆಯಲ್ಲಿ ಆತನ ಬಾಯಿ ಬಿಡಿಸೋಣ. ಆದಷ್ಟು ಬೇಗ ಈ ಕೆಲಸ ಆಗಬೇಕು. ಸೂರ್ಯ ಶಿಖಾರಿ ಗುಂಪಿನ ಬಗ್ಗೆ ಆತನಲ್ಲಿ ಮಾಹಿತಿ ಸಿಕ್ಕರೂ ಸಿಗಬಹುದು. ಅಥವಾ ಇನ್ನೊಬ್ಬನನ್ನೂ ಮಾತನಾಡಿಸಬಹುದು. ಸಾಧ್ಯವಾದರೆ ಈಗಲೇ ಹೊರಡೋಣ ಬನ್ನಿ..' ಎಂದವನೇ ಪ್ರದೀಪ ಅವಸರಿಸಿದ. ವಿಕ್ರಮ, ವಿನಾಯಕ ಹಾಗೂ ವಿಜೇತಾರೂ ಪ್ರದೀಪನ ಜಾಡು ಹಿಡಿದರು.

****

`ಇಷ್ಟು ದಿನಗಳಾದರೂ ನಿಮ್ಮ ಕೈಯಲ್ಲಿ ಏನೂ ಆಗಲಿಲ್ಲ ಎಂದರೆ ಏನರ್ಥ.? ದಂಟಕಲ್ಲಿಗೆ ಬಂದಿರುವವರನ್ನು ಹೊಡೆದು ಹಾಕಿ, ಇಲ್ಲವೇ ಬೆದರಿಸಿ ವಾಪಾಸ್ ಕಳಿಸಿ. ಅದಾಗದಿದ್ದಲ್ಲಿ ಅವರನ್ನು ಕೊಂದು ಹಾಕಿ ಎಂದು ಹೇಳಿದ್ದೆ. ಯಾಕೆ ಈ ಕೆಲಸ ಮುಂದುವರಿದಿಲ್ಲ?' ತಂಡದ ನಾಯಕ ಅಬ್ಬರಿಸುತ್ತಿದ್ದರೆ ಎದುರಿದ್ದವರು ಬೆದರಿ ತೊಪ್ಪೆಯಾಗುತ್ತಿದ್ದರು.
`ನಾವು ಮಾಡದ ಕೆಲಸವಿಲ್ಲ ಬಾಸ್. ನಕ್ಸಲರ ಪಟ್ಟ ಕಟ್ಟಿ ಪೊಲೀಸ್ ಠಾಣೆಗೆ ಹಾಕಿದ್ದರೂ ಅವರು ಹೇಗೋ ತಪ್ಪಿಸಿಕೊಂಡು ಬಂದಿದ್ದಾರೆ ನೋಡಿ. ಬಹುಶಃ ಬಂದವರಿಗೆ ದೊಡ್ಡ ದೊಡ್ಡವರ ಕೈ ಇರಬೇಕು ಅನ್ನಿಸುತ್ತದೆ..' ಎಂದ ಬಂಟನೊಬ್ಬ.
`ವಾಟ್. ಪೊಲೀಸ್ ಸ್ಟೇಷನ್ನಿಗೆ ಕಳಿಸಿದ್ದರೂ ಏನೂ ಆಗಲಿಲ್ಲವಾ? ಹಾಗಾದರೆ ಅವರು ಸಾಮಾನ್ಯರಲ್ಲ ಅನ್ನಿಸುತ್ತದೆ. ಬಾಸು ಗೌಡನ ತಂಡದ ಮೇಲೆ ದಾಳಿ ನಡೆಸಿದಾಗಲೇ ಅಂದುಕೊಂಡಿದ್ದೆ. ಅದು ನಿಜವಾಗುತ್ತಿದೆ. ಈ ಭಾಗದವರ್ಯಾರೂ ಮರಕಡಿಯುವವರ ವಿರುದ್ಧ ತಿರುಗಿ ಬೀಳುವುದಿಲ್ಲ. ನಮ್ಮವರ ಮೇಲೆ ತಿರುಗಿ ಬಿದ್ದಿದ್ದಾರೆ ಎಂದರೆ ಇವರ್ಯಾರೋ ಭಲೆ ಆಸಾಮಿಗಳೇ ಇರಬೇಕು ಎಂದುಕೊಂಡೆ. ಅದು ನಿಜವಾಗುತ್ತಿದೆ..' ಸ್ವಗತದಲ್ಲಿ ಹೇಳಿಕೊಂಡಂತೆ ಹೇಳಿದ ಗುಂಪಿನ ನಾಯಕ.
`ಹೌದು ಬಾಸ್. ಅವರು ಮನೆ ಮನೆಗೆ ಹೋಗಿ ನಮ್ಮವರನ್ನು ಹುಡುಕುತ್ತಿದ್ದಾರಂತೆ. ಮೊನ್ನೆ ಬಾಸು ಗೌಡನ ಮನೆಯ ಬಳಿಗೂ ಹೋಗಿದ್ದರಂತೆ. ಬಾಸು ಗೌಡನ ಮನೆಯವರು ಏನೇನೋ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾರಂತೆ. ಈಗಾಗಲೇ ಸತ್ತು ಹೋಗಿದುವ ನಮ್ಮ ತಂಡದ ವ್ಯಕ್ತಿಯ ಮನೆಗೂ ಹೋಗಿ ಬಂದಿದ್ದಾರಂತೆ. ಆತ ಸಹಜವಾಗಿ ಸತ್ತಿದ್ದಾನಾ ಅಥವಾ ಅಸಹಜವಾಗಿ ಸಾವನ್ನಪ್ಪಿದ್ದಾನಾ ಎಂದೆಲ್ಲ ಹುಡುಕಿದ್ದಾರಂತೆ. ಮತ್ತೆ ಇನ್ಯಾರ ಬಳಿ ಮಾಹಿತಿಗೆ ಹೋಗುತ್ತಾರೋ ಗೊತ್ತಿಲ್ಲ. ಬಹುಶಃ ಸರ್ಕಾರ ನಮ್ಮ ವಿರುದ್ಧ ಯಾರಾದರೂ ವಿಶೇಷ ಅಧಿಕಾರಿಗಳನ್ನು ಇವರ ರೂಪದಲ್ಲಿ ಕಳುಹಿಸಿರಬಹುದು..' ಜೊತೆಯಲ್ಲಿದ್ದವನು ಹಲುಬಿಕೊಂಡಿದ್ದ.
`ಓಹೋ ಇಷ್ಟೆಲ್ಲ ನಡೆದಿದೆಯಾ? ಇದನ್ನೆಲ್ಲ ಮೊದಲೇ ತಿಳಿಸಲು ನಿಮಗೇನು ಆಗಿತ್ತು. ಇಷ್ಟು ದಿನ ಸುಮ್ಮನೇ ಇದ್ರಲ್ಲ. ತಲೆ ಹಾಳಾಗಿತ್ತಾ ನಿಮಗೆ. ಇದಕ್ಕೆ ಏನಾದರೂ ಮಾಡಲೇಬೇಕು. ಇಲ್ಲವಾದಲ್ಲಿ ನಮಗೆ ಉಳಿಗಾಲ ಇಲ್ಲ. ನಮ್ಮ ಬೆಂಡೆತ್ತಿ ಬಿಡುತ್ತಾರೆ..' ಎಂದು ಆಲೋಚಿಸಿದ ಆ ಗುಂಪಿನ ನಾಯಕ ಕೂಡಲೇ ಹೇಳಿದ `ನೋಡಿ ಇನ್ನು ನಾವು ಸುಮ್ಮನಿದ್ದರೆ ಆಗುವುದಿಲ್ಲ. ಕೂಡಲೇ ಆ ತಂಡದ ಮೇಲೆ ದಾಳಿ ಮಾಡಿ. ಪದೇ ಪದೆ ದಾಳಿ ಮಾಡಿ. ಸಧ್ಯಕ್ಕೆ ಅವರನ್ನು ಕೊಲ್ಲುವುದು ಬೇಡ. ಆದರೆ ಒಬ್ಬಿಬ್ಬರ ಕೈಕಾಲು ಮುರಿದು ಹಾಕಿ. ಹೆದರಿ ವಾಪಾಸು ಹೋಗುವಂತೆ ಮಾಡಿ. ಇದೆಲ್ಲವನ್ನು ಎಷ್ಟು ಅಚ್ಚುಕಟ್ಟಾಗಿ ಮಾಡುತ್ತೀರಿ ಎನ್ನುವುದು ನಿಮಗೆ ಬಿಟ್ಟಿದ್ದು. ತಿಳೀತಾ?' ಕಟ್ಟಾಜ್ಞೆ ಮಾಡಿದ್ದ. ಉಳಿದವರು ತಲೆಯಲ್ಲಾಡಿಸಿ ಹೊರಟಿದ್ದರು.
ಮುಂದಿನ ದಿನಗಳು ಇನ್ನಷ್ಟು ತೀಕ್ಷ್ಣವಾಗಲಿದ್ದವು. ಅವರ ಮೇಲೆ ಇವರು, ಇವರ ಮೇಲೆ ಅವರು ದಾಳಿ ಮಾಡಲು ಸಜ್ಜಾಗಿದ್ದರು. ಈ ದಾಳಿಯಲ್ಲಿ ಒಂದೆರಡು ನಡೆಯಬಾರದಂತಹ ಘಟನೆಗಳೂ ನಡೆಯಲಿದ್ದವು. ಅದೇನಿರಬಹುದು?

****

ಬಾಬುವಿನ ಮನೆಗೆ ಹೋಗುವ ವೇಳೆಗೆ ಬಾಬು ಮನೆಯಲ್ಲಿ ಮಲಗಿದ್ದ. ಹಗಲು ಹೊತ್ತಿನಲ್ಲಿ ಇವನ್ಯಾಕೆ ನಿದ್ದೆ ಮಾಡುತ್ತಿದ್ದಾನೆ ಎನ್ನುವ ಅನುಮಾನ ಪ್ರತಿಯೊಬ್ಬರಲ್ಲಿಯೂ ಕಾಡಲು ಆರಂಭಿಸಿದ್ದರೂ ಅರೆಘಳಿಗೆಯಲ್ಲಿಯೇ `ರಾತ್ರಿ ಮರಗಳ್ಳತನ ಮಾಡಲು ಹೋಗುವ ಕಾರಣ ಹಗಲಿನಲ್ಲಿ ನಿದ್ದೆ ಮಾಡುತ್ತಾನೆ. ನೈಟ್ ಡ್ಯೂಟಿ ಮನುಷ್ಯ..' ಎಂದುಕೊಂಡರು ಎಲ್ಲರೂ.
`ಯಾರೋ ಬಂದಿದ್ದಾರೆ. ಅರ್ಜೆಂಟು ಮಾತನಾಡಬೇಕಂತೆ..' ಎಂಬ ಹೆಂಡತಿಯ ಮಾತಿಗೆ ದಿಗ್ಗನೆ ಎದ್ದು ಕುಳಿತಿದ್ದ ಬಾಬು. `ಯಾರು ಬಂದಾರೆ? ಎಂತದಂತೆ ಅವರದ್ದು..? ನಾ ಮನೆಯಾಗೆ ಇಲ್ಲ ಅಂತ ಹೇಳಬೇಕಿತ್ತು..' ಹೆಂಡತಿ ಬಳಿ ಗದರಿದ ಬಾಬು.
`ಅಯ್ಯೋ ನಾ ಹೇಳಿದ್ದು ಕೇಳಿಸ್ಕಣಲಿಲ್ಲ. ಪೋಲೀಸರು ಅಂದರಪ್ಪಾ.. ನಾಲ್ಕೈದ್ ಜನ ಐದಾರೆ. ಅವ್ರೇ ಮನೆಯೊಳಿಕೆ ಬರ್ತೆ ಅಂತ ಹೇಳ್ತಿದ್ರು. ನಾನೇ ಬ್ಯಾಡ ಅಂತೇಳಿ ಬಂದೆ. ಎಂತಾ ಭಾನಗಡಿ ಮಾಡೀರಿ..?' ಹೆಂಡತಿ ಕೇಳಿದ್ದಳು.
ಪೊಲೀಸರು ಬಂದಿದ್ದಾರಂತೆ ಎನ್ನುವ ಮಾತು ಕೇಳಿ ಬಾಬು ಬೆಚ್ಚಿ ಬಿದ್ದಿದ್ದ. ಪೊಲೀಸರು ಯಾಕ್ ಬಂದ್ರಪ್ಪಾ.? ಎಂದುಕೊಂಡವನು ಹೊರಕ್ಕೆ ಹೋಗಿ ಮಾತನಾಡಲಾ ಎಂದುಕೊಂಡ. ಆದರೆ ಧೈರ್ಯ ಸಾಲಲಿಲ್ಲ. ಮಾತನಾಡುವ ಬದಲು ಓಡಿ ಹೋಗುವುದೇ ಒಳ್ಳೆಯದು ಎಂದುಕೊಂಡ. ತಕ್ಷಣವೇ ಮನೆಯ ಹಿತ್ತಲಕಡೆಯ ಬಾಗಿಲಿನ ಬಳಿ ಹೋದ. ಬಾಗಿಲು ತೆಗೆದು ಓಡಲಾರಂಭಿಸಿದ. ಆಗ ಇದ್ದಕ್ಕಿದ್ದಂತೆ ಒಬ್ಬಾತ ಅಡ್ಡ ಬಂದು ಬಾಬುವಿನ ಕಾಲಿಗೆ ತನ್ನ ಕಾಲನ್ನು ಅಡ್ಡ ಹಾಕಿಬಿಟ್ಟಿದ್ದ. ಕಾಲು ಎಡವಿ ಬಾಬು ದಭಾರನೆ ಬಿದ್ದಿದ್ದ. ಕಾಲು ಎಡವಿದ ವ್ಯಕ್ತಿ ಯಾರೆಂದು ನೋಡಿದರೆ ಅವನೇ ಪ್ರದೀಪ.
ಹಿಂಬಾಗಿಲಿನಿಂದ ಓಡಿ ಹೋಗಬಹುದು ಎನ್ನುವ ಅನುಮಾನ ಬಂದಿದ್ದರಿಂದ ಪ್ರದೀಪ ಅದಕ್ಕೆ ಸಜ್ಜಾಗಿದ್ದ. ಹಿಂಬಾಗಿಲಿನ ಬಳಿ ಹೋಗಿ ನಿಂತುಕೊಂಡಿದ್ದ. ವಿಕ್ರಮ ಹಾಗೂ ವಿನಾಯಕರಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನವನ್ನೂ ನೀಡಿದ್ದ. ಪ್ರದೀಪ ಆಲೋಚಿಸಿದಂತೆಯೇ ಆಗಿತ್ತು. ಬಾಬು ದಬಾರನೆ ಬಿದ್ದಿದ್ದ. `ಅಯ್ಯಪ್ಪೋ.. ನಾ ಸತ್ತೆ..' ಎಂದು ಬಾಬು ಒರಲಿದ್ದ.
ಬಿದ್ದವನನ್ನು ಹಿಡಿದು ಪ್ರದೀಪ ಹೆಡೆಮುರಿ ಕಟ್ಟಿದ. ಇದನ್ನು ನೋಡಿದ ಬಾಬುವಿನ ಹೆಂಡತಿ ರೋಧಿಸಲು ಆರಂಭಿಸಿದ್ದಳು. ಗಂಡ ಏನೋ ಭಾನಗಡಿ ಮಾಡಿಕೊಂಡಿದ್ದಾನೆ ಎಂಬುದು ಹೆಂಡತಿಗೆ ಖಾತ್ರಿಯಾಗಿತ್ತು. ಅದಕ್ಕೆ ದೊಡ್ಡದಾಗಿ ಅಳಲು ಶುರುವಿಟ್ಟುಕೊಂಡಿದ್ದಳು.
ಮೊದಲಿನಿಂದಲೂ ಗಂಡನ ಬಗ್ಗೆ ಅನುಮಾನವಿತ್ತು ಬಾಬುವಿನ ಮಡದಿಗೆ. ಮೂರು ವರ್ಷ ಬಾಂಬೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಮನೆ ಬಿಟ್ಟು ಹೋಗಿದ್ದ ಬಾಬು ದಿಲ್ ದಾರ್ ಆಗಿ ವಾಪಾಸ್ ಬಂದಿದ್ದ. ವಾಪಾಸು ಬಂದವನ ಕೈಯಲ್ಲಿ ಬಾಂಬೆಯಲ್ಲಿ ಎಂತಾ ಕೆಲಸ ಮಾಡ್ತಿದ್ರಿ ಎಂದು ಮಡದಿ ಕೇಳಿದ್ದಳು. ಅದಕ್ಕವನನು ಹೊಟೆಲ್ ಉದ್ಯಮ ಎಂದು ಹೇಳಿದ್ದ. ಗಂಡನ ಉದ್ಯಮದ ಬಗ್ಗೆ ಊರು ತುಂಬಾ ಹೇಳಿಕೊಂಡು ಬಂದಿದ್ದ ಮಡದಿಗೆ ಒಂದಿಬ್ಬರು `ಅದೆಂಗೆ ನಿನ್ ಗಂಡ ಮೂರು ವರ್ಷದಾಗೆ ಅಷ್ಟೆಲ್ಲ ದುಡ್ ಮಾಡ್ಕಂಡ್ ಬಂದಾನೆ? ದಿಟವಾಗಿಯೂ ನಿನ್ ಗಂಡ ಹೊಟೆಲ್ ಮಾಡ್ತಿದ್ನಾ ಅಥವಾ ಬೇರೆ ಇನ್ನೇನಾದರೂ ದಂಧೆ ಮಾಡ್ ತಿದ್ನಾ..?' ಎಂದು ಕೇಳಿದಾಗಲೇ ಅನುಮಾನದ ಕಿಡಿ ಹೊತ್ತುಕೊಂಡಿತ್ತು. ನಂತದರ ದಿನಗಳಲ್ಲಿ ಬಾಂಬೆಯಿಂದ ಬಂದರು, ಕೇರಳದಿಂದ ಬಂದರು, ಬೆಂಗಳೂರಿನವರು ಎಂದು ಹೇಳಿಕೊಂಡು ಬಹಳಷ್ಟು ಜನರು ಅಪರಿಚಿತರು ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ತನಗೆ ಅರ್ಥವಾಗದ ಭಾಷೆಯಲ್ಲಿ ಅವರು ಮಾತನಾಡುತ್ತಿದ್ದರು. ಅವರು ಬಂದು ಹೋದ ಮರುದಿನ ಬಾಬು ಮನೆಗೆ ಬೇಕಾದಂತಹ ದುಬಾರಿ ವಸ್ತುಗಳನ್ನೆಲ್ಲ ತಂದು ಗುಡ್ಡೆ ಹಾಕುತ್ತಿದ್ದ. ದೊಡ್ಡದೊಂದು ಟಿವಿ, ಪ್ರಿಜ್, ಗ್ರೈಂಡರ್, ಮಿಕ್ಸರ್ ಹೀಗೆ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ವಸ್ತುಗಳನ್ನು ತಂದು ಹಾಕುತ್ತಿದ್ದರೆ ಮೊದ ಮೊದಲು ಖುಷಿ ಪಟ್ಟಿದ್ದಳು. ಆದರೆ ನಂತರ ಮಾತ್ರ ಆಕೆಗೆ ಭಯವಾಗತೊಡಗಿತ್ತು.
ದಿನ ಕಳೆದಂತೆ ಬಾಬುವಿನ ದಿನಚರಿಯೂ ಬದಲಾಗತೊಡಗಿತ್ತು. ಮೊದಮೊದಲು ಗಂಡ ಪ್ರತಿದಿನ ರಾತ್ರಿ ಮನೆಯಲ್ಲಿ ಉಳಿದು ನಿದ್ದೆ ಮಾಡುತ್ತಿದ್ದ. ಆಮೇಲಾಮೇಲೆ ವಾರದಲ್ಲಿ ಒಂದು ದಿನ ರಾತ್ರಿ ಅದೇನೋ ಕೆಲಸವಿದೆ ಎಂದು ಹೋಗುತ್ತಿದ್ದ. ಬೆಳಿಗ್ಗೆ ಬಂದು ಮನೆಯಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ. ಆಮೇಲಾಮೇಲೆ ಬಾಬು ವಾರಕ್ಕೆರಡು ದಿನ, ನಂತರದ ದಿನಗಳಲ್ಲಿ ಮಾರಕ್ಕೆ ನಾಲ್ಕು ದಿನ ರಾತ್ರಿ ಹೊರಕ್ಕೆ ಹೋಗುವ ಚಾಳಿ ಶುರುವಾಗಿತ್ತು. ಗಂಡನನ್ನು ಒಂದೆರಡು ಸಾರಿ ದಬಾಯಿಸಿ ಕೇಳಿಯೂ ಬಿಟ್ಟಿದ್ದಳು ಆಕೆ. ಅದಕ್ಕವನು ಶಿರಸಿಯಲ್ಲಿ ಕೆಲಸ ಸಿಕ್ಕಿದೆ. ರಾತ್ರಿ ಪಾಳಿಯ ಕೆಲಸ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೆನೆ. ದೊಡ್ಡದೊಂದು ಬ್ಯಾಂಕಿನ ಎಟಿಎಂ ಮಿಷಿನ್ ಕಾಯುವ ಕೆಲಸ ಎಂದು ಹೇಳಿದ್ದ. ಆದರೆ ಹೆಂಡತಿ ನಂಬಿರಲಿಲ್ಲ. ಬಾಬು ಸುಳ್ಳು ಹೇಳುತ್ತಿರಬಹುದು ಎನ್ನುವುದು ಆಕೆಯ ಮನಸ್ಸಿನಲ್ಲಿ ಹಾಸುಹೊಕ್ಕಾಗಿತ್ತು. ಇದೀಗ ಮನೆಯ ಬಾಗಿಲಿಗೆ ಪೊಲೀಸರು ಬಂದಿದ್ದಾರೆ ಎನ್ನುವುದು ಕೇಳಿದಾಗ ಮಾತ್ರ ಗಂಡ ಏನೋ ದೊಡ್ಡ ಭಾನಗಡಿ ಮಾಡಿಕೊಂಡಿದ್ದಾನೆ ಎನ್ನುವುದು ಖಾತ್ರಿಯಾಗಿತ್ತು. ಪ್ರದೀಪ ಬಾಬುವಿನ ಹೆಂಡತಿಯ ಬಳಿ ನಾವು ಪೊಲೀಸರು ಎಂದು ಹೇಳಿದ್ದು ಸರಿಯಾದ ಪರಿಣಾಮವನ್ನೇ ಬೀರಿತ್ತು.

(ಮುಂದುವರಿಯುತ್ತದೆ..)

Monday, December 7, 2015

ಅಘನಾಶಿನಿ ಕಣಿವೆಯಲ್ಲಿ-30

`ನಮ್ ಬದಿಗೆ ಕಳ್ಳರು ಬಂಜವಡಾ? 30-40ರಷ್ಟು ಜನ ಉತ್ತರ ಭಾರತದ ಬಂದಿದ ಬಂಜ ಹೇಳ್ತಾ ಇದ್ದ. ಬಂದವ್ವು ಮನುಷ್ಯರದ್ದು ಕಿಡ್ನಿ, ಕಣ್ಣು ಎಲ್ಲಾ ಕೀಳ್ತವಡಾ..' ಎಂದು ಮರುದಿನ ಶಾಲೆಯಿಂದ ಬಂದ ರಾಜೀವ ಮನೆಯಲ್ಲಿ ದೊಡ್ಡದಾಗಿ ಹೇಳಿದಾಗ ಎಲ್ಲರ ಕಿವಿ ನೆಟ್ಟಗಾಗಿದ್ದವು.
`ಸುಳ್ ಸುಳ್ ಸುದ್ದಿ ಹೇಳಡಾ ಮಾರಾಯಾ..' ಎಂದು ಮನೆಯ ಹಿರಿಯರು ಗದರುತ್ತಿದ್ದಂತೆ ರಾಜೀವ ಪಟ್ಟು ಬಿಡದೇ ಮತ್ತದೇ ವಿಷಯವನ್ನು ಹೇಳಿದ.
`ಶಾಲೆಯಲ್ಲಿ ದೋಸ್ತರೆಲ್ಲ ಮಾತನಾಡ್ತಾ ಇದ್ದಿದ್ದ. ಈ ವಿಷಯ ಹೇಳಿದ್ದ ನೋಡು. ನೇಪಾಳದ ಬದಿಯವ್ವು ಬಂಜವಡಾ ಹೇಳಿ ಹೇಳ್ತಾ ಇದ್ದ. ಗಂಡಸ್ರು, ಹೆಂಗಸ್ರು ಎಲ್ಲ ಬಂಜವಡಾ ಹೇಳಿ ಹೇಳಕತ್ತಾ ಇದ್ದಿದ್ದ..' ರಾಜೀವ ಮಂಕಾಗಿದ್ದರೂ ಸ್ಫುಟವಾಗಿ ಹೇಳಿದ್ದ.
ರಾಜೀವನ ಮಾತನ್ನು ಕೇಳಿ ಅಕ್ಕ ಪಕ್ಕದ ಮನೆಯವರೆಲ್ಲ ಅಲ್ಲಿಗೆ ಬಂದು ನೆರೆದರು. `ಹೌದು ನಾನೂ ಕೇಳಿದ್ದೆ. ಸಾಗರ ತಾಲೂಕಲ್ಲಿ ಮೊದಲು ಬಂದಿದ್ವಡಾ. ಈಗ ಸಿದ್ದಾಪುರ ಹಾಗೂ ಶಿರಸಿ ಬದಿಗೂ ಬಂಜ್ವಡಾ. ನನ್ ಕಿವಿಗೂ ಬಿಜ್ಜು ಈ ವಿಷ್ಯ. ಯಾರಾದ್ರೂ ಒಬ್ಬೊಬ್ರೇ ಹೋಗ್ತಾ ಇದ್ರೆ ಅವರನ್ನ ತಡೆದು ಅಡ್ಡ ಹಾಕಿ ಕೈಯಲ್ಲಿದ್ದಿದ್ದಿದ್ದು ಕಿತ್ತುಕೊಂಡು ಹೋಗ್ತವಡಾ..' ಪಕ್ಕದಲ್ಲಿದ್ದವರ್ಯಾರೋ ದನಿ ಸೇರಿಸಿದ್ದರು.
`ಹೌದು ಈ ವಿಷಯ ನನ್ನ ಕಿವಿಗೂ ಬಂಜು. ಕಳ್ಳರು ಬಂದಿದ್ದು ನಿಜ. ಅವ್ರು ಕಳ್ಳರೋ, ದರೋಡೆಕೋರರೋ ಅಥವಾ ಮಾನವನ ಅಂಗಾಂಗಗಳನ್ನು ಕದ್ದು ಮಾರಾಟ ಮಾಡುವವರೋ ಗೊತ್ತಿಲ್ಲ ನೋಡಿ.. ಎರಡೋ ಮೂರೋ ಜನರನ್ನು ಅಡ್ಡಗಟ್ಟಿದ್ದು ನನ್ನ ಕಿವಿಗೂ ಬಿಜ್ಜು. ಬೇಣದಗದ್ದೆ ಬಾಬೂನ್ನ ಮೊನ್ನೆ ಸಂಜೆ ಅಡ್ಡಗಟ್ಟಿದಿದ್ವಡಾ ನೋಡಿ. ಹಸುಮನೆಯ ರಾಮಣ್ಣನ್ನೂ ಅಡ್ಡ ಹಾಕಿದಿದ್ದ ಹೇಳಿ ಸುದ್ದಿ ಸಿಕ್ಕಿದ್ದು. ಯಾವುದೋ ಪೇಪರ್ರಲ್ಲೂ ಬಂಜಪಾ..' ಎಂದರು ಇನ್ನೊಬ್ಬರು ಹಿರಿಯರು.
`ಹೌದಾ.. ಆನೂ ಪೇಪರ್ ಓದಿದ್ದಿ. ಅದರಲ್ಲಿ ಗಾಳಿ ಸುದ್ದಿ ಹೇಳೂ ಕೊಟ್ಟಿದ್ವಲಾ..' ಅವರಲ್ಲೇ ಶುರುವಾಗಿತ್ತು ವಾದ.
`ಸುಳ್ಳು ಸುದ್ದಿ ಹೇಳಾಗಿದ್ದರೆ ಬಾಬೂ ಹಾಗೂ ರಾಮಣ್ಣನ ಅಡ್ಡ ಹಾಕಿದವ್ವು ಯಾರು?' ಮತ್ತೊಬ್ಬಾತ ಬಾಯಿ ಹಾಕಿದ್ದ.
ಈ ವಿಷಯವನ್ನು ಮೌನವಾಗಿ ಕೇಳುತ್ತಿದ್ದ ವಿಕ್ರಮ ಹಾಗೂ ವಿನಾಯಕ ದೋರದಲ್ಲಿದ್ದ ಪ್ರದೀಪ, ವಿಜೇತಾರನ್ನು ಕರೆದರು. ಪ್ರದೀಪ ಹಾಗೂ ವಿಜೇತಾರಿಗೆ ಈ ವಿಷಯ ಬಹಳ ಆಸಕ್ತಿಕರ ಎನ್ನಿಸಿತು.
ಅಷ್ಟರಲ್ಲಿ ಮನೆಯ ಮಹಿಳೆಯರೊಬ್ಬರು ಬಂದು `ಕಳ್ಳರು ಆಗಿದ್ರೂ ಆಗಿರಲಕ್ಕು. ನಾವು ಸಣ್ಣಕಿದ್ದಾಗ ಇರಾಣಿ ಮಂದಿ ಅಂತ ಬರ್ತಿದ್ದ. ನೂರು ಜನರ ಇರಾಣಿ ಜನರ ಗುಂಪು ಊರಿಗೆ ಬರುವ ಮೊದಲೇ ಊರ ಮುಖಂಡನ ಬಳಿ ಪರವಾನಗಿ ಪತ್ರವನ್ನು ಪಡೆದುಕೊಳ್ತಾ ಇತ್ತು. ಆ ಪರವಾನಗಿ ಪತ್ರವನ್ನು ಇರಾಣಿ ಮಂದಿಗಳ ಖದರಿಗೆ ಹೆದರಿ ಪಟೇಲ ಬರಕೊಡ್ತಿದ್ದ. ಅಂವ ಬರೆದು ಕೊಡಲೆ ಒಪ್ಪದೇ ಇದ್ದರೆ ಕೈಕಾಲು ತೆಗೆದು ಬರೆದಿಕೊಳ್ತಿದ್ದ. ಮನೆ ಮನೆಗೆ ಬರುತ್ತಿದ್ದ ಇರಾಣಿ ಮಂದಿಗಳಿಗೆ ಅವರು ಕೇಳಿದ್ದನ್ನು ಕೊಡಲೇಬೇಕಿತ್ತು. ಇಲ್ಲೆ ಹೇಳಾಗಿದ್ದರೆ ಮನೆಯಲ್ಲಿನ ಹೆಣ್ಣು ಮಕ್ಕಳನ್ನೂ ಎಳೆದುಕೊಂಡು ಹೋಗ್ತಿದ್ದರು.. ಈಗ ಬಂದಿರುವ ಕಳ್ಳರೂ ಹಂಗೇ ಇದ್ದಿಕ್ಕು..' ಎಂದಾಗ ಮಾತ್ರ ಒಬ್ಬಿಬ್ಬರು ದಿಘಿಲಾದರು. ಪ್ರದೀಪನ ಕಣ್ಣು ಈಗ ಮಾತ್ರ ಬಹಳ ಗಂಭೀರವಾಯಿತು. ಕಳ್ಳರ ಬಂದಿದ್ದು ಹೌದಾ? ಇದರ ಹಿಂದಿನ ಮರ್ಮ ಏನೋ ಇದೆ ಎನ್ನಿಸುತ್ತದೆ ಎಂದು ಆಲೋಚಿಸಿದ.
ಅಷ್ಟರಲ್ಲಿ ಅಲ್ಲಿಗೆ ಬಂದ ಗಣಪಜ್ಜ `ಹೋಯ್.. ಎಂತದ್ರೋ ಅದು..' ಎಂದ. ಪ್ರತಿಯೊಬ್ಬರೂ ತಮಗೆ ತಿಳಿದಿದ್ದ ವಿಷಯವನ್ನು ಮತ್ತೊಮ್ಮೆ ಸಾದ್ಯಂತವಾಗಿ ವಿವರಿಸಿದರು.
`ಇರಾಣಿ ಮಂದಿಗ ಬರ್ತಿದ್ದ ಅನ್ನೊಂದು ನಂಗೂ ಗೊತ್ತಿದ್ದು. ನಾನೂ ನೋಡಿದ್ದಿ ಅವರನ್ನಾ. ಇರಾನ್ ಹಾಗೂ ಇರಾಕ್ ನಡುವೆ ಕೊಲ್ಲಿ ಯುದ್ಧ ನಡೆದಿದ್ದ ಸಂದರ್ಭದಲ್ಲಿ ಇರಾನ್ ನಲ್ಲಿ ನಿರಾಶ್ರಿತರಾದವರು ಹೀಗೆ ಬಂದಿದ್ದರು ಎನ್ನುವುದನ್ನು ನಾನು ಕೇಳಿದ್ದೇನೆ. ಇರಾಕ್ ಸೊಕಾ ಸುಮ್ಮನೆ ಇರಾನ್ ಮೇಲೆ ಯುದ್ಧ ಮಾಡಿತ್ತಲ್ಲ. ಆಗ ಭಾರತ ನಿರಾಶ್ರಿತರಿಗೆ ಎಲ್ಲ ಸೌಲಬ್ಯವನ್ನು ನೀಡುವ ಭರವಸೆ ನೀಡಿತ್ತಲ್ಲ. ಆ ಭರವಸೆಯ ಲಾಭವನ್ನು ಪಡೆದುಕೊಂಡು ಇರಾನಿ ಮಂದಿ ಹೀಗೆ ಮಾಡುತ್ತಿದ್ದರು. ಆದರೆ ಯಾವಾಗ ಇರಾಣಿ ಮಂದಿಗಳು ಮಾಡುತ್ತಿದ್ದ ಹಾವಳಿಯ ವಿವರ ಭಾರತ ಸರ್ಕಾರಕ್ಕೆ ಗೊತ್ತಾಯಿತೋ ಆ ನಂತರದ ದಿನಗಳಲ್ಲಿ ಇರಾಣಿ ಮಂದಿಗಳ ಹಾವಳಿಗೆ ಸರ್ಕಾರ ಕಡಿವಾಣ ಹಾಕಿತು. ಕಟ್ಟು ನಿಟ್ಟಾಗಿ ಇರಾಣಿ ಮಂದಿಗಳ ಮೇಲೆ ಕಣ್ಣಿಟ್ಟು ಅವರನ್ನು ತಂಡು ಮಾಡಿತು. ಆದರೆ ಈಗ ಕಳ್ಳರು ಬಂದಿದ್ದಾರೆ, ಅವರು ಮನುಷ್ಯರ ಅಂಗಾಂಗಗಳನ್ನು ಕಳ್ಳತನ ಮಾಡುತ್ತಾರೆ ಎನ್ನುವುದರ ಬಗ್ಗೆ ನನಗೆ ಅನುಮಾನಗಳಿವೆ. ಈಗೊಂದು ದಶಕದ ಹಿಂದೆ ಇಂಥದ್ದೇ ಸುದ್ದಿಯಾಗಿತ್ತು ನೋಡಿ..'ಎಂದರು ಗಣಪಜ್ಜ.
ಎಲ್ಲರೂ ತದೇಕಚಿತ್ತರಾಗಿ ಕೇಳುತ್ತಿದ್ದಂತೆಯೇ ಮಾತು ಮುಂದುವರಿಸಿದ ಗಣಪಜ್ಜ `ಈಗ್ಗೆ ಒಂದು ದಶಕಗಳ ಹಿಂದೆಯೂ ಇದೇ ರೀತಿ ಕಳ್ಳರು ಬಂದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದೇ ಸುದ್ದಿ ನಂತದಲ್ಲಿ ಯಾವುದೋ ಮೋಹಿನಿ ದಾರಿ ಹೋಕರನ್ನು ಕಾಡುತ್ತಾಳೆ ಎನ್ನುವ ರೀತಿಯೂ ಬದಲಾಗಿತ್ತು. ಜನರು ಗಾಳಿ ಸುದ್ದಿಯ ಜಾಡಿಗೆ ಬಲಿಯಾಗಿದ್ದರು. ಆ ದಿನಗಳಲ್ಲಿ ಪ್ರತಿಯೊಬ್ಬರೂ ತಲೆಗೊಂದರಂತೆ ಮಾತನಾಡಿದ್ದರು. ಆದರೆ ವಾಸ್ತವದಲ್ಲಿ ಅಂತಹ ಗಾಳಿ ಸುದ್ದಿಯ ಹಿಂದಿನ ಅಸಲಿಯತ್ತು ಬೇರೆ ಇತ್ತು ನೋಡಿ..' ಎಂದರು ಅಜ್ಜ.
`ಅಂದರೆ ಕಳ್ಳರು ಬಂದಿದ್ದಾರೆ ಅನ್ನೋದು ಸುಳ್ಳಾ..?' ನಡುವೆ ಬಾಯಿ ಹಾಕಿದ್ದ ಒಬ್ಬರು ಸುಮ್ಮನಿರಲಾರದೇ ಕೇಳಿಯೂ ಬಿಟ್ಟರು.
`ಹೌದು. ಬಹುಶಃ ಕಳ್ಳರು ಬಂದಿದ್ದಾರೆ ಎನ್ನುವುದು ಗಾಳಿ ಸುದ್ದಿಯೇ ಹೌದು. ಇದು ಮರಗಳ್ಳರು, ಕಳ್ಳನಾಟಾ ಮಾಡುವವರು ಹರಿಬಿಡುವ ಗಾಳಿ ಸುದ್ದಿ. ದಶಕದ ಹಿಂದೆ ಇದೇ ಗಾಳಿ ಸುದ್ದಿ ಹಬ್ಬಿದ್ದಾಗಲೂ ಕಳ್ಳ ನಾಟಾ ಹೊಡೆಯುವವರಿಂದಲೇ ಹೀಗಾಗಿದೆ ಎಂಬುದು ಗೊತ್ತಾಗಿತ್ತು. ಈಗಲೂ ಹಾಗೇ ಆಗಿರಬೇಕು..' ಎಂದರು ಗಣಪಜ್ಜ.
`ಹಾಗಾದರೆ ವೈಜಯಂತಿ ಪುರದಲ್ಲಿ ನೇಪಾಳಿ ವ್ಯಕ್ತಿಯೊಬ್ಬನನ್ನು ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನುವ ಸುದ್ದಿ ಪೇಪರಿನಲ್ಲಿ ಬಂದಿತ್ತಲ್ಲ.. ಅದೇನು..' ಒಬ್ಬಾತ ಕೇಳಿಯೇಬಿಟ್ಟಿದ್ದ.
`ಅದು ನನಗೆ ಗೊತ್ತಿಲ್ಲ. ಆದರೆ ಕಳ್ಳರು ಬಂದಿದ್ದಾರೆ, ಅವರು ಅಡ್ಡಗಟ್ಟಿದ್ದಾರೆ ಎನ್ನುವ ಸುದ್ದಿ ಮಾತ್ರ ಶುದ್ಧ ಸುಳ್ಳು. ಇದು ಕಳ್ಳ ನಾಟಾ ಹೊಡೆಯುವವರು ಹಬ್ಬಿಸಿದ ಸುದ್ದಿಯೇ ಹೌದು..' ಅಜ್ಜ ಖಂಡತುಂಡವಾಗಿ ಹೇಳಿದ್ದರು.
`ಹಾಗಾದರೆ ಬಾಬೂ ಹಾಗೂ ರಾಮಣ್ಣನನ್ನ ಅಡ್ಡಗಟ್ಟಿದ್ದಾರೆ ಎಂದರಲ್ಲ. ಅದೂ ಸುಳ್ಳಾ?..' ಇನ್ನೊಬ್ಬಾತ ವಾದಿಸಿದ್ದ.
`ಅವರನ್ನು ಅಡ್ಡಗಟ್ಟಿದ್ದಾರೆ ಅಂತ ಅವರೇ ಬಂದು ಹೇಳಿದರಾ? ಇಲ್ಲವಲ್ಲ. ಯಾರೋ ಹೇಳಿದ್ದು ತಾನೆ? ಇಷ್ಟಕ್ಕೂ ಈ ಬಾಬೂ ಹಾಗೂ ರಾಮಣ್ಣ ಏನು ಸುಭಗರಲ್ಲವಲ್ಲ.. ನಮ್ಮ ಭಾಗದಲ್ಲಿ ಕಳ್ಳ ನಾಟಾ ಮಾಡುವುದರಲ್ಲಿ ಎತ್ತಿದ ಕೈ ಎಂದು ಹೆಸರಾದವರಲ್ಲವೇ? ಯಾರಾದರೂ ಸಾಮಾನ್ಯ ವ್ಯಕ್ತಿಯನ್ನು ಕಳ್ಳರು ಅಡ್ಡಗಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿದೆಯಾ ಹೇಳಿ? ಇಲ್ಲ ತಾನೇ? ಕಳ್ಳ ನಾಟಾ ಮಾಡುವ ವ್ಯಕ್ತಿಗಳನ್ನೇ ಕಳ್ಳರು ಅಡ್ಡಗಟ್ಟುತ್ತಾರೆ ಎಂದರೆ ಇದರ ಹಿಂದೆ ಬೇರೆ ಏನೋ ಹುನ್ನಾರವಿದೆ ಎನ್ನಿಸುವುದಿಲ್ಲವೇ?' ಗಣಪಜ್ಜ ಹೇಳಿದ್ದ. ಆತನ ಮಾತು ಕೇಳಿದವರಿಗೆಲ್ಲ ಏನೋ ಹೊಳೆದಂತಾಯಿತು.
`ಇದು ನಿಸ್ಸಂಶಯವಾಗಿ ಕಳ್ಳನಾಟಾ ಹೊಡೆಯುವುರದ್ದೇ ಕೆಲಸ. ತಮ್ಮ ಕೆಲಸ ಮಾಡಿಕೊಳ್ಳಲು ನೇಪಾಳಿ ಕಳ್ಳರ ಹೆಸರನ್ನು ಹೇಳಿ ಬಿಟ್ಟಿದ್ದಾರೆ ಅಷ್ಟೇ. ಬೇಕಾದರೆ ಪರೀಕ್ಷೆ ಮಾಡಿಕೊಳ್ಳಿ..' ಎಂದು ಹೇಳಿದವರೇ ಹೆಗಲ ಮೇಲಿದ್ದ ಬಿಳಿಯ ಟರ್ಕೀಸ್ ಟವೇಲನ್ನು ಒಮ್ಮೆ ಝಾಡಿಸಿ `ಇದೇ ಫರ್ಮಾನು..' ಎಂಬಂತೆ ಎದ್ದು ಹೋದರು ಗಣಪಜ್ಜ. ಒಮ್ಮೆ ಅಲ್ಲಿ ದೀರ್ಘ ಮೌನ ಆವರಿಸಿತು. ಆ ನಂತರ ಪ್ರತಿಯೊಬ್ಬರೂ ಒಬ್ಬರ ಹಿಂದೆ ಒಬ್ಬರಂತೆ ನಿಧಾನವಾಗಿ ಜಾಗ ಖಾಲಿ ಮಾಡಿದರು. ಆದರೆ ಪ್ರದೀಪ ಹಾಗೂ ಆತನ ಬಳಗಕ್ಕೆ ಮಾತ್ರ ಹೊಸತೇನೋ ಮಾರ್ಗ ಸಿಕ್ಕಂತಾಗಿತ್ತು. ತಕ್ಷಣ ಪ್ರದೀಪ ಅಲ್ಲಿಯೇ ಇದ್ದ ಪೋನ್ ಬಳಿ ತೆರಳಿ ಚಕಚಕನೆ ನಂಬರ್ ಡಯಲ್ ಮಾಡಿದ. ಅರೆಘಳಿಗೆಯಲ್ಲಿ ಯಾರಿಗೋ ಪೋನ್ ಮಾಡಿ ವಿಷಯವನ್ನು ತಿಳಿಸಿದ. ಮತ್ತೆ ಅರೆ ಘಳಿಗೆಯಲ್ಲಿ ಪ್ರದೀಪ ಪೋನ್ ಮಾಡಿದ್ದ ವ್ಯಕ್ತಿ ಏನೋ ಹೇಳಿದಂತಾಯಿತು. ಪ್ರದೀಪ ಪೋನ್ ಇರಿಸಿ ಉಳಿದವರ ಬಳಿ ಬಂದ.
ವಿಕ್ರಮ ಅಸಹನೆಯಿಂದ `ಯಾರಿಗೆ ಪೋನ್ ಮಾಡಿದ್ದು? ಯಾಕೆ ಮಾಡಿದ್ದು? ಮಾರಾಯಾ ಮೊದಲಿನಿಂದಲೂ ನೀನು ಏನೋ ಒಂದು ರೀತಿ ನಿಘೂಢ ಕೆಲಸ ಮಾಡ್ತಾ ಇದ್ದೀಯಾ? ಹೇಳ್ಕೊಂಡು ಮಾಡು. ಅದೇನು ಅಂತ. ನಿನ್ನ ಮೇಲೆ ಬಹಳ ಅನುಮಾನ ಬರ್ತಾ ಇದೆ. ಇಷ್ಟಕ್ಕೂ ನೀನು ಯಾರು ಅಂತ. ಕೇಳಿದರೆ ಏನೋ ಸುಳ್ಳು ಹೇಳ್ತೀಯಲ್ಲಾ.. ಈಗ ನೀನು ನಿಜ ಹೇಳಲೇಬೇಕು..' ಎಂದ. ವಿನಾಯಕ, ವಿಜೇತಾರು ವಿಕ್ರಮನ ಜೊತೆಗೂಡಿದ್ದರು. ಪ್ರದೀಪ ಒಮ್ಮೆ ಕಕ್ಕಾಬಿಕ್ಕಿಯಾಗಿದ್ದ.

(ಮುಂದುವರಿಯುತ್ತದೆ..)

Wednesday, December 2, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -4

(ಶಿವಾಜಿ ಕಟ್ಟಿಸಿದ ಸಜ್ಜನಘಡದ ಮಹಾದ್ವಾರ)
            ನಮ್ಮ ಪಾಲಿಗೆ ನಿಲೇಶ ಮಂತ್ರಿ ಆಟೋ ಚಾಲಕ ಅಷ್ಟೇ ಆಗಿರಲಿಲ್ಲ. ಗೈಡ್ ಕೂಡ ಆಗಿದ್ದ. ಸಜ್ಜನಘಡದ ಅಂಕುಡೊಂಕಿನ ದಾರಿಯಲ್ಲಿ ನಮ್ಮನ್ನು ಕರೆದೊಯ್ಯುತ್ತಿದ್ದ ಮಂತ್ರಿ ಅಲ್ಲೊಂದು ಕಡೆ 50 ಅಡಿ ಎತ್ತರದ ಹನುಮಂತನ ಪ್ರತಿಮೆ ತೋರಿಸಿದ. `ಮುಂಬಯಿ ಕಡೆಯ ಒಂದಿಬ್ಬರು ರಿಚ್ ಪಾರ್ಟಿ ಬಂದು ಈ ಪ್ರದೇಶದಲ್ಲಿ ಜಮೀನನ್ನು ಕೊಂಡು ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುತ್ತಿದ್ದಾರೆ. ಇದೋ ನೋಡಿ, ಈ ಹನುಮಂತನ ಪ್ರತಿಮ ನಿರ್ಮಾಣ ಮಾಡಿದವರೂ ಅಂತವರೇ..' ಎಂದ.
            ನಿಧಾನವಾಗಿ ಬೆಳಗಾಗಿತ್ತು. ನಿಮಗೆ ನನ್ನ ಕಡೆಯಿಂದ ತೋಫಾ ಇದೆ ಎಂದಿದ್ದೆನಲ್ಲ. ತೋರಿಸುತ್ತೇನೆ ಬನ್ನಿ ಎಂದವರೇ ಸಜ್ಜನಘಡಕ್ಕೆ ಬಲಕ್ಕೆ ತಿರುಗುವ ಕ್ರಾಸಿನಿಂದ ಸೀದಾ ಮುಂದಕ್ಕೆ ಆಟೋ ಚಾಲನೆ ಮಾಡಿದರು. ಮಾಡಿದವರೇ ಅಲ್ಲೊಂದು ಕಡೆ ಗುಡ್ಡದ ಮರುಕಲಿನಲ್ಲಿ ಆಟೋ ನಿಲ್ಲಿ ಇಳೀರಿ ಎಂದರು. ನಾವೆಲ್ಲ ಇಳಿದೆವು. ಇಳಿದಂತೆ ರಸ್ತೆಯನ್ನು ದಾಟಿ ಗುಡ್ಡವನ್ನು ಹತ್ತಿಸಿದರು ನಿಲೇಶ ಮಂತ್ರಿ. ಅಲ್ಲೊಂದು ಕಡೆ ನಮಗೆ ನಮ್ಮಷ್ಟೇ ದೊಡ್ಡ ಗಾತ್ರದ ಪೈಪ್ ಒಂದು ಕಾಣಿಸಿತು. ಪಕ್ಕದಲ್ಲಿದ್ದ ದೈತ್ಯ ಗುಡ್ಡವೊಂದರಿಂದ ಬಂದಿದ್ದ ಪೈಪ್ ಅದು. ಸೀದಾ ಸಜ್ಜನಘಡದ ಗುಡ್ಡದ ಮೇಲಕ್ಕೆ ಹಾಕಲಾಗಿತ್ತು. ನಾವೆಲ್ಲ ವಿಸ್ಮಯದಿಂದ ನೋಡುತ್ತಿದ್ದಂತೆ ಸಜ್ಜನಘಡಕ್ಕೆ ಪಕ್ಕದ ಗುಡ್ಡದಿಂದ ನೀರನ್ನು ಹರಿಸಲಾಗುತ್ತದೆ. ಅದಕ್ಕೆ ಈ ಪೈಪ್ ಹಾಕಲಾಗಿದೆ ಎಂದರು ನಿಲೇಶ ಮಂತ್ರಿ. ನಾವು ಒಮ್ಮೆ ಬೆರಗಾದೆವು. ಗುರುತ್ವಾಕರ್ಷಣ ಶಕ್ತಿಯನ್ನು ಬಳಕೆ ಮಾಡಿಕೊಂಡು ನೀರಿನ ಪೈಪ್ ಹಾಕಿರುವುದು ಖುಷಿಯನ್ನೂ ತಂದಿತು.
             ಗುಡ್ಡದ ಮರುಕಲನ್ನು ದಾಟಿ ನೋಡಿದ ನಮಗೆ ದೂರದ ಕಣಿವೆಯಲ್ಲೊಂದು ಅಣೆಕಟ್ಟು ಕಾಣಿಸಿತು. ಕೃಷ್ಣಾ ನದಿಯ ಉಪನದಿಗೆ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿತ್ತು. ಸಾಗರೋಪಾದಿಯಲ್ಲಿ ಕಾಣುತ್ತಿತ್ತು. ಮಂಜು ಬೀಳುತ್ತಿದ್ದ ಕಾರಣ ಸ್ವರ್ಗದ ಸಿರಿ ಭುವಿಗೆ ಇಳಿದು ಬಂದಿದೆಯೇನೋ ಎಂಬಂತೆ ಕಾಣಿಸಿತು. ನೋಡಿ ಈ ಅಣೆಕಟ್ಟನ್ನು ನಾಲ್ಕು ಮೀಟರ್ ಏರಿಸುತ್ತಾರಂತೆ ಎಂದು ಅಲ್ಲಿಯೇ ಮಾಹಿತಿ ನೀಡಿದರು ಮಂತ್ರಿ. ಕೆಲಕಾಲ ಅಲ್ಲಿ ನಿಂತು ಸಾಕಷ್ಟು ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆವು.
            ವಾಪಾಸು ಬಂದು ಮತ್ತೆ ಆಟೋವನ್ನು ಏರಿದೆವು. ತಿರುಗಿಸಿದ ಆಟೋವನ್ನು ಸೀದಾ ಸಜ್ಜನಘಡದ ಕಡೆಗೆ ಚಲಾಯಿಸಿದ. ಮತ್ತೊಂದೆರಡು ಅಂಕುಡೊಂಕನ್ನು ಹಾದು ಹೋದ ಆಟೋ ಒಂದು ಕಿಲೋಮೀಟರ್ ನಂತರ ಸಜ್ಜನಘಡವನ್ನು ತಲುಪಿತು. ಸಜ್ಜನಘಡದ ಪ್ರಮುಖ ದ್ವಾರದಿಂದ ಬಹುದೂರದಲ್ಲಿಯೇ ಆಟೋ ನಿಲ್ಲಿಸಿದ ಮಂತ್ರಿ. ಸಾಕಷ್ಟು ವಾಹನಗಳು ಆಗಲೇ ಸಜ್ಜನಘಡಕ್ಕೆ ಬಂದಿದ್ದವು. ಆಟೋ ಇಳಿದವರೇ ನಿಲೇಶ ಮಂತ್ರಿಯ ಜೊತೆ ನಾನು, ಪ್ರಶಾಂತ ಹಾಗೂ ಸಂಜಯ ನಿಂತುಕೊಂಡು ಪೋಟೋ ತೆಗೆಸಿಕೊಂಡೆವು. ಹೋಗುವ ಮುನ್ನ ಬಾಯಿತುಂಬಾ ನಮ್ಮನ್ನು ಹರಸಿ ಹೋದ ನಿಲೇಶ ಮಂತ್ರಿ. ಈ ಗಡಬಡೆಯಲ್ಲಿ ನಿಲೇಶ ಮಂತ್ರಿಯ ಮೊಬೈಲ್ ನಂಬರ್ ತೆಗೆದುಕೊಳ್ಳುವುದನ್ನು ನಾವು ಮರೆತೇ ಬಿಟ್ಟಿದ್ದೆವು ಬಿಡಿ.
           ಮೂವರೂ ಸಜ್ಜನಘಡವನ್ನು ಏರಲು ಹೊರಟ ಸಂದರ್ಭದಲ್ಲಿ ಚುಮು ಚುಮು ಮಳೆ. 17ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ ಕಲ್ಲಿನ ದಾಡಿ. ದೈತ್ಯ ಕೋಟೆ. ನಡೆದು ಸಾಗಿದೆವು. ಅಲ್ಲೊಂದು ಕಡೆ ಶಿವಾಜಿ ಮಹಾರಾಜ ನಿರ್ಮಾಣ ಮಾಡಿದ್ದ ಬೃಹತ್ ದ್ವಾರವೊಂದು ನಮ್ಮನ್ನು ಸ್ವಾಗತಿಸಿತು. ಈ ದ್ವಾರದ ಬಳಿ ನಾವೆಲ್ಲ ಮತ್ತೆ ಪೋಟೋ ತೆಗೆಸಿಕೊಂಡೆವು. ದೈತ್ಯ ದ್ವಾರಕಮಾನನ್ನು ಕಲ್ಲಿನಿಂದ ಮಾಡಿದ್ದರೆ ಅದಕ್ಕೆ ಮಾಡಲಾಗಿದ್ದ ಬಾಗಿಲು ಮರ ಹಾಗೂ ಕಬ್ಬಿಣದ್ದಾಗಿತ್ತು. ಸೀದಾ ಒಳನಡೆದ ನಮಗೆ ಅಲ್ಲೊಂದು ಮ್ಯಾಪ್ ಕಾಣಿಸಿತು. ಮುನ್ನಡೆದೆವು.
            ಮೂರ್ನಾಲ್ಕು ಕಟ್ಟಡಗಳನ್ನು ದಾಟಿ ಮುಂದಕ್ಕೆ ಸಾಗಿದ ನಮಗೆ ಸ್ಥಳಿಯರ್ಯಾರೋ ಸ್ನಾನ ಮಾಡುವ ಸ್ಥಳ ತೋರಿಸಿದರು. ಬಿಸಿನೀರು ಕೂಡ ಬರ್ತದೆ. ಸ್ನಾನ ಮಾಡಬಹುದು ಎಂದರು. ಪ್ರಶಾಂತ ಭಾವ ಮೊದಲು ಸ್ನಾನಕ್ಕೆ ಹೋದ. ಆತನ ನಂತರ ನಾನು, ನನ್ನ ನಂತರ ಸಂಜಯ ಸ್ನಾನ ಮುಗಿಸಿದ. ಸ್ನಾನ ಮುಗಿಸಿ ಶುಭ್ರ ಬಿಳಿ ಬಣ್ಣದ ಲುಂಗಿ ಹಾಗೂ ಉತ್ತರೀಯವನ್ನು ಹೊದ್ದು ಮುನ್ನಡೆದೆವು. ನಮ್ಮ ಧಿರಿಸು ಎಂತವರನ್ನೂ ಮೋಡಿ ಮಾಡುವಂತಿತ್ತು. ವಾಪಾಸು ಬಂದು ಛತ್ರವೊಂದರಲ್ಲಿ ನಮ್ಮ ಲಗೇಜನ್ನು ಇರಿಸಲು ಅನುವಾದೆವು. ನಮ್ಮ ದಿರಿಸನ್ನು ನೋಡಿ ಬೆರಗಾದ ಆ ಛದ್ರದ ಉಸ್ತುವಾರಿ ನೋಡಿಕೊಂಡವರು ನಮಗೆ ಪ್ರತ್ಯೇಕ ಕೋಣೆಯೊಂದನ್ನು ನೀಡಿದರು. ಈ ಕೋಣೆಯಲ್ಲಿ ನಮ್ಮ ಲಗೇಜನ್ನು ಇರಿಸಿ ಸಮರ್ಥ ರಾಮದಾಸರ ಆರಾಧ್ಯ ದೈವವನ್ನು ನೋಡಲು ಮುನ್ನಡೆದೆವು.
            ಆರಂಭದಲ್ಲಿಯೇ ಸದ್ಗರು ಶ್ರೀಧರಸ್ವಾಮಿಗಳು ತಪಸ್ಸನ್ನಾಚರಿಸಿದ ಶ್ರೀಧರ ಕುಟಿ ನಮ್ಮ ಸೆಳೆಯಿತು. ಸೀದಾ ಒಳಗೆ ಹೊರಟೆವು. ಶ್ರೀಧರ ಸ್ವಾಮಿಗಳ ಭವ್ಯ ಮೂರ್ತಿಯೊಂದು ಕೋಣೆಯೊಳಗೆ ಬೆಳಗುತ್ತಿತ್ತು. ಅದರ ಹೊರಭಾಗದಲ್ಲಿ ಕೆಲಕಾಲ ನಿಂತ ನಾವು ನಂತರ ಧ್ಯಾನಕ್ಕೆ ಕುಳಿತೆವು. ಕೆಲಕಾಲ ಮೈಮರೆತು ಧ್ಯಾನ ಮಾಡುತ್ತಿದ್ದಂತೆಯೇ ಕುಟಿಯ ಒಳಭಾಗದಿಂದ ವೃದ್ಧರೊಬ್ಬರು ಬಂದರು. `ನಿಮಗೆ ಎಲ್ಲಾಯಿತು?' ಎಂದು ಕೇಳಿದರು. ನಮಗೆ ಒಮ್ಮೆ ತಬ್ಬಿಬ್ಬು. ಅಚ್ಚ ಮರಾಠಿಯ ಮಧ್ಯದಲ್ಲಿರುವ ಸ್ಥಳದಲ್ಲಿ ಕನ್ನಡ ಭಾಷೆಯಲ್ಲಿ ನಮ್ಮನ್ನು ಮಾತನಾಡಿಸಿದ್ದರು. ಅಷ್ಟೇ ಅಲ್ಲ ಹವ್ಯಕ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾವು ಬೆರಗಿನಿಂದ ಕರ್ನಾಟಕ ಎಂದೆವು. `ಅದು ಗೊತ್ತಾತು. ಕರ್ನಾಟಕದಲ್ಲಿ ಎಲ್ಲಿ?' ಎಂದರು. ನಾನು ಹಾಗೂ ಸಂಜಯ ಸಿರಸಿ ಎಂದರೆ ಪ್ರಶಾಂತ ಯಲ್ಲಾಪುರ ಎಂದ.
           `ಬೇಗ.. ನಿಮ್ಮ ಧ್ಯಾನ ಮುಗಿಸಿ ಬನ್ನಿ. ಒಳಗೆ ಪ್ರಸಾದ ಕೊಡುತ್ತೇನೆ..' ಎಂದರು ವೃದ್ಧರು. `ನಿಮಗೆ ಎಲ್ಲಾಯಿತು? ನಮ್ಮನ್ನು ಹೇಗೆ ಗುರುತಿಸಿದಿರಿ..' ಎಂದು ಸಂಜಯ ಕೇಳಿಯೇಬಿಟ್ಟ. `ನನಗೆ ಕುಮಟಾ ಆಯಿತು. ನಿಮ್ಮ ಬಟ್ಟೆ ಹಾಗೂ ನಿಮ್ಮ ಸಂಸ್ಕೃತಿಯೇ ನನಗೆ ಎಲ್ಲವನ್ನು ಹೇಳಿತು. ಬನ್ನಿ ಒಳಗೆ..' ಎಂದವರೇ ನಮ್ಮನ್ನು ಒಳಕ್ಕೆ ಕರೆದೊಯ್ದರು. ಆ ಕುಟಿಯ ಒಳಗೆ ಸಾಮಾನ್ಯರಿಗೆ ಯಾರಿಗೂ ಪ್ರವೇಶವಿರಲಿಲ್ಲ. ಆದರೆ ಆ ವೃದ್ಧರು ನಮ್ಮನ್ನು ಒಳಕ್ಕೆ ಕರೆದೊಯ್ದಿದ್ದರು. ಒಳಕ್ಕೆ ಹೋದವರೇ ಎರಡೂ ಬೊಗಸೆಯನ್ನು ಹಿಡಿಯಿರಿ ಎಂದರು. ಕೈಯಲ್ಲಿ ದೊಡ್ಡದೊಂದು ಬುತ್ತಿಯನ್ನು ನೀಡಿದರು. ತಿನ್ನಿ ಎಂದರು. ಆಹ್. ಎಂತಾ ಮಧುರವಾಗಿತ್ತು ಅದು ಅಂತೀರಿ. ಸಕ್ಕರೆ, ಬೆಣ್ಣೆಯ ಮಿಶ್ರಣವಾದ ಅಂತಹ ಆಹಾರವನ್ನು ಯತಿವರೇಣ್ಯರು ಸೇವಿಸುತ್ತಾರಂತೆ. ತಿಂದು ಮುಗಿಸುತ್ತಿದ್ದಂತೆಯೇ ಬಾಳೆಯ ಹಣ್ಣಿನ ಪಾಯಸವನ್ನು ಬೊಗಸೆ ತುಂಬಾ ನೀಡಿದರು. ಕುಡಿದೆವು. ನಾವು ಬೆಳಿಗ್ಗೆ ಏನನ್ನೂ ತಿಂದಿರಲಿಲ್ಲ. ಆದರೆ ಆ ವೃದ್ಧರು ನೀಡಿದ ಆ ಪ್ರಸಾದವಿದೆಯಲ್ಲ ಅದು ನಮಗೆ ಹಸಿವನ್ನು ಮರೆಸಿತು. ಜೀವನದಲ್ಲಿ ಇಷ್ಟು ರುಚಿಕರವಾದದ್ದನ್ನು ತಿಂದಿಲ್ಲವೇನೋ ಎನ್ನಿಸಿತು. ಸಜ್ಜನಘಡದಲ್ಲಿ ಎಲ್ಲವನ್ನೂ ನೋಡಿಕೊಂಡು ಬನ್ನಿ. ಒಂದು ವೇಳೆ ಇಲ್ಲಿಯೇ ಉಳಿಯುತ್ತೀರಿ ಎಂದಾದರೆ ಈ ಕುಟೀರಕ್ಕೆ ಬನ್ನಿ ಎನ್ನುವ ವೃದ್ಧರು ಹೇಳುತ್ತಿದ್ದಂತೆಯೇ ನಾವು ಶ್ರೀಧರ ಕುಟೀರದಿಂದ ಹೊರಕ್ಕೆ ಬಂದಿದ್ದೆವು.

(ಮುಂದುವರಿಯುತ್ತದೆ)