Friday, November 27, 2015

ಅಘನಾಶಿನಿ ಕಣಿವೆಯಲ್ಲಿ -29

`ಯಾರು ನೀನು?' ಹುಚ್ಚನ ಮಾತಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದ ಪ್ರದೀಪ.
`ನಾನು ಯಾರು ಬೇಕಾದರೂ ಆಗಿರಲಿ. ಅದು ಮುಖ್ಯವಲ್ಲ. ನಿಮ್ಮ ಕೆಲಸ ಏನಿದೆಯೋ ಅದರ ಕಡೆಗೆ ಗಮನ ಹರಿಸಿಕೊಳ್ಳಿ.. ನಾನು ಹುಚ್ಚ ಎಂದಷ್ಟೇ ನಿಮ್ಮ ಗಮನದಲ್ಲಿರಲಿ. ಅದು ಸಾಕು ಬಿಡಿ..' ಎಂದ ಆ ಹುಚ್ಚ.
`ಇದು ಯಾಕೋ ಸರಿ ಕಾಣುತ್ತಿಲ್ಲ. ನೀನು ಯಾರು? ನಮ್ಮ ಕೆಲಸದ ಬಗ್ಗೆ ನೀನೇಕೆ ಹೇಳುತ್ತಿದ್ದೀಯಾ?' ಈ ಸಾರಿ ಉತ್ತರ ನೀಡುವ ಸರದಿ ವಿಕ್ರಮನದ್ದಾಗಿತ್ತು.
`ಆಗಲೇ ಹೇಳಿದೆನಲ್ಲ. ನಾನು ಹುಚ್ಚ. ನೀವೇ ನನ್ನನ್ನು ಉಂಚಳ್ಳಿ ಜಲಪಾತದ ಒಡಲಿನಿಂದ ಕಾಪಾಡಿಕೊಂಡು ಬಂದಿದ್ದೀರಲ್ಲ. ನೋಡಿ ನಾನು ಯಾರು ಬೇಕಾದರೂ ಆಗಿರಲಿ. ನಿಮಗೆ ತೊಂದರೆ ಕೊಡುವವನು ನಾನಲ್ಲ. ನಿಮಗೆ ಸಹಾಯ ಮಾಡುವುದು ನನ್ನ ಮುಖ್ಯ ಕೆಲಸ. ನನ್ನಿಂದ ನಿಮಗೆ ಯಾವ ರೀತಿಯ ಸಹಾಯ ಬೇಕು ಎನ್ನುವುದನ್ನು ನೀವು ಹೇಳಿ. ಹೇಳದಿದ್ದರೂ ತೊಂದರೆಯೇನಿಲ್ಲ ಬಿಡಿ..' ಎಂದ ಹುಚ್ಚ.
ಎಲ್ಲರಿಗೂ ಒಮ್ಮೆ ಅಚ್ಚರಿ. ಈತ ನಿಜವಾಗಿಯೂ ಹುಚ್ಚನೇ? ಅಥವಾ ಹುಚ್ಚನ ವೇಷದಲ್ಲಿರುವ ಯಾವುದಾದರೂ ವ್ಯಕ್ತಿಯೋ? ನಮ್ಮ ಮೇಲೆ ನಿಗಾ ವಹಿಸುವ ಸಲುವಾಗಿ ಯಾರಾದರೂ ಬೆನ್ನು ಬಿದ್ದಿದ್ದಾರೋ ಹೇಗೆ ಎನ್ನುವ ಆಲೋಚನೆಗಳೆಲ್ಲ ಮನಸ್ಸಿನಲ್ಲಿ ಮೂಡಿದವು. ಅಷ್ಟರಲ್ಲಿಯೇ ಇನ್ನೊಂದು ಘಟನೆ ನಡೆದು ಹೋಗಿತ್ತು. `ನೋಡಿ ನಿಮ್ಮೆದುರು ಇರುವ ಸವಾಲು ಸಣ್ಣದಲ್ಲ. ಹುಷಾರಾಗಿರಿ. ನೀವು ಈಗಾಗಲೇ ಸಿಂಹದ ಬಾಯಿಗೆ ಕೈ ಹಾಕಿದ್ದೀರಿ. ಈಗಾಗಲೇ ಒಬ್ಬನ ಸಾವಿಗೆ ಕಾರಣರಾಗಿದ್ದೀರಿ. ಶತ್ರು ಸುಮ್ಮನೇ ಇರುವುದಿಲ್ಲ. ನಿಮ್ಮೆದುರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾನೆ. ಪ್ರತಿಯೊಬ್ಬರೂ ಎಚ್ಚರದಿಂದ ಇರಿ. ಭಯ ಬೇಡ. ನಿಮ್ಮ ಚಲನವಲನಗಳನ್ನು ನಾನು ಸಾಧ್ಯವಾದಷ್ಟೂ ಗಮನಿಸುತ್ತಲೇ ಇರುತ್ತೇನೆ.' ಎಂದು ಹೇಳಿದ ಹುಚ್ಚ ಇದ್ದಕ್ಕಿದ್ದಂತೆ ಗಾಡಿಯಿಂದ ಕೆಳಗೆ ಜಿಗಿದೇ ಬಿಟ್ಟ.
ಹುಚ್ಚ ಗಾಡಿಯಿಂದ ಕೆಳಗೆ ಜಿಗಿಯಬಹುದು ಎನ್ನುವುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಾಹನ ಚಾಲನೆ ಮಾಡುತ್ತಿದ್ದ ವಿನಾಯಕ ಹಟಾತ್ತನೆ ಗಾಡಿ ಬ್ರೇಕ್ ಹಾಕಿದ. ಗಾಡಿಯಲ್ಲಿ ಕುಳಿತಿದ್ದವರೆಲ್ಲ ಒಮ್ಮೆ ಮುಗ್ಗರಿಸಿಬಿದ್ದರು. ಪ್ರದೀಪ ಕೂಡ ಹುಚ್ಚನ ಹಿಂದೆ ಅವನಷ್ಟೇ ವೇಗವಾಗಿ ಗಾಡಿಯಿಂದ ಜಿಗಿದಿದ್ದ. ಅವನ ಹಿಂದೆ ವಿಕ್ರಮ ಕೂಡ ಇಳಿದಿದ್ದ. ಹುಚ್ಚನ ಬಗ್ಗೆ ಬಹಳ ಅಚ್ಚರಿಯಾಗಿತ್ತು. ಆತನನ್ನು ಹಿಡಿಯುವುದು ವಿಕ್ರಮ ಹಾಗೂ ಪ್ರದೀಪನ ಉದ್ದೇಶವಾಗಿತ್ತು. ಆದರೆ ವಾಹನದಿಂದ ಜಿಗಿದಿದ್ದ ಹುಚ್ಚ ಪಕ್ಕದ ಕಾಡೊಳಕ್ಕೆ ನುಗ್ಗಿ ಮರೆಯಾಗಿ ಬಿಟ್ಟಿದ್ದ. ಪ್ರದೀಪ ಹಾಗೂ ವಿಕ್ರಮ ಕೂಡ ಹುಚ್ಚನಷ್ಟೇ ವೇಗವಾಗಿ ಕಾಡೊಳಗೆ ನುಗ್ಗಿದ್ದರೂ ಅರೆಘಳಿಗೆಯಲ್ಲಿ ಆತ ತಪ್ಪಿಸಿಕೊಂಡು ಬಿಟ್ಟಿದ್ದ. `ಛೇ.. ಸ್ವಲ್ಪದರಲ್ಲಿ ತಪ್ಪಿಸಿಕೊಂಡ..' ಎಂದು ಗೊಣಗಿದ ಪ್ರದೀಪ.
`ಇಂವ ಯಾರು ಮಾರಾಯಾ. ನಮ್ಮ ಕೆಲಸದ ಬಗ್ಗೆ ಅಷ್ಟು ನಿಖರವಾಗಿ ಹೇಳ್ತಾ ಇದ್ದ. ಇಂವ ಹುಚ್ಚ ಅಂತೂ ಅಲ್ಲ. ಕಾಡುಗಳ್ಳರ ಬಗ್ಗೆ ಸರ್ಕಾರ ಏನಾದರೂ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದೆಯಾ? ಅವನು ಇವನೇನಾ? ನಮ್ಮ ಕಾರ್ಯದ ಬಗ್ಗೆ ಎಷ್ಟು ಸಲೀಸಾಗಿ ಹೇಳ್ತಾ ಇದ್ದ. ಒಂದ್ ಸಾರಿ ಎಷ್ಟ್ ಆಶ್ಚರ್ಯ ಆಗಿತ್ತು ಮಾರಾಯಾ..' ಎಂದ ವಿಕ್ರಮ.
`ಹುಂ. ನಂಗೂ ಹಂಗೆ ಅನ್ನಿಸ್ತಾ ಇದ್ದು. ಖಂಡಿತ ಇಂವ ಹುಚ್ಚನಂತೂ ಅಲ್ಲ. ನೋಡು ಏನೇ ಆಗಲಿ, ಇಂವ ಯಾರೇ ಆಗಿರಲಿ, ಇನ್ನುಮುಂದೆ ನಾವು ಬಹಳ ಹುಷಾರಾಗಿ ಇರಬೇಕು. ಅಷ್ಟೇ ಅಲ್ಲ, ನಮ್ಮ ಕೆಲಸವನ್ನು ಇನ್ನಷ್ಟು ತ್ವರಿತವಾಗಿ ಮಾಡಿ ಮುಗಿಸಬೇಕು. ಇಲ್ಲ ಅಂದರೆ ಸಲ್ಲದ ಸಮಸ್ಯೆಯನ್ನು ತಲೆಯ ಮೇಲೆ ಎಳೆದುಕೊಂಡಂತೆ ಆಗುತ್ತದೆ..' ಎಂದ ಪ್ರದೀಪ.
`ಹೌದು. ನನಗೂ ಹಾಗೆಯೇ ಅನ್ನಿಸುತ್ತಿದೆ. ಅಷ್ಟೇ ಅಲ್ಲ ಈ ಕೆಲಸವನ್ನು ಯಾಕಾದರೂ ಶುರು ಹಚ್ಚಿಕೊಂಡೆನೋ ಎಂದೂ ಅನ್ನಿಸಲು ಆರಂಭಿಸಿದೆ ನೋಡು. ಒಂದು ಸಾರಿ ಕೆಲಸ ಮುಗಿದರೆ ಸಾಕು. ಅಷ್ಟಾಗಿಬಿಟ್ಟಿದೆ...' ವಿಕ್ರಮ ನಿಟ್ಟುಸಿರಿನಿಂದ ಹೇಳಿದ್ದ.
`ಮುಗಿಸೋಣ. ಬೇಗನೇ ಮುಗಿಸಿಬಿಡೋಣ. ಏನ್ ಬೇಕಾದರೂ ಆಗಲಿ..' ಎಂದ ವಿಕ್ರಮ.
ವಾಪಾಸು ಕಾರಿನ ಬಳಿ ಬಂದಕೂಡಲೇ ವಿನಾಯಕ `ಏನಾಯ್ತು? ಸಿಕ್ಕಿದ್ನಾ ಅವ?' ಎಂದು ಕೇಳಿದ. ಇಬ್ಬರೂ ಇಲ್ಲ ಎಂದು ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ `ಅಂವ ಯಾರು? ನಿಮ್ಮ ಕೆಲಸದ ಬಗ್ಗೆ ಏನೋ ಹೇಳಿದನಲ್ಲ. ನಿಜ ಹೇಳಿ. ನೀವು ಯಾವ ಉದ್ದೇಶದಿಂದ ಈ ಕಡೆಗೆ ಬಂದಿದ್ದೀರಿ? ನಿಮಗೆ ಶತ್ರುಗಳು ಇರಲು ಸಾಧ್ಯವಾ? ಆ ಹುಚ್ಚ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದನಲ್ಲ. ಅದರ ಅರ್ಥ ಏನು? ಏನೋ ಮುಚ್ಚಿಡುತ್ತಿದ್ದೀರಿ.. ಹೇಳೀ..' ಎಂದಳು.
`ಏನು ಇಲ್ಲ ಮಾರಾಯ್ತಿ. ಈ ಮರಗಳ್ಳರ ಬಗ್ಗೆ ಹೇಳಿದ್ದು ಆತ. ದಂಟಕಲ್ಲಿನಲ್ಲಿ ಮರ ಕಡಿಯುತ್ತಿದ್ದ ಒಬ್ಬಾತನ ಸಾವಿಗೆ ನಾವು ಕಾರಣರಾದೆವಲ್ಲ. ಅದಕ್ಕೆ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಮರಗಳ್ಳರು ಸಜ್ಜಾಗಿದ್ದಾರಂತೆ. ಇದನ್ನೇ ಅವನು ಹೇಳಿದ್ದು..' ವಿಕ್ರಮ ಸಮಜಾಯಿಶಿ ನೀಡಿದ.
`ಅವ ಹುಚ್ಚ. ನಿಮ್ಮ ಬಗ್ಗೆ ಅವನಿಗೆ ಗೊತ್ತಿಲ್ಲ. ಅವ ಯಾಕೆ ನಿಮ್ಮ ಬಳಿ ಬಂದು ಹೇಳಬೇಕು? ಅವನಿಗೆ ನಿಮ್ಮ ಬಳಿ ಹೇಳುವುದರಿಂದ ಆಗುವ ಲಾಭ ಏನು?..?' ರಮ್ಯ ಪಟ್ಟು ಬಿಡದೇ ಕೇಳಿದ್ದಳು.
ನಡುವೆ ಬಾಯಿ ಹಾಕಿದ ವಿನಾಯಕ `ನಿಂಗ್ ಗೊತ್ತಾಗ್ತಿಲ್ಲೆ ಸುಮ್ಮಂಗ್ ಕುತ್ಕ ನೋಡನ. ಅಂವ ಹುಚ್ಚ ಇದ್ದಿಕ್ಕು ಅಥವಾ ಹುಚ್ಚ ಅಲ್ಲದೇ ಇದ್ದಿಕ್ಕು. ಮರಗಳ್ಳರ ಪತ್ತೆಗೆ ಸರ್ಕಾರ ಯಾರನ್ನಾದರೂ ನೇಮಕ ಮಾಡಿಕ್ಕು. ಆ ಅಧಿಕಾರಿಯೇ ಈ ರೀತಿ ಮಾರು ವೇಷದಲ್ಲಿ ಓಡಾಟ ನಡೆಸುತ್ತಿರಬಹುದು. ಆತನಿಗೆ ನಮ್ಮೂರಿನಲ್ಲಿ ಮರಗಳ್ಳರ ಮೇಲೆ ಹಲ್ಲೆ ನಡೆದು, ಒಬ್ಬ ಕಳ್ಳ ನಾಟಾ ಸಾಗಣೆದಾರ ಸತ್ತಿರುವ ಬಗ್ಗೆ ಗೊತ್ತಾಗಿರಲಕ್ಕು. ನಮ್ಮ ಬಗ್ಗೆ ಮಾಹಿತಿ ಕಲೆ ಹಾಕಿರಲಕ್ಕು. ಅದಕ್ಕೆಂತಕ್ ಈ ಥರ ತಲೆಕೆಡಿಸ್ಕಳ್ತೆ?' ಎಂದು ದಬಾಯಿಸಿದ. ರಮ್ಯ ಏನೋ ಹೇಳಲು ಮುಂದಾದವಳು ಹಾಗೆಯೇ ಸುಮ್ಮನಾದಳು.
ಪ್ರತಿಯೊಬ್ಬರಲ್ಲೂ ಹಲವಾರು ಪ್ರಶ್ನೆಗಳಿದ್ದವು. ಯಾವುದನ್ನೂ ಕೇಳಿದರೂ ಸ್ಪಷ್ಟ ಉತ್ತರ ಸಿಗುತ್ತದೆ ಎನ್ನುವ ನಿಂಬಿಕೆ ಇಲ್ಲವಾದ್ದರಿಂದ ಪ್ರತಿಯೊಬ್ಬರ ಪ್ರಶ್ನೆಗಳೂ ಬಾಯಿಂದ ಹೊರಗೆ ಬರಲೇ ಇಲ್ಲ. ಪ್ರತಿಯೊಬ್ಬರೂ ಮೌನವಾಗಿಯೇ ಕಾರಿನಲ್ಲಿ ಕುಳಿತಿದ್ದರು. ವಿನಾಯಕ ಮುಂದಕ್ಕೆ ಕಾರನ್ನು ಚಾಲನೆ ಮಾಡಿದ.
ದಾರಿ ಮಧ್ಯದಲ್ಲಿ ಕೆಲ ದಿನಗಳ ಹಿಂದೆ ಮರಗಳ್ಳರಿಗೂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಜಟಾಪಟಿ ನಡೆದ ಸ್ಥಳ ಬಂದಿತು. ಅಲ್ಲೊಂದು ಕಡೆ ನಿರ್ಮಾಣ ಮಾಡಲಾಗಿದ್ದ ಚೆಕ್ ಪೋಸ್ಟ್ ಕಿತ್ತು ಹೋಗಿತ್ತು. ಅದನ್ನು ನೋಡಿಕೊಂಡು ಮುಂದಕ್ಕೆ ನಡೆದರು. ಒಂದಿಬ್ಬರು ಅರಣ್ಯ ಇಲಾಖೆಯ ಕಾವಲುಗಾರರು ಮಿಕಿ ಮಿಕಿ ನೋಡುತ್ತ ನಿಂತಿದ್ದರಷ್ಟೇ. ಮರಳಿ ದಂಟಕಲ್ಲನ್ನು ತಲುಪುವ ವೇಳೆಗೆ ಸೂರ್ಯ ಆಗಲೇ ಬಾನಂಚಿಗೆ ಜಾರಿದ್ದ.

(ಮುಂದುವರಿಯುತ್ತದೆ)

No comments:

Post a Comment