Monday, November 2, 2015

ಅಘನಾಶಿನಿ ಕಣಿವೆಯಲ್ಲಿ -28

              ವಿಕ್ರಮ ಸಧ್ಯದಲ್ಲಿಯೇ ಪ್ರಪೋಸ್ ಮಾಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಹೀಗೆ ಉಂಚಳ್ಳಿ ಜಲಪಾತದಲ್ಲಿ ಪ್ರಪೋಸ್ ಮಾಡುತ್ತಾನೆ ಎನ್ನುವುದನ್ನು ವಿಜೇತಾ ನಿರೀಕ್ಷಿಸಿರಲಿಲ್ಲ. ತಕ್ಷಣವೇ ಒಪ್ಪಿಕೊಂಡು ಬಿಡಲಾ ಎಂದು ಆಲೋಚಿಸಿದಳು ವಿಜೇತಾ. ಆದರೆ ವಿಕ್ರಮನನ್ನು ಸ್ವಲ್ಪ ಆಟ ಆಡಿಸೋಣ, ತಕ್ಷಣಕ್ಕೆ ಒಪ್ಪಿಕೊಳ್ಳಬಾರದು ಎಂದುಕೊಂಡಳು. `ನೀನು ನನ್ನ ಲವ್ ಮಾಡ್ತಾ ಇದ್ಯಾ? ಜೋಕ್ ಮಾಡ್ತಾ ಇದ್ದೀಯಾ ಅಥವಾ ತಮಾಷೆಯಾ?' ಎಂದು ಕೇಳಿದಳು ವಿಜೇತಾ.
            `ತಮಾಷೆಯಲ್ಲ. ಇದು ನಿಜ. ಬೇಗ ಹೇಳು ಪ್ಲೀಸ್. ಏನೇ ಇರಲಿ, ನಿನ್ನ ನಿರ್ಧಾರ ತಕ್ಷಣ ತಿಳಿಸು..' ವಿಕ್ರಮ ಗೋಗರೆಯುವ ರೀತಿಯಲ್ಲಿ ಹೇಳಿದ.
             `ನಿಜವಾಗಿಯೂ ನನಗೆ ಆಶ್ಚರ್ಯ ಆಗ್ತಾ ಇದ್ದು ನೋಡು. ಖಂಡಿತ ನೀನು ಈ ರೀತಿ ಆಲೋಚನೆ ಮಾಡ್ತೀಯಾ ಅಂತ ಅಂದ್ಕೊಂಡಿರ್ಲಿಲ್ಲ..'
             `ಅಂದರೆ.. ನಿಂಗೆ ಇಷ್ಟ ಇಲ್ಲವಾ..?' ಎಂದು ಕೇಳಿದ ವಿಕ್ರಮ ಧ್ವನಿಯಲ್ಲಿ ನಿರಾಸೆಯ ಪದರವಿತ್ತು.
            `ಉಹೂಂ. ಇಷ್ಟವಿಲ್ಲ ಅಂತ ಹೇಳಲಾರೆ. ಹಾಗಂತ ಹೂ ಅನ್ನೋದಕ್ಕೂ ಆಗ್ತಾ ಇಲ್ಲ. ಸ್ವಲ್ಪ ಗೊಂದಲ. ನನಗೆ ಆಲೋಚನೆ ಮಾಡೋಕೆ ಸ್ವಲ್ಪ ಟೈಂ ಬೇಕು. ಇನ್ನೊಂದೆರಡು, ಮೂರು ದಿನಗಳಲ್ಲಿ ಹೇಳಲಾ?' ಕೇಳಿದಳು ವಿಜೇತಾ.
           `ಹೂಂ. ಆದರೆ ಬೇಗ ಹೇಳು ಪ್ಲೀಸ್. ಕಾಯುವಿಕೆ ಕಷ್ಟ..' ಎಂದವನು ಪೂರ್ತಿಯಾಗಿ ಶರಣಾದನೋ ಎಂಬಂತಿದ್ದ.
            ಅಷ್ಟರಲ್ಲಿ ಜಲಪಾತದ ಬುಡದ ಗುಂಡಿಯಲ್ಲಿ ಈಸು ಬಿದ್ದಿದ್ದ ವಿನಾಯಕ ಮೇಲಕ್ಕೆ ಬಂದು ವಿಕ್ರಮನ ಬಳಿ `ಏನಪ್ಪಾ.. ಏನ್ ವಿಷ್ಯ. ಹೇಳಿದ್ಯಾ? ಹಣ್ಣೋ.. ಕಾಯೋ..' ಎಂದ.
             ವಿಜೇತಾಳಿಗೆ ಒಮ್ಮೆಲೆ ಅಚ್ಚರಿ. ಅರೇ ಈ ವಿಷ್ಯ ಎಲ್ಲರಿಗೂ ಗೊತ್ತಿದೆಯಲ್ಲ. ನನಗೆ ಮಾತ್ರ ಗೊತ್ತಿರಲಿಲ್ಲ. ಅನುಮಾನ ಇತ್ತಾದರೂ ಎಲ್ಲರಿಗೂ ಗೊತ್ತಾಗಿರಬಹುದು ಎಂದುಕೊಂಡಿರಲಿಲ್ಲವಲ್ಲ ಎಂದುಕೊಂಡಳು. `ಯಾಕಪ್ಪಾ.. ಏನಾಯ್ತು.. ಸಪ್ಪಗಿದ್ದೀಯಾ..' ವಿನಾಯಕ ವಿಕ್ರಮನನ್ನು ಛೇಡಿಸಿದ.
            `ನಾನು ಹೇಳೋದನ್ನೆಲ್ಲ ಹೇಳಿದ್ದಿ ನೋಡಿ ವಿನು. ಸ್ವಲ್ಪ ಟೈಂ ಬೇಕು ಅಂತ ಹೇಳಿದ್ದು. ಇಷ್ಟು ದಿನ ಕಾದು ಕುಳಿತಿದ್ದಿ. ಇನ್ನೊಂದೆರಡು ದಿನ ಕಾಯೋದು ಕಷ್ಟವಾ?..' ವಿಕ್ರಮ ಹೇಳಿದ. ನಾಚಿದ ವಿಜೇತಾ ದೂರದಲ್ಲಿ ನೀರಾಟವಾಡುತ್ತಿದ್ದ ರಮ್ಯಳ ಬಳಿ ಹೋಗಿ ಕುಳಿತುಕೊಂಡಳು.
            ಪ್ರದೀಪ, ವಿಷ್ಣು ಕೂಡ ಈಸು ಬಿದ್ದವರು ಮೇಲೆದ್ದು ಬಂದು ಬಿಸಿಲಿಗೆ ಮೈಯೊಡ್ಡಿ ನಿಂತರು. ವಿಕ್ರಮ ಹಾಗೂ ವಿನಾಯಕ ಇಬ್ಬರೂ ಮಾತನಾಡುತ್ತಲೇ ಉಂಚಳ್ಳಿ ಜಲಪಾತದ ಛಾಯಾಚಿತ್ರಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆರಂಭಿಸಿದರು.
ಜಲಪಾತದ ಇತಿಹಾಸವೂ ವಿಶಿಷ್ಟವಾಗಿದೆ. ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುವುದನ್ನು ನೋಡುವುದೇ ಚಂದ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಜಲಪಾತ ಚೈತನ್ಯದಿಂದ ಮನಸೆಳೆಯುತ್ತದೆ.
               ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಾರೆ. ವಿಕ್ರಮ ಹಾಗೂ ಗೆಳೆಯರು ಜಲಪಾತ ನೋಡಲು ಹೋಗಿದ್ದಾಗ ಮಾತ್ರ ಸಾಕಷ್ಟು ಜನರಿರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಇದ್ದರು ಅಷ್ಟೇ.
              `ಹಸಿವಾಗ್ತಾ ಇದೆ. ಕಟ್ಟಿಸಿಕೊಂಡು ಬಂದಿರುವ ಫಲಾವ್ ನ ಎಲ್ಲಾ ತೆಗಿರಿ..' ಎಂದು ರಮ್ಯ ಕೂಗಿದವಳೇ ದೊಡ್ಡದೊಂದು ಬಂಡೆಯ ಮೇಲೆ ಏರಿ ತಿಂಡಿ ತಿನ್ನಲು ತಯಾರಾಗಿಬಿಟ್ಟಳು. ಉಳಿದವರಿಗೂ ಅದೇ ಸರಿ ಎನ್ನಿಸಿ ರಮ್ಯಳನ್ನು ಹಿಂಬಾಲಿಸಿದರು. ಮದ್ಯಾಹ್ನದ ವೇಳೆಗೆಲ್ಲಾ ಉಂಚಳ್ಳಿ ಜಲಪಾತವನ್ನು ವೀಕ್ಷಣೆ ಮಾಡಿ, ಆ ಭಾಗದಲ್ಲಿ ಸಂಚಾರ ಮಾಡಿದವರು ಮದ್ಯಾಹ್ನದ ನಂತರ ಜಲಪಾತದ ಬುಡದಿಂದ ಮೇಲಕ್ಕೆ ಬಂದರು. ಅಷ್ಟರಲ್ಲಿ ಜಲಪಾತದ ವೀಕ್ಷಣಾ ಗೋಪುರದಲ್ಲಿ ಚಿಕ್ಕದೊಂದು ಗಲಾಟೆಯೆ ನಡೆದಿತ್ತು.
              ಮಾನಸಿಕ ಅಸ್ವಸ್ತ ವ್ಯಕ್ತಿಯೊಬ್ಬ ಆ ಭಾಗದಲ್ಲಿ ಕೆಲ ದಿವಸಗಳಿಂದ ಓಡಾಡುತ್ತಿದ್ದ. ಉಂಚಳ್ಳಿ ಜಲಪಾತದ ಭಾಗದಲ್ಲಿ ಓಡಾಟ ಮಾಡುತ್ತಿದ್ದ ವ್ಯಕ್ತಿ ಅಲ್ಲಿಗೆ ಆಗಮಿಸುವ ಪ್ರವಾಸಿಗರ ಬಳಿ ಊಟ, ತಿಂಡಿಯನ್ನು ಪಡೆದುಕೊಂಡಿದ್ದ. ಕೆಲ ದಿನಗಳ ಕಾಲ ಸುಮ್ಮನೆ ಇದ್ದ ಆ ವ್ಯಕ್ತಿ ನಂತರದ ದಿನಗಳಲ್ಲಿ ಅಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ಕೆಕ್ಕರಿಸಿ ನೋಡುವುದು, ತೊಂದರೆ ಕೊಡುವುದು ಈ ಮುಂತಾದ ಕೆಲಸಗಳನ್ನು ಮಾಡಲು ಆರಂಭಿಸಿದ. ಇದರಿಂದ ಪ್ರವಾಸಿಗರು ಬೇಸತ್ತಿದ್ದರು. ಸ್ಥಳೀಯರಿಗೆ ಈ ಕುರಿತು ಹೇಳಲಾಗಿ ಒಂದೆರಡು ಸಾರಿ ಮಾನಸಿಕ ಅಸ್ವಸ್ತ ವ್ಯಕ್ತಿಯನ್ನು ಪಕ್ಕದೂರಿಗೆ ಗಡಿಪಾರು ಮಾಡಿ ಬಂದಿದ್ದರು. ಆದರೆ ಹೀಗೆ ಗಡಿಪಾರು ಮಾಡಿ ಬಂದ ಒಂದೆರಡು ದಿನಗಳ ಒಳಗಾಗಿ ಆ ವ್ಯಕ್ತಿ ಮತ್ತೆ ಅಲ್ಲಿ ಪ್ರತ್ಯಕ್ಷನಾಗುತ್ತಿದ್ದ.
          ಮೂರ್ನಾಲ್ಕು ಸಾರಿ ಈ ರೀತಿ ನಡೆದ ನಂತರ ಆ ವ್ಯಕ್ತಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರೊಬ್ಬರ ಜೊತೆ ಅಸಹ್ಯವಾಗಿ ವರ್ತನೆ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಪ್ರವಾಸಿಗರು ಆತನ ಮೇಲೆ ಹಲ್ಲೆ ಮಾಡಿದ್ದರು. ಪರಿಣಾಮವಾಗಿ ಗಲಾಟೆ ನಡೆದಿತ್ತು. ಮಾನಸಿಕ ಅಸ್ವಸ್ತ ವ್ಯಕ್ತಿ ಹೊಡೆತ ತಾಳಲಾಗದೇ ಕೂಗಾಡುತ್ತಿದ್ದ. ಜೊತೆ ಜೊತೆಯಲ್ಲಿಯೇ ಅವಾಚ್ಯ ಶಬ್ದಗಳಿಂದ ನಿಂದನೆಯನ್ನೂ ಮಾಡುತ್ತಿದ್ದ. ಇದನ್ನು ನೋಡಿದ ಪ್ರದೀಪ ಗಲಾಟೆಯನ್ನು ಬಿಡಿಸಲು ಮುಂದಾದ. ಸಿಟ್ಟಿಗೆದ್ದವರನ್ನು ಸಮಾಧಾನ ಮಾಡಿದ. ಅಷ್ಟೇ ಅಲ್ಲದೇ ಹುಚ್ಚನನ್ನು ಹಿಡಿದುಕೊಂಡು ಬಂದ. ಬಂದವನೇ ಅವನನ್ನು ವಿಕ್ರಮನ ಕಾರಿನಲ್ಲಿ ಕೂರಿಸಿದ.
           ವಿಕ್ರಮನಿಗೆ ಇದು ಅಸಹ್ಯ ಎನ್ನಿಸಿತು. ಯಾರೋ ಹುಚ್ಚನನ್ನು ತಂದು ಗಾಡಿಯಲ್ಲಿ ಕೂರಿಸಿದನಲ್ಲ ಎನ್ನಿಸಿತು. ಸಿಟ್ಟಿನಿಂದ ಪ್ರದೀಪನ ಬಳಿ ಕೂಗಾಡಲು ಆರಂಭಿಸಿದ. `ಇದೆಂತ ಹುಚ್ಚಾಟ ನಿಂದು? ಅವನನ್ನು ಗಾಡಿಯಲ್ಲಿ ಹತ್ತಿಸಿದ್ದು. ಛೇ. ಮೊದ್ಲು ಇಳಿಸು..' ಎಂದ.
            `ಇಲ್ಲ ಮಾರಾಯಾ.. ಅವನನ್ನು ಬೇರೆ ಎಲ್ಲಾದರೂ ಕರೆದುಕೊಂಡು ಹೋಗಿ ಬಿಡೋಣ. ಅಥವಾ ಯಾವುದಾದರೂ ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಿ ಬಿಡೋಣ. ಇಲ್ಲಿದ್ದರೆ ಅವನನ್ನು ಹೊಡೆದು ಕೊಂದೇ ಬಿಡುತ್ತಾರೆ. ಸರಿಯಲ್ಲ ಅದು. ಮಾನವೀಯತೆಯೂ ಅಲ್ಲ. ಮೊದಲು ಬೇರೆ ಎಲ್ಲಾದರೂ ಬಿಡೋಣ.. ನಡಿ. ಗಾಡಿ ಚಾಲೂ ಮಾಡು..' ಎಂದ.
              ಅಸಮಧಾನದಿಂದಲೇ ವಿಕ್ರಮ ಗಾಡಿಯನ್ನು ಚಾಲೂ ಮಾಡಿದ. ಗೊಣಗುತ್ತಲೇ ಉಳಿದವರೂ ಹತ್ತಿಕೊಂಡರು. ಉಂಚಳ್ಳಿ ಜಲಪಾತದಿಂದ ಅಂಕುಡೊಂಕಿನ ಹಾದಿಯಲ್ಲಿ ಮರಳಲು ಆರಂಭಿಸಿದರು. `ಏ.. ಏನ್ರೋ.. ನಿಮಗೆ ಮಾಡಲಿಕ್ಕೆ ಬೇರೆ ಕೆಲ್ಸಾ ಇಲ್ಲವಾ? ಹೋಗಿ ಹೋಗಿ ಈ ಕಾಡಿಗೆ ಬಂದು ಕಳ್ಳರನ್ನು ಹುಡುಕಲು ಹೊರಟಿದ್ದೀರಾ? ತಲೆ ಸರಿ ಉಂಟಾ? ಎಚ್ಚರ ತಪ್ಪಿದರೆ ಮರಗಳ್ಳರ ಗುಂಪು ನಿಮ್ಮನ್ನು ಕಡಿದು ಹಾಕಿ ಬಿಡಬಹುದು. ಹುಷಾರು..' ಎಂದು ಇದ್ದಕ್ಕಿದ್ದಂತೆ ಆ ಹುಚ್ಚ ಮಾತನಾಡಿದಾಗ ಒಮ್ಮೆಗೆ ಕಾರಲ್ಲಿದ್ದವರು ಬೆಚ್ಚಿ ಬಿದ್ದರು.

(ಮುಂದುವರಿಯುತ್ತದೆ..)

No comments:

Post a Comment