Thursday, October 29, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -3

           ಆಟೋದಲ್ಲಿ ಲಗೆಜ್ ಹೇರುವ ಜಾಗದಲ್ಲಿ ನಾನು ಕುಳಿತಿದ್ದೆ. ಉಸಿರು ಕಟ್ಟುತ್ತಿತ್ತು. ಆಟೋ ಓಡಿಸುತ್ತಿದ್ದ ಚಾಲಕನ ಬಳಿ ಸಂಜಯ ಮಾತಿಗೆ ನಿಂತಿದ್ದ. ಸಜ್ಜನಘಡಕ್ಕೆ ಹೋಗುವುದು ಹೇಗೆ ಎಂಬ ವಿವರಗಳನ್ನು ಕೇಳಲು ಆರಂಭಿಸಿದ್ದ. ಸಜ್ಜನಘಡಕ್ಕೆ ಬಸ್ ವ್ಯವಸ್ಥೆ ಬಹಳ ಕಡಿಮೆ ಇದೆಯೆಂದೂ, ಯಾವುದಾದರೂ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋಗಬಹುದೆಂದೂ ಆಟೋ ಚಾಲಕ ತಿಳಿಸಿದ. ಮಾತಿಗಿಳಿದಿದ್ದ ಸಂಜಯ ಆತನ ಹೆಸರು ನೀಲೇಶ ಮಂತ್ರಿ ಎಂಬುದನ್ನು ಕೇಳಿ ತಿಳಿದುಕೊಂಡ. ಸಂಜಯ ಆಟೋವನ್ನು ಮಾಡಿಸಿಕೊಂಡು ಹೋದರೆ ಹೇಗೆ ಎನ್ನುವ ಬಗ್ಗೆ ಪ್ರಶಾಂತ ಭಾವನ ಬಳಿ ಕೇಳಿದ. ರೇಟು ಎಷ್ಟಾಗಬಹುದು ಎನ್ನುವ ಚರ್ಚೆ ನಡೆಯಲಾಗಿ ಕೊನೆಗೊಮ್ಮೆ ಆಟೋ ಮಾಡಿಸಿಕೊಂಡು ಹೋಗೋಣ ಎಂದು ಎಲ್ಲರೂ ಒಪ್ಪಿಕೊಂಡರು. 600 ರು. ಗೆ ಮಾತಾಯಿತು.
          ಸತಾರಾ ನಗರಕ್ಕೆ ಬಂದು ಆಟೋ ನಿಲ್ಲಿಸಿ, ಆಟೋದಲ್ಲಿದ್ದ ಎಲ್ಲರನ್ನೂ ಇಳಿಸಿದ ಆಟೋ ದ್ರೈವರ್ ನಮ್ಮನ್ನು ಕೂರಿಸಿಕೊಂಡು ಪೆಟ್ರೂಲ್ ಬಂಕಿನತ್ತ ಸಾಗಿದ. ಬಂಕಿನಲ್ಲಿ ಪೆಟ್ರೂಲ್ ತುಂಬಿಸಿಕೊಂಡವನೇ ನಮ್ಮ ಬಳಿ ದುಡ್ಡು ಕೇಳಿದಾಗ ಒಮ್ಮೆಲೆ ನಮಗೆ ಪಿಗ್ಗಿ ಬಿದ್ದೆವೇನೋ ಅನ್ನುವ ಅನುಮಾನ. ಆದರೆ ಆತನ ಆಟೋವನ್ನು ನಾವು ಇಳಿಯುವ ಕೆಲಸ ಮಾತ್ರ ಮಾಡಲಿಲ್ಲ. ಹಾಗಾಗಿ ಎಲ್ಲೋಗ್ತಾನೆ ನೋಡೋಣ ಎನ್ನುವ ಧೈರ್ಯ ನಮ್ಮಲ್ಲಿ ಮೂಡಿತು.
           ಬೆಳಗಿನ ಜಾವ 5 ಗಂಟೆ ಆಗಿದ್ದ ಕಾರಣ ಸತಾರಾದಲ್ಲಿ ಯಾವುದೇ ಪೆಟ್ರೋಲ್ ಬಂಕುಗಳು ಬಾಗಿಲು ತೆರೆದಿರಲಿಲ್ಲ. ಸತಾರಾ ನಗರಿಯಲ್ಲಿ ಒಂದೆರಡು ಕಡೆಗಳಲ್ಲಿ ಸುತ್ತಾಡಿಸಿದ ಆಟೋ ಡ್ರೈವರ್. ಆಮೇಲೆ ಮಾತು ಶುರು ಮಾಡಿದ ನೋಡಿ. ಇನ್ನು ಸಜ್ಜನಘಡಕ್ಕೆ ಹೋಗುವ ವರೆಗೆ ಅವನ ಬಾಯಲ್ಲಿನ ವಿಷಯವನ್ನೇ ಹೇಳುತ್ತೇನೆ.
          `ಇದು ನೋಡಿ ಸತಾರಾದ ಕ್ರಿಕೆಟ್ ಸ್ಟೇಡಿಯಂ. ಇಲ್ಲಿ ರಣಜಿ ಪಂದ್ಯಗಳು ಜಾಸ್ತಿ ನಡೆಯುತ್ತವೆ.'
          `ಈ ಸತಾರಾ ಇದೆಯಲ್ಲ, ಮಹಾರಾಷ್ಟ್ರದ ದೊಡ್ಡ ಜಿಲ್ಲೆಗಳಲ್ಲಿ ಇದೂ ಒಂದು. ಎಲ್ಲ ಸೌಲಭ್ಯಗಳೂ ಇಲ್ಲಿದೆ. ಸತಾರಾದ ಸುತ್ತಮುತ್ತ ಒಟ್ಟೂ ಏಳು ದೊಡ್ಡ ದೊಡ್ಡ ಬೆಟ್ಟಗಳಿವೆ. ಇವನ್ನು ತಾರಾ ಎಂದು ಕರೆಯುತ್ತಾರೆ. ಏಳು ನಕ್ಷತ್ರಗಳಿರುವ ಈ ಊರಗೆ ಒಂದಾನೊಂದು ಕಾಲದಲ್ಲಿ ಸಾತ್ ತಾರಾ ಎಂದು ಕರೆಯುತ್ತಿದ್ದರಂತೆ. ಇದೇ ಈಗ ಸತಾರಾ ಆಗಿದೆ. ಇದೋ ನೋಡಿ, ಈಗ ಸರಿಯಾಗಿ ಕಾಣುವುದಿಲ್ಲ. ಪೂರ್ತಿ ಬೆಳಕಾಗಲಿ. ಇಲ್ಲೊಂದು ದೈತ್ಯ ಗುಡ್ಡವಿದೆ. ಗುಡ್ಡದ ಮೇಲೊಂದು ಕೋಟೆ. ಅದನ್ನು ಅಜಿಂಕ್ಯತಾರಾ ಎಂದು ಕರೆಯಲಾಗುತ್ತದೆ. ಈ ಸುತ್ತಮುತ್ತಲ ಪ್ರದೇಶಗಳೆಲ್ಲ ಹಿಂದೂ ಸಾಮ್ರಾಟ ಶಿವಾಜಿ ಓಡಾಡಿದ ನಾಡು. ಇಲ್ಲೆಲ್ಲ ಶಿವಾಜಿಯ ಖುರಪುಟದ ಸದ್ದುಗಳಿವೆ..' ಎಂದು ಆಟೋ ಡ್ರೈವರ್ ಹಿಂದಿ ಹಾಗೂ ಮರಾಠಿ ಮಿಶ್ರಿತ ಭಾಷೆಯಲ್ಲಿ ಹೇಳುತ್ತಲೇ ಇದ್ದ. ನಾವು ಮೌನವಾಗಿ ಕೇಳುತ್ತಿದ್ದರೂ ಮಧ್ಯಮದ್ಯದಲ್ಲಿ, ಗೊಂದಲ ಬಗೆಹರಿಸಿಕೊಳ್ಳುತ್ತಿದ್ದೆವು.
            ಸತಾರಾದ ಬಾನಿನಲ್ಲೀ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಮೋಡಗಳು ಸಾಕಷ್ಟು ದಟ್ಟೈಸಿದ್ದರೂ ಮಳೆ ಸುರಿಯುವ ಲಕ್ಷಣಗಳಿರಲಿಲ್ಲ. ಗುಡ್ಡ ಹತ್ತಿ, ಇಳಿದು ಆಟೋ ಸಾಗುತ್ತಲೇ ಇತ್ತು. ಇದ್ದಕ್ಕಿದ್ದಂತೆ ಸುರಂಗವೊಂದು ನಮ್ಮೆದುರು ಕಾಣಿಸಿತು. ಹಾದು ಹೋಗುತ್ತಿದ್ದಂತೆಯೇ ಆಟೋ ಡ್ರೈವರ್ ಬೆಳ್ಳಂಬೆಳಿಗ್ಗೆ ನನಗೆ ಸಮರ್ಥ ರಾಮದಾಸರನ್ನು ದರ್ಶನ ಮಾಡುವ ಭಾಗ್ಯವನ್ನು ನೀವು ಕರುಣಿಸಿದ್ದೀರಿ. ಪ್ರತಿದಿನ 4 ಗಂಟೆಗೆ ಎದ್ದು ನಾನು ಬಾಡಿಗೆ ಹೊಡೆಯಲು ಆರಂಭಿಸುತ್ತೇನೆ. ಆದರೆ ಅಪರೂಪಕ್ಕೆ ಮಾತ್ರ ಇಂತಹ ಅವಕಾಶ ನಮಗೆ ಲಭ್ಯವಾಗುತ್ತದೆ. ನಾನು ಇವತ್ತು ಧನ್ಯನಾಗಿದ್ದೇನೆ. ನಿಮ್ಮಬಳಿ ತಲಾ 50 ರು. ನಂತೆ ಜಾಸ್ತಿ ಪಡೆದುಕೊಂಡಿದ್ದೆನೆ ಎನ್ನುವುದು ನನಗೆ ಗೊತ್ತಿದೆ. ಆದರೆ ಇದು ಅನಿವಾರ್ಯ. ನಾನು ಈ ಕಾರಣದಿಂದಾಗಿ ನಿಮಗೆ ಒಂದು ತೋಫಾ ಕೊಡಲು ಇಷ್ಟ ಪಡುತ್ತೇನೆ..' ಎಂದ ಆಟೋ ಡ್ರೈವರ್.
            ಸೀದಾ ಚಹಾ ಅಂಗಡಿಯೊಂದರ ಬಳಿ ನಿಲ್ಲಿಸಿದ ಆತ. ನಿಲ್ಲಿಸಿದವನೇ ಪ್ರತಿಯೊಬ್ಬರಿಗೂ ಬಿಸ್ಸಿ ಬಿಸಿ ಚಹಾ ಆರ್ಡರ್ ಮಾಡಿದ. ಬೆಲ್ಲದ ಚಹ ಬಹಳ ಹಿತವಾಗಿತ್ತು. ಆಟೋದಿಂದ ಆಳಿಸಿದವನೇ ಒಮ್ಮೆ ಹಿಂತಿರುಗಿ ನೋಡಿ ಎಂದ. ನೋಡಿದೆವು. ಆಹ್, ಎಂತ ಸುಂದರ ದೃಶ್ಯ ಅದು. ದೊಡ್ಡದೊಂದು ಸುರಂಗ. ಸುರಂಗದ ನಡುವೆ ಕಾಣುತ್ತಿದ್ದ ಸತಾರಾದ ಮನೆ ಮನೆಗಳು. ಮನೆಮನೆಗಳಲ್ಲಿ ಬೆಳಗಿಸಿದ್ದ ವಿದ್ಯುತ್ ದೀಪಗಳು. ಅದೆಂತಹ ಆಕರ್ಷಕ. ಅದೆಂತಹ ಸೊಬಗು. ನಾವೆಲ್ಲ ಅದೆಷ್ಟು ಪೋಟೋಗಳನ್ನು ತೆಗೆಸಿಕೊಂಡೆವೋ. ಚಹಾ ಕುಡಿದಾದ ನಂತರ ಮತ್ತೆ ನಮ್ಮ ಪಯಣ ಸಾಗಿತು.
            `ನಮ್ಮವರೂ ಇದ್ದಾರೆ ಅದೆಲ್ಲೋ ದೂರ ದೂರದ ಸ್ಥಳಗಳಂತೆ, ಅಲ್ಲೆಲ್ಲಿಗೋ ಹೋಗುತ್ತಾರಂತೆ. ಆದರೆ ನೀವು ನೋಡಿ ದೂರದ ಕರ್ನಾಟಕದಿಂದ ನಮ್ಮ ಪ್ರದೇಶ ಅದರಲ್ಲೂ  ಮುಖ್ಯವಾಗಿ ಸ್ವಾಮಿ ಸಮರ್ಥರು ನಡೆದಾಡಿದ ಸ್ಥಳವನ್ನು ನೋಡಲು ಬಂದಿದ್ದೀರಿ. ನಮ್ಮವರಿಗೆ ಇದು ಗೊತ್ತೇ ಇಲ್ಲ. ಸ್ವಾಮಿ ಸಮರ್ಥರಾಮದಾಸರ ಸ್ಥಳದ ಬಗ್ಗೆ ಯಾರೂ ಗಮನ ಕೊಡುವುದೇ ಇಲ್ಲ. ನಮ್ಮವರಿಗೆ ನಮ್ಮದರ ಬಗ್ಗೆ ಅಸಡ್ಡೆ. ಆದರೆ ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ನಿಜಕ್ಕೂ ನೀವು ಪುಣ್ಯಪುರುಷರು. ನಿಮಗೆ ನಮಸ್ಕಾರಗಳನ್ನು ತಿಳಿಸಲೇಬೇಕು. ನೀವು ಅಲ್ಲಿಂದ ಬಂದಿದ್ದೀರಿ. ಬೆಳ್ಳಂಬೆಳಿಗ್ಗೆ ದೇಗುಲ ದರ್ಶನಕ್ಕೆ ಕಾರಣರಾಗುತ್ತಿದ್ದೀರಿ. ನಿಮಗೆ ನಾನೊಂದು ವ್ಯೂ ಪಾಯಿಂಟನ್ನು ತೋರಿಸುತ್ತೇನೆ. ಇದು ನನ್ನ ಇನ್ನೊಂದು ತೋಫಾ..' ಎಂದು ಆಟೋ ಡ್ರೈವರ್ ಮಾತನಾಡುತ್ತಲೇ ಇದ್ದ.
            ನಾವು ಅಷ್ಟರಲ್ಲಿ ಮಹಾಭಲೇಶ್ವರ, ರಾಯಘಡದ ಬಗ್ಗೆ ಕೇಳಿದೆವು. `ಮಹಾಭಲೇಶ್ವರದಲ್ಲೇನಿದೆ ಮಣ್ಣು. ನಿಜ. ಅಲ್ಲಿ ನೋಡುವಂತದ್ದು ಸಾಕಷ್ಟಿದೆ. ಆದರೆ ಎಲ್ಲವೂ ದುಬಾರಿ. ಆದರೆ ಸತಾರಾದಲ್ಲಿ ಹಾಗಲ್ಲ. ಸಜ್ಜನಘಡದಲ್ಲಂತೂ ಎಲ್ಲವೂ ಫ್ರಿ. ಊಟ, ವಸತಿ ಎಲ್ಲವೂ ಕೊಡುತ್ತಾರೆ. ಮಹಾಭಲೇಶ್ವರ ನೋಡುವುದು ಬೇಡ. ಸುಮ್ಮನೆ ನಿಮಗೆ ದುಡ್ಡು ಜಾಸ್ತಿಯಾಗಿದ್ದರೆ ಹೋಗಿ ಬನ್ನಿ ಅಷ್ಟೆ. ರಾಯಘಡವನ್ನು ನೋಡಬಹುದು. ಶಿವಾಜಿ ಮಹಾರಾಜರ ರಾಜಧಾನಿ ಅದು. ಚನ್ನಾಗಿದೆ ಎಂದು ಆತ ಉತ್ತರಿಸಿದ್ದ. ಆತನ ಉತ್ತರ ಕೇಳಿದ ನಾವು ರಾಯಘಡ ಹಾಗೂ ಮಹಾಭಲೇಶ್ವರವನ್ನು ನೋಡಿ ಬರುವ ಆಲೋಚನೆಯನ್ನು ಕೈಬಿಟ್ಟೆವು.
           ಶಿವಾಜಿ ಮಹಾರಾಜರು ಆರಂಭದಲ್ಲಿ ರಾಯಘಡವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರಂತೆ. ಆ ನಂತರ ಅವರಿಗೆ ಸಜ್ಜನಘಡದಲ್ಲಿ ಸ್ವಾಮಿ ಸಮರ್ಥ ರಾಮದಾಸರು ಇರುವ ಬಗ್ಗೆ ಮಾಹಿತಿ ಸಿಕ್ಕಿತಂತೆ. ರಾಮದಾಸರನ್ನು ಭೇಟಿಯಾಗಬೇಕು ಎಂದು ಶಿವಾಜಿ ಮಹಾರಾಜ್ ಕುದುರೆಯನ್ನೇರಿ ಬಂದರಂತೆ. ಸಿಟ್ಟು ಹಾಗೂ ಅಹಂಕಾರದಿಂದ ಸಜ್ಜನಘಡವನ್ನು ಏರಿ ಬಂದ ಸಂದರ್ಭದಲ್ಲಿ ಸಮರ್ಥ ರಾಮದಾಸರು ಧ್ಯಾನ ಹಾಗೂ ಪೂಜೆಯಲ್ಲಿ ನಿರತರಾಗಿದ್ದರಂತೆ. ಶಿವಾಜಿ ಬಂದು ಸಮರ್ಥ ರಾಮದಾಸರ ಎದುರು ಗತ್ತಿನಿಂದ ಕುಳಿತರಂತೆ. ಆದರೆ ರಾಮದಾಸರು ಅದನ್ನು ಗಮನಿಸಿಯೂ ಗಮನಿಸದಂತೆ ಉಳಿದರಂತೆ. ಕೊನೆಗೆ ಶಿವಾಜಿ ನಮಸ್ಕಾರ ಮಾಡಿ ಆಶಿರ್ವಾದ ಬೇಡಿದರಂತೆ. ಕೊನೆಗೆ ಸಮರ್ಥ ರಾಮದಾಸರು ಅತ್ಯಂತ ಮಿದುವಾದ ಕಲ್ಲನ್ನು ಹೊತ್ತುಕೊಂಡು ಬಾ. ಹುಡುಕಿ ತಾ. ಆಗ ಆಶಿರ್ವಾದ ಮಾಡುತ್ತೇನೆ. ಹಿಂದೂ ಸಾಮ್ರಾಟನಾಗುತ್ತೀಯಾ ಎಂದರಂತೆ. ಕೊನೆಗೆ ಶಿವಾಜಿ ಮಹಾರಾಜರು ಬಹಳ ಹುಡುಕಿ ಕೊನೆಗೊಂದು ಮೃದು ಕಲ್ಲನ್ನು ಹೊತ್ತು ತಂದರಂತೆ. ಆ ಕಲ್ಲನ್ನು ನೋಡಿದ ರಾಮದಾಸರು ಕೈಯಲ್ಲಿ ಮುಟ್ಟಿ `ಇದು ಗಟ್ಟಿಯಾಗಿದೆ. ಇನ್ನೂ ಮಿದುವಾದ ಕಲ್ಲನ್ನು ತನ್ನಿ..' ಎಂದರಂತೆ. ಕೊನೆಗೆ ಹುಡುಕಿ ತಂದಾಗ ಮತ್ತೆ ಇದೇ ಘಟನೆ ಪುನರಾವರ್ತನೆ ಆಯಿತಂತೆ. ಕೊನಗೊಮ್ಮೆ ಶಿವಾಜಿ ಮಹಾರಾಜರು ದಿಕ್ಕೆಟ್ಟು ಸೋತಂತಾಗಿ ಸಜ್ಜನಘಡಕ್ಕೆ ತೆರಳಿ ಸ್ವಾಮಿ ರಾಮದಾಸರ ಚರಣದಲ್ಲಿ ಶರಣಾದರಂತೆ. ಆಗ ಸಮರ್ಥ ರಾಮದಾಸರು ಹೇಳಿದ್ದೆಂದರೆ `ಮೃದುವಾದ ಕಲ್ಲು ಎಂದರೆ ಏನೆಂದುಕೊಂಡೆ ಮಹಾರಾಜಾ. ನೀನೇ ಮೃದುವಾದ ಕಲ್ಲು. ನೀನು ಕಲ್ಲಿನಷ್ಟು ಕಠಿಣ. ಆದರೆ ಸಿಟ್ಟು ಹಾಗೂ ಅಹಂಕಾರವನ್ನು ಬಿಟ್ಟು ಮೃದುವಾಗಿ ಬಾ ಎಂದು ಹೇಳಿದ್ದೆನಷ್ಟೇ ಎಂದು ಹೇಳಿದಾಗ ಶಿವಾಜಿ ಮಹಾರಾಜರ ಕಣ್ಣಿನಲ್ಲಿ ಆಶ್ರುಧಾರೆ ಸುರಿಯಲಾರಂಭಿಸಿತಂತೆ. ಆ ಕ್ಷಣದಲ್ಲಿ ಸಮರ್ಥ ರಾಮದಾಸರು ಶಿವಾಜಿ ಮಹಾರಾಜರ ತಲೆಯ ಮೇಲೆ ಕೈ ಇಟ್ಟು ಹಿಂದೂ ಸಾಮ್ರಾಟನಾಗಿ ಲೋಕವಿಖ್ಯಾತನಾಗಿ. ವಿಜಯೀಭವ ಎಂದು ಹರಸಿದರಂತೆ. ನಂತರದ ದಿನಗಳಲ್ಲಿ ಶಿವಾಜಿ ಮಹಾರಾಜ ಯಾವರೀತಿ ವಿಖ್ಯಾತಿ ಗಳಿಸಿದ ಎನ್ನುವುದು ಇತಿಹಾಸ ಎಂದು ಆಟೋ ಡ್ರೈವರ್ ದೀರ್ಘವಾಗಿ ಹೇಳಿದಾಗ ನಮಗೆ ಒಮ್ಮೆಲೆ ಮೈಯೆಲ್ಲ ಪುಳಕವಾಯಿತು. ನಾವು ಆಟೋ ಡ್ರೈವರ್ ಜೊತೆ ಬಂದಿದ್ದೇವೋ ಅಥವಾ ಸತಾರಾದ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ಬಂದಿರುವ ಗೈಡ್ ಜೊತೆ ಬಂದಿದ್ದೇವೋ ಎನ್ನುವ ಅನುಮಾನವೂ ನಮ್ಮನ್ನು ಕಾಡಿತು. 600 ರು. ಕೊಟ್ಟಿದ್ದಕ್ಕೂ ಅನ್ಯಾಯವಾಗಲಿಲ್ಲ ಎಂದುಕೊಂಡೆವು.
          `ಶಿವಾಜಿ ಮಹಾರಾಜರು ನಂತರದ ದಿನಗಳಲ್ಲಿ ಸಜ್ಜನಘಡಕ್ಕೆ ದೊಡ್ಡದೊಂದು ದ್ವಾರವನ್ನು ಕಟ್ಟಿಸಿದರು. ಕೋಟೆಯೊಂದನ್ನು ನಿರ್ಮಾಣ ಮಾಡಿದರು. ಅಷ್ಟೇ ಅಲ್ಲ. ಅಲ್ಲಿ ಒಂದೆರಡು ದೇಗುಲಗಳ ಕಟ್ಟಡವನ್ನೂ ಕಟ್ಟಿಸಿದರು. ಇದೇ ಸಜ್ಜನಘಡದಲ್ಲಿಯೇ ಮಾಫಳಾ ಯುವಕರ ಜೊತೆ ಸೇರಿ ರಕ್ತ ತರ್ಪಣ ನೀಡಿ ಹಿಂದೂ ರಕ್ಷಣೆಗೆ ಶಿವಾಜಿ ಪಣ ತೊಟ್ಟಿದ್ದು. ಒಮ್ಮೆ ನೀವು ಈ ನಾಡಿನಲ್ಲಿ ಶಿವಾಜಿ ಮಹಾರಾಜ ಕುದುರೆಯ ಮೇಲೆ ಹೋಗುತ್ತಿದ್ದುದನ್ನು ಕಲ್ಪನೆ ಮಾಡಿಕೊಳ್ಳಿ ಎಂದ. ನಮಗೆ ಮೈಯೆಲ್ಲ ಒಮ್ಮೆಗೆ ರೋಮಾಂಚನ.
           ನಿಧಾನವಾಗಿ ಬೆಳಗಾಗುತ್ತಿತ್ತು. ಆಕಾಶದೆತ್ತರದ ದೂರದಲ್ಲೊಂದು ಬೆಳಕಿನ ಬಿಂಬವನ್ನು ತೋರಿಸಿದ ಆಟೋ ಡ್ರೈವರ್ ಅದೋ ನೋಡಿ ಅಲ್ಲಿಯೇ ಸಜ್ಜನ ಘಡ ಇದೆ. ನಾವು ಅದನ್ನು ಏರಬೇಕು ಎಂದ. ಕತ್ತನ್ನು ಎತ್ತಿ ನೋಡಿ ಹಿತವಾಗಿ ನೋವು ಮಾಡಿಕೊಂಡೆವು. ಸತಾರಾದಿಂದ 17 ಕಿ.ಮಿ ದೂರದಲ್ಲಿರುವ ಸಜ್ಜನಘಡಕ್ಕೆ ಹೋಗುವ ಸಲುವಾಗಿ ಆಟೋ ಏರಿದ್ದ ನಾವು ಅಂಕುಡೊಂಕಿನ ದಾರಿಯಲ್ಲಿ ಸಾಗುತ್ತಲೇ ಇದ್ದೆವು. ಬೆಳಗಿನ ಮುಂಜಾವು ನಮ್ಮನ್ನು ಹಿತವಾಗಿ ಚುಂಬಿಸುತ್ತಿತ್ತು. ಮಂಜಿನ ಹನಿಗಳು ಮುತ್ತಿಕ್ಕುತ್ತಿದ್ದವು. ಅಲ್ಲಿಯೇ ಇದ್ದ ಮಿಲಿಟರಿ ಕ್ಯಾಂಪನ್ನು ನೀಲೇಶ ಮಂತ್ರಿ ತೋರಿಸಿದ. ಮರಾಠಾ ಪ್ಲಟೂನ್ ಇಲ್ಲಿಯೇ ತಯಾರಾಗುತ್ತದೆ. ಇಲ್ಲಿ ತರಬೇತಿ ಪಡೆದವರು ಪ್ರತಿಯೊಬ್ಬರೂ ಸೈನ್ಯಕ್ಕೆ ಆಯ್ಕೆಯಾಗುತ್ತಾರೆ ಎಂದು ಹೆಮ್ಮೆಯಿಂದ ಹೇಳಿದ. ನಮಗೂ ಹೆಮ್ಮೆ ಎನ್ನಿಸಿ ಎದೆಯುಬ್ಬಿತು.

(ಮುಂದುವರಿಯುತ್ತದೆ)

No comments:

Post a Comment