Sunday, July 19, 2015

ಅಘನಾಶಿನಿ ಕಣಿವೆಯಲ್ಲಿ-23

            ಉಂಚಳ್ಳಿ ಜಲಪಾತದ ಬಳಿ ಅರಣ್ಯಗಳ್ಳರು ಹಾಗೂ ಫಾರೆಸ್ಟ್ ಆಪೀಸರ್ ಜೊತೆ ಅರಣ್ಯಗಳ್ಳತನ ಕುರಿತಂತೆ ನಡೆದ ಮೇಲಾಟದ ವಿಷಯ ಸಂಜೆಯ ವೇಳೆಗೆ ಎಲ್ಲ ಕಡೆ ಹರಡಿಹೋಗಿತ್ತು. ಪಾತರಗಿತ್ತಿಯನ್ನು ಹಿಡಿಯುವ ನೆಪದಲ್ಲಿ ಅಘನಾಶಿನಿ ಕಣಿವೆಗೆ ಬಂದ ಯುವ ಪಡೆಗೂ ಕೂಡ ಸಂಜೆಯ ಸಮಯದಲ್ಲಿಯೇ ವಿಷಯ ತಿಳಿದಿತ್ತು. ಮರುದಿನ ಏನಾದರಾಗಲಿ ಅರಣ್ಯಗಳ್ಳರು ಹಾಗೂ ಪಾರೆಸ್ಟ್ ಆಫೀಸರ್ ನಡುವೆ ನಡೆದ ಛೇಸಿಂಗ್ ಜಾಗಕ್ಕೆ ಹೋಗುವುದು ಒಳಿತು ಎಂದುಕೊಂಡರು ಎಲ್ಲರೂ. ಸುಮ್ಮನೇ ಹೋಗುವುದೇಕೆ, ಉಂಚಳ್ಳಿ ಜಲಪಾತವನ್ನು ನೋಡುವ ನೆಪವನ್ನು ಇಟ್ಟುಕೊಳ್ಳೋಣ ಎಂದುಕೊಂಡು ನಿರ್ಧಾರ ಮಾಡಿದವರು ವಿಕ್ರಮ ಹಾಗೂ ವಿಜೇತಾ. ವಿನಾಯಕನ ಬಳಿ ಈ ಸಂಗತಿಯನ್ನು ಅರುಹಿದಾಗ ಅವನೂ ಒಪ್ಪಿಗೆ ಸೂಚಿಸಿದ್ದ.
            ಸಂಜೆಯ ವೇಳೆ ಊಟ ಮುಗಿಸಿ ಹಾಸಿಗೆಯತ್ತ ಮುಖ ಮಾಡಿದ್ದರು ಎಲ್ಲರೂ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪೊಲೀಸ್ ಸ್ಟೇಶನ್, ಗುಡ್ಡೇ ತೋಟದ ಗಣಪತಿ ದೇವಾಲಯದಲ್ಲಿ ನಡೆದ ಘಟನೆಗಳೇ ಮನಸ್ಸಿನಲ್ಲಿ ಇಣುಕುತ್ತಿದ್ದವು. ಪೊಲೀಸರಿಗೇನೋ ಸಬೂಬನ್ನು ಹೇಳಿ ತಪ್ಪಿಸಿಕೊಂಡು ಬಂದದ್ದಾಗಿದೆ. ಆದರೆ ದೇವಸ್ಥಾನದ ಆವರಣದಲ್ಲಿ ವಿಷ್ಣು ಎಡವಿ ಬಿದ್ದಿದ್ದು ಮಾತ್ರ ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ವಿಷ್ಣುವೇನೋ ಇಂತದ್ದನ್ನೆಲ್ಲ ತಲೆಗೆ ಹಾಕಿಕೊಳ್ಳುವವನಲ್ಲ. ಆದರೆ ಉಳಿದವರ ಮನಸ್ಸು ಮಾತ್ರ ಏನೋ ಆಗುತ್ತಿದೆ, ಆಗುತ್ತದೆ ಎನ್ನುವ ಚಿಂತನೆ ನಡೆಸಿದ್ದರು. ಅಪಾಯ ಕಾದಿರಬಹುದಾ? ಯಾವ ರೀತಿಯ ಅಪಾಯ ಆಗಬಹುದು? ವಿಷ್ಣುವಿನ ಜೀವಕ್ಕೆ ಏನಾದರೂ ತೊಂದರೆ ಆಗುತ್ತದೆಯೇ? ಮತ್ತಿನ್ನೇನಾದರೂ ಕಂಟಕ ಇದೆಯೇ ಹೀಗೆಲ್ಲ ಆಲೋಚನೆ ಮಾಡಿದರು. ಆಲೋಚನೆಯಲ್ಲಿ ಮುಳುಗಿದ್ದವರಿಗೆ ಅದ್ಯಾವಾಗ ನಿದ್ದೆ ಬಂದಿತ್ತೋ ಗೊತ್ತಾಗಲಿಲ್ಲ.
           ವಿಜೇತಾಳಿಗೆ ನಡುರಾತ್ರಿ ಮತ್ತೆ ಎಚ್ಚರಾಯಿತು. ದಂಟಕಲ್ಲಿಗೆ ಬಂದ ಹೊಸತರಲ್ಲಿ ನಡುರಾತ್ರಿ ಎಚ್ಚರಾಗಿತ್ತು. ಈಗ ಮತ್ತೊಮ್ಮೆ ಎಚ್ಚರಾಗಿತ್ತು. ದಂಟಕಲ್ಲಿನ ಮೇಲ್ಭಾಗದಲ್ಲಿಯೇ ದಟ್ಟವಾಗಿ ಹಬ್ಬಿರುವ ಕಾಡಿನಲ್ಲಿ ಮತ್ತೆ ಯಥಾ ಪ್ರಕಾರ ಮರಕಡಿಯುವ ಸದ್ದು. ಒಮ್ಮೊಮ್ಮೆ ಗರಗಸ ಸದ್ದು ಮಾಡಿದರೆ ಮತ್ತೊಮ್ಮೆ ಕೊಡಲಿಯ ಸದ್ದು ಕೇಳುತ್ತಿತ್ತು. ಗಾಳಿಯ ಚಲನೆಯ ಆಧರಿಸಿ ದಟ್ಟವಾಗಿ ಹಾಗೂ ಕ್ಷೀಣವಾಗಿ ಕಿವಿಗೆ ಬಡಿಯುತ್ತಿತ್ತು. ವಿಜೇತಾ ಬಹಳ ಕಾಲ ಇದನ್ನು ಆಲಿಸಿದಳು. ಕೊನೆ ಕೊನೆಗೆ ಅಸಹನೀಯ ಎನ್ನಿಸಿ ಹೊರಗೆ ಎದ್ದು ಬಂದಳು. ಮಹಡಿಯ ಇನ್ನೊಂದು ಕಡೆಯಲ್ಲಿ ವಿಕ್ರಮ, ವಿಷ್ಣು, ವಿನಾಯಕ ಹಾಗೂ ಪ್ರದೀಪರು ಮಲಗಿದ್ದರು. ನಿಧಾನವಾಗಿ ವಿಕ್ರಮನ ಕಡೆ ಸರಿದು ಹೋದ ವಿಜೇತಾ ಅವನನ್ನು ಎಬ್ಬಿಸಲು ಪ್ರಯತ್ನಿಸಿದಳು.
              ವಿಕ್ರಮನಿಗೂ ನಿದ್ದೆ ಬಂದಿರಲಿಲ್ಲ. ವಿನಯಚಂದ್ರನಿಗೆ ಅಷ್ಟೇ ಅಲ್ಲ ಪಕ್ಕದಲ್ಲಿ ಮಲಗಿದ್ದವರಿಗೆ ಯಾರಿಗೂ ಕೂಡ ನಿದ್ದೆ ಬಂದಿರಲಿಲ್ಲ. ವಿಜೇತಾ ಎದ್ದು ಬಂದಿದ್ದನ್ನು ಕಂಡು `ಏನಾಯ್ತು?' ಎಂದ ವಿಕ್ರಮ. ಅದಕ್ಕೆ ಪ್ರತಿಯಾಗಿ ವಿಜೇತಾ ಕತ್ತಲಿನಲ್ಲಿ ಕೇಳಿಬರುತ್ತಿದ್ದ ಸದ್ದಿನ ಬಗ್ಗೆ ಹೇಳಿದಳು. ಯಾರೋ ಮರ ಕಡಿಯುತ್ತಿದ್ದಾರೆ ಎಂದೂ ತಿಳಿಸಿದಳು.
             ವಿಕ್ರಮ ಹಾಗೂ ಉಳಿದವರಿಗೂ ಈ ವಿಷಯ ತಿಳಿದಿತ್ತು. ಕಾಡಿಗೆ ಹೋಗಿ ಬರೋಣವಾ ಎಂದುಕೊಂಡರು. ಪ್ರದೀಪ ಹೂ ಅಂದ. ವಿಷ್ಣುವೂ ಹೂ ಅಂದುಬಿಟ್ಟಿದ್ದ. ಕೊನೆಗೆ ನಡು ರಾತ್ರಿಯಾದರೂ ಸರಿ ಹೋಗಿ ಬರೋಣ. ಐದಾರು ಜನರಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಮರ ಕಡಿಯುತ್ತಿರುವ ಪೋಟೋಗಳು ಸಿಕ್ಕರೆ ಅಷ್ಟೇ ಸಾಕು ಎಂದುಕೊಂಡರು ಎಲ್ಲರೂ. ವಿನಾಯಕನ ಬಳಿ ಹೇಳಿದಾಗ ಮೊದಲಿಗೆ ವಿರೋಧಿಸಿದನಾದರೂ ಕೊನೆಗೆ ಒಪ್ಪಿಕೊಂಡ. ಮನೆಯಲ್ಲಿ ಇದ್ದ ಮೂರಡಿಯ ಬ್ಯಾಟರಿಯನ್ನು ಎತ್ತಿಕೊಂಡ. ಒಂದು ಕಿ.ಮಿ ದೂರದ ವರೆಗೂ ಆ ಬ್ಯಾಟರಿ ಬೆಳಕನ್ನು ಬೀರುತ್ತಿತ್ತು. ವಿನಾಯಕ ಸೀದಾ ಹೊರಕ್ಕೆ ಬಂದವನೇ ಪಂಜರದಲ್ಲಿ ಕೂಡಿ ಹಾಕಲಾಗಿದ್ದ ಮುದ್ದಿನ ನಾಯಿ ರಾಮುವನ್ನು ಹೊರಗೆ ಬಿಟ್ಟ. ಅದೇನು ಸೂಟು ಸಿಕ್ಕಿತ್ತೋ ರಾಮುವಿಗೆ. ಛಂಗನೆ ನೆಗೆಯಿತು. ತನ್ನ ಮನಯ ಯಜಮಾನ ಕಾಡಿನ ಕಡೆಗೆ ತೆರಳುತ್ತಿದ್ದಾನೆ ಎಂಬುದು ನಾಗಿಗೆ ಅದ್ಹೇಗೋ ತಿಳಿದುಬಿಟ್ಟಿತ್ತು. ಬಾಲ ಹಾಗೂ ಮೈಯನ್ನು ವಿಚಿತ್ರವಾಗಿ ಕುಳಿಸುತ್ತ ನೆಗೆಯತೊಡಗಿತ್ತು.
            ಕಾಡನ್ನು ಅರಿತಿದ್ದ ವಿನಾಯಕ ಎಲ್ಲರನ್ನೂ ಹಿತ್ಲಾಕಡೆಗೆ ಕರೆದುಕೊಂಡು ಗುಡ್ಡ ಹತ್ತಿಸಿದ. ಎಲ್ಲರೂ ಸುಮ್ಮನೆ ಬನ್ನಿ ಎಂದು ಹೇಳಲು ಮರೆಯಲಿಲ್ಲ. ಪ್ರತಿಯೊಬ್ಬರ ಬಳಿಯೂ ಚಿಕ್ಕ ಬೆಳಕು ಇದ್ದೇ ಇದ್ದು. ಮೊಬೈಲ್ ಟಾರ್ಚುಗಳೂ ಇದ್ದವು. ಸದ್ದಿಲ್ಲದೇ ಗುದ್ದವನ್ನು ಏರ ತೊಡಗಿದರು. ಹತ್ತಿರದಲ್ಲೇ ಇದ್ದ ರಸ್ತೆಯನ್ನು ದಾಟಿ ಕಾನನದಲ್ಲಿ ಸದ್ದು ಕೇಳಿ ಬಂದ ಕಡೆಗೆ ಮುಖ ಮಾಡಿದರು. ವಿಜೇತಾ ಹಾಗೂ ವಿಕ್ರಮ ಇಬ್ಬರೂ ತಮ್ಮ ಬಳಿ ಇದ್ದ ನೈಟ್ ವಿಷನ್ ಕ್ಯಾಮರಾವನ್ನು ಸಜ್ಜಾಗಿ ಇರಿಸಿಕೊಂಡಿದ್ದರು. ಯಾವ ಕ್ಷಣದಲ್ಲಿ ಬೇಕಾದರೂ ಪೋಟೋ ತೆಗೆಯುವ ಸಂದರ್ಭ ಎದುರಾಗಬಹುದಿತ್ತು. ಅದಕ್ಕಾಗಿ ಇಬ್ಬರೂ ಚುರುಕಾಗಿ ಸಾಗುತ್ತಿದ್ದರು. ಇಬ್ಬರ ಕೈಗಳೂ ಕ್ಯಾಮರಾ ಮೇಲಿದ್ದವು.
           ರಾಜು ಮುಂದಕ್ಕೆ ಸಾಗುತ್ತಿತ್ತು. ರಾಜುವಿನ ಹಿಂದೆ ರಾಜುವಿನ ಜಾಡಿನಲ್ಲಿ ವಿನಾಯಕ ಮೌನವಾಗಿ ಸಾಗುತ್ತಿದ್ದ. ಅವನ ಹಿಂದೆ ಪ್ರದೀಪ, ವಿಕ್ರಮ, ವಿಜೇತಾ ಹಾಗೂ ಕೊನೆಯಲ್ಲಿ ವಿಷ್ಣು. ಒಬ್ಬರಿಗೊಬ್ಬರ ನಡುವೆ ಮಾರು ದೂರ ಅಂತರ. ಪ್ರದೀಪ ಮಾತ್ರ ದೊಡ್ಡದೊಂದು ಕಬ್ಬಿಣದ ರಾಡನ್ನು ಹಿಡಿದು ಸಾಗುತ್ತಿದ್ದ. ವಿನಾಯಕನ ಹಿಂದೆ ಜಾಡು ಹಿಡಿದು ಸಾಗುತ್ತಿದ್ದರೂ ಕೂಡ ಹಿಂಬಾಲಿಸುತ್ತಿದ್ದವರು ಆಗೊಮ್ಮೆ ಈಗೊಮ್ಮೆ ದಾರಿ ತಪ್ಪುತ್ತಿದ್ದರು. ಕಾಡಿನಲ್ಲಿ ಮುಂದೆ ಮುಂದೆ ಸಾಗಿದಂತೆಲ್ಲ ಕತ್ತಲೆಯ ನೀರವತೆಯನ್ನು ಸೀಳಿ ಬರುವಂತಹ ಕಾಡು ಹಕ್ಕಿಗಳ ಕೂಗು ಕಿರ್ರೆಂದು ಕೇಳಿಸುತ್ತಿದ್ದವು. ಮರ ಕಡಿಯುವ ಸದ್ದು ಕೂಡ ನಿಧಾನವಾಗಿ ದೊಡ್ಡದಾಗತೊಡಗಿತ್ತು. ಎಲ್ಲರೂ ಮುಂದೆ ಮುಂದೆ ಹೆಜ್ಜೆ ಹಾಕಿದರು.
             ಕೊನೆಗೊಮ್ಮೆ ವಿನಾಯಕ ಗಕ್ಕನೆ ನಿಂತ. ನಿಂತವನೇ ಮುಂದೆ ಹೋಗುತ್ತಿದ್ದ ರಾಜುವಿನ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡ. ರಾಜು ಕೊಸರಾಡತೊಡಗಿತು. ಹಿಂಬಾಲಿಸುತ್ತಿದ್ದವರೆಲ್ಲ ಒಮ್ಮೆ ಢಿಕ್ಕಿ ಹೊಡೆದರೋ ಎನ್ನುವಂತೆ ನಿಂತರು. ಪಿಸುಮಾತಿನಲ್ಲಿ ಹಿಂದಿದ್ದವರ ಬಳಿ `ಅದೋ ಅಲ್ಲಿ ನೋಡಿ.. ಮರ ಕೊಯ್ಯುತ್ತಿದ್ದಾರೆ..' ಎಂದ.
             ಕಾಡಿನ ಮೌನದಲ್ಲಿ ಕೊಂಚ ದೂರದಲ್ಲಿ ಲಾಟೀನು ಬೆಳಕಿನಲ್ಲಿ ಒಂದಿಷ್ಟು ಜನ ಮರ ಕಡಿಯುತ್ತಿದ್ದರು. ಅಲ್ಲಿಯೆ ದಡೆಯನ್ನೂ ಮಾಡಿಕೊಂಡು ನಿರಾತಂಕವಾಗಿ ತಮ್ಮ ಕೆಲಸವನ್ನು ಮುಂದುವರಿಸಿದ್ದರು. ವಿಜೇತಾ ಹಾಗೂ ವಿಕ್ರಮ ಇಬ್ಬರೂ ತಮ್ಮ ಕ್ಯಾಮರಾಕ್ಕೆ ಕೆಲಸಕೊಟ್ಟರು. ಅನುಮಾನ ಬಾರದಿರಲಿ ಎನ್ನುವ ಕಾರಣಕ್ಕಾಗಿ ಇಬ್ಬರೂ ಕ್ಯಾಮರಾದ ಫ್ಲಾಷ್ ಲೈಟನ್ನು ಆರಿಸಿದ್ದ ಕಾರಣ ಅದೆಷ್ಟು ಪೋಟೋ ತೆಗೆದರೂ ಮರಗಳ್ಳರಿಗೆ ಗೊತ್ತಾಗಲಿಲ್ಲ. ಪ್ರದೀಪ ಮಾತ್ರ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಸಜ್ಜಾಗಿ ಇರಿಸಿಕೊಂಡಿದ್ದ.
            ಅಷ್ಟರಲ್ಲಿಯೇ ಅಚಾತುರ್ಯವೊಂದು ಘಟಿಸಿಬಿಟ್ಟಿತು. ರಾಮುವಿನ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡಿದ್ದ ವಿನಾಯಕ ಎಂದೆನಲ್ಲ. ದೊಡ್ಡದೊಂದು ಬೇಟೆ ಕಣ್ಣಮುಂದೆ ಇದೆ ಎಂದು ಭಾವಿಸಿದ ರಾಮು ಇದ್ದಕ್ಕಿದ್ದಂತೆ ಕೊಸರಾಡಲಾರಂಭಿಸಿತು. ಕೊಸರಾಡಿದಂತೆಲ್ಲ ವಿನಾಯಕ ತನ್ನ ಹಿಡಿತವನ್ನು ಬಿಗಿ ಮಾಡಿದ್ದ. ಆದರೆ ಕೊನೆಗೊಮ್ಮೆ ಇದ್ದಕ್ಕಿದ್ದಂತೆ ಕುತ್ತಿಗೆ ಪಟ್ಟಿಯಿಂದ ಉಳುಚಿಕೊಂಡ ರಾಮು ಸೀದಾ ಮರಗಳ್ಳರಿದ್ದ ಕಡೆಗೆ ಓಡಿಬಿಟ್ಟಿತ್ತು. `ಅಯ್ಯೋ ಭಾನಗಡಿ ಆಯ್ತಲ್ಲ..' ಎಂದುಕೊಂಡ ವಿನಾಯಕ ತನ್ನ ಹಿಂದೆ ನಿಂತಿದ್ದವರ ಬಳಿ ಓಡಲು ತಯಾರಾಗುವಂತೆ ತಿಳಿಸಿದ. ಈ ಕತ್ತಲಲ್ಲಿ ಗೊತ್ತಿರದ ಕಾಡಿನಲ್ಲಿ ಹೇಗೆ ಓಡುವುದು? ಎಲ್ಲರೂ ತಬ್ಬಿಬ್ಬಾದರು.
            ರಾಮು ಮರಗಳ್ಳರ ಬಳಿ ಓಡಿದ್ದೇ ತಡ. ಒಮ್ಮೆ ಕಾಡೇ ಅದರುವಂತೆ ಕೂಗಿತು. ಮರಗಳ್ಳರು ಒಮ್ಮೆ ಬೆಚ್ಚಿಬಿದ್ದಿದ್ದರು. ಸುಮ್ಮನೆ ಇರದ ರಾಮು ಸೀದಾ ಹೋಗಿ ಒಬ್ಬನ ಕಾಲಿಗೆ ಗಬಕ್ಕನೆ ಕಚ್ಚಿಯೇ ಬಿಟ್ಟಿತು. ಒಮ್ಮೆ ಮರಕಡಿಯುತ್ತಿದ್ದವನೊಬ್ಬ ತನ್ನ ಕಾಲಿಗೆ ನಾಯಿ ಕಚ್ಚಿದ್ದರಿಂದ ತಬ್ಬಿಬ್ಬಾದ. ಕಚ್ಚಿದ್ದು ಏನು ಎನ್ನುವುದು ಗೊತ್ತಾಗದೇ ಕಾಲು ಝಾಡಿಸಿದ. ಆತ ಕಾಲು ಝಾಡಿಸಿದಂತೆಲ್ಲ ರಾಮುವಿನ ಕಡಿತ ಬಿಗಿಯಾಯಿತು. ರಾಮುವಿನ ಬಿಗಿಗೆ ಒಮ್ಮೆ ಜಾರಿ ಬಿದ್ದ ಮರಗಳ್ಳ `ಅಯ್ಯಯ್ಯಪ್ಪಾ...' ಎಂದ. ತಕ್ಷಣ ಜೊತೆಯಲ್ಲಿದ್ದವರೆಲ್ಲ ಹುಷಾರಾದರು. ಏನೋ ಅಪಾಯ ಎದುರಾಗಿದೆ ಎಂದು ಭಾವಿಸಿದರು.
          ಕೆಳಕ್ಕೆ ಬಿದ್ದ ಮರಗಳ್ಳನಿಗೆ ಸಹಾಯ ಮಾಡಲು ಮುಂದಾದರು. ನಾಯಿ ಕಚ್ಚಿ ಹಿಡಿದಿರುವುದು ಗೊತ್ತಾಗಿತ್ತು. ನಾಯಿ ಬಂದಿದ್ದೆ ಎಂದಾದರೆ ಜೊತೆಯಲ್ಲಿ ಇನ್ಯಾರೋ ಇರಬೇಕು. `ಯಾರೋ ಇದ್ದಾರೆ ಹುಡುಕ್ರೋ..' ಎಂದು ಕೂಗಿದ ಒಬ್ಬಾತ. ಇನ್ನೊಬ್ಬಾತ ಕೈಯಲ್ಲಿದ್ದ ಕೊಡಲಿಯಿಂದ ರಾಮುವಿನ ಕಡೆಗೆ ಬೀಸಿದ್ದ. ರಾಮು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿತ್ತಾದರೂ ಕೊಡಿಲಿಯ ಏಟು ಕಾಲಿಗೆ ಬಿದ್ದಿತ್ತು. ಕೊಡಲಿಯ ಏಟು ಬಿದ್ದಿದ್ದೇ ಕಚ್ಚಿದ್ದವನನ್ನು ಬಿಟ್ಟ ರಾಮು ಕಂಯೋ ಎಂದು ಕೂಗಿ ಓಡಲು ಆರಂಭಿಸಿತು.
            ಇದೇ ವೇಳೆ ಇನ್ನೊಂದು ಪ್ರಮುಖ ಘಟನೆಯೂ ನಡೆದಿತ್ತು. ರಾಮುವಿಗೆ ಬೀಸಿದ್ದ ಕೊಡಲಿ ರಾಮುವಿನ ಕಾಲಿಗೆ ಗಾಯ ಮಾಡಿ ಸೀದಾ ರಾಮು ಕಚ್ಚಿ ಹಿಡಿದಿದ್ದವನ ಕಾಲಿಗೆ ತಾಗಿತ್ತು. ಆತನ ಕಾಲಿನ ಮೇಲೆ ಬಿದ್ದ ಪರಿಣಾಮ ಕಾಲು ಸಿಗಿದು ಹೋಗಿತ್ತು. ಕೊಡಲಿ ಏಟು ಬಿದ್ದ ಕಾರಣ ಆತ `ಅಯ್ಯಯ್ಯೋ.. ಸತ್ನ್ಯೆಪ್ಪಾ...' ಎಂದು ಕೂಗಿದ. ದಂಟಕಲ್ ಕಾಡು ಒಮ್ಮೆ ಬೆಚ್ಚಿ ಬಿದ್ದಿತ್ತು.
           ನಾಯಿಯ ಜೊತೆಗೆ ಯಾರ ಬಂದಿದ್ದಾರೆ ಎಂದು ಅನುಮಾನ ಪಟ್ಟುಕೊಂಡ ಮರಗಳ್ಳರು ಸುತ್ತಮುತ್ತ ಹುಡುಕಲು ಆರಂಭಿಸಿದ್ದರು. ಅವರ ಕಣ್ಣಿಗೆ ವಿನಾಯಕ ಹಾಗೂ ಅವರ ಜೊತೆಗಾರರು ಕಾಣಿಸಿಕೊಂಡಿದ್ದರು. ಕೂಡಲೇ ಮೂರು ಜನ ವಿನಾಯಕನ ಹಾಗೂ ಜೊತೆಗಾರರನ್ನು ಹಿಂಬಾಲಿಸಿ ಬಂದಿದ್ದರು. ಮರಗಳ್ಳರ ಕೈಗೆ ಸಿಕ್ಕರೆ ತಮ್ಮ ಕಥೆ ಮುಗಿದಂತೆಯೇ ಎಂದುಕೊಂಡು ಎಲ್ಲರೂ ಓಡಲು ಆರಂಭಿಸಿದ್ದರು.
             ವಿಕ್ರಮ, ಪ್ರದೀಪ, ವಿನಾಯಕ ಹಾಗೂ ವಿಷ್ಣು ಹೇಗಾದರೂ ಮಾಡಿ ಓಡಿಬಿಡಬಲ್ಲರು. ಅದರೆ ವಿಜೇತಾ ಹೇಗೆ ತಾನೆ ಓಡಿಯಾಳು. ಗಂಡಸರ ಸರಿಸಮಾನವಾಗಿ ಓಡುವುದೂ ಕಷ್ಟವೇ. ಕತ್ತಲ ಕೂಪದಲ್ಲಿ ಗೊತ್ತಿರದ ಜಾಗದಲ್ಲಿ ಗಂಡಸರೇ ಎದ್ದೋ ಬಿದ್ದೋ, ಎಡವುತ್ತಲೋ ಓಡುತ್ತಿದ್ದರು. ವಿಜೇತಾ ಕೂಡ ಮೊದ ಮೊದಲು ಗಂಡಸರ ವೇಗಕ್ಕೆ ತಕ್ಕಂತೆ ಓಡಿದ್ದಳು. ಆದರೆ ನಿಧಾನವಾಗಿ ಆಕೆಯಲ್ಲಿ ಶಕ್ತಿ ಕಡಿಮೆಯಾಗತೊಡಗಿತ್ತು. ವಿನಾಯಕನ ಹಿಂದೆಯೇ ಓಡುತ್ತಿದ್ದ ಆಕೆ ನಿಧಾನಕ್ಕೆ ಹಿಂದೆ ಬಿದ್ದಿದ್ದಳು. ಇದನ್ನು ಮೊಟ್ಟಮೊದಲು ಗಮನಿಸಿದವನು ಪ್ರದೀಪ.
             ಮರಗಳ್ಳರೂ ವೇಗವಾಗಿಯೇ ಓಡಿಬರುತ್ತಿದ್ದರು. ನಾಲ್ಕು ಜನ. ನಿಧಾನವಾಗಿ ಮರಗಳ್ಳರಿಗೂ ಹಾಗೂ ಯುವ ಪಡೆಗೂ ಇದ್ದ ಅಂತರ ಕಡಿಮೆಯಾಗುತ್ತ ಬಂತು. ಆಗ ಪ್ರದೀಪ ಇದ್ದಕ್ಕಿದ್ದಂತೆ ಆಲೋಚನೆ ಮಾಡಿದ. ಇನ್ನು ತಡ ಮಾಡಿದರೆ ಶತ್ರು ದಾಳಿ ಮಾಡುವುದು ನಿಶ್ಚಿತ. ವಿಜೇತಾಳಲ್ಲಿ ಶಕ್ತಿ ಕಡಿಮೆಯಾಗುತ್ತಿದೆ. ಆಕೆಯನ್ನು ಮರಗಳ್ಳರು ಹಿಡಿದುಕೊಳ್ಳುತ್ತಾರೆ. ಏನಾದರೂ ಮಾಡಬೇಕು ಎಂದುಕೊಂಡ. ತಕ್ಷಣವೇ ತನ್ನ ವೇಗವನ್ನು ಕಡಿಮೆಮಾಡಿಕೊಂಡ. ವಿಜೇತಾಳ ಬಳಿ ಜೋರಾಗಿ ಓಡು ಎಂದ. ಆಕೆ ತುಸು ಮುಂದಕ್ಕೆ ಹೋದಳು ಎಂದ ತಕ್ಷಣ ಪ್ರದೀಪ ಒಮ್ಮೆಲೆ ಗಕ್ಕನೆ ನಿಂತ. ನಿಂತವನೇ ಸೀದಾ ಉಲ್ಟಾ ತಿರುಗಿದ. ಅಷ್ಟೇ ಅಲ್ಲ ಮರಗಳ್ಳರಿಗೆ ಅಭಿಮುಖವಾಗಿ ಓಡ ತೊಡಗಿದ. ಕತ್ತಲೆಯಲ್ಲಿ ಮರಗಳ್ಳರಿಗೆ ಪ್ರದೀಪನ ಈ ರೀತಿಯ ಚರ್ಯೆ ಅರ್ಥವೇ ಆಗಲಿಲ್ಲ.
           ಉಲ್ಟಾ ಓಡುತ್ತಿದ್ದ ಪ್ರದೀಪ ಮರಗಳ್ಳರು ಹತ್ತಿರಕ್ಕೆ ಬರುವವರೆಗೂ ಕಾದ. ನಾಲ್ಕು ಜನರಲ್ಲಿ ಒಬ್ಬಾತ ಹತ್ತಿರ ಬಂದ. ಓಡುತ್ತಿದ್ದ ಪ್ರದೀಪ ತಕ್ಷಣ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಬಲವಾಗಿ ಬೀಸಿದ. ಹೊಡೆತ ಬಲವಾಗಿ ಮರಗಳ್ಳನ ತಲೆಗೆ ಬಿದ್ದಿತ್ತು. `ವಿಕಾರವಾಗಿ ಕೂಗಿಕೊಂಡ ಮರಗಳ್ಳ ತಕ್ಷಣವೇ ಕುಸಿದು ಬಿದ್ದಿದ್ದ. ಇದನ್ನು ನೋಡಿದವರೇ ಉಳಿದ ಮರಗಳ್ಳರು ಒಮ್ಮೆ ತಬ್ಬಿಬ್ಬಾದರು. ಎದುರಾಳಿ ಈ ರೀತಿ ದಾಳಿ ಮಾಡಬಲ್ಲ ಎನ್ನುವ ಸುಳಿವು ಖಂಡಿತವಾಗಿಯೂ ಇರಲಿಲ್ಲ. ಪ್ರದೀಪ ಹೊಡೆದಿದ್ದನ್ನು ಕಂಡು ಒಮ್ಮೆಲೆ ಹೆದರಿದ ಮರಗಳ್ಳರು ವಿನಾಯಕನ ತಂಡವನ್ನು ಬೆನ್ನಟ್ಟುವುದನ್ನು ಬಿಟ್ಟು ಸೀದಾ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ಪ್ರದೀಪ ಮಾತ್ರ ಈಗ ಅವರ ತಿರುಗಿ ಬಿದ್ದಿದ್ದ. ಓಡುತ್ತಿದ್ದವರ ಪೈಕಿ ಒಬ್ಬನ ಬೆನ್ನಟ್ಟಿದ್ದ. ಕಾಡಿನ ದಾರಿಯಲ್ಲಿ ಬಹಳ ದೂರ ಬೆನ್ನಟ್ಟಿದ್ದ. ಆದರೆ ಕೊನೆಗೂ ಮರಗಳ್ಳ ಸಿಗಲಿಲ್ಲ. ತಪ್ಪಸಿಕೊಂಡಿದ್ದ. ಕೈಯಲ್ಲಿದ್ದ ಕಬ್ಬಿಣದ ರಾಡು ಒದ್ದೆ ಓದ್ದೆಯಾಗಿತ್ತು. ಏದುಸಿರು ಬಿಡುತ್ತ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ದಾರಿಯ ಪಕ್ಕದಲ್ಲಿ ಯಾರೋ ನರಳಿದ ಸದ್ದಾಯಿತು. ಮತ್ತೊಮ್ಮೆ ಪ್ರದೀಪ ಜಾಗೃತನಾಗಿ ಕೈಯಲ್ಲಿದ್ದ ರಾಡನ್ನು ಬೀಸಲು ತಯಾರಾಗಿದ್ದುಕೊಂಡು ಅತ್ತ ಹೊರಳಿದ.
           ಪ್ರದೀಪ ತೀರಾ ಹತ್ತಿರಕ್ಕೆ ಬಂದ ಎನ್ನುವಷ್ಟರಲ್ಲಿ ಬವ್...ಎಂದಿತು ಸದ್ದು. ಪ್ರದೀಪ ಒಮ್ಮೆ ಬೆಚ್ಚಿದ್ದ. ನೋಡಿದರೆ ರಾಮು. ಮರಗಳ್ಳನ ಕೊಡಲಿ ಏಟು ತಾಗಿ ಗಾಯಗೊಂಡಿದ್ದ ರಾಮು ತಪ್ಪಿಸಿಕೊಂಡು ಬಂದು ಮಟ್ಟಿಯೊಂದನ್ನು ಹೊಕ್ಕು ಕುಳಿತಿತ್ತು. ಪ್ರದೀಪ ಬಂದಿದ್ದನ್ನು ಕಂಡು ಮರಗಳ್ಳನೇ ಇರಬೇಕು, ತನ್ನ ಮೇಲೆ ದಾಳಿ ಮಾಡಲು ಬಂದಿರಬೇಕು ಎಂದು ಗುರ್ರೆಂದಿತ್ತು. ಪ್ರದೀಪನಿಗೆ ರಾಮುವಿನ ಪರಿಸ್ಥಿತಿ ಗೊತ್ತಾಗಿ `ರಾಮು... ಕುರೂಯ್..' ಎಂದ. ತನ್ನ ಹೆಸರು ಹಿಡಿದು ಕರೆದಿದ್ದನ್ನು ಕೇಳಿದ ರಾಮು ಇವನ್ಯಾರೋ ತನ್ನ ಪರಿಚಯದವನೇ ಇರಬೇಕು ಎಂದುಕೊಂಡು ನಿಧಾನವಾಗಿ ಹೊರಬಂದಿತು. ರಾಮು ನಿಧಾನವಾಗಿ ಬಂದಿದ್ದನ್ನು ನೋಡಿದ ಪ್ರದೀಪ ರಾಮುವಿಗೆ ದೊಡ್ಡ ಗಾಯವೇ ಆಗಿದೆ ಎಂದುಕೊಂಡ. ತಕ್ಷಣವೇ ಹತ್ತಿರಕ್ಕೆ ಬಂದ ರಾಮುವಿನ ತಲೆ ನೇವರಿಸಿದ. ಪರಿಚಿತರನ್ನು ಕಂಡ ರಾಮು ಒಮ್ಮೆಲೆ ಪ್ರದೀಪನ ಕೈ ನೆಕ್ಕಲು ಆರಂಭಿಸಿತು. ತಕ್ಷಣ ಪ್ರದೀಪ ತನ್ನ ಕೈಯಿಂದ ರಾಮುವನ್ನು ಎತ್ತಿಕೊಂಡು ವಾಪಾಸು ಹೊರಟ.
            ಕತ್ತಲ ದಾರಿಯಲ್ಲಿ ಕಾನನದಲ್ಲಿ ಹಲವಾರು ಸಾರಿ ಪ್ರದೀಪನಿಗೆ ದಾರಿ ತಪ್ಪಿತ್ತು. ಕಾಡಿನಲ್ಲಿ ಅಲೆದು ಅಲೆದು ಕೊನೆಗೊಮ್ಮೆ ದಂಟಕಲ್ಲಿಗೆ ಹೋಗುವ ದಾರಿ ಸಿಕ್ಕಿತ್ತು. ಅದೇ ದಾರಿಯಲ್ಲಿ ಬಹುದೂರ ಸಾಗಿದವನಿಗೆ ಕೊನೆಗೊಮ್ಮೆ ದಂಟಕಲ್ಲಿನ ಮನೆಗಳು ಕಾಣಿಸಿದ್ದವು. ದಡಬಡನೆ ಅತ್ತ ಹೆಜ್ಜೆ ಹಾಕಿದ. ದಂಟಕಲ್ಲಿನ ಮನೆಯನ್ನು ತಲುಪುವ ವೇಳೆಗೆ ಆಗಲೇ ಪ್ರದೀಪನಿಂದ ಧಾರಾಕಾರ ಬೆವರು ಸುರಿಯುತ್ತಿತ್ತು.
            ಕಾಡಿನ ದಾರಿಯಲ್ಲಿ ಓಡಿ ಬಂದಿದ್ದ ವಿನಾಯಕ, ವಿಜೇತಾ, ಪ್ರದೀಪ ಹಾಗೂ ವಿಷ್ಣು ಪ್ರದೀಪ ಬರದಿದ್ದುದನ್ನು ನೋಡಿ ಕಂಗಾಲಾಗಿ ಕಾಯುತ್ತ ಕುಳಿತಿದ್ದರು. ಕಾಡಿನಲ್ಲಿ ಕೇಳಿಸಿದ್ದ ಆರ್ತನಾದಕ್ಕೆ ದಂಟಕಲ್ ಊರಿನ ಜನರೂ ಕೂಡ ನಡು ರಾತ್ರಿಯಲ್ಲಿ ಎದ್ದು ಬಂದಿದ್ದರು. ಪ್ರದೀಪ ಬಂದಿದ್ದನ್ನು ಕಂಡು ವಿನಾಯಕನ ಬಳಗ ಕೊಂಚ ನಿರಾಳವಾದರೂ ರಕ್ತಮಯವಾಗಿದ್ದ ಆತನ ಕೈ ಹಾಗೂ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ನೋಡಿ ಹೌಹಾರಿದರು. ರಾಮುವನ್ನು ಹೊತ್ತುಕೊಂಡು ಬರುತ್ತಿದ್ದುದನ್ನೂ ನೋಡಿ ಮನೆಯವರೆಲ್ಲ ಆಲೋಚನೆಗೆ ಬಿದ್ದರು.

(ಮುಂದುವರಿಯುತ್ತದೆ...)
           

No comments:

Post a Comment