Thursday, July 30, 2015

ಅಘನಾಶಿನಿ ಕಣಿವೆಯಲ್ಲಿ-24

             `ಪ್ರದೀಪ.. ಏನಾಯ್ತು? ಇದೇನು ಮೈ, ಕೈ ಎಲ್ಲ ರಕ್ತಮಯವಾಗಿದೆ?' ಎಂದು ಎಲ್ಲರೂ ಕೇಳಲಾರಂಭಿಸಿದ್ದರು. ಪ್ರದೀಪ ಸುಧಾರಿಸಿಕೊಳ್ಳುತ್ತ ಕುಳಿತ. ರಾಮುವನ್ನು ಕೆಳಕ್ಕೆ ಇಳಿಸಿದ. ರಾಮು ಕುಂಟುತ್ತ ಓಡಲು ಸಾಗಿ ಬಿದ್ದುಕೊಂಡಿತು. ವಿನಾಯಕ ಕೂಡಲೇ ಒಳಹೋಗಿ ರಾಮುವಿಗಾಗಿ ಪಶು ಚಿಕಿತ್ಸಾಲಯದಿಂದ ತಂದಿದ್ದ ಔಷಧಿಯನ್ನು ಹಚ್ಚಿದ. ರಾಮು ನೋವಿನಿಂದ ನರಳಿತು. ವಿನಾಯಕ ಔಷಧಿ ಹಚ್ಚುವ ವೇಳೆ ಆತನ ಕೈಯನ್ನು ಹಾಗೂ ಮುಖವನ್ನೂ ನೆಕ್ಕಿತು. ರಾಮುವಿನ ಕಾಲಿಗೆ ಕೊಡಲಿಯ ಏಟು ತಾಗಿದ್ದ ಜಾಗದಲ್ಲಿ ರಕ್ತ ಬರುತ್ತಲೇ ಇತ್ತು. ಪ್ರದೀಪ ರಕ್ತಮಯವಾಗಿದ್ದ ಅಂಗಿಯನ್ನು ಬಿಚ್ಚಿ, ಕೈ, ಕಾಲುಗಳನ್ನು ತೊಳೆದುಕೊಂಡು ಬಂದ. ಆದರೂ ರಕ್ತದ ವಾಸನೆ ಹೋಗುತ್ತಿಲ್ಲ ಎನ್ನಿಸಿ ಕಿರಿಕಿರಿಯಾದಂತೆ ಆಯಿತು.
             ನಡುರಾತ್ರಿಯಲ್ಲಿ ಎಚ್ಚರವಾಗಿದ್ದ ಪ್ರತಿಯೊಬ್ಬರೂ ಪ್ರದೀಪನ ಮಾತಿಗಾಗಿ ಕಾದು ಕುಳಿತಿದ್ದರು. ಪ್ರದೀಪ ಏನು ಹೇಳಬಹುದು ಎನ್ನುವ ಕುತೂಹಲ ಎಲ್ಲರದ್ದೂ. ಕತ್ತಲಲ್ಲಿ ಹುಂಭತನ ಮಾಡಿ ಕಾಡುಗಳ್ಳರನ್ನು ನೋಡಲು ಹೋಗಿದ್ದ ವಿಷಯವನ್ನು ಈಗಾಗಲೇ ವಿನಾಯಕ, ವಿಜೇತಾ, ವಿಷ್ಣು ಹಾಗೂ ವಿಕ್ರಮರು ಹೇಳಿದ್ದರು. ಆ ನಂತರ ಏನಾಯಿತು? ಕಾಡಿನಲ್ಲಿ ಕೇಳಿಸಿದ್ದ ಆಕ್ರಂದನ ಯಾರದ್ದು ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ. ಪ್ರದೀಪ ಹೇಳಲಿ ಎಂದುಕೊಂಡು ಕಾದರು.
           ಪ್ರದೀಪ ನಿಧಾನವಾಗಿ ಹೇಳಲು ಆರಂಭಿಸಿದ. ವಿಜೇತಾಳನ್ನು ಮುಂದಕ್ಕೆ ಕಳುಹಿಸಿ ತಾನು ಮರಗಳ್ಳನಿಗಾಗಿ ಕಾಯುತ್ತ ನಿಂತಿದ್ದ ವಿಷಯ ಸೇರಿದಂತೆ, ತಾನೊಬ್ಬ ಮರಗಳ್ಳನಿಗೆ ಹೊಡೆದಿದ್ದು, ಆತ ಕೂಗಿಕೊಂಡು ಓಡಿಹೋಗಿದ್ದು, ಇನ್ನೊಬ್ಬನ ಬೆನ್ನಟ್ಟಿದ್ದು, ವಾಪಾಸು ಬರುವಾಗ ರಾಮು ಸಿಕ್ಕಿದ್ದು, ಆಮೇಲೆ ಕಾಡಿನಲ್ಲಿ ದಾರಿ ತಪ್ಪಿದ್ದು ಎಲ್ಲವನ್ನೂ ಹೇಳಿದ. ಪ್ರದೀಪ ಒಂದೊಂದಾಗಿ ವಿಷಯವನ್ನು ಹೇಳುತ್ತಿದ್ದರೆ ಕೇಳುಗರ ಮೈಮೇಲಿನ ರೋಮಗಳೆಲ್ಲ ಮೆಟ್ಟಗಾಗಿದ್ದವು. ಆತಂಕದಿಂದ ಪ್ರತಿಯೊಬ್ಬರೂ ಥರಗುಡುತ್ತಿದ್ದರು. ಮುಂದೇನು ಕಾದಿದೆಯೋ ಭಗವಂತಾ ಎಂದುಕೊಂಡು ಕಾಯುತ್ತಿದ್ದರು. ಖಂಡಿತವಾಗಿಯೂ ಮುಂದೇನೋ ಅಪಾಯ ಕಾದಿದೆ ಎಂದುಕೊಂಡು ಆತಂಕ ಪಟ್ಟುಕೊಂಡರು.
           ಆದರೆ ಪ್ರದೀಪ ಮಾತ್ರ ನಿರಾಳನಾಗಿದ್ದ. ಮರಗಳನ್ನು ಕಡಿದು ಸಾಗಿಸುತ್ತಿದ್ದ ತಂಡಕ್ಕೆ ತಾನು ಸರಿಯಾದ ಉತ್ತರ ಕೊಟ್ಟಿದ್ದೇನೆ. ಪಾಠ ಕಲಿಸಿದ್ದೇನೆ ಎಂದುಕೊಂಡ. ವಿಕ್ರಮ ಹಾಗೂ ವಿಜೇತಾರ ಬಳಿ ಸನ್ನೆ ಮಾಡಿದ ಪ್ರದೀಪ `ನಿಮ್ಮ ಬಳಿ ಮಾತನಾಡಬೇಕಿದೆ..' ಎಂದು ಹೇಳಿದವನೇ ಮಹಡಿಯೇರಿದ. ಪ್ರತಿಯೊಬ್ಬರೂ ತಮ್ಮ ತಮ್ಮ ಸ್ವಸ್ಥಾನಕ್ಕೆ ಮರಳಿದರು. ವಿಕ್ರಮ, ವಿಜೇತಾರು ಪ್ರದೀಪನನ್ನು ಹಿಂಬಾಲಿಸಿದರು. ವಿನಾಯಕ ಕೂಡ ಜೊತೆಗೆ ಬಂದ.
           ಮಹಡಿಯಲ್ಲಿ ಕೋಣೆಯೊಳಕ್ಕೆ ನಾಲ್ವರೂ ಹೋದರು. ಕೋಣೆಯ ಬಾಗಿಲು ಹಾಕಿದ ಪ್ರದೀಪ ಮಾತನಾಡಲು ಆರಂಭಿಸಿದ. `ನೋಡಿ.. ನಾನು ಹೊಡೆದ ಹೊಡೆತಕ್ಕೆ ಖಂಡಿತವಾಗಿಯೂ ಒಬ್ಬಾತ ಸತ್ತಿರುವುದು ಖಾತ್ರಿಯಾಗಿದೆ. ರಾಮು ಇನ್ನೊಬ್ಬನಿಗೆ ಗಾಯ ಮಾಡಿದೆ. ರಾಮುವಿನ ಅಬ್ಬರ ನೋಡಿದರೆ ಅದು ಮಾಡಿದ್ದ ಗಾಯ ಬಹಳ ದೊಡ್ಡದು ಎನ್ನಬಹುದೇನೋ. ನಾವು ಇನ್ನು ಹುಷಾರಾಗಿರಬೇಕು. ನಾಳೆ ನಿಮ್ಮಲ್ಲಿ ಯಾರಾದರೂ ಪೊಲೀಸರಿಗೆ ಮಾಹಿತಿ ನೀಡಿ. ವಿಜೇತಾ ನೀನು ಕ್ಲಿಕ್ಕಿಸಿರುವ ಪೋಟೋಗಳನ್ನು ಜೋಪಾನವಾಗಿ ಇಟ್ಟುಕೋ. ಸ್ಥಳೀಯ ಫಾರೆಸ್ಟ್ ಅಧಿಕಾರಿಗಳಿಗೂ ತಿಳಿಸಿಬಿಡಿ.. ವಿಷಯ ಹಿಂಗಿಂಗ್ ಇದೆ ಅಂತ..' ಎಂದು ಅಧಿಕಾರಿಯುತವಾಗಿ ನುಡಿದ.
             ಪ್ರದೀಪನ ಮಾತಿನ ಗತ್ತು ಎಲ್ಲರಲ್ಲಿಯೂ ಅಚ್ಚರಿ ತಂದಿತ್ತು. ಮರಗಳ್ಳರ ಜೊತೆಗೆ ಕಾದಾಟ ನಡೆಸಿದ ನಂತರ ಇರಬೇಕಾಗಿದ್ದ ಭಯದ ಲವಲೇಶವೂ ಆತನಿಗಿದ್ದಂತೆ ಅನ್ನಿಸಲಿಲ್ಲ. ಇಂತಹ ಅದೆಷ್ಟೋ ಘಟನೆಗಳನ್ನು ತಾನು ಎದುರಿಸಿದ್ದೇನೆ. ಯಾವುದೇ ತೊಂದರೆಯಿಲ್ಲ ಎಂಬಂತೆ ಆತ ಮಾತನಾಡುತ್ತಿರುವುದು ಅಚ್ಚರಿಗೆ ಕಾರಣವಾಗಿತ್ತು. ಮುಂದೇನು ಮಾಡಬೇಕು ಎನ್ನುವುದನ್ನು ಆತ ನಿರ್ದೇಶನದ ಮೂಲಕ ತಿಳಿಸುತ್ತಿದ್ದರೆ ಕೇಳುತ್ತಿದ್ದವರು ಮಾತ್ರ ಅವಾಕ್ಕಾಗಿದ್ದರು. ಪ್ರದೀಪ ಸಾಮಾನ್ಯನೇನಲ್ಲ. ನಮ್ಮಂತೆ ಸಾಧಾರಣ ವ್ಯಕ್ತಿಯೂ ಅಲ್ಲ. ಈತ ರೌಡಿಯೇ, ಅಥವಾ ಬೇರೆ ಇನ್ನೇನಾದರೂ ಆಗಿದ್ದಾನೆಯೇ? ಎಂದೆಲ್ಲ ಚಿಂತಿಸಿದರು.
           `ವಿಕ್ರಂ. ನೀವು ಯಾವ ಕಾರಣಕ್ಕಾಗಿ ಇಲ್ಲಿಗೆ ಬಂದಿದ್ದೀರಿ ಎನ್ನುವ ಮಾಹಿತಿ ನನಗಿದೆ. ನಿಮ್ಮ ಸಹಾಯಕ್ಕೆ ನಾನು ಸದಾ ಸಿದ್ದನಿದ್ದೇನೆ. ಸೂರ್ಯಶಿಖಾರಿ ಗುಂಪಿನ ಬೆನ್ನತ್ತಿ ಬಂದಿರುವುದು ನನ್ನ ಗಮನಕ್ಕಿದೆ. ನಿಮ್ಮ ಜೊತೆಗೆ ಬರುವಾಗಲೇ ನನಗೆ ಇದರ ಮಾಹಿತಿ ಸಿಕ್ಕಿತ್ತು. ಆದರೆ ಇಲ್ಲಿಗೆ ಬಂದ ನಂತರ ನಿಮ್ಮ ತನಿಖಾ ಕೆಲಸ ಹಳಿ ತಪ್ಪುತ್ತಿರುವುದು ನನಗೆ ಗೊತ್ತಾಗುತ್ತಿದೆ. ನೀವು ಮಾಡಬೇಕಾದ ಕೆಲಸ ಯಾವುದೂ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವುದೂ ತಿಳಿದಿದೆ. ನೀವು ಒಪ್ಪಿದರೆ ನಿಮಗೆ ನಾನು ಸಹಾಯ ಮಾಡಬಲ್ಲೆ ನೋಡಿ..' ಎಂದು ಹೇಳಿದ ಪ್ರದೀಪ.
            ಪ್ರದೀಪನ ಮಾತನ್ನು ಕೇಳಿ ವಿಕ್ರಮ ಹಾಗೂ ವಿಜೇತಾ ಬೆಚ್ಚಿ ಬಿದ್ದರು. ಪ್ರದೀಪನ ಮೇಲಿದ್ದ ಗುಮಾನಿ ಜೋರಾಯಿತು. `ನೀನು ಸಹಾಯ ಮಾಡುವುದಾದರೆ ನಮ್ಮ ಅಭ್ಯಂತರ ಇಲ್ಲ. ಆದರೆ ಅದಕ್ಕೆ ಮೊದಲು ನೀನು ಯಾರು ಎನ್ನುವುದನ್ನು ನಮಗೆ ತಿಳಿಸು. ನಮ್ಮ ಬಗ್ಗೆ ಮಾಹಿತಿ ತಿಳಿಯಲು ಹೇಗೆ ಸಾಧ್ಯ? ಸಾಮಾನ್ಯನಾಗಿದ್ದರೆ ನಿನಗೆ ಈ ವಿಷಯವೆಲ್ಲ ತಿಳಿಯುತ್ತಿರಲಿಲ್ಲ ಅಲ್ಲವೇ.. ಮೊದಲು ನಿನ್ನ ಬಗ್ಗೆ ಹೇಳು..' ಎಂದು ವಿಕ್ರಮ ಪಟ್ಟು ಹಾಕುವವನಂತೆ ಕೇಳಿದ.
            `ನಿಮಗೆ ನಾನು ಯಾರು? ಏನು ಮಾಡುತ್ತಿದ್ದೇನೆ ಎನ್ನುವುದು ಮುಂದೆ ಗೊತ್ತಾಗುತ್ತದೆ. ಈಗಲೇ ಅದರ ಬಗ್ಗೆ ಕುತೂಹಲ ಬೇಡ. ಸಮಯ, ಸಂದರ್ಭ ಎಲ್ಲ ಉತ್ತರವನ್ನೂ ನೀಡುತ್ತದೆ. ನಾನು ಪ್ರದೀಪ ಎನ್ನುವುದು ನಿಜ. ನಿಮಗೆ ನಾನು ಏನು ಮಾಡುತ್ತಿದ್ದೇನೆ ಎನ್ನುವುದು ಕುತೂಹಲವಾಗಿಯೇ ಇರಲಿ. ಅಷ್ಟು ತ್ವರಿತವಾಗಿ ನನ್ನ ಬಗ್ಗೆ ಮಾಹಿತಿ ಬೇಕು ಎಂದರೆ ನಾನು ಒಬ್ಬ ಪ್ರೈವೇಟ್ ಡಿಟೆಕ್ಟಿವ್ ಎಂದುಕೊಳ್ಳಿ. ಆದರೆ ಖಂಡಿತ ನಾನು ಪ್ರೈವೆಟ್ ಡಿಟೆಕ್ಟಿವ್ ಎನ್ನುವುದು ನಿಜವಲ್ಲ. ಸಧ್ಯಕ್ಕಿಷ್ಟು ಸಾಕು..' ಎಂದ. ಉಳಿದವರಿಗೆ ಏನು ಹೇಳಬೇಕು ಎನ್ನುವುದು ಗೊತ್ತಾಗದೇ ಸುಮ್ಮನೇ ಉಳಿದಿದ್ದರು.
               `ವಿನು, ವಿಕ್ರಂ. ನಾಳೆ ನೀವು ಮಾಡಬೇಕಾದ ಕೆಲಸ ಸಾಕಷ್ಟಿದೆ. ನಾನು ಹೊಡೆದ ಏಟಿಗೆ ಒಬ್ಬಾತ ಸತ್ತಿರುವುದು ಗ್ಯಾಂರಂಟಿ. ನಾಳೆ ಮುಂಜಾನೆಯೇ ಎದ್ದು ನಾವು ಕಾಡಿಗೆ ಹೋಗಿ ನೋಡೋಣ. ನಾನು ಹೊಡೆದು ಹಾಕಿದವನ ಹೆಣ ಅಲ್ಲಿಯೇ ಇದ್ದರೆ ಆತನ ಚಹರೆ ಗೊತ್ತಾಗುತ್ತದೆ. ಆದರೆ ಕಾಡುಗಳ್ಳರು ಆತನ ಹೆಣವನ್ನು ಅಲ್ಲಿಯೇ ಇಡುವುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಖಂಡಿತವಾಗಿಯೂ ಅವರು ಅದನ್ನು ಹೊತ್ತೊಯ್ದು ನಾಪತ್ತೆ ಮಾಡಿರುತ್ತಾರೆ. ಒಂದು ವೇಳೆ ಅವರು ನಾಪತ್ತೆ ಮಾಡಿದ್ದರೆ ನಾವೆಲ್ಲ ಸೇರಿ ಸುತ್ತಮುತ್ತಲ ಊರುಗಳಲ್ಲಿ ಯಾರು ಮರಣ ಹೊಂದಿದ್ದಾರೆ ಎನ್ನುವುದನ್ನು ಪತ್ತೆ ಮಾಡೋಣ. ಆಗ ನಮಗೆ ಏನಾದರೂ ಲಿಂಕ್ ಸಿಗಬಹುದು. ಹಾದಿ ತಪ್ಪುತ್ತಿರುವ ನಿಮ್ಮ ತನಿಖಾ ಕೆಲಸಕ್ಕೆ ಈ ಹುಡುಕಾಟ ಏನಾದರೂ ಪ್ರಯೋಜನವನ್ನು ತಂದುಕೊಡಬಹುದು' ಎಂದ. ಎಲ್ಲರೂ ತಲೆಯಾಡಿಸಿದರು.
            `ಇನ್ನೊಂದು ಪ್ರಮುಖ ಕೆಲಸವನ್ನು ನಾವು ಮಾಡಬೇಕಾಗಿದೆ. ನಮ್ಮ ರಾಮು ಇದೆಯಲ್ಲ ಅದು ನಮಗೊಂದು ಪೂರಕ ಕೆಲಸವನ್ನು ಮಾಡಿದೆ. ಅದು ಕಳ್ಳಸಾಗಾಣಿಕೆ ಮಾಡುವವನ ಕಾಲಿಗೆ ಕಚ್ಚಿದೆ. ಹೀಗೆ ಕಚ್ಚಿದ ವ್ಯಕ್ತಿಯನ್ನೂ ಹುಡುಕೋಣ. ಖಂಡಿತವಾಗಿಯೂ ಆತ ಈ ಊರಿನ ಸುತ್ತಮುತ್ತಲ ಫಾಸಲೆಯಲ್ಲಿ ಎಲ್ಲಾದರೂ ಇರಲೇಬೇಕು. ನಾವು ಹುಡುಕುವ ಸಂದರ್ಭದಲ್ಲಿ ಯಾರೂ ಕೂಡ ನಮಗೆ ನಾಯಿ ಕಚ್ಚಿದೆ ಎಂದು ಮಾಹಿತಿ ನೀಡುವುದಿಲ್ಲ. ಆದರೆ ಯಾರ ಕಾಲಿಗೆ ಗಾಯವಾಗಿದೆ ಎಂದು ಹುಡುಕೋಣ. ಗಾಯವಾದವರು ಒಬ್ಬರಿಗಿಂತ ಜಾಸ್ತಿ ಇದ್ದರೆ ಎಲ್ಲರನ್ನೂ ವಿಚಾರಿಸೋಣ. ಒಬ್ಬ ಒದ್ದರೆ ಆತನನ್ನು ಹಿಡಿದುಕೊಂಡು ಬರೋಣ. ಪ್ರಶ್ನೆ ಕೇಳೋಣ. ನಮಗೆ ಮುಂದೆ ಏನಾದರೂ ಪ್ರಯೋಜನಕ್ಕೆ ಬರಬಹುದು..' ಎಂದ ಪ್ರದೀಪ.
            ಪ್ರದೀಪನ ಮಾತುಗಳು ಎಷ್ಟು ನಿಖರವಾಗಿತ್ತೆಂದರೆ ಉಳಿದವರಿಗೆ ಬೇರೆ ಪ್ರಶ್ನೆಗಳನ್ನು ಕೇಳಲು ಅವಕಾಶವೇ ಇರಲಿಲ್ಲ. ಖಡಕ್ ಮಾತುಗಳು ಎಲ್ಲರ ಮನಸ್ಸಿನಲ್ಲಿಯೂ ನಾಟಿದ್ದವು. ಅಷ್ಟರಲ್ಲಾಗಲೇ ಬೆಳಗಿನ ಇನ್ನೊಂದು ಜಾವ ಆರಂಭಗೊಂಡಿತ್ತು. ಚಿಕ್ಕದೊಂದು ಗುಕ್ಕಿನ ನಿದ್ದೆಗೆ ಎಲ್ಲರೂ ಶರಣಾದರು. ಬೆಳಕು ಇನ್ನೂ ಹರಿದಿರಲಿಲ್ಲ. ಅಷ್ಟರಲ್ಲಾಗಲೇ  ಎಲ್ಲರೂ ಎದ್ದು, ಮುಂದಿನ ಕೆಲಸದಲ್ಲಿ ನಿರತರಾದರು. ವಿನಾಯಕನಾಗಲೇ ಪೊಲೀಸರಿಗೆ ಹಾಗೂ ಫಾರೆಸ್ಟ್ ಆಫೀಸರುಗಳಿಗೆಲ್ಲ ಪೋನ್ ಮಾಡಿದ್ದ. ಅವರು ಬರಲು ಇನ್ನೂ ಸಮಯವಿತ್ತು. ಅಷ್ಟರಲ್ಲಿ ರಾತ್ರಿ ಘಟನೆ ನಡೆದ ಸ್ಥಳವನ್ನು ನೋಡಿಕೊಂಡು ಬರೋಣ ಎಂದು ಹೊರಟರು ಎಲ್ಲರೂ.
           ಊರ ಹಿಂದಿನ ಕಡಿದಾದ ಗುಡ್ಡವನ್ನು ಏರಿ ಕಾಡಿನ ಒಳಹೊಕ್ಕವರಿಗೆ ರಾತ್ರಿ ನಡೆದಿದ್ದ ಘಟನೆಗಳೆಲ್ಲ ಕಣ್ಣಮುಂದೆ ಬರಲಾರಂಭಿಸಿದ್ದವು. ರಾತ್ರಿ ಮರಗಳ್ಳರನ್ನು ನೋಡಲು ಹೋಗಿದ್ದು, ಅವರು ಬೆನ್ನಟ್ಟಿದ್ದೆಲ್ಲ ಹಸಿ ಹಸಿಯಾಗಿದ್ದವು. ಇವರು ಸಾಗಿದ ಮಾರ್ಗದಲ್ಲಿ ಇವರ ಓಡಾಟಕ್ಕೆ ಪ್ರತಿಯಾಗಿ ಬಾಗಿದ್ದ ಗಿಡಗಳೆಲ್ಲ ಇನ್ನೂ ನೇರವಾಗಿರಲಿಲ್ಲ. ಅಲ್ಲೊಂದು ಕಡೆ ರಕ್ತದ ಕಲೆ ಬಿದ್ದಿತ್ತು. ಪ್ರದೀಪ ಕೂಡಲೇ ಜಾಗೃತನಾದ. ಇಲ್ಲೇ ಎಲ್ಲೊ ಒಂದು ಕಡೆ ತಾನು ಹೊಡೆದಿದ್ದು, ಮರಗಳ್ಳ ಬಿದ್ದಿರಬಹುದು ಎಂದು ಎಲ್ಲರನ್ನೂ ಅತ್ತ ಕಡೆಗೆ ಕರೆದೊಯ್ದ.
          ಆ ಜಾಗದಲ್ಲಿ ರಕ್ತದ ಕಲೆಗಳಿದ್ದವೇ ಹೊರತು ಯಾವುದೇ ವ್ಯಕ್ತಿಯ ಸವ ಇರಲಿಲ್ಲ. ಮರಗಳ್ಳರು ಪ್ರದೀಪನ ಏಟಿಗೆ ಪ್ರಾಣ ಬಿಟ್ಟಿದ್ದ ವ್ಯಕ್ತಿಯ ದೇಹವನ್ನು ಆಗಲೇ ಹೊತ್ತೊಯ್ದು ಬಿಟ್ಟಿದ್ದರು. ಹೊತ್ತೊಯ್ಯುವಾಗ ರಕ್ತದ ಹನಿಗಳು ಬಿದ್ದಿರಲೇಬೇಕಲ್ಲ ಎಂದುಕೊಂಡ ಪ್ರದೀಪ. ರಕ್ತದ ಕಲೆ ಬಿದ್ದಲ್ಲಿ ಹೋದರೆ ಏನಾದರೂ ಸಿಗಬಹುದಲ್ಲ ಎಂದುಕೊಂಡ. ಇವರು ಕಾಡಿನೊಳಕ್ಕೆ ಹೊರಟು, ಗುಡ್ಡವನ್ನು ಏರಿ ಬಂದಿದ್ದ ಮಾರ್ಗಕ್ಕೆ ವಿರುದ್ಧ ದಿಕ್ಕಿನಲ್ಲಿ ರಕ್ತದ ಕಲೆಗಳು ಬಿದ್ದಿದ್ದವು. ಪ್ರದೀಪ ಆ ಜಾಡನ್ನು ಹಿಡಿದು ಹೊರಟ. ಪ್ರದೀಪನನ್ನು ಉಳಿದವರು ಹಿಂಬಾಲಿಸಿದ್ದರು. ಕಾಡಿನಲ್ಲಿಯೇ ಹಲವಾರು ಸುತ್ತು ಬಳಸಿನ ಮಾರ್ಗದ ಮೂಲಕ ಸಾಗಿದ್ದರು. ರಕ್ತದ ಕಲೆ ಮೊದ ಮೊದಲು ಬಹಳ ಬಿದ್ದಿತ್ತು. ಕೊನೆ ಕೊನೆಗೆ ಹನಿಗಳು ಕಡಿಮೆಯಾಗಿದ್ದವು.
           ಕಾಡಿನ ವಿವಿಧ ಕಡೆಗಳಲ್ಲಿ ಸಾಗಿ ಕೊನೆಗೊಮ್ಮೆ ರಸ್ತೆಯ ಬಳಿ ಬಂದ ನಂತರ ಇದಕ್ಕಿದ್ದಂತೆ ರಕ್ತದ ಹನಿಗಳು ಕಾಣೆಯಾಗಿದ್ದವು. ರಕ್ತದ ಹನಿ ಕಾಣೆಯಾದ ಜಾಗದಲ್ಲಿ ಯಾವುದೋ ವಾಹನದ ಟೈರಿನ ಅಚ್ಚುಗಳಿದ್ದವು. ಅಂದರೆ ಹೊಡೆತ ತಿಂದು ಸತ್ತಿದ್ದವನನ್ನು ವಾಹನದ ಮೇಲೆ ಹಾಕಿಕೊಂಡು ಹೋಗಿರುವುದು ಖಾತ್ರಿಯಾಗಿತ್ತು. ವಾಹನದ ಗಾಲಿಯ ಅಚ್ಚನ್ನು ಆದರಿಸಿ ಹೋಗೋಣವೇ ಎಂದುಕೊಂಡವರಿಗೆ ಪೊಲೀಸ್ ಹಾಗೂ ಫಾರೆಸ್ಟ್ ಅದಿಕಾರಿಗಳಿಗೆ ಪೋನ್ ಮಾಡಿರುವುದು ನೆನಪಾಯಿತು. ಇಷ್ಟು ಹೊತ್ತಿಗೆ ಅವರೆಲ್ಲ ಬಂದಿರುತ್ತಾರೆ. ಮಾಹಿತಿ ನೀಡಬೇಕು ಎನ್ನುವುದು ನೆನಪಾಗಿ ವಾಪಾಸಾದರು. ಅಷ್ಟರಲ್ಲಾಗಲೇ ಸೂರ್ಯ ಬಾನಂಚಿನಿಂದ ಮೇಲಕ್ಕೆ ಏರಿ ಬಂದಿದ್ದ.
          `ವಿನು.. ನಾವು ಮನೆಗೆ ವಾಪಾಸಾದ ನಂತರ ನಮ್ಮೂರ ಬಳಿ ಯಾವುದಾದರೂ ವಾಹನ ಬಂದ ಸದ್ದನ್ನು ಕೇಳಿದ್ದೆಯಾ?' ಪ್ರದೀಪ ಪ್ರಶ್ನಿಸಿದ್ದ.
             `ಇಲ್ಲ. ಕೇಳಿಸಲಿಲ್ಲ ಮಾರಾಯಾ.' ಎಂದ ವಿನಾಯಕ
             `ಓಹ್.. ಹೌದಾ. ಹಾಗಾದರೆ ನಾವು ಈಗ ಹೋಗಿಬಂದ ದಾರಿ ಇನ್ನೆಲ್ಲಿಗೆ ಸಾಗುತ್ತದೆ?'
             `ಹಾ. ಅದು ನಮ್ಮೂರಿಗೆ ಸಂಪರ್ಕ ಕಲ್ಪಸುವ ಇನ್ನೊಂದು ರಸ್ತೆ. ಬಾಳೇಸರ ರಸ್ತೆಯಿಂದ ಲಿಂಕ್ ಇದೆ. ಆ ಮಾರ್ಗದಲ್ಲಿ ಬಂದರೆ ನಾವು ಬಂದಿರುವ ಈ ಕಾಡನ್ನು ಸುತ್ತು ಹಾಕಿ ನಮ್ಮೂರಿಗೆ ಬರಬೇಕು. ಬಹುಶಃ ವಾಹನ ಬಂದಿದ್ದರೆ ಬಾಳೇಸರ ರಸ್ತೆಯತ್ತ ಸಾಗಿರಬೇಕು.' ಎಂದು ಉತ್ತರ ನೀಡಿದ್ದ ವಿನಾಯಕ. ವಾಪಾಸಾಗುವ ವೇಳೆಗೆ ಪೊಲೀಸರು ಹಾಗೂ ಫಾರೆಸ್ಟ್ ಅಧಿಕಾರಿಗಳು ಬಂದಿದ್ದರು.

(ಮುಂದುವರಿಯುತ್ತದೆ)

Sunday, July 19, 2015

ಅಘನಾಶಿನಿ ಕಣಿವೆಯಲ್ಲಿ-23

            ಉಂಚಳ್ಳಿ ಜಲಪಾತದ ಬಳಿ ಅರಣ್ಯಗಳ್ಳರು ಹಾಗೂ ಫಾರೆಸ್ಟ್ ಆಪೀಸರ್ ಜೊತೆ ಅರಣ್ಯಗಳ್ಳತನ ಕುರಿತಂತೆ ನಡೆದ ಮೇಲಾಟದ ವಿಷಯ ಸಂಜೆಯ ವೇಳೆಗೆ ಎಲ್ಲ ಕಡೆ ಹರಡಿಹೋಗಿತ್ತು. ಪಾತರಗಿತ್ತಿಯನ್ನು ಹಿಡಿಯುವ ನೆಪದಲ್ಲಿ ಅಘನಾಶಿನಿ ಕಣಿವೆಗೆ ಬಂದ ಯುವ ಪಡೆಗೂ ಕೂಡ ಸಂಜೆಯ ಸಮಯದಲ್ಲಿಯೇ ವಿಷಯ ತಿಳಿದಿತ್ತು. ಮರುದಿನ ಏನಾದರಾಗಲಿ ಅರಣ್ಯಗಳ್ಳರು ಹಾಗೂ ಪಾರೆಸ್ಟ್ ಆಫೀಸರ್ ನಡುವೆ ನಡೆದ ಛೇಸಿಂಗ್ ಜಾಗಕ್ಕೆ ಹೋಗುವುದು ಒಳಿತು ಎಂದುಕೊಂಡರು ಎಲ್ಲರೂ. ಸುಮ್ಮನೇ ಹೋಗುವುದೇಕೆ, ಉಂಚಳ್ಳಿ ಜಲಪಾತವನ್ನು ನೋಡುವ ನೆಪವನ್ನು ಇಟ್ಟುಕೊಳ್ಳೋಣ ಎಂದುಕೊಂಡು ನಿರ್ಧಾರ ಮಾಡಿದವರು ವಿಕ್ರಮ ಹಾಗೂ ವಿಜೇತಾ. ವಿನಾಯಕನ ಬಳಿ ಈ ಸಂಗತಿಯನ್ನು ಅರುಹಿದಾಗ ಅವನೂ ಒಪ್ಪಿಗೆ ಸೂಚಿಸಿದ್ದ.
            ಸಂಜೆಯ ವೇಳೆ ಊಟ ಮುಗಿಸಿ ಹಾಸಿಗೆಯತ್ತ ಮುಖ ಮಾಡಿದ್ದರು ಎಲ್ಲರೂ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪೊಲೀಸ್ ಸ್ಟೇಶನ್, ಗುಡ್ಡೇ ತೋಟದ ಗಣಪತಿ ದೇವಾಲಯದಲ್ಲಿ ನಡೆದ ಘಟನೆಗಳೇ ಮನಸ್ಸಿನಲ್ಲಿ ಇಣುಕುತ್ತಿದ್ದವು. ಪೊಲೀಸರಿಗೇನೋ ಸಬೂಬನ್ನು ಹೇಳಿ ತಪ್ಪಿಸಿಕೊಂಡು ಬಂದದ್ದಾಗಿದೆ. ಆದರೆ ದೇವಸ್ಥಾನದ ಆವರಣದಲ್ಲಿ ವಿಷ್ಣು ಎಡವಿ ಬಿದ್ದಿದ್ದು ಮಾತ್ರ ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ವಿಷ್ಣುವೇನೋ ಇಂತದ್ದನ್ನೆಲ್ಲ ತಲೆಗೆ ಹಾಕಿಕೊಳ್ಳುವವನಲ್ಲ. ಆದರೆ ಉಳಿದವರ ಮನಸ್ಸು ಮಾತ್ರ ಏನೋ ಆಗುತ್ತಿದೆ, ಆಗುತ್ತದೆ ಎನ್ನುವ ಚಿಂತನೆ ನಡೆಸಿದ್ದರು. ಅಪಾಯ ಕಾದಿರಬಹುದಾ? ಯಾವ ರೀತಿಯ ಅಪಾಯ ಆಗಬಹುದು? ವಿಷ್ಣುವಿನ ಜೀವಕ್ಕೆ ಏನಾದರೂ ತೊಂದರೆ ಆಗುತ್ತದೆಯೇ? ಮತ್ತಿನ್ನೇನಾದರೂ ಕಂಟಕ ಇದೆಯೇ ಹೀಗೆಲ್ಲ ಆಲೋಚನೆ ಮಾಡಿದರು. ಆಲೋಚನೆಯಲ್ಲಿ ಮುಳುಗಿದ್ದವರಿಗೆ ಅದ್ಯಾವಾಗ ನಿದ್ದೆ ಬಂದಿತ್ತೋ ಗೊತ್ತಾಗಲಿಲ್ಲ.
           ವಿಜೇತಾಳಿಗೆ ನಡುರಾತ್ರಿ ಮತ್ತೆ ಎಚ್ಚರಾಯಿತು. ದಂಟಕಲ್ಲಿಗೆ ಬಂದ ಹೊಸತರಲ್ಲಿ ನಡುರಾತ್ರಿ ಎಚ್ಚರಾಗಿತ್ತು. ಈಗ ಮತ್ತೊಮ್ಮೆ ಎಚ್ಚರಾಗಿತ್ತು. ದಂಟಕಲ್ಲಿನ ಮೇಲ್ಭಾಗದಲ್ಲಿಯೇ ದಟ್ಟವಾಗಿ ಹಬ್ಬಿರುವ ಕಾಡಿನಲ್ಲಿ ಮತ್ತೆ ಯಥಾ ಪ್ರಕಾರ ಮರಕಡಿಯುವ ಸದ್ದು. ಒಮ್ಮೊಮ್ಮೆ ಗರಗಸ ಸದ್ದು ಮಾಡಿದರೆ ಮತ್ತೊಮ್ಮೆ ಕೊಡಲಿಯ ಸದ್ದು ಕೇಳುತ್ತಿತ್ತು. ಗಾಳಿಯ ಚಲನೆಯ ಆಧರಿಸಿ ದಟ್ಟವಾಗಿ ಹಾಗೂ ಕ್ಷೀಣವಾಗಿ ಕಿವಿಗೆ ಬಡಿಯುತ್ತಿತ್ತು. ವಿಜೇತಾ ಬಹಳ ಕಾಲ ಇದನ್ನು ಆಲಿಸಿದಳು. ಕೊನೆ ಕೊನೆಗೆ ಅಸಹನೀಯ ಎನ್ನಿಸಿ ಹೊರಗೆ ಎದ್ದು ಬಂದಳು. ಮಹಡಿಯ ಇನ್ನೊಂದು ಕಡೆಯಲ್ಲಿ ವಿಕ್ರಮ, ವಿಷ್ಣು, ವಿನಾಯಕ ಹಾಗೂ ಪ್ರದೀಪರು ಮಲಗಿದ್ದರು. ನಿಧಾನವಾಗಿ ವಿಕ್ರಮನ ಕಡೆ ಸರಿದು ಹೋದ ವಿಜೇತಾ ಅವನನ್ನು ಎಬ್ಬಿಸಲು ಪ್ರಯತ್ನಿಸಿದಳು.
              ವಿಕ್ರಮನಿಗೂ ನಿದ್ದೆ ಬಂದಿರಲಿಲ್ಲ. ವಿನಯಚಂದ್ರನಿಗೆ ಅಷ್ಟೇ ಅಲ್ಲ ಪಕ್ಕದಲ್ಲಿ ಮಲಗಿದ್ದವರಿಗೆ ಯಾರಿಗೂ ಕೂಡ ನಿದ್ದೆ ಬಂದಿರಲಿಲ್ಲ. ವಿಜೇತಾ ಎದ್ದು ಬಂದಿದ್ದನ್ನು ಕಂಡು `ಏನಾಯ್ತು?' ಎಂದ ವಿಕ್ರಮ. ಅದಕ್ಕೆ ಪ್ರತಿಯಾಗಿ ವಿಜೇತಾ ಕತ್ತಲಿನಲ್ಲಿ ಕೇಳಿಬರುತ್ತಿದ್ದ ಸದ್ದಿನ ಬಗ್ಗೆ ಹೇಳಿದಳು. ಯಾರೋ ಮರ ಕಡಿಯುತ್ತಿದ್ದಾರೆ ಎಂದೂ ತಿಳಿಸಿದಳು.
             ವಿಕ್ರಮ ಹಾಗೂ ಉಳಿದವರಿಗೂ ಈ ವಿಷಯ ತಿಳಿದಿತ್ತು. ಕಾಡಿಗೆ ಹೋಗಿ ಬರೋಣವಾ ಎಂದುಕೊಂಡರು. ಪ್ರದೀಪ ಹೂ ಅಂದ. ವಿಷ್ಣುವೂ ಹೂ ಅಂದುಬಿಟ್ಟಿದ್ದ. ಕೊನೆಗೆ ನಡು ರಾತ್ರಿಯಾದರೂ ಸರಿ ಹೋಗಿ ಬರೋಣ. ಐದಾರು ಜನರಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಮರ ಕಡಿಯುತ್ತಿರುವ ಪೋಟೋಗಳು ಸಿಕ್ಕರೆ ಅಷ್ಟೇ ಸಾಕು ಎಂದುಕೊಂಡರು ಎಲ್ಲರೂ. ವಿನಾಯಕನ ಬಳಿ ಹೇಳಿದಾಗ ಮೊದಲಿಗೆ ವಿರೋಧಿಸಿದನಾದರೂ ಕೊನೆಗೆ ಒಪ್ಪಿಕೊಂಡ. ಮನೆಯಲ್ಲಿ ಇದ್ದ ಮೂರಡಿಯ ಬ್ಯಾಟರಿಯನ್ನು ಎತ್ತಿಕೊಂಡ. ಒಂದು ಕಿ.ಮಿ ದೂರದ ವರೆಗೂ ಆ ಬ್ಯಾಟರಿ ಬೆಳಕನ್ನು ಬೀರುತ್ತಿತ್ತು. ವಿನಾಯಕ ಸೀದಾ ಹೊರಕ್ಕೆ ಬಂದವನೇ ಪಂಜರದಲ್ಲಿ ಕೂಡಿ ಹಾಕಲಾಗಿದ್ದ ಮುದ್ದಿನ ನಾಯಿ ರಾಮುವನ್ನು ಹೊರಗೆ ಬಿಟ್ಟ. ಅದೇನು ಸೂಟು ಸಿಕ್ಕಿತ್ತೋ ರಾಮುವಿಗೆ. ಛಂಗನೆ ನೆಗೆಯಿತು. ತನ್ನ ಮನಯ ಯಜಮಾನ ಕಾಡಿನ ಕಡೆಗೆ ತೆರಳುತ್ತಿದ್ದಾನೆ ಎಂಬುದು ನಾಗಿಗೆ ಅದ್ಹೇಗೋ ತಿಳಿದುಬಿಟ್ಟಿತ್ತು. ಬಾಲ ಹಾಗೂ ಮೈಯನ್ನು ವಿಚಿತ್ರವಾಗಿ ಕುಳಿಸುತ್ತ ನೆಗೆಯತೊಡಗಿತ್ತು.
            ಕಾಡನ್ನು ಅರಿತಿದ್ದ ವಿನಾಯಕ ಎಲ್ಲರನ್ನೂ ಹಿತ್ಲಾಕಡೆಗೆ ಕರೆದುಕೊಂಡು ಗುಡ್ಡ ಹತ್ತಿಸಿದ. ಎಲ್ಲರೂ ಸುಮ್ಮನೆ ಬನ್ನಿ ಎಂದು ಹೇಳಲು ಮರೆಯಲಿಲ್ಲ. ಪ್ರತಿಯೊಬ್ಬರ ಬಳಿಯೂ ಚಿಕ್ಕ ಬೆಳಕು ಇದ್ದೇ ಇದ್ದು. ಮೊಬೈಲ್ ಟಾರ್ಚುಗಳೂ ಇದ್ದವು. ಸದ್ದಿಲ್ಲದೇ ಗುದ್ದವನ್ನು ಏರ ತೊಡಗಿದರು. ಹತ್ತಿರದಲ್ಲೇ ಇದ್ದ ರಸ್ತೆಯನ್ನು ದಾಟಿ ಕಾನನದಲ್ಲಿ ಸದ್ದು ಕೇಳಿ ಬಂದ ಕಡೆಗೆ ಮುಖ ಮಾಡಿದರು. ವಿಜೇತಾ ಹಾಗೂ ವಿಕ್ರಮ ಇಬ್ಬರೂ ತಮ್ಮ ಬಳಿ ಇದ್ದ ನೈಟ್ ವಿಷನ್ ಕ್ಯಾಮರಾವನ್ನು ಸಜ್ಜಾಗಿ ಇರಿಸಿಕೊಂಡಿದ್ದರು. ಯಾವ ಕ್ಷಣದಲ್ಲಿ ಬೇಕಾದರೂ ಪೋಟೋ ತೆಗೆಯುವ ಸಂದರ್ಭ ಎದುರಾಗಬಹುದಿತ್ತು. ಅದಕ್ಕಾಗಿ ಇಬ್ಬರೂ ಚುರುಕಾಗಿ ಸಾಗುತ್ತಿದ್ದರು. ಇಬ್ಬರ ಕೈಗಳೂ ಕ್ಯಾಮರಾ ಮೇಲಿದ್ದವು.
           ರಾಜು ಮುಂದಕ್ಕೆ ಸಾಗುತ್ತಿತ್ತು. ರಾಜುವಿನ ಹಿಂದೆ ರಾಜುವಿನ ಜಾಡಿನಲ್ಲಿ ವಿನಾಯಕ ಮೌನವಾಗಿ ಸಾಗುತ್ತಿದ್ದ. ಅವನ ಹಿಂದೆ ಪ್ರದೀಪ, ವಿಕ್ರಮ, ವಿಜೇತಾ ಹಾಗೂ ಕೊನೆಯಲ್ಲಿ ವಿಷ್ಣು. ಒಬ್ಬರಿಗೊಬ್ಬರ ನಡುವೆ ಮಾರು ದೂರ ಅಂತರ. ಪ್ರದೀಪ ಮಾತ್ರ ದೊಡ್ಡದೊಂದು ಕಬ್ಬಿಣದ ರಾಡನ್ನು ಹಿಡಿದು ಸಾಗುತ್ತಿದ್ದ. ವಿನಾಯಕನ ಹಿಂದೆ ಜಾಡು ಹಿಡಿದು ಸಾಗುತ್ತಿದ್ದರೂ ಕೂಡ ಹಿಂಬಾಲಿಸುತ್ತಿದ್ದವರು ಆಗೊಮ್ಮೆ ಈಗೊಮ್ಮೆ ದಾರಿ ತಪ್ಪುತ್ತಿದ್ದರು. ಕಾಡಿನಲ್ಲಿ ಮುಂದೆ ಮುಂದೆ ಸಾಗಿದಂತೆಲ್ಲ ಕತ್ತಲೆಯ ನೀರವತೆಯನ್ನು ಸೀಳಿ ಬರುವಂತಹ ಕಾಡು ಹಕ್ಕಿಗಳ ಕೂಗು ಕಿರ್ರೆಂದು ಕೇಳಿಸುತ್ತಿದ್ದವು. ಮರ ಕಡಿಯುವ ಸದ್ದು ಕೂಡ ನಿಧಾನವಾಗಿ ದೊಡ್ಡದಾಗತೊಡಗಿತ್ತು. ಎಲ್ಲರೂ ಮುಂದೆ ಮುಂದೆ ಹೆಜ್ಜೆ ಹಾಕಿದರು.
             ಕೊನೆಗೊಮ್ಮೆ ವಿನಾಯಕ ಗಕ್ಕನೆ ನಿಂತ. ನಿಂತವನೇ ಮುಂದೆ ಹೋಗುತ್ತಿದ್ದ ರಾಜುವಿನ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡ. ರಾಜು ಕೊಸರಾಡತೊಡಗಿತು. ಹಿಂಬಾಲಿಸುತ್ತಿದ್ದವರೆಲ್ಲ ಒಮ್ಮೆ ಢಿಕ್ಕಿ ಹೊಡೆದರೋ ಎನ್ನುವಂತೆ ನಿಂತರು. ಪಿಸುಮಾತಿನಲ್ಲಿ ಹಿಂದಿದ್ದವರ ಬಳಿ `ಅದೋ ಅಲ್ಲಿ ನೋಡಿ.. ಮರ ಕೊಯ್ಯುತ್ತಿದ್ದಾರೆ..' ಎಂದ.
             ಕಾಡಿನ ಮೌನದಲ್ಲಿ ಕೊಂಚ ದೂರದಲ್ಲಿ ಲಾಟೀನು ಬೆಳಕಿನಲ್ಲಿ ಒಂದಿಷ್ಟು ಜನ ಮರ ಕಡಿಯುತ್ತಿದ್ದರು. ಅಲ್ಲಿಯೆ ದಡೆಯನ್ನೂ ಮಾಡಿಕೊಂಡು ನಿರಾತಂಕವಾಗಿ ತಮ್ಮ ಕೆಲಸವನ್ನು ಮುಂದುವರಿಸಿದ್ದರು. ವಿಜೇತಾ ಹಾಗೂ ವಿಕ್ರಮ ಇಬ್ಬರೂ ತಮ್ಮ ಕ್ಯಾಮರಾಕ್ಕೆ ಕೆಲಸಕೊಟ್ಟರು. ಅನುಮಾನ ಬಾರದಿರಲಿ ಎನ್ನುವ ಕಾರಣಕ್ಕಾಗಿ ಇಬ್ಬರೂ ಕ್ಯಾಮರಾದ ಫ್ಲಾಷ್ ಲೈಟನ್ನು ಆರಿಸಿದ್ದ ಕಾರಣ ಅದೆಷ್ಟು ಪೋಟೋ ತೆಗೆದರೂ ಮರಗಳ್ಳರಿಗೆ ಗೊತ್ತಾಗಲಿಲ್ಲ. ಪ್ರದೀಪ ಮಾತ್ರ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಸಜ್ಜಾಗಿ ಇರಿಸಿಕೊಂಡಿದ್ದ.
            ಅಷ್ಟರಲ್ಲಿಯೇ ಅಚಾತುರ್ಯವೊಂದು ಘಟಿಸಿಬಿಟ್ಟಿತು. ರಾಮುವಿನ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡಿದ್ದ ವಿನಾಯಕ ಎಂದೆನಲ್ಲ. ದೊಡ್ಡದೊಂದು ಬೇಟೆ ಕಣ್ಣಮುಂದೆ ಇದೆ ಎಂದು ಭಾವಿಸಿದ ರಾಮು ಇದ್ದಕ್ಕಿದ್ದಂತೆ ಕೊಸರಾಡಲಾರಂಭಿಸಿತು. ಕೊಸರಾಡಿದಂತೆಲ್ಲ ವಿನಾಯಕ ತನ್ನ ಹಿಡಿತವನ್ನು ಬಿಗಿ ಮಾಡಿದ್ದ. ಆದರೆ ಕೊನೆಗೊಮ್ಮೆ ಇದ್ದಕ್ಕಿದ್ದಂತೆ ಕುತ್ತಿಗೆ ಪಟ್ಟಿಯಿಂದ ಉಳುಚಿಕೊಂಡ ರಾಮು ಸೀದಾ ಮರಗಳ್ಳರಿದ್ದ ಕಡೆಗೆ ಓಡಿಬಿಟ್ಟಿತ್ತು. `ಅಯ್ಯೋ ಭಾನಗಡಿ ಆಯ್ತಲ್ಲ..' ಎಂದುಕೊಂಡ ವಿನಾಯಕ ತನ್ನ ಹಿಂದೆ ನಿಂತಿದ್ದವರ ಬಳಿ ಓಡಲು ತಯಾರಾಗುವಂತೆ ತಿಳಿಸಿದ. ಈ ಕತ್ತಲಲ್ಲಿ ಗೊತ್ತಿರದ ಕಾಡಿನಲ್ಲಿ ಹೇಗೆ ಓಡುವುದು? ಎಲ್ಲರೂ ತಬ್ಬಿಬ್ಬಾದರು.
            ರಾಮು ಮರಗಳ್ಳರ ಬಳಿ ಓಡಿದ್ದೇ ತಡ. ಒಮ್ಮೆ ಕಾಡೇ ಅದರುವಂತೆ ಕೂಗಿತು. ಮರಗಳ್ಳರು ಒಮ್ಮೆ ಬೆಚ್ಚಿಬಿದ್ದಿದ್ದರು. ಸುಮ್ಮನೆ ಇರದ ರಾಮು ಸೀದಾ ಹೋಗಿ ಒಬ್ಬನ ಕಾಲಿಗೆ ಗಬಕ್ಕನೆ ಕಚ್ಚಿಯೇ ಬಿಟ್ಟಿತು. ಒಮ್ಮೆ ಮರಕಡಿಯುತ್ತಿದ್ದವನೊಬ್ಬ ತನ್ನ ಕಾಲಿಗೆ ನಾಯಿ ಕಚ್ಚಿದ್ದರಿಂದ ತಬ್ಬಿಬ್ಬಾದ. ಕಚ್ಚಿದ್ದು ಏನು ಎನ್ನುವುದು ಗೊತ್ತಾಗದೇ ಕಾಲು ಝಾಡಿಸಿದ. ಆತ ಕಾಲು ಝಾಡಿಸಿದಂತೆಲ್ಲ ರಾಮುವಿನ ಕಡಿತ ಬಿಗಿಯಾಯಿತು. ರಾಮುವಿನ ಬಿಗಿಗೆ ಒಮ್ಮೆ ಜಾರಿ ಬಿದ್ದ ಮರಗಳ್ಳ `ಅಯ್ಯಯ್ಯಪ್ಪಾ...' ಎಂದ. ತಕ್ಷಣ ಜೊತೆಯಲ್ಲಿದ್ದವರೆಲ್ಲ ಹುಷಾರಾದರು. ಏನೋ ಅಪಾಯ ಎದುರಾಗಿದೆ ಎಂದು ಭಾವಿಸಿದರು.
          ಕೆಳಕ್ಕೆ ಬಿದ್ದ ಮರಗಳ್ಳನಿಗೆ ಸಹಾಯ ಮಾಡಲು ಮುಂದಾದರು. ನಾಯಿ ಕಚ್ಚಿ ಹಿಡಿದಿರುವುದು ಗೊತ್ತಾಗಿತ್ತು. ನಾಯಿ ಬಂದಿದ್ದೆ ಎಂದಾದರೆ ಜೊತೆಯಲ್ಲಿ ಇನ್ಯಾರೋ ಇರಬೇಕು. `ಯಾರೋ ಇದ್ದಾರೆ ಹುಡುಕ್ರೋ..' ಎಂದು ಕೂಗಿದ ಒಬ್ಬಾತ. ಇನ್ನೊಬ್ಬಾತ ಕೈಯಲ್ಲಿದ್ದ ಕೊಡಲಿಯಿಂದ ರಾಮುವಿನ ಕಡೆಗೆ ಬೀಸಿದ್ದ. ರಾಮು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿತ್ತಾದರೂ ಕೊಡಿಲಿಯ ಏಟು ಕಾಲಿಗೆ ಬಿದ್ದಿತ್ತು. ಕೊಡಲಿಯ ಏಟು ಬಿದ್ದಿದ್ದೇ ಕಚ್ಚಿದ್ದವನನ್ನು ಬಿಟ್ಟ ರಾಮು ಕಂಯೋ ಎಂದು ಕೂಗಿ ಓಡಲು ಆರಂಭಿಸಿತು.
            ಇದೇ ವೇಳೆ ಇನ್ನೊಂದು ಪ್ರಮುಖ ಘಟನೆಯೂ ನಡೆದಿತ್ತು. ರಾಮುವಿಗೆ ಬೀಸಿದ್ದ ಕೊಡಲಿ ರಾಮುವಿನ ಕಾಲಿಗೆ ಗಾಯ ಮಾಡಿ ಸೀದಾ ರಾಮು ಕಚ್ಚಿ ಹಿಡಿದಿದ್ದವನ ಕಾಲಿಗೆ ತಾಗಿತ್ತು. ಆತನ ಕಾಲಿನ ಮೇಲೆ ಬಿದ್ದ ಪರಿಣಾಮ ಕಾಲು ಸಿಗಿದು ಹೋಗಿತ್ತು. ಕೊಡಲಿ ಏಟು ಬಿದ್ದ ಕಾರಣ ಆತ `ಅಯ್ಯಯ್ಯೋ.. ಸತ್ನ್ಯೆಪ್ಪಾ...' ಎಂದು ಕೂಗಿದ. ದಂಟಕಲ್ ಕಾಡು ಒಮ್ಮೆ ಬೆಚ್ಚಿ ಬಿದ್ದಿತ್ತು.
           ನಾಯಿಯ ಜೊತೆಗೆ ಯಾರ ಬಂದಿದ್ದಾರೆ ಎಂದು ಅನುಮಾನ ಪಟ್ಟುಕೊಂಡ ಮರಗಳ್ಳರು ಸುತ್ತಮುತ್ತ ಹುಡುಕಲು ಆರಂಭಿಸಿದ್ದರು. ಅವರ ಕಣ್ಣಿಗೆ ವಿನಾಯಕ ಹಾಗೂ ಅವರ ಜೊತೆಗಾರರು ಕಾಣಿಸಿಕೊಂಡಿದ್ದರು. ಕೂಡಲೇ ಮೂರು ಜನ ವಿನಾಯಕನ ಹಾಗೂ ಜೊತೆಗಾರರನ್ನು ಹಿಂಬಾಲಿಸಿ ಬಂದಿದ್ದರು. ಮರಗಳ್ಳರ ಕೈಗೆ ಸಿಕ್ಕರೆ ತಮ್ಮ ಕಥೆ ಮುಗಿದಂತೆಯೇ ಎಂದುಕೊಂಡು ಎಲ್ಲರೂ ಓಡಲು ಆರಂಭಿಸಿದ್ದರು.
             ವಿಕ್ರಮ, ಪ್ರದೀಪ, ವಿನಾಯಕ ಹಾಗೂ ವಿಷ್ಣು ಹೇಗಾದರೂ ಮಾಡಿ ಓಡಿಬಿಡಬಲ್ಲರು. ಅದರೆ ವಿಜೇತಾ ಹೇಗೆ ತಾನೆ ಓಡಿಯಾಳು. ಗಂಡಸರ ಸರಿಸಮಾನವಾಗಿ ಓಡುವುದೂ ಕಷ್ಟವೇ. ಕತ್ತಲ ಕೂಪದಲ್ಲಿ ಗೊತ್ತಿರದ ಜಾಗದಲ್ಲಿ ಗಂಡಸರೇ ಎದ್ದೋ ಬಿದ್ದೋ, ಎಡವುತ್ತಲೋ ಓಡುತ್ತಿದ್ದರು. ವಿಜೇತಾ ಕೂಡ ಮೊದ ಮೊದಲು ಗಂಡಸರ ವೇಗಕ್ಕೆ ತಕ್ಕಂತೆ ಓಡಿದ್ದಳು. ಆದರೆ ನಿಧಾನವಾಗಿ ಆಕೆಯಲ್ಲಿ ಶಕ್ತಿ ಕಡಿಮೆಯಾಗತೊಡಗಿತ್ತು. ವಿನಾಯಕನ ಹಿಂದೆಯೇ ಓಡುತ್ತಿದ್ದ ಆಕೆ ನಿಧಾನಕ್ಕೆ ಹಿಂದೆ ಬಿದ್ದಿದ್ದಳು. ಇದನ್ನು ಮೊಟ್ಟಮೊದಲು ಗಮನಿಸಿದವನು ಪ್ರದೀಪ.
             ಮರಗಳ್ಳರೂ ವೇಗವಾಗಿಯೇ ಓಡಿಬರುತ್ತಿದ್ದರು. ನಾಲ್ಕು ಜನ. ನಿಧಾನವಾಗಿ ಮರಗಳ್ಳರಿಗೂ ಹಾಗೂ ಯುವ ಪಡೆಗೂ ಇದ್ದ ಅಂತರ ಕಡಿಮೆಯಾಗುತ್ತ ಬಂತು. ಆಗ ಪ್ರದೀಪ ಇದ್ದಕ್ಕಿದ್ದಂತೆ ಆಲೋಚನೆ ಮಾಡಿದ. ಇನ್ನು ತಡ ಮಾಡಿದರೆ ಶತ್ರು ದಾಳಿ ಮಾಡುವುದು ನಿಶ್ಚಿತ. ವಿಜೇತಾಳಲ್ಲಿ ಶಕ್ತಿ ಕಡಿಮೆಯಾಗುತ್ತಿದೆ. ಆಕೆಯನ್ನು ಮರಗಳ್ಳರು ಹಿಡಿದುಕೊಳ್ಳುತ್ತಾರೆ. ಏನಾದರೂ ಮಾಡಬೇಕು ಎಂದುಕೊಂಡ. ತಕ್ಷಣವೇ ತನ್ನ ವೇಗವನ್ನು ಕಡಿಮೆಮಾಡಿಕೊಂಡ. ವಿಜೇತಾಳ ಬಳಿ ಜೋರಾಗಿ ಓಡು ಎಂದ. ಆಕೆ ತುಸು ಮುಂದಕ್ಕೆ ಹೋದಳು ಎಂದ ತಕ್ಷಣ ಪ್ರದೀಪ ಒಮ್ಮೆಲೆ ಗಕ್ಕನೆ ನಿಂತ. ನಿಂತವನೇ ಸೀದಾ ಉಲ್ಟಾ ತಿರುಗಿದ. ಅಷ್ಟೇ ಅಲ್ಲ ಮರಗಳ್ಳರಿಗೆ ಅಭಿಮುಖವಾಗಿ ಓಡ ತೊಡಗಿದ. ಕತ್ತಲೆಯಲ್ಲಿ ಮರಗಳ್ಳರಿಗೆ ಪ್ರದೀಪನ ಈ ರೀತಿಯ ಚರ್ಯೆ ಅರ್ಥವೇ ಆಗಲಿಲ್ಲ.
           ಉಲ್ಟಾ ಓಡುತ್ತಿದ್ದ ಪ್ರದೀಪ ಮರಗಳ್ಳರು ಹತ್ತಿರಕ್ಕೆ ಬರುವವರೆಗೂ ಕಾದ. ನಾಲ್ಕು ಜನರಲ್ಲಿ ಒಬ್ಬಾತ ಹತ್ತಿರ ಬಂದ. ಓಡುತ್ತಿದ್ದ ಪ್ರದೀಪ ತಕ್ಷಣ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಬಲವಾಗಿ ಬೀಸಿದ. ಹೊಡೆತ ಬಲವಾಗಿ ಮರಗಳ್ಳನ ತಲೆಗೆ ಬಿದ್ದಿತ್ತು. `ವಿಕಾರವಾಗಿ ಕೂಗಿಕೊಂಡ ಮರಗಳ್ಳ ತಕ್ಷಣವೇ ಕುಸಿದು ಬಿದ್ದಿದ್ದ. ಇದನ್ನು ನೋಡಿದವರೇ ಉಳಿದ ಮರಗಳ್ಳರು ಒಮ್ಮೆ ತಬ್ಬಿಬ್ಬಾದರು. ಎದುರಾಳಿ ಈ ರೀತಿ ದಾಳಿ ಮಾಡಬಲ್ಲ ಎನ್ನುವ ಸುಳಿವು ಖಂಡಿತವಾಗಿಯೂ ಇರಲಿಲ್ಲ. ಪ್ರದೀಪ ಹೊಡೆದಿದ್ದನ್ನು ಕಂಡು ಒಮ್ಮೆಲೆ ಹೆದರಿದ ಮರಗಳ್ಳರು ವಿನಾಯಕನ ತಂಡವನ್ನು ಬೆನ್ನಟ್ಟುವುದನ್ನು ಬಿಟ್ಟು ಸೀದಾ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ಪ್ರದೀಪ ಮಾತ್ರ ಈಗ ಅವರ ತಿರುಗಿ ಬಿದ್ದಿದ್ದ. ಓಡುತ್ತಿದ್ದವರ ಪೈಕಿ ಒಬ್ಬನ ಬೆನ್ನಟ್ಟಿದ್ದ. ಕಾಡಿನ ದಾರಿಯಲ್ಲಿ ಬಹಳ ದೂರ ಬೆನ್ನಟ್ಟಿದ್ದ. ಆದರೆ ಕೊನೆಗೂ ಮರಗಳ್ಳ ಸಿಗಲಿಲ್ಲ. ತಪ್ಪಸಿಕೊಂಡಿದ್ದ. ಕೈಯಲ್ಲಿದ್ದ ಕಬ್ಬಿಣದ ರಾಡು ಒದ್ದೆ ಓದ್ದೆಯಾಗಿತ್ತು. ಏದುಸಿರು ಬಿಡುತ್ತ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ದಾರಿಯ ಪಕ್ಕದಲ್ಲಿ ಯಾರೋ ನರಳಿದ ಸದ್ದಾಯಿತು. ಮತ್ತೊಮ್ಮೆ ಪ್ರದೀಪ ಜಾಗೃತನಾಗಿ ಕೈಯಲ್ಲಿದ್ದ ರಾಡನ್ನು ಬೀಸಲು ತಯಾರಾಗಿದ್ದುಕೊಂಡು ಅತ್ತ ಹೊರಳಿದ.
           ಪ್ರದೀಪ ತೀರಾ ಹತ್ತಿರಕ್ಕೆ ಬಂದ ಎನ್ನುವಷ್ಟರಲ್ಲಿ ಬವ್...ಎಂದಿತು ಸದ್ದು. ಪ್ರದೀಪ ಒಮ್ಮೆ ಬೆಚ್ಚಿದ್ದ. ನೋಡಿದರೆ ರಾಮು. ಮರಗಳ್ಳನ ಕೊಡಲಿ ಏಟು ತಾಗಿ ಗಾಯಗೊಂಡಿದ್ದ ರಾಮು ತಪ್ಪಿಸಿಕೊಂಡು ಬಂದು ಮಟ್ಟಿಯೊಂದನ್ನು ಹೊಕ್ಕು ಕುಳಿತಿತ್ತು. ಪ್ರದೀಪ ಬಂದಿದ್ದನ್ನು ಕಂಡು ಮರಗಳ್ಳನೇ ಇರಬೇಕು, ತನ್ನ ಮೇಲೆ ದಾಳಿ ಮಾಡಲು ಬಂದಿರಬೇಕು ಎಂದು ಗುರ್ರೆಂದಿತ್ತು. ಪ್ರದೀಪನಿಗೆ ರಾಮುವಿನ ಪರಿಸ್ಥಿತಿ ಗೊತ್ತಾಗಿ `ರಾಮು... ಕುರೂಯ್..' ಎಂದ. ತನ್ನ ಹೆಸರು ಹಿಡಿದು ಕರೆದಿದ್ದನ್ನು ಕೇಳಿದ ರಾಮು ಇವನ್ಯಾರೋ ತನ್ನ ಪರಿಚಯದವನೇ ಇರಬೇಕು ಎಂದುಕೊಂಡು ನಿಧಾನವಾಗಿ ಹೊರಬಂದಿತು. ರಾಮು ನಿಧಾನವಾಗಿ ಬಂದಿದ್ದನ್ನು ನೋಡಿದ ಪ್ರದೀಪ ರಾಮುವಿಗೆ ದೊಡ್ಡ ಗಾಯವೇ ಆಗಿದೆ ಎಂದುಕೊಂಡ. ತಕ್ಷಣವೇ ಹತ್ತಿರಕ್ಕೆ ಬಂದ ರಾಮುವಿನ ತಲೆ ನೇವರಿಸಿದ. ಪರಿಚಿತರನ್ನು ಕಂಡ ರಾಮು ಒಮ್ಮೆಲೆ ಪ್ರದೀಪನ ಕೈ ನೆಕ್ಕಲು ಆರಂಭಿಸಿತು. ತಕ್ಷಣ ಪ್ರದೀಪ ತನ್ನ ಕೈಯಿಂದ ರಾಮುವನ್ನು ಎತ್ತಿಕೊಂಡು ವಾಪಾಸು ಹೊರಟ.
            ಕತ್ತಲ ದಾರಿಯಲ್ಲಿ ಕಾನನದಲ್ಲಿ ಹಲವಾರು ಸಾರಿ ಪ್ರದೀಪನಿಗೆ ದಾರಿ ತಪ್ಪಿತ್ತು. ಕಾಡಿನಲ್ಲಿ ಅಲೆದು ಅಲೆದು ಕೊನೆಗೊಮ್ಮೆ ದಂಟಕಲ್ಲಿಗೆ ಹೋಗುವ ದಾರಿ ಸಿಕ್ಕಿತ್ತು. ಅದೇ ದಾರಿಯಲ್ಲಿ ಬಹುದೂರ ಸಾಗಿದವನಿಗೆ ಕೊನೆಗೊಮ್ಮೆ ದಂಟಕಲ್ಲಿನ ಮನೆಗಳು ಕಾಣಿಸಿದ್ದವು. ದಡಬಡನೆ ಅತ್ತ ಹೆಜ್ಜೆ ಹಾಕಿದ. ದಂಟಕಲ್ಲಿನ ಮನೆಯನ್ನು ತಲುಪುವ ವೇಳೆಗೆ ಆಗಲೇ ಪ್ರದೀಪನಿಂದ ಧಾರಾಕಾರ ಬೆವರು ಸುರಿಯುತ್ತಿತ್ತು.
            ಕಾಡಿನ ದಾರಿಯಲ್ಲಿ ಓಡಿ ಬಂದಿದ್ದ ವಿನಾಯಕ, ವಿಜೇತಾ, ಪ್ರದೀಪ ಹಾಗೂ ವಿಷ್ಣು ಪ್ರದೀಪ ಬರದಿದ್ದುದನ್ನು ನೋಡಿ ಕಂಗಾಲಾಗಿ ಕಾಯುತ್ತ ಕುಳಿತಿದ್ದರು. ಕಾಡಿನಲ್ಲಿ ಕೇಳಿಸಿದ್ದ ಆರ್ತನಾದಕ್ಕೆ ದಂಟಕಲ್ ಊರಿನ ಜನರೂ ಕೂಡ ನಡು ರಾತ್ರಿಯಲ್ಲಿ ಎದ್ದು ಬಂದಿದ್ದರು. ಪ್ರದೀಪ ಬಂದಿದ್ದನ್ನು ಕಂಡು ವಿನಾಯಕನ ಬಳಗ ಕೊಂಚ ನಿರಾಳವಾದರೂ ರಕ್ತಮಯವಾಗಿದ್ದ ಆತನ ಕೈ ಹಾಗೂ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ನೋಡಿ ಹೌಹಾರಿದರು. ರಾಮುವನ್ನು ಹೊತ್ತುಕೊಂಡು ಬರುತ್ತಿದ್ದುದನ್ನೂ ನೋಡಿ ಮನೆಯವರೆಲ್ಲ ಆಲೋಚನೆಗೆ ಬಿದ್ದರು.

(ಮುಂದುವರಿಯುತ್ತದೆ...)
           

Thursday, July 9, 2015

ಅಘನಾಶಿನಿ ಕಣಿವೆಯಲ್ಲಿ-22

             ದೇವಸ್ಥಾನದಲ್ಲಿ ಪೂಜೆ ಮುಗಿಸಿ ಭಟ್ಟರ ಬಳಿ ಮಾತನಾಡಿ ಹಾಗೆಯೇ ಎಲ್ಲರೂ ವಾಪಾಸಾಗುತ್ತಿದ್ದರು. ವಿಕ್ರಮ, ವಿನಾಯಕ, ವಿಜೇತಾ, ಪ್ರದೀಪರು ದೇವಸ್ಥಾನದಿಂದ ಹೊರಗೆ ಬಂದಿದ್ದರು. ವಿಷ್ಣು ದೇವಸ್ಥಾನದಲ್ಲಿಯೇ ಇದ್ದವನು ಹಾಗೆಯೇ ಹೊರಬರುತ್ತಿದ್ದ. ಇದ್ದಕ್ಕಿದ್ದಂತೆ ದೇವಸ್ಥಾನದ ಬಾಗಿಲ ಪಟ್ಟಿ ಎಡವಿ ದಡಾರನೆ ಬಿದ್ದು ಬಿಟ್ಟ. ಆತ ಬಿದ್ದಿದ್ದನ್ನು ಕಂಡು ಎಲ್ಲರೂ ಒಮ್ಮೆ ಭೀತಿ ಪಟ್ಟುಕೊಂಡರು. ಇದೇನಿದು ಹೀಗಾಯಿತಲ್ಲ ಎಂದುಕೊಂಡರು. ಪ್ರದೀಪ ಬೇಗನೇ ಬಂದು ವಿಷ್ಣುವನ್ನು ಹಿಡಿದು ಎಬ್ಬಿಸಿದ. ಪುಣ್ಯಕ್ಕೆ ವಿಷ್ಣುವಿಗೆ ಏಟು ಬಿದ್ದಿರಲಿಲ್ಲ. ಕಾಲು ಎಡವಿ ಕವುಚಿ ಬಿದ್ದಿದ್ದ ಕಾರಣ ಒಮ್ಮೆ ಮೈ ಕೈ ಜಜ್ಜಿತ್ತು. ಕೆಲಕಾಲ ವಿಷ್ಣು ದೇವಸ್ಥಾನದ ಹೊರಗಿನ ಕಟ್ಟೆಯಲ್ಲಿ ಸಾವರಿಸುತ್ತ ಕುಳಿತ.
          ವಿಷ್ಣು ಬಿದ್ದಿದ್ದನ್ನು ನೋಡಿ ಭಟ್ಟರು ಇದ್ದಕ್ಕಿದ್ದಂತೆ ಏನನ್ನಿಸಿತೋ ಏನೋ ದೇವಸ್ಥಾನದ ಒಳಕ್ಕೆ ಹೋಗಿ ಒಮ್ಮೆ ತುಪ್ಪದ ದೀಪವನ್ನು ಹಚ್ಚಿಟ್ಟರು. ದೇವಸ್ಥಾನದ ಬಾಗಿಲಿನಲ್ಲಿ ಬಿದ್ದಿದ್ದು ಅದು ಗಣಪನಿಗೆ ವಿರುದ್ಧವಾಗಿ ಬಿದ್ದಿದ್ದು ಮಾತ್ರ ಅಪಶಕುನದ ಹಾಗೇ ಅನ್ನಿಸಿತು. ಛೇ ಹೀಗಾಗಬಾರದಿತ್ತು ಎನ್ನಿಸಿತು. `ಯೇ ತಮಾ.. ಒಳಗೆ ಬಾ ಇಲ್ಲಿ.. ಒಂದ್ ಸಾರಿ ದೇವರ ಹತ್ತಿರ ಏನೂ ಕೆಡುಕು ಆಗದೇ ಇರಲಿ ಹೇಳಿ ಬೇಡ್ಕ.. ಒಳ್ಳೇದಾಗ್ತು..' ಎಂದರು ಭಟ್ಟರು.
         ` ನಾನು ಅಪಶಕುನ ನಂಬೋದಿಲ್ಲ ಬಿಡಿ..' ಎಂದ ವಿಷ್ಣು. ಆದರೂ ಭಟ್ಟರು ಹೇಳುದಂತೆ ದೇವರ ಎದುರು ಬಂದು ನಮಸ್ಕರಿಸಿದಂತೆ ಮಾಡಿದ. ವಿಷ್ಣುವಿನ ಉತ್ತರ ಮಾತ್ರ ಎಲ್ಲರಲ್ಲಿಯೂ ಆಶ್ಚರ್ಯವನ್ನು ತಂದಿತ್ತು. ಇದಾದ ಸ್ವಲ್ಪ ಸಮಯದ ನಂತರ ಎಲ್ಲರೂ ದೇವಾಲಯದಿಂದ ವಾಪಾಸು ಹೊರಟರು.
           ಮನುಷ್ಯ ತಾನೇ ಎಲ್ಲರಿಗಿಂತ ಮಿಗಿಲು ಎಂದುಕೊಳ್ಳುತ್ತಾನೆ. ಆದರೆ ಆಗಾಗ ಪ್ರಕೃತಿ ಅಥವಾ ನಮ್ಮ ಮೇಲಿರುವ ಕಾಣದ ಶಕ್ತಿಗಳು ಮುಂದೆ ಆಗುವ ಅನಾಹುತಗಳನ್ನು ಸೂಚ್ಯವಾಗಿ ತಿಳಿಸುತ್ತವೆ. ದೇವರ ಶಕ್ತಿಯನ್ನು ನಂಬುವವರು ಮಾತ್ರ ಇಂತಹ ಸೂಚನೆಗಳಿಂದಾಗಿ ಎಚ್ಚರಿಕೆಯನ್ನು ವಹಿಸಿಕೊಳ್ಳುತ್ತಾರೆ. ವಿಷ್ಣುವಿಗೂ ಕೂಡ ಮುಂದೆ ಆಗುವ ಯಾವುದೋ ಅಪಾಯವನ್ನು ಈ ರೀತಿಯ ಸೂಚನೆಯ ರೂಪದಲ್ಲಿ ದೇವರು ನೀಡಿದನೇ? ಗೊತ್ತಾಗಲಿಲ್ಲ. ಆದರೆ ಉಳಿದವರಿಗೆ ಮಾತ್ರ ಮುಂದೆ ಏನೋ ಅಪಾಯ ಬಂದು ಒದಗಲಿದೆ. ವಿಷ್ಣು ಯಾವುದೋ ತೊಂದರೆಯಲ್ಲಿ ಸಿಲುಕಿಕೊಳ್ಳಲಿದ್ದಾನೆ ಎನ್ನುವುದು ಮಾತ್ರ ಸ್ಪಷ್ಟವಾಗುತ್ತಿತ್ತು. ವಿಷ್ಣು ಇದನ್ನು ನಂಬಲು ತಯಾರಿರಲಿಲ್ಲ. ಇದೇ ಕಥೆಗೆ ತಿರುವನ್ನು ನೀಡಲಿದೆಯೇ? ಆಲೋಚನೆ ಮಾಡಿದಷ್ಟೂ ಗೋಜಲು ಗೋಜಲಾಗಿ ಪರಿಣಮಿಸುತ್ತಿತ್ತು.

****

          `ಎರಡು ತೇಗದ ಮರ ಅರ್ಜೆಂಟು ಬೇಕು. ನಮ್ಮೂರ ಕಾಡಿನಲ್ಲಿ ಇದ್ದಿದ್ದು ಸುಳ್ಳು. ಉಂಚಳ್ಳಿ ಜಲಪಾತದ ಬಳಿ ಬಹಳ ಇದೆ. ಅಲ್ಲಿಗೆ ಹೋಗಿ ಕಡಿದುಕೊಂಡು ಬನ್ನಿ. ನನ್ನ ಬಳಿ ಇರುವ ಅಡ್ರೆಸ್ ಗೆ ತಲುಪಿಸಿ..' ಮುಂದಾಳು ಸೂಚನೆ ನೀಡಿದ್ದ. ಜೊತೆಗಿದ್ದವರು ಒಪ್ಪಿಕೊಂಡಿದ್ದರು. `ನೋಡಿ ಮಾರ್ಗ ಮಧ್ಯದಲ್ಲಿ ಈಗ ಚೆಕ್ ಪೋಸ್ಟ್ ಮಾಡಲಾಗಿದೆ. ಯಾವುದೇ ವಾಹನಗಳನ್ನಾದರೂ ಬಿಗಿಯಾಗಿ ಪಹರೆ ಕಾಯಲಾಗುತ್ತಿದೆ. ಸ್ವಲ್ಪ ಅನುಮಾನ ಬಂದರೂ ಸಾಕು ಹಿಡಿದು ಹಾಕುತ್ತಾರೆ. ಹೇಗೆ ಸಾಗಿಸಬೇಕು, ಯಾವ ಥರ ಹೋಗಬೇಕು ಎನ್ನುವುದನ್ನು ನಾನು ಬಿಡಿಸಿ ಹೇಳಬೇಕಿಲ್ಲ ತಾನೆ. ಒಳ ದಾರಿಗಳು, ಕಳ್ಳ ಮಾರ್ಗಗಳೆಲ್ಲ ಗೊತ್ತಿದೆಯಲ್ಲ..' ಎಂದ ಬಾಸ್. ಎಲ್ಲರೂ ತಲೆಯಾಡಿಸಿದರು.
          ಇದಾಗಿ ಒಂದು ದಿನ ಕಳೆಯುತ್ತಿದ್ದಂತೆಯೇ ಉಂಚಳ್ಳಿ ಜಲಪಾತದ ಬಳಿಯ ಕಾಡಿನಲ್ಲಿ ಎರಡು ಬೃಹತ್ ತೇಗದ ಮರಗಳು ಧರಗುರುಳಿದ್ದವು. ದೊಡ್ಡದೊಂದು ಟ್ರಕ್ಕಿನಲ್ಲಿ ಯಾವುದೋ ಪಾರ್ಸಲ್ಲನ್ನು ತುಂಬಿಕೊಂಡು ಹೋಗಲಾಗುತ್ತಿದೆ ಎನ್ನುವಂತೆ ಮಾಡಿ ಅದರೊಳಕ್ಕೆ ತೇಗದ ಮರದ ತುಂಡುಗಳನ್ನು ತುಂಬಿ ಮುಂದಕ್ಕೆ ಒಯ್ಯಲಾಯಿತು. ಟ್ರಕ್ಕಿನ ಚಹರೆಯನ್ನು ಬದಲಿಸಿದ್ದ ಕಾರಣ ಮುಖ್ಯ ರಸ್ತೆಯಲ್ಲಿಯೇ ಹೋಗಬೇಕು ಎನ್ನುವ ತೀರ್ಮಾನ ಕಳ್ಳ ಸಾಗಾಣಿಕೆದಾರರದ್ದಾಗಿತ್ತು. ಅಲ್ಲೊಂದು ಕಡೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಇತ್ತು. ಟ್ರಕ್ ಹತ್ತಿರ ಬರುತ್ತಿದ್ದಂತೆಯೇ ಟ್ರಕ್ಕನ್ನು ಇಬ್ಬರು ಗಾರ್ಡುಗಳು ಕೈ ಅಡ್ಡ ಹಾಕಿ ನಿಲ್ಲಿಸಿ ಬಿಟ್ಟರು. ಟ್ರಕ್ಕಿನಲ್ಲಿದ್ದವರಿಗೆ ಒಮ್ಮೆ ಭಯವಾಯಿತಾದರೂ ಜೊತೆಯಲ್ಲಿದ್ದವನೊಬ್ಬ ರೇಶನ್ ಸಾಗಿಸುತ್ತಿದ್ದೇವೆ ಎಂದ.
          ಆದರೆ ಗಾರ್ಡುಗಳಿಗೆ ಮಾತ್ರ ಅನುಮಾನ ಬಂದಂತಾಯಿತು. ಗಾಡಿ ನಿಲ್ಲಿಸಿ ಎಂದವರೇ ಟ್ರಕ್ಕಿನ ಹಿಂಭಾಗಕ್ಕೆ ಹೋಗಿ ತಪಾಸಣೆ ನಡೆಸಲು ಮುಂದಾದರು. ಕೂಡಲೇ ಬೆದರಿಸ ಕಳ್ಳಸಾಗಾಣಿಕೆದಾರರು ಅರಣ್ಯ ಇಲಾಖೆಯವರು ಹಾಕಿದ್ದ ಚೆಕ್ ಪೋಸ್ಟಿನ ಅಡ್ಡ ಕಂಬವನ್ನು ದಡಾರನೆ ಟ್ರಕ್ಕಿನ ಮೂಲಕ ಕಿತ್ತು ಮುಂದಕ್ಕೆ ಗಾಡಿಯನ್ನು ಚಲಾಯಿಸಿಯೇ ಬಿಟ್ಟರು. ತಕ್ಷಣ ಎಚ್ಚೆತ್ತುಕೊಂಡ ಗಾರ್ಡುಗಳು ಟ್ರಕ್ಕಿನ ನಂಬರ್ ಬರೆದುಕೊಂಡರು. ಅರಣ್ಯ ಇಲಾಖೆಯ ಕಚೇರಿಗೆ ಮಾಹಿತಿ ನೀಡಲು ಮುಂದಾದರು. ವಯರ್ ಲೆಸ್ ಮೂಲಕ ಹತ್ತಿರದ ಕಚೇರಿಗೆ ವಿಷಯವನ್ನು ತಿಳಿಸಿದರು. ಟ್ರಕ್ಕು, ಬಣ್ಣ, ಟ್ರಕ್ಕಿನಲ್ಲಿ ಏನನ್ನೋ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಕೂಡಲೇ ಹಿಡಿಯಿರಿ ಎಂದಿದ್ದಷ್ಟೇ ಅಲ್ಲದೇ ತಮ್ಮ ಬಳಿ ಇದ್ದ ಬೈಕಿನ ಮೂಲಕ ಲಾರಿಯನ್ನು ಬೆನ್ನತ್ತಿದರು. ಆ ನಂತರ ನಡೆದಿದ್ದು ಮಾತ್ರ ಸಿನೆಮಾ ಮಾದರಿಯ ಕಣ್ಣಾಮುಚ್ಚಾಲೆ. ಲಾರಿಯನ್ನು ಹಿಂಬಾಲಿಸಿ ಹಿಡಿಯಲು ಅನೇಕ ಸಾರಿ ಪ್ರಯತ್ನಿಸಿ ಸೋತರು ಗಾರ್ಡುಗಳು. ಕೊನೆಗೊಮ್ಮೆ ಟ್ರಕ್ಕಿನಲ್ಲಿದ್ದವರು ಏನೋ ಟ್ರಿಕ್ಕು ಮಾಡಿದರು. ಇದರಿಂದಾಗಿ ಟ್ರಕ್ಕನ್ನು ಬೆನ್ನತ್ತಿ ಹೋಗುತ್ತಿದ್ದ ಗಾರ್ಡುಗಳು ರಸ್ತೆ ಪಕ್ಕದ ಕಾಲುವೆಯಲ್ಲಿ ದಬಾರನೆ ಬಿದ್ದರು. ಬಿದ್ದವರೇ ತಮಗಾಗಿದ್ದ ಗಾಯವನ್ನೂ ನೋಡಿಕೊಳ್ಳದೇ ಹಿಗ್ಗಾ ಮುಗ್ಗಾ ಬಯ್ಯಲು ಆರಂಬಿಸಿದರು. ವೇಗವಾಗಿ ಹೋಗುತ್ತಿದ್ದ ಟ್ರಕ್ ರಸ್ತೆಯ ತಿರುವಿನಲ್ಲಿ ಕಣ್ಮರೆಯಾಯಿತು.

***

             ದೇಗುಲ ದರ್ಶನ ಮಾಡಿದವರು ಮನೆಗೆ ವಾಪಾಸಾಗುತ್ತಿದ್ದ ದಾರಿಯಲ್ಲಿ ಕಾಡನ್ನು ವೀಕ್ಷಣೆ ಮಾಡುತ್ತ ಬರುತ್ತಿದ್ದರು. ದಾರಿಯ ಇಕ್ಕೆಲಗಳಲ್ಲಿ ಅದೆಷ್ಟೋ ದೈತ್ಯ ಮರಗಳನ್ನು ಕಡಿದ ದೃಶ್ಯ ಕಾಣಿಸುತ್ತಿತ್ತು. ಮರಗಳ ಬುಡಗಳಷ್ಟೇ ನಿಂತಿದ್ದವು. ದೊಡ್ಡ ದೊಡ್ಡ ಬೊಡ್ಡೆಗಳಿದ್ದವು. ಬರುತ್ತಿದ್ದವರೆಲ್ಲ ಒಮ್ಮೆ ಛೇ ಎಂದುಕೊಂಡು ತಲೆಯನ್ನು ಕೊಡವಿದರು. ಬಂದ ದಾರಿಯಲ್ಲಿಯೇ ನದಿಯನ್ನು ದಾಟಿ ಮುನ್ನಡೆದರು. ವಿಕ್ರಮ ಹಾಗೂ ವಿಜೇತಾರಿಗೆ ಮಾತ್ರ ತಾವು ಮಾಡಬೇಕೆಂದುಕೊಂಡಿದ್ದ ಕೆಲಸ ಮುನ್ನಡೆಯುತ್ತಿಲ್ಲ ಎನ್ನುವ ತಲೆಬಿಸಿ ಹೆಚ್ಚಿತ್ತು. ಯಾವುದೋ ಒಂದು ಜಾಡನ್ನು ಹುಡುಕಿ, ಇನ್ನೇನು ಸುಳಿವು ಸಿಕ್ಕಿತು ಎನ್ನುವಷ್ಟರಲ್ಲಿ ಛೇ ಅದಲ್ಲ ಇದು  ಬೇರೆ ಮಾರ್ಗ ಬದಲಾಗುತ್ತಿತ್ತು. ಹೊಸ ಪಯಣವನ್ನು ಹುಡುಕಬೇಕಾಗುತ್ತಿತ್ತು. ವಿಕ್ರಮ ಹಾಗೂ ವಿಜೇತಾರು ಅದೆಷ್ಟು ಸಾರಿ ತಲೆ ಕೊಡವಿಕೊಂಡಿದ್ದರೋ.
               ಉಳಿದೆಲ್ಲ ಕೆಲಸವನ್ನು ಖೈದು ಮಾಡಿ ತಾವು ಬಂದ ಕೆಲಸಕ್ಕೇ ಮೊದಲು ಪ್ರಾಶಸ್ತ್ಯವನ್ನು ನೀಡಬೇಕು ಎಂದುಕೊಳ್ಳುತ್ತಿದ್ದಾಗಲೇ ಪಕ್ಕದ ಮನೆಯ ಗಣಪಜ್ಜ ಓಡಿ ಬಂದಿದ್ದ. ಕೈಯಲ್ಲಿ ಕೆಲವು ಕಾಗದಪತ್ರಗಳಿದ್ದವು. ಅಜ್ಜ ಬಂದವರೆ ಹೋಗಿ ಬಂದ್ರಾ ದೇವಸ್ತಾನಕ್ಕೆ..' ಎಂದರು. ಎಲ್ಲರೂ ತಲೆಯಾಡಿಸಿದರು. ಕೈಯಲ್ಲಿದ್ದ ಕಾಗದಪತ್ರವನ್ನು ತೆಗೆಯುತ್ತಾ `ನೋಡಿ. ಯನ್ನ ಅಪ್ಪಯ್ಯ ಗಣೇಶ ಹೆಗಡೆ ಅವರು ಅಡಿಕೆಯಿಂದ ಚಹಾ ಹಾಗೂ ಕಾಫಿಯ ತರಹ ಪೇಯವನ್ನು ತಯಾರು ಮಾಡಿದ್ದರಂತೆ. ಮೈಸೂರಿನ ಆಹಾರ ಗುಣಮಟ್ಟ ಪರಿಷ್ಕರಣ ಮಂಡಳಿಯಿಂದ ಪ್ರಮಾಣ ಮತ್ರ ಕೂಡ ಬಂದಿದೆ ನೋಡಿ.. ಏನೋ ಹುಡುಕುತ್ತಿದ್ದೆ. ಇದು ಸಿಕ್ಕಿತು. ತಕ್ಷಣ ನಿಮಗೆ ತೋರಿಸೋಣ ಎಂದು ತೆಗೆದುಕೊಂಡು ಬಂದಿ..' ಎಂದ ಗಣಪಜ್ಜ.
          ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ಯುವ ವಿಜ್ಞಾನಿಯೊಬ್ಬರು ಅಡಿಕೆಯಿಂದ ಪೇಯವನ್ನು ಕಂಡು ಹಿಡಿದಿದ್ದಾರೆ ಎನ್ನುವುದನ್ನು ಓದಿ ತಿಳಿದಿದ್ದ ವಿಜೇತಾ ಹಾಗೂ ವಿಕ್ರಮರಿಗೆ ಇದರಿಂದ ಅಚ್ಚರಿಯಾಯಿತು. ಅರ್ಧ ಶತಕದಷ್ಟು ವರ್ಷಗಳ ಹಿಂದೆಯೇ ಮಲೆನಾಡಿನ ಹಳ್ಳಿ ಮೂಲೆಯಲ್ಲಿ ಅಜ್ಜನೊಬ್ಬ ತಯಾರಿಸಿದ್ದ ಅಡಿಕೆ ಪೇಯ ಇತಿಹಾಸದ ಕಾಲಗರ್ಭದೊಳಗೆ ಮರೆಯಾಗಿ ಹೋಗಿತ್ತು. ಮತ್ತೆ ಎಲ್ಲೋ ಏನೋ ನೆನಪುಗಳು ಮರುಕಳಿಸಿದ ಹಾಗಾಯಿತು. ದಂಟಕಲ್ ಎಂಬ ಹಳ್ಳಿಯಲ್ಲಿ ಯಾವುದೋ ಕಾಲದಲ್ಲಿ ಏನೇನನ್ನೆಲ್ಲಾ ಮಾಡಿದ್ದರಲ್ಲಾ ಎಂದು ಯುವ ಪಡೆ ಹುಬ್ಬೇರಿಸುವ ಹಾಗೆ ಆಯಿತು.
          ಗಣೇಶಜ್ಜ ನ ಹಲವಾರು ಮುಖಗಳ ಅನಾವರಣವಾದಂತಾಗಿತ್ತು. ಸ್ವಾತಂತ್ರ್ಯ ಹೋರಾಟಗಾರನಾಗಿ, ಸಮಾಜ ಸೇವಕನಾಗಿ, ಶಿಕ್ಷಣ ಪ್ರೇಮಿಯಾಗಿ, ಕೃಷಿ ವಿಜ್ಞಾನಿಯಾಗಿ ಗಣೇಶಜ್ಜ ಅನಾವರಣಗೊಂಡಿದ್ದ. ಬಾದಾಮಿ ತೋಟ ಮಾಡಿದ್ದ, ಚಹಾ ಗಿಡಗಳನ್ನು ಬೆಳೆದಿದ್ದ, ಅನಂತ ಭಟ್ಟನ ಅಪ್ಪೆ ಮಿಡಿ ತಳಿ ರಕ್ಷಣೆ ಮಾಡಿದ್ದ, ಅಡಿಕೆಯ ಮೌಲ್ಯವರ್ಧನೆಯಲ್ಲಿ ತೊಡಗಿದ್ದ, ಬಹು ಉತ್ಪನ್ನ ತಯಾರಿಕೆಗೆ ಮುಂದಾಗಿದ್ದ. ಇವೆಲ್ಲ ಯುವ ಪಡೆಯ ಮನಸ್ಸನ್ನು ಸೂರೆಗೊಳಿಸಿತ್ತು. ಎಲ್ಲರೂ ಅಜ್ಜನಿಗೆ ನಮಿಸಿದರು.

(ಮುಂದುವರಿಯುತ್ತದೆ)

(ಗಣೇಶಜ್ಜ ಮಾಡಿದ್ದೆಲ್ಲವೂ ನಿಜವಾದ ಘಟನೆಗಳಾಗಿವೆ. ಯಾವುದೇ ಕಲ್ಪನೆಗಳಲ್ಲ)

Wednesday, July 8, 2015

ಪುನೀತೆ

ಬಾಳಿನಾ ಹರಹಿನಲಿ
ಬದುಕುವುದ ಕಲಿತೆ
ಹೃದಯಾದಾಕಾಶದಲಿ
ಪ್ರೀತಿಯನು ಅರಿತೆ ||

ನೋವಿನ ನಡುವಿನಲಿ
ನಗುವುದನು ಕಲಿತೆ
ನಗು ನಗುವ ಜೊತೆಯಲ್ಲಿ
ಅಳುವುದನು ಮರೆತೆ ||

ಬದುಕಿನ ಬೀದಿಯಲಿ
ಎಡವುವುದ ಮರೆತೆ
ಎಡವಿ ಬಿದ್ದೆಡೆಯಲ್ಲಿ
ಬರೆದೆ ನಾ ಕವಿತೆ ||

ಗೆಲುವಿನ ಚಣದಲ್ಲಿ
ಎಲ್ಲವನೂ ಸೋತೆ
ಸೋತು ಬಸವಳಿದಾಗ
ಗೆಲ್ಲುವುದನು ಕಲಿತೆ ||

ಎಲ್ಲವನು ಮರೆತಾಗ
ಎಲ್ಲವನು ಕಲಿತೆ
ಯಾವುದೋ ಘಟ್ಟದಲಿ
ಆಗಿರುವೆ ಪುನೀತೆ ||

***

(ಈ ಕವಿತೆಯನ್ನು ಬರೆದಿರುವುದು 13-11-2005ರಂದು ದಂಟಕಲ್ಲಿನಲ್ಲಿ)
(2005-06ನೇ ಸಾಲಿನ ಎಂ.ಇ.ಎಸ್. ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದೆ)

Monday, July 6, 2015

ಅಘನಾಶಿನಿ ಕಣಿವೆಯಲ್ಲಿ-21

            ದಂಟಕಲ್ಲಿನಲ್ಲಿ ಪ್ರತಿಯೊಬ್ಬರೂ ಪೊಲೀಸರು ಬಂಧಿಸಿದ ಕಾರಣವನ್ನು ಕೇಳುವವರೇ ಆಗಿದ್ದರು. ಅವರೆಲ್ಲರಿಗೂ ಕಾರಣವನ್ನು ಹೇಳುವಷ್ಟರಲ್ಲಿ ಸುಸ್ತೋ ಸುಸ್ತು. ಪೊಲೀಸರ ದರ್ಪ, ಪ್ರದೀಪನ ಸಮಯಪ್ರಜ್ಞೆ, ಗಪ್ಪಜ್ಜನ ಪ್ರೀತಿ ಇತ್ಯಾದಿಗಳೆಲ್ಲ ಬಾಯಿಂದ ಬಾಯಿಗೆ ರಸವತ್ತಾಗಿ, ರೋಚಕವಾಗಿ ಹರಿದು ಬಂದಿದ್ದು ಮಾತ್ರ ವಿಶೇಷವಾಗಿತ್ತು. ಮಲೆನಾಡಿನ ಹಳ್ಳಿಗೆ ಬಂದಿದ್ದ ಯುವ ಪಡೆ ಮಲೆನಾಡಿನ ತುಂಬೆಲ್ಲ, ಅಷ್ಟೇ ಏಕೆ ರಾಜ್ಯದಾದ್ಯಂತ ಒಂದೇ ಕ್ಷಣದಲ್ಲಿ ಹೆಸರು ಮಾಡಿದ್ದು ಮಾತ್ರ ಸುಳ್ಳಲ್ಲ. ಪೊಲೀಸರಿಗೆ ಅದ್ಯಾರು ಮಾಹಿತಿ ನೀಡಿದ್ದರೋ ಏನೋ, ತಮ್ಮನ್ನು ನಕ್ಸಲರು ಎಂದುಕೊಂಡು ಬಂಧಿಸಿದ್ದು ಮಾತ್ರ ವಿಚಿತ್ರವಾಗಿತ್ತು. ಆದರೂ ಈ ಬಂಧನದ ಹಿಂದೆ ಇನ್ಯಾವುದೋ ಸಂಚಿದೆ ಎಂದು ವಿಕ್ರಮನಿಗೆ ಒಮ್ಮೆ ಅನ್ನಿಸಿತ್ತಾದರೂ ತನ್ನೆದುರು ಇರುವ ಅಗೋಚರ ಶತ್ರು ಇಷ್ಟೆಲ್ಲ ಮುಂದಕ್ಕೆ ಯೋಚಿಸಿರಲಾರ ಎಂದುಕೊಂಡ.
               ಅದ್ಯಾವುದೋ ದೊಡ್ಡ ಕಂಟಕ ಇಷ್ಟು ಚಿಕ್ಕದರಲ್ಲೇ ಹೋಯಿತು ಎಂದುಕೊಂಡರು ಎಲ್ಲರೂ. ಖಂಡಿತವಾಗಿಯೂ ಗುಡ್ಡೇತೋಟದ ಕೋಟೆ ವಿನಾಯಕನ ಶ್ರೀರಕ್ಷಯಿಂದ ದೊಡ್ಡ ಆಪತ್ತು ಚಿಕ್ಕದರಲ್ಲಿಯೇ ಪರಿಹಾರವಾಗಿದೆ ಎಂದುಕೊಂಡರು ಎಲ್ಲರೂ. ಮರುದಿನ ಗುಡ್ಡೇತೋಟಕ್ಕೆ ಹೋಗಿ ದೇವರಿಗೆ ಪೂಜೆ ಮಾಡಿ ಬರಬೇಕು ಎಂದು ನಿಶ್ಚಯಿಸಿಕೊಂಡರು.

000000

              `ಗುಡ್.. ಒಳ್ಳೆಯಕ ಕೆಲಸ ಮಾಡಿದ್ದಿರಿ. ಆದರೆ ಇಷ್ಟು ಸುಲಭದಲ್ಲಿ ಅವರು ತಪ್ಪಿಸಿಕೊಂಡು ಬರುತ್ತಾರೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ ನೋಡಿ..' ಎಂದ ಒಬ್ಬಾತ.
             `ನಾವೇನೋ ಸರಿಯಾದ ಮಾಹಿತಿಯನ್ನೇ ಕೊಟ್ಟಿದ್ದೆವು. ಪೊಲೀಸರ ಬಳಿ ದಂಟಕಲ್ಲಿಗೆ ಬಂದಿದ್ದವರು ನಕ್ಸಲರು ಎಂದೇ ಹೇಳಿದ್ದೆವು. ಅಷ್ಟೇ ಅಲ್ಲದೇ ಮೀಡಿಯಾಕ್ಕೂ ತಿಳಿಸಿ ಆಗಿತ್ತು. ಆದರೆ ಬಂಧಿಸಿದವರಲ್ಲಿ ಒಬ್ಬಾತ ಮಾತ್ರ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಹೊಂದಿದ್ದಾನೆ. ಅವನೇ ಇಷ್ಟು ಬೇಗ ಎಲ್ಲರೂ ವಾಪಾಸು ಬರಲು ಪ್ರಮುಖ ಕಾರಣ ನೋಡಿ..' ಎಂದ ಇನ್ನೊಬ್ಬಾತ.
           `ಓಹ್ ಹೌದಾ. ಯಾವುದಕ್ಕೂ ಹುಷಾರಾಗಿರಿ. ಯಾವುದೇ ಅವಕಾಶಕ್ಕಾಗಿ ಕಾಯುತ್ತಿರಿ. ಅನುಕೂಲಕರ ಅವಕಾಶ ಸಿಕ್ಕ ತಕ್ಷಣ ಬಂದಿದ್ದವರನ್ನು ಹಣಿದು ಹಾಕಿ. ಯಾಕೋ ಅವರು ಸುಮ್ಮನೆ ಬಂದಿಲ್ಲ ಎಂಬ ಅನುಮಾನ ಬರುತ್ತಿದೆ. ಪಾತರಗಿತ್ತಿ ಸರ್ವೆ ಮಾಡುವುದು, ಕಾಡು ಸುತ್ತುವುದು ಕೇವಲ ನೆಪ ಇರಬೇಕು. ನಾವು ಎಲ್ಲದಕ್ಕೂ ಸಜ್ಜಾಗಿ ಇರೋಣ. ಸದವಕಾಶ ಸಿಕ್ಕ ತಕ್ಷಣ ಅವರನ್ನು ವಾಪಾಸು ಕಳಿಸುವ ಕೆಲಸ ಮಾಡೋಣ..'ಎಂದು ಮೊದಲನೆಯವನು ಹೇಳಿದ್ದಕ್ಕೆ ಎರಡನೆಯವರು ಒಪ್ಪಿಗೆ ಸೂಚಿಸಿದ. ತಲೆಯಲ್ಲಾಡಿಸಿದ.
            ವಿಕ್ರಮ ಹಾಗೂ ಆತನ ಜೊತೆಗಾರರು ದಂಟಕಲ್ ಹಾಗೂ ಸುತ್ತಮುತ್ತಲ ಹಳ್ಳಿಗೆ ಬಂದಿರುವುದನ್ನು ಗಮನಿಸುವವರೂ ಇದ್ದಾರೆ ಎನ್ನುವುದು ಮಾತ್ರ ಸಾಬೀತಾಗಿತ್ತು. ಅವಕಾಶ ಸಿಕ್ಕರೆ ವಿಕ್ರಮನ ತಂಡವನ್ನು ಹಣಿದು ಹಾಕಲೂ ಸನ್ನದ್ದರಾಗಿದ್ದರು. ಆದರೆ ವಿಕ್ರಮನ ಗುಂಪಿಗೆ ಇದರ ಅರಿವಿದೆಯಾ? ಬಲ್ಲವರ್ಯಾರು?

++++++

          ಮುಂಜಾನೆದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಎಲ್ಲರೂ ಗುಡ್ಡೇತೋಟಕ್ಕೆ ತೆರಳಲು ಸಜ್ಜಾದರು. ಮನೆಯಿಂದ ಹೊರಟು ಅಘನಾಶಿನಿ ನದಿಗುಂಟ ಹಾದು ಬಂದು ಗದ್ದೆಯ ಮನೆ ಬಳಿ ತೆರಳಿದರು. ಅಲ್ಲಿಯೇ ಇರುವ ಕಾಕಾಲಗದ್ದೆ ಎಂಬಲ್ಲಿ ಅಘನಾಶಿನಿ ನದಿ ವಿಶಾಲವಾಗಿ ಹರಿಯುತ್ತಾಳೆ. ಉಳಿದ ಕಡೆಗಳಲ್ಲಿ ಎದೆ ಮಟ್ಟವೋ, ಕುತ್ತಿಗೆ ಮಟ್ಟವೋ ಆಳವಾಗಿ ಹರಿಯುವ ಅಘನಾಶಿನಿ ನದಿ ಕಾಕಾಲ ಗದ್ದೆ ಎಂಬಲ್ಲಿ ಮಾತ್ರ ಪಾದ ಮುಳುಗುವಷ್ಟು ಮಾತ್ರ ಆಳವಾಗಿದ್ದಾಳೆ. ವಿಶಾಲವಾಗಿ ಹರಿಯುವ ಕಾರಣ ಕಾಕಾಲ ಗದ್ದೆಯಲ್ಲಿ ನದಿ ಆಳವಾಗಿಲ್ಲ. ಚಿಕ್ಕ ಮಕ್ಕಳೂ ಕೂಡ ಸಲೀಸಾಗಿ ನದಿಯನ್ನು ನಡೆದುಕೊಂಡು ದಾಟಬಹುದು. ಅಷ್ಟೇ ಏಕೆ ಕೆಲವು ಉತ್ಸಾಹಿ ಹೈದರು ಈ ಕಾಕಾಲ ಗದ್ದೆಯಲ್ಲಿಯೇ ತಮ್ಮ ಬೈಕನ್ನೂ ದಾಟಿಸುವ ಸಾಹಸ ಮಾಡುತ್ತಾರೆ. ಈ ಪ್ರದೇಶಕ್ಕೆ ಕರೆದುಕೊಂಡು ಬಂದ ವಿನಾಯಕ ಹೊಳೆಯನ್ನು ದಾಟಬೇಕು ಎಂದ. ಅಘನಾಶಿನಿಯನ್ನು ದಾಟಲೋಸುಗ ಎಲ್ಲರೂ ನದಿಯಲ್ಲಿ ಕಾಲಿಟ್ಟು. ನದಿ ನೀರು ಅದೆಷ್ಟು ತಣ್ಣಗಿತ್ತು ಎಂದರೆ ಪಾದದ ಮೂಲಕ ನೆತ್ತಿಯೂ ತಂಪಾದಂತೆ ಅನ್ನಿಸಿತು.
            ವಿಜೇತಾ ಹಾಗೂ ಮಹಿಳಾ ಮಣಿಯರು ತಂಪಾದ ನೀರಿನಲ್ಲಿ ಆಡಲು ಮುಂದಾಗಿದ್ದರು. ಆದರೆ ಮೊದಲು ದೇಗುಲ ದರ್ಶನ ಮಾಡಿ ನಂತರ ಮುಂದಿನ ಕೆಲಸ ಎಂದುಕೊಂಡು ನದಿಯನ್ನು ಬೇಗನೇ ದಾಟಲು ಮುಂದಾದರು. ನದಿಯನ್ನು ದಾಟಿದಂತೆಯೇ ದೊಡ್ಡದೊಂದು ಗದ್ದೆ ಬಯಲು ಸಿಗುತ್ತದೆ. ಹಿತ್ತಲಕೈ ಗ್ರಾಮಕ್ಕೆ ಸೇರಿದ ಈ ಗದ್ದೆ ಬಯಲಿನ ಪಕ್ಕದಲ್ಲಿಯೇ ಒಂದೆರಡು ಮನೆಗಳಿರುವ ಕಾಕಾಲಗದ್ದೆ ಎನ್ನುವ ಹಳ್ಳಿ ಇದೆ. ಇಲ್ಲಿ ಹಾದು ಮುಂದಕ್ಕೆ ಅಡಿ ಇಟ್ಟಂತೆಲ್ಲ ನಿಧಾನವಾಗಿ ಕಾಡು ಆವರಿಸತೊಡಗಿತು. ಸರಿಸುಮಾರು 1 ಕಿ.ಮಿ ದೂರದವರೆಗೆ ಕಾಡಿನ ದಾರಿಯಲ್ಲಿ ನದಿಗೆ ಸಮಾನಾಂತರವಾಗಿ ಸಾಗಿದ ನಂತರ ದೊಡ್ಡದೊಂದು ಗುಡ್ಡ ಎದುರಾಯಿತು.
            `ಈ ಗುಡ್ಡದ ಮೇಲೆಯೇ ಗುಡ್ಡೇತೋಟ ಊರಿದೆ. ಇಲ್ಲಿಯೇ ಕೋಟೆ ವಿನಾಯಕನ ದೇವಸ್ಥಾನ ಇದೆ..' ಎಂದ ವಿನಾಯಕ. ಎಲ್ಲರೂ ಗುಡ್ಡವನ್ನು ಏರಲು ಉತ್ಸುಕರಾದರು. ಎದೆಯ ಮಟ್ಟಕ್ಕಿದ್ದ ಗುಡ್ಡವನ್ನು ಏರುವುದು ಸುಲಭವಲ್ಲ ನೋಡಿ. ಪ್ರತಿಯೊಬ್ಬರಿಗೂ ಏದುಸಿರುವ ಬರುತ್ತಿತ್ತು. ಆದರೂ ಗುಡ್ಡವನ್ನೇರುವ ಛಲ ಯಾರಲ್ಲೂ ಕಡಿಮೆಯಾಗಿರಲಿಲ್ಲ. ದೇಹಕ್ಕೆ ಸುಸ್ತಾಗುತ್ತಿತ್ತದ್ದರೂ ಅದನ್ನು ತೋರಿಸಿಕೊಳ್ಳದೇ ಮುಂದಕ್ಕೆ ಹೋಗುತ್ತಿದ್ದರು.
           ಇದ್ದಕ್ಕಿದ್ದಂತೆ `ಅರೇ.. ಅಲ್ಲಿ ನೋಡಿ.. ಅದು ಕಾಡುಕೋಣ ಅಲ್ಲವಾ..' ಎಂದ ಪ್ರದೀಪ.
           ಪ್ರದೀಪ ತೋರಿಸಿದತ್ತ ಎಲ್ಲರೂ ದೃಷ್ಟಿ ಹಾಯಿಸಿದರು. ` ಹೌದು.. ಕಾಡುಕೋಣದ ಹಿಂಡು ಅಲ್ಲಿ ಹುಲ್ಲು ತಿನ್ನುತ್ತಿದೆ ನೋಡಿ.. ಆರು ಇದೆ. ಅಲ್ಲಲ್ಲ.. ಎಂಟು ಇರಬೇಕು ನೋಡಿ..' ಎಂದ ವಿನಾಯಕ.
            ಸನಿಹದಲ್ಲೇ ಇದ್ದ ನೀರಿನ ಒರತೆಯಲ್ಲಿ ಕಾಡೆಮ್ಮೆಗಳ ಹಿಂಡೊಂದು ಹುಲ್ಲು ತಿನ್ನುತ್ತ ಆರಾಮಾಗಿ ನಿಂತಿತ್ತು. ದೇವಸ್ಥಾನ ನೋಡಲು ಹೊರಟಿದ್ದವರನ್ನು ಕಾಡೆಮ್ಮೆಗಳು ಒಮ್ಮೆ ತಲೆಯೆತ್ತಿ ನೋಡಿದವು. ಯುವ ಪಡೆಯ ಮಾತು, ಕತೆಗಳು ಕಾಡೆಮ್ಮೆಗಳಲ್ಲಿಯೂ ವಿಸ್ಮಯ ಮೂಡಿಸಿರಬೇಕು. ಹಾಗೆಯೇ ಕೆಲಕಾಲ ತಲೆ ಎತ್ತಿ ನೋಡುತ್ತಿದ್ ಅವುಗಳು ಯುವ ಪಡೆಯಿಂದ ತಮಗೆ ಯಾವುದೇ ಅಪಾಯ ಆಗುವುದಿಲ್ಲ ಎಂದುಕೊಂಡಿರಬೇಕು. ನಿಧಾನವಾಗಿ ತಮ್ಮ ಕೆಲಸದಲ್ಲಿ ತಾವು ನಿರತವಾದವು. ಯುವ ಪಡೆ ಕೂಡ ಕೆಲ ಕಾಲ ಕಾಡೆಮ್ಮೆಗಳನ್ನು ನೋಡಿ, ಅವುಗಳ ಗಾತ್ರ, ನಿಲುವುಗಳನ್ನೆಲ್ಲ ಲೆಕ್ಖಹಾಕಿ, ಅವುಗಳ ಬಗ್ಗೆ ಮಾತನಾಡುತ್ತ ಮುಂದಕ್ಕೆ ಹೆಜ್ಜೆ ಇಟ್ಟಿತು.
           ಗುಡ್ಡೇತೋಟದ ದೇವಸ್ಥಾನವನ್ನು ದರ್ಶನ ಮಾಡಬೇಕೆಂದರೆ ಎದೆಯ ಎತ್ತರದ ಗುಡ್ಡವನ್ನು ಏರುವುದು ಅನಿವಾರ್ಯ. ಗುಡ್ಡವನ್ನು ಏರಿದ ನಂತರ ಸ್ವಲ್ಪ ವಿಶಾಲ ಎನ್ನಬಹುದಾದ ಸ್ಥಳ ಸಿಕ್ಕಿತು. ಬಯಲಿನಲ್ಲಿ ಒಂದು ಕಡೆ ಗದ್ದೆಯನ್ನು ಬೆಳೆಯಲಾಗಿದದ್ದರೆ ಇನ್ನೊಂದು ಕಡೆಯಲ್ಲಿ ಹಳೆಯದು ಎನ್ನುವಂತಹ ದೇವಾಲಯ ಭವ್ಯವಾಗಿ ನಿಂತಿತ್ತು. ದೇಗುಲದ ಎದುರು ಒಂದು  ದೇವಕಣಗಿಲೆ ಮರವಿತ್ತು. ಅದರಲ್ಲಿ ಬಿಳಿಯ ಬಣ್ಣದ ಹೂವುಗಳು ಸುವಾಸನೆಯನ್ನು ಬೀರುತ್ತ ಅರಳಿ ನಿಂತಿದ್ದವು. ದೇಗುಲದ ಹಿಂಭಾಗದಲ್ಲಿ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಉದ್ಘಾಟನೆಯಾದ ಭೋಜನ ಶಾಲೆಯಿತ್ತು.
            ಗುಡ್ಡೇತೋಟದ ಕೋಟೆ ವಿನಾಯಕನ ಸನ್ನಿಧಾನದ ಒಳಗೆ ಎಲ್ಲರೂ ಕೈ ಕಾಲುಗಳನ್ನು ತೊಳೆದುಕೊಂಡು ಕಣ್ಣಿಗೆ ನೀರನ್ನು ಹಚ್ಚಿಕೊಂಡು ಮುನ್ನಡೆದರು. ದೇಗುಲದ ಅರ್ಚಕರು ಆಗಲೇ ಪೂಜೆಯಲ್ಲಿ ನಿರತರಾಗಿದ್ದರು. ದೇಗುಲದ ಒಳಕ್ಕೆ ಕಾಲಿರಿಸಿದವರೇ ದೇವಾಲಯವನ್ನು ನಾಲ್ಕೈದು ಸಾರಿ ಸುತ್ತು ಹೊಡೆದು ಗಂಟೆಯನ್ನು ಭಾರಿಸಿ ದೇವರಿಗೆ ಉದ್ದಾಂಡ ನಮಸ್ಕಾರವನ್ನೂ ಮಾಡಿದರು. ಇವರಿಗಾಗಿಯೇ ಕಾಯುತ್ತಿದ್ದರೋ ಎನ್ನುವಂತೆ ದೇವಾಲಯದಲ್ಲಿ ಅರ್ಚಕರು ಮಂಗಳಾರತಿಯನ್ನು ಕೈಗೊಂಡರು. ಪ್ರತಿಯೊಬ್ಬರೂ ಹಣ್ಣು-ಕಾಯಿ ಮಾಡಿಸಿಕೊಂಡು ದೇವರಿಂದ ಪ್ರಸಾದ ಪಡೆದು ಒಳ್ಳೆಯದನ್ನು ಮಾಡಪ್ಪ ಭಗವಂತಾ ಎಂದರು.
             ವಿಕ್ರಮ, ವಿಜೇತಾರು ತಾವು ಬಂದಿದ್ದ ಕಾರ್ಯ ಕೈಗೂಡಲಿ ಎಂದು ಬೇಡಿಕೊಂಡರು. ಅಷ್ಟರಲ್ಲಿಯೇ ಗರ್ಭಗುಡಿಯಲ್ಲಿ ಪೂಜಾ ಕೈಂಕರ್ಯವನ್ನು ಮುಗಿಸಿ ಹೊರಬಂದರು. `ಅರೇ ವಿನಾಯಕ.. ಯಾರಪ್ಪಾ ಬಂದವರು ಎಂದುಕೊಂಡೆ.. ಇವರೆಲ್ಲ ಯಾರು...?' ಎಂದರು.
          `ಇವರೆಲ್ಲ ನನ್ನ ಗೆಳೆಯರು ಬೆಂಗಳೂರು ಕಡೆಯಿಂದ ಬಂದಿದ್ದಾರೆ. ನಮ್ಮೂರ ಭಾಗದಲ್ಲಿ ಪಾತರಗಿತ್ತಿ ಹಾಗೂ ವಿವಿಧ ಪ್ರಾಣಿಗಳ ದಾಖಲೆ ಮಾಡಲು ಬಂದಿದ್ದಾರೆ..' ಎಂದ.
            `ಹೌದಾ.. ಯಾರೋ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಇವರೇಯೋ ಹೇಗೆ..' ಎಂದರು. ಎಲ್ಲರೂ ತಲೆಯಾಡಿಸಿದರು.
            ವಿನಾಯಕ ಭಟ್ಟರ ಬಳಿ ದೇವಸ್ಥಾನದ ವಿಶೇಷತೆಗಳನ್ನು ಎಲ್ಲರಿಗೂ ಹೇಳಿ ಎಂದ. ದೇವಸ್ಥಾನದ ವಿಶೇಷತೆಗಳನ್ನು ಹೇಳಲು ಮುಂದಾದ ಭಟ್ಟರು ಎಲ್ಲರನ್ನೂ ಒಂದು ಕಡೆ ಕುಳ್ಳಿರಿಸಿದರು.
          `ನೋಡಿ ಈ ದೇವಸ್ಥಾನಕ್ಕೆ ಕನಿಷ್ಟವೆಂದರೂ 500 ರಿಂದ 600 ವರ್ಷ ಇತಿಹಾಸವಿದೆ. ಬಹಳಾ ಘಟಾಘಟಿ ಜಾಗ. ಈ ಮೊದಲು ಈ ದೇವಸ್ಥಾನ ನಮ್ಮೂರಿಗೆ ಹತ್ತಿರದ ಹೂವಿನಮನೆಯ ಕೋಟೆಗುಡ್ಡ ಎಂಬಲ್ಲಿ ಇತ್ತು. ಆ ನಂತರ ಅದ್ಯಾರಿಗೂ ಕನಸಿನಲ್ಲಿ ಬಂದ ಕಾರಣ ಇಲ್ಲಿಗೆ ದೇವಸ್ಥಾನವನ್ನು ಬದಲಿಸಲಾಯಿತು. ಬಾಳೂರಿನ ಅರಸರ ಆಳ್ವಿಕೆಯ ಕಾಲದಲ್ಲಿ ಈ ದೇವಸ್ಥಾನಕ್ಕೆ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಬಾಳೂರು ಅರಸರು ದೇವಸ್ಥಾನ ನಿರ್ಮಾಣ ಮಾಡಿದ ಕಾರಣದಿಂದಾಗಿ ದೇಗುಲದ ಮುಂದೆ ಒಂದು ನಂದಿ ಆಕೃತಿಯನ್ನು ಸ್ಥಾಪಿಸಲಾಗಿದೆ. ಈ ನಂದಿ ಬಾಳೂರ ಅಸನ ಪ್ರತೀಕ. ಗಣಪನ ದೇವಾಲಯದ ಮುಂದೆ ನಂದಿ ಇರುವ ಕೆಲವೇ ಕೆಲವು ವಿಶಿಷ್ಟ ನಿದರ್ಶನಗಳಲ್ಲಿ ಇದು ಒಂದು ನೋಡಿ..' ಎಂದರು ಭಟ್ಟರು. ಎಲ್ಲರೂ ಅತ್ತ ಕಡೆ ಕಣ್ಣು ಹಾಯಿಸಿದರು.
              `ಈ ದೇವಸ್ಥಾನಕ್ಕೆ ಇನ್ನೂ ಒಂದು ವಿಶೇಷತೆಯಿದೆ ನೋಡಿ. ಈ ಗಣಪನನ್ನು ಎಲೆಕ್ಷನ್ ಗಣಪ ಎಂದೂ ಕರೆಯಲಾಗುತ್ತದೆ. ಅಂದರೆ ಎಲೆಕ್ಷನ್ ಸಮಯದಲ್ಲಿ ನಮ್ಮ ಗಣಪನಿಗೆ ಎಲ್ಲಿಲ್ಲದ ಬೇಡಿಕೆ. ಚುನಾವಣೆಯಲ್ಲಿ ಟಿಕೆಟ್ ಬೇಕಾದವರು ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡರೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಟಿಕೆಟ್ ಸಿಕ್ಕವರಲ್ಲಿ ಕೆಲವರು ಗೆಲುವಿಗಾಗಿ ಪೂಜೆಯನ್ನು ಮಾಡಿಸುವುದೂ ಇದೆ. ಗೆದ್ದವರೂ ಬಂದು ಪೂಜೆ ಮಾಡಿಸುತ್ತಾರೆ ನೋಡಿ. ಈ ಕಾರಣದಿಂದ ನಮ್ಮ ಗಣಪ ಎಲೆಕ್ಷನ್ ಗಣಪ ಆಗಿದ್ದಾನೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಕೂಡ ಹಲವರು ಬಂದು ಪೂಜೆ ಮಾಡಿಸಿದ್ದರು ನೋಡಿ..' ಎಂದರು ಭಟ್ಟರು.
             `ದೇವರಿಗೆ ಪೂಜೆ ಸಲ್ಲಿಸಿ, ಗಂಟೆಯನ್ನು ಹರಕೆಯ ರೂಪದಲ್ಲಿ ಒಪ್ಪಿಸುವುದು ಇಲ್ಲಿನ ವಾಡಿಕೆ. ಕಾಡಿನ ಮಧ್ಯದಲ್ಲಿ ಇರುವ ಈ ದೇವರನ್ನು ನೋಡಲು ರಾಜ್ಯದ ಹಲವು ಕಡೆಗಳಿಂದ ಬರುತ್ತಾರೆ ನೋಡಿ. ಇಂತಹ ಈ ದೇವಾಲಯದ ಪ್ರದೇಶ ಗುಡ್ಡದ ಮೇಲಿದ್ದರೂ ಇಲ್ಲಿ ನೀರಿನ ಸೆಲೆ ಚನ್ನಾಗಿದೆ. ಎಲ್ಲ ಭಗವಂತನ ಆಶೀರ್ವಾದ ನೋಡಿ..' ಎಂದರು ಭಟ್ಟರು.
            ಪ್ರತಿಯೊಬ್ಬರೂ ದೇವರ ಮಹಿಮೆಯ ಬಗ್ಗೆ ಅಚ್ಚರಿ ತೋರಿಸುತ್ತಾ ವಾಪಾಸಾಗಲು ಮುಂದಾದರು. ಆಗ ಇದ್ದಕ್ಕಿದ್ದಂತೆ ಅಚಾತುರ್ಯವೊಂದು ಘಟಿಸಿಬಿಟ್ಟಿತು. ಯಾರೂ ಅಂದುಕೊಂಡಿರದ ಘಟನೆಯೊಂದು ಜರುಗಿತು. ಅಚಾನಕ್ ಆಗಿ ನಡೆದ ಘಟನೆ ಎಲ್ಲರ ಮನಸ್ಸಿನಲ್ಲಿ ಭಯದ ಛಾಯೆ ಆವರಿಸಿತು.

(ಮುಂದುವರಿಯುತ್ತದೆ.)