Tuesday, June 2, 2015

ಮಾಸ್ತರ್ ಮಂದಿ-3

ಸೀಮಾ ಟೀಚರ್ :
                   ನಿಜಕ್ಕೂ ಈ ಟೀಚರ್ ರ ಪೂರ್ಣ ಹೆಸರು ನನಗೆ ಗೊತ್ತಿಲ್ಲ. ಕೆಲವರು ಸೀಮಾ ನಾಯ್ಕ ಎಂದು ಹೇಳಿದರೆ ಮತ್ತೆ ಕೆಲವರು ಸೀಮಾ ಮೇಡಮ್ ಕ್ರಿಶ್ಚಿಯನ್ನರು ಎಂದೂ ಹೇಳಿದ್ದಾರೆ. ಅವರ ಪೂರ್ಣ ಹೆಸರು ಏನೇ ಆಗಿರಲಿ ಅದು ಬಿಡಿ. ಆದರೆ ಅವರ ಬಳಿ ನಾನು ಕಲಿತಿದ್ದು 15 ದಿನಗಳಿರಬೇಕು ಅಷ್ಟೇ. ಸೀಮಕ್ಕೋರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡಕಳ್ಳಿಯಲ್ಲಿ ನನಗೆ ಟೀಚರ್ ಆಗಿ ಬಂದಿರಲಿಲ್ಲ. ಬದಲಾಗಿ ನಮ್ಮೂರಿನಲ್ಲಿದ್ದ ಕಿರಿಯ ಪ್ರಾಥಮಿಕ ಶಾಲೆ ದಂಟಕಲ್-ಮುತ್ಮೂರ್ಡು ಶಾಲೆಗೆ ಬಂದಿದ್ದರು. ಶಿರಸಿಯಲ್ಲಿ ಉಳಿದುಕೊಂಡಿದ್ದ ಇವರು ಕಾನಸೂರಿಗೋ, ಅಡ್ಕಳ್ಳಿ ಕತ್ರಿಗೋ ಬಂದು ಅಲ್ಲಿಂದ 4 ಕಿ.ಮಿ ದೂರದ ದಂಟಕಲ್ ಶಾಲೆಗೆ ಅಜೋ ಎಂದು ನಡೆದುಕೊಂಡು ಬರುತ್ತಿದ್ದುದು ನನಗಿನ್ನೂ ನೆನಪನಲ್ಲಿದೆ. ಇವರು ನನಗಿಂತ ನನ್ನ ತಂಗಿಗೆ ಕಲಿಸಿದ ಶಿಕ್ಷಕಿ ಎಂದರೆ ತಪ್ಪಿಲ್ಲ ನೋಡಿ.
                ದಂಟಕಲ್ ಶಾಲೆಗೆ ಏಕೈಕ ಶಿಕ್ಷಕರು. ಈ ಶಾಲೆಯಲ್ಲಿ ಮಕ್ಕಳೆಷ್ಟಿದ್ದಾರೆ ಮಹಾ ಎಂದುಕೊಳ್ಳಬೇಡಿ. ಮ್ಯಾಕ್ಸಿಮಮ್ 10 ಮಕ್ಕಳು. ಇಂತಹ ಶಾಲೆ ನಾನು ಮೂರರಲ್ಲೋ ಅಥವಾ ನಾಲ್ಕರಲ್ಲೋ ಇದ್ದಾಗ ಪುನಾರಂಭ ಮಾಡಿತ್ತು. ಗಾಂಧಿ ಶತಾಬ್ದಿ ಕಾಲದಲ್ಲಿ ನಿರ್ಮಾಣಗೊಂದ ಶಾಲೆ ಎನ್ನುವ ಖ್ಯಾತಿ ಪುನಾರಂಭಕ್ಕೆ ಕಾರಣವಾಗಿತ್ತು. ಶಾಲೆ ಆರಂಭಗೊಂಡ ಹೊಸತರಲ್ಲಿ ಒಂದಿಬ್ಬರು ತಾತ್ಕಾಲಿಕ ಶಿಕ್ಷಕರಿದ್ದರು. ಆದರೆ ಕೊನೆಗೆ ಬಂದವರು ಮಾತ್ರ ಸೀಮಕ್ಕೋರು. ಆ ದಿನಗಳಲ್ಲಿ ನನ್ನದೇ ವಾರಗೆಯ ಪಕ್ಕದ ಮನೆಯ ರಂಜನಾ ಎನ್ನುವಾಕೆ ಈ ಶಾಲೆಗೆ ಹೋಗುತ್ತಿದ್ದಳು. ಜೊತೆಗೆ ನನ್ನ ತಂಗಿ, ತಂಗಿಯ ವಾರಗೆಯ ನಂದನ ಎನ್ನುವಾತನೂ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದ. ಹೀಗಾಗಿ ನಾನು ಅಡಕಳ್ಳಿ ಶಾಲೆಗೆ ಹೋಗುವುದನ್ನು ನಿಲ್ಲಿಸಿ ನಮ್ಮೂರ ಶಾಲೆಗೆ ಹೋಗಲು ಆರಂಭಿಸಿದ್ದೆ. ಸರಿಸುಮಾರು 15ದಿನ ನಾನು ಈ ಶಾಲೆಗೆ ಹೋಗಿದ್ದೆ ಎನ್ನಿಸುತ್ತದೆ. ಕೊನೆಗೊಂದು ದಿನ ಅಡಕಳ್ಳೀ ಶಾಲೆಯ ಗಡ್ಕರ್ ಮಾಸ್ತರ್ ಬಂದು ನಿನ್ನ ಟಿಸಿ ತೆಗೆದುಕೊಂಡು ಹೋಗಲು ನಿನ್ನ ತಂದೆಗೆ ತಿಳಿಸು ಎಂದು ಹೇಳಿದ್ದರು. ನಾನು ಅಪ್ಪನ ಬಳಿ ಹೋಗಿ ಹೀಗೆ ಹೇಳಿದ್ದೆ. ಕೊನೆಗೆ ನನ್ನ ಅಪ್ಪನೇ ಓದಿನ ನಡುವೆ ಶಾಲೆ ಬದಲಾಯಿಸುವುದು ಬೇಡ. ಮುಂದೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದರು. ನಾನು ಮರಳಿ ಅಡ್ಕಳ್ಳಿ ಶಾಲೆಗೆ ಹೋಗಲು ಆರಂಭಿಸಿದ್ದೆ. ಸೀಮಕ್ಕೋರು ನಂತರ ನಾನು ಶಾಲೆಯಿಂದ ಮರಳಿ ಮನೆಗೆ ಬರುವಾಗಲೆಲ್ಲ ಸಿಗುತ್ತಿದ್ದರು. ಬಹಳ ಸುಂದರವಾಗಿಯೂ ಇದ್ದರು ಎನ್ನಿ. ಇಂತಿಪ್ಪ ಅಕ್ಕೋರು ಕೊನೆಗೊಂದು ದಿನ ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋದರು. ಮತ್ತೆ ಶಾಲೆಗೆ ಶಿಕ್ಷಕರಿಲ್ಲದೇ ಅನೇಕ ದಿನಗಳ ಕಾಲ ಯಾರು ಯಾರೋ ತಾತ್ಕಾಲಿಕವಾಗಿ ಕಲಿಸಲು ಬರುತ್ತಿದ್ದುದೂ ನೆನಪಿನಲ್ಲಿದೆ.

ತಾರಾ ಹೆಗಡೆ :
            ನಾನು ಇಂದಿಗೂ ನೆನಪು ಮಾಡಿಕೊಳ್ಳುವ ಶಿಕ್ಷಕರ ಪೈಕಿ ತಾರಕ್ಕೋರು ಒಬ್ಬರು. ನಾನು ಎರಡನೇ ಕ್ಲಾಸಿನಲ್ಲಿದ್ದಾಗ ಅಡ್ಕಳ್ಳಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದವರು ತಾರಕ್ಕೋರು. ಮೊದಲು ಯಾವ ಶಾಲೆಗೆ ಇದ್ದರೋ ಗೊತ್ತಿಲ್ಲ. ನಮ್ಮ ಶಾಲೆಗೆ ಬರುವ ವೇಳೆಗೆ ನನ್ನ ಪರಿಸ್ಥಿತಿ ಮಾತ್ರ ಅತ್ಯಂತ ಹೀನಾಯವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ಯಾರೇ ಶಿಕ್ಷಕರು ಬಂದರೂ ನನಗೆ ಯಥಾನುಶಕ್ತಿ ಹೊಡೆಯುತ್ತಿದ್ದರು. ಶಿಕ್ಷಕರ ಪಾಲಿಗೆ ನಾನು ಹೊಡೆತ ತಿನ್ನುವ ಹುಡುಗನಾಗಿದ್ದೆ. ಪ್ರತಿದಿನ ಹೊಡೆತ ಬೀಳುತ್ತಿತ್ತು. ಕೊನೆಗೊಂದು ದಿನ ತಾರಕ್ಕೋರು ನಮ್ಮ ಶಾಲೆಗೆ ಬಂದರು. ನಮ್ಮ ಕ್ಲಾಸಿನ ಜವಾಬ್ದಾರಿ ಅವರಿಗೆ ಸೇರಿತು. ಅಂದಿನಿಂದ ನನಗೆ ಹೊಡೆತ ಬೀಳುವುದು ಕೆಲಕಾಲ ತಪ್ಪಿತು ಎನ್ನಬಹುದು ನೋಡಿ.
              ತಾರಕ್ಕೋರೊಬ್ಬರೇ ಇರಬೇಕು ನನ್ನ ಪ್ರೈಮರಿ ಜೀವನದಲ್ಲಿ ನನ್ನನ್ನು ಪ್ರೀತಿಯಿಂದ ಕಂಡವರು. ನನಗೂ ಭಾವನೆಯಿದೆ. ನನ್ನ ಮಾತನ್ನೂ ಯಾರಾದರೂ ಕೇಳುತ್ತಾರೆ ಎನ್ನಿಸಿದ್ದು ತಾರಕ್ಕೋರು ಬಂದಮೇಲೆಯೇ. ಬಹುಶಃ ಅತ್ಯಂತ ತುಂಟತನದಿಂದ ಕೂಡಿದ್ದ ನನ್ನನ್ನು ಪ್ರೀತಯಿಂದ ಮಾತನಾಡಿಸಿ ನನ್ನಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿದವರು ಎಂದರೆ ಅದು ತಾರಕ್ಕೋರೇ ಎಂದರೆ ಖಂಡಿತ ತಪ್ಪಲ್ಲ. ನಾಲ್ಕೈದು ವರ್ಷ ಅವರೇ ನನಗೆ ಕಲಿಸಿದವರು. ಅವರ ಪ್ರೀತಿಗೆ, ಆದರಕ್ಕೆ ನಾನು ಇಂದಿಗೂ ಋಣಿಯಾಗಿದ್ದೇನೆ.
             ಶಾಲೆಗಳೆಂದರೆ ಓದು, ಕಲಿಕೆ, ಅರ್ಧಗಂಟೆ ಆಟ, ಹೊಡೆತ ಇತ್ಯಾದಿಗಳೇ ಎಂದುಕೊಂಡಿದ್ದ ನಮಗೆ ತಾರಕ್ಕೋರು ಬಂದ ನಂತರ ಶಾಲೆಯಲ್ಲಿ ರಚನಾತ್ಮಕ ಕೆಲಸಗಳು ನಡೆಯುತ್ತವೆ ಎನ್ನುವುದು ಅರಿವಿಗೆ ಬಂದಿತು. ಪ್ರತಿ ಶನಿವಾರ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದರು. ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನೂ ದೊಡ್ಡ ಕೋಣೆಗೆ ಕರೆದುಕೊಂಡು ಬಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಹಾಡು, ಡ್ಯಾನ್ಸು, ಮಿಮಿಕ್ರಿ, ಕಥೆ ಹೇಳುವುದು ಹೀಗೆ ಏನುಬೇಕಾದರೂ ಮಾಡಬಹುದಿತ್ತು. ಯಾರೂ ತಪ್ಪಿಸಿಕೊಳ್ಳುವಂತಿಲ್ಲ ಎನ್ನುವುದು ಕಡ್ಡಾಯವಾಗಿತ್ತು. ಆ ದಿನಗಳಲ್ಲಿ ನಾನು ಸಿಕ್ಕಾಪಟ್ಟೆ ಹಾಡು ಹೇಳುತ್ತಿದ್ದೆ. ಮಿಮಿಕ್ರಿ ಮಾಡುತ್ತಿದೆ. ಯಾವುದೋ ಕಥೆಗಳನ್ನೆಲ್ಲ ಹೇಳುತ್ತಿದೆ. ಕ್ರಿಕೆಟ್ ಆಟಗಾರರು ಹೇಗೆ ಆಡುತ್ತಾರೆ ಎನ್ನುವುದನ್ನೆಲ್ಲ ಥೇಟು ಆಟಗಾರರಂತೆ ಮಾಡಿ ತೋರಿಸುತ್ತಿದೆ. ಪ್ರತಿ ಶನಿವಾರ ಒಳ್ಳೆಯ ಕಾರ್ಯಕ್ರಮ ಕೊಟ್ಟವನಿಗೆ ಚಾಕಲೇಟ್ ಒಂದನ್ನು ಪ್ರೈಜ್ ಆಗಿ ಕೊಡುತ್ತಿದ್ದರು. ಇಂತಹ ಚಾಕಲೇಟನ್ನು ಮೂರೋ ನಾಲ್ಕೋ ತೆಗೆದುಕೊಂಡಿದ್ದೇನೆ ನೋಡಿ. ಕೊನೆಗೊಂದು ದಿನ ನಮ್ಮದೇ ಶಾಲೆಗೆ ಶಿಕ್ಷಕರಾಗಿ ಬಂದ ಸಿ. ಎಂ. ಹೆಗಡೆಯವರು `ಅಕ್ಕೋರೆ ನೀವು ಕಲ್ಚರಲ್ಲು ಅದೂ ಇದೂ ಕಾರ್ಯಕ್ರಮ ಮಾಡಿ ಮಕ್ಕಳ ತಲೆ ಹಾಳು ಮಾಡಬೇಡಿ. ನಮಗೂ ಸುಮ್ಮನೆ ತೊಂದರೆ. ಯಾಕ್ ಹಿಂಗಿದ್ದೆಲ್ಲ ಮಾಡ್ತೀರಿ. ಮಕ್ಕಳು ಓದಿಕೊಳ್ಳಲಿ..' ಎಂದು ಜಗಳ ಮಾಡಿದ ನಂತರ ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬಿದ್ದಿತ್ತು.
              ತಾರಕ್ಕೋರು ಮದ್ಯಾಹ್ನದ ಬಿಡುವಿನಲ್ಲಿ ನಿದ್ದೆ ಮಾಡುತ್ತಿದ್ದರು. ಆಗೆಲ್ಲ ನಾವು ಸದ್ದಿಲ್ಲದೇ ಕ್ಲಾಸಿನ ಒಳಕ್ಕೆ ಹೋಗಿ ಏನಾದರೂ ಕಿಲಾಡಿ ಮಾಡಿ ಬರುತ್ತಿದ್ದೆವು. ನಾವು ಕಿಲಾಡಿ ಮಾಡುವುದು ತಾರಕ್ಕೋರಿಗೆ ಗೊತ್ತಿದ್ದರೂ ಸುಮ್ಮನೆ ಇರುತ್ತಿದ್ದರು. ಇಂತಹ ತಾರಕ್ಕೋರು ಆಗಾಗ ತಾವು ತಂದಿದ್ದ ತಿಂಡಿಯನ್ನೂ ನಮಗೆ ನೀಡುತ್ತಿದ್ದರು. ತಾರಕ್ಕೋರು ಎಂದ ಕೂಡಲೇ ಇನ್ನೊಂದು ಪ್ರಮುಖ ಘಟನೆ ನೆನಪಿಗೆ ಬರುತ್ತದೆ ನೋಡಿ. ಕ್ಲಾಸು ಎಷ್ಟು ಎನ್ನುವುದು ಸರಿಯಾಗಿ ನೆನಪಿನಲ್ಲಿ ಇಲ್ಲ. ಶಾಲೆಗಳ ನಡುವಿನ ಕ್ರೀಡಾಕೂಟಕ್ಕಾಗಿ ನಾವು ಕಾನಸೂರಿಗೆ ಹೋಗಬೇಕಿತ್ತು. ನಾನು ಹೋಗಿದ್ದೆ. ಆಗೆಲ್ಲ ಉಲ್ಟಾ ಪಲ್ಟಾ ಎನ್ನುವ ಹೆಸರಿನ ಬಡೆಸೊಪ್ಪಿನ ಮಸಾಲಾ ಮಿಕ್ಸ್ ಬಹಳ ಹೆಸರುವಾಸಿಯಾಗಿತ್ತು. ನಾವೆಲ್ಲ ತಿನ್ನುವುದಕ್ಕಾಗಿ ಅದನ್ನು ಕೊಳ್ಳುತ್ತಿರಲಿಲ್ಲ. ಬದಲಾಗಿ ಅದಕ್ಕೊಂದು ಕ್ರಿಕೆಟ್ ಆಟಗಾರರ ಸ್ಟಿಕ್ಕರ್ ಪ್ರೀ ಬರುತ್ತಿತ್ತು. ಅದಕ್ಕಾಗಿ ಕೊಳ್ಳುತ್ತಿದ್ದೆವು. ಆ ದಿನಗಳಲ್ಲಿ ನಾನು ಹೇಗೋ ಒಂದಿಷ್ಟು ದುಡ್ಡನ್ನು ಸಂಗ್ರಹ ಮಾಡಿ ಇಟ್ಟುಕೊಂಡಿದ್ದೆ. ಅದರಲ್ಲಿ ಒಂದು 10ರು. ನೋಟನ್ನು ತೆಗೆದುಕೊಂಡು ಹೋಗಿ ಇಡೀ 10 ರೂಪಾಯಿಗೆ ಉಲ್ಟಾ ಪಲ್ಟಾ ಕೊಂಡುತಂದಿದ್ದೆ.
                        ಆಗ 10 ರು. ಅಂದರೆ ಈಗಿನ 100 ರು.ಗೆ ಸಮಾ ಬಿಡಿ. ನಾನು ಇಡೀ 10 ರು. ಗೆ ಉಲ್ಟಾ ಪಲ್ಟಾ ಕೊಂಡಿದ್ದು ಉಳಿದೆಲ್ಲ ವಿದ್ಯಾರ್ಥಿಗಳಿಗೂ ಗೊತ್ತಾಗಿಬಿಟ್ಟಿತ್ತು. ಅವರು ಸೀದಾ ಬಂದವರೇ ತಾರಕ್ಕೋರ ಬಳಿ ನಾನು ಮಾಡಿದ ಘನ ಕಾರ್ಯವನ್ನು ಹೇಳಿಯೇ ಬಿಟ್ಟರು. ತಾರಕ್ಕೋರಿಂದ ಬುಲಾವ್ ಬಂದಿತು. ನಾನು ಕೊಂಡಿದ್ದ ವಿಷಯವನ್ನು ಅವರೇ ಹೇಳಿ ಅಷ್ಟೊಂದು ದುಡ್ಡು ಎಲ್ಲಿಂದ ಬಂತು ಹೇಳು ಎಂದವರೇ ಹೊಡೆಯಲು ಬೆತ್ತ ಎತ್ತಿದರು. ನಾನು ಹೆದರುತ್ತಲೇ ನಾನು ದುಡ್ಡು ಸಂಗ್ರಹ ಮಾಡಿ ಇಟ್ಟುಕೊಂಡಿದ್ದೆ. ಅದರಲ್ಲಿಯೇ ಇವನ್ನು ತೆಗೆದುಕೊಂಡಿದ್ದು ಎಂದಿದ್ದೆ. ಅದಕ್ಕೆ ಪ್ರತಿಯಾಗಿ `ಹೌದಾ? ನೀನೆ ಸಂಗ್ರಹ ಮಾಡಿಕೊಂಡಿದ್ದಾ? ಹಣ ಸಂಗ್ರಹ ಒಳ್ಳೆಯ ಕೆಲಸ. ಗುಡ್. ಆದರೆ ಸಂಗ್ರಹ ಮಾಡಿದ್ದನ್ನ ಹೀಗೆ ಸೊಕಾ ಸುಮ್ಮನೆ ಹಾಳು ಮಾಡಬೇಡ ತಿಳೀತಾ..?' ಎಂದು ಸಮಾಧಾನದಿಂದ ಹೇಳಿದ್ದು ನನಗೆ ಬಹಳ ಸಂತೋಷ ತಂದಿತ್ತು. ಆದರೆ ಅಕ್ಕೋರ ಬಳಿ ಚಾಡಿ ಹೇಳಿದವರಿಗೆ ಇದು ಬಹಳ ಇರಿಸು ಮುರುಸು ಎಂಬಂತಾಗಿತ್ತು.
                 ಅದೇ ಹುಡುಗರು ಸೀದಾ ಹೋಗಿ ನನ್ನ ಅಪ್ಪನ ಬಳಿಯೂ ಚಾಡಿ ಹೇಳಿಬಿಟ್ಟಿದ್ದರು. ಕೆಂಪು ಕಣ್ಣು ಬಿಡುತ್ತಾ ಬಂದಿದ್ದ ಅಪ್ಪ ಸೀದಾ ತಾರಕ್ಕೋರ ಬಳಿ ಬಂದಿದ್ದ. ತಾರಕ್ಕೋರ ಎದುರು ನನ್ನನ್ನು ಬಯ್ಯಲು ಆರಂಭಿಸಿದ್ದ ಅಪ್ಪ ಸಿಕ್ಕಾಪಟ್ಟೆ ಕೂಗಾಡಿದ್ದ. ತಾರಕ್ಕೋರು ನಾನು ಹಣವನ್ನು ಕೂಡಿಟ್ಟಿದ್ದನ್ನು ಹೇಳಿದರೂ ಅಪ್ಪನ ಸಿಟ್ಟು ಕಡಿಮೆಯಾಗಿರಲಿಲ್ಲ. ಕೊನೆಗೆ ಮನೆಗೆ ಹೋದ ನಂತರ ಅಪ್ಪನೇ `ತಮಾ ಎಲ್ಲಿ ಇಟ್ಟಿದ್ದೆ ನೀನು ದುಡ್ಡು ಸಂಗ್ರಹ ಮಾಡಿ. ಯಂಗೂ ತೋರ್ಸು..' ಎಂದಿದ್ದ. ನಾನು ತೋರಿಸಿದ್ದೆ. ಮರುದಿನ ಬೆಳಗಾಗುವ ವೇಳೆಗೆ ನಾನು ಸಂಗ್ರಹ ಮಾಡಿದ್ದ ದುಡ್ಡು ಮಾತ್ರ ಇರಲೇ ಇಲ್ಲ. ಎಲ್ಲವೂ ಅಪ್ಪನ ಓಸಿ ಆಟಕ್ಕೆ ಬಲಿಯಾಗಿದ್ದವು. ಈಗಲೂ ಅಪ್ಪ ತಾನು ಆ ದಿನ ಮಾಡಿದ್ದನ್ನು ನೆನಪು ಮಾಡಿಕೊಂಡು `ತಮಾ ನಾ ಹಾಂಗ್ ಮಾಡಕಾಗಿತ್ತಿಲ್ಲೆ ಆವತ್ತು..' ಎನ್ನುತ್ತಿರುತ್ತಾನೆ. ಆಗ ತಾರಕ್ಕೋರು ನನಗೆ ನೆನಪಾಗುತ್ತಾರೆ.
                ಅದೊಂದು ದಿನ ಆಟದ ಸಮಯದಲ್ಲಿ ನಾವೆಲ್ಲ ಕ್ರಿಕೆಟ್ ಆಡುತ್ತಿದ್ದೆವು. ಅದೇನು ಅನ್ನಿಸಿತೋ ತಾರಕ್ಕೋರು ತಾನೂ ಕ್ರಿಕೆಟ್ ಆಡುತ್ತೇನೆ ಎಂದು ಬಂದೇ ಬಿಟ್ಟರು. ತಾರಕ್ಕೋರು ಬಂದಿದ್ದು ನೋಡಿ ಅಲ್ಲೇ ಇದ್ದ ಇನ್ನೋರ್ವ ಶಿಕ್ಷಕ ಸಿ. ಎಂ. ಹೆಗಡೆಯವರೂ, ಹರೀಶ ನಾಯ್ಕರೂ ಬಂದರು. ನಾನು ಬ್ಯಾಟಿಂಗಿಗೆ ಇಳಿದಿದ್ದೆ. ನನ್ನ ಬ್ಯಾಟಿಂಗಿಗೆ ಎಲ್ಲಿ ಚಕ್ರ ಬಂದು ಬಿಡುತ್ತದೆಯೋ ಎಂದುಕೊಂಡು ಢವ ಢವ ಗುಡುತ್ತಲೇ ಇದ್ದೆ. ಬಂದವರೇ ತಾರಕ್ಕೋರು ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಬ್ಯಾಟಿಂಗಿಗೆ ನಿಂತರು. ಅಯ್ಯೋ ನಾನು ತಾರಕ್ಕೋರ ಜೊತೆ ಬ್ಯಾಟಿಂಗಿಗೆ ನಿಲ್ಲಬೇಕಾ? ನಾನು ರನ್ ಹೊಡೆದರೆ ಅವರ ಕೈಲಿ ಓಡಲು ಆಗುತ್ತದೆಯೇ ಎನ್ನುವ ಆಲೋಚನೆ ಮೂಡಿತು. ಅದಕ್ಕೆ ಸರಿಯಾಗಿ ಸಿ. ಎಂ. ಹೆಗಡೆಯವರು ಬೌಲಿಂಗಿಗೆ ನಿಂತರು. ಹರೀಶ ನಾಯ್ಕರು ಕೀಪಿಂಗಿಗೆ ಬಂದರು. ಸಿ. ಎಂ. ಹೆಗಡೆಯವರಿಗೂ ನನಗೂ ಎಣ್ಣೆ-ಸೀಗೆಕಾಯಿ. ಆಟಕ್ಕೆ ಬರುವ ಮೊದಲೇ ಎಲ್ಲರ ಬಳಿಯೂ ವಿನಯ ಬ್ಯಾಟಿಂಗ್ ಮಾಡುತ್ತಿದ್ದಾನೆ. ತಡೀರೋ ನಾನು ಬೌಲಿಂಗ್ ಮಾಡ್ತೆ ಎಂದು ಹೇಳಿದ್ದರು ಅಷ್ಟೇ ಅಲ್ಲ ನನ್ನನ್ನು ಬೌಲ್ಡ್ ಮಾಡುತ್ತೇನೆ ಎಂದೂ ಹೇಳಿಬಿಟ್ಟಿದ್ದರು.
                  ಯಾವಾಗಲೂ ನನಗೆ ಹೊಡೆಯುವ, ನನ್ನ ವಿರುದ್ಧ ಸಿಟ್ಟು ಮಾಡುವ ಮಾಸ್ತರ್ರು ಬೌಲಿಂಗಿಗೆ ಬಂದಿದ್ದಾರೆ. ಒಮ್ಮೆಯಾದರೂ ಅವರ ಮರ್ಯಾದೆಯನ್ನು ತೆಗೆಯಬೇಡವೇ ಎಂದುಕೊಂಡೆ ನಾನು. ಏನಾದರಾಗಲಿ ಅವರಿಗೆ ಔಟಾಗಬಾರದು ಎಂದುಕೊಂಡೆ. ಅದಕ್ಕೆ ಸರಿಯಾಗಿ ಬೌಲ್ ಮಾಡಿದರು. ಮೊದಲ ಬಾಲಿಗೆ ಬೌಂಡರಿ ಹೊಡೆದೆ. ಎರಡನೇ ಬಾಲಿಗೂ ಹೊಡೆದೆ. ನಾನು ಎರಡು ಬೌಂಡರಿ ಹೊಡೆದಿದ್ದೇ ತಡ ಮಾಸ್ತರಿಗೆ ಸಿಟ್ಟು ಏರಿಬಿಟ್ಟಿತು. ಮೂರನೇ ಬಾಲನ್ನು ಸಿಟ್ಟಿನಿಂದಲೇ ಹಾಕಿದರು. ನಾನು ಅಷ್ಟೇ ಸಿಟ್ಟಿನಿಂದ ಹೊಡೆದೆ. ನನ್ನ ತಾಕತ್ತನ್ನೆಲ್ಲ ಹಾಕಿ ಹೊಡೆದಿದೆ. ಆದರೆ ಚೆಂಡು ಮಾತ್ರ ವೇಗವಾಗಿ ಹೋಗಿ ನಾನ್ ಸ್ಟ್ರೈಕರ್ ಎಂಡಿನಲ್ಲಿ ಬ್ಯಾಟ್ ಹಿಡಿದುಕೊಂಡಿದ್ದ ತಾರಕ್ಕೋರಿಗೆ ಬಡಿಯಿತು. ಬಡಿದ ಹೊಡೆತಕ್ಕೆ ದಬಾರನೆ ಬಿದ್ದರು. ಬಿದ್ದವರೇ ಅಳಲು ಆರಂಭಿಸಿದರು. ನನಗೆ ಮಾತ್ರ ಸಿಕ್ಕಾಪಟ್ಟೆ ಗಾಬರಿಯಾಯಿತು. ಅಕ್ಕೋರಿಗೆ ಹೊಡೆದುಬಿಟ್ಟೆನಲ್ಲ ಎಂದು ಮನಸ್ಸಿನಲ್ಲಿ ಕಾಡಿತು. ಅಕ್ಕೋರು ಸುಧಾರಿಸಿಕೊಳ್ಳಲು ಬಹಳ ಹೊತ್ತು ಬೇಕಾಯಿತು. ಅಷ್ಟರಲ್ಲಿ ಅಕ್ಕೋರಿಗೆ ನಾನು ಬಾಲ್ ಹೊಡೆದೆ ಎನ್ನುವ ಕಾರಣಕ್ಕಾಗಿ ಸಿ. ಎಂ. ಹೆಗಡೆ ಮಾಸ್ತರ್ರು ದಬಾ ದಬಾ ನಾಲ್ಕೇಟು ಹೊಡೆದೂ ಆಗಿತ್ತು. ಅವರು ಹೊಡೆದ ಏಟಿನ ಹಿಂದೆ ನಾನು ಬೌಂಡರಿ ಹೊಡೆದಿದ್ದರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನ್ನುವ ರೊಚ್ಚೂ ಕೂಡ ಇತ್ತು ಎನ್ನಿ. ಸಿ. ಎಂ. ಹೆಗಡೆಯವರ ಹೊಡೆತದ ಸದ್ದಿನ ನಡುವೆ ತಾರಕ್ಕೋರು ವಿನಯಂದೆಂತಾ ತಪ್ಪಿಲ್ಲೆ. ಅವಂಗೆ ಎಂತಕ್ ಹೊಡಿತ್ರಿ ಎಂದು ಹೇಳುತ್ತಿದ್ದುದು ಮಾತ್ರ ಯಾರ ಕಿವಿಗೂ ಬೀಳಲೇ ಇಲ್ಲ.
                ಇಷ್ಟಾದ ಮೇಲೂ ಈ ಅಕ್ಕೋರಿಗೆ ನಾನು ಎಂದರೆ ಅಕ್ಕರೆಯಾಗಿತ್ತು. ನಾನು ಯಾವಾಗಲೂ ಹೋಂವರ್ಕ್ ಮಾಡುವಲ್ಲಿ ಕಳ್ಳಬೀಳುತ್ತಿದ್ದೆ. ಪ್ರತಿದಿನ ಏನಾದರೂ ಪಿಳ್ಳೆನೆವ ಹೇಳುತ್ತಿದ್ದೆ. ಆಗೆಲ್ಲ ಪಾಪ ಅಕ್ಕೋರು ನನಗೆ ಹೊಡೆಯದೇ ಸುಮ್ಮನೇ ಬಿಡುತ್ತಿದ್ದರು. ನಾವು ಒಂದೂ ತಪ್ಪಿಲ್ಲದೇ ಬರೆಯಬೇಕು ಎನ್ನುವ ಕಾರಣಕ್ಕಾಗಿ ಉಕ್ತಲೇಖನ ಬರೆಸುತ್ತಿದ್ದರು. ವಿಶೇಷವಾಗಿ ಇಂಗ್ಲೀಷ್ ಶುದ್ಧಬರಹವನ್ನೂ ಬರೆಸುತ್ತಿದ್ದರು. ಇವರು ಹೀಗೆ ಬರೆಸಿದ್ದರ ಮಹತ್ವ ನಮಗೆ ಆಗ ಆಗಿರಲಿಲ್ಲ. ಈಗ ಪತ್ರಿಕೋದ್ಯಮ ವೃತ್ತಿಗೆ ಕಾಲಿಟ್ಟಮೇಲೆ ಅವರು ಬರೆಸುತ್ತಿದ್ದುದರ ಮಹತ್ವ ಅರಿವಾಗುತ್ತಿದೆ. ತಪ್ಪಿಲ್ಲದೇ ಬರೆಯುವುದರ ಹಿಂದಿನ ಮಹತ್ವ ಗೊತ್ತಾಗುತ್ತಿದೆ.
              ಜಿ. ಎಸ್. ಭಟ್ಟರು ಸತ್ತಾಗ ಮಕ್ಕಳಂತೆ ರೋಧಿಸಿದ್ದ ತಾರಕ್ಕೋರು, ಆಗಿನ್ನೂ ಅಂಬೆಗಾಲೂ ಇಡದಷ್ಟು ಚಿಕ್ಕದಾಗಿದ್ದ ಮಗಳನ್ನು ಶಾಲೆಗೆ ಕರೆದುಕೊಂಡು ಬಂದಾಗ ನೋಡೋ ವಿನಯ ನನ್ ಮಗಳು ಎಂದು ತೋರಿಸಿದ್ದ ಅಕ್ಕೋರು, ನಾನು ದೊಡ್ಡದೊಂದು ಪ್ಲಾಸ್ಟಿಕ್ ಕವರಿನಲ್ಲಿ ನೂರಕ್ಕೂ ಹೆಚ್ಚು ಪೇರಲೇ ಹಣ್ಣನ್ನು ಕಿತ್ತುಕೊಂಡು ಹೋದಾಗ ಇಷ್ಟೆಲ್ಲ ನಂಗೆ ಹೇಳಿ ತಂದ್ಯನಾ ವಿನಯಾ. ಒಂದೆರಡು ಸಾಕಾಗಿತ್ತಾ. ಇದೆಲ್ಲ ತಗಂಡು ಹೋಗಿ ಮಾರ್ಕೇಟಲ್ಲಿ ಮಾರಾಟ ಮಾಡವನಾ. ಥೋ ಮಾರಾಯಾ ಎಂದು ಹೇಳಿದ ತಾರಕ್ಕೋರು. ಶಾಲೆಗೆ ಕಳ್ಳಬಿದ್ದಾಗಲೆಲ್ಲ ಪಾಪ ಎಂದು ಸುಮ್ಮನೇ ಬಿಟ್ಟ ಅಕ್ಕೋರು, ತುಂಟತನಗಳನ್ನೆಲ್ಲ ಸಹಿಸಿಕೊಂಡಿದ್ದ ಅಕ್ಕೋರು, ಎಲ್ಲದಕ್ಕೂ ಹೊಡೆತವೇ ಅಂತಿಮ ತೀರ್ಪಲ್ಲ ಎಂದುಕೊಂಡು ಅಕ್ಕರೆಯಿಂದ ಕಾಣುತ್ತಿದ್ದ ಅಕ್ಕೋರು ನಮ್ಮ ಶಾಲೆಯಿಂದ ವರ್ಗವಾದಾಗ ಮಾತ್ರ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಎರಡು ದಿನ ಶಾಲೆಗೆ ಹೋಗಿರಲಿಲ್ಲ. ಈಗಲೂ ಅಕ್ಕೋರು ಆಗಾಗ ಕಾಣುತ್ತಿರುತ್ತಾರೆ. ಅವರು ಕಂಡಾಗಲೆಲ್ಲ ನಿಲ್ಲಿಸಿ ನಮಸ್ಕರಿಸೋಣ ಎನ್ನಿಸುತ್ತದೆ. ಆದರೆ ಹಾಗೆ ಮಾಡದೇ ನಾನು ಸುಮ್ಮನೇ ಇದ್ದೇನೆ. ತಾರಕ್ಕೋರಿಗೆ ಸಲಾಂ.

ರಮೇಶ ನಾಯ್ಕ :
          ದಂಟಕಲ್ ಶಾಲೆಗೆ ಟೀಚರ್ರಾಗಿದ್ದ ಸೀಮಕ್ಕೋರು ವರ್ಗವಾದ ನಂತರ ಬಂದವರೇ ರಮೇಶ ಮಾಸ್ತರ್ರು. ಇವರು ನನಗೆ ಎಂದೂ ಕಲಿಸಿದವರಲ್ಲ. ಆದರೆ ಆಗೀಗ ಜೊತೆಗೆ ಮಾತಾಡುತ್ತಿದ್ದರು. ಕ್ರಿಕೆಟ್ ಆಡುತ್ತಿದ್ದರು. ಚಸ್ ಕೂಡ ಆಡುತ್ತಿದ್ದರು. ಈ ಮಾಸ್ತರ್ರು ಎಂದಕೂಡಲೇ ತಂಗಿ ಸುಪರ್ಣ `ಕರೀ ರಮೇಶ ಮಾಸ್ತರ್ರು' ಎಂದು ಕರೆಯುತ್ತಿದ್ದುದು ಇನ್ನೂ ನೆನಪಿನಲ್ಲಿದೆ. ನೋಡಲಿಕ್ಕೆ ಒಂದು ಹಳೆಯ ಸಿನೆಮಾ ಹೀರೋ ಥರ ಇದ್ದರೂ ಬಹಳ ಕಪ್ಪಾಗಿದ್ದರು. ಗಡ್ಡ ಬಿಟ್ಟಿದ್ದರು. ನಮ್ಮ ಶಾಲೆಯ ಪಕ್ಕದಲ್ಲೇ ಇದ್ದ ಕ್ವಾಟ್ರಸ್ ಒಂದರಲ್ಲಿ ಉಳಿದುಕೊಂಡಿದ್ದರು. ನಮ್ಮ ಶಾಲೆಯ ಶಿಕ್ಷಕರಾಗಿದ್ದ ಹರೀಶ ಮಾಸ್ತರ್ರ ಜೊತೆಯಲ್ಲಿದ್ದರು. ನಮ್ಮ ಶಾಲೆಯ ಹೆಡ್ ಮಾಸ್ತರ್ರಾಗಿ ಬಂದಿದ್ದ ರಮೇಶ ಗಡಕರ್ ಮಾಸ್ತರ್ರ ಜೊತೆ ಚೆಸ್ ಆಡುತ್ತಿದ್ದರು. ಇವಿಷ್ಟು ಮಾತ್ರ ರಮೇಶ ನಾಯ್ಕರ ಬಗೆಗಿದ್ದ ನೆನಪುಗಳು ನೋಡಿ. ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲ.

No comments:

Post a Comment