Tuesday, May 5, 2015

ಸೆಳೆಯುತ್ತಿದೆ ಕಲ್ಪ-ಶಿಲ್ಪ


             ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಕೃಷಿ ಜಯಂತಿ ಹಲವಾರು ವಿಶೇಷತೆಗಳನ್ನು ಅನಾವರಣಗೊಳಿಸಿತು. ರೈತರು, ತೋಟಿಗರು ಪೋಷಿಸಿಕೊಂಡು ಬಂದಿರುವ ಹಲವಾರು ಕಲೆ, ವೈವಿಧ್ಯತೆಗಳನ್ನು ಅನಾವರಣಗೊಳಿಸಿತು. ಶ್ರೀಮಠದಲ್ಲಿ ಅನಾವರಣಗೊಂಡ ಕಲಾ ವಿಶಿಷ್ಟತೆಯಲ್ಲಿ ಕಲ್ಪ ಶಿಲ್ಪವೂ ಒಂದು.
      ಕುಮಟಾ ತಾಲೂಕಿನ ಮೂರೂರಿನ ಸಿದ್ಧರ ಮಠದ ಶಿವಮೂರ್ತಿ ಭಟ್ಟರ ಕೈಯಲ್ಲರಳಿದ ಬೇರು ಬೊಗಟೆ ಕಲಾಕೃತಿಗಳು, ತೆಂಗಿನ ಚಿಪ್ಪಿನ ಕಲಾಕೃತಿಗಳು, ಮರದ ವಿಶಿಷ್ಟ ಕೆತ್ತನೆಗಳು ಶ್ರೀಮಠದ ಆವರಣದಲ್ಲಿ ಪ್ರದರ್ಶನಕ್ಕಿದ್ದವು. ಹಲವಾರು ವರ್ಷಗಳ ಶ್ರಮದಿಂದ ಮೂಡಿದ್ದ ವಿಶಿಷ್ಟ ಆಕೃತಿಗಳು ಪ್ರದರ್ಶನದಲ್ಲಿದ್ದವು. ಕೃಷಿ ಜಯಂತಿಗೆ ಆಗಮಿಸಿದ್ದ ಕೃಷಿಕರ, ರೈತರ ಹಾಗೂ ತೋಟಿಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು.      

                    ಚಿಕ್ಕ ಕಿರುಬೆರಳ ಗಾತ್ರದ ಆಕೃತಿಗಳಿಂದ ಹಿಡಿದು ಒಂದಡಿ ಎತ್ತರದ ಬೇರು ಬೊಗಟೆ ಕಲಾಕೃತಿಗಳೂ ಕಲ್ಪ ಶಿಲ್ಪದಲ್ಲಿದ್ದವು. ತೆಂಗಿನ ಕಾಯಿಯ ಚಿಪ್ಪಿನಿಂದ ತಯಾರಿಸಲಾಗಿದ್ದ ಬಗೆ ಬಗೆಯ ಆಕೃತಿಗಳಂತೂ ಎಲ್ಲರನ್ನೂ ಸೆಳೆದವು. ಕಲ್ಲಿನಿಂದಲೇ ಮಾಡಿದ್ದ ಕೊಳಲು ಎಲ್ಲರಲ್ಲಿಯೂ ಬೆರಗು ಮೂಡಿಸಿತು. ಕಲ್ಲಿನಿಂದ ಕೊಳಲನ್ನು ಮಾಡಲು ಸಾಧ್ಯವಿದೆ ಎನ್ನುವುದು ವಿಸ್ಮಯಕ್ಕೆ ಕಾರಣವಾಯಿತು. ಬಿದಿರು, ಶಮೆ ಹಾಗೂ ವಾಟೆ ಬಿದಿರಿನಿಂದ ಕೊಳಲನ್ನು ಮಾಡಲಾಗುತ್ತದೆ. ಆದರೆ ಕಲ್ಲಿನಿಂದ ಕೊಳಲನ್ನು ಮಾಡುವ ಪರಿಕಲ್ಪನೆಯೇ ವಿಶಿಷ್ಟವಾದುದು. ಶಿಲ್ಪ ಕಲ್ಪದ ರೂವಾರಿಯಾದ ಶಿವಮೂರ್ತಿ ಭಟ್ಟರ ತನ್ಮಯತೆ ಕಲ್ಲಿನ ಕೊಳಲಿಗೆ ಕಾರಣವಾಗಿದೆ. ಎರಡು ದಿನಗಳ ಕಾಲ ಶೃದ್ಧೆಯಿಂದ ಕೆಲಸ ಮಾಡಿ ಕಲ್ಲಿನ ಕೊಳಲನ್ನು ತಯಾರಿಸಿದ್ದೇನೆ ಎಂದು ಭಟ್ಟರು ಹೇಳುತ್ತಾರೆ. ಕಲ್ಲಿನ ಕೊಳಲಿನಿಂದ ಧ್ವನಿಯನ್ನು ಹೊರಡಿಸಬಹುದೇ ಎಂದು ಕೃಷಿಜಯಂತಿಗೆ ಆಗಮಿಸಿದ್ದ ಜನಸಾಮಾನ್ಯರು ಪರೀಕ್ಷೆ ಮಾಡಿ, ಕೊಳಲನ್ನು ಊದಿ ನೋಡುತ್ತಿದ್ದುದು ವಿಶೇಷವಾಗಿತ್ತು.  

                           ತನ್ನ ತಂದೆ ಸತ್ಯನಾರಾಯಣ ಭಟ್ಟರು ಬೇರು ಬೊಗಟೆ ಕಲಾಕೃತಿಗಳನ್ನು ಮಾಡುತ್ತಿದ್ದರು. ಅವರೇ ತನಗೆ ಸ್ಪೂರ್ತಿ ಎಂದು ಹೇಳುವ ಶಿವಮೂರ್ತಿ ಭಟ್ಟರು ತೆಂಗಿನಕಾಯಿಯ ಚಿಪ್ಪಿನಿಂದ ಸ್ಪ್ರಿಂಗ್, ಗಣಪತಿ, ವಾಲ್ ಪ್ಲೇಟ್, 50-60ಕ್ಕೂ ಹೆಚ್ಚಿನ ವಿವಿಧ ಕೀಟಗಳು, ಇಲಿ, ಮುಖ, ಆಮೆ, ಪಿಗ್ಮಿ ಮನುಷ್ಯ, ತಾಯಿ-ಮಗು, ಜಿರಾಫೆ, ಸಿಯಾಳದ ಚಿಪ್ಪಿನಿಂದ ಬೇಲೂರು ಶಿಲಾಬಾಲಿಕೆ ಹೀಗೆ ಹಲವು ಬಗೆಯ ಕಲಾಕೃತಿಗಳನ್ನು ತಯಾರು ಮಾಡಿದ್ದಾರೆ. ಕಳೆದ 10-12 ವರ್ಷಗಳಿಂದ ಈ ಕಾರ್ಯವನ್ನು ಕೈಗೊಳ್ಳುತ್ತ ಬಂದಿದ್ದೇನೆ ಎಂದು ಭಟ್ಟರು ತಿಳಿಸುತ್ತಾರೆ.
ಶಿವಮೂರ್ತಿ ಭಟ್ಟರು ಓದಿರುವುದು ಕೇವಲ ಎಸ್ಎಸ್ಎಲ್ಸಿ ಆದರೆ ಅವರು ತಮ್ಮ ಕೈಚಳಕದ ಮೂಲಕ ಮಹತ್ತರ ಸಾಧನೆಯ ಹಾದಿಯಲ್ಲಿದ್ದಾರೆ. ಇವರು ತಯಾರಿಸಿರುವ ಅಡಿಕೆ ದಬ್ಬೆಯ ಚಾಕುವಂತೂ ಎಲ್ಲರಲ್ಲಿಯೂ ಬೆರಗನ್ನು ಮೂಡಿಸುತ್ತಿದೆ. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಬಳಕೆ ಮಾಡುತ್ತಿದ್ದ ಕತ್ತಿಯಂತೆಯೇ ಇರುವ ಈ ಚಾಕುವಿನ ಮೇಲೆ ಕೆತ್ತಲಾಗಿರುವ ವಿಶಿಷ್ಟ ಕೆತ್ತನೆಗಳು ಎಲ್ಲರನ್ನೂ ಸೆಳೆಯುತ್ತಿದೆ. ಕತ್ತಿಯ ಹಿಡಿಕೆಯ ಮೇಲಿನ ಚಿತ್ತಾರಗಳು ಮತ್ತಷ್ಟು ಆಕರ್ಷಕವಾಗಿದೆ.

               ಮರದ ತುಂಡುಗಳಿಂದ ವ್ಯಾನಿಟಿ ಬ್ಯಾಗ್ ಒಂದನ್ನು ತಯಾರಿಸಿದ್ದು ಮನಮೋಹಕವಾಗಿದೆ. ಹೂಜಿಗಳು, ಹೂದಾನಿಗಳು, ಚಿಕ್ಕ ಪೆಟ್ಟಿಗೆ ಇತ್ಯಾದಿಗಳ ಅಷ್ಟೇ ಸುಂದರವಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಈ ಕಲಾಕೃತಿಗಳನ್ನು ಮಾಡುತ್ತಿಲ್ಲ. ಬದಲಾಗಿ ಹವ್ಯಾಸವಾಗಿ ಇವನ್ನು ತಯಾರು ಮಾಡುತ್ತಿದ್ದೇನೆ. ಅನೇಕ ಕಡೆಗಳಲ್ಲಿ ಪ್ರದರ್ಶನಕ್ಕಾಗಿ ಒಯ್ದಿದ್ದೇನೆ. ಎಲ್ಲ ಕಡೆಗಳಲ್ಲಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಒಂದೆರಡು ಸಾರಿ ಮಾರಾಟಕ್ಕಾಗಿ ಬೇಡಿಕೆಗಳು ಬಂದಿದ್ದವು. ಆದರೆ ಮಾರಾಟ ಮಾಡಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲಾಕೃತಿಗಳು, ಕಾಷ್ಟಶಿಲ್ಪ ರಚನೆಗಳನ್ನು ಮಾಡುವ ಉದ್ದೇಶವಿದೆ ಎಂದು ಶಿವಮೂರ್ತಿ ಭಟ್ಟರು ಹೇಳುತ್ತಾರೆ.
ಶಿವಮೂರ್ತಿ ಭಟ್ಟರು ತಯಾರಿಸಿದ ಇಂತಹ ಕಲಾಕೃತಿಗಳನ್ನು ವೀಕ್ಷಣೆ ಮಾಡಲು ಮುರೂರಿಗೆ ತೆರಳಬಹುದಾಗಿದೆ. ಇಲ್ಲವಾದಲ್ಲಿ ಅವರನ್ನು 08386-268205 ಅಥವಾ ಮೊಬೈಲ್ ಸಂಖ್ಯೆ 9902451009 ಈ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.


No comments:

Post a Comment