Sunday, May 24, 2015

ಅಘನಾಶಿನಿ ಕಣಿವೆಯಲ್ಲಿ-19

           ತೊಂಭತ್ತು ವಸಂತಗಳ ಮೇಲೆ ನಾಲ್ಕೈದು ವಸಂತಗಳನ್ನು ಕಳೆದಿದ್ದ ಗಣಪಜ್ಜನ ಬಳಿ ಮಾತನಾಡಿದಂತೆಲ್ಲ ಬೆರಗಿಗೆ ಕಾರಣವಾದ. ನಮ್ಮ ಹಿರಿಯರು ಅದೆಷ್ಟೆಲ್ಲ ಕೆಲಗಳಲ್ಲಿ ಕ್ರಿಯಾಶೀಲರಾಗಿ ಇರುತ್ತಿದ್ದರಲ್ಲ ಎನ್ನಿಸಿತು. ಗಣಪಜ್ಜನ ನೆನಪಿನ ಖಜಾನೆಯೊಳಗಿನ ಒಂದೆರಡು ಮುತ್ತುಗಳನ್ನಷ್ಟೇ ಯುವಪಡೆ ಪಡೆದುಕೊಂಡಿತ್ತು. ಅಷ್ಟಕ್ಕೇ ಅಚ್ಚರಿಯೊಂದಿಗೆ ಬಾಯಿ ಬಾಯಿ ಬಿಡಲು ಆರಂಭವಾಗಿತ್ತು. ಖಜಾನೆಯಲ್ಲಿ ಇನ್ನೂ ಲಕ್ಷಾಂತರ ಮುತ್ತುಗಳು ಬಾಕಿಯಿದ್ದವು. ಅನಂತ ಭಟ್ಟನ ಅಪ್ಪೆಮಿಡಿ ತಳಿಯನ್ನು ರಕ್ಷಣೆ ಮಾಡಿ, ಬೆಳೆಸಿದ ಬಗೆ, ಅಡಿಕೆಯಿಂದ ಪಾನೀಯವನ್ನು ತಯಾರು ಮಾಡಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸೆರೆಮನೆ ವಾಸ ಇನ್ನೂ ಅದೆಷ್ಟೋ ವಿಷಯಗಳು ಗಣಪಜ್ಜನ ಬಾಯಿಂದ ಕೇಳಬೇಕೆನ್ನಿಸಿತ್ತು. ಮತ್ತೊಮ್ಮೆ ಇವುಗಳನ್ನು ಕೇಳಲು ಬರುತ್ತೇವೆ ಎಂದು ಎಲ್ಲರೂ ವಾಪಸಾದರು.
              ವಿನಾಯಕನ ಮನೆಗೆ ಮರಳಿದ ನಂತರವೂ ಗಣಪಜ್ಜ ಮಾತುಗಳು ಎಲ್ಲರ ಮನಸ್ಸಿನಲ್ಲಿ ತಕ ಥೈ ಆಡುತ್ತಿತ್ತು. ಮತ್ತೆ ಮತ್ತೆ ಚರ್ಚೆ ಮಾಡಿದರು ಎಲ್ಲರೂ. ಹುಲಿ ಹೊಡೆದ ಗಣಪಜ್ಜ ಜಿಮ್ ಕಾರ್ಬೆಟ್ಟನ ಹಾಗೇ ಆಗಿಬಿಟ್ಟಿದ್ದ. ವಿನಾಯಕನ ಮನೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡುತ್ತಿದ್ದಾಗಲೇ ಒಂದಿಬ್ಬರು ಹಿರಿಯರು ಗಣಪಜ್ಜ ಹುಲಿ ಹೊಡೆದಿರಲಿಲ್ಲವೆಂದೂ ಮುತ್ಮುರ್ಡಿನ ಸುಬ್ಬಜ್ಜ ಹುಲಿ ಹೊಡೆದವನೆಂದೂ ಆಗ ಜೊತೆಯಲ್ಲಿ ಇದ್ದವನು ಮಾತ್ರ ಗಣಪಜ್ಜನೆಂದೂ ಹೇಳಿದರು. ಗಣಪಜ್ಜನೇ ಹುಲಿ ಹೊಡೆದನಾ ಅಥವಾ ಸುಬ್ಬಜ್ಜ ಹೊಡೆದನಾ ಎನ್ನುವ ಬಗ್ಗೆ ಕೆಲಕಾಲ ಚರ್ಚೆಯೂ ನಡೆಯಿತು. ಕೊನೆಗೆ ಯಾರೇ ಹುಲಿ ಹೊಡೆದಿರಲಿ, ಅದೊಂದು ವಿಶೇಷ ಘಟನೆಯೇ ಹೌದು. ಹುಲಿಯನ್ನು ಹೊಡೆಯುವುದು ಸಾಮಾನ್ಯ ಕೆಲಸವಲ್ಲ. ಗಣಪಜ್ಜ ತಾನು ಹುಲಿ ಹೊಡೆದಿದ್ದೇನೆ ಎಂದು ಘಂಟಾ ಘೋಷವಾಗಿ ಹೇಳುತ್ತಿದ್ದಾನೆ ಎಂದರೆ ಆತ ಖಂಡಿತವಾಗಿಯೂ ಹೊಡೆದಿರಲೇಬೇಕು ಎಂದುಕೊಂಡರು ಎಲ್ಲರೂ.

***

            `ಹಾಗಾದರೆ ಬಂದವರು ಯಾರು? ಪೋಲೀಸರೇನಲ್ಲವಲ್ಲ.' ಎಂದು ಆ ಗುಂಪಿಗೆ ನಾಯಕನೆನ್ನಿಸಿಕೊಂಡವನು ಕೇಳಿದ್ದ.
            `ಅಲ್ಲ. ಅವರು ಪೊಲೀಸರಲ್ಲ. ಪೊಲೀಸರಿಗೆ ಮಾಹಿತಿ ಕೊಡುವವರೂ ಅಲ್ಲ. ಅದೇನೋ ಕಾಡು ಸುತ್ತುವವರಂತೆ. ಕಾಡಿನ ಬಗ್ಗೆ ರಿಸರ್ಚ್ ಮಾಡುವವರಂತೆ ನೋಡಿ. ಪಾತರಗಿತ್ತಿಯ ಬಗ್ಗೆ ಮಾಹಿತಿ ಕಲೆಹಾಕಲು ಬಂದಿದ್ದಾರಂತೆ. ಅವನೊಬ್ಬನಿದ್ದಾನಲ್ಲ ಆ ದಂಟಕಲ್ಲಿನಲ್ಲಿ ಓದಿಕೊಂಡವನು. ವಿನಾಯಕ. ಅವನ ನೆಂಟರಂತೆ ನೋಡಿ. ಒಂದಿಬ್ಬರು ಹೊರಗಿನಿಂದಲೂ ಬಂದಿದ್ದಾರಂತೆ. ಇವರಿಂದ ನಮಗೆ ಏನೂ ತೊಂದರೆಯಾಗಲಿಕ್ಕಿಲ್ಲ' ಎಂದು ಇನ್ನೊಬ್ಬ ಮಾಹಿತಿ ನೀಡಿದ.
              `ಊಹೂ. ಅವರು ಯಾವುದೇ ಕಾರಣಕ್ಕೆ ಬಂದಿರಲಿ. ಅವರನ್ನು ನಂಬುವ ಮುಟ್ಠಾಳತನವಂತೂ ಮಾಡಲೇಬಾರದು. ಮೊದಲು ಅವರನ್ನು ನಮ್ಮ ಕಾಡಿನಿಂದ ದೂರಕ್ಕೆ ಓಡಿಸಲೇಬೇಕಾದ ಅನಿವಾರ್ಯತೆಯಿದೆ. ಅದಕ್ಕೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಿ. ಎಚ್ಚರ ಎಲ್ಲಿಯೂ ಇದು ನಮ್ಮ ಕೆಲಸ ಎಂದು ಗೊತ್ತಾಗದಂತೆ ಮುಂದುವರಿಯಿರಿ. ಮೊದಲು ಅವರನ್ನು ಇಲ್ಲಿಂದ ಕಳಿಸಿ.' ಎಂದು ಆಜ್ಞೆ ನೀಡಿದ್ದ ಮುಖ್ಯಸ್ಥ. ಮಾಹಿತಿ ನೀಡಲು ಬಂದಿದ್ದವನು ಸರಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ.

***

            ದಂಟಕಲ್ ಎಂದ ಕೂಡಲೇ ಗತ ಇತಿಹಾಸದಲ್ಲಿ  ಕಳೆದುಹೋಗಿರುವ ವಿದ್ಯುತ್ ಉತ್ಪಾದನಾ ಕೇಂದ್ರ ಹೇಗೆ ನೆನಪಿಗೆ ಬರುತ್ತದೆಯೋ ಅದೇ ರೀತಿ ಅಪ್ಪೆಮಿಡಿಯೂ ಕೂಡ. ಉಪ್ಪಿನಕಾಯಿ ಪ್ರಿಯರಿಗೆಲ್ಲ ಅಪ್ಪೆಮಿಡಿ ಪರಮಾಪ್ತ. ಅಚ್ಚುಮೆಚ್ಚು. ಅಪ್ಪೆಮಿಡಿ ಪ್ರಿಯರೆಲ್ಲ ಅನಂತ ಭಟ್ಟನ ಅಪ್ಪೆಮಿಡಿಯನ್ನು ಇಷ್ಟಪಡುತ್ತಾರೆ. ಇಂತಹ ಅಪ್ಪೆಮಿಡಿ ತಳಿ ಅವಸಾನದ ಅಂಚಿನಲ್ಲಿದ್ದಾಗ ಅದನ್ನು ಉಳಿಸಿ ಬೆಳೆಸಿದ ಕೀರ್ತಿ ದಂಟಕಲ್ಲಿಗೆ ಸಲ್ಲುತ್ತದೆ. ದಂಟಕಲ್ಲಿನ ಸ್ವಾತಂತ್ರ್ಯ ಹೋರಾಟಗಾರ ಗಣೇಶಜ್ಜ, ಗಣೇಶಜ್ಜನ ಮಗ ಗಣಪಜ್ಜ, ದೊಡ್ಡಮನೆಯ ವಿಘ್ನೇಶ್ವರ ಹೆಗಡೇರು ಈ ಮುಂತಾದವರೆಲ್ಲ ಅನಂತ ಭಟ್ಟನ ಅಪ್ಪೆಮಿಡಿ ತಳಿಯನ್ನು ಸಂರಕ್ಷಿಸಿದವರು ಎಂದರೆ ತಪ್ಪಾಗಲಿಕ್ಕಿಲ್ಲ.
              ಹಳೆಯ ಇತಿಹಾಸದ ಘಟನೆಗಳನ್ನು ಈಗಿನ ಜಮಾನಾಕ್ಕೆ ಹೇಳಬೇಕೆಂದರೆ ಗಣಪಜ್ಜ ಮಾತ್ರ ಉಳಿದುಕೊಂಡಿದ್ದ. ಊರಿನಲ್ಲಿ ಶತ ವಸಂತಗಳ ಹತ್ತಿರ ವಯಸ್ಸನ್ನು ಕಂಡಿದ್ದವನು ಗಣಪಜ್ಜ ಮಾತ್ರವೇ. ಆತ ಮಾತ್ರ ತನ್ನೂರಿನಲ್ಲಿ ನಡೆದ 1 ಶತಮಾನದ ಘಟನೆಗಳನ್ನು ಹೇಳಬಲ್ಲವನಾಗಿದ್ದ. ಆದ್ದರಿಂದ ನಮ್ಮ ಕಥೆಯ ನಾಯಕರು ಆತನ ಬೆನ್ನು ಬಿದ್ದಿದ್ದರು. ವಯಸ್ಸಾಗಿದ್ದರೂ ಗಪ್ಪಜ್ಜನಿಗೆ ಹರೆಯದ ಹುಡುಗರು ತನ್ನ ಬಳಿ ಮಾತನಾಡಲು ಬಂದ ತಕ್ಷಣ ಯವ್ವನ ಮರಳಿದಂತೆ ಕ್ರಿಯಾಶೀಲನಾಗಿದ್ದ. ಹೊಸ ಹುರುಪಿನೊಂದಿಗೆ ಕಾರ್ಯಪ್ರವೃತ್ತನೂ ಆಗಿದ್ದ.
             ಅಪ್ಪೆಮಿಡಿಯ ಪರಿಚಯ ಮಾಡಿಕೊಡು ಎಂದು ಯುವಪಡೆ ಹೇಳಿದ ತಕ್ಷಣವೇ ಗಪ್ಪಜ್ಜ ತನ್ನ ತೋಟದ ಕಡೆಗೆ ಎಲ್ಲರನ್ನೂ ಕರೆದೊಯ್ದಿದ್ದ. ತೋಟದ ಸಾಲಿನಲ್ಲಂತೂ ಎತ್ತ ನೋಡಿದರತ್ತ ಅಪ್ಪೆಮಿಡಿಯ ಮರಗಳು. 30-40-50 ವರ್ಷಗಳಾಗಿದ್ದ ಅಪ್ಪೆಯ ಮರಗಳು. ಎಪ್ರಿಲ್ ತಿಂಗಳಾಗಿದ್ದ ಕಾರಣ ಆಗಷ್ಟೇ ಮಾವಿನ ಕಸ್ತ್ರಗಳು ಕಾಯಾಗುತ್ತಿದ್ದವು. ಒಂದೆರಡು ಕಡೆಗಳಲ್ಲಿ ಕಾಯಿಗಳನ್ನು ಕೊಯ್ಯಲೂ ಆರಂಭಿಸಲಾಗಿತ್ತು. ಹೋದವರೇ ಅಜ್ಜ ತಮ್ಮ ಜಮೀನಿನಲ್ಲಿದ್ದ ಅಪ್ಪೆಮಿಡಿಯ ಮರಗಳನ್ನೆಲ್ಲ ತೋರಿಸಿದರು. ಒಂದೆರಡು ಕಡೆಗಳಲ್ಲಿ ಕೊಯ್ಯುತ್ತಿದ್ದ ಅಪ್ಪೆಮಿಡಿಗಳನ್ನು ತಿನ್ನಲೂ ಕೊಟ್ಟರು. `ಮಿಡಿಯನ್ನು ಚೂರು ಮಾಡಿ ಬಾಯಿಗಿಟ್ಟವರಿಗೆ ಒಮ್ಮೆಲೆ ಆಹ್.. ಎನ್ನುವ ಉದ್ಘಾರ. ಅಷ್ಟು ರುಚಿಕರವಾಗಿತ್ತು ಅಪ್ಪೆಮಿಡಿ.
           `ತಮಾ ಯಾರಾದ್ರೂ ಬೆಂಕಿಪೆಟ್ಗೆ ತಂಜ್ರಾ?' ಎಂದು ಕೇಳಿದ್ದ ಗಣಪಜ್ಜ.
           ಪ್ರದೀಪ ತನ್ನ ಬಳಿ ಲೈಟರ್ ಇದೆ ಎಂದು ಹೇಳಿದವನೇ ಕೊಟ್ಟ. `ತಮಾ ನೀ ಲೈಟರ್ ಹಚ್ಚು. ನಾ ಎಂತದ್ದೋ ತೋರಿಸ್ತಿ' ಎಂದರು. ಅಲ್ಲೇ ಇದ್ದ ಅಪ್ಪೆಮಿಡಿಯನ್ನು ಅದರ ಚೊಟ್ಟಿನ ಸಮೇತ ತಂದರು. `ಈಗ ಲೈಟರ್ ಹಚ್ಚು' ಎಂದರು. ಪ್ರದೀಪ ಲೈಟರ್ ಹಚ್ಚಿದ ತಕ್ಷಣ ಅಪ್ಪೆಮಿಡಿಯ ಚೊಟ್ಟನ್ನು ಚಟ್ಟನೆ ಮುರಿದರು. ಮುರಿದ ರಭಸಕ್ಕೆ ಅಪ್ಪೆಮಿಡಿಯ ಸೊನೆ ಭುರ್ರನೆ ಹಾರಿತು. ಲೈಟರ್ ನಲ್ಲಿ ಹೊತ್ತಿಸಿದ್ದ ಬೆಂಕಿಗೆ ಆ ಸೊನೆಯನ್ನು ಹಿಡಿದರು ಗಣಪಜ್ಜ. ಇದ್ದಕ್ಕಿದ್ದಂತೆ ಆ ಸೊನೆಗೆ ಭರ್ರನೆ ಬೆಂಕಿ ಹೊತ್ತಿಕೊಂಡಿತು. ಅಷ್ಟೇ ಅಲ್ಲದೇ ಅಪ್ಪೆಮಿಡಿಯ ಚೊಟ್ಟಿಗೂ ಬೆಂಕಿ ಹಿಡಿದು ಕೆಲಕಾಲ ಸರಸರನೆ ಉರಿಯಿತು. ಎಲ್ಲರ ಕಣ್ಣಲ್ಲೂ ವಿಸ್ಮಯ. `ನೋಡಿ ಯಾವ ಅಪ್ಪೆಮಿಡಿಯ ಸೊನೆಗೆ ಚನ್ನಾಗಿ ಬೆಂಕಿ ಹೊತ್ತಿಕೊಳ್ಳುತ್ತದೆಯೋ ಅಂವು ಅತ್ಯುತ್ತಮ ತಳಿಯ ಅಪ್ಪೆಮಿಡಿ ಎನ್ನುವ ಮಾತಿದ್ದು. ನೋಡಿ ಈ ಅಪ್ಪೆಮಿಡಿಗೆ ಅದ್ಯಾವ್ ರೀತಿ ಬೆಂಕಿ ಹತ್ತಿಗ್ಯಂಜು ಹೇಳಿ. ಹಿಂಗ್ ಇರವು ಅಪ್ಪೆಮಿಡಿ ಅಂದ್ರೆ. ಅಗ್ ದಿ ಹೈಕ್ಲಾಸ್ ಅಪ್ಪೆಮಿಡಿ ಇದು.' ಎಂದರು ಅಜ್ಜ.
            `ಅಪ್ಪೆಮಿಡಿಯ ಸೊನೆಯಲ್ಲಿ ಸ್ಪರಿಟ್ ಇರುತ್ತದೆ ಎಂದು ಕೇಳಿದ್ದೆ..' ಎಂದ ವಿನಾಯಕ
             `ಸ್ಪರಿಟ್ಟೋ ಎಂತದ್ದೋ.. ಯಂಗಂತೂ ಗೊತ್ತಿಲ್ಲೆ ತಮಾ. ಅನಂತಭಟ್ಟನ ಅಪ್ಪೆಮಿಡಿಯ ಸೊನೆಗೆ ಚೊಲೋ ಬೆಂಕಿ ಹತ್ತಿಗ್ಯತ್ತು ನೋಡು. ಅದೇ ರೀತಿ ಜೀರಿಗೆ ವಾಸನೆ, ಯಾಲಕ್ಕಿ ವಾಸನೆ, ಗುಂಡಪ್ಪೆ ಇವ್ಕೂ ಚೊಲೋ ಬೆಂಕಿ ಹತ್ತಿಗ್ಯತ್ತು. ಆದರೆ ವಾಸನೆ ಇಲ್ಲದ್ದೇ ಹೋದ ಅಪ್ಪೆಮಿಡಿಗೆ ಹಿಂಗ್ ಬೆಂಕಿ ತಗತ್ತಿಲ್ಲೆ ನೋಡಿ..' ಎಂದರು ಗಣಪಜ್ಜ.
             ಹಳ್ಳಿಗರ ಜ್ಞಾನ ಅದೆಷ್ಟು ವಿಶಿಷ್ಟವಾಗಿರುತ್ತದೆಯಲ್ಲ ಎಂದುಕೊಂಡರು ಎಲ್ಲರೂ. `ದೇಶಾದ್ಯಂತ ಅಪ್ಪೆಮಿಡಿ ಮರಗಳನ್ನು ನೆಟ್ಟು ಬಿಡೋಣ. ಆಮೇಲೆ ಅದರ ಸೊನೆ ಸಂಗ್ರಹ ಮಾಡಿ ಇಂಧನ ತಯಾರಿಸೋಣ. ದೇಶಕ್ಕೆ ಅಗತ್ಯವಾಗಿರುವ ಪೆಟ್ರೂಲ್, ಡಿಸೇಲ್, ಅಡುಗೆ ಇಂಧನದ ಹೊರೆ ತಪ್ಪುತ್ತದೆ ಅಲ್ಲವಾ?' ಎಂದ ಪ್ರದೀಪ. ಎಲ್ಲರೂ ಒಮ್ಮೆಲೆ ನಕ್ಕರು.
            `ತಮಾ.. ಅಪ್ಪೆಮಿಡಿ ಸೊನೆ ಸಂಗ್ರಹ ಮಾಡೋದು ಸುಲಭ ಅಲ್ಲ. 100 ಎಂ. ಎಲ್ ಸೊನೆ ಸಂಗ್ರಹ ಮಾಡವು ಅಂದ್ರೆ ಹೆಚ್ಚೂ ಕಡಿಮೆ 10 ಸಾವಿರಕ್ಕೂ ಜಾಸ್ತಿ ಅಪ್ಪೆಮಿಡಿ ಬೇಕಾಗ್ತು ನೋಡು. ಒಂದೊಂದು ಮರಕ್ಕೆ 10 ಲಕ್ಷ ಕಾಯಿ ಬಿಟ್ಟರೆ ಹೆಚ್ಚೂ ಕಡಿಮೆ 1 ಲೀಟರ್ ಸೊನೆ ಸಂಗ್ರಹ ಮಾಡ್ಲಕ್ಕು. ಅಪ್ಪೆಮಿಡಿ ಸೊನೆಗೆ 100 ಎಂ.ಎಲ್.ಗೆ ಹೆಚ್ಚೂ ಕಡಿಮೆ 1000 ರೂಪಾಯಿ ಇದ್ದು. ಇದು ಸುಲಭ ಅಲ್ದೋ. ದುಬಾರಿ ಆಗ್ತು. ನಿನ್ ಪ್ಲಾನು ಬಿಟ್ಟಾಕು. ಆದರೆ ಅಪ್ಪೆಮಿಡಿ ಮರ ಬೇಳೆಸು ಅಡ್ಡಿಲ್ಲೆ..' ಎಂದರು ಗಣಪಜ್ಜ.
              ಬೆಂಕಿಗೆ ಅನಂತಭಟ್ಟನ ಅಪ್ಪೆಮಿಡಿ ಸೊನೆ ಸುಟ್ಟ ವಾಸನೆ ಘಮ್ಮೆನ್ನುತ್ತಿತ್ತು. ಅಪ್ಪೆಮಿಡಿ ಚೂರನ್ನು ತಿಂದವರಿಗೆ ಬಾಯೆಲ್ಲ ಅಪ್ಪೆಮಿಡಿ ಸುವಾಸನೆಯಾದಂತೆ ಅನ್ನಿಸುತ್ತಿತ್ತು. ಬಾಯಿಂದ ತೇಗು ಬಂದರೂ ಅಪ್ಪೆಮಿಡಿಯ ಸುವಾಸನೆಯೇ ಬರುತ್ತಿತ್ತು. `ತಮಾ ಇದು ಬಹಳ ಜೀರ್ಣಕಾರಿ. ನೀವ್ ಎಷ್ಟೇ ಊಟ ಮಾಡ್ಕ್ಯಂಡ್ ಬಂದಿದ್ದರೂ ಅಪ್ಪೆಮಿಡಿ ಬೇಗನೇ ಜೀರ್ಣ ಮಾಡಿ ಹಾಕ್ ಬಿಡ್ತು. ಅದ್ಕೇ ಉಪ್ಪಿನಕಾಯಿಗೆ ಅನಂತಭಟ್ಟನ ಮಿಡಿ ಅಂದ್ರೆ ಶ್ರೇಷ್ಟ ಅಂತಾ ಹೇಳ್ತ. ಇಡೀ ಉಪ್ಪಿನಕಾಯಿ ಭರಣಿಗೆ 100 ರು ಅಪ್ಪೆಮಿಡಿ ಹಾಕಿ ಅದರಲ್ಲಿ 5-6 ಅನಂತಭಟ್ಟನ ಅಪ್ಪೆಮಿಡಿ ಮಿಕ್ಸ್ ಮಾಡಿದ್ರೆ ಇಡೀ ಭರಣಿಯ ರುಚಿಯನ್ನೇ ಬದಲು ಮಾಡಿಬಿಡ್ತಿ ಇದು. ಎಲ್ಲ ಅಪ್ಪೆ ಮಿಡಿನೂ ಅನಂತ ಭಟ್ಟನ ಅಪ್ಪೆಮಿಡಿಯೇನೋ ಅಂಬಂತೆ ಮಾಡತು' ನೋಡಿ ಎಂದರು ಗಣಪಜ್ಜ.
              ತಿಂದರೆ ತೆಂಗಿನ ಕಾಯಿಯ ಚೂರಿನಂತೆ ಕರಂ ಕರಂ ಎನ್ನುತ್ತಿದ್ದ ಅಪ್ಪೆಮಿಡಿ ಅಷ್ಟು ಹುಳಿಯೂ ಆಗಿರಲಿಲ್ಲ. ಮಾರುಕಟ್ಟೆಯಲ್ಲಿ ಮಿಕ್ಸ್ ಉಪ್ಪಿನಕಾಯಿಯ ನಾಲ್ಕು ಪಟ್ಟು ದರ ಅನಂತ ಭಟ್ಟನ ಅಪ್ಪೆಮಿಡಿ ಉಪ್ಪಿನಕಾಯಿಗೆ ಇದೆ ಎಂಬುದು ಎಲ್ಲರಿಗೂ ನೆನಪಾಯಿತು. `ಅಜ್ಜಾ.. ಈ ಅನಂತಭಟ್ಟನ ಅಪ್ಪೆಮಿಡಿ ತಳಿ ಉಳಿಸಿದ ಸಾಹಸಗಾಥೆ ನಂಗಕ್ಕಿಗೆ ಹೇಳಿ' ಎಂದ ವಿನಾಯಕ.
             `ಅದೊಂದ್ ದೊಡ್ಡ ಕಥೆ. ಈಗ ಇಲ್ಲೆಲ್ಲಾ ಇಷ್ಟೆಲ್ಲಾ ಅನಂತಭಟ್ಟನ ಅಪ್ಪೆಮಿಡಿ ಮರಗಳು ಕಾಣ್ತಲಾ. ಆದರೆ ಮೊದಲು ಇಲ್ಲೆಲ್ಲೂ ಅಪ್ಪೆಮಿಡಿ ಮರ ಇತ್ತಿಲ್ಲೆ. ಬಾಳೂರು ಹತ್ತಿರ ಭಯಂಕರ ಎತ್ತರದ ಮರ ಒಂದಿತ್ತು. ಅದೇ ಈ ನಮ್ಮೆ ಎಲ್ಲಾ ಅನಂತ ಭಟ್ಟನ ಅಪ್ಪೆಮಿಡಿ ಮರಗಳ ಅಪ್ಪ-ಅಮ್ಮ. ಅಂತಹ ದೈತ್ಯ ಮರವನ್ನ ಯಾರೂ ಹತ್ತತ್ವಿದ್ದಿಲ್ಲೆ. ಆದರೆ ಅನಂತಭಟ್ಟ ಹೇಳಂವ ಒಬ್ಬಂವ ಪ್ರತಿ ವರ್ಷ ಆ ಮರ ಹತ್ತಿ ಅಪ್ಪೆಮಿಡಿ ಕೊಯ್ಕಂಡು ಬರ್ತಿದ್ದ. ಒಂದ್ ವರ್ಷ ಅಂವ ಮರದಿಂದ ಉರ್ಡಿ ಬಿದ್ದು ಸತ್ತೋದ. ಆ ಮೇಲೆ ಈ ಅಪ್ಪೆಮಿಡಿಗೆ ಅನಂತಭಟ್ಟನ ಅಪ್ಪೆಮಿಡಿ ಎಂದೂ ಹೆಸರು ಬಂತು. ಮರಕ್ಕೆ ಅನಂತಭಟ್ಟನ ಅಪ್ಪೆಮರ ಅಂತನೂ ಹೆಸರು ಬಂತು. ಮರಕ್ಕೆ ಭಯಂಕರ ವಯಸ್ಸಾಗಿತ್ತು. ಯನ್ನ ಅಪ್ಪಯ್ಯ ಗಣೇಶ ಹೆಗಡೇರು ಆ ಮರದ ಟೊಂಗೆ ತಗಂಡು ಬಂದು ಅದರ ಕಸಿ ಮಾಡಿ ಬೆಳೆಸಿದ್ರು. ಈಗ ದಂಟಕಲ್ ತುಂಬ ಅನಂತಭಟ್ಟನ ಅಪ್ಪೆಮರವೇ ಕಾಣಿಸ್ತು. ಇಷ್ಟೇ ಅಲ್ಲ. ಈ ಅಪ್ಪೆಮರ ಎಲ್ಲ ಕಡೆಗಳಲ್ಲಿ ಸೀಮೋಲ್ಲೋಂಘನವೂ ಮಾಡಿದ್ದು.'
               `ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೆ. ಶಿವರಾಮ ಕಾರಂತರ ಸಹೋದರ ಕೋ.ಲ. ಕಾರಂತರು ಈ ಅಪ್ಪೆಮಿಡಿ ಕಸಿ ಮಾಡಿ ತಮ್ಮೂರಲ್ಲಿ ಅನಂತಭಟ್ಟನ ಅಪ್ಪೆಮರದ ಫಾರ್ಮನ್ನೇ ಮಾಡಿದ್ದರು. ಆದರೆ ಅವರ ಊರಿನಲ್ಲಿ ಮರಕ್ಕೆ ಒಂದೇ ಒಂದೂ ಕಾಯಿ ಬಂಜಿಲ್ಲೆ. ಅಘನಾಶಿನಿ ನದಿ ದಡದ ಮೇಲೆ ಇದ್ದರೆ ಮಾತ್ರ ಅನಂತಭಟ್ಟನ ಅಪ್ಪೆಮರ ಕಾಯಿ ಬಿಡ್ತು ಹೇಳಿ ಮಾತಿದ್ದು. ಅದ್ಕೆ ಬೇರೆ ಕಡೆ ಎಲ್ಲೂ ಕಾಯಿ ಬಿಡ್ತಿಲ್ಲೆ. ಇಲ್ಲಿ ಇಷ್ಟೆಲ್ಲ ಹುಲುಸಾಗಿ ಬೆಳೆಯುವ ಅಪ್ಪೆಮಿಡಿ, ಅಪ್ಪೆಮರ ಬೇರೆ ಕಡೆ ಇಷ್ಟ ಚೊಲೋ ಬೆಳಿತಿಲ್ಲೆ. ಬಹುಶಃ ಈ ಮಣ್ಣಿನ ಗುಣ ಈ ಅಪ್ಪೆಮಿಡಿ ಮರಕ್ಕೆ ಚೊಲೋ ಆಗ್ಲಕ್ಕು. ಇಲ್ಲಿಯ ಜೈವಿಕ ವಿಕಾಸ ಅನಂತಭಟ್ಟನ ಅಪ್ಪೆಮಿಡಿ ಮರಕ್ಕೆ ಚೊಲೋ ಆಗ್ತಿಕ್ಕು ನೋಡಿ' ಎಂದರು ಗಣಪಜ್ಜ.
             ಅಪ್ಪೇಮಿಡಿಯ ವಿಶಿಷ್ಟತೆಗಳು ಎಲ್ಲರಲ್ಲಿಯೂ ಬೆರಗನ್ನು ತಂದಿತ್ತು. `ತಗಳಿ ಈ ಅಪ್ಪೆಮಿಡಿನ ಮನೆಗೆ ತಗಂಡು ಹೋಗಿ ಚಟ್ನಿ, ಅಪ್ಪೆಹುಳಿ ಮಾಡ್ಕಂಡು ಊಟ ಮಾಡಿ' ಎಂದು 100ಕ್ಕೂ ಹೆಚ್ಚು ಅಪ್ಪೆಮಿಡಿಗಳನ್ನು ಕೊಟ್ಟರು. ಮಾರುಕಟ್ಟೆಯಲ್ಲಿ 1 ಅನಂತಭಟ್ಟನ ಅಪ್ಪೆಮಿಡಿಗೆ ಕನಿಷ್ಟ 10 ರು. ಇದೆ ಎಂದು ವಿನಾಯಕ ಪಿಸುಗುಟ್ಟಿದ. ವಾಪಾಸು ಮನೆಗೆ ಬಂದು ಅಪ್ಪೆಮಿಡಿ ಚಟ್ನಿ ಮಾಡಿಸಿಕೊಂಡು ತಿಂದರು ಎಲ್ಲರೂ. ಅಪ್ಪೆಮಿಡಿಯ ಅಪ್ಪೆಹುಳಿ ಮಾಡಿಸಿಕೊಂಡು ಊಟ ಮಾಡಿದರು. ಪ್ರದೀಪನಂತೂ ಎಂದೂ ಕಾಣದವನಂತೆ ಅಪ್ಪೆಹುಳಿಯನ್ನು ಊಟಕ್ಕೆ ಬಡಿಸಿಕೊಂಡು ಉಂಡ. ಅಷ್ಟೇ ಅಲ್ಲದೇ ಅಪ್ಪೆಹುಳಿಯನ್ನು ಪದೇ ಪದೆ ಕುಡಿದ. ಪ್ರದೀಪ ಅಪ್ಪೆಹುಳಿಯ ಪರಮಾಪ್ತ ಅಭಿಮಾನಿಯಾಗಿಬಿಟ್ಟಿದ್ದ.
           ಅಷ್ಟರಲ್ಲಿ ತುಂಟತನ ಮಾಡಿದ ವಿನಾಯಕ `ಈ ಅಪ್ಪೆಹುಳಿ ಇದೆಯಲ್ಲ ಇದು ಬ್ರಾಹ್ಮಣರ ಪಾಲಿಗೆ ವೈನ್ ಎಂದೇ ಕರೆಸಿಕೊಳ್ಳುತ್ತದೆ. ಅಷ್ಟು ಕಿಕ್ ಕೊಡುತ್ತದೆ ಮಾರಾಯಾ. ಇದನ್ನು ಊಟ ಮಾಡಿದರೆ ಸಿಕ್ಕಾಪಟ್ಟೆ ನಿದ್ದೆ ಬರುತ್ತದೆ. ಅಷ್ಟೇ ಅಲ್ಲ ಮಂಪರೂ ಕೂಡ.. ನೀನು ಅಷ್ಟೆಲ್ಲ ಊಟ ಮಾಡಿದೆಯಲ್ಲ. ಇದೀಗ ನಿನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸುತ್ತೇವೆ ಇರು ' ಎಂದ. ಪ್ರದೀಪ ಹೌಹಾರಿದ. ಊಟ ಮಾಡಿದ ತಕ್ಷಣವೇ ಪ್ರದೀಪನಿಗೆ ಗಡದ್ದು ನಿದ್ದೆ. ಗಣಪಜ್ಜನ ಜೊತೆಯಲ್ಲಿ ಹೀಗೊಂದು ದಿನ ಸಾರ್ಥಕವಾಗಿ ಕಳೆಯಿತು ಎಂದುಕೊಂಡಳು ವಿಜೇತಾ. ಮಾಡುವ ಕೆಲಸ ಇನ್ನೂ ಸಾಕಷ್ಟಿತ್ತು. ಸೂರ್ಯಕುದುರೆಯನ್ನು ಹುಡುಕಬೇಕಿತ್ತು. ಸೂರ್ಯಶಿಖಾರಿಯನ್ನೂ ಕೈಗೊಳ್ಳಬೇಕಿತ್ತು. ನಾಳೆಯಿಂದಲೇ ಈ ಕೆಲಸಕ್ಕೆ ತೊಡಗಿಕೊಳ್ಳಬೇಕು ಎಂದುಕೊಂಡಳು ವಿಜೇತಾ. ಆದರೆ ಮರುದಿನ ಮಾತ್ರ ಎಂದಿನಂತಿರಲಿಲ್ಲ. ಬೆಳ್ಳಂಬೆಳಿಗ್ಗೆ ದೊಡ್ಡದೊಂದು ಶಾಕ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.

(ಮುಂದುವರಿಯುತ್ತದೆ)

No comments:

Post a Comment