Wednesday, April 1, 2015

ಜಲಪಾತದ ಒಡಲಿನಲ್ಲಿ ನಡೆದ ಕವಿಗೋಷ್ಟಿ

(ಶಿರ್ಲೆ ಜಲಪಾತ)
ಒಂದೆಡೆ ಜಲಪಾತದ ಜುಳು ಜುಳು ನಿನಾದ ಕಿವಿಗಪ್ಪಳಿಸುತ್ತಿದ್ದರೆ ಮತ್ತೊಂದು ಕಡೆ ಕವಿಗಳ ಪ್ರೇಮ ಕವಿತೆಗಳ ವಾಚನ ಕಿವಿಗೆ ತಂಪನ್ನು ನೀಡುತ್ತಿತ್ತು. ಇದು ನಡೆದಿದ್ದು ಯಲ್ಲಾಪುರ ತಾಲೂಕಿನ ಶಿರಲೆ ಜಲಪಾತದಲ್ಲಿ ನಡೆದ ಕವಿತೆ ಬಳಗದ ಕವಿಗೋಷ್ಟಿಯಲ್ಲಿ.
ವಾಟ್ಸಾಪ್ ಮೂಲಕ ಪರಿಚಿತರಾದ ಕವಿಗಳು ತಮ್ಮ ತಮ್ಮಲ್ಲಿ ಸಮಾನಾಸಕ್ತರನ್ನು ಜೊತೆ ಸೇರಿಸಿಕೊಂಡು ಕವಿತೆ ಬಳಗವನ್ನು ಮಾಡಿಕೊಂಡು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ರಚನಾತ್ಮಕ ಕಾರ್ಯಕ್ರಮಗಳಿಗೆ ಮುನ್ನುಡಿ ಎನ್ನುವಂತೆ ಜಲಪಾತದಲ್ಲಿ ಕವಿಗೋಷ್ಟಿ ನಡೆಯಿತು. ಪ್ರೇಮಕವಿ ಎಂದೇ ಖ್ಯಾತಿಯನ್ನು ಗಳಿಸಿಕೊಂಡಿರುವ ಕೆ. ಎಸ್. ನರಸಿಂಹ ಸ್ವಾಮಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕವಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಕವಿಗಳು ತಾವು ಬರೆದ ಪ್ರೇಮ ಕವಿತೆಗಳನ್ನು ವಾಚನ ಮಾಡಿದರು.
ಯಾವುದೋ ವೇದಿಕೆಯಲ್ಲಿ, ಸಬೆ ಸಮಾರಂಭಗಳಲ್ಲಿ, ಉತ್ಸವಗಳಲ್ಲಿ ಕವಿಗೋಷ್ಟಿಗಳು ನಡೆಯುತ್ತವೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕವಿಗೋಷ್ಟಿಗಳು ನಡೆಯುವುದು ಸಾಮಾನ್ಯಲಾದರೆ ಪ್ರಕೃತಿಯ ಮಡಿನಿಲ್ಲಿ, ನಿಸರ್ಗದ ನಟ್ಟ ನಡುವೆ ಇರುವ ಜಲಪಾತದ ಎದುರು ಕವಿಗೋಷ್ಟಿ ನಡೆಯುವುದು ಹೊಸ ಕಲ್ಪನೆ. ಇಂತಹ ಹೊಸದೊಂದು ಕಾರ್ಯಕ್ರಮಕ್ಕೆ ಕವಿತೆ ಬಳಗ ನಾಂದಿ ಹಾಕಿಕೊಟ್ಟಂತಾಗಿದೆ. ಹೊಸ ಹೊಸ ಕವಿತೆಗಳಿಗೆ ವಿಶೇಷ ಪ್ರಾಧ್ಯಾನ್ಯತೆ ಕೊಟ್ಟು ನಡೆದ ಕವಿಗೋಷ್ಟಿ ಯಶಸ್ವಿಯಾಯಿತು. ಜಲಪಾತದಲ್ಲಿ ನಡೆದ ಕವಿಗೋಷ್ಟಿ ಹೊಸತನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು. ಕವಿಗೋಷ್ಟಿಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಮುಂಡಗೋಡ, ಬೆಂಗಳೂರು, ಬೆಳಗಾವಿ ಈ ಮುಂತಾದ ಪ್ರದೇಶಗಳಿಂದ ಆಗಮಿಸಿದ್ದ ಕವಿಗಳು, ಕವಿತೆಗಳು ಆಗಮಿಸಿದ್ದವು.
(ಬೆಣ್ಣೆ ಭಟ್ಟರಿಂದ ಕವಿತಾ ವಾಚನ)
ಕವಿತೆ ಬಳಗ ಹಮ್ಮಿಕೊಂಡಿದ್ದ ಕವಿಗೋಷ್ಟಿಯನ್ನು ಕೃಷಿ ಸಂಶೋಧಕ ಡಾ. ರವಿ ಭಟ್ಟ ಬರಗದ್ದೆ ಅವರು ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಯನ್ನು ಓದುವ ಮೂಲಕ ಉದ್ಘಾಟಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹಟ್ಟಿಕೊಂಡ ಕವಿತೆ ಬಳಗ, ತನ್ನ ಆರಂಭಿಕ ದಿನಗಳಿಂದಲೂ ವಿಶಿಷ್ಟತೆಗಳಿಂದ ಹೆಸರನ್ನು ಪಡೆದುಕೊಂಡಿದೆ. ಇದೀಗ ಜಲಪಾತದಲ್ಲಿ ಕವಿಗೋಷ್ಟಿಯನ್ನು ಹಮ್ಮಿಕೊಳ್ಳುವ ಮತ್ತೊಂದು ವಿಶಿಷ್ಟತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕವಿ ಟಿ. ಆರ್. ಪ್ರಕಾಶ ಭಾಗ್ವತ ಅವರು ಮಾತನಾಡಿ ಹೊಸ ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕವಿತೆ ಬರೆಯುವುದಕ್ಕೆ ಮುಂದಾಗುತ್ತಿದ್ದಾರೆ. ಇದು ಸಂತಸದ ಸಂಗತಿ. ಹಿರಿಯ ಕವಿಗಳಲ್ಲಿ ಅದೆಷ್ಟೋ ಭಿನ್ನಾಭಿಪ್ರಾಯಗಳನ್ನು ನಾವು ಕಂಡಿದ್ದೇವೆ. ಕನ್ನಡ ಸಾಹಿತ್ಯದ ದಿಗ್ಗಜ ಕವಿಗಳೆಂದೇ ಗುರುತಿಸಿಕೊಂಡವರೂ ಕೂಡ ಪರಸ್ಪರ ಕಿತ್ತಾಡಿಕೊಂಡಿದ್ದನ್ನು ಕಂಡಿದ್ದೇವೆ. ಆದರೆ ಇಂದಿನ ತಲೆಮಾರಿನ ಕವಿಗಳು, ಯುವ ಸಾಹಿತಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿಲ್ಲ. ಒಬ್ಬರಿಗೆ ಇನ್ನೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಪರಸ್ಪರ ಸಹಕಾರವನ್ನು ಕೊಡುತ್ತಿದ್ದಾರೆ. ಅದೇ ರೀತಿ ಯುವ ಕವಿಗಳು ಭಾವಗೀತೆಗಳನ್ನು ಬರೆಯಲು ಮುಂದಾಗಬೇಕಾದ ಅಗತ್ಯವಿದೆ. ಭಾವಗೀತೆಗಳು ಜನಮಾನಸವನ್ನು ತಟ್ಟುತ್ತವೆ. ಬಾವಗೀತೆಗಳ ಮೂಲಕ ಕವಿತೆ ಯಶಸ್ವಿಯಾದಾಗ ಕಾವ್ಯ ಸಾರ್ಥಕ ಎನ್ನಿಸಿಕೊಳ್ಳುತ್ತವೆ. ಹಳೆಯ ತಲೆಮಾರಿನ ಭಾವಗೀತೆಗಳನ್ನು ಬರೆಯುವ ಕವಿಗಳ ನಂತರ ಉಂಟಾಗಿರುವ ಶೂನ್ಯವನ್ನು ಹೊಸ ಕವಿಗಳು ತುಂಬಿಕೊಡಬೇಕಾದ ಅಗತ್ಯವಿದೆ. ನಾವು ಇಂದು ನಿಸರ್ಗ ಹಾಗೂ ಸಾಮಾಜಿಕ ಸಮಾನತೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ಕುರಿತು ಕಾವ್ಯ ಪ್ರಪಂಚ ಹೆಚ್ಚು ಸಂವೇದನಾಶೀಲವಾಗುವ ಅಗತ್ಯವಿದೆ ಎಂದು ಹೇಳಿದರು.
(ಸಂಚಾಲಕ ನಾಗರಾಜ ವೈದ್ಯರ ಮಾತು)
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತೆ ಬಳಗದ ಸಂಚಾಲಕ ನಾಗರಾಜ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಕವಿತೆ ಬಳಗದಲ್ಲಿದ್ದ ಕವಿಗಳ್ನು ಭೌತಿಕವಾಗಿ ಒಂದೆಡೆ ಸೇರಿಸುವುದು ಈ ಕವಿಗೋಷ್ಟಿಯ ಹಿಂದಿರುವ ಪ್ರಮುಖ ಕಾರಣ. ಸಾಮಾಜಿಕ ಜಾಲತಾಣಗಳಲ್ಲಿ ಕವಿತೆಗಳ ಮೂಲಕ ಸಿಗುತ್ತಾರೆ. ಆದರೂ ದೂರವಿದ್ದುಬಿಡುತ್ತಾರೆ. ಅಂತವರನ್ನು ಒಂದೆಡೆ ಸೇರಿಸಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳವುದು ಪ್ರಮುಖ ಉದ್ದೇಶ. ಈ ಉದ್ದೇಶ ಇಂದು ಸಫಲವಾಗಿದೆ ಎಂದರು.
ಉಪನ್ಯಾಸಕ, ಬರಹಗಾರ ರಾಜು ಹೆಗಡೆ ಅವರು ಸಾಂದರ್ಭಿಕವಾಗಿ ಮಾತನಾಡಿ ಕವಿತೆಯನ್ನು ವಾಚನ ಮಾಡಿದರು. ನಾಗರಾಜ ವೈದ್ಯ -ಪ್ರೇಮದ ಹತ್ತು ಹನಿಗಳು, ಸಂಜಯ ಭಟ್ಟ ಬೆಣ್ಣೆ - ಮಧುಕುಟಿಗ, ಸಿಂಧುಚಂದ್ರ - ಪ್ರೇಮವೆಂದರೆ ಇದೇನಾ, ಶರೀಪ ಹಾಸರ್ಿಕಟ್ಟಾ - ಬಾ ಮುತ್ತು ಚೆಂಡೇ, ಗಣಪತಿ ಬಾಳೆಗದ್ದೆ-ಅವಳು, ಎನ್. ವಿ. ಮಂಜುನಾಥ-ಅವನ ನೆನಪಿಗಾಗಿ, ಮಾನಸಾ ಹೆಗಡೆ-ಪುಟ್ಟ ಬೊಗಸೆಯ ಪದಗಳು, ವಿನಯ ದಂಟಕಲ್-ಒಮ್ಮೆ ತಿರುಗಿ ನೋಡು, ಚೈತ್ರಿಕಾ ಹೆಗಡೆ-ಮತ್ತೆ ಮಳೆ ಹೊಯ್ಯುತಿದೆ, ರಾಜು ಹೆಗಡೆ-ಒಂದು ಕವನ ವಾಚನ, ಪ್ರಕಾಶ ಭಾಗ್ವತ-ಬಾರದಿರು ಹಾಲಿರುಳೆ ಎನ್ನುವ ಕವಿತೆಗಳನ್ನು ವಾಚನ ಮಾಡಿದರು.
ಕವಿಗೋಷ್ಟಿಯಲ್ಲಿ ಕೇವಲ ಕವಿಗಳು ಮಾತ್ರ ಪಾಲ್ಗೊಳ್ಳದೇ `ಶಿರ್ಲೆ`ಯ ಸ್ಥಳೀಕರು, ಅನೇಕ ಪರ ಊರಿನ ಕಾವ್ಯಾಸಕ್ತರು ಪಾಲ್ಗೊಂಡಿದ್ದರು. ಯುವ ಕವಿಗಳ ಪ್ರೇಮ ಕವಿತೆಗಳಿಗೆ ಮೆಚ್ಚುಗೆ ಸೂಸಿ, ತಲೆದೂಗಿದರು. ಬರಹಗಾರ ಸಂಜಯ ಭಟ್ಟ ಬೆಣ್ಣೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.


***
(ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ)

No comments:

Post a Comment