Saturday, April 18, 2015

ಅಘನಾಶಿನಿ ಕಣಿವೆಯಲ್ಲಿ-16


             ಹದಿನೈದು ನಿಮಿಷದ ಧ್ಯಾನ ಮುಗಿಸಿ ಬಂದ ವಿನಾಯಕನ ಎದುರು ವಿಜೇತಾ ಒಂದು ದೊಡ್ಡ ಪತ್ರಗಳ ಕಟ್ಟನ್ನೇ ಹಿಡಿದು ತಂದು `ಇದೇನು?' ಎಂದು ಕೇಳಿದಳು.
              ಅವಳ ಕೈಯೊಳಗಿನ ಪತ್ರಗಳ ಕಟ್ಟನ್ನು ನಿಧಾನವಾಗಿ ಇಸಿದುಕೊಂಡ ವಿನಾಯಕ ದೊಡ್ಡದೊಂದು ನಿಟ್ಟುಸಿರಿನೊಂದಿಗೆ ಮಾತು ಪ್ರಾರಂಭಿಸಿದ. `ಇದು ನನ್ನ ಬಾವಯಾನದ ಚಿಕ್ಕ ತುಣುಕುಗಳು. ಇದರೊಳಗೆ ಇದ್ದಿದ್ದೆಲ್ಲ ಪತ್ರಗಳು. ಪತ್ರಮೈತ್ರಿ ಅನ್ನುತ್ತೀವಲ್ಲ. ಅದೇ ಇದು. ಎಂದೊ ಒಮ್ಮೆ ತುಂಬ ಉತ್ಸಾಹದ ದಿನಗಳಲ್ಲಿ ಮಾಡುತ್ತಿದ್ದ ಹಲವು ಕೆಲಸಗಳಲ್ಲಿ ಇದೂ ಒಂದು. ಆಗ ನಾಡಿನ ಮೂಲೆ ಮೂಲೆಯಿಂದ ಈ ವಿನಾಯಕನಿಗೆ ಪತ್ರಗಳು ಬರುತ್ತಿದ್ದವು. ಯಾರ್ಯಾರೋ ಪತ್ರ ಬರೆಯುತ್ತಿದ್ದರು..' ಎಂದ.
              `ಅಂದರೆ ಈಗ ಇಲ್ವಾ?' ಕೇಳಿದಳು ವಿಜೇತಾ
              `ಈಗ ನನ್ನ ಪತ್ರ ಮೈತ್ರಿ ಬಹುತೇಕ ಸತ್ತು ಹೋಗಿದೆ. ಇದೆಲ್ಲ ಮೊಬೈಲ್ ಇನ್ನೂ ಮನೆಮಾತು ಆಗಿರದ ಕಾಲದ್ದು. ಆಗಿನ್ನೂ ನೋಕಿಯಾದ ಬೇಸಿಕ್ ಮೊಬೈಲುಗಳು ಎಲ್ಲೆಡೆ ಇದ್ದ ಕಾಲ. ನನಗೆ ಬರೆಯುವ ಹುಕಿ ಬಹಳ ಇತ್ತು. ಆಗ ಮಾಡಿದ ಹಲವಾರು ಕಾರ್ಯಗಳಲ್ಲಿ ಇದೂ ಒಂದು. ಕಾಲ ಬದಲಾಯ್ತು. ಈಗ ಪತ್ರಗಳನ್ನು ಯಾರು ಬರೀತಾರೆ ಹೇಳು. ಬರೀ ಮೊಬೈಲು, ಫೇಸ್ ಬುಕ್ಕು ವಾಟ್ಸಾಪು..' ಎಂದು ನಿಟ್ಟುಸಿರು ಬಿಟ್ಟ ವಿನಾಯಕ.
               `ಆದರೂ ಪತ್ರ ಬರೆಯಬಹುದಿತ್ತಲ್ವಾ? ಯಾಕೆ ಮುಂದುವರೆಸಲಿಲ್ಲ..' ಪಟ್ಟು ಬಿಡದೇ ಕೇಳಿದಳು ವಿಜೇತಾ..
               `ಬಿಡಿ.. ಕೆಲವು ವಿಷಯಗಳಿಗೆ ಕಾರಣಗಳನ್ನು ಹೇಳಲು ಆಗುವುದಿಲ್ಲ. ಹೇಳಿದರೆ ಮನಸ್ಸು ಕಲ್ಲವಿಲವಾಗುತ್ತದೆ. ಕೆಲವಕ್ಕೆ ಕಾರಣಗಳು ಇರುವುದಿಲ್ಲ. ನನ್ನ ಪತ್ರ ಮೈತ್ರಿ ಸಾಯಲು ಕಾರಣ ಇದೆ ಎಂದರೆ ಇದೆ. ಇಲ್ಲ ಎಂದರೆ ಇಲ್ಲ. ನನಗಾಗಿ ಬರೆದವರು ಅನೇಕ. ಆದರೆ ನಾನೇ ಮುಂದುವರೆಸಲಿಲ್ಲ. ಎಲ್ಲವನ್ನೂ ಕೊನೆಗೊಳಿಸಕೊಂಡೆ ನೋಡು..' ಎಂದ ವಿನಾಯಕ.
               `ಯಾಕೆ? ಯಾಕೆ ಹಾಗೆ ಮಾಡ್ಕೊಂಡ್ರಿ..?' ಎಂದು ಕೇಳಿದಳು ವಿಜೇತಾ. ವಿನಾಯಕ ಕಾರಣ ಹೇಳಲೇ ಇಲ್ಲ. ವಿಜೇತಾ ಅದೆಷ್ಟೋ ಬಗೆಯಲ್ಲಿ ಕೇಳಿದರೂ ವಿನಾಯಕ ಮಾತ್ರ ನಿರುತ್ತರನಾಗಿದ್ದ. ಕೆಲವು ಸಾರಿ ನಿಸ್ಸಾರ ಉತ್ತರಗಳನ್ನೇ ಕೊಟ್ಟ. ಬೇಸರಗೊಂಡ ವಿಜೇತಾ ಕೇಳುವುದನ್ನು ನಿಲ್ಲಿಸಿದಳು. ಆದರೆ ವಿನಾಯಕನ ಮೇಲೆ ವಿಜೇತಾಳಿಗೆ ಕುತೂಹಲ ಹೆಚ್ಚಿತ್ತು. ಮೊದಲೇ ಇದ್ದ ಕುತೂಹಲ ದುಪ್ಪಟ್ಟಾಗಿತ್ತು. ಕವಿ, ಬರಹಗಾರ, ಸಿದ್ಧಾಂತಿ, ಪತ್ರ ಮೈತ್ರಿ ಮಾಡುವವನು, ಹಾಡುಗಾರ, ಇಂತಹ ಅದೆಷ್ಟೋ ಪ್ರತಿಭೆಗಳ ಸಂಗಮವಾಗಿದ್ದ ವಿನಾಯಕ ಯಾಕೋ ಜಗತ್ತಿನ ಕಡೆಗೆ ಬೇಸರಿಸಿಕೊಂಡಿದ್ದಾನೆ. ಪ್ರತಿಯೊಂದರಲ್ಲಿಯೂ ಆತನಿಗೆ ನಿಸ್ಸಾರ. ತಾತ್ಸಾರ. ಮೊದಲಿನ ಉತ್ಸಾಹ ಕಳೆದು ಹೋಗಿದೆಯೇನೋ ಅನ್ನುವ ಭಾವನೆಯಲ್ಲಿದ್ದಾನೆ. ಇದನ್ನು ಕಂಡುಹಿಡಿಯಬೇಕಲ್ಲ ಎಂದುಕೊಂಡಳು ವಿಜೇತಾ.

***15***

              ಮರುದಿನ ಎಂದಿನಂತೆ ಬೆಳಗಾಯಿತು. ಮೂಡಣದಲ್ಲಿ ಸೂರ್ಯ ಚಿನ್ನದ ಹಾಸಿಗೆ ಹಾಸಿ, ಹೂ ಚೆಲ್ಲಿ, ನಗು ನಗುತ್ತಾ ಮೂಡಿ ಬಂದ. ಎಲ್ಲರೂ ಮೊದಲೇ ನಿರ್ಧಾರ ಮಾಡಿಕೊಂಡಂತೆ ಹೊರಟಿದ್ದು ಹಿಮದೆ ಐವತ್ತು ವರ್ಗಷಳಾಚೆ ಕರೆಂಟು (ವಿದ್ಯುತ್) ಉತ್ಪಾದಿಸುತ್ತಿದ್ದ ಸ್ಥಳ ನೋಡಲು.
              ಹಳೆಯ ಭವ್ಯ ಭವಂತಿ ಮನೆಗೆ ಎಲ್ಲರನ್ನೂ ಕರೆದೊಯ್ದ ವಿನಾಯಕ. ` ಈ ಮನೆಯಲ್ಲಿಯೇ ಹಿಂದೆ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರು..' ಎಂದು ಹೇಳುತ್ತಿದ್ದಂತೆಯೇ ಆ ಮನೆಯ ಯಜಮಾನರಾದ ಗಣಪತಿ ಹೆಗಡೆಯವರು ಹಳೆಯ ಮನೆಯ ಕತ್ತಲೆಯಾಳದಿಂದ ಕೋಲೂರಿಕೊಂಡು ನಡೆದು ಬಂದರು. ಕತ್ತಲೆಯಿಮದ ಹೊರ ಬಂದ ಅವರಿಗೆ ಹೊರಗಿನ ಬೆಳಕಿಗೆ ಕಣ್ಣನ್ನು ಹೊಂದಿಸಿಕೊಳ್ಳಲು ಕೆಲ ಕ್ಷಣಗಳು ಬೇಕಾದವು. ನಂತರ ಕನ್ಣಿಗೆ ಬಿದ್ದ ಯುವ ಪಡೆಯನ್ನು ಮೂಕ ವಿಸ್ಮಿತರಾಗಿ ನೋಡುತ್ತಿದ್ದಂತೆಯೇ ವಿನಾಯಕ ಬಂದವರೆಲ್ಲರನ್ನೂ ಪರಸ್ಪರ ಪರಿಚಯ ಮಾಡಿಕೊಟ್ಟ.
           `ಓಹೋ.. ನಮ್ಮೂರಿಗೆ ಯಾರೋ ಬಂಜ್ವಡಾ ಹೇಳಿ ಕೇಳಿದ್ದೆ.. ನೀವೇಯೋ ಬಂದವ್ರು..' ಎಂದು ಕೇಳಿದರು. ಮನೆಗೆ ಯುವಕರು ಬಂದಿದ್ದರಿಂದ ತೊಂಭತ್ತರ ಗಣಪಜ್ಜ ಹುರುಪು ಬಂದವರಂತೆ  `ಓಹೋ ನಿಂಗವೆಲ್ಲಾ ಕರೆಂಟು ಉತ್ಪಾದನೆ ಮಾಡ್ತಿದ್ದಿದ್ದ ಹೇಳದ್ನ ಕೇಳ್ಕಂಡು.. ಅದನ್ನ ನೋಡಲೆ ಬಂಜ್ರಾ.. ಬನ್ನಿ ತೋರಿಸ್ತೆ...' ಎಂದು ಕರೆದೊಯ್ದರು. ಅಲ್ಲಿದ್ದ ಯುವಕರೆಲ್ಲ ಅಜ್ಜನಿಗೆ ವಯಸ್ಸಾಗಿದೆ. ಬೇರೆ ಯಾರಾದರೂ ತೋರಿಸಿದರೆ ನೋಡಬಹುದು. ಅಜ್ಜನಿಗೆ ಆರಾಮಾಗಿ ಕುಳಿತುಕೊಳ್ಳಲು ಹೇಳೋಣ ಎಂದುಕೊಂಡರಾದರೂ ಅಜ್ಜನ ಹುರುಪನ್ನು ಕಂಡು ಬಾಯಿ ಬಿಡಲಿಲ್ಲ.
           ಮನೆಯ ಹಿಂಭಾಗದಲ್ಲಿಯೇ ಇದ್ದ ದೊಡ್ಡದೊಂದು ಗುಡ್ಡವನ್ನು ಹತ್ತಿಸಿದ ಅಜ್ಜ. ಎದೆಯ ಮಟ್ಟಕ್ಕಿಂತ ಎತ್ತರಕ್ಕಿದ್ದ ಗುಡ್ಡವನ್ನು ಯುವ ಪಡೆ ಏದುಸಿರು ಬಿಡುತ್ತ ಹತ್ತಿತು. ಆದರೆ 90ರ ಅಜ್ಜ ಆಯಾಸವಿಲ್ಲದೇ ಹತ್ತಿದ. ಗುಡ್ಡದ ಮೇಲೊಂದು ಬಹುದೊಡ್ಡ ನೀರು ಸಂಗ್ರಹಾಗಾರವಿತ್ತು. ಅನಾಮತ್ತು 10 ಸಾವಿರಕ್ಕೂ ಅಧಿಕ ಲೀಟರ್ ನೀರನ್ನು ಸಂಗ್ರಹ ಮಾಡಲಾಗುವಂತಹ ಬಹುದೊಡ್ಡ ಟ್ಯಾಂಕ್ ಅದು. ಇನ್ನೂ ಹೆಚ್ಚಿನ ನೀರನ್ನು ಸಂಗ್ರಹ ಮಾಡಬಹುದಿತ್ತೇನೋ. ಬಹುದೊಡ್ಡದಾಗಿದ್ದ ತೊಟ್ಟಿ ಇದೀಗ ಒಡೆದು ಹೋಗಿತ್ತು. ಒಂದು ಪಾರ್ಶ್ವ ಕುಸಿದು ಬಿದ್ದಿತ್ತು. ಆ ನೀರಿನ ಟ್ಯಾಂಕ್ ಇದೀಗ ಅವಸಾನದ ಕೊನೆಯ ಮೆಟ್ಟಿಲಿನಲ್ಲಿತ್ತು. ಮಾತನಾಡಲು ಆರಂಭಿಸಿದ ಅಜ್ಜ `ಇದೋ ನೋಡಿ ಇದೇ ಟ್ಯಾಂಕಿನಲ್ಲಿ ನೀರನ್ನು ಸಂಗ್ರಹ ಮಾಡಲಾಗುತ್ತಿತ್ತು. ಈ ಟ್ಯಾಂಕಿಗೆ ಕನಿಷ್ಟ ಮೂರು ಕಿಮಿ ದೂರದಿಮದ ನೀರು ಹರಿದು ಬರುತ್ತಿತ್ತು. ನಮ್ಮೂರಿನ ಎತ್ತರದ  ಗುಡ್ಡದ ಮೇಲೊಂದು ಕೆರೆಯಿದೆ. ಅದರಿಂದ ನೀರು ಬರುತ್ತಿತ್ತು. ಈ ಟ್ಯಾಂಕಿನಲ್ಲಿ ಸಂಗ್ರಹ ಮಾಡಿ, ಕೆಳಗೆ ಮನೆಯ ಬಳಿ ಚಿಕ್ಕ ಗಾತ್ರದ ಟರ್ಬೈನ್ ಕೂರಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.. ನೋಡಿ..' ಎಂದರು.
            `ಅಜ್ಜಾ.. ಇಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದುದು ಯಾವಾಗ?' ಎಂದು ಕೇಳುದ್ದಳು ವಿಜೇತಾ..
            `ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಇಲ್ಲಿ ವಿದ್ಯುತ್ ಉತ್ಪಾದನೆ ಆರಂಭ ಮಾಡಿದ್ದು. ಯನ್ನ ಅಪ್ಪಯ್ಯ ಗಣೇಶ ಹೆಗಡೆ ವಿದ್ಯುತ್ ಉತ್ಪಾದನೆ ಕಾರ್ಯಕ್ಕೆ ಮುಂದಾಗಿದ್ದು. ನಂತರ ಆನೂ ಸುಮಾರ್ ವರ್ಷ ವಿದ್ಯುತ್ ಉತ್ಪಾದನೆ ಮಾಡ್ತಿದ್ದಿ. 1972ರ ಸಮಯದಲ್ಲಿ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಕಾರ್ಯ ಶುರು ಆತು. ಆವಾಗ ನಮ್ಮೂರಿಗೆ ಕರೆಮಟ್ ಬಂತು. ಆಮೇಲೆ ಈ ವಿದ್ಯುತ್ ಉತ್ಪಾದನೆ ಕಾರ್ಯ ನಿಲ್ಲಿಸಿದ್ಯ..' ಎಂದರು ಗಣಪಜ್ಜ.
           ಎಲ್ಲರೂ ಬೆರಗಾಗಿ ಕೇಳುತ್ತಿದ್ದರು. ಮನೆ ಮನೆಗಳಲ್ಲಿ ಕಿರು ಜಲವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ಇದೀಗ ಎಲ್ಲ ಕಡೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಕಾರ್ಯವನ್ನು ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿಯೇ ಕೈಗೊಮಡ ಗಣಪಜ್ಜ ಹಾಗೂ ಗಣೇಶಜ್ಜನ ಬಗ್ಗೆ ಹೆಮ್ಮೆ ಮೂಡಲಾರಂಭಿಸಿತ್ತು. ಗುಡ್ಡವನ್ನು ಇಳಿಸಿಕೊಂಡು ಎಲ್ಲರನ್ನೂ ಕರೆದೊಯ್ದ ಗಣಪಜ್ಜ. ಗುಡ್ಡದ ಕೆಳಭಾಗದಲ್ಲಿ ಒಮದು ಕಡೆ ನಿಲ್ಲಿಸಿದ. ಅಲ್ಲೊಂದು ದೊಡ್ಡ ದಿಬ್ಬ, ಮುರಿದು ಹೋಗಿದ್ದ ಕೆಲವು ಯಂತ್ರಗಳಿದ್ದವು. `ಇದೇ ನೋಡಿ.. ಟರ್ಬೈನ್ ಕೂರಿಸಿದ್ದ ಜಾಗ..' ಎಂದ.
           ಯಾವುದೋ ಕಾಲದಲ್ಲಿ ಮುರಿದು ಬಿದ್ದಂತಿತ್ತು. ಯಂತ್ರದ ಬಿಡಿ ಭಾಗಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. `ಅಜ್ಜಾ.. ಯಾಕೆ ಈ ವಿದ್ಯುತ್ ಉತ್ಪಾದನಾ ಯಂತ್ರ ಹೀಗಾಗಿದೆ.? ಯಾಕೆ ನೀವು ನಂತರದ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲಿಲ್ಲ?' ವಿಜೇತಾಳೇ ಕೇಳಿದ್ದಳು.
           `ಜೋಗದ ವಿದ್ಯುತ್ ಬಂತಲೆ ತಂಗಿ.. ಆ ವಿದ್ಯುತ್ ಎಲ್ಲ ಕಡೆ ಬಳಕೆ ಮಾಡಲೆ ಹಿಡಿದ. ನಂತರದ ದಿನಗಳಲ್ಲಿ ಈ ವಿದ್ಯುತ್ ಉತ್ಪಾದನೆ ಮಾಡೋದು ಕಷ್ಟದ ಕೆಲಸ ಅನ್ನಿಶ್ಚು. ಕಡಿಮೆ ದರದಲ್ಲಿ ಜೋಗದ ವಿದ್ಯುತ್ ಸಿಗಲೆ ಶುರು ಆತು. ಆವಾಗ ಇದನ್ನು ಬಿಡದೇ ಆಗ್ತು ಅಲ್ದಾ.. ನಿರ್ವಹಣೆ ಮಾಡೋದು ಕಷ್ಟ ಆಗ್ತಾ ಬಂತು ನೋಡು.. ಯನ್ನ ತರುವಾಯ ಮತ್ಯಾರೂ ಮಾಡವ್ ಇಲ್ಲೆ ಅನ್ನಿಶಿ ಬಿಟ್ ಹಾಕಿದಿ.. ಕಾಲ ಕ್ರಮೇಣ ಎಲ್ಲಾ ಹಾಳಾಗೋತು..' ಎಂದು ನಿಟ್ಟುಸಿರು ಬಿಟ್ಟರು ಗಣಪಜ್ಜ.
           `ಸುಮಾರ್ ಎಷ್ಟು ಪ್ರಮಾಣದಲ್ಲಿ ಕರೆಂಟು ಉತ್ಪಾದನೆ ಮಾಡ್ತಿದ್ದಿ?' ಪ್ರದೀಪ ಕೇಳಿದ್ದ.
           `ಹುಂ.. ಸುಮಾರ್ ಉತ್ಪಾದನೆ ಮಾಡ್ತಿದ್ಯ ನೋಡಿ. ನಮ್ಮೂರಿಗೆಲ್ಲಾ ಸಿಂಗಲ್ ಫೆಸ್ ಕರೆಂಟ್ ಕೊಡಲೆ ಸಾಕಾಗ್ತಿತ್ತು, ನಮ್ಮನೆಲಿ ಅವಲಕ್ಕಿ ಗಿರಣಿ ನಡೆಸ್ತಾ ಇದ್ದಿದ್ಯ. ಆದರೆ ನಿರ್ವಹಣೆ ಕಷ್ಟ ಆಗ್ತಾ ಬಂತು. ಹಂಗಾಗಿ ಬಿಡಕಾತು..' ಎಂದರು ಅಜ್ಜ.
           `ನಮ್ಮೂರಿನಲ್ಲಿ ಕರೆಂಟು ಉತ್ಪಾದನೆ ಮಾಡೋದು ಶಾಲೆಗಳಲ್ಲಿ ಪಾಠವಾಗಿ ಬಂದಿತ್ತಂತೆ..' ಎಂದ ವಿನಾಯಕ
           `ಹೌದು.. ಪಾಠವಾಗಿ ಕಲಿಸ್ತಾ ಇದ್ದರು. ಕನ್ನಡ ಶಾಲೆಯಲ್ಲಿ ನೀರಿನ ಹೌದು ಎಂಬ ತಲೆಬರಹದ ಅಡಿಯಲ್ಲಿ ಪಾಠ ಕಲಿಸಲಾಗುತ್ತಿತ್ತು. 1980ರ ದಶಕದ ವರೆಗೂ ಆ ಪಾಠ ಇತ್ತು. ಈಗ ಇಲ್ಲ. ಮೊನ್ನೆ ಮೊನ್ನೆಯ ವರೆಗೂ ನಮ್ಮೂರಿಗೆ ಈ ನೀರಿನ ಹೌದನ್ನು ನೋಡುವ ಸಲುವಾಗಿಯೇ ಮಕ್ಕಳು ಪ್ರವಾಸಕ್ಕೆ ಬರ್ತಾ ಇದ್ದಿದ್ದ. ಈಗಲೇ ಬರ್ತಾ ಇಲ್ಲೆ ನೋಡಿ..' ಎಂದು ಗಣಪಜ್ಜ ಹೇಳಿದ. ಎಲ್ಲರೂ ನಿಟ್ಟುಸಿರು ಬಿಟ್ಟರು.
           ಗಣಪತಿ ಹೆಗಡೆಯವರು ತೋರಿಸಿದ ಟರ್ಬೈನ್, ಟ್ಯಾಂಕು, ಮಿಲ್ಲು ಇವೆಲ್ಲ ಬಹುತೇಕ ಅವಸಾನದ ಹಾದಿಯನ್ನು ತಲುಪಿಯಾಗಿ ಆಗಿತ್ತು. ಕೊನೆಯ ಕೊಂಡಿಗಳಷ್ಟೇ ಉಳಿದಕೊಂಡಿದ್ದವು. ಪ್ರತಿಯೊಬ್ಬರೂ ಈ ಕಾರಣದಿಂದ ಮರುಕ ಪಟ್ಟುಕೊಂಡರು. `ಅಲ್ಲಾ ಅಜ್ಜಾ ಈಗಲೂ ನಮ್ಮ ಸರ್ಕಾರ ವಿದ್ಯುತ್ತನ್ನು ಮನೆಯಲ್ಲಿ ಉತ್ಪಾದನೆ ಮಾಡೋದಾದ್ರೆ ಅವರಿಗೆ ಸಹಾಯ, ಸಹಕಾರ ಎಲ್ಲ ಕೊಡ್ತದಂತಲ್ಲಾ..' ಎಂದಳು ವಿಜೇತಾ.
           `ತಥ್.. ಅದೆಂತಾ ಕೇಳ್ತೆ.. ಯಾವ್ದಕ್ಕೂ ಈಗ ದುಡ್ಡು ಇಲ್ದೇ ಹೋದ್ರೆ ಆಗ್ತಿಲ್ಲೆ. ನೀನು ಲಂಚ ಮಡಗಿದ್ಯ, ನಿಂಗೆ ಎಲ್ಲಾನೂ ಸಿಕ್ತು. ಈಗಲೂ ಆನು ಲಂಚ ಕೊಟ್ಟಿದ್ರೆ ಈ ವಿದ್ಯುತ್ ಉತ್ಪಾದನೆ ಮಾಡೋದ್ನ ಮುಂದುವರಿಶಿಗ್ಯಂಡು ಹೋಪಲೆ ಆಗ್ತಿತ್ತು. ಆದರೆ ಊಹೂಂ.. ಆನು ಹಂಗೆ ಮಾಡಂವ ಅಲ್ಲ. ಲಂಚಾ ಎಲ್ಲಾ ಕೊಡಂವ ಅಲ್ಲ ಆನು. ಯನ್ನ ಅಪ್ಪಯ್ಯ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅಂಥವ್ನ ಮಗ ಆಗಿ ಆನು ಲಂಚ ಗಿಂಚ ಕೊಟ್ಟು ಕೆಲ್ಸ ಮಾಡಿಸ್ಕಂಬದು ಅಂದ್ರೆ.. ಶಿ ಶಿ..' ಎಂದು ಗಣಪಜ್ಜ ಹೇಳಿದಾಗ ಹೆಮ್ಮೆಯಿಮದ ಬೀಗಿದಳು ವಿಜೇತಾ.
           `ಅಲ್ಲಾ ಅಜ್ಜಾ.. ನಿಂಗೆ 90 ವರ್ಷದ ಮೇಲೆ ಆತು.. ನಿಮ್ಮ ಕಾಲದಲ್ಲಿ ಹ್ಯಾಂಗಿತ್ತು.. ಯಾವ್ ಯಾವ್ ಥರಾ ಆಗಿತ್ತು.. ಎಲ್ಲಾ ಹೇಳು.. ನೀವು ನಿಮ್ಮ ಹರೆಯದಲ್ಲಿ ಅದೇನೇನು ಸಾಹಸಗಳನ್ನು ಮಾಡಿದ್ದಿರೋ.. ಅದೆಲ್ಲವನ್ನೂ ಹೇಳಿ..' ಎಂದು ಪಕ್ಕಾ ಪತ್ರಕರ್ತನ ಹಾಗೆ ಕೇಳಿದ ವಿಕ್ರಮ. ಅಜ್ಜನ ಮನಸ್ಸು ಉಲ್ಲಾಸಗೊಂಡಿತ್ತು. ಮಾತಿನ ಹುಕಿಗೆ ಬಿದ್ದಿದ್ದ ಅಜ್ಜ ತನ್ನ ಕಾಲದ ಸಾಹಸಗಳನ್ನು ಹೇಳಲು ಆರಂಭಿಸಿದ್ದ.

(ಮುಂದುವರಿಯುತ್ತದೆ)
(ವಿ,. ಸೂ : ಗಣಪಜ್ಜ ಹೇಳಿದ ಸಂಗತಿಗಳೆಲ್ಲ ನಿಜವಾಗಿಯೂ ನಡೆದಿದ್ದು.)

No comments:

Post a Comment