Wednesday, March 25, 2015

ಅಘನಾಶಿನಿ ಕಣಿವೆಯಲ್ಲಿ-15


             ಕಾನನದ ಮಡಿಲಿನ ತುಂಬಾ ಓಡಾಡಿ ಮನ ಹಿಗ್ಗಾಗಿಸಿಕೊಂಡ ಆ ಸೈನ್ಯ ಮತ್ತೊಮ್ಮೆ ಅಘನಾಶಿನಿ ತೀರದತ್ತ ಹೊರಟರು. `ಅಯ್ಯ.. ಇವರ್ಯಾಕೆ ನಿಮಿಷಕ್ಕೊನ್ನಮ್ನಿ ಆಡ್ತಾವ್ರೆ..' ಅಂದುಕೊಂಡ ದ್ಯಾವ. ಮತ್ತೆ ತೀರವನ್ನು ತಲುಪಿದ ನಂತರ ದ್ಯಾವ ಪ್ರತಿಯೊಬ್ಬರಿಗೂ ತೆಪ್ಪವನ್ನು ಮಾಡುವುದು ಹೇಗೆ ಎನ್ನುವುದನ್ನು ವಿವರಿಸಿದ. ಬಿದಿರನ್ನು ಅಳತೆಯ ಪ್ರಕಾರ ಕಡಿದು, ಜೋಡಿಸಿ, ಬೈನೆ ಹಗ್ಗದಿಂದ ಕಟ್ಟಿ ಫಟಾ ಫಟ್ ತೆಪ್ಪ ತಯಾರಿಸಿದ್ ದ್ಯಾವ. ದ್ಯಾವನ ಕೈಚಳಕವನ್ನು ಪ್ರತಿಯೊಬ್ಬರೂ ವಿಸ್ಮಯದಿಂದ ಕಣ್ತುಂಬಿಕೊಂಡರು.
               `ದ್ಯಾವಾ.. ಮರಕಡೀಲಿಕ್ಕೆ ಅಂತ ದಡೆ ಮಾಡ್ತಾರಂತಲ್ಲ.. ಅದನ್ನು ತೋರ್ಸು.. ಹೆಂಗಿರ್ತದೆ ಅಂತ ನೋಡಬೇಕು..' ಎಂದ ವಿಕ್ರಂ ದ್ಯಾವನ ಬಳಿ.
             `ಹ್ವಾಯ್.. ನಿಮ್ದು ಯಾವ್ ಊರು ಹೇಳಿ .. ' ಎಂದ ದ್ಯಾವ.
            `ಯಲ್ಲಾಪುರ ಮಾರಾಯಾ.. ಯಾಕ್ ಕೇಳ್ತಾ ಇದ್ದೀಯೋ..' ಎಂದ ವಿಕ್ರಂ.
             `ಅಲ್ಲಾ ಯಲ್ಲಾಪುರದವರು ಅಂತೀರಾ ನೀವ್ ದಡೆ ನೋಡಿಲ್ಲಾ ಅಂದ್ರೆ ನಗು ಬರ್ತೈತಿ. ನೀವ್ ಮಜಾ ಇದ್ದೀರಿ ಬಿಡಿ..' ಎಂದ ದ್ಯಾವ. `ಇಲ್ಲಾ ಮಾರಾಯಾ.. ಚಿಕ್ಕಂದಿನಿಂದ ಪೇಟೆಯ ಕಡೆಯಲ್ಲಿ ಬೆಳೆದೆ ನೋಡು.. ಅದಕ್ಕೆ ದಡೆಯ ಬಗ್ಗೆ ಗೊತ್ತಿಲ್ಲ. ಮೊನ್ನೆ ಯಾರೋ ಹೇಳ್ತಾ ಇದ್ರು. ಅದಕ್ಕೆ ನೋಡುವ ಆಸೆಯಾಗ್ತಾ ಇದೆ.. ತೋರ್ಸೋ ಮಾರಾಯಾ..' ಎಂದ ವಿಕ್ರಂ
          ನಂತರ ಗಾಭರಿ ಪಟ್ಟುಕೊಂಡ ದ್ಯಾವ `ಅಲ್ಲಾ..  ಹೊಳೆಯಾಗೆ ಮೀನ್ ಹಿಡಯೋದ್ ತೋರ್ಸಿ ಅಂದ್ರೆ ತೂರುಸ್ತೀನಿ. ಜೇನು ಕೊಯ್ಯೋದು ತೋರ್ಸು ಅಂದ್ರೂ ಸೈ. ನಿಮಗೆಂತಕ್ಕೆ ಹುಚ್ಚು? ಮರ ಕೊಯ್ಯೋ ದಡೆ ನೋಡ್ತೀನಿ ಅಂತೀರಲ್ರೋ.. ಯಾಕ್ರೋ..ದಡೆ ತೋರ್ಸೋದು ಅಂದ್ರೆ ಸುಲಭದಾಗೆ ಐತಿ ಅಂದ್ಕೊಂಡ್ರಾ? ಸುಲಭ ಅಲ್ಲ ನೋಡಿ ಅದು.. ಭಯಂಕರ ಕಷ್ಟ ಉಂಟು.. ನೀವ್ ಹೇಳಿದ್ ಆಗೋದಿಲ್ಲೇಳಿ' ಎಂದು ಕೇಳಿದ್ದ ಆತ.
           `ದ್ಯಾವಾ.. ಪ್ಲೀಸ್ ಕಣೋ.. ತೋರ್ಸು.. ನಾನೂ ನೋಡಿಲ್ಲ..' ಎಂದು ಹೇಳಿದಳು ವಿಜೇತಾ.
           `ನಿಮ್ ಗೆ ಗೊತ್ತಾಗೂದಿಲ್ಲ ನೋಡಿ.. ದಡೆ ನೋಡಾಕ್ ಹೋಗೋದು ಅಂದ್ರೆ ಕಡ್ ಜೇನ್ ಹಲ್ಲೆಗೆ ಕೈ ತಡವಿಕೊಂಡ ಹಂಗೆ. ಭಾರಿ ಸಾಹಸ ಮಾಡಬೇಕು.. ನೀವೋ ವಟಾ ವಟಾ ಅಂತ ಮಾತಾಡ್ತಾ ಇರ್ತೀರಿ.. ಸುಮ್ಮನಿದ್ದರೆ ಏನಾದರೂ ಮಾಡಬೌದಿತ್ತು. ಇನ್ನು ಅಲ್ಲಿ ಯಾರ್ಯಾರು ಮರ ಕಡೀತಾ ಇರ್ತಾರೋ.. ಕೇರಳದ ಮಲಬಾರಿಗಳು, ಸಾಬ್ರು, ನಮ್ಮೂರ್ನವ್ವೇ ಒಂದಷ್ಟ್ ಮರಗಳ್ಳರು.. ಹಿಂಗೆ ಬಹಳಷ್ಟ್ ಮಂದಿ ಇರ್ತಾರೆ ನೋಡಿ. ನೆತ್ತಿ ಸುಡೋ ಬಿಸಿಲ್ನಾಗೂ ಟೈಟ್ ಆಗಿ ಮರ ಕಡಿತಾ ಇರ್ತಾರೆ. ಹೆಂಗೆಂಗೋ ಇರ್ತಾರೆ ಮಾರಾಯ್ರಾ.. ಅದನ್ನ ಹೇಳೋದ್ ಕಷ್ಟ. ನಾವ್ ನೋಡಾಕ್ ಹೋಗೋದು, ನಮ್ ಮ್ಯಾಗೆ ಗಲಾಟೆಗೆ ಬರೋದು.. ಅದು ಗಲಾಟೆಗೆ ನಿಲ್ಲದೇ ಮತ್ತಿನ್ನೇನೋ ಆಗೋದು.. ಇದೆಲ್ಲಾ ಬ್ಯಾಡ್ರಾ.. ಅವ್ರು ಕೊಲ್ಲೋದಕ್ಕೂ ಹೇಸಾದಿಲ್ಲ ನೋಡಿ.. ನಿಮ್ಮನ್ನ ಕರೆದುಕೊಂಡ್ ಹೋಗಿದ್ದು ನಾನು ಅಂತ ಗೊತ್ತಾದ್ರೆ ಸಾಕು.. ನನ್ನ ಹೆಣಾ ಉರುಳ್ತಾವೆ.. ಗೊತ್ತೈತಾ.. ಸುಮ್ಕಿರಿ..' ಎಂದು ಹೇಳಿದ ದ್ಯಾವ. ದ್ಯಾವನ ಮಾತಿನಿಂದ ಆ ಊರಿನ ಸುತ್ತಮುತ್ತಲ ನಡೆಯುತ್ತಿದ್ದ ಕರಾಳ ದಂಧೆಗಳ ಒಂದು ಪುಟ ತೆರೆದುಕೊಂಡಂತೆ ಅನ್ನಿಸುತ್ತಿತ್ತು. ಕೆಲವರ ಮನದಲ್ಲಿ ಭೀತಿಯ ಸೆಳಕು ಮೂಡಿತು.
             `ಹೆ. ಹೆ.. ಹೋಗೋ ದ್ಯಾವಾ.. ನಾವೆಂತಾ ಸುಮ್ಮನಿದ್ದು ಬಿಡ್ತೀವಾ.. ನಮ್ಮ ಮೇಲೆ ಅವರೇನಾದ್ರೂ ಬಂದ್ರು ಅಂತಾದ್ರೆ ನಾವೂ ತಿರುಗಿ ಬಿದ್ದರಾಯ್ತು.. ಹೊಡೆದಾಟವಾದರೂ ಸೈ.. ನಾವ್ ಇಷ್ಟೆಲ್ಲ ಜನ ಇಲ್ವಾ ದಾಂಢಿಗರು..' ಎಂದ ಪ್ರದೀಪ ತಮಾಷೆಯಾಗಿ.
             ಅದಕ್ಕೆ ಒಂದು ಸಾರಿ ನಕ್ಕ ದ್ಯಾವ `ನಿಮ್ಗೆ ತಮಾಷ್ಗಿ.. ಎಂತಾ ಗೊತ್ತೈತ್ರಾ ನಿಮ್ಗೆ.. ನಾಟಾ ಕೊಯ್ಯುವವರ ಸುದ್ದಿ..? ಬ್ಯಾರಿಗಳು ಅವ್ರು. ಅವರ ಉಸಾಬರಿಗೆ ಹೋಗೋದು ಒಂದೇ.. ನಮ್ ಶಿಖಾರಿ ನಾವ್ ಮಾಡ್ಕೊಳೋದೂ ಒಂದೆ ನೋಡಿ.. ಈಗೊಂದ್ ಇಪ್ಪತ್ ವರ್ಷದ ಹಿಂದೆ ಸಿರ್ಸಿ ಹತ್ರಕ್ಕೆ ಹೆಗಡೆಕಟ್ಟೆ ಐತಲ್ರಾ.. ಅದರ ಬುಡುಕೆ ಒಬ್ಬ ರೇಂಜರ್ನೇ ಜೀಪ್ ಹತ್ತಿಸಿ ಸಾಯಿಸಿದ್ದರು. ಅಂತ ಪಾರೆಸ್ಟ್ ಅಧಿಕಾರಿನೇ ಕೊಂದು ದಕ್ಕಿಸಿಕೊಂಡವರೆ.. ನಮ್ಮನ್ನ ಸುಮ್ಕೆ ಬಿಡ್ತಾರಾ..? ನಿಮಗೆ ಮಾಡಾಕ್ ಹ್ವಾರ್ಯ ಇಲ್ಲ ಅಂದ್ರೆ ಹೇಳಿ ಕಬ್ಬಿಗ್ ಮಣ್ ಹಾಕೂದ್ ಐತಿ.. ಎಲ್ಲಾ ಸೇರಿ ಮಾಡ್ವಾ.. ಸೇರೆಗಾರ್ಕೆ ನಾ ಮಾಡ್ತೆ.. ನಿಮ್ಗೆ ಸಂಬಳಾ ನೂ ಕೋಡ್ತೆ..' ಎಂದು ಗಂಭೀರವಾಗಿ ಉತ್ತರಿಸಿದ್ದ ದ್ಯಾವ.
              `ಹೋಗ್ಲಿ ಬಿಡೋ ದ್ಯಾವ.. ಅಷ್ಟೆಲ್ಲಾ ತೊಂದ್ರೆ ಉಂಟು ಅಂತಾದ್ರೆ ಈಗ ಬ್ಯಾಡಾ.. ಮತ್ಯಾವಾಗ್ಲಾದ್ರೂ ತೋರಿಸಬೌದಂತೆ.. ಈಗ್ ಎಲ್ಲಾ ಮನೆಗೆ ಹೋಗೋಣ ನಡೀರಿ..' ಎಂದ ವಿಕ್ರಮ. ಎಲ್ಲರೂ ಹೊರಡಲು ಅನುವಾದರು. `ಈಗಲ್ಲಾ.. ನೀವ್ ಯಾವಾಗ್ ತೋರ್ಸಾಕೆ ಬನ್ನಿ ಅಂದ್ರೂ ನಾ ಬರೋದಿಲ್ರೋ.. ನಂಗೆಂತಕ್ಕೆ ಬೇಕ್ರಾ ಬೆಂಕಿ ಜೊತೆ ಆಟ..' ಎಂದು ಕಡ್ಡಿ ಮುರಿದಂತೆ ಹೇಳಿದ ದ್ಯಾವ. ಎಲ್ಲರೂ  ಮೌನವಾಗಿ ಮನೆಯ ಕಡೆ ಹೆಜ್ಜೆ ಹಾಕಿದರು.

***

                 ಈ ಊರಿನ ಸುತ್ತ ಅನೇಕ ಚಿತ್ರ ವಿಚಿತ್ರ ಹೆಸರಿನ ಊರುಗಳಿವೆ. ಮುತ್ತಮೂರ್ಡು, ಅಡಕಳ್ಳಿ, ಕೋಡಶಿಂಗೆ, ಸಂಕದಮನೆ, ಹೊಸಮನೆ, ಬೇಣದಗದ್ದೆ, ಹಿತ್ತಲಕೈ ಹೀಗೆ ವಿಶಿಷ್ಟ, ವಿಚಿತ್ರ ಹೆಸರಿನ ಊರುಗಳು. ಊರಿನ ತುಂಬಾ ಕಾಡು. ಊರು ಊರುಗಳ ನಡುವೆಯೂ ಕಾಡು. ದೊಡ್ಡದೊಂದು ಗುಡ್ಡ. ಗುಡ್ಡದ ತಪ್ಪಲಲ್ಲಿ ಮನೆಗಳು. ಯಾವುದೇ ಊರಿನಲ್ಲೂ 20ಕ್ಕಿಂತ ಹೆಚ್ಚಿನ ಮನೆಗಳಿಲ್ಲ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕೆಂದರೂ ಕನಿಷ್ಟ 2 ಕಿ.ಮಿ ನಡೆದಾಡಲೇ ಬೇಕು. ಒಂದು ಪಕ್ಕದಲ್ಲಿ ಅಘನಾಶಿನಿ ನದಿ. ಇನ್ನುಳಿದಂತೆ ಎಲ್ಲ ದಿಕ್ಕುಗಳಲ್ಲಿಯೂ ದಟ್ಟ ಕಾಡಿನಿಂದ ಕೂಡಿದ ಗುಡ್ಡ, ಬೆಟ್ಟ. ನಡು ನಡುವೆ ಅಡಿಕೆಯ ತೋಟಗಳು. ತುಣುಕು ತುಣುಕು ಗದ್ದೆಗಳ ಸಾಲುಗಳು. ಈ ಭಾಗದ ಕಾಡಂತೂ ಬೀಟೆ, ತೇಗ, ಹುನಾಲು, ಜಂಬೆ, ಮತ್ತಿಗಳಂತಹ ಬೆಲೆಬಾಳುವ ಮರಗಳ ತೊಟ್ಟಿಲು. ನಮ್ಮೂರಲ್ಲಿರೋದು ಆರೇ ಮನೆಗಳು ನೋಡಿ. ಊರಿನಲ್ಲಿ ಬಹುತೇಕರು ಕೃಷಿಕರು. ಹೊಸ ತಲೆಮಾರಿನ ಜನ ಊರಿನಿಂದ ಹೊರಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ  ಎಂದು ತನ್ನೂರಿನ ಬಗ್ಗೆ ವಿವರಣೆ ನೀಡಿದ ವಿನಾಯಕ.
                 `ಮತ್ತೇನಾದ್ರೂ ವಿಶೇಷ ಇದೆಯಾ ವಿನಾಯಕ್..' ಅಂದ ಪ್ರದೀಪ.
                 `ಇದೆ. ಶೇಡಿಮಣ್ಣು ಅಂತೊಂದು ಅಪರೂಪದ ಮಣ್ಣು ನಮ್ಮೂರಿನಲ್ಲಿ ಸಿಗುತ್ತೆ. ಶೇಡಿ ಮಣ್ಣಿನ ಗುಡ್ಡವೇ ಇಲ್ಲಿದೆ. ಅದೇ ಕಾರಣಕ್ಕೆ ನಮ್ಮೂರನ್ನು ಶೇಡಿ ದಂಟಕಲ್ ಎಂದೂ ಕರೆಯಲಾಗುತ್ತದೆ. ಇನ್ನೂ ವಿಶೇಷತೆಗಳಿವೆ. ನಮ್ಮೂರಲ್ಲಿ ಈಗ್ಗೆ 50-60 ವರ್ಷಗಳ ಹಿಂದೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಇನ್ನೂ ಒಂದ್ ವಿಶೇಷತೆ ಇದೆ ನೋಡಿ. ನಮ್ಮೂರಿನಲ್ಲಿ ಅನಂತ ಭಟ್ಟನ ಅಪ್ಪೆ ಎನ್ನುವ ಮಿಡಿಮಾವು ಸಿಗುತ್ತದೆ. ಈ ಅಪ್ಪೆ ಮಿಡಿ ಜಗತ್ತಿನಲ್ಲಿಯೇ ಅತ್ಯುತ್ಕೃಷ್ಟ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಅಪ್ಪೆ ಮಿಡಿ ನಮ್ಮೂರಿನಲ್ಲಿ ಸಿಗುತ್ತದೆ. ತಳಿ ಉಳಿಸಿದ ಖ್ಯಾತಿ ನಮ್ಮೂರಿನದ್ದು.. ಇದೊಂಥರಾ ಅಪರೂಪದ ಊರು..' ಎಂದ ವಿನಾಯಕ.
                `ಓಹ್.. ಅನಂತ ಭಟ್ಟನ ಅಪ್ಪೆ ಮಿಡಿಯ ಬಗ್ಗೆ ಯಾವಾಗಲೋ ಓದಿದ್ದೆ. ಕಳವೆಯವರು ಇದರ ಬಗ್ಗೆ ಬರೆದ ಹಾಗೆ ನೆನಪು. ಆಮೇಲೆ ದಕ್ಷಿಣ ಕನ್ನಡದ ಕೋಟಕ್ಕೆ ಯಾವುದೋ ಸುದ್ದಿಗೆ ಹೋಗಿದ್ದೆ. ಅಲ್ಲಿ ಶಿವರಾಮ ಕಾರಂತರ ಅಣ್ಣ ಕೋ. ಲ. ಕಾರಂತರ ಮನೆಯಿದೆ. ಫಾರ್ಮೊಂದಿದೆ. ಅಲ್ಲಿ ಅನಂತ ಭಟ್ಟನ ಅಪ್ಪೆ ಮರಗಳನ್ನು ಕಂಡಿದ್ದೆ. ಆಗ ಯಾರೋ ಈ ಊರಿನ ಸುದ್ದಿ ಹೇಳಿದ್ದ ನೆನಪು.. ವಾವ್.. ಸಖತ್ತಾಗಿದೆ. ಏನೆಲ್ಲಾ ವಿಶೇಷತೆಗಳು ನೋಡಿ. ವಿನಾಯಕ್ ನಾಳೆನೇ ಈ ಎಲ್ಲ ವಿಶೇಷತೆಗಳನ್ನು ನಮಗೆ ತೋರಿಸಿ..' ಎಂದಳು ವಿಜೇತಾ.
                 `ಓಹ್.. ಖಂಡಿತ.. ನಿಮಗೆಲ್ಲ ಇದನ್ನು ತೋರಿಸುತ್ತೇನೆ. ನಮ್ಮೂರಿಗೆ ಬಂದವರಿಗೆ ನಮ್ಮೂರಿನ ವಿಶೇಷತೆಗಳನ್ನು ತೋರಿಸದಿದ್ದರೆ ಹೇಗೆ ಹೇಳಿ..' ಎಂದ ವಿನಾಯಕ.
                 ಎಲ್ಲರೂ ಹೂಂ ಎಂದರು. ಎಲ್ಲ ಪುಂಗವರಿಗೆ ಊರಿನ ಬಗ್ಗೆ ಇದ್ದ ಕುತೂಹಲ ದುಪ್ಪಟ್ಟಾಯಿತು. ಜೊತೆಗೆ ಅಪ್ಪಟ ಮಲೆನಾಡಿನೊಳಗೆ ಹುದುಗಿರುವ ಊರೊಂದರ ವೈಶಿಷ್ಟ್ಯತೆಗಳ ಬಗ್ಗೆ ಕುತೂಹಲ ಮೂಡಿತು.
                ಮಲೆನಾಡೇ ಹಾಗೆ. ನಿಗೂಢ, ಅಬೇಧ್ಯ. ಇದೊಂಥರಾ ಸೊಕ್ಕಿದ ಕಾಡಾನೆಯಂತೆ. ಯಾರ ಅಂಕೆಗೂ ಸಿಲುಕದು. ಜಂಬಂಧ ಹೆಣ್ಣಿನಂತೆ ಯಾರನ್ನೂ ಗಮನಿಸುವುದಿಲ್ಲ. ಯಾರಿಗೂ ಸಲಾಂ ಹೊಡೆಯುವುದಿಲ್ಲ. ಪಟ್ಟಾಗಿ ಹೊರಟು ಎಷ್ಟು ಒಳಹೋಗಲು ಪ್ರಯತ್ನ ಪಟ್ಟರೂ ಒಳಹೋಗಲು ಸಾಧ್ಯವೇ ಇಲ್ಲ ಅನ್ನುವಷ್ಟು ಜಿಗ್ಗು. ಮೈ ಕೈ, ಬಟ್ಟೆ ಕಿತ್ತು ಬಿಡುವಷ್ಟು ಮುಳ್ಳು, ತರಚು. ಬಿಡಿಸಲಾಗದ ಸಿಕ್ಕು ಸಿಕ್ಕು ಗಂಟೆ. ಏನು ಇಲ್ಲದಾಗ ಸುಮ್ಮನೆ ತೆರೆದುಕೊಳ್ಳುವ ಜಾಗ. ವೈಚಿತ್ರ್ಯ-ವೈಶಿಷ್ಟ್ಯ. ಇಂಥ ಮಲೆನಾಡಿಗೆ ಬಂದು ಕಾಲಿಟ್ಟಿದೆ, ಒಳಹೊಕ್ಕಿದೆ. ನಿಧಾನವಾಗಿ ಸಿಕ್ಕು ಸಿಕ್ಕಾಗುತ್ತಿದೆ. ಜಡಕಾಗುತ್ತಿದೆ. ಸದ್ದಿಲ್ಲದೇ ಈ ಗುಂಪು ಒಳಕ್ಕೆ ಹೋಗಿ ಸಿಲುಕಿಕೊಳ್ಳುತ್ತಿದೆ. ಮುಂದೇನು? ವಾಪಾಸು ಬರುತ್ತಾರೆಯೇ? ಎಲ್ಲವೂ ಆಲೋಚನೆ ಮಾಡಿದಷ್ಟೂ ನಿಗೂಢ, ವಿಸ್ಮಯ.

(ಮುಂದುವರಿಯುತ್ತದೆ)

Tuesday, March 17, 2015

ಅಂ-ಕಣ-3

ಸುಮ್ನೇ ಕೇಳಕಂಡಿದ್ದು :-
ಸಮಾಜಕ್ಕೆ ಬುದ್ಧಿ ಹೇಳೋ ಪತ್ರಕರ್ತರಿಗೆ ಹಳ್ಳಿ ದಾರಿ ಕಾಣಿಸುತ್ತಿಲ್ಲ..
ಇನ್ನು ಈ ಜಮಾನಾದ ಯುವಕರಿಗೆ ಕಾಣಿಸುತ್ತಾ?

ಪ್ರಶ್ನೋತ್ತರ ಕಾಂಡ
ನಾನು ಹೇಳಿದೆ :
ಹಳೆಯ ಕವಿತೆ ಮತ್ತೆ ಸಿಕ್ಕಿದೆ
ನೆನಪಾಗಿದೆ
ಅವಳು ಕೇಳಿದ್ದು :
ಯಾರವಳು ಕವಿತಾ?

ಸರಣಿ-ಸರಪಣಿ
ಮೂರು ವರ್ಷದ ಹಿಂದೆ ದಾಂಡೇಲಿಯಲ್ಲಿ ಎಸಿಎಫ್ ಮದನ ನಾಯ್ಕ
ಒಂದೂವರೆ ವರ್ಷದ ಹಿಂದೆ ಪೊಲೀಸ್ ಅಧಿಕಾರಿ ಬಂಡೆ..
ಇದೀಗ ಡಿ. ಕೆ. ರವಿ.
ಇನ್ನೆಷ್ಟು ಬಲಿ ಬೇಕು ಪ್ರಾಮಾಣಿಕರದ್ದು?
ಇಷ್ಟೆಲ್ಲ ಬಲಿಯಾಗುತ್ತಿದ್ದರೂ ನಿದ್ದೆರಾಮಯ್ಯ ಇನ್ನೂ ಎದ್ದಿಲ್ಲವಲ್ಲ..

ಪಾದಯಾತ್ರೆ ಪುರಾಣ
2012ರ ವಿಧಾನಸಭಾ ಚುನಾವಣೆಗೂ ಮುನ್ನ ಬಳ್ಳಾರಿ ಸರಿಯಿಲ್ಲ ಅಂತ ನಿದ್ದೆರಾಮಯ್ಯ ಪಾದಯಾತ್ರೆ ಮಾಡಿದರು.
ಇದೀಗ ನಿದ್ದೆರಾಮಯ್ಯರ ನೇತೃತ್ವದಲ್ಲಿ ಕರ್ನಾಟಕವೇ ಸರಿಯಿಲ್ಲವಲ್ಲ..
ಹೇಳಿ ಎಲ್ಲಿಗೆ ಪಾದಯಾತ್ರೆ ಮಾಡೋಣ?

ಸಿಕ್ಕಾಪಟ್ಟೆ ಅಸಮಧಾನ:
ಬಳ್ಳಾರಿಗರ ಕಂಡು
ತೊಡೆತಟ್ಟಿ ನಿಂತಿದ್ದ ನಿದ್ದೆರಾಮಯ್ಯ
ಬೆಂಗಳೂರನ್ನೇ ಕಂಡು
ತೊಡೆಮುರಿದು ಬಿದ್ದಿದ್ದಾನೆ |

Monday, March 16, 2015

ಒಲವಿನ ಪಯಣ

ನೀನು ನನ್ನ ಬಾಳಿಗೆ
ಅರಿವಿನ ಮುನ್ನುಡಿ
ನಿನ್ನ ಕಣ್ಣು ನನ್ನ ಪಾಲಿ-
ಗೆಂದೂ ಒಂದು ಕನ್ನಡಿ ||

ಕಣ್ಣ ರೆಪ್ಪೆಯಾಗಿ ನಾನು
ನಿನ್ನನೆಂದೂ ಕಾಯುವೆ
ಒಲವ ಧಾರೆ ಸುರಿಸುತಿರಲು
ನಿನ್ನ ಜೊತೆಗೆ ಬಾಳುವೆ ||

ನಿನ್ನ ಬಿಂಬ ನನ್ನ ಮನಕೆ
ತಂಗಾಳಿಯಂತೆ ತಂಪು
ನಿನ್ನ ದನಿಯು ಕಿವಿಗೆ ಸೂಕಿ
ಹೃದಯದೊಳಗೆ ಇಂಪು ||

ನಾನು-ನೀನು ಒಂದೆ ಜೀವ
ಒಲವೆಂದೂ ಒಜ್ಜೆ
ಜೊತೆ ಜೊತೆಯಲಿ ಒಂದಾಗಿ
ಹಾಕೋಣ ಹೆಜ್ಜೆ ||

***
(ಈ ಕವಿತೆಯನ್ನು ಬರೆದಿರುವುದು ಮಾ.16, 2015ರಂದು ಶಿರಸಿಯಲ್ಲಿ)

Friday, March 13, 2015

ಅಂ-ಕಣ-2

ಅವಳಿಗಳಿಗೆ ಇಡುವ ಹೊಸ ತರಹದ ಹೆಸರು
ಹೊಸ ಹೆಸರಿನ ಫ್ಯಾಷನ್ ಹೀಗೂ ಇರ್ತವೆ ನೋಡಿ

ನಂದನಾ-ನಿಂದನಾ

ಸುಮ್ಮನೆ ಒಂದು ಲೈನ್, ತೀರಾ ಬುದ್ಧಿಜೀವಿ ಅಂದ್ಕೋಬೇಡಿ..

ಕೆಲವು ಪ್ರಶ್ನೆಗಳಿಗೆ ಉತ್ತರ ಬರುವುದಿಲ್ಲ ಎನ್ನುವುದು ಗೊತ್ತಿದ್ದರೂ
ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ.
ಕೇಳಿಕೊಳ್ಳುತ್ತಲೇ ಇರುತ್ತೇವೆ ||

ಹೀಗೊಂದ್ ಪಂಚಿಂಗ್ ಲೈನ್ :

ನಿನ್ನ ಕಣ್ಣು ಬಹಳ ಚನ್ನಾಗಿದೆ.. ಕಣೇ ಗೆಳತಿ..
ನನ್ನ ಕಣ್ಣೇ ಬಿದ್ದು ಬಿಟ್ಟಾತು,,||

ಮತ್ತೊಂದ್ ಸ್ವಲ್ಪ ತಮಾಷೆ :

ದನಗಳಲ್ಲಿ ಒಳ್ಳೆಯ ದನ
ವಂ-ದನ
ಮನುಷ್ಯರಲ್ಲಿ ಒಳ್ಳೆಯ ದನ
ಚಂ-ದನ ||

ಒಂಚೂರು ದೇಶಪ್ರಮೇದ ಹನಿ :

ದೇಶದ ಗಡಿ
ಬಿಡಿಯಲ್ಲಿ ಸದಾ
ಭಾನಗಡಿಯಾದರೂ
ಗಂಡಾಗುಂಡಿಯಾಗುತ್ತಿದ್ದರೂ
ಉಗ್ರರು ದಾಂಗುಡಿ ಇಡುತ್ತಿದ್ದರೂ
ಜೀವ ಪಣಕ್ಕೊಡ್ಡಿ
ಕಾಯುವನು ಯೋಧ ||

ಕಾಡುವ ಹುಡುಗಿ

(ರೂಪದರ್ಶಿ : ಅನೂಷಾ ಹೆಗಡೆ)
ಕಾಡುತಾವೆ ಕಣೆ ಗೆಳತಿ
ನಿನ್ನ ಕಣ್ಣು
ನನ್ನ ಪಾಲಿಗೆ ನೀನೆ
ಪ್ರೀತಿಯ ಹೆಣ್ಣು ||

ನಿನ್ನ ಕಣ್ಣಲೊಂದು ಕಾಂತಿ
ನನ್ನ ಮನವ ಸೆಳೆದಿದೆ
ಬಿಟ್ಟೂ ಬಿಡದೆ ನಿನ್ನ ಕಡೆಗೆ
ನನ್ನ ಎಂದೂ ಎಳೆದಿದೆ ||

ಕಣ್ಣ ಕನಸು ಕರಗದಿರಲಿ
ನಗುತ ನೀನು ನಲಿದಿರು
ಕಣ್ಣ ಹನಿಯು ಜಾರದಿರಲಿ
ಮನಸು ನಕ್ಕು ಮೆರೆದಿರು ||

ನೀನೆ ನನ್ನ ಪಾಲಿಗೆಂದೂ
ಸದಾ ಚಿನ್ನ ರನ್ನ
ನಿನ್ನ ನೆನೆಯಲೆಂದೂ ಮನಕೆ
ಅದುವೆ  ಸುಣ್ಣ-ಬಣ್ಣ ||

ಕಣ್ಣು ಸಣ್ಣ ನೆಪ ಮಾತ್ರ
ನನ್ನ ಮನಸು ನಿನ್ನಲಿ
ಸದಾ ಕಾಲ ನಿನ್ನ ನೆನಪು
ಎದೆಯಲಿ ತುಂಬಲಿ

**

(ಈ ಕವಿತೆಯನ್ನು ಬರೆದಿರುವುದು 13-03-2015ರಂದು ಶಿರಸಿಯಲ್ಲಿ)
(ರೂಪದರ್ಶಿ ಅನೂಷಾ ಹೆಗಡೆ ಧನ್ಯವಾದಗಳು)

ಇತಿಹಾಸ ಹಾಗೂ ಪ್ರಕೃತಿಯ ವಿಸ್ಮಯ : ನಿಘೂಡ ಮಣ್ಣಿನ ಬೊಂಬೆಗಳು

ತರಹೇವಾರಿ ಮಣ್ಣಿನ ಗೊಂಬೆಗಳು, ಬೇರೆ ಬೇರೆ ರೀತಿಯ ಮಣ್ಣಿನ ಆಕೃತಿಗಳು, ನೀರಿನ ಹೂಜಿ, ಸ್ತ್ರೀ, ಕೊಡ, ಹೂದಾನಿ ಸೇರಿದಂತೆ ಬಗೆ ಬಗೆಯ ಮಡಿಕೆಯ ಚಿತ್ತಾರಗಳು. ಇವು ಶಿರಸಿ ತಾಲೂಕಿನ ಮುಷ್ಕಿ-ಶಿರಗುಣಿ ಸನಿಹದ ದೇವರ ಕಾಡಿನಲ್ಲಿ ಕಂಡಂತಹ ವಿಸ್ಮಯ.
ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ಮಣ್ಣಿನ ಗೊಂಬೆಗಳು ಹಾಗೂ ಮಣ್ಣಿನ ವಿಚಿತ್ರ ಆಕೃತಿಗಳು ಸಿಗುತ್ತವೆ. ಮುಷ್ಕಿ-ಶಿರಗುಣಿ, ವಾನಳ್ಳಿ, ಜಡ್ಡೀಗದ್ದೆ, ಬಂಡಲ, ಸಾಲಕಣಿ ಅಲ್ಲದೇ ಸಿದ್ದಾಪುರ ತಾಲೂಕಿನ ಹಿತ್ತಲಕೈ ಈ ಮುಂತಾದ ಪ್ರದೇಶಗಳಲ್ಲಿ ಮಣ್ಣಿನ ಗೊಂಬೆಗಳು ಕಣ್ಣಿಗೆ ಬೀಳುತ್ತವೆ. ಈ ಗೊಂಬೆಗಳು ಸಿಗುವ ಪ್ರದೇಶದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಾಕದೇ ಇರುವಷ್ಟು ದಟ್ಟವಾದ ಕಾಡಿದೆ. ಸ್ಥಳೀಯರು ಇಂತಹ ಮಣ್ಣಿನ ಗೊಂಬೆಗಳು ಸಿಗುವ ಸ್ಥಳಕ್ಕೆ ದೇವರಿಗೆ ಸೇರಿದ ಪ್ರದೇಶ ಎಂದು ಕರೆಯುತ್ತಾರೆ. ಈ ಕಾಡಿನ ಜಾಗವನ್ನು ದೇವರ ಕಾನು ಎಂದೂ ಕರೆಯುತ್ತಾರೆ.
ಸ್ಥಳೀಯರ ಪ್ರಕಾರ ಇಂತಹ ಪ್ರದೇಶದಲ್ಲಿ ಪ್ರತಿ ವರ್ಷ ಮಡಿಕೆಗಳು ಏಳುತ್ತವಂತೆ. ವರ್ಷಂಪ್ರತಿ ಹೊಸ ಹೊಸ ಮಡಿಕೆ ಆಕೃತಿಗಳು ಮನ್ಣಿನ ಆಳದಿಂದ ಮೇಲೆ ಬರುತ್ತವಂತೆ. ಇಂತಹ ಆಕೃತಿಗಳನ್ನು ವರ್ಷಕ್ಕೊಮ್ಮೆ ಪೂಜೆ ಮಾಡಿ ನಂತರ ಅವನ್ನು ಒಂದೆಡೆ ಗುಡ್ಡದಂತೆ ಪೇರಿಸಿ ಇಡಲಾಗುತ್ತದೆ. ತಾಲೂಕಿನ ಶಿರಗುಣಿಯ ಬಳಿಯಲ್ಲಿ ಮಣ್ಣಿನ ಮಡಿಕೆಯ ವಿಚಿತ್ರ ಆಕೃತಿಗಳ ಗೊಂಬೆಗಳನ್ನೆಲ್ಲ ಒಂದೆಡೆ ಸೇರಿಸಿ ಚಿಕ್ಕದೊಂದು ದಿಬ್ಬವನ್ನೇ ಮಾಡಲಾಗಿದೆ. ಇಲ್ಲಿ ಎರಡು ದೈತ್ಯ ಹುತ್ತಗಳಿವೆ. ಈ ಹುತ್ತಗಳಿರುವ ಪ್ರದೇಶದಲ್ಲಿ ಮಡಿಕೆಗಳು ಉದ್ಭವವಾಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಹುತ್ತದ ರಕ್ಷಣೆಗಾಗಿ ಗುಡಿಯನ್ನು ನಿರ್ಮಾಣ ಮಾಡಲಾಗಿದೆ. ಸ್ಥಳೀಕವಾಗಿ ನಾಗರ ಬನ ಎಂದು ಕರೆಯಲಾಗುತ್ತಿದೆ. ಜೊತೆ ಜೊತೆಯಲ್ಲಿ ದೇವರ ವಿವಿಧ ಗಣಗಳು ಇಲ್ಲಿವೆ ಎಂದೂ ಹೇಳಲಾಗುತ್ತದೆ.
ಮಾರ್ಚ್ ತಿಂಗಳ ಕೊನೆಯ ಭಾಗ, ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಇಂತಹ ಮಡಿಕೆಗಳು ಏಳುವ ಸ್ಥಳದಲ್ಲಿ ಸ್ಥಳೀಯರು ಪೂಜೆ ಮಾಡುತ್ತಾರೆ. ವಾರ್ಷಿಕವಾಗಿ ಮಾಡುವ ಇಂತಹ ಪೂಜೆಗಳಲ್ಲಿ ಹೊಸದಾಗಿ ಉದ್ಭವವಾದ ಮಣ್ಣಿನ ಮಡಿಕೆಗಳನ್ನು ಪೂಜೆ ಮಾಡಲಾಗುತ್ತದೆ. ಸುಗ್ಗಿ ಹಬ್ಬ ಎಂದೂ ಈ ಪೂಜೆಯನ್ನು ಕರೆಯಲಾಗುತ್ತದೆ. ಬೆಳೆಗಳನ್ನು ಕಾಪಾಡುವ ಸಲುವಾಗಿ ಇಂತಹ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಶಿರಗುಣಿ ಭಾಗದ ಜನಸಾಮಾನ್ಯರು ಹೇಳುತ್ತಾರೆ. ಪೂಜೆಯ ಸಂದರ್ಭದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಸ್ಥಳೀಯರ ಪ್ರಕಾರ ಇಂತಹ ವಾರ್ಷಿಕ ಪೂಜೆಗೆ ಗಾಮನ ಹಬ್ಬ ಎಂದೂ ಕರೆಯಲಾಗುತ್ತದೆ.
ನೆಲದಿಂದ ತನ್ನಿಂದ ತಾನೆ ಮಣ್ಣಿನ ಮೂರ್ತಿಗಳು ಹುಟ್ಟಿ ಬರುತ್ತವೆ. ಇದು ವಿಸ್ಮಯವನ್ನು ಮೂಡಿಸುತ್ತದೆ. ವರ್ಷದ ಎಲ್ಲಾ ಸಮಯದಲ್ಲಿಯೂ ಮಣ್ಣಿನ ಆಕೃತಿಗಳು ಮೂಡಿ ಬರುತ್ತವೆ. ಹೀಗೆ ಮಣ್ಣಿನ ಮೂರ್ತಿಗಳು ಹುಟ್ಟಿ ಬರುವ ಪ್ರದೇಶದಲ್ಲಿ ದೇವರ ತಾಣಗಳನ್ನು ಮಾಡಲಾಗಿದೆ. ಶಿರಗುಣಿ ಭಾಗದಲ್ಲಿ ಮೂರ್ತಿಗಳು ಉದ್ಭವವಾಗುವ ಪ್ರದೇಶದಲ್ಲಿ ಚೌಡಿ, ನಾಗರು ಸೇರಿದಂತೆ ದೇವ-ದೇವತೆಗಳ 11 ಗಣಗಳಿವೆ ಎನ್ನುವುದು ನಂಬಿಕೆ. ನಮ್ಮಲ್ಲಿ ಪ್ರತಿ ವರ್ಷ ವಿಶೇಷ ಪೂಜೆ ಮಾಡಲಾಗುತ್ತದೆ. ನನ್ನ ಅರಿವಿಗೆ ಬಂದಂತೆ ಕನಿಷ್ಟ 40 ವರ್ಷಗಳಿಂದ ಈ ಪ್ರದೇಶದಲ್ಲಿ ಮಣ್ಣಿನ ಮೂರ್ತಿಗಳು ಹುಟ್ಟುತ್ತಿವೆ. ಒಂದೊಂದು ವರ್ಷ ಒಂದೊ ಎದರೋ ಮೂರ್ತಿಗಳು ಹುಟ್ಟಿದರೆ ಒಂದೊಂದು ವರ್ಷ ಆರೆಂಟು ಮಡಿಕೆಗಳು ಮೇಲೆ ಬರುತ್ತವೆ. ಆದರೆ ಈ ಮಡಿಕೆಯ ಆಕರತಿಗಳು ಹೇಗೆ ಹುಟ್ಟುತ್ತವೆ ಎನ್ನುವುದು ನಮಗೆ ಗೊತ್ತಿಲ್ಲ ಎಂದು ಮುಸ್ಕಿಯ ಎ. ವಿ. ಭಟ್ಟ ಅವರು ಹೇಳುತ್ತಾರೆ.
ಮಣ್ಣಿನ ಮಡಿಕೆಗಳು ಏಳುವ ಸ್ಥಳಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ  ಬೇರೆ ಬೇರೆ ರೀತಿಯ ನಂಬಿಕೆಗಳಿವೆ. ಚೌಡಿಕಟ್ಟೆ, ನಾಗರಬನ, ಬೀರಪ್ಪನ ಕಟ್ಟೆ, ದೇವರ ಕಾನು ಹೀಗೆ ವಿವಿಧ ಹೆಸರುಗಳಿಂದ ಕರೆಯುವ ಈ ಸ್ಥಳಗಳ ಕುರಿತು ಇತಿಹಾಸಕಾರರಾದ ಲಕ್ಷ್ಮೀಶ ಹೆಗಡೆ ಅಧ್ಯಯನವನ್ನು ಮಾಡಿದ್ದಾರೆ. ಪರಿಸರ ಬರಹಗಾರ ಶಿವಾನಂದ ಕಳವೆ ಅವರು ಹಲವಾರು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಇಂತಹ ದೇವರಕಾಡುಗಳನ್ನು ಉಳಿಸುವ ಸಲುವಾಗಿ ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹಲವು ಕ್ರಮಗಳನ್ನು ಕೈಗೊಂಡಿರುವುದೂ ಉಲ್ಲೇಖನೀಯ.
ಆದರೆ ವಾಸ್ತವದಲ್ಲಿ ಇಂತಹ ಪ್ರದೇಶದಗಳಲ್ಲಿ ಮಣ್ಣಿನ ಮಡಿಕೆ ಹುಟ್ಟುತ್ತದೆ ಎನ್ನುವುದು ಸ್ಥಳೀಯರ ಕಲ್ಪನೆಯಾಗಿದೆ. ಇಂತಹ ಮಣ್ಣಿನ ಮಡಕೆಗಳಿಗೆ 2 ಶತಮಾನಗಳ ಇತಿಹಾಸವಿದೆ. ಹಿಂದೆ ಈ ಪ್ರದೇಶಗಳು ಜೈನರ ಆಳ್ವಿಕೆಯ, ಜೈನರು ಪೂಜೆ ಮಾಡುವ ಸ್ಥಳಗಳಾಗಿದ್ದವು. ಜೈನರು ಮಣ್ಣಿನಿಂದ ವಿವಿಧ ಮೂತರ್ಿಗಳನ್ನು ಮಾಡಿ ಪೂಜಿಸಿ ಆ ನಂತರದಲ್ಲಿ ಅವನ್ನು ಮಣ್ಣಿನಲ್ಲಿ ಹೂಳುತ್ತಿದ್ದರು. ಆದರೆ ಕಾಲ ಕ್ರಮೇಣ ಈ ಭಾಗದಲ್ಲಿ ಜೈನರ ಪ್ರಾಬಲ್ಯ ಕಡಿಮೆಯಾಯಿತು. ಮನ್ಣಿನಲ್ಲಿ ಹೂಳಿದ ಮೂತರ್ಿಗಳು ನಿಧಾನವಾಗಿ ಮಳೆಗಾಲದ ಸಂದರ್ಭದಲ್ಲಿ ಭೂಮಿಯಿಂದ ಮೇಲೆ ಬರಲು ಆರಂಭಿಸಿದವು. ಇದನ್ನೇ ಸ್ಥಳೀಯರು ಮಣ್ಣಿನ ಮೂತರ್ಿ ಹುಟ್ಟುವುದು ಎನ್ನುತ್ತಿದ್ದಾರೆ. ಇದರಲ್ಲೇನೂ ನಿಗೂಡತೆಯಿಲ್ಲ ಎಂದು ಇತಿಹಾಸಕಾರರಾದ ಲಕ್ಷ್ಮೀಶ ಹೆಗಡೆ ಸೋಂದಾ ಹೇಳುತ್ತಾರೆ.
***
ಮಣ್ಣಿನ ಮಡಿಕೆಗಳು ಏಳುವ ಸ್ಥಳಗಳು ಶಿರಸಿಯಲ್ಲಿ ಸಾಕಷ್ಟಿವೆ. ಸ್ಥಲೀಯರು ಇಂತಹ ಸ್ಥಳದಲ್ಲಿ ವಾಷರ್ಿಕವಾಗಿ ಪೂಜೆ ಮಾಡುತ್ತಾರೆ. ಇದನ್ನು ಗಾಮನ ಹಬ್ಬ ಎಂದು ಕರೆಯಲಾಗುತ್ತದೆ. ಮಳೆ ಹನಿ ಬಿದ್ದು ಮಣ್ಣಿ ಸಡಿಲವಾದಾಗ ನೆಲದಲ್ಲಿ ಹೂತಿಟ್ಟ ಗೊಂಬೆಗಳು ಮೇಲಕ್ಕೆ ಬರುತ್ತವೆ. ಇದನ್ನು ಸ್ಥಳೀಯರು ಮಡಿಕೆ ಏಳುವುದು ಎನ್ನುತ್ತಾರೆ ಅಷ್ಟೇ. ಈ ಗೊಂಬೆಗಳಿಗೆ 300-400 ವರ್ಷಗಳ ಇತಿಹಾಸವಿದೆ.
ಶಿವಾನಂದ ಕಳವೆ

***

(ಮಾ.13ರಂದು ಕನ್ನಡಪ್ರಭದ ಉತ್ತರ ಕನ್ನಡ ಆವೃತ್ತಿಯಲ್ಲಿ ಪ್ರಕಟವಾಗಿದೆ)

Thursday, March 12, 2015

ವ್ಯತ್ಯಾಸ

ನನ್ನ ಬಳಿ ದುಡ್ಡಿಲ್ಲದಿದ್ದಾಗ
ಅವಳು ಪ್ರೀತಿಸಲಿಲ್ಲ |
ದುಡ್ಡು ಮಾಡಿದ ಮೇಲೆ
ನನಗೆ ಆ ಪ್ರೀತಿ
ಬೇಕೆನ್ನಿಸಲಿಲ್ಲ ||

***

ಬಡತನವಿದ್ದಾಗ ಬಳಿಯಲ್ಲಿ
ಮಿತ್ರರಿದ್ದರು, ನಗುವಿತ್ತು.
ಹರುಷದ ಅಲೆ-ಅಲೆದಿತ್ತು..
ಜೊತೆಗಾರರಿದ್ದರು...
ಸಿರಿ ಬಂದ ನಂತರ ಮಾತ್ರ
ಬದುಕಿಗೆ ವ್ಯವಹಾರವೇ
ಜೊತೆಗಾರನಾಗಿತ್ತು.|

***

ಬಡತನದಲ್ಲಿ ಅರಳುವ
ಪ್ರೀತಿ-ಸಂಭಂಧಗಳು
ಸಿರಿತನದಲ್ಲಿ ಕಮರುತ್ತದೆ
ಅಥವಾ ಅರ್ಥ
ಕಳೆದುಕೊಂಡು ಬಿಡುತ್ತವೆ ||

***

(ಈ ಕವಿತೆಯನ್ನು ಬರೆದಿರುವುದು 07-10-2008ರಂದು ದಂಟಕಲ್ಲಿನಲ್ಲಿ)

Wednesday, March 11, 2015

ಅಂ-ಕಣ

ಲೈಟಾಗಿ ಒಂದ್ ಹನಿ..
ಮತ್ತೆ ಮತ್ತೆ
ಮಾತನಾಡಿದಂತೆಲ್ಲ
ಇನ್ನಷ್ಟು ಹತ್ತಿರ |


ಸುಮ್ಮನೊಂದು ಲೈನ್-
ಅವನು ಸ್ಟಾಂಡ್ ಹಾಕಿ ಹಾಕಿ... ಸ್ಟಾಂಡರ್ಡ್ ಮೆಂಟೇನ್ ಮಾಡಿ ಬಿಟ್ಟ...|


ಚಿಕ್ಕದೊಂದು ಕಥೆ :-

ಇಷ್ಟ ಇದೆ. ಬಹಳ ಕಣೋ..
ಆದ್ರೂ ಏನೋ ತಳಮಳ..
ಒಂದ್ ಕೆಲ್ಸಾ ಮಾಡು..
ನೀನು ಬೇರೆಯವರನ್ನು ನೋಡ್ಕೋ.. ನನ್ನನ್ನು ಬಿಟ್ ಬಿಡು..|

ಮತ್ತೊಂದ್ ಲೈನು :
ಕನಸಿಗೆ
ಇನ್ನೊಂಚೂರು
ಟೈಮ್ ಬೇಕಂತೆ...

ಸುಮ್ನೆ ತಲೆಹರಟೆ :-
ಅವನು ಕಾಲ್ ಮಾಡುವಾಗಲೆಲ್ಲಾ ಕಾಲರ್ ಎತ್ತುತ್ತಾನೆ...

ಅಪಾರ್ಥ :-
ರಸ್ತೆಯಲ್ಲಿ ನಿಂತುಕೊಂಡಿದ್ದೆ.. ರೀ.. ಎತ್ರಿ... ಎಂದೆ..
ಗುರಾಯಿಸಿದಳು..
ರೀ..ಮೇಡಂ.. ನಂಗೆ ಅರ್ಜೆಂಟಿದೆ.. ಬೇಗ ಎತ್ರೀ ಎಂದೆ..
ಯಾಕೋ ಹೆಂಗೈತಿ ಮೈಗೆ ಅಂದ್ಲು..
ಥೋ.. ಮೇಡಂ.. ನಂಗೆ ನೇಗನೇ ಹೋಗ್ಬೇಕು.. ತಾವು ಬೇಗನೆ ಎತ್ತಿದ್ರೆ ಚನ್ನಾಗಿತ್ತು ಅಂದೆ..
ಇನ್ನೇನು ಕಪಾಳಕ್ಕೆ ಬೀಳಬೇಕು ಎನ್ನುವಷ್ಟರಲ್ಲಿ
ರೀ ಮೇಡಂ.. ಬೈಕ್ ಎತ್ರೀ.. ಏನ್ ರಿ.. ಆವಾಗಿಂದ ಹೇಳ್ತಾ ಇದ್ದೀನಿ.. ಎತ್ತೋಕಾಗಲ್ವಾ.. ರಸ್ತೆಗೆ ಅಡ್ಡ ಹಾಕಿದ್ದೀರಲ್ರೀ.. ಎಂದೆ..
ಸರಿಯಾಗಿ ಹೇಳೋಕೇನಾಗಿತ್ತು ನಿಮಗೆ.. ಎಂದು ಬೈದಳು ಮೇಡಂ.. ಸುಮ್ಮನಾದರೆ..
ಜನ ಎಂತಾ ವಿಚಿತ್ರ ಅಲ್ಲಾ.. ಬರೀ ಅಪಾರ್ಥ ಮಾಡ್ಕೋತಾರೆ..||

Tuesday, March 10, 2015

ಬೆಳಕಿನಂತ ಹುಡುಗಿಗೊಂದು ಪತ್ರ -(ಪ್ರೇಮಪತ್ರ-15)

ನನ್ನೊಲವಿನ ಬೆಳಕೆ...,

               ಬಹುಶಃ  ಕ್ರಿಕೆಟಿನಲ್ಲಾಗಿದ್ದರೆ ಶತಕದ ಸಂಭ್ರಮ ಆಚರಣೆ ಮಾಡಬಹುದಿತ್ತು. ಆದರೆ ಇದು ಕ್ರಿಕೆಟ್ ಅಲ್ಲ. ನಮ್ಮದೇ ಬಹುಕು. ಹೌದು ನಾ ನಿನ್ನ ಬಳಿ ಮೊಟ್ಟ ಮೊದಲ ಸಾರಿ ಪ್ರೇಮದ ಕೋರಿಕೆಯನ್ನು ಇಟ್ಟ ನಂತರ ಬಹುಶಃ ಇದು ನೂರೋ ಅಥವಾ ಇನ್ನೂ ಜಾಸ್ತಿಯೋ ಆಗಿರಬೇಕು. ನನ್ನ ಕೋರಿಕೆ ಕಥೆ ಏನಾಯ್ತು ಎಂದು ಕೇಳಿದ್ದು. ಆಗೆಲ್ಲಾ ನೀನು ಹೇಳಿದ್ದೊಂದೇ ಮಾತು ನಂಗಿನ್ನೂ ಸಮಯ ಬೇಕು.
               ನಾನು ನಿನ್ನ ಮೊಟ್ಟಮೊದಲ ಬಾರಿಗೆ ನೋಡಿದ್ದು ಅದ್ಯಾವುದೋ ಸಮಾರಂಭವೊಂದರಲ್ಲಿ. ನೀನು ಹಾಗೂ ನಿನ್ನ ಗೆಳತಿಯರು ಸಮಾರಂಭದ ವೇದಿಕೆಯ ಮೇಲೆ ವಿವಿಧ ಜವಾಬ್ದಾರಿಗಳನ್ನು ಹೊತ್ತುಕೊಂಡು ಪಾತರಗಿತ್ತಿಯಂತೆ ಅತ್ತ ಇತ್ತ ಓಡಾಡುತ್ತಿದ್ದಿರಿ. ನಿನ್ನನ್ನು ನೋಡಿದವನೇ ನಾನು ಬಹುವೇ ಇಷ್ಟ ಪಟ್ಟಿದ್ದೆ. ನಿನ್ನ ಹೆಸರು ಏನಿರಬಹುದು? ನೀನು ಏನು ಮಾಡುತ್ತಿರಬಹುದು ಎಂದೆಲ್ಲಾ ಆಲೋಚಿಸಿ ನಿನ್ನ ಬಗ್ಗೆ ನನ್ನ ದೋಸ್ತರ ಬಳಿ ಕೇಳೋಣ ಎಂದುಕೊಳ್ಳುತ್ತಿದ್ದಾಗಲೇ ಕಾರ್ಯಕ್ರಮ ಆಯೋಜಿಸಿದ್ದವರು ನಿನ್ನ ಹೆಸರನ್ನು ಹೇಳಿದ್ದರು. ಬೆಳಕಿನಂತಹ ಹುಡುಗಿ ನೀನು ನನ್ನ ಮನಸ್ಸಿನಲ್ಲಿ ಆಗಲೇ ಗೂಡು ಕಟ್ಟಿದ್ದೆ.
               ಆ ನಂತರ ನಿನ್ನನ್ನು ನೋಡಬೇಕು, ಮಾತನಾಡಬೇಕು ಎಂದುಕೊಂಡು ನಾನು ಮಾಡಿದ ಕೆಲಸ ಅಷ್ಟಿಷ್ಟಲ್ಲ. ನನ್ನ ದೋಸ್ತರಿಗೆ ನಿನ್ನ ಪರಿಚಯವಿತ್ತಾದರೂ ನಾನು ನಿನ್ನನ್ನು ಪರಿಚಯ ಮಾಡಿಕೊಳ್ಳಬೇಕು ಎಂದುಕೊಂಡೆ. ಗೆಳೆಯರೆಲ್ಲ ಸೇರಿ ಅದೆಲ್ಲೋ ಜಲಪಾತವೊಂದಕ್ಕೆ ಪ್ರವಾಸವನ್ನೂ ಏರ್ಪಡಿಸಿ ನಿನ್ನನ್ನು ಕರೆದಿದ್ದರು. ಖುಷಿಯೆಂಬಂತೆ ನೀನು ಬಂದಿದ್ದೆ. ನನ್ನ ಮನಸ್ಸು ಅರಳಿತ್ತು. ಬಂದವಳನ್ನು ನಾನು ಪರಿಚಯ ಮಾಡಿಕೊಂಡಿದ್ದೆ. ಜಲಪಾತಕ್ಕೆ ಸುಮ್ಮನೆ ಪ್ರವಾಸ ಹೋಗಿದ್ದು ನಾವು. ಜಲಪಾತ ನೋಡಿದ ಖುಷಿಗಿಂತ ನಿನ್ನೊಡನೆ ಮಾತನಾಡಿದ್ದಕ್ಕೆ ಮತ್ತಷ್ಟು ಆನಂದವಾಗಿತ್ತು ನನಗೆ. ಆಗಲೇ ಅಲ್ಲವೇ ನಿನ್ನ ಬಳಿ ನಾನು ಮೊಬೈಲ್ ನಂಬರ್ ಪಡೆದಿದ್ದು.
              ಮೊಬೈಲ್ ನಂಬರ್ ಪಡೆದದ್ದೇನೋ ಆಯ್ತು. ಆಮೇಲೆ ದಿನವಿಡೀ ವಾಟ್ಸಾಪ್ ನಲ್ಲಿ ಚಾಟಿಂಗು ಆರಂಭವಾಯಿತು. ಮೊಬೈಲಿನಲ್ಲಿ ಮಾತು ಕತೆ ಮಧ್ಯ ರಾತ್ರಿಯವರೆಗೂ ಮುಂದುವರಿಯುತ್ತಿತ್ತು. ಆಗಲೇ ನನ್ನೊಳಗೆ ಚಿಗುರಿದ್ದ ನೀನೆಂಬ ಗಿಡ ಮತ್ತಷ್ಟು ಹೆಮ್ಮರವಾಗಲು ಆರಂಭಿಸಿದ್ದು. ಹೀಗಿದ್ದಾಗಲೇ ನನ್ನದೇ ದೋಸ್ತನೊಬ್ಬ ನಿನ್ನ ಬಳಿ ನಾನು ಇಷ್ಟ ಪಡುತ್ತಿರುವುದನ್ನು ಹೇಳಿದ್ದ. ನೀನು ಅಚ್ಚರಿಯಿಂದ ನನ್ನ ಬಳಿ ಕೇಳಿದ್ದೆ `ಯಾಕೆ? ಯಾಕೆ ನನ್ನನ್ನು ಇಷ್ಟಪಟ್ಟೆ' ಅಂತ.
           ನಿನ್ನ ಪ್ರಶ್ನೆಗೆ ನಾನು ಮೊದಲು ತಬ್ಬಿಬ್ಬಾಗಿದ್ದು ನಿಜ. ಆದರೆ ಕೊನೆಗೆ ಸಾವರಿಸಿಕೊಂಡು ನಿನ್ನನ್ನು ಇಷ್ಟ ಪಡಲು ಕಾರಣ ಹೇಳಿದ್ದೆ. ಮಾರುದ್ದದ ಮೆಸೇಜನ್ನು ನಾನು ಅನಾಮತ್ತು 15 ನಿಮಿಷಗಳ ಕಾಲ ಟೈಪ್ ಮಾಡಿ ಬರೆದಿದ್ದೆ. ಆಗೆಲ್ಲಾ ಎಷ್ಟು ಚಡಪಡಿಕೆಯಾಗಿತ್ತು ಗೊತ್ತಾ. ಆದರೆ ಎಲ್ಲವನ್ನೂ ನೀನು ಆವತ್ತೇನೋ ಕೇಳಿದ್ದೆ. ಆದರೆ ನನ್ನ ಪ್ರಶ್ನೆಗೆ ಮಾತ್ರ ಉತ್ತರವನ್ನೇ ಕೊಡಲಿಲ್ಲ.
          ಆ ದಿನದ ನಂತರ ನಾನು ನೀನು ಅದೆಷ್ಟು ಸಾರಿ ಭೇಟಿಯಾಗಿದ್ದೇವಲ್ಲ. ಮಾತನಾಡಿದ್ದೇವೆ. ಮೆಸೇಜ್ ಮಾಡಿಕೊಂಡಿದ್ದೇವೆ. ಪೋನಿನಲ್ಲಿ ಹರಟಿದ್ದೇವೆ. ಮೆಸೇಜ್ ಮಾಡದೇ ಮಿಸ್ ಮಾಡಿಕೊಂಡಿದ್ದೇವೆ. ನಾಟ್ ರೀಚೆಬಲ್ ಆಗಿ ಕಾಡಿಸಿಕೊಂಡಿದ್ದೇವೆ. ನಾನು ಪಿರಿ ಪಿರಿ ಊರು ತಿರುಗುವುದನ್ನು ನೋಡಿ ನಿನ್ನ ಕಾಲಿಗೆ ಚಕ್ರದ ಸುಳಿ ಇದೆಯೇನೋ ಮಾರಾಯಾ ಎಂದೆಲ್ಲ ಕೇಳಿದ್ದು ನನಗಿನ್ನೂ ಹಸಿ ಹಸಿರಾಗಿಯೇ ಇದೆ.
            ಬಹುಶಃ ನಾನು ನೀನು ಮಾತನಾಡಿದ್ದು ಅದೆಷ್ಟು ತಾಸುಗಲೋ. ನೀನು ಒಂದೊಂದು ಅಕ್ಷರವಾಗಿಯೂ ನನ್ನ ಬಳಿ ಉಲಿಯುತ್ತಿದ್ದರೆ ನಾನು ಇಂಚಿಂಚು ನಿನಗೆ ಶರಣಾಗುತ್ತಿದ್ದೆ. ಮನಸ್ಸಿನಲ್ಲಿ ನಿನ್ನದೇ ರೂಪವನ್ನು ಕೆತ್ತಿಕೊಳ್ಳುತ್ತಿದ್ದೆ. ಹಾಗೆ ನೋಡಿದರೆ ನೀನು ನನ್ನ ಬಳಿ ನಕ್ಕು ಮಾತನಾಡಿದ್ದು ಕಡಿಮೆ. ಗಂಭೀರವಾಗಿ ಮಾತನಾಡಿದ್ದೀಯಾ. ಕಾಡಿಸಿದಾಗಲೆಲ್ಲ ಗದರಿದ್ದೀಯಾ. ಆದರೆ ಇವೆಲ್ಲವೂ ನನಗೆ ಇಷ್ಟವಾಗಿದೆ. ನಿನ್ನ ನಗುವಿಗಿಂತಲೂ ಹೆಚ್ಚು ಆಪ್ತವಾಗಿಬಿಟ್ಟಿದೆ.
            ಮೊದಲ ಸಾರಿ ನಾನು ನಿನಗೆ ಪ್ರಪೋಸ್ ಮಾಡಿದ ನಂತರ ಅದೆಷ್ಟು ನೂರು ಸಾರಿ ಕೇಳಿದ್ದೇನೋ. ಮೊದಲ ಸಾರಿ ಉತ್ತರ ಹೇಳದಿದ್ದರೂ ನಂತರದ ದಿನಗಳಲ್ಲಿ ನೀನು ನನಗೆ ಸಮಯ ಬೇಕು ಮಾರಾಯಾ ಎಂದಿದ್ದೆ. ಮನಸ್ಸಿನಲ್ಲಿ ಗೊಂದಲದ ತರಂಗಗಳು ಎದ್ದಿವೆ. ಏನು ಹೇಳಬೇಕೋ ಕಾಣೆ ಎಂದು ಹೇಳಿದ್ದೆ. ಮುಂದಿನ ಬದುಕು ಯಾವ ರೀತಿಯಿರುತ್ತದೆಯೋ ಕಾಣೆ ಎಂದೂ ಹೇಳಿದ್ದೆ. ಅದಕ್ಕೆಲ್ಲ ನಾನು ನನ್ನ ನಿಲುಕಿಗೆ ಸಿಕ್ಕಂತೆ ಉತ್ತರ ವನ್ನು ಕೊಟ್ಟಿದ್ದೆ. ನಾನು ಪದೇ ಪದೆ ಕೇಳುತ್ತಲೇ ಇದ್ದೆ. ನೀನು ಟೈಂ ಕೊಡು ಮಾರಾಯಾ.. ಇದು ಬದುಕಿನ ವಿಷಯ. ಆಲೋಚನೆ ಮಾಡಿ ಹೇಳ್ತೇನೆ ಎಂದಿದ್ದೆ. ಸ್ವಾರ್ಥಿ ನಾನು.. ಆಲೋಚನೆ ಮಾಡಿ ಹೇಳು. ಎಷ್ಟು ಬೇಕಾದರೂ ಟೈಂ ತಗೋ. ಆದರೆ ನನ್ನ ಪ್ರಪೋಸಲ್ಲಿಗೆ ನೋ ಅನ್ನಬೇಡ ಎಂದೂ ಹೇಳಿದ್ದೆ ಅಲ್ವಾ.
              ಈಗಲೂ ನಾನು ಕೇಳುತ್ತಿದ್ದೇನೆ. ಮುಕ್ಕಾಲು ಪಾಲು ನೀನು ಇಷ್ಟವಾಗಿದ್ದೀಯಾ ಕಣೋ. ಆದರೆ ಕಾಲು ಭಾಗದಷ್ಟು ನನ್ನಲ್ಲೇ ಏನೋ ಅಳುಕು. ಅದೇನೆಂಬುದನ್ನು ಹೇಳಲಿಕ್ಕೆ ಆಗುತ್ತಿಲ್ಲ. ಮನೆಯವರ ಭಯವಾ? ಮುಂದಿನ ಬದುಕಿನ ಪ್ರಶ್ನೆಯಾ? ಗೊಂದಲವಿನ್ನೂ ಸ್ಪಷ್ಟವಾಗಿಲ್ಲ. ಒಮ್ಮೊಮ್ಮೆ ಒಂದೊಂದು ರೀತಿ ಅನ್ನಿಸುತ್ತಿದೆ. ನಾನಿನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಮಾರಾಯಾ.. ನಂಗೆ ಯಾಕೋ ಇನ್ನೂ ಸ್ವಲ್ಪ ಸಮಯಬೇಕು ಅನ್ನಿಸ್ತಾ ಇದೆ ಅಂತಲೂ ಹೆಳಿದ್ದೆ. ನಾನು ಮತ್ತೆ ಮತ್ತೆ ಕಾಯುತ್ತಿದ್ದೇನೆ. ನೀನು ಒಂದು ಸಾರಿ ಹೂ ಅಂದು ಬಿಡುತ್ತಿದ್ದೀಯಾ ಎಂದುಕೊಂಡಿದ್ದೇನೆ.
            ನಿಜ ಹೇಳ್ತಾ ಇದ್ದೀನಿ ಬೆಳಕೇ.. ನಿನ್ನನ್ನು ನಾನು ಖಂಡಿತ ಚನ್ನಾಗಿ ನೋಡಿಕೊಳ್ಳುತ್ತೇನೆ. ಬದುಕಿನಲ್ಲಿ ನೋವು ಬರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುವುದಿಲ್ಲ. ನೋವುಗಳು ಆಕಸ್ಮಿಕವಂತೆ. ಥಟ್ಟನೆ ಬಂದು ಕಾಡುತ್ತವೆ. ಆದರೆ ಇಂತಹ ನೋವಿನ ಕ್ಷಣದಲ್ಲಿ ನಾನು ನಿನ್ನ ಜೊತೆಗೆ ಇರುತ್ತೇನೆ. ಕೈಹಿಡಿದು ಜೊತೆಗೆ ಸಾಗುತ್ತೇನೆ. ನಾನು ಒಳ್ಳೆ ಜಾಬ್ ಹಿಡಿಯಬೇಕು ಎಂದಿದ್ದೆ. ಖಂಡಿತ ಗೆಳತಿ, ನಾನು ನಿನ್ನ ಪಾಲಿಗೆ ಏಣಿಯಾಗುತ್ತೇನೆ. ನೀನು, ನಿನ್ನ ಕುಟುಂಬ, ನಾನು ಹಾಗೂ ನನ್ನ ಕುಟುಂಬ ಒಟ್ಟಾಗಿ ಖುಷಿಯಿಂದ ಬಾಳು ನಡೆಸಬೇಕು ಎನ್ನುವ ಕನಸು ನನ್ನದು. ನನಗೆ ನನ್ನ ಕುಟುಂಬ ಬೇರೆ ಅಲ್ಲ. ನಿನ್ನ ಕುಟುಂಬವೂ ಬೇರೆಯಲ್ಲ. ನಿನ್ನ ಅಪ್ಪ ಅಮ್ಮ ನನಗೂ ಅಪ್ಪ ಅಮ್ಮನಂತೆ ಅಲ್ಲವಾ? ಎಂದು ನಾನು ಕೇಳಿದ್ದಿನ್ನೂ ಕಿವಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ.
                 ನಿನ್ನ ಹತ್ತಿರ ಮಾತಾಡಬೇಕು ಸಿಗು ಅಂದಿದ್ದೆ ನಾನು. ಅದೆಷ್ಟೋ ಸಾರಿ ನಿನ್ನ ಹತ್ತಿರ ಕೇಳಿಕೊಂಡ ನಂತರ ಸಿಗಲು ನೀನು ಒಪ್ಪಿದ್ದೆ. ಆದರೆ ನೀನು ಜೊತೆಯಲ್ಲಿದ್ದಾಗ ಮಾತ್ರ ಏನನ್ನೂ ಮಾತನಾಡಲಿಕ್ಕೆ ಆಗಿರಲೇ ಇಲ್ಲ. ಎಷ್ಟೆಲ್ಲ ಮಾತನಾಡುವುದು ಬಾಕಿ ಇತ್ತು. ಆದರೆ ನಿನ್ನೆದುರು ನನ್ನ ಮಾತು ಹೊರಡಲೇ ಇಲ್ಲ. ಸುಮ್ಮನೇ ಉಳಿದಿದ್ದೆ ನಾನು. ನೀನು ಮಾತನಾಡುತ್ತಿದ್ದರೆ ನಾನು ನಿನ್ನನ್ನು ನೋಡುತ್ತ ಕುಳಿತಿರುತ್ತಿದ್ದೆ. ಬಹುಶಃ ಈ ಪತ್ರ ಬರೆಯಲು ಅದೇ ಕಾರಣ ಇರಬೇಕು ನೋಡು. ನಾನು ಬಾಯಲ್ಲಿ ಆಡಲು ಸಾಧ್ಯವಾಗದ ಮಾತುಗಳನ್ನೆಲ್ಲ ಅಕ್ಷರ ರೂಪದಲ್ಲಿ ಇಡುತ್ತಿದ್ದೇನೆ.
                 ಮತ್ತೊಮ್ಮೆ.. ಮಗದೊಮ್ಮೆ ಹೇಳುತ್ತೇನೆ ಬೆಳಕೇ.. ನಾ ನಿನ್ನ ಇಷ್ಟಪಟ್ಟಿದ್ದೇನೆ. ಮನದಲ್ಲಿ ನಿನ್ನದೊಂದು ಗುಡಿ ಭದ್ರವಾಗಿ ಸ್ಥಾಪನೆಯಾಗಿಬಿಟ್ಟಿದೆ. ನಾವು ಮುಂದೆ ಅದೆಷ್ಟೋ ವಸಂತಗಳನ್ನು ಜೊತೆಯಾಗಿ ಬಾಳಬೇಕಿದೆ. ಒಟ್ಟಾಗಿ ಹೆಜ್ಜೆ ಹಾಕಬೇಕಿದೆ. ನಾನು ಮುಂದಿನ ಬದುಕಿನ ತುಂಬ ನಿನ್ನ ಜೊತೆಗೆ ಆಸರೆಯಾಗಿ ಇರುತ್ತೇನೆ. ನೀನು ನನಗೆ ಜೊತೆಯಾಗಿರು. ಕಷ್ಟದಲ್ಲಿ, ಸುಖದಲ್ಲಿ, ಶಾಂತಿ, ನೆಮ್ಮದಿಯಲ್ಲಿ ಇಬ್ಬರೂ ಒಟ್ಟಾಗಿ ಸಾಗೋಣ. ಒಲವಿನ ಜೊತೆಗೆ ಜೀವನ ನಡೆಸೋಣ. ಒಲವನ್ನು ಕೊಟ್ಟು, ಒಲವನ್ನು ಪಡೆದು ನಡೆಯೋಣ. ಬೆಳಕಿನ ಹುಡುಗಿ.. ನನ್ನ ಬಾಳಲ್ಲಿ ಎಂದಿಗೂ ಬೆಳಕಿನಂತಿರು. ಜೊತೆಯಾಗಿರು.
                   ನಂಗೆ ಸಮಯ ಬೇಕು ಅಂದಿದ್ದೆ.. ತಗೋ.. ಆಲೋಚನೆ ಮಾಡು.. ಯಾವುದೇ ಅಳುಕು ಬೇಡ. ಭಯ ಬೇ...ಡ.. ನಿನ್ನ ಜೊತೆಗೆ ನಾನಿದ್ದೇನೆ. ಸಮಸ್ಯೆಯನ್ನು ಒಟ್ಟಾಗಿ ಪರಿಹಾರ ಮಾಡೋಣ. ಜೊತೆಗೆ ಹೆಜ್ಜೆಹಾಕೋಣ. ಬೇಗನೆ ನನಗೆ ಉತ್ತರ ಕೊಡು. ಖುಷಿ ಖುಷಿಯಾಗಿ ಜೀವನ ಸವೆಸೋಣ. ಮತ್ತೆ ಮತ್ತೆ ಹಸಿರಾಗೋಣ. ಬೇಗ ುತ್ತರ ಕೊಡು. ನೀ ಕೊಡುವ ಉತ್ತರ ನನ್ನ ಪಾಲಿಗೆ ಹಸಿರಾಗಿರಲಿ, ಉಸಿರಾಗಿರಲಿ. ಬರಡು ಮಾಡದೇ ಇರಲಿ.

ಇಂತಿ ನಿನ್ನವನು
ವಿನಯವಂತ        

Saturday, March 7, 2015

ಮಿನಿ ಹನಿಗಳು

ಮಾರುತಿ ಕಾರು

ಹವ್ಯಕನಿಗೆ ಹಣ ಬರತೊಡಗಿದರೆ
ಕೊಳ್ಳುವನು ಮಾರುತಿ ಕಾರು |
ಹಣ ಖಾಲಿಯಾದರೆ ಮಾತ್ರ
ಕಾರು ಮಾರುತಿ ||

ಮಂತ್ರಿ ಭ್ರ(ನಿ)ಷ್ಟ

ಅವನೊಬ್ಬ ಮಂತ್ರಿ
ಪಕ್ಷಕ್ಕೆ ಬಹುನಿಷ್ಟ |
ಹಣದ ವಿಷಯದಲ್ಲಿ ಆತ
ಅಷ್ಟೇ  ಭ್ರಷ್ಟ ||

ಹಾಸ್ಯಕವಿ

ಅವನೊಬ್ಬ ಹಾಸ್ಯಕವಿ
ಅವನ ನಗೆ ಹನಿಗಳಿಗೆ
ಮಾತ್ರ, ನಗಿ ಎಂದು
ಹೇಳಬೇಕಷ್ಟೆ||

ಹಾವಿನ ವಿಷ

ಭೂಮಿಯ ಮೇಲೆ
ತೆವಳಿಯೂ ಕೂಡ
ಸಂಗ್ರಹಿಸಿದೆ ವಿಷ |
ಅದು ಯಮನ ಪಾಷ ||

ಬದಲಾವಣೆ

ಮೊದಲೊಮ್ಮೆ ಆಗಿತ್ತು
ಚಿನ್ನದ ಬೆಳೆ ವೆನಿಲ್ಲಾ |
ಈಗ ಅದು ಆಗಿದೆ
ಬೆಳೆದವನಿಗೆ ಏನಿಲ್ಲಾ ||

Friday, March 6, 2015

ಬೆಣಚುಕಿಂಡಿ

ಪದೇ ಪದೆ ಇಣುಕುವಿಕೆ
ಹೊಸದೊಂದು ಲೋಕ-ಅರ್ಥವನ್ನೇ
ಕಟ್ಟಿ ಕೊಟ್ಟೀತು |

ಒಮ್ಮೆ ಕಪ್ಪು-ಬಿಳುಪು, ಮತ್ತೊಮ್ಮೆ
ವರ್ಣಮಯ|  ಒಮ್ಮೆ ಸರ್ವಸುಖ
ಮತ್ತೊಮ್ಮೆ ಜೀವಚ್ಛವ ||

ಒಮ್ಮೊಮ್ಮೆ ಕತ್ತಲು, ಅರೆಘಳಿಗೆ
ಬೆಳಕು, ಇಣುಕು ನೋಟದಲ್ಲೇ
ಬದುಕು-ಬಿರುಕು ||

ನಿಜ. ಬೆಣಚು ಕಿಂಡಿಯೇ ಹೀಗೆ
ಅನಂತ ವಿಶ್ವಕ್ಕೊಂದು ಚೌಕಟ್ಟು
ಚಿಕ್ಕ, ಚೊಕ್ಕ ಪರೀಧಿ ||

ಅಲ್ಲ... ಅಂಕೆಗೆ ನಿಲುಕದ,
ವಿಶ್ವವನ್ನು ಹಿಡಿದು ಕಣ್ಣೆದುರು
ಕಟ್ಟುಕೊಟ್ಟು ಬಿಡುತ್ತದೆ ||

***

(ಈ ಕವಿತೆಯನ್ನು 13-04-2007ರಂದು ದಂಟಕಲ್ಲಿನಲ್ಲಿ ಬರೆದಿದ್ದೇನೆ)

Wednesday, March 4, 2015

ಅಘನಾಶಿನಿ ಕಣಿವೆಯಲ್ಲಿ-14

              `ದೇವಸ್ತಾನಕ್ಕೆ ನಾನು ಹಾಗೂ ದೀಪು ಇಬ್ಬರೂ ಹೋಗಿದ್ವಿ. ದೇವಸ್ತಾನದಲ್ಲಿ ಸಿಕ್ಕಾಪಟ್ಟೆ ಜನ ಇದ್ದರು. ನಾನು ದೇವಸ್ತಾನದ ಒಳಕ್ಕೆ ಹೋದೆ. ಹಿಂದೆಯೇ ಉಳಿದುಕೊಂಡ ಪ್ರದೀಪ ಅದೆಲ್ಲೋ ತಪ್ಪಿಸಿಕೊಂಡುಬಿಟ್ಟ. ನಂತರ ದೇವಸ್ತಾನ, ಅಲ್ಲಿ ಇಲ್ಲಿ ಎಲ್ಲ ಕಡೆಗೆ ಹುಡುಕಿದೆ. ಬಹಳ ಹೊತ್ತು ಕಾದೆ. ಆದರೆ ಸಿಗಲಿಲ್ಲ. ಕೊನೆಗೆ ಬಸ್ ಸ್ಟಾಂಡಿಗೆ ಬಂದು ಇಲ್ಲಿ ಹುಡುಕಿದರೆ ಇಲ್ಲಿಯೂ ಇಲ್ಲ ಮಾರಾಯಾ.. ಎಲ್ಲಿಗೆ ಹೋಗಿಬಿಟ್ಟನೋ.' ಎಂದ ವಿನಾಯಕ.
             `ಹೌದಾ.. ಥೋ.. ಇದೊಂದು ಹೊಸ ತಲೆಬಿಸಿ ಬಂತಲಾ ಮಾರಾಯ... ಬಾ ಮೊದ್ಲು ಹುಡ್ಕನ.. ನಮಗೆಲ್ಲ ಶಿರಸಿ ಗೊತ್ತಿದ್ದು. ಅವಂಗೆ ಗೊತ್ತಿಲ್ಲೆ. ಎಲ್ಲಿ ಅಲೆದಾಡ್ತಾ ಇರ್ತ್ನೋ.. ಬನವಾಸಿ ರೋಡು ಹಿಡಿದು ಹೋದ್ನಾ ಎಂತದೇನ ಮಾರಾಯಾ.. ಥೋ..' ಎಂದು ಗೊಣಗಾಡುತ್ತ ಎಲ್ಲರ ಜೊತೆ ಸೇರಿ ಹುಡುಕಾಡತೊಡಗಿದ ವಿಕ್ರಮ.
             ಅರ್ಧ ತಾಸಿನ ಹುಡುಕಾಟದ ನಂತರ ಪ್ರದೀಪ ಸಿಕ್ಕ. ಅದ್ಯಾವುದೋ ಬಝಾರ ರಸ್ತೆಯಿಂದ ಬಸ್ ಸ್ಟಾಂಡ್ ಕಡೆಗೆ ನಡೆದುಕೊಂಡು ಬರುತ್ತಿದ್ದ. ಹುಡುಕುತ್ತಿದ್ದವರು ನಿರಾಳರಾದರು. `ಲೇ ಹಲ್ಕಟ್.. ಎಲ್ಲಿ ಹಾಳ್ ಬಿದ್ದು ಹೋಗಿದ್ಯಲೆ..' ಎಂದು ಬೈದ ವಿಕ್ರಮ
           `ಇಲ್ಲ ಮಾರಾಯಾ.. ದೇವಸ್ತಾನದಲ್ಲಿ ಸಿಕ್ಕಾಪಟ್ಟೆ ಜನ ಇದ್ದರು. ವಿನಾಯಕ ತಪ್ಪಿಹೋದ. ದೇವಸ್ತಾನದ ತುಂಬೆಲ್ಲ ಹುಡುಕಾಡಿದೆ. ಕಾಣಿಸಲಿಲ್ಲ. ನನ್ನನ್ನು ಹುಡುಕುತ್ತಾ ಇರಬೇಕು ಅಂತ ಎಲ್ಲ ಕಡೆ ಹುಡುಕಾಡುತ್ತ ಬಂದೆ. ಕೊನೆಗೆ ಬಸ್ ನಿಲ್ದಾಣದ ಬಳಿ ಇರಬೇಕು ಎಂದುಕೊಂಡು ಬಂದರೆ ಕಾಣಿಸಲಿಲ್ಲ ನೋಡು. ಎಲ್ಲಿ ಹೋದರೂ ಇಲ್ಲಿ ಬರ್ತಾರಲ್ಲಾ ಅಂದುಕೊಂಡು ನಾನೇ ಬರ್ತಾ ಇದ್ದಾಗ ಇದೋ ನೀವು ಸಿಕ್ಕಿದ್ರಿ ನೋಡಿ..' ಎಂದ ಪ್ರದೀಪ.
           ವಿಕ್ರಮನಿಗೆ ಪ್ರದೀಪ ಯಾಕೋ ಸುಳ್ಳು ಹೇಳುತ್ತಿದ್ದಾನೆ ಅನ್ನಿಸಿತು. ಅಲ್ಲದೇ ಅಪರಿಚಿತ ಪ್ರದೇಶದಲ್ಲಿ ಕಾಣೆಯಾದಾಗ ಇರಬೇಕಾದಂತಹ ಗಾಬರಿ, ಭಯ ಇತ್ಯಾದಿ ಭಾವನೆಗಳು ಪ್ರದೀಪನ ಮುಖದ ಮೇಲೆ ಇರಲಿಲ್ಲ. ವಿಕ್ರಮ ಇದನ್ನು ಗಮನಿಸಿದ್ದ. ಕೊನೆಗೊಮ್ಮೆ ಅವರೆಲ್ಲರೂ ಶಿರಸಿಯಿಂದ ವಾಪಾಸಾದರು.
           ಯಾರಿಗೂ ಮಾರಿಕಾಂಬಾ ದೇವಸ್ತಾನದ ರಸ್ತೆಯೇ ಬೇರೆ, ಪ್ರದೀಪ ಬಸ್ ಸ್ಟಾಂಡ್ ಕಡೆಗೆ ಆಗಮಿಸುತ್ತಿದ್ದ ಬಝಾರಿನ ರಸ್ತೆಯೇ ಬೇರೆ ಎನ್ನುವ ಅನುಮಾನ ಬರದೇ ಇರುವುದು, ಪ್ರದೀಪನನ್ನು ಹೆಚ್ಚಿಗೆ ವಿಚಾರಣೆ ನಡೆಸದೇ ಇರುವುದು ಕಥೆಯ ಮುಂದಿನ ಬಹುದೊಡ್ಡ ತಿರುವಿಗೆ ಕಾರಣವಾಗಿತ್ತು. ಪ್ರದೀಪ ಮಾತ್ರ ದೊಡ್ಡ ಸಮಸ್ಯೆಯಿಂದ ಪಾರಾದಂತಹ ಸಂತಸವನ್ನು ಅನುಭವಿಸಲು ಆರಂಭಿಸಿದ್ದ. ಆ ದಿನ ಎಪ್ರಿಲ್ 15 ನೇ ತಾರೀಕಾಗಿತ್ತು.

***

          ವಿಕ್ರಂ ಕೊನೆಗೊಂದು ದಿನ ವಿನಾಯಕನಿಗೆ ತಮ್ಮ ತಂಡ ಯಾವ ಕಾರಣಕ್ಕಾಗಿ ಶಿರಸಿ, ದಂಟಕಲ್ಲಿಗೆ ಆಗಮಿಸಿದೆ ಎನ್ನುವುದರ ಕಾರಣವನ್ನು ತಿಳಿಸಿದ. ವಿನಾಯಕ ಅದಕ್ಕೆ ಪ್ರತಿಯಾಗಿ ತನ್ನ ಸಹಾಯ ಯಾವಾಗಲೂ ಸಿಗುತ್ತದೆ. ಜೊತೆಯಲ್ಲಿ ಈ ವಿಷಯವನ್ನು ಮತ್ತಿನ್ಯಾರಿಗೂ ತಿಳಿಸುವುದಿಲ್ಲ ಎಂದೂ ಹೇಳಿದ.

****12****

            `ತಮಾ.. ದ್ಯಾವನ್ನ ಕರ್ಕಂಡು ಹೋಗಿ ನಿಂಗವೆಲ್ಲಾ ನಮ್ಮೂರ ಕಾನನ್ನು ಸುತ್ತಾಡ್ಕ್ಯಂಡ್ ಬರ್ರಾ...' ಎಂದು ಶ್ರೀಕಂಠ ಹೆಗಡೆಯವರು ಹೇಳಿದಾಗ ಎಲ್ಲರನ್ನೂ ಕರೆದುಕೊಂಡು ಕಾಡಿನ ಕಡೆಗೆ ಹೊರಟ ವಿನಾಯಕ ಶ್ರೀರಾಮಚಂದ್ರ ಕಪಿಗಳೊಡನೆ ಲಂಕೆಗೆ ಹೊರಟಂತೆ.
             ದ್ಯಾವ ತಂಡಕ್ಕೆ ಮುಂದಾಳು. ಇಡಿಯ ಮೈಗೊಂದು ಬಿಳಿಯ ನಿಲುವಂಗಿ, ಸೊಂಟಕ್ಕೊಂದು ಕೊಳಕಾದ ಪಂಚೆ ಇವಿಷ್ಟು ದ್ಯಾವನ ವಸ್ತವಿನ್ಯಾಸಗಳಾಗಿದ್ದವು. ಸೊಂಟಕ್ಕೊಂದು ಅಂಡುಗೊಕ್ಕೆ ಕಟ್ಟಿಕೊಂಡು ಅದಕ್ಕೆ ಕತ್ತಿಯನ್ನು ತೂಗು ಹಾಕಿದ್ದ. ದ್ಯಾವ ಮುಂದೆ ಮುಂದೆ ಹೋದಂತೆಲ್ಲ ಆ ಕತ್ತಿ ಲಟ ಲಟ ಎಂದು ಸದ್ದು ಮಾಡುತ್ತಿತ್ತಲ್ಲದೇ ದ್ಯಾವನ ಕಾಲಿಗೆ ಬಡಿಯುತ್ತಿತ್ತು. ಹೆಗಲ ಮೇಲೆ ಮಾರುದ್ದದ ಕೋಲನ್ನು ಹೊತ್ತು ನಡೆಯುತ್ತಿದ್ದ ದ್ಯಾವನಿಗೆ ಕನಿಷ್ಟ 50 ವರ್ಷಗಳಾಗಿವೆ. ಆತನ ಅಸಲೀ ವಯಸ್ಸು ಎಷ್ಟೆನ್ನುವುದು ಯಾರಿಗೂ ಗೊತ್ತಿಲ್ಲ. `ನಾನು ಚಿಕ್ಕವನಿದ್ದಾಗ ಹೇಗಿದ್ದನೋ.. ಈಗಲೂ ದ್ಯಾವ ಹಾಗೆಯೇ ಇದ್ದಾನೆ..' ಎಂದು ವಿನಾಯಕ ದ್ಯಾವನ ಬಗ್ಗೆ ಹೇಳಿಬಿಟ್ಟಿದ್ದ.
              ದ್ಯಾವನ ಬಳಿಯೇ ವಯಸ್ಸನ್ನು ಕೇಳಿದರೆ ಮೂರು ಮೂವತ್ತು ವಯಸ್ಸಾಯಿತು ಎನ್ನುತ್ತಾನೆ. ಮೂರು ಮೂವತ್ತು ಅಂದರೆ 90 ವರ್ಷ ವಯಸ್ಸಾಗಿರಬೇಕು. ತಮಾಷೆ ಮಾಡಬೇಡ ದ್ಯಾವ.. ನಿನ್ ವಯಸ್ಸೆಷ್ಟು ಎಂದು ಕೇಳಿದರೆ `ಅದನ್ನು ಕಟ್ಟಿಗ್ಯಂಡು ಎಂತಾ ಮಾಡ್ತೀರಿ ನೀವು ಹೇಳಿ..' ಎಂದು ಸಾಗಹಾಕುತ್ತಾನೆ. ಶ್ರೀಕಂಠ ಹೆಗಡೆಯವರು ಹೇಳಿದ ಪ್ರಕಾರ ದ್ಯಾವ ತನಗಿಂತ ದೊಡ್ಡವನು ಎಂಬುದು ಪಕ್ಕಾ. ವಯಸ್ಸು ಬಹಳ ಆಗಿದ್ದರೂ ಆತನ ತಲೆಗೂದಲು ನೆರೆತಿರಲಿಲ್ಲ. ಆತನ ಮೈಬಣ್ಣ  ಬಿಸಿಲಿನಲ್ಲಿ ಕೆಲಸ ಮಾಡಿ ಅದೆಷ್ಟು ಕಪ್ಪಗಾಗಿತ್ತೋ, ತಲೆಗೂದಲೂ ಕೂಡ ಅದೇ ರೀತಿ ಇತ್ತು. ಇಂತಹ ದ್ಯಾವ ಗ್ರಾಮೀಣ ಭಾಗದ ವಿಶ್ವಕೋಶ. ಕಾಡಿನ ಬಗ್ಗೆ ತಿಳಿದುಕೊಳ್ಳದ ವಿಷಯವೇ ಇಲ್ಲ. ಇಂತಹ ಮುಂದಾಳುಗಳನ್ನು ಹೊಂದಿದ್ದರೆ ಯಾರು ತಾನೆ ಕಾಡಿನಲ್ಲಿ ಭಯದಿಂದ ನಡೆಯುತ್ತಾರೆ?
             ದ್ಯಾವನ ಹಿಂದೆ ವಿಕ್ರಮ, ವಿನಾಯಕ, ವಿಷ್ಣು ಹಾಗೂ ಪ್ರದೀಪರು ವೀರ ಸೇನಾನಿಗಳಂತೆ ಮುಂದಕ್ಕೆ ಹೊರಟರು. ಈ ನಾಲ್ವರು ಗಂಭೀರವಾಗಿ ಮುಮದೆ ಸಾಗುತ್ತಿದ್ದರೆ ರಮ್ಯಾ, ಸ್ನೇಹ, ವಿಜೇತರ ಗುಂಪು ರಾಣೀವಾಸದ ಗುಂಪಿನಂತೆ ಕೇಕೆಯೊಂದಿಗೆ ಸಾಗುತ್ತಿತ್ತು. ಮುಂದಿದ್ದವರ ಸಾಲು ಯುದ್ಧಕ್ಕೆ ಹೊರಟವರಂತಿದ್ದರೆ ಹಿಂದಿದ್ದವರ ಸಾಲು ಯುದ್ಧಕ್ಕೆ ರಣಕಹಳೆಯನ್ನು ಊದುತ್ತಿದ್ದ ಹಾಗಿತ್ತು.
             `ಹೋಯ್.. ಸ್ವಲ್ಪ ಸುಮ್ಮಂಗ್ ಬನ್ನಿ ನೋಡ್ವಾ.. ಬರೀ ಕಚಾ ಪಚಾ ಹಲ್ಬಕಂತ ಬರ್ಬೇಡಿ.. ಅದೆಂತಾ ಗಲಾಟೆ ಮಾಡ್ಕಂತ ಬರ್ತೀರಿ..?' ಎಂದು ದ್ಯಾವ ಅಸಹನೆಯಿಂದ ಗದರಿದಾಗಲೇ ಮಹಿಳಾ ಮಣಿಗಳು ಸುಮ್ಮನಾಗಿದ್ದು.
              `ಕಾನ್ ನೋಡಕ್ಕೆ ಅಂತ ಬಮದ್ ಕಂಡು ಹಿಂಗ್ ಕೂಗ್ತಾ ಬರ್ತಾ ಇದ್ರೆ ಕಾಡ್ನಾಗೆ ಯಾವುದೇ ಪ್ರಾಣಿ ಇದ್ರೂ ಓಡಿ ಹೋಗ್ತದೆ. ನಿಮಗೆಂತ ಮಣ್ಣೂ ಸಿಗಾದಿಲ್ಲ ನೋಡಿ.. ಹಗಲ್ನಾಗೆ ಎಂತಾದ್ರೂ ಓಡಾಡ್ತಾ ಇದ್ರೆ ಅವೆಲ್ಲ ನಾಪತ್ತೆಯಾಗ್ತವೆ.. ಸ್ವಲ್ಪ ಸುಮ್ಮಂಗಿರಿ ನೋಡ್ವಾ..' ಎಂದು ಮತ್ತೊಮ್ಮೆ ಹೇಳಿದ ದ್ಯಾವ.
              `ದ್ಯಾವ ಇಲ್ಲಿ ಹುಲಿ ಉಂಟಾ..?' ಎಂದು ಕೇಳಿದಳು ವಿಜೇತಾ.
              `ಹೌದಮ್ಮಾ. ಈ ಕಾನಿನಾಗೆ ಮೂರು ಐತೆ. ಈಗ ಬ್ಯಾಸ್ಗೆ ಬಂತಲ್ರಾ.. ಹಂಗಾಗಿ ಕಣ್ಣಿಗ್ ಕಾಣೂದಿಲ್ಲಾ. ಮಳೆ ಮುಗದು ಚಳಿಗಾಲ ಬಂದ್ ತಕ್ಷಣ ಈ ಕಡೆಗೆ ಬರ್ತಾವೆ ನೋಡಿ. ಖಾಯಂ ಇಲ್ಲಿ ಇರೋದಿಲ್ಲ. ಮತ್ತೀಹಳ್ಳಿ, ನಿಲ್ಕುಂದ, ಭತ್ತಗುತ್ತಿಗೆ, ಹೆಗ್ಗರಣಿ ಹಿಂಗೆ ಸುತ್ತಾಡ್ತಾ ಇರ್ತಾವೆ. ಆದರೆ ಗಮಯಾ, ಹಂದಿ, ಬರ್ಕ, ಜಿಂಕೆ, ಮಿಕ ಇವೆಲ್ಲ ಐತೆ. ಆವಾಗಾವಾಗ ಕಾಣ್ತಾ ಇರ್ತದೆ ..' ಎಂದ ದ್ಯಾವ.
               `ನೀ ನೋಡಿದ್ಯಾ ಹುಲಿನಾ..?' ಎಂದು ಕೇಳಿದಳು ಆಕೆ.
               `ಹೌದಮ್ಮಾ.. ಸುಮಾರ್ ಸಾರಿ ಕಂಡೀನಿ. ನಾನು ಜೇನು ಕುಯ್ಯಾಕೆ ಹೋಗ್ತಿದ್ದಾಗೆಲ್ಲಾ ಕಾಣ್ತಿದ್ವು ಅವು..' ಎಂದ ಆತ.
                `ಆಗೆಲ್ಲಾ ನಿಂಗೆ ಭಯ ಆಗಿಲ್ವಾ..?'
                `ಹೋಗ್ರಮ್ಮಾ.. ನಾವ್ಯಾಕೆ ಹೆದರ್ಕಬೇಕು ಹುಲಿಗೆ.. ಹೆದರುವಂತದ್ದು ನಾವೇನಾದ್ರೂ ಮಾಡಿದ್ದೀವಾ ಹುಲಿ ಗೆ.. ಸುಮ್ಮ ಸುಮ್ಮನೆ ನಮ್ಮ ಮೇಲೆ ದಾಳಿ ಮಾಡಲಿಕ್ಕೆ ಹುಲಿಗೆ ತಲೆ ಹನ್ನೆರಡಾಣೆ ಆಗಿರ್ತದಾ? ನೋಡ್ರಮ್ಮಾ.. ಮನುಷ್ಯರಾದ್ರೆ ಸೊಕಾ ಸುಮ್ಮನೆ ಮೈಮೇಲೆ ಬರ್ತವೆ ಅನ್ನಬೌದು. ಆದರೆ ಹುಲಿ ಹಂಗಲ್ಲ ನೋಡಿ.. ನಾವೇನೂ ಮಾಡದೇ ಅದು ನಮ್ಮ ಮೈಮೇಲೆ ಏರಿ ಬರುವುದಿಲ್ಲ. ಅದರ ಪಾಡಿಗೆ ಅದು ಇರ್ತದೆ ನಮ್ಮ ಪಾಡಿಗೆ ನಾವಿರ್ತೇವೆ..' ಎಂದ ದ್ಯಾವ. ವಿಜೇತಾಳಿಗೆ ಅವನ ಮಾತು ಹೌದೆನ್ನಿಸಿತು.
               ನಂತರ ಮಾತುಗಳು ಕಾಡೆಮ್ಮೆ ಹಾಗೂ ಉಳಿದ ಪ್ರಾಣಿಗಳ ಬಗೆಗೆ ಸರಿಯಿತು. ವಿನಾಯಕ ತಾನು ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಕಾಲೇಜಿಗೆ ಹೋಗುವಾಗ ಪದೇ ಪದೆ ಕಾಡೆಮ್ಮೆ, ಜಿಂಕೆಗಳಿಗೆ ಎದುರಾ ಬದರಾಗುತ್ತಿದ್ದುದನ್ನು ಹೇಳಿದ. ಕೆಲವು ಸಾರಿ ಮನೆಯ ಪಕ್ಕದಲ್ಲಿಯೇ ಸೀಳುನಾಯಿಗಳ ಹಿಂಡು ಹಾದು ಹೋಗುತ್ತದೆ ಎನ್ನುವುದನ್ನೂ ಹೇಳಿದ. ಆತ ಕಾಡಿನ ಕತೆಗಳನ್ನು ವಿವರಿಸಿ ವಿವರಿಸಿ ಹೇಳುತ್ತಿದ್ದರೆ ಉಳಿದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು.             

ಒಮ್ಮೆ ತಿರುಗಿ ನೋಡು

ಗೆಳತಿ ನೀನು ನನ್ನ ಕಡೆಗೆ
ಒಮ್ಮೆ ತಿರುಗಿ ನೋಡು
ಬದುಕಿ ನಾವು ಬಾಳಬೇಕು
ಸದಾ ಕಾಲ ಜೋಡು ||

ಸದಾ ಕಾಲ ಜೊತೆಗಿರಲಿ
ನಿನ್ನದೊಂದು ಕಿರುನಗು
ಕಳೆದು ಬಿಡಲಿ ಕಷ್ಟ ದು:ಖ
ಶತಮಾನದ ಬಿಗು ||

ಮುನ್ನಡೆಯುವ ಮುನ್ನ ನನ್ನ
ತಿರುಗಿ ನೋಡು ಗೆಳತಿ
ತುಂಬಿಕೊಂಡು ನಿಂತಿರುವೆ
ನನ್ನೊಳಗೆ ಪ್ರೀತಿ ||

ಹುಸಿಮುನಿಸ ಮರೆತು ಬಿಡು
ನಾನಿರುವೆ ಜೊತೆಗೆ
ಜೊತೆಗೆ ನೀನು ಹೆಜ್ಜೆ ಹಾಕು
ಮೆರೆದು ಬಿಡಲಿ ಒಸಗೆ ||

***
(ಈ ಕವಿತೆಯನ್ನು ಬರೆದಿರುವುದು 04-03-2014ರಂದು ಶಿರಸಿಯಲ್ಲಿ)

Monday, March 2, 2015

ದಾರಿ ಸಾಗುವಾಗ

ದೂರ ಸಾಗುವ ದಾರಿಯಲ್ಲಿ
ಹಿಂತಿರುಗಿ ನೋಡು ಗೆಳೆಯಾ
ಕಾಣುವವು ಕಳೆದ ಹಲವು
ಕಷ್ಟಗಳ ಪರೀಧಿ, ಛಲ, ಗೆಲುವು ||

ದೂರ ಸಾಗಿದಾಗ ಪಡೆದ ಗೆಲುವಿಗೆ
ಸಹಾಯ ಹಲವರದು
ಅವರ ಪ್ರೀತಿಯ ಕಾಣ್ಕೆ
ನಿನ್ನೀ ಗೆಲುವಿನ ಉಡುಗೊರೆ ||

ಗೆದ್ದು ಆಗಸವ ಮುಟ್ಟುವಾಗ
ಏರಿದೇಣಿಯ ಮರೆಯಬೇಡ..
ಕೊನೆಮುಟ್ಟಿ ಗೆದ್ದು ನಿಂತಾಗ
ಕಾಲಕೆಳಗಿನೇಣಿಯ ಒದೆಯಬೇಡ ||

ನೆನಪಿರಲಿ, ತಂದೆ-ತಾಯಿ ಪ್ರೀತಿ
ಬಿದ್ದಾಗಲೆತ್ತಿದವರ ನೆನಪು
ಕೈ ಹಿಡಿದು ನಡೆಸಿದವರು, ಜೊತೆ
ಸಾಕಿ ಬಾಳ ಸಲಹಿದವರು ||

ದೂರ ಸಾಗುವ ದಾರಿಯಲ್ಲಿ
ಎಲ್ಲರ ಜೊತೆ ಇರಲಿ ಗೆಳೆಯಾ.
ಜೊತೆ ಬಂದವರ ತೊರೆಯದೇ
ಅವರ ನೀ ಸಲಹು ಗೆಳೆಯಾ ||

****

(ಈ ಕವಿತೆಯನ್ನು ಬರೆದಿರುವುದು 05-10-2006ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಲಾಗಿದೆ)

Sunday, March 1, 2015

ಹೊಸದಷ್ಟು ಹನಿಗಳು

ವೆಂಕಿಯ ಬೆಂಕಿ

ಭಾರತದ ಅದ್ಭುತ ಬೌಲರ್ ವೆಂಕಿ
ಅವನೆಂದರೆ ಪಾಕಿಸ್ತಾನಕ್ಕೆ ಬೆಂಕಿ |
ವೆಂಕಿಗೆ ಬಂದರೆ ಸಿಟ್ಟು
ಬೀಳುತ್ತಿತ್ತು ಅಮೀರ್ ಸೊಹೈಲ್ ವಿಕೆಟ್ಟು ||

ನಕ್ಷತ್ರಗಳ ಸುತ್ತುವಿಕೆ

ವಿಶ್ವದೆಲ್ಲೆಡೆಯಲ್ಲಿ
ನಕ್ಷತ್ರಗಳು ಸುತ್ತುತ್ತವೆ
ಎಂದು ವಿಜ್ಞಾನಿಗೆ ತಿಳಿದಿದ್ದು ಹೇಗೆ?
ಬಹುಶಃ ಅವನ ಹೆಂಡತಿ
ಲಟ್ಟಣಿಗೆಯಿಂದ ತಲೆಗೆ ಬಡಿದಾಗ
ಸುತ್ತಲೂ ನಕ್ಷತ್ರಗಳು ಸುತ್ತಿರಬೇಕು ||

ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ
ಭಾವನೆಗಳು ಹೊರ ಹೋಗುವ
ಒಂದು way ||

ಬಸ್ಸಿನ ಪರಿಸ್ಥಿತಿ

ನಮ್ಮ ರಾಜ್ಯ ಸಾರಿಗೆಯ ಬಸ್ಸು
ಯಾವಾಗಲೂ ಹೋಗಲು ಬಯಸುತ್ತದೆ ಜೋರು |
ಆದರೆ ಏನು ಮಾಡಿದರೂ
ಸರಿಯಾಗಿ ಬೀಳುವುದೇ ಇಲ್ಲ ಇದರ ಗೇರು ||

ರೈತ

ರೈತನೆಂದರೆ ಬರೀ
ದುಡಿದು ಬೆಳೆಯುವವನಲ್ಲ |
ಕಾಲ ಬಂದಾಗ ಆತ
Riot ಕೂಡ
ಆಗಬಲ್ಲವ ಎಂದರ್ಥ ||